ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಲೋಹದ ಹಕ್ಕಿಯೊಳು ತಣ್ಣನೆ ಪ್ರವೇಶ

ಪುಸ್ತಕ ಸಂಗಾತಿ ಲೋಹದ ಹಕ್ಕಿಯೊಳು ತಣ್ಣನೆ ಪ್ರವೇಶ             ಶಿವಪುತ್ರ ಅಜಮನಿಯವರು ಕಾವ್ಯ ಕ್ಷೇತ್ರದಲ್ಲಿ ಗುರುತಿಸಿ ಕೊಳ್ಳುತ್ತಲೇ ಸಮಾಜ ಚಿಂತಕರಾಗಿ ಹೊರಹೊಮ್ಮಿದವರು. ಕ್ರಿಯಾಶೀಲ ಬರಹಗಾರರು. ಸಿಂಗಾಪುರ,ಅಬುದಾಬಿಗಳಂತಹ  ವಿಶ್ವಕನ್ನಡ ಸಮ್ಮೇಳನ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನವನ್ನು ವಾಚನ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ. ಯಾವುದೇ ಕೀರ್ತಿ.  ಸನ್ಮಾನಕ್ಕೆ ಎಂದು ಆಸೆ ಪಟ್ಟವರಲ್ಲ ತುಂಬ ಸರಳ ಜೀವಿ. ಬಡತನದಲ್ಲೆ ಬೆಳೆದರೂ ಅವರ ಸಾಧನೆಗೆ ಅವರ ವಿದ್ವತ್ತಿಗೆ ಬಡತನ ಎಂದು ಅಡ್ಡಿಯಾಗಿಲ್ಲದಂತೆ ಸಾಹಿತ್ಯ ಲೋಕಕ್ಕೆ ತಮ್ಮ ಕೊಡುಗೆಯನ್ನು ನೀಡಿದವರು ಶಿವಪುತ್ರ ಅಜಮನಿ. ವಿಜಯಪುರ ಜಿಲ್ಲೆ ಮುದ್ದೇಬಿಹಾಳದವರು. ಕಾವ್ಯ, ಕತೆ, ನಾಟಕಗಳನ್ನು ಬರೆದಿದ್ದಾರೆ. ಕೆಲವು ತಮ್ಮ ಬರಹಗಳನ್ನೇ ಕಿರುಚಿತ್ರವನ್ನಾಗಿಸಿ  ಸ್ವತಃ ತಾವೇ ಅಭಿನಯಿಸಿದ್ದಾರೆ. ಇಂತಹ ಚಿತ್ರಗಳು ಯಶಸ್ಸನ್ನು ಕೂಡಾ ಪಡೆದುಕೊಂಡಿವೆ. ಅಪರೂಪದಲ್ಲಿ ಅಪರೂಪವಾಗಿ ಕಾಣಿಸಿಕೊಂಡ ಬರಹ ಅವರ ಆತ್ಮಕಥೆ “ ಹೊಲಗೇರಿಯಿಂದ ಹೊರದೇಶಕ್ಕೆ” ಕಥನದ ಶಿರ್ಷಿಕೆಯೇ ಹೇಳುವ ಹಾಗೆ ಇಲ್ಲಿ ದಲಿತ ಸಂವೇದನೆಯನ್ನು ಅನಾವರಣಗೊಳಿಸಿದ್ದಾರೆ. ಕಾವ್ಯ ಬರಹದಿಂದ ಗದ್ಯದ ಕಡೆ ತಮ್ಮ ಒಲವನ್ನು ತೋರಿಸಿ ಆತ್ಮ ಕಥನ ಲೋಕಕ್ಕೆ ಪ್ರವೇಶ ಪಡೆದುಕೊಂಡ ಲೇಖಕ ಶಿವಪುತ್ರ ಅಜಮನಿ. ಹೊಲಗೇರಿಯಿಂದ ಹೊರದೇಶಕ್ಕೆ ಕೃತಿಯು ತುಂಬ ವಿಶಿಷ್ಟ ಮತ್ತು ಮಹತ್ವದ ಕೃತಿಯಾಗಿದೆ. ಶಿವಪುತ್ರ ಅಜಮನಿಯವರ ಇಡೀ ಜೀವನ ವೃತ್ತಾಂತವನ್ನೇ ತೆರೆದಿಟ್ಟಿದ್ದಾರೆ. ಇಂತಹ ಕೃತಿ ಒಬ್ಬ ಲೇಖಕನದ್ದು ಮಾತ್ರವಾಗದೇ ಎಲ್ಲ ದಲಿತರ ಜೀವನವೇ ಆಗಿದೆ. ಮರಾಠಿ ಮೂಲದಿಂದ ಬಂದ ದಲಿತ ಆತ್ಮಕಥನ ಪರಂಪರೆಯನ್ನು ಕನ್ನಡ ಸಾಹಿತ್ಯದ ಪರಪಂಪರೆಯಲ್ಲಿ ಕಂಡಾಗ, ಮರಾಠಿ ಮೂಲವೇ ಇಲ್ಲಿ ಪ್ರಭಾವನ್ನು ಬೀರಿದ್ದು ಎಂದರೆ ಸುಳ್ಳಲ್ಲ. ಅಲ್ಲಿನ ದಲಿತ ಸಂವೇದನೆ, ನೋವು, ನಲಿವು, ಹತಾಶೆ, ಅವಮಾನ, ಕಿತ್ತು ತಿನ್ನುವ ಬಡತನ, ತುತ್ತು ಕೂಳಿಗಾಗಿ ಸಹಿಸಿದ ಅವಮಾನಗಳೆಲ್ಲವೂ ಕೂಡಾ ಇಂದು ನಿನ್ನೆಯದಲ್ಲಾ. ಅರವತ್ತು ಎಪ್ಪತ್ತರ ದಶಕದಿಂದ ಇಲ್ಲಿಯ ವರೆಗೆ ಅದೇ ಹತಾಶೆ ಬದುಕು ಕಣ್ಣೆದುರಿಗೆ ಹಾಗೇ ಇದೆ. ಅದನ್ನು ಶಿವಪುತ್ರ ಅಜಮನಿಯವರ ಆತ್ಮಕತೆ ಮತ್ತೆ ಅನಾವರಣಗೊಳಿಸುತ್ತದೆ. ತನ್ನೊಳಗೆ ತಾನು ಇಣುಕಿನೊಡಿಕೊಳ್ಳುವ ತನ್ನ ಆತ್ಮಸಾಕ್ಷಿ ಪ್ರಜ್ಞೆಯನ್ನು ಸದಾ ಜಾಗೃತಗೊಳಿಸಿಕೊಳ್ಳುತ್ತಲೇ, ಏನಾದರೂ ಸಾಧಿಸಬೇಕೆಂಬ ಛಲ ಹೊತ್ತ ನಾಯಕನನ್ನು ಈ ಆತ್ಮಕಥನದಲ್ಲಿ ಕಾಣುತ್ತೇವೆ. ಶಿವಪುತ್ರ ಅಜಮನಿಯವರು ಹೇಳುವ ಹಾಗೇ ತಮ್ಮ ಜೀವನದಲ್ಲಿ ನಡೆದ ಸತ್ಯಘಟನೆಗಳನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ. ಯಾವುದೇ ಒಂದು ಕೃತಿ ಹೊರಬರಬೇಕಾದರೆ ಆ ಲೇಖಕನಿಗೆ ಸತ್ಯ ಹೇಳುವ ದೈರ್ಯ ಮುಖ್ಯವಾಗುತ್ತದೆ. ಯಾರ ಮುಲಾಜಿಗೂ ಒಳಗಾಗದೇ, ತಮ್ಮ ಮೇಲೆ ಹಾಗೂ ಇಡೀ ಸಮುದಾಯದ ಮೇಲೆ ಆದಂತಹ ಅಸ್ಪ್ರಷ್ಯತೆ,   ನಿಂದನೆ, ಅವಮಾನವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಶಿವಪುತ್ರ ಅಜಮನಿ ಅವರಿಗೆ ತುಡಿತವಿದೆ. ಅವಮಾನದ ವಿರುದ್ಧ ಸಿಟ್ಟು ಸೆಡವು ಇದೆ.ಅಂತೆಲೇ ಅವರು ಬಂಡಾಯ ಏಳುತ್ತಾರೆ. ದಲಿತ ಕೇರಿಯ ಚಿತ್ರಣವು ಇಲ್ಲಿ ಹಾಸುಹೊಕ್ಕಾಗಿದೆ. ಒಂದು ಕಡೆ ಸೂರು ಇಲ್ಲದ ದಲಿತ ಜನಾಂಗಕ್ಕೆ ಶಾಲೆ, ಬೀದಿ ಪಕ್ಕದ ರಸ್ತೆ ,ಗುಡಿ ಗೋಪುರಗಳೇ  ಗತಿ. ಇಂತಹ ಸೂರಿಲ್ಲದ ಅವರ ಬದುಕಿನ ಚಿತ್ರಣವನ್ನು ಹೇಳುತ್ತಾರೆ. ಮಳೆಗಾಲದ ಸಂಧರ್ಭದಲ್ಲಿ ಪಟ್ಟ ಪಾಡನ್ನು ಅನಾವರಣಗೋಳಿಸುತ್ತಲೆ ಆತ್ಮ ಕಥೆ ಪ್ರವೇಶವನ್ನು ಪಡೆದುಕೊಳ್ಳುತ್ತದೆ. ಶಾಲೆಯಲ್ಲಿಯೇ ಅವರ ತಾಯಿ ಮತ್ತು ಇನ್ನಿತರೆ ಮಕ್ಕಳೊಂದಿಗೆ ಬದುಕು ಸಾಗಿಸುವದು ಎಂತವರನ್ನಾದರು ಘಾಸಿಗೊಳಿಸುತ್ತದೆ. ಹಸಿದ ಹೊಟ್ಟೆಗೆ ಹಿಡಿ ಹಿಟ್ಟು ಹುಡುಕುವದು ಕೂಡಾ ಕಡು ಕಷ್ಟವೇ ಆದಂತಹ ಸಂದರ್ಭವನ್ನು “ಸತ್ತ ದನದ ಮಾಂಸಕ್ಕಾಗಿ ಹಗಲಿರುಳು ಕಾಯುವದು, ಸಿಕ್ಕ ಸತ್ತ ದನದ ಮಾಂಸವನ್ನು ಮೃಷ್ಟಾನ್ನವನ್ನಾಗಿ ಹೊಟ್ಟೆ ತುಂಬಿಸಿಕೊಳ್ಳುವ ದಾರುಣ ಚಿತ್ರಣವನ್ನು ಎಂತಹ ಗಟ್ಟಿಗರನ್ನಾದರೂ ಘಾಸಿಗೊಳಿಸದೆ ಇರಲಾರದು. ಒಂದು ಹೊಸ ಬಟ್ಟೆ ಗೊಸ್ಕರ ಸತ್ತ ದನದ ಎಲುಬು(ಮೂಳೆ)ಯನ್ನು ಆಯ್ದು, ಮಾರಾಟ ಮಾಡಿ ಹೊಸ ಬಟ್ಟೆ ಹಾಕಿಕೊಂಡು ತನ್ನ ಆಶೆಯನ್ನು ತೀರಿಸಿಕೊಳ್ಳುವ ಬಗೆ ಮನಸ್ಸನ್ನು ಕಲಕಿ ಬಿಡುತ್ತದೆ. ರಮಜಾನ ಹಬ್ಬದ ಸಂಧರ್ಭದಲ್ಲಿ ಬಿರಿಯಾನಿ ತಿನ್ನಲೇಬೇಕು ಎಂದು ಮಸೀದಿ ಮುಂದೆ ಚಪ್ಪಲಿಗಳನ್ನು ಕಾಯ್ದು ಬಿರಿಯಾನಿ ತಿಂದದ್ದು, ಊರಲ್ಲಿ ಯಾರಾದರೂ ಸತ್ತರೇ ಖುಷಿ ಇಮ್ಮಡಿಯಾಗುವ ಪ್ರಸಂಗ, ಗೋರಿ ಮೇಲಿನ ಗೋಧಿ ಮತ್ತು ಉಪ್ಪು ಸ್ವಲ್ಪ ದಿನಗಳಾದರೂ ಹಸಿವನ್ನು ಹೋಗಲಾಡಿಸಬಲ್ಲದು ಎಂಬ ಇರಾದೆಯಲ್ಲಿಯೇ ಸತ್ತ ಸುದ್ದಿಗಾಗಿ ಕಾಯುವದು, ಹೊಲಗೇರಿಯಿಂದ ಹೊರದೇಶಕ್ಕೆ ಆತ್ಮಕಥೆಯಲ್ಲಿ ಹೇಳಲೇಬೇಕಾದ ಮಹತ್ವದ ವಿಷಯವೆಂದರೆ, ಲೇಖಕನ ತಾಯಿ ನಿಂಬೆವ್ವನ ಪಾತ್ರ ತುಂಬಾ ಗಮನ ಸೆಳೆಯುತ್ತದೆ. ಎಂತಹ ಕಷ್ಟ ಬಂದರು ಮಕ್ಕಳಿಗೆ ಅದರ ಗಾಢ ಅರಿವು ಆಗದಂತೆ, ತನ್ನ ಕುಟುಂಬದ ಜವಾಬ್ದಾರಿ ಹೊತ್ತ ನಿಂಬೆವ್ವಾ ಇಲ್ಲಿ ಮುಖ್ಯವಾಗುತ್ತಾಳೆ. ತಪ್ಪಾದಾಗ ತಿದ್ದುವ ಕಷ್ಟಕ್ಕೆ ಎದೆಗುಂದದ ದಿಟ್ಟ ಮಹಿಳೆಯಾಗಿದ್ದಾಳೆ. ಕೇರಿಯಲ್ಲಿ ಬದುಕನ್ನು ಸಾಗಿಸುವ, ದೇವದಾಸಿಯರೆಂದು ಹಣೆಪಟ್ಟಿ ಕಟ್ಟಿಕೊಂಡು ಅವಮಾನಿತರಾದ ದೇವದಾಸಿಯರ ಮನಸ್ಸನ್ನು ಪರಿವರ್ತಿಸಿ ಅವರನ್ನು ಸರಿದಾರಿಗೆ ತಂದು ಸಮಾಜದಲ್ಲಿ ಒಂದಾಗಿ ಬದುಕುವಂತೆ ಮಾಡಿದ್ದು ಹೀಗೆ ಅನೇಕ ಘಟನೆಗಳನ್ನು ಒಡಮೂಡಿಸಿದ್ದಾರೆ. ಹೊಲಗೇರಿಯಿಂದ ಹೊರದೇಶಕ್ಕೆ ಆತ್ಮಕಥೆಯಲ್ಲಿ ಇಪ್ಪತ್ತಮೂರು ಅಧ್ಯಾಯಗಳನ್ನು ಒಳಗೊಂಡ ಆತ್ಮಚರಿತ್ರೆಯಾಗಿದೆ. ಶಿವಪುತ್ರ ಅಜಮನಿ ಅವರು ಸಮಾಜದಲ್ಲಿ ನಡೆಯುವ ಜಾತಿ ಪಿಡುಗಿನ ಬಗ್ಗೆ ದ್ವನಿ ಎತ್ತಿದ್ದಾರೆ. ಸಮಾಜದಲ್ಲಿ ನಡೆಯುವ ಅನ್ಯಾಯ, ಅಚಾತುರ್ಯ, ಅವಮಾನಗಳ ವಿರುದ್ಧ ಧ್ವನಿಯಾಗಿ ಸಮಾಜದಲ್ಲಿ ಎಲ್ಲರೂ ಒಂದೇ ಎಂದು ಹೇಳುವ ಉದ್ದೇಶ ಇಲ್ಲಿ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಶಿವಪುತ್ರ ಅಜಮನಿಯವರು ದಲಿತ ಸಂವೇದನೆಯನ್ನು ಬಿಡಿ ಬಿಡಿಯಾಗಿ ಅಕ್ಷರಗಳ ಮೂಲಕ ಉಣಬಡಿಸುತ್ತಾರೆ. ಇಡೀ ಆತ್ಮಕಥನದ ಉದ್ದಕ್ಕೂ, ಶಿವಪುತ್ರ ಅಜಮನಿಯವರು ನಿರೂಪಕರಾಗಿ ತಮ್ಮದೇ ಶೈಲಿಯ ಉತ್ತರ ಕರ್ನಾಟಕದ ದೇಶಿಯ ಭಾಷೆಯ ಸೊಗಡನ್ನು ಕಟ್ಟಿಕೊಡುತ್ತಾರೆ. ಉತ್ತರ ಕರ್ನಾಟಕದ ಜವಾರಿ ಭಾಷೆಯನ್ನು ನೇರಾ ನೇರವಾಗಿ ಬಳಸಿಕೊಂಡು ಓದುಗರಿಗೆ ಹತ್ತಿರವಾಗುತ್ತಾರೆ. ಇಲ್ಲಿನ ಬರಹ ಲೋಹದ ಹಕ್ಕಿಯೊಳಗೆ ತಣ್ಣಗೆ ಪ್ರವೇಶ ಬಯಸಿ ಅಂತರ್ಯದ ಒಳಬೇಗುದಿಗೆ ತಂಪೆರೆಯುವ ಕೆಲಸ ಮಾಡುತ್ತದೆ. ********************************************** ಡಾ.ಸುಜಾತಾ ಸಿ.

ಲೋಹದ ಹಕ್ಕಿಯೊಳು ತಣ್ಣನೆ ಪ್ರವೇಶ Read Post »

ಪುಸ್ತಕ ಸಂಗಾತಿ

‌ಬಾಲಂಗೋಚಿ

ಪುಸ್ತಕ ಸಂಗಾತಿ ‌ಬಾಲಂಗೋಚಿ ಮಕ್ಕಳ ಕವನ ಸಂಕಲನ ‘ಬಾಲಂಗೋಚಿ’ ಮಕ್ಕಳ ಕವನ ಸಂಕಲನ.ಪ್ರಕಟಣೆ: 2019ಪುಟಗಳು: 96ಬೆಲೆ: 90ರೂ.ಪ್ರಕಾಶಕರು: ಗೋಮಿನಿ ಪ್ರಕಾಶನಶಾಂತಿ ನಗರ, ತುಮಕೂರು-2 ದೂರವಾಣಿ: 9986692342 ಮಕ್ಕಳ ಮನವನ್ನು ಅರಳಿಸುವ ಪದ್ಯಗಳು ಅರಳ ಬೇಕು ಚಿಣ್ಣರ ಮನಸು ಮೊಲ್ಲೆ ಹೂವಿನಂತಯೇ ಸಲ್ಲಬೇಕು ಮನುಜ ಕುಲಕೆ ಅದರ ಸೇವೆಯಂತೆಯೇ ಬಾಲ್ಯದ ನೆನಪುಗಳೇ ಎಲ್ಲರಿಗೂ ಒಂದು ರೀತಿಯ ಪ್ರೀತಿ ಹಾಗೂ ಚೈತನ್ಯ ಬಾಲ್ಯ ನೆನಪಾಗುತ್ತಲೇ ನಮ್ಮ ಬದುಕಿನ ಬಹುದೂರದ ಪಯಣವೆಲ್ಲ ಮರೆತಂತಾಗಿ ನಾವೂ ಒಂದು ರೀತಿಯ ಬಾಲ್ಯದ ಖುಷಿಯಲ್ಲಿ ತೇಲತೊಡಗುತ್ತೇವೆ. ಆಗ ಅಲ್ಲಿ ಆಡಿದ ಆಟಗಳು, ಸುತ್ತಾಡಿದ ಜಾಗಗಳು, ಗುಡ್ಡ ಬಯಲುಗಳು, ಹಳ್ಳ ಪ್ರಪಾತಗಳು, ಎತ್ತರದ ಬಂಡೆ, ಕ್ರಿಕೆಟ್ ಚಂಡು, ಪ್ರೀತಿಯ ನಾಯಿಮರಿ, ಬೆಕ್ಕಿನ ಮರಿಗಳಿದ್ದ ಬುಟ್ಟಿ, ಬೀಳುವ ಮಳೆ, ನೀರಿನ ಆಟ, ಶಿಕ್ಷಕರ ಪಾಠ, ಅಮ್ಮನ ಪ್ರೀತಿ ಹಾಗೂ ಸಿಟ್ಟು ಹೀಗೆ ಏನೇನೋ ಕಾಣಲು ತೊಡಗುತ್ತದೆ. ಆಗ ನಾವು ನಮ್ಮ ವಯಸ್ಸನ್ನು ಮರೆತು ಅಲ್ಲಿಯ ದೃಶ್ಯ ಚಿತ್ರಗಳಲ್ಲಿ ಒಂದಾಗುತ್ತ ಆ ಭಾವಕ್ಕೆ ಇಳಿಯಲು ಸಾಧ್ಯವಾಗುವುದು. ಇದನ್ನು ಬಳಸಿಕೊಂಡು ನಾವು ಅಭ್ಯಸಿಸಿದ, ಓದಿದ, ಕಂಡ, ಉಂಡ ಇತರ ಸಂಗತಿಗಳನ್ನು ಸೇರಿಸಿ ಮಕ್ಕಳ ಪ್ರೀತಿಗಾಗಿ ಅವರ ಖುಷಿಗಾಗಿ ಬರೆಯುವುದು  ಮಕ್ಕಳ ಒಲುಮೆಯ ಸಾಹಿತ್ಯವಾಗಿ ರೂಪುಗೊಳ್ಳುತ್ತದೆ. ಇದೆಲ್ಲವನ್ನು ನಮ್ಮಲ್ಲಿರುವ ಬರೆಯುವ ತುಡಿತ ಹಾಗೂ ಶೃದ್ಧೆ ಆಗುಮಾಡುತ್ತದೆ. ಅಂತಹ ತುಡಿತ ಹಾಗೂ ಶೃದ್ಧೆ ಇರದಿದ್ದಲ್ಲಿ ಬಾಲ್ಯಕ್ಕೆ ಮರಳುವ ಭಾವವೇ ಬರದು. ಆದರೂ ತಾನು ಮಕ್ಕಳಿಗೆ ಬರೆಯಬೇಕೆಂಬ ಒತ್ತಡದಲ್ಲಿ ಹೊರಟರೆ ಅದು ನೈಸರ್ಗಿಕ ಕಲಾತ್ಮಕ ರಚನೆ ಆಗದು. ಮೇಲಿನ ಪದ್ಯದ ಸಾಲುಗಳು ಡಾ.ಕೆ.ಬಿ. ರಂಗಸ್ವಾಮಿಯವರದು. ಅವರು “ಬಾಲಂಗೋಚಿ” ಎನ್ನುವ ಮಕ್ಕಳ ಕವನಸಂಕಲನ ರೂಪಿಸಿದ್ದಾರೆ. ವೃತ್ತಿಯಲ್ಲಿ ಮಕ್ಕಳ ತಜ್ಞ ವೈದ್ಯರಾಗಿದ್ದಾರೆ. ರಂಗಸ್ವಾಮಿಯವರಲ್ಲಿ ಇರುವ ಬಾಲ್ಯ ಉಳಿಸಿಕೊಳ್ಳುವ ಹಂಬಲ ಪ್ರೀತಿ ಶೃದ್ಧೆಗಳೇ ಈ ಸಂಕಲನ ರೂಪಿಸಲು ಪ್ರೇರಣೆ ಹಾಗೂ ಯಶಸ್ಸು ಆಗಿದೆ. ‘ಅರಳ ಬೇಕು ಚಿಣ್ಣರ ಮನಸು ಮೊಲ್ಲೆ ಹೂವಿನಂತಯೇ’ ಎನ್ನುವ ಇವರ ಸಾಲು ಎಲ್ಲರ ಆಶಯವೂ ಆಗುತ್ತದೆ. ಮಕ್ಕಳ ಪ್ರೀತಿಯಲ್ಲಿ ನಾವು ಸಮಾಜದ ಒಳಿತನ್ನು ಕಾಣುತ್ತೇವೆ. ಕಾಣ ಬೇಕು. ಅವರ ಮನಸ್ಸು ಅರಳುವುದು ಬಹಳ ಮುಖ್ಯ ಅಂತಹ ಅರಳುವಿಕೆ ನೈಸರ್ಗಿಕವಾಗಿರುವಂತಹ ಪರಿಸರ ನಾವು ಉಂಟುಮಾಡಬೇಕು.  ನಾವೆಲ್ಲ ಮಕ್ಕಳಾಗಿದ್ದಾಗ ಹಾವಾಡಿಗನ ಬೆನ್ನು ಹತ್ತಿದವರೇ. ಸುಡುಗಾಡು ಸಿದ್ಧನ ಜಾದು, ತಂಬೂರಿಯೊಂದಿಗೆ ಪದ ಹೇಳುವವನ ಪದ್ಯ, ಸುಗ್ಗಿಯ ಕುಣಿತ ಎಲ್ಲದರಲ್ಲೂ ಖುಷಿಪಡುತ್ತ ಅವರೊಂದಿಗೆ ಮನೆಯಿಂದ ಮನೆಗೆ ಸುತ್ತಾಡಿದ್ದೂ ಇದೆ. ಈ ರೀತಿಯ ಭಾವ ಎಲ್ಲ ಮಕ್ಕಳಲ್ಲೂ ಇರುತ್ತದೆ. ಆದರೆ ಚಿತ್ರ ಬದಲಾಗಬಹುದು ಅಷ್ಟೇ. ಇಲ್ಲಿ ರಂಗಸ್ವಾಮಿಯವರು ಬರೆದುದನ್ನು ನೋಡಿ. ಬೀದಿಗೆ ಬಂದಿತು ದೊಡ್ಡದೊಂದು ಒಂಟೆ ಓಡಿದ ಸುಬ್ಬನು ನಿಲ್ಲಿಸಿ ತಂಟೆ ಮೇಲಿನ ಸಾಲು ಸಹಜವಾಗಿ ಬಂದಿದೆ. ಅದೇ ಪದ್ಯ ಮುಂದುವರಿದು ಕುಳಿತನು ಸುಬ್ಬ ಓಂಟೆಯ ಮೇಲೆ ತೇಲುವ ಅನುಭವ ಅಂಬರದಲ್ಲೇ ಎನ್ನುವ ಸಾಲೂ ಇದೆ. ಹೌದು ಮಕ್ಕಳ ಕಲ್ಪನಾ ವಿಸ್ತಾರ ಅಧಿಕವಾಗಿರುತ್ತದೆ. ದೊಡ್ಡವರಾದ ನಾವು ಬಹಳಸಾರಿ ನಮ್ಮ ಕಲ್ಪನೆಯನ್ನು ತರ್ಕದಿಂದ ಕಟ್ಟಿಹಾಕುತ್ತೇವೆ ಅನಿಸುತ್ತದೆ. ಮಕ್ಕಳು ಅಂಬರದಲ್ಲಿ ತೇಲುತ್ತಾರೆ, ಸಮುದ್ರದಲ್ಲು ಮುಳುಗುತ್ತಾರೆ ಹಾಗೂ ನಕ್ಷತ್ರಗಳನ್ನು ಚೀಲದಲ್ಲಿ ತುಂಬುತ್ತಾರೆ. ಇದೆಲ್ಲಾ ಅವರ ಕಲ್ಪನಾ ವಿಸ್ತಾರ. ಇಂತಹುದೇ ಕಲ್ಪನೆ ಇದೇ ಪುಸ್ತಕದ ಪ್ರಾಣಿ ಪಕ್ಷಿಗಳ ಸಂಗೀತ, ತರಕಾರಿ ಮದುವೆ,  ಮುಂತಾದ ಪದ್ಯಗಳಲ್ಲೂ ಇದೆ.  ‘ಬದನೆ ತಂದೆ ಸೋರೆ ಕಾಯಿ ತೋರಣ ಕಟ್ಟಿತು ತುಪ್ಪೀರೆ’ ಎಂದೆಲ್ಲ ಬರೆದುದು ಸೊಗಸಾಗಿದೆ. ‘ಪುಟ್ಟೇನಳ್ಳಿ ಪುಟ್ಟ ಭಾರೀ ಭಾರೀ ತುಂಟ ಕುದಿಯುವ ಹಾಲು ಕುಡಿಕೇಲಿಟ್ಟು ಬೆಕ್ಕಿನ ಮೂತಿ ಸುಟ್ಟ.’ ಮಕ್ಕಳು ತುಂಟರೆನ್ನುವುದು ಎಲ್ಲರಿಗೂ ಗೊತ್ತು. ಆದರೆ ಅವರ ತುಂಟತನವನ್ನು, ಮಕ್ಕಳಿಗೆ ಖುಷಿಯ ಓದನ್ನು ಒಟ್ಟಿಗೆ ತಂದಿರುವ ಸಾಲು ಎಲ್ಲಕರಿಗೂ ಹಿತವಾಗುತ್ತದೆ. ಇರುವೆಯನ್ನು ಕಾಣದೇ ತುಳಿದು ಅದನ್ನು ಅಳಬೇಡ ಎಂದು ಸಂತೈಸುವ ಮಕ್ಕಳ ನಿರ್ಮಲ ಜೀವ ಪ್ರೀತಿ, ಸುಮತಿ ಪದ್ಯದಲ್ಲಿ ಮಕ್ಕಳದೇ ಉದಾಹರಣೆಯ ಮೂಲಕ ಒಳಗಿನ ಸೌಂದರ್ಯವೇ ಬಹಳ ಮುಖ್ಯ ಎಂದು ಹೇಳುವ ರೀತಿ ಎಲ್ಲ ಚಿಂತನೆಗೆ ಹಚ್ಚುವಂತಿವೆ. ಹಸು ಕರು, ಹೊಟ್ಟೆಬಾಕ, ಕಂಬಳಿ ಹುಳು, ಹಕ್ಕಿ ಮತ್ತು ಮರ, ಬೆಳ್ಳಕ್ಕಿ ಮುಂತಾದ ಪದ್ಯಗಳೆಲ್ಲ ತುಂಬಾ ಇಷ್ಟವಾಗುವಂತಿವೆ. ಕುಕ್ಕರಳ್ಳಿ ಕೆರೆಯ ತುಂಬಾ ಸಾಲು ಸಾಲು ಕೊಕ್ಕರೆ ಒಂದೇ ಒಂದು ಹಲ್ಲು ಇಲ್ಲ ಬಾಯಿ ತೆರೆದು ನಕ್ಕರೆ ಕೆರೆಯಲ್ಲಿರುವ ಪಕ್ಷಿಗಳನ್ನು ನೋಡುತ್ತ ನಾವು ಮೈಮರೆತು ಬಿಡುತ್ತೇವೆ. ಅವುಗಳ ಈಜು, ನೀರಲ್ಲಿ ಮುಳುಗುವ ರೀತಿ, ದೋಣಿಯಂತಹ ಚಲನೆ, ಎಷ್ಟೇ ಈಜಿದರೂ ಅವುಗಳ ಮೈ ಒದ್ದೆ ಆಗದೇ ಇರುವುದು, ಅವು ಮೀನು ಮುಂತಾದವನ್ನು ಬೇಟೆಯಾಡುವ ರೀತಿ ಎಲ್ಲ ಮಕ್ಕಳಿಗೆ ಬೆರಗೆ. ಅದೇ ರೀತಿಯ ಬೆರಗನ್ನೇ ಇಲ್ಲಿ ಒಂದು ಹೊಸ ನೋಟದೊಂದಿಗೆ ರಂಗಸ್ವಾಮಿಯವರು ಪದ್ಯವಾಗಿಸಿದ ರೀತಿ ಖುಷಿಕೊಡುತ್ತದೆ. ಒಂದೇ ಒಂದು ಹಲ್ಲು ಇಲ್ಲ ಬಾಯಿತೆರೆದು ನಕ್ಕರೆ ಇದು ಸಹಜವಾದರೂ ಅದು ಉಂಟುಮಾಡುವ ಆನಂದ ಬಹಳ ಮಹತ್ವದ್ದು. ‘ಕೊಕ್ಕರೆ ಇರುವ ಕೆರೆಯ ನೋಟ ತಂಪು ತಂಪು ಕಣ್ಣಿಗೆ ನೀರಿನಲ್ಲಿ ಪುತ ಪುತನೆ ಅರಳಿದಂತೆ ಮಲ್ಲಿಗೆ’ ಹೌದು ಮಲ್ಲಿಗೆ ಅರಳಿದ ನೋಟಕ್ಕಿಂತಲೂ ಮಿಗಿಲಾದ ಸಂತಸ ಕೆರೆಯ ತುಂಬಾ ಕೊಕ್ಕರೆಗಳನ್ನು ನೋಡಿದಾಗ ಅಗದೇ ಇರದು. ಮನಕೆ ಮುದ ನೀಡುವ ಮುದ್ದು ಮುದ್ದು ಕೊಕ್ಕರೆ ಅಮ್ಮನಂತೆ ಮುದ್ದಿಸುವೆ ನೀನು ಕೈಗೆ ಸಿಕ್ಕರೆ. ಅಮ್ಮನನ್ನು ಹೇಗೆ ಪ್ರೀತಿಯಿಂದ ಮುದ್ದಿಸುವೆನೋ ಹಾಗೆ ಮುದ್ದಿಸುವೆ ಎನ್ನುತ್ತ ಮಕ್ಕಳನ್ನು ಖುಷಿಯಲ್ಲಿ ಮೀಯಿಸಿದ್ದಾರೆ. ಇಂತಹ ಗೆಲುವಾದ ಪದ್ಯಗಳ ಸಂಕಲನದ ಮೂಲಕ ರಂಗಸ್ವಾಮಿಯವರು ಮಕ್ಕಳ ಮನಸ್ಸನ್ನು ಅರಳಿಸಲು ಪ್ರಯತ್ನಿಸಿದ್ದಾರೆ. ಅವರೇ ಹೇಳಿರುವಂತೆ ಅವರು ತಮ್ಮ ಅನುಭವದ ಮೂಲಕ ಇದನ್ನು ರೂಪಿಸಿದ್ದಾರೆ. ಇನ್ನಷ್ಟು ಹೊಸ ಓದು ಹಾಗೂ ಒಳ್ಳೆಯ ಪದ್ಯಗಳ ಮಾದರಿಗಳನ್ನು ಕಣ್ಣ ಮುಂದೆ ತಂದುಕೊಂಡು ಅವರು ಮತ್ತಷ್ಟು ಗೆಲುವಿನ ಪದ್ಯಗಳೊಂದಿಗೆ ಬರುತ್ತಾರೆ ಎನ್ನುವುದು ನನ್ನ ಆತ್ಮೀಯ ಅನಿಸಿಕೆ. ಈ ಪದ್ಯಗಳನ್ನು ಕನ್ನಡದ ಮಕ್ಕಳು ಓದಬೇಕು, ಅದಕ್ಕೆ ಹಿರಿಯರು ಸಹಕರಿಸಬೇಕು ಎನ್ನುತ್ತ ಉತ್ತಮ ಕೃತಿಗಾಗಿ ರಂಗಸ್ವಾಮಿಯವರನ್ನು ಅಭಿನಂದಿಸುತ್ತೇನೆ. ************************************************************************     ತಮ್ಮಣ್ಣ ಬೀಗಾರ.

‌ಬಾಲಂಗೋಚಿ Read Post »

ಪುಸ್ತಕ ಸಂಗಾತಿ

ಡಾ.ಅಂಬೇಡ್ಕರ್ ವಾದದ ಆಚರಣೆ

ಪುಸ್ತಕ ಸಂಗಾತಿ ಡಾ.ಅಂಬೇಡ್ಕರ್ ವಾದದ ಆಚರಣೆ ಡಾ.ಅಂಬೇಡ್ಕರ್ ವಾದದ ಆಚರಣೆಲೇಖಕರು– ಡಾ.ಸಿ.ಜಿ.ಲಕ್ಷ್ಮೀಪತಿಪುಟಗಳು– 104ಪುಸ್ತಕದ ಬೆಲೆ– 68 ರೂಪಾಯಿಗಳುಪ್ರಕಾಶನ– ಚಾರು ಪ್ರಕಾಶನಅಡ್ರೆಸ್– # 83, ಪ್ರೈಡ್ ಪ್ಲಾಜಾ ಕಾಂಪ್ಲೆಕ್ಸ್, ಆದರ್ಶ ಕಾಲೇಜ್ ಹತ್ತಿರ, 5 ನೇ ಮುಖ್ಯ ರಸ್ತೆ. ಬೆಂಗಳೂರು. ‘ಡಾ.ಅಂಬೇಡ್ಕರ್ ವಾದದ ಆಚರಣೆ’ ಎಂಬ ಪುಸ್ತಕವು,  ಮತ್ತು ಆ ಪುಸ್ತಕ ಬರೆದ ಡಾ.ಸಿ.ಜಿ.ಲಕ್ಷೀಪತಿ ಅವರ ಬಗೆಗೆ ಒಂದಿಷ್ಟು..! ಸಿ.ಜಿ. ಲಕ್ಷ್ಮೀಪತಿ ಅವರು ಸದ್ಯ ಬೆಂಗಳೂರಿನ ವಿ.ಎಚ್.ಸಿ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ನಲ್ಲಿಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು. ಕನಕಪುರದ ರೂರಲ್ ಕಾಲೇಜು, ಕನ್ನಡ ವಿಶ್ವವಿದ್ಯಾಲಯ ಹಾಗೂ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧನಾನುಭವವಿದೆ. ತುಮಕೂರು ಜಿಲ್ಲೆಯ ಮಧುಗಿರಿಯ ಟಿ.ವಿ.ವಿ. ಕಾಲೇಜಿನಲ್ಲಿ ಪದವಿ ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಂತರ್ ಶಿಸ್ತೀಯ ಅಧ್ಯಯನಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಮುಗಿಸಿದರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ‌ ಪಡೆದರು. ಅವರ ಕೃತಿಗಳೆಂದರೆ ಕ್ಯಾಸ್ಟ್ ಕೆಮಿಸ್ಟ್ರಿ, ಚಿತ್ರಲೆ ವೃಕ್ಷ (ಭಾರತದ ಲೈಂಗಿಕತೆಯ ಸಾಂಸ್ಕೃತಿಕ ಕಥನ), ಥಾಯ್  ಲ್ಯಾಂಡ್ ಎಂಬ ಮುಗುಳ್ನಗೆ (ಪ್ರವಾಸ ಕಥನ), ನಿಜ ಭ್ರಮೆಗಳ ರೂಪಕ (ಲೇಖನಗಳ ಸಂಗ್ರಹ), ಮತಾಂತರ ಸತ್ಯಾನ್ವೇಷಣೆ  (ಸಂಪಾದನೆ), ಕರ್ನಾಟಕದ ಸಮಾಜಶಾಸ್ತ್ರ (ಪಿಎಚ್ ಡಿ ಮಹಾಪ್ರಬಂಧದ ಪುಸ್ತಕ ರೂಪ), ಅಂಬೇಡ್ಕರ್ ವಾದದ ಆಚರಣೆ, ಆಧುನಿಕೋತ್ತರ ಮತ್ತು ಮಾರ್ಕ್ಸ್ ವಾದೋತ್ತರ. ಹೀಗೆಯೇ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಸಾಹಿತ್ಯದ ಕೆಲಸದ ಜೊತೆಗೇಗೆನೇ ಜೀವನ ಹೋರಾಟ ಸಾಗಿದೆ..! # ಈಗ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’ ಕುರಿತು ಚರ್ಚಿಸೋಣ…– ದಮನಿತರ ಬಿಡುಗಡೆ ಮಾರ್ಗ ಈ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’..! ಪಾರಂಪರಿಕ ಸಮಾಜಶಾಸ್ತ್ರಜ್ಞರಿಗಿಂತ ವಿಭಿನ್ನವಾದ ಲೋಕದೃಷ್ಟಿಯಲ್ಲಿ ಆಲೋಚಿಸುವ ಚಿಂತಕರಲ್ಲಿ ಒಬ್ಬರಾದ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ‘ಅಂಬೇಡ್ಕರ್ ವಾದದ ಆಚರಣೆ’ ಎಂಬ ಪುಸ್ತಕ. ಮೊದಲಿಗೇ ವಿಶಿಷ್ಟವಾದ ಕೃತಿ ನೀಡುತ್ತಿರುವ ಡಾ.ಸಿ.ಜಿ.ಲಕ್ಷ್ಮೀಪತಿಯವರು ಮೊದಲಿಗೆ ಪ್ರಸಂಸಾರ್ಹರು. ಚರಿತ್ರೆಯುದ್ದಕ್ಕೂ ಮತ್ತು ಪ್ರಸ್ತುತ ಸಂದರ್ಭದಲ್ಲೂ ಶೋಷಕರ ಕಬಂಧ ಬಾಹುವಿನಲ್ಲಿ ಸಿಲುಕಿ ನಲಗುತ್ತಿರುವ ದಲಿತರು ಒಂದು ಕಡೆ. ಇನ್ನೊಂದು ಕಡೆ ಹಿಂದುಳಿದ ವರ್ಗದವರು. ಅಲ್ಲದೇ ಮಹಿಳೆಯರು, ದಮನಿತರನ್ನು ಬಿಡುಗಡೆಗೊಳಿಸಲು ಇರುವ ಏಕೈಕ ಮಾರ್ಗ ‘ಅಂಬೇಡ್ಕರ್ ವಾದದ ಕ್ರಿಯಾಚರಣೆ’ಯಾಗಿದೆ. ************************************** ಆದರೆ ಅಂಬೇಡ್ಕರ್ ವಾದದ ಆಚರಣೆಯನ್ನು ಜನರು ತಮ್ಮ ದಿನನಿತ್ಯದ ಜೀವನದಲ್ಲಿ ಹೇಗೆ ಅನುಸರಿಸಬೇಕು ಎನ್ನುವುದಕ್ಕೆ ವಾರ್ಗಸೂಚಿಯಾಗಿಯೂ ಆಗಿದೆ ಈ ಪುಸ್ತಕ. ಅಂಬೇಡ್ಕರ್ ವಾದವು ತಾಂತ್ರಿಕವಾಗಿ ಪಠಣದ ಆಚರಣೆ ಮಾತ್ರವಾಗದೇ ಶೋಷಕರ ಅಂದರೆ ಬ್ರಾಮಣ್ಯ ಪ್ರಜ್ಞೆಯ ವಿರುದ್ಧ ಸತತವಾಗಿ ಸೆಣಸಾಡುವ ಮೂಲಕ ದಮನಿತರ ಪರವಾದ ಆಶಯಗಳನ್ನು ಈಡೇರಿಸುವಲ್ಲಿ ಮತ್ತು ಶೋಷಣೆಯಿಂದ ಬಿಡುಗಡೆಗೊಳಿಸುವಲ್ಲಿ ಅಂಬೇಡ್ಕರ್ ವಾದದ ತಿಳಿವು ಈ ಪುಸ್ತಕದಲಿದೆ ಅದರ ತಿಳುವು. ಅರವು ಮತ್ತು ಕ್ರಿಯಾಶೀಲತೆ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುವ ಪ್ರಣಾಳಿಕೆಯಂತಿದೆ ಈ ಅಂಬೇಡ್ಕರ್ ವಾದದ ಪುಸ್ತಕವು. ಕಿರಿದರಲ್ಲಿ ಹಿರಿದನ್ನು ಹೇಳುವ ಈ ಹೊತ್ತಿಗೆಯನ್ನು ಪ್ರತಿಯೊಬ್ಬರೂ ಓದಲೇಬೇಕಾದ ಮಹತ್ವದ ಸಂಗತಿಗಳನ್ನು ಒಳಗೊಂಡಿದೆ ಈ ಪುಸ್ತಕ. ಮನುವಾದ ಸಂಸ್ಕೃತಿಯ ಪ್ರಣೀತ ಬ್ರಾಹ್ಮಣ್ಯಶಾಹಿಯ ಆಕ್ರಮಣಕಾರಿತನವನ್ನು ಹಿಮ್ಮೆಟ್ಟಿಸುವ, ಅದರಿಂದ ಬಿಡುಗಡೆಗೊಳ್ಳುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ವಾದ ಒಂದು ಅಸ್ತ್ರವಾಗಬಲ್ಲದು ಎನ್ನುವುದು ಇಲ್ಲಿನ ಬರಹಗಳೆಲ್ಲವೂ ವಿವರಿಸುತ್ತವೆ. ಅಷ್ಟೇ ಅಲ್ಲದೇ ಡಾ.ಸಿ.ಜಿ.ಲಕ್ಷ್ಮೀಪತಿಯವರು ‘ಅಂಬೇಡ್ಕರ್ ವಾದದ ಆಚರಣೆ’ಯು ಮಾರ್ಷಲ್ ಆರ್ಟ್ಸ್ ಇದ್ದಹಾಗೆ. ಎದುರಾಳಿಯನ್ನು ಮಣಿಸುವಾಗ ಒಂದೇ ಒಂದು ತಂತ್ರ ಬಳಸುದಿಲ್ಲ ಅಂಬೇಡ್ಕರ್ ವಾದವು ಎಂದು ವಿವರಿಸುತ್ತಾರೆ ಡಾ.ಸಿ.ಜಿ.ಲಕ್ಷ್ಮೀಪತಿ ಅವರು. ಮೂರು ಭಾಗಗಳಲ್ಲಿ ಹರಡಿಕೊಂಡಿರುವ ಈ ಕೃತಿಯ ಮೂದಲ ಭಾಗದಲ್ಲಿ ಅಂಬೇಡ್ಕರ್ ವಾದದ ವಿವರಣೆ. ಸೈದ್ಧಾಂತಿಕತೆಯನ್ನು ವಿವರಿಸಿದರೆ ಎರಡನೇ ಭಾಗದಲ್ಲಿ ಹೆಸರಾಂತ ಚಿಂತಕರಾದ ಪಾರ್ವತೀಶ್ ಬಿಳಿದಾಳೆ ಅವರ ಹಿನ್ನುಡಿ ಇದೆ. ಸುದೀರ್ಘವಾದ ಹಿನ್ನುಡಿಯು ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಈ ಬರಹದ ಆಳ-ಅಗಲ ಮತ್ತು ವೈಶಿಷ್ಟ್ಯವನ್ನು ಬಹಳ ಗಂಭೀರವಾಗಿ ಬರೆದ ಭಾಷ್ಯವಾಗಿದೆ. ಮತ್ತೂ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಆಲೋಚನೆಯ ಮುಂದುವರಿಕೆಯೂ ಆಗಿದೆ. ಹಾಗಾಗಿ ಕೃತಿಯನ್ನು ಪ್ರತಿಯೊಬ್ಬರೂ, ಅದರಲ್ಲೂ ಯುವಜನತೆ ಓದಲೇಬೇಕಾದ ಕೃತಿಯಾಗಿದೆ. ಮೂರನೇ ಭಾಗದಲ್ಲಿ ಜಾಗತಿಕ ಮಟ್ಟದಲ್ಲಿ ಆಕಾಶದೆತ್ತರಕ್ಕೆ ಬೆಳೆದ, ಆಲದ ಮರದಂತೆ ಆವರಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಭವ, ಅಧ್ಯಯನದ ಅಘಾದತೆ, ಗಂಭೀರತೆ, ವಿಸ್ತಾರ, ಓದಿನ ವ್ಯಾಪಕತೆಯ ಹರವು ಎಂಥದ್ದು ಎನ್ನುವುದನ್ನು ತಿಳಿಯಪಡಿಸುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ತಮ್ಮ ಬರಹದಲ್ಲಿ ದಾಖಲಿಸಿದ ಉಲ್ಲೇಖಗಳ ಮಾಹಿತಿಯನ್ನು ನೀಡಿರುವುದು ಅವರ ಘನತೆಯನ್ನೂ ಮತ್ತಷ್ಟೂ ಹೆಚ್ಚಿಸುತ್ತದೆ..! ಎಲ್ಲರೂ ಕೊಂಡು ಓದಿ ಕ್ರಿಯಾಶೀಲ ಆಚರಣೆಗೆ ಕಿಂಚಿತ್ತಾದರೂ ತೊಡಗಿಸಿಕೊಂಡರೆ ಆ ಮೂಲಕ ಮೂಲಕ ಅಂಬೇಡ್ಕರ್ ಅವರ ತಿಳಿವಿಗೂ, ಕೃತಿಕಾರರ ಡಾ.ಸಿ.ಜಿ.ಲಕ್ಷ್ಮೀಪತಿ ಅವರ ಬರಹಕ್ಕೂ ಗೌರವ ತಂದಂತಾಗುತ್ತದೆ ಅಂತ ಹೇಳುತ್ತಾ ಈ ವಿಮರ್ಶಾ ಬರಹ ಮುಗಿಸುತ್ತೇನೆ… ****************************** ಕೆ.ಶಿವು.ಲಕ್ಕಣ್ಣವರ

ಡಾ.ಅಂಬೇಡ್ಕರ್ ವಾದದ ಆಚರಣೆ Read Post »

ಪುಸ್ತಕ ಸಂಗಾತಿ

ವಸುಂಧರಾ

ವಸುಂಧರಾ ಕಾದಂಬರಿ ಕುರಿತು ಬಾಳೆಯ ಹಣ್ಣನ್ನು ತಿಂದವರೆಸೆವರು, ಸಿಪ್ಪೆಯ ಬೀದಿಯ ಕೊನೆಗೆ ಕಾಣದೆ ಕಾಲಿಟ್ಟು ಜಾರುವರು ಅನ್ಯರು,_ ಕಷ್ಟವು ಬರುವುದೇ ಹೀಗೆ. ಎನ್ನುವುದೊಂದು , ಅನುಭವದ ನುಡಿಮುತ್ತು. ನಂಬಿಕೆ ಮತ್ತು ಮೂಡ ನಂಬಿಕೆಯ ನಡುವೆ ಅಪಾರ ವ್ಯತ್ಯಾಸವಿದೆ ಹಿಂದಿನಿಂದಲೂ ಈಗಲೂ ಜನ ಸಮುದಾಯದೊಳಗೆ ಮೂಢನಂಬಿಕೆಯ ಕಾರಣದಿಂದಾಗಿ ಆಗಿ ಹೋಗಿರುವ ಅನಾಹುತಗಳೇನೂ , ಕಡಿಮೆ ಇಲ್ಲ. ಮೊನ್ನೆ ಮೊನ್ನೆ ತಾನೆ ಕೇಳಿದ್ದು , ದೆವ್ವ ಬಿಡಿಸುವೆನೆಂದು  ಹೆಣ್ಣುಮಗಳೊಬ್ಬಳ  ಪ್ರಾಣವನ್ನೇ ಬಲಿತೆಗೆದುಕೊಂಡ ಜ್ವಲಂತ ಉದಾಹರಣೆ ನಮ್ಮ ಕಣ್ಣಮುಂದಿದೆ. ಹೀಗಿರುವಾಗ ಜಯಂತಿ ರವರ ವಸುಂದರ ಕಾದಂಬರಿ ಮೂಢನಂಬಿಕೆಗೆ ಬೆಳಕು ಚೆಲ್ಲಿ ಇಡೀ ಸಮುದಾಯ ಕಲಂಕಿನಿ ಎಂದು ಅಪಮಾನ ತೇಜೋವಧೆ ಮಾಡಿ ನಿರ್ಲಕ್ಷ ಗೊಳಿಸಿ ಮಾತಿನಿಂದಲೇ ಕೊಂದು  ಜೀವಂತ ಹೆಣವನ್ನಾಗಿ ಮಾಡಿದಂತಹ ಸಂದರ್ಭದಲ್ಲಿ ನೊಂದ ಮನಕ್ಕೆ  ಸಾಂತ್ವನವಷ್ಟೇ  ಅಲ್ಲ ಎಲ್ಲಾ ಸಂಕೊಲೆಗಳಿಂದ ಬಿಡಿಸುವುದು ಅಷ್ಟೇ ಅಲ್ಲ ಇಡೀ ಸಮುದಾಯವನ್ನು  ಬದಲಾಯಿಸಿ ಮೂಢನಂಬಿಕೆಯಿಂದ ಹೊರಬರುವಂತೆ ಮಾಡಿ ಅವರೆಲ್ಲರೂ ಅವಳನ್ನು ಗೌರವದಿಂದ ಕಂಡು ಪಶ್ಚಾತ್ತಾಪ ಪಡುವಂತೆ  ಮಾಡುವ ಅಪೂರ್ವ ಅಸಾಧಾರಣ ನಿರೂಪಣಾ ಶೈಲಿ ಯ ಸುಂದರ ಕೃತಿಯೇ ” ವಸುಂಧರಾ”-ಕಾದಂಬರಿ ಎಂದು ಹೇಳಬಹುದು. ಬಸವಣ್ಣನವರ ಒಂದು ಮಾತಿದೆ  ಕೈಲಾಸ ದೊಡ್ಡದಲ್ಲ/ ಕಾಯಕ ದೊಡ್ಡದು ಧರ್ಮ ದೊಡ್ಡದಲ್ಲ/ ದಯೆ ದೊಡ್ಡದು. ಅರಿವು ದೊಡ್ಡದಲ್ಲ / ಆಚಾರ ದೊಡ್ಡದು ಅಧಿಕಾರ ದೊಡ್ಡದಲ್ಲ  /ಅಭಿಮಾನ ದೊಡ್ಡದು ಆಸ್ತಿ ದೊಡ್ಡದಲ್ಲ  / ಆರೋಗ್ಯ ದೊಡ್ಡದು ಸನ್ಮಾನ ದೊಡ್ಡದಲ್ಲ / ಸಂಸ್ಕಾರ ದೊಡ್ಡದು ಹಣ ದೊಡ್ಡದಲ್ಲ / ಗುಣ ದೊಡ್ಡದು ವಿದ್ಯೆ ದೊಡ್ಡದಲ್ಲ  /ವಿನಯ ದೊಡ್ಡದು ಅನುಭವ ದೊಡ್ಡದು ಎಂಬ ಮಾತುಗಳಂತೆ ಒಂದೊಂದು ಅಧ್ಯಾಯಗಳಲ್ಲೂ , ಸ್ನೇಹ ಪ್ರೀತಿ ಆಚಾರ ನಡವಳಿಕೆ ಸಂಪ್ರದಾಯ ಸಂಭ್ರಮ ಎಲ್ಲವನ್ನು ಸುಮಧುರ ಹದದಲ್ಲಿ ಹಾಕಿ  ಪಾಕಗೊಳಿಸಿ  ಅಚ್ಚಿಗೆ ಹಾಕಿ  ಎರಕಹೊಯ್ದ ಅಪೂರ್ವ ಕೃತಿಯೇ   ವಸುಂಧರ ಅನ್ನುವುದು ಕೈಗೆತ್ತಿಕೊಂಡ ಕೆಲವೇ  ನಿಮಿಷಗಳಲ್ಲಿ  ನಮಗೆ ಗೋಚರಿಸುತ್ತದೆ.  ಅಂತಹ ಅಸಾಧಾರಣವಾದ ಸಂಭಾಷಣೆ ವಿವರಣೆ ಅದರಲ್ಲಿ ಅಡಕವಾಗಿದೆ ಒಂದೇ ಗುಕ್ಕಿಗೆ ವಿರಾಮ ನೀಡದೆ ಓದಿಸಿಕೊಳ್ಳುವ ಅಯಸ್ಕಾಂತೀಯ ಶಕ್ತಿ ಇದರಲ್ಲಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಪಾತ್ರಪೋಷಣೆ ಯ ಅಭಿವ್ಯಕ್ತಿಯ ಮಹಾಪೂರವೇ , ವಿಶೇಷ ತಿರುವುಗಳ ಚೈತನ್ಯವೇ ವಸುಂದರ ಕಾದಂಬರಿಯ ವಿಶೇಷ ಶಕ್ತಿಯಾಗಿದೆ ತಮ್ಮ ಅಸಾಧಾರಣ ಪ್ರತಿಭೆಯಿಂದ ಒಂದೊಂದು ಪಾತ್ರಕ್ಕೂ ಜೀವ ತುಂಬುತ್ತ ಕಣ್ಮುಂದೆಯೇ ನಡೆದಿದೆ ಎನ್ನುವಂತೆ ಎಷ್ಟೋ ಘಟನೆಗಳನ್ನು ಕಾಕತಾಳಿಯ ಎನ್ನಬಹುದಾದ ಸನ್ನಿವೇಶಸಂಗತಿಗಳನ್ನು, ಸೂಕ್ಷ್ಮಾತಿ  ಸೂಕ್ಷ್ಮವಾಗಿ , ವಿವರಿಸುತ್ತಾ ನಡೆದಿರುವ ರೀತಿ  ವಿಭಿನ್ನವಾಗಿದ್ದು , ಸೋಜಿಗವೆನಿಸುತ್ತದೆ. ಇಲ್ಲಿ ಬರುವ ಮುಖ್ಯ ಪಾತ್ರಗಳೆಂದರೆ ಕಥಾನಾಯಕಿ ವಸುಂದರ ಕಥಾನಾಯಕ ದಿನಕರ್ ಅವನ  ಊರು ಗುರಪುರ  ಇವನ ಸಹೋದರ ಸುಧಾಕರ , ಸಹೋದರಿ ,ತಾಯಿ , ದಿನಕರನ ಸ್ನೇಹಿತ ರಮಾನಾಥ ತಾಯಿ ಸುಂದರಮ್ಮ ಅಜ್ಜಿ ,ಹೆಂಡತಿ ಜಲಜ ,ಮಕ್ಕಳಾದ ಸರಿತ ಸವಿತಾ ಸಹೋದರ ಸೂರ್ಯ ಗಿರಿಜಾ ಮನೆಕೆಲಸದ ಹುಡುಗಿ ರಮಾನಾಥ ನ ಅತ್ತಿಗೆಯೇ ವಸುಂಧರಾ . ಜ್ಞಾನಮೂರ್ತಿ ಅರ್ಚಕರು ಮತ್ತು ಅವರ ಸಂಸಾರ ಊರ ಗೌಡ ರು ಹಾಗೂ ಊರಿನ ಗ್ರಾಮಸ್ಥರು , ಬಂಧು ಬಳಗದವರು .    ಹೀಗೆ ಇವುಗಳ ನಡುವೆ ಹೆಣೆದುಕೊಂಡ ಕರುಳುಬಳ್ಳಿ ಸಂಬಂಧಿತ  ಪಾತ್ರಗಳೆಂಬ  ದಾರಕ್ಕೆ ಅಕ್ಷರಗಳನ್ನು, ಭಾವನೆಗಳನ್ನು ,ಪೋಣಿಸುತ್ತ ಸಾಗಿದ ಬರವಣಿಗೆಯು ನಗುವಿನ ಅಳುವಿನ ನೋವಿನ ಏಳಿಗೆಯ ಕಾನೂನಿನ ಆಡಳಿತದ ಹಳ್ಳಿಯ ಹಟ್ಟಿಯ ಆಡಳಿತದ ಭಾವನೆಗಳನ್ನು ತಿರುವುಗಳ ನೋಟವನ್ನು ನಯ ನಡತೆ ವಂಚನೆ ದುರಾಸೆ ಬಾಯಾಳಿತನ   ಬೈಗುಳ ಎಲ್ಲವನ್ನೂ ಪ್ರಬುದ್ಧವಾಗಿ ಲಯಬದ್ಧವಾಗಿ ಕಟ್ಟುತ್ತಾ ಮನಮುಟ್ಟಿ  ತಟ್ಟಿ ಅಬ್ಬಾ ಶಬ್ಬಾಸ್ ಎಂದು ಉದ್ಗಾರ ತೆಗೆಯುವಂತೆ ಇದ್ದು , ಒಂದೇ ಗುಕ್ಕಿಗೆ ಓದಿಸಿಕೊಳ್ಳುವ ಆಕರ್ಷಣೆಯನ್ನು ಕೊನೆಯವರೆಗೂ ಕಾಪಾಡಿಕೊಂಡಿದೆ. ಪರಂಪರೆ ಮತ್ತು ವರ್ತಮಾನ ಎರಡನ್ನು ಬಳಸಿಕೊಳ್ಳುತ್ತಾ ಇಂದಿನ ಸಂವೇದನೆಗೆ ಹಿಂದಿನದನ್ನು ಬೆರೆಸಿ ಸಮಕಾಲೀನ ಸ್ಪಂದನೆಗೆ ಹಾಗೂ ಅಕಾಡೆಮಿಕ್ ಶಿಸ್ತಗೆ , ಒಳಗೊಂಡು ವಿಷಯವನ್ನು ಹೆಣೆಯುವಾಗ ಪಾತ್ರಗಳಿಗೆ ಸೊಗಸಾದ ಸನ್ನಿವೇಶದ ಬೆಳಕನ್ನು ನೀಡುತ್ತಾ ಪಾತ್ರಗಳಿಗೆ ,ಕೃತಿಗೆ ,ಓದುಗರಿಗೆ ,ಆಕರ್ಷಣೀಯ ಹಿಡಿತವನ್ನು ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಸ್ತ್ರೀಪಾತ್ರಗಳು ಸಮುದಾಯದಲ್ಲಿ ಸಾಮಾಜಿಕವಾಗಿ ಕೌಟುಂಬಿಕವಾಗಿ ಸಾಂಸ್ಕೃತಿಕವಾಗಿ ಅನುಭವಿಸುವ ಅಪಮಾನ ನಿರ್ಲಕ್ಷ ದೌರ್ಜನ್ಯ ಹಾಗೂ ಮೂಢನಂಬಿಕೆಗಳಿಗೆ ಸಿಲುಕಿ ನರಳುವ, ನೋಯುವ,ಬೇಯುವ,  ಜೀವ ಪರಿಯನ್ನು  ದೃಶ್ಯಗಳು ಕಣ್ಣೆದುರೇ ಮೂಡಿರುವಂತೆ ಚಿತ್ರಿಸುವುದರ , ಜೊತೆಗೆ ಜಾತ್ಯಾತೀತ ಧರ್ಮನಿರಪೇಕ್ಷವಾ ದ ಬಾಂಧವ್ಯವನ್ನು ಕಟ್ಟುವ ತುಡಿತ ಇವರಲ್ಲಿ ಇದ್ದು ಅದು ಪರೋಕ್ಷವಾಗಿ ಇವರ ರಚನೆಯಲ್ಲಿ ಕಾಣಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಇಡೀ ಕೃತಿಯ ಉದ್ದಕ್ಕೂ ಸಮಕಾಲೀನ ತೊಡಕು ನಂಬಿಕೆಗಳೊಂದಿಗೆ ಜೀವದ್ರವ್ಯ ಆದರ್ಶ, ಸತ್ಯ ,ಪ್ರಾಮಾಣಿಕತೆ ಪ್ರೀತಿ ಮಾನವೀಯ ಸಂಬಂಧಗಳ ಚೌಕಟ್ಟನ್ನು ಎಲ್ಲಿಯೂ ಸಡಿಲಗೊಳಿಸ ದಂತೆ ಮುನ್ನಡೆಸಿಕೊಂಡು ಸಾಗಿರುವ ವಿಶಿಷ್ಟ ಹಿಡಿತ ಈ ಕಾದಂಬರಿಯಲ್ಲಿದೆ ಅಪಕ್ವ ಮನಸ್ಸುಗಳಿಗೆ ತಿಳಿವಳಿಕೆ ಹೇಳುತ್ತಾ ಪ್ರತಿಯೊಂದು ಸನ್ನಿವೇಶದಲ್ಲೂ ಸಮಕಾಲೀನ ಸಂಬಂಧವನ್ನು ಅರ್ಥವಿಲ್ಲದ ಆಚರಣೆಯನ್ನು, ಟೀಕಿಸುತ್ತಾ ಕಾರಣ ಪರಿಣಾಮಗಳನ್ನು ತಿಳಿಸುತ್ತಾ ವಿಮರ್ಶಿಸುತ್ತಾ, ಅದರೊಂದಿಗೆ ಬೆರೆಯುತ್ತಾ ಹರಿಯುತ್ತಾ ಸಾಗಿ ನಿನ್ನೆಯ ಮೂಲಕವೇ ಇಂದಿನ ನಾಳಿನ ಬದುಕನ್ನು ಹೆಣೆದಿದ್ದಾರೆ.  ಈ ಕಲೆ ಅತ್ಯಂತ ಆಕರ್ಷಣೀಯವಾಗಿ ಯೂ ಸೋಜಿಗವಾಗಿ ಯೂ ಇದೆಯೆಂದರೆ ಅತಿಶಯೋಕ್ತಿಯಾಗಲಾರದು. ಮಾತು ಬೆಳ್ಳಿ ಮೌನ ಬಂಗಾರ ಎನ್ನುತ್ತಾ  ನಾವು ಮೌನವೇ ಶ್ರೇಷ್ಠ ಎಂದು ವ್ಯಾಖ್ಯಾನ ಮಾಡುತ್ತೇವೆ . ಆದರೆ ಕೆಲವೊಮ್ಮೆ ಕೆಲವು  ಸನ್ನಿವೇಶಗಳಲ್ಲಿ  ಉತ್ತಮ ,ಉತ್ತರ, ಸಾಧನವು ಆದರೆ   ಕೆಲವೊಮ್ಮೆ ಅದೇ ಮೌನ ನಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಮಾನಿಸುತ್ತಿದೆ .ಕೋಪವನ್ನು ತರಿಸುತ್ತದೆ . ಕೆಲವರ ಮೌನ ಎಷ್ಟು ಕೋಪವನ್ನು ಉಂಟುಮಾಡಿ ವಿರಸಕ್ಕೂ ಸಂಬಂಧಗಳ ಕಳಚುವಿಕೆಗೂ ದಾರಿಮಾಡಿಕೊಡುತ್ತದೆ ಎಂದ.ನಮ್ಮನಿಮ್ಮೆಲ್ಲರ ಅನುಭವಕ್ಕೂ ಬಂದಿರಬಹುದು. ಇಲ್ಲಿಯೂ  ಸುಧಾಕರ ಮತ್ತು ಜ್ಞಾನಮೂರ್ತಿ ಅವರ ಎದುರು ಮನೆಯವರೊಂದಿಗೆ ಮಾತನಾಡದೆ ಮೌನವಾಗಿದ್ದು ಮುಂದಿನ ಈ ಎಲ್ಲಾ ಘಟನೆಗಳಿಗೆ  ಕಾರಣವಾಗುತ್ತದೆ ಎಂಬುದನ್ನು ಕಾದಂಬರಿಯನ್ನು ಓದಿದಾಗ ಕಂಡುಬರುತ್ತದೆ . ಇನ್ನು ಕಾದಂಬರಿಯುದ್ದಕ್ಕೂ ಬಳಸಿರುವ ಪರಂಪರೆಯ ಕೊಂಡಿಗಳ ಬಗ್ಗೆ ಹೇಳಲೇಬೇಕು ಉದ್ದಕ್ಕೂ ಉತ್ತಮವಾದ ಬದುಕಿನ ಮಾರ್ಗದರ್ಶಕ ಸೂತ್ರಗಳನ್ನು ಇವರದೇ ಆದ ಶೈಲಿಯಲ್ಲಿ ಹೇಳುತ್ತಾ ಹೇಳುತ್ತಾ ಪರಂಪರೆ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿಕೊಳ್ಳಬೇಕು ಎಂಬ ಆದರ್ಶದ ನುಡಿಗಳನ್ನು ಕಥಾನಾಯಕನ ಬಾಯಿಯಲ್ಲಿ ಹೇಳಿಸುತ್ತಾ ಸಾಗಿರುವುದು  ಅತ್ಯಂತ  ಸುಂದರವಾಗಿದ್ದು ಕಿರಿಯರಿಗೆ , ಮಾರ್ಗದರ್ಶಕವಾಗಿ, ಅನುಕರಣೀಯವೂ  ಆಗಿದೆ. ಉದಾ, ನಾವು ಬದುಕನ್ನ ಬದಲಾಯಿಸಬೇಕು           ಬದುಕು ನಮ್ಮನ್ನು ಬದಲಾಯಿಸಬಾರದು. ಪುಟ 62 ನಾವು ಎಷ್ಟೇ ಸಾಧನೆ ಮಾಡಿದರೂ ನಮ್ಮ ಉತ್ತಮ ನಡವಳಿಕೆಗಳು ಆಚರಣೆಗಳು ಗೌರವ ಪ್ರೀತಿ ಆಧಾರಗಳು ಉಳಿಯಬೇಕು ಆಗಲೇ ನಾವು ನಾವು. ಎಷ್ಟೇ ಅಡೆತಡೆಗಳು ಬಂದರೂ ಭಾವನೆಗಳು ಬದಲಾಗಬಾರದು ಎಂದು ಹೇಳುವಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವ ಆದರ್ಶದ ನಡೆನುಡಿಗಳು ಸಮಾಜಕ್ಕೆ ಮಾರ್ಗದರ್ಶಕವೂ ಪ್ರೇರಕವಾಗಿವೆ ಎಂದರೆ ತಪ್ಪಿಲ್ಲ ಜೊತೆಗೆ ರಥೋತ್ಸವದ ಸನ್ನಿವೇಶ, ಬಂಧುಗಳ ಆಗಮನ ಸಂತೋಷ ಸಂಭ್ರಮ ಕೆಲಸಗಳ ಒತ್ತಡ ಎಲ್ಲವನ್ನೂ ಎಳೆಎಳೆಯಾಗಿ ನಾಜೂಕಾಗಿ ಪೋಷಿಸಿರುವ ಪೋಷಣೆ ಅಸಾಧಾರಣವಾಗಿದೆ.  ವಿವಾಹವಾಗಿ ಪತಿಯ ಮನೆಗೆ ತನ್ನ ಹೆತ್ತವರನ್ನು ಬಂಧುಬಳಗವನ್ನು ತನ್ನ ಒಡನಾಡಿಯಾದ ಸ್ನೇಹಿತರನ್ನು ಸಕಲ ಪರಿಸರಕ್ಕೂ ವಿದಾಯ ಹೇಳಿ ಹೋಗುವ ಸಂದರ್ಭದಲ್ಲಿ, ಹೆಣ್ಣುಮಕ್ಕಳು ಬಾಣಂತಿ ಆರೈಕೆಯನ್ನು ಮುಗಿಸಿ  ಗಂಡನ ಮನೆಗೆ  ಹೊರಟು ನಿಂತಾಗ ಊರಿಗೆ ಊರೇ ಕರೆದು ಮಡಿಲಕ್ಕಿ ಹುಯ್ಯುವುದು ಹಣೆಗೆ ತಿಲಕವಿಟ್ಟು ನೆತ್ತಿಗೆ ಎಣ್ಣೆ ಹಾಕಿ ತವರಿನ ನೆನಪು ಸದಾ ಇರಲಿ ತವರಿಗೆ ಶುಭ ಹಾರೈಕೆಯಿಂದ ತೆರಳಲಿ ತನ್ನ ಕೊಟ್ಟಮನೆಯಲ್ಲಿ ಕೀರ್ತಿಯನ್ನು ತರಲಿ , ಎಂದು ಶುಭ ಹಾರೈಸಿ ಕಳಿಸಿ ಕೊಡುವುದು ಈ ನಾಡ ,ಪರಂಪರೆ  ಸಂಪ್ರದಾಯ . ಆದರೆ  ಇತ್ತೀಚಿಗೆ ಇದು  ಕಡಿಮೆಯಾಗುತ್ತಿದೆ ಮರೆಯಾಗುತ್ತಿದೆ..ಈ ಒಂದು ಆಚರಣೆಯ  ಆಪ್ತತೆ  ,ಅನುಬಂಧ ಅವರ್ಣನೀಯ .    ಅಂತಹ ಒಂದು ಉತ್ತಮ ಪರಂಪರೆಯನ್ನು  ಇಲ್ಲಿ  ತಲೆತಲಾಂತರಕ್ಕೂ ಉಳಿಯುವಂತೆ ಮಾಡಲಾಗಿದೆ..       ಇಲ್ಲಿ ಯಾವ ಸಮುದಾಯದಿಂದ ಕಳಂಕಿತ ಎಂದು ಘೋಷಿಸಲ್ಪಟ್ಟಿದ್ದಳೋ ಅದೇ ಸಮುದಾಯ ಅವಳನ್ನು ಆಧರಿಸಿ ಪಶ್ಚಾತಾಪದಿಂದ ನೊಂದು   ಮನೆಗೆ ಆಹ್ವಾನಿಸಿ ಮಡ್ಲಕ್ಕಿ ಹುಯ್ದು , ತಿಲಕವಿಟ್ಟು , ನೆತ್ತಿಗೆ ಎಣ್ಣೆ ಹಾಕಿ ,ಅರಿಯದ ತಮ್ಮ ತಪ್ಪಿಗೆ  ಕ್ಷಮೆಯಾಚಿಸಿ ಬೀಳ್ಕೊಡುವುದು . ಆ ಸಂದರ್ಭದಲ್ಲಿ  ನಿಮ್ಮ ಪ್ರೀತಿಗೆ ನಾನೇನು ಕೊಡಲಿ ಎಂದು ಎಲ್ಲರಿಗೂ ಒಂದೊಂದು ರೂಪಾಯಿ ನಾಣ್ಯ ಕೊಡ್ತಾಳೆ ಹೆಣ್ಣುಮಕ್ಕಳು ಗೆಳತಿಯರು ಅದನ್ನು ಕೆಲವರು ಸೆರಗಿಗೆ ಕಟ್ಟಿಕೊಂಡರು ಕೆಲವರು ಅರಿಶಿನ ಜೀರಿಗೆ ಡಬ್ಬಿಗಳಿಗೆ ಹಾಕಿದರು ಇನ್ನು ಕೆಲವರು ಚೀಲಕ್ಕೆ ಹಾಕಿಕೊಂಡರು, ದಿನನಿತ್ಯ ಅರಿಶಿಣ ಜೀರಿಗೆ ಡಬ್ಬಿಗಳನ್ನು ಉಪಯೋಗಿಸುವಾಗ ಹಾಗೂ ಚೀಲದಲ್ಲಿ ಎಲೆಯಡಿಕೆ ಮೆಲ್ಲುವಾಗ ಅದನ್ನು ನೋಡುತ್ತ ಅವರನ್ನು ನೆನೆಸಿಕೊಳ್ಳಲು ಎಂಬುದೇ ಇದರ ಹಿಂದಿನ ಉದ್ದೇಶವಾಗಿದೆ ಇದೊಂದು ಅಪೂರ್ವ ವಾದಂತಹ  ವಿವರಣೆಯಾಗಿದೆ. ಹಾಗೆಯೇ ಮರೆಯಾಗುತ್ತಿರುವ ಅಜ್ಜಿಯರ ಎಲೆ ಅಡಿಕೆ ಚೀಲ ಅದರೊಳಗಿನ 2/3 ಕಂಪಾರ್ಟ್ಮೆಂಟ್ ಗಳು ಅದರೊಳಗೆ ಒಂದು ಹಣ ಇಡುವ ಗುಪ್ತ ಪ್ಯಾಕೆಟ್ ನಾಣ್ಯಗಳನ್ನು ಇಡುತ್ತಿದ್ದ ಕಿರು ಪತ್ರ ಇವೆಲ್ಲವೂ ನನಗೆ ನೆನಪಿಸಿ ನನಗೆ ನನ್ನ ಅಜ್ಜಿ ಅವರ  ಪ್ರೀತಿ  ಅನುಭೂತಿ  ನನ್ನ ಕಣ್ಣನ್ನು  ತೇವಗೊಳಿಸಿದವು ನಾನು ಶಾಲೆಗೆಂದು ಹೋಗುತ್ತಿದ್ದಾಗ ನನ್ನಜ್ಜಿ  ನನ್ನನ್ನು  ಹೇ ಮಗಾ ಬಾ ಇಲ್ಲಿ ನನ್ನ ಎಲೆ ಅಡಿಕೆ ಚೀಲದ ಕಿರು ಪತ್ರದಲ್ಲಿ ಎಂಟಾಣೆ ಇದೆ ಅದನ್ ತಗೊಂಡು ನಾಕಾಣೆ ಕಾಚು ಇನ್ ನಾಲ್ಕಾಣೆ ನೀನೇನಾದ್ರೂ ತಗೋ ಎಂದು ಕೈಯಲ್ಲಿ ಕೊಟ್ಟು  ಕಳುಹಿಸುತ್ತಿದ್ದುದು ನೆನಪಾಗಿ ಕ್ಷಣ ಮನಸ್ಸು ಎಲ್ಲಿಗೂ ಹೋದಂತಾಯಿತು. ಹೀಗೆ ಕಾದಂಬರಿ ಹಲವು ಮರೆತ ಬಾಂಧವ್ಯಗಳನ್ನು ಮತ್ತೊಮ್ಮೆ ನೆನಪಿಸಿಕೊಡವಂತಿದೆ . ಎಂದು ನನಗನ್ನಿಸಿತು . ಈ ಚೀಲದ ಸಂಬಂಧ ಸನ್ನಿವೇಶ ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂಬುದು ಸಂತೋಷದ ಸಂಗತಿಯಾಗಿದೆ ಇನ್ನು ಕಾದಂಬರಿಯ ತುಂಬಾ ಉಪಯೋಗಿಸಿ ರುವಂತಹ ಸಾಂಪ್ರದಾಯಿಕ ಅಡುಗೆಗಳು ಹೆಸರುಕಾಳು ಮೆಂತ್ಯ ಸೊಪ್ಪಿನ ತೊವೆ ರಾಗಿಕೀಲ್ಸ  ಕಡುಬು ನಿಂಬೆ ಹುಳಿ ಚಿತ್ರಾನ್ನ,  ಹುಳಿಯನ್ನ  ಇವುಗಳ ಸೊಗಸಾದ ನಿರೂಪಣೆ ಇದೆ  ಕೂಡುಕುಟುಂಬದ ಸಾಮರಸ್ಯ ಕಣ್ಮರೆಯಾಗಿರುವ ಕಾಲಘಟ್ಟದಲ್ಲಿ ನಾವಿದ್ದು ಇಂದು ಯಾರು ಯಾರ ಮನೆಯಲ್ಲಿ ಉಳಿಯುವ ಪರಿಪಾಠವೇ ಇಲ್ಲವಾಗಿದೆ ಹಾಗೂ ಕಡಿಮೆಯಾಗಿದೆ ಹಿಂದೆ ಊರ ಜಾತ್ರೆ ಮದುವೆ ರಥೋತ್ಸವ ಸಮಾರಂಭಗಳಲ್ಲಿ ನಾಲ್ಕೈದು ದಿನ ವಾರದವರೆಗೂ ಉಳಿದುಕೊಂಡಿದ್ದ ಸಾಮರಸ್ಯ ಈಗ ಮರೆಯಾಗಿದೆ ಆನಂದವು ಮರೆಯಾಗಿದೆ ಈಗ ನಾನು ನನ್ನ ಸಂಬಂಧ ಕೇವಲ ಮೊಬೈಲಿಗೆ ಅಥವಾ ನಾನು ನನ್ನ ಕುಟುಂಬ ಅಷ್ಟೇ ಆಗುತ್ತಿದೆ ಎಂಬುದು ವಿಷಾದಕರ .  ರಥೋತ್ಸವದ ಸಮಾರಂಭಕ್ಕೆ ಬಂಧುಗಳು ಚಿಕ್ಕಮ್ಮ-ಚಿಕ್ಕಪ್ಪ ದೊಡ್ಡಮ್ಮ ದೊಡ್ಡಪ್ಪ ಅಜ್ಜಿ ,ಭಾವ ಮೈದುನ ಅತ್ತಿಗೆ ಮಕ್ಕಳು ಸ್ನೇಹಿತರು ಹೀಗೆ ಎಲ್ಲರೂ ಒಂದೆಡೆ ಸೇರಿಕೊಂಡು ಸಂಭ್ರಮಿಸುವ ಸಾಮರಸ್ಯದ ಸಂಬಂಧಕ್ಕೆ ಮಾದರಿಯಾಗಿದೆ ಇನ್ನು ಕಾದಂಬರಿಯಲ್ಲಿ ಬರುವ ಆಡಳಿತಾತ್ಮಕ ಚಾಣಕ್ಯನ ನಡಿಗೆಗಳು ಬಹಳ ನಯವಾಗಿ ನಾಜೂಕಿನಿಂದ ಬೆಣ್ಣೆಯ ಮೇಲಿನ ಕೂದಲು ತೆಗೆದಂತೆ ತೊಡಕುಗಳನ್ನು ಸಿಕ್ಕುಗಳನ್ನು ಬಿಡಿಸಿಕೊಳ್ಳುತ್ತಾ ಸಾಗುವ ತಂತ್ರಗಾರಿಕೆ ಅತ್ಯಂತ ಸೂಕ್ಷ್ಮ ಹಾಗೂ ಉದಾರವಾಗಿದೆ . ತೊಂದರೆ ಮಾಡಿದ ಯಾವ ಪಾತ್ರವೂ ಸೆಟೆದು ನಿಂತು ಕೋಪಿಸಿಕೊಳ್ಳದಂತೆ ಅವರೇ ಪಶ್ಚಾತ್ತಾಪವಾಗುವಂತೆ  ಮಾಡಿ ಅವರಿಗೂ ಒಂದೊಂದು ಬದುಕಿನ ಹೊಸ ತಿರುವನ್ನು ಕೊಟ್ಟು ,ಆ ಆಯ್ಕೆಯಲ್ಲಿಯೇಅವರೂ ಖುಷಿಯಾಗ ಇವರನ್ನು ಸಂತೋಷದಿಂದ ಹಾರೈಸುವಂತೆ ಮಾಡಿರುವುದು ಕಾದಂಬರಿಕಾರರ ಹಿರಿಮೆಯಿಂದೇ ಹೇಳಬೇಕ ಅಂತಹ ಅಮೋಘ ನೈಪುಣ್ಯತೆ,  ವಸುಂಧರಾ ಕಾದಂಬರಿಯಲ್ಲಿ ಬಿಂಬಿತವಾಗಿದ್ದು , ಇವರೊಬ್ಬ ಉತ್ತಮ ನೀತಿಶಾಸ್ತ್ರ ವಿಶಾರದೆ ಎಂಬುದಕ್ಕೆ

ವಸುಂಧರಾ Read Post »

ಪುಸ್ತಕ ಸಂಗಾತಿ

ನೋವೂ ಒಂದು ಹೃದ್ಯ ಕಾವ್ಯ

ಪುಸ್ತಕ ಸಂಗಾತಿ ನೋವೂ ಒಂದು ಹೃದ್ಯ ಕಾವ್ಯ ಕವಯತ್ರಿ ರಂಗಮ್ಮ ಹೊದೇಕಲ್ ತಮ್ಮ ಚೆಂದದ ಕೈ ಬರಹದ ಮೂಲಕ  ಈಗಾಗಲೇ ನಾಡಿನಾದ್ಯಂತ  ಚಿರಪರಿಚಿತ ಹೆಸರು. ಇವತ್ತು ಇಡೀ ಜಗತ್ತು ಕೀಲಿಮಣೆಯ ಮುಂದೆ ಪವಡಿಸಿಕೊಂಡು ಬೆರಳ ತುದಿಯಲ್ಲಿ ಕುಟು ಕುಟು ಕುಟ್ಟುತ್ತಾ ಅಕ್ಷರವ ಅರಳಿಸುತ್ತಿರುವಾಗ, ಗಣಕ ಯಂತ್ರ ಇಲ್ಲದಿದ್ದರೆ ನಾನು ಖಂಡಿತಾ ಇಷ್ಟೂ ಬರೆಯುತ್ತಿರಲಿಲ್ಲವೇನೋ ಅಂತ ಬಡಬಡಿಸುತ್ತಿರುವ ಹೊತ್ತಿನಲ್ಲಿ ಇದಕ್ಕೆಲ್ಲ ಉತ್ತರವೆಂಬಂತೆ ಹಲವಾರು ವರುಷಗಳಿಂದ  ಬರಹಗಾರ್ತಿ ಶೈಲಾ ನಾಗರಾಜ್ ಅವರ ಸಂಪಾದಕತ್ವದಲ್ಲಿ  ರಂಗಮ್ಮ ಹೊದೇಕಲ್ ರವರ  ಕೈ ಬರಹದಲ್ಲಿಯೇ ಸ್ಫುಟ ಮತ್ತು ಸುಂದರವಾಗಿ ’ ಶೈನಾ’ ಎಂಬ ಕೈ ಬರಹದ ಪತ್ರಿಕೆ ಇವತ್ತೂ ತನ್ನ ಮಾನ್ಯತೆಯನ್ನು ಉಳಿಸಿಕೊಂಡಿದೆ.  ಬೆರಳ ತುದಿಯಲ್ಲಿ ಹೂವಂತೆ ಅರಳಿಕೊಳ್ಳುವ ಅವರ ಅಕ್ಷರಗಳಿಗೆ ಮಾರು ಹೋದವರಿಲ್ಲ. ಅವರ ಕೈ ಬರಹವೇ  ಒಂದು  ಜೀವಂತ ಕವಿತೆ.  ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ರಂಗಮ್ಮಹೊದೇಕಲ್ ಒಳ್ಳೆಯ ಕವಯತ್ರಿಯೂ.  ಮಾರುದ್ದ ಕವಿತೆಗಳ ಖಾಲಿತನದ ಮುಂದೆ  ರಂಗಮ್ಮನವರ ಮೂರೇ ಸಾಲು ಪದ್ಯಗಳು ಅದೆಷ್ಟೋ ಅರ್ಥಗಳನ್ನ ಸ್ಫುರಿಸಬಲ್ಲವು.  ಬದುಕಿನ ಇಡೀ ಸಾರವನ್ನು  ಪುಟ್ಟ ಕವಿತೆಯ ಹೃದಯದಲ್ಲಿ ತಂದಿಡಬಲ್ಲರು.  ಸಣ್ಣ ಸಣ್ಣ ಸಾಲುಗಳಲ್ಲಿ ಬದುಕಿನ ಅಚ್ಚರಿಗಳನ್ನ ಹಿಡಿದಿಡಬಲ್ಲಂತಹ ಪ್ರತಿಭಾನ್ವಿತೆ ಈಕೆ. ಅವರೇ ಹೇಳುತ್ತಾರೆ ಬರೆಯದೇ ಉಳಿದ ಸಾಲುಗಳಲ್ಲಿದೆ ಬದುಕು ಅಂತ. ಎಷ್ಟು ಹೇಳಿದರೂ ಹೇಳದೇ ಉಳಿಯುತ್ತದೆ ಬದುಕಿನೊಳಗಿನ ಕವಿತೆ.  ಈ ಅತೄಪ್ತಿಯೇ ಮತ್ತೊಂದು ಕವಿತೆಯ ಮರು ಹುಟ್ಟಿಗೆ ಕಾರಣವಾಗಿಬಿಡಲ್ಲದು.   ಒಂದು ಮಾತಿದೆ,  ’ಅಸುಖಿಯಾಗದವ ಕವಿಯಾಗಲಾರ ’ ಅಂತ. ಆದರೆ  ಸಂಕಟವನ್ನೂ ಸೃಜನಶೀಲ ಕಲೆಯಾಗಿಸುವ  ಛಾತಿ ನಮಗಿರ ಬೇಕು ಅಷ್ಟೆ.  ರಂಗಮ್ಮ ಹೊದೇಕಲ್ ಅವರ ಪದ್ಯಗಳೂ ಕೂಡ ಅಷ್ಟೇ , ಇದೇ ಸತ್ಯವನ್ನು ಹೇಳುತ್ತವೆ.  ಬದುಕಿನ ದು:ಖ,ದುಗುಡ, ದುಮ್ಮಾನ.. ಇವುಗಳ ಬಗ್ಗೆ ಕವಯತ್ರಿ ಯಾವುದೇ  ತಕರಾರು ತೋರುವುದಿಲ್ಲ. ಎಲ್ಲಾ ನೋವುಗಳೂ ಹೃದ್ಯ ಕಾವ್ಯ ಅನ್ನುವ  ಅವರ ಅಂತರಾಳದ ಮಾತುಗಳು ನಮ್ಮನ್ನು ತಟ್ಟದೇ ಇದ್ದೀತೇ?  ಅಂತಹ ಕಾವ್ಯವೇ ಅವರ ಸಂಗಾತಿ ಆದ ಮೇಲೆ , ಕವಿತೆ ಎಲ್ಲ ನೋವುಗಳಿಗೂ ಸಾಂತ್ವಾನ  ಒದಗಿಸುವಂತಹ, ಹೆಗಲು ಕೊಡುವಂತಹ  ಆಪ್ತ ಸಖಿಯಂತೆ ಇಲ್ಲಿ ಗೋಚರಿಸುತ್ತದೆ.   ನೋವೂ ಹೃದ್ಯ ಕಾವ್ಯ .. ಅಂತ ಹೇಳುವುದು ಅಷ್ಟು ಸಲೀಸಾ?  ಪಕ್ವ , ಮಾಗಿದ ಮನಸ್ಥಿತಿಗಷ್ಟೇ  ನೋವಲ್ಲೂ ಸುಸ್ವರ ಕೇಳಿಸ ಬಲ್ಲದು. ಇಂತಹ ಒಂದು ಪರಿಪಕ್ವ ಚಿಂತನೆಯನ್ನು ರಂಗಮ್ಮ ನವರ ಕವಿತೆಗಳಲ್ಲಿ ಕಾಣಬಹುದು.   ಕವಯತ್ರಿ ಹೇಳುತ್ತಾರೆ, ಎಲ್ಲ ’ ಇಲ್ಲ ’ ಗಳ ನಡುವೆಯೂ ಬದುಕಿನ ಹಕ್ಕಿ ಹಾಡುತ್ತದೆ ಅಂತ.  ಬದುಕಿನ ಎಲ್ಲಾ ಭಾವಗಳು  ಹಾಡೇ ಅನ್ನುವ ಭಾವ  ಮಾತ್ರ ನಮ್ಮ ಬದುಕನ್ನು ನಾದಮಯವಾಗಿಸಬಲ್ಲದು. ನೋವು, ಅವಮಾನ, ದ್ವೇಷ, ಇವುಗಳಿಗೆ ಅವೇ ಪ್ರತ್ತ್ಯುತ್ತರ ಅಲ್ಲ, ಖಡ್ಗಕ್ಕೆ ನೆತ್ತರೇ ಉತ್ತರವಾಗಿದ್ದರೆ ಈ ನೆಲದಲ್ಲಿ ಯಾವ ಹೂವೂ ಅರಳುತ್ತಿರಲಿಲ್ಲ.. ಅನ್ನುವ ಅವರ ಕವಿತೆಯ ಸಾಲುಗಳು ನೋವೇ ಇಲ್ಲದಿದ್ದರೆ ಕವಿತೆಗೆಲ್ಲಿ ಜಾಗ ಅಂತ ಹೇಳುವ ಮರುದನಿಯಂತಿದೆ. ಇನ್ನೂ ಮುಂದಕ್ಕೆ ಹೋಗಿ, ಬದುಕನ್ನು ಪ್ರೀತಿಸುವುದೆಂದರೆ ನೋವುಗಳನ್ನು ದಾಟುವುದಷ್ಟೇ .. ಅನ್ನುತ್ತಾರೆ. ಈ ಸಾಲುಗಳಿಗೆ ಬೇರಾವ ವ್ಯಾಖ್ಯಾನಗಳ ಭಾರ ಬೇಡ ಅನ್ನಿಸುತ್ತದೆ. ರಂಗಮ್ಮ ಅವರ ಕವಿತೆಗಳ ತುಂಬಾ ಅಲೆದಾಡುವುದು  ನೋವು ಮತ್ತು ಅದನ್ನು ಮೀರುವ ಭಾವ. ನೋವು ಹಾಡಾಗುವುದು, ನೋವು ಕವಿತೆಯಾಗುವುದು , ಇಲ್ಲಿಯ ಕವಿತೆಗಳ ಮಾಂತ್ರಿಕ ಶಕ್ತಿ.  ಪುಟ್ಟ ಪುಟ್ಟ ಕವಿತೆಗಳು  ಇಡೀ ಬದುಕಿನ ಹೃದ್ಯ ಚಿತ್ರಣವನ್ನು  ಬಿಡಿಸಿಡುವ ಪರಿಗೆ ಮನಸು ಮೂಕಾಗುತ್ತದೆ. ಯಾಕೆಂದರೆ ಎಲ್ಲರ ಎದೆಯೊಳಗಿನ ಭಾವಗಳು ಇಲ್ಲಿ ಕವಿತೆಯಾಗಿ ಅರಳಿಕೊಂಡಿವೆ.  ಓದುತ್ತಾ ನಮ್ಮ ಮನಸೂ ಹಕ್ಕಿಯಂತಾಗಿ ಹಾರುತ್ತದೆ ಹೊಸ ಚಿಂತನೆಯ ದಿಕ್ಕಿನೆಡೆಗೆ. ಒಳ್ಳೆಯ ಕವಿತೆಯ ಉದ್ದೇಶ ಇದುವೇ ತಾನೇ? ಎಲ್ಲಾ ಸಂಕಟಗಳು ದಾಖಲಾಗುವುದಿಲ್ಲ ದಾಖಲೆಗಳೆಲ್ಲಾ  ಮಾನ್ಯವಾಗುವುದಿಲ್ಲ.. ಅನ್ನುವ ಅವರ ಸಾಲುಗಳು ನಮ್ಮೆದೆಯ ಬಡಿತದ ಪ್ರತಿಧ್ವನಿಯಂತಿದೆ.  ಎಲ್ಲಾ ಬೆಂದ ಹೃದಯಗಳಿಗೆ ಮುಲಾಮು ಆಗುವಂತಿದೆ ಇಲ್ಲಿಯ ಕವಿತೆಗಳು. ರಂಗಮ್ಮನವರ ಕವಿತೆಗಳೂ ಔಷಧವೇ. ನಮ ಪಾಲಿನ ಆಕಾಶದಲ್ಲಿ ನಾವು ಹಾಡುತ್ತಿರಬೇಕಷ್ಟೇ ಕೊರಳಿದ್ದಲ್ಲಿ ಹಾಡುಗಳು ಅರಳುತ್ತಿರುತ್ತವೆ.. ಎಂದು ಬರೆಯುವ ಕವಯತ್ರಿ, ಮಿತಿಯೊಳಗೇ ಮೀರಿ  ಬೆಳೆಯುವುದು ಹೇಗೆ? ನಮ್ಮ ಕಣ್ಣಳತೆಗೆ ದಕ್ಕಿದ್ದನ್ನೇ ಆಕಾಶವಾಗಿಸುವುದು ಹೇಗೆ ಎನ್ನುವುದಕ್ಕೆ ಉತ್ತರದಂತಿದೆ.  ಮಿತ ಪದಗಳಲ್ಲಿ ಅರ್ಥ ಅನಂತವಿದೆ. ಮನುಷ್ಯರೇ ಇರದೆಡೆ ದೇವರಿರಬಹುದಾ? ಎನ್ನುವ ಪ್ರಶ್ನೆ ನಮ್ಮೊಳಗೂ ತಡಕಾಡುವಂತೆ ಮಾಡಿ ಬಿಡುತ್ತದೆ.  ಮಾನವೀಯತೆಯೇ ದೈವತ್ವ ಎನ್ನುವ ಕಲ್ಪನೆಯೇ ಎಷ್ಟು ಸುಂದರವಾದದ್ದು. ಗಾಯಗಳನ್ನು ಯಾವೊತ್ತೂ ತೋರಿಸಬಾರದು, ಗಾಯ ಎಷ್ಟೇ ಇರಲಿ ಬದುಕು ಕವಿತೆಯನ್ನು ದಯಪಾಲಿಸಿದರಷ್ಟೇ ಸಾಕು ಅನ್ನುವುದು ಅವರ ವಿನಮ್ರ ಪ್ರಾರ್ಥನೆ.  ಕವಿತೆ ಮಾತ್ರ ನೋವು ಮೀರುವ ಹಾದಿಯಾಗಬಲ್ಲದು ಅನ್ನುವಂತದ್ದು ಇಲ್ಲಿಯ ಕವಿತೆಗಳ ಹೂರಣ.   ನೋವೂ ಒಂದು ಹೃದ್ಯ ಕಾವ್ಯ ಅನ್ನುವ ರಂಗಮ್ಮ ಹೊದೇಕಲ್ ರವರ ಕವನ ಸಂಕಲನ ಅವರ  ಸುಂದರ ಕೈಬರಹದಲ್ಲಿಯೇ  ಪ್ರಕಟಗೊಂಡಿರುವ ಕಾರಣ, ಇಲ್ಲಿಯ ಕವಿತೆಗಳು ಮತ್ತಷ್ಟು ಆಪ್ತವಾಗುತ್ತವೆ.  ಪುಟ್ಟ ಪುಟ್ಟ ಹನಿಯೊಳಗೆ ಇಡಿಯ ಬದುಕೇ ಅಡಕಗೊಂಡಿದೆ. ನೋವನ್ನೆಲ್ಲಾ ಹೃದ್ಯ ಕಾವ್ಯವಾಗಿಸುವ ಕಲೆಗಾರಿಕೆ ಎಲ್ಲರಿಗೂ ದಕ್ಕಲಿ. ಒಳ್ಳೆಯ ಸಂಕಲನಕ್ಕಾಗಿ ಕವಯತ್ರಿ ರಂಗಮ್ಮ ಹೊದೇಕಲ್ ರವರಿಗೆ ಅಭಿನಂದನೆಗಳು. ***************************************     ಸ್ಮಿತಾ ಅಮೃತರಾಜ್. ಸಂಪಾಜೆ     

ನೋವೂ ಒಂದು ಹೃದ್ಯ ಕಾವ್ಯ Read Post »

ಪುಸ್ತಕ ಸಂಗಾತಿ

ಕಾದಂಬರಿ ಕುರಿತು ಸು ನಾನು ಪ್ರತಿ ಪುಸ್ತಕ ಓದಿದಾಗಲೂ ಅದರಲ್ಲಿ ಬರುವ ಒಂದು ಪಾತ್ರ ನಾನೇ ಎನ್ನಿಸಿಬಿಡುವಷ್ಟು ಕೆಲವೊಂದು ಪಾತ್ರಗಳು ಕಾಡುತ್ತವೆ. ಇಲ್ಲಿ ಸು ಕಥಾನಾಯಕನಾದರೂ ನನಗ್ಯಾಕೊ ಪ್ರಕಾಶ್ ಪಾತ್ರ ಬಹಳ ಹಿಡಿಸಿತು. ಇಡೀ ಸು ಕಾದಂಬರಿ ಪ್ರಕಾಶ್ ಪಾತ್ರವೇ ನಿರೂಪಣೆ ಮಾಡಿದ್ದು ಅಂತ ನನಗೆ ಭಾಸವಾಯಿತು. ಇದನ್ನ ಕಾದಂಬರಿ ಅನ್ನೋದಕ್ಕಿಂತ ಒಂದು ಅನುಭವ ಕಥನ ಅಂತ ಕರೆಯೋದು ಹೆಚ್ಚು ಸೂಕ್ತ ಅನ್ನಿಸಿತು ನನಗೆ. ಕಡೆಯ ಎರಡು ಅಧ್ಯಾಯಗಳಲ್ಲಿ ಸು ಮತ್ತು ಪ್ರಕಾಶ್ ಮನಸ್ಸಿನ ತಳಮಳಗಳು ಬಹಳ ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ. ಸು, ಪ್ರಕಾಶ್, ಮಾರಡೂರಿ,ಸು ನ ಸಂಗಾತಿ ಇವೆಲ್ಲ ಪಾತ್ರಗಳು ಆಪ್ತವೆನಿಸುತ್ತವೆ. ಹೇಲಾಳ ಜೀವಕೋಶಗಳು ಮತ್ತವಳ ಸಮಾಧಿಯ ಬಗೆಗಿನ ಸನ್ನಿವೇಶಗಳು, ಪ್ರಕಾಶ್ ಸು ನ ಸಮಾಧಿಯ ಬಳಿಯ ಸನ್ನಿವೇಶಗಳು ಭಾವುಕವಾಗಿವೆ‌. ಮೆಟಾಸ್ಟಾಸಿಸ್, ಆಫ್ಲಾಟಾಕ್ಸಿನ್, ಹಸಿ ಕಾಳುಗಳ ಮೇಲೆ ಬೆಳೆಯುವ ಯಾಸ್ಪರ್ಜಿಲ್ಲುಸ್ ಫ್ಲಾವುಸ್ ಎಂಬ ಶಿಲೀಂಧ್ರ (ಕ್ಯಾನ್ಸರ್ ಕಾರಕ ವಿಷವಾದ ಆಫ್ಲಾಟಾಕ್ಸಿನ್ ಉತ್ಪತ್ತಿಸುವುದು), ಸು ನ ಕ್ಯಾನ್ಸರ್ ಗೆ ಕಾರಣ ಇವೆಲ್ಲವೂ ಕ್ಯಾನ್ಸರ್ ನ ಬಗೆಗಿನ ಬಹಳಷ್ಟು ವೈಜ್ಞಾನಿಕ ವಿಷಯಗಳನ್ನ ತಿಳಿಸುತ್ತವೆ ಮತ್ತಷ್ಟು ಕುತೂಹಲವನ್ನೂ ಹೆಚ್ಚಿಸಿದೆ. ಸು ಬಹಳ ಇಷ್ಟ ಪಟ್ಟು ಹೆಚ್ಚಾಗಿ ತಿನ್ನುತ್ತಿದ್ದ ನೆಲಗಡಲೆಯೇ ಅವನ ಜೀವಕ್ಕೆ ಕುತ್ತು ತಂದಿದ್ದು ಖೇದಕರ. ಅದು ಹೇಗೆ ಎಂದು ತಿಳಿಯಲು ಪುಸ್ತಕ ಓದಲೇಬೇಕು. ಟಿಬೆಟ್ ನೆಲದ ಸಂಸ್ಕೃತಿಯ ಸಣ್ಣ ಪರಿಚಯದೊಂದಿಗೆ ಅಲ್ಲಿಯ ಶವಸಂಸ್ಕಾರದ ರೀತಿ ಭೀಭತ್ಸ ಹುಟ್ಟಿಸುವಂತಿತ್ತು.  ಅಲೆಕ್ಸಾಂಡರ್ ರೀತಿ ಸು ನ ಎರಡೂ ಕಣ್ಣುಗಳು ಬೇರೆ ಬೇರೆ ಬಣ್ಣಗಳು ಮತ್ತು ಕಾಕತಾಳೀಯವೆಂಬಂತೆ ಅಂತಹದೇ ಬೆಕ್ಕು ಸು ಗೆ ಹತ್ತಿರವಾಗುವುದು ಮತ್ತದು ಅವನನ್ನ ಬಹಳವಾಗಿ ಹಚ್ಚಿಕೊಳ್ಳುವುದು ಯಾವುದೋ ಜನ್ಮದ ಸಂಬಂಧದಂತೆ ತೋರುತ್ತೆ. ಎಷ್ಟೇ ಸಂಶೋಧನೆಗಳನ್ನು ಮಾಡಿದರೂ ಸು ಗೆ ಯಾವುದೇ ರೀತಿಯ ಪ್ರಶಸ್ತಿಗಳು, ಹೆಸರಿನ ಆಸೆ ಇಲ್ಲದೆ ಕೇವಲ ಕ್ಯಾನ್ಸರ್ ನನ್ನು ಸೋಲಿಸಲು ಸಂಶೋಧನೆ ಮಾಡುವನು. ಕೊನೆಗೆ ಸು ಸೋತು ಕ್ಯಾನ್ಸರ್ ಗೆಲ್ಲುವುದು. ಇಲ್ಲಿ ಸು ಮತ್ತು ಅಲೆಕ್ಸಾಂಡರ್ ಗೂ ಹೋಲಿಕೆ ಮಾಡಿರುವುದು ಪರಿಣಾಮಕಾರಿಯಾಗಿದೆ. ಸು ನ ಆತ್ಮವೃತ್ತಾಂತದಂತಹ ಕಥನ, ಸರಾಗವಾಗಿ ಓದಿಸಿಕೊಳ್ಳುವ ಒಂದು ಚಂದದ ಓದು. ********************************************** ಚೈತ್ರಾ ಶಿವಯೋಗಿಮಠ

Read Post »

ಪುಸ್ತಕ ಸಂಗಾತಿ

ಬೊಗಸೆ ತುಂಬ ಕನಸು”

ಪುಸ್ತಕ ಪರಿಚಯ ಬೊಗಸೆ ತುಂಬ ಕನಸು ಪ್ರಪಂಚದಲ್ಲಿ ಎರಡು ರೀತಿಯ ಸಾಧಕರಿರುತ್ತಾರೆ. ಒಬ್ಬರು ಇದ್ದ ಹಾದಿಯಲ್ಲಿ ಶ್ರದ್ಧೆಯಿಂದ ಸಾಗಿ ಗುರಿ ತಲುಪುವವರು. ಮತ್ತೊಬ್ಬರು ತಾವೇ ಹಾದಿ ನಿರ್ಮಿಸಿಕೊಂಡು ಗುರಿ ಕಂಡುಕೊಳ್ಳುವವರು. ಹೀಗೆ ಎರಡನೇ ಸಾಲಿನ ಮುಂದಾಳುವಿನ ಹಾಗೆ ನಿಂತು ಯಶ ಬದುಕಿನ ಗಾಥೆ ಬರೆದವರು ಡಾ.ಪ್ರಭಾಕರ ಶಿಶಿಲರು. ಅವರ ಆತ್ಮಕತೆ “ಬೊಗಸೆ ತುಂಬ ಕನಸು” ಓದಿದ ತಕ್ಷಣಕ್ಕೆ ನನಗೆ ಅನ್ನಿಸಿದ್ದು ಹೀಗೆ. ಬಹುಶ: ಈ ಕೃತಿಯನ್ನು ಓದುವ ಎಲ್ಲರಿಗೂ ಹೀಗೊಂದು ಭಾವ ಮೂಡಿಯೇ ಮೂಡುತ್ತದೆ. ಅರ್ಥಶಾಸ್ತ್ರದ ಅಧ್ಯಾಪಕರಾಗಿ. ವಿದ್ಯಾರ್ಥಿ ಜೀವನದ ಉದ್ದಕ್ಕೂ ಕಷ್ಟ ಕಾರ್ಪಣ್ಯಗಳನ್ನೆ ಹೊದ್ದುಕೊಂಡು ಆ ಹರಕು ಆಗಸದ ನಡುವೆಯೂ ಬೆಳ್ಳಿ ಚುಕ್ಕಿಗಳ ಹುಡುಕಿ ಹೆಕ್ಕಿ ತಮ್ಮ ಬದುಕಿಗೆ ಕೌದಿಯಾಗಿಸಿಕೊಂಡವರು. ಅವರ ಆತ್ಮಕತೆಯ ಪುಟದಲ್ಲಿ ಲೇಖಕನ ಮಾತು ಆರಂಭವಾಗುವುದೇ ಹೀಗೆ “ತುಂಬಾ ಅಂದ್ರೆ ತುಂಬಾ ಬಡತನದಿಂದ ಬಂದ ನನಗೆ ಕನಸು ಕಾಣಲು ಕಲಿಸಿದ್ದು ನನ್ನ ತಾಯಿಯ ತಾಯಿ ಬರ್ಗುಳ ಕಾವೇರಮ್ಮ” ಈ ಒಂದು ಸಾಲು ಪ್ರಭಾಕರ ಈ ಪುಸ್ತಕದ ಬಹುತೇಕ ಪುಟಗಳನ್ನು ತನ್ನದಾಗಿಸಿಕೊಂಡಿದೆ. ಸಣ್ಣ ವಯಸ್ಸಿನಲಿ ಬಿಟ್ಟು ಹೋದ ಅಪ್ಪ. ಮತ್ಯಾರೊ ಅಪರಿಚಿತನ ಜೊತೆಗೆ ಶುರುವಾಗುವ ಅಮ್ಮನ ಬದುಕು. ಯಾವ ದೂಷಣೆಯೂ ಇಲ್ಲದೆ ಚಿಕ್ಕಪ್ಪನನ್ನೆ ಒಪ್ಪಿಕೊಳ್ಳುವ ಮುಗ್ಧ ಪುಟ್ಟ ಬಾಲಕ ಬದುಕಿನ ಬಹುತೇಕ ದಿನಗಳವರೆಗೆ ಅನಾಥ ಪ್ರಜ್ಞೆಯಲ್ಲಿಯೇ ಬಳಲುತ್ತಾನೆ. ದಿನಕ್ಕೊಂದು ಊರು ಬದಲಾಯಿಸುವ ಅವರುಗಳ ಜೊತೆ ಹೋಗಲಾಗದೆ ಅಜ್ಜಿ,ಮಾವಂದಿರ ಮನೆಯಲ್ಲಿ ಉಳಿದು ಅಸಹಾಯಕ ಸ್ಥಿತಿ ಎದುರಾದಾಗಲೆಲ್ಲ ಯಾರೊಂದಿಗೂ ಹಂಚಿಕೊಳ್ಳಲಾಗದ ಸಂಕಟದಲ್ಲಿ ಮನೆಯಲಿದ್ದ “ಕೊಂಡಪ್ಪ” ಎತ್ತಿನ ಕುತ್ತಿಗೆಗೆ ಜೋತು ಬಿದ್ದು ಮೌನದಲ್ಲಿ ರೋಧಿಸುವ ಜೀವ ಓದುವ ಹುಚ್ಚಿನ ಸಲುವಾಗಿ ವಯೋಸಹಜ ಭಾವನೆಗಳನ್ನು, ಕಾಮನೆಗಳನ್ನು ಹತ್ತಿಕ್ಕುತ್ತಲೇ ಹೋಗುತ್ತದೆ. ಫೀಸು ಮತ್ತು ಹೊಟ್ಟೆ ಪಾಡಿನ ಸಲುವಾಗಿ, ಬಾಣಸಿಗನಾಗುವ, ಆಳದ ಬಾವಿ ಇಳಿದು ಬಕೆಟ್ಟು ತಂಬಿಗೆ ತೆಗೆದುಕೊಡುವ ಕೆಲಸಗಳಿಗೆ ತನ್ನನ್ನು ತಾನು ಅಣಿಯಾಗಿಸಿಕೊಳ್ಳುವ ಶಿಶಿಲರು ಎಲ್ಲಿಯೂ ಕೂಡ ತಮ್ಮ ಅಂದಿನ ಪರಿಸ್ಥಿತಿಗಾಗಿ ಮರುಗುವುದಿಲ್ಲ. ಮತ್ತೊಬ್ಬರ ಕನಿಕರ ನಿರೀಕ್ಷಿಸುವುದಿಲ್ಲ. ಬದುಕನ್ನು ಬಂದಂತೆ ಎದುರಿಸುತ್ತ ಹೋಗುತ್ತಾರೆ. ತಮ್ಮ ಬಗ್ಗೆ ಕಿಂಚಿತ್ತು ಕಾಳಜಿಯನ್ನು ಮಾಡದಿರುವ ಅಪ್ಪ ಅಮ್ಮನ ಬಗ್ಗೆಯು ಅವರಿಗೆ ತಕರಾರುಗಳಿಲ್ಲ. ಆದರೆ ತಮ್ಮ ಸಲುವಾಗಿ ಒದ್ದಾಡುವ ತಮ್ಮ ಮಾವಂದಿರ ಕುರಿತಾಗಿ ಅವರಿಗೆ ಅಪಾರ ಗೌರವವಿದೆ. ಅವರ ಕಷ್ಟದ ನಡುವೆಯು ತಮಗೆ ಬೆಂಬಲವಾಗಿ ನಿಲ್ಲುವ ಅವರ ಕುರಿತು ವಿಶೇಷ ಅಕ್ಕರೆ ಇದೆ. ಅಲ್ಲದೆ ಅವರಿಗೆ ಹೊರೆಯಾಗಬಾರದು ಎನ್ನುವ ಕಾರಣಕ್ಕೆ ಕೆಲಸಕ್ಕೆ ಸೇರಿ ಒಂದು ವರ್ಷ ಓದನ್ನು ಮೊಟಕುಗೊಳಿಸಿ ತದನಂತರ ಮತ್ತದೆ ದಾರಿಗೆ ಮರಳಿದ ಪ್ರಸ್ತಾಪವು ನಮ್ಮನ್ನು ಶಿಶಿಲರೆಡೆಗೆ ಅಚ್ಚರಿಯಿಂದ ನೋಡುವಂತೆ ಮಾಡುತ್ತದೆ. ಓದಿನ ಹಸಿವು, ಹೊಟ್ಟೆಯ ಹಸಿವು. ಚಿಂತನೆಯ ಹಸಿವು, ಸಾಮಾಜಿಕ ಕಳಕಳಿಗಳ ಹಸಿವು. ಅವರನ್ನು ಮತ್ತೆ ಮತ್ತೆ ಒರೆಗೆ ಹಚ್ಚುತ್ತ ಹೋಗುತ್ತದೆ. ಬಂಗಾರದ ಪದಕ ಸಿಕ್ಕ ಮೇಲೆಯೂ ಕೆಲಸ ಸಿಗದೆ ಕೇವಲ ಒಂದು ವರ್ಷಕ್ಕಷ್ಟೆ ತಾತ್ಕಾಲಿಕ ಬೋಧಕರಾಗಿ ಸೇರಿಕೊಳ್ಳುವ ಶಿಶಿಲರು ಸಿಕ್ಕ ಕೆಲಸಕ್ಕೆ ಕಿಂಚಿತ್ತು ಧಕ್ಕೆ ತರದೆ ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುತ್ತಾರೆ. ಜೀವನದ ಪ್ರತಿಯೊಂದು ಘಟನೆಗಳನ್ನು ಹೆಕ್ಕಿ ಹೆಕ್ಕಿ ಸವಿವರವಾಗಿ ಓದುಗನ ಮುಂದಿರಿಸುತ್ತಾರೆ. ಕೆಲವೊಂದು ಸಂಗತಿಗಳನ್ನು ರಸವತ್ತಾಗಿ ಓದುಗರ ಮುಂದಿಡುತ್ತಾರೆ. ಅವುಗಳನ್ನು ಬಿಡಿ ಬಿಡಿಯಾಗಿ ಓದಿದರೆ ಲಲಿತ ಪ್ರಬಂಧದ ಹಾಗೆ  ಆವರಿಸಿಕೊಳ್ಳುತ್ತವೆ. “ಅತೀಂದ್ರಿಯದ ಅಮಲಿನಲ್ಲಿ” ಎನ್ನುವಲ್ಲಿ ನಿರುದ್ಯೋಗಿ ಲೇಖಕರು ಕೆಲಸ ಹುಡುಕಿ ಹೋಗಿ ಪಡುವ ಪರಿಪಾಡಲನ್ನು ಓದಿಯೇ ಅರಿಯಬೇಕು. ಅತ್ಯಂತ ವಿನೋದದ ಭಾಷೆಯ ಬಹಳಷ್ಟು ಸಂಗತಿಗಳು ಈ ಪುಸ್ತಕದಲ್ಲಿ ಮತ್ತೆ ಮತ್ತೆ ಬರುತ್ತವೆ. ಹೀಗಾಗಿ  ಪುಸ್ತಕದ ಮೊದಲನೆ ಪುಟದಲ್ಲಿ ವಿಷಾದ, ವಿನೋದ ವಿಚಾರಗಳ ತ್ರಿವೇಣಿ ಸಂಗಮ ಎಂದ ಮಾತು ಅಕ್ಷರಶ: ಸತ್ಯ ಎನ್ನಿಸುತ್ತದೆ.ಚಿಕ್ಕಂದಿನಲ್ಲಿ ಅಧ್ಯಾತ್ಮದ ಆಸಕ್ತಿ ಹೊಂದಿ ನಂತರದಲ್ಲಿ ಪ್ರಗತಿಪರ ಚಿಂತನೆಗಳ ಮೈಗೂಡಿಸಿಕೊಂಡು ನಂಬಿದ ಸಿದ್ದಾಂತದಂತೆ ಅಂತರಧರ್ಮಿಯ ವಿವಾಹವಾದವರು ಶಿಶಿಲರು. ಸುಮಾರು ೨೯ ಅನುಕ್ರಮಣಿಕೆಯಲ್ಲಿ ಲೇಖಕರ ಬದುಕಿನ ಒಂದೊಂದೆ ಮಜಲುಗಳನ್ನು ಎಳೆಎಳೆಯಾಗಿ ಹೆಕ್ಕಿ ಇಡುವ ಈ ಪುಸ್ತಕ ಸುದೀರ್ಘ ೬೮೮ ಪುಟಗಳನ್ನು ಹೊಂದಿದೆ. ಮೈಸೂರಿನ ರಾಜ್ ಪ್ರಕಾಶನ ಇದನ್ನು ಹೊರತಂದಿದೆ ಬೆಲೆ :೬೫೦ ರೂ ತಮ್ಮ ಪುಟ್ಟ ಊರಿನ ಹೆಸರನ್ನು ತಮ್ಮ ಹೆಸರಿನೊಂದಿಗೆ ಬೆಸೆದುಕೊಂಡು, ಆ ಮೂಲಕ ತನ್ನ ಪಾಡಿಗೆ ತಾನು ಇದ್ದ ಊರನ್ನು ನಾಡಿನ ಉದ್ದಗಲಕ್ಕು ಪರಿಚಯಿಸಿದವರು. ಯಕ್ಷಗಾನ, ತಾಳಮದ್ದಲೆ,ಸಾಹಿತ್ಯ ಹತ್ತಾರು ಪ್ರಕಾರಗಳು, ಸಾಮಾಜಿಕ ಚಟುವಟಿಕೆಗಳು ಶಿಶಿಲರ ಅಗಾಧ ಜ್ಞಾನವನ್ನು, ಅಪರಿಮಿತ ಶ್ರಮವನ್ನು, ಅವರಿಗೆ ಬದುಕಿನ ಕುರಿತಾಗಿ ಇರುವ ಜೀವನೋತ್ಸಾಹವನ್ನು ಪರಿಚಯ ಮಮಮಾಡಿಸುವ ಕೃತಿ *********************************** ದೀಪ್ತಿ ಭದ್ರಾವತಿ

ಬೊಗಸೆ ತುಂಬ ಕನಸು” Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ ಗಾಯದ ಹೂವುಗಳು  “ಗಾಯದ ಹೂವುಗಳು ”  2015 ರ  ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ” ಪಡೆದ ಕೊಡಗಿನ ಯುವಕವಿ  ಕಾಜೂರು ಸತೀಶ್ ರವರ ಮೊದಲ ಸಂಕಲನ ಎಂಬುದು ನಮ್ಮಲ್ಲರಿಗೂ ಹೆಮ್ಮೆಯ ವಿಷಯ.  ಫಲ್ಗುಣಿ ಪ್ರಕಾಶನದಲ್ಲಿ ಪ್ರಕಟಣೆಗೊಂಡು ಖ್ಯಾತ ಕವಿಗಳಾದ ಶ್ರೀ ವಾಸುದೇವ ನಾಡಿಗ್  ರವರ ಮುನ್ನುಡಿ ಬರೆಸಿಕೊಂಡು ಶ್ರೀ ಪ್ರವೀಣ ಕುಮಾರ ದೈವಜ್ಞಾಚಾರ್ಯ ರವರ ಭರವಸೆಯ ಬೆನ್ನುಡಿ ಲೇಪಿಸಿಕೊಂಡಿರುವ ಕವನ ಹೊತ್ತಿಗೆ.                                           ಕವಿತೆಯೆಂದರೇನೆಂದೇ                                                               ತಿಳಿಯದ,                           ನನ್ನನ್ನೇ ಉಸಿರಾಡಿಕೂಳ್ಳುತ್ತಿರುವ                                                    ಅಪ್ಪ -ಅಮ್ಮನಿಗೆ.                 ಎಂಬ ಕವಿಯ ಅರ್ಪಣಾಭಾವದಿಂದ ಅರ್ಪಿಸಿಕೊಳ್ಳುತ್ತ ಹೋಗುತ್ತದೆ.  “ಒಂದು ದಿನ ನನ್ನೊಳಗಿನ ಬೇಗುದಿಗಳಿಗೆ ಬೇರುಹುಟ್ಟಿ ಕಾಲ್ಬೆರಳ ತುದಿಯಿಂದ ನೆತ್ತಿಗೆ ಹಬ್ಬಿಕೊಳ್ಳತೊಡಗಿದಾಗ, ಕವಿತೆಯ ತೆಕ್ಕೆಯೊಳಗೆ ಬಿದ್ದೆ “ಎಂದು  ಮುನ್ನುಡಿ ಬರೆದು ಕೊಳ್ಳುವ ಕವಿ, ಕವಿತೆಗಳನ್ನು ಹೆರುವ ಪರಿಯೇ ವಿಭಿನ್ನ.   ಇರುವೆ, ಒಂಟಿ, ಊದುಕೊಳವೆ, ಖಾಲಿಡಬ್ಬ, ಚಪ್ಪಲಿಗಳು, ಮಾತು, ಮೌನ ಮತ್ತು ಕವಿತೆ, ಮರಣದ ಹಾಡು, ಹಾವು, ಮೈಲಿಗೆ, ಬೀದಿಯ ಕವಿತೆ, ಕಿಟಕಿ ತೆರೆದು ಕುಳಿತೆ, ಈ ಕವಿತೆಗಳೊಂದಿಗೆ ಯುದ್ಧ ಘೋಷಿಸಿದ್ದೇನೆ, ನೆಲವಿಲ್ಲದವನ ಉಯಿಲು, ಬೇಲಿ, ನದಿ, ಕಾಡು ಕವಿತೆ, ಮಿಕ್ಕವರಾರನ್ನೂ ಹೀರಕೂಡದು, ಒಂದು ಅರ್ಜಿ ಮತ್ತು ಹದಿನಾಲ್ಕು ತಿಂಗಳು, ನೀನು ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು, ಕಡಲಾಚೆಯ ಹುಡುಗಿಗೆ, ಈ ರಾತ್ರಿಗಳಲ್ಲಿ ನಿದ್ರಿಸಲಾರೆ, ನಾವಿಬ್ಬರು ತೀರಿಕೊಂಡ ಮೇಲೆ,ಒಲೆ ಮತ್ತು ಅವ್ವ, ಅರ್ಥವಾಗಿರಬಹುದು, ನೀನು ನನ್ನ  ಜೊತೆ ಬದುಕಿಕೊಳ್ಳಬಹುದು, ಬೋನ್ಸಾಯ್ ಸ್ವಗತ, ಭಿಕ್ಷುಕ ಕವಿಯ ಕವಿತೆಗಳಲ್ಲದ ಸಾಲುಗಳು, ಅಸ್ವಸ್ಥ ಕವಿತೆಗಳು, ನೋಟೀಸು, ಸಲಾಮು, ನನ್ನ ಕವಿತೆ, ಬಲಿ, ಆಕಾಶ ಧುಮ್ಮಿಕ್ಕುತ್ತಿದೆ ನೀರಾಗಿ, ಇರಲಿ, ಅಪ್ಪ ಮತ್ತವನ ಹತ್ಯಾರಗಳು, ಎಲ್ಲ ಅಮಾವಾಸ್ಯೆಗಳಲ್ಲೂ ಪದ್ಯವೊಂದಿರಲಿ ಬೆಳಕಿಗೆ, ಸಾವು, ಗಾಯದ ಹೂವುಗಳು, ಆಲ್ಬಮ್, ಯಾರದಿದು? ಇನ್ನೂ ಬದುಕಿರುವ ಕವಿತೆಗಳು, ಮೊದಲ ರಾತ್ರಿಯಂದು, ನನ್ನ ಮಿತ್ರರೆಲ್ಲಾ ಹಾಯಾಗಿದ್ದಾರೆ, ನಿನಗೆ, ಕೊಳದ ಬಳಿಯ ಮರ, ಹಸಿಮೀನು ಮತ್ತು ನನ್ನ ಕವಿತೆ, ಎಡ ಮತ್ತು ಬಲ, ಮಧ್ಯರಾತ್ರಿಯ ನಂತರದ ಮಳೆ, ಶಬ್ದ ಸಮರ, ಮರ, ಕಸದ ತೊಟ್ಟಿಯ ಕಾಗದದ ಲೋಟಗಳು, ಪರೀಕ್ಷೆ, ಉಯಿಲು.  ಈ ಮೇಲಿನ 53 ಹೂವುಗಳಿರುವ ಹೂಗುಚ್ಛ “ಗಾಯದಹೂವುಗಳು”.ಪ್ರತಿಯೊಂದು ಹೂವುಗಳೂ ಗಾಯದ ಹೂವುಗಳಾಗಿ ಅರಳಿ, ಸುತ್ತೆಲ್ಲಾ ಪರಿಮಳ ಸೂಸುತ್ತಾ ಎಲ್ಲರನ್ನು ಆಕರ್ಷಿಸಿ ಘಮಘಮಿಸುತ್ತಿರುವ ಪ್ರೀತಿಯ ಪಾರಿಜಾತಗಳಾಗಿವೆ. ಕೇಳಿಸಿಕೊಳ್ಳಿ  ಒಂದು ಇರುವೆ ಸತ್ತಿದೆ  ನನ್ನ ಕಾಲ ಬುಡದಲ್ಲಿ        ಎನ್ನುವ ಕವಿಯು ಸಮಾಜದ ವ್ಯವಸ್ಥೆ, ಶ್ರೀಮಂತವರ್ಗ,ಹತಾಶೆಗಳನ್ನು ಕಡಿಮೆ ಪದಗಳಲ್ಲಿ ಅತಿಸೂಕ್ಷ್ಮವಾಗಿ ಶಬ್ಧ ಸಂವೇದನೆಯಿಂದ  ಪ್ರಸವಿಸಿದ್ದಾರೆ.   ಸತೀಶ್  ರವರ ಕವಿತಗಳನ್ನು ಓದುತ್ತಾ ಹೋದರೆ ಅವು ಬರಿ ಕವಿತೆಗಳಾಗಿ ಅಭಿವ್ಯಕ್ತವಾಗುವುದಿಲ್ಲ. ಅವುಗಳು ಅವರು ಬದುಕಿಕೊಳ್ಳಲು ಹಡೆದ ಮಕ್ಕಳಾಗಿವೆ. ಕವಿಗೆ ಕವಿತೆಗಳೇ ಬದುಕಿನ ಭರವಸೆಯ ಮೌಲ್ಯಗಳು.  ಚಪ್ಪಲಿಗಳು ನಾವು ಎಂದೆಂದೂ ಬಹಿಷ್ಕ್ರತರು  ಮಸೀದಿ ಮಂದಿರ ಇಗರ್ಚಿಗಳಿಗೂ ಅಸ್ಪೃಶ್ಯರು  ಇತಿಹಾಸದ ಚರ್ಮ ಸುಲಿದು ಒಣಗಿಸಿ ನಮ್ಮ ಸೃಷ್ಟಿ      ಈ ಕವಿತೆಯಲ್ಲಿ ಮೌಢ್ಯ, ಜಾತೀಯತೆ, ಮೇಲು -ಕೀಳು ಮನೋಧೋರಣೆ, ಅಸಹಾಯಕತೆ, ಬಡತನ, ಅಸ್ಪೃಶ್ಯತೆ, ಸಮಾಜದ ವ್ಯವಸ್ಥೆಯ ಬಗ್ಗೆ ಇರುವ ಅತೃಪ್ತಿಯನ್ನು ಚಪ್ಪಲಿಗಳು ಕವಿತೆಯ ಮೂಲಕ ಧನ್ಯತಾ ಭಾವದಲ್ಲಿ ಕವಿತೆಯಾಗಿ ಹಡೆದಿದ್ದಾರೆ.  ಕಡಲಿನ ಆಚೆ ಬದಿಯಲ್ಲಿ  ನಿನ್ನದೊಂದು ತೊಟ್ಟು ರಕ್ತ  ಈಚೆಬದಿಯಲ್ಲಿ ನನ್ನದೊಂದು ತೊಟ್ಟು ರಕ್ತ  ಚೆಲ್ಲಿ ಬಿಡೋಣ  ಕವಿ ಕವಿತೆಗಳಲ್ಲಿ ಬಳಸಿರುವ ರೂಪಕಗಳು, ಪ್ರತಿಮೆ, ಸಾಂಕೇತಿಕ ಭಾಷೆ ಪ್ರತಿಯೊಂದು ಅವರು ಕವನ ಹೆರುವ ರೀತಿಗೆ ಉದಾಹರಣೆ.  ಹಸಿದ ಜಿಗಣೆಯೇ  ಬಾ ಹೀರು ನನ್ನನ್ನು  ಸ್ವಲ್ಪದರಲ್ಲೇ ನೀನು  ದ್ರಾಕ್ಷಿಯಾಗಿ ಉದುರುತ್ತೀ    ಕವಿಯ ಜಿಗಣೆಯೊಂದಿಗೆ ನಿಜಕ್ಕೂ ಸೋಜಿಗವೆನ್ನಿಸುತ್ತದೆ.ಮಿಕ್ಕವರಾರನ್ನೂ ಹೀರಕೂಡದು ಎಂದು ಹೇಳುವ ಪರಿ, ಕವಿಗೆ ಇತರರ ಮೇಲಿರುವ ಉದಾರತೆ, ಕಾಳಜಿ, ವಿಶಾಲ ಮನೋಭಾವವನ್ನು ಗೋಚರಿಸುತ್ತದೆ. ಸತೀಶ್ ರವರ ಕವಿತೆಗಳು ಹಸಿವು, ಬಡತನ, ಸಮಾಜದ ಅವ್ಯವಸ್ಥೆ, ಮೋಸ, ವಂಚನೆ, ಭ್ರಷ್ಟಾಚಾರ, ಹತಾಶೆ, ಜಾತೀಯತೆ, ಅಸಮಾನತೆ, ಪ್ರೀತಿ -ಪ್ರೇಮ, ಪ್ರಕೃತಿಯ ಬಗ್ಗೆ ಕಾಳಜಿ, ಪ್ರಕೃತಿ ವಿನಾಶದ ಬಗ್ಗೆ ಅಸಮಾಧಾನ ಹೀಗೆ ಸುಗಂಧ ಬೀರುತ್ತಾ ಒಂದೊಂದು ಕವಿತೆಯು ಸೂಕ್ಷ್ಮ ಸಂವೇದನೆಯೊಂದಿಗೆ ಮೊಗ್ಗಾಗಿ ಜೀವನದ ಆಳವಾದ ಅನುಭವದೊಂದಿಗೆ ಅರಳುತ್ತಾ ಹೋಗಿವೆ.  ಕವಿತೆಗಳು ರೋಷದಿಂದ ತಲ್ಲಣಿಸುವಂತೆ  ಭಾಸವಾದರೂ ಆರೋಗ್ಯಯುತ ಸಮಾಜ ರೂಪುಗೊಳ್ಳಲು ಬದಲಾವಣೆಗಳಿಗಾಗಿ ಮಿಡಿಯುವ ತುಮುಲವಿಸುತ್ತದೆ ನನಗೆ. ಕವಿತೆಗಳನ್ನು ವ್ಯಾಖ್ಯಾನಿಸುವುದಕ್ಕಿಂತ  ಅವುಗಳನ್ನು ಸವಿದರೆ ಅವುಗಳಲ್ಲಿನ ಕವಿಯ ಸಾಹಿತ್ಯ ಅಭಿವ್ಯಕ್ತಿಯ ಪರಿಚಯವಾಗುತ್ತದೆ.  ಮಲೆಯಾಳಂ,ಇಂಗ್ಲೀಷ್ ಭಾಷೆಗಳ ಸಾಹಿತ್ಯದ ರುಚಿವುಂಡು ಅನುವಾದಗಳಲ್ಲಿ  ತೊಡಗಿದ್ದರೂ(ಮಲಯಾಳಂ ಅನುವಾದಿತ ಕವಿತೆಗಳ ಸಂಕಲನ” ಕಡಲ ಕರೆ”ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟವಾಗಿದೆ) ಕನ್ನಡವನ್ನು ಹೆಚ್ಚು ಪ್ರೀತಿಸಿ ಗುರುತಿಸಿಕೊಂಡಿರುವುದು ಸತೀಶ್ ರವರ ಹೆಚ್ಚುಗಾರಿಕೆ.    ‘ದೊಡ್ಡವರ ಶಿಫಾರಸ್ಸಿಲ್ಲದೆ ಬಹುಮಾನ ದಕ್ಕುವುದಿಲ್ಲ’  ಎಂಬ ಕವಿಯ ನಿಲುವನ್ನು ಹುಸಿಯಾಗಿಸಿ ಅವರ ಕವಿತ್ವ ಜ್ಞಾನಕ್ಕೆ ಪ್ರಶಸ್ತಿಯನ್ನು ದಕ್ಕಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಹೀಗೆ ಅವರ ಸಾಹಿತ್ಯದ ತೇರು ಗಾಯದ ಹೂವುಗಳಿಂದ ಅರಳಿ ದೊಡ್ಡ ಹೆಮ್ಮರವಾಗಿ ಹಲವರಿಗೆ ಆಶ್ರಯವಾಗುವ ದೀವಿಗೆಯಾಗಲಿ ಎಂಬುದೇ ಸಾಮಾನ್ಯ ಓದುಗರಾಗಿ ನಮ್ಮೆಲರ ಹೃದಯತುಂಬಿದ ಹಾರೈಕೆ ************************************************** ಕಾವ್ಯ ಎಸ್.

Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಪುಟ್ಟ ಗೌರಿ ಪುಟ್ಟ ಗೌರಿ : ಕುರಿತು ಕೆಲವು ಮಾತುಗಳು ಹೊಟ್ಟೆಯೊಳಗಡೆ ಗೋರಿ ಕಟ್ಟಿಕೊಂಡಿರುವವರೆ, ಹೊಡೆಯಲೆತ್ತಿರುವ ಕೈ ಹೊತ್ತಿ ಹೊಗೆಯುವೆದೆ, ವಿಷವುಗುಳಿ ನಗುವ ನಾಲಿಗೆ, ಎಲೆಲೇ, ತಡೆಯಿರಿ, ತಡೆಹಿಡಿಯಿರಿ: ಮಗು ನಗುತ್ತಿದೆ, ಮಗು ಆಡುತ್ತಿದೆ.               ( ಒಳ್ಳೆತನ ಸಹಜವೇನಲ್ಲ – ಎಂ ಗೋಪಾಲಕೃಷ್ಣ ಅಡಿಗ ) ಮೇಲಿನ ಸಾಲುಗಳು ಪ್ರತೀಕ್ಷಣವೂ ಎಚ್ಚರಿಸುವ, ಒಂದಷ್ಟು ಅಸಹಜ ಕಾರ್ಯಗಳನ್ನು ಒಳಗಿಂದ ತಡೆವಂತೆ ಮಾಡುವ ಕಾರ್ಯವನ್ನು ಮಾಡುತ್ತಾ ಜಾಗೃತವಾಗಿಟ್ಟಿದೆ. ದುಷ್ಟ ಮನಸ್ಥಿತಿ ಅಡಿಗರು ಬರೆದು ಹಾದಿ ಕಾಣಿಸಿಕೊಟ್ಟ ನಂತರೂ ಬದಲಾಗದಿರುವುದು ನಮ್ಮ ದುರಂತ, ಮಗುತ್ವದ ಆಸೆಯ ಮುಂಗಾಣ್ಕೆ ಅವರ ದೊಡ್ಡತನ. ‘ಮಗು ಆಡುತ್ತಿದೆ’ ‘ಮಗು ನಗುತ್ತಿದೆ’ ಎನ್ನುವುದು ಇಂದಿಗೆ ಇದೆಯೇ? ಬಹುದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ. ಇಂದು ಮಗು ನಗಲು, ಆಡಲು ಒಂದಷ್ಟು ಅವಕಾಶ ಕೊಡಬೇಕಾಗಿದೆ. ಸಮಾಜವೊಂದು ನಿರಂತರವಾಗಿ ವಿಜ್ಞಾನ, ತಂತ್ರಜ್ಞಾನ, ಭಾಷೆ, ಸಂವಹನಗಳಿಂದ ಬೆಳೆಯುತ್ತಿರುವಾಗ, ಅದನ್ನನುಸರಿಸುವ ಮನುಷ್ಯನ ಅಭಿವ್ಯಕ್ತಿಯಲ್ಲಿ ಬದಲಾಗುತ್ತಾ ಬಹುದೊಡ್ಡ ಅವಕಾಶಗಳನ್ನು ಆಯಾ ಕಾಲದಲ್ಲಿ ಬದುಕುತ್ತಿರುವವರಿಗೆ ಮೇಲಿನ ಅಂಶಗಳು ಹಾದಿ ತೆರೆದು ಕೊಡುತ್ತದೆ. ಅವುಗಳ ಬಳಕೆ ನಮ್ಮ ಯೋಗ್ಯತೆಯ ಪ್ರತೀಕದಂತೆಯೆ; ನಮ್ಮ ಸಮಾಜದ ನಡೆ, ಇತಿ-ಮಿತಿಯನ್ನು ತಿಳಿಸುತ್ತದೆ. ನಮ್ಮೊಳಗಿನ “ಮಗು” ತನವನ್ನು ಆದಷ್ಟು ಕಾಪಿಟ್ಟುಕೊಂಡು ಬದುಕಬೇಕಾದ ಅಗತ್ಯ ತುರ್ತು ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ವಿಜ್ಞಾನ, ತಂತ್ರಜ್ಞಾನಗಳಲ್ಲಿನ ಆವಿಷ್ಕಾರಗಳು ಆರಂಬ ಮಾಡಿ, ಮಾಡಲು ಹೊರಟಿರುವ ದೊಡ್ಡ ಕೆಲಸವನ್ನು, ಅದು ಉಂಟುಮಾಡುವ ಪರಿಣಾಮವನ್ನು  ಬಿತ್ತನೆಮಾಡಿ ಪ್ರಯೋಗಿಸಿಯೇ ನೋಡಬೇಕಾದ ಅಗತ್ಯವಿಲ್ಲ. ಊಹಿಸುವ ಒಂದಷ್ಟು ಪ್ರಜ್ಞೆಯಿದ್ದರೆ, ಮುಂಗಾಣ್ಕೆ ಕೈ ಹಿಡಿದಿದ್ದರೆ, ಅಪಾಯಕಾರಿ ಪ್ರಯೋಗಗಳಿಂದ ದೂರ ಉಳಿವಂತೆ ಮಾಡುವಲ್ಲಿ ಬುದ್ದಿ ಭಾವಗಳು ಯಶಸ್ವಿಯಾಗಿ ಕೆಲಸ ಮಾಡುತ್ತವೆ. ಈ ಮುಂಗಾಣ್ಕೆಯ ಆಗಮನಕ್ಕೆ ಬದುಕನ್ನು ಸಹಜವಾಗಿ ಗಮನಿಸುತ್ತಲೇ, ಅದರ ಉಪೋತ್ಪನ್ನವಾದ ಬರಹಗಳ ರಾಶಿಯೂ ಕೈ ಹಿಡಿಯುತ್ತವೆ. ಜೊತೆಗೆ ಎಲ್ಲಾ ಲಲಿತಕಲಾ ಪ್ರಕಾರಗಳೂ ಬದುಕ ಹಸನಾಗಿಸುವ, ಸಹ್ಯಗೊಳಿಸುವ ಕಾರ್ಯಗಳನ್ನು ಮಾಡುತ್ತವೆ. ಅವುಗಳ ಗ್ರಹಿಕೆ ಮತ್ತು ಅಯ್ಕೆಗಳಲ್ಲಿ ಬಿದ್ದಿರುವ ಕಂದಕವೇ ಇಂದಿನ ತಲೆಮಾರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಮನುಷ್ಯ ಕೇವಲ ಹೊರ ಆಕಾರಗಳಿಂದ ಮನುಷ್ಯನಾಗಿದ್ದಾನೆ, ಒಳಗೆ ‘ಆ’ ಮನುಷ್ಯತ್ವ ಇದೆಯೇ? ಈ ಪ್ರಶ್ನೆ ಕಾಡುತ್ತಿರುವಾಗ ಕಣ್ಣ ಮುಂದಿನ ಎಳೆಯ ಮಕ್ಕಳಿಗೆ ನಾವು ಕೊಟ್ಟು-ಬಿಟ್ಟುಹೋಗುವುದಾದರೆ ಏನನ್ನು? ಮತ್ತು ಏಕೆ? ಈ ಪ್ರಶ್ನೆಗಳು ಬಹಳವಾಗಿ ಕಾಡುತ್ತದೆ. ಪುಟ್ಟಗೌರಿ ಸಂಕಲನ ‘ಆ’ ಬಿಟ್ಟು ಕೊಟ್ಟುಹೋಗಬೇಕಾದ ಅಂಶಗಳ ಕಡೆಗೆ ಗಮನ ಸೆಳೆಯುವುದರಿಂದಲೇ ಸದ್ಯದ ಒತ್ತಡದಲ್ಲಿ ಮುಖ್ಯ ಎನಿಸುತ್ತದೆ. ಬಾಲ್ಯದಲ್ಲಿ ಮಕ್ಕಳ ಶಿಕ್ಷಣ ಕುಟುಂಬದಿಂದ ಪ್ರಾರಂಭವಾಗಿ, ಶಾಲೆಯೆಂಬ ವ್ಯವಸ್ಥೆಯಲ್ಲಿ ಒಂದು ವ್ಯವಸ್ಥಿತ ಆಕಾರ ಪಡೆಯುತ್ತಿತ್ತು. ಇಂದಿನ ಶಿಕ್ಷಣ ರಜೆಯ ಮಜೆಯಾಗಿಯಷ್ಟೇ ಉಳಿದಿದೆ ಎನ್ನುವುದು ಮೊದಲ ಸಮಸ್ಯೆ. ಹಿಂದಿನ ತಲೆಮಾರು ತನ್ನ ಬಾಲ್ಯದ ಹೆಚ್ಚು ಸಮಯ ಕಳೆಯುತ್ತಿದ್ದುದು ಶಾಲೆಯ ವಾತಾವರಣದಲ್ಲಿ. ಇಂದು ಮನೆಯ ವಾತಾವರಣ ಬೇಸರವೆನಿಸಿದರೆ ಶಾಲೆಯ ಕಡೆ ಮುಖಮಾಡುವ, ಅದೂ ರಜೆಯಿಲ್ಲದಿದ್ದರೆ ಎನ್ನುವಷ್ಟು ಸಮಾಜ ಮತ್ತು ಶಿಕ್ಷಣ ವ್ಯವಸ್ಥೆ ಬದಲಾಗಿವೆ. ಒಂದೆಡೆ ಕೂರಲಾರದ, ನಿಂತಲ್ಲಿ ನಿಲ್ಲಲಾರದ, ಒಬ್ಬರನ್ನೊಬ್ಬರು ಸಹಿಸಲಾರದ, ಸದಾ ಅನುಮಾನಿಸುವ ಮಟ್ಟದ ಮನಸ್ಥಿತಿಗಳಲ್ಲಿರುವವರಲ್ಲಿ “ಸ್ವತಂತ್ರ”ವನ್ನು ಕುರಿತು ಅಪಾರ ಕಾಳಜಿಯಿದೆ, ಆದರೆ ತಮ್ಮದು “ಸ್ವೇಚ್ಛಾಚಾರ”ವೆಂಬ ಸಣ್ಣ ಗಮನವೂ ಇಲ್ಲ. ಇವುಗಳನ್ನು ಆಲೋಚಿಸವಷ್ಟೂ ನಮಲ್ಲಿ ವ್ಯವಧಾನವಿಲ್ಲ. ಅಂತರಾಷ್ಟ್ರೀಯ ಸಂಬಂಧಗಳ ಕುರಿತು ಮಾತಾಡುವ ಕಣ್ಣಿಗೆ, ಕಣ್ಣೆದುರಿನ ಎಳೆಯ ಮಕ್ಕಳ ಬುದ್ದಿ ಭಾವಗಳ ಸಂಬಂಧದಲ್ಲಿ ಆಗಿರುವ ‘ವಿಘಟನೆ’ ಕಾಣುತ್ತಿದ್ದರೂ ಅದಕ್ಕೆ ಕಾರಣ, ಪರಿಹಾರ ಮಾರ್ಗೋಪಾಯಗಳ ಆಲೋಚನೆ ನಮ್ಮೊಳಗೆ ಬಂದೇ ಇಲ್ಲ. ಅಥವಾ ಎಲ್ಲವನ್ನು ಕಂಡೂಕಾಣದ ಜಾಣಕುರುಡರಂತೆ ವರ್ತಿಸುತ್ತಿದ್ದೇವೆ. ಈ ಜಾಣಕುರುಡುತನ ಕಳೆಯದೆ ಉಳಿದ ಹಾದಿ ಕ್ರಮಿಸಲಾರೆವು ಎಂಬುದು ಇನ್ನಾದರೂ ನಮಗೆ ಅರ್ಥವಾಗಬೇಕಿದೆ. “ಉತ್ತರೋತ್ತರ ವಾದ”ಗಳಲ್ಲಿ ಮಿಂದು ಬಂದಿರುವವರಿಗೆ, “ವಿಶ್ವಗುರು” ಪಟ್ಟದ ಕುರ್ಚಿಗೆ “ಟವಲ್” ಹಾಕುವ ಕಾರ್ಯದಲ್ಲಿ ಸದಾನಿರತರಾಗಿರುವ ನಮಗೆ ಮೇಲಿನ ಅಲೋಚನೆ ಮತ್ತು ಕಾಳಜಿಗಳು ಬಾಲಿಷವಾಗಿ ಕಂಡರೆ ಅಶ್ಚರ್ಯವಿಲ್ಲ. ಅದರೆ ಒಂದಂತೂ ಸತ್ಯ – ಆಂತರಿಕವಾಗಿ ಸದೃಢರಾಗದ ಹೊರತು, ಹೊರಗಿನ ಬಲಿಷ್ಟತೆ ಮಾತ್ರ ಜೀವಂತವಾಗಿ ಉಳಿಯುವ ಹಾದಿ ಎಂದು ನಂಬುವುದು, ‘ಕಲ್ಪನೆ’ಯಲ್ಲಿ ನಿಂತು ‘ಸದ್ಯ’ದ ಒತ್ತಡಕ್ಕೆ ಮಾಡುವ ಅಪಾರ ಪ್ರಮಾಣದ ಹಾನಿಗೆ ಹಾದಿ ಮಾಡಿಕೊಡುತ್ತಿದೆ. ಢಾಳಾಗಿ ಕಾಣಿಸುವಷ್ಟು ಸಮಸ್ಯೆ ಇರುವಾಗ, ಒಂದು ಭೂಭಾಗದ ಪರಿಸರ, ನಂಬಿಕೆ, ಆಚರಣೆ, ಅವುಗಳು ಕಟ್ಟಿಕೊಳ್ಳುವ ಕಲ್ಪನೆ ಮತ್ತು ಸೃಷ್ಟಿಸಿಕೊಂಡ ಭಾಷೆ, ಅವುಗಳ ಒಟ್ಟೂ ಮೊತ್ತವಾದ “ಸಂಸ್ಕೃತಿ”ಯ ಆಕಾರ ಇಂದು ಹೇಗಿದೆ? ಇದ್ದರೆ ಅದರ ಕೊಡುಗೆ ಎನು? ಪಲ್ಲಟವಾಗಿದ್ದರೆ ಏಕೆ? ಈ ಪ್ರಶ್ನೆಗಳು ಹೊಕ್ಕದ ಹೊರತು ಮುಂದಿನ ಎಳೆಯ ತಲೆಮಾರಿನ ಕುರಿತು ಸ್ವಲ್ಪವೂ ಯೋಚಿಸಲಾರೆವು. ಈ ಪ್ರಶ್ನೆಗಳು ಕಾಡಲ್ಪಟ್ಟಿರುವ ಕೆಲವರಾದರೂ ಒಂದಷ್ಟು ಆ ಕಡೆಗೆ ಗಮನ ಹರಿಸಿದ್ದಾರೆ. ಅಂತಹವರಲ್ಲಿ ಜಯಲಕ್ಷ್ಮೀ ಎನ್. ಎಸ್. ಕೋಳಗುಂದರೂ ಒಬ್ಬರು, ಅಂತಹಾ ಸಂಕಲನಗಳಲ್ಲಿ “ಪುಟ್ಟಗೌರಿ” ಯೂ ಒಂದು. ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಕವಿತೆಗಳು ಹೇರಳವಾಗಿ ಬಂದಿದೆ. ರಾಜರತ್ನಂ ರಿಂದ ಹಿಡಿದು ಇತ್ತೀಚೆಗೆ ಮಕ್ಕಳ ಕವಿತೆಗಳ ಸಮಗ್ರದವರೆಗಿನ ಕವಿತೆಗಳು ವ್ಯಾಪ್ತಿ, ವಿಸ್ತಾರ ಮತ್ತೊಂದಷ್ಟು ಸಮಸ್ಯೆಗಳ ಕುರಿತು ಮಾತಾಡುತ್ತದೆ. ಮಕ್ಕಳಿಗಾಗಿ ಬರೆಯುವಾಗ ವಯಸ್ಸಿನ ಮಿತಿ ಇರುತ್ತದೆಯೇ? ಇದ್ದರೆ ಏಕೆ? ಈ ಪ್ರಶ್ನೆಗಳು ಬಹುಮುಖ್ಯವಾದದ್ದು. ಮಕ್ಕಳ ಕವಿತೆಗಳು ಕೇವಲ ಮಕ್ಕಳಿಗಲ್ಲ, “ಮಗು ಮನಸ್ಥಿತಿ” ಯನ್ನು ಕಾಪಿಟ್ಟುಕೊಳ್ಳುವ ಅಗತ್ಯವಿರುವ ಎಲ್ಲರಿಗೂ ಎನ್ನುವುದು ಸ್ಪಷ್ಟ ಉತ್ತರವಾದರೂ, ಆ ಕಾರ್ಯ ಎಷ್ಟು ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎನ್ನುವುದು ಬಹಳ ಮುಖ್ಯ. ಭಾಷೆ, ವಸ್ತು, ರೂಪಗಳು ಮೊದಲ ತಲೆಮಾರಿನಂತೆಯೇ ಇರುವ ‘ಪುಟ್ಟಗೌರಿ’ಯಲ್ಲಿ ಗಮನ ಸೆಳೆಯುವುದು ಕವಿತೆಗಳಲ್ಲಿನ “ಲಯ”. “ಲಯ” ಕಳೆದುಕೊಂಡು ಬದುಕುತ್ತಿರುವವರಿಗೆ “ಲಯ”ವಾಗದಂತೆ “ಲಯ”ದಲ್ಲಿಯೇ “ಬದುಕ ಲಯ”ದ ಕಡೆಗೆ ಗಮನಸೆಳೆಯುವಂತೆ ಈ ಸಂಕಲನವಿದೆ. ಮೇಲಿನ ವಾಕ್ಯದಲ್ಲಿ ಬಳಸಿರುವ “ಲಯ” ಪದವು ಕೇವಲ ವಾಕ್ಯರಚನೆಯ ಆಟಕ್ಕಾಗಿ ಆಲ್ಲ. ಒಮ್ಮೆ ಸಂಕಲನದ ಕವಿತೆಗಳನ್ನು ಗಟ್ಟಿಯಾಗಿ ಓದಿನೋಡಿ “ಲಯ” ಅನುಭವಕ್ಕೆ ಬರುತ್ತದೆ. ಮೇಲಿನ ಅಷ್ಟೆಲ್ಲಾ ‘ಲಯ ಕಾರಣ’ಗಳನ್ನು ಒಳಗಿಟ್ಟುಕೊಂಡು ಬದುಕುತ್ತಿರುವ ನಮಗೆ ಕಾವ್ಯದ ಲಯ ಕಾಣಿಸುವ ಸತ್ಯ ಏನನ್ನು? ಕವಿ ಏಕೆ ಲಯವಿಲ್ಲದ ಬದುಕಿನ ನಡುವೆ, ಮತ್ತೆ ಲಯದ ಕಡೆ ಮುಖಾಮುಖಿಯಾಗಿ ಕಲಾತ್ಮಕ ಅಭಿವ್ಯಕ್ತಿ ಮಾಡುತ್ತಾನೆ/ಳೆ? ಕವಿಯ ಈ ಮನಸ್ಥಿತಿ ಎಂತದ್ದು? ಮತ್ತು ಇದರ ಹಿಂದಿರುವ ಉದ್ದೇಶ ಏನು? ಮೇಲಿನ ಪ್ರಶ್ನೆಗಳನ್ನು ಕೇಳಿಕೊಳ್ಳುವುದರ ಮೂಲಕ ಈ ಸಂಕಲನ ತನ್ನ ಕಡೆಗೆ ಸೆಳೆದು ಬೆರಗಾಗಿಸಿ ಮುಖಮಾಡುವಂತೆ ಮಾಡುತ್ತದೆ. ‘ಪುಟ್ಟಗೌರಿ’ ಸಂಕಲನವು ನಲವತ್ತಮೂರು ಕವನಗಳ ಗುಚ್ಛ. ಹೆಸರಿನಲ್ಲಿ ಪುಟ್ಟ ಇದೆಯಷ್ಟೇ, ಸತ್ವದಲ್ಲಿ ಹಿರಿದಾಗಿಯೇ ಇದೆ. ಶಿಕ್ಷಕಿಯಾಗಿರುವ ಕಾರಣದಿಂದ ಕವಯತ್ರಿಗೆ ಮಕ್ಕಳೊಂದಿಗಿನ ಒಡನಾಟ ಮತ್ತು ಅವರ ಭಾಷೆಯ ಜಾಡನ್ನು ಹಿಡಿದು ಭಾವವನ್ನು ಅರ್ಥೈಸುವ ಮತ್ತು ಅಭಿವ್ಯಕ್ತಿಸುವ ಕಲೆ ಸಹಜವಾಗಿಯೇ ಸಿದ್ದಿಸಿದೆ. ಶಿಕ್ಷಕ ವೃತ್ತಿಯಲ್ಲಿ ಇರುವವರಿಗೆ ಇರಲೇಬೇಕಾದ ಜಾಗೃತಾವಸ್ಥೆ. ಸಂಕಲನದ ಪ್ರತಿಯೊಂದು ಕವನವು ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ವಿಶಿಷ್ಟತೆಯನ್ನು ಸಹಜವಾಗಿ ಪಡೆದಿರುವ ರಚನೆಯು, ಕವನಗಳ ಒಳ ಹೊರಗುಗಳ ಬಲ್ಲವರಾದ ಕವಯತ್ರಿಗೆ ಈ ರಚನೆಗಳು ಸವಾಲಿನ ಕೆಲಸ ಆಗಿರಲಾರದು. ಇಲ್ಲಿನ ಕವನಗಳು ಕಲಾತ್ಮಕ ಹೊದಿಕೆ ಹೊದ್ದಿರುವುದು ವಸ್ತು ಮತ್ತು ಭಾಷೆಯ ಮೇಲ್ನೋಟಕ್ಕೆ ತಿಳಿಯುತ್ತದೆ. ಕವನವೊಂದು ಹೀಗೆ ಅಖಂಡರೂಪ ಪಡೆಯಲು ಕವಿ ತನ್ನೆಲ್ಲಗಬಹುದಾದ ಕವನಗಳ ಆವಿರ್ಭಾವಕ್ಕೆ ನನ್ನ ಜೀವಮಾನದ ಕೊನೆಯ ಕವನವೇ ಇದೆಂದು ಭಾವಿಸಿದಾಗ ಮಾತ್ರ ಕುಸುರಿ ಕೆಲಸಗಳು ಸಾಧ್ಯವಾಗುತ್ತದೆ. ಅಂತಹಾ ರಚನೆಗಳು ಇಲ್ಲಿ ಕಣ್ಣಿಗೆ ಕಂಡಿವೆ. ಸಹಜವಾಗಿಯೇ ಮಕ್ಕಳ ಕವನಗಳು ಹಾಡುವ ಮಟ್ಟನ್ನು ಹೊಂದಿದ್ದಾಗ ಕಂಠಸ್ಥವಾಗುತ್ತವೆ. ನೆನಪಿನಲ್ಲಿ ಉಳಿವುದಕ್ಕೆ ಮುಖ್ಯ ಕಾರಣವೇ ಕವಿ ಬಳಸುವ ಭಾಷೆ. ಭಾಷೆಯೊಂದರಲ್ಲಿನ ವಾಕ್ಯ ರಚನೆಯ ನಿಯಮಗಳನ್ನು ಮುರಿಯುವಿಕೆ ಮತ್ತು ಬೇರೆಯದೇ ಆದ ಕ್ರಮದಲ್ಲಿ ಪದಗಳನ್ನು ಕೂಡಿಸುವಿಕೆ/ಜೋಡಿಸುವಿಕೆಯ ಮೂಲಕ  ಕವನವೊಂದು ವ್ಯಾಪ್ತಿಯನ್ನು ವಿಸ್ತಾರಗೊಳಿಸಿಕೊಳ್ಳುತ್ತಾ ಸಾಗುತ್ತದೆ. ಈ ಮುರಿಯುವಿಕೆಯು ಆಂತರಿಕವಾಗಿ ಕವನವೊಂದರಲ್ಲಿ ಲಯದ ಆವಿರ್ಭಾವಕ್ಕೆ ಕಾರಣವಾಗುತ್ತದೆ. ‘ಲಯ’ ಒಮ್ಮೆ ಸಿದ್ದಿಸಿತೆಂದರೆ ಮಕ್ಕಳ ಮನಸ್ಸನ್ನು ಹೊಕ್ಕು ಕವನವೊಂದು ಸಾರ್ಥಕ್ಯ ಪಡೆದಂತೆ. ಸದ್ಯದಲ್ಲಿ ರಚನೆಯಾಗುತ್ತಿರುವ ಮಕ್ಕಳ ಕವನಗಳನ್ನು ಗಮನಿಸಿದ್ದೇನೆ ಅವು ವಿಸ್ತಾರವಾದ ಬೌದ್ಧಿಕಕ್ರಿಯೆಯ ಅಭಿವ್ಯಕ್ತಿ ಎಂದು ಕೆಲವು ರಚನೆಗಳು ಆಕಾಗ ಪತ್ರಿಕೆಗಳಲ್ಲಿ ಓದಿದಾಗ ಎನಿಸಿದ್ದಿದೆ. ಇದಕ್ಕೆ ಬಹುಮುಖ್ಯ ಕಾರಣವೇ ಮಕ್ಕಳ ಭಾಷಾ ರಚನೆಯನ್ನು ಗಮನಿಸದ ಮತ್ತು ಅವರ ಭಾವಕೋಶವನ್ನು ಪ್ರವೇಶಿದೆ ಇರುವುದೇ ಕಾರಣಗಳಾಗಿದೆ. ಇಲ್ಲಿನ ರಚನೆಗಳು ಆ ಸಮಸ್ಯೆಯಿಂದ ಹೊರಗೆ ಉಳಿದಿರುವುದೇ ವೃತ್ತಿ ಮತ್ತು ತಾಯೊಡಲ ತಲ್ಲಣಗಳು ಇರುವುದರಿಂದ. ಪುಕ್ಕವ ತಿರುವುತ ರೆಕ್ಕೆಯ ಬೀಸುತ ಎಲ್ಲಿಗೆ ಹೊರಟೆ ಎಲೆ ನವಿಲೆ ಗರಿಗಳ ಬಿಚ್ಚಿ ಕುಣಿಯಲು ನೀನು ಸ್ವರ್ಗವ ಕಾಣುವೆ ನಾನಿಲ್ಲೆ                                         ( ನವಿಲೇ ನವಿಲೆ ) ನಮ್ಮ ಮನೆಯ ನಾಯಿಮರಿ ಕದ್ದು ತಿಂತು ಕಾಯಿತುರಿ                                          ( ಕಳ್ಳ ನಾಯಿ ) ಕವನಗಳಿಂದ ಅಯ್ದ ಸಾಲುಗಳನ್ನೊಮ್ಮೆ ಗಮನಿಸಿ. ಮೊದಲ ಸಾಲಿನಲ್ಲಿ ಬರುವ ಪುಕ್ಕ, ರೆಕ್ಕೆ, ಎಲ್ಲಿಗೆ, ಎಲೆ ಪದಗಳು ಸೃಷ್ಟಿಸುವ ಪ್ರಾಸ ಬಹುಮುಖ್ಯವಾಗುತ್ತದೆ. ಎರಡನೆಯ ಸಾಲನ್ನು ಗಟ್ಟಿಯಾಗಿ ಓದಿದಾಗ ಪಡೆವ ನಿಲುಗಡೆಯು (ಯತಿ) ಸಹಾ ಇಲ್ಲಿ ಮುಖ್ಯವಾಗುತ್ತದೆ. ‘ಎಲ್ಲಿಗೆ ಹೊರಟೆ, ಎಲೆ ನವಿಲೆ’ ಎಂದು ಓದುವಾಗಲೆ ಪ್ರಶ್ನೆಯೊಂದು ಆರಂಭವಾಗಿ ಕಾವ್ಯ ತನ್ನ ಮುಂದಿನ ದಿಕ್ಕನು ಪಡೆಯುತ್ತದೆ. ಮೊದಲಿಗೆ ಈ ಪ್ರಶ್ನೆಯ ಮೂಲಕ ಉಂಟಾದ ಕುತೂಹಲ ಕವನವನ್ನು ಪೂರ್ಣವಾಗಿ ಓದುವಂತೆ ಪ್ರೇರೇಪಿಸಿಬಿಡುತ್ತದೆ. ಎರಡನೆಯ ಉದಾಹರಣೆಯಲ್ಲಿನ ನಾಯಿಮರಿ, ಕಾಯಿತುರಿ ಪದಗಳು ಪಡೆವ ವೇಗವಾದ ಓಟವನ್ನು ಗಮನಿಸಿ. ನಿಲುಗಡೆಯನ್ನು ಬಯಸದ ಸರಾಗ ಓಟ. ನಿಲ್ಲಿಸುವ ಮತ್ತು ವೇಗಪಡೆದುಕೊಳ್ಳುವ ಗುಣಗಳು ಮಕ್ಕಳನ್ನು ಬೇಗ ಗಮನಸೆಳೆದುಬಿಡುತ್ತದೆ. ‘ಕಳ್ಳ ನಾಯಿ’ ಕವನವನ್ನು ಕವಿ ಇನ್ನೊಂದಷ್ಟು ಬೆಳೆಸಬಹುದಾದ ಸಾಧ್ಯತೆಯಿದ್ದರು ಏಕೆ ಬೆಳೆಸಲಿಲ್ಲವೆನ್ನುವುದೇ ಕುತೂಹಲದ ವಿಷಯ. ಇಲ್ಲಿ ಬೆಳವಣಿಗೆ ಪಡೆದಿದ್ದರೆ ಯಶಸ್ವಿ ಕವನಗಳ ಪಟ್ಟಿಯಲ್ಲಿ ಇದೂ ಒಂದು ಸೇರುತ್ತಿತ್ತು. ಅಮ್ಮ ಅಮ್ಮ ಅಲ್ಲಿ ನೋಡು ಹಾರುತಿರುವ ಚಿಟ್ಟೆ ಅದರ ಹಾಗೆ ನನಗು ಕೂಡ ರೆಕ್ಕೆ ಎರಡು ಕಟ್ಟೆ                               ( ಅಲ್ಲಿ ನೋಡು ಚಿಟ್ಟೆ ) ಕವನದಲ್ಲಿನ ರಾಚನಿಕ ವಿನ್ಯಾಸವನ್ನು ಗಮನಿಸಿ. ನಾಲ್ಕು ಪಾದಗಳನ್ನು ಹೊಂದಿದ್ದು ಮೊದಲು, ಮೂರನೆಯ ಪಾದಗಳು ಸಮಾನ ಹನ್ನೆರಡು ಮಾತ್ರೆಗಳಿಂದ ಕೂಡಿದ್ದು, ಎರಡು, ನಾಲ್ಕನೆಯ ಸಾಲು ಒಂಭತ್ತು ಮಾತ್ರೆಗಳಿಂದ ಕೂಡಿದೆ. ಈ ರಚನೆಯಲ್ಲಿನ ಭಾಷೆ ಮತ್ತು ತೀವ್ರತಮ ಓಟಗಳು ಚಿಟ್ಟೆಯ ರೆಕ್ಕೆ ಬಡೆವಂತೆಯೇ ಭಾಸವಾಗುತ್ತದೆ. ಅನಂತರ ಈ ಲಯ ನಿಧಾನಗತಿ ಪಡೆದು ಕಥನಕ್ರಮದ ಕಡೆಗೆ ನಡೆದುಬಿಡುತ್ತದೆ. ಮಕ್ಕಳನ್ನು ಹತ್ತಿರದಿಂದ ಬಲ್ಲವರು ಮಾತ್ರ ಇಂತ ರಚನೆಗಳನ್ನು ಮಾಡಬಲ್ಲರು ಎನಿಸಿದೆ. ಮೊದಲು ಕುತೂಹಲ ಅಅನಂತರ ಬೋಧನೆ. ಈ ನಿಯಮದಲ್ಲಿ ಕವನ ಸಾಗುತ್ತದೆ. ಕಥನಕ್ರಮ ಮಕ್ಕಳ ಕವಿತೆಗಳ ಸಾಮಾನ್ಯ ರಚನಾಕ್ರಮ. ಮಕ್ಕಳ ಕವನಗಳ ಪರಂಪರೆಯಲ್ಲಿ ರಚನೆಯಾಗಿರುವ ಹಲವಾರು ಉದಾಹರಣೆಗಳನ್ನು ಇದಕ್ಕೆ ಸಾಕ್ಷಿಯಾಗಿ ಹೆಕ್ಕಿ ಕೊಡಬಹುದು. ‘ಆ’ ಕವನಗಳಲ್ಲಿ ಒಂದು ಸಾಯುಜ್ಯಸಂಬAಧ ಇರುವುದಕ್ಕೆ ‘ಆ’ ಸಮಾಜದಲ್ಲಿನ ಕುಟುಂಬಗಳಲ್ಲಿದ್ದ ಅವಿಭಜತ ವ್ಯವಸ್ಥೆ ಬಹುಮುಖ್ಯ ಕಾರಣ. ಬದಲಾದ ಕಾಲಮಾನದಲ್ಲಿ ಬದುಕುತ್ತಿರುವ, ಕಾವ್ಯರಚನೆ ಮಾಡುತ್ತಿರುವವರಲ್ಲಿ ಕಥನಕ್ರಮ ಸಹಜವಾಗಿ ಉಂಟಾಗದಿರಲು ವಿಭಜನೆಯಾಗಿರುವುದು ಮುಖ್ಯ ಕಾರಣ. ಇದಕ್ಕೆ ವಿವರಣೆಗಳನ್ನು ಕೊಡುವ ಅಗತ್ಯವಿಲ್ಲ. ಪ್ರತಿಯೊಂದು ವಿಭಜಿತ ಕುಟುಂಬಕ್ಕೆ ಅದರದೇ ಆದ ಕಾರಣಗಳಿವೆ. ಆದರೆ ಕವಿಯೊಬ್ಬನ ಗಮನ ಮತ್ತು ಎಳೆಯ ತಲೆಮಾರಿಗೆ ತಾನು ದಾಟಿಸಬೇಕಾದ ಮೌಲ್ಯ ಎಂತದ್ದೆನ್ನುವ ಪರಿವೆ ಇರಬೇಕಾದುದು ಬಹುಮುಖ್ಯವಾದದ್ದು. ಸಂಕಲನದಲ್ಲಿರುವ ಎರಡು ಕವನಗಳಾದ ‘ನನ್ನ ದಿನಚರಿ’ ಮತ್ತು ‘ಚಂದಾ ಮಾಮ ಬಾರೋ’ ಗಳಲ್ಲಿರುವ

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ಲಂಕೇಶ್ ಮೋಹಕ ರೂಪಕಗಳ ನಡುವೆ

ಪುಸ್ತಕ ಪರಿಚಯ ಲಂಕೇಶ್ ಮೋಹಕ ರೂಪಕಗಳ ನಡುವೆ ಲೇಖಕರು:-ಶೂದ್ರ ಶ್ರೀನಿವಾಸ,ಪ್ರಕಟನೆ-ಪಲ್ಲವ ಪ್ರಕಾಶನ,೯೪೮೦೩೫೩೫೭,ಪುಟ-೨೮೨,ಬೆಲೆ-೨೫೦/- ..     ನಾನು ಪಿಯುನಲ್ಲಿ ಓದುವಾಗಲೇ ಲಂಕೇಶ್ ಪತ್ರಿಕೆ ಗುಂ ಬಂ ಎಂಬ ಹೊಸ ನುಡಿಗಟ್ಟಿನೊಂದಿಗೆ ಕನ್ನಡದ ಜಾಣ ಜಾಣೆಯರಿಗಾಗಿ ಎಂಬ ಟ್ಯಾಗ್ ಲೈನ್ ದೊಂದಿಗೆ ಅದೇ ಆರಂಭವಾಗಿತ್ತು.ಪ್ರಥಮ ಸಂಚಿಕೆಯಿಂದ ಆರಂಭಿಸಿ ಕೊನೆಯ ಸಂಚಿಕೆಯವರೆಗೂ ಬಿಟ್ಟು ಬಿಡದೇ ಓದಿದ ನನಗೆ ಅತ್ಯಂತ ಬೆಳೆಯುವ ವಯಸ್ಸಿನಲ್ಲಿ ಪ್ರಭಾವ ಬೀರಿದವರು ಲಂಕೇಶ್ ಹಾಗೂ ಅವರ ಪತ್ರಿಕೆಯ ಬಳಗದ ಆಗಿನ ಎಲ್ಲ ಲೇಖಕರು,ವರದಿಗಾರರು.ಇಡೀ ಪತ್ರಿಕೆಯ ಒಂದಕ್ಷರವು ಬಿಡದೇ ಓದುತ್ತಿದ್ದೆ.ಲಂಕೇಶ, ತೇಜಸ್ವಿ,ಚಂಪಾ, ಶೂದ್ರ, ರಾಮದಾಸ,ಎಂ ಡಿ ಎನ್, ಎಚ್,ಎಲ್, ಕೇಶವಮೂರ್ತಿ,ಪುಂಡಲೀಕ್ ಶೇಠ,ಬಿ.ಚಂದ್ರೆಗೌಡ, ರವಿಂದ್ರ ರೇಷ್ಮೆ,ಲಿಂಸ್, ರಾಮಚಂದ್ರ ಶರ್ಮಾ, ಚಂದ್ರಶೇಖರ ಆಲೂರು, ಸತ್ಯಮೂರ್ತಿ ಆನಂದೂರು, ಟಿ.ಕೆ.ತ್ಯಾಗರಾಜ್, ಡಿ.ಆರ್,ನಾಗರಾಜ್, ಡಾ.ಸಿದ್ದಲಿಂಗಯ್ಯ,ಹೀಗೆ ಕೊನೆಗೆ ಬಸವರಾಜುರವರೆಗೆ ಪತ್ರಿಕೆಯ ಎಲ್ಲ ಬರಹಗಾರರ ದಟ್ಟ ಪ್ರಭಾವ ಪರಿಚಯ ಅವರ್ಯಾರನ್ನು ಕಾಣದೇ ಸಹ ನನ್ನ ಮೇಲೆ ಆಗಿತ್ತು.   ಪತ್ರಿಕೆ ಇಡೀ ಕರ್ನಾಟಕಕ್ಕೆ ಹೊಸ ದೃಷ್ಟಿಕೋನ ಕೊಟ್ಟಿದ್ದು ಸುಳ್ಳಲ್ಲ.ಅಂತಹ ಲಂಕೇಶರ ಕುರಿತು ಈ ಕೃತಿ ರಚಿಸಿದ, ನಾನು ತುಂಬಾ ಗಾಢವಾಗಿ ಗಮನಿಸಿದಂತಹ ಸೂಕ್ಷ್ಮ ಸಂವೇದನೆಯ ಲೇಖಕರು ಈ ಶೂದ್ರ ಶ್ರೀನಿವಾಸ್ ಸರ್.ಅವರು ತಮ್ಮ ಒಡನಾಟದ ಮೂಲಕ ಪತ್ರಿಕೆಯ ಮುಖದ ಮೂಲಕ ಮಾತ್ರ ದಟ್ಟ ಪರಿಚಯವಿದ್ದ ಲಂಕೇಶರನ್ನು ಅವರ ಎಲ್ಲ ಕೋನಗಳಿಂದಲೂ ನಿರಂತರ ಒಡನಾಟದ ಕಾರಣವಾಗಿ, ಸೂಕ್ಷ್ಮವಾಗಿ ಅವಲೋಕನ ಮಾಡಿ ಈ ಕೃತಿಯಲ್ಲಿ ಅತ್ಯಂತ ವಸ್ತುನಿಷ್ಠವಾಗಿ, ಇದ್ದುದಿದ್ದಂತೆ ಎಲ್ಲ ಪ್ರೀತಿ ಅಭಿಮಾನ,ರಾಗ ದ್ವೇಷಗಳನು ಮೀರಿ ಒಬ್ಬ ಸಂತನ ಮನಸ್ಥಿತಿಯಿಂದ ಸುಂದರ ರೂಪಕವಾಗಿಸಿದ್ದಾರೆ. ಈ ಕೃತಿಯಲ್ಲಿ ಅತ್ಯಂತ ಕಲಾತ್ಮಕವಾಗಿ, ಓದಿದವರಿಗೆ ಬಹುಕಾಲ ಕಾಡುವಂತೆ ಕಟ್ಟಿಕೊಟ್ಟಿದ್ದಾರೆ. ಅವರ ಅನೇಕ ಮಾತುಗಳನ್ನು ಉಲ್ಲೇಖಿಸಿ ಓದುಗರು ಅವನ್ನೆಲ್ಲ ಅರ್ಥಮಾಡಿಕೊಳ್ಳುವಂತೆ ಲಂಕೇಶರನ್ನು ಬಹುದೊಡ್ಡ ಕ್ಯಾನ್ವಾಸ್ ನಲ್ಲಿ ಕಲಾಕೃತಿಯಾಗಿಸಿ ನಮ್ಮ ಮುಂದೆ ನಿಲ್ಲಿಸಿ ಈ ಕೃತಿ ಸಾರ್ಥಕತೆ ಪಡೆದಿದೆ.ಲಂಕೇಶರ ಒಳಗಿನ ಮೂರು ವ್ಯಕ್ತಿತ್ವಗಳನ್ನು ಬಹಳ ಚೆಂದ ನಿರೂಪಿಸಿದ್ದಾರೆ. ಮತ್ತೆ ಮತ್ತೆ ಓದಬಹುದೆನಿಸುವ ಕೃತಿ ಇದು. ೧೯೯೧ ರಲ್ಲಿ ಪ್ರಕಟವಾದ ಮೊಟ್ಟಮೊದಲ ನಮ್ಮ ಅಕ್ಕಾಳಿಗೊಂದು ಪ್ರಶ್ನೆ ಹಾಗೂ ಇತರ ಕವನಗಳು ಸಂಕಲನಕ್ಕೆ ಆ ಕಾಲದಲ್ಲಿ ಬೆನ್ನುಡಿ ಬರೆದು ಕೊಟ್ಟಿದ್ದರು ಈ ಶೂದ್ರ ಸರ್,ಹಲವು ವರ್ಷ ಶೂದ್ರ ಸಹ ನನಗೆ ಬರುತ್ತಿತ್ತು. ಲಂಕೇಶರ ದಟ್ಟ ಪ್ರೀತಿ, ವ್ಯಂಗ್ಯ,ವಿಡಂಬನೆ ಎಲ್ಲವೂ ಶೂದ್ರರ,ಹಾಗೂ ಇತರರ ಮೇಲಾಗುತ್ತಿದ್ದದ್ದು ಗಮನಿಸುತ್ತಾ ಬೆಳೆದಿದ್ದೇವೆ.ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಇವರ ದಟ್ಟ ಪರಿಚಯ, ಪ್ರಭಾವಕ್ಕೆ ಒಳಗಾದದ್ದು ಉಂಟು.ಲಂಕೇಶ ಬಳಗ ಅಂದ್ರೆ ಓದಲು ಖುಷಿ ಆಗುತ್ತಿದ್ದ ಕಾಲವದು.    ಈ ಕೃತಿ ಎಪ್ಪತ್ತರ ದಶಕದಿಂದ ಆರಂಭಿಸಿ ಒಟ್ಟು ನಾಲ್ಕು ದಶಕಗಳವರೆಗಿನ ಇಡೀ ಸಾಹಿತ್ಯಕ ವಾತಾವರಣ,ರೈತ ಚಳುವಳಿ, ಗೋಕಾಕ ಚಳುವಳಿ,ಬೂಸಾ ಚಳುವಳಿ, ರಾಜಕೀಯ ಸ್ಥಿತ್ಯಂತರಗಳು,ಒಕ್ಕೂಟ,ಹೀಗೆ ಎಲ್ಲವನ್ನು ಒಬ್ಬ ಸಾಕ್ಷಿಪ್ರಜ್ಞೆ ಯಾಗಿ ಅವಲೋಕಿಸಿ ಅತ್ಯಂತ ಮಾನವೀಯ ನೆಲೆಯಲ್ಲಿ ಒಳಗೊಂಡು, ಖುಷಿ ಪಟ್ಟು, ನೊಂದು ಬೆಂದು ಈ ಕೃತಿ ರಚಿಸುವ ಮೂಲಕ ಹಗುರವಾಗಿದ್ದಾರೆನಿಸುತ್ತದೆ.ಅಷ್ಟೇ ಮುಖ್ಯವಾಗಿ ಈ ಎಲ್ಲ ಸಂದರ್ಭಗಳಲ್ಲೂ ಅವರ ಪಾಲ್ಗೊಳ್ಳುವಿಕೆ ತುಂಬಾ ಮಹತ್ವದ್ದೆನ್ನುವದು ಸಹ ಅಷ್ಟೇ ಮುಖ್ಯವಾಗಿದೆ.ಶೂದ್ರ ಸರ್ ನಿಮಗೆ ನೂರು ನಮನ.ಪ್ರಕಟಿಸಿ ಓದಲು ಹಚ್ಚಿದ ನಾಡಿನ ಹೆಮ್ಮೆಯ ಪ್ರಕಾಶನದ ಶ್ರೀ ವೆಂಕಟೇಶ್ ಅವರಿಗೂ ಅಭಿನಂದನೆಗಳು.ಲಂಕೇಶರು ನಮ್ಮ ಪ್ರಜ್ಞೆಯ ಒಂದು ಭಾಗವಾಗಿ ಸದಾ ನಮ್ಮೊಳಗೆ ಮತ್ತೆ ಮತ್ತೆ ಮೆಲುಕು ಹಾಕಿಕೊಳ್ಳುವಂತಹ,ಲಂಕೇಶರ ಬಗ್ಗೆ ಪ್ರೀತಿಯುಳ್ಳ ಎಲ್ಲರೂ ಒಮ್ಮೆಯಾದರು ಓದಲೇಬೇಕಾದ ಕೃತಿ ಇದು. *******************************

ಲಂಕೇಶ್ ಮೋಹಕ ರೂಪಕಗಳ ನಡುವೆ Read Post »

You cannot copy content of this page

Scroll to Top