ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಾವಿನ ಹೆಡೆಯಲಿ ಕುಣಿಯುತ ದ್ವೇಷದ
ಬೆಂಕಿಯ ಆರಿಸಿದೆ ನೀನು
ನೋವಿನ ಬಿಸಿಯನು ತಣಿಸುತ ಪ್ರೇಮದ
ಮಳೆಯ ಸುರಿಸಿದೆ ನೀನು

ಭಾವನೆ ಕೆಣಕುತ ಚಾಂಚಲ್ಯದ ಚಿತ್ತದಿ
ಕುಟಿಲತೆ ಮೆರೆದೆ ಅಲ್ಲವೇ
ದೇವನ ಸಾನ್ನಿಧ್ಯದಿ ಭರವಸೆ ಮೂಡಲು
ಬೆಳಕ ಉರಿಸಿದೆ ನೀನು

ಮಾವಿನ ಎಲೆಯಲಿ ತೋರಣವ ಕಟ್ಟುತ
ಬಾಗಿಲ ಸಿಂಗಾರ ಮಾಡಿದೆ
ಬೇವಿನ ಕಹಿಯಲಿ ಸಿಹಿಯನು ಸೇರಿಸಿ
ಒಲವ ಸ್ಪುರಿಸಿದೆ ನೀನು

ಕಾವನು ಕೊಡುತಲಿ ಮರಿಗಳ ರಕ್ಷಿಸಿ
ಸಲಹಿ ಪೊರೆಯುವೆ ವಾತ್ಸಲ್ಯದಿ
ಸಾವಿನ ಭಯದಲಿ ಕಂಗಲಾಗಿ ಕೂಡಲು
ದಾರಿಯ ತೋರಿಸಿದೆ ನೀನು

ಬಾವಿಯ ಒಳಗಿನ ಕಪ್ಪೆಯಂತೆ ಜೀವನ
ಸಲ್ಲದು ಹೊರಪ್ರಪಂಚಕೆ ಕಾಲಿಡು
ಗೋವಿನ‌ ನೆರಳಲಿ ನಿಶ್ಚಿಂತೆಯ ಬದುಕು
ಸುಲಭದಿ ಭರಿಸಿದೆ ನೀನು

ಕೋವಿಯ ಎದುರಿಸಿ ನಿಲ್ಲುವ ಛಲವು
ಇರಬೇಕು ಎದೆಯ ಗೂಡಲಿ
ಪವನ ಸುತನ ಆರಾಧ್ಯ ರಾಮನೇ
ಕಾವಿಯ ಧರಿಸಿದೆ ನೀನು

ಹೂವಿನ ಮಾಲೆಯಲಿ ಭಕುತಿಯ ಸೇರಿಸಿ
ಮಾಧವನ ಪಾದಕೆ ಅರ್ಪಣೆ
ಗಾವುದ ದೂರದಲಿ ರಾಧೆಯ ಹೃದಯದಿ
ಕಂಪನ ತರಿಸಿದೆ ನೀನು


About The Author

Leave a Reply

You cannot copy content of this page

Scroll to Top