ಅಂಕಣ ಬರಹ ಎಲ್ಲಾ ಒಳ್ಳೆಯದೇ ಆಗುತ್ತೆ… ಈ ಥರದ ಮಾತುಗಳನ್ನ ನಾವು ಬಹಳಷ್ಟು ಸಾರಿ ಕೇಳಿರ್ತೇವೆ. “ಒಳ್ಳೇವ್ರಿಗೆ ಒಳ್ಳೆಯದೇ ಆಗುತ್ತೆ”, “ನಾವು ಒಬ್ರಿಗೆ ಒಳ್ಳೇದು ಮಾಡಿದ್ರೆ ದೇವರು ನಮಗೆ ಒಳ್ಳೇದು ಮಾಡ್ತಾನೆ”, “ತಾತ ಮಾಡಿದ ಪಾಪ ಮೊಮ್ನೊಗನಿಗೆ”… ಹೀಗೆ ಹಲವಾರು ಮಾತುಗಳು… ಇವೆಲ್ಲ ಬರಿಯ ಮಾತುಗಳಲ್ಲ, ಅದೊಂದು ದೈತ್ಯ ಶಕ್ತಿಯ ನಂಬಿಕೆ, ನಮ್ಮ ಬದುಕನ್ನು ಮುನ್ನಡೆಸುವ ಶಕ್ತಿ. ನನ್ನ ತಂದೆ ಒಬ್ಬ ಪ್ರಾಮಾಣಿಕ ಹೈಸ್ಕೂಲ್ ಗಣಿತದ ಮೇಷ್ಟ್ರು. ತಮ್ಮ ವಿದ್ಯಾರ್ಥಿಗಳಿಗೆ ಸ್ವಂತ ಮಕ್ಕಳ ರೀತಿಯಲ್ಲೇ ಭಾವಿಸಿ ಪಾಠ ಹೇಳಿಕೊಟ್ಟವರು. ಅವರ ಬದುಕಿನುದ್ದಕ್ಕೂ ಅವರು ನಂಬಿದ್ದು ಒಂದೇ ಒಂದು. ನಾನು ಈ ಮಕ್ಕಳಿಗೆ ಚೆನ್ನಾಗಿ ಪಾಠ ಮಾಡಿದರೆ ದೇವರು ಮುಂದೆ ನನ್ನ ಮಕ್ಕಳನ್ನ ಚನ್ನಾಗಿಟ್ಟಿರ್ತಾನೆ ಎನ್ನುವುದು. ಅದಕ್ಕೆ ಸರಿಯಾಗಿ ನಾನು ನನ್ನ ತಮ್ಮ ಓದಿ ನೌಕರಿಗೆ ಸೇರಿದ ಮೇಲೆ ಅವರಿಗೆ ಅವರ ನಂಬಿಕೆ ಮತ್ತೂ ಬಲವಾಯ್ತು. ಆದರೆ ನಮಗೆ ನಿಜ ಗೊತ್ತಿತ್ತು. ನನ್ನ ತಂದೆ ನಮಗೆ ತಿಳಿದ ಹಾಗೆ, ನಮಗೆ ಬುದ್ಧಿ ಬಂದಾಗಿನಿಂದಲೂ ಎಂದೂ ಸಂಜೆ ಮತ್ತು ಬೆಳಗಿನ ಹೊತ್ತು, ಸಮಯವನ್ನು ವ್ಯರ್ಥವಾಗಿ ಕಳೆದವರಲ್ಲ. ಬೆಳಗ್ಗೆ ಮನೆ ಪಾಠಕ್ಕೆ (ಒತ್ತಯಕ್ಕೆ ಮಣಿದು ಉಚಿತವಾಗಿ ಪಾಠ ಮಾಡುತ್ತಿದ್ದರೇ ಹೊರತು, ಅವರೆಂದೂ ಫೀಸಿಗೆ ಮನೆ ಪಾಠ ಮಾಡಿದವರಲ್ಲ… ಯಾರೋ ಕೆಲವರು ಒತ್ತಾಯ ಪೂರ್ವಕವಾಗಿ ಉಡುಗೊರೆ ಕೊಡುತ್ತಿದ್ದರಷ್ಟೇ..) ಬರುತ್ತಿದ್ದ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು, ಸಂಜೆ ನಾವಿಬ್ಬರು ಮಕ್ಕಳಿಗೆ. ಅವರು ನಾನು ಮತ್ತು ನನ್ನ ತಮ್ಮ ಬೆಳೆದು ಪಿಯುಸಿ ದಾಟುವವರೆಗೂ ಎಂದೂ ಟೀವಿಯನ್ನೇ ನೋಡಲಿಲ್ಲ, ಯಾವ ಮೋಜು ಅದು ಇದು ಎಂದು ಕಾಲಾಯಾಪನೆಯನ್ನೇ ಮಾಡಲಿಲ್ಲ. ಅವರು ಮೊದಲ ಬಾರಿ ನಿರುಮ್ಮಳವಾಗಿ ಟೀವಿ ನೋಡಲು ಶುರು ಮಾಡಿದ್ದೇ, ನಾನು ನೌಕರಿ ಸೇರಿ ಮತ್ತು ನನ್ನ ತಮ್ಮ ತನ್ನ ಹೆಚ್ಚಿನ ಓದಿಗಾಗಿ ಅಂತ ಮನೆ ತೊರೆದಾಗಲೇ. ಅವರ ಈ ಶ್ರಮ ವ್ಯರ್ಥವಾಗಲಿಲ್ಲ. ಆದರೆ ತಮ್ಮ ಇಡೀ ಬದುಕನ್ನೇ ಅವರ ವೃತ್ತಿ (ಸೇವೆ) ಮತ್ತು ಮಕ್ಕಳ ಬದುಕಿಗಾಗಿ ಮುಡುಪಾಗಿಟ್ಟ ರೀತಿ ಮಾತ್ರ ಈಗಲೂ ನನಗೊಂದು ಅಚ್ಚರಿ. ನನಗೂ ಸಹ ನನ್ನ ಮಕ್ಕಳಿಗೆ ಅಷ್ಟು ಸಮಯ ಕೊಡಲು ಒಮ್ಮೊಮ್ಮೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಾನು ನನ್ನ ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲವಾ ಎನ್ನುವ ಅನುಮಾನವೂ ನನಗೆ ಕಾಡಿಬಿಡುತ್ತದೆ. ಆದರೆ ಅವರ ಒಟ್ಟಾರೆ ಬದುಕೇ ಒಂದು ಪಾಠವಾಗಿ ನನ್ನ ಮುಂದಿದೆ. ನನ್ನ ಅವಶ್ಯಕತೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ಬಳಸುತ್ತಾ ನಡೆಯಬೇಕಿದೆ. ಒಂದಂತೂ ನಿಜವಾಯಿತು. ನನ್ನಪ್ಪ ಮಹತ್ವಾಕಾಂಕ್ಷಿಗಳಾಗಿರಲಿಲ್ಲ. ಅವರಿಗೆ ಏನನ್ನೋ ಸಾಧಿಸಬೇಕು ಎನ್ನುವ ಹಂಬಲವಿರಲಿಲ್ಲ. ಆದರೆ ತಮ್ಮ ಮಕ್ಕಳು ಸನ್ನಡತೆಯುಳ್ಳವರಾಗಿರಬೇಕು, ಸದ್ಗುಣಗಳನ್ನು ಕಲಿತಿರಬೇಕು, ಸನ್ಮಾರ್ಗದಲ್ಲಿ ನಡೆಯಬೇಕು ಎನ್ನುವುದಷ್ಟೇ ಅವರಿಗೆ ಮುಖ್ಯವಾಗಿತ್ತು. ಬೇರೆಯವರ ಒಂದು ಸಣ್ಣ ಐದು ಪೈಸೆಯನ್ನೂ ಮುಟ್ಟಬಾರದು ಎಂಬ ಪಾಠ ನಮಗೆ ಸಿಕ್ಕಿದ್ದು ಅತಿ ಸಣ್ಣ ವಯಸ್ಸಿನಲ್ಲಿ. ಇವತ್ತಿಗೂ ನಮಗಿರುವುದರಲ್ಲಿ ನಾವು ತೃಪ್ತರೇ ವಿನಃ ಮತ್ತೊಬ್ಬರ ಹಣಕ್ಕೆ ಆಸೆ ಪಡಬೇಕು ಎಂದು ಯಾವತ್ತು ಅನಿಸಿಯೇ ಇಲ್ಲ ನಮಗೆ. ಅವರು ಕೊಟ್ಟಿರುವ ಸಂಸ್ಕಾರ ಅಷ್ಟು ಗಟ್ಟಿಯಾದದ್ದು. ಇವತ್ತು ಅಪ್ಪ ಅಮ್ಮನಿಂದ ಬಹಳ ದೂರದಲ್ಲಿದ್ದು ಬದುಕುತ್ತಿದ್ದರೂ ಅವರು ಕಲಿಸಿದ ಗುಣಗಳು ಸದಾ ನಮ್ಮನ್ನು ಕಾಯುತ್ತಿವೆ, ನಡೆಸುತ್ತಿವೆ. ಕೆಟ್ಟದ್ದರ ನಡುವೆಯೂ ಒಳ್ಳೆಯದನ್ನು ಆರಿಸಿಕೊಂಡು ನಡೆಯುವುದನ್ನು ಹೇಳಿಕೊಡುತ್ತಿವೆ. ಅದರೆ ಈಗಲೂ ಅಪ್ಪ ನಂಬುತ್ತಾರೆ, “ನಾನು ನನ್ನ ವಿದ್ಯಾರ್ಥಿಗಳಿಗೆ ನಿಸ್ವಾರ್ಥದಿಂದ ಹೇಳಿಕೊಟ್ಟ ನಾಲ್ಕು ಅಕ್ಷರಗಳಿಂದಾಗಿಯೇ ದೇವರು ನನ್ನ ಮಕ್ಕಳನ್ನ ಕಾಪಾಡಿದಾನೆ” ಅಂತ. ಆದರೆ ನಾನು ನಂಬುವುದು ಮಾತ್ರ ಅವರ ಪ್ರಾಮಾಣಿಕತೆ, ನಿಸ್ವಾರ್ಥತೆ, ಪರಿಶ್ರಮ, ತ್ಯಾಗ, ಮುಗ್ಧತೆ ಮತ್ತು ಪ್ರಂಜಲ ಮನಸಿನ ಪ್ರೀತಿಯನ್ನು ಮಾತ್ರ…. ಈಗ ಯೋಚಿಸುವುದಿಷ್ಟೇ ನಾನು ನನ್ನ ಮಕ್ಕಳನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಿದ್ದೇನೆ?! ಅವರ ಒಂದಿಡೀ ಘನ ಬದುಕಿಗಾಗುವಷ್ಟು ದಟ್ಟ ಅನುಭವಗಳನ್ನು ನಾನು ಕಟ್ಟಿಕೊಡುತ್ತಿರುವೆನಾ?! ಅವರಿಗೆ ಎಂತಹ ಮಾರ್ಗವನ್ನು ತೋರಿಸುತ್ತಿದ್ದೇನೆ ನಾನು?! ಇವತ್ತಿನ ಅಂತರ್ಜಾಲದ ಯುಗದಲ್ಲಿ ನಮಗೆ ಮೊಬೈಲಿಗಿಂತಲೂ ಪ್ರಿಯವಾದದ್ದು ಬೇರೊಂದಿಲ್ಲ. ಕಂಪ್ಯೂಟರ್, ಟೀವಿಯನ್ನೂ ಹಿಂದಿಕ್ಕಿದೆ ಈ ಮೊಬೈಲು. ಅದು ನಮ್ಮ ಜೀವನದ ಅವಿಭಾಜ್ಯ ಅಂಗವೆನಿಸತೊಡಗಿದೆ. ಊಟ ನಿದ್ರೆಯ ಜೊತೆಗೆ ನಮ್ಮ ಆಯುಷ್ಯವನ್ನೂ ಕಸಿಯುತ್ತಿವೆ ಈ ಮೊಬೈಲುಗಳು. ಸಾಮಾಜಿಕ ತಾಣಗಳೆನ್ನುವ ವರ್ಚುವಲ್ ಪ್ರಪಂಚವನ್ನೇ ಅತಿಯಾಗಿ ಹಚ್ಚಿಕೊಂಡು ಅದನ್ನೇ ಸತ್ಯ ಎನ್ನುವಂತೆ ಬದುಕುತ್ತಿದ್ದೇವೆ ನಾವು. ಮೊನ್ನೆ ಒಂದು ಕತೆ ಓದಿದೆ. ಅದು ಬಹಳಷ್ಟು ಕಡೆ ಬಹಳಷ್ಟು ಸಮಯದಿಂದ ಹರಿದಾಡುತ್ತಿದ್ದು ನನ್ನ ಗಮನಕ್ಕೂ ಬಂದಿತ್ತು. ಅದೊಂದು ಶಾಲೆ. ಅಲ್ಲೊಬ್ಬ ಶಿಕ್ಷಕಿ. ಒಂದು ದಿನ ಆಕೆ ತನ್ನ ವಿದ್ಯಾರ್ಥಿಗಳಿಗೆ “ಮುಂದೆ ನಿಮಗೆ ಏನಾಗಬೇಕೆಂದು ಆಸೆ ಇದೆ ಎನ್ನುವುದನ್ನು ಒಂದು ಪೇಪರ್ ನಲ್ಲಿ ಬರೆದು ಕೊಡಿ” ಎನ್ನುತ್ತಾಳೆ. ಎಲ್ಲ ಮಕ್ಕಳೂ ಬರೆದುಕೊಡುತ್ತಾರೆ. ಶಿಕ್ಷಕಿ ಅವನ್ನು ಕರೆಕ್ಷನ್ ಮಾಡಲಿಕ್ಕಾಗಿ ಮನೆಗೆ ತರುತ್ತಾಳೆ. ಮನೆಕೆಲಸ, ಅಡುಗೆ, ಊಟ ಎಲ್ಲ ಮುಗಿಸಿ, ದಿನನಿತ್ಯದಂತೆ ಒಂದಷ್ಟು ಹೊತ್ತು ಮೊಬೈಲ್ ನೋಡಿ, ಮಲಗುವ ಮುನ್ನ ಆ ಪೇಪರ್ ಗಳನ್ನು ಓದಲು ಶುರುಮಾಡುತ್ತಾಳೆ. ಪಕ್ಕದಲ್ಲಿ ಅವಳ ಗಂಡ ಮೊಬೈಲ್ ನಲ್ಲಿ ಮುಳುಗಿರುತ್ತಾನೆ. ಇದ್ದಕ್ಕಿದ್ದ ಹಾಗೆ ಅವಳು ಒಂದು ಪೇಪರ್ ಓದುತ್ತಾ ಅಳಲು ಶುರು ಮಾಡುತ್ತಾಳೆ. ಆಗ ಅವಳ ಗಂಡ ಯಾಕೆ ಅಳ್ತಿದಿ ಎಂದು ಕೇಳುತ್ತಾನೆ. ಆಗ ಆಕೆ ಹೇಳುತ್ತಾಳೆ, ಇಲ್ಲೊಂದು ವಿದ್ಯಾರ್ಥಿಯ ಬರೆಹ ನೋಡಿ ಅಳು ಬಂತು ಎನ್ನುತ್ತಾಳೆ. ಆಗ ಗಂಡ ಏನಂಥದ್ದು ಬರೆದಿದ್ದಾನೆ ಆ ಹುಡುಗ ಎಂದು ಕೇಳುತ್ತಾನೆ. ಆಗ ಆ ಶಿಕ್ಷಕಿ ಆ ಬರೆಹವನ್ನು ಓದತೊಡಗುತ್ತಾಳೆ, “ಮಿಸ್ ನನಗೆ ದೊಡ್ಡವನಾದ ಮೇಲೆ ಒಂದು ಸ್ಮಾರ್ಟ್ ಫೋನ್ ಆಗಬೇಕು ಅಂತ ಆಸೆ. ಯಾಕಂದ್ರೆ ಅಪ್ಪ ಅಮ್ಮ ನಂಗಿಂತ ಮೊಬೈಲನ್ನೆ ತುಂಬ ಪ್ರೀತಿಸ್ತಾರೆ. ರಾತ್ರಿ ಮಲಗುವಾಗಲು ಅದನ್ನೇ ನೋಡ್ತಾರೆ, ಬೆಳಗ್ಗೆ ಕಣ್ಣು ಬಿಟ್ಟಾಗಲೂ ಅದನ್ನೇ ನೋಡ್ತಾರೆ. ನಂಜೊತೆ ಎರೆಡು ಮಾತಾಡೋದಿಲ್ಲ, ಪ್ರೀತಿಯಿಂದ ಇರೋದಿಲ್ಲ. ಸದಾ ಮೊಬೈಲಿನಲ್ಲೇ ಮುಳುಗಿರ್ತಾರೆ. ಇನ್ನು ಕಾಲ್ ಬಂದುಬಿಟ್ಟರೆ ಮುಗೀತು. ನಾನೊಬ್ಬ ಇದೀನಿ ಎನ್ನುವುದೇ ನೆನಪಿರೋದಿಲ್ಲ ಅವರಿಗೆ. ಅದಕ್ಕೆ ನಾನೊಂದು ಸ್ಮಾರ್ಟ್ ಫೋನ್ ಆಗಬೇಕು ಅಂತ ಆಸೆ. ಆಗ ಅಪ್ಪ ಅಮ್ಮ ನನ್ನನ್ನೇ ಪ್ರೀತಿಸ್ತಾರೆ” ಎಂದು ಓದಿ ಮುಗಿಸುತ್ತಾಳೆ. ಅಷ್ಟು ಹೊತ್ತಿಗಾಗಲೇ ಗಂಡನ ಕಣ್ಣೂ ತುಂಬಿರುತ್ತದೆ. ಎಂಥದೋ ತಪ್ಪಿತಸ್ಥ ಭಾವ ಅವನನ್ನೂ ಕಾಡತೊಡಗಿರುತ್ತದೆ. ಮತ್ತೆ ಗೊಗ್ಗರು ದನಿಯಲ್ಲಿ ಆ ಹುಡುಗ ಯಾರು ಎಂದು ಕೇಳುತ್ತಾನೆ. ಆ ಹುಡುಗ ಬೇರೆ ಯಾರೂ ಅಲ್ಲ ನಮ್ಮ ಮಗನೇ ಕಣ್ರೀ ಎನ್ನುತ್ತಾ ಮತ್ತೂ ಜೋರಾಗಿ ಅಳತೊಡಗುತ್ತಾಳೆ ಆ ಶಿಕ್ಷಕಿ. ಇದಂತೂ ಬಹುತೇಕ ನಮ್ಮಲ್ಲರಿಗೂ ಅನ್ವಯಿಸುವ ಕತೆಯೇನೋ ಅನಿಸಿಬಿಟ್ಟಿತು ನನಗೆ. ನಾವು ನಮ್ಮ ಮಕ್ಕಳಿಗೆ ನ್ಯಾಬದ್ಧವಾಗಿ ಅವರಿಗೆ ಸಿಗಬೇಕಾದ ಸಮಯವನ್ನ ಕೊಡುತ್ತಿಲ್ಲದ ಅಪರಾಧಿಗಳು. ಇನ್ನು ಆ ಮಕ್ಕಳು ಬೆಳೆದಾದ ಮೇಲೆ ಇನ್ನೆಂತಹ ಮೌಲ್ಯಗಳನ್ನು ಬೆಳೆಸಿಕೊಳ್ಳಲು ತಾನೆ ಸಾಧ್ಯ. ಮಕ್ಕಳು ನೋಡ ನೋಡುತ್ತಲೇ ಬೆಳೆದುಬಿಡುತ್ತಾರೆ. ಅವರ ಬೆಳವಣಿಗೆಯ ಪ್ರತಿ ಹಂತವನ್ನೂ ನಾವು ಅಚ್ಚರಿಯಿಂದ ಕಂಡು ಆನಂದಿಸಿ ಪ್ರೀತಿಸಬೇಕು. ಅದನ್ನೇ ಮಾಡದೆ ಹೋದರೆ ಮುಂದೆ ಆ ಮಕ್ಕಳು ನಮ್ಮನ್ನು ಯಾವ ಕಾರಣಕ್ಕಾಗಿ ನೆನಪಿಡಬೇಕು… ಪೇರೆಂಟಿಂಗ್ ಕೂಡ ಬಹಳ ಜವಾಬ್ದಾರಿಯುತ ಕೆಲಸ. ಹೆತ್ತರೆ ಮಾತ್ರ ಸಾಕಾಗುವುದಿಲ್ಲ. ಮಕ್ಕಳ ಅವಶ್ಯಕತೆಗೆ ಮೀರಿ ಸೌಲಭ್ಯಗಳನ್ನು ಕೊಟ್ಟು ಗಿಲ್ಟ್ ಕಳೆದುಕೊಳ್ಳುವುದಲ್ಲ, ಅವರಿಗೆ ಕೊಡಬೇಕಾದ ಸಮಯ ಕೊಟ್ಟು ಅವರನ್ನ ಪ್ರೀತಿಯಿಂದ ಪ್ರಭಾವಿಸಬೇಕಿದೆ. ಸರಿ ತಪ್ಪುಗಳನ್ನು ಗುರುತಿಸಿ ಸರಿದಾರಿ ಕಂಡುಕೊಂಡು ನಡೆಯುವುದನ್ನು ಕಲಿಸಿಕೊಡಬೇಕಿದೆ. ಇನ್ನದಾರೂ ಒಂದಷ್ಟು ಹೊತ್ತು ಮೊಬೈಲ್ ಬಿಸಾಕಿ ನಮ್ಮ ಮಕ್ಕಳ ಜೊತೆ ಕೂತು ಒಂದಷ್ಟು ಚಂದದ ಸಮಯವನ್ನು ಕಳೆಯಬೇಕಿದೆ ಅಂತ ಅನಿಸುತ್ತಿರುವುದನ್ನು ನನ್ನಿಂದಲೇ ಶುರುಮಾಡಬೇಕಿದೆ. ಮತ್ತೆ ಎಲ್ಲಾ ಒಳ್ಳೆಯದೇ ಆಗುತ್ತೆ ಎನ್ನುವ ನಂಬಿಕೆಯ ಬೀಜವನ್ನು ಬಿತ್ತಿಕೊಂಡು ಅದು ಮೊಳೆತು ಬೆಳೆದು ಹೆಮ್ಮರವಾಗುವುದನ್ನು ಇಂಚಿಂಚೂ ಕಾಣಬೇಕಿದೆ… ********************************** –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ!
ಅನುಭವ ಕಥನ ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ! ವಿಜಯಶ್ರೀ ಹಾಲಾಡಿ ಹೋಳಿಹಬ್ಬ ಬರುವುದು ಬೇಸಗೆಯ ವಸಂತಮಾಸದಲ್ಲಿ… ಅಂದರೆ ಮಾವು, ಗೇರು ಮತ್ತು ಕಾಡಿನ ಬಹುತೇಕ ಮರಗಳು ಚಿಗುರು, ಹೂ ಬಿಡುವಕಾಲದಲ್ಲಿ. ವಿಜಿಯ ಮನೆ ಹತ್ತಿರದ ಕಾಡುಗಳಲ್ಲಿ ಕೆಲವು ಮಾವಿನಮರಗಳಿದ್ದವಲ್ಲ, ಅವು ಚಿಗುರು ಬಿಡುವುದನ್ನು ನೋಡಬೇಕು! ಇಡಿ ಮರವೇ ಹೊಳೆಯುವ ಕೆಂಪು ಬಣ್ಣವಾಗಿಬಿಡುತ್ತಿತ್ತು. ಇದೇ ಸಂದರ್ಭದಲ್ಲಿ ಹೋಳಿಹಬ್ಬವೂ ತನ್ನ ಬಣ್ಣ ಸೇರಿಸಿ ಕೆಂಪು, ಹಳದಿ, ಹಸಿರು, ಕಿತ್ತಳೆ ವರ್ಣಗಳಲ್ಲಿ ಅವರ ಊರು ಹೊಳೆಯುತ್ತಿತ್ತು. ಅಲ್ಲಿ ಕುಡುಬಿ ಜನಾಂಗದವರ ಮನೆಗಳು ಸಾಕಷ್ಟಿದ್ದವು. ಅವರ ಕುಂದಾಪುರ ತಾಲ್ಲೂಕಿನಲ್ಲಿ ಕುಡುಬಿಯರು ಬಹುಸಂಖ್ಯೆಯಲ್ಲಿದ್ದಾರೆ. ವಿಜಿಯ ಬಾಲ್ಯಕಾಲದಲ್ಲಿ ಕುಡುಬಿಯರ ದಿನನಿತ್ಯದ ವೇಷಭೂಷಣಕೂಡಾ ವಿಶಿಷ್ಟವಾಗಿತ್ತು. ಹೆಂಗಸರು ಸೀರೆ ಉಡುವ ರೀತಿಯೇ ಬೇರೆ. ‘ಗೇಂಟಿ’ ಹಾಕಿ ಸೀರೆಯುಟ್ಟು ಕೊರಳಿಗೆ ಹತ್ತಾರು ಮಣಿಸರಗಳನ್ನು ಹಾಕಿಕೊಳ್ಳುತ್ತಿದ್ದರು. ತಲೆತುಂಬ ಅಬ್ಬಲಿಗೆ ಹೂ ಮುಡಿದು ಮೂಗಿಗೆ ದೊಡ್ಡ ಹರಳಿನ ಮೂಗುತಿ, ಕಿವಿಗೆ ಬೆಂಡೋಲೆ, ಬುಗುಡಿ, ಕೈತುಂಬ ಗಾಜಿನ ಬಳೆಗಳನ್ನಿಟ್ಟು ಖುಷಿ ಖುಷಿಯಾಗಿ ಅವರು ನಡೆದುಬರುವುದೇ ಒಂದು ಜಾಪು! ಕುಡುಬಿಯರು ಪ್ರತಿವರ್ಷ ಆಚರಿಸುತ್ತಿದ್ದ ಹೋಳಿಹಬ್ಬವಂತೂ ವಿಶೇಷ. ವಿಜಿ ಮತ್ತು ಗೆಳತಿಯರು ಆ ಸಮಯದ ಹೋಳಿ ಕುಣಿತವನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಸರಿಸುಮಾರು ಹತ್ತು-ಹದಿನೈದು ದಿನದ ಹಬ್ಬವಿದು. ಅಮಾವಾಸ್ಯೆಯ ನಂತರ ಶುರುವಾಗಿ ಹುಣ್ಣಿಮೆಯವರೆಗೆ ಇರುವ ಹಬ್ಬ. ಕುಡುಬಿಯರು ತಮ್ಮಲ್ಲೇ ನಾಲ್ಕೈದು ಮೇಳಗಳನ್ನು ಮಾಡಿಕೊಳ್ಳುತ್ತಿದ್ದರು. ಮನೆಮನೆಗೆ ಹೋಗಿ ನೃತ್ಯ, ಕೋಲಾಟವನ್ನು ಈ ಸಂದರ್ಭದಲ್ಲಿ ಮಾಡುತ್ತಿದ್ದರು. ಗಂಡಸರು ಮತ್ತು ಚಿಕ್ಕ ಗಂಡುಮಕ್ಕಳು ಬಣ್ಣಬಣ್ಣದ ಉಡುಪು ಧರಿಸಿ ಮಣಿಸರಗಳಿಂದ ತಲೆಗೆ ಮುಂಡಾಸು, ಹೂಗಳು, ಹಕ್ಕಿ ಗರಿಗಳಿಂದ ಅಲಂಕರಿಸಿ ಕೊಂಡಿರುತ್ತಿದ್ದರು. ಭುಜಕ್ಕೆ ಗುಮ್ಟಿ(ಗುಮ್ಮಟೆ) ಎಂಬ ವಾದ್ಯವನ್ನು ಹಾಕಿಕೊಂಡು, ಕಾಲುಗಳಲ್ಲಿ ದೊಡ್ಡ ದೊಡ್ಡ ಗೆಜ್ಜೆ ಧರಿಸಿ ಉದ್ದಾನುದ್ದಕ್ಕೆ ಅವರು ನಡೆದು ಬರುವಾಗ ಇಡೀ ಗದ್ದೆ ಬಯಲೇ ಸಂಗೀತ, ಬಣ್ಣಗಳಲ್ಲಿ ಮುಳುಗಿದಂತೆ ಭಾಸವಾಗುತ್ತಿತ್ತು. ವಿಜಿಗೆ ಆಶ್ರ್ಯವಾಗುತ್ತಿದ್ದ ವಿಷಯವೆಂದರೆ ಬೇರೆ ದಿನಗಳಲ್ಲಿ ಗದ್ದೆ, ಹೊಲಗಳಲ್ಲಿ ತುಂಡು ಬಟ್ಟೆಯುಟ್ಟು ದುಡಿಯುತ್ತಿದ್ದ ಆ ಪರಿಚಿತ ಜನರೆಲ್ಲ ಆವತ್ತು ಗುರ್ತವೇ ಸಿಗದಂತೆ ಕಾಣುತ್ತಿದ್ದುದು! ಅಬ್ಬ, ಆ ಹೊಸ ವೇಷದಲ್ಲಿ ಅವರೆಲ್ಲ ‘ಅವರೇಅಲ್ಲ’ ಎಂಬಷ್ಟು ಚಂದ ಕಾಣುತ್ತಿದ್ದರು. ಕೆಲವು ಸಲ ರಾತ್ರಿ ಹೊತ್ತುಕುಣಿಯಲು ಬಂದರಂತೂ ಲಾಟೀನು ಬೆಳಕಲ್ಲಿ ಅವರ ಕುಡುಬಿ ಭಾಷೆಯ ಹಾಡು ಮತ್ತು ನೃತ್ಯ ನಕ್ಷತ್ರಲೋಕಕ್ಕೆ ಕರೆದೊಯ್ಯುತ್ತಿತ್ತು! ಅವರು ತಲೆಗೆ ಸಿಂಗರಿಸಿದ್ದ ಸುರಗಿ ಹೂಗಳ ಮಾಲೆ ಪರಿಮಳಿಸುತ್ತಿದ್ದವು. ಗುಮ್ಮಟೆ ಬಡಿಬಡಿದು ಕುಣಿಯುವಾಗ, ಕೋಲಾಟ ಆಡುವಾಗ ಅವರೆಲ್ಲ ಎಷ್ಟು ಚುರುಕು! ಆ ವೇಷದಲ್ಲಿದ್ದಾಗಲೂ ಗಿಡ್ಡ, ಹೆರಿಯ, ಬಾಗ್ಡು, ಬುತ್ಯ ಮುಂತಾದವರು “ಪುಟ್ಟಮ್ಮ ಎಂತಾ ಮಾಡ್ತೆ?” ಎಂದು ಮಾತಾಡಿಸಿದಾಗ ಪುಟ್ಟ ವಿಜಿಗೆ ಏನೋ ಭಯಮಿಶ್ರಿತ ಸಂತೋಷ! ತನ್ನದೇ ವಯಸ್ಸಿನ ಕೆಲವು ಮಕ್ಕಳೂ ವೇಷ ಹಾಕಿಕೊಂಡು ಬಂದದ್ದನ್ನು ನಿಬ್ಬೆರಗಾಗಿ ನೋಡುತ್ತಿದ್ದಳು. ಅವರ ಊರಲ್ಲಿ ನೆಲೆಸಿದ್ದ ಕೆಲ ಮರಾಠರೂ ಹೋಳಿ ಕುಣಿತವನ್ನು ಮಾಡುತ್ತಿದ್ದರು. ಇವರ ಉಡುಪಿನಲ್ಲಿ ಬಣ್ಣಗಳು ತುಸು ಕಡಿಮೆ. ಆದರೆ ಇವರ ಕೋಲಾಟ ಮಾತ್ರ ಅದ್ಭುತ. ಮರಾಠಿ ಭಾಷೆಯ ಹಾಡುಗಳಂತೂ ಬೇರೆಯೇ ತರಹ. ಮತ್ತೊಂದು ವಿಶೇಷವೆಂದರೆ ಇವರ ಮೇಳದಲ್ಲಿ ಒಬ್ಬ ‘ಅಜ್ಜ’ ಇರುತ್ತಾನೆ! ಅಂದರೆ; ಒಬ್ಬ ಹುಡುಗನಿಗೆ ದೊಡ್ಡದಾದ ಬಿಳಿಗಡ್ಡ, ಕಣ್ಣಿಗೆ ಕಪ್ಪುಕನ್ನಡಕ, ಕೈಗೆ ಕೋಲು, ಗಂಟೆ ಕೊಟ್ಟು ವಿಶೇಷವಾಗಿ ‘ಹೋಳಿ ಅಜ್ಜನ ವೇಷ’ ಹಾಕಿಸುತ್ತಾರೆ. ಯಾಕೆಂದು ಇವತ್ತಿಗೂ ಗೊತ್ತಿಲ್ಲ; ಆ ಅಜ್ಜನನ್ನು ಕಂಡರೆ ವಿಜಿಗೆ ವಿಪರೀತ ಭಯವಾಗುತ್ತಿತ್ತು. ಕೊನೆಯಲ್ಲಿ ಅಕ್ಕಿ, ಕಾಯಿ, ದುಡ್ಡಿನ ಸಂಭಾವನೆಯನ್ನು ಆ ‘ಅಜ್ಜ’ನ ಕೈಯ್ಯಲ್ಲೇ ಕೊಡುವುದಾಗಿತ್ತು. ಆ ಅಜ್ಜನೋ ಕೀಟಲೆ ಮಾಡಿ, ಕುಮ್ಬೆಟ್ ಹಾರಿ ಎಲ್ಲರನ್ನೂ ನಗಿಸುತ್ತಿದ್ದ. ಹಾಗೇ ಮಕ್ಕಳನ್ನು ಹೆದರಿಸುತ್ತಲೂ ಇದ್ದ. ಅಜ್ಜ ಸಂಭಾವನೆ ಪಡೆಯುವುದು ಕುಣಿತದ ಕೊನೆಯ ಹಂತ. ಆಮೇಲೆ ಬಾಯಾರಿಕೆ ಕುಡಿದು ಸ್ವಲ್ಪ ದಣಿವಾರಿಸಿಕೊಂಡು ಮತ್ತೊಂದು ಮನೆಗೆ ಮೇಳ ಹೊರಟುಬಿಡುತ್ತಿತ್ತು. ವಿಜಿಯ ಊರಿನಲ್ಲಿ ಅವತ್ತೆಲ್ಲ ಹೋಳಿಹುಣ್ಣಿಮೆಯ ಆಸುಪಾಸಿನ ಆ ಕೆಲವು ದಿನಗಳು ಕಳೆದದ್ದೇ ತಿಳಿಯುತ್ತಿರಲಿಲ್ಲ. ಬಂದು ಹೋಗುವ ಹೋಳಿಮೇಳಗಳ ಕುಣಿತ ನೋಡುವುದರಲ್ಲಿ ಹೊರ ಪ್ರಪಂಚವೇ ಮರೆತುಹೋಗುತ್ತಿತ್ತು. ಆ ಸಮಯದಲ್ಲಿ ಶಾಲೆಯಲ್ಲಿ ಬೇಸಿಗೆ ರಜೆಕೊಡುವ ದಿನಗಳು ಹತ್ತಿರವಾಗುತ್ತಿತ್ತು. ಪರೀಕ್ಷೆಗಳು ಮುಗಿದಿರುತ್ತಿದ್ದವು. ಶಾಲೆಯಲ್ಲೂ ಈ ಹೋಳಿಹಬ್ಬದ ಕುರಿತು ಮಕ್ಕಳು ಚರ್ಚಿಸುತ್ತಿದ್ದರು. ಹಾಗೇ ಮನೆಯ ಸುತ್ತಮುತ್ತ ಗೆಳತಿಯರು ಸೇರಿದರೂ ಅದೇ ಮಾತು. ಹೋಳಿ ಮೇಳ ಬಂದಾಗ ಅವರ ಬೀಚುಬೆಕ್ಕು ಹೆದರಿ ಎಲ್ಲೋ ಅಟ್ಟದ ಸಂದಿಯಲ್ಲಿ ಅಡಗಿ ಕೂರುತ್ತಿದ್ದುದನ್ನು ಆಡಿಕೊಂಡು ನಗುತ್ತಿದ್ದರು. ವಿಜಿ, ನೀಲಿಮಾ, ಮಾಣಿಕ್ಯಳಿಗೆ ವಿಚಿತ್ರ ಕಾಣುತ್ತಿದ್ದುದು ಹೋಳಿ ಜನರು ತಲೆಗೆ ಸಿಕ್ಕಿಸಿಕೊಳ್ಳುತ್ತಿದ್ದ ಹಕ್ಕಿ ಗರಿಗಳು! ಮನೆಯ ಹತ್ತಿರದ ತೋಟದಲ್ಲಿ, ಕಾಡಿನಲ್ಲಿ ಹಾರಾಡುವ ‘ಬಾಲದ ಹಕ್ಕಿ’ಯಿಂದ ಆ ಉದ್ದನೆ ಗರಿಗಳನ್ನು ಕದಿಯುತ್ತಿದ್ದರು ಎಂದು ಅವರಿಗೆ ಗೊತ್ತು. ಕೊಂಬೆಗಳಿಗೆ ಮೇಣ ಹಚ್ಚಿಟ್ಟು, ಹಕ್ಕಿ ಬಂದು ಕುಳಿತಾಗ ಉದ್ದ ಗರಿಗಳನ್ನು ಕಿತ್ತುಕೊಂಡು ಮತ್ತೆ ಕಾಡಿಗೆ ಬಿಡುತ್ತಾರಂತೆ. “ಪಾಪದ್ದು ಆ ಬಾಲದ ಹಕ್ಕಿ, ಅದಕ್ಕೆ ಎಷ್ಟು ಹೆದರಿಕೆಯಾಗುತ್ತದೋ, ಏನೋ” ಎಂದು ಮಾತಾಡಿಕೊಳ್ಳುತ್ತಿದ್ದರು. `ಅಂತಹ ಹಕ್ಕಿಗಳು ಪುನಃ ಕಾಡಿಗೆ ಹೋದಾಗ ಉಳಿದ ಹಕ್ಕಿಗಳು ಅವನ್ನು ಸೇರಿಸಿಕೊಳ್ಳುತ್ತಾವಾ?’ ಮುಂತಾಗಿ ಯೋಚಿಸುತ್ತಿದ್ದರು. ಏಕೆಂದರೆ ಒಮ್ಮೆ ಮನುಷ್ಯರು ಮುಟ್ಟಿದರೆ ಅಂತಹ ಹಕ್ಕಿ, ಅಳಿಲು ಮುಂತಾದ ಪ್ರಾಣಿ ಪಕ್ಷಿಗಳನ್ನು ಪುನಹ ಅವುಗಳ ಗೂಡಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಅವರು ಪುಸ್ತಕದಲ್ಲಿ ಓದಿ ತಿಳಿದುಕೊಂಡಿದ್ದರು. “ಕಾಡಿಗೆ ಬಿಟ್ಟ ಹಕ್ಕಿಗೆ ಪುನಃ ಬಾಲ ಬೆಳೆಯುತ್ತದಾ?” ವಿಜಿ ಕೇಳುತ್ತಿದ್ದಳು. “ಹೂಂ, ಮತ್ತೆ ಬಾಲ ಬಂದಾಗ, ಮುಂದಿನ ವರ್ಷದ ಹಬ್ಬಕ್ಕೆ ಕಿತ್ತುಕೊಳ್ಳುತ್ತಾರೆ” ಎಂದು ನೀಲಿಮಾ ಹೇಳುತ್ತಿದ್ದಳು. “ಹಾಗಾದರೆ ಈ ಬಾಲದ ಹಕ್ಕಿಗೆ ಬಾಲವೇ ಇರಬಾರದಿತ್ತು, ಪಾಪ” ಎಂದುಕೊಳ್ಳುತ್ತಿದ್ದಳು ವಿಜಿ. ಮನರಂಜನೆಗಳೇ ಕಮ್ಮಿಯಿದ್ದ ವಿಜಿಯ ಊರಿನಲ್ಲಿ ಹೋಳಿಹಬ್ಬ ಒಂದು ದೊಡ್ಡ ಕುತೂಹಲಕಾರಿ ವಿಷಯವಾಗಿತ್ತು; ಹೌದು ವರ್ಷಕ್ಕೊಮ್ಮೆಅದು ಮರಳುತ್ತಿತ್ತು! ******************************************************
ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ! Read Post »
ಅಂಕಣ ಬರಹ ಹೊಸ ದನಿ ಹೊಸ ಬನಿ – ೧೫. ದೀರ್ಘ ಶೀರ್ಷಿಕೆಗಳ ಭಾರದಲ್ಲೂ ಸರಳ ನಡಿಗೆಯ ಮಂಜುಳ. ಡಿ ಕವಿತೆಗಳು ಮಂಜುಳ ಡಿ ಈಗಾಗಲೇ ವಿಶ್ವವಾಣಿ ಪತ್ರಿಕೆಯ ಅಂಕಣ ಬರಹಗಾರರಾಗಿ ಕವಯತ್ರಿಯಾಗಿ ಖ್ಯಾತರಾದವರು. ಈಗಾಗಲೇ ಮೂರು ಪುಸ್ತಕಗಳನ್ನು ಪ್ರಕಟಿಸಿರುವ ಅವರು ಬೆಂಗಳೂರಿನವರು. ಅವರ ಫೇಸ್ಬುಕ್ ಬರಹಗಳಲ್ಲಿ ಗದ್ಯ ಪದ್ಯಗಳ ಮಿಶ್ರಣವನ್ನು ಕಾಣಬಹುದು. “ಆಸೆಯ ಕಂದೀಲು” ಕವನ ಸಂಕಲನಕ್ಕೆ ಕಾವ್ಯ ವ್ಯಾಮೋಹಿ ವಾಸುದೇವ ನಾಡಿಗರು ಮುನ್ನುಡಿ ಬರೆದಿರುವುದರಿಂದ ಸಂಕಲನದ ಗುಣ ನಿಷ್ಕರ್ಷೆ ಸುಲಭದ್ದೇ ಆಗಿದೆ. ಈ ಸಂಕಲನ ಕುರಿತು ಈಗಾಗಲೇ ಎನ್.ಡಿ.ರಾಮಸ್ವಾಮಿ ಮುಖಪುಸ್ತಕದಲ್ಲಿ ಬರೆದಿದ್ದಾರೆ. ಅವರು ಹೇಳಿದ ಹಾಗೆ ಈ ಕವಿ ಉತ್ತಮ ಕವನಗಳನ್ನು ಉತ್ಸಾಹದಿಂದ ರಚಿಸಿದ್ದಾರೆ.ಕಾವ್ಯದ ಕಸುಬುದಾರಿಕೆಯನ್ನು ಇಂಗ್ಲೀಷ್ ಸಾಹಿತ್ಯದ ಉಪನ್ಯಾಸಕಿಯಾಗಿ ಅಭ್ಯಾಸ ಮಾಡುತ್ತಲೇ ಇದ್ದಾರೆ. ಭಾಷೆ,ಭಾವ,ಬಂಧಗಳು ಕವನಗಳಲ್ಲಿ ಉತ್ತಮವಾಗಿ ಮೂಡಿದೆ. ಕಾವ್ಯ ಶಿಲ್ಪದ ಕಸುಬುದಾರಿಕೆ ದಕ್ಕಿದೆ. ಅರ್ಥ ಪೂರ್ಣ ಕವನಗಳಲ್ಲಿ ಭಾವದ ಹೊಳೆ ಹರಿಸಿದ್ದಾರೆ. ಹೊಸತೇನೋ ಒಂದನ್ನು ಆತ್ಮದ ಬಾವಿಯಿಂದ ಕಾರಂಜಿಯಾಗಿಸಿದ್ದಾರೆ. ಕರುಳಿನ ಮಾತುಗಳಿಗೂ ದನಿಯಾಗಿದ್ದಾರೆ. ಅವರ ಚಿತ್ತ ಭಿತ್ತಿಯಲಿ ಸಾವಿರಾರು ಚಿಂತನೆಗಳಿವೆ. ಅವುಗಳಿಗೆ ನಿಜವಾದ ಕೈಮರ ಪೂರ್ವ ಸೂರಿಗಳ ಓದು. (ಇದು ಎನ್ಡಿಆರ್ ಮಾತು) ಇದೇ ಸಂಕಲನ ಕುರಿತು ಹೊನ್ನಾವರದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎಂ ಹೆಗಡೆ ಹಡಿನಬಾಳ ತುಂಬು ಭರವಸೆಯ ಮಾತನ್ನು ಹೇಳಿದ್ದಾರೆ. “‘ನನ್ನನ್ನು ನೋಯಿಸಿದ್ದಾದರೂ ಏನು” ಎನ್ನುತ್ತಲೇ ಮನಸ್ಸನ್ನು ಕದ್ದ ವ್ಯಕ್ತಿಯ ಕುರಿತು ‘ಆಸೆಯ ಕಂದೀಲು’ ಕವನದಲ್ಲಿ ಕಟ್ಟಿಕೊಂಡ ಆಸೆಗಳು ಕನಸುಗಳನ್ನು ತೆರೆದಿಡುವ ರೀತಿ ಅದ್ಭುತವಾಗಿದೆ. ಊಟ ಮಾಡುವಾಗ , ಹಾಸಿಗೆ ಬಿಟ್ಟು ಏಳುವಾಗ ಹೆಜ್ಜೆ ಹೆಜ್ಜೆಗೂ ನೆನಪಿಸಿಕೊಳ್ಳುತ್ತ ಇನ್ನು ಎಲ್ಲೋ ಯಾರಿಗೋ ಏನೋ ತೊಂದರೆಯಾದಾಗ ತನ್ನ ಇನಿಯನಿಗೇನಾಯಿತೋ ಪರಿತಪಿಸುವ ರೀತಿ, ಒಲಿದ ಹೃದಯದ ಸಲುವಾಗಿ ಮಿಡಿತವನ್ನು ಧ್ವನಿಸುವ ಸಾಲುಗಳು ಅದ್ಭುತ. ಪ್ರೀತಿಯ ತೀವ್ರತೆ ಹಂಬಲ ಕಳವಳ ಕನವರಿಕೆಯೇ ಮನದಾಳದ ನೋವಿಗೆ ಕಾರಣ ಎನ್ನುವುದರ ಮೂಲಕ ಪ್ರೀತಿಯ ಆಳ ಹರಹನ್ನು ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ. ಒಮ್ಮೆ ಮನಸ್ಸನ್ನು ಕೊಟ್ಟ ನಂತರ ಅವರ ನೆನಪಿನ ತೀವ್ರತೆ ಅಗಾಧ ಎನ್ನುವ ಸತ್ಯವನ್ನು ‘ತೀವ್ರತೆ ಎಷ್ಟಿತ್ತೆಂದರೆ’ ಕವನದ ಮೂಲಕ ತೆರೆದಿಟ್ಟಿದ್ದಾರೆ. ಇನಿಯನ ಸನಿಹ ತರುವ ಖುಷಿಯನ್ನು ಪ್ರಕೃತಿಯ ಆಗುಹೋಗುಗಳೊಂದಿಗೆ ಸಮೀಕರಿಸಿ ‘ ಸುಮ್ಮನೆ ನಿನ್ನೊಂದು ಇರುವಿಕೆ ‘ ಕವನದ ಮೂಲಕ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ‘ಅಣಿಯಾಗದಿದ್ದ ಗಳಿಗೆಯಲ್ಲಿ ಮಾಧುರ್ಯವನ್ನು ಪಸರಿಸಿ ಇದೀಗ ನಿನ್ನದೇ ಆದ ನೋವಿನ ಪ್ರಪಂಚದಲ್ಲಿ ನೀನಿರುವುದು ಸರಿಯೇ?’, ‘ನಿರ್ಲಿಪ್ತತೆಯ ತೊಡೆದು ಹಾಕಿ ನೋವಿನಲ್ಲೂ ಸಪ್ತ ಸ್ವರ ಹೊಮ್ಮಲು ಸಾಧ್ಯವಿಲ್ಲವೇನು?’ ಎಂದು ‘ ಜಗತ್ತಿನ ನೋವೆಲ್ಲಾ ಒಂದಾದರೆ ನಿನ್ನ ನೋವೇ ಒಂದು’ ಕವನದ ಮೂಲಕ ಮೆಚ್ಚಿದ ಇನಿಯನನ್ನು ಪ್ರೀತಿಯಿಂದ ತರಾಟೆಗೆ ತೆಗೆದುಕೊಳ್ಳುವ ಪರಿ ಸೊಗಸಾಗಿ ಮೂಡಿಬಂದಿದೆ . ಮನೆಯನ್ನು ಸುಂದರಗೊಳಿಸಿ ಗೋಡೆಗಳನ್ನು ಅದೆಷ್ಟೇ ಅಲಂಕಾರ ಗೊಳಿಸಲಿ ಯಾರಿಗೂ ಏನನ್ನೂ ಕೊಡದೆ ಕೃಪಣರಾಗಿ ತನ್ನವರಿಗಾಗಿ ಅದೆಷ್ಟೇ ಕೂಡಿ ಇಟ್ಟಿರಲಿ ಪ್ರಕೃತಿ ಮುಣಿಯಲು ಇವೆಲ್ಲವೂ ನೀರುಪಾಲಾಗಲು ಎಷ್ಟು ಹೊತ್ತು… ಯಾವ ತುಂಡು ಭೂಮಿಗಾಗಿ ಕಚ್ಚಾಡುತ್ತಿರುತ್ತೇವೆಯೋ ಅವು ಗುಡ್ಡ ಕುಸಿತದೊಂದಿಗೆ ಮಣ್ಣುಗೂಡಲು ಎಷ್ಟು ಹೊತ್ತು ಎನ್ನುವುದನ್ನು ‘ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ’ ಎನ್ನುವ ಕವನದ ಮೂಲಕ ಚೆನ್ನಾಗಿ ಚಿತ್ರಿಸಿ ಪ್ರಕೃತಿಯ ಮುಂದೆ ಮಾನವನ ಆಟ ನಡೆಯದು ಅರ್ಥವಿಲ್ಲದ ಹಗೆತನ ಜಿಪುಣತನ ಸರಿಯಲ್ಲ ಎನ್ನುವ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ‘ನಿನ್ನನ್ನು ನೋಡಿದ ಮೇಲೆ ಈಗ ಇನ್ಯಾರನ್ನುನ್ನು ನೋಡಲಿ’, ‘ನಿನ್ನೊಳಗೆ ಕರಗಿ ನಿನ್ನದೇ ಬಣ್ಣ ತಳೆದದ್ದು ಅರಿವಿಗೇ ಬರಲಿಲ್ಲ’ ಸಾಲುಗಳು ಪ್ರೀತಿಯ ಪರಾಕಾಷ್ಟತೆಯನ್ನು ಭಾವನೆಯ ತೀವ್ರತೆಯನ್ನು ಪ್ರತಿಬಿಂಬಿಸಿದರೆ, ವಿರಹಿ, ರಿಪೇರಿ, ಕಾವು ಅಗಲಿಕೆ ಧೋರಣೆ, ಬಿಂಬ.. ಪ್ರೀತಿಯಿಂದ ಘಾಸಿಗೊಂಡ ಮನದ ಅಂತರಾಳದ ಧ್ವನಿಯಂತೆ ಇವೆ. “ಆಸೆಯ ಕಂದೀಲು” ಸಂಕಲನ ಕುರಿತ ಈ ಇಬ್ಬರ ಮಾತುಗಳನ್ನು ನಾನು ಸಂಕಲನ ನೋಡಿರದ ಕಾರಣ ಆ ಸಂಕಲನ ಕುರಿತಂತೆ ಮಹತ್ವದ್ದೆನಿಸಿದ ಕೆಲವು ಸಾಲುಗಳನ್ನು ಇಲ್ಲಿ ಹಂಚಿಕೊಳ್ಳುತ್ತಲೇ ಈ ಕವಿಯು ಫೇಸ್ಬುಕ್ಕಿನಲ್ಲಿ ಪ್ರಕಟಿಸಿದ ಕೆಲವು ಕವಿತೆಗಳನ್ನು ಪರಿಚಯಿಸುತ್ತಿದ್ದೇನೆ. ನದಿಯ ಪಾತ್ರ ಅಲ್ಲಿಯೇ ಇದೆ ಅದರ ಉದಯ ಕಾಲದಿಂದಲೂ ಹರಿಯುತ್ತಿರುವ ನೀರು ಮಾತ್ರ ಹೊಸದು ಎನ್ನುವ ನಿಲುವು ಹಳೆಯದೇ ಆದರೂ ಹರಿಯುತ್ತಿರುವ ನೀರು ಹೊಸದೇ ಆಗಿರುತ್ತದೆ ಎನ್ನುವ ಆಲೋಚನೆಯನ್ನು ಸೊಗಸಾಗಿ ಹೇಳುವ ಈ ಕವಿ “ಭೌತಿಕತೆಯ ಗೀಳು ಮಾನಸಿಕ ಹರಿವು…” ಎನ್ನುವ ದೀರ್ಘ ಶೀರ್ಷಿಕೆಯ ಗಪದ್ಯದಲ್ಲಿ ಹೇಳುತ್ತಾರೆ. “ಕೆಂಪು ಡಬ್ಬ ಮತ್ತು ಕಾಗದದ ದೋಣಿ…” ಕವಿತೆಯ ಶೀರ್ಷಿಕೆಯೇ ಕುತೂಹಲ ಹೆಚ್ಚಿಸಿ ಆಧುನಿಕ ಫೋನುಗಳಿಗಿಂತಲೂ ಹೃದಯಕ್ಕೆ ಹತ್ತಿರವಾದ ಪತ್ರಗಳ ಮಹತ್ತನ್ನು ಹೇಳುತ್ತದೆ. “ತೆರೆ ಅಪ್ಪಳಿಸುವ ಗಳಿಗೆ…ಭಾನು ಭುವಿಯಲ್ಲಿ ಲೀನ” ಎನ್ನುವ ಪದ್ಯದ ರೀತಿ ಸೊಗಸಾಗಿದ್ದರೂ ಭಾನು ಎನ್ನುವುದು ಸೂರ್ಯನಿಗೆ ಬಾನು ಎಂದರೆ ಆಕಾಶ ಎನ್ನುವ ವ್ಯತ್ಯಾಸದ ಅರಿವು ಬಾರದೇ ಇದ್ದರೆ ಪದ್ಯ ಗೆದ್ದುಬಿಡುತ್ತದೆ. ಆಕಾಶ ಭೂಮಿಗಳು ಪರಸ್ಪರ ಮುಟ್ಟಿದರೂ ಮುಟ್ಟದೆಯೇ ಉಳಿವ ಕ್ಷಿತಿಜದ ಅರಿವು ಕೂಡ ಕವಿಯಾದವರಿಗೆ ಇರಲೇ ಬೇಕಾಗುತ್ತದೆ. “ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ…” ಎನ್ನುವ ಹೆಸರಿನ ಕವಿತೆಗೆ ಷರಾ ಬರೆದು ಕೊಡಗಿನ ಬಿರುಮಳೆಗೆ ಕುಸಿದ ನೆಲ ಕುರಿತ ಪದ್ಯವೆಂದು ಕವಿ ಹೇಳಿದರೂ ಈ ಕವಿತೆಯ ಮೊದ ಮೊದಲ ಸಾಲುಗಳು ಪ್ರತಿಧ್ವನಿಸುವುದು ಕಳೆದುಕೊಂಡ ಕನಸುಗಳನ್ನು, ಪ್ರೀತಿಯಿಂದ ಕಾಪಿಟ್ಟಿದ್ದನ್ನು ಕಳಕೊಂಡ ನೋವನ್ನು. “ಕತ್ತಿ ಮಚ್ಚು ಹಿಡಿದು ಹಗಲಿರುಳೂ ಸಾಧಿಸಿದ ಹಗೆ ಏಳೆಂಟು ಅಡಿ ಗುಡ್ಡದ ಭೂಮಿ ತನ್ನದೆನ್ನುವ ಒಡಹುಟ್ಟಿದವರ ಹಗೆತನವೂ ಕುಸಿದ ಗುಡ್ಡದೊಂದಿಗೆ ಈಗ ನಿನ್ನದೇ” ಎನ್ನುವ ತಿಳುವಳಿಕೆ ಲೋಕಕ್ಕೆಲ್ಲ ತಿಳಿದರೆ ಅದೆಷ್ಟು ಸಲೀಸು ಈ ಬದುಕು! ಆದರೆ ವಾಸ್ತವ ಹಾಗಿಲ್ಲವಲ್ಲ! “ಕುಸುಮಿತ ತೋಪಿನ ಹೂವಿನ ನವಿರು ಪರಿಮಳ, ಉರಿಬಿಸಿಲ ಪ್ರಖರತೆ ಊಹೂ ಹೆಜ್ಜೆಗಳು ನಿಲ್ಲುವ ಹಾಗಿಲ್ಲ ಮಾಡಿಕೊಂಡ ಪಣಗಳು ಕೊಟ್ಟ ಭಾಷೆಗಳು ದೂರ ದೂರ ಪಯಣ ಸಾಗಿದೆ ಹೀಗೆ ಸಾಗುತ್ತಿದೆ” ಎನ್ನುವ ವಿವೇಕದೊಂದಿಗೆ “ಆನೆ ಕುದುರೆ ಗಾಡಿಗಳಲ್ಲಿ ಸಾಗಲಾರೆವು ಅಲ್ಲಿಗೆ ಹೆಜ್ಜೆಗಳೇ ಮೂಡಬೇಕು…” ಎನ್ನುವ ಶೀರ್ಷಿಕೆಯ ಪದ್ಯ ಕೂಡ ಚಣಕಾಲ ಕಾಡದೇ ಇರದು. ನವೋದಯದ ಕಾಲದಲ್ಲಿ ಪ್ರಾಸ,ಗೇಯತೆ,ರಮ್ಯತೆಗಳಿದ್ದರೆ ಪ್ರಗತಿಶೀಲರ ಕಾಲದಲ್ಲಿ ಕನಸುಗಳೇ ರಾಜ್ಯಭಾರ ಮಾಡುತ್ತ ನವ್ಯವು ಪ್ರತಿಮೆ ರೂಪಕಗಳಲ್ಲಿ ಭಾರವಾಗುತ್ತ ಸಾಗಿದ್ದು ಬಂಡಾಯದ ಬಿಸಿಯುಸಿರು ವ್ಯವಸ್ಥೆಯೊಂದಿಗೆ ಸೆಣಸಾಟ ಈ ಎಲ್ಲವೂ ಹೊಸ ಕಾಲದ ಪದ್ಯಗಳಲ್ಲಿ ಭಿನ್ನ ರೀತಿಯಲ್ಲಿ ಮಿಶ್ರಣಗೊಂಡು ಸುಲಭಕ್ಕೆ ದಕ್ಕದ ರೀತಿಗೆ ಚಾಚಿಕೊಳ್ಳುತ್ತ ಕಾವ್ಯದ ನಡಿಗೆಯನ್ನು ಸುಲಭಕ್ಕೆ ಒಲಿಸಿಕೊಳ್ಳಲಾಗದ ಕಾಲ ಇದು. ಆದರೂ ಹೊಸ ದನಿಯಲ್ಲಿ ಧಂಡಿಯಾಗಿ ಹಾಡುವರ ಕಾಲದ ಹಾಡುಗಳನ್ನು ಅಳೆಯುವ ಮಾಪಕಗಳೇ ಇರದ ಈ ಕಾಲದ ಕವಿಗಳು ಪರಂಪರೆಯಿಂದ ಅರ್ಥವಾದ ರೀತಿಗೆ ಹೊಸ ಟ್ಯೂನ್ ಕೊಡುತ್ತಲೇ ಇದ್ದಾರೆ. ಅಂಥವರ ಪೈಕಿ ಮಂಜುಳ ಡಿ ಕೂಡ ಒಬ್ಬರು. ಬರಿಯ ಚುಟುಕುಗಳಲ್ಲೇ ಹೇಳಬೇಕಾದುದನ್ನು ಹೇಳುತ್ತಿರುವವರ ನಡುವೆ ತಮ್ಮ ದೀರ್ಘವೂ ಸ್ವಾರಸ್ಯವೂ ಆದ ಶೀರ್ಷಿಕೆಗಳ ಮೂಲಕ ಕಾವ್ಯವನ್ನು ಪ್ರಸ್ತುತ ಪಡಿಸುವ ಶೈಲಿ ಬೇರೆಯದೇ ಆಗಿದೆ. ಆದರೆ ಹೇಳಿಕೆಗಳ ಭಾರದಲ್ಲಿ ಕವಿತೆ ನಲುಗಬಾರದೆನ್ನುವ ಕಾವ್ಯ ಮೀಮಾಂಸಕರ ಮಾತು ಯಾರೂ ಮರೆಯಲಾರದ್ದು ಭೇಟಿಯಾಗದ ಭೇಟಿಗಳ ಬಗ್ಗೆ ಪ್ರೀತಿ, ಹಳಹಳಿಕೆ, ನೆನಪು, ಸಂಕಟಗಳ ಒಟ್ಟೂ ಮೊತ್ತವನ್ನು ಅದ್ಭುತವಾಗಿ ಅಭಿವ್ಯಕ್ತಿಸಿದ ಕೆಲವು ಟಿಪ್ಪಣಿಗಳೇ ಇಲ್ಲಿ ಕವಿತೆಯಾದ ಘನಸ್ತಿಕೆಯೂ ಇದೆ. ಬರಿಯ ಪ್ರೀತಿ ಪ್ರೇಮ ಕನಸುಗಳಿಗಷ್ಟೇ ತಮ್ಮ ಕವಿತೆಗಳ ಹರಹನ್ನು ಸೀಮಿತಗೊಳಿಸದೇ ಬದುಕಿನ ಹಲವು ವಿಸ್ತರಗಳ ಕಡೆಗೂ ಗಮನ ಸೆಳೆಯುವ ಈ ಕವಿಯ ಮುಂದಿನ ರಚನೆಗಳ ಬಗ್ಗೆ ಕುತೂಹಲ ಹೆಚ್ಚುತ್ತಲಿದೆ. ಘೋಷವಾಕ್ಯವು ಕವಿತೆಯಾಗುವುದಿಲ್ಲ ಮತ್ತು ಕವಿತೆಯಾಗಿ ಗೆದ್ದವು ಅನುದಿನದ ಘೋಷ ವಾಕ್ಯಗಳೇ ಆಗಿ ಬದಲಾಗುತ್ತವೆ ಎನ್ನುವ ಕಿವಿಮಾತಿನೊಂದಿಗೆ ಈ ಕವಿಯ ಕೆಲವು ರಚನೆಗಳನ್ನು ನಿಮ್ಮ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ. ೧. ಭೌತಿಕತೆಯ ಗೀಳು ಮಾನಸಿಕ ಹರಿವು… ನದಿಯ ಪಾತ್ರ ಅಲ್ಲಿಯೇ ಇದೆ ಅದರ ಉದಯ ಕಾಲದಿಂದಲೂ ಹರಿಯುತ್ತಿರುವ ನೀರು ಮಾತ್ರ ಹೊಸದು ಅದೇ ಹಳೇ ಆಲದ ಮರ ಅದೇ ನೆರಳು ವಿಶಾಲತೆ ಚಿಗುರು ಟಿಸಿಲೊಡೆದು ಮೂಡಿದ ನವಿರು ಹಸಿರು ಕಿರು ತೋಟದ ಅದೇ ರೋಜಾ ಗಿಡ ನೆನ್ನೆಯೂ ಹೂ ಬಿಟ್ಟಿತ್ತು ಇಂದೂ ಬಿಟ್ಟಿದೆ ಆದರೆ ದಳಗಳ ವಿನ್ಯಾಸ ಮಾತ್ರ ನೂತನ ಅವೇ ಸ್ವರಗಳು ಹೊಸ ಹೊಸ ವಿನ್ಯಾಸ ಲಯದಲ್ಲಿ ಹೆಣೆದು ಹೊಮ್ಮುವ ರಾಗಗಳ ನವೀನ ವಿನ್ಯಾಸಗಳು ಮರ ಗಿಡ ಹೂ ನದಿ ಕಡಲು ಎಲ್ಲಾ ಲೋಕಗಳಿಗೂ ಶೇಖರಣೆಯ ತೆವಲಿಲ್ಲ ಅರೆಗಳಿಯಲ್ಲಿ ಮೊಬೈಲಿನಲ್ಲಿ ತೆಗೆದ ನೂರಾರು ಚಿತ್ರಗಳ ಭೌತಿಕತೆ ಒಂದೆರಡು ಸೃಷ್ಟಿಸುವಲ್ಲಿ ವರ್ಣಚಿತ್ರ ಕಲಾವಿದನಿಗೆ ಅವಧಿಯ ಗಣನೆಯೆಲ್ಲಿ ಇದು ಮಾನಸಿಕ ಹರಿವು ಅದೇ ಕ್ಷಿತಿಜ ಅದೇ ಭೂಮಿ ಇಚ್ಛಿತ ಜೀವದೊಂದಿಗೆ ಲಯಗೊಂಡರೆ ಹೊಸದೊಂದು ಬಣ್ಣ ಪಡೆವ ಹಾಗೆ ಇಬ್ಬರ ನಡುವಿನ ಗೆರೆಯೂ ಅಳಿಸಿದ ತಾದಾತ್ಮ್ಯ ಭಾವ ಇಷ್ಟಕ್ಕೂ ನವೀನ ಗಳಿಗೆಗಳು ನವ ಅನುಭವ ಅಂದರೆ ಹೊಸ ವಿವರಗಳಲ್ಲ ಹಿಂದಿನ ಮುಂದಿನ ಅಡ್ಡ ಉದ್ದ ಹೆಸರುಗಳೆಲ್ಲಾ ಮರೆತು ಹೊಸ ಗಳಿಗೆಯೊಂದಕ್ಕೆ ಮನಸು ಹರಿಬಿಟ್ಟ ಗಳಿಗೆ ದಣಿವಿಲ್ಲದೇ ಹೊಸತನ ಚಲನಶೀಲತೆ ಮೂಡಿ ಆತ್ಮದ ಲಯದೊಂದಿಗೆ ಚೇತೋಹಾರಿಯಾಗಿ ಬೆಸೆಯುವ ಚೇತನ… ೨. ಕೆಂಪು ಡಬ್ಬ ಮತ್ತು ಕಾಗದದ ದೋಣಿ… ಬರಿಯ ಟಪಾಲುಗಳಿಲ್ಲ ಈ ಕೆಂಪು ಡಬ್ಬಿಯಲ್ಲಿ ನೂರಾರು ಕೈಗಳು ದಾಟಿ ನೂರಾರು ಗಾವುದ ತೆರಳಿ ಯಾರದೋ ಸ್ಪರ್ಶಕ್ಕೆ ಕಾದಿರುವ ಸ್ವಗತಗಳು ಮುಖತಃ ಮಾತಾಗದ ಹೇಳಲೇಬೇಕಾದ ಎಷ್ಟೋ ಮಾತುಗಳಿಗೆ ಕನಸು ಸಮಾಧಾನ ಎಚ್ಚರ ತಪ್ಪೊಪ್ಪಿಗೆ ನೆನಪು ಎಲ್ಲಾ ಸ್ವಗತಗಳು ಪದಗಳಲ್ಲಿ ಸ್ಪಷ್ಟಗೊಳ್ಳುವ ಹಾದಿ ಎಷ್ಟೋ ದೂರ ಪಯಣಿಸಿ ಬಂದ ಕಾಗದ ಒಡೆಯುವ ಗಳಿಗೆಯ ಉಸಿರ ಕಂಪು ಆತ್ಮಿಕ ಸಂವಾದವೊಂದರ ಹರವು ಜೀವಕ್ಕೆ ಉಣಿಸಬಹುದಾದ ಹಿತ ಬರೀ ಫೋನುಗಳು ಪತ್ರದ ಹಂಗೆಲ್ಲಿ ಈಗ…! ಭಾವ ಭೂಮಿಕೆಯ ಹರಿಸಿ ನಿಂತ ಪತ್ರವನ್ನೊಮ್ಮೆ ಹಿತವಾಗಿ ನೇವರಿಸಿ ಅಕ್ಷರಗಳಾದ ಸ್ವಗತ ಕಣ್ತುಂಬಿಕೊಳ್ಳುವ ವಿಸ್ಮಯದಲ್ಲಿ ವಿಹರಿಸುವ ತವಕ ಕೆಂಪುಡಬ್ಬಿಯ ನೋಡಿದಾಗ ಮೂಡದಿರದೇ… ೩.ತೆರೆ ಅಪ್ಪಳಿಸುವ ಗಳಿಗೆ…ಭಾನು ಭುವಿಯಲ್ಲಿ ಲೀನ ದೃಷ್ಟಿ ಹಾಯಿಸಿದಷ್ಟೂ ನಿನ್ನ ಹರವು ನೀಲಾಕಾಶದ ಬಣ್ಣ ತಳೆದು ನೀಲೀ ತಟ್ಟೆಯಂತೆ ತಂಪಗಿದ್ದೆ ದಣಿವಿಲ್ಲ ಮೋಡಗಳಿಗೆ ಅದೆಷ್ಟು ತಡೆದಿದ್ದವೋ ಛಿದ್ರಗೊಂಡು ಅದೆಷ್ಟು ಸುರಿದರೂ ತೀರದ ನೋವು ಮಳೆಯ ಅಗಾಧತೆಗೆ ಉಲ್ಬಣಗೊಂಡ ಪರಿ ಮಕ್ಕಳು ಕುಂಚ ಅದ್ದಿ ತೆಗೆದ ನೀರಿನಂತೆ ವಿಹ್ವಲ ವರ್ಣಕ್ಕೆ ಭಾನು ಇಳೆಗಿಳಿದಿದೋ ಕಡಲೇ ಭಾನುವಿನತ್ತ ಧಾವಿಸಿದೆಯೋ ದಿಕ್ಕುಗಳಾದರೂ ಎಲ್ಲಿ ಎಲ್ಲಾ ನಾದಗಳೂ ಬಣ್ಣಗಳೂ ಹಂಗು ಹಮ್ಮುಗಳು ಲಯ ಕಳೆದುಕೊಂಡ ಈ ರುದ್ರಘೋಷ ಅದೆಷ್ಟು ತಪನ ತನ್ಮಯತೆಯಿಂದ ಕಾದ ತವಕದ ತೀವ್ರತೆ ಮಿತಿ ಕಳೆದು ತೆರೆ ಅಪ್ಪಳಿಸುವ ಗಳಿಗೆ ಜಲದಲ್ಲಿ ಜಲ ಒಂದಾಗುವ ಗಳಿಗೆ ಭಾನು ಭೂಮಿಯಲ್ಲಿ ಲೀನ ೪. ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ… ನೆನ್ನೆಯಷ್ಟೇ ಚಂದಗೊಳಿಸಿದ್ದ ಗೋಡೆಯ ಬಣ್ಣಗಳು ಮುರಿದುಬಿದ್ದ ಹೆಂಚುಗಳೊಂದಿಗೆ ಬಣ್ಣ ಹಂಚಿಕೊಂಡಿವೆ ಅದೆಷ್ಟೊ ಬೆಲೆಯಿತ್ತು ತಂದು ಅಷ್ಟೇ ಬೆಲೆಯ ಫ್ರೇಮಿನಲಿ ಸಿಕ್ಕಿಸಿಟ್ಟು ಬೀಗಿದ ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ ಆಳು ಕಾಳಿಗೂ ಬೇಡಿ ಕೇಳಿದವರಿಗೂ ನೀಡದೇ ಮುಂದೆ ಬೇಕಾದಿತೆಂದು ಪೇರಿಸುತ್ತಲೇ ಇಟ್ಟ ಧವಸ ನೆನಸಿ ಬೇಯಿಸುವ ಗೋಜಿಲ್ಲ ಧುತ್ತೆಂದು ಇಂದು ತಾನೇ-ತಾನಾಗಿ ಧಾರೆಯಲಿ ನೆನಸಿಕೊಂಡಿವೆ ಯಾರದೋ ಬಂಗಲೆಯ ಮುಂದಿನ ಗಣಪ ಪಕ್ಕದ
ಅಂಬರ ಫಲ!
ಕವಿತೆ ಅಂಬರ ಫಲ! ಗಣಪತಿ ಗೌಡ ಅಂಬರದಲಿ ತೂಗುತಿಹುದುಒಂದೇ ಒಂದು ಹಣ್ಣು,ಬೆಳದಿಂಗಳ ರಸವೇ ಕುಡಿದು––ತಂಪು ರಸಿಕ ಕಣ್ಣು!/ಅಂಬರದಲಿ. ……// ಕೆಲ ದಿನದಲಿ ಕರಗಿ ಬಲಿತುತುಂಬಿ ಪೂರ್ಣ ಪ್ರಾಯ!ಹೊರ ಸೂಸಿದೆ ಹೊನ್ನ ಕಿರಣಕುಡಿದು ಹೊನ್ನ ಪೇಯ!/ಅಂಬರದಲಿ……….// ಹೊಂಬೆಳಕದು ಸುರಿವ ಜೇನು!ಚಪ್ಪರಿಸುತ ಜಿಹ್ವೆ,ಮುಳುಗೇಳುತ ಆನಂದದಿ,ಮರೆತು ಎಲ್ಲ ನೋವೇ!/ಅಂಬರದಲಿ……….// ತಂಪು ಬೆಳಕ ಬೆರಳಿನಲ್ಲಿನೇವರಿಸುತ ಎಲ್ಲ,‘ಶಾಂತಗೊಳ್ಳಿ’ ಎನುವ ತೆರದಿಸವರುತೆಲ್ಲ ಗಲ್ಲ! /ಅಂಬರದಲಿ………..// *****************************************
“ಉಳ್ಳವರು ಶಿವಾಲಯವ ಮಾಡುವರು”
ಅನಿಸಿಕೆ “ಉಳ್ಳವರು ಶಿವಾಲಯವ ಮಾಡುವರು” ವೀಣಾ ದೇವರಾಜ್ ನಿಜಕ್ಕೂ ಅಣ್ಣನ ಈ ವಚನವು ಬರಿಯ ಪುಸ್ತಕಗಳಿಗೆ ಮತ್ತು ಹಾಡುಗಾರರಿಗೇ ಸೀಮಿತವಾಗಿವೆ. ಕಾರ್ಯರೂಪಕ್ಕೆ ಬರುವುದೆಂದೊ. ಹಿರಿಯರು ‘ಉಳ್ಳವರು ಶಿವಾಲಯವ ಮಾಡುವರು ‘ ಎಂದರು, ಆದರೆ ಇಂದಿನ ಉಳ್ಳವರು ತಮಗಾಗಿ ತಮ್ಮ ಕುಟುಂಬಕ್ಕಾಗಿ ಮಾತ್ರ ಆಲಯ ಮಾಡಿಕೊಳ್ಳುವರೇ ಹೊರತು ಸಮಾಜಕ್ಕಾಗಿ ಯಾವ ಉಪಯೋಗಕ್ಕೂ ಬಾರದು. ಇಂಥಹವರಿಂದ ಪರಿವರ್ತನೆ ಬಯಸುವುದು ಸಾಧ್ಯವೇ? ಆಯ್ದಕ್ಕಿ ಲಕ್ಕಮ್ಮ, ಮಾರಯ್ಯ ದಂಪತಿಗಳು, ದಾಸೋಹ ಮಾಡುವ ಶಕ್ತಿ ಇರದಿದ್ದರೂ ಅಂತಹ ಮನಸ್ಸಿತ್ತು. ಲಕ್ಕಮ್ಮತನ್ನ ಬಿಡುವಿನ ಸಮಯದಲ್ಲಿ ಹೊಲಗಳಲ್ಲಿ ಕಟಾವು ಮಾಡುವಾಗ, ಭತ್ತದರಾಶಿ ಮಾಡುವಾಗ ಸುತ್ತಮುತ್ತ ಹಾರಿಬಿದ್ದ ಕಾಳುಗಳನ್ನು ಆಯ್ದು ತಂದು ದಾಸೋಹ ಮಾಡುತ್ತಿದ್ದರು. ಆಗ ಆಹಾರದ ಒಂದೊಂದು ಅಗುಳಿಗೂ ಬೆಲೆಯಿತ್ತು. ಯಾವುದನ್ನೂ ವೃಥಾ ಹಾಳುಮಾಡುತ್ತಿರಲಿಲ್ಲ. ಅವರಿವರೆನ್ನದೆ ಹಸಿದವರಿಗೆ ಉಣಬಡಿಸುವುದು ಸಹಜವಾಗಿತ್ತು. ನಮ್ಮ ಈಗಿನ ಪೀಳಿಗೆಯಲ್ಲಿ ಅನ್ನ ಹಾಗೂ ಹಣದ ಬೆಲೆಯೇ ತಿಳಿಯದಾಗಿದೆ. ಕೆಲವರಿಗೆ ಅದೇನು ಪ್ರತೀಷ್ಟೆಯೊ, ಊಟದ ತಟ್ಟೆಯಲ್ಲಿ ಸ್ವಲ್ಪ ಊಟವನ್ನೊ ಇಲ್ಲ ಕುಡಿಯಲು ಕೊಟ್ಟ ಪಾನೀಯವನ್ನೊ ಸ್ವಲ್ಪ ಸ್ವಲ್ಪ ಬಿಡುವ ಅಭ್ಯಾಸವಿರುತ್ತದೆ. ಅದನ್ನು ಬಳಸುವ ಹಾಗೂ ಇಲ್ಲ. ಒಲ್ಲದ ಮನಸ್ಸಿನಿಂದ ಆಚೆಗೆ ಸುರಿಯ ಬೇಕಾಗುತ್ತದೆ. ಮೊದಲಿನಂತೆ ಹಸುಗಳಿಗೆ ಮುಸುರೆ ನೀರೆಂದು ಕೊಂಡು ಹೋಗುವವರೂ ಇಲ್ಲವಾಗಿದ್ದಾರೆ. ಮನೆಯಲ್ಲಿನ ಕಸದ ಬುಟ್ಟಿಗೆ ಹಾಕಿ, ಜಿರಲೆಗಳ ಸಂತತಿಗೆ ಪೌಷ್ಟಿಕ ಆಹಾರ ಉಣಬಡಿಸಿ, ಮನೆಯ ಸದಸ್ಯರು ನಾಲ್ವರಾದರೆ ಅವುಗಳ ಸಂಖ್ಯೆ ನಾನೂರಾಗಿ, ಅವನ್ನು ತಿನ್ನಲು ಹಲ್ಲಿಗಳೂ ಬಂದು ‘ ಮಕ್ಕಳಿರಲವ್ವ ಮನೆ ತುಂಬ’ ಎನ್ನುವ ನಾಣ್ನುಡಿ ಬದಲಿಗೆ ‘ಜಿರಲೆ ಹಲ್ಲಿಗಳಿರಲವ್ವ ಮನೆ ತುಂಬ’ಎನ್ನಬೇಕಾಗುತ್ತದೆ. ಅಷ್ಟೇ ಆದರೆ ಹೇಗೋ ಆದೀತೇನೋ! ಮಾರನೆಯ ಬೆಳಗಿನಲ್ಲಿ ಜೋರು ದ್ವನಿಯಲ್ಲಿ ‘ಕಸ’ ಎಂದು ಬೈದಾಡಿಕೊಂಡು, ಕೂಗಾಡಿಕೊಂಡು ಮನೆಯ ಕಸ ತೆಗೆದುಕೊಂಡು ಹೋಗಲು ಬರುವ ನಮ್ಮ ಮಹಾ ನಗರ ಪಾಲಿಕೆಯ ಬಜಾರಿ ಸುಬ್ಬಮ್ಮನಿಗೆ (ಕ್ಷಮೆ ಇರಲಿ), ಹೆದರಿಕೊಂಡು ಮೆತ್ತಗೆ ಹೋಗಿ ಬೀದಿ ಬದಿಯಲ್ಲಿ ಕಸದ ಚೀಲವನ್ನು ಇಟ್ಟು ಬಂದೆವೊ ಬಚಾವು. ಸುಬ್ಬಮ್ಮನ ಕಣ್ಣಿಗೆ ಬಿದ್ದು, ಅದು ನಮ್ಮದೇ ಕಸ ಎಂದು ಗೊತ್ತಾಯಿತೊ ಮರ್ಯಾದೆ ಬೀದಿಗೆ ಬಂತು ಎಂದ ಹಾಗೇ. ನಮ್ಮ ಸುಬ್ಬಮ್ಮ ಬೀದಿಯ ಎಲ್ಲಾ ಹೆಂಗಳೆಯರಿಗೂ ಗಟವಾಣಿ ಅತ್ತೆ ಇದ್ದಂತೆಯೇ! ಅವಳಂದಂತೆ ಅನ್ನಿಸಿಕೊಂಡು ,ಎದುರು ಮಾತೂ ಆಡದೆ, ಅಕ್ಕಪಕ್ಕದವರೇನಾದರೂನೋಡುತ್ತಿದ್ದಾರೊ, ಯಾರಾದರೂ ಕೇಳಿಸಿಕೊಂಡರೊ ಎಂದು ಕತ್ತು ಆಚೀಚೆ ತಿರುಗಿಸಿ ನೋಡಿ ಸರಸರನೆ ಮನೆಯೊಳಗೆ ಸೇರಿಕೊಳ್ಳಬೇಕು. ಅನ್ನಂ ಪರಃ ಬ್ರಹ್ಮಂ ; ಎನ್ನುವ ಮಾತನ್ನು ಅರ್ಥೈಸಿಕೊಂಡು, ನಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ತಟ್ಟೆಯಲ್ಲಿ ಊಟ ಬಿಡಬಾರದು, ಬೇಕಾದ್ದನ್ನು,ಬೇಕಾದಷ್ಟು ಮಾತ್ರವೇ ತಟ್ಟೆಯಲ್ಲಿ ನೀಡಿಸಿಕೊಳ್ಳಬೇಕು ಎಂದು ತಿಳಿಹೇಳಬೇಕು. ಚಿಕ್ಕಂದಿನಲ್ಲೇ ರೂಢಿಸಿಕೊಂಡಲ್ಲಿ ಸ್ವಲ್ಪವಾದರೂ ಆಹಾರ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ ಎಂಬಂತೆ ಒಬ್ಬೊಬ್ಬರಿಂದಲೂ ಒಂದೊಂದು ತುತ್ತು ಆಹಾರ ಉಳಿದರೆ ಹೆಚ್ಚಲ್ಲದಿದ್ದರೂ ದಿನಕ್ಕೆ ಒಂದು ಮನೆಯಲ್ಲಿ ಒಂದು ಹಿಡಿ ಧಾನ್ಯ ಉಳಿಯುತ್ತದೆ. ಹಾಗೇ ಉಳ್ಳವರು ಮಾತ್ರವಲ್ಲದೇ ಎಲ್ಲರೂ ತಮ್ಮಕೈಲಾದಷ್ಟು ಹಣ ದಾನಮಾಡಿ ಧರ್ಮಛತ್ರಗಳನ್ನು ಕಟ್ಟಬಹುದು, ಹಸಿದವರಿಗೆ ಎರಡು ತುತ್ತು ಅನ್ನ ನೀಡಬಹುದು. ಈ ಶತಮಾನದ ಮಹಾ ಮಾರಿ ಬಂದು ಎಷ್ಟೊ ಜನರಿಗೆ ಪಾಠ ಕಲಿಸಿದೆ. ‘ನಡೆದಾಡುವ ದೇವರಂ’ತವರೂ ನೂರಾರು ಜನರು ಹುಟ್ಟಿ ಬರಲಿ. *********************************
“ಉಳ್ಳವರು ಶಿವಾಲಯವ ಮಾಡುವರು” Read Post »
ಮಿಸ್ಟರ್ ಅನ್ ಫ್ರೆಂಡ್
ತೆಲುಗಿನಿಂದ ಅನುವಾದವಾದ ಕಥೆ ತೆಲುಗು ಮೂಲಃ ಶ್ರೀ ರಾಮದುರ್ಗಂ ಮಧುಸೂದನ ರಾವು ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು ಈಗೇನು ಮಾಡೋದು…..? ಗೇಟಿನಿಂದಲೇ ಹೊರಗೋಡಿಸಿದ್ದರೆ ಚೆನ್ನಾಗಿರೋದಾ….. ಈಗಂತೂ ಆ ಛಾನ್ಸ್ ಇಲ್ಲ. ಬಂದು ಕೂತಿದ್ದಾನೆ. ಬರೀ ಪರರ ಜೀವನಗಳಲ್ಲಿ ಇಣುಕಿ ನೋಡುವುದು ಬಿಟ್ಟರೆ ಇಷ್ಟು ವರ್ಷಗಳ ತನ್ನ ಜೀವನದಲ್ಲಿ ಮಾಡಿದ್ದು ಬೇರೇ ಏನಾದರೂ ಇದೆಯಾ ? ಎಲ್ಲಿ ಸಿಕ್ಕರೆ ಅಲ್ಲಿ…. ಯಾವಗ ಸಿಕ್ಕರೆ ಅವಾಗ…. ಹೇಗೆ ಸಿಕ್ಕರೆ ಹಾಗೆ ತೂರಿಬಿಡೋದೇ! ********** ಉಂಡಾಡಿ….. ಗಾಳಿ ಜೀವ…. ಶಿವಕುಮಾರನ ನೆನಪು ಬಂದಾಕ್ಷಣ ಮನಸ್ಸಿನಲ್ಲಿ ಹೊಳೆಯುವ ತಕ್ಷಣದ ಮಾತು ಆ ಎರಡೇ ! ನನಗಿನ್ನೂ ಚೆನ್ನಾಗಿ ನೆನಪಿದೆ. ಅವನನ್ನ ಜೀಜೆ ( ಗಾಳಿ ಜೀವ) ಎಂದು ಕರೆಯುತ್ತಿದ್ದೆವು. ನನ್ನ ಜೀವನದಲ್ಲಿ ಕನಸಿನಲ್ಲೂ ಸ್ವಾಗತಿಸದ ಮನುಷ್ಯ ಯಾರಾದರೂ ಇದ್ದಾರಾ ಎಂದರೆ ಅದು ಅವನೊಬ್ಬನೇ ! ಹಾಗಂತ ಇಬ್ಬರೂ ಗಟ್ಟಿಯಾಗಿ ಜಗಳ ಮಾಡಿಲ್ಲ. ಮಾತಾಡಿದ್ದು ಸಹ ತುಂಬಾ ಕಮ್ಮಿ ! ********** ಶಾಲಾ ಜೀವನದ ಸಹಪಾಠಿ. ಯಾವಾಗಲೂ ಯಾವ ಗಿಡದ ಕೆಳಗೋ ಅಥವಾ ಆಟದ ಮೈದಾನದಲ್ಲೋ ಕಾಣಿಸಿಕೊಳ್ಳುತ್ತಿದ್ದ…. ತುಂಡಾದ ಗಾಳಿ ಪಟದ ಹಾಗೆ ! ನೋಡಿದಾಗಲೆಲ್ಲ ನಗುತ್ತಿದ್ದ….. ತನ್ನೆತ್ತರದ ನಿರ್ಲಕ್ಷ್ಯದಂತೆ ! ಧರಿಸುವ ದಿರಿಸಿನ ಮೇಲೆ ಗಮನ ಇರುತ್ತಿರಲಿಲ್ಲ. ಕಾಲಲ್ಲಿ ಚಪ್ಪಲಿ ಇಲ್ಲದೆ ತಿರುಗುತ್ತಿದ್ದ ಒಬ್ಬನೇ ವಿದ್ಯಾರ್ಥಿ ನಮ್ಮ ಶಾಲೆಯಲ್ಲಿ ಎಂದರೆ ಇವನೇ ! ಅಷ್ಟೇ ಅಲ್ಲ. ನನ್ನ ಸ್ವಾಭಿಮಾನಕ್ಕೆ ಮೊದಲಸಲ ಧಕ್ಕೆ ತಂದವನೂ ಇವನೇ. ಸದಾ ಕ್ಲಾಸಿನಲ್ಲಿ ನಾನೇ ಮೊದಲಿಗನಾಗುವಂತೆ ನೋಡಿಕೊಳ್ಳುತ್ತಿದ್ದೆ. ಟೆನ್ತ್ ಕ್ಲಾಸಿನ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಶಿವ ಲೆಕ್ಕದಲ್ಲಿ ಮೊದಲಿಗನಾಗಿದ್ದ. ಆ ದಿನಗಳಲ್ಲಿ ಅದೊಂದು ಸೆನ್ಸೇಷನ್ ! ಹಿಂದಿನ ಬೆಂಚಿನಲ್ಲಿ ಇದ್ದಾನಾ ಇಲ್ಲವಾ ಎನ್ನುವಷ್ಟು ಸೈಲೆಂಟಾಗಿ ಇರುವ ಹುಡುಗ ಇದ್ದಕ್ಕಿದ್ದಂತೆ ಎಲ್ಲರ ಕಣ್ಣಿಗೆ ಬಿದ್ದ. ’ ಎಷ್ಟು ಸೈಲೆಂಟಾಗಿರ್ತೀಯಲ್ಲ… ಅಷ್ಟು ಮಾರ್ಕ್ ಹೇಗೆ ತೆಗೆದೆ ಮಾರಾಯಾ ’ ಅಂತ ಕೇಳಿದರೆ… ’ ಓದಿದ್ದೇ ಬಂದರೆ ಯಾರಾದರೂ ತೆಗೀತಾರೆ. ಇದರಲ್ಲೇನಿದೆ ’ ಅಂತ ಕಾಜುವಲ್ಲಾಗಿ ಉತ್ತರ ಕೊಟ್ಟಿದ್ದ. ಆದರೆ ಸೋಜಿಗದ ಸಂಗತಿ ಎಂದರೆ ಮತ್ತೆ ಯಾವಾಗಲೂ ಅವನು ಅಷ್ಟು ಮಾರ್ಕು ತೆಗಿಯಲಿಲ್ಲ. ಬರೀ ಬೇಕಾಗುವಷ್ಟು ಮಾರ್ಕುಗಳಿಂದಲೇ ಟೆನ್ತ್ ಪಾಸಾದ. ಆಗಲೇ ಅವನ ತಂದೆ ತೀರಿಹೋದರು. ಮನೆ ನಡೆಯೋದೇ ಕಷ್ಟವಾಯಿತು. ಸರಿಯಾಗಿ ಆರು ತಿಂಗಳ ನಂತರ….. ಬೀದಿ ಕೊನೆಯ ಶಿವಾಲಯದಲ್ಲಿ ಪೂಜಾರಿಯಾಗಿ ಕಾಣಿಸಿಕೊಂಡ. ಅಲ್ಲಿಯವರೆಗೆ ಮಾತ್ರ ನನಗೆ ನೆನಪು. ಮತ್ತೆ ನಾನು ಆ ಊರು ಬಿಟ್ಟಿದ್ದೆ… ಅಲ್ಲಿಯ ನೆನಪುಗಳನ್ನು ಸಹ. ****** ಇದೆಲ್ಲ ನಲವತ್ತು ವರ್ಷಗಳ ಕೆಳಗಿನ ಮಾತು ! ಇವತ್ತು ಮತ್ತೆ ನೆನಪಿಗೆ ತಂದುಕೊಳ್ಳಬೇಕಾಗಿದೆ. ಎಲ್ಲಿಯ ಕರ್ನೂಲು ಎಲ್ಲಿಯ ಕೆನಡಾ. ತಾನು ಇಲ್ಲಿಗೆ ಹೇಗೆ ಬಂದದ್ದು ?… ತಾನು ಇಲ್ಲಿರುವುದು ಮೂರನೆಯ ಕಣ್ಣಿಗೆ ಗೊತ್ತಿರಲಿಲ್ಲ…. ಅಂಥಾದ್ರಲ್ಲಿ ಇವನಿಗೆ ಹೇಗೆ ಗೊತ್ತಾಯಿತು ? ರಿಷಿಗೆ ಸಿಟ್ಟು ಉಕ್ಕುಕ್ಕಿ ಬರುತ್ತಿತ್ತು …. ತನ್ನ ಮೇಲೆ…. ತನ್ನ ಬದುಕಿನ ಮೇಲೆ…. ಶಿವನ ಮೇಲೆ….. ಮಾತಾಡಿಸಲೇ ಬೇಕಾಗಿ ಬಂದ ಈ ಸಂದರ್ಭದ ಮೇಲೆ. ….. ಈಗೇನು ಮಾಡೋದು? ಮತ್ತೆ ಪ್ರಶ್ನೆ ಮೊದಲಿಗೇ ಬಂತು. ತಲೆ ಕೊಡವಿ ಎದ್ದ ಅನಿವಾರ್ಯವೆನ್ನುವಂತೆ. ******* ಐದೇ ನಿಮಿಷದ ಆತಿಥ್ಯ. ಅದೂ ಎಷ್ಟು ಬೇಕೋ ಅಷ್ಟು. “ ಹಾಯ್ ! ಹೇಗಿದ್ದಿಯಾ ?…. ಸಾರೀ ಹೇಗಿದ್ದೀರಿ? “ ರಿಷಿಯನ್ನು ನೋಡಿದ ಶಿವ ವಿಶ್ ಮಾಡಿದ. “ ಫರ್ವಾ ಇಲ್ಲ. ನೀನು ಹೇಗಿದ್ದೀಯಾ ?” ತುಟಿಯ ಮೇಲೆ ಬಲವಂತದ ನಗೆಯನ್ನು ಬಳೆದುಕೊಂಡ ರಿಷಿ. “ ಓ ಸೂಪರ್ ! ಎರಡು ವಾರದ ಹಿಂದೆ ಕೆನಡಾಗೆ ಬಂದೆ. ನನ್ನ ಅಣ್ಣನ ಮಗ ಇಲ್ಲಿ ಡಾಕ್ಟರ್. ಅವನೇ ತುಂಬಾ ಒತ್ತಾಯ ಮಾಡಿ ಎಳ್ಕೊಂಡು ಬಂದ… ಕೆನಡಾ ತೋರಿಸ್ತೇನೆ ಅಂತ.” ಶಿವ ತಮಾಷೆಯಾಗಿ ನಗುತ್ತಾ ಮಾತಾಡ್ತಿದ್ದರೆ ರಿಷಿ ನಿರ್ವಿಕಾರವಾಗಿ ನೋಡುತ್ತಿದ್ದ. ಅದೇ ನಗು.. ನಲವತ್ತು ವರ್ಷ ಕಳೆದರೂ ಮಾಸಿಲ್ಲ. ಅವನಲ್ಲಿ ನಗು ಹೇಗೆ ಹುಟ್ಟುತ್ತೋ ರಿಷಿಗೆ ಅರ್ಥವಾಗದ ವಿಷಯ. ತಾನು ದಿನಾಲೂ ಐದಾರು ಮೀಟಿಂಗ್ ಅಟೆಂಡ್ ಮಾಡ್ತಾನೆ. ಕಂಪೆನಿಗಳಿಗೆ ಸಂಬಂಧ ಪಟ್ಟ ಸೀರಿಯಸ್ ನಿರ್ಣಯಗಳನ್ನು… ನಿರ್ದಾಕ್ಷಿಣ್ಯ ನಿರ್ಣಯಗಳನ್ನು.. ಹೀಗೆ ಚಿಟಿಕೆ ಹೊಡೆಯೋದರಲ್ಲಿ ತೊಗೊಳ್ಳಬಲ್ಲ. ಆದರೆ ಈ ತರದ ನಗೆಗಾಗಿ ಎಂದೂ ಪ್ರಯತ್ನಿಸಿಲ್ಲ. ತನ್ನ ಪರ್ಸನಲ್ ಟ್ರೈನರ್ ನ ದೂರು ಇದೇ ! “ ಸರ್! ನೀವೆಲ್ಲ ಓಕೇ. ಆದರೆ ನಿಮ್ಮಲ್ಲಿ ಸ್ಮೈಲ್ ಈಸ್ ಮಿಸ್ಸಿಂಗ್ ! “ ಅಂತ. ಶಿವನ್ನ ನೋಡಿದಾಗ ಮತ್ತೆ ಆ ಮಾತುಗಳು ನೆನಪಿಗೆ ಬಂದವು. “ ಡಾಕ್ಟರಾ….” “ ಹೌದು. ಗೌರೀಪತಿ ವೇದುಲ….. ಆನ್ಕಾಲಜಿಸ್ಟ್. ಅವನ ಹೆಂಡತಿ ಹಾರಿಕಾ, ರೇಡಿಯಾಲಜಿಸ್ಟ್. “ ರಿಷಿ ತಲೆ ಅಲ್ಲಾಡಿಸಿದ. ಏನೂ ಮಾತಾಡಲಿಲ್ಲ. ಕಣ್ಣ ಹಿಂದೆ ಒಂದು ನೆರಳು ಹಾದು ಮರೆಯಾಯ್ತು. “ ನೀನು ಇಲ್ಲಿದ್ದೀಯಾ ಅಂತ ಗೊತ್ತಾಯ್ತು. ಕರ್ನೂಲಿನ ದೋಸ್ತನನ್ನು ಕೆನಡಾದಲ್ಲಿ ಭೇಟಿ ಮಾಡೋದು…. ಭಾರೀ ಗಮ್ಮತ್ತಾಗಿದೆ ಅಲ್ಲಾ …” ರಿಷಿ ಮುಜುಗರದಿಂದ ಮಿಸುಕಾಡಿದ. “ ಶಿವ…. ಸಾರೀ. ನನಗೆ ಪ್ರಿ ಫಿಕ್ಸ್ಡ್ ಷೆಡ್ಯೂಲ್ ಇದೆ… ಮತ್ತೆ ಸಿಗೋಣ… “ “ ಓ ಹೌದಾ… ಇಟ್ಸ್ ಒಕೆ.. ಖಂಡಿತಾ ಸಿಗೋಣ. “ “ ಹೇಗೆ ಹೋಗ್ತಿಯಾ ….ಇರು. ನನ್ನ ಡ್ರೈವರ್ ಡ್ರಾಪ್ ಮಾಡ್ತಾನೆ “ ಫೋನ್ ಮಾಡಲು ಹೋದ ರಿಷಿಯನ್ನು ಶಿವ ತಡೆದ. “ ಬೇಡ… ಬೇಡ. ಡಾಕ್ಟರ್ ನ ಕಾರಿದೆ. ಅವರಿಬ್ಬರೂ ಬರೋದ್ರಲ್ಲಿ ರಾತ್ರಿಯಾಗತ್ತೆ. ನಾನು ಸ್ವಲ್ಪ ಹಾಗೆ ಒಂದು ಸುತ್ತು ಹಾಕಿ ಮನೆ ಸೇರ್ತೀನಿ…..” ಬಾಗಿಲ ವರೆಗೆ ಹೋದ ಶಿವ ಹಿಂದಿರುಗಿದ. “ ರಿಷಿ! ಎಲ್ಲಾ ಸರಿಯಾಗಿದೆಯಾ.. “ ಒಂದು ಕ್ಷಣ ಕಾಲ ನಿಶ್ಶಬ್ದ… “ ಯಾ… ಯಾಕೆ ಹಾಗೆ ಕೇಳ್ತಿದ್ದಿ ?” ತಡವರಿಸುತ್ತಾ ಕೇಳಿದ ರಿಷಿ. “ಏನಿಲ್ಲ. ಜಸ್ಟ್ ಕೇಳಬೇಕೆನಿಸಿತು. ಇಂಡಿಯಾಗೆ ವಾಪಸ್ ಹೊಗೋದರಲ್ಲಿ ಮತ್ತೆ ಸಿಗ್ತೀನಿ.” ಶಿವ ಹೋದಮೇಲೆ ಸೋಫಾದ ಮೇಲೆ ಕುಸಿದ ನಿತ್ರಾಣವಾಗಿ. ************ ರಿಷಿ ತನ್ನ ಜೀವನದಲ್ಲಿ ಯಾವುದುಕ್ಕಾಗಿಯೂ ನಿಲ್ಲಲಿಲ್ಲ. ಧಾವಂತದಲ್ಲೇ ಐದು ದಶಕ ದಾಟಿದ್ದ. ಕೆಲಸಕ್ಕೆ ಸೇರಿದ್ದರಿಂದ ಹಿಡಿದು…. ನೂರಾರು ಜನಕ್ಕೆ ಕೆಲಸ ಕೊಡುವ ಹುದ್ದೆಗೆ ತುಂಬಾ ಸುಲಭವಾಗಿ ಸೇರಿದ್ದ. ಈ ಪಯಣದಲ್ಲಿ ಕಷ್ಟಗಳು ಇರಲಿಲ್ಲವೆಂತಲ್ಲ, ಬೇಕಾದಷ್ಟು.. ಅದರೆ ಅವುಗಳನ್ನು ಲೆಕ್ಕ ಮಾಡದಷ್ಟು ನಿರ್ಲಕ್ಷ್ಯ ಅಭ್ಯಾಸ ಮಾಡಿಕೊಂಡಿದ್ದ. ಗುರಿ ಮುಟ್ಟ ಬೇಕಾದರೆ…. ಮುಟ್ಟುವ ವರೆಗೆ ಪ್ರಯತ್ನಿಸುವುದೇ … ಎನ್ನುವ ಸೂತ್ರವನ್ನು ನಂಬಿದ್ದ… ಮತ್ತೆ ಆಚರಿಸಿದ್ದ. ನಲವತ್ತರ ವಯಸ್ಸಿಗೆ ಉದ್ದಿಮೆದಾರ. ರಿಷಿ ಸೊಲ್ಯೂಷನ್ಸ್ ಅಂತ ಶುರುವಾಗಿ ಈಗ ರಿಷಿ ಗ್ರೂಪ್ ಆಫ್ ಇಂಡಸ್ಟ್ರೀಸ್ ವರೆಗೆ ಬೆಳೆಸಿದ್ದ. ಮಗಳಿಗೆ ಮದುವೆ ಮಾಡಿ ಅಳಿಯನಿಗೆ ಕಂಪೆನಿಯಲ್ಲಿ ಹೊಣೆಗಾರನನ್ನಾಗಿ ಮಾಡಿದ. ಮಗ ಎಂಡಿ ಯಾಗಿದ್ದು ಗ್ರೂಪಿನ ವ್ಯವಹಾರಗಳನ್ನೆಲ್ಲ ನೋಡಿಕೊಳ್ಳುತ್ತಿದ್ದ. ಆದರೆ ಜೀವನದಲ್ಲಿ ಮೊದಲನೆಯ ಸಲ ಬಹು ಆಶ್ಚರ್ಯವಾಗಿ ಸ್ವಲ್ಪ ನಿಲ್ಲಬೇಕಾಗಿ ಬಂತು. ಆರಾಮದ ಸಲುವಾಗಿ ಕೆನಡಾಗೆ ಬಂದಿದ್ದ. ರಿಷಿಗೆ ಕೆನಡಾ ಫೇವರೆಟ್ ಪ್ಲೇಸ್. ತನ್ನ ಹೆಂಡತಿ ಮಹಿತಾ ತೀರಿಕೊಂಡ ಮೇಲೆ ಪೇರಿಕೊಂಡ ಒಬ್ಬಂಟಿತನವನ್ನು ಹೋಗಲಾಡಿಸಲು ಪ್ರತಿ ವರ್ಷವೂ ಇಲ್ಲಿಗೆ ಬರುತ್ತಿದ್ದ. ರಿಷಿಗೆ ಮೊದಲಿನಿಂದಲು ಯಾವ ವಿಷಯವನ್ನಾದರೂ ಗೋಪ್ಯವಾಗಿ ಇಡುವುದು ಅಭ್ಯಾಸ. ಅದೂ ಕಂಪೆನಿಯ ವಿಷಯವೆಂದರೆ ಇನ್ನೂ ಸರಿ.. ತೀರ ಕಠಿಣವಾಗಿರುತ್ತಿದ್ದ. ತಾನು ಕೆನಡಾಗೆ ಬಂದಿರುವ ವಿಷಯ ಯಾರಿಗೂ ಗೊತ್ತಾಗಂತೆ ನೋಡಿಕೊಂಡಿದ್ದ. ಎಲ್ಲ ಪಕ್ಕಾ ಪ್ಲಾನ್ ಮಾಡಿಯೇ ತನ್ನ ಟೂರ್ ಕನ್ಪರ್ಮ್ ಮಾಡಿಕೊಂಡಿದ್ದ. ಬಂದು ಒಂದು ತಿಂಗಳಾಗಿದ್ದರು ತಾನು ಇಲ್ಲಿ ಇರುವುದು ಯಾರಿಗೂ ಗೊತ್ತಾಗದ ಹಾಗೆ ತನ್ನ ಪರ್ಸನಲ್ ಸ್ಟಾಫ್ ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ಆದರೂ, ಶಿವ ಅದು ಹೇಗೆ ಕಂಡು ಹಿಡಿದ? ಸ್ವಲ್ಪ ಹೊತ್ತಿಗೆ ಏನೋ ಹೊಳೆಯಿತು. ಅವನಿಗೆ ವಿಷಯ ಹೇಗೆ ತಿಳಿಯಿತೋ ಅರ್ಥವಾಯಿತು. ********** “ ಹಾಯ್ ಸರ್……ಹೇಗಿದ್ದೀರಿ? “ ಎನ್ನುತ್ತ ಗೌರೀಪತಿ ನಗುತ್ತ ಒಳಬಂದ. “ ಯಾ ಫರ್ವಾ ಇಲ್ಲ….” ಧ್ವನಿ ಬಾವಿಯೊಳಗಿಂದ ಬಂದಂತೆ ನೀರಸವಾಗಿತ್ತು. “ ಒನ್ ಮಿನಿಟ್…. “ ಎನ್ನುತ್ತ ಪಲ್ಸ್, ಬಿಪಿ ಚೆಕ್ ಮಾಡಿದ. “ ಹಾ.. ಒಕೆ. ಹೇಳಿ. ತುಂಬಾ ನಿತ್ರಾಣ ಎನಿಸುತ್ತಿದೆಯೇ …” ’ ಹೌದು. ತುಂಬಾನೇ….ಒಮ್ಮೊಮ್ಮೆ ಏಳಲಿಕ್ಕೆ ಸಹ ಬರದ ಹಾಗೆ….” “ ವೆಲ್… “ ಯಾರಿಗೋ ಕಾಲ್ ಮಾಡಿದ. “ ಸರ್. ಇವತ್ತಿನಿಂದ ನಿಮಗೆ ಪರ್ಸನಲ್ ಡೈಟಿಷಿಯನ್ ಬರ್ತಾರೆ. ಷಿ ಈಜ್ ಬೃಂದಾ ಫ್ರಂ ಅವರ್ ಹಾಸ್ಪಿಟಲ್. ನಿಮ್ಮ ಆಹಾರದ ವಿಷಯ ಎಲ್ಲಾ ಪೂರ್ತಿಯಾಗಿ ತಾನೇ ನೋಡಿಕೊಳ್ತಾಳೆ. ಮೆಡಿಸಿನ್ ಕಂಟಿನ್ಯೂ ಮಾಡಿ. ಹೋಪ್ ಎವ್ರೀ ಥಿಂಗ್ ಗುಡ್..” . ಎದ್ದ. “ ಅಂದಹಾಗೆ ಚಿಕ್ಕಪ್ಪ ನಿಮ್ಮನ್ನ ಕೇಳಿದೆನೆಂದು ಹೇಳಲು ಹೇಳಿದ್ದಾರೆ. ಅವರು ನಿಮಗೆ ಕಾಲ್ ಮಾಡ್ತಾರಲ್ಲಾ..” “ ಯಾ.. ಜಿಡ್ಡು ಕೃಷ್ನಮೂರ್ತಿಯವರ ಪ್ರವಚನ ಕಳಿಸ್ತಾನೆ..” “ ಎಕ್ಸಲೆಂಟ್ ರಿಷಿಯವರೇ ! ಚಿಕ್ಕಪ್ಪ ನಂಥವರು ಒಬ್ಬರಿದ್ದರೆ ಸಾಕು ಎಷ್ಟು ಕಷ್ಟ ಬಂದರೂ ತಡೆದು ಕೊಳ್ಳಬಹುದು. ತುಂಬ ಕೂಲ್ ಪರ್ಸನಾಲಿಟಿ…. “ ಗೌರೀಪತಿಹೊರಟಿರಲು…“ ಡಾಕ್ಟರ್… ನಾನು ಇದರಿಂದ ಹೊರಬೀಳುತ್ತೀನಾ…. “ ರಿಷಿ ಅನೂಹ್ಯವಾಗಿ ಪ್ರಶ್ನಿಸಿದ. ಗೌರೀಪತಿಯ ಮುಖದಲ್ಲಿಯ ಬಣ್ಣಗಳು ಬದಲಾದವು. ಮತ್ತೆ ತಕ್ಷಣ ಸರಿಪಡಿಸಿಕೊಂಡ. “ ವೈನಾಟ್…ನಿಮ್ಮಲ್ಲಿ ಇಂಪ್ರೂವ್ ಮೆಂಟ್ ಕಾಣ್ತಿದೆ… ಡೋಂಟ್ ವರ್ರಿ ಸರ್. ನಾವಿದ್ದೀವಲ್ಲ “ ರಿಷಿಯ ಮುಖದಲ್ಲಿ ಒಂದು ನಿರ್ಲಿಪ್ತ ನಗೆ. “…. ಅದಕ್ಕೆ ನನಗೆ ಡಾಕ್ಟರ್ ಗಳೆಂದರೆ ಇಷ್ಟ. ಪ್ರಾಣಾನೇ ಹೊಗ್ತಾ ಇದ್ರೂ ಸರಿ… ನಿಮಗೇನೂ ಆಗಲ್ಲ ಅಂತ ಧೈರ್ಯಕೊಡ್ತಿರ್ತಾರೆ. “ “ ರಿಷಿಜೀ. ಈ ಸಮಯದಲ್ಲಿ ನೀವು ತುಂಬಾ ಯೋಚನೆ ಮಾಡಬೇಡಿ. ಜಸ್ಟ್ ಲಿವ್ ದಿಸ್ ಮೊಮೆಂಟ್. ದಟ್ಸಾಲ್. ಇಷ್ಟೆಲ್ಲ ಜೀವನಾನ್ನ ನೋಡಿದೀರಿ. ನಿಮಗೆ ಗೊತ್ತಿರದ ಫಿಲಾಸಫಿ ಏನಿರತ್ತೆ ಹೇಳಿ? ಆದ್ರೂ ನಿಮಗೇ ಗೊತ್ತಿದ್ದ ಹಾಗೆ…. ಎವೆರಿಬಡಿ ಷುಡ್ ಎಗ್ಜಿಟ್…. ಟುಡೇ ಆರ್ ಟುಮಾರೋ….. ರೈಟ್. ಹಾಗಾದ್ರೆ ನಾನು ಬರ್ಲಾ. ಟೇಕ್ ಕೇರ್. “ ಗೌರೀಪತಿ ಹೊರಟು ಹೋದ. ಒಂದಷ್ಟು ವಿಶ್ವಾಸ ಮತ್ತೊಂದಷ್ಟು ನಂಬಿಕೆಯನ್ನು ಬಿತ್ತುತ್ತಾ.. *************** ಪರಿಸ್ಥಿತಿಗಳು ಬದಲಾಗುವುದಕ್ಕೆ ವರ್ಷಗಳು ಬೇಕಾಗಿಲ್ಲ. ಕೆಲ ದಿನ, ಗಂಟೆಗಳು, ನಿಮಿಷಗಳು ಸಾಕು. ರಿಷಿಗೆ ಇತ್ತೀಚೆಗೆ ಇದು ಅನುಭವಕ್ಕೆ ಬರುತ್ತಿತ್ತು. ಸಮಯ ತುಂಬಾ ಭಾರವಾಗಿ ಸಾಗುತ್ತಿತ್ತು. ರೂಮ್ ಬಿಟ್ಟು ಹೊರಗೆ ಹೋಗಿ ಅದೆಷ್ಟು ದಿನವಾಗಿತ್ತೋ ? ಸದಾ ಲ್ಯಾಪ್ ಟಾಪಿನಲ್ಲಿ ಬ್ಯುಸಿಯಾಗಿರುತ್ತಿರುವ ರಿಷಿಯ ಕೈಯಲ್ಲಿ ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕ ಕಾಣುತ್ತಿದೆ. ಯಾರೂ ತನ್ನನ್ನು ಡಿಸ್ಟರ್ಬ್ ಮಾಡದಂತೆ ಏಕಾಂತ ಸೃಷ್ಟಿಸಿಕೊಂಡ ರಿಷಿ ಸದ್ಯ ಒಬ್ಬಂಟಿ ತನದಿಂದ ಒದ್ದಾಡುತ್ತಿದ್ದ. ಇಷ್ಟೂ ದಿನ ತನ್ನನ್ನು ಹಿಡಿದು ನಿಲ್ಲಿಸಿದ ಆತ್ಮ ನಿರ್ಭರತೆ ಮೆಲ್ಲಗೆ ಕರಗುತ್ತಿತ್ತು. ಯಾಕೋ ಪಯಣ ಮುಗಿಯುತ್ತದೆ ಎನ್ನುವ ಫೀಲಿಂಗ್. ಸಣ್ಣ ಸಣ್ಣ ವಿಷಯಗಳಿಗೇ ತುಂಬಾ ಎಮೋಷನಲ್ ಆಗ್ತಿದ್ದ.. ಕಣ್ಣು ತೇವವಾಗದ ದಿನಗಳೇ ಇಲ್ಲಾಂತ ಆಗಿತ್ತು. ಆ ಗಟ್ಟಿತನ… ಮೊಂಡುತನ…. ಪಾದರಸವನ್ನು ಮೀರಿಸುವ ಚುರುಕು ಮೇಧಾಶಕ್ತಿ ಎಲ್ಲಾ ಏನಾಗಿವೆ ? ಏನೋ! ಶಿವ ಆಗಾಗ ಫೋನ್ ಮಾಡಿ ಮಾತಾಡುತ್ತಿದ್ದ. ಶುರುವಿನಲ್ಲಿ
ಮಿಸ್ಟರ್ ಅನ್ ಫ್ರೆಂಡ್ Read Post »
ಪಾರಿವಾಳ ರಾಣಿ
ಕಥೆ ಪಾರಿವಾಳ ರಾಣಿ ಹರೀಶ್ ಗೌಡ ಒಂದು ಪ್ರೇಮ ಕಥೆ ಕ್ರಿ ಶ ಮತ್ತು ಕ್ರಿ ಪೂ ದಲ್ಲಿ ಹಿಂದೆ ಜಗತ್ತು ಹೇಗಿತ್ತು? ಸ್ವಚ್ಚಂದ ಜಗತ್ತು ಪ್ರಕೃತಿಯ ಮಡಿಲಿನಲ್ಲಿ ಸರ್ವರು ಸಮಾನರೆಂಬ ಭಾವನೆ ಇದ್ದಂತ ಕಾಲ. ಮತ್ತು ಜಾತಿ ವರ್ಣ ಇದರ ತಕರಾರು ಇಂದಿನದಲ್ಲ ಹಿಂದಿನಿಂದಲೂ ಇದೆ ಅದೆಲ್ಲ ಬಿಡಿ ನಮ್ಮ ಕಥೆ ಶುರು ಮಾಡೊಣ ಓದೊಕೆ ನೀವ್ ರೇಡಿ ಅಲ್ವ ಮತ್ತೆ ಬನ್ನಿ ಯಾಕ್ ತಡ. ಸುತ್ತಲೂ ಬೆಟ್ಟ ಗುಡ್ಡಗಳು ಕಾಡು ನದಿಗಳ ಮಧ್ಯೆ ನೂರಾರು ಹಳ್ಳಿ ಸೇರಿದ ದೀನದತ್ತ ಎಂಬ ಮಹಾನ್ ಸಾಮ್ರಾಜ್ಯ ಸಕಲವೂ ಸರ್ವವೂ ಸಕಾಲಕ್ಕೆ ಸಿಗುವ ರಾಜ್ಯ ಅದು. ಅಲ್ಲಿ ದೀನದತ್ತ ಅರಳಿ ಮಹಾರಾಜ ಎಂಬ ದೊರೆ ಆಳುತ್ತಿದ್ದ ಮೊದಲ ಹೆಂಡತಿ ಮದುವೆಯ ಹೊಸದರಲ್ಲಿ ಅಕಾಲಿಕ ಮರಣದಿಂದ ರಾಜ ಎರಡನೆ ಮದುವೆ ಆದ ನಂತರ ಬಹುಕಾಲ ಕಾದರು ಮಕ್ಕಳಾಗಲಿಲ್ಲ ನಂತರ ಮೂರನೆಯ ಮದುವೆಯ ತೀರ್ಮಾನ ಮಾಡಿದ ಪಕ್ಕದ ರಾಜ್ಯದ ರಾಜಕುಮಾರಿ ಸುಗಂದಿಯನ್ನ ಅಪಹರಿಸಿ ಮದುವೆ ಆದ ಮಹಾನ್ ಪರಾಕ್ರಮಿಯಾಗಿದ್ದ ಅರಳಿರಾಜನನ್ನ ಸೋಲಿಸುವುದು ಅಷ್ಟು ಸುಲಭದ ಮಾತಲ್ಲ ಇದನ್ನು ತಿಳಿದಿದ್ದ ಪಕ್ಕದ ರಾಜ ತನ್ನ ಮಗಳ ಅಪಹರಣವನ್ನ ವಿರೋದಿಸದೆ ಚಾಣಕ್ಷತನದಿಂದ ಬಂಧವನ್ನ ಬೆಳಿಸಿದ ವರ್ಷ ತುಂಬುವುದರೊಳಗೆ ದೀನದತ್ತ ಸಾಮ್ರಾಜ್ಯದಲ್ಲಿ ಒಂದು ಕಳೆ ಬಂದಂತ್ತಾಗಿತ್ತು ಮಹಾರಾಣಿ ಸುಗಂದಿ ಗರ್ಭವತಿಯಾದ ಸುದ್ದಿ ನಗರದೆಲ್ಲೆಡೆ ಹಬ್ಬಿತ್ತು. ಮಹಾರಾಜ ಅರಳಿರಾಜನಿಗಂತು ಬಹುಕಾಲದ ಕನಸು ನೆರವೇರುವ ಕಾಲ ಕಣ್ಮುಂದೆ ಬಂದು ನಿಂತಂತೆ ಭಾಸವಾಗುತ್ತಿತ್ತು. ನವಮಾಸ ತುಂಬಿ ಪ್ರಸವದ ದಿನ ಬಂದೆ ಬಿಟ್ತು ಇಡಿ ರಾಜ್ಯದಲ್ಲಿ ಕೂತುಹಲ ಆತಂಕ ಅಹಮನೆಯ ತುಂಬ ವೈದಿಕ ಮಂದಿಗಳು ಸೂಲಗಿತ್ತಿಯರು ಮಹಾರಾಣಿಯ ಹೆರಿಗೆಯ ಜವಬ್ದಾರಿ ವಹಿಸಿಕೊಂಡಿದ್ದರೂ. ಸಕಲ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ನೆರವೇರತೊಡಗಿದವು. ಮಹಾರಾಜನಿಗೊಂದು ವರದಿ ತಲುಪಿತ್ತು ಗರ್ಭದಲ್ಲಿ ಮಗು ಅಡ್ಡಲಾಗಿದೆ ಹೆರಿಗೆ ಕಷ್ಠವಾಗುತ್ತಿದೆ ಎಂಬುದು. ಸುದ್ದಿ ಕೇಳಿ ಅರಳಿರಾಜನಿಗೆ ಭಯ ಮತ್ತು ಆತಂಕ ಕಳೆಗಟ್ಟಿತ್ತು. ಸಮಯಕಳೆದಂತೆ ಕೊಠಡಿಯ ಒಳಗಿಂದ ಮಗು ಅಳುವ ನಾದ ಕೇಳಿದೊಡನೆ ರಾಜನ ಮನದಲ್ಲಿ ಆನಂದ ಇಡೀ ರಾಜ್ಯವೇ ಕುಣಿದು ಕುಪ್ಪಳಿಸಿತ್ತು ರಾಜ ಬಲು ಆನಂದದಿಂದ ರಾಣಿಯ ಬಳಿ ಓಡಿ ಬಂದು ನೋಡ್ತಾನೆ ಮಗು ಕೈಕಾಲು ಆಡಿಸುತ್ತಾ ಮಲಗಿಸಿದ್ದಾರೆ ಸೂಲಗಿತ್ತಿಯರು ಮಹಾರಾಜ ನಿಮಗೆ ಹೆಣ್ಣುಮಗು ಜನನವಾಗಿದೆ ರಾಜನಿಗೆ ಬಹುಕಾಲ ಮಕ್ಕಳಿಲ್ಲದ ನೋವಿನಲ್ಲಿದ್ದವನಿಗೆ ಗಂಡು ಮಗುವಾದರೇನು ಹೆಣ್ಣಾದರೇನು ಒಟ್ಟಿನಲ್ಲಿ ಆನಂದವಾಗಿತ್ತು ಜೊತೆಗೆ ಮತ್ತೊಂದು ಸುದ್ದಿ ಹೃದಯ ಚೂರು ಮಾಡಿತ್ತು ಪ್ರಸವದ ಸಮದಲ್ಲಿ ಆದ ಅತಿಯಾದ ವೇದನೆ ಮತ್ತು ಅಧಿಕ ರಕ್ತಸ್ರಾವದಿಂದ ಮಹಾರಾಣಿ ಸುಂಗಧಿ ಇಹಲೋಕ ತೊರೆದಿದ್ದಳು. ಅಕ್ಷರಃಸಹಾ ರಾಜ ಕುಸಿದು ಹೋಗಿದ್ದ ಆಸೆಯಂತೆ ಮಗು ದೊರೆತ್ತಿತ್ತು ಆದರೆ ಮಡದಿ ದೂರವಾಗಿದ್ದಳು ನೋವಿನ ನಡುವೆ ರಾಜನ ಮುಂದಿನ ದಾರಿ ಎರಡನೇ ಹೆಂಡತಿಯ ಆಶ್ರಯದಲ್ಲಿ ಈ ಮಗಳನ್ನ ಬೆಳೆಸಬೇಕಾಗಿತ್ತು. ಮಲತಾಯಿಯಾದರೂ ಮಕ್ಕಳಿಲ್ಲದೆ ಬಂಜೆಯಾಗಿದ್ದ ಮಹಾರಾಜನ ಎರಡನೇ ಹೆಂಡತಿ ಆ ಮುದ್ದು ಮಗಳನ್ನ ಸಾಕಿ ಬೆಳೆಸಿ ತಾಯಿಯ ಸ್ಥಾನ ತುಂಬಿದಳು ಮಗಳು ಸುಂದರಳೂ ದೃಢಕಾಯಳೂ ಆಗಿ ಬೆಳೆಯತೊಡಗಿದಳು. ತನ್ನ ಮಗಳಿಗೆ ಯಾವ ಕುಂದು ಕೊರತೆಗಳು ಬರದಂತೆ ಅರಳಿ ಮಹಾರಾಜ ಸರ್ವವೂ ಅರಮನೆಯಲ್ಲಿ ಮಗಳಿಗೆ ಸಿಗುವಂತೆ ಆದೇಶ ಹೊರಡಿಸಿದ. ಆಡುವ ಆಟಿಕೆ ಇಂದ ಹಿಡಿದು ಗೆಳತಿಯರು ಶಿಕ್ಷಣವೂ ಎಲ್ಲ ಅರಮನೆಯಲ್ಲಿ ಸಿಗತೊಡಗಿತು ಮುದ್ದಾದ ಮಗಳಿಗೆ ಶುಭ ದಿನವನ್ನ ರಾಜ್ಯ ಜೋತಿಷಿಗಳ ಸಮಾಗಮದಲ್ಲಿ ನಾಮಕರಣ ಸಮಾರಂಭ ನೇರವೇರಿಸಿ ಯುವರಾಣಿ ವಸುಂದರಾ ಎಂಬ ಹೆಸರಿಟ್ಟರು. ಹೆಸರಿಗೆ ತಕ್ಕಂತೆ ಹರ್ಷಚಿತ್ತಳು ,ಗಮನ ಸೆಳೆಯ ಮೊಗವು,ಉದಾರತೆಯು ಆಕೆಯಲ್ಲಿ ತುಂಬಿತ್ತು. ಗಂಡು ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣವೂ ಸೇರಿದಂತೆ ಸಕಲ ವಿಧ್ಯೆಗಳನ್ನ ಅರಳಿರಾಜ ತನ್ನ ಮಗಳಿಗೆ ಕಲಿಸತೊಡಗಿದ ಬಾಲ್ಯದಲ್ಲಿಯೇ ವಸುಂದರಾ ಗಂಭೀರವಾಗಿ ಸಮರ್ಥವಾಗಿ ವಿಧ್ಯೆಗಳನ್ನ ಕಲಿಯತೊಡಗಿದಳು. ಮಹಾ ಬುದ್ದಿವಂತೆಯಾದ ರಾಜಕುಮಾರಿ ವಸುಂದರಾ ಬಾಲ್ಯದಿಂದಲೇ ರಾಜ್ಯದ ನಾಗರೀಕರ ಕಷ್ಠಗಳನ್ನ ಅರಿಯತೊಡಗಿದಳು ಜಾತಿ ಬೇದವನ್ನ ಮಾಡಬಾರದು ಸರ್ವರೂ ಸಮಾನರು ನಾವೆಲ್ಲ ಮಾನವರೂ ಎಂಬ ಚಿತ್ತದಿಂದ ಆಡುತ್ತಾ ಕಲಿಯುತ್ತಾ ಬೆಳೆಯತೊಡಗಿದಳು. ಆದರೆ ಇಲ್ಲಿ ಇನ್ನೊಂದು ವಿಚಾರ ಹೇಳಲು ಮರೆತಿದ್ದೆ ಅರಳಿ ರಾಜ ತುಂಬಾ ಶಕ್ತಿಶಾಲಿ ರಾಜನೂ ಹೌದು ಅದರಂತೆ ಆತನಲ್ಲಿ ಜಾತಿಯತೇ ಮತ್ತು ಮೇಲು ಕೀಳು ಭಾವನೆ ಇತ್ತು ಅವರವರ ಜಾತಿ ಧರ್ಮಕ್ಕೆ ಅನುಸಾರವಾಗಿ ಬಾಳಬೇಕು,ದುಡಿಯಬೇಕು ಸದಾ ಉಳ್ಳವರ ಮುಂದೆ ತಲೆಬಾಗಿ ನಿಲ್ಲಬೇಕು ಇಂತಹ ಮನಸು ಅವನದಾಗಿತ್ತು ಆದರೂ ಪ್ರಜೆಗಳಿಗೆ ಸಲ್ಲಬೇಕಾದ ಸವಲತ್ತುಗಳನ್ನ ನೀಡಿ ಸಲಹುತ್ತಿದ್ದ. ವಸುಂದರಾ ಒಂದು ತರಹದಲಿ ಎಲ್ಲವೂ ದೊರೆತರೂ ಒಂಟಿತನ ಕಾಡತೊಡಗಿತು ಕಾರಣ ತಂದೆ ಅರಳಿರಾಜನ ಅತಿಯಾದ ಪ್ರೀತಿ ಅವಳನ್ನ ಅರಮನೆಯ ಪಂಜರದ ಗಿಳಿಯಂತೆ ಮಾಡಿತ್ತು. ಬೇಕಿದ್ದು ಬೇಡದ್ದು ಎಲ್ಲವನ್ನ ದೊರಕುವಂತೆ ಮಾಡಿದ್ದ ರಾಜ ತನ್ನ ಮಗಳನ್ನ ಅರಮನೆ ಇಂದ ಆಚೆ ಕಳಿಸುತ್ತಿರಲಿಲ್ಲ ಮಗಳ ಮೇಲಿನ ಅತಿಯಾದ ಕಾಳಜಿ ಸಹಾ ಇದಾಗಿತ್ತು ಮಗಳಿಗೆ ಯಾವ ತೊಂದರೆಯೂ ಬಾರದಿರಲಿ ಅವಳಿಗೆ ಯಾರಿಂದಲೂ ಯಾವ ಸನ್ನಿವೇಶದಲ್ಲಿಯೂ ಕೆಡುಕು ಬರದಿರಲಿ ಎಂಬ ಅತಿಯಾದ ಕಾಳಜಿ ವಸುಂದರಾ ಬಾಳಲ್ಲಿ ಒಂಟಿತನ ಮೂಡಿಸಿತ್ತು. ಬೆಳೆದು ದೊಡ್ಡವಳಾದ ವಸುಂದರಾ ಪ್ರತಿ ನಿತ್ಯ ಅರಮನೆ ಮೊಗಸಾಲೆಯ ಕಿಟಕಿಯಲಿ ಕುಳಿತು ಹೊರಜಗತ್ತನ್ನ ನೋಡುತ್ತ ಕುಳಿತುಕೊಳ್ಳುತ್ತಾಳೆ ದಿನ ಕಳೆದಂತೆ ಅರಮನೆಯ ಸಖಿಯರು ಪರಿಚಾಲಕರು ಅಂಗರಕ್ಷಕರು ಬೆಸರ ಅನಿಸತೊಡಗಿದೆ ದಿನ ನೋಡಿದ ಮುಖಗಳೆ ಇವೆಲ್ಲ ಹೊಸ ಜಗತ್ತು ಬೇಕು ಹೊರಗೆ ಸುತ್ತಾಡಬೇಕು ಎಂಬ ಆಸೆ ಮನಸಿನಲ್ಲಿ ಕಾಡತೊಡಗಿದೆ ತಂದೆಯ ಬಳಿ ಹಲವು ಸಲ ತಿಳಿಸಿದರೂ ಅರಳಿರಾಜ ನಿರಾಕರಿಸಿಬಿಟ್ಟಿದ್ದ. ಮೊಗಸಾಲೆಯ ಕಿಟಕಿಯಲ್ಲಿ ಏನನ್ನೊ ನೋಡುತ್ತಾ ಕುಳಿತಿದ್ದ ವಸುಂದರಾ ಹತ್ತಿರ ಜೊರಾಗಿ ಬಂದ ಪಾರಿವಾಳ ಕಿಟಕಿಗೆ ಬಡಿದು ಕೆಳಗೆ ಬಿದ್ದು ಬಿಟ್ಟಿತು ತಕ್ಷಣ ಗಮನಿಸಿದ ವಸುಂದರಾ ಭಟರಿಗೆ ಅದನ್ನು ಹಿಡಿದು ತರಲು ಹೇಳಿದರು ಅವಳ ಆಜ್ಞೆಯಂತೆ ತಂದು ಅವಳ ಕೈಗೆ ಇರಿಸಿದಳು ಹದ್ದಿನಿಂದ ತಪ್ಪಿಸಿಕೊಳ್ಳಲು ವೇಗವಾಗಿ ಹಾರಿಬಂದು ಅಚಾನಕ್ಕಾಗಿ ಕಿಟಕಿಗೆ ಬಡಿದಿದ್ದ ಪಾರಿವಾಳ ರೆಕ್ಕೆ ಮತ್ತು ಕಾಲಿಗೆ ಪೆಟ್ಟು ತಿಂದು ಹಾರದ ಸ್ತಿತಿಯಲ್ಲಿ ಇದ್ದದ್ದು ನೋಡಿ ರಾಜಕುಮಾರಿಗೆ ಮರುಕ ಹುಟ್ಟಿ ಬಂದಿತ್ತು ತಕ್ಷಣ ಅದರ ಉಪಚಾರವನ್ನ ಮಾಡಿ ಅದಕ್ಕೆ ಔಷದಿಗಳನ್ನ ಸಖಿಯರ ಮುಖಾಂತರ ತರಿಸಿ ಸಂತೈಸಿದಳು. ನೋವಿಗೆ ಮುಲಾಮು ತಾಗುತ್ತಿದ್ದಂತ್ತೆ ಪಾರಿವಾಳಕ್ಕೆ ಯಾರೋ ನನ್ನ ರಕ್ಷಿಸುತ್ತಿದ್ದಾರೆ ಎಂದು ಮನಸಿನಲ್ಲಿ ಅಂದುಕೊಳ್ಳುತ್ತಾ ಸುಮ್ಮನೆ ರಾಜಕುಮಾರಿಯ ಮಡಿಲಲ್ಲಿ ಕುಳಿತು ಬಿಟ್ಟಿತು. ಹೀಗೆ ಸುಮಾರು ಐದಾರು ದಿನಗಳ ತನಕ ಅರಮನೆಯಲ್ಲಿ ವಸುಂದರಾ ಚಿಕಿತ್ಸೆ ನೀಡಿ ಪಾರಿವಾಳವನ್ನ ರಕ್ಷಿಸತೊಡಗಿದಳು. ಇನ್ನೆರಡು ದಿನ ಕಳೆವ ಒತ್ತಿಗೆ ನಿಧಾನವಾಗಿ ಹಾರಲು ಶುರುಮಾಡಿದ ಪಾರಿವಾಳವ ಕಂಡ ರಾಜಕುಮಾರಿಗೆ ಏನೋ ಒಂದು ಸಂತಸ ಹಾರುತ್ತಾ ಹಾರುತ್ತಾ ಅವಳಿಗೆ ಸಂತೋಷವ ನೀಡುವ ಪಾರಿವಾಳ ಅವಳಿಗೆ ಅರಿವಿಲ್ಲದೆ ಹೊಸ ಜೊತೆಗಾರ ಸ್ನೇಹಿತನಾಗಿ ಹಿಡಿಸಿತ್ತು. ನಂತರದ ದಿನಗಳಲ್ಲಿ ರಾಜಕುಮಾರಿಯ ಜೊತೆ ಅರಮನೆಯಲ್ಲಿಯೇ ಕಾಯಂ ನೆಲೆಸಿತು ಅಲ್ಲಿಯೇ ಹಾರುತ್ತ ಅವಳ ಬಳಿಯೇ ಕುಳಿತುಕೊಂಡು ಕಾಳುಗಳ ತಿನ್ನುತ್ತಾ ಹೊರಗೆ ಹಾರಿ ಮರಳಿ ಮತ್ತೆ ಇವಳ ಬಳಿಯೇ ಬರತೊಡಗಿತು ಪಾರಿವಾಳವು ಇವಳನ್ನ ತುಂಬಾ ಹಚ್ಚಿಕೊಂಡು ಬಿಟ್ಟಿತು. ಅರಮನೆಯಲ್ಲಿ ಅಂದು ಬಣ್ಣಗಳ ಹಬ್ಬ ಸಖಿಯರ ಜೊತೆ ವಸುಂದರಾ ಬಣ್ಣಗಳಲ್ಲಿ ಬಣ್ಣವಾಗಿ ಪಾರಿವಾಳವನ್ನು ಬಣ್ಣಮಯವಾಗಿಸಿದ್ದಳು. ಸ್ವಲ್ಪ ಸಮಯದ ಬಳಿಕ ಪುರ್ ಎಂದು ಹೊರಗೆ ಹಾರಿದ ಪಾರಿವಾಳ ದೂರದ ಹೊಳೆಯ ದಡಕ್ಕೆ ಬಂದಿತ್ತು. ಬಟ್ಟೆ ತೊಳೆಯುತ್ತಾ ಎಂದಿನಂತೆ ಕೆಲಸದಲ್ಲಿ ನಿರತನಾಗಿದ್ದ ವಿಜಯರಾಮನಿಗೆ ಆ ಬಣ್ಣ ಬಳಿದ ಪಾರಿವಾಳವ ಕಂಡು ಮರುಕ ಬಂದಿತ್ತು ಯಾರೋ ಇದರ ಮೈಗೆಲ್ಲ ಹೀಗೆ ಹಿಂಸಿಸಿ ಬಣ್ಣ ಬಳಿದಿದ್ದಾರೆ ಎಂದು ಹಿಡಿದು ನಿಧಾನಕ್ಕೆ ಮೈಸವರಿ ನೀರಿನಿಂದ ತೊಳೆದು ಶ್ವೇತವರ್ಣಕ್ಕೆ ಬರಿಸಿದ್ದ. ಬಣ್ಣದ ಕಿರಿ ಕಿರಿ ಇಂದ ನೀರಿನಲ್ಲಿ ಸ್ನಾನಮಾಡಲು ಬಂದಿದ್ದ ತನ್ನ ಮೈತೊಳೆದ ರೀತಿ ನೋಡಿ ಪಾರಿವಾಳಕ್ಕೂ ಒಂದು ಬಗೆಯ ಹಿತವನಿಸಿತ್ತು. ಕೈಯಿಂದ ಹಠಾತ್ತಾನೆ ಹಾರಿ ಮತ್ತೆ ಅರಮನೆಗೆ ಮರಳಿ ಬಂದು ರಾಜಕುಮಾರಿಯ ಕೊಠಡಿ ಸೇರಿ ಕುಳಿತುಬಿಟ್ಟಿತು. ಮಜ್ಜನ ಮಗಿಸಿ ಬಂದ ವಸುಂದರಾ ಪಾರಿವಾಳವ ಕಂಡು ಆಶ್ಚರವಾಯಿತು ಅರೇ ಯಾರಿದರ ಮೈ ತೊಳೆದವರು ತಕ್ಷಣವೇ ಸಖಿಯರ ಕೂಗಿದಳು ಯಾರಲ್ಲು ಉತ್ತರವಿಲ್ಲ ಎಲ್ಲರದೂ ಒಂದೆ ಮಾತು ಗೊತ್ತಿಲ್ಲ ರಾಜಕುಮಾರಿ ನಾವು ನಿಮ್ಮೊಡನೆ ಇದ್ದೆವಲ್ಲ. ಅವಳಲ್ಲಿ ಉತ್ತರ ಸಿಗದಂತೆ ಈ ಪ್ರೆಶ್ನೆ ಉಳಿದು ಬಿಟ್ಟಿತು. ಜನರ ಬಾಯಿಂದ ಬಾಯಿಗೆ ರಾಜಕುಮಾರಿ ಮತ್ತು ಪಾರಿವಾಳದ ಗೆಳೆತನ ಅಬ್ಬತೊಡಗಿತು. ವಸುಂದರಾಳಷ್ಟೆ ಅರಮನೆಯಲ್ಲಿ ಪಾರಿವಾಳಕ್ಕೂ ಗೌರವ ಸಿಗತೊಡಗಿತು ಅವಳ ಅನುಮತಿ ಇಲ್ಲದೆ ಯಾರು ಅದನ್ನ ಮುಟ್ಟುವಂತೆ ಇರಲಿಲ್ಲ ಅದಕ್ಕೂ ಅಷ್ಟೆ ರಾಜಕುಮಾರಿಯ ಬಿಟ್ಟು ಮತ್ತೊಬ್ಬರ ಬಳಿ ಇರಲು ಇಷ್ಟವಿರಲಿಲ್ಲ. ವಸುಂದರಾ ಕೇಶ ಕಟ್ಟುವಾಗ ಪಕ್ಕದಲ್ಲೆ ಇದ್ದ ಪಾರಿವಾಳದ ಹಣೆಗೆ ಬೊಟ್ಟನ್ನ ಇಟ್ಟು ಕ್ಷಣಕಾಲ ಮುದ್ದಾಡಿದಳು ನಂತರ ಹೊರಗೆ ಹಾರಿದ ಆ ಹಕ್ಕಿ ನೇರವಾಗಿ ನದಿಯ ದಡದಲ್ಲಿ ಇಳಿಯಿತು ನೀರು ಕುಡಿದು ದಡದಲ್ಲಿ ಏನನ್ನೋ ತಿನ್ನುತ್ತಿದ್ದದ್ದನ್ನು ಗಮನಿಸಿದ ವಿಜಯರಾಮ ಇದು ಅಂದು ಬಂದ ಬಣ್ಣ ಬಳಿದ ಪಾರಿವಾಳ ಮತ್ತೆ ಯಾರೋ ಇದಕ್ಕೆ ಬೊಟ್ಟು ಇಟ್ಟಿದ್ದಾರೆ ಅನ್ನುತ್ತಾ ನೇರವಾಗಿ ಅದರ ಬಳಿಗೆ ಬಂದು ಕೈಯಲ್ಲಿ ಹಿಡಿದು ತೊಳೆದು ಬಿಟ್ಟ ಅಂದು ನನ್ನ ಮೈತೊಳೆದವನು ಇವನೆ ಎಂದು ಅರಿತಿದ್ದ ಪಾರಿವಾಳ ಭಯವಿಲ್ಲದೆ ಆತನ ಕೈ ಸೇರಿತ್ತು. ಈತನೂ ರಾಜಕುಮಾರಿ ತರಹ ಒಳ್ಳೆಯವನೆ ತೊಂದರೆ ಕೊಡದವನೆಂದು ಅದಕ್ಕೆ ನಂಬಿಕೆ ಬರಲಾರಂಭಿಸಿತು ಮತ್ತೆ ಅಂದಿನಂತೆ ಕಾ ಕೊಸರಿಕೊಂಡು ಅರಮನೆಗೆ ಹಾರಿ ಬಂದು ಬಿಟ್ಟಿತು. ಗೆಳೆಯ ಪಾರಿವಾಳ ಬಂದದ್ದು ಗಮನಿಸಿದ ವಸುಂದರಾ ಹಿಡಿದು ಮುದ್ದಾಡಲು ನೋಡಿದಾಗ ಹಣೆಯಲ್ಲಿ ಅವಳು ಇಟ್ಟ ಬೊಟ್ಟಿಲ್ಲ ಮತ್ತೆ ಆಶ್ಚರ್ಯ ಯಾರು ಇದರ ಹಣೆಯನ್ನು ತೊಳೆದು ಕಳಿಸಿದ್ದಾರೆ? ಕೂತುಹಲವೂ ಬರತೊಡಗಿತು ಮರುದಿನ ಮತ್ತೆ ಹಣೆಗೆ ಬೊಟ್ಟು ಇಟ್ಟು ಬಿಟ್ಟಳು ಕೆಲ ಸಮಯದ ಬಳಿದ ಹೊರಗೆ ಹಾರಿಹೋಯ್ತು ಮರಳಿ ಬಂದಾಗ ಶುಭ್ರವಾಗಿತ್ತು ಅವಳಿಗೆ ಇನ್ನಷ್ಟು ಕೂತುಹಲ ಬರಲಾರಂಭಿಸಿತು ಮತ್ತೆ ಮತ್ತೆ ಬಣ್ಣ ಬಳಿದಂತೆ ಹಾರಿ ಹೋಗುತ್ತಿತ್ತು ಮರಳಿ ಬಂದಾಗ ಮೈ ತೊಳೆದು ಕಳಿಸಿರುವುದು ಕಾಣುತ್ತಿತ್ತು. ಅರಮನೆಯ ಪಾಲಕರನ್ನ ಕರೆಸಿ ಇದರ ಗುಟ್ಟು ತಿಳಿಯಬೇಕು ಈ ಪಾರಿವಾಳ ಎಲ್ಲಿ ಹೋಗಿಬರುತ್ತದೆ ಎಂಬುದನ್ನು ಪತ್ತೆ ಮಾಡಲು ಹೇಳಿದಳು ವಸುಂದರಾಳ ಆಜ್ಞೆಯಂತೆ ಪಾರಿವಾಳದ ಜಾಡು ಹಿಡಿದ ಅರಮನೆ ಪಾಲಕರು ನದಿಯ ದಂಡೆಯಲ್ಲಿ ವಿಜಯರಾಮನ ಕಾಯಲ್ಲಿ ಪಾರಿವಾಳ ಇದ್ದದ್ದು ಗಮನಿಸಿದರು. ಅಲ್ಲಿಂದ ಅರಮನೆಗೆ ಬಂದ ಪಾಲಕರು ರಾಜಕುಮಾರಿಯ ಮುಂದೆ ನೆಡೆದ ಪ್ರಸಂಗವನ್ನ ತಿಳಿಸಿದರು ಕೂಡಲೆ ಆ ವ್ಯಕ್ತಿಯನ್ನ ನನ್ನೆದುರು ಕರೆತನ್ನಿ ಊ ಹೊರಡಿ ಎಂದ ವಸುಂದರಾ ಮಾತಿಗೆ ವಿಜಯರಾಮನ ಬಳಿ ಬಂದು ಅಯ್ಯ ಅಗಸನೇ ನೀನು ಕೂಡಲೆ ರಾಜಕುಮಾರಿಯನ್ನ ಕಾಣಬೇಕಿದೆ ಇದು ಅವರ ಆದೇಶ ಎಂದರೂ ನಾನು ಅರಮನೆಯ ರಾಜಕುಮಾರಿಯನ್ನ ಕಾಣಬೇಕೆ? ಯಾಕೆ ರಾಜಭಟರೇ ಎಂದಾಗ ಪಾರಿವಾಳದ ವಿಷಯ ತಿಳಿಸಿದರೂ ಕೂಡಲೆ ವಿಜಯರಾಮ ಅರಮನೆ ಪಾಲಕರ ಜೊತೆ ವಸುಂದರಾ ಮುಂದೆ ಬಂತು ನಿಂತ. ಪ್ರತಿ ನಿತ್ಯ ಬಿಸಿಲು ಮಳೆ ಎನ್ನದೆ ಬಟ್ಟೆಗಳನ್ನ ಒಗೆದು ಒಗೆದು ಮೈ ಬೆವರು ಕಾಲಿಯಾಗಿ ಮೈ ಕೈ ಕುಸ್ತಿಪಟುವಿನಂತೆ ದೃಢಕಾಯನಾಗಿದ್ದ ಇವನನ್ನ ಕಂಡ ವಸುಂದರಾ ಮನದಲ್ಲೆ ಆಹಾ ಅದೆಂತ ಯುವಕನೀತ ಸುಂದರನೂ ಮನಸೆಳೆವ ಮೈಕಟ್ಟು ಬೆಳೆಸಿರುವ ಯಾರು ಈತ
ಬಣ್ಣದ ಚಿಟ್ಟೆಗಳು
ಕಥೆ ಬಣ್ಣದ ಚಿಟ್ಟೆಗಳು ವಾಣಿ ಅಂಬರೀಶ ಈ ಊರಿನ ಕುವರ ಆ ಊರಿನ ಕುವರಿ ಅವಳೆಲ್ಲೋ ಇವನ್ನೇಲ್ಲೋ,, ಇನ್ನೂ ಇವರಿಬ್ಬರ ಪ್ರೀತಿ ಇನ್ನೇಲ್ಲೋ.. ಅದೇ ನಾ ಹೇಳ ಬಯಸುವ ಇವರಿಬ್ಬರ ನಡುವೆ ಪ್ರೀತಿ ಬೆಸೆಯುವ ಪ್ರೇಮದ ಕಥೆ.. ಮಲ್ನಾಡಿನ ಮುದ್ದು ಮನಸ್ಸಿನ ಬೆಡಗಿ, ಕೊಡಗಿನ ಕುವರಿ ಈ ಸ್ವಪ್ನ ಸುಂದರಿ, ಇವಳೇ ಈ ಕಥೆಯ ಕಥಾನಾಯಕಿ “ನಯನಶ್ರೀ “ ಈ ಭೂಮಿಯ ಮೇಲಿರುವ ಅದ್ಭುತಗಳಲ್ಲೊಂದಾದ ಆ ಮಲೆನಾಡಿನ ಹಸಿರ ಸಿರಿಯ ಸೊಬಗಿನಲ್ಲಿ ಚಂದದಿ ನಲಿದಾಡುತ ಬೆಳೆದಿರುವಳು ಈ ಕಥೆಯ ನಾಯಕಿ.. ಅನಂತಸ್ವಾಮಿ ಮತ್ತು ವೈದೇಹಿ ಎಂಬ ದಂಪತಿಗಳ ಪುತ್ರಿ ನನ್ನ ಕಥೆಯ ಸುಂದರಿ…ಇವರಿಗೆ ಆರತಿಗೂ ಒಬ್ಬಳೇ, ಕೀರುತಿಗೂ ಇವಳೊಬ್ಬಳೆ ಹಾಗಾಗಿ ಇನ್ನಷ್ಟು ಪ್ರೀತಿ, ಮಮತೆ, ಅಪ್ಯಾಯತೆಗಳ ಜೊತೆಗೆ ಚಿನ್ನದ ಗಣಿಯ ಹಾಗೇ ಜೋಪಾನ ಮಾಡುತ್ತಿದ್ದರು. ಈ ನಮ್ಮ ಕಥಾನಾಯಕಿಯ ಚೆಲುವ ಬಣ್ಣಿಸಲು ಅದೆಷ್ಟು ಮಣಿಮುತ್ತಿನ ಹಾರ ಪೋಣಿಸಿದರೂ ಸಾಲದು.. ಮೋಡದ ಮರೆಯ ಚಂದಿರನಂತೆ ಮುದ್ದು ಬಿಂಬ, ಪ್ರಕೃತಿಯ ಮಡಿಲಿನಲಿ ಆಕೃತಿಯ ರೂಪವಾಗಿ ನಮ್ಮ ಸಂಸ್ಕೃತಿಯೇ ಮೆಚ್ಚುವಂತಹ ಶ್ವೇತಾ ಸುಂದರಿ, ಚೆಲುವಿನ ಚಿತ್ತಾರದ ಚೈತ್ರ ಚಂದಿರನಂತೆ ಅವಳ ಚೆಲುವು, ಕಣ್ಣಿನೊಳಗೆ ಸೌಂದರ್ಯವೋ ಸೌಂದರ್ಯದೊಳಗೆ ಕಣ್ಣೋ ಎನ್ನುವಂತಹ ನಯನಗಳು, ಉದ್ದನೇಯ ರೇಷ್ಮೆಯ ನೂಲಿನಂತಹ ಕೇಶರಾಶಿಯಿಂದ ಸೌಂದರ್ಯ ದೇವತೆಗೆ ಸೆಡ್ಡು ಹೊಡೆಯುವಂತೆ ಇದ್ದಳು.. ಇನ್ನು ನಮ್ಮ ಕಥಾನಾಯಕನ ಬಗ್ಗೆ ಹೇಳುವುದಾದರೆ, ಇವನ್ನೊಬ್ಬ ಬಿಸಿಲನಾಡು ರಾಯಚೂರಿನ ಗಂಡೆದೆಯುವಕ, ಈ ಕಥೆಯ ಕಥಾನಾಯಕ “ಶತಾವರ “.. ರಾಮಮೂರ್ತಿ ಹಾಗೂ ಲಕ್ಷ್ಮೀ ಎಂಬ ದಂಪತಿಗಳ ಮೂವರು ಮಕ್ಕಳಲ್ಲಿ ನಮ್ಮ ಕಥೆಯ ನಾಯಕ ಕಿರಿಯ ಪುತ್ರನು. ಶ್ವೇತ ಮತ್ತು ಸ್ವಾತಿ ಎಂಬ ಸಹೋದರಿಯರ ಜೊತೆ ಆಟ, ಪಾಠ, ಚೇಷ್ಟೆಗಳ ಜೊತೆಗೆ ವಿದ್ಯಾ-ಬುದ್ದಿವಂತನಾಗಿ ಬೆಳೆಯುತ್ತಾನೆ. ನಮ್ಮ ನಾಯಕನೂ ಸಹ ಸುಂದರನಾಗಿರುತ್ತಾನೆ, ಎತ್ತರದ ಮೈಕಟ್ಟು, ಗೋದಿ ಬಣ್ಣದವನಾಗಿರುತ್ತಾನೆ.. ರೇಷ್ಮೆಯಂತಹ ಕೇಶರಾಶಿಯಡಿ ಚಂದನವನವೇ ನಾಚುವಂತ ಕೋಲ್ಮಿಂಚಿನ ಕಣ್ಣುವುಳ್ಳವ,, ಮರೆಯದಂತೆ ಮುಖದಲಿ ಮಂದಹಾಸ ಮೂಡಿಸುವ ಸುಂದರ ಮೊಗದ ಸೋಜಿಗ.. ಇವನೇ ಈ ಕಥೆಯ ಬಿಸಿಲಸಿಮೆಯ ಕಥಾನಾಯಕ “ಶತಾವರ “.. ಇವರಿಬ್ಬರ ಜೀವನದ ಗುರಿ, ತಲುಪಬೇಕಾದ ದಾರಿ ಒಂದೇ ಆಗಿದ್ದರೂ ಪ್ರಯಾಣಿಸುವ ದಿಕ್ಕು ಮಾತ್ರ ಬೇರೆ ಬೇರೆಯಾಗಿರುತ್ತದೆ. ಇಬ್ಬರು ಸಹ ಉತ್ತಮ ಸಮಾಜದ ನಿರ್ಮಾಣ, ಜನಸೇವೆ ಈ ಸಮಾಜದ ಬಗೆಗಿನ ಕಳಕಳಿ ಉಳ್ಳವರಾಗಿರುತ್ತಾರೆ. ಹಾಗಾಗಿ ಇಬ್ಬರು ಸಹ ಆಯ್ಕೆ ಮಾಡಿಕೊಂಡಿರುವುದು ಐ.ಎ.ಸ್ ಎಂಬ ಉನ್ನತವಾದ ಗೌರವಾನ್ವಿತ ಪದವಿ. ಇದರಿಂದ ಅವರ ಆಸೆಗಳ ಪೂರೈಸಿಕೊಳ್ಳುವ ನಿಟ್ಟಿನಲ್ಲಿರುತ್ತಾರೆ.. ನಂತರದ ದಿನಗಳಲ್ಲಿ ಶತಾವರ ರವರು ಐ.ಎ.ಸ್ ಪರೀಕ್ಷೆ ತೇರ್ಗಡೆಯಾಗಿ ಎರಡು ವರ್ಷದ ಪ್ರೋಬೆಷನರಿ ಅವಧಿ ಮುಗಿಸಿಕೊಂಡು ಕೊಡಗು ಜಿಲ್ಲೆಯ ಸಿ.ಇ.ಒ ಆಗಿ ನೇಮಕ ಹೊಂದುತ್ತಾರೆ. ಇನ್ನೂ ನಯನಶ್ರೀ ಅವರು ತಮ್ಮ ಕನಸನ್ನು ಪೂರೈಸುವ ಹಾದಿಯಲ್ಲಿರುತ್ತಾರೆ. ಶತಾವರ ರವರು ತಮ್ಮ ಮೊದಲ ದಿನದ ಕೆಲಸಕ್ಕೆ ಅತ್ಯಂತ ಉತ್ಸುಕರಾಗಿ ಸೇರುತ್ತಾರೆ. ಇವರಿಗೆ ಎಲ್ಲಾ ಜವಾಬ್ದಾರಿಗಳ ಅರಿವಿರುತ್ತದೆ ಹಾಗೂ ಅವರ ಕಾರ್ಯವೈಖರಿಯಿಂದ ಎಲ್ಲರ ಮನ ಗೆದ್ದಿರುತ್ತಾರೆ. ಹಾಗೆ ಒಂದು ದಿನ ಕೊಡಗಿನ ಒಂದು ಕಾಲೇಜಿನ ಇಪ್ಪತ್ತೈದನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗಿಯಾಗಿರುತ್ತಾರೆ. ನಯನಶ್ರೀಯು ಕೂಡ ಅದೇ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿರುವುದರಿಂದ ಅವಳ ಸ್ನೇಹಿತೆಯರೊಡನೆ ಬಂದಿರುತ್ತಾಳೆ. ಇನ್ನೇನು ಕಾರ್ಯಕ್ರಮ ಶುರುವಾಗುತ್ತದೆ ಹಲವು ಗಣ್ಯರು ಸೇರಿ ಜ್ಯೋತಿ ಬೆಳೆಗಿಸುವ ಮೂಲಕ. ಕೆಲ ಗಣ್ಯರ ಭಾಷಣದ ನಂತರ ನೂತನ ಸಿ.ಇ.ಒ ಶತಾವರರವರ ಸರದಿ ಬಂದಾಗ ಅವರ ಮಾತುಗಳು ಯಾವ ವಾಕ್ ಚಾತುರ್ಯರಿಗೂ ಕಡಿಮೆ ಇಲ್ಲ ಎಂಬಂತೆ ಇದ್ದವು, ಕೇಳುಗರನ್ನು ಅವರ ಮಾತಿನಿಂದಲೇ ಮಂತ್ರ ಮುಗ್ಧರನ್ನಾಗಿಸುತ್ತಿದ್ದರು, ಅವರ ಸೂರ್ಯನ ಹೊಳಪಿನ ಕಣ್ಣುಗಳಿಂದ ಎಲ್ಲಾ ಜನರ ಚಿತ್ತವನ್ನು ಕಟ್ಟಿಹಾಕಿಕೊಂಡಿದ್ದರು. ಅವರ ಭಾಷಣ ಮುಗಿಯುವ ತನಕ ನಯನಶ್ರೀ ಅಂತು ಬೇರಾವುದೋ ಲೋಕದಲ್ಲಿ ಮಗ್ನಳಾಗಿರುತ್ತಾಳೆ. ಭಾಷಣ ಮುಗಿದ ನಂತರ ಚಪ್ಪಾಳೆಯ ಧ್ವನಿಯಿಂದ ಎಚ್ಚೆತ್ತುಕೊಂಡಳು.. ಶತಾವರರವರ ಮಾತುಗಳು ಕೇಳಿದ ಅವಳು ಮೊದಲ ನೋಟದಲ್ಲಿಯೇ ಅವರಿಗೆ ಮನಸೋತು ತನ್ನ ಪುಟ್ಟ ಹೃದಯದಲ್ಲಿ ದೊಡ್ಡದಾದ ದೇವಾಲಯವನ್ನೇ ನಿರ್ಮಿಸಲಾರಂಭಿಸಿದಳು. ನಂತರದ ದಿನಗಳಲ್ಲಿ ಇವರೇಕೆ ಹೀಗೆ ಈ ಸಮಾಜದ ಬಗ್ಗೆ ನನಗಿರುವ ಆಸೆ, ಕನಸುಗಳನ್ನು ಹೋತ್ತುಕೊಂಡಿದ್ದಾರಲ್ಲ, ಎಲ್ಲೋ ಇದ್ದ ನಾವಿಬ್ಬರು ಹೇಗೆ ಒಂದೇ ಹಾದಿಯಲ್ಲಿ ಯೋಚಿಸಲು ಹೇಗೆ ಸಾಧ್ಯ, ಹೀಗೆ ಹಲವಾರು ವಿಷಯಗಳು ನಮ್ಮ ಕಥಾನಾಯಕಿಯ ಮನಸ್ಸಿನ ನೆಮ್ಮದಿಗೆ ಅಡ್ಡಿಪಡಿಸುತ್ತಿದ್ದವು. ಹಾಗೆಯೇ ಶತಾವರರವರನ್ನು ಸೂಕ್ಷ್ಮವಾಗಿ ತೆರೆಮರೆಯಲ್ಲಿ ಗಮನಿಸುತ್ತಾ ಅವರ ಬಗ್ಗೆ ತನ್ನಲ್ಲೇ ಇರುವ ಪ್ರೀತಿಯ ಹೂವಿಗೆ ನೀರೆರೆದು ಜೋಪಾನ ಮಾಡುತ್ತಿದ್ದಳು. ಹಾಗೆ ಒಂದು ದಿನ ಗಾಢವಾದ ಯೋಚನೆಯಲ್ಲಿ ಮುಳುಗಿದ್ದ ನಯನಶ್ರೀಗೆ ನೆನಪಾಗುವುದೇ, ಪಾರಿವಾಳಗಳ ಮೂಲಕ ಸಂದೇಶ ರವಾನಿಸುತ್ತಿದ್ದ ಹಳೆಯ ದಿನಗಳು. ಆದರೆ, ಈಗ ನಾವಿರುವ ಕಾಲದಲ್ಲಿ ಅಂತಹ ಪಾರಿವಾಳಗಳು ಸಿಕ್ಕುವುದಿಲ್ಲವಲ್ಲವೇ…?? ಅದಕ್ಕಾಗಿ ಅವಳೊಂದು ಅನಾಮಧೇಯ ಪತ್ರದಲ್ಲಿ ಶತಾವರರವರ ಆಡಳಿತ ದಕ್ಷತೆ,ಕಾರ್ಯ ವೈಖರಿ, ಜನರ ಸಮಸ್ಯೆಗಳ ಅವಲೋಕಿಸುವ ಪರಿ, ಅವರ ಪ್ರಾಮಾಣಿಕತೆ, ಅವರೆಡೆ ಕೆಲಸ ನಿರ್ವಹಿಸುತ್ತಿದ್ದ ಉಳಿದ ನೌಕರರ ಕಡೆ ಅವರಿಗಿರುವ ಗೌರವ ಹಾಗೂ ಅವರು ಹಾಜರಾಗುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ, ಪಂಚಾಯಿತಿಗಳಿಗೆ ಭೇಟಿ ನೀಡಿದ ಸಂದರ್ಭದ ಬಗ್ಗೆ ಮತ್ತು ಹೀಗೆ ಹಲವಾರು ಅವರ ಚಟುವಟಿಕೆಗಳ ಬಗ್ಗೆ ಬರೆದು ಕಛೇರಿಯ ವಿಳಾಸಕ್ಕೆ ಕಳುಹಿಸುತ್ತಿದ್ದಳು.. ಹೀಗೆ ಸತತ ಕೆಲ ದಿನಗಳ ಕಾಲ ನಡೆಯುತ್ತಾ ಇರುತ್ತದೆ.. ಶತಾವರ ರವರಿಗೂ ಸಹ ದಿನಾಲೂ ಬರುವ ಪತ್ರಗಳನ್ನು ಓದುತ್ತಾ ಯಾರಿರಬಹುದು ಇವರು, ನನ್ನ ಬಗ್ಗೆ ಇಂತಹ ಒಳ್ಳೆಯ ಅಭಿಪ್ರಾಯವನ್ನಿಟ್ಟುಕೊಂಡು, ನಾ ಹೋಗಿ ಬಂದ ಕಡೆಗಳ ಬಗೆಗೂ ಹೇಳುತ್ತಿದ್ದಾರಲ್ಲ ಎಂಬ ಸಣ್ಣ ಕುತೂಹಲ ಹಾಗೆ ಬಂದು ಹೋಗುತ್ತದೆ. ಈಗಾಗಲೆ ಸಿ.ಇ.ಒ ರವರ ಮನದಲ್ಲಿ ಸಣ್ಣದೊಂದು ಕುತೂಹಲ ಮೂಡಿಸಿರುವ ನಯನಶ್ರೀ ಮುಂದಿನ ದಿನಗಳಲ್ಲಿ ಅವರ ಬಗ್ಗೆ ತನ್ನದೇ ಆದ ಮಾತುಗಳ ಸಾಲುಗಳನ್ನು ಬರೆಯುತ್ತಾಳೆ. ಅವರ ಚೆಲುವ ನೋಡಿ ಇವಳಾಗುತ್ತಾಳೆ ಕವಯಿತ್ರಿ, ಬರೆಯುತ್ತಾಳೇ ಬಣ್ಣಿಸಿ ಬರಹಗಾರ್ತಿಯಾಗಿ… ಇವನಾರವ ಸುಂದರ ಸೋಜಿಗ,, ಕಣ್ಣರಳಿಸಿ ನೋಡಿದಷ್ಟು ಸುಂದರ,, ಬಣ್ಣಿಸಲಾರೆ ನಾ ಇನ್ನೂ ಅವನ ಚೆಲುವ… ಮುಂಜಾನೆಯ ನಗುವಿನಲಿ ಪೂರ್ಣ ಸೂರ್ಯ ಪ್ರಕಾಶದಂತೆ,, ಇಳಿ ಸಂಜೆಯಲಿ ಸುಂದರ ಮುದ್ದು ಚಂದಿರನಂತೆ… ನಾನಾದೆ ಇವನಿಗೆ ಮೂಖವಿಸ್ಮಿತ… ಹೀಗೆ ಇನ್ನೂ ಹಲವಾರು ರೀತಿಯಲ್ಲಿ ಬಣ್ಣಿಸುತ್ತಾ ಅವಳು ಅನಾಮಧೇಯ ಪತ್ರಗಳ ಮೂಲಕ ತನ್ನ ಮನದ ಭಾವನೆಗಳನ್ನು ಬರೆದು ಕಛೇರಿಗೆ ಪತ್ರಗಳನ್ನು ಕಳಿಸುತ್ತಾ ಇರುತ್ತಾಳೆ. ಇನ್ನೂ ಇವೆಲ್ಲ ಗಮನಿಸುತ್ತಾ, ಎಲ್ಲಾ ಪತ್ರಗಳನ್ನು ಓದುತ್ತಾ ಯಾರೀ ಸ್ವಪ್ನ ಸುಂದರಿ, ಈ ರೀತಿಯಲಿ ನನ್ನ ಮನವ ಕಾಡುತಿಹಳು ಎಂದು ಆಕೆಯ ಮೊಗವ ನೋಡದೇನೆ ಇವರ ಮನಸ್ಸಿನಲ್ಲಿಯೂ ಸಣ್ಣದಾದ ಬಯಕೆ ಚಿಗುರು ಹೊಡೆಯುತ್ತದೆ.ಗ ಪ್ರೀತಿಯ ಆಸೆಯ ಕಂಗಳಿಂದ ಅವಳು ಕಳುಹಿಸುವ ಪ್ರತ್ರಕ್ಕಾಗಿ ಕಾಯುವ ತವಕವೂ ಬರುತ್ತದೆ. ಹೀಗಿರುವಾಗ ನಯನಶ್ರೀಯು ಒಮ್ಮೆ ತನ್ನ ಪತ್ರದಲ್ಲಿ ಆಕೆಯ ಹೆಸರು ಮತ್ತು ಅವಳ ಸಂಕ್ಷಿಪ್ತ ವಿವರಗಳೊಂದಿಗೆ ನಿಮ್ಮನ್ನೊಮ್ಮೆ ಭೇಟಿಯಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾಳೆ. ಹಾಗೆ ಆ ಪತ್ರದ ಹಿಂಬದಿಯಲ್ಲಿ ನಿಮಗೂ ನನ್ನೋಮ್ಮೆ ಭೇಟಿ ಮಾಡವ ಇಚ್ಛೆ ಇದ್ದಲ್ಲಿ ನನ್ನ ನಾಳೆಯ ಪತ್ರದಲ್ಲಿ ಸಮಯ ಮತ್ತು ಭೇಟಿ ಮಾಡುವ ಸ್ಥಳದ ಬಗ್ಗೆ ತಿಳುಸುತ್ತೇನೆ ಹಾಗೂ ನಿಮಗಾಗಿ ನಾ ಕಾಯುತ್ತಾ ಇರುತ್ತೇನೆ ಎಂದು ಬರೆಯುತ್ತಾಳೆ. ಶತಾವರರವರಿಗೂ ನಯನಶ್ರೀಯನ್ನೂ ನೋಡಬೇಕೆಂಬ ಇಚ್ಛೆ ಇದ್ದುದರಿಂದ ಮಾರನೇಯ ದಿನದ ಅವಳ ಪತ್ರಕ್ಕಾಗಿ ಕಾಯುತ್ತಿರುವಾಗ ಅವಳ ಪತ್ರ ಬರುತ್ತದೆ. ಅದರಲ್ಲಿ ಮೊದಲೇ ತಿಳಿಸಿದ ಹಾಗೆ ಸಮಯ ಮತ್ತು ಸ್ಥಳದ ಬಗ್ಗೆ ಬರೆದಿರುತ್ತಾಳೆ..ಆದೇ ದಿನದ ತಿಳಿ ಸಂಜೆಯಲಿ ಒಬ್ಬರನ್ನೊಬ್ಬರು ಭೇಟಿ ಮಾಡುವ ಸಂದರ್ಭ ಬರುತ್ತದೆ. ಒಬ್ಬರಿಗೆ ಇನ್ನೊಬ್ಬರು ಕಾಯುವ ರೀತಿಯೂಹೀಗಿರುತ್ತದೆ.. ಅನುರಾಗದ ಅಲೆಯಲಿ, ಪ್ರೀತಿಯ ಕೊಳಲನಿಡಿದು ನಿಂತ ಕೃಷ್ಣನ ಹಾಗೆ ಶತಾವರ ಕಾಯುತ್ತಿದ್ದರೆ,, ಅಂಬರದಾಚೆ ಇನ್ನೂ ಎತ್ತರಕ್ಕಿರುವ ಪ್ರೀತಿಯನು, ಸೇರಗ ತುದಿಯಲ್ಲಿಡಿದುಕೊಂಡ ರಾಧೆಯ ಹಾಗೆ,, ನಯನಶ್ರೀ ಕಾಯುತ್ತಾ ಕುಳಿತಿದ್ದಳು. ನಯನಶ್ರೀಯ ಮುಖವನ್ನೇ ನೋಡದೆ ಅವಳ ಬರಹಗಳಿಗೆ ಮನಸೋತು ಹೋದ ಶತಾವರರವರು ದಿಕ್ಕೇ ತೋಚದ ಹಾಗೆ ನಿಂತಿರುತ್ತಾರೆ. ಅಷ್ಟರಲ್ಲಿಯೇ ಅವರನ್ನು ಕಂಡ ನಯನಶ್ರೀಯು ಅತ್ತಿರ ಹೋಗಿ “ನಮಸ್ತೇ ಶತಾವರ ರವರೇ” ಎನ್ನಲು ಅವರು ” ನೀವು..??” ಎಂದು ಕೇಳಲು ಇವಳು ” ನಾ ನಯನಶ್ರೀ ” ಎಂದು ಹೇಳುತ್ತಾಳೆ. ಆಗ ಶತಾವರ ರವರು ” ಹೋ,,ಹೋ,, ನೀವೆನಾ..!! ಆ ಅನಾಮದಯ ಪತ್ರಗಳ ಹಿಂದಿರುವ ರುವರಿ” ಎನ್ನಲು, ಇವಳು ” ಹೌದು, ಆ ಬರವಣಿಗೆಯ ಹಿಂದಿನ ಕೈಗಳು ನನ್ನದೇ” ಎಂದು ಉತ್ತರಿಸುತ್ತಾಳೆ. ಹಾಗೆ ಇನ್ನೂ ಹಲವು ಮಾತುಗಳನ್ನಾಡತ್ತಾ ಅವರ ಮೊದಲ ಭೇಟಿಯುನ್ನು ಮುಕ್ತಾಯಗೊಳಿಸುತ್ತಾರೆ… ಒಬ್ಬರಿಗೆ ಇನ್ನೊಬ್ಬರ ಭೇಟಿ, ಕಣ್ಣು ಕಣ್ಣುಗಳ ಸಂಗಮ,, ಎರಡು ಹೃದಯಗಳ ಸಮಾಗಮ… ಈ ಬದುಕೆಂಬ ಬಣ್ಣದ ಆಟದಲಿ, ಅವಳ್ಯಾರೋ, ಇವನ್ಯಾರೋ ಆದರೂ ಬೆಸೆಯಿತು ಸುಂದರ ಅನುಭಂದ, ಹೀಗೆ ಇರಲಿ ಇವರಿಬ್ಬರ ಪ್ರೀತಿಯ ಬಂಧ, ಬಾರದಿರಲಿ ಎಂತಹದೇ ತೊಡಕಿನ ಬಂಧ.. ಇನ್ನೇನು ಶುರುವಾಯ್ತು ಇಬ್ಬರ ನಡುವಿನ ಪ್ರೀತಿಯ ಜೊತೆಗಿನ ಪಯಣ.. ಮನದ ಕದವ ಸರಿಸಿ ಮಾತನಾಡಿಕೊಂಡ ಅದೇಷ್ಟೋ ಮಾತುಗಳು, ಭೇಟಿಯಾದ ನೂರು ಜಾಗಗಳು, ಸಾವಿರಾರು ನೆನಪುಗಳ ಮೂಟೆಯೊಂದಿಗೆ ಸಾಗುತ್ತಿರುವ ಪ್ರೀತಿ ಬಾಳ ನೌಕೆಯ ಖಾಯಂ ಪ್ರಯಾಣಿಕರಾಗಿ ಬಿಡುತ್ತಾರೆ ಶತಾವರ ಹಾಗೂ ನಯನಶ್ರೀ… ಇವರಿಬ್ಬರ ಈ ಪ್ರೀತಿ ಶತಾವರ ರವರ ಕೆಲಸಕ್ಕೂ ಮತ್ತು ನಯನಶ್ರೀಯ ತಾನು ಕೂಡ ಐ.ಎ.ಸ್ ಅಗಬೇಕೆಂಬ ಕನಸಿಗೇನು ಅಡ್ಡಿಯಾಗಿರುವುದಿಲ್ಲ. ಹೀಗಿರುವಾಗ ಒಂದು ದಿನ ಅವರ ಪ್ರೀತಿಯ ಬಗ್ಗೆ ಅವರವರ ಪೋಷಕರಿಗೆ ಹೇಳುತ್ತಾರೆ. ಇಬ್ಬರ ಆಯ್ಕೆಯು ಸೂಕ್ತವಾಗಿ ಇದ್ದುದರಿಂದ ಯಾವುದೇ ಅಡ್ಡಿ-ಅಡಚಣೆ ಮಾಡದೇ ಎರಡೂ ಕುಟುಂಬದವರು ಇವರ ಪ್ರೀತಿಗೆ ಅಸ್ತು ಎನ್ನುತ್ತಾರೆ. ಇಬ್ಬರ ಪ್ರೀತಿಯು ಆಳವಾಗಿ ಬೇರೂರಿತ್ತು. ಇವರ ಮದುವೆಯ ಮಮತೆಯ ಕರೆಯೋಲೆಗೂ ಎರಡು ಕುಟುಂಬದವರು ಒಪ್ಪಿಗೆ ನೀಡಾಯಿತು. ಮೇಲಿರುವ ಎಲ್ಲಾ ದೇವಾನುದೇವತೆಗಳ ಆಶೀರ್ವಾದಗಳೊಂದಿಗೆ ನಮ್ಮ ನಯನಶ್ರೀಗೆ ಶತಾವರರಿಂದ ಮೂರು ಗಂಟುಗಳ ನಂಟಿನ ತಾಳಿ ಭಾಗ್ಯ ಮಾತ್ರ ನೇರವೇರಬೇಕಾಗಿತ್ತು. ಇನ್ನೇನು ಒಳ್ಳೆಯ ಅಳಿಯ ಸಿಕ್ಕಾಯಿತು, ಅವರಿಬ್ಬರಿಗೂ ಸಂಪ್ರದಾಯದ ಪ್ರಕಾರ ಜೋಡಿ ಮಾಡಿಸಿದರೆ ಆಯ್ತು ಎನ್ನುತ್ತಾ ನಯನಶ್ರೀಯ ಪೋಷಕರು ಒಂದು ಕಡೆ, ಈ ಕಡೆ ಶತಾವರರವರ ಪೋಷಕರು ಅವನ ಕನಸ್ಸಿನಂತಯೇ ಒಳ್ಳೆಯ ಉದ್ಯೋಗ ಮತ್ತು ಒಳ್ಳೆಯ ಮನಸ್ಸಿನ ಹುಡುಗಿಯು ಕೂಡ ಬಂದಾಯಿತು, ಮದುವೆಯೊಂದು ಮಾಡಿಸಿ ನಮ್ಮ ಜವಾಬ್ದಾರಿಯನ್ನು ಇಳಿಸಿಕೊಳ್ಳುವ ಬಗ್ಗೆ ಮಾತಾನಾಡುತ್ತಾ ಇರುತ್ತಾರೆ. ಆದರೆ, ಆಕಾಶದಲ್ಲಿ ಹಾರಾಡುವ ಪ್ರಣಯ ಪಕ್ಷಿಗಳಂತೆ, ಒಂದೇ ಜೀವ ಎರಡು ದೇಹದಂತಿರುವ ನಯನಶ್ರೀ ಮತ್ತು ಶತಾವರರವರಿಗೆ ಅವರ ಮದುವೆಗೂ ಮುನ್ನ ನಯನಶ್ರೀ ಯ ಕನಸ್ಸು ಕೂಡ ಮುಖ್ಯವಾಗಿ ಇರುವುದರಿಂದ ಇವರಿಗೆ ಅಷ್ಟೇನೂ ಮದುವೆಯ ಬಗ್ಗೆ ಆತುರ ಇರಲಿಲ್ಲ… ಇವರೆಲ್ಲರ ಇಚ್ಛೆ ಮತ್ತು ಯೋಚನೆಗಳು ಹೀಗಿರುವಾಗ ಆ ಕ್ರೂರ ವಿಧಿಯ ಸಂಚು ಬೇರೆಯದ್ದೇ ಆಗಿರುತ್ತದೆ. ಸುಖ ಸಂತೋಷಗಳು ತುಂಬಿದ್ದ ಇವರುಗಳ ಜೀವನದಲ್ಲಿ ನಡೆಯ ಬಾರದ ಘಟನೆ ನಡೆದೇ ಬಿಡುತ್ತದೆ . ಒಂದು ದಿನ ಸಂಜೆಯ ಸಮಯದಲ್ಲಿ ನಯನಶ್ರೀ ಮತ್ತು ಶತಾವರರಿಬ್ಬರು ಭೇಟಿಯಾಗುತ್ತಾರೆ. ಮಾತು ಮರೆತ ಮೌನಿಗಳಂತೆ, ಒಬ್ಬರ ಕಣ್ಣಲಿ ಒಬ್ಬರು ನೋಡುತ, ಈ ಜಗದ ಪರಿವೇ ಇಲ್ಲದೇ, ಪ್ರೀತಿಯ ತೋಟದಲ್ಲಿರುವ, ಬಣ್ಣದ ಚೀಟ್ಟೆಗಳಾಗಿರುತ್ತಾರೆ…. ಸಮಯ ಆಗಲೇ ರಾತ್ರಿ 8.15 ಆಗಿರುತ್ತದೆ, ಶತಾವರ: ಸರಿ ಹೋಗೊಣ ಮನೆಗೆ
ಲಿವಿಂಗ್ ಟುಗೆದರ್
ಲೇಖನ ಲಿವಿಂಗ್ ಟುಗೆದರ್ ಸುಜಾತಾ ರವೀಶ್ ಇಬ್ಬರೂ ಸಮಾನ ಮನಸ್ಕರು ಒಂದೇ ಸೂರಿನಡಿ ವಾಸಿಸುತ್ತಾ ಭಾವನಾತ್ಮಕ ಹಾಗೂ ದೈಹಿಕ ಸಂಬಂಧಗಳನ್ನು ವಿವಾಹ ವ್ಯವಸ್ಥೆ ಇಲ್ಲದೆ ಹೊಂದಿ ಜೀವಿಸುವುದಕ್ಕೆ livein relationship ಅಥವಾ ಸಹಬಾಳ್ವೆ ಪದ್ಧತಿ ಎನ್ನುತ್ತಾರೆ. ಈಗ ಎರಡು ದಶಕಗಳಿಂದೀಚೆಗೆ ಪ್ರಪಂಚದಲ್ಲಿ ಶುರುವಾಗಿರುವ ಹಾಗೂ ಸಮಾಜಶಾಸ್ತ್ರಜ್ಞರು ಮತ್ತು ಮಾನವ ಶಾಸ್ತ್ರಜ್ಞರ ನಿರೀಕ್ಷೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ವ್ಯವಸ್ಥೆ ಇದು ಪ್ರಚಲಿತ ಅಸ್ತಿತ್ವದಲ್ಲಿರುವ ಕುಟುಂಬ ಎಂಬ ಸಾಮಾಜಿಕ ಪರಿಕಲ್ಪನೆಯಿಂದ ಹೊರತಾದ ಹೊಸ ಬದಲಾವಣೆಯ ಅಲೆ ಇದು . ಮನುಷ್ಯ ಒಂದು ಸಾಮಾಜಿಕ ಪ್ರಾಣಿ ಜೀವನವೇ ಸವಾಲು ಹಾಗೂ ಸಮಸ್ಯೆಗಳ ಪಯಣ . ಆಗ ಸಾಹಚರ್ಯದ ಅಗತ್ಯವಿರುತ್ತದೆ . ಅದೇ ಸಂಸಾರ ಮದುವೆಯ ವ್ಯವಸ್ಥೆಗೆ ಕಾರಣೀಭೂತವಾಗುತ್ತದೆ. ಆದರೆ ಈಗಿನ ಸಾಮಾಜಿಕ ಪರಿವರ್ತನೆಗಳ ದಾಳಿ, ಸಾಂಸಾರಿಕ ಬಂಧಗಳ ಶಿಥಿಲತೆ, ಹಳಸಿದ ಸಡಿಲಾದ ಸಂಬಂಧಗಳಿಗೆ ಕಾರಣವಾಗಿ ವಿವಾಹ ವಿಚ್ಛೇದನಗಳಿಗೆ ಕಾರಣವಾಗುತ್ತಿದೆ. ಹಾಗೂ ಈ ರೀತಿ ವಿವಾಹ ವ್ಯವಸ್ಥೆಯ ವಿರುದ್ಧ ಎತ್ತಿದ ಪ್ರಶ್ನೆಯೇ ಈ ಸಹಬಾಳ್ವೆ ಜೀವನ ಪದ್ಧತಿ. ಮೊದಲಿಗೆ ಈ ಪದ್ಧತಿಗೆ ಕಾರಣಗಳೇನು ಎಂಬುದರ ಬಗ್ಗೆ ದೃಷ್ಟಿ ಹರಿಸಿದಾಗ… ಜಾಗತೀಕರಣ ಯಾವುದೇ ಆರ್ಥಿಕ ಬದಲಾವಣೆ ಸಾಮಾಜಿಕ ಮತ್ತು ನೈತಿಕ ಬದಲಾವಣೆಯನ್ನು ತರುತ್ತದೆ. ಕೈಗಾರೀಕರಣದ ಪ್ರಭಾವದಿಂದ ದೀರ್ಘಕಾಲದ ಕೆಲಸ ಒತ್ತಡದ ಜೀವನ ಹಾಗೂ ನಿಷ್ಕ್ರಿಯ ಸಾಮಾಜಿಕ ಜೀವನಗಳು ಮದುವೆಯ ಕಡೆಯಿಂದ ಅನ್ಯ ಸಂಬಂಧಗಳತ್ತ ಆಕರ್ಷಿಸುತ್ತದೆ. ಪಾಶ್ಚಿಮಾತ್ಯೀಕರಣ ಆಧುನೀಕರಣದತ್ತ ಮಾರು ಹೋಗುತ್ತಿರುವ ಯುವ ಜನಾಂಗ ಪಾಶ್ಚಾತ್ಯ ಉಡುಗೊರೆಯಾದ ಲಿವ್ ಇನ್ ರಿಲೇಶನ್ ಶಿಪ್ ಅನ್ನು ಆಹಾರ ವಸ್ತ್ರ ಆಚಾರ ವಿಚಾರದಂತೆ ಇದನ್ನು ಕೂಡ ಅಂಧಾನುಕರಣೆ ಮಾಡುತ್ತಿದೆ. ಇವುಗಳೊಂದಿಗೆ ಜನಸಂಖ್ಯೆಯ ಚಲನಶೀಲತೆ (ಹೆಚ್ಚಿನ ಉದ್ಯೋಗ ನಿಮಿತ್ತ) ಸಹ ತನ್ನದೇ ಕೊಡುಗೆ ನೀಡುತ್ತಿದೆ . ಮಹಿಳಾ ಶಿಕ್ಷಣ ಮಟ್ಟ ಏರಿಕೆ ಪುರುಷರಂತೆ ಸ್ತ್ರೀಯರು ಸಹ ಶಿಕ್ಷಣ ಉದ್ಯೋಗ ಎಲ್ಲ ರಂಗಗಳಲ್ಲೂ ಸಮಾನತೆ ಹೊಂದುತ್ತಿದ್ದಾರೆ. ಹಾಗಾಗಿ ಮದುವೆಯ ವಯಸ್ಸಿನ ಸರಾಸರಿ ಏರಿಕೆ ಮತ್ತು ವೈವಾಹಿಕ ಆಯ್ಕೆಯ ಸ್ವಾತಂತ್ರ್ಯ ಹಾಗೂ ಜೊತೆಯಲ್ಲಿ ಆರ್ಥಿಕ ಸ್ವಾತಂತ್ರ್ಯ ಇಂದಿನ ಯುಗದ ಮಹಿಳೆಯರನ್ನು ಹೆಚ್ಚು ದಿಟ್ಥರಾಗಿಸುತ್ತದೆ. ಹೊಸದಾಗಿ ಸಂಬಂಧ ಬೆಳೆಸುವುದರೊಂದಿಗೆ ಗಂಡ ಹೆಂಡಿರ ನಡುವಣ ಪ್ರತ್ಯೇಕತೆ ಉದ್ವಿಗ್ನತೆ ಘರ್ಷಣೆ ಹೆಚ್ಚಿಸಿ ವಿಚ್ಛೇದನಗಳಿಗೆ ಕಾರಣವಾಗುತ್ತಿದೆ . “ಜೀವನಕ್ಕಾಗಿ ಸತ್ತ ಸಂಬಂಧದ ಹೊರೆ ಹೊರುವುದಕ್ಕಿಂತ ಸಂಬಂಧವನ್ನು ಕೊನೆಗಾಣಿಸಿ ಕೊಳ್ಳುವುದು ಉತ್ತಮ” ಎಂಬ ನಿಲುವಿಗೆ ಅಂಟಿಕೊಳ್ಳುವುದನ್ನು ಕಾಣಬಹುದು. ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆ ಮಹಿಳೆಯರಾಗಲಿ ಪುರುಷರಾಗಲಿ ವೃತ್ತಿ ಜೀವನವೇ ಕೇಂದ್ರಬಿಂದು ಆಗುತ್ತಿದೆ. ಹಾಗಾಗಿ ಮದುವೆಯ ವಯಸ್ಸಿನಲ್ಲಿ ವಿಳಂಬ, ವೈವಾಹಿಕ ಅಡ್ಡಿ ಪಡಿಸುವಿಕೆ ಮದುವೆಯ ಪೂರ್ವಭಾವಿಯಾಗಿಯೋ ಅಥವಾ ಮದುವೆಯವರೆಗಿನ ಸ್ಟಾಪ್ ಗ್ಯಾಪ್ ವ್ಯವಸ್ಥೆ ಆಗಿಯೋ ಈ ಲಿವ್ ಇನ್ ರಿಲೇಷನ್ ಶಿಪ್ ಗಳು ಜನಪ್ರಿಯ ಆಗುತ್ತಿವೆ . ಸಂಸಾರದಲ್ಲಿನ ನಿರ್ಬಂಧ ಅಸಮಾನತೆ ಹಾಗೂ ಮಾನಸಿಕ ದೈಹಿಕ ಹಿಂಸೆಗಳನ್ನು ಮೌನವಾಗಿ ಯಾರೂ ಸಹಿಸುತ್ತಿಲ್ಲ ಹೀಗಾಗಿ ಈ ಪದ್ಧತಿ ಸಾಂಸ್ಥಿಕ ವೈವಾಹಿಕ ಸಂಕೋಲೆಯಿಂದ ಬಿಡಿಸಿಕೊಳ್ಳುವ ಮಾರ್ಗವಾಗಿಯೂ ಪರಿಣಮಿಸಿದೆ . ಆದರೆ ಭಾರತದಂತಹ ಪುರಾತನ ಸಂಸ್ಕೃತಿಯ ದೇಶದಲ್ಲಿ ಇದು ಸರಿಯೇ? ನಿಜಕ್ಕೂ ಇದು ಒಂದು ನೈತಿಕ ಅಧಃಪತನವೇ ಸರಿ. ಮದುವೆ ಎಂಬುದು ಸಮಾಜ ಅಂಗೀಕರಿಸಿದ ರಕ್ಷಣೆ ಕೊಟ್ಟ ಒಂದು ವ್ಯವಸ್ಥಿತ ಒಡಂಬಡಿಕೆ. ನ್ಯಾಯಸಮ್ಮತವೂ ಸಹ . ಆದರೆ ಈ ಲಿವ್ ಇನ್ ಸಂಬಂಧಗಳು ಮನುಷ್ಯರಲ್ಲಿ ಬದ್ಧತೆಯ ಕೊರತೆಯನ್ನುಂಟು ಮಾಡುತ್ತದೆ. ಬಟ್ಟೆ ಬದಲಿಸುವ ಹಾಗೆ ಸಂಗಾತಿಯನ್ನು ಬದಲಾಯಿಸಬಹುದು . ನೈತಿಕ ಸಾಮಾಜಿಕ ಮೌಲ್ಯಗಳು ಪ್ರಪಾತದ ದಾರಿ ಹಿಡಿಯುತ್ತಿರುವ ದ್ಯೋತಕ. ಕುಟುಂಬ ವ್ಯವಸ್ಥೆಯಲ್ಲಿ ಪ್ರಬಲವಾಗಿರುವ ಕರ್ತವ್ಯ’ ತ್ಯಾಗ, ಬದ್ಧತೆ ಮತ್ತು ವಿಧೇಯತೆ ಜಾಗದಲ್ಲಿ ಈ ಸಂಬಂಧ ಸ್ವಾರ್ಥ ,ಸಹವಾಸ ಕಾಮತೃಪ್ತಿ, ಸಮಾನತೆ ಮತ್ತು ಒಗ್ಗಿ ಕೊಳ್ಳುವಿಕೆ ಅಂತಹ ದುರ್ಬುದ್ಧಿ ಬಿತ್ತುತ್ತಿದೆ_ ಸಾಮಾಜಿಕ ಬಂಧಗಳ ಬಗ್ಗೆ ಅಗೌರವ ಸಂಬಂಧಗಳಲ್ಲಿ ಅಸಹನೆ ಅಸಹಿಷ್ಣುತೆಗಳು ಸ್ಯೆ ಕೊರತೆ ಹುಟ್ಟುಹಾಕುತ್ತಿದೆ . ಹಕ್ಕುಗಳು ಜವಾಬ್ದಾರಿಗಳೂ ಇರದ ಜೀವನ ದೀರ್ಘಕಾಲದಲ್ಲಿ ಮಾನಸಿಕ ಸಮಸ್ಯೆಗಳನ್ನು ತರುತ್ತದೆ ಇಲ್ಲಿ ದೈಹಿಕ ಹೊಂದಾಣಿಕೆ ಹಾಗೂ ಭಾವನಾತ್ಮಕ ಅಂಶಗಳೇ ಮುಖ್ಯವಾಗಲಿ ಬೇರೆ ಉತ್ತಮ ಅಂಶಗಳು ಗೌಣವಾಗುತ್ತದೆ . ಸಾಮಾಜಿಕ ಬೇಜವಾಬ್ದಾರಿತನ ಯಾವುದೇ ಭದ್ರತೆ ಇಲ್ಲದ ಸಂಬಂಧಗಳು ಅಕ್ರಮ ಸಂತಾನಗಳಿಗೆ ಅನೈತಿಕತೆಗೆ ಮತ್ತಷ್ಟು ಎಡೆಮಾಡಿಕೊಡುತ್ತದೆ . ಸಾಮುದಾಯಿಕವಾಗಿ ಗೌರವ ಸ್ಥಾನಮಾನಗಳಿರದೆ ನೋವುಗಳನ್ನು ಉಂಟು ಮಾಡುತ್ತದೆ. ಕಾನೂನುಬದ್ಧವಲ್ಲದ ಜನ್ಮ ಕೊಟ್ಟ ಮಕ್ಕಳು ಮತ್ತು ಅವರ ಬೆಳವಣಿಗೆಯಲ್ಲಿ ಅವರ ಮಾನಸಿಕ ಪರಿಸ್ಥಿತಿ ಇವುಗಳ ಬಗ್ಗೆ ಯೋಚಿಸುವಾಗ ಬರೀ ಸ್ವಾರ್ಥಪರತೆ ಕಾಮ ವಾಂಛೆಗಳೇ ಪ್ರಧಾನವಾದ ಈ ಸಂಬಂಧಗಳು ಸಾಧುವೇ ಅಗತ್ಯವೇ ಎಂಬ ಪ್ರಶ್ನೆ ಹುಟ್ಟುತ್ತದೆ . ಭವ್ಯ ಪ್ರಾಚೀನ ಸಂಸ್ಕೃತಿಯ ನಮ್ಮ ದೇಶ ತನ್ನ ಕುಟುಂಬ ವ್ಯವಸ್ಥೆ ಪರಸ್ಪರ ಮಮತೆ ವಾತ್ಸಲ್ಯದಿಂದಲೇ ಪ್ರಪಂಚದಲ್ಲಿ ಪ್ರಸಿದ್ಧ . ಮೌಢ್ಯ ಅಂಧಾನುಕರಣೆಯಿಂದ ಸಚ್ಚರಿತೆಯ ಎಳನೀರನ್ನು ಬಿಟ್ಟು ಕೊಚ್ಚೆ ಗುಂಡಿನ ಕಲುಷಿತ ನೀರಿಗೆ ಆಸೆ ಪಡುವುದು ತರವೇ? *******************************************
ನಾಗರೀಕತೆಯನ್ನು ಆರಂಭಿಸಿದ ಮಿತ್ರರು
ಅಂಕಣ ಬರಹ-01 ಶಾಂತಿ ವಾಸು ರೇಡಿಯೋ ಸಾಮ್ರಾಜ್ಯ ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಬೆಂಗಳೂರು ಎಂಬುದು ಬಹು ನೆಮ್ಮದಿಯ ತಾಣವಾಗಿತ್ತು. ಕರ್ನಾಟಕದ ಬೇರೆ ಬೇರೆ ಹಳ್ಳಿಗಳು, ದೇಶದ ನಾನಾ ರಾಜ್ಯಗಳಿಂದ ಉದ್ಯೋಗ, ಜೀವನವನ್ನರಸಿ ಬಂದವರಿಗೆ ಬದುಕು ಸೃಷ್ಟಿಸುತ್ತಾ, ವಿವಿಧ ಸಂಸ್ಕೃತಿಯ ಜೊತೆಗೆ ಎಲೆಕ್ಟ್ರಿಕಲ್ಸ್ ಹಾಗೂ ಎಲೆಕ್ಟ್ರಾನಿಕ್ಸ್ ಎಂಬ ಆಧುನಿಕತೆಯನ್ನು ಅಳವಡಿಸಿಕೊಳ್ಳುತ್ತಿದ್ದ ಬೆಂಗಳೂರಿನಲ್ಲಿ, ಬೆಳಕಿನ ಮೂಲವಾಗಿ ಪರಿಚಯವಾದ ಮನೆಗಳ ಬಲ್ಬುಗಳು, ಬೀದಿ ದೀಪಗಳು, ಸೈಕಲ್ಲಿಗೆ ಡೈನಾಮ ಲೈಟ್, (ಸೈಕಲ್ಲು ತುಳಿಯುವಾಗ ಪುಟ್ಟ ಬಲ್ಬ್ ಹೊತ್ತಿಕೊಳ್ಳುತ್ತಿತ್ತು.) ಈ ಡೈನಾಮ ಲೈಟುಗಳು ಬರುವ ಮೊದಲು ಬೆಳಕಿನ ಉದ್ದೇಶಕ್ಕಾಗಿ ದೀಪ ಆರಿಹೋಗದಿರಲು ಸೀಮೆಎಣ್ಣೆ ಜೊತೆಗೆ ಎರಡು ಮೂರು ತರಹದ ಎಣ್ಣೆಯನ್ನು ಮಿಶ್ರ ಗೊಳಿಸಿ, ಹಸಿರು ಹಾಗೂ ಕೆಂಪು ಗಾಜಿನ ವಿಭಜಕಗಳಿದ್ದ ಸಣ್ಣ ಬಡ್ಡಿ ದೀಪದಲ್ಲಿ ತುಂಬಿಸಿ, ರಾತ್ರಿ ಹೊತ್ತು ರಸ್ತೆಗಳಲ್ಲಿ ದೀಪ ಉರಿಸಿಕೊಂಡು ಹೋಗುತ್ತಿದ್ದುದನ್ನು ಹಾಗೂ ಈ ವ್ಯವಸ್ಥೆ ಆಗಿನ ಕಾಲಕ್ಕೆ ಕಡ್ಡಾಯವಾಗಿತ್ತು ಎಂಬುದನ್ನು ಹಿರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ. ಇದು ಈ ಶೀರ್ಷಿಕೆಗೆ ಅನ್ವಯವಾಗದಿದ್ದರೂ, ನಮ್ಮಂಥ ಎಷ್ಟೋ ಜನರಿಗೆ ಇದು ಹೊಸ ವಿಷಯವಾದ್ದರಿಂದ ಹೇಳುತ್ತಿದ್ದೇನೆ ಅಷ್ಟೇ. 70ರ ದಶಕದಲ್ಲಿ ಮಧ್ಯಮ ವರ್ಗದವರಿಗೆ ಸ್ಕೂಟರು, ಕ್ಯಾಮೆರಾಗಳು, ಲೈಟರಿನಲ್ಲಿ ಉರಿಯುವ ಗ್ಯಾಸ್ ಸ್ಟವುಗಳು ಕೈಗೆಟುವ ಹಾಗಾದುವಲ್ಲದೆ, ಎಲೆಕ್ಟ್ರಾನಿಕ್ ಹಾಗೂ ಎಲೆಕ್ಟ್ರಿಕಲ್ಲಿನ ವಸ್ತುಗಳಾದ ಟ್ಯೂಬ್ ಲೈಟು, ಜನರೇಟರ್, ಆಂಟೆನಾ ಇದ್ದ ಟ್ರಾನ್ಸಿಸ್ಟರ್, ಎಲೆಕ್ಟ್ರಿಕ್ ಇಸ್ತ್ರಿಪೆಟ್ಟಿಗೆ, ಮಿಕ್ಸಿ, ನೀರು ಕಾಯಿಸುವ ಕಾಯಿಲ್, ಗೀಸರ್, ಕ್ಯಾಸೆಟ್ಟುಗಳಲ್ಲಿ ಹಾಡು ಕೇಳಬಹುದಾದ ಸ್ಟೀರಿಯೋ, , ಗ್ರಾಮಾಫೋನ್, ಕಾರ್ಯಕ್ರಮ ಹಾಗೂ ಸಮಾರಂಭದಲ್ಲಿ ಎತ್ತರದ ಕಂಬ, ಮರಗಳು, ಕಟ್ಟಡಗಳ ಮೇಲೆ ಕಟ್ಟುವ ಸ್ಪೀಕರುಗಳು, ನೀರಿನ ಮೋಟರು, ಟೇಬಲ್ ಫ್ಯಾನುಗಳು, ಸೀಲಿಂಗ್ ಫ್ಯಾನುಗಳು, ಗ್ರೈಂಡರ್, ಮನೆಯ ಮೇಲೆ ಆಂಟೆನಾ ಕಟ್ಟಬೇಕಿದ್ದ ಟೆಲಿವಿಷನ್, ಆಂಟೆನಾ ಇದ್ದ ಫೋನು, ಮೈಕುಗಳು, ಹೀಗೆ ಒಂದೊಂದಾಗಿ ಪರಿಚಯವಾಗುತ್ತಾ 20 ರೂಪಾಯಿಗೆ ಒಂದು ಆಟೋಮ್ಯಾಟಿಕ್ ಕೈಗಡಿಯಾರ ಎಂಬುದಂತೂ ಆಗಿನ ಒಂದು ದೊಡ್ಡ ಕ್ರಾಂತಿಕಾರಿ ಬೆಳವಣಿಗೆಯಾಗಿ ಹೋಯಿತು. ಮೇಲೆ ಹೇಳಿದ ವಿಷಯವು, ಬೆಂಗಳೂರಿನ ಜನಸಾಮಾನ್ಯರು 70ರ ದಶಕದಲ್ಲಿ, ಹಲವಾರು ಹೊಸತುಗಳನ್ನು ಹಂತಹಂತವಾಗಿ ಅಳವಡಿಸಿಕೊಳ್ಳುತ್ತಾ ಜೀವನಶೈಲಿಯನ್ನು ಉನ್ನತವಾಗಿಸಿಕೊಂಡು, ಬೆಳವಣಿಗೆಗೆ ಒಗ್ಗಿಕೊಂಡ ಸಂಕ್ಷಿಪ್ತ ಪಕ್ಷಿನೋಟಕ್ಕೆ ಸಾಕ್ಷಿಯಾದರೆ, ಅದೇ ದಶಕಕ್ಕೆ ಎಂಟು ಅಥವಾ ಹತ್ತು ವರ್ಷದ ಮಕ್ಕಳಾಗಿದ್ದವರಿಗೆ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಾದವರಿಗೆ ರೇಡಿಯೋದಲ್ಲಿ ಬಿತ್ತರವಾಗುತ್ತಿದ್ದ ಜಾಹೀರಾತು ಎಂದಾಕ್ಷಣ ಇಂದಿಗೂ, ಎಂದಿಗೂ ನೆನಪಾಗುವುದು ಬಿನಾಕ ಹಲ್ಲುಪುಡಿ, ಗೋಪಾಲ್ ಹಲ್ಲುಪುಡಿ, ಕೋಲ್ಗೇಟ್ ಹಲ್ಲುಪುಡಿ, ವೀಕೋ ವಜ್ರದಂತಿ, ಲೈಫಬಾಯ್ ಸೋಪು ಎನ್ನುವುದು ಆಗಾಗ ಮೇಲುಕುಹಾಕುವ ವಿಚಾರ. ಆಗೆಲ್ಲ ಸುದ್ದಿ ಹಾಗೂ ಜಾಹೀರಾತಿನ ಮಾಧ್ಯಮವಾಗಿ ಬಾವುಟಗಳು, ಪೋಸ್ಟ್ ಕಾರ್ಡುಗಳು, ಟೆಲಿಗ್ರಾಂ ಹಾಗೂ ಪತ್ರಿಕೆಗಳು ಮಾತ್ರ ಪ್ರಚಲಿತದಲ್ಲಿದ್ದು, ಏನೇ ಸುದ್ದಿ ಇದ್ದರೂ ಮಾರನೇ ದಿನವೋ ಅಥವಾ ಎಂದಿಗೂ ತಿಳಿಯುತ್ತಿತ್ತು. ಎಷ್ಟೋ ವಿಷಯಗಳು ಕೆಲವೊಮ್ಮೆ ತಿಳಿಯುತ್ತಲೇ ಇರಲಿಲ್ಲವೆಂಬುದು ಸಾರ್ವಕಾಲಿಕ ವಿಪರ್ಯಾಸವೇ ಹೌದು. ಟೆಲಿಗ್ರಾಂ ಎಂದರೆ ಅಳಿಸುವುದಕ್ಕೇ ಬರುವುದು ಎನ್ನುವುದು ಆಗಿನ ಜನರ ನಂಬಿಕೆಯಾಗಿತ್ತು. ಹೀಗಿರುವಾಗ ಕಡಿಮೆ ವಿದ್ಯುತ್ತನ್ನು ಬಳಸಿ, ಆಗಿಂದಾಗ್ಗೆ ಸುದ್ದಿ ತಿಳಿದುಕೊಳ್ಳವ ಹಾಗೂ ಜನರ ಮನರಂಜನೆಗಾಗಿ ಬಂದ ಮೊದಲ ಹೆಜ್ಜೆ ಗುರುತಾದ ರೇಡಿಯೋವನ್ನು ಶ್ರೀಸಾಮಾನ್ಯರು ಸಂತಸದಿಂದಲೇ ಸ್ವಾಗತಿಸಿದ್ದರು. ಕರ್ನಾಟಕದ ಜನಸಾಮಾನ್ಯರಿಗೆ ಹಿಂದಿ ಭಾಷೆಯ ಪರಿಚಯ ಮಾತ್ರ ರೇಡಿಯೋ ಬಂದ ನಂತರವೇ ಆದದ್ದು ಸುಳ್ಳಲ್ಲ. ಹಾಗಾಗಿಯೇ 1940 ರಿಂದ 1980 ರವರೆಗಿನ ಕಾಲಘಟ್ಟವನ್ನು ಹಿಂದಿ ಹಾಡುಗಳ “ಸುವರ್ಣ ಯುಗ” ಎಂದು ಕರೆಯಬಹುದು. “ಮರ್ಫಿ” ಸಂಸ್ಥೆಯ ರೇಡಿಯೋಗಳು ಆಗಿನ ಕಾಲದ ಹೆಮ್ಮೆಯ ಉತ್ಪನ್ನವಾಗಿತ್ತು. ಶೆಲ್ಲಿನ ಸಹಾಯದಿಂದ ಚಲಾಯಿಸಬಹುದಾಗಿದ್ದ ಟ್ರಾನ್ಸಿಸ್ಟರುಗಳಿಗೆ ವಿದ್ಯುತ್ ಬೇಕಿರಲಿಲ್ಲವೆಂಬುದು ಆ ದಿನಗಳ ವಿಶೇಷ. ಪೆಟ್ಟಿಗೆ ಗಾತ್ರದ ರೇಡಿಯೋನಲ್ಲಿ ಮುಂದೆ ಇದ್ದ ಬ್ಯಾಂಡಿನ ಸಹಾಯದಿಂದ ಅತ್ತಿತ್ತ ಓಡಾಡುತ್ತಿದ್ದ ಮುಳ್ಳನ್ನು ನಿರ್ದಿಷ್ಟ ಸಂಖ್ಯೆಯ ಮೇಲೆ ನಿಲ್ಲಿಸಿದರೆ ಹಾಡುಗಳು, ವಾರ್ತೆಗಳು ಹಾಗೂ ಕ್ರಿಕೆಟ್ಟಿನ ಕಾಮೆಂಟರಿಯನ್ನು ಕೇಳಬಹುದಿತ್ತು. ತರಂಗಾಂತರದ ಮೂಲಕ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ಹಲವಾರು ಅಡಚನೆಗಳಿಂದ ಕೂಡಿರುತ್ತಿದ್ದು, ಮಧ್ಯೆ ಅಲೆಯ ಶಬ್ದ ಕೇಳುತ್ತಿತ್ತು. ಅನೇಕ ಸಂಧರ್ಭಗಳಲ್ಲಿ ಏನೂ ಕೇಳಿಸದೆಯೂ ನಿಂತು ಹೋಗುತ್ತಿತ್ತು. ಆಗ ಅಕ್ಕಪಕ್ಕದ ಮನೆಗಳಲ್ಲಿ ಪ್ರಸಾರವಾಗುತ್ತಿದ್ದ ಬಾನುಲಿಯನ್ನು ಜನ ಅರಸಿ ಹೋಗುತ್ತಿದ್ದುದು ಆ ಕಾಲದ ಜನರಿಗೆ ರೇಡಿಯೋ ಪ್ರೀತಿ ಎಷ್ಟಿತ್ತು ಎಂದು ತಿಳಿಯುತ್ತದೆ. ಇಷ್ಟೇ ಅಲ್ಲ, ಉದ್ಯಾನವನಗಳಲ್ಲಿ ಪ್ರತಿ ಸಂಜೆ (ಭಾನುವಾರ ಹೊರತುಪಡಿಸಿ) ಒಂದು ನಿರ್ಧಿಷ್ಟ ಸಮಯದಲ್ಲಿ ಪ್ರಸಾರವಾಗುತ್ತಿದ್ದ ರೇಡಿಯೋ ಕಾರ್ಯಕ್ರಮ ಕೇಳಲು ಜನರು ತಂಡೋಪತಂಡವಾಗಿ ಜಮಾಯಿಸಿರುತ್ತಿದ್ದರು. ಉದ್ಯಾನದ ಮಧ್ಯೆ, ರೇಡಿಯೋ ಹಾಕಿ ಎತ್ತರದ ಕಂಬಗಳ ಮೇಲೆ ಸ್ಪೀಕರುಗಳನ್ನು ಕಟ್ಟಿ ಆ ಮೂಲಕ ಜನರಿಗೆ ಸುದ್ದಿಗಳು, ಹಾಡು, ಕ್ರಿಕೆಟ್ ಕಾಮೆಂಟರಿ, ಶಾಸ್ತ್ರೀಯ ಸಂಗೀತ ಹೀಗೆ ಅನೇಕ ಕಾರ್ಯಕ್ರಮಗಳನ್ನು ಕೇಳಿಸಲಾಗುತ್ತಿತ್ತು. ಕೆಲವೊಮ್ಮೆ ರೇಡಿಯೋಗಳ ಜೊತೆಜೊತೆಗೆ ಆಗ ತೆರೆಕಂಡ ಕಪ್ಪುಬಿಳುಪು ಸಿನಿಮಾಗಳನ್ನು, ಆ ದಿನಗಳಲ್ಲಿ ರಾತ್ರಿ ಹೊತ್ತು ರಸ್ತೆಗಳಲ್ಲಿ ಪ್ರೊಜೆಕ್ಟರ್ ಮೂಲಕ ಎತ್ತರದ ಪರದೆ ಮೇಲೆ ಪ್ರದರ್ಶಿಸುತ್ತಿದ್ದರು. ಮಕ್ಕಳಿಗಾಗಿ ಮೌಲ್ಯಾಧಾರಿತ ಕನ್ನಡದ ಸಿನಿಮಾಗಳನ್ನು ಶಾಲೆಗಳಲ್ಲಿಯೂ ಪ್ರದರ್ಶಿಸುತ್ತಿದ್ದರು. ಮಿಕ್ಕಂತೆ ಚಿತ್ರಮಂದಿರಗಳಿಗೆ, ಟೆಂಟುಗಳಿಗೆ ಹೋಗಿ ದುಡ್ಡು ಕೊಟ್ಟು ನೋಡಬೇಕಾಗಿತ್ತಾಗಲೀ, ಈಗಿನಂತೆ ಟಿವಿಯ ವಿವಿಧ ಚಾನೆಲ್ಲುಗಳು, ಕಂಪ್ಯೂಟರ್, ಲ್ಯಾಪ್ ಟಾಪ್ ಮೊಬೈಲ್ ಅಥವಾ ಟ್ಯಾಬ್ಲೆಟ್ಟುಗಳು ಆಗ ಇರಲಿಲ್ಲ. ಹಾಗಾಗಿ ಸಿನಿಮಾ ಹಾಡುಗಳನ್ನು ಕೇಳಲು ರೇಡಿಯೋ ಎಂಬುದು, ಆಗಿನ ಕಾಲದ ಜನರ ಆಪ್ತಮಿತ್ರ ಎಂದರೆ ತಪ್ಪಾಗದು. *************************************************
ನಾಗರೀಕತೆಯನ್ನು ಆರಂಭಿಸಿದ ಮಿತ್ರರು Read Post »









