ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

ಕವಿತಾ ಶ್ರೀನಿವಾಸ್ ನಾಯಕ್ “ಆಯ್ಕೆ”

ಲೇಖನ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್  ಆಯ್ಕೆ “ಆಯ್ಕೆ” ಎಂಬ ಪದ ಚಿಕ್ಕದಾದರೂ, ಅದರ ಅರ್ಥ ಮತ್ತು ಪರಿಣಾಮ ಬಹಳ ದೊಡ್ಡದು.ನಮ್ಮ ಜೀವನವೇ ಆಯ್ಕೆಗಳ ಮೇಲೆ ನಿಂತಿದೆ.ಮಾರುಕಟ್ಟೆಗೆ ಹೋದಾಗ ತಾಜಾ ತರಕಾರಿಯನ್ನು ಆಯ್ಕೆ ಮಾಡುತ್ತೇವೆ. ಅಂಗಡಿಯಲ್ಲಿ ದಿನನಿತ್ಯದ ಸಾಮಾನುಗಳನ್ನು ಗುಣಮಟ್ಟ ನೋಡಿ ಆಯ್ಕೆ ಮಾಡುತ್ತೇವೆ. ಬಟ್ಟೆ, ಮನೆ, ವಾಹನ, ಉದ್ಯೋಗ, ಶಿಕ್ಷಣ—ಪ್ರತಿಯೊಂದರಲ್ಲೂ ನಮ್ಮ ಆಯ್ಕೆ ಇರುತ್ತದೆ.ನೆಂಟಸ್ತಿಕೆ ಆಗುವಾಗ, ಹೆಣ್ಣು ಹಾಗೂ ಗಂಡಿನ ಯೋಗ್ಯತೆ, ಸಂಸ್ಕಾರ, ಶಿಕ್ಷಣ, ಸ್ವಭಾವ ಎಲ್ಲವನ್ನೂ ಗಮನಿಸಿ ಆಯ್ಕೆ ಮಾಡಲಾಗುತ್ತದೆ.ರಾಜಕೀಯದಲ್ಲಿ ಮುಖ್ಯಮಂತ್ರಿ, ಸಚಿವರು ಹಾಗೂ ಜನಪ್ರತಿನಿಧಿಗಳ ಆಯ್ಕೆ ನಡೆಯುತ್ತದೆ. ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ವಿವಿಧ ಪದಾಧಿಕಾರಿಗಳ ಆಯ್ಕೆ ನಡೆಯುತ್ತದೆ. ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕನ ಆಯ್ಕೆ, ಕ್ರೀಡಾ ತಂಡದಲ್ಲಿ ಆಟಗಾರರ ಆಯ್ಕೆ, ಉದ್ಯೋಗದಲ್ಲಿ ಅಭ್ಯರ್ಥಿಗಳ ಆಯ್ಕೆ—ಹೀಗೆ ಜೀವನದ ಪ್ರತಿಯೊಂದು ಹಂತದಲ್ಲೂ ಆಯ್ಕೆ ಅನಿವಾರ್ಯ.ಸಾಮಾನ್ಯವಾಗಿ ನಾವು ಒಳ್ಳೆಯದನ್ನೇ, ಯೋಗ್ಯವಾದದ್ದನ್ನೇ ಅಥವಾ ಒಳ್ಳೆಯ ವ್ಯಕ್ತಿಯನ್ನೇ ಆಯ್ಕೆ ಮಾಡಲು ಬಯಸುತ್ತೇವೆ.ಆದರೆ, ಕೆಲವು ಆಯ್ಕೆಗಳು ಮನಸ್ಸಿಗೆ ನೋವು ಕೊಡುತ್ತವೆ.ಕೆಲವರು ಗೆಳೆತನದಲ್ಲಿ, ಪ್ರೀತಿಯಲ್ಲಿ ಅಥವಾ ಗಂಡ-ಹೆಂಡತಿಯ ಸಂಬಂಧದಲ್ಲಿಯೂ ಎದುರಿನ ವ್ಯಕ್ತಿಯನ್ನು ಮೊದಲ ಆದ್ಯತೆಯಾಗಿ ಅಲ್ಲ, ಕೇವಲ “ಆಯ್ಕೆ”ಯಾಗಿ ಇಟ್ಟುಕೊಳ್ಳುತ್ತಾರೆ.ಅವರಿಗೆ ಸಮಯ ಇದ್ದಾಗ ಮಾತ್ರ ನೆನಪಾಗುತ್ತದೆ. ಬೇಸರವಾದಾಗ ಮಾತ್ರ ಕರೆ ಮಾಡುತ್ತಾರೆ. ಬೇರೆಯವರು ಸಿಗದಿದ್ದಾಗ ಮಾತ್ರ ಮಾತನಾಡುತ್ತಾರೆ. ಅಗತ್ಯವಿದ್ದಾಗ ಮಾತ್ರ ಹತ್ತಿರವಾಗುತ್ತಾರೆ. ಕೆಲಸ ಮುಗಿದ ನಂತರ ಮತ್ತೆ ದೂರವಾಗುತ್ತಾರೆ.ಇಂತಹ ಸಂಬಂಧದಲ್ಲಿ ಪ್ರೀತಿ ಇರುವುದಿಲ್ಲ; ಸ್ವಾರ್ಥ ಮಾತ್ರ ಇರುತ್ತದೆ.ನಿಜವಾದ ಸಂಬಂಧ ಎಂದರೆ, ಅನುಕೂಲಕ್ಕೆ ತಕ್ಕಂತೆ ನೆನಪಾಗುವ ವ್ಯಕ್ತಿಯಾಗಿರುವುದಲ್ಲ. ಸುಖದಲ್ಲೂ ದುಃಖದಲ್ಲೂ ಜೊತೆಯಾಗುವ, ಗೌರವ ಕೊಡುವ, ವಿಶ್ವಾಸ ಉಳಿಸಿಕೊಳ್ಳುವ ವ್ಯಕ್ತಿಯಾಗಿರುವುದು.ಯಾರ ಜೀವನದಲ್ಲೂ “ಆಯ್ಕೆ”ಯಾಗಿ ಉಳಿಯುವುದಕ್ಕಿಂತ, “ಆದ್ಯತೆ”ಯಾಗಿ ಬದುಕುವುದು ಹೆಚ್ಚು ಮೌಲ್ಯಯುತ.ಏಕೆಂದರೆ, ನಮ್ಮನ್ನು ಬೇಕಾದಾಗ ಮಾತ್ರ ನೆನಪಿಸಿಕೊಳ್ಳುವವರಿಗಿಂತ, ಯಾವಾಗಲೂ ನಮ್ಮನ್ನು ಗೌರವಿಸುವವರೇ ನಿಜವಾದ ಸಂಬಂಧಗಳು.“ನಮ್ಮನ್ನು ಕೇವಲ ಒಂದು ‘ಆಯ್ಕೆ’ಯಾಗಿ ನೋಡುವವರ ಹಿಂದೆ ಓಡುವುದಕ್ಕಿಂತ, ನಮ್ಮನ್ನು ‘ಆದ್ಯತೆ’ಯಾಗಿ ಕಾಣುವವರನ್ನು ಗೌರವಿಸೋಣ. ಅದೇ ಸಂಬಂಧದ ನಿಜವಾದ ಮೌಲ್ಯ.” ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

ಕವಿತಾ ಶ್ರೀನಿವಾಸ್ ನಾಯಕ್ “ಆಯ್ಕೆ” Read Post »

ಇತರೆ, ವರ್ತಮಾನ

“ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ವಿಶೇಷ ಲೇಖನ,ಆರ್ ಜಿ ಹಳ್ಳಿ ನಾಗರಾಜ

ಕನ್ನಡ ಸಂಗಾತಿ ಆರ್ ಜಿ ಹಳ್ಳಿ ನಾಗರಾಜ “ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ಕನ್ನಡ – ಕನ್ನಡಿಗ – ಕರ್ನಾಟಕದ ಅಸ್ಮಿತೆಯ ಸಂಕೇತವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ 112 ವರ್ಷಗಳ ಪ್ರಾಯ. ಮೈಸೂರಿನ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದ ಈ ಸಂಸ್ಥೆಯ ಧ್ಯೇಯೋದ್ದೇಶಗಳು ಆರೇಳು ದಶಕಗಳ ಕಾಲ ಸಮಸ್ಯೆ ಇಲ್ಲದೆ ನಡೆದುಕೊಂಡು ಹೋದವು. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ – ಇವುಗಳ ರಕ್ಷಣೆ ಹಾಗೂ ಅಭಿವೃದ್ಧಿಯ ಮುಖ್ಯ ಉದ್ದೇಶದಿಂದ 1915ರಲ್ಲಿ ಸ್ಥಾಪಿತವಾದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಅಂದಿನಿಂದಲೂ ಈ ಮಹಾ ಸಂಸ್ಥೆ ಅನೇಕ ವಿದ್ವಾಂಸರ, ನಾಡು ನುಡಿಯ ಅಭಿಮಾನಿಗಳ ಮತ್ತು ಸರಕಾರದ ಪ್ರೋತ್ಸಾಹ ಪಡೆದುಕೊಂಡು ಜನತೆಯಲ್ಲಿ ಹೊಸ ಹೊಸ ಉತ್ಸಾಹವನ್ನೂ ಭಾಷಾ ಅಭಿಮಾನವನ್ನೂ ಬೆಳೆಸುತ್ತ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ಅಧಿಕೃತವಾಗಿ ಸಾಹಿತ್ಯ ಪರಿಷತ್ತಿನ ಇತಿಹಾಸ ಪ್ರಕಟಿಸಿದೆ. ಅದರ ದಾಖಲೆಯಲ್ಲಿ  – “ಕರ್ನಾಟಕ ಈಗಿರುವಂತೆ ಸಂಘಟಿತವಾಗುವುದಕ್ಕೆ ಮೊದಲು ಹಲವಾರು ಆಡಳಿತಗಳಡಿ ಹಂಚಿ ಹೋಗಿತ್ತು. ಮದರಾಸು, ಬೊಂಬಾಯಿ ಪ್ರಾಂತಗಳಿಗೆ ಹಾಗೂ ಮೈಸೂರು, ಹೈದರಾಬಾದ್ ಸಂಸ್ಥಾನಗಳಿಗೆ ಕನ್ನಡ ನಾಡಿನ ಕೆಲವು ಭಾಗಗಳು ಸೇರಿದ್ದವು. ಕೊಡಗು ಒಂದು ಪ್ರತ್ಯೇಕ ಆಡಳಿತಕ್ಕೆ ಒಳಪಟ್ಟಿತ್ತು. ಬ್ರಿಟಿಷ್ ಇಂಡಿಯಾ ಸರಕಾರದ ಆಡಳಿತಕ್ಕೆ ಒಳಪಟ್ಟಿದ್ದ ಮದರಾಸು, ಬೊಂಬಾಯಿ ಪ್ರಾಂತಗಳಲ್ಲಿ ದ್ವೀಪಗಳಂತೆ ಸೊಂಡೂರು, ಸವಣೂರು, ರಾಮದುರ್ಗ ಮುಂತಾದ ಹಿರಿ ಕಿರಿಯ ಸಂಸ್ಥಾನಗಳು ಇದ್ದವು. ಕನ್ನಡ ಜನ ಭಿನ್ನ-ಭಿನ್ನ ಆಡಳಿತ ಘಟಕಗಳ ಹಿಡಿತದಲ್ಲಿದ್ದರು. ಅವರು ಆಡುತ್ತಿದ್ದ ಕನ್ನಡ ಭಾಷೆಯ ಮೇಲೆ ಅನ್ಯಭಾಷಾ ಪ್ರಭಾವ ಬಿದ್ದು, ಉಚ್ಚಾರಣೆಯಲ್ಲಿ ವ್ಯತ್ಯಾಸಗಳು ಉಂಟಾಗಿದ್ದವು. ಇವುಗಳ ಪರಿಣಾಮವಾಗಿ ವಿವಿಧ ಪ್ರದೇಶಗಳ ಕನ್ನಡಿಗರು ಅಪರಿಚಿತರಂತೆ ಕಾಣುತ್ತಿತ್ತು” ಎಂಬ ಅಂಶದ ಮೇಲೆ‌ ಬೆಳಕು ಚೆಲ್ಲುತ್ತದೆ. ಕನ್ನಡ ಭಾಷೆ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಕನಸು ಕಂಡ ಅನೇಕ ಹಿರಿಯ ಸಾಹಿತಿಗಳು ಸರ್ಕಾರ ನೀಡಿದ ಅನುದಾನದಲ್ಲಿ ಉಪನ್ಯಾಸ, ಪುಸ್ತಕ, ಪತ್ರಿಕೆ ಪ್ರಕಟಣೆ, ಕನ್ನಡ ಜನತೆ ಒಗ್ಗೂಡಲು ಸಾಹಿತ್ಯ ಸಮ್ಮೇಳನ ನಡೆಸುತ್ತಾ ಬಂದು ಜನಮನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಟ್ಟಿಯಾಗಿ  ನೆಲೆ ಊರಿತು. ಕನ್ನಡಿಗರ ವಿಶ್ವಾಸ ಗಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಶತಮಾನದ 70ರ ದಶಕದ ಕೊನೆಯಲ್ಲಿ ವಿವಾದಕ್ಕೊಳಗಾಗಿತ್ತು. ನಂತರ ಮತದಾರರಿಂದ ಆಯ್ಕೆಯಾಗಿ ಬಂದ ಅಧ್ಯಕ್ಷರು ಅದಕ್ಕೆ ಚ್ಯುತಿ ಬಾರದಂತೆ ಮುನ್ನಡೆಸಿಕೊಂಡು ಹೋದರು. ಆದರೆ, ಕಳೆದ 11 ವರ್ಷದಲ್ಲಿ ಬಂದ ಇಬ್ಬರು ಕಸಾಪ ರಾಜ್ಯಾಧ್ಯಕ್ಷರಿಂದ ಪರಿಷತ್ತಿಗೆ ಕಳಂಕ ಒದಗಿತು. ಆಡಳಿತ ವಿಫಲವಾಗಿವೆ. ಪ್ರಕಟಣೆ, ವಿಚಾರ ಸಂಕಿರಣ, ಸಮ್ಮೇಳನಗಳು ನೆನೆಗುದಿಗೆ ಬಿದ್ದಿವೆ. ಅಧಿಕಾರದಾಹ, ಸರ್ವಾಧಿಕಾರ, ಭ್ರಷ್ಠಾಚಾರ ಅಲ್ಲಿ ತಾಂಡವಾಡಿದೆ. ಕಸಾಪ ಮರ್ಯಾದೆ ಕಳೆಯಲು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಲ್ಲಿ ಭ್ರಷ್ಟಾಚಾರ ಎಸಗಿದ್ದು ಮೇಲು ನೋಟಕ್ಕೆ ಸಾಬೀತು ಆಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇಂದಿನ  ಈ ದುಸ್ಥಿತಿಗೆ ನಿಕಟಪೂರ್ವ ಅಧ್ಯಕ್ಷ  ಮಾನ್ಯ ಮನು ಬಳಗಾರ ಅವರು ಕಾರಣ. ಅವರ ಅಧಿಕಾರದಾಹ, ಸ್ವಾರ್ಥಕ್ಕೆ ಕಸಾಪ ಬಲಿಯಾಯ್ತು. 3 ವರ್ಷ ಇದ್ದ ಅಧ್ಯಕ್ಷರ ಅವಧಿಯನ್ನು ಹಿಗ್ಗಿಸಿಕೊಂಡರು. ಪರಿಷತ್ತು ಅದರ ಪಾಡಿಗೆ ಅದು ನಡಕ್ಕೊಂಡು ಹೋಗ್ತಿತ್ತು. ಇವರು ಎಲ್ಲೋ ದ.ಕ.  ಜಿಲ್ಲೆಯ  ಮೂಲೆಯಲ್ಲಿ ಕಳ್ಳಾಟದಿಂದ ಸರ್ವ ಸದಸ್ಯರ ಸಭೆ ನಡೆಸಿ ಅಲ್ಲಿ ತನ್ನದೇ ಅವಧಿಯ 3 ವರ್ಷದ  ಅಧಿಕಾರವನ್ನು 5 ವರ್ಷಕ್ಕೆ ವಿಸ್ತರಿಸಿಕೊಂಡರು! ಆಯ್ತು, 5 ವರ್ಷವಾದ ನಂತರವಾದರೂ ಗೌರವದಿಂದ ನಿರ್ಗಮಿಸಬೇಕು ಬೇಕು ತಾನೆ? ಇಲ್ಲ! ಕಳ್ಳಿಗೊಂದು ಪಿಳ್ಳೆ ನೆವ ಅಂತ ಕರೋನಾ ಕಡೆ ಬೆರಳು ತೋರಿ, ನನಗೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಕಸಾಪ ಕೆಲಸ ಬೆಟ್ಟದಷ್ಟಿದೆ! ಅಂತ ಬೋಂಗ್ ಬಿಟ್ಟು ಬರೋಬ್ಬರಿ 6 ವರ್ಷ ಪೂರೈಸಿದರು ಈ ಮಹಾಶಯರು! ಅಲ್ಲಿಗೆ ಮೂರು ವರ್ಷಕ್ಕೆ  ಇನ್ನೊಬ್ಬರು ರಾಜ್ಯ, ಜಿಲ್ಲಾ ಅಧ್ಯಕ್ಷರಾಗಿ ಬರೋದನ್ನ ತಪ್ಪಿಸಿದ ಪಾಪ ಅಂಟಿಸಿಕೊಂಡು ನಿರ್ಗಮಿಸಿದರು. ಆದರೆ, “ನಾನು ಬಿಟ್ಟರೆ ಇನ್ನೊಬ್ಬರು ಈ ರಾಜ್ಯದಲ್ಲಿ ಕಸಾಪ ಅಧ್ಯಕ್ಷರಾಗಲು ಅರ್ಹರಿಲ್ಲ!” ಎಂಬ ಅಹಂನಿಂದ  ಮತ್ತೆ ಮುಂದಿನ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು‌ ಚಾಪೆ ಹಾಕಿ, ಕನಸು ಕಟ್ಟಿ ಹಲವು ಜಿಲ್ಲೆಗಳಲ್ಲಿ ಪ್ರವಾಸವನ್ನೂ ಮಾಡಿಯಾಯ್ತು. ನನ್ನನ್ನು ಒಳಗೊಂಡು ಹಲವರು “ಬಳಿಗಾರರು ಪುನಃ ಸ್ಪರ್ಧಿಸಿದರೆ ಠೇವಣಿ‌ ಕಳೆಯಿರಿ” ಎಂಬ ಅಭಿಯಾನ ಶುರು ಮಾಡಿದೆವು. ಬಹುಶಃ ನಮ್ಮ ಪ್ರತಿರೋಧ ಗೊತ್ತಾಗಿಯೋ, ನನ್ನಂತಹವರ ಹೊಡೆತ ತಾಳಲಾರದೆಯೋ  ಮುಂದೆ ಮತ್ತೊಬ್ಬರು ಸ್ಪರ್ಧಿಸುತ್ತಾರೆಂದು ಸಾಹಿತಿ ಒಬ್ಬರ  ಹೆಸರನ್ನ ತೇಲಿಬಿಟ್ಟು  ಜಾಗ ಖಾಲಿ ಮಾಡಿದರು. ಆದರೆ ಅವರು ಸಾತ್ವಿಕ ಸಾಹಿತಿ! ಕನ್ನಡ ಸಾಹಿತ್ಯ ಪರಿಷತ್ತು ಉಳಿಸಲು “ಕನ್ನಡ ನಾಡು – ನುಡಿ ಹೋರಾಟ ಸಮಿತಿ” ಭ್ರಷ್ಟಾತಿ ಭ್ರಷ್ಟ ಜೋಶಿ ವಿರುದ್ಧ ಹೋರಾಡುತ್ತಿದ್ದರೆ ನನಗೂ ಇದಕ್ಕು ಸಂಬಂಧ ಇಲ್ಲ ಎಂದು ತಮ್ಮಪಾಡಿಗೆ ತಾವಿದ್ದರು. ಇನ್ನೊಬ್ಬರು ಐಎಎಸ್ ಅಧಿಕಾರಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಹುರಿಯಾಳು. ಅವರಾಗಲಿ, ಅವರ ಬೆಂಬಲಿಗ “ಓರಟಗಾರ!”ರಾಗಲಿ “ಕಸಾಪಗೆ ಮಸಿ ಬಳಿದ ‘ಜೋಸಿ’ ವಿರುದ್ಧ ಒಂದೇ ಒಂದು ಹೇಳಿಕೆಯನ್ನು ಕೊಡಲಿಲ್ಲ! ಒಳ ಒಪ್ಪಂದ ಏನಾದರೂ‌ ಆಗಿರಲೂಬಹುದೇನೋ… ಗೊತ್ತಿಲ್ಲ. *ಜೋಶಿ ಇಚ್ಛೆಯಂತೆ ಬೈಲಾ!* ಪಕ್ಕಾ ಹಿಂದುತ್ವವಾದಿ ಮಹೇಶ ಜೋಶಿ ತನ್ನ ಅಂತರಂಗದ ಸನಾತನವಾದ, ಸರ್ವಾಧಿಕಾರದಿಂದ  ಸುಳ್ಳು ಹೇಳಿ, ಜನರಿಗೆ ಮಂಕು ಬೂದಿ ಎರಚಿ ಅಧ್ಯಕ್ಷರಾದವರು, ಎಲ್ಲರ ಠೇವಣಿ ಕಳೆದು ಗೆದ್ದು ಬಂದಿದ್ದೇನೆ ಎಂದು ಮೀಸೆ ತಿರುವಿದರು. ಸೋತ ಅಭ್ಯರ್ಥಿಯನ್ನು ನಿಕೃಷ್ಟವಾಗಿ ಕಂಡರು. ಹಿಯಾಳಿಸಿದರು. ದಿನದಿಂದ ದಿನಕ್ಕೆ ಸಾಹಿತ್ಯೇತರ ಚಟುವಟಿಕೆಗಳೆ ಹೆಚ್ಚಾದವು. ಅಸಾಹಿತಿಯಾದ ಈ ಮನುಷ್ಯ ಸಾಹಿತ್ಯ ಗಂಟು ಮೂಟೆ ಕಟ್ಟಿ ಏನೆಲ್ಲಾ ಕ್ರಿಮಿನಲ್ ಆಟ ಆಡಿದ ಅಂತ ನೋಡಿದೆವು…! ಇವರಿಗೆ ಸಾಹಿತ್ಯದ ಗಂಧಗಾಳಿ ಇಲ್ಲದಿದ್ದರಿಂದ, ಯಾವ ಸಾಹಿತಿಗೂ ಗೌರವ ಕೊಡಲಿಲ್ಲ. ಎಲ್ಲರನ್ನು ಕೇವಲವಾಗಿ ಕಂಡು, ದುರಹಂಕಾರದಿಂದ  ಠೇಂಕರಿಸುತ್ತ  ಏನೆಲ್ಲ ಭ್ರಷ್ಟಾಚಾರ ಎಸಗಿದ್ದು ಮಾಧ್ಯಮಗಳಲ್ಲಿ ಬಿಂಬಿತವಾಗಿದೆ. ಜೋಶಿ ಗೆದ್ದ ನಂತರ ಪರಿಷತ್ತಿನ “ನಿಬಂಧನೆ” (ಬೈಲಾ)  ತನ್ನಿಚ್ಚೆಯಂತೆ ಅಮೂಲಾಗ್ರ ತಿದ್ದುಪಡಿ ಮಾಡಿದ್ದು ಚರ್ಚೆಗೆ ಗ್ರಾಸವಾಯ್ತು. ನಾಮಕಾವಸ್ತೆಗೆ ಈ ಬೈಲಾ ತಿದ್ದುಪಡಿಗೆ ನಿವೃತ್ತ ನ್ಯಾಮೂರ್ತಿ ಅರಳಿ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದ್ದರೂ, ಅಲ್ಲಿನ ಎಲ್ಲ ವಿಚಿತ್ರ ನಿಯಮಗಳು ಅಧ್ಯಕ್ಷನಿಗೆ ಪರಮಾಧಿಕಾರ  ಒಳಗೊಂಡಿದ್ದವು. ಇದಕ್ಕೆಲ್ಲ ಅಧ್ಯಕ್ಷ ಜೋಶಿಯ ಕೈವಾಡವೆ ಕಾರಣವಾಯ್ತು. *ಸಚಿವ ದರ್ಜೆ ಸ್ಥಾನ ಎಂಬ ಭೂತ* ಹಿಂದಿನ ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರರನ್ನು ಹಿಡಿದು, ಕೇಶವಕೃಪಾದಿಂದ ಪ್ರಭಾವ ಬೀರಿಸಿ ಸಚಿವದರ್ಜೆ ಸ್ಥಾನಮಾನ ಗಿಟ್ಟಿಸಿಕೊಂಡರು. ಈ ಸ್ಥಾನ ಸಿಕ್ಕಿದ್ದಕ್ಕೆ ಸರ್ಕಾರದ ಲೋಗೋ ಬಳಸಿ “ಸರ್ಕಾರದ ಸಚಿವದರ್ಜೆ ಸ್ಥಾನಮಾನದ ಅಧ್ಯಕ್ಷ ಸ್ಥಾನ!” ಅಂತ ಲೆಟರ್ ಹೆಡ್ ಮುದ್ರಿಸಿ, ಉನ್ನತದರ್ಜೆಯ ಅಧಿಕಾರಿಗಳನ್ನು  ಬ್ಲ್ಯಾಕ್ ಮೇಲ್ ಮಾಡಿದರು. ಅದರಲ್ಲು ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾಧಿಕಾರಿಗಳಿಗೆ ಧಮ್ಕಿ ಹಾಕಿದ ಉದಾಹರಣೆಯೂ ಇದೆ. ಸಚಿವದರ್ಜೆ ಸ್ಥಾನಮಾನ ಅತಿ ದುರುಪಯೋಗ ಆಗುವ‌ ದೂರುಗಳು ಬಂದಾಗ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಆ ಸಚಿವ ದರ್ಜೆ ಸ್ಥಾನಮಾನ ಕಿತ್ತಾಕಿಸಿದ್ದಾಯ್ತು. ಜೋಶಿ, ತನ್ನ ನಾಲ್ಕು ವರ್ಷದ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ವಿಚಾರ ಸಂಕಿರಣ, ಯುವ ಬರಹಗಾರರಿಗೆ ತರಬೇತಿ / ಶಿಬಿರ, ಮೌಲಿಕ ಪುಸ್ತಕ ಪ್ರಕಟಣೆ, ಶತಮಾನೋತ್ಸವ ಕಂಡ ಸಾಹಿತಿಗಳ ಸ್ಮರಣೆ – ಯಾವುದನ್ನೂ ಮಾಡಲಿಲ್ಲ. ಅಬ್ಬಾ! ಈ ಮನುಷ್ಯ ಎಷ್ಟೊಂದು ಮೆರೆದ…! ಹಲವು  ಜಿಲ್ಲಾಧ್ಯಕ್ಷರನ್ನು ಗಿರಿಗಿಟ್ಲೆ ಆಡಿಸಿ ಕಿರುಕುಳ ಕೊಟ್ಟಿದ್ದೇನು ಕಮ್ಮಿಯೆ? ಸಾಹಿತಿಗಳು, ಕನ್ನಡಪರ ಹೋರಾಟಗಾರರು ಪರಿಷತ್ತು ವಿರುದ್ಧ ಒಂದೆ ಒಂದು ಮಾತಾಡಲು ಅವಕಾಶ ಕೊಡದೆ, ಸಭೆ ಮಾಡಲೂ ಬಿಡದೆ ಅವರನ್ನು ಬೆದರಿಸಲು ಹಲವು ಲಾಯರ್ ನೋಟೀಸು ನೀಡಿದ್ದಾಯ್ತು. ಮಾನ ನಷ್ಟ ಮೊಕದ್ದಮೆ  ಹೂಡುವೆನೆಂದು ಬೆದರಿಸಿದ ಪತ್ರಗಳು ಬಂದವು. ತನ್ನ ವಿರುದ್ಧ   ಇದ್ದವರ ಆಜೀವ ಸದಸ್ಯತ್ವವನ್ನು ಏಕಪಕ್ಷೀಯವಾಗಿ ಕಿತ್ತಾಕಿದ್ದು ಆಯ್ತು. ಇದು ಆತನ ಸಣ್ಣತನ ಹಾಗೂ ಸೇಡಿನ ಮನೋಭಾವ ತೋರಿಸಿತ್ತು. *ಕೋಟಿಗಟ್ಟಲೆ ಹಣ ದುರುಪಯೋಗ!* ಆರಂಭದಿಂದಲೂ  ಕಸಾಪ  ಸಾಹಿತ್ಯ ಚಟುವಟಿಕೆಗಳಿಗೆ ಗಂಟುಮೂಟೆ ಕಟ್ಟಿ ಅಲ್ಲಿ “ಕಾನೂನಿನ ಕಡತಗಳ ಪೇರಿಸಿ”, ವಕೀಲರ ಕಚೇರಿಯನ್ನಾಗಿ ಮಾಡಿದ್ದನ್ನು ಯಾವ ಜಿಲ್ಲಾಧ್ಯಕ್ಷರು ಪ್ರಶ್ನೆ ಮಾಡದಂತೆ ಕಾಣಲಿಲ್ಲ. ಅವರನ್ನು ಭಯ, ಆತಂಕದಲ್ಲಿ ಇರಿಸಿದ್ದರು. ಕೇಂದ್ರ ಕಸಾಪ ಕಟ್ಟಡದ ಕಾಮಗಾರಿಯಲ್ಲಿ 7-8 ಕೋಟಿ ರೂ.ಗಳ ದುರುಪಯೋಗ ಆದ ಬಗ್ಗೆ ಸಾಹಿತಿಗಳು ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು. ಅದು ಭಾಗಶಃ ಸಾಬೀತು ಆಗಿದ್ದು ಈ ಅಪಾರ ನಷ್ಟವನ್ನು ಜೋಶಿ ತುಂಬಿಕೊಡಬೇಕು ಎಂಬ ಬೇಡಿಕೆಯನ್ನು ಇಡಲಾಗಿದೆ.ಕಸಾಪದ ಪುಟ್ಟ ಕಟ್ಟಡಕ್ಕೆ ಬರೋಬ್ಬರಿ 56 ಸಿಸಿ ಕ್ಯಾಮೆರಾ ಹಾಕಿಸಿ ಪರಿಷತ್ತನ್ನು ಕುಬ್ಜಗೊಳಿಸಿ ಕಣ್ಗಾವಲು ಇರಿಸಿದರು. (ಹೈಕೋರ್ಟು ನ್ಯಾಯಾಧೀಶರು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಿಸಿ ಕ್ಯಾಮೆರಾ ಬೇಕಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದರು!) *ನಾಲ್ವಡಿ ಅವರ ಫೋಟೋಗೆ ಖೋ!* ಅಧ್ಯಕ್ಷ ತಾನು ಕೂರುವ ಎ‌.ಸಿ. ಕೋಣೆ ಹಾಳು ಕೊಂಪೆಯನ್ನಾಗಿ ಮಾಡಲಾಗಿತ್ತು.  ಅಲ್ಲಿ ಕಬೋಡ್ ಕಂ ಬುಕ್ ರ್ಯಾಕಲ್ಲಿ  ಗಣಪತಿ ವಿಗ್ರಹ ಬಿಟ್ಟರೆ ಕಸಾಪದ ಒಂದು ಪ್ರಕಟಣೆಯೂ ಇಲ್ಲವಾಗಿತ್ತು! ಆ ಕೋಣೆಯಲ್ಲಿ ಕಸಾಪ ಹುಟ್ಟಿಗೆ ಕಾರಣರಾದ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಫೋಟೋ ಸಹಾ ಇರಲಿಲ್ಲ! ಬದಲು ಭುವನೇಶ್ವರಿ ಫೋಟೋ, ಇನ್ನೊಂದು ಗೋಡೆಗೆ ಆಳೆತ್ತರದ ಗಣೇಶ ಫೋಟೊ ರಾರಾಜಿಸುತ್ತಿತ್ತು!  ಇದೆಲ್ಲ ಗಮನಿಸಿದ ಸಾಹಿತಿಗಳು ಆಡಳಿತಾಧಿಕಾರಿ ಕೆ‌.ಎ. ದಯಾನಂದ, ಐಎಎಸ್,  ಅವರಿಗೆ ಹೇಳಿದಾಗ, ಅವರಿಗೂ ಜೋಶಿ ಮಾಡಿದ ತಪ್ಪಿನ ಅರಿವಾಯ್ತು. ವಾರದಲ್ಲೇ ಖಾಲಿ ರ್ಯಾಕಿಗೆ ಕಸಾಪ ಪ್ರಕಟಣೆಗಳಾದ ನಿಘಂಟು, ಮೌಲಿಕ ಪುಸ್ತಕಗಳನ್ನು ಇರಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ ಫೋಟೋಗೆ ವ್ಯವಸ್ಥೆ  ಮಾಡಿದರು. ಹಾಗೆಯೇ ಕಸಾಪ ಮಹಾದ್ವಾರದಲ್ಲಿ ಇದ್ದ ಮಹಾಕವಿ ಪಂಪನ  “ಮನುಷ್ಯ ಜಾತಿ ತಾನೊಂದೆ ವಲಂ” ಎಂಬ ಉದಾತ್ತ ಧ್ಯೇಯ ಹೊಂದಿದ್ದ ಕಮಾನನ್ನು ಜೋಶಿ, ಅಧಿಕಾರಕ್ಕೆ ಬಂದ ದಿನವೆ ಕಿತ್ತಾಕಿಸಿದ್ದನ್ನು ನೋವಿನಿಂದ ಹೇಳಿದ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು “ಮತ್ತೆ ಅದನ್ನು ಬರೆಯಿಸಿ ಮರು ಸ್ಥಾಪಿಸಿ” ಅಂದದ್ದನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಈಗ ಕಸಾಪ ಆಡಳಿತ ಕಚೇರಿ ಪ್ರವೇಶ ದ್ವಾರದಲ್ಲೆ ಹಾಕಿಸಿದ್ದಕ್ಕೆ ನಮಗೆಲ್ಲ ಸಂತೋಷವಾಗಿದೆ. ಆಡಳಿತಾಧಿಕಾರಿಗೆ ನಮ್ಮ “ಕನ್ನಡ ನಾಡು ನುಡಿ ಜಾಗೃತ ಸಮಿತಿ”  ಪರವಾಗಿ  ಧನ್ಯವಾದ ಹೇಳಲೆ ಬೇಕು. ಹಣ ದುರುಪಯೋಗದಿಂದಾಗಿ  ಜೋಶಿ ಮೇಲೆ ೧೭ ಗುರುತರವಾದ ಆಪಾದನೆ  ಮಾಡಿ ಸಹಕಾರ ಇಲಾಖೆಗೆ, ನ್ಯಾಯಾಲಯಕ್ಕೆ  ದೂರು ಸಲ್ಲಿಸಿದಾಗ, ಎಲ್ಲವೂ “ಸಾಬೀತಾಗಿ”; ಇದೇ ಈಗ  ಪ್ರಾಥಮಿಕ ಸದಸ್ಯತ್ವ ರದ್ದಾಗಲು ಕಾರಣವಾಯಿತು ಎಂಬುದು ವಾಸ್ತವದ ಸಂಗತಿ. ನ್ಯಾಯಾಲಯ ಜೋಶಿಯ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಿದಂತೆ, ಭ್ರಷ್ಟಾಚಾರಕ್ಕು ಶಿಕ್ಷೆ ಕೊಟ್ಟು ಜೈಲಿಗೆ ಹಾಕಬೇಕು. ಜೋಸಿ  ನುಂಗಿದ ೭-೮ ಕೋಟಿ ರೂ.ಗಳ ವಸೂಲಿ ಮಾಡಬೇಕು. ಆಗಲೆ ನ್ಯಾಯಪರ ಹೋರಾಟಗಾರರಿಗೆ ಸಮಾಧಾನ ಎಂದು ಸಾಹಿತಿಗಳು ಹೇಳಿದ್ದಾರೆ. *ಸಾಹಿತಿಯನ್ನೆ ಆಯ್ಕೆ ಮಾಡಿ* ಕಸಾಪದ ೧೧೨ ವರ್ಷಗಳ ಪರಂಪರೆ, ಇತಿಹಾಸ ಇಬ್ಬರು “ಅಧಕ್ಷರ” ಕೈಗೆ ಸಿಕ್ಕು ಹಾಳಾಗಿ ಹೋಯ್ತು. ಮುಂದೆ ಬರುವವರಾದರೂ ಕಸಾಪ ಅಧಿಕಾರವನ್ನು ಬೈಲಾ ತಿದ್ದುಪಡಿ ಮಾಡಿ 3 ವರ್ಷಕ್ಕೆ ತರಲಿ. ಮುಂದೆ ಸಾಹಿತಿಯೊಬ್ಬರು ಅಧ್ಯಕ್ಷರಾಗಿ ಬಂದರೆ,  ಸರ್ವಾಧಿಕಾರಿ ಆಗಲಾರರು. ಎರಡು ಅವಧಿಯ ಅಧಿಕಾರಶಾಹಿ ಆಡಳಿತ ನೋಡಿದ ಸದಸ್ಯರು ಮೂರನೇಬಾರಿಯೂ ಅಧಿಕಾರಶಾಹಿ ಆಯ್ಕೆ ಮಾಡದೆ

“ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ವಿಶೇಷ ಲೇಖನ,ಆರ್ ಜಿ ಹಳ್ಳಿ ನಾಗರಾಜ Read Post »

ಇತರೆ

“ನಿಜ ಸುಖಿ ವಚನಕಾರ ಹಡಪದ ಅಪ್ಪಣ್ಣ” ಜಯಲಕ್ಷ್ಮಿ ಕೆ

ಶರಣ ಸಂಗಾತಿ ಜಯಲಕ್ಷ್ಮಿ ಕೆ “ನಿಜ ಸುಖಿ ವಚನಕಾರ ಹಡಪದ ಅಪ್ಪಣ್ಣ” ಕಾಯಕ ತತ್ವದ ಮೂಲಕ ವ್ಯಕ್ತಿಗತ ವಿಕಾಸದ ಪಥವನ್ನು  ಜಗತ್ತಿಗೆ ತೋರಿದ ಶರಣನೆಂದರೆ ವಚನಕಾರ ಹಡಪದ ಅಪ್ಪಣ್ಣ.  ಕ್ಷೌರ ಮಾಡುವ ವೃತ್ತಿಯ ಮೂಲಕ ಜನರ ಮುಖಗಳನ್ನು ಅಂದಗೊಳಿಸುತ್ತಿದ್ದ ಹಡಪದ ಅಪ್ಪಣ್ಣ  ತನ್ನ ವಚನ ಸಾಹಿತ್ಯದ ಮೂಲಕ ಜನರ ಮನದಲ್ಲಿ ಮನೆ ಮಾಡಿದ್ದ ಮೂಢನಂಬಿಕೆಗಳ  ಕೊಳೆ  ತೊಳೆದು ವೈಚಾರಿಕ ಚಿಂತನೆಗೆ ದಾರಿ ತೋರಿದನು. ವ್ಯಕ್ತಿಯಾಗಲಿ ಸಮಾಜವಾಗಲಿ  ಮೌಲ್ಯಗಳ ತಳಹದಿಯಲ್ಲಿ ಸಾಗುದರಿಂದ ಮಾತ್ರ     ಅಭಿವೃದ್ಧಿಯಾಗಲು ಸಾಧ್ಯ ಎಂಬುದನ್ನು ತನ್ನ ವೃತ್ತಿ ಮತ್ತು ಪ್ರವೃತ್ತಿಗಳ ಮೂಲಕ  ಜಗತ್ತಿಗೆ ಸಾರಿದವನು ಹಡಪದ ಅಪ್ಪಣ್ಣ. ಮಾಡುವ ಕೆಲಸ ಯಾವುದೇ ಇರಲಿ ಮೇಲು ಕೀಳು ಎಂದು ಭಾವಿಸದೆ , ತಮ್ಮ ಹೆಸರಿನ ಹಿಂದೆ ಕಾಯಕವನ್ನು ಅಂಟಿಸಿಕೊಂಡು ಆ ಕಾಯಕಕ್ಕೆ ಅಂತಿದ್ದ ಜಾತಿಯ ಲೇಪವನ್ನು ತೊಡೆದು ಹಾಕಿದವರು ವಚನಗಾರರು. ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ,  ಮೇಧಾರ ಕೇತಯ್ಯ ಮೊದಲಾದವರಂತೆ ಹಡಪದ ಅಪ್ಪಣ್ಣ ಕೂಡಾ ತನ್ನ ಕುಲಕಸುಬನ್ನು ಸತ್ಯ ಶುದ್ಧ ಕಾಯಕವನ್ನಾಗಿ ಪರಿವರ್ತಿಸಿಕೊಂಡವನು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳದ ಚೆನ್ನವೀರಪ್ಪ ಮತ್ತು ದೇವಕಮ್ಮ ದಂಪತಿಗಳ ಪುತ್ರನಾದ  ಹಡಪದ ಅಪ್ಪಣ್ಣನವರು ಚೆನ್ನಮಲ್ಲೇಶ್ವರರಿಂದ ದೀಕ್ಷೆಯನ್ನು ಪಡೆದರು. ಕಾಯಕ ನಿಷ್ಠೆಯಿಂದಲೇ ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿದ್ದ ಮೌಢ್ಯ ನಡವಳಿಕೆಗಳನ್ನು  ತೊಡೆದು ಹಾಕಿದ ಕೀರ್ತಿ ಶರಣ ಅಪ್ಪಣ್ಣನಿಗೆ ಸಲ್ಲುತ್ತದೆ. ತನ್ನ ವೃತ್ತಿಯ ಬಗ್ಗೆ ಯಾವ ಕೀಳರಿಮೆಯೂ ಇಲ್ಲದೆ ಪ್ರಾಮಾಣಿಕವಾಗಿ ಕಾಯಕ ನಡೆಸುತ್ತಿದ್ದ ಹಡಪದ ಅಪ್ಪಣ್ಣ ಭಕ್ತಿ ಭಂಡಾರಿ ಬಸವಣ್ಣನವರ ರಕ್ಷಾ ಕವಚವಾಗಿ, ಅವರ ಬಲಗೈ ಭಂಟನಾಗಿ, “ವಿಶ್ವದ ಪ್ರ ಪ್ರಥಮ ಪ್ರಜಾಪ್ರಭುತ್ವ ಸಂಸತ್ತು ” ಎಂದೇ ಪ್ರಸಿದ್ಧವಾದ ಅನುಭವ ಮಂಟಪದಲ್ಲಿ ಬಸವಣ್ಣನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯಕ್ಷಮತೆ ಮೆರೆದವರು. ಬೆಳಗೆದ್ದು ಹಡಪದ( ಕ್ಷೌರಿಕ ) ನ ಮುಖವನ್ನು ನೋಡಿದರೆ ಅಪಶಕುನ ಎಂದು ಪರಿಭಾವಿಸಿದ್ದ ಆ ಕಾಲದಲ್ಲಿ ” ತಮ್ಮನ್ನು ಕಾಣಲು ಬರುವ ಯಾವ ವ್ಯಕ್ತಿಯಾದರೂ ಸರಿ, ಮೊದಲು ತನ್ನ ಕಾರ್ಯದರ್ಶಿ ಹಡಪದ ಅಪ್ಪಣ್ಣನನ್ನು ನೋಡಿಯೇ ತನ್ನ ಬಳಿಗೆ ಬರತಕ್ಕದ್ದು ” ಎನ್ನುವ ಬಸವಣ್ಣನವರ ನಿಯಮ ಅವರು ಶರಣ ಅಪ್ಪಣ್ಣನವರಿಗೆ ನೀಡಿದ್ದ ಆದ್ಯತೆ ಹಾಗೂ ಅವನ ಮೇಲಿನ ನಂಬಿಕೆ,ವಿಶ್ವಾಸ, ಗೌರವಾದರ ಸಂಕೇತವಾಗಿದೆ.  ಕಾಯಕ ನಿಷ್ಠೆ, ದಾಸೋಹ, ಆಚಾರ -ವಿಚಾರ ಇತ್ಯಾದಿಗಳ ಬಗೆಗಿನ  ಹಡಪದ ಅಪ್ಪಣ್ಣನ ಚಿಂತನೆಗಳು ಅವರು ರಚಿಸಿದ ವಚನಗಳಲ್ಲಿ ಬಿಂಬಿತವಾಗಿವೆ. ಜನ ಸಮುದಾಯದಲ್ಲಿದ್ದ ಮೂಢ ನಂಬಿಕೆ ಹಾಗೂ ಶೋಷಣೆಯನ್ನು   ವಚನಗಳ  ಮೂಲಕವೇ ತೀವ್ರವಾಗಿ ಖಂಡಿಸುತ್ತಾ,   ಪ್ರಾಮಾಣಿಕವಾಗಿ ತನ್ನ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಸಂತೋಷವಾಗಿದ್ದ ಹಡಪದ ಅಪ್ಪಣ್ಣನನ್ನು ಜಗಜ್ಯೋತಿ ಬಸವಣ್ಣನವರು ” ನಿಜ ಸುಖಿ ” ಎಂದೇ ಕರೆದರು. ಇವರು ಸುಮಾರು ಇನ್ನೂರ ಐವತ್ತು (250) ವಚನಗಳನ್ನು ರಚಿಸಿದ್ದು ಅವೆಲ್ಲವೂ ಕನ್ನಡ ಸಾಹಿತ್ಯ ಲೋಕಕ್ಕೆ ಸಂದ ಅಪೂರ್ವ ಕೊಡುಗೆಯೇ ಆಗಿವೆ. ” ನುಡಿದರೆ ಗುರುವಾಗಿ ನುಡಿಯಬೇಕುನಡೆದರೆ ಪರವಾಗಿ ನಡೆಯಬೇಕುಕುಳಿತರೆ ಲಿಂಗವಾಗಿ ಕುಳಿತಿರಬೇಕುಇದ್ದರೆ ಜಂಗಮನಾಗಿ ಇರಬೇಕುಈ ನಾಲ್ಕರ ಹೊಂದಿಕೆಯನ್ನರಿಯದವನು ಎಷ್ಟು ದಿನವಿದ್ದರೂ ಫಲವೇನು ಹೇಳಾ…ಬಸವ ಪ್ರಿಯ ಕೂಡಲ ಚೆನ್ನಬಸವಣ್ಣ..ಎನ್ನುವ ಶರಣ ಹಡಪದ  ಅಪ್ಪಣ್ಣ   ನಮ್ಮ ನಡೆ ನುಡಿ ಬದುಕೆಲ್ಲ ಗುರು ಲಿಂಗ ಜಂಗಮ ಎನ್ನುವ ತ್ರಿವಿಧಗಳಿಗೆ ಮೆಚ್ಚುಗೆಯಾಗುವಂತಿರಬೇಕು ಎಂದಿದ್ದಾರೆ.  ನಮ್ಮ ನಡೆಗೂ ನುಡಿಗೂ ಸಾಮರಸ್ಯವಿರಬೇಕು ಎನ್ನುವುದನ್ನು ” ನುಡಿದರೇನಯ್ಯಾ.. ನಡೆ ಇಲ್ಲದನ್ನಕ್ಕ…ನಡೆದರೇನಯ್ಯ ನುಡಿ ಇಲ್ಲದನ್ನಕ್ಕ ” ಎಂಬ ವಚನನ ಮುಖೇನ ಪ್ರತಿಪಾದಿಸಿದ್ದಾರೆ. ” ಮನವನರಿದವಂಗೆ ಮತದ ಹಂಗೇಕೋ… ನಿತ್ಯವನರಿದಂಗೆ ತೀರ್ಥದ ಹಂಗೇಕೋ ” ಎನ್ನುವ ಮೂಲಕ ಜಾತಿ ಮತ ದೇವರುಗಳ ವಿಚಾರವಾಗಿ ಜನ ಮನದಲ್ಲಿಇರಬೇಕಾದ ಅರಿವಿನ ಸ್ಪಷ್ಟ ಚಿತ್ರಣ ಮೂಡಿಸುತ್ತಾ ” ಅರಿವೆಂಬುದೇ ಆಚಾರ, ಆಚಾರವೆಂಬುದೇ ಅರಿವು ”  ಎಂದು ವಚನಗಳ ಮೂಲಕ ಸಾರಿದ್ದಾರೆ. ಹೆಸರು ಮತ್ತು ಕೀರ್ತಿ ನಮ್ಮನ್ನರಸಿ ಬರಬೇಕೇ ಹೊರತು ಮನುಷ್ಯ ಅವುಗಳನ್ನು ಅರಸಿ ಹೋಗಬಾರದು ಎನ್ನುವ ಅವರ ನಿಲುವು ” ವಂದನೆಗಾಗಿ ನಿಲ್ಲಬೇಡ, ನಿಂದೆಗಂಜಿ ಓದಬೇಡ, ” ಎನ್ನುವ ವಚನದ ಮೂಲಕ ವ್ಯಕ್ತವಾದರೆ ” ದ್ವಂದ್ವ ಬುದ್ಧಿಯ ಕಳೆದು ನಿಂತವನ ಬಸವ ಪ್ರಿಯ ಕೂಡಲಚೆನ್ನಬಸವಣ್ಣ ಪೊರೆವ ” ಎನ್ನುವ ವಚನದಲ್ಲಿ ನಾವು ಇತರರ ಸಮ್ಮುಖದಲ್ಲಿ ಆಡುವ ಮಾತಿಗೂ ಅವರ ಹಿಂದೆ ಅವರ ಬಗ್ಗೆ ಪರರೊಂದಿಗೆ ಆಡುವ ಮಾತಿಗೂ ವ್ಯತ್ಯಾಸವಿರಬಾರದು ಎನ್ನುವ ವಿವೇಕವಿದೆ.  ಕಲ್ಯಾಣ ಕ್ರಾಂತಿಯ ವರೆಗೂ ಬಸವಣ್ಣನ ಜೊತೆಯಲ್ಲಿಯೇ ಇದ್ದು ತದ ನಂತರ ಕೂಡಲಸಂಗಮಕ್ಕೆ ತೆರಳಿ ಅಲ್ಲಿ ಲಿಂಗೈಕ್ಯರಾದ ಹಡಪದ ಅಪ್ಪಣ್ಣನ ಸರಳ ವ್ಯಕ್ತಿತ್ವ ಮತ್ತು ಉದಾತ್ತ ಚಿಂತನೆಗಳು ಆದರ್ಶಪ್ರಾಯ ಮತ್ತು ಅನುಕರಣೀಯ. ತನ್ನ ಕಾಯಕ ಮತ್ತು ಸಾಹಿತ್ಯದಿಂದ ಸಾಮಾಜಿಕ ಕ್ರಾಂತಿಯನ್ನೇ ಹುಟ್ಟು ಹಾಕಿದ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ ಹಡಪದ ಅಪ್ಪಣ್ಣನವರ 892 ನೇ ಜನುಮ ದಿನಾಚರಣೆಯನ್ನು ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದೆ. ಜಯಲಕ್ಷ್ಮಿ ಕೆಮಡಿಕೇರಿ.

“ನಿಜ ಸುಖಿ ವಚನಕಾರ ಹಡಪದ ಅಪ್ಪಣ್ಣ” ಜಯಲಕ್ಷ್ಮಿ ಕೆ Read Post »

ಇತರೆ

“ನಮ್ಮ ಬದುಕಿನ ಬ್ಯಾಟರಿಯ ಚಾರ್ಜಿಂಗ್… ನಮ್ಮದೇ ಜವಾಬ್ದಾರಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್

ಬದುಕಿನ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ನಮ್ಮ ಬದುಕಿನ ಬ್ಯಾಟರಿಯ . ಚಾರ್ಜಿಂಗ್… ನಮ್ಮದೇ ಜವಾಬ್ದಾರಿ” ಈ ಹಿಂದೆ ನಮ್ಮ ಮನೆಗಳಲ್ಲಿ ರಾತ್ರಿಯ ಸಮಯದಲ್ಲಿ ಹಿತ್ತಲಿಗೆ ಹೋಗಲು, ಕರೆಂಟ್ ಇಲ್ಲದ ಸಮಯದಲ್ಲಿ  ರಸ್ತೆಯಲ್ಲಿ ಓಡಾಡಲು,, ಹೊಲಗಳಿಗೆ ಹೋಗಲು ಹೀಗೆ ಹತ್ತಾರು ಕೆಲಸ ಕಾರ್ಯಗಳಿಗೆ ಟಾರ್ಚ್ ಗಳನ್ನು ಬಳಸುತ್ತಿದ್ದರು .ರೂಢಿಯ ಭಾಷೆಯಲ್ಲಿ ಬ್ಯಾಟರಿ ಎಂದು ಇವುಗಳನ್ನು ಕರೆಯುತ್ತಿದ್ದರು. ಜೇಬಿನಲ್ಲಿ ಇಟ್ಟುಕೊಳ್ಳುವ ಅಂಗೈಯಲ್ಲಿ ಹಿಡಿಯುವಷ್ಟು ಪುಟ್ಟದಾದ ಪೆನ್ಸಿಲ್ ಟಾರ್ಚ್ ನಿಂದ ಹಿಡಿದು 50-60 ಅಡಿ ದೂರದವರೆಗೆ ಬೆಳಕನ್ನು ಚೆಲ್ಲುವ ದೊಡ್ಡ ಟಾರ್ಚ್ ಗಳು ಪ್ರತಿಯೊಬ್ಬರ ಮನೆಯ ಕೆಲಸ ಕಾರ್ಯಗಳಿಗೆ ಬಳಕೆಯಾಗುತ್ತಿದ್ದವು. ಅವುಗಳ ಆಕರ ಕೋಶಗಳನ್ನು ಬ್ಯಾಟರಿ ಎಂದು ಕರೆಯುತ್ತಿದ್ದರು. ಸೆಲ್ ಗಳನ್ನು ಬಳಸಿ ಬೆಳಕನ್ನು ಪಡೆಯುವ ಈ ಬ್ಯಾಟರಿಗಳು ಇದೀಗ ಅತ್ಯಂತ ಪುಟ್ಟ ಗಾತ್ರಗಳನ್ನು ಹೊಂದಿದ್ದು ಗಡಿಯಾರದಿಂದ ಹಿಡಿದು ಎಲ್ಲ ಎಲೆಕ್ಟ್ರಾನಿಕ್ ಸಾಮಾನುಗಳಲ್ಲಿ ತಮ್ಮ ಸ್ಥಾನವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿವೆ.ಆದರೆ ಸ್ನೇಹಿತರೆ !ನಿಮಗೆ ಗೊತ್ತೇ ?ನಮ್ಮ ದೇಹ ಒಂದು ಮಾನವ ಬ್ಯಾಟರಿ. ಮನುಷ್ಯನೇ ಒಂದು ಹ್ಯೂಮನ್ ಬ್ಯಾಟರಿ ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ದೇಹ ಎಂಬ ಬ್ಯಾಟರಿಯು ನೀಡುವ ಶಕ್ತಿಯಿಂದ ನಾವು ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತೇವೆ. ದೈಹಿಕ ಶಕ್ತಿಯು….ನಮ್ಮ ದೇಹವು ಒಂದು ಇಂಧನವಾಗಿ ಇಡೀ ದೇಹದ ಎಲ್ಲಾ ಅಂಗಗಳು ಸಕ್ಸಮವಾಗಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ. ಆಹಾರದ ಮೂಲಕ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹಾಗೆ ಸಂಚಯವಾದ ಶಕ್ತಿಯನ್ನು ವಿವಿಧ ಅಂಗಗಳ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಬಳಸುತ್ತದೆ. ದೈಹಿಕ ಸಾಮರ್ಥ್ಯವನ್ನು, ದೇಹದ ಚಾಲಕ ಬಲವನ್ನು ಹೆಚ್ಚಿಸುತ್ತದೆ. ನಮ್ಮ ದೇಹದ ಭಾವನಾಶಕ್ತಿಯ ಆಕರ ಹೃದಯವಾಗಿದ್ದು ಇದು ನಮ್ಮ ಮನಸ್ಸಿನ ಭಾವಗಳನ್ನು ನಿಯಂತ್ರಿಸುತ್ತದೆ. ರಕ್ತವನ್ನು ಪಂಪ್ ಮಾಡುವ ಕಾರ್ಯ ಚಟುವಟಿಕೆಯ ಜೊತೆಗೆ ನಮ್ಮ ಮಾನಸಿಕ, ಭಾವನಾತ್ಮಕ ಚಟುವಟಿಕೆಗಳಿಗೆ ಇದುವೇ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಬಂಧಗಳನ್ನು ಜೋಡಿಸುವ, ಸೌಹಾರ್ದತೆಯನ್ನು ತುಂಬುವ ಸಾಮರ್ಥ್ಯ ಇದಕ್ಕಿದೆ. ಪ್ರೀತಿ,ಪ್ರೇಮ, ಸ್ನೇಹ, ಕರುಣೆ, ವಿಶ್ವಾಸ, ಸಹಾನುಭೂತಿಗಳಂತಹ ಒಳ್ಳೆಯ ಭಾವಗಳ ಜೊತೆಗೆ ಸಿಟ್ಟು, ಸೆಡವು, ಕ್ರೌರ್ಯ, ಅಸಮಾಧಾನ, ಅಜ್ಞಾನ ಮುಂತಾದ ಭಾವಗಳನ್ನು ಕೂಡ ಇದು ಹೊಂದಿರುತ್ತದೆ. ಇದರಲ್ಲಿ ಯಾವುದನ್ನು ನಾವು ಹೆಚ್ಚು ಪೋಷಿಸುತ್ತೇವೆಯೋ ಅವೇ ಗುಣಗಳು ನಮ್ಮನ್ನು ಆಳುತ್ತವೆ. ಒಳ್ಳೆಯ ಕುಟುಂಬ, ಪಾಲಕರು, ಉತ್ತಮ ಸಂಸ್ಕಾರಗಳು, ಸೌಹಾರ್ದ ಮತ್ತು ಸಾಮರಸ್ಯಗಳನ್ನು ಹೊಂದಿರುವ ಸಾಮಾಜಿಕ ಪರಿಸರ ನಮ್ಮನ್ನು ರೂಪುಗೊಳಿಸುತ್ತದೆ…. ಇದೆಲ್ಲವನ್ನು ತನ್ನ ಮೂಲಕ ಗ್ರಹಿಸುವ ಹೃದಯವು ನಮ್ಮೆಲ್ಲ ಭಾವನಾತ್ಮಕ ಯೋಚನೆಗಳು ಹಾಗೂ ಯೋಜನೆಗಳಿಗೆ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.ಮಾನಸಿಕ ಶಕ್ತಿ …. ಸಾಮಾನ್ಯವಾಗಿ ಬುದ್ಧಿ, ಜ್ಞಾನ ಎಂದೆಲ್ಲ ಕರೆಯಲ್ಪಡುವ ಈ ಶಕ್ತಿಯನ್ನು ನಮ್ಮ ದೇಹದ ಮೆದುಳಿನ ಭಾಗ ಹೊಂದಿದೆ. ಸೃಷ್ಟಿ ಕಾರ್ಯದ ಶಕ್ತಿಯನ್ನು ಮೆದುಳು ಹೊಂದಿದೆ. ನಮ್ಮೆಲ್ಲ ಕಾರ್ಯ ಯೋಜನೆಗಳ ಸೃಷ್ಟಿಯಾಗುವುದು ಮೊದಲು ಇಲ್ಲಿಯೇ. ನಂತರ ವಿವಿಧ ಅಂಗಗಳ ಮೂಲಕ ಅದು ಕಾರ್ಯಗತವಾಗುತ್ತದೆ ಆ ಮಾತು ಬೇರೆ. ನಮ್ಮ ಯೋಚನೆಗಳು, ಯೋಜನೆಗಳು ಸೃಷ್ಟಿಯಾಗುವುದು ನಮ್ಮ ಮೆದುಳಿನಲ್ಲಿಯೇ. ನಮ್ಮ ಗ್ರಹಿಕೆಗಳು ಬೇರೂರುವುದು ಕೂಡ ನಮ್ಮ ಮೆದುಳಿನಲ್ಲಿಯೇ. ನಮ್ಮ ಬದುಕಿನಲ್ಲಿ ನಾವು ಸಾಧಿಸಬೇಕೆಂದಿರುವ ಗುರಿಯನ್ನು ಹೊಂದುವ ಉದ್ದೇಶ ಸೃಷ್ಟಿಯಾಗುವುದು ಕೂಡ ನಮ್ಮ ಮೆದುಳಿನಲ್ಲಿಯೇ. ನಮ್ಮ ಯೋಚನೆಗಳಲ್ಲಿ ಹುಟ್ಟುವ ತಪ್ಪು-ಸರಿ, ಒಳಿತು-ಕೆಡುಕು ಗಳ ಕುರಿತು ಸ್ಪಷ್ಟವಾದ ತಿಳುವಳಿಕೆಯನ್ನು ನಮಗೆ ನೀಡಲು ಮೆದುಳು ಅತ್ಯಂತ ಸಹಾಯಕ.ಸ್ನೇಹಿತರೆ, ಒಂದೊಮ್ಮೆ ನಮ್ಮ ದೇಹ, ಭಾವ, ಬುದ್ಧಿಗಳು ಏಕಾತ್ಮಕವಾದರೆ ಅದು ದಿವ್ಯ ಶಕ್ತಿಯಾಗಿ ಪರಿಣಮಿಸುತ್ತದೆ. ನಮ್ಮ ದೇಹ ಮನಸ್ಸು ಮತ್ತು ಬುದ್ಧಿಗಳನ್ನು ಒಂದು ಸರಳ ರೇಖೆಯಲ್ಲಿ ಹಿಡಿದಿಡುವ ದಿವ್ಯ ಶಕ್ತಿ ಅಷ್ಟಾಂಗ ಯೋಗದಲ್ಲಿದೆ. ಹೌದು ಅಷ್ಟಾಂಗ ಯೋಗದ ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ ಗಳಲ್ಲಿ ಮೊದಲ ಎರಡು ನಿಯಮಗಳು ನಮಗೆ ಸಾಮಾಜಿಕ ಮತ್ತು ವೈಯುಕ್ತಿಕ ಬದುಕಿನಲ್ಲಿ ನಾವು ಪಾಲಿಸಬಹುದಾದ ಶಿಸ್ತಿನ ಪಾಠವನ್ನು ನಮಗೆ ಹೇಳಿ ಕೊಡುತ್ತವೆ. ಆಸನವು ನಮಗೆ ದೇಹವನ್ನು ಸುಲಲಿತವಾಗಿ ಬಳಸುವ ಮೂಲಕ ನಿಯಮಿತವಾದ ಉಚ್ಚ್ವಾಸ ಮತ್ತು ನಿ:ಶ್ವಾಸಗಳ  ಜೊತೆಗೆ ವಿವಿಧ ಬಗೆಯ ಭಂಗಿಗಳನ್ನು ವ್ಯಾಯಾಮದ ರೂಪದಲ್ಲಿ ಅಭ್ಯಾಸ ಮಾಡಲು…ತನ್ಮೂಲಕ ಶಾರೀರಿಕ ಹಾಗೂ  ಮಾನಸಿಕ ಸ್ವಾಸ್ಥ್ಯಕ್ಕೆ ಕಾರಣವಾಗುತ್ತದೆ. ಪ್ರಾಣಾಯಾಮದ ವಿವಿಧ ಕ್ರಿಯೆಗಳು ಮಾನಸಿಕ ಸ್ಥಿತಿಯ ಸಮತೋಲನಕ್ಕೆ ಕಾರಣವಾಗುತ್ತದೆ. ಪ್ರತ್ಯಾಹಾರವು ನಮ್ಮನ್ನು ವಿಚಲಿತಗೊಳಿಸುವ ಇಂದ್ರಿಯಗಳನ್ನು ನಿಗ್ರಹಿಸಲು ಸಹಾಯಕವಾಗುತ್ತದೆ ನಮ್ಮನ್ನು ಆಕರ್ಷಿಸುವ ಎಲ್ಲ ಬಗೆಯ ಲೌಕಿಕ ವಿಷಯಗಳ ಮೇಲೆ ನಿಯಂತ್ರಣವನ್ನು ಹೊಂದುವ ಕ್ರಿಯೆಯೇ ಪ್ರತ್ಯಾಹಾರ. ಅಷ್ಟಾಂಗ ಯೋಗದ ಕೊನೆಯ ಮೂರು ಅಂಗಗಳಾದ ಧ್ಯಾನ ಧಾರಣ ಹಾಗೂ ಸಮಾಧಿಗಳು ಮನುಷ್ಯನನ್ನು ಆಂತರಿಕವಾಗಿ ಬಲಿಷ್ಠಗೊಳಿಸಿ ಲೌಕಿಕ ವಿಷಯಗಳಿಂದ ಒಂದು ಒಳ್ಳೆಯ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಹಾಯಕವಾಗಿ ಕಾರ್ಯನಿರ್ವಹಿಸುತ್ತವೆ…. ಎಲ್ಲವನ್ನು ಸಮಚಿತ್ತ, ಸಮಭಾವದಿಂದ ನೋಡುವ ಮಾನಸಿಕ ಶಕ್ತಿ ಇವುಗಳನ್ನು ರೂಡಿಸಿಕೊಳ್ಳುವವರ ಪಾಲಾಗುತ್ತದೆ   ಧಾರಣ ಎಂದರೆ ಏಕಾಗ್ರತೆ. ಮಾಡುವ ಯಾವುದೇ ಕೆಲಸದಲ್ಲಿಯೂ ಶ್ರದ್ದೆ ಹಾಗೂ ತನ್ಮಯತೆಯನ್ನು ಹೊಂದಿ ಏಕಾಗ್ರ ಚಿತ್ರದಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವುದು. ಅಷ್ಟಾಂಗ ಯೋಗದ ಮೊದಲ ಏಳು ಅಂಗಗಳನ್ನು ನಾವು ನಿರ್ವಹಿಸಿದಾಗ ನಮಗೆ ದೊರೆಯುವ ಸ್ಥಿತಿಯೇ ಸಮಾಧಿ. ಸಮಾಧಿ ಸ್ಥಿತಿಯಲ್ಲಿ ವ್ಯಕ್ತಿಯು ತನ್ನ ಅಹಮಿಕೆಯಿಂದ,, ಎಲ್ಲ ರೀತಿಯ ಇಂದ್ರಿಯ ಲಾಲಸೆಗಳಿಂದ ಸಂಪೂರ್ಣ ಮುಕ್ತವಾಗಿರುತ್ತಾನೆ ಹಾಗೂ ಈ ಬ್ರಹ್ಮಾಂಡದ ಅನಂತತೆಯಲ್ಲಿ ತನ್ನನ್ನು ತಾನು ಒಂದಾಗಿಸಿಕೊಳ್ಳುತ್ತಾನೆ.ಹೀಗೆ ತನ್ನ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬದುಕನ್ನು ಏಕತ್ರಗೊಳಿಸುವ ವ್ಯಕ್ತಿಯ ಬದುಕು ಖಂಡಿತವಾಗಿಯೂ ಬದಲಾಗುತ್ತದೆ. ಆತನ ಸುತ್ತಲೂ ಆತನ ವ್ಯಕ್ತಿತ್ವದ ಪ್ರಭಾವಳಿ ಹರಡುತ್ತದೆ. ಆತನ ನಿರ್ಣಯಗಳು ವೈಯುಕ್ತಿಕತೆಯನ್ನು ಹಿಂದಕ್ಕೆಳಸಿ ಮನುಕುಲದ ಉದ್ಧಾರವನ್ನು ಕುರಿತಾಗಿ ಇರುತ್ತದೆ.ನೋಡಿದಿರಾ ಸ್ನೇಹಿತರೆ ಬದುಕು ನಮ್ಮದು ನಿರ್ಧಾರಗಳು ಕೂಡ ನಮ್ಮವೇ ಆಗಿರಬೇಕು ನಮ್ಮ ಬದುಕಿನ ಚುಕ್ಕಾಣಿಯನ್ನು ನಾವೇ ಹಿಡಿದು ಒಳ್ಳೆಯ ಹವ್ಯಾಸಗಳನ್ನು ನಮಗಾಗಿಸಿಕೊಂಡು ಬದುಕನ್ನು ಬಂಗಾರವಾಗಿಸಿಕೊಳ್ಳುವ ಆಯ್ಕೆ ಹಾಗೂ ಹಕ್ಕು ನಮ್ಮದೇ ಏನಂತೀರಾ? ವೀಣಾ ಹೇಮಂತ್ ಗೌಡ ಪಾಟೀಲ್ 

“ನಮ್ಮ ಬದುಕಿನ ಬ್ಯಾಟರಿಯ ಚಾರ್ಜಿಂಗ್… ನಮ್ಮದೇ ಜವಾಬ್ದಾರಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ, ಜೀವನ

“ಬೆಳಗುವ ಬಾಳಿಗೆ ಕರಗುವ ಮನಸ್ಸು” ಜಯಶ್ರಿ ಜೆ ಅಬ್ಬಿಗೇರಿ

ಜೀವನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ ಬೆಳಗುವ ಬಾಳಿಗೆ ಕರಗುವ ಮನಸ್ಸು ಪ್ರತಿದಿನದ ಓಟದಲ್ಲಿ ನಮ್ಮಲ್ಲಿ ಬಹುತೇಕರು ಇತರರ ಭಾವನೆಗಳನ್ನು ಕಷ್ಟಗಳನ್ನು ತಿಳಿಯುವ ಗೋಜಿಗೆ ಹೋಗುವುದೇ ಇಲ್ಲ. ಏಕೆಂದರೆ ಎಲ್ಲರಿಗೂ ತಮ್ಮತಮ್ಮ ಹಿತಾಸಕ್ತಿ ಮಾತ್ರ ಮುಖ್ಯ. ದಾವಂತದ ಈ ದಿನಗಳಲ್ಲಿ ಎಲ್ಲದಕ್ಕೂ ಅವಸರ ಬೇರೆ. ಹೀಗಾಗಿ ಬೇರೆಯವರಿಗೆ ಮಿಡಿಯುವುದನ್ನು ಮರೆಯುತ್ತಿದ್ದೇವೆ. ಈಗಿನ ಸಮಯದಲ್ಲಿ ಸಂಬoಧಗಳು ಹಳಸಿ ಹೋಗುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು: ನಮ್ಮಲ್ಲಿ ದಯೆ ಅಥವಾ ಕರುಣೆಯ ಕೊರತೆ ಎದ್ದು ಕಾಣುತ್ತಿರುವುದು. ಇದರೊಂದಿಗೆ ಇನ್ನೊಂದು ವಿಷಯವೆಂದರೆ ನಾವು ಬಾಹ್ಯ ಸೌಂದರ್ಯಕ್ಕೆ ಜೋತು ಬಿದ್ದಿದ್ದೇವೆ. ಬ್ರಾಂಡೆಡ್ ಉಡುಪುಗಳು ಉನ್ನತ ಪದವಿಗಳು ನಮ್ಮನ್ನು ಗುರುತಿಸುವಂತೆ ಮಾಡಬಹುದು ಆದರೆ ನಮ್ಮನ್ನು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಸುವುದು ನಮ್ಮಲ್ಲಿರುವ ದಯಾಗುಣ ಒಂದೇ. ಬೆಳಗುವ ಬಾಳಿಗೆ ದಯೆಯನ್ನು ಬೆಳೆಸಿಕೊಳ್ಳುವುದು ಇಂದಿನ ತುರ್ತಾಗಿದೆ. ದಯೆ ಎಂದರೇನು? ದಯೆ ಎನ್ನುವುದು ಕೇವಲ ಯಾರಿಗಾದರೂ ಹಣ ಇಲ್ಲವೇ ವಸ್ತುಗಳನ್ನು ದಾನ ಮಾಡುವುದು ಎಂದು ಸಾಮಾನ್ಯವಾಗಿ ವ್ಯಾಖ್ಯಾನಿಸಲಾಗುತ್ತದೆ. ಆದರೆ, ನಿಜವಾದ ದಯೆಯು ಮುಂದಿನವರ ಕಷ್ಟವನ್ನು ತನ್ನದೇ ಕಷ್ಟ ಎಂದು ಭಾವಿಸುವುದಾಗಿದೆ. ನಮ್ಮ ಸಹಜೀವಿಗಳಿಗೆ ಅಂದರೆ ಪ್ರಾಣಿ ಪಕ್ಷಿಗಳಿಗೆ ಪ್ರೀತಿ ತೋರುವುದು. ಬೇರೆಯವರ ನೋವಿಗೆ ಸ್ಪಂದಿಸುವುದು ಮತ್ತು ಮುಂದಿನವರು ಹೇಳುವ ಮುನ್ನವೇ ಸ್ವಯಂಪ್ರೇರಿತವಾಗಿ ಒಳ್ಳೆಯದನ್ನು ಮಾಡುವುದೇ ದಯೆ ಆಗಿದೆ. ‘ದಯೆಯ ಯಾವುದೇ ಕೆಲಸವು ಎಷ್ಟೇ ಚಿಕ್ಕದಾಗಿದ್ದರೂ, ಅದು ಎಂದಿಗೂ ವ್ಯರ್ಥವಾಗುವುದಿಲ್ಲ.’ ಅಷ್ಟಕ್ಕೂ ದಯಾಗುಣದಲ್ಲಿ ನಿಸ್ವಾರ್ಥ ಭಾವ ಇರುತ್ತದೆ. ಅಂದರೆ ಇಲ್ಲಿ ಪ್ರತಿಯಾಗಿ ಏನನ್ನೂ ಅಪೇಕ್ಷಿಸದೇ ಒಳ್ಳೆಯದನ್ನು ಮಾಡುವುದು ಒಳಗೊಂಡಿದೆ. ಮನಷ್ಯನನ್ನು ಮನುಷ್ಯನನ್ನಾಗಿಸುವ ದಿವ್ಯ ಶಕ್ತಿಯೂ ಇದಕ್ಕಿದೆ. ಅಷ್ಟೇ ಅಲ್ಲ ಅದು ಸಮಾಜವನ್ನು ಒಂದುಗೂಡಿಸುವ ಅತ್ಯದ್ಭುತ ಶಕ್ತಿಯೂ ಆಗಿದೆ.ನಮ್ಮ ಕಷ್ಟ ಕಾಲದಲ್ಲಿ ದಯಾಳುಗಳು ಸ್ಪಂದಿಸಿದಾಗ ನಮಗೂ ಅವರ ಹಾಗೆ ಬೇರೆಯವರ ನೋವಿಗೆ ಮಿಡಿಯಬೇಕೆಂದು ಅನ್ನಿಸದೇ ಇರದು. ಆದರೆ ದಯೆಯನ್ನು ಹೇಗೆ ಬೆಳೆಸಿಕೊಳ್ಳುವುದೆಂದು ತಿಳಿಯುವುದೇ ಇಲ್ಲ. ನಿತ್ಯ ಬದುಕಿನಲ್ಲಿ ಕೆಲ ಬದಲಾವಣೆಗಳನ್ನು ತಂದುಕೊಳ್ಳುವ ಮೂಲಕ ನೀವೂ ದಯಾಳುಗಳಾಗಬಹುದು. ಬದುಕಿನ ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅದಕ್ಕೆ ಇಲ್ಲಿವೆ ಕೆಲವು ಸರಳ ತಂತ್ರಗಳು. ಸಹಾನುಭೂತಿ ನಮಗೆ ಗೊತ್ತಿಲ್ಲದಂತೆ ಬೇರೆಯವರನ್ನು ಟೀಕಿಸದಿದ್ದರೆ ನಿಂದಿಸದಿದ್ದರೆ ಉಂಡ ಅನ್ನ ಕರಗುವುದೇ ಇಲ್ಲವೆಂಬ ಕೆಟ್ಟ ಸ್ವಭಾವವನ್ನು ಅಂಟಿಸಿಕೊoಡಿರುತ್ತೇವೆ. ಇದು ಸಾಲದೆಂಬoತೆ ಕೋಪದಿಂದ ಪರಿಸ್ಥಿತಿಯನ್ನು ನಮಗೆ ಪೂರಕವಾಗುವಂತೆ ಮಾಡಿಕೊಳ್ಳಲು ನೋಡುವುದು. ಹಾಗೆ ಟೀಕಿಸುವ ಸ್ವಭಾವ ಬೇರೆಯವರಿಗೆ ಅದೆಷ್ಟು ನೋವನ್ನು ಉಂಟು ಮಾಡುತ್ತದೆಂಬುದು ನಮಗೆ ಗೊತ್ತಾಗುವುದೇ ಇಲ್ಲ. ದಯಾಳುಗಳಾಗಬೇಕೆಂದರೆ, ಯಾರನ್ನಾದರೂ ಟೀಕಿಸುವ ಮುನ್ನ ಅವರ ಪರಿಸ್ಥಿತಿಯಲ್ಲಿ ನಾನು ಇದ್ದಿದ್ದರೆ ಎಂದು ಯೋಚಿಸಬೇಕು. ಬೇರೆಯವರ ಪರಿಸ್ಥಿತಿಯನ್ನು ಅವರ ಸ್ಥಾನದಲ್ಲಿ ನಿಂತು ನೋಡುವುದೇ ಸಹಾನುಭೂತಿ. ಈ ರೀತಿಯ ಸಹಾನುಭೂತಿ ದಯೆಯನ್ನು ಹೆಚ್ಚಿಸುತ್ತದೆ. ದ್ವೇಷದ ಬದಲು ಪ್ರೀತಿಯಿಂದ ಪರಿಸ್ಥಿತಿಯನ್ನು ನಿಭಾಯಿಸಲು ಇದು ಕಲಿಸುತ್ತದೆ. ದಲೈ ಲಾಮಾ ಉಲ್ಲೇಖದಂತೆ ‘ಸಾಧ್ಯವಾದಾಗಲೆಲ್ಲ ದಯೆ ಉಳ್ಳವರಾಗಿರಿ ಮತ್ತು ದಯೆ ತೋರಿಸುವುದು ಯಾವಾಗಲು ಸಾಧ್ಯವಿರುತ್ತದೆ.’ ಆಲಿಸಿ ಇತ್ತೀಚಿಗೆ ನಾವೆಲ್ಲ ಬೇರೆಯವರ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳುವುದನ್ನು ಬಿಟ್ಟು ಬಿಟ್ಟಿದ್ದೇವೆ. ಎದುರಿಗಿನವರು ಏನೋ ಹೇಳುತ್ತಿದ್ದರೆ ನಾವು ಮೊಬೈಲ್‌ನಲ್ಲಿ ಬ್ಯುಸಿ ಇರುತ್ತೇವೆ. ಇಲ್ಲವೇ ಏನೂ ಸಂಬoಧವಿಲ್ಲದoತೆ ಕುಳಿತು ಬಿಡುತ್ತೇವೆ. ಉತ್ತಮ ಸಂವಹನವೆoದರೆ ಕೇವಲ ಮಾತನಾಡುವುದಲ್ಲ, ಎದುರಿಗಿನವರ ಮಾತನ್ನು ತಾಳ್ಮೆಯಿಂದ ಕೇಳುವುದು. ಬೇರೆಯವರು ತಮ್ಮ ನೋವನ್ನು ಹೇಳಿಕೊಳ್ಳುತ್ತಿರುವಾಗ ಅವರ ಮಾತನ್ನು ಮಧ್ಯದಲ್ಲೇ ಕತ್ತರಿಸದೇ ಪೂರ್ಣವಾಗಿ ಕೇಳಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ನಾನು ಹೇಳಿದ್ದನ್ನು ಎಲ್ಲರೂ ಕೇಳಿಸಿಕೊಳ್ಳಬೇಕು. ಆದರೆ ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲ ಎಂದರೆ ಸ್ವಾರ್ಥವಾಗಿ ಬಿಡುತ್ತದೆ. ಆದ್ದರಿಂದ ಇತರರನ್ನು ಸಾವಧಾನದಿಂದ ಆಲಿಸುವುದನ್ನು ಬೆಳೆಸಿಕೊಳ್ಳಬೇಕು.ಸಕಾರಾತ್ಮಕತೆಸಾಮಾಜಿಕ ಜಾಲತಾಣದಲ್ಲಿ ಯಾರನ್ನೋ ಟ್ರೋಲ್ ಮಾಡುವುದು ಕೀಳುಮಟ್ಟದ ಕಾಮೆಂಟ್ ಮಾಡುವುದು ಹೆಚ್ಚಾಗಿದೆ. ಇದರ ಬದಲು ಸಕಾರಾತ್ಮಕ ಕಾಮೆಂಟ್‌ಗಳನ್ನು ಹಾಕುವ ಮೂಲಕ ಡಿಜಿಟಲ್ ಲೋಕದಲ್ಲಿ ದಯಾಗುಣವನ್ನು ಮೆರೆಯಬಹುದು. ಮಾಯಾ ಎಂಜಿಲೋ ಅವರ ಉಲ್ಲೇಖವು ಇಲ್ಲಿ ಸೂಕ್ತವೆನಿಸುತ್ತದೆ. ‘ಜನರು ನೀವು ಹೇಳಿದ್ದನ್ನು ಮರೆಯಬಹುದು, ನೀವು ಮಾಡಿದ್ದನ್ನು ಮರೆಯಬಹುದು, ಆದರೆ ನೀವು ಅವರಿಗೆ ಹೇಗೆ ಅನಿಸುವಂತೆ ಮಾಡಿದ್ದೀರಿ ಎಂಬುದನ್ನು ಅವರು ಎಂದಿಗೂ ಮರೆಯುವುದಿಲ್ಲ. ಎಂದು ನಾನು ಕಲಿತಿದ್ದೇನೆ.’ ಪ್ರಕೃತಿ ಪ್ರಕೃತಿ ಸುಂದರ ಬದುಕಿಗೆ ಬೇಕಾಗಿದ್ದನ್ನೆಲ್ಲ ನಮಗೆ ನೀಡಿದೆ. ಹೀಗಾಗಿ ನಾವೂ ಸಹ ಪ್ರಕೃತಿಯ ಮೇಲೆ ಕರುಣೆ ತೋರಬೇಕು. ಅನಗತ್ಯವನ್ನು ಗಿಡ-ಮರಗಳನ್ನು ಕತ್ತರಿಸದಿರುವುದು. ಹಸಿದ ಮೂಕ ಪ್ರಾಣಿಗಳಿಗೆ ಆಹಾರ ನೀಡುವುದು. ಹಸಿದವರಿಗೆ ಅನ್ನ ನೀಡುವುದು, ಕಷ್ಟದಲ್ಲಿರುವವರಿಗೆ ಧೈರ್ಯ ತುಂಬುವುದು. ಹಿರಿಯರನ್ನು ಗೌರವಿಸುವುದು. ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿಡುವುದನ್ನು ಮರೆಯಬಾರದು. ಕ್ಷಮಾ ಗುಣ ಮಾರ್ಕ್ ಟ್ವೆನ್ ಹೇಳಿದ ಉಲ್ಲೇಖವು ಅತ್ಯದ್ಭುತವಾಗಿದೆ.’ ದಯೆ ಎನ್ನುವುದು ಕಿವುಡರು ಕೇಳಬಲ್ಲ, ಕುರುಡರು ನೋಡಬಲ್ಲ ಒಂದು ಅದ್ಭುತ ಭಾಷೆ.’ ಬೇರೆಯವರು ಮಾಡಿದ ತಪ್ಪುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾಧಿಸುವುದಾಗಲಿ, ಇಲ್ಲವೇ ಕೊರಗುವುದರಿಂದ ಏನೂ ಪ್ರಯೋಜನವಿಲ್ಲ. ಸಾದ್ಯವಾದಷ್ಟು ಬೇಗನೆ ಮರೆತು ಕ್ಷಮಿಸಬೇಕು. ಬೇರೆಯವರ ತಪ್ಪುಗಳನ್ನು ಸಾರ್ವಜನಿಕವಾಗಿ ನಿಂದಿಸದೆ ಖಾಸಗಿಯಾಗಿ ಮೃದುವಾಗಿ ತಿದ್ದಿ ಹೇಳಬೇಕು. ಅಂತೆಯೆ ನಿಮ್ಮ ಮೇಲೆ ನಿಮಗೆ ಪ್ರೀತಿ ದಯೆ ಇರುವುದು ಮುಖ್ಯವಾಗುತ್ತದೆ. ಎಂದೋ ಮಾಡಿದ ತಪ್ಪಿಗೆ ಇವತ್ತಿಗೂ ಕೂಡ ನಮ್ಮನ್ನು ನಾವು ದೂಷಿಸಿಕೊಳ್ಳುವುದು ಸರಿಯಲ್ಲ. ಭೂತಕಾಲದ ತಪ್ಪುಗಳಿಗಾಗಿ ದೂಷಿಸಿಕೊಳ್ಳುತ್ತಿದ್ದರೆ ಮನಸ್ಸು ಕಲುಷಿತಗೊಳ್ಳುತ್ತದೆ. ಆದ್ದರಿಂದ ಕ್ಷಮಾ ಗುಣವನ್ನು ಅಳವಡಿಸಿಕೊಳ್ಳಬೇಕು. ಅದು ಶಾಂತಿಯನ್ನು ನೀಡುತ್ತದೆ.ಭಾವನಾತ್ಮಕತೆಎದುರಿಗಿದ್ದವರು ತಪ್ಪು ಮಾಡಿದಾಗ ಅವರನ್ನು ಬೈಯುವ ಬದಲು ಅವರಿಗೆ ಸಮಾಧಾನದಿಂದ ಮಾತನಾಡಿಸಿ ಏನಾದರೂ ತೊಂದರೆ ಇರಬಹುದೇ ಎಂದು ಯೋಚಿಸಬೇಕು. ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಲು ಮುಂದಾಗಬೇಕು. ನಿಮ್ಮ ಮಾತು ನಿಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಆದ್ದರಿಂದ ಮಾತು ಮೃದುವಾದಷ್ಟು ಒಳಿತು.  ‘ನುಡಿದರೆ ಮುತ್ತಿನ ಹಾರದಂತಿರಬೇಕು. ಎಂಬ ನುಡಿಯಂತೆ ನಮ್ಮ ಮಾತುಗಳು ಇತರರನ್ನು ಪ್ರೋತಾಹಿಸುವಂತಿರಬೇಕು. ಮಾತು ಮುಂದಿನವರಿಗೆ ಚೂರಿ ಇರಿಯುವಂತಿದ್ದರೆ ಅವರು ಎಂದೂ ನಿಮ್ಮನ್ನು ಕ್ಷಮಿಸುವುದಿಲ್ಲ. ನಿಮ್ಮ ಮಾತು ಮುಂದಿನವರಿಗೆ ನೋವುಂಟು ಮಾಡದಿದ್ದರೆ ನಿಮ್ಮ ವ್ಯಕ್ತಿತ್ವವನ್ನು ಎಲ್ಲರೂ ಗೌರವಿಸುತ್ತಾರೆ.  ಗೌತಮಬುದ್ಧ ಹೇಳಿದಂತೆ ‘ಕೋಪವನ್ನು ಪ್ರೀತಿಯಿಂದ ಗೆಲ್ಲಿ, ಕೆಡುಕನ್ನು ಒಳಿತಿನಿಂದ ಗೆಲ್ಲಿ, ಜಿಪುಣತನವನ್ನು ದಾನದಿಂದ ಗೆಲ್ಲಿ, ಸುಳ್ಳನ್ನು ಸತ್ಯದಿಂದ ಗೆಲ್ಲಿ.’ ಬದುಕಲು ಬಿಡೋಣ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಮನುಷ್ಯನಲ್ಲಿ ದಯೆ ಇಲ್ಲದಿದ್ದರೆ ಆತ ಜೀವಂತ ಶವಕ್ಕೆ ಸಮಾನ. ಅಂಥ ಸಮಾಜಕ್ಕೆ ಬೆಲೆಯೂ ಇರುವುದಿಲ್ಲ. ಮಹಾತ್ಮಾ ಗಾಂಧೀಜಿ ಹೇಳಿದಂತೆ ‘ಎಲ್ಲಿ ದಯೆ ಮತ್ತು ಪ್ರೀತಿ ಇರುತ್ತದೆಯೋ, ಅಲ್ಲಿ ದೇವರು ಇರುತ್ತಾನೆ.’ ದಯೆ ಹಣಕ್ಕಿಂತಲೂ ಮುಖ್ಯ ಹೀಗಾಗಿ ದಯೆ ತೋರಲು ಶ್ರೀಮಂತ ಇರಬೇಕೆಂದೇನೂ ಇಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು. ಅಗತ್ಯವಿದ್ದವರಿಗೆ  ಸಣ್ಣ ಪುಟ್ಟ ಸಹಾಯದಿಂದಲೂ ದಯೆ ತೋರಬಹುದು. ದಾರಿ ತಪ್ಪಿದವರಿಗೆ ದಾರಿ ತೋರಿಸಬಹುದು. ಪ್ರಕೃತಿ ಮೇಲೆ ಪವಿತ್ರ ಭಾವ ಹೊಂದಬೇಕು. ಪರರ ಕಷ್ಟಗಳನ್ನು ಕಂಡು ಕರಗುವ ಮತ್ತು ಫಲಾಪೇಕ್ಷೆಯಿಲ್ಲದೇ ಸಹಾಯ ಮಾಡಲು ಮುಂದಾಗುವ ಮನಸ್ಸನ್ನು ಬೆಳಸಿಕೊಳ್ಳಬೇಕು. ‘ಬದುಕೋಣ ಬದುಕಲು ಬಿಡೋಣ.’ ಎಂಬ ತತ್ವವನ್ನು ಪಾಲಿಸಿದರೆ ಜೀವನ ನಂದನವನವಾಗುವುದು ಜಯಶ್ರೀ.ಜೆ. ಅಬ್ಬಿಗೇರಿ

“ಬೆಳಗುವ ಬಾಳಿಗೆ ಕರಗುವ ಮನಸ್ಸು” ಜಯಶ್ರಿ ಜೆ ಅಬ್ಬಿಗೇರಿ Read Post »

ಇತರೆ, ಶಿಕ್ಷಣ

“ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ವಿಶೇಷ ಲೇಖನ ಅಮು ಭಾವಜೀವಿ ಮುಸ್ಟೂರು.

ಶಿಕ್ಷಣ ಸಂಗಾತಿ ಅಮು ಭಾವಜೀವಿ ಮುಸ್ಟೂರು “ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ಅಂಕ ಆಧಾರಿತ ಶಿಕ್ಷಣಕ್ಕಿಂತ ಕೌಶಲ್ಯ ಮತ್ತು ವೃತ್ತಿಪರತೆ ಆಧಾರಿತ ಮೂಲ ಶಿಕ್ಷಣವನ್ನು ಕೊಟ್ಟಾಗ ಮಾತ್ರ ಈ ಶಿಕ್ಷಣ ವ್ಯವಸ್ಥೆ ಸುಧಾರಿಸಬಹುದೇನೋ. ಅಂಕ ಮಾಡಲು ಯೋಗ್ಯತೆ ಇಲ್ಲದವನು ಅದನ್ನು ಕೊಂಡುಕೊಂಡು ಅದೆಷ್ಟೋ ಪ್ರತಿಭಾವಂತರಿಗೆ ತೊಂದರೆ ಮಾಡುವ ಬದಲು ವೃತ್ತಿ ಕೌಶಲ್ಯ ಆಧಾರಿತ ಕಲಿಕೆ ಪ್ರತಿಭಾವಂತರನ್ನು ಸೃಷ್ಟಿಸುತ್ತದೆ. ಕೌಶಲ್ಯ ಮತ್ತು ಪ್ರತಿಭೆಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಅದನ್ನು ಸ್ವತಃ ರೂಡಿಸಿಕೊಳ್ಳುವಂತದ್ದು. ಕೆಲಸಕ್ಕೆ ತಕ್ಕ ಕೌಶಲ್ಯ ಕೌಶಲ್ಯಕ್ಕೆ ತಕ್ಕ ಅನುಭವ ಅನುಭವಕ್ಕೆ ತಕ್ಕ ಪರಿಶ್ರಮ ಸಿಕ್ಕಾಗ ಸಮಾಜದಲ್ಲಿ ದುಡಿಯುವ ವರ್ಗಕ್ಕೆ ಬಲ ತುಂಬಿದಂತಾಗುತ್ತದೆ.    ಬರೀ ಅಂಕ ಗಳಿಕೆಯ ಹಿಂದೆ ಓಡುತ್ತಿರುವ ಇಂದಿನ ಯುವ ಸಮುದಾಯ ಅತ್ತ ಅಂಕ ಗಳಿಸಲು ಬರದಾಡುತ್ತಿದ್ದರೆ ಇತ್ತ ಪಟ್ಟಭದ್ರರು ತಮ್ಮವರ ಹಿತಕ್ಕಾಗಿ ಕೋಟ್ಯಂತರ ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿ ತಾವು ಮಾತ್ರ ತಮ್ಮ ಹಣ ಅಧಿಕಾರ ಪ್ರಭಾವ ಬಳಸಿ ಎಲ್ಲಾ ಅವಕಾಶಗಳನ್ನು ತಮ್ಮದಾಗಿಸಿಕೊಂಡು ಮೆರೆಯುತ್ತಿದ್ದಾರೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಕ್ಕೆ ಕೈಹಾಕಿ ಹೆತ್ತವರಿಗೆ ಇನ್ನಿಲ್ಲದ ನೋವು ಕೊಡುವ ಪರಿಸ್ಥಿತಿಗೆ ತಂದು ಬಿಟ್ಟಿದೆ ಈ ವ್ಯವಸ್ಥೆ. ಶಿಕ್ಷಣ ಸ್ವಉದ್ಯೋಗಿಗಳನ್ನು ಸೃಷ್ಟಿ ಮಾಡಬೇಕೆ ವಿನಹ ಸರ್ಕಾರ ಸಂಘ ಸಂಸ್ಥೆಗಳ ಬಾಗಿಲಲ್ಲಿ ನಿಂತು ಕೆಲಸಕ್ಕಾಗಿ ಅಂಗಲಾಚುವ ದೈನಿಶಿ ಸ್ಥಿತಿಯಲ್ಲಿ ಮಕ್ಕಳನ್ನು ತಂದು ನಿಲ್ಲಿಸಿದೆ.    ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಸೃಜನಶೀಲರನ್ನಾಗಿ ಮಾಡುವ ಬದಲು ಪುಸ್ತಕದ ಹುಳುಗಳನ್ನಾಗಿಸಿ ಸ್ವಂತಿಕೆಯನ್ನೇ ಮರೆಸಿ ಕೇವಲ ಅಂಕ ್ರ್ಯಾಂಕ್ಗಳ ಹಿಂದೆ ಓಡುವಂತೆ ಮಾಡಿದೆ. ಇಲ್ಲಿ ವಿಫಲನಾದನವನಿಗೆ ಮತ್ತೊಂದು ಅವಕಾಶವನ್ನು ಸೃಷ್ಟಿಸಿಕೊಳ್ಳುವ ಬದಲು ಕೈ ತಪ್ಪಿದ ಅವಕಾಶದ ಚಿಂತೆಯಲ್ಲಿಯೇ ಬದುಕು ಭವಿಷ್ಯಗಳ ಎರಡನ್ನು ಕತ್ತಲೆ ಮಾಡಿಕೊಂಡು ಹೆತ್ತವರಿಗೆ ಸರಿಯಾಗಿ ಜನ್ಮಕ್ಕಾಗುವಷ್ಟು ನೋವನ್ನು ನೀಡಿ ಸೊರಗಿ ಹೋಗುತ್ತಿದೆ. ತಂತ್ರಜ್ಞಾನ ಮುಂದುವರೆದಂತೆಲ್ಲ ಸತ್ಯತೆ ಮತ್ತು ಪ್ರಾಮಾಣಿಕತೆಗೆ ಅವಕಾಶ ಇರುವುದಿಲ್ಲ. ಅಲ್ಲಿ ಏನಿದ್ದರೂ ತಾಂತ್ರಿಕತೆಗೆ ನಾವೆಷ್ಟು ಸಮರ್ಥರು ಎಂಬುದನ್ನು ಸಾಬೀತುಪಡಿಸಬೇಕಷ್ಟೆ. ತಾಂತ್ರಿಕತೆಯಲ್ಲಿ ಪ್ರಾವೀಣ್ಯತೆ ಇಲ್ಲದವನು ಹಣ ಅಧಿಕಾರಗಳ ಪ್ರಭಾವ ಬಳಸಿ ಅದನ್ನು ಕೊಂಡುಕೊಳ್ಳಲು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುವುದು ಇಂದಿನ ದುರಂತ. ಅದರ ಜೊತೆಗೆ ನೂರಾರು ಕನಸುಗಳನ್ನು ಕಟ್ಟಿಕೊಂಡ ಮಧ್ಯಮ ವರ್ಗದ ಪೋಷಕರು ಮತ್ತು ವಿದ್ಯಾರ್ಥಿಗಳ ಪಾಲಿಗೆ ಭವಿಷ್ಯವನ್ನು ಕತ್ತಲಾಗಿಸಿಬಿಡುತ್ತದೆ.     ಶಿಕ್ಷಣ ಜ್ಞಾನವನ್ನು ಕೊಡಬೇಕು ಅಂಕಗಳನ್ನಲ್ಲ. ಜ್ಞಾನ ಬದುಕನ್ನು ಅನ್ವೇಶಿಸಿ ಸರಿ ತಪ್ಪುಗಳ ವಿಶ್ಲೇಷಿಸಿ ಜೀವನದ ಮಟ್ಟವನ್ನು ಸುಧಾರಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಓದಿನಲ್ಲಿ ಮುಂದಿರುವವರಿಗೆ ಬದುಕಿನ ಪರ್ಯಾಯ ಹಾದಿಗಳು ಗೊತ್ತೇ ಇರುವುದಿಲ್ಲ. ಕುದುರೆಗೆ ಕಣ್ಣು ಕಟ್ಟಿದಂತೆ ಓಡುವುದಷ್ಟೇ ಅವನ ಗುರಿಯಾಗಿರುತ್ತದೆ. ಕೈಗೆಟುಕದ ಉನ್ನತ ಗುರಿಗಿಂತಲೂ ಅಂಗೈಯಲ್ಲಿರುವ ಬೆಣ್ಣೆಯನ್ನೇ ತುಪ್ಪವಾಗಿಸುವ ಕೌಶಲ್ಯವನ್ನು ಇಂದಿನ ಶಿಕ್ಷಣ ಮಕ್ಕಳಿಗೆ ಕಲಿಸಿ ಕೊಡಬೇಕಾಗಿದೆ. ತಂತ್ರಜ್ಞಾನದ ಆವಿಷ್ಕಾರ ಮನುಷ್ಯನನ್ನು ಸೋಮಾರಿಯಾಗಿಸಿದೆ. ಅವನ ಶ್ರಮದ ಕೆಲಸಗಳನ್ನೆಲ್ಲ ನುಂಗಿ ಹಾಕಿ ಗುಂಡಿ ಬತ್ತಿದರೆ ಸಾಕು ಆಗಬೇಕಾದ ಕೆಲಸಗಳೆಲ್ಲ ನಿರ್ದಿಷ್ಟ ಸಮಯದಲ್ಲಿ ಮುಗಿಸಿ ಕೊಡುತ್ತಿರುವಾಗ ಮನುಷ್ಯನ ದೈಹಿಕ ಶ್ರಮ ಕೌಶಲ್ಯ ಎಲ್ಲವೂ ಮೂಲೆಗುಂಪಾಗಿ ನಿರುದ್ಯೋಗಿಗಳು ಉತ್ಪಾದನೆಯಾಗುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ದೇಶದ ಪ್ರಗತಿಯ ಮೇಲೆ ಬಹುದೊಡ್ಡ ಹೊಡೆತವನ್ನು ನೀಡಲಿದೆ.      ಶಿಕ್ಷಣ ವ್ಯವಸ್ಥೆ ವ್ಯಾಪಾರಿಕರಣವಾದ ಈ ಕಾಲಘಟ್ಟದಲ್ಲಿ ಪ್ರತಿಭೆಗಳು ಹುಟ್ಟುವುದು ಅಷ್ಟು ಸುಲಭವಲ್ಲ. ಉಳ್ಳವರ ಎದೆಗೊದ್ದು ಪ್ರತಿಭಾವಂತ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದು ಅಸಾಧ್ಯವಾದ ಮಾತು. ಅದರಲ್ಲೂ ಇಂದಿನ ರಾಜಕೀಯ ವ್ಯವಸ್ಥೆ ಕೇವಲ ಗುಲಾಮರನ್ನು ಸೃಷ್ಟಿಸುವ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವ ಸಾಧನಗಳನ್ನಾಗಿ ಬಳಸಿಕೊಳ್ಳುತಿದೆ ವಿನಹ ಕೌಶಲ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವುದು ಅವರರಿಗೂ ಬೇಕಿಲ್ಲ. ಎಷ್ಟು ಸಾಧ್ಯವೋ ಅಷ್ಟು ಬೇಗ ಹಣ ಗಳಿಸಿಕೊಂಡು ತಾನು ಮಾತ್ರ ಉದ್ದಾರವಾಗುವ ಮನಸ್ಥಿತಿಯಲ್ಲಿ ಇಂದಿನ ಶಿಕ್ಷಣ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ಹೀಗಿರುವಾಗ ಓದಿದ ಎಲ್ಲರಿಗೂ ಕೆಲಸ ಸಿಗುವುದು ಅಸಾಧ್ಯ. ಇಂದಿನ ಶಿಕ್ಷಣ ವ್ಯವಸ್ಥೆ ಸೃಷ್ಟಿಕರ್ತನನ್ನಾಗಿಸುವ ಬದಲು ಕೇವಲ ಅನುಯಾಯಿಯಾಗಿ ಅನುಸರಿಸುವ ಅಮಾಯಕರನ್ನು ತಯಾರಿಸುವ ಕಾರ್ಖಾನೆಗಳಾಗಿವೆ.     ಯುವ ಸಮುದಾಯ ಒಂದು ಮಹಾನ್ ಶಕ್ತಿ. ಮನಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಆದರೆ ಇಂದು ಅದನ್ನು ಮಾರ್ಗದರ್ಶಿಸುವ ಹಾಗೂ ಅದಕ್ಕೆ ಸರಿಯಾದ ಗುರಿ ನಿಗದಿಪಡಿಸುವ ಗುರುವಿನ ಕೊರತೆ ಎದ್ದು ಕಾಣುತ್ತದೆ. ಯುವಶಕ್ತಿಗೆ ಅಸಾಧ್ಯವಾದುದು ಯಾವುದು ಇಲ್ಲ ಆದರೆ ಸಾಧ್ಯವಾಗಿಸುವ ನಿಟ್ಟಿನಲ್ಲಿ ಅದನ್ನು ಒಗ್ಗೂಡಿಸಿಕೊಂಡು ಮುನ್ನಡೆಯ ಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ತುಂಬಾ ಅನಿವಾರ್ಯವಾಗಿದೆ. ಇಲ್ಲಿ ಆಡಿಸುವವರ ಯೋಗ್ಯತೆ ಒಟ್ಟುಗೂಡಿಸುವಲ್ಲಿನ ವಿಫಲತೆಯನ್ನು ಎತ್ತಿ ತೋರಿಸುತ್ತದೆ. ವ್ಯವಸ್ಥೆಯ ಮೇಲೆ ಅತಿಕ್ರಮಣ ಮಾಡುವ ಬದಲು, ಸಂಘರ್ಷಕ್ಕೆ ಎಡೆ ಮಾಡಿ ಕೊಡುವ ಬದಲು ವ್ಯವಸ್ಥೆಯೊಳಗಿರುವ ಹುಳುಕುಗಳನ್ನು ಸರಿಪಡಿಸಲು ಬೇಕಾದ ಚಾಕಚಕ್ಯತೆಯನ್ನು ಹೊಂದಿದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಉಳಿಸಿಕೊಂಡು ವ್ಯವಸ್ಥೆಯ ಓರೆ ಕೋರೆಗಳನ್ನು ತಿದ್ದಿ ಅರ್ಹರಿಗೆ ಅವಕಾಶಗಳ ಬಾಗಿಲನ್ನು ತೆರೆಸುವ ಶಿಕ್ಷಣ ವ್ಯವಸ್ಥೆ ಅದನ್ನು ಮುನ್ನಡೆಸುವ ಗುರುವಿನ ಮಾರ್ಗದರ್ಶನ ಅತಿ ಅವಶ್ಯಕವಾಗಿ ಬೇಕಾಗಿದೆ. ಅಮು ಭಾವಜೀವಿ ಮುಸ್ಟೂರು.

“ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ವಿಶೇಷ ಲೇಖನ ಅಮು ಭಾವಜೀವಿ ಮುಸ್ಟೂರು. Read Post »

ಆರೋಗ್ಯ, ಇತರೆ

“ವಿಶ್ವ ಆರೋಗ್ಯ ದಿನಾಚರಣೆ” ಗಾಯತ್ರಿ ಸುಂಕದ

ಆರೋಗ್ಯ ಸಂಗಾತಿ ಗಾಯತ್ರಿ ಸುಂಕದ “ವಿಶ್ವ ಆರೋಗ್ಯ ದಿನಾಚರಣೆ” ನಮ್ಮ ಆರೋಗ್ಯದ ಬಗ್ಗೆ  ಅರಿವು ಮೂಡಿಸಲು ಪ್ರತಿ ವರ್ಷ ಜುಲೈ 22ರಂದು ವಿಶ್ವ ಆರೋಗ್ಯ ದಿನಾರಣೆ ಆಚರಿಸಲಾಗುತ್ತಿದೆ.Sound mind in sound body. ಅನ್ನುವ ಹಾಗೆ ಆರೋಗ್ಯಕರ ಶರೀರದಲ್ಲಿ ಮಾತ್ರ ಆರೋಗ್ಯಕರ  ಮನಸ್ಸು ಇರಲು ಸಾಧ್ಯ. ಇದರ ಬಗ್ಗೆ ಜಾಗೃತಿ. ಮೂಡಿಸಲು ವಿಶ್ವ ಆರೋಗ್ಯ ದಿನಾಚಣೆ  ಆಚರಿಸಲಾಗುತ್ತಿದೆ.ದೈಹಿಕ ಆರೋಗ್ಯ ;- ಯೋಗ,ಧ್ಯಾನ ಪ್ರಾಣಾಯಾಮ, ಉತ್ತಮ ಮತ್ತು ಮಿತವಾದ. ಆಹಾರ ನಮ್ಮ ದೈಹಿಕ ಆರೋಗ್ಯವನ್ನು ಸುಸ್ಥಿತಿ ಯಲ್ಲಿ ಇಡುತ್ತದೆ.ಮಾನಸಿಕ ಆರೋಗ್ಯ;- ವಿನಾ ಕಾರಣ ಇನ್ನೊಬ್ಬರ ಮೇಲೆ ದ್ವೇಷ ಇಟ್ಟು ಕೊಂಡರೆ ಅದು ನಮ್ಮ ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ. ಉತ್ತಮ ಸಂಗೀತ,ಓದು,ಬರವಣಿಗೆ, ನಮ್ಮ ಮಾನಸಿಕ ಒತ್ತಡ ಕಡಿಮೆ ಮಾಡುತ್ತವೆ. ಸಾಮಾಜಿಕ ಆರೋಗ್ಯ ;- ಮನುಷ್ಯನು ಮೂಲತಃ  ಸಂಘ ಜೀವಿ.  ಇಲ್ಲಿ ಮನುಷ್ಯನು ಸಂಭಂಧಗಳೊಡನೆ ಬದುಕುತ್ತಾನೆ.ಉತ್ತಮ ತಿಳುವಳಿಕೆ,ಸಹಕಾರ, ನಮ್ಮನ್ನು  ಉತ್ತಮ ಪ್ರಜೆಗಳನ್ನಾಗಿ ಮಾಡುತ್ತವೆ. ಸಾಮಾಜಿಕ ಜಾಲತಾಣ ಗಳಲ್ಲಿ ಬರೆಯುವುದು, ಓದುವುದು, ಪರಸ್ಪರ ಚರ್ಚಿಸುವುದು ನಮ್ಮಲ್ಲಿ ಹೊಸತನ ತುಂಬುತ್ತವೆ. ನಮ್ಮಲ್ಲಿದ್ದ ಒಂಟಿತನ ಹೋಗಲಾಡಿಸಲು ಸಹಾಯ ಮಾಡುತ್ತದೆ.ಎಷ್ಟೋ ಜನರು ತಮ್ಮ ಒಂಟಿತನ ಹೋಗಲಾಡಿಸಲು ಸಾಮಾಜಿಕ ಜಾಲ ತಾಣಗಳಲ್ಲಿ ಖುಷಿ ಕಂಡು ಕೊಳ್ಳುತ್ತ್ತಾರೆ.ಸಾಂಸ್ಕೃತಿಕ ಆರೋಗ್ಯ ;-  ಉತ್ತಮ ಸಂಗೀತ, ಸಾಂಸ್ಕೃತಿಕ  ಕಾರ್ಯಕ್ರಮಗಳು, ಸಭೆ ಸಮಾರಂಭಗಳಲ್ಲಿ ಭಾಗ ವಹಿಸುವುದು ನಮ್ಮಲ್ಲಿ ಕ್ರಿಯಾ ಶೀಲತೆ ತುಂಬುತ್ತವೆ.ಬನ್ನಿ, ಉತ್ತಮ ಆರೋಗ್ಯ ಅಳವಡಿಸಿ ಕೊಳ್ಳೋಣ. ಗಾಯತ್ರಿ ಸುಂಕದ

“ವಿಶ್ವ ಆರೋಗ್ಯ ದಿನಾಚರಣೆ” ಗಾಯತ್ರಿ ಸುಂಕದ Read Post »

ಇತರೆ

ಊಸರವಳ್ಳಿ ವಿಶೇಷ ಲೇಖನ ಕವಿತಾ ಶ್ರೀನಿವಾಸ್ ನಾಯಕ್

ವಿಶೇಷ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್ ಊಸರವಳ್ಳಿ ಊಸರವಳ್ಳಿ ತನ್ನ ರಕ್ಷಣೆಗೆ ಬಣ್ಣ ಬದಲಾಯಿಸುತ್ತದೆ. ಅದು ಪ್ರಕೃತಿಯ ಕೊಟ್ಟ ಗುಣ. ಆದರೆ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಬಣ್ಣ ಬದಲಾಯಿಸಲು ಆರಂಭಿಸಿದಾಗ, ಸಂಬಂಧಗಳು, ನಂಬಿಕೆ ಮತ್ತು ಮಾನವೀಯತೆ ಗಾಯಗೊಳ್ಳುತ್ತವೆ. ಕೆಲವರು ನಮ್ಮ ಎದುರು ತುಂಬಾ ಸಿಹಿಯಾಗಿ ಮಾತನಾಡುತ್ತಾರೆ. “ನೀವು ಇಲ್ಲದಿದ್ದರೆ ನಾವು ಏನೂ ಅಲ್ಲ” ಎಂದು ಹೊಗಳುತ್ತಾರೆ. ಆದರೆ ನಾವು ಬೆನ್ನು ತಿರುಗಿಸಿದ ಕ್ಷಣದಲ್ಲೇ ಅದೇ ನಾಲಿಗೆ ನಮ್ಮ ಬಗ್ಗೆ ವಿಷ ಉಗುಳುತ್ತದೆ. ಸಂದರ್ಭ ಬದಲಾದರೆ ಮಾತು ಬದಲಾಗುತ್ತದೆ, ಲಾಭ ಕಂಡರೆ ನಿಲುವು ಬದಲಾಗುತ್ತದೆ, ಅಧಿಕಾರ ಕಂಡರೆ ಮುಖವೇ ಬದಲಾಗುತ್ತದೆ. ಇಂತಹವರನ್ನು ನೋಡಿದಾಗ ನೆನಪಾಗುವುದು ಊಸರವಳ್ಳಿಯೇ. ಆದರೆ ಒಂದು ವ್ಯತ್ಯಾಸ ಇದೆ. ಊಸರವಳ್ಳಿ ಬದುಕಲು ಬಣ್ಣ ಬದಲಾಯಿಸುತ್ತದೆ; ಕೆಲವು ಮನುಷ್ಯರು ಮತ್ತೊಬ್ಬರನ್ನು ಬಳಸಿಕೊಳ್ಳಲು ಬಣ್ಣ ಬದಲಾಯಿಸುತ್ತಾರೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿಯೂ ಇದೇ ದೃಶ್ಯ. ಮುಂದೆ ಹೊಗಳಿಕೆ, ಹಿಂದೆ ಟೀಕೆ. ಕೆಲಸ ಇದ್ದಾಗ ಆತ್ಮೀಯತೆ, ಕೆಲಸ ಮುಗಿದ ನಂತರ ಅಪರಿಚಿತನಂತೆ ವರ್ತನೆ. ನಿಜವಾದ ಸ್ನೇಹಕ್ಕಿಂತ ಸ್ವಾರ್ಥದ ಸಂಬಂಧಗಳು ಹೆಚ್ಚಾಗುತ್ತಿರುವುದು ವಿಷಾದದ ಸಂಗತಿ. ಆದರೆ ಬಣ್ಣ ಬದಲಾಯಿಸುವವರಿಗಿಂತ, ಯಾವ ಪರಿಸ್ಥಿತಿಯಲ್ಲೂ ತಮ್ಮ ಮೌಲ್ಯ ಮತ್ತು ವ್ಯಕ್ತಿತ್ವವನ್ನು ಬದಲಿಸದವರು ಸಮಾಜದ ನಿಜವಾದ ಸಂಪತ್ತು. ಅವರು ಕಡಿಮೆ ಇರಬಹುದು, ಆದರೆ ಅವರ ಮೇಲಿನ ನಂಬಿಕೆ ಎಂದಿಗೂ ಕಡಿಮೆಯಾಗುವುದಿಲ್ಲ. ಜೀವನದಲ್ಲಿ ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಿಲ್ಲ. ಆದರೆ ನಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವುದು ಮಾತ್ರ ನಮ್ಮ ಕೈಯಲ್ಲಿದೆ. ಸಂದರ್ಭಕ್ಕೆ ತಕ್ಕಂತೆ ಅಭಿಪ್ರಾಯ ಬದಲಾಗಬಹುದು, ಆದರೆ ಸ್ವಾರ್ಥಕ್ಕಾಗಿ ಗುಣ ಬದಲಾದರೆ ಅದು ವ್ಯಕ್ತಿತ್ವದ ಸೋಲು. ಆದ್ದರಿಂದ ಊಸರವಳ್ಳಿಯಂತೆ ಬಣ್ಣ ಬದಲಾಯಿಸುವುದಕ್ಕಿಂತ, ಮರದಂತೆ ಗಟ್ಟಿಯಾಗಿ ನಿಂತು ನೆರಳು ಕೊಡುವ ವ್ಯಕ್ತಿಯಾಗೋಣ. ಬಣ್ಣ ಬದಲಾಯಿಸುವ ಬದುಕಿಗಿಂತ, ನಂಬಿಕೆಗೆ ಪಾತ್ರವಾಗುವ ಬದುಕು ಹೆಚ್ಚು ಮೌಲ್ಯಯುತ.ವಂದನೆಗಳೊಂದಿಗೆ…ಕವಿತಾ ಶ್ರೀನಿವಾಸ್ ನಾಯಕ್ಕಾರ್ಕಳ, ಉಡುಪಿ ಜಿಲ್ಲೆ.

ಊಸರವಳ್ಳಿ ವಿಶೇಷ ಲೇಖನ ಕವಿತಾ ಶ್ರೀನಿವಾಸ್ ನಾಯಕ್ Read Post »

ಇತರೆ, ಲಹರಿ

“ಪ್ರೇಮ ವೈಫಲ್ಯ” ಕಾವ್ಯ ಸುಧೆ ಅವರ ಲಹರಿ

ಲಹರಿ ಸಂಗಾತಿ ಕಾವ್ಯ ಸುಧೆ “ಪ್ರೇಮ ವೈಫಲ್ಯ” ಹೀಗೆ ಒಮ್ಮೆ ಏನೋ ಕೆಲಸದ ನಿಮಿತ್ತ ಪರ ಊರಿಗೆ ಪ್ರಯಾಣ ಬೆಳೆಸಿದ್ದೆ. ಮನೆಯಿಂದ ರೈಲ್ವೆ ಸ್ಟೇಷನ್ ಗ್ ತಲುಪಿ ಟ್ರೈನ್ ಹಿಡಿದು ಒಂದು ಸೀಟ್ ಗಿಟ್ಟಿಸಿ ಕೊಳ್ಳುವುದೇ ಒಂದು ಸಾಧನೆ ಈಗಿನ ಕಾಲದಲ್ಲಿ ಎಲ್ಲಿಂದ ಎಲ್ಲಿಗೆ ಹೋಗಿ ಜನವೋ ಜನ, ನನಗೆ ಒಮ್ಮೊಮ್ಮೆ ಮನೆಯಲ್ಲಿ ಯಾರೂ ಇರುವುದಿಲ್ಲವೇ ಎಲ್ಲರೂ ಎಲ್ಲಿಗೆ ಹೀಗೆ ಹೋಗುತ್ತಾರೆ ಎಲ್ಲಿ ನೋಡಿದರು ಜನಗಳ ಜಾತ್ರೆ ಎಂದನಿಸುವುದುಂಟು.ಹಾಗೆಯೇ ಯೋಚಿಸುತ್ತ ಕುಳಿತಿರಲು ಯಾರದೋ ಮೊಬೈಲ್ ನಿಂದ ಹಾಡೊಂದು ಕೇಳಿಸಿತು ಅದು ನನ್ನ ಗಮನ ಸೆಳೆಯಿತು ಅದೊಂದು ಭಾವಗೀತೆ ಮೌನದಲ್ಲಿ ಅಳು ಮಾತಿನಲ್ಲಿ ನಗುಎಂಬ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಸಾಹಿತ್ಯದ ಅರ್ಥಗರ್ಭಿತ ಹಾಡು ನೀವೂ ಒಮ್ಮೆ ಕೇಳಬೇಕಸಾಹಿತ್ಯ :   ಮೌನದಲ್ಲಿ ಅಳು ಮಾತಿನಲ್ಲಿ ನಗುನಿನಗೆ ನಿನ್ನ ಹೆಗಲುಜಗದ ಎದುರಿಗೆ ಹರಡಿ ಕುಳಿತರೆನೋವಿಗಿಲ್ಲ ಮಡಿಲು ತಬ್ಬಿದ ನೆಲವೆ ಕುಸಿದು ಬಿದ್ದರೆದೂರುವೆ ಯಾರನು ಕರೆದು?ನಡೆಯಲೆ ಬೇಕು ಒಬ್ಬರೆ ಇಲ್ಲಿಬುತ್ತಿಯ ಹಂಗನು ತೊರೆದು ಕಣ್ಣಿಗೆ ಕಾಣದ ಮರೆಗಿನ ಅಲಗೆನಿನ್ನ ಗುರಿಯು ಯಾರಿಲ್ಲಿ?ಎಲ್ಲವ ಕಳಚಿ ಕುಳಿತಿಹ ಜೀವಕೆಹೆದರಿಕೆ ಏನಿಹುದಿಲ್ಲಿ? ಹೇಗೋ ಏನೋ ಮುಗಿವುದು ಸಮಯಯಾವುದು ಇಲ್ಲಿ ಅನಂತ?ವೇಷವ ಕಳಚಿ ನಡೆಯುವ ಬದುಕುಪಾತ್ರದೊಳಗೆ ಜೀವಂತ!! ಹೌದಲ್ಲವೇ ನಿಜ ಇದರೊಂದಿಗೆ ಯೋಚಿಸಿದಾಗ ಎಷ್ಟೋ ಜನ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ಶರಣಾಗುವುದು, ಎಲ್ಲವನ್ನು ಕಳೆದುಕೊಂಡವರ ಹಾಗೆ ಜೀವನದಲ್ಲಿ ಇನ್ನೇನು ಇಲ್ಲ ಎಂದು ನೋವನನುಭವಿಸುವುದನ್ನು ಕಂಡಿದ್ದೇವೆ. ಅದರ ಬಗ್ಗೆ ಹೀಗೊಂದು ಚಿಂತನೆ.ಮಾನವ ಸಂಬಂಧಗಳು ತೀರಾ ಸಂಕೀರ್ಣ ಕ್ಲಿಷ್ಟಕರ. ಇಂದಿಗೆ ಬೇಡವೆನಿಸಿದ್ದು ಮುಂದೊಂದು ದಿನ ಆಪ್ತವಾಗುತ್ತದೆ. ಆಪ್ತವಾದ ವಸ್ತು ವ್ಯಕ್ತಿಗಳು ಅಸಹ್ಯವಾಗುತ್ತವೆ. ಇಂತಹುದೇ ಪ್ರೇಮ ಸಂಬಂಧದ ಸಂದಿಗ್ಧತೆಯಲ್ಲಿ ಕಂಡುಬರುವ ಪಾತ್ರಗಳು.ರಾಧೆಕೃಷ್ಣ ರ ಪ್ರೇಮದ ಬಗ್ಗೆ ಎಲ್ಲರಿಗೂ ತಿಳಿದಿರುವುದೇ ಅವರು ಮೋಹದ ಪರಾಕಾಷ್ಠೆ, ಪ್ರೀತಿಯ ವೈಭೋಗದಲ್ಲಿ ಅನುಭಾವಿಕ ದೈವಿಕ ಪ್ರೇಮದ ಪ್ರತಿಮೆಗಳು. ಅವರು ವಿದ್ವಂಸಕ ಪ್ರೀತಿಗೆ ಉಪಕ್ರಮ ಪ್ರತ್ಯೌಷಧ. ಆಕಾಂಕ್ಷೆಗಳಿಲ್ಲದ ದೈಹಿಕ ಬಯಕೆಯ ವಾಂಛೆಯಿಂದ ಹೊರತಾದ ಸಮರ್ಪಣಾ ಪ್ರೇಮಭಾವ.ಆದರೆ ಇಂದು ಅದನ್ನು ಹುಡುಕುತ್ತ ಭ್ರಮ ನಿರಸನದ ದಾರಿ ಹಿಡಿದವರೇ ಬಹಳ. ಅಪರೂಪದಲ್ಲೊಂದು ಅಂತಹ ಶ್ರೀಮಂತ ಪ್ರೇಮ ದಕ್ಕಿಸಿಕೊಂಡವನ ಜೀವನ ಪಾವನ. ಸ್ವಚ್ಛ ಸರಳ ಶುಧ್ಧ ಮನಸ್ಸು ತನ್ನದೆನ್ನುವ ಅಪರಿಮಿತ ಆನಂದವೇ ಸಾಕ್ಷಾತ್ಕಾರದ ನೆಲೆ. ಗಂಡು ಹೆಣ್ಣುಗಳ ಬದುಕಿನ ಸವಾರಿಯಲ್ಲಿ ಕೈಗೆಟುಕಿದ್ದೆಲ್ಲ ಸಿಹಿಯಲ್ಲ. ನಮ್ಮ ಸುತ್ತಲಿನ ಪ್ರೀತಿ ಪಾತ್ರರೊಡನೆ ಅನುಭವಿಸಿದ ಕಳೆದ ಕ್ಷಣಗಳೆಲ್ಲ ಎಲ್ಲವೂ ಸಂತಸವನ್ನು ನೀಡುವುದಿಲ್ಲ. ಕೆಲವೇ ಕೆಲವು ಬದುಕಿನುದ್ದಕ್ಕೂ ಖುಷಿ ನೀಡುತ್ತ ಸಂಬಂಧಗಳ ಇನ್ನಷ್ಟು ಗಾಢವಾಗಿಸುತ್ತ ಹೋಗುತ್ತವೆ. ಪ್ರೇಮ ವೈಫಲ್ಯವು ತೀವ್ರವಾದ ನೋವನ್ನು ಉಂಟುಮಾಡುತ್ತದೆ, ಆದರೆ ಅದು ನಿಮ್ಮ ಜೀವನದ ಅಂತ್ಯವಲ್ಲ. ಇದನ್ನು ಐಸ್‌ಕ್ರೀಮ್ ಕೋನ್ ಕೈಯಿಂದ ಜಾರಿ ಬಿದ್ದಂತೆ ಎಂದು ಭಾವಿಸಿ; ಅದು ಬೇಸರದ ಸಂಗತಿಯಾದರೂ, ಜಾರಿ ಹೋದದ್ದು ನಮ್ಮದಲ್ಲ ಅಲ್ಲವೇ….. ಪ್ರೀತಿ ಎಂದರೆ ನಿಮ್ಮ ಪಾಲಿಗೆ ಏನು? ಯಾರ ಬಗ್ಗೆಯಾದರೂ ವಿಶೇಷ ಕಾಳಜಿ ವಹಿಸುವುದು, ವಿಶೇಷ ವ್ಯಕ್ತಿಯೊಬ್ಬರಿಗಾಗಿ ಸಾಮಾನ್ಯಕ್ಕಿಂತ ಹೆಚ್ಚಿನದನ್ನು ಮಾಡುವುದು ಅಥವಾ ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಯಾರ ಮೇಲಾದರೂ ಅಪಾರ ಪ್ರೀತಿಯನ್ನು ಹೊಂದುವ ಭಾವನೆಯನ್ನು ನೀವು ಖಂಡಿತವಾಗಿಯೂ ಅನುಭವಿಸಿರುತ್ತೀರಿ. ಪ್ರೀತಿಯ ಕುರಿತಾದ ನಿಮ್ಮ ವ್ಯಾಖ್ಯಾನ ಬೇರೆಯಾಗಿರಬಹುದು, ಆದರೆ ಪ್ರೀತಿ ಎಂಬುದು ಎಲ್ಲೆಡೆ ವ್ಯಾಪಿಸಿದೆ ಮತ್ತು ನೀವು ಅದರೊಂದಿಗೆ ಖಂಡಿತವಾಗಿಯೂ ಪರಿಚಯ ಮಾಡಿಕೊಂಡಿರುತ್ತೀರಿ. ಪ್ರೇಮದಲ್ಲಿರುವುದೇ ಜಗತ್ತಿನ ಅತ್ಯಂತ ಅದ್ಭುತವಾದ ಅನುಭವ; ಆದರೆ ಆ ಪ್ರೀತಿ ಪರಸ್ಪರ ವಿನಿಮಯವಾಗದಿದ್ದಾಗ, ಅದಕ್ಕೆ ತಕ್ಕುದಾದ ತೀವ್ರ ವೇದನೆ ಉಂಟಾಗುತ್ತದೆ ಮತ್ತು ನಿಮ್ಮ ಪ್ರಪಂಚವೇ ಕೊನೆಗೊಳ್ಳುತ್ತಿದೆ ಎಂಬ ಭಾವನೆ ಮೂಡಬಹುದು. ಆದಾಗ್ಯೂ, ಪ್ರೇಮ ಸಂಬಂಧವೊಂದು ವಿಫಲವಾದ ನಂತರವೂ ಜೀವನ ಮುಂದುವರಿಯುತ್ತದೆ. ಸಂಬಂಧವೊಂದು ಮುರಿದುಬಿದ್ದಾಗ ಉಂಟಾಗುವ ನೋವು ಅತ್ಯಂತ ಕಠಿಣವೆನಿಸಿದರೂ, ಪ್ರೀತಿಯೊಂದಿಗೆ ನೋವಿನ ಸಾಧ್ಯತೆಯೂ ಇದ್ದೇ ಇರುತ್ತದೆ. ನೋವನ್ನು ಅನುಭವಿಸಲು ಇಷ್ಟಪಡದಿದ್ದರೆ ಪ್ರೀತಿಸಲು ಸಾಧ್ಯವಿಲ್ಲ. ನಿಮ್ಮ ಸಂಗಾತಿಯು ನಿಮ್ಮ ಪ್ರೀತಿಗೆ ಪ್ರತಿಯಾಗಿ ಪ್ರೀತಿಯನ್ನು ನೀಡದಿದ್ದಾಗ ಅದನ್ನು ಒಪ್ಪಿಕೊಳ್ಳುವುದು ನಿಮಗೆ ಕಷ್ಟವಾಗಬಹುದು, ಆದರೆ ಜೀವನವನ್ನು ಮುಂದುವರಿಸಲು ನೀವು ಅದನ್ನು ಎದುರಿಸಿ ಮುಂದುವರೆಯಲೇ ಬೇಕು. ಪ್ರೇಮದಲ್ಲಿನ ವೈಫಲ್ಯವು ಜೀವನದ ಅಂತ್ಯವಲ್ಲ; ಬದಲಿಗೆ, ನಿಮ್ಮ ಜೀವನದ ಪಯಣದಲ್ಲಿ ನಿಮ್ಮ ಸಂಗಾತಿಯ ಸ್ಥಾನವನ್ನು ಮುಂದೆಂದಾದರೂ ಇನ್ನೊಬ್ಬರು ತುಂಬಲಿದ್ದಾರೆ ಎಂಬುದನ್ನು ಮಾತ್ರ ಅದು ಸೂಚಿಸುತ್ತದೆ. ಆದ್ದರಿಂದ, ಆ ವಿಫಲ ಸಂಬಂಧವನ್ನು ಹಿಂದಕ್ಕೆ ಹಾಕಿ ಮುಂದೆ ಸಾಗಿರಿ; ಆಗ ಮಾತ್ರ ಭವಿಷ್ಯವನ್ನೂ ಮತ್ತು ಅದು ನಿಮಗಾಗಿ ಕಾದಿರಿಸಿರುವ ವಿಷಯಗಳನ್ನೂ ನೀವು ಅಪ್ಪಿಕೊಳ್ಳಲು ಸಾಧ್ಯವಾಗುತ್ತದೆ. ಅತ್ಯಂತ ಸೂಕ್ತವಾದ ಸಂಬಂಧವು ಯಾವಾಗ ನಿಮ್ಮ ಜೀವನಕ್ಕೆ ಬಂದು ನಿಮ್ಮ ಗಮನ ಸೆಳೆಯುತ್ತದೆ ಎಂಬುದು ನಿಮಗೆ ತಿಳಿದಿರುವುದಿಲ್ಲ. ವಿಫಲವಾದ ಪ್ರೇಮ ಸಂಬಂಧವನ್ನು ತಕ್ಷಣವೇ ಮರೆಯಲು ಸಾಧ್ಯವಾಗದಿದ್ದರೂ, ನೀವು ತಾಳ್ಮೆಯಿಂದಿರಬೇಕು ಮತ್ತು ಚೇತರಿಸಿಕೊಳ್ಳಲು ನಿಮಗೆ ನೀವೇ ಸ್ವಲ್ಪ ಸಮಯವನ್ನು ನೀಡಬೇಕು. ನಮ್ಮ ತಪ್ಪುಗಳನ್ನು ಗುರುತಿಸುವುದರಲ್ಲಿ ಮತ್ತು ಅವು ಇನ್ನು ಮುಂದೆ ತಪ್ಪುಗಳಾಗದೇ ಇರುವವರೆಗೂ ಅವುಗಳೊಳಗೆ ಆಳವಾಗಿ ಮುಳುಗುವುದರಲ್ಲಿ ಅನುಗ್ರಹವಿದೆ. ವೈಫಲ್ಯದೊಳಗೆ ಜೀವನ ಪಾಠಗಳಿವೆ. ವೈಫಲ್ಯವು ಮನುಷ್ಯನಾಗಿ ನಮ್ಮ ಮೌಲ್ಯದ ಬಗ್ಗೆ ಅಲ್ಲ, ಆದರೆ ಸ್ವತಂತ್ರ ಮತ್ತು ಅವಲಂಬಿತ ಕ್ಷಣಗಳು ಮತ್ತು ಅವುಗಳಿಂದ ನಾವು ಕಲಿಯಬಹುದಾದ ಸಣ್ಣ ಅಥವಾ ದೊಡ್ಡ ಪಾಠಗಳ ಬಗ್ಗೆ. ವೈಫಲ್ಯದಲ್ಲಿರುವ ಸಾಧ್ಯತೆಗಳನ್ನು – ಅಂದರೆ ಅದರಲ್ಲಿರುವ ನಗು, ಸಂತೋಷ ಮತ್ತು ಹಾಸ್ಯವನ್ನು – ಕಾಣಲು ಕಲಿಯುವುದರಿಂದ ತಿರಸ್ಕಾರ, ಅವಮಾನ ಅಥವಾ ಸ್ವಯಂ-ಮೌಲ್ಯದ ಬಗೆಗಿನ ಸಂಶಯದಿಂದ ಉಂಟಾಗುವ ನೋವು ಮಾಯವಾಗುವುದಿಲ್ಲ. ವೈಫಲ್ಯವು ಈಗಲೂ ನೋವುಂಟುಮಾಡುತ್ತದೆ ಮತ್ತು ಅಹಿತಕರವಾಗಿಯೇ ಇರುತ್ತದೆ. ಆದರೆ, ವೈಫಲ್ಯದ ಕುರಿತಾದ ನಮ್ಮ ಹೊಸ ದೃಷ್ಟಿಕೋನವು, ಯಾವುದೇ ಅವಕಾಶವಿಲ್ಲ ಎಂದು ನಮಗೆ ಅನ್ನಿಸಿದಾಗಲೂ ಅದರಲ್ಲಿರುವ ಅವಕಾಶ ಮತ್ತು ಸಹಜತೆಯನ್ನು ಅಪ್ಪಿಕೊಳ್ಳಲು ನಮಗೆ ಕಲಿಸುತ್ತದೆ.ಆದ್ದರಿಂದ ಸಹಜವಾಗಿ ವಾಸ್ತವವನ್ನು ಒಪ್ಪಿಕೊಂಡು ಅಪ್ಪಿಕೊಂಡು ಜೀವನವನ್ನು ಸಂತೋಷದಿಂದ ಕಳೆಯಬೇಕು ಅಲ್ಲವೇ ನೀವೆಂನಂತೀರಿ…….. ಕಾವ್ಯ ಸುಧೆ.

“ಪ್ರೇಮ ವೈಫಲ್ಯ” ಕಾವ್ಯ ಸುಧೆ ಅವರ ಲಹರಿ Read Post »

ಇತರೆ

“ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಪೂರ್ಣಿಮಾ ಮಹೇಶ ಮುತ್ನಾಳ

ವಿಶೇಷ ಸಂಗಾತಿ ಪೂರ್ಣಿಮಾ ಮಹೇಶ ಮುತ್ನಾಳ “ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?-ಬಸವಣ್ಣನವರ ದೃಷ್ಟಿಯಲ್ಲಿ “”ನೈಜ ಶೃಂಗಾರ””“ನೀರಿಂಗೆ ನೈದಿಲೆಯೆ ಶೃಂಗಾರಸಮುದ್ರಕ್ಕೆ ತೆರೆಯೆ ಶೃಂಗಾರನಾರಿಗೆ ಗುಣವೆ ಶೃಂಗಾರಗಗನಕ್ಕೆ ಚಂದ್ರಮನೆ ಶೃಂಗಾರನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ” ಬಾಹ್ಯ ಸೌಂದರ್ಯಕ್ಕೆ ಮಾರುಹೋಗುವ ಇಂದಿನ ಜಗತ್ತಿನಲ್ಲಿ ‘ನೈಜ ಶೃಂಗಾರ’ ಅಥವಾ ನೈಜ ಸೌಂದರ್ಯ ಎಂದರೇನು ಎಂಬುದನ್ನು ವಿಶ್ವಗುರು ಬಸವಣ್ಣನವರು ಅತ್ಯಂತ ಸರಳ ಉದಾಹರಣೆಗಳ ಮೂಲಕ ಈ ವಚನದಲ್ಲಿ ಬಿಡಿಸಿಟ್ಟಿದ್ದಾರೆ. ಪ್ರಕೃತಿಯ ಸಹಜ ಗುಣಗಳನ್ನು ಲೌಕಿಕ ಬದುಕಿಗೆ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಸಮೀಕರಿಸುವ ಅವರ ದೃಷ್ಟಿಕೋನ ಸಾರ್ವಕಾಲಿಕವಾದುದು.ಲೌಕಿಕ ಜಗತ್ತಿಗೆ ಪೂರಕವಾದ ಅರ್ಥವನ್ನು ನೋಡುವುದಾದರೆ,ಲೌಕಿಕ ಅಥವಾ ಭೌತಿಕ ಜಗತ್ತಿನಲ್ಲಿ ನಾವು ದಿನನಿತ್ಯ ನೋಡುವುದೆಲ್ಲವೂ ಬಾಹ್ಯ ಆಕರ್ಷಣೆಗಳನ್ನೇ. ಆದರೆ ಅಪ್ಪ ಬಸವಣ್ಣನವರು ನೈಜ ಶೃಂಗಾರವು ಅದರ ಅಂತರ್ಗತ ಗುಣದಲ್ಲಿದೆ ಎನ್ನುತ್ತಾರೆ. ಕೇವಲ ನೀರಿದ್ದರೆ ಸಾಲದು, ಅದರಲ್ಲಿ ಅರಳುವ ನೈದಿಲೆ  ಆ ನೀರಿಗೆ ದೈವಿಕ ಸೌಂದರ್ಯವನ್ನು ನೀಡುತ್ತದೆ. ಅದೇ ರೀತಿಸಮುದ್ರಕ್ಕೆ ಅಲೆಯು ಸೌಂದರ್ಯವನ್ನು ನೀಡುತ್ತದೆ.ನಿಶ್ಚಲವಾಗಿ ನಿಂತ ನೀರು ಸಮುದ್ರವೆನಿಸದು. ನಿರಂತರವಾಗಿ ಏರಿಳಿಯುವ ಅಲೆಗಳೇ ಸಮುದ್ರದ ಜೀವಂತಿಕೆ ಮತ್ತು ಶೃಂಗಾರ. ನಮ್ಮ ಬದುಕಿನ ಏಳುಬೀಳುಗಳೂ ಸಹ ಬದುಕಿನ ಜೀವಂತಿಕೆಯನ್ನು ತೋರ್ಪಡಿಸುತ್ತವೆ.ಹಾಗೆಯೇ ..ನಾರಿಗೆ ಗುಣವೇ ಶೃಂಗಾರ: ಸಮಾಜದಲ್ಲಿ ಹೆಣ್ಣನ್ನು ಕೇವಲ ದೈಹಿಕ ಸೌಂದರ್ಯದ ತಕ್ಕಡಿಯಲ್ಲಿ ಅಳೆಯುವ ಕಾಲದಲ್ಲಿ, ಬಸವಣ್ಣನವರು ಹೆಣ್ಣಿಗೆ ಆಕೆಯ ‘ಸದ್ಗುಣ, ವಿವೇಕ ಮತ್ತು ನಡತೆಯೇ’ ನಿಜವಾದ ಶೃಂಗಾರ ಎಂದರು. ಬಾಹ್ಯ ಆಭರಣಗಳು ಕ್ಷಣಿಕ, ಆದರೆ ಆಕೆಯ ಉದಾತ್ತ ಗುಣಗಳು ಇಡೀ ಕುಟುಂಬ ಮತ್ತು ಸಮಾಜವನ್ನು ಬೆಳಗುತ್ತವೆ. ಇದು ಇಂದಿನ ಆಧುನಿಕ ಜಗತ್ತಿನ ಸ್ತ್ರೀ ಸಬಲೀಕರಣಕ್ಕೂ ಅತ್ಯಂತ ಪ್ರಸ್ತುತವಾದ ವಿಚಾರವಾಗಿದೆ.ಗಗನಕ್ಕೆ ಚಂದ್ರಮನೇ ಶೃಂಗಾರ ಅಂತ ನೋಡಿದಾಗ ..ವಿಶಾಲವಾದ ಕತ್ತಲ ಆಕಾಶಕ್ಕೆ ಕೇವಲ ನಕ್ಷತ್ರಗಳಿಗಿಂತ ಏಕಾಂಗಿಯಾಗಿ ನಿಂತು ತಂಪು ಬೆಳಕನ್ನು ನೀಡುವ ಚಂದ್ರನೇ ನಿಜವಾದ ಆಭರಣ.ಆಧ್ಯಾತ್ಮಿಕವಾದ  ಅರ್ಥಾನುಸಂಧಾನವನ್ನು  ನೋಡುವುದಾದರೆ,ವಚನದ ಕೊನೆಯ ಸಾಲಿನಲ್ಲಿ ಬಸವಣ್ಣನವರು ಲೌಕಿಕತೆಯಿಂದ ಆಧ್ಯಾತ್ಮದ ಅತ್ಯುನ್ನತ ಶಿಖರಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ. “ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ” ಎನ್ನುವ ಮೂಲಕ ಶರಣರ ನಿಜವಾದ ಸೌಂದರ್ಯವನ್ನು ವ್ಯಾಖ್ಯಾನಿಸುತ್ತಾರೆ.ನೊಸಲ ವಿಭೂತಿ ಎಂದು… ಆಧ್ಯಾತ್ಮಿಕವಾಗಿ ವಿಭೂತಿ ಎಂದರೆ ಕೇವಲ ಬೂದಿಯಲ್ಲ. ಅದು ‘ಅಹಂಕಾರದ ಭಸ್ಮ’. ದೇಹವು ಒಂದು ದಿನ ಬೂದಿಯಾಗಿಯೇ ತೀರುತ್ತದೆ ಎಂಬ ನಶ್ವರತೆಯ ಅರಿವು.ಶರಣನಾದವನಿಗೆ ಐಹಿಕ ಭೋಗಗಳು, ಅಧಿಕಾರ, ಸಂಪತ್ತು ಯಾವುದೂ ಆಭರಣಗಳಲ್ಲ. ತನುವನ್ನು ದಂಡಿಸಿ, ಮನದ ಕಲ್ಮಷವನ್ನು ಸುಟ್ಟು, ಅಹಂ ಭಾವವನ್ನು ಭಸ್ಮ ಮಾಡಿ ಹಣೆಯ ಮೇಲೆ ಧರಿಸುವ ವಿಭೂತಿಯೇ ಆತನ ಜ್ಞಾನದ ಸಂಕೇತ.ಅಹಂಕಾರ ಅಳಿದು, ದೈವತ್ವವನ್ನು ಮೈಗೂಡಿಸಿಕೊಂಡ ಶರಣನ ಮುಖದಲ್ಲಿ ಮೂಡುವ ಶಾಂತಿ ಮತ್ತು ಜ್ಞಾನದ ತೇಜಸ್ಸೇ ಆತನ ನಿಜವಾದ ಶೃಂಗಾರವೆಂದು ಅರುಹಿದ್ದಾರೆ.ಬಸವಣ್ಣನವರ ಈ ವಚನವು ನಮಗೆ ಬದುಕಿನ ದಾರಿದೀಪವಾಗಿದೆ. ಕೇವಲ ತೋರ್ಪಡಿಕೆಯ, ಕೃತಕವಾದ ಅಲಂಕಾರಗಳ ಬೆನ್ನತ್ತಿ ಹೋಗುತ್ತಿರುವ ಇಂದಿನ ಸಮಾಜಕ್ಕೆ, ತನು-ಮನಗಳ ಶುದ್ಧತೆ ಹಾಗೂ ಸದ್ಗುಣಗಳೇ ನಿಜವಾದ ಆಸ್ತಿ ಎಂಬುದನ್ನು ಇದು ನೆನಪಿಸುತ್ತದೆ. ಪ್ರಕೃತಿಯಲ್ಲಿ ಹೇಗೆ ಸಹಜತೆ ಸೌಂದರ್ಯವೋ, ಹಾಗೆಯೇ ಮನುಷ್ಯನ ಬದುಕಿನಲ್ಲಿ ಸದ್ಗುಣ ಮತ್ತು ದೈವಿಕ ಭಕ್ತಿಯೇ ನಿಜವಾದ ಶೃಂಗಾರ ಎಂಬುದನ್ನು ಅರಿತು ಬಾಳಬೇಕಿದೆ.ಅದೇ ರೀತಿ ಇಂದಿನ ‘ಇನ್‌ಸ್ಟಾಗ್ರಾಮ್’ ಮತ್ತು ‘ಫಿಲ್ಟರ್’ಗಳ ಜಗತ್ತಿನಲ್ಲಿ ಯುವ ಪೀಳಿಗೆಗೆ ಸೌಂದರ್ಯ ಎಂದರೆ ಕೇವಲ ಬಾಹ್ಯ ರೂಪ, ಬ್ರಾಂಡೆಡ್ ಬಟ್ಟೆಗಳು ಮತ್ತು ಫೋಟೋಗಳಿಗೆ ಸಿಗುವ ಲೈಕ್ಸ್‌ಗಳಷ್ಟೇ ಆಗಿಬಿಟ್ಟಿದೆ. ಕೃತಕ ಸೌಂದರ್ಯದ ಬೆನ್ನತ್ತಿ ಮುಖಕ್ಕೆ ಮೇಕಪ್ ಮಾಡಿಕೊಳ್ಳುವ ಉತ್ಸಾಹದಲ್ಲಿ, ನಾವು ನಮ್ಮ ಮನಸ್ಸನ್ನು ಸಜ್ಜುಗೊಳಿಸಲು ಮರೆಯುತ್ತಿದ್ದೇವೆ.ಈ ಹೊತ್ತಿನಲ್ಲಿ ಬಸವಣ್ಣನವರ ಈ ವಚನ ಯುವಜನತೆಗೆ ಒಂದು ದಿವ್ಯೌಷಧವೆಂದು ಹೇಳಬಹುದು.ಪ್ರೊಫೈಲ್ ಅಂದಕ್ಕಿಂತ ಕ್ಯಾರೆಕ್ಟರ್ ಮುಖ್ಯವಾದುದು… ಸಾಮಾಜಿಕ ಜಾಲತಾಣದ ಪ್ರೊಫೈಲ್ ಸುಂದರವಾಗಿ ಕಾಣಿಸುವುದಕ್ಕಿಂತ, ನಮ್ಮ ವ್ಯಕ್ತಿತ್ವ  ಸುಂದರವಾಗಿರಬೇಕು. ಹೆಣ್ಣಾಗಲಿ, ಗಂಡಾಗಲಿ ಅವರ ನಡತೆ ಮತ್ತು ಸದ್ಗುಣಗಳೇ ನಿಜವಾದ ಆಕರ್ಷಣೆಯಾಗಿರುತ್ತವೆ.ಸವಾಲುಗಳೇ ನಮ್ಮ ಶಕ್ತಿಯಾಗಬೇಕು. ಸಮುದ್ರದ ಅಲೆಗಳು ಅದಕ್ಕೆ ಸೌಂದರ್ಯ ತರುವಂತೆ,  ಬದುಕಿನಲ್ಲಿ ಎದುರಾಗುವ ಸೋಲು, ಗೆಲುವು ಹಾಗೂ ಸವಾಲುಗಳೇ ನಮ್ಮನ್ನು ಗಟ್ಟಿಗೊಳಿಸುತ್ತವೆ. ಸವಾಲುಗಳಿಗೆ ಹೆದರಿ ಓಡುವ ಬದಲು, ಅವುಗಳನ್ನು ಬದುಕಿನ ಸಹಜ ಏರಿಳಿತಗಳೆಂದು ಸ್ವೀಕರಿಸಬೇಕು.ಅಹಂಕಾರ ಬಿಟ್ಟು ವಿನಯಶೀಲರಾಗಿ ಬಾಳಬೇಕು. ಶರಣರಿಗೆ ಹಣೆಯ ಮೇಲಿನ ವಿಭೂತಿ ಹೇಗೆ ಅಹಂಕಾರದ ನಾಶವನ್ನು ನೆನಪಿಸುತ್ತದೆಯೋ, ಹಾಗೆಯೇ ಇಂದಿನ ಯುವಜನತೆ ತಮಗಿರುವ ಶಿಕ್ಷಣ, ಉದ್ಯೋಗ ಅಥವಾ ಜ್ಞಾನದ ಬಗ್ಗೆ ಅಹಂ ಪಡದೆ, ವಿನಯವಂತರಾಗಿ ಬಾಳುವುದನ್ನು ಕಲಿಯಬೇಕಿದೆ.ಬಾಹ್ಯ ಶೃಂಗಾರವು ವಯಸ್ಸಿನೊಂದಿಗೆ ಕರಗಿಹೋಗುತ್ತದೆ, ಆದರೆ ಅಂತರಂಗದ ಶೃಂಗಾರವಾದ ‘ಮಾನವೀಯತೆ’ ಮತ್ತು ‘ಸತ್ ಚಿಂತನೆ’ ನಮ್ಮನ್ನು ಸಾವಿನ ನಂತರವೂ ಜೀವಂತವಾಗಿರಿಸುತ್ತದೆ. ಬನ್ನಿ, ಕೃತಕ ಮುಖವಾಡಗಳನ್ನು ಕಳಚಿಟ್ಟು, ಬಸವಣ್ಣನವರು ತೋರಿದ ಸಹಜ ಮತ್ತು ಸಾತ್ವಿಕ ಸೌಂದರ್ಯದ ಹಾದಿಯಲ್ಲಿ ಸಾಗೋಣ.ಒಂದು ಶ್ಲೋಕದ ಪ್ರಕಾರ ನೋಡಿದಾಗ…ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ಜ್ವಲಾಃ |ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ ||ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ |ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ .ಮನುಷ್ಯನಿಗೆ ತೋಳುಬಂದಿ  ಆಭರಣವಲ್ಲ, ಚಂದ್ರನಂತೆ ಹೊಳೆಯುವ ಮುತ್ತಿನ ಹಾರಗಳಾಗಲಿ, ಸುಗಂಧ ದ್ರವ್ಯಗಳ ಲೇಪನವಾಗಲಿ, ಸ್ನಾನವಾಗಲಿ, ತಲೆಗೆ ಮುಡಿಯುವ ಹೂವುಗಳಾಗಲಿ ನಿಜವಾದ ಸೌಂದರ್ಯವನ್ನು ನೀಡುವುದಿಲ್ಲ. ಬದಲಿಗೆ ಸಂಸ್ಕಾರಯುತವಾದ ಮತ್ತು ವಿನಯದಿಂದ ಕೂಡಿ ಆಡುವ ‘ಒಳ್ಳೆಯ ಮಾತು’ ಒಂದೇ ಮನುಷ್ಯನಿಗೆ ಶಾಶ್ವತವಾದ ಆಭರಣ. ಲೋಕದ ಉಳಿದೆಲ್ಲಾ ಭೌತಿಕ ಆಭರಣಗಳು ಕಾಲಕ್ರಮೇಣ ಸವಿದು ಹೋಗುತ್ತವೆ, ಆದರೆ ಒಳ್ಳೆಯ ನಡತೆ ಹಾಗೂ ಮೃದುವಾದ ವಾಗ್ಭೂಷಣ ಮಾತ್ರ ಎಂದಿಗೂ  ಕ್ಷಯಿಸದ ನೈಜ ಶೃಂಗಾರವಾಗಿದೆಹೀಗೆ, ಅಂದಿನಿಂದ ಇಂದಿನವರೆಗೆ ಭಾರತೀಯ ತತ್ವಚಿಂತನೆಯು ಬಾಹ್ಯ ತೋರ್ಪಡಿಕೆಯ ಸೌಂದರ್ಯಕ್ಕಿಂತ ಅಂತರಂಗದ ಗುಣ ಸೌಂದರ್ಯಕ್ಕೇ ಅಗ್ರಸ್ಥಾನ ನೀಡುತ್ತಾ ಬಂದಿದೆ ಎಂಬುದಕ್ಕೆ ಬಸವಣ್ಣನವರ ಈ ವಚನ ಮತ್ತು ಈ ಶ್ಲೋಕವೇ ಅತ್ಯುತ್ತಮ ಸಾಕ್ಷಿ. ಪೂರ್ಣಿಮಾ ಮಹೇಶ ಮುತ್ನಾಳ.ಅಳ್ನಾವರ

“ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಪೂರ್ಣಿಮಾ ಮಹೇಶ ಮುತ್ನಾಳ Read Post »

You cannot copy content of this page

Scroll to Top