ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಕಾರವಾರದ ಕರಾವಳಿಯಲ್ಲಿ ಅರಳಿದ ಕಾವ್ಯಚೇತನ.”ವಿಶೇಷ ಲೇಖನ ಎನ್.ಜಯಚಂದ್ರನ್

ವ್ಯಕ್ತಿ ಸಂಗಾತಿ ಎನ್.ಜಯಚಂದ್ರನ್ “ಕಾರವಾರದ ಕರಾವಳಿಯಲ್ಲಿ ಅರಳಿದ ಕಾವ್ಯಚೇತನ.”  ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಅಮರನಾದ ಮಹಾಕವಿ ರವೀಂದ್ರನಾಥ ಟಾಗೋರ್  ಅವರು ಕೇವಲ ಕವಿ ಮಾತ್ರವಲ್ಲ; ಚಿಂತಕ, ತತ್ವಜ್ಞಾನಿ, ಸಂಗೀತಗಾರ, ಶಿಕ್ಷಣತಜ್ಞ ಹಾಗೂ ಮಾನವತಾವಾದಿಯೂ ಆಗಿದ್ದರು. “ಗೀತಾಂಜಲಿ” ಮೂಲಕ ವಿಶ್ವಮಾನ್ಯತೆ ಪಡೆದ ಈ ಮಹಾನ್ ಕವಿ, ಭಾರತದ ಮೊದಲ ನೊಬೆಲ್ ಪುರಸ್ಕೃತ ಸಾಹಿತ್ಯಸಾಧಕ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಉತ್ತರ ಕನ್ನಡ ಜಿಲ್ಲೆಯ ಕಾರವಾರದೊಂದಿಗೆ ಅವರಿಗಿದ್ದ ಆತ್ಮೀಯ ನಂಟನ್ನು ಸ್ಮರಿಸುವುದು ವಿಶೇಷ ಮಹತ್ವ ಪಡೆದುಕೊಳ್ಳುತ್ತದೆ.ಕಾರವಾರದ ಪ್ರಕೃತಿ ಠಾಗೋರರ ಮನಸೂರೆಗೊಂಡದ್ದು1882ರ ಅವಧಿಯಲ್ಲಿ ಯುವಕನಾಗಿದ್ದ ಠಾಗೋರರು ತಮ್ಮ ಅಣ್ಣ ಸತ್ಯೇಂದ್ರನಾಥ ಠಾಗೋರರ ಬಳಿಗೆ ಕಾರವಾರಕ್ಕೆ ಬಂದಿದ್ದರು. ಆ ಕಾಲದಲ್ಲಿ ಸತ್ಯೇಂದ್ರನಾಥರು ಬ್ರಿಟಿಷ್ ಆಡಳಿತದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಮುದ್ರ, ಪಶ್ಚಿಮ ಘಟ್ಟಗಳ ಹಸಿರು, ಕಾಳಿ ನದಿಯ ಹರಿವು, ಮೌನಭರಿತ ಸಂಜೆಗಳು – ಇವೆಲ್ಲವೂ ಯುವ ರವೀಂದ್ರನಾಥರ ಕವಿಮನಸ್ಸನ್ನು ಆಳವಾಗಿ ಸ್ಪರ್ಶಿಸಿತು.ಕಾರವಾರದ ನಿಸರ್ಗ ಸೌಂದರ್ಯವನ್ನು ಕಂಡು ಅವರು ಮಂತ್ರಮುಗ್ಧರಾಗಿದ್ದರು. ಕಾರವಾರದ ಸಮುದ್ರತೀರದ ಸಾಯಂಕಾಲವನ್ನು ಕುರಿತು ಅವರು ಬರೆದ ಕೆಲವು ಬರಹಗಳಲ್ಲಿ ಪ್ರಕೃತಿ ಮತ್ತು ಮಾನವ ಆತ್ಮದ ನಡುವಿನ ಆಧ್ಯಾತ್ಮಿಕ ಸಂಬಂಧ ಸ್ಪಷ್ಟವಾಗಿ ಗೋಚರಿಸುತ್ತದೆ. ನಂತರದ ಅವಧಿಯಲ್ಲಿ ಅವರ ಕಾವ್ಯಗಳಲ್ಲಿ ಕಾಣುವ ಪ್ರಕೃತಿ ಸಂವೇದನೆಗೆ ಕಾರವಾರದ ಅನುಭವವೂ ಒಂದು ಪ್ರಮುಖ ಪ್ರೇರಣೆಯಾಗಿತ್ತು ಎಂದು ಸಾಹಿತ್ಯ ಅಧ್ಯಯನಕಾರರು ಅಭಿಪ್ರಾಯಪಡುತ್ತಾರೆ.“ನಿರ್ಜರರ ಸ್ವಪ್ನಭಂಗ” – ಪ್ರಕೃತಿಯೊಳಗಿನ ಆತ್ಮಜಾಗೃತಿಕಾರವಾರ ಪ್ರವಾಸದ ಸಂದರ್ಭದಲ್ಲಿ ಅವರ ಮನಸ್ಸಿನಲ್ಲಿ ಮೂಡಿದ ಭಾವನೆಗಳು ನಂತರ ಹಲವು ಕಾವ್ಯಗಳಲ್ಲಿ ಪ್ರತಿಫಲಿಸಿದವು. ವಿಶೇಷವಾಗಿ “ನಿರ್ಜರರ ಸ್ವಪ್ನಭಂಗ” ಕವನದಲ್ಲಿ ಪ್ರಕೃತಿಯೊಳಗಿನ ಜೀವಚೈತನ್ಯವನ್ನು ಅವರು ಹೀಗೆ ಚಿತ್ರಿಸುತ್ತಾರೆ: “ಇಂದು ಈ ಪ್ರಭಾತದ ರವಿಕಿರಣಹೇಗೆ ಪ್ರವೇಶಿಸಿತು ಜೀವದೊಳಗೆ…” ಈ ಸಾಲುಗಳಲ್ಲಿ ಪ್ರಕೃತಿ ಮಾನವನ ಆತ್ಮವನ್ನು ಜಾಗೃತಿಗೊಳಿಸುವ ಶಕ್ತಿಯಾಗಿ ಕಾಣಿಸುತ್ತದೆ. ಕಾರವಾರದ ನಿಶ್ಶಬ್ದ ಪ್ರಕೃತಿ ಮತ್ತು ಸಮುದ್ರದ ಅಲೆಗಳ ಸಂಗೀತವು ಈ ಕಾವ್ಯಭಾವನೆಗೆ ಹಿನ್ನೆಲೆಯಾದವು ಎನ್ನುವುದು ಅತಿಶಯೋಕ್ತಿಯಲ್ಲ.“ಗೀತಾಂಜಲಿ” – ವಿಶ್ವಕ್ಕೆ ಭಾರತದ ಆತ್ಮಧ್ವನಿ1913ರಲ್ಲಿ ಗೀತಾಂಜಲಿ ಕೃತಿಗೆ ನೊಬೆಲ್ ಪ್ರಶಸ್ತಿ ಲಭಿಸಿದಾಗ ಭಾರತೀಯ ಸಾಹಿತ್ಯ ವಿಶ್ವದ ಗಮನಸೆಳೆಯಿತು. “Where the mind is without fear…” ಎಂಬ ಅವರ ಅಮರ ಕಾವ್ಯಪಂಕ್ತಿಗಳು ಇಂದಿಗೂ ಮಾನವ ಸ್ವಾತಂತ್ರ್ಯದ ಘೋಷಣೆಯಾಗಿ ಓದಲಾಗುತ್ತವೆ.ಅದರ ಕನ್ನಡಾರ್ಥ ಹೀಗಿದೆ: “ಭಯವಿಲ್ಲದ ಮನಸ್ಸು ಇರುವಲ್ಲಿ,ತಲೆ ಎತ್ತಿ ನಿಲ್ಲುವ ಮಾನವ ಇರುವಲ್ಲಿ,ಜ್ಞಾನವು ಮುಕ್ತವಾಗಿರುವಲ್ಲಿ…” ಠಾಗೋರರ ಸಾಹಿತ್ಯದಲ್ಲಿ ರಾಷ್ಟ್ರಪ್ರೇಮ ಇದ್ದರೂ ಅದು ಸಂಕುಚಿತ ರಾಷ್ಟ್ರಭಾವನೆಯಲ್ಲ; ಮಾನವತೆಯ ಆಧಾರದ ವಿಶ್ವಸೌಹಾರ್ದದ ಕನಸಾಗಿತ್ತು.ಪ್ರಕೃತಿ, ಮಾನವತೆ ಮತ್ತು ಶಿಕ್ಷಣದ ತ್ರಿವೇಣಿಠಾಗೋರರು ಸಾಹಿತ್ಯದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಮಹತ್ವದ ಕ್ರಾಂತಿ ತಂದವರು. ಅವರು ಸ್ಥಾಪಿಸಿದ ವಿಶ್ವಭಾರತಿ ಯುನಿವರ್ಸಿಟಿ ವಿಶ್ವಮಾನವೀಯ ಮೌಲ್ಯಗಳ ಪ್ರತೀಕವಾಗಿತ್ತು. ಪ್ರಕೃತಿಯ ಮಧ್ಯೆ ಶಿಕ್ಷಣ ನೀಡಬೇಕು ಎಂಬ ಅವರ ಕನಸು ಕಾರವಾರದಂತಹ ನಿಸರ್ಗತಾಣಗಳಲ್ಲಿ ಪಡೆದ ಅನುಭವಗಳಿಂದಲೇ ಮತ್ತಷ್ಟು ಗಾಢವಾಯಿತೆಂದು ಹೇಳಲಾಗುತ್ತದೆ.ಅವರ ಅನೇಕ ಕಾವ್ಯಗಳಲ್ಲಿ ಸಮುದ್ರ, ಗಾಳಿ, ಮಳೆ, ಹಕ್ಕಿಗಳು ಮತ್ತು ಅರಣ್ಯಗಳು ಜೀವಂತ ಪಾತ್ರಗಳಾಗಿ ಕಾಣಿಸುತ್ತವೆ. ಪ್ರಕೃತಿಯನ್ನು ಕೇವಲ ದೃಶ್ಯವಲ್ಲ, ಆತ್ಮೀಯ ಅನುಭವವಾಗಿ ನೋಡುವ ದೃಷ್ಟಿಯನ್ನು ಅವರು ಸಾಹಿತ್ಯಕ್ಕೆ ನೀಡಿದರು. ಕಾರವಾರದ ಹೆಮ್ಮೆ. ಇಂದು ಕಾರವಾರವನ್ನು ನೆನೆಸಿದಾಗ ಕಾರವಾರ ಕೇವಲ ಪ್ರವಾಸಿ ತಾಣವಲ್ಲ; ಮಹಾಕವಿ ಠಾಗೋರರ ಕಾವ್ಯಸ್ಮೃತಿಗಳನ್ನು ಹೊತ್ತ ಸಾಹಿತ್ಯಭೂಮಿಯೂ ಆಗಿದೆ. ಅವರು ಕೆಲ ದಿನಗಳ ಕಾಲ ಇಲ್ಲಿ ಕಳೆದಿದ್ದರೂ, ಆ ಅನುಭವಗಳು ಅವರ ಸಾಹಿತ್ಯ ಚಿಂತನೆಗೆ ಶಾಶ್ವತ ಸ್ಪರ್ಶ ನೀಡಿದವು.ಕಾಳಿ ನದಿ, ಅರಬ್ಬೀ ಸಮುದ್ರ, ಮೌನಮಯ ಸಂಜೆಯ ಹೊತ್ತು – ಇವುಗಳ ನಡುವೆ ನಿಂತು ನೋಡಿದಾಗ, ಇನ್ನೂ ಎಲ್ಲೋ ಠಾಗೋರರ ಕಾವ್ಯದ ಪ್ರತಿಧ್ವನಿ ಕೇಳಿಬರುವಂತೆ ಭಾಸವಾಗುತ್ತದೆ.ಅಂತಿಮವಾಗಿರವೀಂದ್ರನಾಥ ಠಾಗೋರರು ಕೇವಲ ಒಂದು ಯುಗದ ಕವಿಯಲ್ಲ; ಮಾನವ ಆತ್ಮದ ಶಾಶ್ವತ ಧ್ವನಿ. ಅವರ ಸಾಹಿತ್ಯ ನಮಗೆ ಪ್ರಕೃತಿಯನ್ನು ಪ್ರೀತಿಸಲು, ಮಾನವನನ್ನು ಗೌರವಿಸಲು ಹಾಗೂ ವಿಶ್ವವನ್ನು ಒಂದು ಕುಟುಂಬವಾಗಿ ಕಾಣಲು ಕಲಿಸುತ್ತದೆ.  ಕಾರವಾರದ ಕರಾವಳಿಯಲ್ಲೊಮ್ಮೆ ಅರಳಿದ ಆ ಕಾವ್ಯಚೇತನ ಇಂದು ಕೂಡ ಕನ್ನಡನಾಡಿನ ಮನಸ್ಸಿನಲ್ಲಿ ಜೀವಂತವಾಗಿದೆ ಎನ್.‌ ಜಯಚಂದ್ರನ್

“ಕಾರವಾರದ ಕರಾವಳಿಯಲ್ಲಿ ಅರಳಿದ ಕಾವ್ಯಚೇತನ.”ವಿಶೇಷ ಲೇಖನ ಎನ್.ಜಯಚಂದ್ರನ್ Read Post »

ಇತರೆ, ಜೀವನ

“ಹಿರಿಯ ಮಗುವಿಗೆ….ಹೊರೆಯಾಗದಿರಲಿ ಭ್ರಾತೃತ್ವ”ವೀಣಾ ಹೇಮಂತ್ ಗೌಡ ಪಾಟೀಲ್

ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್ “ಹಿರಿಯ ಮಗುವಿಗೆ…. ಹೊರೆಯಾಗದಿರಲಿ ಭ್ರಾತೃತ್ವ” ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದ ಹಿರಿಯ ಮಗನನ್ನು ತಂದೆ ಸಮಾನ ಮತ್ತು ಅತ್ತಿಗೆ ತಾಯಿ ಎಂಬಂತೆ ಭಾವಿಸುತ್ತಾರೆ. ತಂದೆ ತಾಯಿಯ ನಂತರದ ಸ್ಥಾನವನ್ನು ಪಡೆದ ಹಿರಿಯ  ಮಕ್ಕಳು ಕೌಟುಂಬಿಕ ದೃಷ್ಟಿಯಿಂದ ಎಲ್ಲರನ್ನು ಸಮಾನವಾಗಿ ಕಾಣುವುದು ಅನಿವಾರ್ಯವಾಗುತ್ತದೆ. ಮತ್ತೆ ಎಷ್ಟೋ ಬಾರಿ ಹಿರಿಯ ಮಕ್ಕಳು ತಮ್ಮ ತಂದೆಯ ಮರಣ ನಂತರ ಕುಟುಂಬದ ಪರಿಪಾಲನೆಗೆ ತಮ್ಮ ವೈಯುಕ್ತಿಕ ಸುಖ ಭೋಗಗಳನ್ನು ಮರೆತು ಕರ್ತವ್ಯ ಬದ್ಧರಾಗಿ ಕೌಟುಂಬಿಕ ನಿರ್ವಹಣೆಯನ್ನು ಮಾಡುತ್ತಾರೆ ಕೂಡ.ಪಾಲಕರಿಗೆ ತಮ್ಮ ಕಿರಿಯ ಮಕ್ಕಳ ಮೇಲೆ ಸಹಜವಾಗಿಯೇ ತುಸು ಕಾಳಜಿ ಹೆಚ್ಚು ಮತ್ತು ತಮ್ಮ ಹಿರಿಯ ಮಕ್ಕಳನ್ನು ತಮ್ಮ ಮುಂದಿನ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಬೆಳೆಸುತ್ತಾರೆ. ಹೀಗಾಗಿ ಸಹಜವಾಗಿಯೇ ಹಿರಿಯ ಮಕ್ಕಳು ತುಸು ಸೂಕ್ಷ್ಮಪ್ರಜ್ಞೆಯವರಾಗಿರುತ್ತಾರೆ. ಆದರೆ ಕಾಲಘಟ್ಟ ಯಾವುದೇ ಇರಲಿ  ಹಿಂದಿನ ಒಡಹುಟ್ಟಿದವರಾಗಲೀ ಇಂದಿನ ಪೀಳಿಗೆಯೇ ಇರಲಿ ಸಾಮಾನ್ಯವಾಗಿ ನಾವು ನೋಡುವ ಕೆಲ ವಿಪರ್ಯಾಸಗಳು ಹೀಗಿರುತ್ತವೆ. ತಮ್ಮ ಮಕ್ಕಳನ್ನು ಬೇರೆಯವರಿಗೆ ಪರಿಚಯಿಸುವ ಪಾಲಕರು ತಮ್ಮ ದೊಡ್ಡ ಮಗುವನ್ನು ನಿಧಾನ ಎಂದು ಚಿಕ್ಕ ಮಗುವನ್ನು ದೊಡ್ಡವರಿಗೆ ಹೋಲಿಸಿ ತುಂಬಾ ಜಾಣ ಎಲ್ಲವನ್ನು ಬೇಗನೆ ತಿಳಿದುಕೊಳ್ಳುತ್ತಾನೆ ದೊಡ್ಡವನಂತೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಲ್ಲದರಲ್ಲೂ ಆಸಕ್ತಿ ಮತ್ತು ಎಲ್ಲದರಲ್ಲೂ ಮುಂದೆ ಇದ್ದಾನೆ ಎಂದು ಹೊಗಳುತ್ತಾರೆ. ಇದಕ್ಕೆ ಕಾರಣ ಹತ್ತು ಹಲವು…. ಎರಡನೇ ಮಗು ಹೊಟ್ಟೆಯಲ್ಲಿರುವಾಗಲೇ ದೊಡ್ಡ ಮಗುವಿಗೆ ತಮ್ಮ ಇಲ್ಲವೇ ತಂಗಿ ತಾಯಿಯ ಹೊಟ್ಟೆಯಲ್ಲಿದ್ದು ಇನ್ನೂ ಕೆಲವೇ ದಿನಗಳಲ್ಲಿ ಅದು ತನ್ನೊಂದಿಗೆ ಆಟವಾಡಲು ದೊರೆಯುತ್ತದೆ ಮತ್ತು ಅದರೊಂದಿಗೆ ತಾನು ಅತ್ಯಂತ ಪ್ರೀತಿಪೂರ್ವಕವಾಗಿ ನಡೆದುಕೊಳ್ಳಬೇಕು ಎಂದು ಕಲಿಸಲಾಗುತ್ತದೆ. ಸಮಾಧಾನ ತಾಳ್ಮೆಯಿಂದ ವರ್ತಿಸಬೇಕು ಎಂದು ಪದೇಪದೇ ಹೇಳಿಕೊಡಲಾಗುತ್ತದೆ.ಖಂಡಿತವಾಗಿಯೂ ಇದು ತಪ್ಪಲ್ಲ. ಆದರೆ ಹಾಗೆ ಹೇಳುವ ಭರದಲ್ಲಿ, ಮಗು ಹುಟ್ಟಿದ ನಂತರ ಎಲ್ಲಾ ವಿಷಯಗಳಲ್ಲಿಯೂ ದೊಡ್ಡ ಮಗುವೆ ಸಮಾಧಾನದಿಂದ ಇರಲು ಸೂಚಿಸಲಾಗುತ್ತದೆ. ಸಹಜವಾಗಿಯೇ ಪಾಲಕರ ಮಾತನ್ನು ಒಪ್ಪಿಕೊಳ್ಳುವ ಮಗು ತನಗಿಂತ ಕಿರಿಯ ಮಗುವಿನ ಕಾಳಜಿ ವಹಿಸುತ್ತಾ ತಾನು ಹಿಂದೆ ಉಳಿಯುತ್ತದೆ. ಚಿಕ್ಕವರಿದ್ದಾಗ ತನಗಿಂತ ಚಿಕ್ಕವರಾದ ಒಡಹುಟ್ಟಿದವರೊಂದಿಗೆ ಪ್ರೀತಿ ಮತ್ತು ಸೌಹಾರ್ದತೆಯಿಂದ ಇರುವ ಮಗು ಮುಂದೆ ಪಾಲಕರ ಹೋಲಿಕೆಯಿಂದ ನಿರಾಶನಾಗಿ ಬೇಸರಗೊಳ್ಳಬಹುದು, ಮಾನಸಿಕವಾಗಿ ಮುದುಡಬಹುದು,  ಸಿಡಿದೇಳಬಹುದು.ಓದಿನಲ್ಲಿ ಹಿಂದೆ ಬೀಳಬಹುದು, ಆಸಕ್ತಿ ಕಡಿಮೆಯಾಗಬಹುದು.ಇದುವರೆಗೂ ಮನೆಯವರೆಲ್ಲರ ಅಚ್ಚುಮೆಚ್ಚಿದ ಮಗು ಒಮ್ಮಿಂದೊಮ್ಮೆಲೆ ತನ್ನ ಮೇಲಿದ್ದ ಗಮನಿಸುವಿಕೆಯ ಸ್ಪಾಟ್ ಲೈಟ್ ತನ್ನ ಸಹೋದರ ಅಥವಾ ಸಹೋದರಿಯ ಮೇಲೆ ಬಿದ್ದಾಗ ಪುಟ್ಟ ಮಗುವಿನ ಮನದಲ್ಲಿ ಆತಂಕದ ಸುಳಿಗಳು ಎದ್ದು ಮಗು ಆ ಸುಳಿಯಲ್ಲಿ ಸಿಲುಕುತ್ತದೆ.ಇಂತಹ ಸಮಯದಲ್ಲಿ ದೊಡ್ಡ ಮಗುವಿನಿಂದ ಪುಟ್ಟ  ಮಗುವಿಗೆ ದೈಹಿಕವಾಗಿ ಏನಾದರೂ ಹಾನಿಯಾಗಬಹುದು ಎಂಬ ಕಾರಣದಿಂದ ಪಾಲಕರು ತಮಗರಿವಿಲ್ಲದೆ ಪುಟ್ಟ ಮಗುವನ್ನು ಮುಚ್ಚಟೆಯಿಂದ ಸಾಕಿ ಬೆಳೆಸಿ ದೊಡ್ಡ ಮಗುವಿನೊಂದಿಗೆ ತುಸು ಅಂತರವನ್ನು ಕಾಯುತ್ತಾರೆ… ಇದು ಅಗೋತರವಾಗಿ ಅವರಿಬ್ಬರ ನಡುವೆ ಒಂದು ಪುಟ್ಟ ಕಂದರವನ್ನು ಸೃಷ್ಟಿಮಾಡುತ್ತದೆ ಮತ್ತು ಬೆಳೆಯುತ್ತಾ ಹೋದಂತೆ ಈ ಕಂದರ ಹೆಚ್ಚು ಅಗಲವಾಗುತ್ತಾ ಹೋಗುತ್ತದೆ…ಆದ್ದರಿಂದ ಎರಡನೆಯ ಮಗುವನ್ನು ಹೊಂದಿರುವ ಪಾಲಕರು ತಮ್ಮ ಎರಡು ಮಕ್ಕಳ ನಡುವೆ ಜೈವಿಕ ಸಂಬಂಧಕ್ಕೆ ಮಿಗಿಲಾದ ಆತ್ಮೀಯತೆ ಪ್ರೀತಿ ವಿಶ್ವಾಸ ಮತ್ತು ಸ್ನೇಹ ಭಾವಗಳನ್ನು ತುಂಬಲು ಈ ರೀತಿ ಪ್ರಯತ್ನಿಸಬಹುದು.ನಿಮ್ಮ ಮಕ್ಕಳು ನಿಮಗೆ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವನ್ನು ಹಚ್ಚುವ ರೀತಿಯಲ್ಲಿ ನಿಮ್ಮ ವರ್ತನೆ ಇರಬಾರದು. ನಿಮ್ಮ ಮಾತನ್ನು ಕೇಳುವ ಮಗುವನ್ನು ಪ್ರೀತಿಸುವ ಮತ್ತು ಕೇಳದೆ ಹೋಗುವ ಮಗುವಿನ ಮೇಲೆ ತುಸು ಸಿಟ್ಟು ಸಹಜವಾಗಿ ನಿಮಗೆ ಬರಬಹುದು. ಆದರೆ ಮಗು ನಿಮ್ಮ ಮಾತನ್ನು ಏಕೆ ಕೇಳುತ್ತಿಲ್ಲ ಎಂಬುದರ ಹಿಂದಿನ ಮರ್ಮವನ್ನು ಮಗುವನ್ನು ಅನುನಯಿಸಿ ಒಲಿಸಿಕೊಳ್ಳುವ ಮೂಲಕ ಆ ಮಗುವಿನ ಮನಸ್ಸಿಗೆ ಸಮಾಧಾನವಾಗುವ ರೀತಿಯಲ್ಲಿ ವರ್ತಿಸುವ ಮೂಲಕ ಮಗುವನ್ನು ತಿದ್ದಬಹುದೇ ಹೊರತು ವಿನಾಕಾರಣ ಮಗುವನ್ನು ಶಿಕ್ಷೆಗೆ ಗುರಿಪಡಿಸಿ ಇಲ್ಲವೇ ಬಿರುಸು ಮಾತುಗಳಿಂದ ದಂಡಿಸಿ ಅಲ್ಲ.ಮಕ್ಕಳು ಪರಸ್ಪರ ಎದುರಾಳಿಗಳಲ್ಲ ಒಬ್ಬರ ಮೇಲೆ ಮತ್ತೊಬ್ಬರ ಕುರಿತು ದೂರು ಹೇಳುವ, ಹಂಗಿಸುವ ರೀತಿಯಲ್ಲಿ ಪಾಲಕರು ಮಕ್ಕಳನ್ನು ಕುರಿತು ಎಂದೂ ಮಾತನಾಡಬಾರದು. ಮಕ್ಕಳ ನಡುವಿನ ಜಗಳಗಳಲ್ಲಿ ಯಾರು ಸರಿ ಮತ್ತು ಯಾರೂ ತಪ್ಪು ಎಂಬುದನ್ನು ಎಣಿಸದೆ, ಎಲ್ಲಿ ಮತ್ತು ಏಕೆ ತಪ್ಪಾಗಿದೆ ಮತ್ತು ಅದನ್ನು ಹೇಗೆ ತಿದ್ದಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ಮಕ್ಕಳಿಗೆ ಮನದಟ್ಟು ಮಾಡಿಸಬೇಕು.ಒಂದು ಮಗುವಿನ ಕುರಿತು ಮತ್ತೊಂದು ಮಗುವಿನ ಮುಂದೆ ಅಥವಾ ಹಿಂದೆ ಅವಹೇಳನಕಾರಿಯಾಗಿ ಮಾತನಾಡಬಾರದು.ಇದು ಮಕ್ಕಳಲ್ಲಿ ಮಾನಸಿಕ ಅಭದ್ರತೆ ಮತ್ತು ನೋವಿಗೆ ಕಾರಣವಾಗುತ್ತದೆ.ಪಾಲಕರು ತಮ್ಮ ಒಂದು ಮಗುವನ್ನು ಚಿನ್ನ ರನ್ನ ಎಂದು ಮತ್ತೊಂದು ಮಗುವನ್ನು ಹರಕೆಯ ಕುರಿ ಎಂಬಂತೆ  ಭಾವಿಸಬಾರದು.ಎರಡನೇ ಮಗುವನ್ನು ಪಾಲಿಸಲಿ ಎಂದು ಆಶಿಸುವ ಪಾಲಕರು ಮಗುವಿನ ಮೇಲೆ ಎಲ್ಲ ರೀತಿಯ ಭಾವನಾತ್ಮಕ ಹೊರೆಯನ್ನು ಹೊರಿಸುತ್ತಾರೆ… ಇದು ಖಂಡಿತವಾಗಿಯೂ ತಪ್ಪು. ಮಗುವಿನ ಎಳೆಯ ಹೆಗಲಿಗೆ ಅದಕ್ಕೂ ಮುಖ್ಯವಾಗಿ ಮನಸ್ಸಿಗೆ ಇದು ಖಂಡಿತವಾಗಿಯೂ ಬೆಟ್ಟವನ್ನು ಹೊತ್ತಂತಹ ಭಾವವನ್ನು ಸೃಷ್ಟಿಸಿ ಮೊದಮೊದಲು ಮಾನಸಿಕವಾಗಿ ನಲುಗುವ ಮಗು ಮುಂದೆ ಹೋಲಿಕೆಗಳಿಂದ ಬೇಸತ್ತು ಹೋಗುತ್ತದೆ. ಅದರ ಸುಪ್ತ ಮನಸ್ಸು ಮೊದಮೊದಲು ಹಿಂಜರಿದರೂ ನಂತರ ಪ್ರತಿಯೊಂದಕ್ಕೂ ವಿಪರೀತವಾಗಿ ಪ್ರತಿಕ್ರಿಯೆಸುತ್ತದೆ. ನಾನೇ ಮಾಡಬೇಕು ಎಂಬುದರಿಂದ ನೊಂದು ನಾನೇಕೆ ಮಾಡಬೇಕು ಎಂದು ಸಿಡಿದು ನಿಲ್ಲುವ ಮಟ್ಟಿಗೆ ಅದರ ಪಯಣ ಸಾಗುತ್ತದೆ. ಇದು ಖಂಡಿತವಾಗಿಯೂ ಪಾಲಕರು ಎಚ್ಚರಗೊಳ್ಳಬೇಕಾದ ವಿಷಯವೇ ಸರಿ.ಸಹೋದರರು ದಾಯಾದಿಗಳಾಗಿ ಬದಲಾಗುವುದರಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿರುತ್ತದೆ ಅರಿತೋ ಅರಿಯದೆಯೋ ಪಾಲಕರು ಮಾತನಾಡುವ ಪ್ರತಿಯೊಂದು ಮಾತು ಕ್ರಿಯೆಗಳು ಮಕ್ಕಳ ಮೇಲೆ ಅಪಾರ ಪರಿಣಾಮವನ್ನು ಬೀರುತ್ತವೆ.. ಒಡಹುಟ್ಟಿದವರಲ್ಲಿ ಉಂಟಾಗುವ ಗೊಂದಲ ಆತಂಕ, ಅಸಹನೆ ಮತ್ತು  ಅಶಂಕೆಗಳಿಗೆ ಮೂಲ ಬೇರು ಪಾಲಕರೇ ಆಗಿರುತ್ತಾರೆ. ಮಕ್ಕಳನ್ನು ಬೆಳೆಸುವಾಗ ಪಾಲಕರ ಮತ್ತು ಕುಟುಂಬದ ಇತರ ಸದಸ್ಯರ ವರ್ತನೆ, ಮನೆಯಲ್ಲಿನ ವಾತಾವರಣ ಮಕ್ಕಳಲ್ಲಿ ಈ ಭಾವನೆಗಳು ಬೇರೂರಲು ಕಾರಣವಾಗಿರುತ್ತವೆ.ಎಲ್ಲ ಮನೆಗಳಲ್ಲಿಯೂ ಹೀಗೆಯೇ ಆಗಬೇಕು ಎಂದಿಲ್ಲ ಮತ್ತು ಆಗುತ್ತದೆ ಎಂದು ಭಾವಿಸುವಂತಿಲ್ಲ. ಆಗಬಹುದು ಎಂಬ ಕಾರಣಗಳನ್ನು ಹೀಗೆ ಪಟ್ಟಿ ಮಾಡಲಾಗಿದ್ದು ಈ ಕುರಿತು ಪಾಲಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ,ಆದರೆ ಖಂಡಿತವಾಗಿಯೂ ಮಕ್ಕಳ ನಡುವೆ ಭಿನ್ನಾಭಿಪ್ರಾಯಗಳು ಬಾರದಂತೆ ಅವರನ್ನು ಪಾಲಿಸುವ ಬೆಳೆಸುವ ಜವಾಬ್ದಾರಿ ಮಾತ್ರ ಪಾಲಕರದ್ದೇ. ಸಂತ ಸೂಕ್ಷ್ಮ ಮನಸ್ಥಿತಿಯ ಮಕ್ಕಳು ಪ್ರತಿಯೊಂದಕ್ಕೂ ವಿಪರೀತವಾಗಿ ಪ್ರತಿಕ್ರಿಯಿಸಿದರೆ ಕೆಲ ಗಟ್ಟಿ ವ್ಯಕ್ತಿತ್ವದ ಮಕ್ಕಳು ಇಲ್ಲದ ಅಹಂಭಾವವನ್ನು ತೋರುತ್ತ ಎದೆ ಸೆಟೆಸಿ ತಾವು ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಾರೆ.ಒಡಹುಟ್ಟಿದವರಲ್ಲಿ ಇದು ಸಾಮಾನ್ಯ ಎಂದು ತೋರಿದರೂ ವಿಪರೀತಕ್ಕೆ ಇಟ್ಟುಕೊಳ್ಳದಂತೆ ಇದನ್ನು ನಿರ್ವಹಿಸುವ ಜವಾಬ್ದಾರಿ ಖಂಡಿತವಾಗಿಯೂ ಪಾಲಕರದ್ದು.ಈ ಹಿಂದೆ ಮಕ್ಕಳಾಗಿ ಒಡಹುಟ್ಟಿದವರಾಗಿ ತಮ್ಮ ಸಹೋದರರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಹಿರಿಯರಾದ ಹೊತ್ತಿನಲ್ಲಿ ನೆನೆದು ನಗುವ ಜನರಿರುವಂತೆಯೇ, ತಮ್ಮ ಬದುಕಿನ ಎಲ್ಲಾ ಅವಘಡಗಳಿಗೂ ತಮ್ಮ ಪಾಲಕರು ಮತ್ತು ಒಡಹುಟ್ಟಿದವರೇ ಕಾರಣ ಎಂದೂ, ಬಾಲ್ಯದಲ್ಲಿ ತಮ್ಮನ್ನು ಪರಿಗಣಿಸದೆ ಹೋದ ಕಾರಣ ತಾವು ಹೀಗಿರುವುದು ಎಂದು ಮತ್ತೆ ಕೆಲವರು ಹೇಳಬಹುದು. ಯಾವ ರೀತಿ ಎಲ್ಲಾ ಬೆರಳುಗಳು ಒಂದೇ ಸಮನೆ ಇರುವುದಿಲ್ಲವೋ ಅದೇ ರೀತಿ ಎಲ್ಲರ ಮನಸ್ಥಿತಿಯೂ ಒಂದೇ ಸಮನಾಗಿ ಇರುವುದಿಲ್ಲ… ಅವರವರ ಬುದ್ಧಿಗೆ, ಗ್ರಹಿಕೆಗೆ ಮತ್ತು ಭಾವಕ್ಕೆ ತಕ್ಕಂತೆ ಮನುಷ್ಯನ ವರ್ತನೆ ಇರುತ್ತದೆ.ಪಾಲಕರಾಗಿ ಇದನ್ನು ನಾವು ಖಂಡಿತವಾಗಿಯೂ ತಿಳಿದುಕೊಳ್ಳಬೇಕು.ಮತ್ತೆ ಕೆಲವರು ವಾಸ್ತವ ಪರಿಸ್ಥಿತಿಯನ್ನು ಕುರಿತು ಪ್ರಬುದ್ಧವಾಗಿ ಯೋಚಿಸಿ ತಾವು ಅನುಭವಿಸಿದ ತೊಂದರೆಗಳು ತಮ್ಮ ಮಕ್ಕಳ ಬಾಳಿನಲ್ಲಿ ಬರದೇ ಇರಲಿ ಎಂದು ಆಶಿಸುತ್ತಾರೆ ಮತ್ತು ಆ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಯೋಚಿಸಿ ಅಂತೆಯೇ ನಡೆದುಕೊಳ್ಳುತ್ತಾರೆ. ಸಾಮಾಜಿಕವಾಗಿ ನಡೆದು ಬಂದ ಕೆಲ ತಪ್ಪು ತಿಳುವಳಿಕೆಗಳ ಸರಪಳಿಯನ್ನು ತುಂಡರಿಸಿ ಹೊಸ ಬೆಸುಗೆಯನ್ನು ಹಾಕುತ್ತಾರೆ. ತಮ್ಮದೇ ಮಕ್ಕಳಲ್ಲಿ ಅತ್ಯುತ್ತಮ ಸ್ನೇಹ,, ಬಾಂಧವ್ಯ ಪ್ರೀತಿ ವಿಶ್ವಾಸಗಳ ಅನುಬಂಧವನ್ನು  ಉಳಿಸುವ ನಿಟ್ಟಿನಲ್ಲಿ ತಮ್ಮ ಪಾಲಿನ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ.ಎಲ್ಲ ಮಕ್ಕಳನ್ನು ಸಮಾನಸ್ಥಾಯಿ ಭಾವದಲ್ಲಿ ನೋಡುವ, ಸುರಕ್ಷತಾ ಭಾವವನ್ನು ಕೊಡುವ ಮತ್ತು ಯಾವುದೇ ರೀತಿಯ ಶರತ್ತು ಬದ್ಧತೆಗಳನ್ನು ಹೊಂದಿರದ ಏಕರೂಪದ ಪ್ರೀತಿಯನ್ನು ಕೊಡ ಮಾಡುತ್ತಾರೆ. ಅದುವೇ ಪಾಲಕತ್ವದ ನಿಜವಾದ ಗುರಿ. ವೀಣಾ ಹೇಮಂತ್ ಗೌಡ ಪಾಟೀಲ್

“ಹಿರಿಯ ಮಗುವಿಗೆ….ಹೊರೆಯಾಗದಿರಲಿ ಭ್ರಾತೃತ್ವ”ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ, ರಂಗಭೂಮಿ

ರಂಗ ಪ್ರಯೋಗ”ಭಾರತದ ಪಾಡು ಮುತ್ತುಪಾಡಿಯ ಹಾಡು ಮನಸೆಳೆದ ಸ್ವಾತಂತ್ರ್ಯದ ಓಟ ನಾಟಕ”-ಗೊರೂರು ಅನಂತರಾಜು, ಹಾಸನ.

ರಂಗ ಸಂಗಾತಿ ಗೊರೂರು ಅನಂತರಾಜು, ಹಾಸನ. ರಂಗ ಪ್ರಯೋಗ “ಭಾರತದ ಪಾಡು ಮುತ್ತುಪಾಡಿಯ ಹಾಡು ಮನಸೆಳೆದ ಸ್ವಾತಂತ್ರ್ಯದ ಓಟ ನಾಟಕ” ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶಿವಮೊಗ್ಗದ ರಂಗಾಯಣ ಕಲಾವಿದರು ಬೋಳುವಾರು ಮಹಮದ್ ಕುಂಞ ಅವರ ಕಾದಂಬರಿ ಆಧಾರಿತ ಸ್ವಾತಂತ್ರö್ಯದ ಓಟ ನಾಟಕವನ್ನು ಕಳೆದ ಭಾನುವಾರ ಪ್ರದರ್ಶಿಸಿ ಪ್ರೇಕ್ಷಕರ ಮನ ಸೆಳೆದರು.  ಪ್ರಸಿದ್ಧ ಕಥೆಗಾರರು, ಕಾದಂಬರಿಕಾರರು,  ನಾಟಕಕಾರರು ಆದ ಬೋಳುವಾರು ಮಹಮದ್ ಕುಂಞಯವರು ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂಸ್ಕೃತಿ ಮತ್ತು ಬದುಕನ್ನು ಸೃಜನಶೀಲ ಗದ್ಯಕ್ಕೆ ಪರಿಚಯಿಸಿದವರು.  ತಮ್ಮ ಕಥೆಗಳ ಮೂಲಕ ಮುಸ್ಲಿಂ ಸಮುದಾಯದ ನಂಬಿಕೆ, ಆಚರಣೆ ಮತ್ತು ಸಾಮಾಜಿಕ ವಾಸ್ತವತೆಗಳನ್ನು ಚಿತ್ರಿಸಿದ್ದಾರೆ. ಇವರ ಸ್ವಾತಂತ್ರö್ಯದ ಓಟ ಒಂದು ಮೈಲುಗಲ್ಲು ಕಾದಂಬರಿ, ಇದಕ್ಕೆ ೨೦೧೬ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ೧೯೪೭ರಲ್ಲಿ ದೇಶ  ವಿಭಜನೆಯಿಂದ ಪ್ರಾರಂಭವಾಗುವ ಕಥಾವಸ್ತು ೬೦ ವರ್ಷ ಕಾಲ ಚಾಂದ್ ಅಲಿ ಎಂಬ ವ್ಯಕ್ತಿಕೇಂದ್ರಿತ ಕಥೆಯಾಗಿ ಆ ಕಾಲಘಟ್ಟದ ನೈಜ ಬದುಕನ್ನು ಚಿತ್ರಿಸುತ್ತದೆ. ಭಾರತ ಪಾಕಿಸ್ತಾನ ಗಡಿಯ ವಾಘಾದಲ್ಲಿ ಆರಂಭವಾಗುವ ಕಥೆ ಕೊನೆಗೆ ಅಲ್ಲಿಯೇ ಮುಕ್ತಾಯಗೊಳ್ಳುವ  ಜಾತ್ಯಾತೀತ ಪರಿಕಲ್ಪನೆಯಲ್ಲಿ ರೂಪು ತೆಳೆದಿದೆ.   ಗೋಮಾರದಹಳ್ಳಿ ಮಂಜುನಾಥ್  ನಾಟಕಕ್ಕೆ ರೂಪಾಂತರಿಸಿದ್ದು, ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ  ನಟರಾಜ್ ಹೊನ್ನವಳ್ಳಿಯವರದು.  ಸಹ ನಿರ್ದೇಶನ ಸಲ್ಮಾ ದಂಡಿನ್.  ಈ ಹಿಂದೆ ನಟರಾಜ್ ಹೊನ್ನವಳ್ಳಿಯವರು ಇದೇ ಕಲಾಭವನದಲ್ಲಿ ಪ್ರದರ್ಶಿಸಿದ್ಧ  ಪಿ.ಲಂಕೇಶರ ಗುಣಮುಖ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿದ್ದರು. ಆಗ ನೋಡಿ ಬರೆದಿದ್ದು ನನ್ನ ರಂಗಪ್ರಯೋಗ (೨೦೧೧) ಕೃತಿಯಲ್ಲಿ ದಾಖಲಾಗಿದೆ.ಒಂದು ಸಾವಿರದ ಒಂದು ನೂರಾ ಹನ್ನೊಂದು ಪುಟಗಳ ಸುಧೀರ್ಘ ಕಾದಂಬರಿಯನ್ನು ಮೂರೂವರೆ ಗಂಟೆಯಲ್ಲಿ  ಪ್ರೇಕ್ಷಕರಿಗೆ ಇಷ್ಟವಾಗುವ ನಾಟಕವಾಗಿ ರೂಪಿಸುವಲ್ಲಿ   ನಿರ್ದೇಶಕರ ಜಾಣ್ಮೆ, ಕಲಾವಿದರ ತಲ್ಲೀನ ನಟನೆ, ರಂಗ ಸಂಗೀತ, ವಸ್ತç ವಿನ್ಯಾಸ, ರಂಗ ಪರಿಕರ,  ಬೆಳಕು ಈ ಎಲ್ಲವೂ ಒಗ್ಗೂಡಿದೆ.  ನಾಟಕದ ಪೂರ್ವಾರ್ಧ ದೇಶ ವಿಭಜನೆ, ಅದರ ಪರಿಣಾಮಗಳನ್ನು ಹೇಳಿದರೆ ಉತ್ತರಾರ್ಧ ಭಾಗವು ಮುತ್ತುಪಾಡಿಯ ಗ್ರಾಮ್ಯ ಕತೆಯನ್ನು ಮನಮುಟ್ಟವಂತೆ ಹೇಳುತ್ತದೆ. ದೇಶ ವಿಭಜನೆ ಪೂರ್ವ ಪಾಕಿಸ್ತಾನದ ಲಾಹೋರ್ ನಲ್ಲಿ ಸಿಖ್ ಮಾಲಿಕತ್ವದ ಕಬ್ಬಿಣದ ಕುಲುಮೆಯಲ್ಲಿ ಕೆಲಸ ಮಾಡುವ ಅನಾಥ ಹುಡುಗ  ಚಾಂದ್ ಆಲಿ ನಾಟಕದ ಕೇಂದ್ರ ಪಾತ್ರ. ದೇಶ ವಿಭಜನೆಗೆ ದುರಂತ ಸಾಕ್ಷಿಯಾಗಿ ಕಂಡುಬರುವ ಈ ಪಾತ್ರ  ನಾಟಕದುದ್ದಕ್ಕೂ ಪ್ರಧಾನ ಭೂಮಿಕೆಯಲ್ಲಿ  ಮೂರು ಹಂತಗಳಲ್ಲಿ  ಹದಿನೈದರ ವಯೋಮಾನದ ಹುಡುಗ, ಮದುವೆ ವಯಸ್ಸಿನ ಪ್ರಾಯಕ್ಕೆ ಬಂದ ಯುವಕ, ಇಳಿವಯಸ್ಸಿನ  ವೃದ್ಧ ಹೀಗೆ ಬರುವ ಪಾತ್ರಗಳನ್ನು ಮೂರು ಕಲಾವಿದರ ಪ್ರಸ್ತುತಿಯಲ್ಲಿ ತನ್ನ ಸುತ್ತಲಿನ ಸನ್ನಿವೇಶ ಸಮಯಕ್ಕೆ ತಕ್ಷಣಕ್ಕೆ ಉದ್ಭವಿಸುವ ವಿದ್ಯಮಾನಗಳಿಗೆ ಬಾಗಿಯಾಗುತ್ತಾ  ಕಥೆಯ ಪಾತ್ರ ಸಾಗುತ್ತದೆ. ಇಲ್ಲಿ  ಭಾವನಾತ್ಮಕ ಸಂಬAಧಗಳು  ಭಾವ್ಯಕ್ಯ ಭಾರತವನ್ನು ಎತ್ತಿ ಹಿಡಿಯುತ್ತವೆ. ನಾಟಕದ ಪೂರ್ವಾರ್ಧದ ದೇಶ ವಿಭಜನೆ ಕಾಲದ ಘಟನೆಗಳು ಭಾವಾವೇಶಗಳ ರೋಚÀಕತೆ ಇಲ್ಲದೆ ತಣ್ಣಗೆ ನಿರೂಪಿಸುತ್ತಾ ಸಾಗುತ್ತದೆ. ತನ್ನ ಕುಟುಂಬದವರಿAದ ಬೇರ್ಪಟ್ಟು ಜೀವ ಉಳಿಸಿಕೊಳ್ಳುವ ಭರದಲ್ಲಿ ಭಾರತ ಪ್ರವೇಶಿಸುವ ಸಿಖ್ ಕುಟುಂಬದ ತನ್ವೀರ್, ಮೊಹಿಂದರ್ ಬಾಭಿ ಜೊತೆಗೆ   ಚಾಂದ್ ಅಲಿ ಕೂಡ ಭಾರತ ಪ್ರವೇಶಿಸುತ್ತಾನೆ. ತಾನು ಲಾಹೋರ್‌ಗೆ ವಾಪಸ್ಸು ಹೋಗಬೇಕೆನ್ನುವ ಚಾಂದ್ ಅಲಿಯ ಆಸೆಗೆ ಅನೇಕ ಸಿಕ್ಕುಗಳು ಎದುರಾಗಿ ನಲುಗುತ್ತಾನೆ. ಬದುಕಿನ ತಿರುವಿನಲ್ಲಿ ಉತ್ತರ ಭಾರತದಿಂದ ದಕ್ಷಿಣದ ಮುತ್ತುಪ್ಪಾಡಿಗೆ ಬರುವ   ಅನೇಕ ಅನಿರೀಕ್ಷಿತ ಘಟನೆಗಳು ಜರುಗುತ್ತವೆ. ಅಚಾನಕ್ ಹೊನ್ನು, ಹೆಣ್ಣು, ಆಸ್ತಿಯ ಅದೃಷ್ಟವು ಒಲಿದು ಬರುತ್ತದೆ. ನಾಟಕದ ಅಂತ್ಯದಲ್ಲಿ ಅದೇ ವಾಘಾ ಗಡಿಯಲ್ಲಿ ವಿಭಜನೆ ಕಾಲದಲ್ಲಿ ಕಳೆದು ಹೋದವರ ಪುನರ್ ಮಿಲನದೊಂದಿಗೆ ನಾಟಕ ಸುಖಾಂತ್ಯಗೊಳ್ಳುತ್ತದೆ. ಉತ್ತರಾರ್ಧ ಮಹಾತ್ಮ ಗಾಂಧೀಜಿಯ ಕನಸಿನ ಗ್ರಾಮ ಸ್ವರಾಜ್ಯ ಗ್ರಾಮವಾಗಿ ಮುತ್ತುಪಾಡಿ ಕಾಣಿಸಿಕೊಳ್ಳುತ್ತದೆ. ಈ ನಡುವೆ ನಾಟಕದ ಮಧ್ಯೆ ನಡೆಯುವ ಗಾಂಧಿಹತ್ಯೆಗೆ ಚಾಂದ್ ಆಲಿ ಮೂಕಸಾಕ್ಷಿಯಾಗುತ್ತಾನೆ.   ನನ್ನ ದೇವರು ಸತ್ತು ಹೋದ ಎಂದು ಹೇಳುವುದು ಮಾರ್ಮಿಕವಾಗಿದೆ. ಇಲ್ಲಿ  ಗಾಂಧಿ ಪಾತ್ರವನ್ನು ರಂಗಕ್ಕೆ ತರದೆ ನಿರ್ದೇಶಕರು ಜಾಣ್ಮೆ ತೋರಿದ್ದಾರೆ. ಚರಕವನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ಹೊರಡುವ ಚಂದನ್ ಹೆಸರಿನಲ್ಲಿ ದಾಖಲಾಗಿ ಭಾರತಕ್ಕೆ ಬಂದ ಚಾಂದ್ ಅಲಿ ಗಾಂಧೀಜಿಯ ಗ್ರಾಮಸ್ವರಾಜ್ಯದ ಕನಸಿನ ಕೂಸಾಗಿ ಪ್ರತಿಬಿಂಬಿಸುತ್ತಾನೆ.   ನಾಟಕದ ಉತ್ತರಾರ್ಧ  ಮುತ್ತುಪ್ಪಾಡಿ ಎಂಬ ಗ್ರಾಮದ  ಸಾಮರಸ್ಯದ ಬದುಕಿನ ಸೊಗಸಾದ ಕತೆ ಸ್ವತಂತ್ರ ಆಯಾಮದಲ್ಲಿ  ತೆರೆದುಕೊಳ್ಳುತ್ತದೆ. ಇಲ್ಲಿ ನಿರ್ದೇಶಕರು ಚಾಂದ್ ಅಲಿಯನ್ನೇ ಪ್ರಧಾನ ಎಳೆಯಾಗಿಸಿ ದೃಶ್ಯರೂಪಕದಲ್ಲಿ ಸರಾಗವಾಗಿ ನಾಟಕ ಸಾಗಿಸುವ ದಿಶೆಯಲ್ಲಿ ಬೇಕಾದ ಉಪಕಥೆಗಳನ್ನು ಆರಿಸಿಕೊಂಡಿದ್ದಾರೆ. ಹೀಗೆ ಸೇರಿದ  ಉಪಕಥೆಯಲ್ಲಿ ಬ್ಯಾರಿ ಮೂಸಜ್ಜ, ಆತನ ಹೆಂಡತಿ ಕೈಜುನ್ನಿಸಾ ಮತ್ತು ಮನೆ ಬಿಟ್ಟು ಹೋಗಿ  ಸೂಫಿ ಫಕೀರನಾಗಿರುವ  ಇವರ ಮಗ ಬದ್ರುದ್ಧೀನ್ ಪ್ರಮುಖರು. ಚಾಂದ್ ಅಲಿಯನ್ನು ಫಕೀರ ಬದ್ರುದ್ಧೀನ್ ತನ್ನದೇ ಮನೆಗೆ ಬಿಟ್ಟು ಹೋಗುವುದು ನಾಟಕೀಯ ತಿರುವು.  ಮುಂದೆ  ಮೂಸಜ್ಜ ಸತ್ತು ನಂತರದಲ್ಲಿ ಉದ್ಭವವಾಗುವ ಇಸ್ಲಾಂ ಧರ್ಮದ ನಂಬಿಕೆಗಳು. ಆಸ್ತಿಗಾಗಿ ಕಣ್ಣಾಕುವ ಊರಿನ ಪಾತ್ರಗಳು. ಸಭೆ, ತೀರ್ಮಾನ, ಮದುವೆ ಸಂಪ್ರದಾಯ ಎಲ್ಲವೂ ರಂಗದ ಮೇಲೆ ಬಂದು ಹೋಗುತ್ತವೆ. ಮಗನಿಲ್ಲದ ಮನೆಯಲ್ಲಿ ಉಳಿದುಕೊಂಡವನೇ ಆಸ್ತಿ ಒಡೆಯನಾಗಿ ಮತ್ತು ಈ ಕಾರಣಕ್ಕಾಗಿಯೇ ಮಾತೃಭೂಮಿಗೆ ವಾಪಸ್ಸು ಹೋಗಲಾಗದೆ ಅಲ್ಲಿಯೇ ಉಳಿಯಬೇಕಾಗಿ ಬರುವ ಅಲಿಯ  ಉಭಯ ಸಂಕಟಗಳು ಒಂದು ಕಡೆಯಾದರೇ, ಮಗನಂತೆ ಕಂಡ ಬದ್ರುದ್ಧೀನ್ ತಾಯಿ ಖೈಜುನ್ನಿಸಾಳ ಸಾವು, ಸಾವಿನ ಹೊತ್ತಲ್ಲೇ ಮತ್ತೆ ಮನೆಗೆ ಬಂದ ಫಕೀರ ಬದ್ರುದ್ದೀನ್ ಆಸ್ತಿಯನ್ನು ಅಲಿಗೆ ತ್ಯಾಗ ಮಾಡಿ ಉಪದೇಶ ಹೇಳಿ ಹೋಗುವುದು ಹೀಗೂ ಉಂಟೆ..! ಎನಿಸುತ್ತದೆ.  ಖೈಜುನ್ನಿಸಾ, ರಾಘಣ್ಣ, ಪಂಡಿತ, ಸುಮತಿ, ಅನಂತು, ಲತೀಫ್, ಪೋಡಿಯಪ್ಪ   ಹೀಗೆ ಬರುವ ಪಾತ್ರಗಳೆಲ್ಲಾ ಮುತ್ತುಪ್ಪಾಡಿ ಎಂಬ ಹಳ್ಳಿಯ ಸಾಮರಸ್ಯದ ಬದುಕನ್ನು ಸಾಕ್ಷೀಕರಿಸುತ್ತವೆ.  ನಾಟಕದ ಅಂತ್ಯದಲ್ಲಿ ಚಾಂದ್ ಅಲಿ ಕಡೆಗೂ  ತನ್ನಲ್ಲಿದ್ದ ಸಿಖ್ ಕುಟುಂಬದ ಒಡವೆ ಗಂಟನ್ನು ಅವರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆಯುತ್ತದೆ.  ಇಡೀ ನಾಟಕದ ಶಕ್ತಿ ಕೇಂದ್ರ ಅದರ ಸಂಗೀತ ಮತ್ತು ವಸ್ತç ವಿನ್ಯಾಸ. ಭಜನ್, ಕವ್ವಾಲಿ, ಕಬೀರ ದೋಹೆಗಳು ರಂಗಸಂಗೀತವಾಗಿ ಹಾಡುಗಳು ಮತ್ತು ರಂಗದಲ್ಲಿ ನೃತ್ಯಗಳು ಹಿಡಿದಿಡುತ್ತವೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧. 

ರಂಗ ಪ್ರಯೋಗ”ಭಾರತದ ಪಾಡು ಮುತ್ತುಪಾಡಿಯ ಹಾಡು ಮನಸೆಳೆದ ಸ್ವಾತಂತ್ರ್ಯದ ಓಟ ನಾಟಕ”-ಗೊರೂರು ಅನಂತರಾಜು, ಹಾಸನ. Read Post »

ಇತರೆ, ಲಹರಿ

ಜಯಶ್ರೀ.ಜೆ. ಅಬ್ಬಿಗೇರಿ ಅವರ ಲಹರಿ “ದೊಡ್ಡ ಸಿರಿ – ಹೃದಯ ಸಿರಿ”

ಕಾವ್ಯ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ದೊಡ್ಡ ಸಿರಿ – ಹೃದಯ ಸಿರಿ” ಒಬ್ಬ ವ್ಯಕ್ತಿ ಅವನ ಗೆಳೆಯನ ಮನೆಗೆ ಬಂದಿದ್ದ. ‘ಈ ಮನೆ ಯಾರದು?’ ಎಂದು ಗೆಳೆಯನಿಗೆ ಕೇಳಿದ. ವ್ಯಕ್ತಿ ಹೇಳಿದ ‘ಇದು ನನ್ನದೇ ಮನೆ ಎಂದು. ಅದನ್ನು ಕೇಳಿದ ಅಡುಗೆ ಮನೆಯಲ್ಲಿದ್ದ ಆ ವ್ಯಕ್ತಿಯ ಪತ್ನಿ ಮುಗುಳುನಗೆಯನ್ನು ಬೀರಿ ಸುಮ್ಮನಾದಳು. ಏಕೆಂದರೆ ಆ ಮನೆಯನ್ನು ಆಕೆಯ ತಂದೆ ಅಂದರೆ ಮಾವ ಕಾಣಿಕೆಯಾಗಿ ನೀಡಿದ್ದ. ಆದ್ದರಿಂದ ಆತನ ಪತ್ನಿ ಮುಗುಳ್ನಗೆ ಬೀರಿ ತನ್ನದೆಂದು ಹೇಳುತ್ತಾನೆ ಹೇಳಲಿ ಎಂದು ಮೌನವಾದಳು. ಹಾಗೆಯೇ ಎಲ್ಲವನ್ನೂ ನಾವು ನಿಸರ್ಗದಿಂದ ಪಡೆದು, ಈ ಮನೆ ನನ್ನದು ಈ ಹೊಲ ನನ್ನದು ಕಣ್ಣಿಗೆ ಕಂಡಿದ್ದೆಲ್ಲ ನನ್ನದು ಎಂದು ಹೇಳುತ್ತೇವೆ. ‘ನಾನು ಆಗರ್ಭ ಶ್ರೀಮಂತ.’ ಎಂದು ಜಂಭದಿoದ ಹೇಳಲು ಮುಂದಾಗುತ್ತೇವೆ. ಇದನ್ನು ಕೇಳಿದ ನಿಸರ್ಗದೇವತೆ ಮರಳು ಮಾನವ ಏನೂ ತಿಳಿಯದೇ ಹೇಳುತ್ತಾನೆಂದು ಮೌನ ವಹಿಸುತ್ತಾಳೆ. ಕೂಡಿಡುವ ಸ್ವಭಾವ ಬರುವಾಗ ಏನೂ ತಂದಿಲ್ಲ ಹೋಗುವಾಗ ಏನೂ ಒಯ್ಯುವುದಿಲ್ಲ ಅಂತ ಗೊತ್ತಿದ್ದರೂ  ಭೂಮಾತೆಯ ಗರ್ಭವನ್ನು ಬಗೆದು ಕಾಡುಗಳನ್ನು ಕಡಿದು ಪ್ರಾಣಿಗಳನ್ನು ತನ್ನ ಲಾಭಕ್ಕೆ ಉಪಯೋಗಿಸಿಕೊಂಡು ಸ್ವಾರ್ಥ ಜೀವನ ನಡೆಸುವ ಪ್ರಕೃತಿ ಮಾತೆ ಮುನಿಸಿಕೊಂಡಾಗ ಮನುಷ್ಯನದ್ದು ಏನೂ ನಡೆಯುವುದಿಲ್ಲ. ಸೃಷ್ಟಿಯಲ್ಲಿರುವ ಯಾವ ಪ್ರಾಣಿಗಳು ತನಗೆ ಹೊಟ್ಟೆ ತುಂಬಿದ ಮೇಲೆ ಯಾವ ಪ್ರಾಣಿಗಳನ್ನು ಭೇಟಿ ಆಡಲು ಹೋಗುವುದಿಲ್ಲ. ತನ್ನ ಗಾತ್ರಕ್ಕಿಂತ ೧೫೦ ಪಟ್ಟು ಜಾಸ್ತಿ ಭಾರವನ್ನು ಹೊರುವ ಇರುವೆ ಸಕ್ಕರೆ ಡಬ್ಬದ ಸುತ್ತ ಸುತ್ತುತ್ತಿದ್ದರೂ ಸಕ್ಕರೆ ಡಬ್ಬಿಯನ್ನು ಹೊತ್ತಯ್ಯುವ ಯೋಜನೆ ಹಾಕುವುದಿಲ್ಲ. ಮಳೆಗಾಲದಲ್ಲಿ ಆಹಾರ ಅಭಾವ ಕಾಡುವುದೆಂದು ಮುಂದಾಲೋಚನೆಯಿoದ ಸಂಗ್ರಹ ಮಾಡುತ್ತದೆ. ಆದರೆ ಮುಂದಿನ ಪೀಳಿಗೆಗೆ ಆಗುವಷ್ಟು  ಬೇಕೆಂದು ದುರಾಸೆಯಿಂದ ಹೆಚ್ಚೆಚ್ಚು ಕೂಡಿಡುವುದಿಲ್ಲ. ಆದರೆ ಮನುಷ್ಯ ಮಾತ್ರ ಬೇಡವಾದಾಗಲೂ ತಿನ್ನುವ, ಅವಶ್ಯಕತೆ ಇಲ್ಲದಿರುವಾಗಲೂ ಕೊಳ್ಳುವ, ತನಗೆ ಎಲ್ಲವೂ ಸಿಗಬೇಕೆನ್ನುವ, ತನ್ನ ಹತ್ತಿರ ಎಲ್ಲವೂ ಅತ್ಯಧಿಕ ಪ್ರಮಾಣದಲ್ಲಿರಬೇಕೆಂದು ಕೂಡಿಡುವ ಸ್ವಭಾವ ಹೊಂದಿದ್ದಾನೆ.   ಹಣವಿದ್ದರೆ? ಅರೆ! ಇದೇನು ಶ್ರೀಮಂತಿಕೆ ಯಾರಿಗೆ ಬೇಡ ಹೇಳಿ ಅಂತಿರೇನು? ಪ್ರತಿಯೊಬ್ಬರೂ ಅದನ್ನು ತಮ್ಮದಾಗಿಸಿಕೊಳ್ಳಬೇಕೆಂದೇ ಹಗಲು ರಾತ್ರಿ ಹಂಬಲಿಸುತ್ತಾರೆ. ಬಹುಶಃ ಅದರ ಹಿಂದೆ ಬೀಳದವರು ಬಹುತೇಕ ಇಲ್ಲವೆಂದರೂ ಅತಿಶಯೋಕ್ತಿ ಏನಲ್ಲ. ಸಿರಿತನ ಒಂದಿದ್ದರೆ ಸಾಕು ಮನದಲ್ಲಿಯ ಬಯಕೆಗಳನ್ನೆಲ್ಲ ಈಡೇರಿಸಬಹುದು. ನಮ್ಮವರಿಗೆ ಏನೇನು ಬೇಕೋ ಅದನ್ನು ಅವರು ಬಾಯಿ ತೆಗೆಯುವ ಮುನ್ನವೇ ಕಣ್ಮುಂದೆ ಹಿಡಿಯಬಹುದು. ನಮ್ಮಲ್ಲಿ ಹಣವಿದ್ದರೆ ಎಲ್ಲ. ಇಲ್ಲದಿದ್ದರೇನೂ ಇಲ್ಲ ಎನ್ನುವ ಮನೋಭಾವ ಬೇರೂರಿ ಬಿಟ್ಟಿದೆ. ಲಕ್ಷ್ಮೀದೇವಿಯ ಮಹಿಮೆಗೆ ಮರಳಾಗದವರು ಯಾರಿದ್ದಾರೆ?  ಹಣವಂತನ ಜೀವನದಲ್ಲಿ ಯಾವ ಸಮಸ್ಯೆಗಳೂ ಇರುವುದಿಲ್ಲ ಎಂಬ ಸುಳ್ಳು ಸಂಗತಿ ಬೇರೆ ತಲೆಯಲ್ಲಿ ಅಚ್ಚಳಿಯದಂತೆ ಅಚ್ಚೊತ್ತಿದೆ. ಶ್ರೀಮಂತಿಕೆ ಶ್ರೀಮoತಿಕೆ ಅನ್ನುವುದು ಗೆಲುವಿನಂತೆ ವ್ಯಾಖ್ಯಾನಿಸುವುದು ಸುಲಭವಲ್ಲ. ಏಕೆಂದರೆ ಒಬ್ಬೊಬ್ಬರು ಒಂದೊoದು ಅರ್ಥ ಕೊಡುತ್ತಾರೆ. ಸಾಮಾನ್ಯವಾಗಿ ಬಹುತೇಕರು ಹೇಳುವುದು ಕೈ ತುಂಬ ಹಣ ಕೈಗೊಂದು ಆಳು ಕಾಲಿಗೊಂದು ಆಳು ಇದ್ದರೆ ಅವರು ಶ್ರೀಮಂತರು. ಮನೆಯಲ್ಲಿ ಲಕ್ಷ್ಮೀ ನೆಲೆಸಿರಬೇಕು. ಸಿರಿ-ಸಂಪತ್ತು ಆಸ್ತಿ ಐಶ್ವರ್ಯ ಹಣಕಾಸಿನ ಸಮೃದ್ಧತೆ ಯಾವುದಕ್ಕೂ ಕೊರತೆ ಇರಬಾರದು. ಲೆಕ್ಕ ಹಾಕದೇ ಖರ್ಚು ಮಾಡುವಷ್ಟು ಹಣವಿರಬೇಕು. ಐಷಾರಾಮಿ ಬದುಕು ಸಾಗಿಸಲು ಯಾವುದೇ ಅಡೆತಡೆ ಇರಬಾರದು. ಏನೇ ಬೇಕಾದರೂ ಕೊಂಡುಕೊಳ್ಳುವ ಶಕ್ತಿ ಇರಬೇಕು. ಬಯಸಿದ್ದನ್ನೆಲ್ಲ ಚಿಟಿಕೆ ಹೊಡೆಯುವಷ್ಟರಲ್ಲಿ ಪಡೆಯವುದು. ಬಂಧು ಬಾಂಧವರ ಮುಂದೆ ನಾವು ಹೆಂಗಿದಿವಿ ನೋಡಿ ಅಂತ ಗರ್ವದಿಂದ ಮೆರೆಯಬೇಕು. ಮಾನದಂಡ ಹೀಗೆ ಶ್ರೀಮಂತಿಕೆಯ ಬಗೆಗೆ ವಿವಿಧ ರೀತಿಯ ಅಭಿಪ್ರಾಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದನ್ನೆಲ್ಲ ನೋಡಿದಾಗ ಶ್ರೀಮಂತಿಕೆ ಎಂಬುದು ಕೇವಲ ಹಣಕಾಸಿನ ಶ್ರೀಮಂತಿಕೆಯೇ? ಎಂಬ ಪ್ರಶ್ನೆ ಹುಟ್ಟುತ್ತದೆ. ಶ್ರೀಮಂತಿಕೆಯನ್ನು ಅಳೆಯಲು ಹಣಕಾಸಿನ ಒಂದೇ ಒಂದು ಮಾನದಂಡ ಸಾಕೇ? ಎಂಬ ಪ್ರಶ್ನೆಯೂ ಅದರ ಬೆನ್ನ ಹಿಂದೆಯೇ ಹುಟ್ಟಿಕೊಳ್ಳುತ್ತದೆ. ದೈಹಿಕ, ಮಾನಸಿಕ  ಸ್ಥಿತಿಗತಿ ಇವು ಯಾವವೂ ಲೆಕ್ಕಕ್ಕೆ ಬರುವುದಿಲ್ಲವೇ ಎಂಬ ಸಂದೇಹವೂ ಬರುತ್ತದೆ.ಆರೋಗ್ಯ ಸಂಪತ್ತುಮೇಲ್ನೋಟಕ್ಕೆ ಹಣಕಾಸಿನ ಸ್ಥಿತಿಗತಿ ಸಿರಿವಂತಿಕೆಯನ್ನು ನಿರ್ಧರಿಸುತ್ತದೆ ಹೌದಾದರೂ ವಾಸ್ತವವಾಗಿ ಹೇರಳ ಹಣವೊಂದೇ ಶ್ರೀಮಂತಿಕೆಯಲ್ಲ. ಕುಬೇರನ ವಂಶಸ್ತನೇ ಇರಬೇಕು ಎನ್ನುವಷ್ಟು ಶ್ರೀಮಂತಿಕೆ ಇದ್ದರೂ ದೇಹ ರೋಗದ ಗೂಡಾಗಿದ್ದರೆ ಬಯಸಿದ್ದನ್ನು ಬಾಯಿಗೆ ಹಾಕದೇ ಕೊರಗಬೇಕಾಗುತ್ತದೆ. ಕಣ್ಮುಂದೆ ಏನೆಲ್ಲ ಇದ್ದರೂ ತಿನ್ನುವ ಭಾಗ್ಯ ಅವನಿಗಿರುವುದಿಲ್ಲ. ಅವನ ಪಾಲಿಗೆ ಔಷಧಿಯೇ ಆಹಾರ ಇಲ್ಲಿ ನಾನು ಹೇಳ ಹೊರಟಿದ್ದು ಇಷ್ಟೆ  ಹಣದಿಂದ ಔಷಧಿಯನ್ನು ಕೊಳ್ಳಬಹುದು ಆದರೆ ಆರೋಗ್ಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಹಿರಿಯರು ಹೇಳಿದ್ದು ಆರೋಗ್ಯ ಸಂಪತ್ತಿಗಿoತ ದೊಡ್ಡ ಸಂಪತ್ತಿಲ್ಲವೆoದು.  ಹಣವಿದ್ದೂ , , , , ಹಣಕಾಸಿನ ಅನುಕೂಲತೆ ಇದ್ದು, ಆರೋಗ್ಯ ಚೆನ್ನಾಗಿದ್ದು ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಬದುಕು ಸಾಕ್ಷಾತ್ ನರಕ ದರ್ಶನ. ಹಣದಿಂದ ಒಂದೊಳ್ಳೆ ಹಾಸಿಗೆಯನ್ನು ಕೊಳ್ಳಬಹುದು. ಆದರೆ ನಿದ್ದೆಯನ್ನಲ್ಲ. ಒಳ್ಳೆಯ ಮನೆ ಕೊಂಡುಕೊಳ್ಳಬಹುದು. ಆತ್ಮೀಯರ ಪ್ರೀತಿ ವಿಶ್ವಾಸ ಕೊಂಡುಕೊಳ್ಳಲು ಸಾಧ್ಯವಿಲ್ಲ. ಹಣವಿದ್ದು ಅದನ್ನು ಉಳಿಸುವ ಬೆಳೆಸುವ ಜ್ಞಾನವಿರದಿದ್ದರೆ  ಸಿರಿವಂತಿಕೆ ಅಧೋಗತಿ ಕಾಣುವುದು ಖಂಡಿತ. ಹಣದಿಂದ ಪುಸ್ತಕವನ್ನು ಕೊಳ್ಳಬಹುದೇ ಹೊರತು ಜ್ಞಾನವನ್ನಲ್ಲ. ಇವೆಲ್ಲ ಉದಾಹರಣೆಗಳಿಂದ ತಿಳಿದು ಬರುವುದೇನೆಂದರೆ ಹಣವೊಂದೇ ಸಿರಿವಂತಿಕೆಯಲ್ಲ. ಯಾರಿಗೆ ಯಾವುದು ಇಲ್ಲವೋ ಅದನ್ನು ಪಡೆದುಕೊಳ್ಳಲು ಹೋರಾಡಿ ಪಡೆಯುವುದು ಶ್ರೀಮಂತಿಕೆ. ಕೃಷಿ ಮನುಷ್ಯರಿಗೆ ಹೋಲಿಸಿದರೆ ಲಕ್ಷಾಂತರ ಪಟ್ಟು ಚಿಕ್ಕದಿರುವ ಇರುವೆಯ ಬದುಕಿನಿಂದ ನಾವು ಕಲಿಯಬೇಕಾದ್ದು ಬಹಳ ಇದೆ. ಯಶಸ್ವಿ ಸಹಬಾಳ್ವೆ, ವ್ಯವಸ್ಥಿತ, ಅತ್ಯಂತ ಸಮರ್ಥ ಜೀವನ ಕೌಶಲವನ್ನು ಅಳವಡಿಸಿಕೊಳ್ಳಬೇಕಿದೆ. ಇತ್ತೀಚಿನ ಶೋಧಗಳ ಪ್ರಕಾರ ಪ್ರಸ್ತುತ ಧರೆಯಲ್ಲಿ ಸುಮಾರು ೧೨೦೦೦ ಇರುವೆ ಪ್ರಭೇದಗಳಿವೆ. ೮೦೧ ಕೋಟಿ ಜನರ  ಪ್ರತಿಯೊಬ್ಬರಿಗೂ ಸರಾಸರಿ  ಹನ್ನೆರಡುವರೆ ಲಕ್ಷ ಇರುವೆಗಳು. ಇಷ್ಟು ದೊಡ್ಡ ಸಂಖ್ಯೆಯಲ್ಲಿವೆ. ಈ ಅಲ್ಪಗಾತ್ರದ ಜೀವಿ ಬೆರಗು ಹುಟ್ಟಿಸುವ ಕೌತುಕಗಳಿಂದ ಕೂಡಿದೆ. ಪ್ರಕೃತಿಗೆ ಇರುವೆಗಳಿಂದ ಮಹತ್ತರ ಕೊಡುಗೆಯೂ ಇದೆ. ಇಡೀ ಜೀವಲೋಕದಲ್ಲಿ ಕೃಷಿ ಕೆಲಸ ಕೈಗೊಳ್ಳುವ ಏಕೈಕ ಮನುಷ್ಯೇತರ ಪ್ರಭೇದ ಇರುವೆ ಲೋಕದಲ್ಲಿದೆ. ರೈತ ಇರುವೆ ಎಂದೇ ಹೆಸರಾಗಿರುವ ಈ ಇರುವೆಗಳು ನಿಧಿಷ್ಟ ಸಸ್ಯಗಳ ಎಲೆಗಳನ್ನು ಕತ್ತರಿಸಿ ಸಾಗಿಸಿ ಗೂಡಿನಲ್ಲಿ ರಾಶಿ ಹಾಕುತ್ತವೆ. ಆ ಎಲೆ ರಾಶಿಯ ಮೇಲೆ ವಿಶಿಷ್ಟ ಶಿಲೀಂದ್ರಗಳನ್ನು ಬಿಟ್ಟು ಆಹಾರ ತಯಾರಿಸಿಕೊಳ್ಳುತ್ತವೆ. ಆಧುನಿಕ ಮನುಷ್ಯ ಪ್ರಕೃತಿ ಪ್ರೇಮಿಯಾಗಿ ಬಾಳಬೇಕಿದೆ. ಕಾರಣ ಪರಿಸರ ಸ್ನೇಹಿ ಬದುಕನ್ನು ಬದುಕುವ ಇರುವೆಗಳಂತೆ ನಾವು ಆಪತ್ಕಾಲಕ್ಕೆ ಮಾತ್ರ ಕೂಡಿಡುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ನಮ್ಮ ಬಳಿ ಎಷ್ಟು ಹಣವಿದೆ ಎಂದು ನಮಗೆ ತಿಳಿರುತ್ತದೆ. ಆದರೆ ನಮ್ಮ ಬಳಿ ಎಷ್ಟು ಸಮಯವಿದೆ ಎಂದು ನಮಗೆ ತಿಳಿದಿಲ್ಲ. ಸಮಯ ಬರುವ ಮುನ್ನ ಶ್ರೀಮಂತಿಕೆಯ ಭ್ರಮೆಯಲ್ಲಿ ಬದುಕುವುದನ್ನು ಬಿಡಬೇಕು. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಎಲ್ಲವೂ ನನಗೆ ಬೇಕು ಎಂಬ ಭಾನೆಯೇ ಕಾರಣವಾಗಿದೆ. ಈ ಭಾವ ನಾಶವಾದಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಮನಸ್ಸು ಸುಮಧುರ ಸ್ಥಿತಿಯಲ್ಲಿದ್ದಾಗ ಆರೋಗ್ಯಕರ ಭಾವನೆಗಳು ಹೊರಹೊಮ್ಮುತ್ತವೆ. ದೊಡ್ಡ ಸಿರಿ ಶ್ರೀಮಂತರೆoದು ಅಟ್ಟಹಾಸ ಮೆರೆದವರು ಯಾರೂ ಜನಮಾನಸದ ನೆನಪಿನಲ್ಲಿ ಉಳಿದಿಲ್ಲ. ಹೃದಯ ಸಿರಿವಂತರು ಮಾತ್ರ ಜನರ ಹೃದಯಗಳನ್ನು ಗೆದ್ದಿದ್ದಾರೆ. ಭಾವ ಮಾಧುರ್ಯದ ಶ್ರೀಮಂತಿಕೆಯಿoದ ಕೂಡಿರುವ ಜೀವನ  ಜನಪ್ರಿಯವಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಸಿರಿವಂತಿಕೆ ಕೇವಲ ಪಡೆಯುವುದರಲ್ಲಿಲ್ಲ. ಅವಶ್ಯವಿರುವವರಿಗೆ ದಾನ ಮಾಡುವುದರಲ್ಲಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿದೆ. ದ ಮನಗಳನ್ನು ಪೋಣಿಸೋಣ. ಇನ್ನಾದರೂ ಎಚ್ಚೆತ್ತುಕೊಂಡು ಹೃದಯಸಿರಿಯೇ ದೊಡ್ಡ ಸಿರಿಯೆಂದು ಸರಿಯಾಗಿ ತಿಳಿದುಚೂರಾಕೊಂಡು  ಒಬ್ಬರಿಗೊಬ್ಬರು ಅಕ್ಕರೆಯ ಸಕ್ಕರೆಯ ತಿನಿಸುತ್ತ ಮಾನವೀಯತೆಯ ಸಿರಿವಂತಿಕೆಯನ್ನು ಮೆರೆಯೋಣವಲ್ಲವೇ? ಜಯಶ್ರೀ.ಜೆ. ಅಬ್ಬಿಗೇರಿ

ಜಯಶ್ರೀ.ಜೆ. ಅಬ್ಬಿಗೇರಿ ಅವರ ಲಹರಿ “ದೊಡ್ಡ ಸಿರಿ – ಹೃದಯ ಸಿರಿ” Read Post »

ಇತರೆ

“ಮುಂದೆ ಅಪರೂಪವಾಗ ಬಹುದಾದ ಸೈಕಲ್”ವಿಶೇಷಲೇಖನ ಎನ್‌ ವಿ ರಮೇಶ್

ಸೈಕಲ್‌ ಸಂಗಾತಿ ಎನ್‌ ವಿ ರಮೇಶ್ “ಮುಂದೆ ಅಪರೂಪವಾಗ ಬಹುದಾದ ಸೈಕಲ್” ಸನಿಹದಲ್ಲೇ ಮುಂದೊಂದು ಕಾಲ ಬರಬಹುದು ಮನೆಯ ಗೋಡೆಯ ಮೇಲಿನ ಚಿತ್ರಗಳಲ್ಲಿ ಮಾತ್ರ ಕಾಣುವ ಸೈಕಲ್ಲನ್ನು ಮುಂದಿನ ತಲೆಮಾರಿನ ಮಗು ಏನೋ ವಿಚಿತ್ರ ವಸ್ತು ಎಂಬಂತೆ ಕಾಣಬಹುದು. ಏಕೆಂದರೆ ಹಿಂದೆ ಎಲ್ಲರೂ ಸಂಚರಿಸುತ್ತಿದ್ದ, ಬರಬರುತ್ತಾ, ಕೆಲವರು ಮಾತ್ರ ಸವಾರಿ ಮಾಡುತ್ತಿದ್ದ ಸೈಕಲ್ ಇಂದು ಕೇವಲ ಬಡವರು, ಶ್ರಮಜೀವಿಗಳು, ಕ್ರೀಡಾಪಟುಗಳು, ಬೊಜ್ಜು ಕರಗಿಸಲು ಹಲವರು ಬಳಸುತ್ತಿರುವ ವಾಹನವಾಗಿದೆ.ನಾನು ನೀವೆಲ್ಲಾ ಚಿಕ್ಕಂದಿನಲ್ಲಿ, ಅಪ್ಪ, ಅಣ್ಣ, ಅವರ ಗೆಳೆಯರು ಸೈಕಲ್ ಓಡಿಸುತ್ತಿದ್ದುದ್ದನ್ನು ಬೆರಗಾಗಿ ಕಂಡು, ನಾನು ಎಂದು ಸೈಕಲ್ ಓಡಿಸುತ್ತೇನೋ ಎಂದು ತುಂಬಾ ಆಸೆ, ಕಾತುರಗಳಿಂದ ಕಾಯುತ್ತಿದ್ದ ಆ ದಿನಗಳು ನಿಮಗೆ ನೆನಪಿದೆಯೇ? ಅಣ್ಣ, ಅಪ್ಪ, ಮಾವ, ಚಿಕ್ಕಪ್ಪ, ಸೈಕಲ್ಲಿನಲ್ಲಿ ಹೊರಟರೆ, ಆಗಾಗ ಮಕ್ಕಳಾದ ನಮ್ಮನ್ನು ಸೈಕಲ್ ಬಾರ್ ಮೇಲೆ (ಮುಂದುಗಡೆ) ಅಥವಾ ಕ್ಯಾರಿಯರ್ (ಸೈಕಲ್ ಹಿಂಭಾಗ) ಕೂರಿಸಿಕೊಂಡು ಹೋಗುವ ಗಳಿಗೆಗಾಗಿ ಅತ್ಯಂತ ಆಸಕ್ತಿ, ಕುತೂಹಲಗಳಿಂದ ಕಣ್ಣು ದೊಡ್ಡದಾಗಿ ತೆಗೆದು ಕಾಯುತ್ತಿದ್ದ ಆ ನಮ್ಮ ನಿಮ್ಮ ಬಾಲ್ಯದ ನೆನಪುಗಳು ಈಗ ಫೋಟೋದಲ್ಲಿ ಮಾತ್ರ ನೋಡ ಸಿಗುವಂತಹ ದೃಶ್ಯವಾಗಿದೆ. ಕಾಲ ಬದಲಾದಂತೆ ಈಗ ಬಹಳ ಸ್ಥಳಗಳಲ್ಲಿ ನಮ್ಮ ಜೀವನದಿಂದ ಮಾಯವಾಗಿದೆ. ಹಿಂದೆ ಇಂದಿನ ಅನೇಕ ವಾಹನಗಳು ರಸ್ತೆಗೆ ಬಂದಿರದ ಕಾಲದಲ್ಲಿ, ಸೈಕಲ್ ಎಲ್ಲ ಜನರ ದಿನನಿತ್ಯದ ಆವಶ್ಯಕತೆಯ ವಸ್ತುವಾಗಿತ್ತು. ಕಾಲ ಬದಲಾದಂತೆ, ಜನರ ಆಸೆ, ಆಸಕ್ತಿ, ಬಯಕೆ, ಬದಲಾದಂತೆ, ಜನರ ಕೈಯಲ್ಲಿ ಹೆಚ್ಚು ಹೆಚ್ಚು ಹಣ ಕುಣಿದಾಡಿದಂತೆ ಸೈಕಲ್‌ಗೆ ಪರ್ಯಾಯವಾದ ಅನೇಕ ವಾಹನಗಳು ಬಂದಿವೆ. ಸುಮಾರು ಎಪ್ಪತ್ತು ವರ್ಷಗಳ ಕೆಳಗೆ ನನಗೆ ಐದು ವರ್ಷವಾಗಿದ್ದಾಗ, ನಾನು ನನ್ನ ತಂದೆಯ ಸೈಕಲ್ಲಿನ ಮುಂಭಾಗದಲ್ಲಿ ಕುಳಿತು ಹೋಗುತ್ತಿದ್ದಾಗ ಬಲಗೈಗೆ ಸಿಗುತ್ತಿದ್ದ ಸೈಕಲ್ ಬೆಲ್ ಅನ್ನು ಟಣ್ ಟಣ್ ಎಂದು ಬಾರಿಸಿದ್ದು ಈಗಲೂ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ. ಆ ಕಾಲದಲ್ಲಿ ನಡೆದು ಹೋಗುವವರಿಗಿಂತ, ಬಸ್ಸಿನಲ್ಲಿ ಹೋಗುವವರಿಗಿಂತ ಸೈಕಲ್ ಇಟ್ಟಿದ್ದವರೇ ಸಾಹುಕಾರರು. ಎಂದು ನಮ್ಮ ಆ ಕಾಲದ ಭಾವನೆಯಾಗಿತ್ತು. ಕ್ರಮೇಣ ಕಾಲ ಸರಿದಂತೆ ಸೈಕಲ್ ಹಿನ್ನೆಲೆಗೆ ಹೋಗಿ ನಾನಾ ತರಹದ ವಿವಿಧ ಕಂಪನಿಗಳ ಸ್ಕೂಟರ್, ಬೈಕ್, ಕಾರುಗಳು ಬಂದು ಸೈಕಲ್ ಈಗ ಬೊಜ್ಜು ಇಳಿಸಲು ಜನ ಬಳಸುವ ಒಂದು ಸಾಧನವಾಗಿದೆ. ಕ್ರೀಡಾಪಟುಗಳು ಹಾಗೂ ಶಾರೀರಿಕ ವ್ಯಾಯಾಮ ಬೇಕೆಂದವರು ಇನ್ನೊಮ್ಮೆ ಸೈಕಲ್ಲಿನ ಬೆನ್ನು ಹತ್ತಿದ್ದಾರೆ. ಮಕ್ಕಳಿಗೆ ಮೂರು ಚಕ್ರದ ಸೈಕಲ್‌ಗಳು ಹಿಂದೆ ಜನಪ್ರಿಯವಾಗಿದ್ದವು. ಆಗ ಮದುವೆಯಲ್ಲಿ  ಮಾವ ಬಲುಕಷ್ಟಪಟ್ಟು ಅಳಿಯನಿಗೆ ಕೊಡುತ್ತಿದ್ದ ಸೈಕಲ್ ಉಡುಗೊರೆ ಆಗಿನ ಕಾಲದಲ್ಲಿ ಅದೇ ಬೆಲೆಬಾಳುವ ಕಾಣಿಕೆಯಾಗಿತ್ತು. ಈಗ ಒಮ್ಮೆ ಹೇಳಿ ನೋಡಿ – ಹತ್ತು ವರ್ಷ ದಾಟಿದ ಮಗು ಸಹ, ತನಗೆ ಲೈಸೆನ್ಸ್ ಸಿಗದಿದ್ದರೂ ಬೈಕ್ ಓಡಿಸಲು ಮುಂದೆ ನುಗ್ಗುತ್ತಾನೆ ಹೊರತು ಸೈಕಲ್ ಕಂಡರೆ “ತೂ ಇದರಲ್ಲಿ ನಾನು ಹೋಗುವುದಿಲ್ಲ.” ಟಿ.ವಿಯಲ್ಲಿ, ರಸ್ತೆ ಬೋರ್ಡುಗಳಲ್ಲಿ, ಆಕರ್ಷಕ ಬ್ಯಾನರ್‌ಗಳಲ್ಲಿ, ಸಿನಿಮಾ ಟಾಕೀಸಿನ ಜಾಹೀರಾತಿನಲ್ಲಿ ಕಂಡು ಬರುವ ಚಲನಚಿತ್ರ ನಟ-ನಟಿಯರು, ಖ್ಯಾತ ಕ್ರೀಡಾಪಟುಗಳು, ಬೈಕ್-ಕಾರ್ ಓಡಿಸುವ ರೋಲ್ ಮಾಡಲ್‌ಗಳು ಇವರನ್ನು ಕಂಡು ಮರುಳಾಗಿ, ತಾವು ಯಾವಾಗ ಲಕ್ಷ ಲಕ್ಷ ರೂಪಾಯಿ ಕೊಟ್ಟು ಇಂತಹ ಬೈಕ್ ಕೊಂಡು ಸ್ನೇಹಿತ ಅಥವಾ ಸ್ನೇಹಿತೆ, ಪ್ರಿಯತಮ-ಪ್ರಿಯತಮೆಯೊಂದಿಗೆ ಜಿಗಿದು, ಹಾರಿ, ಓವರ್ ಸ್ಪೀಡಿನಲ್ಲಿ ಯರ‍್ಯಾರಿಗೋ, ಯಾವ್ಯಾವುದಕ್ಕೋ, ಡಿಕ್ಕಿ ಹೊಡೆಯುವ ವೇಗದಲ್ಲಿ ಹಾರುತ್ತೇವೆಯೋ ಎಂಬ ಭ್ರಮಾ ಲೋಕದಲ್ಲಿದ್ದಾರೆ. ಜೇಬಿನಲ್ಲಿ ದುಡ್ಡು ಇಲ್ಲದಿದ್ದರೂ. ಓದು, ಕೆಲಸ, ಇಲ್ಲದಿದ್ದರೂ ಬೈಕ್-ಕಾರುಗಳ ಹಗಲು ಕನಸು ಕಾಣುವ ಕನಸುಗಾರರ ಪ್ರಪಂಚ ಇಂದು ಎಲ್ಲೆಡೆ ಇದೆ. ವಿಶ್ವದಲ್ಲಿ ಒಂದೆಡೆ ಹೆಚ್ಚುತ್ತಿರುವ ಜನಸಂಖ್ಯೆಯ ಅಪಾರ ಬೇಡಿಕೆ, ಪೂರೈಸಲಾಗದ ಬೇಡಿಕೆ, ಕಂಡು ಬರುತ್ತಿದೆ. ಅದರಲ್ಲೂ ಈಗ ವಿಶ್ವದಲ್ಲಿ ಹಲವಾರು ತಿಂಗಳುಗಳಿAದ ನಡೆದಿರುವ ಯುದ್ಧ, ವಿವಿಧ ದೇಶಗಳ ಮಧ್ಯದ ಸಂಘರ್ಷ, ನಾ ಹೆಚ್ಚು ನನ್ನ ಮಾತು ಕೇಳು, ಇದೇ ನನ್ನ ಮಾತು ನಡೆಯಬೇಕು, ಕೇಳದಿದ್ದರೇ ಆಕ್ರಮಣ. ಈ ರೀತಿ ಪರಸ್ಪರ ಹೊಂದಾಣಿಕೆ ಇಲ್ಲದೇ, ತಿಂಗಳಾನುಗಟ್ಟಲೆ ನಡೆದ ಯುದ್ಧ, ಪ್ರತಿಕ್ಷಣ ಏನಾಗುವುದೋ ಎಂಬ ಆತಂಕ, ಭಯ ನಮ್ಮನ್ನೆಲ್ಲಾ ಆವರಿಸಿದೆ. ನಮ್ಮ ದೇಶದಲ್ಲಿ ವಿವಿಧ ಮೂಲಗಳಿಂದ ಉತ್ಪಾದನೆಯಾಗುವ ಇಂಧನ ತೈಲಗಳ ಪೂರೈಕೆಯ ಸಾಮರ್ಥ್ಯ, ಈ ದೇಶದಲ್ಲಿ ಲಭ್ಯವಿರುವ ಇಂಧನ ಇವುಗಳು, ಈ ದೇಶದಲ್ಲಿಯ ಮಿತಿಮೀರಿದ ಬೇಡಿಕೆಯ ಇಂಧನ ಪೂರೈಕೆಗೆ ದೊಡ್ಡ ಜನಸಂಖ್ಯೆಯ ದೊಡ್ಡ ಬೇಡಿಕೆ, ಪೂರೈಸಲಾಗದ, ಅತ್ಯಂತ ಕಷ್ಟದಿಂದ ಪೂರೈಸಬೇಕಾದ ಸ್ಥಿತಿಗೆ ಒಂದು ದೊಡ್ಡ ಚಾಲೆಂಜ್ ಅಥವಾ ಆಹ್ವಾನವಾಗಿದೆ. ನಮ್ಮ ದೇಶದ ಪ್ರಧಾನ ಮಂತ್ರಿಗಳು, ತೈಲ ಇಂಧನ ಪೂರೈಸುವ ಕಂಪನಿಗಳು, ಇದಕ್ಕೆ ಸಂಬAಧಿಸಿದ ಕೇಂದ್ರ ಸರ್ಕಾರದ ಇಲಾಖೆಗಳು ಹಗಲೂ ರಾತ್ರಿ ಪ್ರಯತ್ನಿಸಿದರೂ ಸಂಪೂರ್ಣ ಬೇಡಿಕೆ ಬಯಸಿದ ಕ್ಷಣದಲ್ಲಿ ಕೆಲವು ಕಡೆಗಳಲ್ಲಿ ಸಿಗುತ್ತಿಲ್ಲ. ಆಗ ಅನೇಕ ಸಾಮಾನ್ಯ ಜನ ಸರ್ಕಾರವನ್ನು ಟೀಕಿಸುತ್ತಾರೆ. ಆದರೆ ೯೯% ಪ್ರತಿಶತ ೯೯ ಜನ ಪರ್ಯಾಯ ಮಾರ್ಗಗಳನ್ನು ಬಳಸಲು ಮನಸಾರೆ ಪ್ರಯತ್ನ ಮಾಡುತ್ತಿಲ್ಲ. ವ್ಯಕ್ತಿಗಳು ತಮ್ಮ ಕುಟುಂಬದಲ್ಲೀಯ ಹಣಕಾಸು ಸೇರಿದಂತೆ ವಿವಿಧ ವಸ್ತುಗಳ ಕೊರತೆಯಾದಾಗ ಬಹಳಷ್ಟು ಬಾರಿ ಇದ್ದುದ್ದಕ್ಕೇ, ಇದ್ದಷ್ಟಕ್ಕೇ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಆದರೆ ದೇಶದಲ್ಲಿ ಇಂಧನ ಸಮಸ್ಯೆಯಾದಾಗ ಅದಕ್ಕೆ ತಕ್ಷಣ ಹೊಂದಿಕೊಳ್ಳಲು ನಿರಾಕರಿಸುತ್ತಾರೆ. ಬಹುಶಃ ಅದಕ್ಕೇ ಏನೋ, ಪ್ರಕೃತಿ ಮೌನವಾಗಿ ಗಹಗಹಿಸಿ ನಗುತ್ತಾ “ ನನ್ನ ಮಕ್ಕಳೇ, ನೀವು ಹೀಗೆಯೇ ಜೀವನ ಕೇವಲ ಮೋಜು ಮಸ್ತಿ ಎಂದು ತಿಳಿದುಕೊಂಡು ಭೂಮಿಯ ಮೇಲೆ ಭೂಮಿಯ ಅಂತರಾಳದಲ್ಲಿ ಇರುವ ಎಲ್ಲಾ ಸಂಪನ್ಮೂಲಗಳನ್ನೂ ದೆವ್ವ ಕಬಳಿಸುವಂತೆ ರಾಕ್ಷಸವೇಗದಲ್ಲಿ ಕಬಳಿಸುತ್ತಾ ಬರುತ್ತಿದ್ದೀರಲ್ಲವೇ? ನಾನು ನಿಮ್ಮ ವೇಗವನ್ನು ತಡೆಯ ಬಯಸಿದರೇ, ನಿಮ್ಮ ಮಧ್ಯೆ ಇರುವ ಅನುಭವಿ ಹಿರಿಯರು, ದೇಶ ಕಟ್ಟುವವರು, ಹೇಳುವ ಕಿವಿ ಮಾತನ್ನು ಅಲಕ್ಷಿಸಿಸುತ್ತಿದ್ದೀರಿ. ಹೀಗಾಗಿ ನಿಮಗೆ ಒಳ್ಳೆಯ ಮಾತಿನಿಂದ, ಮೃದುವಾಗಿ, ಸೂಕ್ಷö್ಮವಾಗಿ, ಎಷ್ಟು ಬಾರಿ ಹೇಳಿದರೂ ಕಿಂಚಿತ್ತೂ ಕಿವಿಗೆ ಹಾಕಿಕೊಳ್ಳದ ನಿಮ್ಮನ್ನು ಎಚ್ಚರಿಸಲು ಪ್ರಯತ್ನಿಸುತ್ತಿದ್ದೇನೆ. ನನ್ನ ಎಚ್ಚರಿಕೆಯ ಮಾತುಗಳ ಗಂಟೆ ನಿಮಗೆ ಕೇಳಿಸುತ್ತಿಲ್ಲ. ಎಚ್ಚರ…” ಬಹುಶಃ ಭೂದೇವಿ ಹೀಗೆ ಕಿವಿ ಕೇಳಿಸುವವರಿಗೆ ಮಾತ್ರ ಹೇಳುತ್ತಿರಬಹುದು. ನನ್ನಂತವರಿಗೆ ಮಾತ್ರ ಈ ಕರೆ ಕೇಳಿಸಿದೆ.ಪ್ರಿಯ ಯುವಜನರೇ, ನನ್ನ ಮಾತುಗಳನ್ನು ದಯವಿಟ್ಟು ಕೇಳಿ “ಭೂಗರ್ಭದೊಳಗಿಂದ ಅಗೆದು ತೆಗೆದ, ಹೂತು ಹೋಗಿದ್ದ, ಪಳೆಯುಳಿಕೆ ಇಂಧನವಾದ ಪೆಟ್ರೋಲ್, ಡೀಸಲ್, ಮುಂತಾದ ಕಚ್ಛಾತೈಲ ಹಂತ ಹಂತವಾಗಿ ಕರಗುತ್ತಾ ಬರುತ್ತಿದೆ. ಎಂಬ ಲಕ್ಷಣಗಳನ್ನು ನಿಮ್ಮ ಕಣ್ಣಿಗೆ ಕಾಣುವಂತೆ ವಿವಿಧ ರೀತಿ ಭೂದೇವಿ ನಮಗೆ ತೋರಿಸುತ್ತಿದ್ದಾಳೆ.”ಇದಕ್ಕೆ ಪರ್ಯಾಯವಾಗಿ ಜಲಜನಕ ಆಧರಿಸಿದ ಇಂಧನ ಸಮೃದ್ಧವಾಗಿ ಉತ್ಪಾದಿಸಲು ಪ್ರಯತ್ನ ನಡೆಸಿರುವ ಕೆಲವು ವಿಜ್ಞಾನಿಗಳ ಸಂಶೋಧನೆಗಳನ್ನು ನಾನು ಗಮನಿಸಿದ್ದೇನೆ. ಆದರೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಜನಸಂಖ್ಯೆ, ಮತ್ತು ಕರಗಲಾರದ ಪರ್ವತದಂತೆ ಹಬ್ಬುತ್ತಿರುವ ಮಾನವರ ಆಸೆಯನ್ನು ಗಮನಿಸಿದಾಗ ಇಂತಹ ಪ್ರಯತ್ನಗಳು ಎಷ್ಟೇ ನಡೆದರೂ ಬಳಕೆದಾರ ಮಾನವರ ಬೇಡಿಕೆ ಕಡಿಮೆಯಾಗುತ್ತಿಲ್ಲ. ಇಂಧನದ ಬೆಲೆ ಎಷ್ಟೇ ಹೆಚ್ಚಾಗಲೀ, ನಾವು ಕೊಂಡೇ ಕೊಳ್ಳುತ್ತೇವೆ ಎಂಬ ಹಠ, ಚೆನ್ನಾಗಿ ಸಂಪಾದಿಸುವ ಯುವಜನರದು. ಮಕ್ಕಳು ಕಣ್ಣು ಬಿಟ್ಟ ತಕ್ಷಣ ಅವರ ತಂದೆ-ತಾಯಿ ಈ ವಾಹನಗಳ ಮೇಲೆ ಕೂರಿಸಿಕೊಂಡು ಹೋಗುವುದರಿಂದ, ನೋಡ ನೋಡುತ್ತಾ ಬೆಳೆದ ಈ ಮಕ್ಕಳು ಯುವ ಜನರಾದ ತಕ್ಷಣ ತಂದೆ-ತಾಯಿಯರನ್ನೂ ಬೈಕ್‌ಗಾಗಿ ಪೀಡಿಸುತ್ತಾರೆ. ನಮ್ಮ ಮನೆ ಬಳಿ ಒಬ್ಬ ಹಿರಿಯರ ಹದಿಹರೆಯದ ಮೊಮ್ಮಗ, ಮೂರನೇ ಅಂತಸ್ತಿನಿAದ ಕೂಗುತ್ತಿದ್ದ. ದೃಶ್ಯ ನನ್ನ ಕಿವಿಗೆ ಕೇಳಿಸಿತು, ನಂತರ ನನ್ನ ಕಣ್ಣಿಗೆ ಕಾಣಿಸಿತು. ಅವನು ಜೋರಾಗಿ ಕೂಗುತ್ತಿದ್ದ “ತಾತ, ನೀನು ನನಗೆ ತಕ್ಷಣ… ಬ್ರಾö್ಯಂಡಿನ ಬೈಕ್ ತೆಗೆದುಕೊಡದಿದ್ದರೆ ನಾನು ಮೇಲಿಂದ ಹಾರಿ ಕೆಳಗೆ ಬೀಳುತ್ತೇನೆ, ಪ್ರಾಣ ಕಳೆದುಕೊಳ್ತೀನಿ ಗಾಡಿ ಇಲ್ಲದಿದ್ದರೆ, ನಾನು ಬದುಕಲಾರೆ”ಸದ್ಯದಲ್ಲಿ ವಿಶ್ವದಲ್ಲಿರುವ ಮುಂದೇನು? ಎಂಬ ಒತ್ತಡದ, ಹೆದರಿಕೆಯ ವಾತಾವರಣದಲ್ಲಿ ನಾನು ಯೋಚಿಸುತ್ತಾ ಕುಳಿತ್ತಿದ್ದಾಗ, ಒಬ್ಬ ವೃದ್ಧರು ಸೈಕಲ್ ಹೊಡೆಯುತ್ತಾ ಬಂದು ನನ್ನ ಬಳಿ ನಿಂತು ಕೇಳಿದರು. “ ನನ್ನ ಹಾಗೆ ನಿನಗೂ ಸೈಕಲ್ ಹೊಡೆಯೋಕೆ ಬರುತ್ತಾ!?” ನಾನು ನಗುತ್ತಾ ಅಂದೆ, “ಅಜ್ಜಾ, ನಾನೂ ನಿನ್ನಂತೆಯೇ ಸೈಕಲ್ ಹೊಡೆಯುತ್ತೇನೆ, ನಡೆದು ಹೋಗುತ್ತೇನೆ,” ಆ ವೃದ್ಧರು ನಗುತ್ತಾ ಆಶ್ಚರ್ಯದಿಂದ ಕೇಳಿದರು “ಯಾಕೆ ನಿನಗೆ ಬೈಕ್ ಕಾರು ಚಾಲನೆ ಮಾಡಲು ಬರುವುದಿಲ್ಲವೇ” ನಾನು ಉತ್ತರಿಸಿದೆ. “ಬರುತ್ತಿತ್ತು ಹಿಂದೆ. ನನ್ನ ಯೌವ್ವನದ ಕಾಲದಲ್ಲಿ ನಾನೂ ಮೋಪೆಡ್ ಕಲಿತು ೨೬ ವರ್ಷ ಓಡಿಸಿದ್ದೇನೆ. ಆದರೆ ವಯಸ್ಸಾಗುತ್ತಿದ್ದಂತೆ, ರಸ್ತೆಯಲ್ಲಿಯ ಜನರ ಹಾಗೂ ವಾಹನ ದಟ್ಟಣೆ, ಆಗಾಗ ಸಂಭವಿಸುವ ರಸ್ತೆ ಅಪಘಾತಗಳನ್ನು ಕಂಡು ವಾಹನ ಪ್ರಯಾಣವನ್ನು ೨೦೧೧ರ ಡಿಸೆಂಬರ್ ಒಂದರಿAದ ನಿಲ್ಲಿಸಿದ್ದೇನೆ. ಹೀಗಾಗಿ ಸೈಕಲ್ ಓಡಿಸುತ್ತೇನೆ. ಅದಕ್ಕಿಂತ ಹೆಚ್ಚಾಗಿ ವಾಕಿಂಗ್ ಹೋಗುತ್ತೇನೆ.” ಎನ್.ವ್ಹಿ.ರಮೇಶ್. ನಿವೃತ್ತ ಕಾರ್ಯಕ್ರಮ ಅಧಿಕಾರಿಗಳುಆಕಾಶವಾಣಿಮೈಸೂರುಮೊ:೯೮೪೫೫೬೫೨೩೮

“ಮುಂದೆ ಅಪರೂಪವಾಗ ಬಹುದಾದ ಸೈಕಲ್”ವಿಶೇಷಲೇಖನ ಎನ್‌ ವಿ ರಮೇಶ್ Read Post »

ಇತರೆ

“ಹಂಚುವ ಗುಣವನ್ನು ಕಾಗೆಯಿಂದ ಕಲಿಯಿರಿ”ಲೇಖನ ಕವಿತಾ ಶ್ರೀನಿವಾಸ್ ನಾಯಕ್ 

ವಿಶೇಷ ಸಂಗಾತಿ “ಹಂಚುವ ಗುಣವನ್ನು ಕಾಗೆಯಿಂದ ಕಲಿಯಿರಿ” ಕವಿತಾ ಶ್ರೀನಿವಾಸ್ ನಾಯಕ್  ​ನಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿನ ಪ್ರತಿ ಜೀವಿಯೂ ನಮಗೆ ಒಂದಲ್ಲ ಒಂದು ಜೀವನ ಪಾಠವನ್ನು ಕಲಿಸುತ್ತಿರುತ್ತದೆ. ಅತೀ ಸಾಮಾನ್ಯ ಪಕ್ಷಿ ಎಂದು ನಾವು ಕಡೆಗಣಿಸುವ ‘ಕಾಗೆ’ಯ ಜೀವನಶೈಲಿಯಲ್ಲೇ ಮನುಷ್ಯನಿಗೆ ಅಗತ್ಯವಾದ ಅತಿ ದೊಡ್ಡ ಗುಣಗಳಿವೆ. ಕಾಗೆ ಎಂದರೆ ಕೇವಲ ಅಶುಭದ ಸಂಕೇತವಲ್ಲ, ಅದು ‘ಸಹಬಾಳ್ವೆ ಮತ್ತು ಹಂಚಿಣ್ಣುವಿಕೆ’ಯ ಸಾಕಾರ ಮೂರ್ತಿ.​ಒಗ್ಗಟ್ಟಿನಲ್ಲಿ ಬಲವಿದೆಕಾಗೆಗಳದ್ದು ಅದ್ಭುತವಾದ ಸಂಘಟನಾ ಶಕ್ತಿ. ಯಾವುದಾದರೂ ಕಾಗೆಗೆ ಆಹಾರ ಸಿಕ್ಕಾಗ, ಅದು ಎಂದಿಗೂ ಒಬ್ಬಂಟಿಯಾಗಿ ತಿಂದು ತೇಗಲು ಬಯಸುವುದಿಲ್ಲ. ಬದಲಾಗಿ, ಆಹಾರ ಕಂಡ ತಕ್ಷಣ ಜೋರಾಗಿ ‘ಕಾವ್ ಕಾವ್’ ಎಂದು ಕೂಗಿ ತನ್ನೆಲ್ಲಾ ಬಳಗವನ್ನು ಕರೆಯುತ್ತದೆ. ತನಗೆ ಸಿಕ್ಕಿದ್ದನ್ನು ತನ್ನವರಿಗೂ ಹಂಚಬೇಕು ಎಂಬ ಅದರ ಈ ಔದಾರ್ಯ, ಸ್ವಾರ್ಥದ ಸುಳಿಗೆ ಸಿಲುಕಿರುವ ಇಂದಿನ ಮನುಕುಲಕ್ಕೆ ನಿಜಕ್ಕೂ ಮಾದರಿ. “ನಾನು ಮತ್ತು ನನ್ನ ಕುಟುಂಬ” ಎಂಬ ಸಂಕುಚಿತ ಮನೋಭಾವದಿಂದ ಹೊರಬಂದು, “ನಮ್ಮವರು” ಎಂಬ ವಿಶಾಲ ಭಾವನೆಯನ್ನು ಬೆಳೆಸಿಕೊಳ್ಳಲು ಕಾಗೆ ನಮಗೆ ಕಲಿಸುತ್ತದೆ.​ಸಂಕಟದಲ್ಲಿ ಜೊತೆಗೂಡುವ ಮನಸ್ಸುಕಾಗೆಗಳ ಸಾಮಾಜಿಕ ಕಳಕಳಿ ಅತಿ ಹೆಚ್ಚು. ಯಾವುದಾದರೂ ಒಂದು ಕಾಗೆಗೆ ತೊಂದರೆಯಾದರೆ ಅಥವಾ ಅದು ಮೃತಪಟ್ಟರೆ, ನೂರಾರು ಕಾಗೆಗಳು ಒಂದೆಡೆ ಸೇರಿ ಕೂಗಾಡುವುದನ್ನು ನಾವು ಗಮನಿಸಿರಬಹುದು. ಇದು ಕೇವಲ ಶಬ್ದವಲ್ಲ, ಅವರ ನಡುವಿನ ಬಲವಾದ ಬಾಂಧವ್ಯದ ಪ್ರತೀಕ. ದುಃಖವನ್ನು ಹಂಚಿಕೊಳ್ಳುವ ಮೂಲಕ ನೋವನ್ನು ಕಡಿಮೆ ಮಾಡುವ ಗುಣ ಅವುಗಳಲ್ಲಿದೆ. ಇಂದು ಮನುಷ್ಯ ತನ್ನ ನೆರೆಯವರ ಕಷ್ಟವನ್ನೂ ಕೇಳದಷ್ಟು ತಂತ್ರಜ್ಞಾನದ ಜಾಲದಲ್ಲಿ ಸಿಲುಕಿದ್ದಾನೆ. ಅಂತಹ ಸಂದರ್ಭದಲ್ಲಿ, ಕಾಗೆಗಳ ಈ ಸಾಮಾಜಿಕ ಬದ್ಧತೆ ನಿಜಕ್ಕೂ ಶ್ಲಾಘನೀಯ.​ತಾನುಂಡು ಇತರರಿಗೂ ಉಣಬಡಿಸುವುದುಭಾರತೀಯ ಸಂಸ್ಕೃತಿಯಲ್ಲಿ “ತಾನುಂಡು ಇತರರಿಗೂ ಉಣಬಡಿಸುವವನೇ ನಿಜವಾದ ಮನುಷ್ಯ” ಎಂದು ಹೇಳಲಾಗಿದೆ. ಕಾಗೆಗಳು ಯಾವುದೇ ಭೇದವಿಲ್ಲದೆ ಎಲ್ಲವನ್ನೂ ಹಂಚಿಕೊಳ್ಳುತ್ತವೆ. ಸ್ವಾರ್ಥದ ಈ ಲೋಕದಲ್ಲಿ, ನಮ್ಮಲ್ಲಿರುವ ಜ್ಞಾನ, ಸಂಪತ್ತು ಅಥವಾ ಪ್ರೀತಿಯನ್ನು ನಾಲ್ಕು ಜನರೊಂದಿಗೆ ಹಂಚಿಕೊಂಡರೆ ಸಮಾಜ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ಕಾಗೆಗಳು ಪ್ರತಿಕ್ಷಣವೂ ಸಾಬೀತುಪಡಿಸುತ್ತಿವೆ. ನಾವು ಕೇವಲ ಭೌತಿಕ ವಸ್ತುಗಳನ್ನು ಹಂಚಿಕೊಳ್ಳುವುದು ಮಾತ್ರವಲ್ಲದೆ, ಕಷ್ಟದಲ್ಲಿರುವವರಿಗೆ ಧೈರ್ಯ ತುಂಬುವ ಮೂಲಕವೂ ‘ಹಂಚುವಿಕೆ’ಯನ್ನು ಚಾಲ್ತಿಯಲ್ಲಿಡಬಹುದು.​ಕಾಗೆಯ ಗುಣ ನಮ್ಮ ಬದುಕಿನ ಭಾಗವಾಗಲಿನಾವು ಕಾಗೆಯನ್ನು ಕೇವಲ ಒಂದು ಪಕ್ಷಿಯೆಂದು ನೋಡದೆ, ಅದರ ‘ಹಂಚಿಣ್ಣುವ’ ಸಂಸ್ಕೃತಿಯನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಧಾವಂತದ ಬದುಕಿನಲ್ಲಿ ನಾವು ಸಣ್ಣ ಸಣ್ಣ ಸಂತೋಷಗಳನ್ನು ಹಂಚಿಕೊಳ್ಳುವುದನ್ನೇ ಮರೆತಿದ್ದೇವೆ. ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ನೆರೆಹೊರೆಯವರಿಗೆ ನೀಡುವುದಿರಲಿ, ಕನಿಷ್ಠಪಕ್ಷ ನಮ್ಮ ಹತ್ತಿರವಿರುವ ಸಕಾರಾತ್ಮಕ ವಿಚಾರಗಳನ್ನಾದರೂ ಹಂಚಿಕೊಳ್ಳೋಣ. ಸಣ್ಣ ಆಹಾರದ ತುತ್ತನ್ನು ಹಂಚುವ ಕಾಗೆಯ ಗುಣ ನಮ್ಮಲ್ಲಿದ್ದರೆ, ಖಂಡಿತವಾಗಿಯೂ ಹಸಿವು ಮತ್ತು ಒಂಟಿತನವಿಲ್ಲದ ಒಂದು ಸುಂದರ ಸಮಾಜವನ್ನು ನಿರ್ಮಿಸಬಹುದು.​ಕಾಗೆಗಳು ಎಂದಿಗೂ ತನ್ನ ಆಹಾರಕ್ಕಾಗಿ ಜಗಳವಾಡುವುದಿಲ್ಲ, ಅವು ಸಮುದಾಯದ ಪಕ್ಷಿಗಳಾಗಿ ಬದುಕುತ್ತವೆ. “ಕಾಗೆ ಒಂದೇ ಗೂಡಿನ ಪಕ್ಷಿಯಲ್ಲ, ಅದು ಸಮುದಾಯದ ಪಕ್ಷಿ.” ನಾವು ಕೂಡ ಹಾಗೆಯೇ ಆಗೋಣ. ನಾವು ಗಳಿಸುವ ಸಂಪತ್ತು, ಗಳಿಸುವ ಕೀರ್ತಿ ಅಥವಾ ನಾವು ಪಡೆಯುವ ಜ್ಞಾನ—ಯಾವುದೂ ನಾವು ಸತ್ತಾಗ ಜೊತೆಗೆ ಬರುವುದಿಲ್ಲ. ಆದರೆ, ನಾವು ಸಮಾಜಕ್ಕೆ ನೀಡಿದ ಪ್ರೀತಿ ಮತ್ತು ಸಹಕಾರ ಶಾಶ್ವತವಾಗಿ ಉಳಿಯುತ್ತದೆ.​ನಮ್ಮ ಬದುಕು ಕಾಗೆಯಂತಿರಲಿ. ಸದ್ದು ಮಾಡಿ ಬದುಕೋಣ, ಎಲ್ಲರನ್ನೂ ಸೇರಿಸಿಕೊಳ್ಳೋಣ ಮತ್ತು ಬದುಕನ್ನು ಹಂಚಿಕೊಂಡು ಆನಂದಿಸೋಣ. ಈ ಪ್ರಕೃತಿಯಲ್ಲಿ ಪ್ರತಿ ಜೀವಿಯಲ್ಲೂ ಒಂದು ಅರ್ಥವಿದೆ. ಆ ಅರ್ಥವನ್ನು ಅರಿತು ಬದುಕಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ಇಂದಿನ ದಿನಗಳಲ್ಲಿ ಪರಸ್ಪರ ದ್ವೇಷ, ಅಸೂಯೆಗಳನ್ನು ಬದಿಗಿಟ್ಟು, ಸಹಬಾಳ್ವೆಯ ಪಾಠವನ್ನು ಕಾಗೆಯಿಂದ ಕಲಿತು, ಒಂದು ಸಾಮರಸ್ಯದ ಸಮಾಜಕ್ಕೆ ನಾಂದಿ ಹಾಡೋಣ.​————— ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

“ಹಂಚುವ ಗುಣವನ್ನು ಕಾಗೆಯಿಂದ ಕಲಿಯಿರಿ”ಲೇಖನ ಕವಿತಾ ಶ್ರೀನಿವಾಸ್ ನಾಯಕ್  Read Post »

ಇತರೆ

“ಸುಖಸ್ಯಾ ನಂತರಂ ದುಃಖಂ ದುಃಖಸ್ಯಾ ನಂತರಂ ಸುಖಂ” ಶೋಭಾ ನಾಗಭೂಷಣ

ವಿಶೇಷ ಸಂಗಾತಿ ಶೋಭಾ ನಾಗಭೂಷಣ “ಸುಖಸ್ಯಾ ನಂತರಂ ದುಃಖಂ ದುಃಖಸ್ಯಾ ನಂತರಂ ಸುಖಂ”    ಜೀವನ ಎನ್ನುವುದು ಒಂದೇ ರೀತಿಯಾಗಿ ಇರುವುದಿಲ್ಲ ಸುಖದ ಹಿಂದೆ ದುಃಖ; ದುಃಖದ ಹಿಂದೆ ಸುಖ ಎನ್ನುವುದು ಸರ್ವೇ ಸಾಮಾನ್ಯ. ವ್ಯಕ್ತಿ ಈ ಘಳಿಗೆಯಲ್ಲಿ ಸುಖ, ಶಾಂತಿ, ನೆಮ್ಮದಿಗಳಿಂದ ಇದ್ದಾನೆ ಎಂದರೆ ಆ ಸುಖವು ಶಾಶ್ವತವಾಗಿ ಇರಬೇಕೆಂದಿಲ್ಲ. ಆ ವ್ಯಕ್ತಿಯು ಯಾವುದಾದರೂ ಒಂದು ಕಾರಣಕ್ಕೆ ತನ್ನ ಜೀವನದಲ್ಲಿ ಅತೀವ ದುಃಖಕ್ಕೆ ಒಳಗಾಗಿರುತ್ತಾನೆ. ಎಂತಹ ಪ್ರಭಾವಿ ವ್ಯಕ್ತಿಯೂ; ಎಂತಹ ಆಗರ್ಭ ಶ್ರೀಮಂತನಾಗಿದ್ದರೂ ಅವನು ಸಂಪೂರ್ಣವಾಗಿ ಸುಖಿಯಾಗಿರುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಆ ವ್ಯಕ್ತಿಗೆ ಜೀವನದಲ್ಲಿ ಯಾವುದಾದರೂ ಒಂದು ದುಃಖ ಖಂಡಿತಾ ಇರುತ್ತದೆ. ಹಾಗೆಯೇ ಜೀವನದಲ್ಲಿ ಕಷ್ಟಗಳನ್ನೇ ಕಂಡ ಹಲವಾರು ವ್ಯಕ್ತಿಗಳು ಒಮ್ಮೆ ಸುಖವನ್ನು ಕಂಡಿರುತ್ತಾನೆ. “ಒಳ್ಳೆಯ ದಿನಗಳು ಬರಬೇಕೆಂದರೆ ಸ್ವಲ್ಪ ಕೆಟ್ಟ ದಿನಗಳ ಜೊತೆ ಕಾಲ ಕಳೆಯಬೇಕು” ಎನ್ನುವ ಜೀವನದ ಸತ್ಯವನ್ನು ಅರ್ಥಮಾಡಿಕೊಂಡು ಕಷ್ಟವನ್ನು ನುಂಗಿ ಸುಖದ ನಿರೀಕ್ಷೆಯೊಂದಿಗೆ ಬದುಕನ್ನು ನಡೆಸುತ್ತಿರುತ್ತಾನೆ.    ನಾವು ರಾಜಾ ಹರಿಶ್ಚಂದ್ರನು ಸತ್ಯ ಹರಿಶ್ಚಂದ್ರನಾದ ಕಥೆಯನ್ನು ನೋಡಿದರೆ,  ಹರಿಶ್ಚಂದ್ರನು ಸತ್ಯಕ್ಕಾಗಿ ಅಪಾರ ಕಷ್ಟವನ್ನು ಅನುಭವಿಸುತ್ತಾನೆ. ತನ್ನ ರಾಜ್ಯದಲ್ಲಿ ದಕ್ಷ ಆಡಳಿತ ಮಾಡುತ್ತಿದ್ದಲ್ಲದೇ, ಪ್ರಜಾನುರಾಗಿಯಾಗಿ, ಪ್ರಜೆಗಳಿಗಾಗಿ ಅತ್ಯುತ್ಕೃಷ್ಟ  ಕಾರ್ಯಗಳನ್ನು ಮಾಡುತ್ತಾ ಬದುಕಿದ್ದ ಹರಿಶ್ಚಂದ್ರನಿಗೂ ಒಮ್ಮೆ ರಾಜ್ಯ, ಕುಟುಂಬ , ಗೌರವ ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿ ಒದಗಿಬರಲಿಲ್ಲವೇ? ಆದರೆ ಅವನು ಎಂದಿಗೂ ಧೃತಿಗೆಡದೆ ಬಂದದ್ದನ್ನು ಸ್ವೀಕರಿಸುತ್ತಾ, ಸತ್ಯಮಾರ್ಗವನ್ನು ಬಿಡದೆಯೇ ನಡೆದುಕೊಂಡ ಈ ಕಾರಣಕ್ಕಾಗಿ ಅಂತಿಮವಾಗಿ ಅವನ ಸತ್ಯನಿಷ್ಠೆಗೆ ಫಲವಾಗಿ ಮತ್ತೆ ಸುಖ, ರಾಜ್ಯ ಮತ್ತು ತನ್ನ ಕುಟುಂಬ, ಗೌರವ ಎಲ್ಲವನ್ನೂ ಮರಳಿ ಪಡೆದುಕೊಂಡ. ಕಷ್ಟದ ಸಂದರ್ಭದಲ್ಲಿ ಹರಿಶ್ಚಂದ್ರನೇನಾದರೂ ಸ್ಥೈರ್ಯಗೆಟ್ಟು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ, ಇಂದು ಕಲಿಯುಗದಲ್ಲಿ ಸತ್ಯಕ್ಕೆ ಹೆಸರಾಗಿ ಉಳಿದಿರುವ ಹರಿಶ್ಚಂದ್ರ ಹೇಳ ಹೆಸರಿಲ್ಲದಂತೆ ಆಗುತ್ತಿದ್ದ. ಹಾಗೆಯೇ ರಾಮಾಯಣದಲ್ಲಿ  ಶ್ರೀರಾಮನ ವನವಾಸದ ಕಥೆ; ಶ್ರೀರಾಮ ಸುಖದಲ್ಲಿ ಇದ್ದಾಗಲೇ ಇನ್ನೇನು ರಾಜ್ಯ ಪಟ್ಟಾಭಿಷೇಕ ಆಗುತ್ತದೆ ಎನ್ನುವ ಕಾಲಕ್ಕೆ ವನವಾಸ ಪ್ರಾಪ್ತವಾಗುತ್ತದೆ. ಅನೇಕ ಸಂಕಷ್ಟಗಳು ಒದಗಿಬರುತ್ತವೆ. ಕೊನೆಯಲ್ಲಿ ಅಯೋಧ್ಯೆಗೆ ಮರಳಿ ರಾಜನಾಗುತ್ತಾನೆ.  ಮಹಾಭಾರತದ ಪಾಂಡವರ ಕಥೆಯೂ ಹಾಗೆಯೇ. ಪಾಂಡವರು ಅನೇಕ ಕಷ್ಟಗಳು, ವನವಾಸ-ಅಜ್ಞಾತವಾಸ, ಅವಮಾನಗಳನ್ನು ಅನುಭಸಿದ್ದರೂ ನ್ಯಾಯಕ್ಕಾಗಿ ಹೋರಾಡಿ ವಿಜಯ ಪಡೆಯುತ್ತಾರೆ.  ದುಃಖ ಎನ್ನುವುದು ಶಾಶ್ವತವಲ್ಲ ಧೈರ್ಯದಿಂದ ಇದ್ದರೆ ಸುಖ ಬಂದೇ ಬರುತ್ತದೆ.ಒಂದು ಹಳ್ಳಿಯಲ್ಲಿ ಒಬ್ಬ ವೃದ್ಧ ರೈತ ವಾಸಿಸುತ್ತಿದ್ದ. ಅವನ ಬಳಿ ಒಂದು ಸುಂದರ ಕುದುರೆ ಇತ್ತು ಆ ಕುದುರೆಯೇ ಅವನ ಜೀವನೋಪಾಯ. ಒಂದು ದಿನ ಆ ಕುದುರೆ ದಾರಿ ತಪ್ಪಿ ಕಾಡಿಗೆ ಹೊರಟುಹೊಯಿತು. ಆ ವೃದ್ಧನಿಗೆ ಅದೃಷ್ಟದಂತಿದ್ದ ಕುದುರೆ ಕಾಣದಾದಾಗ, ಆ ಹಳ್ಳಿಯ ಜನರು ವೃದ್ಧನನ್ನು ಕುರಿತು “ನಿನ್ನ ಅದೃಷ್ಟವೇ ಕೆಟ್ಟು ಹೋಯಿತು , ಆ ದೇವರು ನಿಮಗೆ ಇಷ್ಟು ದುಃಖವನ್ನು ಕೊಡಬಾರದಿತ್ತು” ಎಂದರು. ಆಗ ಆ ವೃದ್ಧನು “ಯಾರಿಗೆ ಗೊತ್ತು, ಬಹುಶಃ ಇದು ಒಳ್ಳೆಯದ್ದೋ! ಕೆಟ್ಟದ್ದೋ” ಎಂದನು. ಕೆಲವು ದಿನಗಳು ಹೀಗೇ ಕಳೆಯಿತು. ಒಂದು ದಿನ ಆ ಕುದುರೆ ಮರಳಿ ಬಂದಿತು. ಅದರೊಂದಿಗೆ ಇನ್ನೂ ಮೂರು ಕಾಡು ಕುದುರೆಗಳೂ ಬಂದವು. ಹಳ್ಳಿಯವರಿಗೆ ಆಶ್ಚರ್ಯವೋ ಆಶ್ಚರ್ಯ. ಹಳ್ಳಿಯವರು ರೈತನನ್ನು ಕುರಿತು “ನಿಮ್ಮ ಅದೃಷ್ಟ ನಿಜಕ್ಕೂ ತುಂಬಾ ಚೆನ್ನಾಗಿದೆ!” ಎಂದರು. ರೈತ ಮತ್ತೆ “ಯಾರಿಗೆ ಗೊತ್ತು, ಬಹುಶಃ ಇದು ಒಳ್ಳೆಯದ್ದೋ! ಕೆಟ್ಟದ್ದೋ” ಎಂದನು. ಒಂದು ದಿನ ಆ ರೈತನ ಮಗ ಆ ಕಾಡು ಕುದುರೆಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ. ಆದರೆ ಕುದುರೆಯಿಂದ ಬಿದ್ದು ಅವನ ಕಾಲು ಮುರಿದು ಹೋಯಿತು. ಹಳ್ಳಿಯವರು ದುಃಖದಿಂದ “ಅಯ್ಯೋ! ತುಂಬಾ ಕೆಟ್ಟ ದ್ದಾಯಿತು” ಎಂದರು. ಆದರೆ ಆ ರೈತ ಮಾತ್ರ ಆಗಲೂ ಮತ್ತದೇ ಮಾತನ್ನು ಆಡಿದ “ಯಾರಿಗೆ ಗೊತ್ತು, ಬಹುಶಃ ಇದು ಒಳ್ಳೆಯದ್ದೋ! ಕೆಟ್ಟದ್ದೋ” ಎಂದ. ಕೆಲವು ದಿನಗಳ ಬಳಿಕ ರಾಜ್ಯದಲ್ಲಿ ಯುದ್ಧ ಆರಂಭವಾಯಿತು. ಹಳ್ಳಿಯ ಎಲ್ಲಾ ಯುವಕರನ್ನೂ ಸೈನ್ಯಕ್ಕೆ ಕರೆದುಕೊಂಡು ಹೋದರು. ಆದರೆ ರೈತನ ಮಗನ ಕಾಲು ಮುರಿದುದ್ದರಿಂದ ಅವನನ್ನು ಕರೆದೊಯ್ಯಲಿಲ್ಲ. ಯುದ್ಧಕ್ಕೆ ಹೋದ ಅನೇಕರು ಮರಳಿ ಬರಲಿಲ್ಲ.  ಆಗ ಹಳ್ಳಿಯವರು ಬಂದು “ ನಿಜವಾಗಿಯೂ ಇದು ಒಳ್ಳೆಯದ್ದೇ ಆಯಿತು” ಎಂದರು. ಆಗ ಆ ರೈತ ನಕ್ಕು “ಜೀವನದಲ್ಲಿ ಯಾವುದು ಸುಖ ಯಾವುದು ದುಃಖ ಎಂದು ತಕ್ಷಣ ನಿರ್ಧರಿಸಲಾಗುವುದಿಲ್ಲ” ಎಂದು ಹೇಳಿದ.  ಯಾವ ಘಟನೆಯು ನಮಗೆ ಒಳ್ಳೆಯದ್ದನ್ನು ಮಾಡುತ್ತದೆ; ಯಾವುದು ಕೆಟ್ಟದ್ದನ್ನು ಮಾಡುತ್ತದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಬಂದದ್ದನ್ನೆಲ್ಲಾ ಸ್ವೀಕರಿಸುತ್ತಾ, ಒಳ್ಳೆಯ ಆಲೋಚನೆಗಳನ್ನು ಮಾಡುತ್ತಾ ನಮ್ಮ ಕರ್ತವ್ಯವನ್ನು ಮಾಡುತ್ತಾ ಸಾಗಬೇಕು.ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದ ೧೪ನೇ ಶ್ಲೋಕದಲ್ಲಿ ಹೇಳುವಂತೆ,ಮಾತ್ರಾ ಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ ।ಆಗಮಾಪಾಯಿನೋऽನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ| ಭಗವಂತನು ಅರ್ಜುನನಿಗೆ ಹೇಳುತ್ತಾನೆ “ಇಂದ್ರಿಯಗಳ ಮೂಲಕ ಹೊರ ಪ್ರಪಂಚದಿಂದ ಉಂಟಾಗುವ ಶೀತ ಮತ್ತು ಉಷ್ಣ, ನಲಿವು ಮತ್ತು ನೊವುಗಳನ್ನು ಆದಿ ಮತ್ತು ಅಂತ್ಯವನ್ನು ಹೊಂದಿವೆ. ಅವುಗಳು ಅನಿತ್ಯ; ಅವುಗಳನ್ನು ಸಹಿಸು ಎನ್ನುತ್ತಾನೆ. ಅದರಂತೆಯೇ ಅದೇ ಅಧ್ಯಾಯದ ೩೮ ನೇ ಶ್ಲೋಕದಲ್ಲಿ ಹೇಳುವಂತೆ ಸುಖದುಃಖೇ ಸಮೇಕೃತ್ವಾಲಾಭಾಲಾಭೌ ಜಯಾಜಯೌ|ತತೋ ಯುದ್ಧಾಯ ಯುಜ್ಯಸ್ವನೈವಂ ಪಾಪಮವಾಪ್ಸ್ಯಸಿ|| ಅಂದರೆ ಸುಖ-ದುಃಖ, ಲಾಭ-ನಷ್ಟ ಮತ್ತು ಗೆಲುವು- ಸೋಲುಗಳನ್ನು ಸಮವಾಗಿ ಭಾವಿಸಿಕೊಂಡು ಯುದ್ಧಕ್ಕೆ ಅನುವಾಗು ಆಗ ನೀನು ಪಾಪವನ್ನು ಗಳಿಸುವುದಿಲ್ಲ.  ಭಗವಂತನ ಈ ಮಾತುಗಳೆಲ್ಲವು ಕೂಡ ಸುಖ- ದುಃಖಗಳ ಬಗೆಗೆ ಚಿಂತಿಸದೇ ನಾವು ನಮ್ಮ ಕಾರ್ಯವನ್ನು ಮಾಡಬೇಕು ಎಂದು ತಿಳಿಸುತ್ತವೆ. ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು|ಗುರುತಿಸೊಳಿತಿರುವುದನು ಕೇಡುಗಳ ನಡುವೆ||ಇರುವ ಭಾಗ್ಯವ ನೆನೆದು ಬಾರದೆಂಬುದನು ಬಿಡು|ಹರುಷಕಿದೆ ದಾರಿಯೆಲೊ-ಮಂಕುತಿಮ್ಮ|| ಡಿ ವಿ ಜಿ ಯವರ ಮಕುತಿಮ್ಮನ ಕಗ್ಗದ ಸಾಲುಗಳಿವು ಜೀವನದಲ್ಲಿ ನಮಗೆ ದೊರೆತಿರುವ ಪುಣ್ಯವನ್ನು ಹಾಗೂ ಅದರ ಒಳ್ಳೆಯ ಫಲವನ್ನು ಅನುಭವಿಸದೇ ಬಾರದಿರುವುದರ ಬಗ್ಗೆ ನಾವು ಚಿಂತಿಸುತ್ತೇವೆ. ಆ ಬಾರದಿರುವುದು ಸುಖವೂ ಆಗಿರಬಹುದು ಅಥವಾ ಹಲವಾರು ಕಾರಣಗಳಿಂದ ಮುಂದೆ ಬರಬಹುದಾದ ದುಃಖವೂ ಆಗಿರಬಹುದು. ನಾವು ಮುಂದಿನ ದುಃಖದ ಬಗೆಗೆ ಹೆಚ್ಚು ಆಲೋಚಿಸಿದರೆ ಇಂದು ನಮ್ಮ ಪಾಲಿಗೆ ಒದಗಿರುವ ಸುಖವನ್ನು ಅನುಭವಿಸದೇ ಅದನ್ನೂ ಕೂಡ ದುಃಖವನ್ನಾಗಿಸಿಕೊಂಡು ನಮ್ಮ ಕೈಯ್ಯಲ್ಲಿಯೇ ನಮ್ಮ ಜೀವನದ ರಸ ನಿಮಿಷವನ್ನು ಹಾಳುಮಾಡಿಕೊಳ್ಳುತ್ತೇವೆ. ಅದನ್ನು ಹೊರತುಪಡಿಸಿ ನಾವು ಪ್ರತಿಕ್ಷಣವನ್ನು ಜೀವಿಸಬೇಕು. ತೃಪ್ತಿಕರವಾಗಿ ಅನುಭವಿಸಬೇಕು. ಬರದಿರುವುದರ ಬಗ್ಗೆ ಆಲೋಚಿಸಿ, ಈಗಿರುವ ಒಳ್ಳೆಯದ್ದನ್ನು ಮರೆಯಬಾರದು. ಕಷ್ಟಗಳ ನಡುವೆಯೂ ಕಿಂಚಿತ್ತಾದರೂ ಸುಖ ಎನ್ನುವುದು ಇರುತ್ತದೆ. ಆ ಸಂತೋಷವನ್ನು ನಾವು ಹುಡುಕಿ ತೆಗೆದು ಬದುಕಬೇಕು. ಇರುವ ಭಾಗ್ಯವ ನೆನೆದು ಬದುಕಿದರೆ ಮನಸ್ಸಿಗೆ ಹರುಷವು ಸಿಗುತ್ತದೆ. ಎನ್ನುವ ಹಿರಿಯರ ಅನುಭವಜನ್ಯವಾದ ಮಾತು ಎಲ್ಲರಿಗೂ ಬದುಕುವ ಭರವಸೆಯನ್ನು ನೀಡುತ್ತದೆ. ನಾವು ಯಾವುದೇ ಯಶಸ್ವೀ ವ್ಯಕ್ತಿಗಳ ಜೀವನವನ್ನು ತೆಗೆದುಕೊಂಡರೂ ಆ ಯಶಸ್ಸಿನ ಹಿಂದೆ ಅವರ ದೊಡ್ಡ ಶ್ರಮ, ಸಂಕಷ್ಟಗಳು ಇರುತ್ತವೆ. ಬೆಂದು ಬೇಂದ್ರೆಯದ ದ.ರಾ.ಬೇಂದ್ರೆಯವರು, ಡಿವಿಜಿಯವರು, ಡಾ||ರಾಜ್ ಕುಮಾರ್, ಅಬ್ದುಲ್ ಕಲಾಂ, ನಾರಾಯಣಮೂರ್ತಿ-ಸುಧಾಮೂರ್ತಿ ದಂಪತಿಗಳು, ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು, ನಮ್ಮ ರಾಷ್ಟ್ರದ ಪ್ರಥಮ ಪ್ರಜೆಯಾಗಿರುವ ದ್ರೌಪದಿ ಮುರ್ಮು ಅವರು,  ಇನ್ನೂ ಅನೇಕ ವ್ಯಕ್ತಿಗಳು. ಇವು ಬೆರಳೆಣಿಕೆಯಷ್ಟೇ ಹೆಸರುಗಳು ಇಂತಹ ಸಾವಿರಾರು ಉದಾಹರಣೆಗಳನ್ನು ನಾವು ಕಾಣಬಹುದು. ಇವರೆಲ್ಲಾ ಇಂದು ಇಷ್ಟು ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದರೆ ಅವರ ಜೀವನದ ಹಾದಿಯೇನೂ ಹೂವಿನ ಹಾಸಿಗೆಯಾಗಿ ಇರಲಿಲ್ಲ. ಅವರುಗಳು ಅನುಭವಿಸಿದ ಸಂಕಷ್ಟಗಳೇನೂ ಕಡಿಮೆಯಲ್ಲ. ಆದರೆ ಅವರ್ಯಾರೂ ಕಷ್ಟಗಳಿಗೆ ಕುಗ್ಗಲಿಲ್ಲ. ಅವುಗಳನ್ನು ಹಿಮ್ಮೆಟ್ಟಿಸಿ ಬೆಳೆದವರು. ಸಂಕಲ್ಪತೊಟ್ಟು ಗುರಿಸಾಧಿಸಿದವರು.  ಸೂರ್ಯೋದಯದ  ಮೊದಲು ಕತ್ತಲೆ ಗಾಢವಾಗಿ ಇರುತ್ತದೆ; ಹಾಗೆಯೇ ಸುಖದ ಮೊದಲು ದುಃಖವೂ ಇರುತ್ತದೆ. ಕತ್ತಲಾಯಿತೆಂದು ನಾವು ತಲೆಯ ಮೇಲೆ ಕೈಹೊತ್ತು ಕುಳಿತರೆ ಚಂದ್ರನ ಬೆಳದಿಂಗಳಿನ ಸುಖವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಬದಲಾವಣೆ ಎನ್ನುವುದು ಜಗದ ನಿಯಮ. ಬದುಕಲ್ಲಿ ಲಾಭವನ್ನೇ ಕಂಡವನು ನಷ್ಟಕ್ಕೆ ಹೆದರಿ ಜೀವ ಕಳೆದುಕೊಳ್ಳಬಾರದು. ಇಂದು ಅದೆಷ್ಟೋ ವ್ಯಕ್ತಿಗಳು, ಮಹಿಳೆಯರು, ವಿದ್ಯಾರ್ಥಿಗಳು, ಕುಟುಂಬಗಳು ಜೀವನದಲ್ಲಿ ಬಂದ ತಾತ್ಕಾಲಿಕವಾದ ಕಷ್ಟಗಳಿಗೆ ಹೆದರಿ ಜೀವವನ್ನು ಕಳೆದುಕೊಂಡ ಅನೇಕ ಸುದ್ದಿಗಳು ಪ್ರತಿದಿನವೂ ಕೂಡ ಸುದ್ದಿವಾಹಿನಿಗಳಲ್ಲಿ, ವಾರ್ತಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇವೆ. ಒಮ್ಮೆ ಕಳೆದುಹೋದ ಜೀವನವನ್ನು ಮತ್ತೆ ನಾವು ಪಡೆಯಲು ಸಾಧ್ಯವಿಲ್ಲ. ಈ ಜೀವವು ನಾವು ಬೇಡಿ ಬಂದದ್ದಲ್ಲ. ಅದು ಪರಮಾತ್ಮನ ಕರುಣೆಯಿಂದ ಸೃಷ್ಟಿಯಾದದ್ದು. ಹೀಗಿರುವಾಗ ಈ ಜೀವದ ಅಂತ್ಯವೂ ಅವನ ಕೈಯಿಂದಲೇ ಆಗಬೇಕು. ಅಲ್ಲಿಯವರೆಗೂ ಬದುಕನ್ನು ಎದುರಿಸಿ ಮುನ್ನಡೆಯಲೇಬೇಕು. ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಂ ಎನ್ನುವ ವಾಕ್ಯವನ್ನು ನಾವು ಸದಾ ನೆನಪಿನಲ್ಲಿ ಇಡಬೇಕು. ಶೋಭಾ ಬಿಕಾವ್ಯನಾಮ: ಶೋಭಾ ನಾಗಭೂಷಣಶಿಕಕ್ಷಿ , ಕವಯತ್ರಿ ಹಾಗೂ ನಿರೂಪಕಿಪ್ರಧಾನ ಕಾರ್ಯದರ್ಶಿಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ(ನೋಂ)

“ಸುಖಸ್ಯಾ ನಂತರಂ ದುಃಖಂ ದುಃಖಸ್ಯಾ ನಂತರಂ ಸುಖಂ” ಶೋಭಾ ನಾಗಭೂಷಣ Read Post »

ಇತರೆ

“ಶಿಶು ಕಾವ್ಯ ಕವಿ ರಾಜೇಂದ್ರ ಪಾಟೀಲ್” ಗೊರೂರು ಅನಂತರಾಜು

ವ್ಯಕ್ತಿ ಸಂಗಾತಿ ಗೊರೂರು ಅನಂತರಾಜು “ಶಿಶು ಕಾವ್ಯ ಕವಿ ರಾಜೇಂದ್ರ ಪಾಟೀಲ್”   ಕವಿ ರಾಜೇಂದ್ರ ಪಾಟೀಲ್ ಅವರು ಉಮಾತನಯ ಕಾವ್ಯನಾಮದಲ್ಲಿ ಕವಿತೆ ರಚಿಸಿಕೊಂಡು ಬಂದವರು.ಇವರು 10.07.1965ರಂದು ಮಹಾರಾಷ್ಟ್ರ ರಾಜ್ಯದ ಸೋಲಾಪುರದಲ್ಲಿ ಜನಿಸಿದರು.ಮೂಲಸ್ಥಳ ಮಿರಗಿ, ಇಂಡಿ ತಾಲೂಕು, ವಿಜಯಪುರ ಜಿಲ್ಲೆ.ಇವರ ತಾಯಿ ಶ್ರೀಮತಿ ಉಮಾದೇವಿ,ತಂದೆ  ಶ್ರೀ ಶಂಕರರಾವ್. ಇವರಪ್ರಾಥಮಿಕ ಶಿಕ್ಷಣ ನಡೆದಿದ್ದು ಮಾಶಾಳ, ಕಮಲಾಪುರ, ರೇವೂರದಲ್ಲಿ.  ಪ್ರೌಢಶಿಕ್ಷಣ   ಅಫಜಲ್ ಪುರ‌‌ದಲ್ಲಿ.ಕಾಲೇಜು ಮತ್ತು ಪದವಿ( ಬಿಎ) ಶಿಕ್ಷಣ ಕಲಬುರಗಿಯಲ್ಲಿ.ತಾಂತ್ರಿಕ ಶಿಕ್ಷಣ ವರ್ಕ್ ಶಾಪ್ ಟೆಕ್ನಾಲಜಿ ಬಿಇಎಂಎಲ್, ಕೆಜಿಎಫ್‌ ನಲ್ಲಿ. ಪತ್ರಕರ್ತರಾಗಿ  ಗ್ರೀನೋಬಲ್ಸ್, ಚಿಂತಕ ( ಕಲಬುರಗಿ).1987 ರಿಂದ 1990ವರೆಗೆ,ಕನ್ನಡಮ್ಮ, ನಾಡೋಜ, ಹಸಿರುಕ್ರಾಂತಿ ( ಬೆಳಗಾವಿ)1990 ರಿಂದ 1998 ರವರೆಗೆ.ಸಂಯುಕ್ತ ಕರ್ನಾಟಕ  1998 ರಿಂದ 2022 ರವರೆಗೆ ಸೇರಿದಂತೆ ಪತ್ರಕರ್ತರಾಗಿ ಇವರ ಸೇವಾವಧಿ 33 ವರ್ಷ‌.ಸುಧಾ, ತರಂಗ, ವಾರಪತ್ರಿಕೆ, ರಾಗಸಂಗಮ, ಮಂಗಳ, ಮಯೂರ, ಮಲ್ಲಿಗೆ, ಪ್ರಜಾವಾಣಿ, ಪ್ರಜಾಮತ, ಉತ್ಥಾನ, ಗ್ರಿನೋಬಲ್ಸ್, ಚಿಂತಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ, ಬುಕ್ ಬ್ರಹ್ಮಾ ಹೀಗೆ ನಾಡಿನ ನೂರಾರು ಪತ್ರಿಕೆಗಳಲ್ಲಿ ಇವರ ಕವನ ಕತೆ, ಲೇಖನ, ವಿಮರ್ಶೆ,  ಅಂಕಣಗಳು ಪ್ರಕಟವಾಗಿವೆ.  ಹಲವಾರು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಮಕ್ಕಳ ಸಾಹಿತ್ಯ  ಕವನ ಸಂಕಲನಗಳಲ್ಲಿ ಇವರ ಕವಿತೆಗಳು ಪ್ರಕಟಗೊಂಡಿವೆ. ಕಲಬುರಗಿಯಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ, ಡಾ. ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ್ದಾರೆ. ಧಾರವಾಡದಲ್ಲಿ ಬಾಲವಿಕಾಸ ಅಕಾಡೆಮಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಶಿಬಿರದಲ್ಲಿ, ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ದಾವಣಗೆರೆ, ಕುಷ್ಟಗಿ, ಕಲಬುರಗಿ, ವಿಜಯಪುರ, ಬೆಳಗಾವಿ, ಬೆಂಗಳೂರು, ಕೊಪ್ಪಳ, ಬದಾಮಿ ಭಾಗವಹಿಸಿದ್ದಾರೆ.  50 ಕ್ಕೂ ಹೆಚ್ಚಿನ  ಕವನ ಸಂಕಲನಗಳಿಗೆ ಮುನ್ನುಡಿ,ಳ ಬರೆದಿರುವರು. ಇವರ ಜೇನ್ಗೊಡ, ನೆನಪ ರಂಗೋಲಿ ಕವನ ಸಂಕಲನ, ಕಥಾಗುಚ್ಛ ಕಥಾ ಸಂಕಲನ ಪ್ರಕಟಗೊಂಡಿವೆ. ಕರ್ನಾಟಕ ಸರಕಾರದ ಪಠ್ಯಪುಸ್ತಕ ನಿರ್ದೇಶನಾಲಯವು 1 ನೇ ತರಗತಿಗೆ ಅಮ್ಮ ಕವನವನ್ನು, 2ನೇ  ಮತ್ತು 5 ನೇ ತರಗತಿಗೆ ತಂಗಿಯ ಪತ್ರ ಕವನವನ್ನು ಪಠ್ಯದಲ್ಲಿ ಅಳವಡಿಸಿದೆ. 1989ರ ನವೆಂಬರ್ ನಲ್ಲಿ ನೆಹರು ಜನ್ಮ ಶತಮಾನೋತ್ಸವ ಪ್ರಯುಕ್ತ ಇವರ ಕವಿತೆ ಶಾಂತಿದೂತ  ಆಕಾಶವಾಣಿ ಕಲಬುರಗಿ, ಧಾರವಾಡ, ಬೆಂಗಳೂರು, ಮೈಸೂರು, ಮಂಗಳೂರು  ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಿದೆ. ಕರ್ನಾಟಕ ಸಾಹಿತ್ಯ ಕಲಾ ವೇದಿಕೆ ರಾಜ್ಯ ಸಂಚಾಲಕರಾಗಿ ಮೂರು ವರ್ಷ ಸಾಂಸ್ಕೃತಿಕ ಸೇವೆ. ಭಾವ ಸಂಗಮ ಸಾಂಸ್ಕೃತಿಕ ವೇದಿಕೆಯ ರಾಜ್ಯ ಸಂಚಾಲಕರಾಗಿ 2015 ರಿಂದ ಇಲ್ಲಿಯವರೆಗೆ 11 ಸಮ್ಮೇಳನಗಳನ್ನು ಆಯೋಜಿಸಿದ್ದಾರೆ. ಪ್ರಸ್ತುತ ಉಮಾಶಂಕರ ಪ್ರತಿಷ್ಠಾನ ಕಾರ್ಯಾಧ್ಯಕ್ಷರಾಗಿದ್ದಾರೆ. ಇವರಿಗೆರಾಷ್ಟ್ರೀಯ ಬಸವ ವಿಭೂಷಣ, ಬಸವನಬಾಗೇವಾಡಿ, ಅಸ್ಮಿತಾ ಫೌಂಡೇಶನ್ ಹಿರಿಯ ನಾಗರಿಕರ ಪ್ರಶಸ್ತಿ, ಗೊರೂರು ಅನಂತರಾಜು, ಹಾಸನ9449462879ವಿಳಾಸ: ಹುಣಸಿನಕೆರೆ ಬಡಾವಣೆ 29ನೇ ವಾರ್ಡ್, ಮೂರನೇ ಕ್ರಾಸ್ಹಾಸನ – 574201

“ಶಿಶು ಕಾವ್ಯ ಕವಿ ರಾಜೇಂದ್ರ ಪಾಟೀಲ್” ಗೊರೂರು ಅನಂತರಾಜು Read Post »

ಇತರೆ, ರಂಗಭೂಮಿ

“ಪೌರಾಣಿಕ ನಾಟಕ ನಿರ್ದೇಶಕರು ನಟ ಕೇಶವ ಜಿ. ಜಿ. ಗರೀಘಟ್ಟ.”‌ ಗೊರೂರು ಅನಂತರಾಜು

ರಂಗ ಸಂಗಾತಿ ಗೊರೂರು ಅನಂತರಾಜು “ಪೌರಾಣಿಕ ನಾಟಕ ನಿರ್ದೇಶಕರು ನಟ ಕೇಶವ ಜಿ. ಜಿ. ಗರೀಘಟ್ಟ.”‌ ಮೊನ್ನೆ ಭಾನುವಾರ ಅರಕಲಗೂಡಿನಲ್ಲಿ ಶ್ರೀ ವೇಣುಗೋಪಾಲ ಕೃಪಾಪೋಷಿತ ನಾಟಕ ಮಂಡಳಿ ಕಲಾವಿದರು ಹಾರ್ಮೋನಿಯಂ ಮಾಸ್ಟರ್ ಜಿ..ಜಿ.. ಕೇಶವ ಗರಿಘಟ್ಟ ಇವರ ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿಸಿದರು.  ನಾಟಕ ವೀಕ್ಷಿಸಲು ಹೋಗಿದ್ದ ನನಗೆ ಸೂತ್ರಧಾರಿ ಪಾತ್ರಧಾರಿ ಹಾಡಿದ ರಂಗಗೀತೆ ಅದೇ ಪ್ರಥಮ ಬಾರಿ ಕೇಳಿ ಬಹಳ ಇಷ್ಟವಾಯಿತು. ಪ್ರೇಕ್ಷಕರು ಕೂಡ ಸೂತ್ರದಾರಿ ಹಾಡಿUÉ ಚಪ್ಪಾಳೆ ಬಾರಿಸಿ ಮೆಚ್ಚುಗೆ  ವ್ಯಕ್ತಪಡಿಸಿದರು. ಈ ಗೀತೆಯಲ್ಲಿ ಏನೆಲ್ಲಾ ಕನ್ನಡ ಕಲಾ ಸಾರಸ್ವತ ಲೋಕವನ್ನು ತೆರೆದಿಟ್ಟಿದ್ದಾರೆ  ಕವಿ ಎಂದರೆ..  ಕನ್ನಡ ನಾಡಿನ ಕಲೆ ಮಕ್ಕಳೇ ಅಳಿಯದೆ ಉಳಿಯಲಿ ನಮ್ಮೀ ಕಲೆಎ¯Éèಲ್ಲೂ ಬೆಳಗಲಿ ನಮ್ಮೀಕಲೆ ಪಂಪ ರನ್ನ ಜನ್ಮ ಪೊನ್ನರಾಮಾನುಜ ತೀರ್ಥಂಕರ ಬೇಲೂರುಹಳೇಬೀಡು ಕಲೆಗಳ ತವರೂರುಸುಬ್ಬಯ್ಯ  ನಾಯ್ಡುವಿನ ನಟನಾ ಕಲೆ ನಾಟಕ ರತ್ನ ಗುಬ್ಬಿ ವೀರಣ್ಣ ನಟಸಾರ್ವಭೌಮ ರಾಜಕುಮಾರ ಅಭಿನವ  ಭಾರ್ಗವ ಶಿರೋಮಣಿ ಮಲ್ಲಪ್ಪ  ನಟನಾ ಕಲೆ..   ಶ್ರೀ ಕೇಶವರವರು ಸಾಕ್ಷರತಾ ಆಂದೋಲನದಲ್ಲಿ ಕೆಲಸ ಮಾಡಿದ ವಿಚಾರ ಕೂಡ ಶಿಕ್ಷಕರು ಪಿ. ನಂದಕುಮಾರರಿಂದ ತಿಳಿಯಿತು. 1997ರ ಕಾಲಘಟ್ಟದಲ್ಲಿ ನಾನು (ಗೊರೂರು ಅನಂತರಾಜು) ಸಾಕ್ಷರತಾ ಆಂದೋಲನದಲ್ಲಿ ತೊಡಗಿಸಿಕೊಂಡು ಅಕ್ಷರ ಅಭಿಷೇಕ ನವ ಸಾಕ್ಷರರ ಪಠ್ಯ ಪುಸ್ತಕ ರಚನಾ ಸಮಿತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೆ.. ಈ ಒಂದು ಆಸಕ್ತಿಯಲ್ಲಿ ಕೇಶವರವರಿಗೆ ತಮ್ಮ ಒಂದು ಕಲಾ ಪರಿಚಯವನ್ನು ಬರೆಯಲು ಬಯಸಿ ಸಂಪರ್ಕಿಸಿದೆ.. ಅವರು ಹೇಳಿದರು. ಅನಂತರಾಜ್ ಸಾರ್,, ನಾನು ನಿಮ್ಮನ್ನು ಬಲ್ಲೆನು. ಆದರೆ ನನ್ನ ಪರಿಚಯ ನಿಮಗಿಲ್ಲ ಅಷ್ಟೇ..ನಾನು ಕೇಶವ ಜಿ. ಜಿ.  ಹುಟ್ಟಿದ ಊರು ಗರೀಘಟ್ಟ.ಇದು ಅರಕಲಗೋಡು ತಾಲೂಕಿಗೆ  ಸೇರಿದೆ.  ಹಾಸನ ಜಿಲ್ಲೆಯಲ್ಲಿ ಬರುತ್ತದೆ. ನನ್ನ    ಜನ್ಮ ದಿನಾಂಕ 04.06.1979. ನಾನು    ಪ್ರಾಥಮಿಕ ಶಿಕ್ಷಣವನ್ನುಗರೀಘಟ್ಟದಲ್ಲಿ  ಹಾಗೂ ಹೊನ್ನವಳ್ಳಿಯ ಹೇಮಾವತಿ ಪ್ರೌಢಶಾಲೆಯಲ್ಲಿ ಹೈಸ್ಕೂಲು ವ್ಯಾಸಂಗ ªÀÄÄV¹ ಪಿ.ಯು.ಸಿ ಮತ್ತು  ಬಿ.ಎ. ಪದವಿ ಸರ್ಕಾರಿ ಕಲಾ ಕಾಲೇಜು ಹಾಸನ ಇಲ್ಲಿ ಮಾಡಿದೆ. ವಿದ್ಯಾಭ್ಯಾಸದ ಜೊತೆಯಲ್ಲಿಯೇ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುವಿಕೆ, ರಾಜ್ಯ ಸರ್ಕಾರದ ಸಾಕ್ಷರತಾ ಆಂದೋಲನದಲ್ಲಿ ಸ್ವಯಂಸೇವಕನಾಗಿ ಸೇವೆ.   2005-06ನೇ ಸಾಲಿನಲ್ಲಿ ಪ್ರಾರಂಭವಾದ ಸಾಕ್ಷರತಾ ಮುಂದುವರಿಕೆ ಶಿಕ್ಷಣ ಕಾರ್ಯಕ್ರಮದಲ್ಲಿ ಕ್ರಮವಾಗಿ ಪ್ರೇರಕ ಹಾಗೂ ನೋಡಲ್ ಪ್ರೇರಕ, ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ  ಸಾಕ್ಷರತಾ ಕಲಾವಿದನಾಗಿ ಸೇವೆ, ಅರಿವು ಕಾರ್ಯಕ್ರಮದಲ್ಲಿ ಬೀದಿ ನಾಟಕ ಹಾಗೂ ಕಲಾಜಾಥಾ ಕಾರ್ಯಕ್ರಮದ ನಿರ್ದೇಶಕನಾಗಿ ಸೇವೆ ಸಲ್ಲಿಕೆ, ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗೆ ತರಬೇತಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಕೆ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ವಿವಿದ ಕಾರ್ಯಕ್ರಮದಲ್ಲಿ ನಿರೂಪಕನಾಗಿ 2014ರಲ್ಲಿ ರಂಗಭೂಮಿ ಕ್ಷೇತ್ರಕ್ಕೆ ಪ್ರವೇಶ ಮಾಡಿದೆ.  ಅರಕಲಗೂಡು ಪಟ್ಟಣದಲ್ಲಿ ತಾಲ್ಲೂಕಿನ ವಿವಿಧ ವಿಕಲಚೇತನರನ್ನೊಳಗೊಂಡ ವಿಕಲಚೇತನರ ಸಂಘವನ್ನು ರಚಿಸಿ ವಿಕಲಚೇತನರಿಂದಲೇ ದಾನಶೂರಕರ್ಣ  ನಾಟಕ ಪ್ರದರ್ಶನದಲ್ಲಿ ಕರ್ಣನ ಪಾತ್ರದ ಮೂಲಕ ರಂಗಭೂಮಿಗೆ ಪ್ರವೇಶ ಮಾಡಿದೆ.  ಶ್ರೀಕೃಷ್ಣ, ಅರ್ಜುನ, ಧರ್ಮರಾಯ, ಸತ್ಯವ್ರತ, ಬೀಷ್ಮ, ದ್ರೋಣ, ದೃತಾರಾಷ್ಟ್ರ, ನಾರದ, ವಿಧುರ, ಭರತ, ವಿಭಿಷಣ, ವಸಿಷ್ಠ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿದೆ. ಗುರುಗಳ ಕೈ ನೋಡಿಕೊಂಡು ಹಾರ್ಮೋನಿಯಂ ಕಲಿಕೆ ಪ್ರಾರಂಭಿಸಿದೆ. ಯಾವ ಗುರುಗಳ ಬಳಿಯೂ ಅಭ್ಯಾಸ ಮಾಡದೆ ತರಬೇತಿಯೂ ಇಲ್ಲದೇ ಸ್ವತಃ ಹಾರ್ಮೋನಿಯಂ ನುಡಿಸುವುದನ್ನು ಅಭ್ಯಾಸ ಮಾಡಿಕೊಂಡು ಮೊದಲಬಾರಿಗೆ 2023ರಲ್ಲಿ ರಾಜ ವಿಕ್ರಮ ನಾಟಕದ ನಿರ್ದೇಶನ ಮಾಡಿ  ಆ ದಿನದಿಂದ ಈವರೆಗೆ ರಾಜಾವಿಕ್ರಮ, ರಾಜ ಸತ್ಯವ್ರತ, ದಾನಶೂರಕರ್ಣ, ಕುರುಕ್ಷೇತ್ರ ಹೀಗೆ 12 ನಾಟಕಗಳ ನಿರ್ದೇಶನ ಮಾಡಿರುವೆ. ಹರಿಕಥೆ ಕಲಾವಿದನಾಗಿಯೂ ಸೇವೆ ಸಲ್ಲಿಸುತ್ತಿರುವೆ .  ನನ್ನ ಈ ಸೇವೆ ಗಮನಿಸಿ ಕೆಲವು ಸಂಘ ಸಂಸ್ಥೆಗಳು ರಂಗರತ್ನ, ಹೊಯ್ಸಳರತ್ನ, ಕಲಾಬೀಷ್ಮ, ರಂಗ ಕುಸುಮ, ರಂಗರತ್ನಾಕರ  ಹೀಗೆ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಇದುವರೆಗೂ ಸರಿಸುಮಾರು 400ಕ್ಕೂ ಹೆಚ್ಚು ಸ್ವ ಸಹಾಯ ಸಂಘಗಳನ್ನು ರಚನೆ ಮಾಡಿ ಮಾಹಿತಿ ನೀಡಿ  ಮಾರ್ಗದರ್ಶನ ಮಾಡಿರುತ್ತೇನೆ, ಗ್ರಾಮೀಣ ಭಾಗದ ವಿಕಲಚೇತನರಿಗೆ ಗ್ರಾಮ ಮಟ್ಟದಲ್ಲಿ ಸರ್ಕಾರಿ ಸವಲತ್ತುಗಳ ಮಾಹಿತಿ ನೀಡುವ ಸಂಬಂಧ ಗ್ರಾಮ ಪಂಚಾಯಿತಿ ಮಟ್ಟದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿರುವೆ. ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕಲಾ ಮತ್ತು ಸಾಂಸ್ಕೃತಿಕ ಸಂಘ ಸ್ಥಾಪಿಸಿ ಅ ಮೂಲಕ  ರಂಗ ಕಲೆಯನ್ನು ಉಳಿಸುವ ಪೋಷಿಸುವ ಸಲುವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಸಂಘಟಿಸಿರುವೆ.   ಇವರ ಸಂಪರ್ಕ ವಿಳಾಸ:ಕೇಶವ ಜಿ. ಜಿ. ರಂಗನಿರ್ದೇಶಕರು,  ಗರೀಘಟ್ಟ, ಕಸಬಾ ಹೋಬಳಿ, ಅರಕಲಗೂಡು ತಾ. ಹಾಸನ ಜಿಲ್ಲೆ. ಮೊ  ಸಂಖ್ಯೆ 9880183485 ಗೊರೂರು ಅನಂತರಾಜು

“ಪೌರಾಣಿಕ ನಾಟಕ ನಿರ್ದೇಶಕರು ನಟ ಕೇಶವ ಜಿ. ಜಿ. ಗರೀಘಟ್ಟ.”‌ ಗೊರೂರು ಅನಂತರಾಜು Read Post »

ಇತರೆ, ಪ್ರಬಂಧ

ಚಹಾಯಣ…ದ ರಾಮಾಯಣ(ಕಿರು ಪ್ರಬಂಧ) ಡಾ.ವೈ ಎಂ.ಯಾಕೊಳ್ಳಿ

ಪ್ರಬಂಧ ಸಂಗಾತಿ ಡಾ.ವೈ ಎಂ.ಯಾಕೊಳ್ಳಿ ಚಹಾಯಣ…ದ ರಾಮಾಯಣ ಇಂದು ೨೦/೦೫/೨೦೨೬ಚಹಾದ ದಿನವಂತೆ..ಚಹಾ ಇಲ್ಲದೆ ಸೂರ್ಯೋದಯವೇ ಆಗದ ನಮಗೆ ಅಂದರೆ ಉತ್ತರ ಕರ್ನಾಟಕದ ಮಂದಿಗೆ ಚಹಾಕ್ಕೊಂದು ದಿನವಿದೆಯಂದರೆ ನಗೆ ಬರುತ್ತದೆ.ಹಾಗೆ ನೋಡಿದರೆ ನಮ್ಮ ಜನಕ್ಕೆ ಯಾಕೊ ಕಾಫಿ ಕಂಡರೆ ಅಷ್ಟಕ್ಕಷ್ಟೇ. ನಮ್ಮಪ್ರಕಾರ ಎಲ್ಲದಕ್ಕೂ ದಿವ್ಯೌಷಧಿ ಚಹಾನೆ.ಅಂತೆಯೆ ಅದನ್ನು ದೇವಲೋಕದ ಅಮೃತ ಎಂದು‌ ಕರೆಯುವದೂ ಇದೆ.ಮನೆಗಳಿಗೆ ಬಂದಾಗ ಅತಿಥಿಗಳಿಗೆ ಕೊಡಮಾಡುವ ಕನಿಷ್ಟ ಪಕ್ಷದ ಆತಿಣಥ್ಯ ಎಂದರೆ ಚಹಾನೇ ಆಗಿದೆ.”ಬರ್ರಿ ಬರ್ರಿ ಅರ್ಧ ಕಪ್ ಚಹಾ ಕುಡದ ಹೋಗರಿ” ಎಂದು ನಾವು ಅತಿಥಿಗಳಿಗೆ ಒತ್ತಾಯ ಮಾಡುವದೂ ಇದೆ.ಬಂದ ಅತಿಥಿಗಳಿಗೆ ನಾವು ಏನು‌ಕೊಡದಿದ್ದರೂ ಪರ್ವಾ ಇಲ್ಲ ಒಂದು ಕಪ್ ಚಹಾನಾದರೂ ಕೊಡಲೇ ಬೇಕು.ಒಂದು ವೇಳೆ ಚಹಾನೂ ಆಫರ್ ಮಾಡದವರನ್ನು ಕಂಡು ” ಏನ್ ಜಿಪುಣರೆಪಾ,ಅವರ ಮುಖಕ್ಕ ಅರ್ಧ ಕಪ್  ಚಹಾ ಹುಟ್ಟಲಿಲ್ಲ” ಎಂದು ಬೈಯುವವರೂ ಇದ್ದಾರೆ. ಚಹಾ ಅಂಗಡಿಗಳೆಂದು ನಾವು ಹೋಟೆಲ್ ನ್ನು ಹೆಸರಿಸುತ್ತೇವೆ.ಅಲ್ಲಿ ಏನೆಲ್ಲ ಖಾದ್ಯಗಳನ್ನು‌ ಮಾಡಬಹುದಾದರೂ ಅವುಗಳ ಸೇವನೆಯ ನಂತರ ಅರ್ಧ ಕಪ್ ಚಹಾ ಸೇವನೆ ಇರಲೇಬೇಕು.ಇರದಿದ್ದರೆ ಏನೇ ತಿಂದರೂ ಅದು ಅಪೂರ್ಣ.ಅದು ಒಂದುರೀತಿಯಲ್ಲಿ ಕಾರ್ಯಕ್ರಮಗಳಲ್ಲಿ ವಂದನಾರ್ಪಣೆ ಇದ್ದಂತೆ.ಎಂಥ ದೆ ಭಾಷಣ ನಡೆದರೂ ಕಡೆಗೆ ಒಂದು ಸಾಲಿನದಾದರೂ ವಂದನಾರ್ಪಣೆ ಯಾಗದಿದ್ದರೆ ಅದೆಂತಹ ಕಾರ್ಯಕ್ರಮ ಎನ್ನುವ ಹಾಗೆ ಏನೆ ಲ್ಲ ತಿಂಡಿ ತಿಂದರೂ ಚಹಾ ಇರದಿದ್ದರೆ ಅರ್ಧ ಆದಂತೆಯೆ ಎಂದು ತಿಳಿವಳಿಕೆ ಸರ್ವೇ ಸಾಮಾನ್ಯ.ನಮ್ಮಲ್ಲಿ ಊರುಗಳ ಸಿರಿತನವೂ ಈ ಹೊಟೆಲ್ ಗಳ ಆಧಾರದ ಮೇಲೆಯೆ ನಿರ್ಣಯವಾಗುವದುಂಟು.ಒಂದು ಚಹಾದಂಗಡಿಯೂ ಇರದೆ‌ ಇದ್ದರೆ” ಅದೆಂಥ ಹಿಂದುಳಿದ ಊರು ” ಎಂದು ಅಸಹ್ಯ ಮಾಡುವವರೂ ಇದ್ದಾರೆ. ಎಂಥ ಹಿರಿತನಗಳೂ  ನ್ಯಾಯನಿರ್ಣಯಗಳೂ ಚಹಾ ಸೇವನೆ ಯಿಂದಲೇ  ಆರಂಭ ಮತ್ತು‌ ಮುಕ್ತಾಯ ಎಂಬುದು ಉತ್ತರಕರ್ನಾಟದ ಒಂದು ನಿಯಮವೇ ಆಗಿದೆ. ಎಲ್ಲ ಸಮಾರಂಭಗಳ ಆರಂಭಕ್ಕೆ ಚಹಾ ಕೊಟ್ಟೇ ಕಾರ್ಯಕ್ರಮ ಆರಂಭಿಸೋದು ನಮ್ಮ‌ ಪದ್ಧತಿ. ಪೂರ್ತಿ ಚಹಾ ಕುಡಿಯುವವರಿಗಿಂತ ಅರ್ಧ ಚಹಾ ಕುಡಿಯುವವರೆ ಜಾಸ್ತಿ.ಗೆಳೆಯರು ಸೇರಿಕೊಂಡು ಅರ್ಧ ತಾಸಿಗೊಂದು ಬೈಟೂ ಚಹಾ ಕುಡಿಯುತ್ತ ಇಡಿ ದಿನವನ್ನೆಲ್ಲ ಊರ ಚಹಾದಂಗಡಿಗಳ ಕಟ್ಟೆಯ ಲ್ಲಿಯೇ ಕಳೆಯುವ ಯಜಮಾನರನ್ನು ನಾವು ಕಾಣುತ್ತೇವೆ.ಇಂಥ ಜಿಗರಿ ದೋಸ್ತರನ್ನು ಬೈಟೂ ದೋಸ್ತರು ಎಂತಲೂ‌ ಕರೆಯಬಹುದು.  ನಮ್ಮ ಹಳ್ಳಿಗಳಲ್ಲಿ ಕೆಲವರಂತೂ ಎಷ್ಟು ಚಹಾದಂಗಡಿಯ ಚಹಾದ ಮೇಲೆ ಜೀವ ಇಟ್ಟಿರುತ್ತಾರೆಂದರೆ ಎದ್ದೊಡನೆ ಅವರ ಮುಂಜಾನೆಗಳಾಗುವದೆ ಹೊಟೆಕಿನ ಮುಂದೆ.ಅಲ್ಲಿ ಬಂದು‌ಮುಖಮಾರ್ಜನ ಕಾರ್ಯಕ್ರಮ ಮುಗಿಸಿ ಒಂದಾದ‌ ಮೇಲೊಂದರಂತೆ  ಚಹಾ ಕುಡಿದು ಅಂಗಡಿಯವನ ಖಾತೆಗೇರಿಸಿ ಮುಂದಿನ ಕಾರ್ಯಕ್ಕೆ ತೆರಳೂವ ಭೂಪರಿಗೇನೂ ಕಡಿಮೆಯಿಲ್ಲ. ಹಿರಿಯ ಪ್ರಭಂಧಕಾರರಾದ ವಿರೇಂದ್ರ ಶಿಂಪಿ ಯವರು ಬರೆದ ನಮ್ಮೂ ರ ಚಹಾ ಹೊಟೆಲು ಎಂಬ ಪ್ರಬಂಧದಲ್ಲಿ ಈ ಚಹಾ ಹೊಟೆಲುಗಳನ್ನು “ಹಳ್ಳಿಯ ಪಾರ್ಲಿಮೆಂಟ್ ” “ವಿಧಾನ ಸೌಧ”ಗಳೆಂದು ಕರೆಯುತ್ತಾರೆ.ಏಕೆಂದರೆ ಊರಿನ ಎಲ್ಲ ಸುದ್ದಿಗಳೂ ಅಲ್ಲಿ ಬಂದು ಹೋಗುವದರಿಂದ ಅವು ವಾರ್ತಾ ಇಲಾಖೆಗಳಂತೆಯೂ ಕೆಲಸ ಮಾಡುವದುಂಟು. ನಿಮಗೆ ಊರಿನ ಯಾವ ಮೂಲೆಯ ಎಂಥದೆ ತಾಜಾ ಸುದ್ದಿ ಬೇಕಾದರೂ ನೀವು ಚಹಾದಂಗಡಿಯ ಒಂದು‌ ಮೂಲೆ ಹಿಡಿದು ಮೌನ ಕುಳಿತರೆ ಸಾಕು ನಿಮಗೆ ಎಲ್ಲವೂ ತಿಳಿಯುತ್ತಾ ಹೋಗುತ್ತದೆ. ಈಚೆಗಂತೂ ಸಕ್ಕರೆ ಖಾಯಿಲೆ ಭಾರತದ ಬಹು ದೊಡ್ಡ ಖಾಯಿಲೆಯಾದ ಮೇಲೆ ಸಕ್ಜರೆ ಹಾಕಿದ ಚಹಾ  ಕುಡಿಯುವರ ಸಂಖ್ಯೆ ಕಡಿಮೆಯಾಗಿ ಊರಿಗೂರಿಗೆ ಗಲ್ಲಿ ಗಲ್ಲಿಗಳಲ್ಲಿ ಬೆಲ್ಲದ ಚಹಾ ಎಂಬ ಹೆಸರಿನ ಗುಲ್ಪಿ ಚಹಾದಂಗಡಿಗಳೂ,ಕೇಸರ ಚಹಾದಂಗಡಿಗಳೂ ತಲೆಯೆತ್ತಿರುವದನ್ನು ಕಾಣುತ್ತವೆ. ಇನ್ನು ಸಕ್ಕರೆ ಖಾಯಿಲೆ ಗೆ ತುತ್ತಾದವರು ಸುಗರ್ ಲೆಸ್ ಚಹಾ ಸೇವನೆ ಮಾಡಿಯಾದರೂ ಚಹಾದ ಚಟ ತೀರಿಸಿಕೊಳ್ಳುತ್ತಾರೆ. ಈಚಿಚೆಗೆ ಅವರದೆ ಸಂಖ್ಯೆ ಜಾಸ್ತಿಯಾದುದರಿಂದ ಸುಗರ್ ಲೆಸ್ಸಾ ಎಂದು ಅಂಗಡಿಯವರೆ ಕೇಳಿ ಖಂಡಿತ ಮಾಡಿಕೊಳ್ಳುವದುಂಟು. ಸರಕಾರಿ ಕಛೇರಿಗಳಲ್ಲಿ ಚಹಾದ ವಿರಾಮ ಎಂದು ಒಂದು ಬಗೆಯ ವಿರಾಮ ಕಾಲವೇ ನಿರ್ಣಯವಾಗಿರುತ್ತದೆ. ಬೆಂಗಳೂರಿನಂತಹ ದೊಡ್ಡ ನಗರಗಳಿರಲಿ, ಚಿಕ್ಕ ನಗರಗಳಿರಲಿ ಸರಕಾರಿ ಇಲಾಖೆಯ ಅಧಿಕಾರಿಗಳು ಖಾಯಂ ಮ್ಮಾಗಿ ಅಂತರ್ಧಾನ ಆಗಿರುವದು..ಕೇಳಿದರೆ ಚಹಾಕ್ಕೆ ಹೋಗಿದ್ದಾರೆ ಎಂದು ಹೇಳುವದು ಸಾನಾನ್ಯವಾಗಿದೆ.ಕಛೇರಿಯ ನಿರ್ಣಯವಾಗದ ಕೆಲವು ಕೇಸಗಳ ಪರೊಹಾರೋಪಾಯವನ್ನು ಚಹಾದಂಗಡಿಯ ಟೇಬಲ್ ಬಳಿಯೆ ಕೇಸ್ ವರ್ಕರ್ ಗಳು ಮುಗಿಸಿಕೊಳ್ಳು ವದೂ ಅನುಭವಸ್ತರ ಎಷ್ಟು ಬರೆದರೂ ಈ ಚಹಾಯಣ ಮುಗಿಯಲಾರದು.ಎಲ್ಲ ಚಹಾಪ್ರಿಯರ ಅನುಭವಗಳು ಒಬ್ಬರಿಗಿಂತ ಒಬ್ಬರವು ಭಿನ್ನ‌ಮತ್ತು ಶ್ರೀ ಮಂತ ಆಗಿರುವದು ಕಾಣಬರುತ್ತದೆ. ಚಹಾಯಣವಂತೂ ರಾಮಾಯಣ ಕ್ಕಿಂತ ದೀರ್ಘವಾಗುತ್ತದೆ. ಚಹಾ ಕುಡಿಯುವದನ್ನು ಒಂದು ಬಗೆಯ habit ಎನ್ನುವ ಇಂಗ್ಲಿಷರ ಅದು ತೀರಾ ಕನಿಷ್ಟತಮ ಚಟ ಎನ್ನುತ್ತಾರೆ. ಅಂದರೆ ಯಾವ ಚಟವಿ ರದಿದ್ದರೂ ಚಹಾ ಚಟವಾದರೂ ಇದ್ದೇ ಇರುತ್ತದೆ ಎನ್ನುದದಕ್ಕೆ ಚಮತ್ಕಾರಿಕವಾಗಿ ಹೇಳುವದಿದೆ .habit ಪದದಲ್ಲಿ h ಹೋದರೆ a bit (ಸ್ವಲ್ಪ) ಉಳಿಯುವದಂತೆ .a ಹೋದರೆ bit (ತೀರ ಸ್ವಲ್ಪ) ಉಳಿಯುವದಂತೆ.b ಹೋದರೆ  it (ಇದು) ಉಳಿಯುತ್ತದೆ.I ಹೋದ‌ಮೇಲೆ t ( ಚಹಾ) ಉಳಿದೆ ಉಳಿಯುತ್ತದೆ ಎನ್ನುತ್ತಾರೆ. ಕಡೆಗೆ t ಕುಡಿಯುವ ಚಟವಂತೂ ಕನಿಷ್ಟ ಇದ್ದೇ ಇರುತ್ತದೆ ಎಂಬ ಭಾವನೆ ಅಲ್ಲಿ ಹೊರಹೊಮ್ಮುತ್ತದೆ. ಚಹಾ ಬೇರೆ ದೇಶದಿಂದ ಬಂದ ಪೇಯ ಎಂದು ವಿಜ್ಞಾನಿಗಳು ಹೇಳುತ್ತಾರೆ.ಆದರೆ ಅದು ಭಾರತೀಯರ ಅತ್ಯಂತ ಪ್ರಿಯ ಪೇಯವಾಗಿರುವದಂತೂ ಸತ್ಯ.ತಲೆ ನೋಯುವವರಿಗೆ, ಜ್ವರ ಬಂದ ರೋಗಿಗಳಿಗೆ ಇದು ದಿವ್ಯೌಷಧಿ. ದಿನಕ್ಕೆ ಎಷ್ಟು ಸಲ ಚಹಾ ಕುಡಿಯಬೇಕು ವೈದ್ಯರು ಏನೆಲ್ಲ ನಿಯಮ ಹೇಳಿದರೂ ನಾಲ್ಕಾರು ಸಲ ಅರ್ಧ ಕಪ್ ಚಹಾ ಸೇವನೆ ನಮ್ಮ ರೂಢಿಯಾಗಿದೆ ಎನ್ನುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಅಂತೂ ಚಹಾ ಇಲ್ಲದೆ ಬದುಕುವ ಭಾರತಿಯರ ಸಂಖ್ಯೆ ತೀರಾ ಕಡಿಮೆ..ಚಹಾ ಕುಡಿಯುವ ಚಟ ಇಲ್ಲದವರು ಒಂದು ರೀತಿಯಲ್ಲಿ ನಮಗೆ ದೇವತೆಗಳ ಹಾಗೆ ಕಾಣಿಸುವದು ಸುಳ್ಳಲ್ಲ.ಎಲ್ಲರಿಗೂ ಚಹಾ ದಿನದ ಶುಭಾಶಯಗಳು ಇಂದು ೨೦/೦೫/೨೦೨೬ಚಹಾದ ದಿನವಂತೆ..ಚಹಾ ಇಲ್ಲದೆ ಸೂರ್ಯೋದಯವೇ ಆಗದ ನಮಗೆ ಅಂದರೆ ಉತ್ತರ ಕರ್ನಾಟಕದ ಮಂದಿಗೆ ಚಹಾಕ್ಕೊಂದು ದಿನವಿದೆಯಂದರೆ ನಗೆ ಬರುತ್ತದೆ.ಹಾಗೆ ನೋಡಿದರೆ ನಮ್ಮ ಜನಕ್ಕೆ ಯಾಕೊ ಕಾಫಿ ಕಂಡರೆ ಅಷ್ಟಕ್ಕಷ್ಟೇ. ನಮ್ಮಪ್ರಕಾರ ಎಲ್ಲದಕ್ಕೂ ದಿವ್ಯೌಷಧಿ ಚಹಾನೆ.ಅಂತೆಯೆ ಅದನ್ನು ದೇವಲೋಕದ ಅಮೃತ ಎಂದು‌ ಕರೆಯುವದೂ ಇದೆ.ಮನೆಗಳಿಗೆ ಬಂದಾಗ ಅತಿಥಿಗಳಿಗೆ ಕೊಡಮಾಡುವ ಕನಿಷ್ಟ ಪಕ್ಷದ ಆತಿಣಥ್ಯ ಎಂದರೆ ಚಹಾನೇ ಆಗಿದೆ.”ಬರ್ರಿ ಬರ್ರಿ ಅರ್ಧ ಕಪ್ ಚಹಾ ಕುಡದ ಹೋಗರಿ” ಎಂದು ನಾವು ಅತಿಥಿಗಳಿಗೆ ಒತ್ತಾಯ ಮಾಡುವದೂ ಇದೆ.ಬಂದ ಅತಿಥಿಗಳಿಗೆ ನಾವು ಏನು‌ಕೊಡದಿದ್ದರೂ ಪರ್ವಾ ಇಲ್ಲ ಒಂದು ಕಪ್ ಚಹಾನಾದರೂ ಕೊಡಲೇ ಬೇಕು.ಒಂದು ವೇಳೆ ಚಹಾನೂ ಆಫರ್ ಮಾಡದವರನ್ನು ಕಂಡು ” ಏನ್ ಜಿಪುಣರೆಪಾ,ಅವರ ಮುಖಕ್ಕ ಅರ್ಧ ಕಪ್  ಚಹಾ ಹುಟ್ಟಲಿಲ್ಲ” ಎಂದು ಬೈಯುವವರೂ ಇದ್ದಾರೆ. ಚಹಾ ಅಂಗಡಿಗಳೆಂದು ನಾವು ಹೋಟೆಲ್ ನ್ನು ಹೆಸರಿಸುತ್ತೇವೆ.ಅಲ್ಲಿ ಏನೆಲ್ಲ ಖಾದ್ಯಗಳನ್ನು‌ ಮಾಡಬಹುದಾದರೂ ಅವುಗಳ ಸೇವನೆಯ ನಂತರ ಅರ್ಧ ಕಪ್ ಚಹಾ ಸೇವನೆ ಇರಲೇಬೇಕು.ಇರದಿದ್ದರೆ ಏನೇ ತಿಂದರೂ ಅದು ಅಪೂರ್ಣ.ಅದು ಒಂದುರೀತಿಯಲ್ಲಿ ಕಾರ್ಯಕ್ರಮಗಳಲ್ಲಿ ವಂದನಾರ್ಪಣೆ ಇದ್ದಂತೆ.ಎಂಥ ದೆ ಭಾಷಣ ನಡೆದರೂ ಕಡೆಗೆ ಒಂದು ಸಾಲಿನದಾದರೂ ವಂದನಾರ್ಪಣೆ ಯಾಗದಿದ್ದರೆ ಅದೆಂತಹ ಕಾರ್ಯಕ್ರಮ ಎನ್ನುವ ಹಾಗೆ ಏನೆ ಲ್ಲ ತಿಂಡಿ ತಿಂದರೂ ಚಹಾ ಇರದಿದ್ದರೆ ಅರ್ಧ ಆದಂತೆಯೆ ಎಂದು ತಿಳಿವಳಿಕೆ ಸರ್ವೇ ಸಾಮಾನ್ಯ.ನಮ್ಮಲ್ಲಿ ಊರುಗಳ ಸಿರಿತನವೂ ಈ ಹೊಟೆಲ್ ಗಳ ಆಧಾರದ ಮೇಲೆಯೆ ನಿರ್ಣಯವಾಗುವದುಂಟು.ಒಂದು ಚಹಾದಂಗಡಿಯೂ ಇರದೆ‌ ಇದ್ದರೆ” ಅದೆಂಥ ಹಿಂದುಳಿದ ಊರು ” ಎಂದು ಅಸಹ್ಯ ಮಾಡುವವರೂ ಇದ್ದಾರೆ. ಎಂಥ ಹಿರಿತನಗಳೂ  ನ್ಯಾಯನಿರ್ಣಯಗಳೂ ಚಹಾ ಸೇವನೆ ಯಿಂದಲೇ  ಆರಂಭ ಮತ್ತು‌ ಮುಕ್ತಾಯ ಎಂಬುದು ಉತ್ತರಕರ್ನಾಟದ ಒಂದು ನಿಯಮವೇ ಆಗಿದೆ. ಎಲ್ಲ ಸಮಾರಂಭಗಳ ಆರಂಭಕ್ಕೆ ಚಹಾ ಕೊಟ್ಟೇ ಕಾರ್ಯಕ್ರಮ ಆರಂಭಿಸೋದು ನಮ್ಮ‌ ಪದ್ಧತಿ. ಪೂರ್ತಿ ಚಹಾ ಕುಡಿಯುವವರಿಗಿಂತ ಅರ್ಧ ಚಹಾ ಕುಡಿಯುವವರೆ ಜಾಸ್ತಿ.ಗೆಳೆಯರು ಸೇರಿಕೊಂಡು ಅರ್ಧ ತಾಸಿಗೊಂದು ಬೈಟೂ ಚಹಾ ಕುಡಿಯುತ್ತ ಇಡಿ ದಿನವನ್ನೆಲ್ಲ ಊರ ಚಹಾದಂಗಡಿಗಳ ಕಟ್ಟೆಯ ಲ್ಲಿಯೇ ಕಳೆಯುವ ಯಜಮಾನರನ್ನು ನಾವು ಕಾಣುತ್ತೇವೆ.ಇಂಥ ಜಿಗರಿ ದೋಸ್ತರನ್ನು ಬೈಟೂ ದೋಸ್ತರು ಎಂತಲೂ‌ ಕರೆಯಬಹುದು.  ನಮ್ಮ ಹಳ್ಳಿಗಳಲ್ಲಿ ಕೆಲವರಂತೂ ಎಷ್ಟು ಚಹಾದಂಗಡಿಯ ಚಹಾದ ಮೇಲೆ ಜೀವ ಇಟ್ಟಿರುತ್ತಾರೆಂದರೆ ಎದ್ದೊಡನೆ ಅವರ ಮುಂಜಾನೆಗಳಾಗುವದೆ ಹೊಟೆಕಿನ ಮುಂದೆ.ಅಲ್ಲಿ ಬಂದು‌ಮುಖಮಾರ್ಜನ ಕಾರ್ಯಕ್ರಮ ಮುಗಿಸಿ ಒಂದಾದ‌ ಮೇಲೊಂದರಂತೆ  ಚಹಾ ಕುಡಿದು ಅಂಗಡಿಯವನ ಖಾತೆಗೇರಿಸಿ ಮುಂದಿನ ಕಾರ್ಯಕ್ಕೆ ತೆರಳೂವ ಭೂಪರಿಗೇನೂ ಕಡಿಮೆಯಿಲ್ಲ. ಹಿರಿಯ ಪ್ರಭಂಧಕಾರರಾದ ವಿರೇಂದ್ರ ಶಿಂಪಿ ಯವರು ಬರೆದ ನಮ್ಮೂ ರ ಚಹಾ ಹೊಟೆಲು ಎಂಬ ಪ್ರಬಂಧದಲ್ಲಿ ಈ ಚಹಾ ಹೊಟೆಲುಗಳನ್ನು “ಹಳ್ಳಿಯ ಪಾರ್ಲಿಮೆಂಟ್ ” “ವಿಧಾನ ಸೌಧ”ಗಳೆಂದು ಕರೆಯುತ್ತಾರೆ.ಏಕೆಂದರೆ ಊರಿನ ಎಲ್ಲ ಸುದ್ದಿಗಳೂ ಅಲ್ಲಿ ಬಂದು ಹೋಗುವದರಿಂದ ಅವು ವಾರ್ತಾ ಇಲಾಖೆಗಳಂತೆಯೂ ಕೆಲಸ ಮಾಡುವದುಂಟು. ನಿಮಗೆ ಊರಿನ ಯಾವ ಮೂಲೆಯ ಎಂಥದೆ ತಾಜಾ ಸುದ್ದಿ ಬೇಕಾದರೂ ನೀವು ಚಹಾದಂಗಡಿಯ ಒಂದು‌ ಮೂಲೆ ಹಿಡಿದು ಮೌನ ಕುಳಿತರೆ ಸಾಕು ನಿಮಗೆ ಎಲ್ಲವೂ ತಿಳಿಯುತ್ತಾ ಹೋಗುತ್ತದೆ. ಈಚೆಗಂತೂ ಸಕ್ಕರೆ ಖಾಯಿಲೆ ಭಾರತದ ಬಹು ದೊಡ್ಡ ಖಾಯಿಲೆಯಾದ ಮೇಲೆ ಸಕ್ಜರೆ ಹಾಕಿದ ಚಹಾ  ಕುಡಿಯುವರ ಸಂಖ್ಯೆ ಕಡಿಮೆಯಾಗಿ ಊರಿಗೂರಿಗೆ ಗಲ್ಲಿ ಗಲ್ಲಿಗಳಲ್ಲಿ ಬೆಲ್ಲದ ಚಹಾ ಎಂಬ ಹೆಸರಿನ ಗುಲ್ಪಿ ಚಹಾದಂಗಡಿಗಳೂ,ಕೇಸರ ಚಹಾದಂಗಡಿಗಳೂ ತಲೆಯೆತ್ತಿರುವದನ್ನು ಕಾಣುತ್ತವೆ. ಇನ್ನು ಸಕ್ಕರೆ ಖಾಯಿಲೆ ಗೆ ತುತ್ತಾದವರು ಸುಗರ್ ಲೆಸ್ ಚಹಾ ಸೇವನೆ ಮಾಡಿಯಾದರೂ ಚಹಾದ ಚಟ ತೀರಿಸಿಕೊಳ್ಳುತ್ತಾರೆ. ಈಚಿಚೆಗೆ ಅವರದೆ ಸಂಖ್ಯೆ ಜಾಸ್ತಿಯಾದುದರಿಂದ ಸುಗರ್ ಲೆಸ್ಸಾ ಎಂದು ಅಂಗಡಿಯವರೆ ಕೇಳಿ ಖಂಡಿತ ಮಾಡಿಕೊಳ್ಳುವದುಂಟು. ಸರಕಾರಿ ಕಛೇರಿಗಳಲ್ಲಿ ಚಹಾದ ವಿರಾಮ ಎಂದು ಒಂದು ಬಗೆಯ ವಿರಾಮ ಕಾಲವೇ ನಿರ್ಣಯವಾಗಿರುತ್ತದೆ. ಬೆಂಗಳೂರಿನಂತಹ ದೊಡ್ಡ ನಗರಗಳಿರಲಿ, ಚಿಕ್ಕ ನಗರಗಳಿರಲಿ ಸರಕಾರಿ ಇಲಾಖೆಯ ಅಧಿಕಾರಿಗಳು ಖಾಯಂ ಮ್ಮಾಗಿ ಅಂತರ್ಧಾನ ಆಗಿರುವದು..ಕೇಳಿದರೆ ಚಹಾಕ್ಕೆ ಹೋಗಿದ್ದಾರೆ ಎಂದು ಹೇಳುವದು ಸಾನಾನ್ಯವಾಗಿದೆ.ಕಛೇರಿಯ ನಿರ್ಣಯವಾಗದ ಕೆಲವು ಕೇಸಗಳ ಪರೊಹಾರೋಪಾಯವನ್ನು ಚಹಾದಂಗಡಿಯ ಟೇಬಲ್ ಬಳಿಯೆ ಕೇಸ್ ವರ್ಕರ್ ಗಳು ಮುಗಿಸಿಕೊಳ್ಳು ವದೂ ಅನುಭವಸ್ತರ ಎಷ್ಟು ಬರೆದರೂ ಈ ಚಹಾಯಣ ಮುಗಿಯಲಾರದು.ಎಲ್ಲ ಚಹಾಪ್ರಿಯರ ಅನುಭವಗಳು ಒಬ್ಬರಿಗಿಂತ ಒಬ್ಬರವು ಭಿನ್ನ‌ಮತ್ತು ಶ್ರೀ ಮಂತ ಆಗಿರುವದು ಕಾಣಬರುತ್ತದೆ. ಚಹಾಯಣವಂತೂ ರಾಮಾಯಣ ಕ್ಕಿಂತ ದೀರ್ಘವಾಗುತ್ತದೆ. ಚಹಾ ಕುಡಿಯುವದನ್ನು ಒಂದು ಬಗೆಯ habit ಎನ್ನುವ ಇಂಗ್ಲಿಷರ ಅದು ತೀರಾ ಕನಿಷ್ಟತಮ ಚಟ ಎನ್ನುತ್ತಾರೆ. ಅಂದರೆ ಯಾವ ಚಟವಿ ರದಿದ್ದರೂ ಚಹಾ ಚಟವಾದರೂ ಇದ್ದೇ ಇರುತ್ತದೆ ಎನ್ನುದದಕ್ಕೆ ಚಮತ್ಕಾರಿಕವಾಗಿ ಹೇಳುವದಿದೆ .habit ಪದದಲ್ಲಿ h ಹೋದರೆ a bit (ಸ್ವಲ್ಪ) ಉಳಿಯುವದಂತೆ .a ಹೋದರೆ bit (ತೀರ ಸ್ವಲ್ಪ) ಉಳಿಯುವದಂತೆ.b ಹೋದರೆ  it (ಇದು) ಉಳಿಯುತ್ತದೆ.I ಹೋದ‌ಮೇಲೆ t ( ಚಹಾ) ಉಳಿದೆ ಉಳಿಯುತ್ತದೆ ಎನ್ನುತ್ತಾರೆ. ಕಡೆಗೆ t ಕುಡಿಯುವ ಚಟವಂತೂ ಕನಿಷ್ಟ ಇದ್ದೇ ಇರುತ್ತದೆ ಎಂಬ ಭಾವನೆ ಅಲ್ಲಿ ಹೊರಹೊಮ್ಮುತ್ತದೆ. ಚಹಾ ಬೇರೆ ದೇಶದಿಂದ ಬಂದ ಪೇಯ ಎಂದು ವಿಜ್ಞಾನಿಗಳು ಹೇಳುತ್ತಾರೆ.ಆದರೆ ಅದು ಭಾರತೀಯರ ಅತ್ಯಂತ ಪ್ರಿಯ ಪೇಯವಾಗಿರುವದಂತೂ ಸತ್ಯ.ತಲೆ ನೋಯುವವರಿಗೆ, ಜ್ವರ ಬಂದ ರೋಗಿಗಳಿಗೆ ಇದು ದಿವ್ಯೌಷಧಿ. ದಿನಕ್ಕೆ ಎಷ್ಟು ಸಲ ಚಹಾ ಕುಡಿಯಬೇಕು ವೈದ್ಯರು ಏನೆಲ್ಲ ನಿಯಮ ಹೇಳಿದರೂ ನಾಲ್ಕಾರು ಸಲ ಅರ್ಧ ಕಪ್ ಚಹಾ ಸೇವನೆ ನಮ್ಮ ರೂಢಿಯಾಗಿದೆ ಎನ್ನುವವರ ಸಂಖ್ಯೆಯೇನೂ ಕಡಿಮೆಯಿಲ್ಲ.

ಚಹಾಯಣ…ದ ರಾಮಾಯಣ(ಕಿರು ಪ್ರಬಂಧ) ಡಾ.ವೈ ಎಂ.ಯಾಕೊಳ್ಳಿ Read Post »

You cannot copy content of this page

Scroll to Top