ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಬದುಕು ಎಷ್ಟೊಂದು ಸುಂದರ

ಲೇಖನ ಚಿಕ್ಕ ಪುಟ್ಟ ಸಂಗತಿಗಳಲ್ಲೇ ಸಂತೃಪ್ತಿ ಕಾಣುತ್ತಿರಿ ಆಗ ಬದುಕು ಎಷ್ಟೊಂದು ಸುಂದರ. ಪಲ್ಲವಿ ಪ್ರಸನ್ನ ಬೆಳಗಾಗಲೆoದೆ ಕತ್ತಲು ,ಗೆಲ್ಲಲೆoದೆ ಸೋಲು,ನಗುವಿನ ಜೊತೆ ದುಃಖ ಇದ್ದೇ ಇರುತ್ತದೆ ,ಅದರೂ ಚಿಕ್ಕ ಪುಟ್ಟ ಸಂಗತಿಗಳಲ್ಲೇ ನಾವು ಆನಂದ ಅನುಭವಿಸುತ್ತೇವಲ್ಲ ಅದು ನಮಗೆ ಅಪ್ಪಟ ಆರೋಗ್ಯ ,ಉಲ್ಲಾಸಿತರಾಗಿಡಲು ಸಹಾಯಮಾಡುತ್ತದೆ. ತಲೆ ಬಾಚಿಕೊಳ್ಳುವಾಗ ಉದುರಿದ ಕೂದಲ ಬಗ್ಗೆ  ಕೊರಗದೇ ಇದ್ದ ಕೂದಲನ್ನು ನೇವರಿಸುತ್ತ ಅದರ ಆರೈಕೆಯಲಿ ಮಗ್ನವಾಗಿ ಖುಷಿ ಅನುಭವಿಸಬೇಕು. ಒಂದು ಒಳ್ಳೆ ಪುಸ್ತಕವನ್ನು ಓದುವಾಗ ಅದರ ಇಂಚಿಂಚೂ ,ಪ್ರತೀ ಸಾಲನ್ನೂ ಸವಿಯುತ್ತ ಅದರಲ್ಲಿ ನಿಮ್ಮ ಪರಕಾಯ ಪ್ರವೇಶವಾಗುವಂತೆ ಓದಿದರೆ ಆ ಓದಿನಲ್ಲೂ ಒಂಥರಾ ನಿರಾಳ.ಆಕಳು ಕರೆಯುವಾಗಲೂ ಸಹ ಹಾಡುಹೇಳಿಕೊಳ್ಳುತ್ತಾ ಅದರ ಮೈ ದಡವಿ ,ಅದ್ಭುತ ಅನುಭವ ನಿಮಗಾಗುತ್ತದೆ. ಮಗು ನೀವೊಬ್ಬರೆ ಇರುವಾಗ ಅಪ್ಪಿಕೊಂಡು ಮುದ್ದು ಮಾಡುವುದ ಅನುಭವಿಸಿ ನೋಡಿ ಅದು ಬಿಟ್ಟು ನನಗೆ ಕೆಲಸ ಇದೆ ಹೋಗೋ ಆಚೆ ಎಂದು ದೂರ ತಳ್ಳಿದರೆ ಪಾಪ ಮಗುವಿಗೂ ಬೇಸರ ನಿಮಗೂ ಕಳವಳ.ನನ್ನ ಮಗನಿಗೆ ನಾನು ಅವನು ಮಲಗಿ ನಿದ್ರಿಸುವಾಗ ಸಣ್ಣದಾಗಿ ಮುತ್ತು ಕೊಡಬೇಕೆನಿಸುತ್ತದೆ ,ನನ್ನ ಯಜಮಾನರು ಮಲಗಿರುವವನ ಏಕೆ ಮುದ್ದೀಸ್ತೀಯಾ ಅಂತ ಬಯ್ದರೂ ಮೆಲ್ಲಗೆ ಎಚ್ಚರ ಆಗದಂತೆ ಪಪ್ಪಿ ಕೊಡುತ್ತೇನೆ .ಇದರಲ್ಲೇ ಏನೋ ಒಂಥರಾ ಹಿತ .ನೀವೂ ಅನುಭವಿಸಿ ನೋಡಿ. ಹಾಗೆಯೇ  ತರಕಾರಿ ಗಿಡಕ್ಕೆ ನೀರುಣಿಸುವುದು, ಹೂವಿನ ಗಿಡದ ಆರೈಕೆಯಲ್ಲಿ ಹೂವು ನಳ ನಳಿಸುವಂತಾದರೆ ಅದರ ಸೌಂಧರ್ಯವನ್ನು ಆಸ್ವಾಧಿಸುತ್ತ ,ನಮಗೆ ಎಷ್ಟು ಸಮಯವಿದ್ದರೂ ಅದು ಕಡಿಮೆಯೇ, ಹಾಗೆಯೇ ಏನಾದರೂ ಬರೆಯುವ ಹವ್ಯಾಸವಿದ್ದರೆ ಒಂಟಿಯಾಗಿ ಕುಳಿತು ಅನುಭವಿಸಿ ಬರೆದಾಗ ನಾಲ್ಕು ಜನರು ಚೆಂದ ಬರಿದ್ಯೆ ಎನ್ನುವ ಮಾತು ನಮ್ಮಲ್ಲಿ ಸಾರ್ಥಕ್ಯ ಭಾವನೆ ,ಸ್ಫೂರ್ತಿ ಮೂಡಿಸುತ್ತದೆ .ಇಷ್ಟೆಲ್ಲದರ ಮಧ್ಯೆ ನಮಗೆ ಬೇರೆಯವರ ಸುದ್ಧಿ ಹೇಳಲು ,ಕೇಳಲು ಸಮಯವೂ ಇರುವುದಿಲ್ಲ,ಇದ್ದರೂ ಇದು ಕಾಲ ಹರಣದ ಜೊತೆ ನಮ್ಮ ನೋವಿಗೆ ಕಾರಣ. ಯಾರೇನೆಂದರೂ ಒಂಟಿಯಾಗಿ ನಮ್ಮ ಚಟುವಟಿಕೆಯಲ್ಲಿ ತೊಡಗುವುದೇ ಉತ್ತಮ. ಮೌನಕ್ಕಿಂತ ಸುಂದರ ಮಾತಿಲ್ಲ.ಕಾಡಿ ಬೇಡಿ ಪಡೆಯುವ ಮಿತ್ರರಿಗಿಂತ ,ನೆರೆ ಹೊರೆ ಯವರಿಗಿಂತ ನಿಸರ್ಗ ತುಂಬಾ ನಿಸ್ವಾರ್ಥಿ ,ಅದು ನಮಗೆ ಏನೆಲ್ಲ ಕೊಟ್ಟಿತು ,ಏನೂ ಬಯಸುವುದಿಲ್ಲ ,ನಿಮ್ಮದೇ ತೋಟ ಇದ್ದರೆ ಒಂದು ಸುತ್ತು ತಿರುಗಿ ಹಸಿರನ್ನು ಆಸ್ವಾದಿಸಿ . ಇನ್ನೂ ಅಡಿಗೆ ಕೂಡಾ ಪ್ರೀತಿಯಿಂದ ಮಾಡಿ ಬಡಿಸಿ ,ಅದರಲ್ಲಿ ಮನೆಯ ಜನಗಳ ತೃಪ್ತಿ ಗಮನಿಸಿ ಇದರಿಂದ ನೀವು ಊಟ ಮಾಡದಿದ್ದರೂ ನಿಮ್ಮ ಹೊಟ್ಟೆ ತುಂಬುತ್ತದೆ. ಸದಾ ಒಂದಲ್ಲಾ ಒಂದು ಕೆಲಸದಲ್ಲಿದ್ದರೆ ಯಾವ ಚಿಂತೆ ನೋವು ನಮಗೆ ಬಾಧಿಸುವುದಿಲ್ಲ.ಇದು ನಾನು ಕಂಡು ಕೊಂಡ ಸತ್ಯ. ಇದೇ ಅನಿವಾರ್ಯ,ಇದೇ ಸತ್ಯ,ಇದೇ ಜೀವನ ಎಂದು ನಮ್ಮ ಮನಸ್ಸಿಗೆ ನಾವೇ ಸಾಂತ್ವನಿಸುತ್ತ ಅಳುಕನ್ನು ದೂರ ಮಾಡುತ್ತಾ ಅಲ್ಲೊಂದು ಶಾಂತಿ,ಪ್ರೀತಿ ,ಸಹನೆಯ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು.ಆವಾಗ ನಿಮ್ಮ ಜೀವನ ಸದಾ  ಸುಂದರವಾಗಿರುತ್ತದೆ. *************************************

ಬದುಕು ಎಷ್ಟೊಂದು ಸುಂದರ Read Post »

ನಿಮ್ಮೊಂದಿಗೆ

ಗಜಲ್

ಗಜಲ್ ಶೈಲಜಾ.ವಿ.ಕೋಲಾರ ಊರಿಗೆ ಊರೇ ಬೆಂಕಿಯಲ್ಲಿ ಬೇಯುತ್ತಿದೆ ಕಾಯುವರಾರಿಲ್ಲಿಜಾತಿಗೆ ಜಾತಿ ಜಿದ್ದಾಜಿದ್ದಿ ಶಾಂತಿ ಸೊರಗುತ್ತಿದೆ ಕಾಯುವರಾರಿಲ್ಲಿ ಕಳೆ ಬೆಳೆದ ಹೊಲದಲ್ಲಿ ಬೆಳೆ ಬೆಳೆಯಲು ಜಾಗವುಂಟೇಕೂಳಿಲ್ಲದ ಹಸುಳೆಯ ಕೂಗು ಒಣಗುತ್ತಿದೆ ಕಾಯುವರಾರಿಲ್ಲಿ ಸ್ವಸ್ಥ ಸಂದೇಶ ಹೊತ್ತುಬಂದ ಬಿಳಿ ಪಾರಿವಾಳ ಕೆಂಪಾಗಿ ಹಾರುತ್ತಿದೆಗಾಯ ಒಸರುವ ರಕ್ತಕೆ ಗಾಳಿ ಗೋಳಾಡುತ್ತಿದೆ ಕಾಯುವರಾರಿಲ್ಲಿ ಮೇಲು ಕೀಳೆಂಬ ಬೇರು ಬಲವಾಗಿ ಮತ ಧರ್ಮ ಸಿಟಿಲೊಡೆದಿದೆಊರ ಕೆರೆ ಜಾಲಿ ಮರದ ಮುಳ್ಳು ನಂಜೇರುತ್ತಿದೆ ಕಾಯುವರಾರಿಲ್ಲಿ ಹಲವು ಹೂಗಳು ಒಂದೇ ಮಾಲೆಯಲಿ ನೋಟ ಸೆಳೆದಿವೆಕುರಬುವ ಕೈಗೆ ಮಾತಿಲ್ಲದ ಶೈಲವೂ ನೋಯುತ್ತಿದೆ ಕಾಯುವರಾರಿಲ್ಲಿ ***************************

ಗಜಲ್ Read Post »

ಕಾವ್ಯಯಾನ

ಪವರ್ ಲೂಮ್…!

ಪವರ್ ಲೂಮ್…!(ನೇಕಾರನ ಸ್ವಗತ) ಡಾ. ಅರಕಲಗೂಡು ನೀಲಕಂಠ ಮೂರ್ತಿ ಹೊತ್ತು ಕೂಡ ಮೂಡದ ಹೊತ್ತಿಗೆಈಜುಗಾರ ತುಂಬು ಹೊಳೆ ಧುಮಿಕಿದ ಹಾಗೆ,ಮೈಮುರಿವ ಆಯಾಸದಲುಒಂದು ದಿನ ತಪ್ಪದ ಹಾಗೆಗುಂಡಿಯೊಳು ಇಳಿದರಾಯ್ತು – ಕಾಲೊದರಿ…‘ತನ್ನ ಪುಟ್ಟ ಎಳೆಯ ಹಾಸುಹೊಕ್ಕಲಿನೂಲಿಗೇ ಅರಿವೆ ನೇಯುವ ಸಿರಿಲಾಳಿಗೋ ಮುಗಿಲಂತೆ ಗುಡುಗಿಹರಿದೋಡುವ ತವಕ!’ ನೇಯುವುದುನಮಗೆ ಅಂತರಂಗದಲಿ ಒಪ್ಪಿಅಪ್ಪಿದ ಕಸುಬುಹಗಲಿರಲಿ ಇರುಳಿರಲಿಅಥವ ನಡುರಾತ್ರಿಯೇ ಇರಲಿಬೆತ್ತಲೆ ಬೆಚ್ಚಗೆ ಮುಚ್ಚುವ ಬದುಕಲಿಮನೆಯ ಒಬ್ಬೊಬ್ಬರಿಗೂ ಕೈತುಂಬ ಕೆಲಸ!ಇಷ್ಟಾದರೂ ಒಂದೆರಡು ನವೆದ ಅಂಗಿತೇಪೆಯಾದ ಪಂಚೆ ನಮ್ಮೊಡಲ ಮುಚ್ಚಲುಒಳಗಿರದು ಒಂದು ಕಾಚ ಎಂದೂ! ದಢಕ್ಕನೆ-ನಮ್ಮ ತುತ್ತಿನ ಗಣಿಮಗ್ಗದ ಎರಡಡಿ ಗಣಿಒಮ್ಮೆಲೆ ಬಿದ್ದು ಮಣ್ಣಾದ ಮನೆ…ಎಲ್ಲ ತಟಸ್ಥ ನಿಶಬ್ದ!ಕುಟುಂಬದ ಎಲ್ಲ ಕೈಕಾಲು ಕಚ್ಚಿತುಳಿದು ಮೆರೆದ ವಿದ್ಯುತ್ ತಂತಿ!ಎಲ್ಲಿ ಯಾವ ದೇವರ ಮೊರೆಜಠರದ ನಿಲ್ಲದ ಕೊರೆತದ ಕರೆಗೆ..ಹರಿದುಹೋದ ಬಟ್ಟೆಬಡ ಬದುಕುಕ್ಷಣ ಕ್ಷಣ ಚೂರುಚೂರಾಗಿ… ದಾರ ತುಂಡಾಗಿ ಲಾಳಿ ನಿಂತ ಕ್ಷಣಹರಿದ ದಾರಕ್ಕೆ ಮತ್ತೆ ಗಂಟುಅಥವಾ ಅಂಟು –ಮತ್ತೆ ಲಾಳಿ ಪಯಣ!ಅಂದು ಒಂದೊಮ್ಮೆ…ಈಗ-ನಾನೇ ನಿಂತು ಹೋದ ಘಳಿಗೆಎಲ್ಲಿ ಹುಡುಕುವುದು ಈ ಲಾಳಿಮುಲಾಮು ಕಷಾಯ ನನಗಾಗಿಎತ್ತಿ ಕೂರಿಸಲು ನನ್ನ ಮತ್ತೆಮಗ್ಗದೊಳಗೆನೂಲಿನಲಿ ಹಚ್ಚಲು ಬೆಳಕಿನ ಹೊನಲು…! ********************************** .

ಪವರ್ ಲೂಮ್…! Read Post »

ಇತರೆ, ಪ್ರಬಂಧ

ಬೀದಿಯ ಪ್ರಪಂಚ….

ಲಲಿತ ಪ್ರಬಂಧ ಬೀದಿಯ ಪ್ರಪಂಚ…. ಟಿ.ಎಸ್.ಶ್ರವಣಕುಮಾರಿ ಹಾದಿ ಬೀದಿಗಳಿಗೆ ತನ್ನದೇ ಒಂದು ಆಕರ್ಷಣೆಯಿದೆ. ಅದರದ್ದೇ ಒಂದು ಪ್ರಪಂಚ. ಎಂಥ ಅಳುತ್ತಿರುವ ಪುಟ್ಟ ಮಕ್ಕಳನ್ನೂ ಎತ್ತಿಕೊಂಡು ಬೀದಿಗೆ ಕರೆದುಕೊಂಡು ಬಂದರೆ ಕೆಲವೇ ಕ್ಷಣಗಳಲ್ಲಿ ಅವುಗಳ ಅಳು ಮಾಯ. ಅವುಗಳಿಗೆ ತೋರಿಸುವುದಕ್ಕೆ ಇಡಿಯ ಪ್ರಪಂಚವೇ ಅಲ್ಲಿದೆ. “ಪುಟ್ಟೂ ಅಲ್ನೋಡು ಕಾರು.. ಬಂತು ಬಂತು ಬಂತು…. ಈಗ ಸ್ಕೂಟರ್ ನೋಡೋಣ.. ಮಾಮಾ ಬಂದ್ಮೇಲೆ ಸ್ಕೂಟರ್‌ನಲ್ಲಿ ರೌಂಡ್ ಹೋಗ್ತೀಯಾ…  ಇದೇನಿದು..? ಸ್ಕೂಲು ವ್ಯಾನು.. ಮುಂದಿನ್ವರ್ಷದಿಂದ ನೀನೂ ಸ್ಕೂಲಿಗೆ ಹೋಗ್ತೀಯಾ ಅಣ್ಣಾ ತರ…. ಇಲ್ನೋಡು ಮರ.. ಅಬ್ಭಾ! ಎಷ್ಟೊಂದು ಹೂವು ನೋಡು… ಅಲ್ನೋಡು ಕಾಕಿ `ಕಾವ್ ಕಾವ್’ ಅದರ ಬಳಗಾನೆಲ್ಲಾ ಕರೀತಿದೆ. ಹೌದಾ.. ಹಾರಿಹೋಯ್ತಾ ಅದು. ಅಲ್ಲೇ ನೋಡ್ತಾ ಇರು ಈಗ ಗಿಣಿಮರಿ ಬರತ್ತೆ ಅಲ್ಲಿ… ನೋಡ್ದ್ಯಾ ನೋಡ್ದ್ಯಾ ಎಷ್ಟು ಚೆನ್ನಾಗಿದೆ ನೋಡು.. ಈಗ ನೋಡು ಅದರ ಫ್ರೆಂಡೂ ಬಂತು.. ಏನೋ ಮಾತಾಡ್ಕೊಂಡು ಒಟ್ಗೆ ಹಾರೋದ್ವು. ಇಲ್ನೋಡಿಲ್ನೋಡು ಪಕ್ಕದ್ಮನೆ ಮೀನಾ ಅಜ್ಜಿ ಒಣಗಿ ಹಾಕಿರೋ ಬೇಳೇನ ಎಷ್ಟೊಂದು ಗುಬ್ಬಿಗಳು ತಿಂತಾ ಇವೆ.” ಅಷ್ಟರಲ್ಲಿ ಎದುರಂಗಡಿಯ ಬದರಿ ಮಾಮ ಪುಟ್ಟೂನ ಕರೀತಾನೆ “ಬರ್ತೀಯಾ ನಮ್ಮಂಗಡೀಗೆ ಬಿಸ್ಕತ್ತು, ಚಾಕಲೇಟು ಎಲ್ಲಾ ಕೊಡ್ತೀನಿ.” “ಆಮೇಲ್ಬರ್ತೀನಿ” ಅನ್ನೂ ಮಾಮಂಗೆ… ಅಲ್ನೋಡು ತರಕಾರಿ ಗಾಡಿ ಬರ್ತಾ ಇದೆ. ಅಜ್ಜೀನ ಕೇಳ್ಕೊಂಡು ಬರೋಣ್ವಾ ಏನು ತರಕಾರಿ ಬೇಕೂಂತ” ….. ಹೀಗೆ ಮಾತಾಡಿಸ್ತಾ ಇದ್ರೆ ಟೈಂಪಾಸಾಗದೆ ಅಳ್ತಾ ಇದ್ದ ಮಗು ಬೇರೆ ಪ್ರಪಂಚಕ್ಕೇ ಹೋಗ್ಬುಡತ್ತಲ್ವಾ… ಮಗೂನೆ ಯಾಕೆ?!.. ನಮಗೂ ಮನೆಯ ಏಕತಾನತೆ ಬೇಸರ ಬಂದರೆ ಒಂದು ಸ್ವಲ್ಪ ಹೊತ್ತು ಮನೆಯ ಮುಂದೋ ಅಥವಾ ಬಾಲ್ಕನಿಯ ಕಿಟಕಿಯೆದುರೋ ಕೂತು ಹಾಗೇ ಬೀದಿಯ ಕಡೆ ನೋಡುತ್ತಿದ್ದರೆ ಎಷ್ಟು ವೈವಿಧ್ಯಮಯ ಪ್ರಪಂಚದಲ್ಲಿ ನಾವೂ ಕಳೆದುಹೋಗುತ್ತೇವೆ…. ಏಳುವಾಗಲೇ `ಸೊಪ್ಪೋ ಸೊಪ್ಪು’ ಎಂದು ಕೂಗಿಕೊಂಡು ಬರುವ ಮುದುಕನ ಕರೆಯಿಂದಲೇ ನನಗೆ ದಿನವೂ ಬೆಳಗಾಗುವುದು. ಬೆಳಗಿನ ಐದು ಗಂಟೆಗೆ ಮುಲ್ಲಾ `ಏಳಿ ಬೆಳಗಾಯಿತು’ ಎಂದು ಕರೆದಾಗ ಎಚ್ಚರಾದರೂ `ಸ್ವಲ್ಪ ಹೊತ್ತು ಬಿಟ್ಟು ಏಳೋಣ’ ಎಂದು ಮುದುರಿಕೊಂಡವಳನ್ನು ಆರೂವರೆಯಾಯಿತು ಇನ್ನಾದರೂ ಏಳು ಎಂದು ಎಬ್ಬಿಸುವುದು ಸೊಪ್ಪಿನವನ ಕರೆಯೇ. ಎದ್ದ ಐದು ಹತ್ತು ನಿಮಿಷಗಳಲ್ಲಿಯೇ `ಹಾಲು’ ಎಂದು ಕೂಗುತ್ತಾ ಹಾಲಿನ ಪ್ಯಾಕೆಟ್ಟನ್ನು ತಂದಿಡುವ ಬದರಿ. `ಹೂವು’ ಎಂದು ಹೂವಿನ ಸರವನ್ನು ಬಾಗಿಲಿಗೆ ಸಿಕ್ಕಿಸಿ ಹೋಗುವ ಹೂವಮ್ಮ. ಕಾಫಿಯ ಲೋಟ ಹಿಡಿದು ಬರುವ ವೇಳೆಗೆ ದಿನ ಪತ್ರಿಕೆ ಎಸೆದು ಹೋಗುವ ಹುಡುಗ…. ಎಲ್ಲರೂ ಹೊರಗಿನ ಜಗತ್ತಿನ ಸಂಪರ್ಕವಾಹಕರು. ಹೂವಿನ ಗಾಡಿಯ ಹಿಂದೆಯೇ ತೆಂಗಿನ ಕಾಯಿ ಮಾರುವವನು ಬರುತ್ತಾನೆ. ಎಂಟು ಗಂಟೆಗೆ ತರಕಾರಿ ಗಾಡಿಯವರ ಸಾಲು ಶುರುವಾಗುತ್ತದೆ. ಕೆಲವು ಗಾಡಿಗಳು ಒಂದೊಂದೇ ತರಕಾರಿಯದು, ಟೊಮೇಟೋ, ಈರುಳ್ಳಿ, ಅವರೆ ಕಾಯಿ’ ಇಂತವು. ಇನ್ನು ಕೆಲವು ಡಿಪಾರ್ಟ್-ಮೆಂಟಲ್ ಸ್ಟೋರಿನ ಹಾಗೆ ಶುಂಟಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪಿನಿಂದ ಶುರುವಾಗಿ ಎಲ್ಲ ಬಗೆಯ ತರಕಾರಿಗಳನ್ನೂ ಕಣ್ಣಿಗಂದವಾಗುವ ಹಾಗೆ ಜೋಡಿಸಿಕೊಂಡು ಬಂದ ತರಕಾರಿ ಗಾಡಿಗಳು. ಮನೆಯೊಳಗೇ ಇದ್ದರೂ, ಅವರ ಧ್ವನಿಯ ಮೇಲೆ ಇಂತದೇ ಗಾಡಿ ಬಂದಿದೆಯೆಂದು ಅಂದಾಜಾಗುವಷ್ಟರ ಮಟ್ಟಿಗೆ ಅವರ ಧ್ವನಿ ಮೆದುಳಿನೊಳಗೆ ಮುದ್ರಿತವಾಗಿರುತ್ತದೆ. ಹೀಗೇ ದಿನಾ ಬೆಳಗ್ಗೆ ಏಳೂವರೆಗೆ `ರೋಜಾ ಹೂವು ಶ್ಯಾವಂತ್ಗೆ ಹೂವೂ..’ ಅಂತ ಗೊಗ್ಗರು ದನಿಯಲ್ಲಿ ಕೂಗಿಕೊಂಡು ಬರುತ್ತಿದ್ದ ಮುದುಕನ ಧ್ವನಿ ಮೂರ್ನಾಲ್ಕು ದಿನ ಕೇಳದೇ ಏನೋ ಕೊರೆಯಾದಂತೆನಿಸುತ್ತಿತ್ತು. ನಂತರ ಅವನು ಮುಂದಿನ ಬೀದಿಯಲ್ಲಿ ಗಾಡಿ ತಳ್ಳಿಕೊಂಡು ಹೋಗುವಾಗ ಸೇವಾಕ್ಷೇತ್ರ ಆಸ್ಪತ್ರೆಯ ಬಳಿ ಹೃದಯಾಘಾತವಾಗಿ ದಾರಿಯಲ್ಲೇ ಸತ್ತಿದ್ದ ಸುದ್ದಿ ಕೇಳಿದಾಗ ಬಂದುಗಳೊಬ್ಬರನ್ನು ಕಳೆದುಕೊಂಡ ಭಾವ ಬಹಳದಿನಗಳು ಆ ಹೊತ್ತಿಗೆ ಕಾಡುತ್ತಿತ್ತು. ಹನ್ನೊಂದು ಗಂಟೆಯ ವೇಳೆಗೆ ಬರುವ ಎಳನೀರು ಮಾರುವವನು, ಹಣ್ಣಿನ ಬುಟ್ಟಿ ಹೊತ್ತು ಬರುವವನು “ಪಕ್ಕದವ್ರಿಗೆ ಹೇಳ್ಬೇಡಿ. ನಿಮಗಂದ್ರೆ ಎರಡು ರೂಪಾಯಿ ಕಮ್ಮಿಗೇ ಕೊಡ್ತಿದೀನಿ” ಎಂದು ಎಲ್ಲರ ಮನೆಯಲ್ಲೂ ಹಾಗೆ ಹೇಳಿಯೇ ವ್ಯಾಪಾರ ಮಾಡಿದ್ದರೂ, ಅವನು ಹೇಳಿದ್ದು ನಮಗಷ್ಟೇ ನಿಜವೆಂದು ಆ ಕ್ಷಣಕ್ಕಾದರೂ ನಂಬುವಂತಾಗುತ್ತದೆ. ಮಧ್ಯಾನ್ಹದ ವೇಳೆ ಬರುವ ಪೈನಾಪಲ್, ಸೌತೆಕಾಯಿ, ಇಂತವನ್ನು ಹೆಚ್ಚಿಕೊಡುವ ಗಾಡಿಗಳು, ಅಲಂಕಾರಿಕ ಸಸ್ಯಗಳು ಮತ್ತು ಹೂಕುಂಡಗಳನ್ನಿಟ್ಟುಕೊಂಡು ಬರುವ ಕೈಗಾಡಿಗಳು, ಸಾಯಂಕಾಲ ನಾಲ್ಕು ಗಂಟೆಯಿಂದ ಶುರುವಾಗುವ ಮಲ್ಲಿಗೆ ಮೊಗ್ಗು, ಕಳ್ಳೇ ಪುರಿ, ಚುರುಮುರಿ-ಪಾನೀಪೂರಿ ಗಾಡಿ, ಠಣಾ ಠಣಾ ಎಂದು ಸದ್ದು ಮಾಡುತ್ತಾ ಕಡಲೇಕಾಯನ್ನು ಹುರಿಯುವವನ ಗಾಡಿ ಎಲ್ಲರೂ ರಂಗಸ್ಥಳದ ಮೇಲಿನ ತಮ್ಮ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸುವವರಂತೆ ಆಯಾಕಾಲಕ್ಕೆ ಬಂದು ಹೋಗುತ್ತಿರುತ್ತಾರೆ. ಇವರೆಲ್ಲಾ ನಿಯತಕಾಲಿಕರಂತಿದ್ದರೆ ಸೋಫಾ ರಿಪೇರಿ, ಛತ್ರಿ, ಪಾದರಕ್ಷೆ ರಿಪೇರಿಯವರು, ಚಾಕು, ಈಳಿಗೆಗಳನ್ನು ಚೂಪು ಮಾಡುವವರು, ಚಾಪೆ, ನೆಲವಾಸು, ಮತ್ತು ಕಾರ್ಪೆಟ್ಟುಗಳನ್ನು ಮಾರುವವರು, ಪ್ಲಾಸ್ಟಿಕ್, ಅಲ್ಯುಮಿನಿಯಂ, ಮತ್ತು ಸ್ಟೀಲ್ ಪಾತ್ರೆ ಮಾರಾಟಗಾರರು, ಕಡೆಗೆ ರಂಗೋಲಿ, ಪೊರಕೆ, ಮಕ್ಕಳ ಬಟ್ಟೆಗಳು, ಆಟಿಕೆಗಳು, ಪೆಟ್ಟಿಕೋಟು ಇತ್ಯಾದಿಗಳನ್ನು ಮಾರುವವರು ಅತಿಥಿ ನಟರಂತೆ ಆಗೀಗ ಬಂದು ತಮ್ಮ ದರ್ಶನ ಭಾಗ್ಯವನ್ನು ಇತ್ತು ಹೋಗುತ್ತಿರುತ್ತಾರೆ. ಇದಷ್ಟೇ ಬೀದಿ ಪ್ರಪಂಚವೇ? ಖಂಡಿತಾ ಅಲ್ಲ. ಈಗ ಅಂಚೆಯಣ್ಣ ಇಲ್ಲ ಬಿಡಿ; ಅವನಾದರೆ ಒಂದು ನಿಗದಿತ ಸಮಯದಲ್ಲಾದರೂ ಬರುತ್ತಿದ್ದ. ಈಗ ಅವನ ಬದಲಿಗೆ ಕೊರಿಯರ್ ಹುಡುಗರು ಹೊತ್ತು ಗೊತ್ತಿಲ್ಲದೆ ಬಾಗಿಲು ತಟ್ಟುತ್ತಾರೆ. ಮೊದಲಿಗೆ ದಿನವೂ ಬರುತ್ತಿದ್ದ ಅಂಚೆಯಣ್ಣ ಮನೆಯವರೆಲ್ಲರಿಗೆ ಪರಿಚಿತನಾಗಿರುತ್ತಿದ್ದ. ಎಷ್ಟೋ ಹಳ್ಳಿಗಳಲ್ಲಿ, ಸಣ್ಣ ಪುಟ್ಟ ಊರುಗಳಲ್ಲಿ ಸಂದೇಶವಾಹಕನಾಗಿಯೂ ಇರುತ್ತಿದ್ದ. ಓದು ಬಾರದವರಿಗೆ ಪತ್ರದಲ್ಲಿದ್ದುದನ್ನು ಓದಿ ಹೇಳುತ್ತಿದ್ದ. ಬಿಸಿಲು ಹೊತ್ತಿನಲ್ಲಿ ಬಂದವನಿಗೆ ಒಂದು ಲೋಟ ಪಾನಕವೋ, ಮಜ್ಜಿಗೆಯೋ ಕೊಡುವ ಪರಿಪಾಠವೂ ಕೆಲವು ಮನೆಗಳಲ್ಲಿರುತ್ತಿತ್ತು. ಬಂಧುವಲ್ಲದಿದ್ದರೂ ಆತ ಮಿತ್ರರ ಗುಂಪಿನಲ್ಲಿ ಸೇರಿ ಹೋಗುತ್ತಿದ್ದ. ಈಗಲಾದರೋ ದಿನಕ್ಕೊಬ್ಬ ಕೊರಿಯರ್ ಹುಡುಗರು. ಯಾರು ನಿಜವಾದವರೋ, ಯಾರು ಮೋಸಗಾರರೋ ಒಂದೂ ಅರಿವಾಗದೆ ಅವರನ್ನು ಬಾಗಿಲ ಹೊರಗೇ ನಿಲ್ಲಿಸಿ ಗ್ರಿಲ್ ಬಾಗಿಲಿನ ಕಿಂಡಿಯಿಂದಲೇ ಮಾತಾಡಿಸಿ ಲಕೋಟೆಯಾದರೆ ಅಲ್ಲಿಂದಲೇ ತೆಗೆದುಕೊಂಡು, ಪಾರ್ಸೆಲ್ ಆದರೆ, ಅದರ ಹಿಂದು ಮುಂದನ್ನೆಲ್ಲಾ ವಿಚಾರಿಸಿಕೊಂಡು ನಂತರ ಬಾಗಿಲನ್ನು ಸ್ವಲ್ಪವೇ ತೆರೆದು ಡಬ್ಬಿಯನ್ನು ತೆಗೆದುಕೊಂಡ ತಕ್ಷಣ ಮತ್ತೆ ಬಾಗಿಲು ಮುಚ್ಚುವುದು ಸಹಜವೇ ಆಗಿದೆ. ಇನ್ನು ಮನೆ ಬಾಗಿಲು ತಟ್ಟುವ ಮಾರಾಟಗಾರರದಂತೂ ಇನ್ನೊಂದು ಉಪಟಳ. ಪುಸ್ತಕ, ದಿನೋಪಯೋಗಿ ವಸ್ತುಗಳಿಂದ ಹಿಡಿದು ಮಕ್ಕಳ ಡೈಪರ್ ವರೆಗೆ ಎಲ್ಲವನ್ನೂ ಮನೆಬಾಗಿಲಿಗೆ ತರುತ್ತಾರೆ. ನಕಲಿಯೆಷ್ಟೋ, ಅಸಲಿಯೆಷ್ಟೋ ದೇವನೇ ಬಲ್ಲ! ಬೀದಿಯ ಮೇಲೆ ಬರುವ ಮೆರವಣಿಗೆ, ದೇವರ ಉತ್ಸವಗಳೆಂದರೆ ಮಕ್ಕಳಾದಿಯಾಗಿ ದೊಡ್ಡವರವರೆಗೂ ಎಲ್ಲರಿಗೂ ಆಕರ್ಷಣೆ. ಅಂತಹ ಸದ್ದು ಕಿವಿಗೆ ಬಿದ್ದಿತೆಂದರೆ ಸಾಕು… ಮನೆಯಲ್ಲಿರುವವರೆಲ್ಲರೂ ಬೀದಿಯ ಕಡೆಗೇ… ನಾನು ಎಳೆಯದರಲ್ಲಿ ನೋಡುತ್ತಿದ್ದ ಮಾರ್ಗಶಿರ ಮಾಸದ ಬೆಳಗಿನ ಝಾವದಲ್ಲಿ ತಾಳ ತಟ್ಟಿಕೊಂಡು ತನ್ನದೇ ಒಂದು ಅಲೌಕಿಕ ಛಾಪನ್ನು ನಿರ್ಮಿಸಿಕೊಂಡು ಬರುತ್ತಿದ್ದ ದತ್ತ ಜಯಂತಿಯ ಭಜನೆ, ರಥಸಪ್ತಮಿಯಲ್ಲಿ ಸುಶ್ರಾವ್ಯ ವಾಲಗದೊಂದಿಗೆ ಬರುತ್ತಿದ್ದ ತೇರು, ಆಡಿ ಕೃತ್ತಿಕೆಯ ದಿನದಂದು ಗುಡ್ಡೇಕಲ್ಲಿನ ಸುಬ್ರಹ್ಮಣ್ಯೇಶ್ವರನ ದೇವಸ್ಥಾನಕ್ಕೆ `ಹರೋಹರ’ ಎಂದು ಕೂಗುತ್ತಾ ಬೇವಿನ ಮತ್ತು ಅರಿಶಿನ ಬಣ್ಣದ ಉಡುಗೆಯುಟ್ಟು ಕಾವಡಿ ಎತ್ತಿಕೊಂಡು ಹೋಗುತ್ತಿದ್ದ, ಕೆಲವರು ಭೀಕರವಾಗಿ ಕೆನ್ನೆಯನ್ನೂ, ನಾಲಗೆಯನ್ನೂ ಕಂಬಿಯಿಂದ ಚುಚ್ಚಿಕೊಂಡು, ಮತ್ತೆ ಕೆಲವರು ಬೆನ್ನಿಗೆ ಕೊಕ್ಕೆಯನ್ನು ಸಿಕ್ಕಿಸಿಕೊಂಡು ಎಳೆದುಕೊಂಡು ಹೋಗುತ್ತಾ ನಮ್ಮ ಮನದಲ್ಲಿ ಭಕ್ತಿಯೊಂದಿಗೆ ಭಯವನ್ನೂ ಹುಟ್ಟಿಸುತ್ತಿದ್ದ ಭಕ್ತರ ಗುಂಪು… ವಿಜಯ ದಶಮಿಯ ದಿನ ಊರಿನ ಎಲ್ಲ ದೇವರೂ ಬನ್ನಿ ಕಡಿಯುತ್ತಿದ್ದ ನೆಹರೂ ಮೈದಾನಕ್ಕೆ ಮೆರವಣಿಗೆ ಹೋಗುತ್ತಿದ್ದ ದೃಶ್ಯ…  ಎಲ್ಲವೂ ನನ್ನ ನೆನಪಿನ ಕೋಶದಲ್ಲಿ ಭದ್ರವಾಗಿ ಬೇರುಬಿಟ್ಟು ಕುಳಿತುಬಿಟ್ಟಿವೆ. ಹೀಗೇ ಒಂದು ಆಡಿ ಕೃತ್ತಿಕೆಯ ದಿನ ನಾವೆಲ್ಲರೂ ಕಾವಡಿಯ ಮೆರವಣಿಗೆಯನ್ನು ನೋಡಲು ಬೀದಿಗೆ ಬಂದು ನಿಂತಿದ್ದೆವು. ನಮ್ಮ ಮನೆಯ ಕೆಲಸದಾಕೆ ಮುನಿಯಮ್ಮನೂ ನಮ್ಮ ಜೊತೆಗೇ ನಿಂತಿದ್ದವಳಿಗೆ ಅದೇನಾಯಿತೋ ಇದ್ದಕ್ಕಿದ್ದಂತೆ ಅರೆಗಣ್ಣಿನಲ್ಲಿ ಎರಡೂ ಕೈಗಳನ್ನು ತಲೆಯಮೇಲೆ ಜೋಡಿಸಿ ಮುಗಿದುಕೊಂಡು ಮೆರವಣಿಗೆಯ ಹಿಂದೆಯೇ ಓಡಿಹೋದಳು. ನಾವೆಲ್ಲರೂ `ಮುನಿಯಮ್ಮಾ ಮುನಿಯಮ್ಮಾ’ ಎಂದು ಜೋರಾಗಿ ಕರೆಯುತ್ತಲೇ ಇದ್ದೇವೆ; ಅವಳಿಗೆ ಕೇಳಿಸಿದ್ದರೆ ತಾನೆ! ಸ್ವಲ್ಪ ಹೊತ್ತು ಕಾದು ನಿಂತಿದ್ದು ನಾವೆಲ್ಲಾ ಮನೆಯೊಳಗೆ ಬಂದವು. ಅದೆಷ್ಟು ದೂರ ಹೋಗಿದ್ದಳೋ… ಒಂದು ಗಂಟೆಯ ನಂತರ ಅವಳೂ ವಾಪಸ್ಸು ಬಂದಳು. ಬಹಳ ಆಯಾಸಗೊಂಡಿದ್ದಳು. ಅಮ್ಮನಿಗೆ ಅವಳು ಸಾಕ್ಷಾತ್ ಸುಬ್ರಹ್ಮಣ್ಯೇಶ್ವರನೇ ಅನ್ನಿಸಿಬಿಟ್ಟಿತೋ ಏನೋ..  ಅವಳನ್ನು ಕೂರಿಸಿ ಒಂದು ಲೋಟ ತಣ್ಣಗೆ ಪಾನಕ ಮಾಡಿಕೊಟ್ಟು “ಸುಸ್ತಾಗಿದ್ದರೆ ಮನೆಗೆ ಹೋಗಿ ಮಲಗಿಕೋ. ನಾಳೆ ಬಂದು ಬಟ್ಟೆ ಒಗೆಯುವೆಯಂತೆ” ಎಂದರು. ಸ್ವಲ್ಪ ಹೊತ್ತು ಕೂತಿದ್ದವಳು ಮುನಿಯಮ್ಮನಾಗೇ `ಈಗ ಸರಿಹೋಯ್ತು’ ಎನ್ನುತ್ತಾ ತನ್ನ ಕೆಲಸಕ್ಕೆ ಎದ್ದಳು. ನಮಗೆಲ್ಲಾ ಭಕ್ತಿಯ ಈ ಮುಖದ ದರ್ಶನವಾಗಿತ್ತು! ಈಗ ಬೆಂಗಳೂರಿನಲ್ಲಿ ನಾವಿರುವ ರಸ್ತೆಯ ಒಂದು ಅಡ್ಡರಸ್ತೆಯಲ್ಲಿ ಗಂಗಮ್ಮನ ಗುಡಿಯಿದೆ. ಅದರ ಮುಂದಿನ ರಸ್ತೆಯಲ್ಲಿ ಮಸೀದಿಯಿದೆ. ಅಣ್ಣಮ್ಮ ದೇವಿಯ ಭಕ್ತಮಂಡಳಿ ನಮ್ಮ ಮನೆಯ ಪಕ್ಕಕ್ಕೇ ಇದೆ. ಮನೆಯ ಹಿಂಬಾಗದಲ್ಲಿ ವೆಂಕಟರಮಣನ ದೇವಸ್ಥಾನವಿದೆ. ಹಾಗಾಗಿ ಆಗಾಗ ಎಷ್ಟೆಲ್ಲಾ ಮೆರವಣಿಗೆಗಳನ್ನು ನೋಡುವ ಭಾಗ್ಯ ನಮ್ಮದಾಗಿದೆ. ಗಂಗಮ್ಮನ ಹೂವಿನ ಕರಗ, ರಥೋತ್ಸವ, ವೆಂಕಟರಮಣನ ಕಡೆಯ ಶ್ರಾವಣ ಶನಿವಾರದ ಉತ್ಸವ, ಮುಸ್ಲಿಮರ ಹಬ್ಬಗಳ ಹಲವು ಬಗೆಯ ಉತ್ಸವಗಳು, ಮೆರವಣಿಗೆಗಳು, ವರ್ಷಕ್ಕೊಮ್ಮೆ ಚೈತ್ರಮಾಸದಲ್ಲೋ, ವೈಶಾಖ ಮಾಸದಲ್ಲೋ ನಮ್ಮ ಮನೆಯ ಪಕ್ಕದಲ್ಲೇ ಮೂರು ದಿನ ಠಿಕಾಣಿ ಹಾಕುವ ಅಣ್ಣಮ್ಮ.. ಶುಕ್ರವಾರ ಆಕೆ ಬರುವುದು. ಅದಕ್ಕೆ ಪೂರ್ವಭಾವಿಯಾಗಿ ಆ ಸೋಮವಾರದಿಂದಲೇ ಇಡೀ ಬೀದಿ ಅಲಂಕರಿಸಿಕೊಂಡು ನಿಂತಿರುತ್ತದೆ. ಬೀದಿಯ ಮುಂಬಾಗದಲ್ಲಿ ವಿದ್ಯುದ್ದೀಪಗಳಲ್ಲಿ ಅಣ್ಣಮ್ಮನ ದೊಡ್ಡ ಚಿತ್ರ, ಬೀದಿಯುದ್ದಕ್ಕೂ ತೋರಣದಂತೆ ಬಣ್ಣ ಬಣ್ಣದ ವಿದ್ಯದ್ದೀಪಗಳು, ಮಾವು ಬೇವಿನ ತೋರಣಗಳು, ಬಾಳೆಯ ಕಂಬದ ಅಲಂಕರಣ, ಇನ್ನು ದೇವಿಯನ್ನು ಕೂರಿಸುವ ವೇದಿಕೆಯಂತೂ ಗುರುವಾರದಿಂದಲೇ ವೈಭವವಾಗಿ ಸಿದ್ಧವಾಗಿರುತ್ತದೆ. ಅಣ್ಣಮ್ಮ ಬೀದಿಯ ಕೊನೆಯಲ್ಲಿರುವಾಗಲೇ ಅವಳನ್ನು ಎದುರುಗೊಳ್ಳಲು ನಮ್ಮ ಪಕ್ಕದ ಅಡ್ಡರಸ್ತೆಯಲ್ಲಿರುವ ಗಂಗಮ್ಮದೇವಿಯ ಉತ್ಸವಮೂರ್ತಿ ಗೆಳತಿಯನ್ನು ಕರೆದುಕೊಂಡು ಬರಲು ಹೊರಡುತ್ತದೆ. ಇಬ್ಬರೂ ಒಟ್ಟಿಗೆ ಅಲ್ಲಿಂದ ಬರುತ್ತಾರೆ. ದೇವಿಯರ ಮುಂದೆ ಪೂರ್ಣಕುಂಭ ಹೊತ್ತ ಸಿಂಗಾರಗೊಂಡ ಮಹಿಳೆಯರು, ಬಾಜಾ ಬಜಂತ್ರಿ, ಆರತಿಗಳು, ಕಿವಿ ಗಡಚಿಕ್ಕುವ ಅಣ್ಣಮ್ಮನ ಭಕ್ತಿಯ ಹಾಡುಗಳು.. ಅದೇನು ಸಂಭ್ರಮ… ಮೂರುದಿನಗಳೂ ಮನೆಯ ಮುಂದೆ ಹಬ್ಬವಿದ್ದಂತೆ. ಮಾರನೆಯ ದಿನ ಅಣ್ಣಮ್ಮ ದೇವಿ ಇಲ್ಲಿನ ಆಸುಪಾಸಿನ ಬೀದಿಯಲ್ಲಿರುವ ಅರವತ್ತು ಎಪ್ಪತ್ತು ಮನೆಗಳಿಗೆ ವರ್ಷಕ್ಕೊಮ್ಮೆ ಬರುವ ಮಗಳಂತೆ ಹೋಗಿ ಪೂಜೆ ಮಾಡಿಸಿಕೊಂಡು ಉಡಿತುಂಬಿಸಿಕೊಂಡು ಬರುತ್ತಾಳೆ. ಅಂದು ಸಂಜೆ ದೇವಿಯ ಎದುರಿಗೆ ಮೂರು ಬೀದಿ ಕೂಡುವಲ್ಲಿ ಒಂದು ಸ್ಟೇಜನ್ನು ಹಾಕಿ ನಾಟಕವೋ, ಆರ್ಕೆಸ್ಟ್ರಾನೋ ಏನಾದರೊಂದು ನಡೆಯುತ್ತಿರುತ್ತದೆ. ನಮ್ಮ ಮನೆಯ ಕಾರ್ ಗ್ಯಾರೇಜೇ ಅವರಿಗೆ ಗ್ರೀನ್ ರೂಮು. ಪಕ್ಕದ ಬೀದಿಗಳಲ್ಲಿರುವ ಮುಸಲ್ಮಾನ್ ಬಂಧುಗಳೂ ಹೆಂಗಸರು, ಮಕ್ಕಳಾದಿಯಾಗಿ ಇದರಲ್ಲಿ ಮತ್ತು ಮಾರನೆಯ ದಿನ ನಡೆಯುವ ರಾಗಿ ಅಂಬಲಿ ಮತ್ತು ಅನ್ನ ಸಂತರ್ಪಣೆಗಳಲ್ಲಿ ಪಾಲುಗೊಳ್ಳುತ್ತಾರೆ. ಎಲ್ಲರನ್ನೂ ಒಂದುಗೂಡಿಸಿ ಸಂತೋಷ ಪಡಿಸುತ್ತಾ ಪರಸ್ಪರ ಬಾಂಧವ್ಯ ವೃದ್ಧಿಸುವುದರಲ್ಲಿ ಬೀದಿಯ ಪಾತ್ರವೇನು ಕಮ್ಮಿಯೇ?! ಬೀದಿ ಜಗಳಗಳ ಮಹಾತ್ಮೆ ಅತ್ಯಂತ ಪುರಾತನವಾದದ್ದು. ಬೀದಿ ಬದಿಯಲ್ಲಿ ನೀರಿಗಾಗಿ ಕಾದಾಡುವುದು; ಅಕ್ಕಪಕ್ಕದವರ ಜಗಳ ಬೀದಿಗೆ ಬರುವುದು ಇವೆಲ್ಲಾ ಬಹಳ ಸಹಜವಾದ ಕ್ರಿಯೆಗಳು. ಇಬ್ಬರೂ ಅಮ್ಮ, ಅಪ್ಪ, ಅಜ್ಜಿ, ತಾತ ಎಲ್ಲರ ಜಾಯಮಾನವನ್ನೂ ನೀವಾಳಿಸುತ್ತಾ ಕೂಗಾಡುತ್ತಿದ್ದರೆ, ಅಲ್ಲಿಯವರೆಗೆ ಗೆಳೆಯರಾಗಿದ್ದ ಅವರಿಬ್ಬರ ಮನೆಯ ನಾಯಿಗಳೂ ತಮ್ಮ ಮಾಲೀಕರನ್ನು ಅನುಕರಿಸಿ `ಭೌ…ವೌ…’ ಎಂದು ಹಿಮ್ಮೇಳ ನೀಡುತ್ತಿದ್ದರೆ ಒಂದಷ್ಟು ಕಾಲ ಜನರೆಲ್ಲಾ ಮನರಂಜನೆಯನ್ನು ತೆಗೆದುಕೊಂಡು ನಂತರ ಯಾರೋ ಒಬ್ಬರು ಹಿರಿಯರು ಇಬ್ಬರ ಮಧ್ಯ ನಿಂತು ಇಬ್ಬರಿಗೂ ಸಮಾಧಾನ

ಬೀದಿಯ ಪ್ರಪಂಚ…. Read Post »

ಇತರೆ, ವರ್ತಮಾನ

ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ

ಲೇಖನ ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ ಶಿವರಾಜ್ ಮೋತಿ ಸಮಾಜವೆಂದರೆ ಜನ,ಗುಂಪು ಎಂದರ್ಥವಾಗುತ್ತದೆ. ವಿಧವಿಧವಾದ ಜನ,ಅನೇಕ ಗುಂಪುಗಳು ಇರುತ್ತವೆ. ಆದರೆ ಇಂದಿನ ಸಮಾಜ ಮೂಲಭೂತವಾದಿ,ಡೊಂಗಿ ರಾಜಕಾರಣಿಗಳ ಕೈಗೆ ಸಿಕ್ಕು ವಿಲ-ವಿಲವಾಗಿ ಬಿದ್ದು ನರಳಾಡುತ್ತಿದೆ. ಸಮಾಜದಲ್ಲಿದ್ದ ನೂನ್ಯತೆಗಳನ್ನು ಸರಿಪಡಿಸಲು,ಸಮ ಸಮಾಜದ ಕನಸನ್ನು ಕಟ್ಟಲು ಹಲವಾರು ಮಾರ್ಗಗಳಿವೆ. ಅದರಲ್ಲೂ ವಿಶೇಷವಾಗಿ ಸಾಹಿತ್ಯವೂ ಒಂದು.ಸಾಹಿತ್ಯದಲ್ಲಿ ಹಲವಾರು ಪ್ರಕಾರಗಳು ಜನಪದ, ಜಾನಪದ,ಪುರಾಣ,ನಾಟಕ,ಕಲೆ, ಸಂಗೀತ ಮುಂತಾದವೆಲ್ಲವೂ ಒಂದಕ್ಕೊಂದು ಸಂಬಂಧವಿದ್ದೆ ಇದೆ. ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟಲು ಅನೇಕ ಮಹನೀಯರು,ಶ್ರಮಿಸಿದ್ದಾರೆ,ಶ್ರಮಿಸುತ್ತಿದ್ದಾರೆ ಕೂಡ ಹೌದು.ಸಾಹಿತ್ಯವು ಒಡೆದ ಮನಸ್ಸುಗಳನ್ನು ಕೂಡಿಸಬೇಕೇ ವಿನಹ ಛಿದ್ರ-ಛಿದ್ರ ಮಾಡಬಾರದು. ಜಾತಿ ಅಸ್ಪೃಶ್ಯತೆಯ ತೆಕ್ಕೆಗೆ ಸಿಲುಕಿ ನರಳಾಡಿದ ಜನಕ್ಕೆ,ಧ್ವನಿಯಿಲ್ಲದ ಸಮುದಾಯಕ್ಕೆ ಧ್ವನಿಯಾಗಲು,ತಬ್ಬಲಿಗಳ ಪರ, ಅಲೆಮಾರಿ, ಆದಿವಾಸಿ,ಬುಡಕಟ್ಟು ಜನರಿಗಾಗಿ ಹೋರಾಡಲು, ಶೋಷಣೆಗೆ ಒಳಪಟ್ಟವರನ್ನು ಕಿಚ್ಚೆಬ್ಬಿಸಿ,ಅವರಿಗಾಗುವ ಅನ್ಯಾಯದ ವಿರುದ್ಧ ಸಿಡಿದೇಳಲು ಎಬ್ಬಿಸಿ,ಅವರ ಜೊತೆಗೂಡಲು ಸಾಹಿತ್ಯದ ಮೂಲಕ ಸಾಧ್ಯ.ಇಂತಹ ಕೆಲಸ ಮಾಡುತ್ತಿರುವ ದೊಡ್ಡ ದೊಡ್ಡ ಕೆಲವೇ ಸಾಹಿತಿಗಳನ್ನೂ ಹಾಗೂ ಪ್ರಚಾರ ಪಡೆಯದೇ ಮಾಡುತ್ತಿರುವ ಸಣ್ಣ-ಸಣ್ಣ ಸಾಹಿತಿಗಳನ್ನನ್ನೂ, ಹೋರಾಟಗಾರರನ್ನು ನಾವು ಇಂದು ನೋಡಬಹುದು.. ಇನ್ನೂ ಕೆಲ ಸಾಹಿತಿಗಳಿದ್ದಾರೆ,ಹೆಣ್ಣು ಸಬಲೆಯಲ್ಲ, ಅಬಲೆಯೆನ್ನುವ ಹೆಣ್ಣನ್ನು ಶೋಷಿಸುವ ಕೀಳು ಮನಸ್ಥಿತಿಗಳು,ಶೋಷಿತರನ್ನು ಶೋಷಿತರನ್ನಾಗೆ ನೋಡಬಯಸುವ,ಜಾತಿಧರ್ಮಗಳ ನಡುವೆ ಜಗಳ ಹಚ್ಚುವ ಸಾಹಿತ್ಯ ಸೃಷ್ಟಿ ಮಾಡುವುದು, ಅನ್ಯಧರ್ಮೀಯರನ್ನು ಅನುಮಾನಸ್ಥವಾಗಿ ನೋಡುವ, ಇಲ್ಲ-ಸಲ್ಲದ ಇತಿಹಾಸ ಸೃಷ್ಟಿ ಮಾಡುವುದು, ಅದು ನಿಜವಾದರೂ ಇಂದಿನ ಪರಿಸ್ಥಿತಿಗೆ ಒಗ್ಗೂಡಿಸಿಕೊಂಡು ಬದಲಾವಣೆಯನ್ನು ತರಬಯಸದೇ, ಕೋಮುಸೌಹಾರ್ದತೆಯನ್ನು ಕಾಪಾಡಿಕೊಳ್ಳದೆ ಶಾಂತಿಗೆಡುವ ಕೆಲಸವೂ ನಡೆದಿದೆ.ಅದೂ ನಿಲ್ಲಲ್ಲಿ.. ಇಂದಿನ ಉದಯೋನ್ಮುಖ ಸಾಹಿತಿಗಳು,ಕವಿಗಳು ಅವನು,ಅವಳು ಎನ್ನದೇ ಅರ್ಥಾತ್ ಪ್ರೀತಿ-ಪ್ರೇಮದ ಬಗ್ಗೆ ಬರೆಯುವುದು ಅದರಲ್ಲೂ ಭಗ್ನಪ್ರೇಮಿಯಂತೆ ಕಲ್ಪಿಸಿ ಬರೆಯುವುದು ನೋಡಿದರೆ,ಇವರಿಗೆ ಅನ್ಯ ವಿಷಯಗಳೇ ಇಲ್ಲವೇ ಎನ್ನಿಸದೇ ಇರದು.ಆದರೂ ಇವರು ಅನ್ಯವಿಷಯಗಳು ನನಗ್ಯಾಕೆ,ನಾನು ಬರೆದರೆ ಏನಾದರೂ ಬದಲಾದಿತೇ ಎಂದು ಕೀಳು ಮನಸ್ಥಿತಿಯಿಂದಲೇ ಇದಾರೆ ವಿನಹ ದೊಡ್ಡತನದಿಂದಲ್ಲ. ಸಮಾಜದಲ್ಲಿ ಅನ್ಯಾಯವಾಗುತ್ತಿದ್ದರೂ ದೈಹಿಕವಾಗಿ ಎದುರಿಸದೇ ಆಗದಿರಬಹುದು,ಕಣ್ಣುಮುಂದೆ ಅನ್ಯಾಯ ನಡೆಯದೇ, ನಡೆದೂ ಇರಬಹುದು, ದೂರದೆಲ್ಲೋ ಅನ್ಯಾಯ ನಡೆದಿರಬಹುದು ನಮಗ್ಯಾಕೆನ್ನದೇ ಅದನ್ನು ಪ್ರತ್ಯಕ್ಷವಾಗಿ ವಿರೋಧಿಸದಾಗದಿದ್ರೂ ಸಾಹಿತ್ಯದ ಮೂಲಕ ವಿರೋಧಿಸುವುದು, ಪ್ರತಿರೋಧಿಸಬೇಕೇ ವಿನಹ ಮಂಕಾಗಿ ಕುರುಡಾಗುವುದಲ್ಲ,ಅನ್ಯಾಯವನ್ನು ವಿರೋಧಿಸುವ ಕೆಲಸವಾಗಬೇಕಿದೆ. ಪರಿಸರದ ಹಾನಿಯನ್ನು ತಡೆಗಟ್ಟಲು, ಪರಿಸರಾತ್ಮಕ, ಪ್ರಾಣಿ-ಪಕ್ಷಿಗಳ ರಕ್ಷಣೆ,ಅತ್ಯಾಚಾರದ ವಿರುದ್ಧ, ಜೀವವಿರೋಧಿ, ಮಹಿಳಾ ವಿರೋಧಿ,ಮಾನವ ವಿರೋಧಿ ಮುಂತಾದವುಗಳ ಕೆಲಸ ಸಾಹಿತಿಗಳಿಂದ ತಡೆಗಟ್ಟಲು ಆಗುತ್ತಿಲ್ಲ.ನಮ್ಮ ದೇಶ ಮಹಾನ್ ಧೀಮಂತ ಪುರುಷ-ಮಹಿಳೆ ಸಾಧಕ ಮಹಾತ್ಮರನ್ನು ನೀಡಿದೆ.ಅವರು ಸಮಾಜ ಕಟ್ಟಿದ ಪರಿಯನ್ನು ನಾವು ಅಳವಡಿಸಿಕೊಂಡು ಸಾಗಬೇಕಾಗಿದೆ.ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜವನ್ನು ಕಟ್ಟಲು ಸಾಹಿತ್ಯದ ಮೂಲಕ ಕೆಲಸಗಳು ಆಗುತ್ತಿಲ್ಲ,ಆಗಬೇಕಾಗಿದೆ. ಸರ್ಕಾರದ ನಡೆನುಡಿಗಳು,ಕಾಯ್ದೆಗಳು ಎಲ್ಲ ಕಾಲಕ್ಕೂ ಪ್ರಜಾಸತ್ತಾತ್ಮಕವಾಗಿ,ಪ್ರಜೆಗಳ ಹಿತರಕ್ಷಣೆಗಾಗಿಯೇ ಇರುತ್ತವೆ ಎಂದು ಹೇಳಲಾಗದು,ಕೆಲವೊಮ್ಮೆ ಸರಕಾರಗಳು ಗೊತ್ತಿದ್ದೂ,ಗೊತ್ತಿಲ್ಲದೆಯೂ ಪ್ರಜೆಗಳ ವಿರೋಧಿ ಕಾಯ್ದೆಯೂ ತರಬಹುದು.ಅವಾಗ ಸಾಹಿತಿಗಳಾದವರು ಖಡಾಖಂಡಿತವಾಗಿ ವಿರೋಧಿಸಬೇಕು. ರಾಜಕೀಯದ ಬಗ್ಗೆ ಬೇಡವೆಂದು ತಮ್ಮ ಅಭಿಪ್ರಾಯವನ್ನು ದಾಖಲಿಸದೇ ಹೋದರೆ ಎಲ್ಲ ಕಾಲಕ್ಕೂ ಬಾಯಿಮುಚ್ಚಿ ಮೂಕಪ್ರೇಕ್ಷರಾದರೆ ಅದೆಂತಹ ದೊಡ್ಡ ಬರಹಗಾರನಾದರೂ,ಅವರು ಸಾಹಿತಿಗಳಲ್ಲ,ಅವಕಾಶವಾದಿಗಳಾಗುತ್ತಾರೆ. ಮತ್ತೊಂದೆಡೆ ಓದದೇ ಬರೆಯಬಹುದು,ಆದರೂ ಓದಬೇಕು.ಸ್ವತಃ ತಾನೇ ಮತ್ತೊಬ್ಬರದನ್ನು ಓದದೇ, ನಮ್ಮ ಭವ್ಯ ಸಾಹಿತ್ಯದ ಇತಿಹಾಸವನ್ನೋದದೇ, ಹಿಂದಿನಿಂದ ನಡೆದುಕೊಂಡು ಬಂದ ಸಮಾಜದ ಬಗ್ಗೆ ಅವಲೋಕಿಸದೆ ನನ್ನದೇ ಓದಲಿ ಅಂತ ಅನ್ನಿಸಿದ್ದನ್ನು ಗೀಚುವವರನ್ನು ಹಾಗೂ ಖುಷಿಗಾಗಿ, ಆತ್ಮಸಂತೋಷಕ್ಕಾಗಿ ಬರೆಯುತ್ತೇನೆಂದರೆ ಅಭ್ಯಂತರವಿಲ್ಲ ಆದರೆ ಅದು ಸಾಹಿತ್ಯವಾಗಲಾರದು. ಅಂತ ಬರಹಗಳಿದ್ದರೆ ನಿಮಗೂ ನಿಮ್ಮ ಬರಹಕ್ಕೂ ನೆಲೆಯಿಲ್ಲದಾಗುತ್ತದೆ.. ಒಟ್ಟಾರೆಯಾಗಿ ಏನೇ ಆಗಲಿ,ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟುವ ಕೆಲಸಗಳು ಆಗಲಿ, ಸಾಹಿತ್ಯವನ್ನು ಉದ್ಯೋಗ ಮಾಡಿಕೊಂಡವರಿದ್ದಾರೆ, ಜೀವನಕ್ಕಾಗಿ ಸಾಹಿತ್ಯವನ್ನು ನೆಚ್ಚಿಕೊಂಡವರಿದ್ದಾರೆ. ಉದಯೋನ್ಮುಖರಾದ ನಾವುಗಳು ಸಮಾಜದ ಸಮಸ್ಯೆ,ರೋಧನೆಗಳಿಗೆ ಸ್ಪಂದಿಸಿ ಬರಹ, ಹೋರಾಟ, ಚಳುವಳಿಗಳ ಮೂಲಕ ಇನ್ನಾದರೂ ನಮ್ಮ ಲೇಖನಿಯ ವರಸೆ ಬದಲಿಸಿಕೊಂಡು ಸಾಧ್ಯವಾದಷ್ಟು ಜೀವವಿರೋಧಿಗೆ ಪ್ರತಿಧ್ವನಿಗಳಾಗೋಣ..!!! ******************************************************

ಸಮಾಜ ಕಟ್ಟುವಲ್ಲಿ ಸಾಹಿತ್ಯದ ಪಾತ್ರ Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಎಲ್ಲಾ ಒಳ್ಳೆಯದೇ ಆಗುತ್ತೆ… ಈ ಥರದ ಮಾತುಗಳನ್ನ ನಾವು ಬಹಳಷ್ಟು ಸಾರಿ ಕೇಳಿರ್ತೇವೆ. “ಒಳ್ಳೇವ್ರಿಗೆ ಒಳ್ಳೆಯದೇ ಆಗುತ್ತೆ”, “ನಾವು ಒಬ್ರಿಗೆ ಒಳ್ಳೇದು ಮಾಡಿದ್ರೆ ದೇವರು ನಮಗೆ ಒಳ್ಳೇದು ಮಾಡ್ತಾನೆ”, “ತಾತ ಮಾಡಿದ ಪಾಪ ಮೊಮ್ನೊಗನಿಗೆ”… ಹೀಗೆ ಹಲವಾರು ಮಾತುಗಳು… ಇವೆಲ್ಲ ಬರಿಯ ಮಾತುಗಳಲ್ಲ, ಅದೊಂದು ದೈತ್ಯ ಶಕ್ತಿಯ ನಂಬಿಕೆ, ನಮ್ಮ ಬದುಕನ್ನು ಮುನ್ನಡೆಸುವ ಶಕ್ತಿ. ನನ್ನ ತಂದೆ ಒಬ್ಬ ಪ್ರಾಮಾಣಿಕ ಹೈಸ್ಕೂಲ್ ಗಣಿತದ ಮೇಷ್ಟ್ರು. ತಮ್ಮ ವಿದ್ಯಾರ್ಥಿಗಳಿಗೆ ಸ್ವಂತ ಮಕ್ಕಳ ರೀತಿಯಲ್ಲೇ ಭಾವಿಸಿ ಪಾಠ ಹೇಳಿಕೊಟ್ಟವರು. ಅವರ ಬದುಕಿನುದ್ದಕ್ಕೂ ಅವರು ನಂಬಿದ್ದು ಒಂದೇ ಒಂದು. ನಾನು ಈ ಮಕ್ಕಳಿಗೆ ಚೆನ್ನಾಗಿ ಪಾಠ ಮಾಡಿದರೆ ದೇವರು ಮುಂದೆ ನನ್ನ ಮಕ್ಕಳನ್ನ ಚನ್ನಾಗಿಟ್ಟಿರ್ತಾನೆ ಎನ್ನುವುದು. ಅದಕ್ಕೆ ಸರಿಯಾಗಿ ನಾನು ನನ್ನ ತಮ್ಮ ಓದಿ ನೌಕರಿಗೆ ಸೇರಿದ ಮೇಲೆ ಅವರಿಗೆ ಅವರ ನಂಬಿಕೆ ಮತ್ತೂ ಬಲವಾಯ್ತು. ಆದರೆ ನಮಗೆ ನಿಜ ಗೊತ್ತಿತ್ತು. ನನ್ನ ತಂದೆ ನಮಗೆ ತಿಳಿದ ಹಾಗೆ,  ನಮಗೆ ಬುದ್ಧಿ ಬಂದಾಗಿನಿಂದಲೂ ಎಂದೂ ಸಂಜೆ ಮತ್ತು ಬೆಳಗಿನ ಹೊತ್ತು, ಸಮಯವನ್ನು ವ್ಯರ್ಥವಾಗಿ ಕಳೆದವರಲ್ಲ. ಬೆಳಗ್ಗೆ ಮನೆ ಪಾಠಕ್ಕೆ (ಒತ್ತಯಕ್ಕೆ ಮಣಿದು ಉಚಿತವಾಗಿ ಪಾಠ ಮಾಡುತ್ತಿದ್ದರೇ ಹೊರತು, ಅವರೆಂದೂ ಫೀಸಿಗೆ ಮನೆ ಪಾಠ ಮಾಡಿದವರಲ್ಲ… ಯಾರೋ ಕೆಲವರು ಒತ್ತಾಯ ಪೂರ್ವಕವಾಗಿ ಉಡುಗೊರೆ ಕೊಡುತ್ತಿದ್ದರಷ್ಟೇ..) ಬರುತ್ತಿದ್ದ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು, ಸಂಜೆ ನಾವಿಬ್ಬರು ಮಕ್ಕಳಿಗೆ. ಅವರು ನಾನು ಮತ್ತು ನನ್ನ ತಮ್ಮ ಬೆಳೆದು ಪಿಯುಸಿ ದಾಟುವವರೆಗೂ ಎಂದೂ ಟೀವಿಯನ್ನೇ ನೋಡಲಿಲ್ಲ, ಯಾವ ಮೋಜು ಅದು ಇದು ಎಂದು ಕಾಲಾಯಾಪನೆಯನ್ನೇ ಮಾಡಲಿಲ್ಲ. ಅವರು ಮೊದಲ ಬಾರಿ ನಿರುಮ್ಮಳವಾಗಿ ಟೀವಿ ನೋಡಲು ಶುರು ಮಾಡಿದ್ದೇ, ನಾನು ನೌಕರಿ ಸೇರಿ ಮತ್ತು ನನ್ನ ತಮ್ಮ ತನ್ನ ಹೆಚ್ಚಿನ ಓದಿಗಾಗಿ ಅಂತ ಮನೆ ತೊರೆದಾಗಲೇ. ಅವರ ಈ ಶ್ರಮ ವ್ಯರ್ಥವಾಗಲಿಲ್ಲ. ಆದರೆ ತಮ್ಮ ಇಡೀ ಬದುಕನ್ನೇ ಅವರ ವೃತ್ತಿ (ಸೇವೆ) ಮತ್ತು ಮಕ್ಕಳ ಬದುಕಿಗಾಗಿ ಮುಡುಪಾಗಿಟ್ಟ ರೀತಿ ಮಾತ್ರ ಈಗಲೂ ನನಗೊಂದು ಅಚ್ಚರಿ. ನನಗೂ ಸಹ ನನ್ನ ಮಕ್ಕಳಿಗೆ ಅಷ್ಟು ಸಮಯ ಕೊಡಲು ಒಮ್ಮೊಮ್ಮೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಾನು ನನ್ನ ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲವಾ ಎನ್ನುವ ಅನುಮಾನವೂ ನನಗೆ ಕಾಡಿಬಿಡುತ್ತದೆ. ಆದರೆ ಅವರ ಒಟ್ಟಾರೆ ಬದುಕೇ ಒಂದು ಪಾಠವಾಗಿ ನನ್ನ ಮುಂದಿದೆ. ನನ್ನ ಅವಶ್ಯಕತೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ಬಳಸುತ್ತಾ ನಡೆಯಬೇಕಿದೆ. ಒಂದಂತೂ ನಿಜವಾಯಿತು. ನನ್ನಪ್ಪ ಮಹತ್ವಾಕಾಂಕ್ಷಿಗಳಾಗಿರಲಿಲ್ಲ. ಅವರಿಗೆ ಏನನ್ನೋ ಸಾಧಿಸಬೇಕು ಎನ್ನುವ ಹಂಬಲವಿರಲಿಲ್ಲ. ಆದರೆ ತಮ್ಮ ಮಕ್ಕಳು ಸನ್ನಡತೆಯುಳ್ಳವರಾಗಿರಬೇಕು, ಸದ್ಗುಣಗಳನ್ನು ಕಲಿತಿರಬೇಕು, ಸನ್ಮಾರ್ಗದಲ್ಲಿ ನಡೆಯಬೇಕು ಎನ್ನುವುದಷ್ಟೇ ಅವರಿಗೆ ಮುಖ್ಯವಾಗಿತ್ತು. ಬೇರೆಯವರ ಒಂದು ಸಣ್ಣ ಐದು ಪೈಸೆಯನ್ನೂ ಮುಟ್ಟಬಾರದು ಎಂಬ ಪಾಠ ನಮಗೆ ಸಿಕ್ಕಿದ್ದು ಅತಿ ಸಣ್ಣ ವಯಸ್ಸಿನಲ್ಲಿ. ಇವತ್ತಿಗೂ ನಮಗಿರುವುದರಲ್ಲಿ ನಾವು ತೃಪ್ತರೇ ವಿನಃ ಮತ್ತೊಬ್ಬರ ಹಣಕ್ಕೆ ಆಸೆ ಪಡಬೇಕು ಎಂದು ಯಾವತ್ತು ಅನಿಸಿಯೇ ಇಲ್ಲ ನಮಗೆ. ಅವರು ಕೊಟ್ಟಿರುವ ಸಂಸ್ಕಾರ ಅಷ್ಟು ಗಟ್ಟಿಯಾದದ್ದು. ಇವತ್ತು ಅಪ್ಪ ಅಮ್ಮನಿಂದ ಬಹಳ ದೂರದಲ್ಲಿದ್ದು ಬದುಕುತ್ತಿದ್ದರೂ ಅವರು ಕಲಿಸಿದ ಗುಣಗಳು ಸದಾ ನಮ್ಮನ್ನು ಕಾಯುತ್ತಿವೆ, ನಡೆಸುತ್ತಿವೆ. ಕೆಟ್ಟದ್ದರ ನಡುವೆಯೂ ಒಳ್ಳೆಯದನ್ನು ಆರಿಸಿಕೊಂಡು ನಡೆಯುವುದನ್ನು ಹೇಳಿಕೊಡುತ್ತಿವೆ. ಅದರೆ ಈಗಲೂ ಅಪ್ಪ ನಂಬುತ್ತಾರೆ, “ನಾನು ನನ್ನ ವಿದ್ಯಾರ್ಥಿಗಳಿಗೆ ನಿಸ್ವಾರ್ಥದಿಂದ ಹೇಳಿಕೊಟ್ಟ ನಾಲ್ಕು ಅಕ್ಷರಗಳಿಂದಾಗಿಯೇ ದೇವರು ನನ್ನ ಮಕ್ಕಳನ್ನ ಕಾಪಾಡಿದಾನೆ” ಅಂತ. ಆದರೆ ನಾನು ನಂಬುವುದು ಮಾತ್ರ ಅವರ ಪ್ರಾಮಾಣಿಕತೆ, ನಿಸ್ವಾರ್ಥತೆ, ಪರಿಶ್ರಮ, ತ್ಯಾಗ, ಮುಗ್ಧತೆ ಮತ್ತು ಪ್ರಂಜಲ ಮನಸಿನ ಪ್ರೀತಿಯನ್ನು ಮಾತ್ರ…. ಈಗ ಯೋಚಿಸುವುದಿಷ್ಟೇ ನಾನು ನನ್ನ ಮಕ್ಕಳನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಿದ್ದೇನೆ?! ಅವರ ಒಂದಿಡೀ ಘನ ಬದುಕಿಗಾಗುವಷ್ಟು ದಟ್ಟ ಅನುಭವಗಳನ್ನು ನಾನು ಕಟ್ಟಿಕೊಡುತ್ತಿರುವೆನಾ?! ಅವರಿಗೆ ಎಂತಹ ಮಾರ್ಗವನ್ನು ತೋರಿಸುತ್ತಿದ್ದೇನೆ ನಾನು?! ಇವತ್ತಿನ ಅಂತರ್ಜಾಲದ ಯುಗದಲ್ಲಿ ನಮಗೆ ಮೊಬೈಲಿಗಿಂತಲೂ ಪ್ರಿಯವಾದದ್ದು ಬೇರೊಂದಿಲ್ಲ. ಕಂಪ್ಯೂಟರ್, ಟೀವಿಯನ್ನೂ ಹಿಂದಿಕ್ಕಿದೆ ಈ ಮೊಬೈಲು. ಅದು ನಮ್ಮ ಜೀವನದ ಅವಿಭಾಜ್ಯ ಅಂಗವೆನಿಸತೊಡಗಿದೆ. ಊಟ ನಿದ್ರೆಯ ಜೊತೆಗೆ ನಮ್ಮ ಆಯುಷ್ಯವನ್ನೂ ಕಸಿಯುತ್ತಿವೆ ಈ ಮೊಬೈಲುಗಳು. ಸಾಮಾಜಿಕ ತಾಣಗಳೆನ್ನುವ ವರ್ಚುವಲ್ ಪ್ರಪಂಚವನ್ನೇ ಅತಿಯಾಗಿ ಹಚ್ಚಿಕೊಂಡು ಅದನ್ನೇ ಸತ್ಯ ಎನ್ನುವಂತೆ ಬದುಕುತ್ತಿದ್ದೇವೆ ನಾವು. ಮೊನ್ನೆ ಒಂದು ಕತೆ ಓದಿದೆ. ಅದು ಬಹಳಷ್ಟು ಕಡೆ ಬಹಳಷ್ಟು ಸಮಯದಿಂದ ಹರಿದಾಡುತ್ತಿದ್ದು ನನ್ನ ಗಮನಕ್ಕೂ ಬಂದಿತ್ತು. ಅದೊಂದು ಶಾಲೆ. ಅಲ್ಲೊಬ್ಬ ಶಿಕ್ಷಕಿ. ಒಂದು ದಿನ ಆಕೆ ತನ್ನ ವಿದ್ಯಾರ್ಥಿಗಳಿಗೆ “ಮುಂದೆ ನಿಮಗೆ ಏನಾಗಬೇಕೆಂದು ಆಸೆ ಇದೆ ಎನ್ನುವುದನ್ನು ಒಂದು ಪೇಪರ್ ನಲ್ಲಿ ಬರೆದು ಕೊಡಿ” ಎನ್ನುತ್ತಾಳೆ. ಎಲ್ಲ ಮಕ್ಕಳೂ ಬರೆದುಕೊಡುತ್ತಾರೆ. ಶಿಕ್ಷಕಿ ಅವನ್ನು ಕರೆಕ್ಷನ್ ಮಾಡಲಿಕ್ಕಾಗಿ ಮನೆಗೆ ತರುತ್ತಾಳೆ. ಮನೆಕೆಲಸ, ಅಡುಗೆ, ಊಟ ಎಲ್ಲ ಮುಗಿಸಿ, ದಿನನಿತ್ಯದಂತೆ ಒಂದಷ್ಟು ಹೊತ್ತು ಮೊಬೈಲ್ ನೋಡಿ, ಮಲಗುವ ಮುನ್ನ ಆ ಪೇಪರ್ ಗಳನ್ನು ಓದಲು ಶುರುಮಾಡುತ್ತಾಳೆ. ಪಕ್ಕದಲ್ಲಿ ಅವಳ ಗಂಡ ಮೊಬೈಲ್ ನಲ್ಲಿ ಮುಳುಗಿರುತ್ತಾನೆ. ಇದ್ದಕ್ಕಿದ್ದ ಹಾಗೆ ಅವಳು ಒಂದು ಪೇಪರ್ ಓದುತ್ತಾ ಅಳಲು ಶುರು ಮಾಡುತ್ತಾಳೆ. ಆಗ ಅವಳ ಗಂಡ ಯಾಕೆ ಅಳ್ತಿದಿ ಎಂದು ಕೇಳುತ್ತಾನೆ. ಆಗ ಆಕೆ ಹೇಳುತ್ತಾಳೆ, ಇಲ್ಲೊಂದು ವಿದ್ಯಾರ್ಥಿಯ ಬರೆಹ ನೋಡಿ ಅಳು ಬಂತು ಎನ್ನುತ್ತಾಳೆ. ಆಗ ಗಂಡ ಏನಂಥದ್ದು ಬರೆದಿದ್ದಾನೆ ಆ ಹುಡುಗ ಎಂದು ಕೇಳುತ್ತಾನೆ. ಆಗ ಆ ಶಿಕ್ಷಕಿ ಆ ಬರೆಹವನ್ನು ಓದತೊಡಗುತ್ತಾಳೆ, “ಮಿಸ್ ನನಗೆ ದೊಡ್ಡವನಾದ ಮೇಲೆ ಒಂದು ಸ್ಮಾರ್ಟ್ ಫೋನ್ ಆಗಬೇಕು ಅಂತ ಆಸೆ. ಯಾಕಂದ್ರೆ ಅಪ್ಪ ಅಮ್ಮ ನಂಗಿಂತ ಮೊಬೈಲನ್ನೆ ತುಂಬ ಪ್ರೀತಿಸ್ತಾರೆ. ರಾತ್ರಿ ಮಲಗುವಾಗಲು ಅದನ್ನೇ ನೋಡ್ತಾರೆ, ಬೆಳಗ್ಗೆ ಕಣ್ಣು ಬಿಟ್ಟಾಗಲೂ ಅದನ್ನೇ ನೋಡ್ತಾರೆ. ನಂಜೊತೆ ಎರೆಡು ಮಾತಾಡೋದಿಲ್ಲ, ಪ್ರೀತಿಯಿಂದ ಇರೋದಿಲ್ಲ. ಸದಾ ಮೊಬೈಲಿನಲ್ಲೇ ಮುಳುಗಿರ್ತಾರೆ. ಇನ್ನು ಕಾಲ್ ಬಂದುಬಿಟ್ಟರೆ ಮುಗೀತು. ನಾನೊಬ್ಬ ಇದೀನಿ ಎನ್ನುವುದೇ ನೆನಪಿರೋದಿಲ್ಲ ಅವರಿಗೆ. ಅದಕ್ಕೆ ನಾನೊಂದು ಸ್ಮಾರ್ಟ್ ಫೋನ್ ಆಗಬೇಕು ಅಂತ ಆಸೆ. ಆಗ ಅಪ್ಪ ಅಮ್ಮ ನನ್ನನ್ನೇ ಪ್ರೀತಿಸ್ತಾರೆ” ಎಂದು ಓದಿ ಮುಗಿಸುತ್ತಾಳೆ. ಅಷ್ಟು ಹೊತ್ತಿಗಾಗಲೇ ಗಂಡನ ಕಣ್ಣೂ ತುಂಬಿರುತ್ತದೆ. ಎಂಥದೋ ತಪ್ಪಿತಸ್ಥ ಭಾವ ಅವನನ್ನೂ ಕಾಡತೊಡಗಿರುತ್ತದೆ. ಮತ್ತೆ ಗೊಗ್ಗರು ದನಿಯಲ್ಲಿ ಆ ಹುಡುಗ ಯಾರು ಎಂದು ಕೇಳುತ್ತಾನೆ. ಆ ಹುಡುಗ ಬೇರೆ ಯಾರೂ ಅಲ್ಲ ನಮ್ಮ ಮಗನೇ ಕಣ್ರೀ ಎನ್ನುತ್ತಾ ಮತ್ತೂ ಜೋರಾಗಿ ಅಳತೊಡಗುತ್ತಾಳೆ ಆ ಶಿಕ್ಷಕಿ. ಇದಂತೂ ಬಹುತೇಕ ನಮ್ಮಲ್ಲರಿಗೂ ಅನ್ವಯಿಸುವ ಕತೆಯೇನೋ ಅನಿಸಿಬಿಟ್ಟಿತು ನನಗೆ. ನಾವು ನಮ್ಮ ಮಕ್ಕಳಿಗೆ ನ್ಯಾಬದ್ಧವಾಗಿ ಅವರಿಗೆ ಸಿಗಬೇಕಾದ ಸಮಯವನ್ನ ಕೊಡುತ್ತಿಲ್ಲದ ಅಪರಾಧಿಗಳು. ಇನ್ನು ಆ ಮಕ್ಕಳು ಬೆಳೆದಾದ ಮೇಲೆ ಇನ್ನೆಂತಹ ಮೌಲ್ಯಗಳನ್ನು ಬೆಳೆಸಿಕೊಳ್ಳಲು ತಾನೆ ಸಾಧ್ಯ. ಮಕ್ಕಳು ನೋಡ ನೋಡುತ್ತಲೇ ಬೆಳೆದುಬಿಡುತ್ತಾರೆ. ಅವರ ಬೆಳವಣಿಗೆಯ ಪ್ರತಿ ಹಂತವನ್ನೂ ನಾವು ಅಚ್ಚರಿಯಿಂದ ಕಂಡು ಆನಂದಿಸಿ ಪ್ರೀತಿಸಬೇಕು. ಅದನ್ನೇ ಮಾಡದೆ ಹೋದರೆ ಮುಂದೆ ಆ ಮಕ್ಕಳು ನಮ್ಮನ್ನು ಯಾವ ಕಾರಣಕ್ಕಾಗಿ ನೆನಪಿಡಬೇಕು… ಪೇರೆಂಟಿಂಗ್ ಕೂಡ ಬಹಳ ಜವಾಬ್ದಾರಿಯುತ ಕೆಲಸ. ಹೆತ್ತರೆ ಮಾತ್ರ ಸಾಕಾಗುವುದಿಲ್ಲ. ಮಕ್ಕಳ ಅವಶ್ಯಕತೆಗೆ ಮೀರಿ ಸೌಲಭ್ಯಗಳನ್ನು ಕೊಟ್ಟು ಗಿಲ್ಟ್ ಕಳೆದುಕೊಳ್ಳುವುದಲ್ಲ, ಅವರಿಗೆ ಕೊಡಬೇಕಾದ ಸಮಯ ಕೊಟ್ಟು ಅವರನ್ನ ಪ್ರೀತಿಯಿಂದ ಪ್ರಭಾವಿಸಬೇಕಿದೆ. ಸರಿ ತಪ್ಪುಗಳನ್ನು ಗುರುತಿಸಿ ಸರಿದಾರಿ ಕಂಡುಕೊಂಡು ನಡೆಯುವುದನ್ನು  ಕಲಿಸಿಕೊಡಬೇಕಿದೆ. ಇನ್ನದಾರೂ ಒಂದಷ್ಟು ಹೊತ್ತು ಮೊಬೈಲ್ ಬಿಸಾಕಿ ನಮ್ಮ ಮಕ್ಕಳ ಜೊತೆ ಕೂತು ಒಂದಷ್ಟು ಚಂದದ ಸಮಯವನ್ನು ಕಳೆಯಬೇಕಿದೆ ಅಂತ ಅನಿಸುತ್ತಿರುವುದನ್ನು ನನ್ನಿಂದಲೇ ಶುರುಮಾಡಬೇಕಿದೆ. ಮತ್ತೆ ಎಲ್ಲಾ ಒಳ್ಳೆಯದೇ ಆಗುತ್ತೆ ಎನ್ನುವ ನಂಬಿಕೆಯ ಬೀಜವನ್ನು ಬಿತ್ತಿಕೊಂಡು ಅದು ಮೊಳೆತು ಬೆಳೆದು ಹೆಮ್ಮರವಾಗುವುದನ್ನು ಇಂಚಿಂಚೂ ಕಾಣಬೇಕಿದೆ… ********************************** –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಮಕ್ಕಳ ವಿಭಾಗ

ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ!

ಅನುಭವ ಕಥನ  ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ! ವಿಜಯಶ್ರೀ ಹಾಲಾಡಿ ಹೋಳಿಹಬ್ಬ ಬರುವುದು ಬೇಸಗೆಯ ವಸಂತಮಾಸದಲ್ಲಿ… ಅಂದರೆ ಮಾವು, ಗೇರು ಮತ್ತು ಕಾಡಿನ ಬಹುತೇಕ ಮರಗಳು ಚಿಗುರು, ಹೂ ಬಿಡುವಕಾಲದಲ್ಲಿ. ವಿಜಿಯ ಮನೆ ಹತ್ತಿರದ ಕಾಡುಗಳಲ್ಲಿ ಕೆಲವು ಮಾವಿನಮರಗಳಿದ್ದವಲ್ಲ, ಅವು ಚಿಗುರು ಬಿಡುವುದನ್ನು ನೋಡಬೇಕು! ಇಡಿ ಮರವೇ ಹೊಳೆಯುವ ಕೆಂಪು ಬಣ್ಣವಾಗಿಬಿಡುತ್ತಿತ್ತು. ಇದೇ ಸಂದರ್ಭದಲ್ಲಿ ಹೋಳಿಹಬ್ಬವೂ ತನ್ನ ಬಣ್ಣ ಸೇರಿಸಿ ಕೆಂಪು, ಹಳದಿ, ಹಸಿರು, ಕಿತ್ತಳೆ ವರ್ಣಗಳಲ್ಲಿ ಅವರ ಊರು ಹೊಳೆಯುತ್ತಿತ್ತು. ಅಲ್ಲಿ ಕುಡುಬಿ ಜನಾಂಗದವರ ಮನೆಗಳು ಸಾಕಷ್ಟಿದ್ದವು. ಅವರ ಕುಂದಾಪುರ ತಾಲ್ಲೂಕಿನಲ್ಲಿ ಕುಡುಬಿಯರು ಬಹುಸಂಖ್ಯೆಯಲ್ಲಿದ್ದಾರೆ. ವಿಜಿಯ ಬಾಲ್ಯಕಾಲದಲ್ಲಿ ಕುಡುಬಿಯರ ದಿನನಿತ್ಯದ ವೇಷಭೂಷಣಕೂಡಾ ವಿಶಿಷ್ಟವಾಗಿತ್ತು. ಹೆಂಗಸರು ಸೀರೆ ಉಡುವ ರೀತಿಯೇ ಬೇರೆ. ‘ಗೇಂಟಿ’ ಹಾಕಿ ಸೀರೆಯುಟ್ಟು ಕೊರಳಿಗೆ ಹತ್ತಾರು ಮಣಿಸರಗಳನ್ನು ಹಾಕಿಕೊಳ್ಳುತ್ತಿದ್ದರು. ತಲೆತುಂಬ ಅಬ್ಬಲಿಗೆ ಹೂ ಮುಡಿದು ಮೂಗಿಗೆ ದೊಡ್ಡ ಹರಳಿನ ಮೂಗುತಿ, ಕಿವಿಗೆ ಬೆಂಡೋಲೆ, ಬುಗುಡಿ, ಕೈತುಂಬ ಗಾಜಿನ ಬಳೆಗಳನ್ನಿಟ್ಟು ಖುಷಿ ಖುಷಿಯಾಗಿ ಅವರು ನಡೆದುಬರುವುದೇ ಒಂದು ಜಾಪು! ಕುಡುಬಿಯರು ಪ್ರತಿವರ್ಷ ಆಚರಿಸುತ್ತಿದ್ದ ಹೋಳಿಹಬ್ಬವಂತೂ ವಿಶೇಷ. ವಿಜಿ ಮತ್ತು ಗೆಳತಿಯರು ಆ ಸಮಯದ ಹೋಳಿ ಕುಣಿತವನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಸರಿಸುಮಾರು ಹತ್ತು-ಹದಿನೈದು ದಿನದ ಹಬ್ಬವಿದು. ಅಮಾವಾಸ್ಯೆಯ ನಂತರ ಶುರುವಾಗಿ ಹುಣ್ಣಿಮೆಯವರೆಗೆ ಇರುವ ಹಬ್ಬ. ಕುಡುಬಿಯರು ತಮ್ಮಲ್ಲೇ ನಾಲ್ಕೈದು ಮೇಳಗಳನ್ನು ಮಾಡಿಕೊಳ್ಳುತ್ತಿದ್ದರು. ಮನೆಮನೆಗೆ ಹೋಗಿ ನೃತ್ಯ, ಕೋಲಾಟವನ್ನು ಈ ಸಂದರ್ಭದಲ್ಲಿ ಮಾಡುತ್ತಿದ್ದರು. ಗಂಡಸರು ಮತ್ತು ಚಿಕ್ಕ ಗಂಡುಮಕ್ಕಳು ಬಣ್ಣಬಣ್ಣದ ಉಡುಪು ಧರಿಸಿ ಮಣಿಸರಗಳಿಂದ ತಲೆಗೆ ಮುಂಡಾಸು, ಹೂಗಳು, ಹಕ್ಕಿ ಗರಿಗಳಿಂದ ಅಲಂಕರಿಸಿ ಕೊಂಡಿರುತ್ತಿದ್ದರು. ಭುಜಕ್ಕೆ ಗುಮ್ಟಿ(ಗುಮ್ಮಟೆ) ಎಂಬ ವಾದ್ಯವನ್ನು ಹಾಕಿಕೊಂಡು, ಕಾಲುಗಳಲ್ಲಿ ದೊಡ್ಡ ದೊಡ್ಡ ಗೆಜ್ಜೆ ಧರಿಸಿ ಉದ್ದಾನುದ್ದಕ್ಕೆ ಅವರು ನಡೆದು ಬರುವಾಗ ಇಡೀ ಗದ್ದೆ ಬಯಲೇ ಸಂಗೀತ, ಬಣ್ಣಗಳಲ್ಲಿ ಮುಳುಗಿದಂತೆ ಭಾಸವಾಗುತ್ತಿತ್ತು. ವಿಜಿಗೆ ಆಶ್ರ‍್ಯವಾಗುತ್ತಿದ್ದ ವಿಷಯವೆಂದರೆ ಬೇರೆ ದಿನಗಳಲ್ಲಿ ಗದ್ದೆ, ಹೊಲಗಳಲ್ಲಿ ತುಂಡು ಬಟ್ಟೆಯುಟ್ಟು ದುಡಿಯುತ್ತಿದ್ದ ಆ ಪರಿಚಿತ ಜನರೆಲ್ಲ ಆವತ್ತು ಗುರ್ತವೇ ಸಿಗದಂತೆ ಕಾಣುತ್ತಿದ್ದುದು! ಅಬ್ಬ, ಆ ಹೊಸ ವೇಷದಲ್ಲಿ ಅವರೆಲ್ಲ ‘ಅವರೇಅಲ್ಲ’ ಎಂಬಷ್ಟು ಚಂದ ಕಾಣುತ್ತಿದ್ದರು. ಕೆಲವು ಸಲ ರಾತ್ರಿ ಹೊತ್ತುಕುಣಿಯಲು ಬಂದರಂತೂ ಲಾಟೀನು ಬೆಳಕಲ್ಲಿ ಅವರ ಕುಡುಬಿ ಭಾಷೆಯ ಹಾಡು ಮತ್ತು ನೃತ್ಯ ನಕ್ಷತ್ರಲೋಕಕ್ಕೆ ಕರೆದೊಯ್ಯುತ್ತಿತ್ತು! ಅವರು ತಲೆಗೆ ಸಿಂಗರಿಸಿದ್ದ ಸುರಗಿ ಹೂಗಳ ಮಾಲೆ ಪರಿಮಳಿಸುತ್ತಿದ್ದವು. ಗುಮ್ಮಟೆ ಬಡಿಬಡಿದು ಕುಣಿಯುವಾಗ, ಕೋಲಾಟ ಆಡುವಾಗ ಅವರೆಲ್ಲ ಎಷ್ಟು ಚುರುಕು! ಆ ವೇಷದಲ್ಲಿದ್ದಾಗಲೂ ಗಿಡ್ಡ, ಹೆರಿಯ, ಬಾಗ್ಡು, ಬುತ್ಯ ಮುಂತಾದವರು “ಪುಟ್ಟಮ್ಮ ಎಂತಾ ಮಾಡ್ತೆ?” ಎಂದು ಮಾತಾಡಿಸಿದಾಗ ಪುಟ್ಟ ವಿಜಿಗೆ ಏನೋ ಭಯಮಿಶ್ರಿತ ಸಂತೋಷ! ತನ್ನದೇ ವಯಸ್ಸಿನ ಕೆಲವು ಮಕ್ಕಳೂ ವೇಷ ಹಾಕಿಕೊಂಡು ಬಂದದ್ದನ್ನು ನಿಬ್ಬೆರಗಾಗಿ ನೋಡುತ್ತಿದ್ದಳು. ಅವರ ಊರಲ್ಲಿ ನೆಲೆಸಿದ್ದ ಕೆಲ ಮರಾಠರೂ ಹೋಳಿ ಕುಣಿತವನ್ನು ಮಾಡುತ್ತಿದ್ದರು. ಇವರ ಉಡುಪಿನಲ್ಲಿ ಬಣ್ಣಗಳು ತುಸು ಕಡಿಮೆ. ಆದರೆ ಇವರ ಕೋಲಾಟ ಮಾತ್ರ ಅದ್ಭುತ. ಮರಾಠಿ ಭಾಷೆಯ ಹಾಡುಗಳಂತೂ ಬೇರೆಯೇ ತರಹ. ಮತ್ತೊಂದು ವಿಶೇಷವೆಂದರೆ ಇವರ ಮೇಳದಲ್ಲಿ ಒಬ್ಬ ‘ಅಜ್ಜ’ ಇರುತ್ತಾನೆ! ಅಂದರೆ; ಒಬ್ಬ ಹುಡುಗನಿಗೆ ದೊಡ್ಡದಾದ ಬಿಳಿಗಡ್ಡ, ಕಣ್ಣಿಗೆ ಕಪ್ಪುಕನ್ನಡಕ, ಕೈಗೆ ಕೋಲು, ಗಂಟೆ ಕೊಟ್ಟು ವಿಶೇಷವಾಗಿ ‘ಹೋಳಿ ಅಜ್ಜನ ವೇಷ’ ಹಾಕಿಸುತ್ತಾರೆ. ಯಾಕೆಂದು ಇವತ್ತಿಗೂ ಗೊತ್ತಿಲ್ಲ; ಆ ಅಜ್ಜನನ್ನು ಕಂಡರೆ ವಿಜಿಗೆ ವಿಪರೀತ ಭಯವಾಗುತ್ತಿತ್ತು. ಕೊನೆಯಲ್ಲಿ ಅಕ್ಕಿ, ಕಾಯಿ, ದುಡ್ಡಿನ ಸಂಭಾವನೆಯನ್ನು ಆ ‘ಅಜ್ಜ’ನ ಕೈಯ್ಯಲ್ಲೇ ಕೊಡುವುದಾಗಿತ್ತು. ಆ ಅಜ್ಜನೋ ಕೀಟಲೆ ಮಾಡಿ, ಕುಮ್ಬೆಟ್ ಹಾರಿ ಎಲ್ಲರನ್ನೂ ನಗಿಸುತ್ತಿದ್ದ. ಹಾಗೇ ಮಕ್ಕಳನ್ನು ಹೆದರಿಸುತ್ತಲೂ ಇದ್ದ. ಅಜ್ಜ ಸಂಭಾವನೆ ಪಡೆಯುವುದು ಕುಣಿತದ ಕೊನೆಯ ಹಂತ. ಆಮೇಲೆ ಬಾಯಾರಿಕೆ ಕುಡಿದು ಸ್ವಲ್ಪ ದಣಿವಾರಿಸಿಕೊಂಡು ಮತ್ತೊಂದು ಮನೆಗೆ ಮೇಳ ಹೊರಟುಬಿಡುತ್ತಿತ್ತು. ವಿಜಿಯ ಊರಿನಲ್ಲಿ ಅವತ್ತೆಲ್ಲ ಹೋಳಿಹುಣ್ಣಿಮೆಯ ಆಸುಪಾಸಿನ ಆ ಕೆಲವು ದಿನಗಳು ಕಳೆದದ್ದೇ ತಿಳಿಯುತ್ತಿರಲಿಲ್ಲ. ಬಂದು ಹೋಗುವ ಹೋಳಿಮೇಳಗಳ ಕುಣಿತ ನೋಡುವುದರಲ್ಲಿ ಹೊರ ಪ್ರಪಂಚವೇ ಮರೆತುಹೋಗುತ್ತಿತ್ತು. ಆ ಸಮಯದಲ್ಲಿ ಶಾಲೆಯಲ್ಲಿ ಬೇಸಿಗೆ ರಜೆಕೊಡುವ ದಿನಗಳು ಹತ್ತಿರವಾಗುತ್ತಿತ್ತು. ಪರೀಕ್ಷೆಗಳು ಮುಗಿದಿರುತ್ತಿದ್ದವು. ಶಾಲೆಯಲ್ಲೂ ಈ ಹೋಳಿಹಬ್ಬದ ಕುರಿತು ಮಕ್ಕಳು ಚರ್ಚಿಸುತ್ತಿದ್ದರು. ಹಾಗೇ ಮನೆಯ ಸುತ್ತಮುತ್ತ ಗೆಳತಿಯರು ಸೇರಿದರೂ ಅದೇ ಮಾತು. ಹೋಳಿ ಮೇಳ ಬಂದಾಗ ಅವರ ಬೀಚುಬೆಕ್ಕು ಹೆದರಿ ಎಲ್ಲೋ ಅಟ್ಟದ ಸಂದಿಯಲ್ಲಿ ಅಡಗಿ ಕೂರುತ್ತಿದ್ದುದನ್ನು ಆಡಿಕೊಂಡು ನಗುತ್ತಿದ್ದರು. ವಿಜಿ, ನೀಲಿಮಾ, ಮಾಣಿಕ್ಯಳಿಗೆ ವಿಚಿತ್ರ ಕಾಣುತ್ತಿದ್ದುದು ಹೋಳಿ ಜನರು ತಲೆಗೆ ಸಿಕ್ಕಿಸಿಕೊಳ್ಳುತ್ತಿದ್ದ ಹಕ್ಕಿ ಗರಿಗಳು! ಮನೆಯ ಹತ್ತಿರದ ತೋಟದಲ್ಲಿ, ಕಾಡಿನಲ್ಲಿ ಹಾರಾಡುವ ‘ಬಾಲದ ಹಕ್ಕಿ’ಯಿಂದ ಆ ಉದ್ದನೆ ಗರಿಗಳನ್ನು ಕದಿಯುತ್ತಿದ್ದರು ಎಂದು ಅವರಿಗೆ ಗೊತ್ತು. ಕೊಂಬೆಗಳಿಗೆ ಮೇಣ ಹಚ್ಚಿಟ್ಟು, ಹಕ್ಕಿ ಬಂದು ಕುಳಿತಾಗ ಉದ್ದ ಗರಿಗಳನ್ನು ಕಿತ್ತುಕೊಂಡು ಮತ್ತೆ ಕಾಡಿಗೆ ಬಿಡುತ್ತಾರಂತೆ. “ಪಾಪದ್ದು ಆ ಬಾಲದ ಹಕ್ಕಿ, ಅದಕ್ಕೆ ಎಷ್ಟು ಹೆದರಿಕೆಯಾಗುತ್ತದೋ, ಏನೋ” ಎಂದು ಮಾತಾಡಿಕೊಳ್ಳುತ್ತಿದ್ದರು. `ಅಂತಹ ಹಕ್ಕಿಗಳು ಪುನಃ ಕಾಡಿಗೆ ಹೋದಾಗ ಉಳಿದ ಹಕ್ಕಿಗಳು ಅವನ್ನು ಸೇರಿಸಿಕೊಳ್ಳುತ್ತಾವಾ?’ ಮುಂತಾಗಿ ಯೋಚಿಸುತ್ತಿದ್ದರು. ಏಕೆಂದರೆ ಒಮ್ಮೆ ಮನುಷ್ಯರು ಮುಟ್ಟಿದರೆ ಅಂತಹ ಹಕ್ಕಿ, ಅಳಿಲು ಮುಂತಾದ ಪ್ರಾಣಿ ಪಕ್ಷಿಗಳನ್ನು ಪುನಹ ಅವುಗಳ ಗೂಡಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಅವರು ಪುಸ್ತಕದಲ್ಲಿ ಓದಿ ತಿಳಿದುಕೊಂಡಿದ್ದರು.  “ಕಾಡಿಗೆ ಬಿಟ್ಟ ಹಕ್ಕಿಗೆ ಪುನಃ ಬಾಲ ಬೆಳೆಯುತ್ತದಾ?” ವಿಜಿ ಕೇಳುತ್ತಿದ್ದಳು. “ಹೂಂ, ಮತ್ತೆ ಬಾಲ ಬಂದಾಗ, ಮುಂದಿನ ವರ್ಷದ ಹಬ್ಬಕ್ಕೆ ಕಿತ್ತುಕೊಳ್ಳುತ್ತಾರೆ” ಎಂದು ನೀಲಿಮಾ ಹೇಳುತ್ತಿದ್ದಳು. “ಹಾಗಾದರೆ ಈ ಬಾಲದ ಹಕ್ಕಿಗೆ ಬಾಲವೇ ಇರಬಾರದಿತ್ತು, ಪಾಪ” ಎಂದುಕೊಳ್ಳುತ್ತಿದ್ದಳು ವಿಜಿ. ಮನರಂಜನೆಗಳೇ ಕಮ್ಮಿಯಿದ್ದ ವಿಜಿಯ ಊರಿನಲ್ಲಿ ಹೋಳಿಹಬ್ಬ ಒಂದು ದೊಡ್ಡ ಕುತೂಹಲಕಾರಿ ವಿಷಯವಾಗಿತ್ತು; ಹೌದು ವರ್ಷಕ್ಕೊಮ್ಮೆಅದು ಮರಳುತ್ತಿತ್ತು! ******************************************************

ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ! Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ ಹೊಸ ಬನಿ – ೧೫. ದೀರ್ಘ ಶೀರ್ಷಿಕೆಗಳ ಭಾರದಲ್ಲೂ ಸರಳ ನಡಿಗೆಯ ಮಂಜುಳ. ಡಿ  ಕವಿತೆಗಳು ಮಂಜುಳ ಡಿ ಈಗಾಗಲೇ ವಿಶ್ವವಾಣಿ ಪತ್ರಿಕೆಯ ಅಂಕಣ ಬರಹಗಾರರಾಗಿ ಕವಯತ್ರಿಯಾಗಿ ಖ್ಯಾತರಾದವರು. ಈಗಾಗಲೇ ಮೂರು ಪುಸ್ತಕಗಳನ್ನು ಪ್ರಕಟಿಸಿರುವ ಅವರು ಬೆಂಗಳೂರಿನವರು. ಅವರ ಫೇಸ್ಬುಕ್ ಬರಹಗಳಲ್ಲಿ ಗದ್ಯ ಪದ್ಯಗಳ ಮಿಶ್ರಣವನ್ನು ಕಾಣಬಹುದು. “ಆಸೆಯ ಕಂದೀಲು” ಕವನ ಸಂಕಲನಕ್ಕೆ ಕಾವ್ಯ ವ್ಯಾಮೋಹಿ ವಾಸುದೇವ ನಾಡಿಗರು ಮುನ್ನುಡಿ ಬರೆದಿರುವುದರಿಂದ ಸಂಕಲನದ ಗುಣ ನಿಷ್ಕರ್ಷೆ ಸುಲಭದ್ದೇ ಆಗಿದೆ. ಈ ಸಂಕಲನ ಕುರಿತು ಈಗಾಗಲೇ ಎನ್.ಡಿ.ರಾಮಸ್ವಾಮಿ ಮುಖಪುಸ್ತಕದಲ್ಲಿ ಬರೆದಿದ್ದಾರೆ. ಅವರು ಹೇಳಿದ ಹಾಗೆ ಈ ಕವಿ ಉತ್ತಮ ಕವನಗಳನ್ನು ಉತ್ಸಾಹದಿಂದ ರಚಿಸಿದ್ದಾರೆ.ಕಾವ್ಯದ ಕಸುಬುದಾರಿಕೆಯನ್ನು ಇಂಗ್ಲೀಷ್ ಸಾಹಿತ್ಯದ ಉಪನ್ಯಾಸಕಿಯಾಗಿ ಅಭ್ಯಾಸ ಮಾಡುತ್ತಲೇ ಇದ್ದಾರೆ. ಭಾಷೆ,ಭಾವ,ಬಂಧಗಳು ಕವನಗಳಲ್ಲಿ  ಉತ್ತಮವಾಗಿ ಮೂಡಿದೆ. ಕಾವ್ಯ ಶಿಲ್ಪದ ಕಸುಬುದಾರಿಕೆ ದಕ್ಕಿದೆ. ಅರ್ಥ ಪೂರ್ಣ ಕವನಗಳಲ್ಲಿ ಭಾವದ ಹೊಳೆ ಹರಿಸಿದ್ದಾರೆ. ಹೊಸತೇನೋ ಒಂದನ್ನು ಆತ್ಮದ ಬಾವಿಯಿಂದ ಕಾರಂಜಿಯಾಗಿಸಿದ್ದಾರೆ. ಕರುಳಿನ ಮಾತುಗಳಿಗೂ ದನಿಯಾಗಿದ್ದಾರೆ. ಅವರ ಚಿತ್ತ ಭಿತ್ತಿಯಲಿ ಸಾವಿರಾರು ಚಿಂತನೆಗಳಿವೆ. ಅವುಗಳಿಗೆ ನಿಜವಾದ ಕೈಮರ ಪೂರ್ವ ಸೂರಿಗಳ ಓದು. (ಇದು ಎನ್ಡಿಆರ್ ಮಾತು) ಇದೇ ಸಂಕಲನ ಕುರಿತು ಹೊನ್ನಾವರದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎಂ ಹೆಗಡೆ ಹಡಿನಬಾಳ ತುಂಬು ಭರವಸೆಯ ಮಾತನ್ನು ಹೇಳಿದ್ದಾರೆ. “‘ನನ್ನನ್ನು ನೋಯಿಸಿದ್ದಾದರೂ  ಏನು” ಎನ್ನುತ್ತಲೇ ಮನಸ್ಸನ್ನು ಕದ್ದ ವ್ಯಕ್ತಿಯ ಕುರಿತು   ‘ಆಸೆಯ ಕಂದೀಲು’ ಕವನದಲ್ಲಿ  ಕಟ್ಟಿಕೊಂಡ ಆಸೆಗಳು ಕನಸುಗಳನ್ನು ತೆರೆದಿಡುವ  ರೀತಿ ಅದ್ಭುತವಾಗಿದೆ. ಊಟ  ಮಾಡುವಾಗ , ಹಾಸಿಗೆ ಬಿಟ್ಟು ಏಳುವಾಗ ಹೆಜ್ಜೆ ಹೆಜ್ಜೆಗೂ ನೆನಪಿಸಿಕೊಳ್ಳುತ್ತ  ಇನ್ನು ಎಲ್ಲೋ ಯಾರಿಗೋ ಏನೋ ತೊಂದರೆಯಾದಾಗ ತನ್ನ ಇನಿಯನಿಗೇನಾಯಿತೋ ಪರಿತಪಿಸುವ ರೀತಿ, ಒಲಿದ  ಹೃದಯದ ಸಲುವಾಗಿ ಮಿಡಿತವನ್ನು ಧ್ವನಿಸುವ ಸಾಲುಗಳು ಅದ್ಭುತ. ಪ್ರೀತಿಯ ತೀವ್ರತೆ ಹಂಬಲ ಕಳವಳ ಕನವರಿಕೆಯೇ ಮನದಾಳದ ನೋವಿಗೆ ಕಾರಣ ಎನ್ನುವುದರ ಮೂಲಕ ಪ್ರೀತಿಯ ಆಳ ಹರಹನ್ನು ಅತ್ಯಂತ ಸುಂದರವಾಗಿ  ಚಿತ್ರಿಸಿದ್ದಾರೆ. ಒಮ್ಮೆ ಮನಸ್ಸನ್ನು ಕೊಟ್ಟ ನಂತರ ಅವರ ನೆನಪಿನ ತೀವ್ರತೆ ಅಗಾಧ ಎನ್ನುವ ಸತ್ಯವನ್ನು ‘ತೀವ್ರತೆ ಎಷ್ಟಿತ್ತೆಂದರೆ’ ಕವನದ ಮೂಲಕ ತೆರೆದಿಟ್ಟಿದ್ದಾರೆ. ಇನಿಯನ ಸನಿಹ ತರುವ ಖುಷಿಯನ್ನು ಪ್ರಕೃತಿಯ ಆಗುಹೋಗುಗಳೊಂದಿಗೆ  ಸಮೀಕರಿಸಿ ‘ ಸುಮ್ಮನೆ ನಿನ್ನೊಂದು ಇರುವಿಕೆ ‘ ಕವನದ ಮೂಲಕ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ‘ಅಣಿಯಾಗದಿದ್ದ  ಗಳಿಗೆಯಲ್ಲಿ ಮಾಧುರ್ಯವನ್ನು ಪಸರಿಸಿ ಇದೀಗ ನಿನ್ನದೇ ಆದ ನೋವಿನ ಪ್ರಪಂಚದಲ್ಲಿ ನೀನಿರುವುದು ಸರಿಯೇ?’,   ‘ನಿರ್ಲಿಪ್ತತೆಯ ತೊಡೆದು ಹಾಕಿ ನೋವಿನಲ್ಲೂ ಸಪ್ತ ಸ್ವರ ಹೊಮ್ಮಲು ಸಾಧ್ಯವಿಲ್ಲವೇನು?’ ಎಂದು ‘ ಜಗತ್ತಿನ ನೋವೆಲ್ಲಾ ಒಂದಾದರೆ ನಿನ್ನ ನೋವೇ ಒಂದು’ ಕವನದ ಮೂಲಕ ಮೆಚ್ಚಿದ ಇನಿಯನನ್ನು ಪ್ರೀತಿಯಿಂದ ತರಾಟೆಗೆ ತೆಗೆದುಕೊಳ್ಳುವ ಪರಿ ಸೊಗಸಾಗಿ ಮೂಡಿಬಂದಿದೆ . ಮನೆಯನ್ನು  ಸುಂದರಗೊಳಿಸಿ ಗೋಡೆಗಳನ್ನು ಅದೆಷ್ಟೇ ಅಲಂಕಾರ ಗೊಳಿಸಲಿ ಯಾರಿಗೂ ಏನನ್ನೂ ಕೊಡದೆ ಕೃಪಣರಾಗಿ ತನ್ನವರಿಗಾಗಿ ಅದೆಷ್ಟೇ ಕೂಡಿ ಇಟ್ಟಿರಲಿ ಪ್ರಕೃತಿ ಮುಣಿಯಲು ಇವೆಲ್ಲವೂ ನೀರುಪಾಲಾಗಲು ಎಷ್ಟು ಹೊತ್ತು… ಯಾವ ತುಂಡು ಭೂಮಿಗಾಗಿ ಕಚ್ಚಾಡುತ್ತಿರುತ್ತೇವೆಯೋ ಅವು ಗುಡ್ಡ ಕುಸಿತದೊಂದಿಗೆ  ಮಣ್ಣುಗೂಡಲು ಎಷ್ಟು ಹೊತ್ತು ಎನ್ನುವುದನ್ನು ‘ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ’  ಎನ್ನುವ ಕವನದ ಮೂಲಕ ಚೆನ್ನಾಗಿ ಚಿತ್ರಿಸಿ ಪ್ರಕೃತಿಯ ಮುಂದೆ ಮಾನವನ ಆಟ ನಡೆಯದು ಅರ್ಥವಿಲ್ಲದ ಹಗೆತನ ಜಿಪುಣತನ ಸರಿಯಲ್ಲ ಎನ್ನುವ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ‘ನಿನ್ನನ್ನು ನೋಡಿದ ಮೇಲೆ ಈಗ ಇನ್ಯಾರನ್ನುನ್ನು ನೋಡಲಿ’, ‘ನಿನ್ನೊಳಗೆ ಕರಗಿ ನಿನ್ನದೇ ಬಣ್ಣ ತಳೆದದ್ದು ಅರಿವಿಗೇ ಬರಲಿಲ್ಲ’ ಸಾಲುಗಳು ಪ್ರೀತಿಯ ಪರಾಕಾಷ್ಟತೆಯನ್ನು  ಭಾವನೆಯ ತೀವ್ರತೆಯನ್ನು ಪ್ರತಿಬಿಂಬಿಸಿದರೆ, ವಿರಹಿ, ರಿಪೇರಿ, ಕಾವು ಅಗಲಿಕೆ ಧೋರಣೆ, ಬಿಂಬ.. ಪ್ರೀತಿಯಿಂದ ಘಾಸಿಗೊಂಡ ಮನದ ಅಂತರಾಳದ ಧ್ವನಿಯಂತೆ ಇವೆ. “ಆಸೆಯ ಕಂದೀಲು” ಸಂಕಲನ ಕುರಿತ ಈ ಇಬ್ಬರ ಮಾತುಗಳನ್ನು ನಾನು ಸಂಕಲನ ನೋಡಿರದ ಕಾರಣ ಆ ಸಂಕಲನ ಕುರಿತಂತೆ ಮಹತ್ವದ್ದೆನಿಸಿದ ಕೆಲವು ಸಾಲುಗಳನ್ನು ಇಲ್ಲಿ ಹಂಚಿಕೊಳ್ಳುತ್ತಲೇ ಈ ಕವಿಯು ಫೇಸ್ಬುಕ್ಕಿನಲ್ಲಿ ಪ್ರಕಟಿಸಿದ ಕೆಲವು ಕವಿತೆಗಳನ್ನು ಪರಿಚಯಿಸುತ್ತಿದ್ದೇನೆ. ನದಿಯ ಪಾತ್ರ ಅಲ್ಲಿಯೇ ಇದೆ ಅದರ ಉದಯ ಕಾಲದಿಂದಲೂ ಹರಿಯುತ್ತಿರುವ ನೀರು ಮಾತ್ರ ಹೊಸದು ಎನ್ನುವ ನಿಲುವು ಹಳೆಯದೇ ಆದರೂ ಹರಿಯುತ್ತಿರುವ ನೀರು ಹೊಸದೇ ಆಗಿರುತ್ತದೆ ಎನ್ನುವ ಆಲೋಚನೆಯನ್ನು ಸೊಗಸಾಗಿ ಹೇಳುವ ಈ ಕವಿ  “ಭೌತಿಕತೆಯ ಗೀಳು ಮಾನಸಿಕ ಹರಿವು‌‌…” ಎನ್ನುವ ದೀರ್ಘ ಶೀರ್ಷಿಕೆಯ ಗಪದ್ಯದಲ್ಲಿ ಹೇಳುತ್ತಾರೆ. “ಕೆಂಪು ಡಬ್ಬ ಮತ್ತು ಕಾಗದದ ದೋಣಿ…” ಕವಿತೆಯ ಶೀರ್ಷಿಕೆಯೇ ಕುತೂಹಲ ಹೆಚ್ಚಿಸಿ ಆಧುನಿಕ ಫೋನುಗಳಿಗಿಂತಲೂ ಹೃದಯಕ್ಕೆ ಹತ್ತಿರವಾದ ಪತ್ರಗಳ ಮಹತ್ತನ್ನು ಹೇಳುತ್ತದೆ. “ತೆರೆ ಅಪ್ಪಳಿಸುವ ಗಳಿಗೆ…ಭಾನು ಭುವಿಯಲ್ಲಿ ಲೀನ” ಎನ್ನುವ ಪದ್ಯದ ರೀತಿ ಸೊಗಸಾಗಿದ್ದರೂ ಭಾನು ಎನ್ನುವುದು ಸೂರ್ಯನಿಗೆ ಬಾನು ಎಂದರೆ ಆಕಾಶ ಎನ್ನುವ ವ್ಯತ್ಯಾಸದ ಅರಿವು ಬಾರದೇ ಇದ್ದರೆ ಪದ್ಯ ಗೆದ್ದುಬಿಡುತ್ತದೆ. ಆಕಾಶ ಭೂಮಿಗಳು ಪರಸ್ಪರ ಮುಟ್ಟಿದರೂ ಮುಟ್ಟದೆಯೇ ಉಳಿವ ಕ್ಷಿತಿಜದ ಅರಿವು ಕೂಡ ಕವಿಯಾದವರಿಗೆ ಇರಲೇ ಬೇಕಾಗುತ್ತದೆ. “ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ…” ಎನ್ನುವ ಹೆಸರಿನ ಕವಿತೆಗೆ ಷರಾ ಬರೆದು ಕೊಡಗಿನ ಬಿರುಮಳೆಗೆ ಕುಸಿದ ನೆಲ ಕುರಿತ ಪದ್ಯವೆಂದು ಕವಿ ಹೇಳಿದರೂ ಈ ಕವಿತೆಯ ಮೊದ ಮೊದಲ ಸಾಲುಗಳು ಪ್ರತಿಧ್ವನಿಸುವುದು ಕಳೆದುಕೊಂಡ ಕನಸುಗಳನ್ನು, ಪ್ರೀತಿಯಿಂದ ಕಾಪಿಟ್ಟಿದ್ದನ್ನು ಕಳಕೊಂಡ ನೋವನ್ನು. “ಕತ್ತಿ ಮಚ್ಚು ಹಿಡಿದು ಹಗಲಿರುಳೂ ಸಾಧಿಸಿದ ಹಗೆ ಏಳೆಂಟು ಅಡಿ ಗುಡ್ಡದ ಭೂಮಿ ತನ್ನದೆನ್ನುವ ಒಡಹುಟ್ಟಿದವರ ಹಗೆತನವೂ ಕುಸಿದ ಗುಡ್ಡದೊಂದಿಗೆ ಈಗ ನಿನ್ನದೇ” ಎನ್ನುವ ತಿಳುವಳಿಕೆ ಲೋಕಕ್ಕೆಲ್ಲ ತಿಳಿದರೆ ಅದೆಷ್ಟು ಸಲೀಸು ಈ ಬದುಕು! ಆದರೆ ವಾಸ್ತವ ಹಾಗಿಲ್ಲವಲ್ಲ! “ಕುಸುಮಿತ ತೋಪಿನ ಹೂವಿನ ನವಿರು ಪರಿಮಳ, ಉರಿಬಿಸಿಲ ಪ್ರಖರತೆ ಊಹೂ ಹೆಜ್ಜೆಗಳು ನಿಲ್ಲುವ ಹಾಗಿಲ್ಲ ಮಾಡಿಕೊಂಡ ಪಣಗಳು ಕೊಟ್ಟ ಭಾಷೆಗಳು ದೂರ ದೂರ ಪಯಣ ಸಾಗಿದೆ ಹೀಗೆ ಸಾಗುತ್ತಿದೆ” ಎನ್ನುವ ವಿವೇಕದೊಂದಿಗೆ “ಆನೆ ಕುದುರೆ ಗಾಡಿಗಳಲ್ಲಿ ಸಾಗಲಾರೆವು ಅಲ್ಲಿಗೆ ಹೆಜ್ಜೆಗಳೇ ಮೂಡಬೇಕು…” ಎನ್ನುವ ಶೀರ್ಷಿಕೆಯ ಪದ್ಯ ಕೂಡ ಚಣಕಾಲ ಕಾಡದೇ ಇರದು. ನವೋದಯದ ಕಾಲದಲ್ಲಿ ಪ್ರಾಸ,ಗೇಯತೆ,ರಮ್ಯತೆಗಳಿದ್ದರೆ ಪ್ರಗತಿಶೀಲರ ಕಾಲದಲ್ಲಿ ಕನಸುಗಳೇ ರಾಜ್ಯಭಾರ ಮಾಡುತ್ತ ನವ್ಯವು ಪ್ರತಿಮೆ ರೂಪಕಗಳಲ್ಲಿ ಭಾರವಾಗುತ್ತ ಸಾಗಿದ್ದು ಬಂಡಾಯದ ಬಿಸಿಯುಸಿರು ವ್ಯವಸ್ಥೆಯೊಂದಿಗೆ ಸೆಣಸಾಟ ಈ ಎಲ್ಲವೂ ಹೊಸ ಕಾಲದ ಪದ್ಯಗಳಲ್ಲಿ ಭಿನ್ನ ರೀತಿಯಲ್ಲಿ ಮಿಶ್ರಣಗೊಂಡು ಸುಲಭಕ್ಕೆ ದಕ್ಕದ ರೀತಿಗೆ ಚಾಚಿಕೊಳ್ಳುತ್ತ ಕಾವ್ಯದ ನಡಿಗೆಯನ್ನು ಸುಲಭಕ್ಕೆ ಒಲಿಸಿಕೊಳ್ಳಲಾಗದ ಕಾಲ ಇದು. ಆದರೂ ಹೊಸ ದನಿಯಲ್ಲಿ ಧಂಡಿಯಾಗಿ ಹಾಡುವರ ಕಾಲದ ಹಾಡುಗಳನ್ನು ಅಳೆಯುವ ಮಾಪಕಗಳೇ ಇರದ ಈ ಕಾಲದ ಕವಿಗಳು ಪರಂಪರೆಯಿಂದ ಅರ್ಥವಾದ ರೀತಿಗೆ ಹೊಸ ಟ್ಯೂನ್ ಕೊಡುತ್ತಲೇ ಇದ್ದಾರೆ. ಅಂಥವರ ಪೈಕಿ ಮಂಜುಳ ಡಿ ಕೂಡ ಒಬ್ಬರು. ಬರಿಯ ಚುಟುಕುಗಳಲ್ಲೇ ಹೇಳಬೇಕಾದುದನ್ನು ಹೇಳುತ್ತಿರುವವರ ನಡುವೆ ತಮ್ಮ ದೀರ್ಘವೂ ಸ್ವಾರಸ್ಯವೂ ಆದ ಶೀರ್ಷಿಕೆಗಳ ಮೂಲಕ ಕಾವ್ಯವನ್ನು ಪ್ರಸ್ತುತ ಪಡಿಸುವ ಶೈಲಿ ಬೇರೆಯದೇ ಆಗಿದೆ. ಆದರೆ ಹೇಳಿಕೆಗಳ ಭಾರದಲ್ಲಿ ಕವಿತೆ ನಲುಗಬಾರದೆನ್ನುವ ಕಾವ್ಯ ಮೀಮಾಂಸಕರ ಮಾತು ಯಾರೂ ಮರೆಯಲಾರದ್ದು ಭೇಟಿಯಾಗದ ಭೇಟಿಗಳ ಬಗ್ಗೆ ಪ್ರೀತಿ, ಹಳಹಳಿಕೆ, ನೆನಪು, ಸಂಕಟಗಳ ಒಟ್ಟೂ ಮೊತ್ತವನ್ನು ಅದ್ಭುತವಾಗಿ ಅಭಿವ್ಯಕ್ತಿಸಿದ ಕೆಲವು ಟಿಪ್ಪಣಿಗಳೇ ಇಲ್ಲಿ ಕವಿತೆಯಾದ ಘನಸ್ತಿಕೆಯೂ ಇದೆ. ಬರಿಯ ಪ್ರೀತಿ ಪ್ರೇಮ ಕನಸುಗಳಿಗಷ್ಟೇ ತಮ್ಮ ಕವಿತೆಗಳ ಹರಹನ್ನು ಸೀಮಿತಗೊಳಿಸದೇ ಬದುಕಿನ ಹಲವು ವಿಸ್ತರಗಳ ಕಡೆಗೂ ಗಮನ ಸೆಳೆಯುವ ಈ ಕವಿಯ ಮುಂದಿನ ರಚನೆಗಳ ಬಗ್ಗೆ ಕುತೂಹಲ ಹೆಚ್ಚುತ್ತಲಿದೆ. ಘೋಷವಾಕ್ಯವು ಕವಿತೆಯಾಗುವುದಿಲ್ಲ‍ ಮತ್ತು ಕವಿತೆಯಾಗಿ ಗೆದ್ದವು ಅನುದಿನದ ಘೋಷ ವಾಕ್ಯಗಳೇ ಆಗಿ ಬದಲಾಗುತ್ತವೆ ಎನ್ನುವ ಕಿವಿಮಾತಿನೊಂದಿಗೆ ಈ ಕವಿಯ ಕೆಲವು ರಚನೆಗಳನ್ನು ನಿಮ್ಮ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ. ೧. ಭೌತಿಕತೆಯ ಗೀಳು ಮಾನಸಿಕ ಹರಿವು‌‌… ನದಿಯ ಪಾತ್ರ ಅಲ್ಲಿಯೇ ಇದೆ ಅದರ ಉದಯ ಕಾಲದಿಂದಲೂ ಹರಿಯುತ್ತಿರುವ ನೀರು ಮಾತ್ರ ಹೊಸದು ಅದೇ ಹಳೇ ಆಲದ ಮರ ಅದೇ ನೆರಳು ವಿಶಾಲತೆ ಚಿಗುರು ಟಿಸಿಲೊಡೆದು ಮೂಡಿದ ನವಿರು ಹಸಿರು ಕಿರು ತೋಟದ ಅದೇ ರೋಜಾ ಗಿಡ ನೆನ್ನೆಯೂ ಹೂ ಬಿಟ್ಟಿತ್ತು ಇಂದೂ ಬಿಟ್ಟಿದೆ ಆದರೆ ದಳಗಳ ವಿನ್ಯಾಸ ಮಾತ್ರ ನೂತನ ಅವೇ ಸ್ವರಗಳು ಹೊಸ ಹೊಸ ವಿನ್ಯಾಸ ಲಯದಲ್ಲಿ ಹೆಣೆದು ಹೊಮ್ಮುವ ರಾಗಗಳ ನವೀನ ವಿನ್ಯಾಸಗಳು ಮರ ಗಿಡ ಹೂ ನದಿ ಕಡಲು ಎಲ್ಲಾ ಲೋಕಗಳಿಗೂ ಶೇಖರಣೆಯ ತೆವಲಿಲ್ಲ ಅರೆಗಳಿಯಲ್ಲಿ ಮೊಬೈಲಿನಲ್ಲಿ ತೆಗೆದ ನೂರಾರು ಚಿತ್ರಗಳ ಭೌತಿಕತೆ ಒಂದೆರಡು ಸೃಷ್ಟಿಸುವಲ್ಲಿ  ವರ್ಣಚಿತ್ರ ಕಲಾವಿದನಿಗೆ ಅವಧಿಯ ಗಣನೆಯೆಲ್ಲಿ ಇದು ಮಾನಸಿಕ ಹರಿವು ಅದೇ ಕ್ಷಿತಿಜ ಅದೇ ಭೂಮಿ ಇಚ್ಛಿತ ಜೀವದೊಂದಿಗೆ ಲಯಗೊಂಡರೆ ಹೊಸದೊಂದು ಬಣ್ಣ ಪಡೆವ ಹಾಗೆ ಇಬ್ಬರ ನಡುವಿನ ಗೆರೆಯೂ ಅಳಿಸಿದ ತಾದಾತ್ಮ್ಯ ಭಾವ ಇಷ್ಟಕ್ಕೂ ನವೀನ ಗಳಿಗೆಗಳು ನವ ಅನುಭವ ಅಂದರೆ ಹೊಸ ವಿವರಗಳಲ್ಲ ಹಿಂದಿನ ಮುಂದಿನ ಅಡ್ಡ ಉದ್ದ ಹೆಸರುಗಳೆಲ್ಲಾ ಮರೆತು ಹೊಸ ಗಳಿಗೆಯೊಂದಕ್ಕೆ ಮನಸು ಹರಿಬಿಟ್ಟ ಗಳಿಗೆ ದಣಿವಿಲ್ಲದೇ ಹೊಸತನ ಚಲನಶೀಲತೆ ಮೂಡಿ ಆತ್ಮದ ಲಯದೊಂದಿಗೆ ಚೇತೋಹಾರಿಯಾಗಿ ಬೆಸೆಯುವ ಚೇತನ… ೨.  ಕೆಂಪು ಡಬ್ಬ ಮತ್ತು ಕಾಗದದ ದೋಣಿ… ಬರಿಯ ಟಪಾಲುಗಳಿಲ್ಲ ಈ ಕೆಂಪು ಡಬ್ಬಿಯಲ್ಲಿ ನೂರಾರು ಕೈಗಳು ದಾಟಿ ನೂರಾರು ಗಾವುದ ತೆರಳಿ ಯಾರದೋ ಸ್ಪರ್ಶಕ್ಕೆ ಕಾದಿರುವ ಸ್ವಗತಗಳು ಮುಖತಃ ಮಾತಾಗದ ಹೇಳಲೇಬೇಕಾದ ಎಷ್ಟೋ ಮಾತುಗಳಿಗೆ  ಕನಸು ಸಮಾಧಾನ ಎಚ್ಚರ ತಪ್ಪೊಪ್ಪಿಗೆ ನೆನಪು ಎಲ್ಲಾ ಸ್ವಗತಗಳು ಪದಗಳಲ್ಲಿ ಸ್ಪಷ್ಟಗೊಳ್ಳುವ ಹಾದಿ ಎಷ್ಟೋ ದೂರ ಪಯಣಿಸಿ ಬಂದ ಕಾಗದ ಒಡೆಯುವ ಗಳಿಗೆಯ ಉಸಿರ ಕಂಪು ಆತ್ಮಿಕ‌ ಸಂವಾದವೊಂದರ ಹರವು ಜೀವಕ್ಕೆ ಉಣಿಸಬಹುದಾದ ಹಿತ ಬರೀ ಫೋನುಗಳು ಪತ್ರದ ಹಂಗೆಲ್ಲಿ ಈಗ…! ಭಾವ ಭೂಮಿಕೆಯ  ಹರಿಸಿ ನಿಂತ ಪತ್ರವನ್ನೊಮ್ಮೆ ಹಿತವಾಗಿ ನೇವರಿಸಿ ಅಕ್ಷರಗಳಾದ ಸ್ವಗತ  ಕಣ್ತುಂಬಿಕೊಳ್ಳುವ ವಿಸ್ಮಯದಲ್ಲಿ ವಿಹರಿಸುವ ತವಕ  ಕೆಂಪುಡಬ್ಬಿಯ ನೋಡಿದಾಗ ಮೂಡದಿರದೇ… ೩.ತೆರೆ ಅಪ್ಪಳಿಸುವ ಗಳಿಗೆ…ಭಾನು ಭುವಿಯಲ್ಲಿ ಲೀನ ದೃಷ್ಟಿ ಹಾಯಿಸಿದಷ್ಟೂ ನಿನ್ನ ಹರವು ನೀಲಾಕಾಶದ ಬಣ್ಣ ತಳೆದು ನೀಲೀ ತಟ್ಟೆಯಂತೆ ತಂಪಗಿದ್ದೆ ದಣಿವಿಲ್ಲ ಮೋಡಗಳಿಗೆ ಅದೆಷ್ಟು ತಡೆದಿದ್ದವೋ ಛಿದ್ರಗೊಂಡು ಅದೆಷ್ಟು  ಸುರಿದರೂ ತೀರದ ನೋವು ಮಳೆಯ ಅಗಾಧತೆಗೆ ಉಲ್ಬಣಗೊಂಡ ಪರಿ ಮಕ್ಕಳು ಕುಂಚ ಅದ್ದಿ ತೆಗೆದ ನೀರಿನಂತೆ  ವಿಹ್ವಲ ವರ್ಣಕ್ಕೆ ಭಾನು ಇಳೆಗಿಳಿದಿದೋ ಕಡಲೇ ಭಾನುವಿನತ್ತ ಧಾವಿಸಿದೆಯೋ ದಿಕ್ಕುಗಳಾದರೂ ಎಲ್ಲಿ ಎಲ್ಲಾ ನಾದಗಳೂ ಬಣ್ಣಗಳೂ ಹಂಗು ಹಮ್ಮುಗಳು ಲಯ ಕಳೆದುಕೊಂಡ ಈ ರುದ್ರಘೋಷ ಅದೆಷ್ಟು ತಪನ ತನ್ಮಯತೆಯಿಂದ ಕಾದ ತವಕದ ತೀವ್ರತೆ ಮಿತಿ‌ ಕಳೆದು ತೆರೆ ಅಪ್ಪಳಿಸುವ ಗಳಿಗೆ ಜಲದಲ್ಲಿ ಜಲ ಒಂದಾಗುವ ಗಳಿಗೆ ಭಾನು ಭೂಮಿಯಲ್ಲಿ ಲೀನ ೪. ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ… ನೆನ್ನೆಯಷ್ಟೇ  ಚಂದಗೊಳಿಸಿದ್ದ ಗೋಡೆಯ ಬಣ್ಣಗಳು ಮುರಿದುಬಿದ್ದ ಹೆಂಚುಗಳೊಂದಿಗೆ ಬಣ್ಣ ಹಂಚಿಕೊಂಡಿವೆ ಅದೆಷ್ಟೊ ಬೆಲೆಯಿತ್ತು ತಂದು ಅಷ್ಟೇ ಬೆಲೆಯ  ಫ್ರೇಮಿನಲಿ  ಸಿಕ್ಕಿಸಿಟ್ಟು ಬೀಗಿದ ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ ಆಳು ಕಾಳಿಗೂ  ಬೇಡಿ ಕೇಳಿದವರಿಗೂ ನೀಡದೇ ಮುಂದೆ ಬೇಕಾದಿತೆಂದು ಪೇರಿಸುತ್ತಲೇ ಇಟ್ಟ ಧವಸ ನೆನಸಿ ಬೇಯಿಸುವ ಗೋಜಿಲ್ಲ ಧುತ್ತೆಂದು ಇಂದು ತಾನೇ-ತಾನಾಗಿ  ಧಾರೆಯಲಿ ನೆನಸಿಕೊಂಡಿವೆ ಯಾರದೋ ಬಂಗಲೆಯ ಮುಂದಿನ ಗಣಪ ಪಕ್ಕದ

Read Post »

You cannot copy content of this page

Scroll to Top