ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು -ಜಯಲಕ್ಷ್ಮಿ ಮಡಿಕೇರಿ.

ಭಾಷಾ ಸಂಗಾತಿ ಜಯಲಕ್ಷ್ಮಿ ಮಡಿಕೇರಿ. ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು ಮನುಷ್ಯನ ಅತಿ ದೊಡ್ಡ ಸಂಶೋಧನೆಗಳಲ್ಲಿ ಭಾಷೆ ಕೂಡಾ ಒಂದು. ಹಾಗಾಗಿ ಭಾಷೆಯನ್ನು ಬೆಳಕಿಗೆ ಹೋಲಿಸಲಾಗಿದೆ, ಅದಕ್ಕೆ ಬೆಳಕಿನ ಪಟ್ಟವನ್ನು ನೀಡಲಾಗಿದೆ. ಜಗತ್ತಿನಲ್ಲಿ ಸಹಸ್ರಾರು ಭಾಷೆಗಳಿದ್ದರೂ ಕನ್ನಡಕ್ಕೆ ಒಂದು ವಿಶೇಷ ಸ್ಥಾನಮಾನವಿದೆ. ಕವಿರತ್ನತ್ರಯರಿಂದ ಬೆಳೆದು ಬಂದು ಅದ್ವಿತೀಯ ಸಾಹಿತ್ಯ ರಚನೆಗಳನ್ನು ಸಾರಸ್ಕೃತ ಲೋಕಕ್ಕೆ ನೀಡಿದ, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ನಮ್ಮ ಭಾಷೆಗಿದೆ.  ಇದು ಮಾಧ್ಯಮಗಳ ಯುಗ.  ಪುಲಿಗೆರೆಯ ಸೋಮನಾಥ ಹೇಳುವಂತೆ ” ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತಂ  ಕೆಲವಂ ಮಾಳ್ಪವರಿಂದ ಕೆಲವಂ  ಸುಜ್ಞಾನದಿಂದ,   ಅರಿತುಕೊಂಡು ಬೆಳೆಯಲು  ಯಾರಿಗೂ ಸಮಯವಾಗಲಿ ವ್ಯವಧಾನವಾಗಲಿ ಇಲ್ಲ.  ಮುದ್ರಣ ಮಾಧ್ಯಮದಲ್ಲಿ ಪ್ರಧಾನ ಪಾತ್ರವಹಿಸಿರುವ ಪುಸ್ತಕಗಳ ಓದು ಬದಿಗೆ ಸರಿದ ಕಾಲವಿದು. ಸ್ವಚ್ಛ ಶುದ್ಧ ಭಾಷೆಯ ಬೆಳವಣಿಗೆಗೆ  ಪೂರಕವಾಗಿರುವ ರೇಡಿಯೋ, ಸೃಜನಶೀಲ ಬರಹಗಳು, ಪತ್ರಿಕೆಗಳು ನಿಯತಕಾಲಿಕೆಗಳು ಇವೆಲ್ಲವುಗಳನ್ನು ಮೀರಿ ಟಿವಿ ಸಿನಿಮಾ ಇಂಟರ್ನೆಟ್ ವಾಟ್ಸಪ್ ಫೇಸ್ಬುಕ್ ಇತ್ಯಾದಿಗಳಿಗೆ ಜನ ಮುಗಿ ಬೀಳುವ ಕಾಲಘಟ್ಟವಿದು.  ಒಂದೆಡೆ ಇಂಗ್ಲಿಷ್ ಭಾಷೆಯನ್ನು ಬಳಸಿ ಮಾತನಾಡುವುದೇ ಒಂದು ಹೆಗ್ಗಳಿಕೆ  ಎಂಬ ಭ್ರಮೆಯಲ್ಲಿರುವ ಕನ್ನಡಿಗರು, ಇನ್ನೊಂದೆಡೆ ತಾವು ಬಳಸಿದ್ದೇ ಭಾಷೆ ಎನ್ನುವಂತೆ ಕನ್ನಡ ಭಾಷೆ ಗೌರವಕ್ಕೆ ಚ್ಯುತಿ  ತರುವಂತೆ ಪ್ರತಿ ದಿನ  ತಪ್ಪುಗಳನ್ನೇ ತೋರುವ ಹೇಳುವ ಕೆಲ ದೃಶ್ಯ ಮಾಧ್ಯಮಗಳು. ಇವುಗಳಿಂದ ಕನ್ನಡ ಭಾಷೆ ತನ್ನ  ಅಂದ ಚಂದವನ್ನು, ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದ್ದು  ನಮ್ಮ ಭಾಷಾ ಸಹಜತೆಯನ್ನು ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೃಶ್ಯ ಮಾಧ್ಯಮಗಳಲ್ಲಿ ಅತಿ ದೊಡ್ಡದಾಗಿ ಬಿತ್ತರ ವಾಗುವ ತಪ್ಪು ತಪ್ಪಾದ ಪದಗಳನ್ನು ಚಿತ್ತಬಿತ್ತಿಯಲ್ಲಿ ಮುದ್ರಿಸಿಕೊಳ್ಳುವ ಮಕ್ಕಳು ಅದುವೇ ಸರಿಯಾದ ಕನ್ನಡ ಎಂದು ತಿಳಿದು ಅದನ್ನೇ ಕಲಿಯುತ್ತಾರೆ. ಭಾಷಾ ಬೆಳವಣಿಗೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸ ತಕ್ಕಂತಹ ಪಾ.ವೆಂ. ಆಚಾರ್ಯರ   ‘ಪದಾರ್ಥ ಚಿಂತಾಮಣಿ ‘ , ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ” ಇಗೋ ಕನ್ನಡ “, ಕೊಕ್ಕಡ ವೆಂಕಟರಮಣ ಭಟ್ಟರ ” ಸರಿಗನ್ನಡ ಸರಿಕನ್ನಡ ” ಶುದ್ಧ ಕನ್ನಡದ ಬಗ್ಗೆ ನಮಗೆ ಅರಿವಾಗುತ್ತದೆ ಮತ್ತು ಮುದ್ರಣ ಮಾಧ್ಯಮ ಭಾಷ ಕ್ಷೇತ್ರದಲ್ಲಿ ಮೂಡಿಸಿದ ಜಾಗೃತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಹಿರಿಯರು ಪುಸ್ತಕಗಳನ್ನು ಓದುವ ಸಂಸ್ಕೃತಿಯನ್ನು ರೂಢಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕಿದೆ. ಅಧಿಕಾರ ಸ್ಥಾನದಲ್ಲಿ ಇರುವವರು, ಶಿಕ್ಷಕರು, ಪೋಷಕರು ಮಾಧ್ಯಮ ಬಂಧುಗಳು ಕನ್ನಡ ಭಾಷಾ ಶುದ್ಧಿಯನ್ನು ಕಾಪಾಡಿಕೊಂಡು ಬರಬೇಕಿದೆ ಹೊಂಬೆಳಕು ಮಾಸಿಕ ಕಾರ್ಯಕ್ರಮದ ಮೂಲಕ ಹಲವಾರು ತತ್ವ ಚಿಂತನೆಗಳು ಮಠದಲ್ಲಿ ನಡೆಯುತ್ತಿದ್ದು ಹಲವಾರು ಪುಸ್ತಕಗಳು ಕೂಡ ಈ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಬಗ್ಗೆ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಂತಸ ವ್ಯಕ್ತಪಡಿಸಿದರು. ತಮ್ಮ ಅಮೃತ ಹಸ್ತದಿಂದ  ಕೆ ಜಯಲಕ್ಷ್ಮಿ ಅವರ  ‘ ನಡೆದಷ್ಟೂ ದಾರಿ ‘ ಕೃತಿಯನ್ನು ಲೋಕಾರ್ಪಣೆಗೊಳಿಸಿ ಶುಭ ಕೋರಿದರಲ್ಲದೆ ಶರಣ ಶರಣೆಯರ ಜೀವನ ಆದರ್ಶಗಳ ಬಗ್ಗೆ ಹೇಳುತ್ತಾ  ವಚನಗಳ ಸಾರ್ವಕಾಲಿಕ ಮೌಲ್ಯಗಳ  ಬಗ್ಗೆ ವಿವರಿಸಿದರು. ನೆರೆದಿರುವ ಭಕ್ತ ವೃಂದಕ್ಕೆ ಆಶೀರ್ವಚನ ನೀಡಿದರು .  ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷರು ಹಾಗೂ ಶಕ್ತಿ ದಿನಪತ್ರಿಕೆಯ  ಸಲಹಾ ಸಂಪಾದಕರಾದ ಬಿಜಿ ಅನಂತಶಯನ ರವರು ಸಾಮಾಜಿಕ ಧಾರ್ಮಿಕ ಕ್ಷೇತ್ರಕ್ಕೆ ಅರಮೇರಿ ಮಠದ ಪರಮಪೂಜ್ಯ ಗುರುಗಳು ನೀಡುತ್ತಾ ಬರುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಶಿಕ್ಷಕಿ ಸಾಹಿತಿ ಸುನಿತಾ ಕುಶಾಲನಗರ ಅವರು ಜಯಲಕ್ಷ್ಮಿ ಕೆ ಯವರ” ನಡೆದಷ್ಟೂ ದಾರಿ  ” ತೃತೀಯ ಬಗ್ಗೆ ಮಾತನಾಡುತ್ತಾ ಓದುವ ಕುತೂಹಲವನ್ನು ಕೆರಳಿಸುವ , ವಿಚಾರಧಾರೆಗಳ ಸ್ಪಷ್ಟ ನಿರೂಪಣೆಯ ಪುಸ್ತಕವಿದು. ಲೇಖಕಿ ಬಳಸಿದ ಭಾಷೆ ಸರಳ ಸ್ವಚ್ಛ ಸುಂದರ ಎಂದರು.ಉದಾತ್ತ  ವ್ಯಕ್ತಿಗಳ ಜೀವನ ಚರಿತ್ರೆಯನ್ನು ವಿವರಿಸಿತ್ತ  ವಾಸ್ತವದಲ್ಲಿ ಬದುಕುವ ಚಿಂತನೆ ಉತ್ತಮ ಎಂದರು. ಪೊನ್ನಂಪೇಟೆ ಸಿ ಐ ಟಿ ಕಾಲೇಜಿನ ಉಪನ್ಯಾಸಕಿ ಸುಶ್ಮಿತಾ ರವರು  ಜಯಲಕ್ಷ್ಮಿ ಅವರ ಕೆಲವು ಲೇಖನಗಳ ಬಗ್ಗೆ ಮಾತನಾಡಿದರು.ಕುಮಾರಿ ಮಿನುಗು  ಪ್ರಾರ್ಥಿಸಿದಳು. ಕಿಗ್ಗಾಲ್ ಹರೀಶ್  ನಿರೂಪಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೇಶವ ಕಾಮತ್, ಮಾಜಿ ಅಧ್ಯಕ್ಷರಾದ ಶ್ರೀ ಲೋಕೇಶ್ ಸಾಗರ್, ಸಾಹಿತಿ ಕಿಗ್ಗಾಲ್ ಗಿರೀಶ್, ಡಾಕ್ಟರ್ ಸತೀಶ್, ಸಮರ್ಥ ಕನ್ನಡಿಗರು ಸಂಸ್ಥೆಯ ಸಂಚಾಲಕಿಯರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು -ಜಯಲಕ್ಷ್ಮಿ ಮಡಿಕೇರಿ. Read Post »

ಇತರೆ

“ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್” ವೀಣಾ ಹೇಮಂತ ಗೌಡಪಾಟೀಲ್

ವಿಶೇಷ ಸಂಗಾತಿ ವೀಣಾ ಹೇಮಂತ ಗೌಡಪಾಟೀಲ್ “ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್” ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹುಟ್ಟಿದ್ದು ‘ಮಹಾರ್’ ಎಂಬ ಜನಾಂಗದಲ್ಲಿ. ಅತ್ಯಂತ ಹಿಂದುಳಿದ ಆ ಜನಾಂಗದವರನ್ನು ಮೇಲ್ವರ್ಗದ ಜನರು ಪಶುವಿಗಿಂತ ಕೀಳಾಗಿ ನೋಡುವುದನ್ನು, ವ್ಯವಹರಿಸುವುದನ್ನು ಕಂಡು ನೊಂದುಕೊಂಡು ವಿದ್ಯೆ ಎಂಬ ಬ್ರಹ್ಮಾಸ್ತ್ರದ ಮೂಲಕ ಜ್ಞಾನವನ್ನು ಸಂಪಾದಿಸಿ ನಮ್ಮ ದೇಶದ ವಿವಿಧ ಧರ್ಮಶಾಸ್ತ್ರಗಳ ಅಧ್ಯಯನವನ್ನು ವಿದೇಶದಲ್ಲಿ ಕೈಗೊಂಡು ಅದರ ಜೊತೆಗೆ ಹಲವಾರು ವಿಷಯಗಳಲ್ಲಿ ಪರಿಣತಿಯನ್ನು ಪಡೆದು ಮರಳಿ ಭಾರತಕ್ಕೆ ಬಂದು ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳುವ ಕಾನೂನು ತಜ್ಞರಾಗಿ ಮುಂದೆ ಭಾರತದ ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸಿದವರು….. ಅವರೇ ನಮ್ಮ ನಿಮ್ಮೆಲ್ಲರ ಪ್ರೀತಿಯ ಡಾ. ಬಿ.ಆರ್. ಅಂಬೇಡ್ಕರ್. ಅಸ್ಪೃಶ್ಯರು ಎಂದೇ ಕರೆಯಲ್ಪಡುವ ಮಹಾರ್ ಎಂಬ ಜನಾಂಗದಲ್ಲಿ 14ನೆಯ ಮಗನಾಗಿ ಹುಟ್ಟಿದ ಅಂಬೇಡ್ಕರ್ ಅವರಿಗೆ ಬಾಲ್ಯದಿಂದಲೂ ಸಿಕ್ಕ ಒಳ್ಳೆಯ ಸಂಸ್ಕಾರ ಆತನ ತಂದೆ ತಾಯಿಗಳ ಬಳುವಳಿ. ಮಾರುಕಟ್ಟೆಯ ಮಧ್ಯದಲ್ಲಿಯೇ ಪುಟ್ಟ ಗುಡಿಸಲನ್ನು ಹೊಂದಿದ್ದ ಸದಾ ಗೌಜಿ ಗದ್ದಲಗಳಿಂದ ತುಂಬಿದ್ದ ಕೊಳೆತು ನಾರುವ ಮಾರುಕಟ್ಟೆಯ ಪರಿಸರದಲ್ಲಿ ಬೆಳೆದರೂ ಚಿಕ್ಕಂದಿನಲ್ಲಿಯೇ ಅದ್ಭುತ ಪ್ರತಿಭೆ ತೋರುತ್ತಿದ್ದ ಮಗನನ್ನು ತಂದೆ ಕಷ್ಟಪಟ್ಟು ಓದಿಸುತ್ತಿದ್ದರು. ಮಧ್ಯರಾತ್ರಿವರೆಗೂ ಎಚ್ಚರವಿರುತ್ತಿದ್ದ ತಂದೆ ಬೆಳಗಿನ ಜಾವ ಎರಡು ಗಂಟೆಯ ಸುಮಾರಿಗೆ ಮಗನನ್ನು ಎಬ್ಬಿಸಿ ಓದಲು ಕೂಡಿಸುತ್ತಿದ್ದರು.ಮುಂಜಾನೆಯ ನೀರವ ವಾತಾವರಣದಲ್ಲಿ ಬಾಲಕ ಭೀಮನ ಓದು ಸಾಗುತ್ತಿತ್ತು. ಶಾಲೆಯಲ್ಲಿ ಯಾವುದೇ ಮಕ್ಕಳು ಇವರೊಂದಿಗೆ ಸೇರುತ್ತಿರಲಿಲ್ಲ. ಕುಡಿಯಲು ನೀರನ್ನು ಕೂಡ ಮೇಲಿನಿಂದ ಹಣಿಸುತ್ತಿದ್ದರು. ಭೀಮ ಮತ್ತವನ ಸಹೋದರ ತರಗತಿ ಕೋಣೆಯ ಕಪ್ಪು ಹಲಗೆಯ ಹಿಂಭಾಗದ ಮೂಲೆಯಲ್ಲಿ ಕುಳಿತು ಪಾಠವನ್ನು ಕೇಳುತ್ತಿದ್ದರು. ದೇವಸ್ಥಾನಗಳಲ್ಲಿ ಕೂಡ ಇವರಿಗೆ ಪ್ರವೇಶವಿಲ್ಲ. ಬಾವಿ,ಕೆರೆ ಹಳ್ಳಗಳ ನೀರನ್ನು ಕೂಡ ಇವರ ಜನಾಂಗಕ್ಕೆ ನಿರ್ಬಂಧಿಸಿದ್ದುದು ಭೀಮನಿಗೆ ಯಕ್ಷ ಪ್ರಶ್ನೆಯಂತೆ ತೋರುತ್ತಿತ್ತು. ಈ ಎಲ್ಲಾ ಪ್ರಶ್ನೆಗಳನ್ನು ತಾಯಿಯ ಮುಂದೆ ಒಡ್ಡಿದಾಗ ತಾಯಿ ಇದೆಲ್ಲಕ್ಕೂ ಪರಿಹಾರ ನಿನ್ನ ಓದಿನಲ್ಲಿ ಅಡಗಿದೆ ಎಂದು ಸುಮ್ಮನೆ ಹೇಳಿದ್ದಳಾದರೂ ಅದನ್ನೇ ಗಂಭೀರವಾಗಿ ಪರಿಗಣಿಸಿದ ಭೀಮನು ಉತ್ತಮವಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆದನು. ಇಷ್ಟರಲ್ಲಾಗಲೇ ಅವರ ಜನಾಂಗದ ಪದ್ಧತಿಯಂತೆ ಅಂಬೇಡ್ಕರ್ ಅವರ ಬಾಲ್ಯ ವಿವಾಹವನ್ನು ರಮ ಎಂಬ ಹೆಣ್ಣು ಮಗುವಿನೊಂದಿಗೆ ಮಾಡಿ ಮುಗಿಸಿದ್ದರು. ಮುಂದೆ ಕಾಲೇಜಿಗೆ ಸೇರಲು ಆತನಿಗೆ ಸಹಾಯ ಮಾಡಿದ ಶಿಕ್ಷಕರೊಬ್ಬರು ಆತನಿಗೆ ಅಂಬೇಡ್ಕರ್ ಎಂಬ ತಮ್ಮದೇ ಅಡ್ಡನಾಮವನ್ನು ಸೇರಿಸಿದರು. ಪದವಿ ವ್ಯಾಸಂಗದ ನಂತರ ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಮತ್ತು ದೊಡ್ಡ ಮೊತ್ತದ ನೌಕರಿಯ ಅವಕಾಶ ಎರಡೂ ಒಟ್ಟೊಟ್ಟಿಗೆ ಬಂದಾಗ ಅಂದಿನ ಬರೋಡದ ಮಹಾರಾಜರಾದ ಗಾಯಕವಾಡರ ಸಹಾಯದಿಂದ ಅಂಬೇಡ್ಕರ್ ಅವರು ವಿದೇಶ ವ್ಯಾಸಂಗಕ್ಕೆ ಹೊರಟರು. ಅಸ್ಪೃಶ್ಯತೆಯ ಗಂಧ ಗಾಳಿಯನ್ನು ಅರಿಯದ ವಿದೇಶಿ ಜನರ ಮಧ್ಯ ಒಳ್ಳೆಯ ಆಹಾರ, ವಿಚಾರ ಮತ್ತು ಶಿಕ್ಷಣದ ಸಮ್ಮಿಶ್ರ ಪಾಕವನ್ನು ಸವಿದ ಅಂಬೇಡ್ಕರ್ ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಪಕ್ವವಾದರು. ವಾಚನಾಲಯದಲ್ಲಿ ದೊರೆತ ಹಲವಾರು ಪುಸ್ತಕಗಳನ್ನು ಓದಿ ಜ್ಞಾನದ ಭಂಡಾರವನ್ನು ಹೆಚ್ಚಿಸಿಕೊಂಡ ಅಂಬೇಡ್ಕರ್ ಅವರು ಎಲ್ಲಾ ಧರ್ಮಗಳ ಸಾರವನ್ನು ಅರೆದು ಕುಡಿದರು. ಅಸ್ಪೃಶ್ಯರು ಸಂಸ್ಕೃತವನ್ನು ಕೇಳಿದರೆ ಅವರ ಕಿವಿಗಳಿಗೆ ಎಣ್ಣೆ ಕಾಸಿ ಹಾಕಬೇಕೆಂಬ ಭಾರತ ದೇಶದ ಮೇಲ್ವರ್ಗದ ಜನರ ಮಧ್ಯದಲ್ಲಿ ಬೆಳೆದ ಅಂಬೇಡ್ಕರ್ ವಿದೇಶದಲ್ಲಿ ನಮ್ಮ ಧರ್ಮ ಗ್ರಂಥಗಳನ್ನು ಓದಿದರು. ಚಿಕ್ಕಂದಿನಲ್ಲಿ ಮನಸ್ಸನ್ನು ಕದಡಿದ ಭಾರತೀಯ ಸಾಮಾಜಿಕ ವ್ಯವಸ್ಥೆಯ ಅಸಮಾನತೆ ಎಂಬ ಅಮಾನವೀಯ ಕೃತ್ಯದ ಆಘಾತವನ್ನು ಅನುಭವಿಸಿದ್ದ ಅಂಬೇಡ್ಕರ್ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಮಧ್ಯದ ತುಲನಾತ್ಮಕ ಅಧ್ಯಯನವನ್ನು ಕೈಗೊಂಡರು. ಅಸ್ಪೃಶ್ಯತೆಯ, ಅನಾದರದ ಗಂಧ ಗಾಳಿ ಇಲ್ಲದ ವಿದೇಶಿ ಪರಿಸರ ಅಂಬೇಡ್ಕರ್ ಅವರ ಮನಸ್ಸನ್ನು ಅರಳಿಸಿತು. ವಿದೇಶದಲ್ಲಿ ಅಧ್ಯಯನ ಪೂರೈಸಿ ಭಾರತಕ್ಕೆ ಮರಳಿದ ಅಂಬೇಡ್ಕರ್ ಅವರು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು. ಅಲ್ಲೂ ಕೂಡ ಅವರಿಗೆ ಅವಮಾನ ಕಟ್ಟಿಟ್ಟ ಬುತ್ತಿ ಎಂದು ಅರಿವಾದಾಗ ಎಲ್ಲ ಹಿಂದುಳಿದ ವರ್ಗಗಳ ಜನರ ಧ್ವನಿಯಾಗಿ ತಾನು ಕಾರ್ಯನಿರ್ವಹಿಸಿದರೆ ಮಾತ್ರ ಅವರ ಸಮಸ್ಯೆಗಳ ಪರಿಹಾರ ಸಾಧ್ಯ ಎಂದು ಅರಿತ ಅಂಬೇಡ್ಕರ್ ರಾಜಕೀಯ ಪ್ರವೇಶಿಸಿದರು.ಅದೃಷ್ಟವಶಾತ್ ಮಹಾತ್ಮ ಗಾಂಧೀಜಿಯವರ ಸಂಪರ್ಕಕ್ಕೆ ಬಂದ ಅಂಬೇಡ್ಕರ್ ಅವರು ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರಾದರು. ಶ್ರೇಷ್ಠ ಮಾನವತಾವಾದಿ ಮಹಾತ್ಮ ಗಾಂಧೀಜಿಯವರ ಒಡನಾಟ, ಚರ್ಚೆ, ಭಾರತದ ಸ್ವಾತಂತ್ರ್ಯದ ಕುರಿತಾದ ಅವರ ನಿಲುವು, ಗ್ರಾಮೀಣ ಭಾರತದ ಅವರ ಕನಸು, ಗುಡಿ ಕೈಗಾರಿಕೆಗಳ ಮೂಲಕ ಗ್ರಾಮಗಳ ಸಶಕ್ತಿಕರಣ, ನೈತಿಕ ಹೊಣೆಗಾರಿಕೆ ಎಲ್ಲವನ್ನು ನೋಡಿದ ಅಂಬೇಡ್ಕರ್ ಭಾರತ ದೇಶವು ಸ್ವಾತಂತ್ರ್ಪ ಪಡೆಯುವ ಸಮಯದಲ್ಲಿ ಶೋಷಿತರ ಪರವಾಗಿ ಧ್ವನಿ ಎತ್ತಿದರು. ಸಂಘಟನೆ ಅಂಬೇಡ್ಕರ್ ಅವರ ದೈತ್ಯಶಕ್ತಿಯಾಗಿತ್ತು. ಇನ್ನೇನು ಭಾರತದ ಸ್ವಾತಂತ್ರ್ಯದ ಕ್ಷಣಗಣನೆ ಆರಂಭವಾಗಿದೆ ಎಂಬ ಹೊತ್ತಿನಲ್ಲಿ 1945-46 ರ ಸುಮಾರಿಗೆ ಅಂದಿನ ಕಾನೂನು ಮಂತ್ರಿಯಾಗಿ ಭಾರತ ದೇಶದ ಸಂವಿಧಾನವನ್ನು ರಚಿಸುವ ಜವಾಬ್ದಾರಿಯನ್ನು ಅಂಬೇಡ್ಕರ್ ಅವರ ಜ್ಞಾನ ಮತ್ತು ವೈಯುಕ್ತಿಕ ಸಾಮರ್ಥ್ಯದ ಆಧಾರದ ಮೇಲೆ ನೀಡಲಾಯಿತು. ಪುರುಷರಷ್ಟೇ ಹೆಣ್ಣು ಮಕ್ಕಳಿಗೂ ಎಲ್ಲಾ ರೀತಿಯ ಸಮಾನ ಹಕ್ಕುಗಳನ್ನು ನಮ್ಮ ಸಂವಿಧಾನದಲ್ಲಿ ನೀಡಿದ್ದಾರೆ ಡಾ. ಅಂಬೇಡ್ಕರ್. ಬಹುಶಃ ಜಗತ್ತಿನ ಯಾವುದೇ ದೇಶ ಮಾಡಿರದ ಮಹತ್ಸಾದನೆ ಇದು. ಮನುವಾದಿಗಳ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಿದ್ದರು ನಿಜ ಆದರೆ ಸ್ವಾತಂತ್ರ್ಯ ಮತ್ತು ಸಮಾನತೆ ಎಂಬುದು ಕನಸಿನ ಮಾತಾಗಿದ್ದ ಕಾಲದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಉದ್ಯೋಗ, ಮಾನಸಿಕ ಮತ್ತು ದೈಹಿಕ ಆರೋಗ್ಯ ದೃಷ್ಟಿಯಿಂದ ರಚಿಸಲಾದ ಸಾಂವಿಧಾನಿಕ ಕಾನೂನು, ಮತದಾನದ ಹಕ್ಕು ಮತ್ತು ಸುವ್ಯವಸ್ಥೆಯ ನಿಯಮಗಳು ಹೆಣ್ಣು ಮಕ್ಕಳನ್ನು ಇನ್ನಿಲ್ಲದ ನೆಮ್ಮದಿಯಿಂದ ಜೀವಿಸುವಂತೆ ಮಾಡಿವೆ. ಮಾರ್ಕ್ಸ್ ವಾದವನ್ನು ಅಧ್ಯಯನ ಮಾಡಿದ್ದ ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಮೂಲಕ ಬಂಡವಾಳಶಾಹಿಗಳ ದಬ್ಬಾಳಿಕೆಯನ್ನು ವಿರೋಧಿಸಿ ಎಲ್ಲಾ ವರ್ಗದ ಕಾರ್ಮಿಕರಿಗೂ ಕೆಲಸ, ಒಳ್ಳೆಯ ಸಂಬಳ, ಮೂಲಭೂತ ಅವಶ್ಯಕತೆಗಳ ಪೂರೈಕೆ, ಔದ್ಯೋಗಿಕ ಭದ್ರತೆ ಆರೋಗ್ಯ ವಿಮೆ ಮುಂತಾದವುಗಳನ್ನು ದೊರಕಿಸಿಕೊಟ್ಟರು. ಕಾರ್ಮಿಕ ಸಂಘಟನೆಗಳಿಗೆ ಶಕ್ತಿ ತುಂಬಿದ ಅಂಬೇಡ್ಕರ್ ಅವರು ಬಂಡವಾಳಶಾಹಿಗಳ ಮೇಲೆ ನಿಯಂತ್ರಣವನ್ನು ಹೇರುವ ಮೂಲಕ ಕಾರ್ಮಿಕ ವರ್ಗಕ್ಕೆ ಚೈತನ್ಯ ತುಂಬಿದರು. ವಾರದ ರಜಾ ದಿನಗಳನ್ನು ಮತ್ತು ದಿನದ ಮೂರನೇ ಒಂದು ಅವಧಿಯ ಕಾರ್ಯನಿರ್ವಹಣೆಯನ್ನು ಕೂಡ ನಿಶ್ಚಯಿಸಿದವರು ಡಾಕ್ಟರ್ ಅಂಬೇಡ್ಕರ್. ಹಿಂದುಳಿದ ವರ್ಗಗಳು ದೀನ ದಲಿತರಿಗೆ ವಿಶೇಷ ಸವಲತ್ತುಗಳನ್ನು ನೀಡುವ ಮತ್ತು ಶೈಕ್ಷಣಿಕ ಕ್ರಾಂತಿಯ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಅಡಿಪಾಯ ಹಾಕಿದವರು ಅಂಬೇಡ್ಕರ್. ಸಮಾನ ನಾಗರಿಕ ಹಕ್ಕುಗಳು ಮತ್ತು ಕಾನೂನಾತ್ಮಕ ಹೋರಾಟ ಮಾಡಲು ಎಲ್ಲ ದುರ್ಬಲ ವರ್ಗದವರಿಗೆ ಅವಕಾಶ ಕಲ್ಪಿಸಿದರು. ಹಿಂದುಳಿದ ವರ್ಗದವರಿಗಾಗಿ ವಿಶೇಷ ಮೀಸಲಾತಿಗಳನ್ನು, ಅನುದಾನಗಳನ್ನು ನೀಡಿದ ಅವರು ಮುಂದಿನ ಕೆಲವು ವರ್ಷಗಳು ಮಾತ್ರ ಇದನ್ನು ಅನುಷ್ಠಾನದಲ್ಲಿ ಇಡಬೇಕು ಎಂದು ಸೂಚಿಸಿದ್ದರು ಕೂಡ. ಸನಾತನ ಭಾರತದ ಎಲ್ಲಾ ಅಂಶಗಳನ್ನು ಅಧ್ಯಯನ ಮಾಡಿದ್ದ ಅವರು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದರು. ನಮ್ಮ ಭವ್ಯ ಧಾರ್ಮಿಕ ಪರಂಪರೆಯ ಇತಿಹಾಸಕ್ಕೆ ಯಾವುದೇ ರೀತಿಯ ಕುಂದುತರದಂತೆ ಆದರೆ ಅಸ್ಪೃಶ್ಯತೆ ಅಮಾನವೀಯ ಆಚರಣೆಗಳನ್ನು ನಿಯಂತ್ರಿಸಲು ತಿದ್ದುಪಡಿಗಳನ್ನು ಮಾಡಿದರು. ಬಾಬಾ ಸಾಹೇಬರ ಮತ್ತೊಂದು ಹೆಗ್ಗಳಿಕೆ ಭಾರತೀಯ ಸಮಾಜದ ಮೂಲ ಸ್ವರೂಪಕ್ಕೆ ಎಲ್ಲಿಯೂ ಧಕ್ಕೆ ಬಾರದಂತೆ ಸನಾತನ ಧರ್ಮದ ಮೌಲ್ಯಗಳನ್ನು ಗೌರವಿಸುತ್ತಾ ಕೇವಲ ಅದರಲ್ಲಿ ಇರಬಹುದಾದ ಕೆಟ್ಟ ಅಂಶಗಳನ್ನು ಮಾತ್ರ ಗುರುತಿಸಿ ಅದಕ್ಕೆ ತಿದ್ದುಪಡಿ ತಂದು ಸಾಮಾಜಿಕ ಸಮಾನತೆಯನ್ನು ಉಳಿಸಿದ್ದು. ಭಾರತದ ಏಕತೆ, ವೈವಿಧ್ಯತೆ ಮತ್ತು ಸಮಗ್ರತೆಯ ಬಗ್ಗೆ ಹೆಮ್ಮೆ ಮೂಡುವುದು 73 ವರ್ಷಗಳು ಕಳೆದರೂ ನಮ್ಮ ಸಂವಿಧಾನದ ಮೂಲಸ್ವರೂಪದಲ್ಲಿ ಯಾವುದೇ ಬದಲಾವಣೆ ತರದೆ ಇರುವುದು. ಜಗತ್ತಿನ ಅತ್ಯಂತ ಪ್ರಾಚೀನ ಸಭ್ಯತೆಯಲ್ಲಿ ಸಂವಿಧಾನದ ಮೂಲ ಸ್ವರೂಪ ಯಾವುದೇ ತಿದ್ದುಪಡಿಗೊಳಗಾಗದೆ ಹಾಗೆಯೆ ಉಳಿದಿರುವುದು ಕೇವಲ ಭಾರತದಲ್ಲಿ ಮಾತ್ರ. ಅದಕ್ಕೆ ಕಾರಣ ಅಂಬೇಡ್ಕರ್ ಅವರ ಅಧ್ಯಯನಶೀಲ ಚಿಂತನೆ, ದೂರದೃಷ್ಟಿ ಮತ್ತು ಸರ್ವಧರ್ಮ ಸಮಾನ ದೃಷ್ಟಿ. ಹೀಗಾಗಿಯೇ ಅಂಬೇಡ್ಕರ್ ಎಲ್ಲಾ ಭಾರತೀಯರು ಗೌರವಿಸುವಂತಹ ವ್ಯಕ್ತಿತ್ವ ಹೊಂದಿ ಬಾಬಾ ಸಾಹೇಬ್ ಎಂದು ಕರೆಯಲ್ಪಟ್ಟರು. ಅಂಬೇಡ್ಕರ್ ಕೇವಲ ದಲಿತ, ಹಿಂದುಳಿದ ವರ್ಗದ ನಾಯಕರು ಮಾತ್ರವಲ್ಲ…. ಭವ್ಯ ಭಾರತದ ಭವಿಷ್ಯದ ಪ್ರಜೆಗಳ ನಾಯಕ, ತಂದೆ ತನ್ನ ಮಕ್ಕಳ ಭವ್ಯ ಭವಿಷ್ಯಕ್ಕಾಗಿ ತನ್ನ ಜೀವಿತವನ್ನೇ ತ್ಯಾಗ ಮಾಡುವಂತೆ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಇಡೀ ಜೀವಮಾನವನ್ನು ಭಾರತದ ಹಿಂದುಳಿದ ದುರ್ಬಲ ಅಸಹಾಯಕ ಜನರ ಏಳಿಗೆಗಾಗಿ, ಹೆಣ್ಣು ಮಕ್ಕಳಸಶಕ್ತೀಕರಣಕ್ಕಾಗಿ, ಕಾರ್ಮಿಕರಲ್ಲಿ ಬಲ ತುಂಬಲು ಮುಡಿಪಾಗಿಟ್ಟರು. ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಭಾರತದ ಹೆಮ್ಮೆಯ ಪ್ರಜೆಗಳಾಗಿ ನಮ್ಮ ಕರ್ತವ್ಯಗಳನ್ನು ನಿಭಾಯಿಸೋಣ. ವೀಣಾಹೇಮಂತ್‌ ಗೌಡ ಪಾಟೀಲ್ ವೀಣಾ ಹೇಮಂತ್ ಗೌಡ ಪಾಟೀಲ್

“ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್” ವೀಣಾ ಹೇಮಂತ ಗೌಡಪಾಟೀಲ್ Read Post »

ಮಕ್ಕಳ ವಿಭಾಗ

ವನಜ ಮಹಾಲಿಂಗಯ್ಯ “ಮಕ್ಕಳಿಗೊಂದಷ್ಟು ಮಾತುಗಳು”

ಮಕ್ಕಳ ಸಂಗಾತಿ ವನಜ ಮಹಾಲಿಂಗಯ್ಯ “ಮಕ್ಕಳಿಗೊಂದಷ್ಟು ಮಾತುಗಳು” ಅಪ್ಪ ಅಮ್ಮ ಸೇವಕರಲ್ಲ, ಅವರೆoದಿಗೂ  ದೇವರ ಪ್ರತಿರೂಪ, ಅವರೆಂದಿಗೂ ಕೇಳುವುದಿಲ್ಲ ದೇವರೇನಮಗೆ ಒಳ್ಳೆಯದು ಮಾಡೆoದು, ಅವರು ಬೇಡುವುದು ಮಕ್ಕಳಿಗಾಗಿ ಮಾತ್ರ. ಅವರು ದೇವರಲ್ಲಿ ತಮಗಾಗಿ ಕೇಳುವುದು ಒಂದು ಮಾತ್ರ ಅದೇನು ಗೊತ್ತಾ?   ನಮ್ಮ ಮಕ್ಕಳು ಅವರ ಕಾಲ ಮೇಲೆ ಅವರು ನಿಲ್ಲುವವರೆಗೆ ನಮಗೆ ಆರೋಗ್ಯ ಕೊಟ್ಟು ಕಾಪಾಡು ಎಂದು ಮಾತ್ರಾವೆ……….ಅಪ್ಪ ಅಮ್ಮ ಸ್ವಾರ್ಥಿಗಳಲ್ಲ,ಅವರೆoದಿಗೂ  ನಿಸ್ವಾರ್ಥಿಗಳು,ಅವರಿಗಾಗಿ ಅವರು ಬದುಕುವುದಿಲ್ಲ.ಅವರೆಂದಿಗೂ ಕೇಳುವರು ದೇವರೇ ನಮ್ಮಮಕ್ಕಳಿಗೆ ಒಳ್ಳೆಯದು ಮಾಡೆಂದು. ಅಪ್ಪ ಅಮ್ಮ  ಹೊಟ್ಟೆ ಕಟ್ಟಿ ಬಟ್ಟೆ ಕಟ್ಟಿ, ಕೂಡಿಟ್ಟು ಆಸ್ತಿಯ ಮಾಡುವರು, ತಮಗಾಗಿ ಬೇಕೆಂದು ಅಲ್ಲವೇ ಅಲ್ಲ. ಅವರು ಅಂದುಕೊಳ್ಳುವರು ಮಕ್ಕಳು ಬೇರೆಯವರ  ಮುಂದೆ ಬೇಡಬಾರದೆಂದು. ನಮ್ಮ ಮಕ್ಕಳು ಎಲ್ಲರ ಮುಂದೆ ತಲೆ ಎತ್ತಿ, ಬಾಳಬೇಕು,ದುಡಿದು ತಿನ್ನಬೇಕು, ಯಾರ ಕೈಕೆಳಗೂ ಇರಬಾರದು, ಸಂಭಂಧಿಕರು ನಿಮ್ಮನ್ನು ಬೆರಳಿಟ್ಟು ತೋರಿಸಬಾರದು, ಎಂದು ಹಗಲು ರಾತ್ರಿ ಶ್ರಮಿಸುವ, ಚಿoತಿಸುವ ಜೀವಗಳು ಅಂದ್ರೆ ಅಪ್ಪ ಅಮ್ಮ ಮಾತ್ರ……….ಅಪ್ಪ ಅಮ್ಮ ಇದ್ದಾಗ ನಿಮಗೆ ಮೇಲೆ ಹೇಳಿದ ಯಾವ ಪದಗಳು, ವಾಕ್ಯಗಳು ಅರ್ಥವಾಗುವುದಿಲ್ಲ,ಅದು ನನಗೆ ಚನ್ನಾಗಿ ಗೊತ್ತು. ಆದ್ರೆ ಅವರಿಬ್ಬರೂ ಕಣ್ಮರೆ ಯಾದ ಮೇಲೆ  ಅರ್ಥ ವಾಗುತ್ತದೆ. ಆಗ ಏನೂ ಮಾಡಲು ಸಾಧ್ಯವಿಲ್ಲ.ಆಗ ನಿನಗೆ ಯಾರೂ ಬರುವುದಿಲ್ಲ. ಸ್ನೇಹಿತರು ಸಂಭಂದಿಕರು ಯಾರೂ……… ಇಲ್ಲ.ಅಪ್ಪ ಅಮ್ಮನೀವು ಚನ್ನಾಗಿ ದ್ರೆ ಖುಶಿಪಡುತ್ತಾರೆ, ಆದ್ರೆ ಬೇರೆಯವರು ನೋಟಕ್ಕೆ ಅಷ್ಟೇ. ಯಾರೂ ಎಷ್ಟೇ ಕಷ್ಟ ಬಂದ್ರು, ಎಷ್ಟೇ ಶ್ರೀಮoತಿಕೆ ಬಂದ್ರು ವೃದ್ಧಾಶ್ರಮಕ್ಕೆ ಸೇರಿಸಬೇಡಿ.   ಮಕ್ಕಳೇ ನನ್ನ ಕಳಕಳಿಯ ಮನವಿ. ವನಜ ಮಹಾಲಿಂಗಯ್ಯ

ವನಜ ಮಹಾಲಿಂಗಯ್ಯ “ಮಕ್ಕಳಿಗೊಂದಷ್ಟು ಮಾತುಗಳು” Read Post »

ಇತರೆ, ಜೀವನ

“ಮನಸ್ಥಿತಿ ಬದಲಾದರೆ- ಪರಿಸ್ಥಿತಿ ಬದಲಾದೀತು” ಡಾ.ಸುಮತಿ ಪಿ. ಅವರ ವಿಶೇಷ ಲೇಖನ

ಮನೋಸಂಗಾತಿ ಡಾ.ಸುಮತಿ ಪಿ. “ಮನಸ್ಥಿತಿ ಬದಲಾದರೆ- ಪರಿಸ್ಥಿತಿ ಬದಲಾದೀತು” ಮನಸ್ಸು ಎಂಬುದು ಬಹಳ ಸೂಕ್ಷ್ಮವಾದದ್ದು, ಅದೊಂದು ವಿಶಿಷ್ಟವಾದ ಶಕ್ತಿ.ಮನಸ್ಸು ಬಹಳ ವೇಗವಾಗಿ ಸಂಚರಿಸುವ ಶಕ್ತಿಯಾಗಿದ್ದು, ಅದರ ಹಿಡಿತವನ್ನು ಸಾಧಿಸುವುದು  ಬಹಳ ಕಷ್ಟವಾಗುವುದು. ಮನಸ್ಸನ್ನು ಕೆಲವೊಮ್ಮೆ ಭಾವನೆಗಳ ಕೈಗೆ ಕೊಟ್ಟು, ಏನೇನೋ ಅನಾಹುತಗಳು ಆಗುವುದುಂಟು. ಮನಸ್ಸಿನ ಹಿಡಿತವಿದ್ದರೆ ಮಾತ್ರ ಮನಸ್ಸು ವಿಷಯವನ್ನು ಗ್ರಹಿಸಲು,ಅದಕ್ಕೆ ಪ್ರತಿಕ್ರಿಯಿಸಲು ಮತ್ತು ವಿಚಾರ ಮಾಡಲು ಸಹಾಯ ಮಾಡುತ್ತದೆ. ಎಲ್ಲಕ್ಕಿಂತಲೂ ವೇಗವಾಗಿ ಚಲಿಸುವ ಮನಸ್ಸು ನಮ್ಮ ಆಲೋಚನೆಗಳು, ಕನಸುಗಳು ಮತ್ತು ಅನಿಸಿಕೆಗಳ ಸಂಕೀರ್ಣ ಪ್ರಕ್ರಿಯೆ.ಮನಸ್ಸಿನ ಏಕಾಗ್ರತೆ, ತಾಳ್ಮೆ ಮತ್ತು ಉದಾತ್ತತೆಯಿಂದ ಮನಸ್ಸನ್ನು ನಿಯಂತ್ರಿಸುವುದರಿಂದ ವ್ಯಕ್ತಿಯೊಬ್ಬನ ಜೀವನದ ಯಶಸ್ಸಿಗೆ ಅದು ಕಾರಣವಾಗುತ್ತದೆ. ಮನಸ್ಸನ್ನು ಸರಿಯಾದ ಮಾರ್ಗದಲ್ಲಿ ನಿರ್ದೇಶಿಸಿದರೆ ಅದು ಜೀವನವನ್ನು ಅದ್ಭುತವಾಗಿಸಬಲ್ಲದು.ಸ್ಥಿರ ಮನಸ್ಥಿತಿ ಹೊಂದಿರುವವರು ಬದಲಾವಣೆಗೆ, ಬದಲಾವಣೆಯಿಂದ ಬೆಳವಣಿಗೆಯ ಮನಸ್ಥಿತಿಗೆ  ಪರಿವರ್ತನೆಗೊಳ್ಳಬೇಕಾಗುತ್ತದೆ. ಮನಸ್ಥಿತಿಯನ್ನು ಬದಲಾಯಿಸುವುದು ಕಷ್ಟ ಎಂಬುದನ್ನು ಒಪ್ಪಿಕೊಂಡರೂ, ನಾವು ಮನಸ್ಸು ಬದಲಾಯಿಸುವುದರಿಂದ ಇನ್ನೊಬ್ಬರಿಗೆ ಒಳಿತಾಗುತ್ತದೆ, ಎನ್ನುವುದಾದರೆ ನಾವು ಮನಸ್ಸು ಬದಲಾಯಿಸಿದರೆ ಪರಿಸ್ಥಿತಿ ಬದಲಾಗಬಹುದು.ಅಂತಹ ಸಂದರ್ಭದಲ್ಲಿ ಮನಸ್ಸು ಬದಲಾಯಿಸುವುದು  ಯೋಗ್ಯವಾಗಿದೆ,ಅನಿವಾರ್ಯವಾಗಿದೆ. ಕೆಲವೊಂದು ಸಂದರ್ಭದಲ್ಲಿ ಬದುಕಿನಲ್ಲಿ ಸ್ಥಿರಮನಸ್ಸಿನಿಂದಾಗಿ ಎಂತೆಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುತ್ತದೆ. ಕೆಲವೊಮ್ಮೆ ಸ್ಥಿರ ಮನಸ್ಸಿನಿಂದ ಒಳಿತಾಗುವುದೂ ಇದೆ.ಮನಸ್ಸು ಬದಲಾಯಿಸುವುದು  ನಮಗೆ ಕಷ್ಟ ಎನಿಸಬಹುದು. ಪರಿಸ್ಥಿತಿ ಯಾವಾಗ ನಮಗೆ ಕಷ್ಟವೆಸಿಸುತ್ತದೆಂದರೆ ನಮ್ಮ ಮನಸ್ಸು ಅದನ್ನು ಸ್ವೀಕರಿಸದಾಗ, ಅಥವಾ ಅದನ್ನು ಒಪ್ಪಿಕೊಳ್ಳದೆ ಇದ್ದಾಗ. ಹಾಗಾಗಿ ಕೆಲವೊಮ್ಮೆ ಇದ್ದ ಪರಿಸ್ಥಿತಿಯಲ್ಲಿ ಬದಲಾವಣೆಗಳು ಉಂಟಾದಾಗ ನಮಗೆ ಅದನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ನಾವು ಒಂದು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡಿರುತ್ತೇವೆ. ಹಾಗಾಗಿ ಬದಲಾವಣೆಗಳು ಉಂಟಾದಲ್ಲಿ ಮನಸ್ಸನ್ನು ತಕ್ಷಣ ಬದಲಾವಣೆ ಮಾಡುವುದು ಕಷ್ಟ ಸಾಧ್ಯ. ಆದರೆ ನಿಧಾನವಾಗಿ ನಾವು ಅದಕ್ಕೆ ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾದಾಗ,  ಒಪ್ಪಿಕೊಳ್ಳುತ್ತೇವೆ. ಹಾಗಾದರೆ ಮೊದಲು ಕಷ್ಟವೆನಿಸಿದ ಅದೇ ಪರಿಸ್ಥಿತಿ ಮತ್ತೆ ಸುಲಭವಾಗಲು ಹೇಗೆ ಸಾಧ್ಯ.? ಇಲ್ಲಿ ಇರುವುದು ವಿಚಾರ ಇಷ್ಟೆ. ಯಾವಾಗ ನಾವು ಪರಿಸ್ಥಿತಿಗೆ ಅನಿವಾರ್ಯವಾಗಿ ಹೊಂದಿಕೊಳ್ಳಲೇಬೇಕಾದ ಸಂದರ್ಭ ಬರುತ್ತದೋ ಆವಾಗ ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುತ್ತೇವೆ ಅಂದರೆ  ಬದಲಾವಣೆಯನ್ನು ಮನಸ್ಸು ಸ್ವೀಕರಿಸಲು ಒಪ್ಪುತ್ತದೆ. ಇಲ್ಲಿ ಕಷ್ಟದ ಪರಿಸ್ಥಿತಿ ನಮ್ಮ ಹೊಂದಾಣಿಕೆ ಇದ್ದಾಗ ಸುಲಭವಾಗಲು ಸಾಧ್ಯವಿದೆ. ಆದರೆ ಬುದ್ಧಿವಂತ ಜೀವಿಯಾದ ಮನುಷ್ಯರಲ್ಲಿ ತನ್ನ ಮನಸ್ಥಿತಿಯನ್ನು ಬದಲಾಯಿಸುವಂತಹವರು ಇರುವುದು ಬಹಳ ಅಪರೂಪ. ಹೀಗಾಗಿಯೇ ಪರಸ್ಪರರಲ್ಲಿ ಸಿಟ್ಟು, ಕೋಪ,ದ್ವೇಷ, ರೋಷ , ಅಸೂಯೆ  ಮೂಡಿ ಬರುವುದು. ಮನುಷ್ಯ ಸಂಘಜೀವಿಯಾದ ಕಾರಣ ಸಾಮಾಜಿಕ ಜೀವನದಲ್ಲಿ, ಸಮಷ್ಟಿಯ ಒಳಿತಿನ ದೃಷ್ಟಿಯಿಂದ ನೋಡಬೇಕಾಗುತ್ತದೆ. ಸಮಾಜದ ಕೆಟ್ಟತನಕ್ಕೆ ಅಥವಾ ದುರ್ನನಡತೆಗೆ ತನ್ನ ಮನಸ್ಥಿತಿ ಕಾರಣವಾಗಬಾರದು ಎಂಬ ಎಚ್ಚರಿಕೆ ಮನುಷ್ಯನಲ್ಲಿ ಇರಬೇಕಾಗುತ್ತದೆ. ಪ್ರಪಂಚದಲ್ಲಿ ನಡೆಯುವ ಎಲ್ಲಾ ಕೆಟ್ಟ ಪರಿಸ್ಥಿತಿಗೂ ಮನುಷ್ಯನ ಮನಸ್ಥಿತಿಯೇ ಕಾರಣ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಮನುಷ್ಯ ತನ್ನ ಮನೆಯಲ್ಲಿ, ಸಮುದಾಯದಲ್ಲಿ, ಸಮಾಜದಲ್ಲಿ ಸಾಮರಸ್ಯದಿಂದ ಬದುಕಬೇಕಾದರೆ ಸಾಮಾಜಿಕ ಮನಸ್ಥಿತಿಯನ್ನು ಅರಿತು, ಅದರಂತೆ ನನ್ನ ಮನಸ್ಸನ್ನು ಬದಲಾಯಿಸಿದರೆ ಪರಿಸ್ಥಿತಿ ಬದಲಾಗಿ ಸಮಾಜ ಸುಸ್ಥಿತಿಯಲ್ಲಿ ನಡೆಯಬಹುದು. ‘ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗತ್ತದೆ’ ಎಂಬುದಕ್ಕೆ ಒಂದು ಸರಳ ಉದಾಹರಣೆಯನ್ನು ಕೊಡುವುದಾದರೆ ಒಂದು ಕುಟುಂಬದಲ್ಲಿನ ಹೆಣ್ಣು ಮಗಳು ಅಂತರ್ಜಾತಿಯ ಹುಡುಗನನ್ನು ಪ್ರೀತಿಸಿ ಮದುವೆಯಾಗಬೇಕೆನ್ನುವಾಗ, ಅವಳ ಮನೆಯವರ ಮನಸ್ಥಿತಿ ಅದಕ್ಕೆ ಒಪ್ಪದೇ ಇರಬಹುದು. ಏಕೆಂದರೆ ಸಮಾಜ ತಮ್ಮನ್ನು ಬೇರೆ ದೃಷ್ಟಿಕೋನದಿಂದ ನೋಡಬಹುದು, ನಮ್ಮನ್ನು ಹೊರಗೆ ಇಡಬಹುದು, ಬೇರೆ ಜಾತಿಯ ಸಂಸ್ಕೃತಿ ,ಸಂಸ್ಕಾರಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಬಹುದು ಎಂಬಿತ್ಯಾದಿ ಕಾರಣಗಳಿಂದ ಅಂತರ್ಜಾತಿಯ ವಿವಾಹಕ್ಕೆ ಹೆತ್ತವರ ಮನಸ್ಸು ಒಪ್ಪದಿರಬಹುದು. ಅದೇ ರೀತಿಯಲ್ಲಿ ಪ್ರೀತಿಸಿದ ಹೆಣ್ಣು- ಗಂಡು ಒಬ್ಬರನ್ನೊಬ್ಬರು ಬಿಟ್ಟು ದೂರವಾಗಲು ಅವರ ಮನಸ್ಸೂ ಒಪ್ಪದಿರಬಹುದು. ಈ ಸಂದಿಗ್ಧ ಸನ್ನಿವೇಶದಲ್ಲಿ ಕುಟುಂಬದ ಪರಿಸ್ಥಿತಿ ಬೀಗಡಾಯಿಸುತ್ತದೆ. ಆಗ ಒಂದೇ ಪ್ರೀತಿಸಿದವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ವಿಷಯವನ್ನು ಬಗೆಹರಿಸಬಹುದು ಅಥವಾ ತಂದೆ ತಾಯಿಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸಿ ಅಂತರ್ಜಾತೀಯ ವಿವಾಹ ಮಾಡಿಕೊಡಲು ಒಪ್ಪಿಗೆ ನೀಡಬಹುದು. ಆಗ ಅಲ್ಲಿ ಬಿಗಡಾಯಿಸಿದಂತಹ ಪರಿಸ್ಥಿತಿ, ಶಾಂತವಾಗಿ ಎಲ್ಲವೂ ಸುಖಾಂತ್ಯವಾಗಬಹುದು. ಇದು ಒಂದು ಉದಾಹರಣೆ. ಹೀಗೆ ಮನಸ್ಥಿತಿ ಬದಲಾದರೆ ಪರಿಸ್ಥಿತಿಯು ಬದಲಾಗಬಹುದು ಎಂಬುದಕ್ಕೆ ನಮ್ಮ ದಿನನಿತ್ಯದ ಜೀವನದಿಂದ ಹಲವಾರು ರೀತಿಯ ಘಟನೆಗಳನ್ನು ಇಲ್ಲಿ ಉಲ್ಲೇಖ ಮಾಡಬಹುದು. ಆದರೆ ನಮ್ಮ ಸಮಾಜದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ಜನರ ಸ್ಥಿರ ಮನಸ್ಥಿತಿಯಿಂದಾಗಿ ಉಂಟಾಗುವ ಕೆಡುಕುಗಳ ಬಗ್ಗೆ  ಆಲೋಚನೆಯನ್ನೇ ಮಾಡುವುದಿಲ್ಲ. ಎಲ್ಲರಿಗೂ ಅವರವರ ,*ಈಗೊ* ಮುಖ್ಯವಾಗುವುದನ್ನು ನಾವು ಗಮನಿಸಿದ್ದೇವೆ.ಆದರೆ ಮನುಷ್ಯ ತನ್ನ ಪರಿಸ್ಥಿತಿಯನ್ನು ಬದಲಾಯಿಸಲು, ತಾನು ಪರಿಸ್ಥಿತಿಯನ್ನು ದೂಷಿಸದೆ, ತನ್ನ ಮನಸ್ಸನ್ನು ಮೊದಲು ಬದಲಾಯಿಸಿಕೊಳ್ಳಬೇಕಾದದ್ದು ಅನಿವಾರ್ಯ .ಸಂಕಷ್ಟ ಕಾಲದಲ್ಲಿ ಬದಲಾವಣೆಗಾಗಿ ತಮ್ಮಮನಸ್ಥಿತಿಯನ್ನೇ  ಬದಲಾಯಿಸಿ ಪರಿಸ್ಥಿತಿಯನ್ನು ಬದಲಾಯಿಸಲು ಅಥವಾ ಎದುರಿಸಲು ಸಾಧ್ಯವಿದೆ. ಜೀವನದ ಯಾವುದೇ ಪರಿಸ್ಥಿತಿಯನ್ನು ಜಯಿಸಲು ನಾವು ನಮ್ಮೊಳಗಿನ ಶಕ್ತಿಯನ್ನು ಕಂಡುಕೊಳ್ಳಬೇಕು. ಇದು ನಮ್ಮ ಮನೋಭಾವವನ್ನು ಬದಲಾಯಿಸುವ ಮೂಲಕ ಮಾತ್ರ ಸಾಧ್ಯ. ಇಲ್ಲದಿದ್ದರೆ, ಸನ್ನಿವೇಶಗಳನ್ನು ದೂಷಿಸುವುದರಿಂದ, ಅಥವಾ ಅವು ಬದಲಾಗದ ಕಾರಣ ಹತಾಶರಾಗುವುದರಿಂದ, ಜೀವನವನ್ನು ವ್ಯರ್ಥಗೊಳಿಸುತ್ತೇವೆ. ಹಾಗಂತ ಎಲ್ಲಾ ರೀತಿಯ ಪರಿಸ್ಥಿತಿಯ ಬದಲಾವಣೆಗೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಬೇಕೆಂದರ್ಥವಲ್ಲ. ಇನ್ನೊಬ್ಬರಿಗೆ ಒಳಿತಾಗುವುದಾದರೆ, ನಮ್ಮ ಮನಸ್ಥಿತಿಯನ್ನು ಬದಲಾಯಿಸುವುದರಿಂದ ಸಾಮೂಹಿಕ ಅಥವಾ ಸಮಾಜಕ್ಕೆ ಹಿತವಾಗುವುದಾದರೆ ನಾವೇಕೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಬಾರದು? ಕೆಲವೊಮ್ಮೆ ಕೆಲವೊಂದು ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವೇ ಇಲ್ಲದಂತಹ ಸಂದರ್ಭಗಳು ಬರಬಹುದು. ಅಂದರೆ ಪರಿಸ್ಥಿತಿ ನಮ್ಮ ಮನಸ್ಥಿತಿಯನ್ನು ಬದಲಾಯಿಸಿ ನಾವು ಅದಕ್ಕೆ ಒಗ್ಗಿಕೊಂಡರೂ ಒಳಿತಾಗುವ ಬದಲು ಕೆಡುಕೇ ಉಂಟಾಗುವುದಾದರೆ, ನಮ್ಮ ಮನಸ್ಥಿತಿಯನ್ನು ನಾವು ಏಕೆ ಬದಲಾಯಿಸಬೇಕು. ಅಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗಾದರೂ ಮಾಡಿ ಸಮಾಜದ ಹಿತಕ್ಕಾಗಿ ಬದಲಾಯಿಸಲು ನೋಡಬೇಕು. ಇಲ್ಲದಿದ್ದಲ್ಲಿ ಅಂತಹ ಪರಿಸ್ಥಿತಿಯಲ್ಲಿ ನಾವು ಸಿಲುಕದೆ ಅದರಿಂದ ಹೊರಗೆ ಬರಬೇಕು. ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗುತ್ತದೆ- ಎಂಬುದಕ್ಕೆ ಈಗ ನಾನು ನೀಡುವ ಅರ್ಥ ನಿಮಗಾಗಿರಬಹುದು ಎಂದು ಭಾವಿಸುತ್ತೇನೆ. ಇಲ್ಲಿ ನಮ್ಮ ಮನಸ್ಥಿತಿ ಬದಲಾಯಿಸುವುದೆಂದರೆ, ನಮ್ಮ ‘ಅಹಂ’ ಅಥವಾ ‘ಇಗೊ’ ವನ್ನು ಇಟ್ಟುಕೊಳ್ಳದೆ, ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥೈಸಿಕೊಂಡು ಸಮಾಜದ ಹಿತದೃಷ್ಟಿಯಿಂದ ಹೊಂದಿಕೊಂಡು ಹೋಗುವುದು ಎಂದರ್ಥ. ಎಲ್ಲಿ ಸಮಾಜದಲ್ಲಿ ನಡೆಯುವ ಕೆಡುಕಿಗೆ ಅಥವಾ ಕೆಟ್ಟ ಪರಿಸ್ಥಿತಿಗೆ ನಮ್ಮ ಮನಸ್ಸು ಕಾರಣವಾಗುತ್ತದೊ ಅಂತಲ್ಲಿ ನಾವು ನಮ್ಮ ಮನಸ್ಸನ್ನು ಬದಲಾಯಿಸಿದರೆ, ಪರಿಸ್ಥಿತಿ ಸುಧಾರುತ್ತದೆ. ಹಾಗಾಗಿ ಕಷ್ಟದ ಪರಿಸ್ಥಿತಿಗೆ  ನಮ್ಮ ಮನಸ್ಸು ಅಥವಾ ಮನೋಭಾವ ಕಾರಣವಾಗುತ್ತದೆ ಎಂದಾದರೆ ನಾವು ಬದಲಾಗಬೇಕು.ಅದು ಅನಿವಾರ್ಯ ಕೂಡ.ನಮ್ಮ ಮನೋಭಾವವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ,ನಾವು ಯಾವುದೇ ಪರಿಸ್ಥಿತಿಯನ್ನು ನಗುಮುಖದಿಂದ ಎದುರಿಸಬಹುದು.  ಮನುಷ್ಯನಾದವನು ತನ್ನ ಬದುಕಿನಲ್ಲಿ ಎದುರಾದ ಸಂಕಷ್ಟದ ಪರಿಸ್ಥಿತಿಯನ್ನರಿತು, ಅದರಿಂದ ಸಮಸ್ಯೆ ಬಗೆಹರಿದು, ಒಳಿತಾಗುವುದಾದರೆ ತನ್ನ  ಮನಸ್ಥಿತಿ ಬದಲಾಯಿಸಿಕೊಂಡು ಸಾಧನೆಯ ಪಥದಲ್ಲಿ ಮುನ್ನಡೆಯಬೇಕು. ಆಗಲೇ ಅತ್ಯುತ್ತಮವಾದುದನ್ನು ಸಾಧಿಸಬಹುದು. ಡಾ.ಸುಮತಿ ಪಿ

“ಮನಸ್ಥಿತಿ ಬದಲಾದರೆ- ಪರಿಸ್ಥಿತಿ ಬದಲಾದೀತು” ಡಾ.ಸುಮತಿ ಪಿ. ಅವರ ವಿಶೇಷ ಲೇಖನ Read Post »

ಇತರೆ, ಪರಿಸರ

“ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು”(ಭೂತಾಯಿಯ ಮನದಾಳದ ಮಾತು)ಪೃಥ್ವಿರಾಜ್ ಟಿ ಬಿ

ಪರಿಸರ ಸಂಗಾತಿ ಪೃಥ್ವಿರಾಜ್ ಟಿ ಬಿ “ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು” (ಭೂತಾಯಿಯ ಮನದಾಳದ ಮಾತು) “ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು”(ಭೂತಾಯಿಯ ಮನದಾಳದ ಮಾತು)ಮಾನವನ ಇತಿಹಾಸವನ್ನು ನಾವು ಓದಿದಾಗ, ಒಂದು ನೋವು ತುಂಬಿದ ಸತ್ಯ ನಮ್ಮ ಮುಂದೆ ಬರುತ್ತದೆ—ಅದು ಯುದ್ಧ. ಯುದ್ಧಗಳು ಕಾಲಕಾಲಕ್ಕೆ ರೂಪ ಬದಲಿಸಿಕೊಂಡರೂ, ಅದರ ಮೂಲ ಕಾರಣ ಒಂದೇ: ಸ್ವಾರ್ಥ, ಅಧಿಕಾರದ ಆಸೆ, ಸಂಪನ್ಮೂಲಗಳ ಮೇಲಿನ ಹಕ್ಕು. ಆದರೆ ಈ ಎಲ್ಲದಕ್ಕೂ ಮೌನ ಸಾಕ್ಷಿಯಾಗಿರುವಳು ಭೂತಾಯಿ. ಮಾನವನು ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಅದೇ ಪ್ರಯತ್ನದಲ್ಲಿ ಭೂತಾಯಿಯನ್ನೇ ಗಾಯಗೊಳಿಸುತ್ತಿರುವುದು ಅತ್ಯಂತ ದುಃಖದ ಸಂಗತಿ. “ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು” ಎಂಬ ಮಾತು ಭೂತಾಯಿಯ ಮನದಾಳದ ಕಿರುಚಾಟ. ಇದು ಕೇವಲ ಕಾವ್ಯಾತ್ಮಕ ವಾಕ್ಯವಲ್ಲ; ಇಂದಿನ ಜಗತ್ತಿನ ವಾಸ್ತವಿಕ ಚಿತ್ರಣ. ಯುದ್ಧಗಳ ಮೂಲ ಕಾರಣಗಳು ದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳಿಗೆ ಹಲವಾರು ಕಾರಣಗಳಿವೆ. ಭೂಮಿಯ ಮೇಲಿನ ಹಕ್ಕು, ಖನಿಜ ಸಂಪನ್ಮೂಲಗಳ ಮೇಲಿನ ಹಿಡಿತ, ನೀರಿನ ಕೊರತೆ, ರಾಜಕೀಯ ಪ್ರಭಾವ—ಇವೆಲ್ಲವೂ ಯುದ್ಧಗಳಿಗೆ ಕಾರಣವಾಗುತ್ತವೆ. ಉದಾಹರಣೆಗೆ, ತೈಲ ಸಂಪತ್ತುಳ್ಳ ಪ್ರದೇಶಗಳಲ್ಲಿ ಯುದ್ಧಗಳು ಹೆಚ್ಚಾಗಿ ನಡೆಯುತ್ತವೆ. ಏಕೆಂದರೆ ಆ ಸಂಪತ್ತು ಆರ್ಥಿಕ ಶಕ್ತಿಯನ್ನು ನಿರ್ಧರಿಸುತ್ತದೆ. ಆದರೆ ಪ್ರಶ್ನೆ ಏನೆಂದರೆ: ಈ ಸಂಪತ್ತಿನಿಗಾಗಿ ಯುದ್ಧ ಮಾಡುತ್ತಿರುವವರು ಯಾರ ಮೇಲೆ ಯುದ್ಧ ಮಾಡುತ್ತಿದ್ದಾರೆ? ಉತ್ತರ ಸರಳ—ಅದೇ ಭೂಮಿಯ ಮೇಲೆ. ಅವರು ಪಡೆಯಲು ಬಯಸುತ್ತಿರುವುದು ಭೂಮಿಯ ಸಂಪತ್ತು; ಆದರೆ ಅದನ್ನೇ ಪಡೆಯಲು ಭೂಮಿಯನ್ನೇ ಹಾಳು ಮಾಡುತ್ತಿದ್ದಾರೆ. ಭೂತಾಯಿಯ ನೋವು ಯುದ್ಧವೆಂದರೆ ಕೇವಲ ಮನುಷ್ಯರ ನಾಶವಲ್ಲ. ಅದು ಪರಿಸರದ ನಾಶ. ಬಾಂಬ್ ಸ್ಫೋಟಗಳು, ರಾಸಾಯನಿಕ ದಾಳಿಗಳು, ಅಣ್ವಸ್ತ್ರಗಳ ಬಳಕೆ—ಇವುಗಳ ಪರಿಣಾಮವಾಗಿ ಮಣ್ಣು ವಿಷಕಾರಿ ಆಗುತ್ತದೆ, ನೀರು ಮಾಲಿನ್ಯಗೊಳ್ಳುತ್ತದೆ, ಗಾಳಿ ಕಲುಷಿತವಾಗುತ್ತದೆ. ಹಿರೋಷಿಮಾ ಮತ್ತು ನಾಗಾಸಾಕಿ ಮೇಲೆ ನಡೆದ ಅಣುಬಾಂಬ್ ದಾಳಿಗಳ ಪರಿಣಾಮವಾಗಿ, ದಶಕಗಳವರೆಗೆ ಆ ಪ್ರದೇಶದಲ್ಲಿ ಜನರು ರೋಗಗಳಿಂದ ಬಳಲಿದರು. ಇದು ಕೇವಲ ಮಾನವೀಯ ನಷ್ಟವಲ್ಲ, ಪರಿಸರದ ಮೇಲಿನ ದೀರ್ಘಕಾಲದ ಪರಿಣಾಮವೂ ಆಗಿದೆ. ಯುದ್ಧ ನಡೆಯುವ ಪ್ರದೇಶಗಳಲ್ಲಿ ಅರಣ್ಯಗಳು ನಾಶವಾಗುತ್ತವೆ. ಮರಗಳು ಕಡಿದುಹಾಕಲ್ಪಡುತ್ತವೆ. ಪ್ರಾಣಿಗಳು ತಮ್ಮ ವಾಸಸ್ಥಾನ ಕಳೆದುಕೊಳ್ಳುತ್ತವೆ. ನದಿಗಳು ರಕ್ತದಿಂದ ಮತ್ತು ರಾಸಾಯನಿಕಗಳಿಂದ ಕಲುಷಿತವಾಗುತ್ತವೆ. ಇದು ಭೂತಾಯಿಯ ಹೃದಯಕ್ಕೆ ಬಿದ್ದ ಗಾಯಗಳಂತೆ. ಆಧುನಿಕ ಯುದ್ಧಗಳ ಭಯಾನಕತೆ ಇಂದಿನ ಯುದ್ಧಗಳು ತಂತ್ರಜ್ಞಾನದಿಂದ ತುಂಬಿವೆ. ಡ್ರೋನ್ ದಾಳಿಗಳು, ಕ್ಷಿಪಣಿಗಳು, ಸೈಬರ್ ಯುದ್ಧ—ಇವು ಎಲ್ಲವೂ ಆಧುನಿಕ ಯುದ್ಧದ ಭಾಗ. ಆದರೆ ಇದರ ಪರಿಣಾಮ ಇನ್ನೂ ಭೀಕರವಾಗಿದೆ. ಅಣ್ವಸ್ತ್ರಗಳು ಮಾನವಕುಲಕ್ಕೆ ಅತಿ ದೊಡ್ಡ ಅಪಾಯ. ಒಂದು ಅಣುಬಾಂಬ್ ಸ್ಫೋಟವೇ ಲಕ್ಷಾಂತರ ಜೀವಗಳನ್ನು ಕ್ಷಣಾರ್ಧದಲ್ಲಿ ನಾಶಮಾಡಬಹುದು. ಅದರ ಪರಿಣಾಮವಾಗಿ ಭೂಮಿಯ ಮೇಲೆ ದೀರ್ಘಕಾಲದ ವಿಕಿರಣ ಉಂಟಾಗುತ್ತದೆ. ಇದರಿಂದ ಭೂತಾಯಿ ಪ್ರಶ್ನಿಸುತ್ತಾಳೆ: “ನೀವು ನನ್ನನ್ನು ಉಳಿಸಬೇಕೆಂದು ಹೇಳುತ್ತೀರಿ, ಆದರೆ ನನ್ನನ್ನೇ ನಾಶ ಮಾಡುತ್ತಿರುವಿರಿ. ಇದು ಯಾವ ನ್ಯಾಯ?” ಮಾನವನ ಸ್ವಾರ್ಥ ಮಾನವನು ತನ್ನ ಸೌಲಭ್ಯಕ್ಕಾಗಿ ಎಲ್ಲವನ್ನೂ ತ್ಯಜಿಸಲು ಸಿದ್ಧನಾಗಿದ್ದಾನೆ. ಆದರೆ ಈ ಸೌಲಭ್ಯಗಳು ಯಾವ ಬೆಲೆಗೆ ಬರುತ್ತಿವೆ? ಯುದ್ಧಗಳ ಮೂಲಕ ಸಿಕ್ಕ ಸಂಪತ್ತು ತಾತ್ಕಾಲಿಕ. ಆದರೆ ಅದರ ಪರಿಣಾಮ ಶಾಶ್ವತ. ಯುದ್ಧಗಳಿಂದ ದೇಶಗಳು ಆರ್ಥಿಕವಾಗಿ ಹಿನ್ನಡೆಯಾಗುತ್ತವೆ. ಜನರು ಮನೆ ಕಳೆದುಕೊಳ್ಳುತ್ತಾರೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಆದರೆ ಇದಕ್ಕಿಂತಲೂ ದೊಡ್ಡ ನಷ್ಟವೆಂದರೆ, ಮಾನವೀಯತೆ ಕಳೆದುಹೋಗುವುದು. ಯುದ್ಧದಲ್ಲಿ ಗೆದ್ದವರು ಯಾರು? ಸೋತವರು ಯಾರು? ಕೊನೆಗೆ ನೋವು ಅನುಭವಿಸುವವರು ಎಲ್ಲರೂ. ಭೂತಾಯಿಯ ಕಿರುಚಾಟ ಭೂತಾಯಿ ಮೌನವಾಗಿದ್ದರೂ, ಅವಳ ನೋವು ಸ್ಪಷ್ಟವಾಗಿ ಕಾಣಿಸುತ್ತದೆ. ಹವಾಮಾನ ಬದಲಾವಣೆ, ಗ್ಲೋಬಲ್ ವಾರ್ಮಿಂಗ್, ಪ್ರಕೃತಿ ವಿಕೋಪಗಳು—ಇವೆಲ್ಲವೂ ಭೂತಾಯಿಯ ಪ್ರತಿಕ್ರಿಯೆಗಳು. ಯುದ್ಧಗಳು ಈ ಸಮಸ್ಯೆಗಳನ್ನು ಇನ್ನಷ್ಟು ಗಂಭೀರವಾಗಿಸುತ್ತವೆ. ಕಾರ್ಬನ್ ಉತ್ಸರ್ಗ ಹೆಚ್ಚಾಗುತ್ತದೆ. ಪರಿಸರ ಸಮತೋಲನ ಹಾಳಾಗುತ್ತದೆ. ಭೂತಾಯಿ ಕೇಳುತ್ತಾಳೆ: “ನಾನು ನಿಮ್ಮ ಮನೆ. ನೀವು ನನ್ನನ್ನು ಏಕೆ ಹಾಳು ಮಾಡುತ್ತಿದ್ದೀರಿ?” ಶಾಂತಿಯ ಅಗತ್ಯತೆ ಈ ಎಲ್ಲ ಸಮಸ್ಯೆಗಳ ಪರಿಹಾರ ಒಂದೇ—ಶಾಂತಿ. ಯುದ್ಧವು ಯಾವ ಸಮಸ್ಯೆಯಿಗೂ ಶಾಶ್ವತ ಪರಿಹಾರ ನೀಡುವುದಿಲ್ಲ. ಸಂವಾದ, ಸಹಕಾರ, ಪರಸ್ಪರ ಗೌರವ—ಇವುಗಳ ಮೂಲಕ ಮಾತ್ರ ಸಮಸ್ಯೆಗಳನ್ನು ಪರಿಹರಿಸಬಹುದು. ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಪರಿಹರಿಸಬೇಕು. ಅಂತರರಾಷ್ಟ್ರೀಯ ಸಂಸ್ಥೆಗಳು ಶಾಂತಿ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಬೇಕು. ಶಿಕ್ಷಣವು ಕೂಡ ಮಹತ್ವದ ಪಾತ್ರವಹಿಸುತ್ತದೆ. ಜನರಲ್ಲಿ ಶಾಂತಿ, ಸಹಾನುಭೂತಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಬೇಕು. ಭವಿಷ್ಯದ ಜವಾಬ್ದಾರಿ ಭವಿಷ್ಯ ನಮ್ಮ ಕೈಯಲ್ಲಿದೆ. ನಾವು ಯಾವ ರೀತಿಯ ಜಗತ್ತನ್ನು ಬಯಸುತ್ತೇವೆ? ಯುದ್ಧಗಳಿಂದ ತುಂಬಿದ ಜಗತ್ತಾ, ಅಥವಾ ಶಾಂತಿಯಿಂದ ಕೂಡಿದ ಜಗತ್ತಾ? ಪ್ರತಿ ವ್ಯಕ್ತಿಯೂ ತನ್ನ ಮಟ್ಟದಲ್ಲಿ ಪ್ರಯತ್ನ ಮಾಡಬೇಕು. ಪರಿಸರವನ್ನು ಕಾಪಾಡಬೇಕು. ಯುದ್ಧದ ವಿರುದ್ಧ ಧ್ವನಿ ಎತ್ತಬೇಕು. ಶಾಂತಿಯ ಪರವಾಗಿ ನಿಲ್ಲಬೇಕು. ಸಮಾರೋಪ “ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು” ಎಂಬ ಭೂತಾಯಿಯ ಮಾತು ನಮ್ಮೆಲ್ಲರಿಗೂ ಎಚ್ಚರಿಕೆಯ ಘಂಟೆ. ನಾವು ನಮ್ಮ ತಪ್ಪುಗಳನ್ನು ಅರಿತುಕೊಳ್ಳಬೇಕು. ಯುದ್ಧಗಳ ಮೂಲಕ ನಾವು ಯಾವುದನ್ನೂ ಪಡೆಯುವುದಿಲ್ಲ; ನಾವು ಕಳೆದುಕೊಳ್ಳುವುದೇ ಹೆಚ್ಚು. ಭೂತಾಯಿಯನ್ನು ಉಳಿಸುವುದು ನಮ್ಮ ಜವಾಬ್ದಾರಿ. ನಾವು ಅವಳನ್ನು ರಕ್ಷಿಸಿದರೆ, ಅವಳು ನಮ್ಮನ್ನು ರಕ್ಷಿಸುತ್ತಾಳೆ. ಆದುದರಿಂದ, ಶಾಂತಿಯನ್ನು ಆರಿಸೋಣ. ಮಾನವೀಯತೆಯನ್ನು ಉಳಿಸೋಣ. ಭೂತಾಯಿಯ ಕಿರುಚಾಟವನ್ನು ಕೇಳೋಣ—ಮತ್ತು ಅದಕ್ಕೆ ಸ್ಪಂದಿಸೋಣ. ಇದು ಕೇವಲ ಲೇಖನವಲ್ಲ; ಇದು ಒಂದು ಕರೆ—ಬದುಕನ್ನು ಉಳಿಸುವ ಕರೆ. ಪೃಥ್ವಿರಾಜ್ ಟಿ ಬಿ

“ನನ್ನ ಪಡೆಯಲು, ನನ್ನನ್ನೇ ಕೊಲ್ಲುತ್ತಿರುವರು”(ಭೂತಾಯಿಯ ಮನದಾಳದ ಮಾತು)ಪೃಥ್ವಿರಾಜ್ ಟಿ ಬಿ Read Post »

ಇತರೆ

“ಡಾ.ಹೇಮಾ ಪಟ್ಟಣಶೆಟ್ಟಿಯವರಿಗೆ ಒಲಿದು ಬಂದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ” ಸುಭಾಷ್ ಹೇಮಣ್ಣಾ ಚವ್ಹಾಣ

ಸಾಹಿತಿ ಸಂಗಾತಿ “ಡಾ.ಹೇಮಾ ಪಟ್ಟಣಶೆಟ್ಟಿಯವರಿಗೆ ಒಲಿದು ಬಂದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ” ಸಮಾಜ ಮುಖಿ ಸಂವೇದನಾಶೀಲ ಲೇಖಕಿ ಡಾ. ಹೇಮಾ ಸಿ. ಪಟ್ಟಣಶೆಟ್ಟಿಯವರಿಗೆ ಧಾರವಾಡ ಕನ್ನಡ ಸಾಹಿತ್ಯ ಸಮ್ಮೇಳನದ ಸಾರಥ್ಯ (ಕೌಟುಂಬಿಕ ಜನತಾ ನ್ಯಾಯಾಲಯದ ಪ್ರಥಮ ಆಯೋಜಕಿ, ಸಾಹಿತ್ಯ ಮತ್ತು ಸಂಘಟನೆಯ ರಾಯಭಾರಿ, ಉತ್ತರ ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆಯಾದಿಯಾಗಿ ಬಹುಶೃತ ಕಾರ್ಯಫಲದಾತೆ, ಅನನ್ಯ ಪ್ರಕಾಶನದ ಒಡತಿ, ಸಮರ್ಥ ಅನುವಾದಕಿ, 4೦ ವೈವಿಧ್ಯಮಯ ಕೃತಿತಾರೆಗಳ ಧಾರನಗರಿಯ ಹೆಸರಾಂತ ಲೇಖಕಿ, ರಂಗನಟಿ, ಸಮಾಜಮುಖಿ ಸಕ್ರಿಯ ಕಾರ್ಯಕರ್ತೆ, ಬಹುಭಾಷಾ ಕವಯತ್ರಿ, ಮನಃಶಾಸ್ತ್ರದ ಕನ್ನಡ ಉಪನ್ಯಾಸಕಿ, ಮಕ್ಕಳ ನಾಟಕ ರಚನಾಕಾರ್ತಿ, ಸಶಕ್ತ ಸಮಾಜದ ಸಂಸ್ಕೃತಿ ಚಿಂತಕಿ, ಸ್ತ್ರೀ ದೌರ್ಜನ್ಯದ ವಿಮೋಚಕಿ, ಸಬಲ ಮಹಿಳಾ ಲೋಕದ ಸಂಚಾಲಕಿ, ನೊಂದ ವನಿತೆಯರ ಸಾಂತ್ವನ ಸಮಾತಾ ಸಶಕ್ತ ಧ್ವನಿ, ದೇವದಾಸಿ ಪದ್ಧತಿ ನಿರ್ಮೂಲನಾ ಸಂಪನ್ಮೂಲ ವ್ಯಕ್ತಿ, ಧಾರವಾಡ ಹೈಕೋರ್ಟ್ ಪೀಠ ಸ್ಥಾಪನಾ ಉಪವಾಸ ಸತ್ಯಾಗ್ರಹಿ, ಸ್ತ್ರೀ ಮೀಸಲಾತಿಯ ಸ್ವಯಂ ಸೇವಕಿ, ಲಿಂಗ ಸಂವೇದನಾ ಜಾಗೃತಿಯ ರೂವಾರಿ, ವನಿತೆಯರ ಬಹುವಿಧ ಸಮಸ್ಯೆಗಳ ನಿವಾರಕಿ, ಮಾನವೀಯ ಸಂವೇದನೆಯ ಮಾತೃಹೃದಯಿ, ಹೆಣ್ಣು ಧಾರಕ ಬೀದಿ ನಾಟಕದ ರೂಪಕಿ, ಕಾವ್ಯ ಕಮ್ಮಟ, ಅನುವಾದ ಕಮ್ಮಟ, ಪ್ರಕಾಶನ ಕಮ್ಮಟ, ಕವಿಸಂಘದ ಉಪಾಧ್ಯಕ್ಷರು, ಹೆಣ್ಣು ಭ್ರೂಣ ಹತ್ಯೆಯ ಭೇದಕಿ, ವಿಚಾರ ಸಂಕಿರಣ, ಪರಿಸರ ವ ಜಲ ಸಂವರ್ಧಕಿ, ಖ್ಯಾತ ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಯವರ ಧರ್ಮಪತ್ನಿ ಡಾ. ಹೇಮಾ ಸಿದ್ಧಲಿಂಗ ಪಟ್ಟಣಶೆಟ್ಟಿ ಇವರ ಸಾಮಾಜಿಕ ಸೇವೆ – ಸಾಂಸ್ಕೃತಿಕ ಅನುಸಂಧಾನಕ್ಕಾಗಿ ಕರ್ನಾಟಕ ಘನ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2೦24 – ೨೫ನೇ ಸಾಲಿನ ಮಹಾಶರಣೆ ‘ಅಕ್ಕಮಹಾದೇವಿ ರಾಜ್ಯ ಮಟ್ಟದ ಪ್ರಶಸ್ತಿ’ ಪುರಸ್ಕೃತರಾದ ಡಾ. ಹೇಮಾ ಸಿದ್ದಲಿಂಗ ಪಟ್ಟಣಶೆಟ್ಟಿ ಯವರಿಗೆ ಧಾರವಾಡ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದು,  30, 31 ಮಾರ್ಚ 2026ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜನೆಯಾಗಿದೆ ಸಕಾರಣ ಮಹನೀಯರ ಕನ್ನಡ ಸಾಹಿತ್ಯ ಸೇವೆ, ಸಮಾಜ ವ ಸಾಂಸ್ಕೃತಿಕ ಜೀವನ ಸಾಧನೆಯ ಮೇಲೆ ಬೆಳಕು ಚೆಲ್ಲುವ ಕಿರು ಲೇಖನ) *ಸಮತಾ ಸಮಾಜದ ಸಂಚಾಲಕಿ ಡಾ. ಹೇಮಾ ಪಟ್ಟಣಶೆಟ್ಟಿ ಅವರ ಬಾಲ್ಯ, ಶಿಕ್ಷಣ, ಪರಿವಾರ ವೃತ್ತಿ ಕುರಿತು ಕಿರು ಮಾಹಿತಿ* ವೈಚಾರಿಕ ನಿಲುವಿನ ಹೇಮಾರವರು 1954ರ ಫೆಬ್ರುವರಿ 10ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಚಂದ್ರಶೇಖರಸ್ವಾಮಿ ಹೊನ್ನಾಪುರಮಠರವರು ವಕೀಲರಾಗಿದ್ದರು. ತಾಯಿ ಗೌರಾಂಬಿಕಾ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದರು. ಸಾಹಿತ್ಯಿಕ ಪರಿವಾರದಿಂದ ಬಂದ ಹೇಮಾ ಅವರು ಎಂ. ಎ. (ಮನೋವಿಜ್ಞಾನ) ಮತ್ತು ಎಂ. ಎ. (ಕನ್ನಡ) ಸಾಧನೆಗಳ ಜೊತೆಗೆ ‘ಕನ್ನಡ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು’ ಎಂಬ ಮಹಾಪ್ರಬಂಧ ಮಂಡಿಸಿ ಪಿ. ಎಚ್. ಡಿ ಪದವಿಗೆ ಪಾತ್ರರಾದ ಇವರು ಮಹಿಳಾ ಸಶಕ್ತಿಕರಣದ ಸಂಕೇತವಾಗಿದ್ದಾರೆ. ಡಾ. ಹೇಮಾ ಪಟ್ಟಣಶೆಟ್ಟಿ ಕನ್ನಡ ಸಾಹಿತ್ಯಲೋಕದಲ್ಲಿ ಹೆಸರಾಂತ ಲೇಖಕಿ. ಲೇಖನಗಳಲ್ಲದೆ ಅನುವಾದಕಿಯಾಗಿಯೂ, ರಂಗನಟಿಯಾಗಿಯೂ ಹಾಗೂ ಸಮಾಜ ಕಾರ್ಯಕರ್ತೆಯಾಗಿಯೂ ಪ್ರಸಿದ್ದರು. ಆರು ವರ್ಷ ಮನ:ಶಾಸ್ತ್ರದಲ್ಲೂ ನಾಲ್ಕು ವರ್ಷ ಕನ್ನಡಲ್ಲೂ ಉಪನ್ಯಾಸಕಿಯಾಗಿ ಧಾರವಾಡ ಕರ್ನಾಟಕ ಕಲಾ ಮಹಾವಿದ್ಯಾಲಯ ಮತ್ತು ಕಿತ್ತೂರಿನ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಮಂಗಳೂರಿನ ಆಕಾಶವಾಣಿಯಲ್ಲಿ ಪ್ರೊಡಕ್ಷನ್ಸ್ ಅಸಿಸ್ಟೆಂಟ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. “ಕನ್ನಡ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು -ಸ್ತ್ರೀವಾದಿ ದೃಷ್ಟಿಕೋನ” ಎಂಬುದು ಇವರ ಸಂಶೋದನಾ ಪ್ರಬಂಧ. ನೀನಾ ಕೃತಿ ಖ್ಯಾತಿಯ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಧರ್ಮ ಪತ್ನಿಯಾಗಿ ಹೂವೆಂಬ ಮಗಳು ಸಮುದ್ರವೆಂಬ ಮಗನನ್ನು ಪಡೆದಿರುವ ಇವರು ಸದಾ ಮಹಿಳಾ ಕಲ್ಯಾಣ ಮತ್ತು ಸಮಾಜೋದ್ಧಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.  *ಮಹಿಳಾ ದೌರ್ಜನ್ಯ ವಿಮೋಚಕಿ ಡಾ. ಹೇಮಾ ಪಟ್ಟಣಶೆಟ್ಟಿಯವರ ಅಸಾಧಾರಣ ಅಪರಿಮಿತ ಸಮಾಜಮುಖಿ ಕಾರ್ಯಕಲಾಪಗಳು* ಡಾ. ಹೇಮಾ ಪಟ್ಟಣಶೆಟ್ಟಿ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಠ್ಯ ರಚನಾ ಸಲಹಾ ಸಮಿತಿ ಸದಸ್ಯರಾಗಿ, ಕರ್ನಾಟಕ ಸರಕಾರದ ಜಲ ಸಂವರ್ಧನೆ ಯೋಜನಾ ಸಂಘದ ಆಡಳಿತ ಮಂಡಳಿ ಸದಸ್ಯರಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ರಾಷ್ಟ್ರೀಯ – ಅಂತಾರಾಷ್ಟ್ರೀಯ ಮಹತ್ವದ ಕಥಾ ಹಾಗೂ ಕಾವ್ಯ ಸಂಪುಟಗಳಲ್ಲಿ ಇವರ ಕಥೆ, ಕವಿತೆಗಳು ಪ್ರಕಟಗೊಂಡಿವೆ. ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಬಹುಭಾಷಾ ಲೇಖಕಿಯರ ಸಂವಾದದ ಜೊತೆಗೆ ವಿಚಾರ ಮಂಡನೆ ಮಾಡಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ಕೋಶಾಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ,‍ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ‘ರಂಗಭೂಮಿಕಾ’ ಹವ್ಯಾಸಿ ನಾಟಕ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.              ಹೇಮಾ ಪಟ್ಟಣಶೆಟ್ಟಿ ಅವರು ಮಹಿಳಾ ಸಂಬಂಧೀ ಕಾರ್ಯಗಳಲ್ಲಿ ರಾಷ್ಟ್ರಮಟ್ಟದ ‘ಜಾಯಿಂಟ್ ವಿಮೆನ್ಸ್ ಪ್ರೋಗ್ರಾಂ’ ಸಂಸ್ಥೆಯ ಉತ್ತರ ಕರ್ನಾಟಕದ ಸಂಚಾಲಕರಾಗಿ, ‘ಸಾಂತ್ವನ’ ಕೌಟುಂಬಿಕ ಸಲಹೆ – ಸಹಾಯ ಕೇಂದ್ರದ ನಿರ್ದೇಶಕರಾಗಿ,  ರಾಷ್ಟ್ರಮಟ್ಟದಲ್ಲಿ ಮಹಿಳೆ ಮತ್ತು ಬಾಲಕಿಯರ ಸಾಗಾಣಿಕೆ ತಡೆಗಟ್ಟುವ ಸಮಿತಿ ಸದಸ್ಯರಾಗಿ, ಮಹಿಳಾ ಜಾಗೃತಿ ವೇದಿಕೆ ಸ್ಥಾಪಕ ಕಾರ್ಯದರ್ಶಿಯಾಗಿ ಹೀಗೆ ಆನೇಕ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ದೇವದಾಸಿ ಮಹಿಳೆಯರ ಮೇಲೆ ಸರಕಾರಿ ನೀತಿ ಮತ್ತು ಯೋಜನಾ ಸೌಲಭ್ಯಗಳ ಪರಿಣಾಮ ಹಾಗೂ ಅವರ ಸ್ಥಾನಮಾನ ಕುರಿತು ಪುನರ್ಮೌಲ್ಯೀಕರಣ ಅಧ್ಯಯನ ಮಾಡಿದ್ದಾರೆ.‍ ಪೊಲೀಸ್ ಅಧಿಕಾರಿಗಳಿಗೆ ಲಿಂಗ ಸಂವೇದನಾ ಜಾಗೃತಿ ಕಾರ್ಯಾಗಾರವನ್ನು ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಸಂಘಟಿಸಿದ್ದಾರೆ. ಕೌಟುಂಬಿಕ ಜನತಾ ನ್ಯಾಯಾಲಯ ಆಯೋಜಿಸಿ – ಧಾರವಾಡ, ಬೆಳಗಾವ, ಅಥಣಿ – ನ್ಯಾಯಾಲಯಗಳಲ್ಲಿ ಉಳಿದು ಹೋದ ಪ್ರಕರಣಗಳಲ್ಲಿ 85 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ. ಅಮ್ಮಿನಭಾವಿ,  ಉಪ್ಪಿನಬೆಟಗೇರಿ, ಬ್ಯಾಹಟ್ಟಿ  ಗ್ರಾಮಗಳಲ್ಲಿ ಪ್ರತೀ ಗ್ರಾಮದಲ್ಲಿ 50 ಮಹಿಳೆಯರಿಗೆ ‘ಸಶಕ್ತೀಕರಣ’ದ ತರಬೇತಿಯನ್ನು 22 ತಿಂಗಳ ಕಾಲ ನೀಡಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ವಿಚಾರ ಸಂಕಿರಣ, ಕಾರ್ಯಾಗಾರ,  ಪ್ರತಿಭಟನಾ ಮೆರವಣಿಗೆ, ಉಪವಾಸ ಸತ್ಯಾಗ್ರಹಗಳಲ್ಲಿ ಭಾಗವಹಿ ಸಮಾಜ ಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಶ್ರಮಿಸಿದ್ದಾರೆ. *ಡಾ ಹೇಮಾರವರ ಅನನ್ಯ ಪ್ರಕಾಶನದಡಿಯಲ್ಲಿ ಜನಾರ್ಪಣೆಗೊಂಡ ಅವರ ಕೃತಿ ವೈವಿಧ್ಯ ನೋಟ* ೧೯೭೯ ರಲ್ಲಿ ‘ಅನನ್ಯ’ ಪ್ರಕಾಶನವನ್ನು ಸ್ಥಾಪಿಸಿ ಕನ್ನಡ ಖ್ಯಾತ ಲೇಖಕರ ೧೫೦ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರು ಸಾಹಿತ್ಯಿಕ ದ್ವೈ ಮಾಸಿಕ ‘ಸಂಕಲನ’ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.              ಹೇಮಾ ಪಟ್ಟಣಶೆಟ್ಟಿ ಅವರು ಇದುವರೆವಿಗೂ ಸುಮಾರು 40 ಸಾಹಿತ್ಯ ಕೃತಿಗಳನ್ನು ಮೂಡಿಸಿದ್ದಾರೆ. ಮುಸುಕಿದೀ ಮಬ್ಬಿನಲಿ ಅವರ ಕಥಾ ಸಂಕಲನ. ವಿರಹೋತ್ಸವ(೧೯೮೩), ಹೊಸ ಹಾಡು(೧೯೮೬), ಕಣ್ಣುಗಳಲಿ ಕನಸು ತುಂಬಿ(೧೯೯೩), ಉಸಿರ ಬದುವಿನ ಗುಂಟ(೨೦೦೭), ಬಾಳೆ ಗರ್ಭದಲಿ (೨೦೧೧) ಅವರ ಕಾವ್ಯ ಸಂಕಲನಗಳು. ತುಂಟ ಮಕ್ಕಳ ತಂಟೆ, ಬಗಾಟ ಬಗರಿ, ಹೆಣ್ಣು ಹೆಜ್ಜೆ, ಚೆಕಾವ್ ಟು ಶಾಂಪೇನ್ ಮಕ್ಕಳ ನಾಟಕಗಳು. ಅವರ ವೈಚಾರಿಕ  ಕೃತಿಗಳಲ್ಲಿ ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ, ರಂಗದಂಗಳ, ಆಕಲನ, ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ, ರಂಗ ವೃತ್ತಾಂತ,ಅಕ್ಕರದ ಸುಯಿಧಾನ ಸೇರಿವೆ. ಪ್ರಸನ್ನ, ಸಾಲಿ ರಾಮಚಂದ್ರರಾಯ ಇವರು ರಚಿಸಿದ ಜೀವನ ಚರಿತ್ರೆಗಳು.  ಹೊನ್ನಪುರ, ಕತೆಗಳು; ನನ್ನ ಅವ್ವ ನನ್ನ ಅಪ್ಪ -೧, ನನ್ನ ಅವ್ವ ನನ್ನ ಅಪ್ಪ-೨, ನನ್ನ ಶಾಲಾ ಗುರುಗಳು ಇವರ‍ ಸಂಪಾದನೆಗಳು. ಡಾ. ಲೋಹಿಯ, ಅದೃಶ್ಯ ವ್ಯಕ್ತಿಯ ಆತ್ಮಹತ್ಯೆ, ವಾತ್ಸಲ್ಯ ವಿಷ, ಮಾಡು ಸಿಕ್ಕದಲ್ಲಾ, ಜಾತಿಯವನೇ ಬೇಕು, ಅಪ್ಪಾಜಿ ಕಳೆದು ಹೋಗಿದ್ದಾರೆ, ಬೆವರು! ಬೆವರು!, ಬಾಬಿ, ಸೀಗಲ್, ಪೇಶಂಟ್ ಪಾರ್ಕಿಂಗ್, ಅನಿವಾಸಿ ಭಾರತೀಯರು, ತೆಂಡುಲಕರ ಮಕ್ಕಳ ನಾಟಕಗಳು, ರಕ್ತ ಪುಷ್ಪ,  ಹೋಳಿ ಮುಂತಾದವು ಇತರ ಭಾಷೆಗಳಿಂದ ಮೂಡಿ ಬಂದ ಇವರ ಅನುವಾದ ಕರತಿಗಳು. ವಿಶ್ವದ ಅನೇಕ ಭಾಗಗಳಲ್ಲಿ ಪ್ರವಾಸ ಮಾಡಿ ವಿಫುಲ ಅನುಭವ ಗಳಿಸಿದ್ದಾರೆ. *ಡಾ ಹೇಮಾರವರ ಸಂಸ್ಕೃತಿ ಚಿಂತನೆ ಮಹಿಳಾ ಹೋರಾಟ ಸಾಹಿತಿಕ ಸೇವೆಗೆ ಸಂದಿರುವ ಪ್ರಶಸ್ತಿ, ಪುರಸ್ಕಾರ, ಗೌರವಾಧಾರ, ಮಾನ – ಸನ್ಮಾನಗಳು*    ​       2007ರಲ್ಲಿ ಡಾ. ಹೇಮಾ ಪಟ್ಟಣಶೆಟ್ಟಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ (ಮುಸಕಿದೀ ಮಬ್ಬಿನಲಿ), ಮುದ್ದಣ ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ವಿರಹೋತ್ಸವ), ಎರಡು ಸಲ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ಅನುಲೇಖ), ರತ್ನಮ್ಮ ಹೆಗ್ಗಡೆ ಬಹುಮಾನ (ಹೊಸ ಹಾಡು, ಕಣ್ಣುಗಳಲಿ ಕನಸು ತುಂಬಿ, ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ, ಉಸಿರ ಬದುವಿನ ಗುಂಟ ಕೃತಿಗಳಿಗೆ) ಮಹಿಳಾ ಪ್ರಕಾಶಕ ಪ್ರಶಸ್ತಿ- ಕರ್ನಾಟಕ ಲೇಖಕಿಯರ ಸಂಘದ ಪ್ರೇಮಾ ಭಟ್ ಪ್ರಕಾಶಕ ಪ್ರಶಸ್ತಿ, ಮಹಿಳಾ ಸಾಧಕರ ಪ್ರಶಸ್ತಿ – ಸಾಹಿತ್ಯ ಪ್ರತಿಷ್ಠಾನ – ಬೆಳಗಾವಿ, ಸೀತಾಸುತ ಸಾಹಿತ್ಯ ಪ್ರಶಸ್ತಿ, ಕೀರಂ ಪ್ರಶಸ್ತಿ, ಹೊಸ ಹಾಡು ಕೃತಿಗೆ ೧೯೮೩ ರ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ ದೊರೆತಿದೆ. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಮಕ್ಕಳ ಚಂದಿರ ಪ್ರಶಸ್ತಿ, ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಇವರು ಕೊಡಮಾಡುವ ಅಕ್ಕ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಧಾರವಾಡ ತಾಲ್ಲೂಕು ಸಾಹಿತ್ಯ ಸಮ್ಮೇಳನ-7 ರ ಸರ್ವಾಧ್ಯಕ್ಷತೆ, ದಸರಾ ಕವಿಗೋಷ್ಠಿ ಅಧ್ಯಕ್ಷತೆ, ಧಾರವಾಡ ಜಿಲ್ಲಾ ಉತ್ಸವ-೮ ಸಾಂಸ್ಕೃತಿಕ ಸಮಿತಿ ಅಧ್ಯಕ್ಷತೆ, ದಸರಾ ವಿಶಿಷ್ಟ ಕವಿಗೋಷ್ಠಿ ಅಧ್ಯಕ್ಷತೆ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಧಾರವಾಡದ ಇನ್ನರ್ ವ್ಹೀಲ್ ಕ್ಲಬ್ ಇವರಿಗೆ ಉತ್ಕೃಷ್ಟ ಸಮಾಜ ಕಾರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.               ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕೀರ್ಣ ಕಾರ್ಯಗಾರ ಪ್ರತಿಭಟನಾ ಮೆರವಣಿಗೆ ಉಪವಾಸ ಸತ್ಯಾಗ್ರಗಳಲ್ಲಿ ಭಾಗವಹಿಸಿರುವ ಹೇಮಾ ರವರ ಸಾಧನೆ ಅವಿಸ್ಮರಣೆಯ ಅವುಗಳಲ್ಲಿ ಮುಖ್ಯವಾದವು ಬೆಳಗಾವಿ ನಮ್ಮದು – 1970, ಜೆ. ಪಿ ಚಳುವಳಿ -1975, ಧಾರವಾಡದ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ – 1995, 33 ಪರ್ಸೆಂಟ್ ಮಹಿಳಾ ಮಿಸಲಾತಿಗಾಗಿ ದಿಲ್ಲಿ ಸಂಸತ್ ಭವನದ ಎದುರು ಧರಣಿ – 1998, ಮಂತಾದ ಚಳುವಳಿಗಳಲ್ಲಿ ಭಾಗವಹಿಸಿ ನಾಡಿನ ಕಲ್ಯಾಣಕ್ಕಾಗಿ ಅವಿರತ ಹೋರಾಟ ಮಾಡಿದ್ದಾರೆ. ೨೦೧೩ರಲ್ಲಿ ನಡೆದ ಧಾರವಾಡ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿದ್ದ ಡಾ.ಹೇಮಾ ಪಟ್ಟಣಶೆಟ್ಟಿ ಅವರಿಗೆ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಲಭಿಸಲಿ, ಇವರ ಸಾಮಾಜಿಕ ಹಾಗೂ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿಗಳು ಅರಸಿಬಂದಿವೆ. ಪ್ರಸ್ತುತ ಕರ್ನಾಟಕ ಘನ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2024 – 25ನೇ ಸಾಲಿನ ಅಕ್ಕಮಹಾದೇವಿ ರಾಜ್ಯ ಪ್ರಶಸ್ತಿಯನ್ನು 3 ಮಾರ್ಚ್ 2೦25ರಂದು ಪ್ರದಾನ ಮಾಡಿರುವುದು ಅಭಿಮಾನದ ಸಂಗತಿಯೂ ಹೌದು ಮಹಿಳಾ ಸಬಲೀಕರಣಕ್ಕೆ ಸಂಧ ಗೌರವವು ಹೌದು. ಆದಾಗ್ಯೂ ಇವರ ಸಮಾಜಮುಖಿ ಸಂಘಟನೆ, ಸಂಸ್ಕೃತಿ ಚಿಂತನೆ, ಅಮೂಲ್ಯ ಸಾಹಿತ್ಯ ಸೇವೆಗೆ ಪದ್ಮಶ್ರೀ ಗೌರವ, ನಾಡೋಜ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಒಲಿದು ಬರಲಿ. ಗೌರವ ಡಾಕ್ಟರೇಟ್ ಪದವಿಗಳು ಸೇರಿದಂತೆ ಇನ್ನೂ ಮುಂತಾದ ಗೌರವ ಪ್ರಶಸ್ತಿ – ಪುರಸ್ಕಾರಗಳು ಇವರ ಅವಿಸ್ಮರಣೀಯ ನಾಡ ಸೇವೆಗೆ ಭೂಷಣಪ್ರಾಯವಾಗಲಿ ಎಂದು ಶುಭ ಹಾರೈಸುವೆನು. ಡಾ ಹೇಮಾ ಪಟ್ಟಣ ಶೆಟ್ಟಿಯವರ ಸಾಹಿತ್ಯ ಕೃಷಿ, ಸಮಾಜ ಸೇವೆ, ಸಂಸ್ಕೃತಿ ಸಂಘಟನೆಗಳ ಅಮೋಘ ಸೇವೆ

“ಡಾ.ಹೇಮಾ ಪಟ್ಟಣಶೆಟ್ಟಿಯವರಿಗೆ ಒಲಿದು ಬಂದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ” ಸುಭಾಷ್ ಹೇಮಣ್ಣಾ ಚವ್ಹಾಣ Read Post »

ಇತರೆ

 “ದಯಾಮರಣ ಮತ್ತು ಕರಿಬಸಮ್ಮ ಎಂಬ ವಾರ್ನಿಂಗ್ ಬೆಲ್”  ಗಂಗಾಧರ ಬಿ ಎಲ್ ನಿಟ್ಟೂರ್

ಬದುಕಿನ ಸಂಗಾತಿ ಗಂಗಾಧರ ಬಿ ಎಲ್ ನಿಟ್ಟೂರ್  “ದಯಾಮರಣ ಮತ್ತು ಕರಿಬಸಮ್ಮ ಎಂಬ ವಾರ್ನಿಂಗ್ ಬೆಲ್”   ಇದು ಮೊನ್ನೇ ಮೊನ್ನೆಯ ಸುದ್ದಿ. ನಿಮಗೆ ಗೊತ್ತಿರಬಹುದು, ಸುಮಾರು 13 ವರ್ಷಗಳಿಂದ ಕೋಮಾ ಆವಸ್ಥೆಯಲ್ಲಿ ಇದ್ದ  ಹರೀಶ್ ರಾಣಾ ಎಂಬ ವ್ಯಕ್ತಿ 2026 ರ ಮಾರ್ಚ್ 24 ರಂದು ಕೊನೆಯುಸಿರೆಳೆದರು.   ದಯಾಮರಣಕ್ಕೆ ಒಳಗಾದ ಭಾರತದ ಮೊದಲ ವ್ಯಕ್ತಿ ಇವರು. ದಯಾಮರಣಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಮಾರ್ಗಸೂಚಿಯೊಂದಿಗೆ ಅನುಮತಿ ನೀಡಿದ ಮೊದಲ ಪ್ರಕರಣ ಇದು. ಪ್ರಸ್ತುತ ಸುಪ್ರೀಂ ಕೋರ್ಟ್ ದಯಾಮರಣಕ್ಕೆ ಅನುಮತಿ ನೀಡಿದೆ. ಆದರೆ ಇಂದು ಕಾನೂನು ಮಾನ್ಯತೆಗೆ ಒಳಪಟ್ಟಿರುವ ಈ ದಯಾಮರಣ ಕಾಯ್ದೆಯ ಹಿಂದೆ ಹಲವಾರು ವರ್ಷಗಳ ಹೋರಾಟದ  ಹೆಜ್ಜೆ ಗುರುತುಗಳಿವೆ . ಭಾರತದಲ್ಲಿ ಸುಮಾರು 1980 ರ ದಶಕದಲ್ಲಿಯೇ ದಯಾಮರಣದ ಕೂಗು ಮೊಳಗಿತ್ತು . ಈ ಹೊತ್ತಿಗೆ ಹಲವು ದೇಶಗಳಲ್ಲಿ ಈ ಕಾನೂನು ಜಾರಿಯಾಗಿತ್ತು . ಭಾರತದ ಜ್ಞಾನ್ ಕೌರ್, ಕಾಮನ್ ಕಾಸ್ ರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ 1996 ರ ಹೊತ್ತಿಗೆ ದಯಾಮರಣ ಚರ್ಚೆ ತೀವ್ರಗೊಳ್ಳುತ್ತಾ ಸಾಗಿತು. ಆದರೆ ಬದುಕುವ ಹಕ್ಕನ್ನು ಮಾತ್ರ ಬಲವಾಗಿ ನಂಬಿದ್ದ ಭಾರತದಂಥ ಒಂದು ಸಾಂಪ್ರದಾಯಿಕ ದೇಶಕ್ಕೆ ಇದು ಸೂಕ್ತವಲ್ಲ ಎಂಬ ಹಿನ್ನೆಲೆಯಲ್ಲಿ ಈ ಪ್ರಸ್ತಾವಕ್ಕೆ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಅಸ್ತು ಹೇಳಿರಲಿಲ್ಲ. ಆದಾಗ್ಯೂ ಎಲ್ಲಾ ವಿರೋಧದ ನಡುವೆಯೂ ಈ ದಯಾಮರಣ ಕಾಯ್ದೆಗೆ ಸಂಬಂಧಿಸಿದಂತೆ 2011 ರಲ್ಲಿ ಐತಿಹಾಸಿಕ ತೀರ್ಪು ಹೊರ ಬಿದ್ದಿತು. 37 ವರ್ಷಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ (Persistent Vegetative State) ದಾದಿ ಅರುಣಾ ಶಾನ್‌ಬಾಗ್ ಪರವಾಗಿ ಅವರ ಸ್ನೇಹಿತೆ ಪಿಂಕಿ ವಿರಾನಿ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಪರೋಕ್ಷ ದಯಾಮರಣಕ್ಕೆ ಅನುಮತಿ ನೀಡಲಾಯಿತು. ಆದರೆ ಸೂಕ್ತ ಮಾರ್ಗಸೂಚಿಗಾಗಿ ಮುಂದುವರಿದ ಹೋರಾಟದ ಪರಿಣಾಮವಾಗಿ 2018 ರಲ್ಲಿ  ಸುಪ್ರೀಂ ಕೋರ್ಟ್ ತನ್ನ ಮತ್ತೊಂದು ಐತಿಹಾಸಿಕ ತೀರ್ಪಿನಲ್ಲಿ ಬದುಕುವ ಹಕ್ಕಿನಂತೆ ಗೌರವಯುತವಾಗಿ ಸಾಯುವುದು ಕೂಡ ಒಂದು ಮೂಲಭೂತ ಹಕ್ಕು ಎಂದು ಪರಿಗಣಿಸಿತು. ಆದರೆ ನಿರ್ದಿಷ್ಟ ಮಾರ್ಗಸೂಚಿ ನೀಡುವಲ್ಲಿ ಇನ್ನೂ ವಿಳಂಬವಾದ ನಿಟ್ಟಿನಲ್ಲಿ ದಯಾಮರಣ ಹೋರಾಟಗಾರರ ಹೋರಾಟ ಮತ್ತಷ್ಟು ತೀವ್ರ ಗೊಂಡಿತು. ಅಂತಿಮವಾಗಿ 2025 ರ ಫೆಬ್ರವರಿ ತಿಂಗಳಲ್ಲಿ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ದೊರಕಿತು. ಆದಾಗ್ಯೂ ಭಾರತದಲ್ಲಿ ಸಕ್ರಿಯ ದಯಾಮರಣ (ಅಂದರೆ ಚುಚ್ಚುಮದ್ದಿನ ಮೂಲಕ ಅಥವಾ ವಿಷಕಾರಿ ದ್ರವ್ಯ ನೀಡಿ ಪ್ರಾಣ ತೆಗೆಯುವುದು) ಇಂದಿಗೂ ಕಾನೂನುಬಾಹಿರ. ಇದನ್ನು ಕೊಲೆ ಅಥವಾ ಆತ್ಮಹತ್ಯೆಗೆ ಪ್ರೇರಣೆ ಎಂದು ಪರಿಗಣಿಸಲಾಗುತ್ತದೆ.  ಈ ವಿಷಯದ ಕುರಿತು ವೈಯುಕ್ತಿಕವಾಗಿ  ಇಷ್ಟೊಂದು ಕುತೂಹಲ ಹುಟ್ಟಲು ಕಾರಣ ಹಲವಾರು ವರ್ಷಗಳಿಂದ ದಯಾಮರಣಕ್ಕಾಗಿ ಹೋರಾಡುತ್ತಿರುವ ದಾವಣಗೆರೆಯ ಎಚ್.ಬಿ ಕರಿಬಸಮ್ಮ ಎಂಬ ನಿವೃತ್ತ ಶಿಕ್ಷಕಿ ಹಾಗೂ ಆದರ್ಶ ಮಹಿಳೆ.  ಅವರ ಸಂದರ್ಶನದ ಬರೆಹವಿದು. Iಇದು ಅವರ ಮೂಲಕ ದಯಾಮರಣ ಬೇಡುತ್ತಿರುವ ನೊಂದ ಹೃದಯಗಳ ಆಳಕ್ಕಿಳಿದು ಅಂತರಂಗವನ್ನು ಅವಲೋಕಿಸುವ ಒಂದು ಚಿಕ್ಕ ಪ್ರಯತ್ನವೂ ಹೌದು. ಕಾಡಿದ ಕುತೂಹಲ : ಸುಮಾರು ಹತ್ತದಿನೈದು ವರ್ಷಗಳ ಹಿಂದೆ ಈ ಸುದ್ದಿ ನನ್ನ ಕಿವಿಗೆ ಬಿದ್ದಾಗ, ಬದುಕುವುದಕ್ಕಾಗಿ ಹೋರಾಡುವ ಜನರ ಮಧ್ಯೆ ಸಾವಿಗಾಗಿಯೂ ಹೋರಾಡುವ ಜನಗಳಿದ್ದಾರೆ ಎಂಬುದನ್ನು ಕೇಳಿದಾಗ ಅಂತಹ ವಿಶೇಷ ಅನಿಸಿರಲಿಲ್ಲ. ಸಾಯುವ ಮಾತಾಡುವುದು, ಸಾಯಲು ಬಯಸುವುದು ಹೇಡಿಗಳ ಲಕ್ಷಣ ಎಂದು ಕೆಲವರು ಹೇಳುತ್ತಿದ್ದನ್ನು ಕೇಳಿ ಈ ಕುರಿತು ಚಿಂತಿಸಲು ಕೂಡ ಯಾವುದೋ ಅಳುಕು ಕಾಡುತ್ತಿತ್ತು. ಆದರೂ ಸಾಯುವ ಹಕ್ಕಿಗಾಗಿ ಹೋರಾಡುತ್ತಿರುವ ದಾವಣಗೆರೆ ಎಚ್.ಬಿ ಕರಿಬಸಮ್ಮನವರನ್ನು ಒಮ್ಮೆ ಕಂಡು ಮಾತಾಡಿಸಿ ಆ ಸಾಯುವ ಮನೋ ತೀವ್ರತೆಗೆ ಅಂತಹ ಘನ ಕಾರಣ ಏನಿರಬಹುದು ಎಂಬುದನ್ನು ಕೇಳಿ ಬರಬೇಕೆಂಬ ಕುತೂಹಲ ಮಾತ್ರ ಮನದೊಳಗೆ ಮೂಡಿ, ಆಗಾಗ್ಗೆ ಕಾಡುತ್ತಿತ್ತು. ಆ ಭೇಟಿಗೆ ಈಗ ಕಾಲ ಕೂಡಿ ಬಂತು.  ಆದರೆ ಈ ಸುದೀರ್ಘ ಕಾಲಾವಧಿಯಲ್ಲಿ ಮನಸ್ಸು ಕರಿಬಸಮ್ಮನಂತಹ ಅದೆಷ್ಟೋ ಕೋಟ್ಯಾಂತರ ಜನತೆಯ ಸಾವಿನ ಬಯಕೆಯ ಕಾರಣವನ್ನು ಬರೀ ಕೇಳಿರಲಿಲ್ಲ ಹತ್ತಿರದಿಂದ ಕಂಡಿತ್ತು ಕೂಡ. ಹಾಗಾಗಿ ಅವರ ಭೇಟಿಯ ಸಂದರ್ಭದಲ್ಲಿ ಪ್ರಶ್ನೆಗಳನ್ನು ಕೇಳುವ ಅವಶ್ಯಕತೆ ಬರಲೇ ಇಲ್ಲ. ಅವರ ಎದೆಯೊಳಗಿನ ಬೇಗುದಿಗೆ ಪರಿಹಾರವಿದೆಯೇ ? ಇದ್ದರೂ ಅದು ಕೇವಲ ಮರಣವೇ ? ಎಂಬುದರ ಕುರಿತಷ್ಟೇ ಮನಸ್ಸು ಪರಿ ಪರಿಯಾಗಿ ಆಲೋಚಿಸಲು ತೊಡಗಿತ್ತು . ಬದುಕಿ ಬಾಳಬೇಕು, ನೆಮ್ಮದಿಯ ನಾಳೆಗಳನ್ನು ಕಂಡುಕೊಳ್ಳಬೇಕು, ನಾವು – ನಮ್ಮವರೆಂಬ ಬಾಂಧವ್ಯ ಬೆಸುಗೆಯಲ್ಲಿ ಆಪ್ತತೆಯ ಸೊಗಸು ಕಾಣಬೇಕು ಎಂಬಿತ್ಯಾದಿ ಕನಸುಗಳ ಹೃದಯದಿಂದ ಹೊಸೆದು, ಉಸಿರಾಗಿಸಿಕೊಂಡು ನನಸಾಗಿಸಿಕೊಳ್ಳಲು ಬಯಸುವ ಹೃದಯಗಳು ಅದ್ಯಾಕೆ ಹೀಗೆ ತಮಗಿನ್ನು ಸಾವು ಒಂದೇ ಪರಿಹಾರ ಎಂದು ತೀರ್ಮಾನಿಸಿ ಬಿಡುವ ಹಂತ ತಲುಪಿ ಬಿಡುತ್ತವೆ ಎಂದು ಗಾಢವಾಗಿ ಯೋಚಿಸಿದಾಗ ಎಂತಹ ಗಟ್ಟಿ ಗುಂಡಿಗೆಯೂ ಕೂಡ ಕರಗದಿರದು, ಎಂತಹ ಕಲ್ಲು ಹೃದಯವೂ ಕೂಡ ದ್ರವಿಭೂತವಾಗದಿರದು.  ಮರಣದಲ್ಲಿ ಮಹಾನವಮಿ ಬಯಸುವ ಕಲಿಬಸಮ್ಮ ಎಂಬ ಆತ್ಮ ಚೇತನ : ಎಚ್.ಬಿ ಕರಿಬಸಮ್ಮನವರು ಶಿಕ್ಷಕಿಯಾಗಿ, ಗೃಹಿಣಿಯಾಗಿ, ಸಮಾಜ ಸೇವಕಿಯಾಗಿ ಜೀವನದ ಅನೇಕ ಏಳು-ಬೀಳು, ಸಿಹಿ-ಕಹಿ, ವೈರುಧ್ಯಗಳನ್ನು ಬಲು ಹತ್ತಿರದಿಂದ ಕಂಡ 86 ರ ವಯೋವೃದ್ಧೆ, ಮಾಗಿದ ಜೀವ. ನಾಲ್ಕು ದಶಕಗಳ ಕಾಲ ಸ್ವಮೂತ್ರ ಸೇವನೆ, ಡಯಾಬಿಟಿಸ್, ನೆಟ್ಟಗಾಗದ ಬೆನ್ನು ಹುರಿ ( ಸ್ಲಿಪ್ ಡಿಸ್ಕ್ ) ಇತ್ಯಾದಿ ದೈಹಿಕ ಬಾಧೆ, ನೋವು ಕಿತ್ತು ತಿನ್ನುತ್ತಿದೆ. ಬಾಲ್ಯದಲ್ಲೇ ವೈಧವ್ಯಕ್ಕೆ ತುತ್ತಾದ ಅವರು ಮರು ಮದುವೆ ಆದರೂ, ಜೀವನದ ಒಳ ಹೊರಹುಗಳ ಮರ್ಮಾಘಾತಗಳು ಅವರನ್ನು ಬಿಡದೆ ಕಾಡಿವೆ. ಸೂಕ್ಷ್ಮಾತಿ ಸೂಕ್ಷ್ಮ ಮನಸ್ಸಿನ ಅವರು ಅನೇಕ ಮಾನಸಿಕ ತುಮುಲಗಳಿಂದ ಬೆಂದು ಹೋಗಿದ್ದಾರೆ. ಹತ್ತು ಹಲವು ಸಾಮಾಜಿಕ ಅನಿಷ್ಟಾದಿಗಳನ್ನು ಹತ್ತಿರದಿಂದ ಕಂಡು ನಲುಗಿದ್ದಾರೆ. ಒಟ್ಟಾರೆ ಅವರ ಮನಸ್ಸು ಮುರಿದು ಹೋಗಿದೆ, ಹೃದಯ ಜಜ್ಜಿ ಹೋಗಿದೆ. ಹಾಗಾಗಿ ಅವರೀಗ ಸಾವೆಂಬ ಶೂಲಕ್ಕೇರಲು ಸಿದ್ಧವಾಗಿ ನಿಂತಿದ್ದಾರೆ !. ಆದರೂ. ಅವರ ಕಂಗಳಲ್ಲಿ ಯಾವುದೋ ಚೈತನ್ಯ ಪ್ರಜ್ವಲಿಸುತ್ತಿದೆ. ಕನಸುಗಳು ಬಾಡಿಲ್ಲ, ಎದೆ ನಡುಗಿಲ್ಲ, ಅಚಲತೆ ಅಡಗಿಲ್ಲ. ಇಂತಹ ದಿಟ್ಟ, ಛಲಗಾತಿ ಕರಿಬಸಮ್ಮ ಸಾವು ಬಯಸುತ್ತಾರೆಂದರೆ ಅವರನ್ನು ಹಾಗೆ ಸಾಯಲು ಬಿಡಲು ಯಾರಿಗಾದರೂ ಖಂಡಿತ ಮನಸ್ಸಾಗದು.  ಸಾವಿನ ಈ ಬಯಕೆ – ಬೇಡಿಕೆ, ಆ ಆರ್ತನಾದ ಕೇವಲ ಕರಿಬಸಮ್ಮ ಒಬ್ಬರದ್ದೂ ಮಾತ್ರವಲ್ಲ. ಆ ಧ್ವನಿಯ ಹಿಂದೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಎದೆಯಾಳದ ನೋವಿದೆ. ಕೈಲಾಗದವರ, ನಿರ್ಗತಿಕರ, ದೀನ-ದಲಿತರ, ಬಡ-ಬಗ್ಗರ, ನೊಂದು-ಬೆಂದವರ ಅಸಹಾಯಕತೆಯ ಕೂಗಿದೆ. ಸಾಮಾಜಿಕ ಏಣಿ-ಶ್ರೇಣಿ ವ್ಯವಸ್ಥೆ, ಅಸಮಾನತೆ, ದೌರ್ಜನ್ಯ, ಭ್ರಷ್ಟಾಚಾರ, ಮೋಸ-ವಂಚನೆ, ಕ್ರೌರ್ಯ, ಅನುಭವಿಸಿದವರ ಅಳಲಿದೆ. ವೈಫಲ್ಯತೆ ಮತ್ತು ಹಿಂಸೆಯ ವಿರುದ್ಧದ ಆಕ್ರೋಶವಿದೆ ಎಂಬುದು ಅವರನ್ನು ಹತ್ತಿರದಿಂದ ಕಂಡವರಿಗೆ ಮಾತ್ರ ಮನವರಿಕೆಯಾಗುತ್ತದೆ. ಸಾವನ್ನು ಬೇಡುವವರು ಹೇಡಿಗಳು ಎನ್ನುವ ವೀರಾಧಿವೀರರಿಗೆ ಕರಿಬಸಮ್ಮನಂಥವರ ಮೂಕ ವೇದನೆ ಹಾಗೂ ಸಾಮಾಜಿಕ ಕಳಕಳಿ ಅರ್ಥವಾಗಬೇಕಿದೆ. ಸಾವನ್ನು ಬೇಡುವ ಮನದ ಹಿಂದಿರುವ ನೆಮ್ಮದಿಯ ಬದುಕಿನ ಹೆಬ್ಬಯಕೆಯನ್ನೂ ಸಮಾಜ ಅರಿಯಬೇಕಿದೆ. ದಯಾ ಮರಣದ ಸುತ್ತ ಮುತ್ತ :  ದೈಹಿಕವಾಗಿ ಜರ್ಝರಿತವಾದವರು, ವಾಸಿಯಾಗದ ರೋಗದಿಂದ ಬಳಲುತ್ತಿರುವವರು, ಸಾವಿನ ಹೊರತು ಬೇರೇನೂ  ತಮಗೆ ಬೇಕಿಲ್ಲ ಎಂದು ಬೆಂದು ಬಸವಳಿದು ಮಾನಸಿಕ ಖಿನ್ನತೆಗೊಳಗಾದವರು, ಜೀವನದಲ್ಲಿ ಬದುಕುಳಿಯುವ ಎಲ್ಲಾ ಭರವಸೆಗಳನ್ನು ಕಳೆದುಕೊಂಡ ವಯೋವೃದ್ಧರಿಗೆ ದಯಾಮರಣ ದಯಪಾಲಿಸಿ ಎಂಬುದು ಕರಿಬಸಮ್ಮನವರ ಹೋರಾಟ. ಸುಮಾರು 36 ವರ್ಷಗಳ ಅವರ ಈ ಸತತ ಹೋರಾಟಕ್ಕೆ ಬೆಂಬಲ ಪಡೆಯುವ ನಿಟ್ಟಿನಲ್ಲಿ ಅವರು ಅನೇಕ ಎಡರು ತೊಡರುಗಳನ್ನು ಅನುಭವಿಸಿದ್ದಾರೆ. ಹಲವರ ಮನೆ, ಹಾದಿ-ಬೀದಿಗಳನ್ನು ಎಡತಾಕಿದ್ದಾರೆ. ಆದರೂ ಹಿಡಿದ ಪಟ್ಟು ಬಿಡದ ಅವರ ಹೋರಾಟದ ಮನೋಭಾವಕ್ಕೆ ಅಲ್ಲಲ್ಲೇ ಬೆಂಬಲ ವ್ಯಕ್ತವಾಗಿದ್ದು, ಈವರೆಗೆ 20 ಸಾವಿರಕ್ಕೂ ಅಧಿಕ ಜನರ ಸಹಿ ಸಂಗ್ರಹಿಸಿದ್ದಾರೆ. 2012 ರಲ್ಲಿ ಸದನದಲ್ಲಿ ಕೂಡ ದಯಾಮರಣದ ಕುರಿತು ಸುದೀರ್ಘ ಚರ್ಚೆ ನಡೆಯಲು ಕಾರಣೀಭೂತರಾಗಿದ್ದಾರೆ. ರಾಷ್ಟ್ರಪತಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ, ಸಚಿವರು, ಮಂತ್ರಿ ಮಹೋದಯರಿಗೂ ಕೂಡ ಪತ್ರ ಮುಖೇನ ದಯಾಮರಣದ ಕುರಿತು ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಕೆಲ ಸ್ವಾಮೀಜಿಗಳನ್ನು ಖುದ್ದಾಗಿ ಭೇಟಿ ನೀಡಿ ಬೆಂಬಲಕ್ಕಾಗಿ ಮನವಿ ಮಾಡಿದ್ದಾರೆ.  ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲೂ ಧರಣಿ ನಡೆಸಿ ಬಂದಿದ್ದಾರೆ. ದಯಾಮರಣದ ಕಾಯ್ದೆ ಜಾರಿಯಾದಲ್ಲಿ ದುರುಪಯೋಗದ ಸಾಧ್ಯತೆಗಳೇ ಹೆಚ್ಚು, ಇದು ಶಿಕ್ಷಾರ್ಹ ಅಪರಾಧ ಹಾಗೂ ಇದು ಕೊಲೆಗೆ ಸಮ ಎಂಬ ಎರಡು ಮಹತ್ವದ ಕಾರಣ ನೀಡಿ ಸುಪ್ರೀಂಕೋರ್ಟ್ ಪ್ರಸ್ತಾವವನ್ನು ತಿರಸ್ಕರಿಸುತ್ತಲೇ ಬಂದಿತ್ತು . ಹಾಗಾಗಿಯೇ ಕರಿಬಸಮ್ಮನವರು ತೀರಾ ಅಗತ್ಯ ಇರುವವರಿಗೆ ಮಾತ್ರ ಈ ಕಾಯ್ದೆ ಅನ್ವಯವಾಗಲಿ ಎಂಬ ಕಾರಣಕ್ಕಾಗಿ ಕೆಲ ಸಲಹೆಗಳನ್ನು ಕೂಡ ತಮ್ಮ ಮನವಿಯಲ್ಲಿ ಮಂಡಿಸಿದ್ದರು. ಖಾಸಗಿ ಆಸ್ಪತ್ರೆ ಹೊರತುಪಡಿಸಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಈ ದಯಾಮರಣದ ಒಂದು ಪ್ರತ್ಯೇಕ ವಿಭಾಗ ತೆರೆಯುವಂತೆ ಕೋರಿದ್ದಾರೆ. ಸಾವು ಬಯಸುವವರ ಸಮ್ಮತಿಯ ಸ್ಪಷ್ಟತೆ ಮತ್ತು ನಿಖರತೆಯ ಪರಿಶೀಲನೆಗೆ ಬೆಂಚ್‌ಕೋರ್ಟ್ ನಿರ್ಮಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಸ್ಥಳೀಯ ಜಿಲ್ಲಾಧಿಕಾರಿ, ನ್ಯಾಯಾಧೀಶರು, ತಜ್ಞ ವೈದ್ಯಾಧಿಕಾರಿ ಸೇರಿದಂತೆ ಒಟ್ಟು 15-20 ನಿವೃತ್ತ ಅಧಿಕಾರಿಗಳು, ತಜ್ಞರು, ಪ್ರಾಜ್ಞರನ್ನೊಳಗೊಂಡ ಸಮಿತಿ ರಚಿಸುವುದು ಸೇರಿದಂತೆ ಇತ್ಯಾದಿ ವಿಚಾರಗಳನ್ನು ಪ್ರಸ್ತುತಪಡಿಸಿದ್ದಾರೆ. ದಯಾ ಮರಣ ದಯಪಾಲಿಸಿರುವ ದೇಶಗಳು : ಈಗಾಗಲೇ ನೆದರೆಂಡ್, ಸ್ವಿಡ್ವರ್ಲ್ಯಾಂಡ್, ಬೆಲ್ಲಿಯಂ, ನಾರ್ವೆ, ಸ್ವೀಡನ್, ಫಿಗ್ಲೆಂಡ್, ಲುಕ್ಸೆಂಬರ್ಗ್, ಅಲ್ವೇನಿಯಾ, ಥಾಯ್ಲೆಂಡ್ ಹಾಗೂ ಅಮೇರಿಕಾ, ಒರೆಗಾನ್ನ ಕೆಲವೆಡೆ ದಯಾಮರಣಕ್ಕೆ ಅವಕಾಶ ಕಲ್ಪಿಸಲಾಗಿದ್ದು ಭಾರತದಲ್ಲೂ ಇದಕ್ಕೆ ಮಾನ್ಯತೆ ನೀಡಬೇಕು ಎಂದು ಹೋರಾಡುತ್ತಲೇ ಇದ್ದರು ಕರಿಬಸಮ್ಮ. ಭಾರತದಲ್ಲಿ ದಯಾ ಮರಣದ ಬಗೆಗಿನ ದೃಷ್ಟಿಕೋನ : ಹೇಳಿ ಕೇಳಿ ಭಾರತ ದೇವರು, ಧರ್ಮ, ಸಂಪ್ರದಾಯಕ್ಕೆ ಹೆಚ್ಚು ಮಾನ್ಯತೆ ನೀಡುವ ದೇಶ. ದಯಾಮರಣದ ಕೋರಿಕೆ ಭಾರತದ ದೃಷ್ಟಿಯಲ್ಲಿ ಅಪರಾಧವಾಗಿ ಕಾಣುತ್ತಿದೆ. ಇದು ಕೇವಲ ಭಾವನಾತ್ಮಕ ಮಾತ್ರವಲ್ಲ ವಾಸ್ತವ ಬದುಕಿನೊಡನೆ ಮಿಳಿತಗೊಂಡಿರುವ ಬೇಡಿಕೆ ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಯಬೇಕಿದೆ. ಅಮಾನವೀಯವಾಗಿ ಅತ್ಯಾಚಾರಕ್ಕೆ ಒಳಗಾಗಿ ಅನೇಕ ವರ್ಷಗಳ  ಕಾಲ ಜೀವಚ್ಛವವಾಗಿ ನರಳಿದ ಮುಂಬೈನ ಕೆಎಂಇ ಆಸ್ಪತ್ರೆಯ ನರ್ಸ್ ಅರುಣ ಶಾನಬಾಗ್ ಅವರು ದಯನೀಯ ಸ್ಥಿತಿಯಲ್ಲೇ ಕೊನೆಯುಸಿರೆಳೆದರು. ಅವರ ಸ್ಥಿತಿ ಕಂಡು ಕರಗಿದ್ದ ಅವರ ಸ್ನೇಹಿತೆ ಪತ್ರಕರ್ತೆ ಪಿಂಕಿ ಏರಾನಿ ಕೂಡ ಸುಪ್ರೀಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅವರ ಮನವಿಗೆ ನೇರಾ ಪುರಸ್ಕಾರ ದೊರೆಯಲಿಲ್ಲ.  ಇಂತಹ ಅದೆಷ್ಟೋ ಮನವಿಗಳು ನೆನೆಗುದಿಗೆ ಬಿದ್ದಿರುವಾಗ ನನ್ನ ಮನವಿಗೆ  ಮನ್ನಣೆ ಸಿಗುವುದೇ ಎಂಬುದು ಯಕ್ಷಪ್ರಶ್ನೆಯಾಗಿತ್ತು. ಆದರೆ ಈಗ ಅದಕ್ಕೆ ಪರಿಹಾರ ದೊರಕಿದೆ ಎನ್ನುತ್ತಾರೆ ಕರಿಬಸಮ್ಮ.  ಪ್ರಯತ್ನ, ಪ್ರತಿಭೆ, ಆಶಾವಾದಿತನ, ವಿವೇಚನೆ ಎಲ್ಲಕ್ಕೂ ಮಂಕು ಕವಿಸಿ ಮರ್ಮಾಘಾತ ಉಂಟು ಮಾಡುವ ಕಾಣದ ಕೈಗಳ ಕೈ ಚಳಕ ತಿಳಿದಾಗ,  ಯಾರದ್ದೋ ಮೋಸ ದ್ರೋಹಕ್ಕೆ ತಾವು ನೋವು ನಲಿವುಗಳಿಗೆ ಗುರಿಯಾಗಿ ಭವಿಷ್ಯವನ್ನು ಕಳೆದುಕೊಳ್ಳುವವರನ್ನು ಕಂಡಾಗ,  ನೆಮ್ಮದಿಯಾಗಿ ಬದುಕುವುದಕ್ಕೆ ಸಾಧ್ಯವಾಗುತ್ತಿದೆಯೇ ಎಂಬ ಜಿಜ್ಞಾಸೆ ಮೂಡಿದಾಗ , ಜೀವನದುದ್ದಕ್ಕೂ ನೆಮ್ಮದಿಯ ಹರಸಿ ನೋವುಂಡ ಜೀವಗಳು ಸಾವಿನಲ್ಲಾದರೂ ನೆಮ್ಮದಿ  ಕಂಡುಕೊಳ್ಳಲಿ ಎಂದು ಆಶಿಸುವುದು ಅನಿವಾರ್ಯ. ಇಂತಹ ಸಂದರ್ಭಗಳಿಗೆ ಖಂಡಿತ ದಯಾ ಮರಣವೇ ಮದ್ದು ಎನ್ನದೆ ವಿಧಿಯಿಲ್ಲ ಎಂದು ನೋವಿನಿಂದ ನುಡಿಯುತ್ತಾರೆ ಕರಿಬಸಮ್ಮ . ದಯಾಮರಣದ ಜಾರಿಗೆ ಸುಪ್ರೀಕೋರ್ಟ್ ದುರುಪಯೋಗದ ನೆಪವೊಂದನ್ನೆ ಮುಂದೆ ಇಟ್ಟುಕೊಂಡು ಮನವಿ ತಳ್ಳಿದಾಗ, ಪ್ರಸ್ತುತ

 “ದಯಾಮರಣ ಮತ್ತು ಕರಿಬಸಮ್ಮ ಎಂಬ ವಾರ್ನಿಂಗ್ ಬೆಲ್”  ಗಂಗಾಧರ ಬಿ ಎಲ್ ನಿಟ್ಟೂರ್ Read Post »

ಇತರೆ, ಲಹರಿ

“ಒಂಟಿ ಚಪ್ಪಲಿಯ ಗೋಳಾಟ”ಕಲ್ಪನಾ ಎಸ್‌ ಪಾಟೀಲ್‌ ಅವರ ಒಂದು ಲಹರಿ ಬರಹ

ಲಹರಿಸಂಗಾತಿ ಕಲ್ಪನಾ ಎಸ್‌ ಪಾಟೀಲ್‌ “ಒಂಟಿ ಚಪ್ಪಲಿಯ ಗೋಳಾಟ” ನಾಲ್ಕು ದಿನ ಅಂತ ಊರಿಗೆ ಹೋಗಿದ್ದೆಮರಳಿದಾಗ ಅನಿಸ್ತಿತ್ತು ಏನೋ ಇಲ್ಲಲಾಮನೆ ಮುಂದ ಅಂಗಳದಾಗ,ಏನಿಲ್ಲ,?ಏನಿಲ್ಲ ಅಂತ ಒಳಗ ಕಾಲಿಡೊದ್ರಾಗ ಒಂಟಿ ಚಪ್ಪಲಿ ಗೋಳಾಡತಿತ್ತು.ಗೊಳೋ ಅಂತ ಅಳತಿತ್ತು  ಕುಂಯ್ಯೋss ಮರೋss ಅಂತ ಆಗಾಗ ನಿಟ್ಟುಸಿರು ಬಿಡತಾನೆ ಇತ್ತು. ನಾ ಏಕಾಂಗಿ ಆಗೇನಿ ಅಂತ ಬಿಕ್ಕಿ ಬಿಕ್ಕಿ ಅಳೋದನ್ನ  ನೋಡಿ.. ಏನಾಯಿತು? ಯಾಕೆ ಈ ರೋದನೆ? ಬಿಸಿಲ ಜಾಸ್ತಿ ಆಯಿತಾ?ಮನಸ್ಸು ಪ್ರಶ್ನೆ ಹಾಕಿತು,ತಕ್ಷಣ ನೆರಳಲ್ಲಿ ಬಿಡೋಕ ಬಲಕಾಲು ಮುಂದೆ ಬಂದು, ಗಬಕ್ಕನ ಹಿಂದೆ ಸರಿದು ಸುಮ್ನ ನಿಲ್ಲತು.ಯಾಕ ನಿನಗೇನಾತು? ನೀ ಯಾಕ ನಿಂತಿ ನೆರಳಾಗ ಬಿಡಾಕತ್ತಿದ್ದ್ಯಲ್ಲ.?ಅಲ್ಲಿವರೆಗೂ ಅದು ಎಡಗಾಲಿನ ಚಪ್ಪಲಿ, ಅಂತ ನನ್ನ ತಲೆಗೆ ಹೊಳದಿರಲಿಲ್ಲ. ಹೌದಲ್ಲ.ಹೌದು, ಎಲ್ಲಿ ನನ್ನ ಜೊತೆಗಾರ? ನೀನು ಹೋದಾಗಿನಿಂದ ನಾನು ಒಂಟಿಯಾಗಿದ್ದೀನಿ ಅಂತ ಗೋಳಾಡಾಕತ್ತು. ನಾವಿಬ್ಬರೂ ಎಂದೂ ಅಗಲತಿರಲಿಲ್ಲ,  ಎಲ್ಲಿ ಹೋದರೂ ಇಬ್ಬರೂ ಜೊತೆಯಾಗೆ ಹೋಗತಿದ್ದವಿ. ಒಟ್ಟಿಗೆ ಇರತಿದ್ದವಿ.ಅದ ಯಾವ ನಾಯಿ ನಮ್ಮನ್ನ ಬ್ಯಾರೆಮಾಡಿದೆಯೋ? ಮುಗಿತಿನ್ನು ನನ್ನ ಕತಿ,ನೀನು ನನ್ನ ದೂರ ಮಾಡತಿ.ಕಸದಾಗ ಎಸಿತಿ?ನನ್ನ ನೋವು ನಿನಗೆಲ್ಲಿ ಕಾಣಿಸಬೇಕು.  ನನ್ನ ನೀನ ತಯಾರ ಮಾಡಿ, ಆದ್ರೂ ನನಗ ಮಾತು ಬರುದಿಲ್ಲ.ಅದೇನೋ ಅಂತೀರಲ್ಲ ನೀವು ಮಿಸ್ ಮ್ಯಾಚಂತ ಹಂಗ ಮಾಡಕೊ.ನಾ ಎಲ್ಲಿ ಹೋಗುದಿಲ್ಲ ಅಂತು.ಹುಂ, ಆಯಿತ ಆಯಿತ ಸರಿ ನೋಡತಿನಿ ತಡೆ.ಮಿಸ್ ಮ್ಯಾಚಂತ,ಆಹಹಹಾ…ಈ ನಮ್ಮ ಕರಿಯಗ ಚಪ್ಪಲಿಯಂದ್ರ ಬಾಳ  ಪ್ರೀತಿ. ನನಗ ಅವನ ಮ್ಯಾಲ ಸಂಶಯ ಬರಾಕತ್ತಿತ್ತು.ನನ್ನ ನೋಡಿ ಎದೆ ಎತ್ತರಕ್ಕ ಜಿಗಿದ, ಮುಖ ನೆಕ್ಕಿ ಅರಿವಿ ಜಗ್ಗಿ ನನ್ನ ಯಾಕ ಬಿಟ್ಟ ಹೋಗಿದ್ದೆ? ಅಂತ ಕೇಳತಿತ್ತು.ಲೇ ಕರಿಯ ಚಪ್ಪಲಿ ಎಲ್ಲ್ಯಲೇ? ನಾ ನೋಡಿಲ್ಲ ಅಂತ ವರದಿ ಒಪ್ಪಿಸಿತು.ಬಾಳಷ್ಟು ಓಣ್ಯಾಗ ಹೋಗವ್ರನ್ನ ಸ್ನೇಹಿತರನ್ನ ಮಾಡಿಕೊಂಡಿದ್ದ. ಮನಿಯೆಲ್ಲ ಹುಡಕಾಡಿ, ಒಳಗ ಎಲ್ಲ ಹುಡಕಾಡಿದೆ.ಈಗರ ಬಂದಿ, ಕುಂಡರು, ನೀರು  ಕುಡಿ ಅಂದಳು ಆಯಿ. ಸಿಗತೈತಿ ಇಲ್ಲೆ, ಎಲ್ಲ್ಯರ ಬಿದ್ದಿರತೈತಿ.ನನಗೂ ಅದ ಸಿಗೂತನ ಸಮಾಧಾನ ಇರಲಿಲ್ಲ. ಯಾಕೋ ಬಾಳ ಕೆಟ್ಟ ಅನಿಸಾಕತ್ತಿ,  ನಾನು- ನನ್ನ ಸ್ನೇಹಿತರಿಂದ ದೂರಾದಂಗ ಅನಿಸಾಕತ್ತ.ಹೊರಗಡೆ ಹೋಗಿ ಮನೆಯ ಹಿಂದೆ, ಅಗ್ಗಲ-ಮಗ್ಗಲ ಒಂದು ಸುತ್ತ ಹೊಡೆದು ಸ್ವಲ್ಪ ದೂರ ಹೊದಾಗ ಅಲ್ಲಿ ಒಂದು ಚಪ್ಪಲಿ ಕಾಣಿಸಿತು, ಹತ್ತಿರ ಹೋಗಿ ನೋಡಿದ್ರ ಬಲಗಾಲಿನ ಚಪ್ಪಲಿ ಅನಾಥವಾಗಿ ಬಿದ್ದಿತ್ತು. ಇದರದು ಅದ ಗೋಳು. ಅಯ್ಯೋ, ಯಾರಿಗೆ ಹೇಳಲಿ ನನ್ನ ಗೋಳು? ನಮಗೂ ಮನುಷ್ಯರ ತರ ಮಾತಾಡೋಕ ಬರತಿದ್ರ, ಕೂಗಬಹುದಿತ್ತು. ಚೀರಿ ಹೇಳಬಹುದಿತ್ತು.  ಗಂಟಲೆ ಇಲ್ಲ. ತಮ್ಮ ಪಾದಗಳನ್ನ ಸುರಕ್ಷಿತವಾಗಿಟ್ಟುಕೊಳ್ಳಾಕ ನಮ್ಮನ್ನ ಸೃಷ್ಟಿ ಮಾಡಿಕೊಂಡ ಮನ್ಷ್ಯಾ ಆವಾಗವಾಗ, ಕಳೆದುಕೊಂಡಾಗಲೂ “ಹೋಗಲಿ ಬಿಡ ಪೀಡಾ ಹೋತಂತ” ಅಂತಿರಿ. ನೀವು ಕಳೆದು ನಮ್ಮನ್ನ ಪೀಡಾ ಅಂತಿರಿ. ಇದು ಖರೇನ, ಹಿಂಗ ಎಷ್ಟ ಸಲ ನಮ್ಮ ಮನ್ಯಾನವ್ರು, ಮದುವೆಗೆ, ಮಣ್ಣಿಗೆ ಹೋದಾಗ, ಯಾರೋ ಹಳೆಯ ಹರಿದ,ಸವೆದ,ಬಣ್ಣ ಮಾಸಿದ, ಉಂಗುಟ ಕಿತ್ತಿದ ಜೋಡುಗಳನ್ನ ಬಿಟ್ಟು ಇವರ ಹೊಸ ಜೋಡನ್ನ ಧರಿಸಿ ಹೋಗಿದ್ದಾಗ ಬರಿಗಾಲಲ್ಲಿ ಮನೆಗೆ ಬಂದಾಗ ಹಂಗ ಹೇಳಿದ್ದ ನೆನಪಾಯಿತು. ಅಷ್ಟರಾಗ, ಇದು ಓsss ನೀವೇನು ನನ್ನ ಹುಡಕ್ಕೊಂಡ ಬಂದ್ರಾ ಅಂತ ಕೇಳತು.ಹುಂ ಅಂದೆ..ನೀವು ಊರಗೆ ಹೋಗಬೇಕಾದ್ರ ನಮ್ಮನ್ನ ಎತ್ತಿಟ್ಟು ಹೋಗೊದಲ್ಲ! ನಮಗೇನು ಎದ್ದ ಹೋಗಾಕ ನಿಮ್ಮ ತರಹ ಕಾಲಿದ್ದಾವಾ… ನಮಗ ಜೀವ ಇಲ್ಲದಂಗ ಸೃಷ್ಟಿ ಮಾಡಿರಿ.ಬೇರೆ ಬೇರೆ ದೇಶದಾಗ ಮಕ್ಕಳಿಂದ ಹಿಡಿದು ದೊಡ್ಡವರು ಧರಿಸೊ ಜೋಡಗಳೊಳಗ ಬಣ್ಣ ಬಣ್ಣದ ವಿದ್ಯುತ್ ಲೈಟ್ , ಮ್ಯುಜಿಕ್ ಹಾಕತಾರ. ನಮ್ಮನ್ನ ಇಡಾಕ ಚಂದ ಚಂದ ಕಪಾಟ ಮಾಡಸ್ತಾರ. ನೀವು ಅದಿರಿ ಕೋಟಿಗಟ್ಟಲೆ ರೊಕ್ಕ ಖರ್ಚ ಮಾಡಿ ಮನೆ ಕಟ್ಟಸ್ತಿರಿ, ಹೊರತು ನಮಗ ಜಾಗ ಮಾತ್ರ ಇರುದಿಲ್ಲ. ಹಾಂ, ಇನ್ನೊಂದೇನದ ಹೊರಗಿನಿಂದ ಬರುವವರಗೆ ನಾವು ಮೊದಲ ಕಾಣಿಸಬಾರದಂತಿರಿ. ಹೇಳಿ ಮಾಡಸಿದ ಜೋಡಿ ಸಿಗುದಂದ್ರ ನಾವ ಅಲ್ಲೇನ,  ಮತ್ತೇನ ಸಿಗತೈತಿ ನಿಮಗ?ಅಂದಾಗ ನನಗ “ಹೇಳಿ ಮಾಡಿಸಿದ ಜೋಡು ಸಿಗುವುದು ಚಪ್ಪಲಿಯಲ್ಲಿ ಮಾತ್ರ ಉಳಿದೆಲ್ಲ ಹೊಂದಾಣಿಕೆ” ಅಂತ ಎಲ್ಲೋ ಓದಿದ್ದ ನೆನಪಾಯಿತು. ನಾನಂದೆ ಹೋಗಲಿ ಬಿಡು, ಈಗ ಸುಮ್ಮನ ನಡಿ ಅಂತ ಒಂಟಿಯಾದ ಜೋಡನ್ನ ಧರಿಸಿ ಮನೆಗೆ ಬಂದು ಒಂಟಿಯಾಗಿದ್ದರ ಪಕ್ಕ ಬಿಟ್ಟಾಗ, ಎರಡು  ಬಾಳ ಖುಷಿ ಪಟ್ಟಂತೆ ಭಾಸವಾಗತಿತ್ತು. ಎರಡು ಕೋಪ,ಇರಿಸುಮುರಿಸನ್ನ ಬಿಟ್ಟು ಎಲ್ಲ ಬೇಗ ಮರೆತು ಶಾಂತ ಅದವು. ನನ್ನ ಮನಸ್ಸು ಹೇಳಿತು, ನೋಡು ನೀವು ನರಮಾನವರು ಇರತಿರಿ, ಎನಾದ್ರೂ ಆದ್ರ ಲಗೂ ಮರೆಯೊದಿಲ್ಲ,  ದುಃಖಿಸ್ತಿರಿ,  ಮತ್ತ ಮತ್ತ ನೆನೆಸಿಕೊಂಡು ಅಳತಿರಿ. ಏನೋ, ಆದರೂ ಮನುಷ್ಯ ಅನ್ನೋ ವಿಚಿತ್ರ ಪ್ರಾಣಿನ ಆ ಭಗವಂತ ಅದೆಷ್ಟು ತಾಳ್ಮೆಯಿಂದ ಸೃಷ್ಟಿ ಮಾಡಿದ್ದಾನಲ್ಲ ಅಂತು. ಹುಂ, ಅದಕ್ಕ ಅಲ್ಲ ನನ್ನಲ್ಲಿ ಅಷ್ಟ ತಾಳ್ಮೆ ಐತಿ ಅಂದೆ, ಅದು ಶಾಂತವಾಗಿ ನಸುನಕ್ಕಿತು. ನನಗೂ ಖುಷಿ ಆಯಿತು. “ಹುಂ, ಚಪ್ಪಲಿ ಸಿಕ್ಕಿತಲ್ಲ, ಬಾ ಇನ್ನsss  ಒಳಗ, ಬಿಸಿಲ ಬಾಳೈತಿ ಹೊರಗ” ಅಂತ ಆಯಿಯ ಕೂಗು ಕೇಳಿಸಿ ಒಳ ನಡೆದೆ. ಕಲ್ಪನಾ ಎಸ್ ಪಾಟೀಲ ಕಾವ್ಯಧರೆ

“ಒಂಟಿ ಚಪ್ಪಲಿಯ ಗೋಳಾಟ”ಕಲ್ಪನಾ ಎಸ್‌ ಪಾಟೀಲ್‌ ಅವರ ಒಂದು ಲಹರಿ ಬರಹ Read Post »

ಇತರೆ

“ನಾವಾರು ಎಂಬ ಅರಿವು – ಜೀವನದ ನಿಜವಾದ ಶಕ್ತಿ”ಪೃಥ್ವಿರಾಜ್ ಟಿ ಬಿ.

ವ್ಯಕ್ತಿ ಸಂಗಾತಿ ”ಪೃಥ್ವಿರಾಜ್ ಟಿ ಬಿ. “ನಾವಾರು ಎಂಬ ಅರಿವು – ಜೀವನದ ನಿಜವಾದ ಶಕ್ತಿ ಮಾನವನ ಜೀವನದಲ್ಲಿ ಅನೇಕ ಸವಾಲುಗಳು ಬರುತ್ತವೆ. ಕೆಲವೊಮ್ಮೆ ಪರಿಸ್ಥಿತಿಗಳು ಕಠಿಣವಾಗಿರುತ್ತವೆ, ಕೆಲವೊಮ್ಮೆ ಜನರ ಮಾತುಗಳು ನಮ್ಮ ಮನಸ್ಸನ್ನು ನೋಯಿಸುತ್ತವೆ. ಆದರೆ ಈ ಎಲ್ಲದರ ಮಧ್ಯೆ ಅತ್ಯಂತ ಮುಖ್ಯವಾದ ಒಂದು ವಿಷಯ ಇದೆ – ನಾವಾರು ಎಂಬ ಅರಿವು. “ನಾವೇನೆಂದು ನಮಗೆ ತಿಳಿದಿದ್ದರೆ ಸಾಕು, ಮೂರನೆಯವರ ಮಾತಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ” ಎಂಬ ಮಾತು ಜೀವನದ ಬಹಳ ದೊಡ್ಡ ಸತ್ಯವನ್ನು ಹೇಳುತ್ತದೆ. ಇಂದಿನ ಸಮಾಜದಲ್ಲಿ ಜನರು ತಮ್ಮ ಜೀವನಕ್ಕಿಂತ ಹೆಚ್ಚು ಇತರರ ಜೀವನದ ಬಗ್ಗೆ ಮಾತನಾಡುತ್ತಾರೆ. ಕೆಲವರು ಪ್ರೋತ್ಸಾಹ ನೀಡುತ್ತಾರೆ, ಆದರೆ ಕೆಲವರು ಟೀಕೆ ಮಾಡುತ್ತಾರೆ. ನಮ್ಮ ಸಾಧನೆ, ನಮ್ಮ ಪ್ರಯತ್ನ ಅಥವಾ ನಮ್ಮ ಕನಸುಗಳ ಬಗ್ಗೆ ಕೆಲವರು ಅರ್ಥಮಾಡಿಕೊಳ್ಳದೇ ಮಾತನಾಡಬಹುದು. ಈ ಸಂದರ್ಭಗಳಲ್ಲಿ ನಾವು ಅವರ ಮಾತುಗಳನ್ನು ಮನಸ್ಸಿಗೆ ಹಾಕಿಕೊಂಡರೆ ನಮ್ಮ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಆದ್ದರಿಂದಲೇ ಸ್ವತಃ ನಮ್ಮನ್ನು ನಾವು ಅರಿತುಕೊಳ್ಳುವುದು ಬಹಳ ಮುಖ್ಯ. ಮಾನವನಿಗೆ ತನ್ನ ಮೇಲೆ ನಂಬಿಕೆ ಇದ್ದರೆ, ಯಾವುದೇ ಟೀಕೆ ಅಥವಾ ನಿಂದೆ ಅವನನ್ನು ಕುಗ್ಗಿಸಲು ಸಾಧ್ಯವಿಲ್ಲ. ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಚೆನ್ನಾಗಿ ಓದುತ್ತಿದ್ದಾನೆ ಎಂದುಕೊಳ್ಳಿ. ಆದರೆ ಕೆಲವು ಜನ “ನೀನು ಇದನ್ನು ಮಾಡಲಾಗುವುದಿಲ್ಲ” ಎಂದು ಹೇಳಬಹುದು. ಆ ಮಾತುಗಳನ್ನು ನಂಬಿ ಆತ ನಿರಾಶೆಯಾಗಿದರೆ ಅವನ ಪ್ರಯತ್ನ ವ್ಯರ್ಥವಾಗುತ್ತದೆ. ಆದರೆ ಅವನು ತನ್ನ ಶ್ರಮದ ಮೇಲೆ ವಿಶ್ವಾಸ ಇಟ್ಟಿದ್ದರೆ, ಇತರರ ಮಾತು ಅವನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜೀವನದಲ್ಲಿ ಯಶಸ್ಸು ಸಾಧಿಸಿದ ಅನೇಕ ಮಹಾನ್ ವ್ಯಕ್ತಿಗಳ ಕಥೆಗಳನ್ನು ನೋಡಿದರೆ ಇದೇ ವಿಷಯ ಸ್ಪಷ್ಟವಾಗುತ್ತದೆ. ಅವರು ತಮ್ಮ ಗುರಿಯ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು. ಪ್ರಾರಂಭದಲ್ಲಿ ಹಲವರು ಅವರನ್ನು ಟೀಕಿಸಿದರು, ಹಾಸ್ಯ ಮಾಡಿದರು. ಆದರೆ ಅವರು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ ತಮ್ಮ ದಾರಿಯಲ್ಲಿ ಸಾಗಿದರು. ಅಂತಿಮವಾಗಿ ಅವರ ಪರಿಶ್ರಮವೇ ಅವರನ್ನು ಯಶಸ್ಸಿನ ಶಿಖರಕ್ಕೆ ಕರೆದೊಯ್ದಿತು. ಇಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು (Social Media) ನಮ್ಮ ಜೀವನದ ಒಂದು ಭಾಗವಾಗಿವೆ. ಇಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ಸುಲಭವಾಗಿ ಹೇಳುತ್ತಾರೆ. ಕೆಲವೊಮ್ಮೆ ಅವು ಒಳ್ಳೆಯವು ಆಗಿರಬಹುದು, ಆದರೆ ಕೆಲವೊಮ್ಮೆ ಅವು ನೋವುಂಟುಮಾಡುವಂತೆಯೂ ಇರಬಹುದು. ಈ ಕಾರಣದಿಂದ ಕೆಲವರು ಇತರರ ಅಭಿಪ್ರಾಯಗಳಿಗೆ ಅತಿಯಾದ ಮಹತ್ವ ಕೊಡುತ್ತಾರೆ. ಅವರು ತಮ್ಮ ಸ್ವಂತ ಸಂತೋಷವನ್ನೇ ಮರೆತುಬಿಡುತ್ತಾರೆ. ಆದರೆ ನಾವು ನೆನಪಿಡಬೇಕಾದದ್ದು ಒಂದೇ – ನಮ್ಮ ಜೀವನವನ್ನು ನಾವು ಬದುಕಬೇಕು, ಇತರರು ಅಲ್ಲ. ಸ್ವತಃ ನಮ್ಮನ್ನು ನಾವು ಅರಿತುಕೊಳ್ಳುವುದು ಎಂದರೆ ನಮ್ಮ ಶಕ್ತಿಗಳು ಮತ್ತು ದುರ್ಬಲತೆಗಳನ್ನು ತಿಳಿದುಕೊಳ್ಳುವುದು. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಪ್ರತಿಭೆ ಇರುತ್ತದೆ. ಕೆಲವರು ಬರವಣಿಗೆಯಲ್ಲಿ ಉತ್ತಮರಾಗಿರಬಹುದು, ಕೆಲವರು ಸಂಗೀತದಲ್ಲಿ, ಇನ್ನೂ ಕೆಲವರು ವಿಜ್ಞಾನ ಅಥವಾ ಕೃಷಿಯಲ್ಲಿ ಪ್ರತಿಭೆ ಹೊಂದಿರಬಹುದು. ನಾವು ನಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡರೆ, ಇತರರ ಮಾತುಗಳು ನಮ್ಮನ್ನು ತಡೆಯಲು ಸಾಧ್ಯವಿಲ್ಲ.ಮೂರನೆಯವರ ಮಾತಿಗೆ ತಲೆ ಕೆಡಿಸಿಕೊಳ್ಳುವುದು ಜೀವನವನ್ನು ಕಠಿಣವಾಗಿಸುತ್ತದೆ.  ಉದಾಹರಣೆಗೆ, ಒಬ್ಬ ಯುವಕ ತನ್ನ ಕನಸನ್ನು ಅನುಸರಿಸಲು ಬಯಸುತ್ತಾನೆ. ಆದರೆ ಸುತ್ತಮುತ್ತಲಿನ ಜನರು “ಇದು ಸಾಧ್ಯವಿಲ್ಲ”, “ನೀನು ಇದರಲ್ಲಿ ಯಶಸ್ವಿಯಾಗುವುದಿಲ್ಲ” ಎಂದು ಹೇಳಬಹುದು. ಈ ಮಾತುಗಳನ್ನು ಕೇಳಿ ಆತ ತನ್ನ ಕನಸನ್ನೇ ಬಿಟ್ಟುಬಿಟ್ಟರೆ, ಅವನ ಜೀವನದಲ್ಲಿ ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಾನೆ. ಆದರೆ ಆತ ತನ್ನ ಮನಸ್ಸಿನ ಧ್ವನಿಯನ್ನು ಕೇಳಿ ಮುಂದೆ ನಡೆದರೆ, ಅವನು ಖಂಡಿತವಾಗಿಯೂ ಸಾಧನೆ ಮಾಡಬಹುದು. ಇತರರ ಅಭಿಪ್ರಾಯಗಳು ಕೆಲವೊಮ್ಮೆ ಉಪಯುಕ್ತವಾಗಬಹುದು, ಆದರೆ ಅವು ನಮ್ಮ ಜೀವನವನ್ನು ನಿರ್ಧರಿಸಬಾರದು. ನಾವು ಯಾವ ದಾರಿಯನ್ನು ಆರಿಸಬೇಕು ಎಂಬುದು ನಮ್ಮ ನಿರ್ಧಾರವಾಗಿರಬೇಕು. ಜನರು ಮಾತನಾಡುವುದು ಸಹಜ. ಇಂದು ಒಂದು ವಿಷಯದ ಬಗ್ಗೆ ಮಾತನಾಡುತ್ತಾರೆ, ನಾಳೆ ಮತ್ತೊಂದು ವಿಷಯದ ಬಗ್ಗೆ ಮಾತನಾಡುತ್ತಾರೆ. ಆದರೆ ನಾವು ಅವರ ಪ್ರತಿಯೊಂದು ಮಾತಿಗೂ ಮಹತ್ವ ನೀಡಿದರೆ, ನಮ್ಮ ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ.ಜೀವನದಲ್ಲಿ ಶಾಂತಿ ಮತ್ತು ಸಂತೋಷ ಬೇಕಾದರೆ, ಮೊದಲಿಗೆ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಇರಬೇಕು. ಸ್ವಾಭಿಮಾನ ಇರುವ ವ್ಯಕ್ತಿ ಯಾರ ಮಾತಿಗೂ ಸುಲಭವಾಗಿ ಕುಗ್ಗುವುದಿಲ್ಲ. ಆತ ತನ್ನ ಮೌಲ್ಯವನ್ನು ತಿಳಿದಿರುತ್ತಾನೆ. ಆತ್ಮವಿಶ್ವಾಸ ಇರುವ ವ್ಯಕ್ತಿ ತನ್ನ ಗುರಿಯತ್ತ ಧೈರ್ಯವಾಗಿ ಸಾಗುತ್ತಾನೆ. ಇದರ ಜೊತೆಗೆ ನಮಗೆ ಬೆಂಬಲ ನೀಡುವ ಜನರನ್ನು ಗುರುತಿಸುವುದೂ ಮುಖ್ಯ. ನಮ್ಮ ಕುಟುಂಬ, ಸ್ನೇಹಿತರು ಅಥವಾ ಶಿಕ್ಷಕರು ಕೆಲವೊಮ್ಮೆ ನಮಗೆ ಮಾರ್ಗದರ್ಶನ ನೀಡುತ್ತಾರೆ. ಅವರ ಸಲಹೆಗಳು ನಮ್ಮ ಬೆಳವಣಿಗೆಗೆ ಸಹಾಯ ಮಾಡಬಹುದು. ಆದರೆ ಎಲ್ಲರ ಮಾತನ್ನೂ ಒಂದೇ ರೀತಿ ಸ್ವೀಕರಿಸಬೇಕೆಂದು ಇಲ್ಲ. ನಾವು ಯಾವ ಮಾತು ನಮ್ಮ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ನಾವೇನೆಂದು ನಮಗೆ ತಿಳಿದಿದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಸ್ವತಃ ಪರಿಹಾರವಾಗುತ್ತವೆ. ನಮ್ಮ ಮೌಲ್ಯವನ್ನು ಅರಿತುಕೊಂಡ ವ್ಯಕ್ತಿ ಯಾರ ಮುಂದೆ ತಲೆಬಾಗುವುದಿಲ್ಲ. ಆತ ತನ್ನ ಜೀವನವನ್ನು ಗೌರವದಿಂದ ನಡೆಸುತ್ತಾನೆ. ಇತರರ ಟೀಕೆಗಳು ಅವನನ್ನು ದುರ್ಬಲಗೊಳಿಸುವುದಿಲ್ಲ, ಬದಲಾಗಿ ಇನ್ನಷ್ಟು ಬಲಿಷ್ಠನನ್ನಾಗಿ ಮಾಡುತ್ತವೆ. ಕೊನೆಯಲ್ಲಿ ಹೇಳಬೇಕಾದದ್ದು ಏನೆಂದರೆ – ಜೀವನದಲ್ಲಿ ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಿಲ್ಲ. ಯಾರೇ ಆಗಲಿ, ಏನೇ ಮಾಡಿದರೂ ಕೆಲವು ಜನರು ಟೀಕೆ ಮಾಡುತ್ತಾರೆ. ಆದ್ದರಿಂದ ನಾವು ಎಲ್ಲರ ಮಾತಿಗೂ ಮಹತ್ವ ಕೊಡದೆ, ನಮ್ಮ ಗುರಿಯತ್ತ ಗಮನಹರಿಸಬೇಕು. ನಮ್ಮ ಮನಸ್ಸು ಶುದ್ಧವಾಗಿದ್ದರೆ ಮತ್ತು ನಮ್ಮ ಉದ್ದೇಶ ಸತ್ಯವಾಗಿದ್ದರೆ, ಇತರರ ಮಾತುಗಳಿಂದ ನಾವು ಅಲುಗಾಡಬಾರದು.“ನಾವೇನೆಂದು ನಮಗೆ ತಿಳಿದಿದ್ದರೆ ಸಾಕು, ಮೂರನೆಯವರ ಮಾತಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ” ಎಂಬ ಮಾತು ನಮಗೆ ಆತ್ಮವಿಶ್ವಾಸದ ಮಹತ್ವವನ್ನು ನೆನಪಿಸುತ್ತದೆ. ನಮ್ಮ ಜೀವನದ ದಾರಿಯನ್ನು ನಾವು ಸ್ವತಃ ಆಯ್ಕೆ ಮಾಡಬೇಕು. ಇತರರ ಮಾತುಗಳು ನಮ್ಮನ್ನು ತಡೆಯುವ ಬದಲು, ನಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿ ಮಾಡಲಿ. ಅಂತಿಮವಾಗಿ, ಜೀವನದ ನಿಜವಾದ ಸಂತೋಷ ಹೊರಗಿನ ಮೆಚ್ಚುಗೆಯಲ್ಲಿ ಇಲ್ಲ, ಅದು ನಮ್ಮ ಒಳಗಿನ ಆತ್ಮಸಂತೋಷದಲ್ಲಿ ಇದೆ. ನಾವು ನಮ್ಮನ್ನು ನಾವು ನಂಬಿದರೆ, ಯಾವುದೇ ಅಡೆತಡೆಗಳು ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ತಮ್ಮ ಮೇಲೆ ನಂಬಿಕೆ ಇಟ್ಟು, ಇತರರ ಮಾತಿಗೆ ತಲೆ ಕೆಡಿಸಿಕೊಳ್ಳದೆ, ತಮ್ಮ ಕನಸುಗಳತ್ತ ಧೈರ್ಯವಾಗಿ ಮುಂದೆ ಸಾಗಬೇಕು. ಇದೇ ಜೀವನದ ನಿಜವಾದ ಜ್ಞಾನ ಮತ್ತು ಯಶಸ್ಸಿನ ದಾರಿ ಪೃಥ್ವಿರಾಜ್ ಟಿ ಬಿ.

“ನಾವಾರು ಎಂಬ ಅರಿವು – ಜೀವನದ ನಿಜವಾದ ಶಕ್ತಿ”ಪೃಥ್ವಿರಾಜ್ ಟಿ ಬಿ. Read Post »

ಇತರೆ, ರಂಗಭೂಮಿ

“ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ” ಗೊರೂರು ಅನಂತರಾಜು

ರಂಗ ಸಂಗಾತಿ ಗೊರೂರು ಅನಂತರಾಜು “ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ” 50 ವರ್ಷದ ಸನಿಹದಲ್ಲಿರುವ ಬೆಂಗಳೂರಿನ ಗೆಜ್ಜಹೆಜ್ಜೆ ರಂಗತಂಡವು ಬೆಂಗಳೂರು ಸೇವಾ ಸದನ ರಂಗಮಂದಿರದಲ್ಲಿ ದಿನಾಂಕ 12.03.206 ರಂದು ಯುಗಾದಿ ರಂಗ ಸಂಭ್ರಮ ನಾಟಕೋತ್ಸವ ಏರ್ಪಡಿಸಿತ್ತು.  ರಂಗಭೀಷ್ಮ ಬಿ ವಿ ಕಾರಂತರ ಸಂಗೀತ ಸುಂಯೋಜನೆಯಲ್ಲಿ ಮೂಡಿ ಬಂದ  ಗಜವದನ ಏರಂಬ ಎಂಬ ಗೀತೆಯನ್ನು ಗಣೇಶಯ್ಯನವರು ಆಡುವುದರ ಮುಖೇನ ನಾಟಕೋತ್ಸವಕ್ಕೆ ಚಾಲನೆ ನೀಡಿದರು  ಹಲವಾರು ಪ್ರಸಿದ್ಧ ನಾಟಕಗಳ ರಂಗಗೀತೆಗಳನ್ನು ಒಂದು ಗಂಟೆಗಳ ಕಾಲ ಹಾಡಲಾಯಿತು  ತಂಡದ ಹೊಸ ಪ್ರಯೋಗ ಮಾದಕ ಯುವ ಮಾರಕ ಪ್ರದರ್ಶಿಸಲಾಯಿತು. ಯುವ ಜನತೆ ದುಶ್ಚಟಕ್ಕೆ ದಾಸರಾಗ್ತ ಇದ್ದಾರೆ. ಇದರ ಸುತ್ತ ಹೆಣೆಯಲಾದ ಕಥಾ ಹಂದರ ಮನುಷ್ಯ ಅನುಮಾನ ಮತ್ತು ಅವಮಾನದಿಂದ ಕೋಪ ತಾಪ ಆವೇಶ ಚಟ ಬಿದ್ದು ಚಟ್ಯಕೆ ಏರುತ್ತಾನೆ. ಬೀದಿ ಬದಿಗಳಲ್ಲಿ ಜನಸಂದಣಿ ಇರುವ ಜಾಗಗಳಲ್ಲಿ ಶಾಲಾ-ಕಾಲೇಜುನ ಸಮೀಪ ಏರ್ಪೋರ್ಟ್ ಬಸ್ಟ್ಯಾಂಡ್ ರೈಲು ನಿಲ್ದಾಣ ಮುಂತಾದ ಕಡೆಗಳಲ್ಲಿ ಗಾಂಜಾ ಅಫೀಮು ಎಲಾಯಿನ್ ಮತ್ತೇರಿಸುವ ಪದಾರ್ಥಗಳನ್ನು ಮಾರುತಿರುತ್ತಾರೆ. ಯುವಕ ಯುವತಿಯರನ್ನು ದುಶ್ಚಟಕ್ಕೆ ದಾಸರನ್ನಾಗಿಸುವ ವಂಚಕರ ಜಾಲವೇ ವಿಪರೀತವಾಗಿದೆ. ಪ್ರೇಕ್ಷಕರಿಗೆ ನೇರವಾಗಿ ಡ್ರಗ್ಸ್ ಮಾರಾಟ ಕಂಡು ಬಂದಲ್ಲಿ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಒಂದು ಪಾತ್ರ ಹೇಳುತ್ತದೆ. ಯುವ ಜನತೆಯನ್ನು ದುಸ್ಥಿತಿಯಿಂದ ಕಾಪಾಡಬೇಕಾದ ಪರಿಸ್ಥಿತಿ ಒದಗಿ ಬಂದಿರುವುದು ನೋವಿನ ಸಂಗತಿ. ಧರೆಗೆ ತಂದು ಬಿಟ್ಬಿಟ್ನಪ್ಪ ಆಟ ಆಡ್ಸೋಕೆ ಪಾಠ ಕಲ್ಸೋಕೆ ಈ ಭೂಮಿ ಎಂಬ ರಂಗದ ಮೇಲೆ ಹಾಡೋಕ್ ಬಿಟ್ಟವ್ನೆ, ಕಾಮ ನೇಮ ಲೋಭ ಲಾಭದ ಪಾತ್ರ ಕೊಟ್ಟವ್ನೆ ಅಂತ ಹೇಳ್ತಾ ಪ್ರಹಸನ ಮುಕ್ತಾಯವಾಗುತ್ತದೆ. ನಿಂತ್ಕೋಳಿ ಅಲ್ಲಲ್ಲ ಕುಳಿತುಕೊಳ್ಳಿ ಎಂಬ  ಹಾಸ್ಯ ಕಿರು ನಾಟಕ ಮತ್ತು ಎಂಡ್ ಇಲ್ಲದ ಬಂಡ್ ಅವತಾರ ರಾಜಕೀಯ ವಿಡಂಬನಾತ್ಮಕ ನಗೆ ನಾಟಕ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತದೆ ತಂಡ. ರಂಗ ಉಪನ್ಯಾಸ ರಂಗ ಗೀತೆಗಳು, ಕಿರು ನಾಟಕ ರಂಗದ ಬಗ್ಗೆ ಮಾತುಗಳು ರಂಗ ಹಾಸ್ಯ ಪಟಾಕಿ ಎಲ್ಲಾ ಸರಿಸುಮಾರು ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿತು ಚಿಂತನೆಗೂ ಚಾಲನೆ ನೀಡಿತು.  ಬೆಳಕು ವಿನ್ಯಾಸ ರವಿಶಂಕರ್ ಪ್ರಸಾದನ ಶಿವು, ಉಪನಿಷ ವಸ್ತ್ರಾಲಂಕಾರ ಪುಷ್ಪಲತಾ. ಪ್ರಚಾರ ಅಮಿತಾನಂದ ಶೇಖ ಪಾತ್ರವರ್ಗದಲ್ಲಿ ಮೈಸೂರು ರಮಾನಂದ್, ಶೇಖರ್ ಸೂರ್ಯನಾರಾಯಣರಾವ್,  ಲಲಿತಾ ಗಣೇಶಯ್ಯ, ಟಿ.ಜಿ ಹರೀಶ್ ಸಂಗೀತ. ನಾಟಕ ಬರೆದಾಡಿಸಿದವರು ಮೈಸೂರು ರಮಾನಂದ. ಗೊರೂರು ಅನಂತರಾಜು

“ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ” ಗೊರೂರು ಅನಂತರಾಜು Read Post »

You cannot copy content of this page

Scroll to Top