ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿದ್ದೆಯ ಮಂಪರು
ಕನವರಿಕೆಯ ಒಗಟುಗಳು
ಮುಂಜಾನೆಯ ಮಬ್ಬಿನಲಿ
ಸಿಹಿ ಅಪ್ಪುಗೆಯ ಕತ್ತು ಹಿಸುಕಿ
ನರಳಾಡುತಿದೆ ಸುಖವೆಲ್ಲ

ನಡೆದುದ್ದಾದರೂ ಎಲ್ಲಿ
ಬಿಸಿಲ ಧಗೆಯ ದಾರಿಯಲ್ಲಿ
ಉರಿದು ಬೀಳುವ ಸೂರ್ಯನ ಜೊತೆಗೆ
ಧೂಳು ತುಂಬಿದ ಗಾಳಿಯಲ್ಲಿ
ಕಾರ್ಮೋಡಗಳಿಂದ ತುಂಬಿ ಸೋರುವ
ಆಕಾಶದ ಕೆಳಗೆ

ಒಂದು ಕಲ್ಲು ಬೆಂಚು ಆಸರೆಯಾದರೂ
ಯಾರದೋ ಶವವನ್ನು
ಹೊಟ್ಟೆಯಲ್ಲಿ ಇಟ್ಟುಕೊಂಡು
ಮೇಲ್ಭಾಗದಲ್ಲಿ ಧೂಳು ಮೆತ್ತಿಕೊಂಡು
ಮಲಗಿರಬಹುದು ಅನಿಸುತ್ತಲೇ
ಯಾವುದೋ ಹೃದಯದ ಅಳು ಕೇಳುತ್ತದೆ.

ಅಕಾಲದಲ್ಲಿ ಅವನಿಗೆ ಬರುವ ಕರೆಗಳು
ಅನುಮಾನದ ಬೀಜ ಬಿತ್ತುವ
ಕಾಯಕದಲ್ಲಿ ನಿರತವಾಗಿವೆ
ಅದೆಷ್ಟೊ ಕೈಗಳು
ಮೌನದಲ್ಲಿಯೇ ಅವನೂ ನೀರೆರೆಯುತ್ತಿದ್ದಾನೆ.
ಮತ್ತೆ ಮತ್ತೆ ಚದುರಂಗದ ಆಟದಲ್ಲಿ
ಸೈನಿಕರಿಂದ ಚೆಕ್ಮೆಟ್ ಎನಿಸಿಕೊಳ್ಳುವುದು
ನಿಜಕ್ಕೂ ಹೀನಾಯಕರ

ರಾಜನಾದವನಿಗೆ ರಾಜನೇ
ಎದುರಾಳಿಯಾಗಬೇಕು
ಬೆಳಕು ಬಿಟ್ಟು ಕತ್ತಲೆಯ ಹಿಂದೆ ಹೋದವನಿಗೆ
ಸೈನಿಕ ದೊಡ್ಡವನೇ ಸರಿ
ಒಂದು ಹುಲ್ಲುಗರಿಕೆ ಸಾಕು
ದಮನಮಾಡಲು.

ಅನುಮಾನವನ್ನೇ ಉಸಿರಾಡುವವರಿಗೆ
ಪ್ರೀತಿಯಿಂದ ಬಡಿಸಿದ ಅಡುಗೆಯ
ಘಮಲು ಮೂಗಿಗೆ ತಾಕುವುದಿಲ್ಲ
ಹೊಟ್ಟೆ ಬಿರಿಯಬೇಕು ಅಷ್ಟೇ
ಮತ್ತದೇ ಕತ್ತಲೆ ಆಟ
ಮತ್ತದೇ ಬೆತ್ತಲೆ ಊಟ
ರಸಗಳಿಲ್ಲದ ಪಾಕ..
————————————————–

About The Author

5 thoughts on “ಜಹಾನ್ ಆರಾ. ಕೋಳೂರು‌ ಅವರ ಕವಿತೆ-ಕನವರಿಕೆ ಕಾದಾಟ”

  1. ಈ ಕವಿತೆಯೂ ಕತ್ತಲ ಹಾಗೆ ನಿಗೂಢ ಮತ್ತು ನಿಶಿಥ. ನಿದ್ರೆ ಮಂಪರು ಮತ್ತು ಕತ್ತು ಹಿಸುಕುವ ಅನುಮಾನ…ಎಲ್ಲಾ ವಾಸ್ತವಗಳೂ ಇಲ್ಲಿ ರೂಪಕಗಳಾಗಿ ಕವಿತೆಯ ವಿಷಾದವನ್ನು ಹೆಚ್ಚಿಸಿವೆ. ಚಂದದ ಕವಿತೆ.

  2. ವಸ್ತುನಿಷ್ಟ ಮನದ ತುಮುಲಗಳ ಸಾರುತಿದೆ ಕವಿತೆ… ಅರ್ಥಪೂರ್ಣ ಕವಿತೆ…

Leave a Reply

You cannot copy content of this page

Scroll to Top