ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪಂಪ ರನ್ನರ ಗತ ವೈಭವ ಸಿರಿಯೊಳ್
ತಾಯ ಮುಡಿಗಿನ್ನೊಂದು ನವ್ಯ ಹೂವು
ಬಯಕೆಯ ಹರಕೆಗೆ ವರವಿತ್ತವೊಲ್
ಮಲೆಮಡಿಲ ಪುಟ್ಟ ತೊಟ್ಟಿಲೊಳ್

ಗುಡ್ಡ ನದಿ ಕಾಡೊಳು ಪರಪುಟ್ಟನಾಗಿ
ನಾಕವೆಂದುಲಿನಲಿದು ಕುಣಿದಿದ್ದನು
ಸಹಜ ಪ್ರಕೃತಿಯನಚ್ಚರಿಯ ದಿಟ್ಟೆಯೊಳ್
ನೆಟ್ಟವಗೆ ಹೊಮ್ಮಿದೆ ಅನಂತ ಚೇತನ ಧಾರೆ

ಕುಸುಮಗಳ ಹನಿಯಾಯ್ದು ಹೆಣೆದ
ಗೂಡೊಳೆ ಹುದುಗಿರ್ಪ ಕವನ ಹೆಜ್ಜೇನು
ತಾಯ ಭಾಷಾಸುಧೆ ಕಲ್ಪನಾ ರವಿ ಮಿಲನ
ಕಬ್ಬಿನ ರಸ ಉಣಿಪ ದೃಶ್ಯ ಬ್ರಹ್ಮ

ಶಿಶಿರನನ್ನಟ್ಟಿ ವಸಂತನನ್ನೋಲೈಸಿ ತಂದಿಹ
ಹಸಿರ ಚಿಗುರನೆ ಪೋಲ್ವ ವಿಚಾರ ಧಾರೆ
ಗಂಗೋತ್ರಿ ದೇಗುಲದೆ ಜ್ಞಾನ ತಪಗೈದ
ಕರ್ಮಯೋಗಿಗೆ ಒಲಿದ ಕೃಪಾ ಪ್ರಶಸ್ತಿ

ಭಾರತಿಯ ತನುಜೆಯನ್ನೆಚ್ಚರಿಪ ಕಂದ
ಕರುನಾಡ ಕಸ್ತೂರಿ ಕನ್ನಡದ ಕಣ್ಮಣಿ
ಶ್ರದ್ಧೆಯಂ ಮರುಕಳಿಪ ಮುಪ್ಪಿಲ್ಲದುತ್ಸಾಹಿ
ಅಗಣಿತ ತಾರಾ ಪಥದ ಚಿರಧೃವ ತಾರೆ.


About The Author

Leave a Reply

You cannot copy content of this page

Scroll to Top