ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

“ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ”ಜಿ. ಎಸ್. ಶರಣು

ಜೀವನ ಸಂಗಾತಿ ಜಿ. ಎಸ್. ಶರಣು “ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ” ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ, ನಿಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಿ. ಈ ಜಗತ್ತಿನಲ್ಲಿ ಪ್ರಕೃತಿ ಸೃಷ್ಟಿಸಿರುವ ಕೋಟಿ ಕೋಟಿ ಜೀವಿಗಳಲ್ಲಿ, ಒಬ್ಬರ ಬೆರಳಚ್ಚಿನಂತೆ ಮತ್ತೊಬ್ಬರ ಬೆರಳಚ್ಚು ಇರುವುದಿಲ್ಲ. ಪ್ರಕೃತಿಯ ಈ ನಿಯಮವೇ ಸಾರಿ ಹೇಳುತ್ತದೆ, ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯ ಮತ್ತು ಅದ್ಭುತ ಎಂದು. ಆದರೂ ವಿಪರ್ಯಾಸವೆಂದರೆ, ನಾವು ಈ ಸತ್ಯವನ್ನು ಮರೆತು, ನಮ್ಮನ್ನು ನಾವು ಬೇರೆಯವರೊಂದಿಗೆ ಹೋಲಿಸಿಕೊಳ್ಳುತ್ತಾ, ನಮ್ಮ ಬಗ್ಗೆ ನಾವೇ ಕೀಳಾಗಿ ಕಾಣಲು ಆರಂಭಿಸುತ್ತೇವೆ. “ನಾನು ಅವನಿಗಿಂತ ದಡ್ಡ, ನಾನು ಅವಳಷ್ಟು ಸುಂದರವಾಗಿಲ್ಲ, ನನ್ನ ಬಳಿ ಏನೂ ಇಲ್ಲ” ಎಂಬ ಕೀಳರಿಮೆ ಎಂಬುದು ನಮ್ಮ ಮನಸ್ಸನ್ನು ಕೊರೆಯುವ ಗೆದ್ದಲು ಹುಳುವಿನಂತೆ. ಅದು ನಿಧಾನವಾಗಿ ನಮ್ಮ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವವನ್ನೇ ನಾಶಮಾಡಿಬಿಡುತ್ತದೆ. ಕೀಳರಿಮೆ ಬೆಳೆಯಲು ಮುಖ್ಯ ಕಾರಣವೇ ಹೋಲಿಕೆ. ನಾವು ಯಾವಾಗಲೂ ನಮ್ಮ ಜೀವನದ ಕಷ್ಟದ ಪುಟಗಳನ್ನು, ಬೇರೆಯವರ ಜೀವನದ ಹೈಲೈಟ್ಸ್ ಜೊತೆ ಹೋಲಿಕೆ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ನಗುತ್ತಿರುವ ಫೋಟೋ ಹಾಕಿದ ತಕ್ಷಣ, ಅವರ ಬದುಕು ಪರಿಪೂರ್ಣವಾಗಿದೆ ಮತ್ತು ನಮ್ಮ ಬದುಕು ಹಾಳಾಗಿದೆ ಎಂದು ತೀರ್ಮಾನಕ್ಕೆ ಬರುತ್ತೇವೆ. ಆದರೆ ನೆನಪಿಡಿ, ಸೂರ್ಯ ಮತ್ತು ಚಂದ್ರ ಇಬ್ಬರೂ ಆಕಾಶದಲ್ಲೇ ಇದ್ದಾರೆ ಮತ್ತು ಇಬ್ಬರೂ ಹೊಳೆಯುತ್ತಾರೆ. ಆದರೆ ಅವರಿಬ್ಬರ ಸಮಯ ಬೇರೆ ಬೇರೆ. ಸೂರ್ಯನ ಜೊತೆ ಚಂದ್ರನನ್ನು ಹೋಲಿಸಿ, “ಚಂದ್ರ ಸೂರ್ಯನಷ್ಟು ಹೊಳೆಯುವುದಿಲ್ಲ” ಎಂದು ಹೀಯಾಳಿಸುವುದು ಎಷ್ಟು ತಪ್ಪೋ, ನಮ್ಮ ಬದುಕನ್ನು ಬೇರೆಯವರ ಬದುಕಿನೊಂದಿಗೆ ಹೋಲಿಸಿಕೊಂಡು ಕೊರಗುವುದು ಅಷ್ಟೇ ತಪ್ಪು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಯ, ಅವರದ್ದೇ ಆದ ದಾರಿ ಮತ್ತು ಅವರದ್ದೇ ಆದ ಯುದ್ಧವಿರುತ್ತದೆ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಬೇಕು ಎಂದರೆ, ನೀವು ಜಗತ್ತನ್ನೇ ಗೆದ್ದು ಬರಬೇಕಿಲ್ಲ. ನೀವು ಬೆಳಿಗ್ಗೆ ಎದ್ದು, ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸಿ, ಕಷ್ಟದ ದಿನವೊಂದನ್ನು ಯಶಸ್ವಿಯಾಗಿ ಮುಗಿಸಿದ್ದೀರಿ ಎಂದರೆ, ಅದುವೇ ಹೆಮ್ಮೆ ಪಡುವ ವಿಷಯ. ನೀವು ಎಷ್ಟೋ ಸೋಲುಗಳನ್ನು ಕಂಡಿದ್ದರೂ, ಇಂದಿಗೂ ಛಲ ಬಿಡದೆ ಬದುಕುತ್ತಿದ್ದೀರಿ ಎಂದರೆ, ಅದು ನಿಮ್ಮ ಶಕ್ತಿ. ನಿಮ್ಮ ನಡಿಗೆ ನಿಧಾನವಾಗಿರಬಹುದು, ಆದರೆ ನೀವು ನಿಂತಿಲ್ಲವಲ್ಲ, ಅದು ಮುಖ್ಯ. ಕೀಳರಿಮೆ ಬರುವುದು ನಾವು ಏನನ್ನು ಹೊಂದಿಲ್ಲ ಎಂಬುದರ ಕಡೆಗೆ ಗಮನ ಕೊಟ್ಟಾಗ, ಆದರೆ ಹೆಮ್ಮೆ ಬರುವುದು ನಾವು ಏನನ್ನು ಹೊಂದಿದ್ದೇವೆ ಮತ್ತು ನಾವು ಎಂತಹ ವ್ಯಕ್ತಿಯಾಗಿದ್ದೇವೆ ಎಂಬುದನ್ನು ಗಮನಿಸಿದಾಗ. ಇಲ್ಲಿ ಒಂದು ಸೂಕ್ಷ್ಮವಾದ ಗೆರೆ ಇದೆ. ಹೆಮ್ಮೆ ಪಡುವುದು ಎಂದರೆ ಅಹಂಕಾರ ಪಡುವುದಲ್ಲ. “ನಾನೇ ಶ್ರೇಷ್ಠ” ಎನ್ನುವುದು ಅಹಂಕಾರ, ಇದು ಪತನಕ್ಕೆ ದಾರಿ. ಆದರೆ “ನಾನು ಅನನ್ಯ, ನನ್ನ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇದೆ” ಎನ್ನುವುದು ಸ್ವಾಭಿಮಾನ. ಕೀಳರಿಮೆ ನಿಮ್ಮನ್ನು ಒಂದು ಕತ್ತಲ ಕೋಣೆಯಲ್ಲಿ ಕೂಡಿ ಹಾಕಿದರೆ, ಸ್ವಾಭಿಮಾನ ನಿಮಗೆ ಜಗತ್ತನ್ನು ಎದುರಿಸುವ ಧೈರ್ಯ ನೀಡುತ್ತದೆ. ನೀವು ಕುಳ್ಳಗಿರಲಿ, ಬಡವರಾಗಿರಲಿ ಅಥವಾ ಹೆಚ್ಚು ಓದಿಲ್ಲದಿರಲಿ, ಇವು ಯಾವುವೂ ನಿಮ್ಮ ಮೌಲ್ಯವನ್ನು ನಿರ್ಧರಿಸುವುದಿಲ್ಲ. ನಿಮ್ಮ ಮೌಲ್ಯವನ್ನು ನಿರ್ಧರಿಸುವುದು ನಿಮ್ಮ ಪ್ರಾಮಾಣಿಕತೆ, ನಿಮ್ಮ ಶ್ರಮ ಮತ್ತು ನಿಮ್ಮ ಒಳ್ಳೆಯತನ ಮಾತ್ರ. ಒಂದು ಮೀನು ಮರದ ಮೇಲೆ ಹತ್ತಲು ಸಾಧ್ಯವಿಲ್ಲ ಎಂದು ಕೊರಗುತ್ತಾ ಕುಳಿತರೆ, ಅದು ತನ್ನ ಜೀವನವಿಡೀ ತಾನು ಮೂರ್ಖ ಎಂದು ಭಾವಿಸಿ ಸಾಯುತ್ತದೆ. ಮೀನಿನ ಹೆಮ್ಮೆ ಇರುವುದು ಈಜುವುದರಲ್ಲಿ, ಮರದ ಮೇಲೆ ಹತ್ತುವುದರಲ್ಲಲ್ಲ. ನೀವೂ ಅಷ್ಟೇ, ನಿಮ್ಮ ಕ್ಷೇತ್ರ ಬೇರೆ, ನಿಮ್ಮ ಪ್ರತಿಭೆ ಬೇರೆ. ಬೇರೆಯವರು ಮಾಡಿದ್ದನ್ನು ನೀವು ಮಾಡಲು ಆಗುತ್ತಿಲ್ಲ ಎಂದು ಕೀಳರಿಮೆ ಪಟ್ಟುಕೊಳ್ಳಬೇಡಿ. ನಿಮಗಿರುವ ಶಕ್ತಿಯನ್ನು ಗುರುತಿಸಿ. ನಿಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳಿ, ಏಕೆಂದರೆ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ತಪ್ಪು ಮಾಡುವುದು ಮನುಷ್ಯ ಸಹಜ ಗುಣ, ಅದನ್ನು ತಿದ್ದಿಕೊಂಡು ಮುನ್ನಡೆಯುವವನೇ ಸಾಧಕ. ನಿಮ್ಮ ಬೆನ್ನು ತಟ್ಟಲು ಬೇರೆ ಯಾರೋ ಬರಬೇಕಿಲ್ಲ. ಕನ್ನಡಿ ಮುಂದೆ ನಿಂತು, ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು, “ನಾನು ಎಷ್ಟೇ ಕಷ್ಟ ಬಂದರೂ ಇಲ್ಲಿಯವರೆಗೆ ಬಂದು ನಿಂತಿದ್ದೇನೆ. ನಾನು ನನ್ನ ಬಗ್ಗೆ ಹೆಮ್ಮೆ ಪಡುತ್ತೇನೆ” ಎಂದು ಹೇಳಿಕೊಳ್ಳಿ. ನೀವು ನಿಮ್ಮನ್ನು ಗೌರವಿಸಲು ಕಲಿತಾಗ ಮಾತ್ರ, ಜಗತ್ತು ನಿಮ್ಮನ್ನು ಗೌರವಿಸಲು ಆರಂಭಿಸುತ್ತದೆ. ತಲೆ ತಗ್ಗಿಸಿ ನಡೆಯಬೇಡಿ, ಏಕೆಂದರೆ ನೀವು ಈ ಭೂಮಿಯ ಮೇಲೆ ಇರಲು ಅರ್ಹರು. ಕೀಳರಿಮೆ ಎಂಬ ಭಾರವನ್ನು ಇಳಿಸಿ, ಆತ್ಮವಿಶ್ವಾಸದ ಕಿರೀಟವನ್ನು ಧರಿಸಿ. ನೀವು ನಿಮ್ಮ ಕಥೆಯ ಹೀರೊ ನೀವೇ ಆಗಿದ್ದೀರಿ. ಏಕೆಂದರೆ, ನೀವು ಯಾವುದೋ ಪರೀಕ್ಷೆಯಲ್ಲಿ ಪಾಸಾಗಿದ್ದಿರಿ, ನೀವು ದುಡಿದು ತಿನ್ನುತ್ತಿದ್ದಿರಿ, ನಿಮಗೆ ಸ್ವಾಭಿಮಾನ ಇದೆ, ನಿಮಗೆ ವಾಸವಿರಲು ಸ್ಥಳ ಇದೆ. ಆದರೆ ನೀವು ಮುಟ್ಟಬೇಕಾದ ನಿಮ್ಮ ಗುರಿಯನ್ನು, ಬೇರೆಯವರ ಗುರಿಯನ್ನಲ್ಲ, ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಲಿ. ಕೀಳರಿಮೆ ಅಲ್ಲ. ಜಿ. ಎಸ್. ಶರಣು

“ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ”ಜಿ. ಎಸ್. ಶರಣು Read Post »

ಇತರೆ

“ಶಾಲಾ ಮಕ್ಕಳಲ್ಲಿ ದೈಹಿಕ ಆಕರ್ಷಣೆ… ಪರಿಣಾಮ ಮತ್ತು ಪರಿಹಾರಗಳು” ವೀಣಾ ಹೇಮಂತ್‌ ಗೌಡ ಪಾಟೀಲ್

ಕಾವ್ಯ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಶಾಲಾ ಮಕ್ಕಳಲ್ಲಿ ದೈಹಿಕ ಆಕರ್ಷಣೆ… ಪರಿಣಾಮ ಮತ್ತು ಪರಿಹಾರಗಳು” ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಇರುವ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ಅಲ್ಲಲ್ಲಿ ಪುಟ್ಟ ಬಾಲಕಿಯರು ಗರ್ಭಿಣಿಯರಾಗಿರುವ ಮಕ್ಕಳನ್ನು ಹೆತ್ತಿರುವ ವಿಷಯಗಳನ್ನು ಮಾಧ್ಯಮಗಳಲ್ಲಿ ಓದುತ್ತಲೇ ಇದ್ದೇವೆ. ಆತಂಕಕ್ಕೆ ಈಡು ಮಾಡುವ ಇಂತಹ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿರಲು ಕಾರಣ ಮಕ್ಕಳಲ್ಲಿ ಇರುವ ಅಜ್ಞಾನವೇ ಕಾರಣ. ಬಾಲ್ಯ ವಿವಾಹದಿಂದ ಆಗುವ ಅನಾಹುತಗಳ ಕುರಿತು ಕೂಡ ಅಲ್ಲಲ್ಲಿ ನೋಡುವ, ಕೇಳುವ, ಎಷ್ಟೋ ಬಾರಿ ಕೆಲ ಜನರು ಮೂಕ ಸಾಕ್ಷಿಗಳಾಗುವ ಪರಿಸ್ಥಿತಿ  ಇರುತ್ತದೆ. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ನಿಟ್ಟಿನಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ಈ ರೀತಿಯ ಘಟನೆಗಳು ಆಗಲು ಕಾರಣ ಏನು?? .ಇದೇನಿದು ಎತ್ತಣ ಮಾಮರ ಎತ್ತಣ ಕೋಗಿಲೆ ಎಲ್ಲಿಂದೆಲ್ಲಿಯ ಸಂಬಂಧ? ಎಂದು ನೀವು ಕೇಳಬಹುದು! ಖಂಡಿತವಾಗಿಯೂ ಇವೆರಡಕ್ಕೂ ಮತ್ತಷ್ಟು ವಿಷಯಗಳು  ಸಂಬಂಧಿಸಿವೆ. ಒಂದೆಡೆ ಆಸ್ಪತ್ರೆಗಳಲ್ಲಿ ಚಿಕ್ಕ ವಯಸ್ಸಿನ ಬಾಲಕಿಯರು ಮಕ್ಕಳನ್ನು ಹೆತ್ತು ಮಗು ಇಲ್ಲವೇ ತಾಯಿಯ ಮರಣವಾಗುತ್ತಿರುವುದನ್ನು ನಾವು ನೋಡುತ್ತಿದ್ದರೆ ಮತ್ತೊಂದೆಡೆ ಹೆಣ್ಣು ಮಕ್ಕಳು ಅರಿಯದ ವಯಸ್ಸಿನಲ್ಲಿ ದೈಹಿಕ ಆಕರ್ಷಣೆಗೆ ಒಳಗಾಗಿ ಅದನ್ನೇ ಪ್ರೀತಿ ಎಂದು ಭಾವಿಸಿ ತಮ್ಮ ಮನದೊಂದಿಗೆ ತನುವನ್ನು ಕೂಡ ಅರ್ಪಿಸಿ ಅದರ ಪರಿಣಾಮವಾಗಿ ಗರ್ಭಿಣಿಯರಾಗುತ್ತಿದ್ದಾರೆ. ಸಮಾಜ ಬಾಹಿರ ವಿವಾಹ ಬಾಹಿರ ಕೃತ್ಯ ಎಂಬ ಅರಿವಾಗುವ ಹೊತ್ತಿಗೆ ಸಮಯ ಮೀರಿ ಹೋಗಿರುತ್ತದೆ. ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಮಡಿಲ ಕೆಂಡ ಎಂದು ಭಾವಿಸಿ, ಮತ್ತೆ ಕೆಲವೊಮ್ಮೆ ಜವಾಬ್ದಾರಿ ಕಳೆದುಕೊಳ್ಳಬೇಕು ಎಂಬ ಆಶಯದಿಂದ ಕಾನೂನಿಗೆ ವಿರುದ್ಧವಾದುದು ಎಂದು ಗೊತ್ತಿದ್ದರೂ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡುವ ಸಾಹಸಕ್ಕೆ ಪಾಲಕರು ಇಳಿಯುತ್ತಾರೆ. ಹೆಣ್ಣಿರಲಿ ಗಂಡಿರಲಿ ತಪ್ಪು ಯಾರಿಂದಲೇ ನಡೆದರೂ, ಪ್ರಕೃತಿ ಸಹಜವಾದ ಈ ಕ್ರಿಯೆಯ ಹೊಣೆಗಾರಿಕೆಯನ್ನು   ಅನುಭವಿಸುವ ಜವಾಬ್ದಾರಿ ಹೆಣ್ಣು ಮಕ್ಕಳ ಮೇಲಿದೆ. ಎಲ್ಲದಕ್ಕೂ ಅಂತಿಮವಾಗಿ ಹೆಣ್ಣನ್ನೇ ಹೊಣೆಯಾಗಿಸುವ, ಜವಾಬ್ದಾರಿಯಾಗಿಸುವ, ಅಂತಿಮವಾಗಿ ಗುರಿಯಾಗಿಸುವ ಈ ಸಮಾಜದಲ್ಲಿ ಕೇವಲ ಬಾಲ್ಯ ವಿವಾಹ ನಿಷೇಧ ಮಾಡಿದರೆ ಸಾಲದು, ಸುರಕ್ಷಿತ ವಸತಿ ಸಹಿತ ಶಿಕ್ಷಣ ನೀಡಿದರೂ ಸಾಲದು ಬದಲಾಗಿ ಎಲ್ಲ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳು ಹಾಗೂ ಲೈಂಗಿಕತೆಯ ಕುರಿತ ಅರಿವು ಮೂಡಿಸಬೇಕು. ಜೀವನ ಮೌಲ್ಯಗಳು ನಾವು ನಮ್ಮ ಬದುಕಿನಲ್ಲಿ  ಪರಿಪಾಲಿಸಲೇಬೇಕಾದ ಅಲಿಖಿತ ಸಂವಿಧಾನವಿದ್ದಂತೆ.ಪಾಲಕರಿಂದ, ಕುಟುಂಬದಿಂದ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಎಲ್ಲ ಬಲ್ಲ ಮೂಲಗಳಿಂದ ದೊರೆಯುವ ಮೌಲ್ಯಗಳ ಪಾಠ ನಮ್ಮ ಬದುಕಿಗೆ ದಾರಿದೀಪವಾಗಲೇಬೇಕು. ಯಾವ ರೀತಿ ದೇವರ ಗರ್ಭಗುಡಿಯಲ್ಲಿ ಎಲ್ಲರಿಗೂ ಪ್ರವೇಶ ಇರುವುದಿಲ್ಲವೋ ಹಾಗೆಯೇ ನಮ್ಮ ಮೈಮನಗಳ ಗರ್ಭಗುಡಿಯಲ್ಲಿ ಯಾರಿಗೂ ಪ್ರವೇಶಕ್ಕೆ ಅವಕಾಶ ಕೊಡಬಾರದು ಎಂಬ ತಿಳುವಳಿಕೆಯನ್ನು ಮಕ್ಕಳಲ್ಲಿ ಮೂಡಿಸಬೇಕು…. ವಿಶೇಷವಾಗಿ ಈ ವಯಸ್ಸಿನಲ್ಲಿ ಉಂಟಾಗುವ ದೈಹಿಕ ಆಕರ್ಷಣೆಗಳ ನಿರ್ವಹಣೆಯನ್ನು ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ಮಕ್ಕಳಲ್ಲಿ ಅರಿವನ್ನು ಮೂಡಿಸಬೇಕು. ಈ ಹಿಂದಿನಂತೆ ಕೂಡು ಕುಟುಂಬಗಳು ನಮ್ಮಲ್ಲಿ ಇಲ್ಲವಾದರೂ ಆ ಕೌಟುಂಬಿಕ ಮೌಲ್ಯಗಳು ಉಳಿದುಕೊಂಡಿವೆ. ಉದ್ಯೋಗ, ವ್ಯವಹಾರ ನಿಮಿತ್ತ ತಮ್ಮ ಕುಟುಂಬದಿಂದ ದೂರವಾಗಿ ಬೇರೆಯ ಊರುಗಳಲ್ಲಿ ನೆಲೆಸಿರುವ ದಂಪತಿಗಳು ತಮ್ಮ ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳ ಅರಿವಿನ ಜೊತೆಗೆ ಸಂಬಂಧಗಳಲ್ಲಿ ಇರುವ ಸೌಹಾರ್ದ ಭಾವದ ಮಾರ್ದವತೆಯ ಅರಿವನ್ನು, ಜವಾಬ್ದಾರಿಯನ್ನು ಮೂಡಿಸಬೇಕು. ಚಿಕ್ಕಂದಿನಿಂದಲೇ ಮಕ್ಕಳಿಗೆ ಸಾಮಾಜಿಕ ನೀತಿ, ನಿಯಮಾವಳಿಗಳ ಕುರಿತು ಭಯವನ್ನಲ್ಲ!! ಎಚ್ಚರಿಕೆಯನ್ನು ಮೂಡಿಸಬೇಕು.ಮಕ್ಕಳನ್ನು ತೀರಾ ಮುಚ್ಚಟೆಯಾಗಿ ಬೆಳೆಸದೆ ಸಮಾಜದ ಆಗುಹೋಗುಗಳ ಪರಿಣಾಮಗಳ ಅರಿವನ್ನು ಹೊಂದಿರುವ ರೀತಿಯಲ್ಲಿ ಬೆಳೆಸಬೇಕು. ತಪ್ಪು ಸರಿಗಳ ಪರಿಕಲ್ಪನೆ ಮಕ್ಕಳಲ್ಲಿ ಮೂಡಲೇಬೇಕು. ಯಾವುದೇ ವಿಷಯದ ಕುರಿತು ಮಕ್ಕಳು ಪಾಲಕರ ನಾಳ ಕೇಳುವ ನಿಟ್ಟಿನಲ್ಲಿ ಮಕ್ಕಳೊಂದಿಗೆ ಮಾತನಾಡುವಷ್ಟು ತಾಳ್ಮೆ, ಸಮಯ ಮತ್ತು ವ್ಯವಧಾನವನ್ನು ಹೊಂದಿರಬೇಕು. ಮಕ್ಕಳು ಪಾಲಕರನ್ನು ಪ್ರಶ್ನಿಸುವ ಬದಲು ಗೂಗಲ್ ನ ಮೊರೆ ಹೋದರೆ ಅದು ಒಂದು ರೀತಿಯಲ್ಲಿ ‘ಗಣಪನನ್ನು ಮಾಡು ಎಂದರೆ ಅವರಪ್ಪನನ್ನು ಮಾಡಿದಂತೆ ‘ ಆಗುತ್ತದೆ. ಮಕ್ಕಳು ತಿಳಿದುಕೊಳ್ಳಬೇಕಾದ ವಿಷಯಕ್ಕಿಂತ ನೂರು ಪಟ್ಟು ಹೆಚ್ಚು ವಿಷಯಗಳ ಕುರಿತು ಅನವಶ್ಯಕ ಕುತೂಹಲ, ಆಸಕ್ತಿ ಹುಟ್ಟಿಸುವಂತಹ ವಿಷಯ ನಿರೂಪಣೆಯನ್ನು ಶ್ರವಣ, ದೃಶ್ಯ ಮಾಧ್ಯಮಗಳಲ್ಲಿ ಪಡೆಯಬಹುದು. ಇಲ್ಲಿ ಎಷ್ಟೋ ಬಾರಿ ಮನವನ್ನು ಅರಳಿಸುವ ಬದಲಾಗಿ ಕೆರಳಿಸುವ ರೀತಿಯಲ್ಲಿ ವಿಷಯಗಳು ಮಕ್ಕಳಿಗೆ ತಲುಪಬಹುದು…. ಇದಕ್ಕೆ ಬದಲಾಗಿ ಪಾಲಕರು ತಮ್ಮ ಇತಿ ಮಿತಿಯಲ್ಲಿ ವಿಷಯಗಳನ್ನು ವೈಜ್ಞಾನಿಕವಾಗಿ ವಿವರಿಸಬಹುದು. ಶಾಲೆಗಳಲ್ಲಾದರೂ ಅಷ್ಟೇ… ಗಂಡು ಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಹೈಸ್ಕೂಲು ಹಾಗೂ ಕಾಲೇಜು ಹಂತದಲ್ಲಿ ಕೂಡ ಯಾವುದೇ ರೀತಿಯ ಲೈಂಗಿಕ ಶಿಕ್ಷಣದ ಅರಿವನ್ನು ಮೂಡಿಸುವ ತರಬೇತಿಗಳು ಇಲ್ಲ. ಅವರು ಕೇಳುವ, ಅರಿಯುವ ವಿಷಯಗಳು ಅವರಂತೆಯೇ ಇರುವ ಅಬೋಧ ಸ್ನೇಹಿತರ ಕಪೋಲ ಕಲ್ಪಿತ ವಿಷಯಗಳಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರುತ್ತದೆ. ಅವಿಭಕ್ತ ಕುಟುಂಬಗಳಲ್ಲಿ… ನಮಗೆ ದೊರೆಯದ್ದು ನಮ್ಮ ಮಕ್ಕಳಿಗಾದರೂ ದೊರೆಯಲಿ ಎಂಬ ಭಾವದಲ್ಲಿ ಮಕ್ಕಳು ಕೇಳುವ ಮುನ್ನವೇ ಅವರಿಗೆ ಎಲ್ಲವನ್ನು ಕೊಡ ಮಾಡುವ ಪಾಲಕರು, ಅವಶ್ಯಕತೆಗಿಂತ ಅನವಶ್ಯಕವಾದ ಆಹಾರ ಪದಾರ್ಥಗಳಲ್ಲಿ ಆಸಕ್ತಿಯನ್ನು ಹುಟ್ಟಿಸುವ ಮಾಧ್ಯಮಗಳು ಹಾಗೂ ಅಂತಹ ಪದಾರ್ಥಗಳ ಸೇವನೆಯಿಂದ ಹೆಚ್ಚುವರಿ ಹಾರ್ಮೋನುಗಳ ಬಿಡುಗಡೆಯಾಗಿ ಪ್ರಾಪ್ತ ವಯಸ್ಸಿಗೆ ಮುನ್ನವೇ ಹದಿವಯಸ್ಸಿನ ಹಸಿ-ಬಿಸಿ ಕಲ್ಪನೆಗಳನ್ನು ಮೂಡಿಸಿಕೊಳ್ಳುವ ಮಕ್ಕಳು ಪಾಲಕರಿಗೆ ಸಮಸ್ಯೆಯಾಗಿದ್ದಾರೆ. ಇನ್ನು ಶಾಲೆಯ ಕೆಲಸಗಳಿಗೆ ಬೇಕೇ ಬೇಕು ಎಂದು ಹಠ ಮಾಡಿ ಕೊಂಡುಕೊಳ್ಳುವ ಮೊಬೈಲ್, ಟ್ಯಾಬ್ ನಂತಹ ಗ್ಯಾಜೆಟ್ ಗಳು ಕೂಡ ಮಕ್ಕಳ ಮನಸ್ಸನ್ನು ಕೆಡಿಸುತ್ತಿವೆ. ಪ್ರೈವೆಸಿ ಎಂಬ ಹೆಸರಿನಲ್ಲಿ ಎಲ್ಲದಕ್ಕೂ ಪಾಸ್ವರ್ಡ್ ಇಟ್ಟು ಅದು ಯಾರ ಕೈಗೂ ಸಿಗದಂತೆ ಎಚ್ಚರ ವಹಿಸುವ ಮಕ್ಕಳು ಹಾದಿ ತಪ್ಪಲು ಮತ್ತಿನ್ನೇನು ಬೇಕು? ಸಾಮಾಜಿಕವಾಗಿ ಎಲ್ಲ ವಿಷಯಗಳಿಂದ ದೂರವಾಗಿರುವ ಕುಟುಂಬಗಳ ಮಕ್ಕಳು, ಕೌಟುಂಬಿಕ ಕಲಹ, ಪಾಲಕರ  ವಿಚ್ಛೇದನದ ಭೀತಿ, ಬಡತನ ಬೇರೊಬ್ಬರ ಐಷಾರಾಮಿ ಬದುಕನ್ನು ಕಂಡು ಹಾಗೆಯೇ ಇರಬೇಕೆಂದು ಆಶಿಸುವ ಮಕ್ಕಳು, ಪ್ರಸ್ತುತ ಸಮಾಜ ಇರುವುದೇ ಹೀಗೆ ಎಂಬ ಭ್ರಾಂತಿಯನ್ನು ಹುಟ್ಟು ಹಾಕುವ ಸಾಮಾಜಿಕ ಜಾಲತಾಣಗಳು, ಬೇರೊಬ್ಬರ ತಲೆ ಹೊಡೆದು ಆಸ್ತಿ ಮಾಡಿ ಅದನ್ನು ಅನುಭವಿಸುವುದೇ ಬದುಕಿನ ಮಹತ್ವದ ಸಾಧನೆ, ಮಚ್ಚು ಲಾಂಗುಗಳನ್ನು ಕೈಯಲ್ಲಿ ಹಿಡಿದು ತಿರುಗುವವನೇ ನಿಜವಾದ ಹೀರೋ, ಮನದ ಕಾಮನೆಗಳನ್ನು ಬಡಿದೆಬ್ಬಿಸುವ ಹಸಿ ಬಿಸಿ ಪ್ರಣಯದ ದೃಶ್ಯಗಳನ್ನು ಬಿಂಬಿಸುವ ಚಲನಚಿತ್ರಗಳು…. ಇವುಗಳ ಪರಿಣಾಮವಾಗಿ ಮಕ್ಕಳು ನೈತಿಕತೆಯ ಪರಿಧಿಯನ್ನು ದಾಟಿ ಹಾಳಾಗಿ ಹೋಗುತ್ತಿದ್ದಾರೆ. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಹೆಚ್ಚಿನ ಜವಾಬ್ದಾರಿ ಮಕ್ಕಳಿಗಾಗಿ ಉತ್ತಮ ಮೌಲ್ಯಯುತ ಬದುಕನ್ನು ಕಟ್ಟಿ ಕೊಡುವುದು ಆಗಿದೆ. ಪರಿಹಾರ ನಮ್ಮ ಕೈಯಲ್ಲಿಯೇ ಇದ್ದರೂ ಅದಷ್ಟು ಸುಲಭ ಸಾಧ್ಯವಿಲ್ಲ ಎಂಬ ಮಾತುಗಳು ಪಾಲಕರದ್ದಾಗಿವೆ…ನಿಜ! ಆದರೆ ಪ್ರಯತ್ನ ಪಡುವುದರಲ್ಲಿ ತಪ್ಪಿಲ್ಲ ಅಲ್ಲವೇ ? *ಪಾಲಕರ ( ತಂದೆ ಮತ್ತು ತಾಯಿ ) ನಡುವಿನ ಸೌಹಾರ್ದ ಸಂಬಂಧ ಮಕ್ಕಳಲ್ಲಿ ಧೈರ್ಯವನ್ನು, ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಅಭದ್ರತೆಯ ನೆಲೆಯಲ್ಲಿ ಮಕ್ಕಳು ತಪ್ಪು ಹಾದಿಗೆ ಎಳಸುವುದು ಹೆಚ್ಚು. * ಮಾಧ್ಯಮಿಕ ಶಾಲೆಯಿಂದಲೇ ಮಕ್ಕಳಿಗೆ ನಮ್ಮ ದೇಹದ ಕುರಿತು ವೈಜ್ಞಾನಿಕ ವಿವರಣೆಯ ಜೊತೆಗೆ ಅವುಗಳ ಕಾರ್ಯ ವ್ಯಾಪ್ತಿಯ ಕುರಿತು ಅರಿವು ಮೂಡಿಸಬೇಕು. ಹದಿಹರೆಯದ ಅಲ್ಲಲ್ಲ…. ಹತ್ತರಿಂದ ಇಪ್ಪತ್ತರ ವಯಸ್ಸಿನವರೆಗಿನ ದೈಹಿಕ, ಮಾನಸಿಕ, ಪ್ರಚೋದನೆಗಳ ನಿರ್ವಹಣೆಯ ನಿಟ್ಟಿನಲ್ಲಿ ಮಕ್ಕಳನ್ನು ಹಾಡು, ನೃತ್ಯ, ನಾಟಕ, ಸಂಗೀತ, ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಬೇಕು. ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮಕ್ಕಳ ಮನಸ್ಸಿನಲ್ಲಿ ಹರೆಯದ ಹುಚ್ಚು ಕೋಡಿಯಂತಹ ಭಾವನಾತ್ಮಕ ಒತ್ತಡಗಳು ಹರಿದುಹೋಗುತ್ತವೆ. *ಸುಳ್ಳೇ ಆದರೂ ಸರಿ ನಾಟಕ, ನೃತ್ಯ, ಹಾಡುಗಳಲ್ಲಿ ನವರಸಗಳನ್ನು ಅಭಿನಯಿಸುವ, ಪ್ರದರ್ಶಿಸುವ ಮೂಲಕ ಮಕ್ಕಳ ಭಾವನೆಗಳ ಕಟ್ಟು ಸಹಜವಾಗಿ ಮತ್ತು ಸರಿಯಾದ ರೀತಿಯಲ್ಲಿ ಒಡೆದು ಹೋಗುವ ಕಾರಣ ಇಂತಹ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದು ಅತ್ಯವಶ್ಯಕ.ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮಕ್ಕಳು ನಿಧಾನವಾಗಿ ಶಿಸ್ತು, ಸಂಯಮ, ಶ್ರದ್ಧೆ ಹಾಗೂ ತಾಳ್ಮೆಯನ್ನು ಬದುಕಿನಲ್ಲಿ ರೂಡಿಸಿಕೊಳ್ಳುತ್ತಾರೆ. ಭಾವನಾತ್ಮಕ ಮತ್ತು ವಾಸ್ತವ ಜಗತ್ತಿನ ನಡುವಿನ ಅಂತರವನ್ನು ಕಂಡುಕೊಳ್ಳುತ್ತಾರೆ. ಬದುಕೇ ಬೇರೆ ಭಾವನೆಗಳೇ ಬೇರೆ ಎಂಬ ಅರಿವನ್ನು ಹೊಂದುತ್ತಾರೆ. *ಸಹವಾಸ…. ಸಮಾನ ಮನಸ್ಕರ ಸಹವಾಸಕ್ಕಿಂತ ಬದುಕಿನಲ್ಲಿ ಉತ್ತಮ ಗುರಿ, ಶ್ರದ್ಧೆ ಹೊಂದಿರುವ ಸ್ನೇಹಿತರ ಜೊತೆಗೆ ಸ್ನೇಹವನ್ನು ಇಟ್ಟುಕೊಳ್ಳುವುದು ಒಳ್ಳೆಯದು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಹೂವಿನ ಜೊತೆ ನಾರು ಕೂಡ ಸ್ವರ್ಗಕ್ಕೆ ಹೋಗುತ್ತದೆ ಎಂದು ಹೇಳುತ್ತಾರಲ್ಲವೇ ಹಾಗೆಯೇ ಉತ್ತಮರ ಒಡನಾಟ ಬದುಕಿನಲ್ಲಿ ಉನ್ನತವಾದದನ್ನು ಸಾಧಿಸಲು ಅವಶ್ಯಕ ಎಂಬುದನ್ನು ಮಕ್ಕಳಿಗೆ ಮನಗಾಣಿಸಬೇಕು. * ನುರಿತ ತಜ್ಞ ವೈದ್ಯರಿಂದ, ಸಮಾಲೋಚಕರಿಂದ ಲೈಂಗಿಕ ಶಿಕ್ಷಣದ ಅರಿವನ್ನು ಮೂಡಿಸಬೇಕು. ದೇಹ ಮತ್ತು ಮನಸ್ಸುಗಳ ಶುಚಿತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಕುರಿತು ಮಕ್ಕಳಿಗೆ ಅರಿವನ್ನು ಮೂಡಿಸಬೇಕು. ತಮ್ಮ ಮನದಲ್ಲಿ ಮೂಡುತ್ತಿರುವ ಭಾವನೆಗಳನ್ನು ಯಾವ ರೀತಿ ನಿಯಂತ್ರಿಸುವ ಹಾಗೂ ಅವುಗಳನ್ನು ಸಮರ್ಥವಾಗಿ ನಿರ್ವಹಿಸುವ ಹೊಣೆಗಾರಿಕೆಯ ಅರಿವನ್ನು ಮೂಡಿಸಬೇಕು. * ಒಂದೊಮ್ಮೆ ತಪ್ಪು ಮಾಡಿದ್ದೆ ಆದರೆ ಅದರ ಪರಿಣಾಮಗಳ ಅರಿವನ್ನು ಕೂಡ ಗೊತ್ತು ಪಡಿಸಬೇಕು.  ಇದೆಲ್ಲದರ ಹೊರತಾಗಿಯೂ ನಮ್ಮ ನೆಲದ ಕಾನೂನಿನ ಕುರಿತು ಪಾಲಕರು ಮತ್ತು ಶಿಕ್ಷಕರ ಜವಾಬ್ದಾರಿ  ಇರಲೇಬೇಕು. ಪ್ರೊಟೆಕ್ಷನ್ ಆಫ್ ಚೈಲ್ಡ್ ಫ್ರಮ್ ಸೆಕ್ಷುಯಲ್ ಆಫೆನ್ಸಸ್ (POCSO) ಕಾಯ್ದೆಯ ಅರಿವನ್ನು ಮಕ್ಕಳಿಗೆ ಮೂಡಿಸಬೇಕು. ಮಕ್ಕಳ ಮೇಲೆ ನಡೆಯುವ ಲೈಂಗಿಕ ಶೋಷಣೆಯ ಕುರಿತು ಮುಕ್ತವಾಗಿ ಅವರೊಂದಿಗೆ ಮಾತನಾಡುವ ಚರ್ಚಿಸುವ ಸಮಾಲೋಚಿಸುವ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಅರಿವಿಗೆ ಬರುವ ಮುನ್ನವೇ ಸಂಭವಿಸಬಹುದಾದ ಅಪರಾಧಗಳ ಸುಳಿಯಲ್ಲಿ ಮಕ್ಕಳು ಸಿಲುಕಿ ಒದ್ದಾಡಬಾರದು ಅಲ್ಲವೇ? ಈ ನಿಟ್ಟಿನಲ್ಲಿ ಬುದ್ಧಿಜೀವಿಗಳು, ಸಾಮಾಜಿಕ ಮನ ಶಾಸ್ತ್ರ ಪರಿಣತರು, ಶಿಕ್ಷಣ ತಜ್ಞರೊಂದಿಗೆ ಸರಕಾರಗಳು ಸಮಾಲೋಚನೆ ಮಾಡಿ ಮುಂದುವರೆಯಬೇಕು. ಮಕ್ಕಳ ಭವಿಷ್ಯಕ್ಕೆ ಹೊಸ ಹಾದಿಯನ್ನು ತೋರಬೇಕು ಎಂಬ ಆಶಯದೊಂದಿಗೆ ವೀಣಾ ಹೇಮಂತಗೌಡ ಪಾಟೀಲ್

“ಶಾಲಾ ಮಕ್ಕಳಲ್ಲಿ ದೈಹಿಕ ಆಕರ್ಷಣೆ… ಪರಿಣಾಮ ಮತ್ತು ಪರಿಹಾರಗಳು” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ, ಜೀವನ

“ಅಂಗೈಯಲ್ಲೇ ಇದೆ ಸ್ಪೂರ್ತಿಯ ಕಡಲು!” ಜಯಶ್ರೀ.ಜೆ. ಅಬ್ಬಿಗೇರಿ

ಸ್ಫೂರ್ತಿ ಸಂಗಾತಿ “ಅಂಗೈಯಲ್ಲೇ ಇದೆ ಸ್ಪೂರ್ತಿಯ ಕಡಲು!”  ಜಯಶ್ರೀ.ಜೆ. ಅಬ್ಬಿಗೇರಿ ಏಕೋ ಏನೋ ಗೊತ್ತಿಲ್ಲ  ಯಾವುದೇ ಕೆಲಸದಲ್ಲೂ ಆಸಕ್ತಿಯೇ ಇಲ್ಲ. ಹೇಗೋ ಮನಸ್ಸಿಗೆ ಒಪ್ಪಸಿ ಹುಮ್ಮಸ್ಸು ಮೂಡಿಸಿಕೊಂಡು ಯಾವ ಕೆಲಸವನ್ನು ಆರಂಭಿಸಿದರೂ ಅರ್ಧಂಬರ್ಧ ಮಾಡಿ ನಿಲ್ಲಿಸಿ ಬಿಡ್ತಿನಿ.ಅನ್ನೋದು ಬಹುತೇಕ ಜನರ  ಚಿಂತೆ. ಸಾಮಾನ್ಯವಾಗಿ ಬಹಳಷ್ಟು ಜನರನ್ನು ಮೇಲಿಂದ ಮೇಲೆ ಈ ತೊಂದರೆ ಕಾಡುತ್ತದೆ. ಮೇಲ್ನೋಟಕ್ಕೆ ಈ ಸಮಸ್ಯೆ ದೊಡ್ಡದೇನಲ್ಲ ಆದರೆ ಇದರ ಬೇರುಗಳನ್ನು ಬಲಗೊಳ್ಳಲು ಬಿಟ್ಟರೆ ಸಮಸ್ಯೆ ತಪ್ಪಿದ್ದಲ್ಲ. ಏನೆಲ್ಲ ಇದ್ದರೂ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ ಅಂಥ ಪರಿಸ್ಥಿತಿ ನಿರ್ಮಾಣ ಮಾಡಿ ಬಿಡುತ್ತದೆ.  ‘ಒಂದು ದುರ್ಬಲ ಮನಸ್ಸು ಒಂದು ಸೂಕ್ಷ್ಮ ದರ್ಶಕದಂತೆ. ಅದು ಸಣ್ಣ ವಿಷಯಗಳನ್ನು ದೊಡ್ಡದಾಗಿಸುತ್ತದೆ. ಆದರೆ ದೊಡ್ಡದನ್ನು ಪಡೆಯಲಾರದು.’ ಸ್ವಯಂ ಸ್ಪೂರ್ತಿ ಸ್ವಯಂ ಸ್ಪೂರ್ತಿ ಇರದಿದ್ದರೆ  ಸಂಕಟ, ನೋವು, ಅವಮಾನ ಹಾಗೂ ಬೇಸರಗಳು ಬೆನ್ನು ಹತ್ತಿ ಜೀವ ತಿನ್ನುತ್ತವೆ.ಜೀವನವನ್ನು ನಿಸ್ಸಾರಗೊಳಿಸುತ್ತವೆ.ಇತರರ ಮುಂದೆ ತಲೆ ತಗ್ಗಿಸುವಂತೆ ಮಾಡುತ್ತವೆ.ಕೆಲವೊಮ್ಮೆ ಶಿಕ್ಷೆಯನ್ನು ಅನುಭವಿಸುವಂತೆ ಮಾಡುತ್ತವೆ. ಸ್ಪೂರ್ತಿ ಇಲ್ಲದ ಸ್ಥಿತಿಯಲ್ಲಿ ನಿರಂತರ ಎಲ್ಲದರಲ್ಲೂ ಅವಮಾನದ ಪೆಟ್ಟಿನ ಅನುಭವ ಎದೆಗೆ ಬಿಸಿ ನೀರಾಗಿಸಿ ಹುಯ್ಯುತ್ತದೆ. ಸದಾ ನಮ್ಮನ್ನು ನಾವು ಸ್ಪೂರ್ತಿಯುತವಾಗಿ ಇಟ್ಟುಕೊಳ್ಳುವುದು ಅತಿ ಮುಖ್ಯ. ಮಾರ್ಗ ಮನಸ್ಸಿದ್ದಲ್ಲಿ ಮಾರ್ಗ ತಾನಾಗಿ ಕಾಣುತ್ತದೆ. ಆದರೂ ಈ ನಿಟ್ಟಿನಲ್ಲಿ ನಮ್ಮ ದೃಷ್ಟಿಕೋನ ಬದಲಾಗದಿದ್ದರೆ ‘ಆಯುಧವು ತನ್ನ ಯಜಮಾನನಿಗೂ ಶತ್ರುವೇ ಆಗಿದೆ’ಎಂಬಂತಾಗುತ್ತದೆ. ಕಲ್ಲಾಗಿರುವ ಮನಸ್ಸೆಂಬ ಆಯುಧವನ್ನು ಹೂವಿನಂತೆ ಮೆದುವಾಗಿಸಬೇಕು.ಹೊರಗಿನ ವಸ್ತುಗಳನ್ನು ಉಪಯೋಗಿಸಿ ಒಳ ಮನಸ್ಸನ್ನು ಹದಗೊಳಿಸಿ ಸ್ವಯಂ ಸ್ಪೂರ್ತಿಗೊಳಿಸಿಕೊಳ್ಳುವುದು ಹೇಗೆೆ ಎಂಬುದನ್ನು ನೋಡೋಣ ಬನ್ನಿಶಕ್ತಿ ತುಂಬುವ ವಸ್ತುಗಳನ್ನು ಬಳಸಿನಿಮಗೆ ಹಿತ ನೀಡುವ, ಇಷ್ಟವಾಗುವ, ನೀವು ಪ್ರೀತಿಸುವ, ವಸ್ತುಗಳು ನಿಮಗೆ ಶಕ್ತಿಯನ್ನು ತುಂಬುತ್ತವೆ. ಹೀಗಾಗಿ ಇವುಗಳಿಗೆ ನಿಮ್ಮ ಸುತ್ತಲೂ ಜಾಗ ನೀಡಿ. ಅವು ತಾಜಾ ಹೂಗಳು, ಸುಂದರ ಪೆಂಟಿಗ್ಸ್ ಇಲ್ಲವೇ ನುಡಿಮುತ್ತುಗಳಾಗಿರಬಹುದು. ಇವು ನಿಮ್ಮನ್ನು ಸ್ಪೂರ್ತಿಗೊಳಿಸಲು ತುದಿಗಾಲಲ್ಲೇ ನಿಂತಿರುತ್ತವೆ. ನೀರಸಗೊಂಡ ಮನಸ್ಸು ತಕ್ಷಣಕ್ಕೆ ಉತ್ಸಾಹದಿಂದ ಎದ್ದು ನಿಲ್ಲುತ್ತದೆ.ಒಂದು ನವಿಲು ತನ್ನ ಗೆರೆಗಳನ್ನು ತೆರೆದಿಟ್ಟಾಗ ಮತ್ತು ನವಿಲಿನಂತೆ ನಡೆದಾಗ ಮಾತ್ರ ಸುಂದರವಾಗಿ ಆಕರ್ಷಕವಾಗಿ ಕಾಣಬಲ್ಲದು. ಅಂತೆಯೇ ನಿಮ್ಮ ಪ್ರಪಂಚದಲ್ಲಿ ನೀವು ಬಹಳಷ್ಟು ಬಯಸುವುದನ್ನೆಲ್ಲ ಸುತ್ತುವರಿಸಿಕೊಂಡರೆ ಮನಾನಂದ ನೀಡುವದರ ಜೊತೆಗೆ ಮನಸ್ಸನ್ನು ಮಹತ್ತರ ಕಾರ್ಯಕ್ಕೆ ಸಿದ್ಧಗೊಳಿಸುತ್ತದೆ. ವಿಪರ್ಯಾಸದ ಸಂಗತಿ ಎಂದರೆ ಇದರತ್ತ ಅತೀ ಕಡಿಮೆ ಗಮನ ನೀಡುತ್ತಿದ್ದೇವೆ. ಇವುಗಳತ್ತ ಚಿತ್ತ ಹರಿಸಿದರೆ ಕಾಲದ ಗತಿಯಲ್ಲಿ ನಿಜಕ್ಕೂ ಶ್ರೇಷ್ಠ ಮಟ್ಟದಲ್ಲಿ ಸ್ಪೂರ್ತಿ ಮನೆ ಮಾಡುತ್ತದೆ. ಯಾವಾಗಲೂ ಸುಂದರ ವಸ್ತುಗಳು ನಿಮ್ಮ ಕಣ್ಣ ಮುಂದಿರಲಿ. ಹೆಚ್ಚಿನ ಸಮಯ ಓದಿ ಓದು ಬಹಳಷ್ಟನ್ನು ಕಲಿಸುತ್ತದೆ. ಹೊಸ ಹೊಸ ಆಲೋಚನೆಗಳು ಮನಸ್ಸನ್ನು ಪ್ರವೇಶಿಸುತ್ತವೆ. ಕಥೆ, ಕಾದಂಬರಿ, ಸದಭಿರುಚಿ ಪುಸ್ತಕಗಳ ಓದಿನಲ್ಲಿ ನಿರತರಾದರೆ ಸ್ಪೂರ್ತಿಯ ಮಟ್ಟ ಏರುತ್ತದೆ. ಸೃಜನಶೀಲತೆಯನ್ನೂ ಹೆಚ್ಚಿಸುತ್ತದೆ. ಓದಿನಲ್ಲಿಯ ಯಾವುದೇ ಒಂದು ವಿಚಾರ ನಿಮ್ಮಲ್ಲಿ ಸ್ಪೂರ್ತಿಯ ಕಿಡಿಯನ್ನು ಹೊತ್ತಿಸಬಹುದು.ಓದಿನ ಮೌಲ್ಯವನ್ನು ಅರಿತು ಅನುಸರಿಸಿದರೆ ಸ್ಪೂರ್ತಿಗೆ ಮಹಾನ್ ಪಾಠ ದೊರೆಯುವುದು. ಈಗಿನ ಗ್ಯಾಜೆಟ್ ದುನಿಯಾದಲ್ಲಿ ಪುಸ್ತಕ ಓದುವದಕ್ಕಿಂತ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥಗೊಳಿಸುವುದೇ ಹೆಚ್ಚಾಗುತ್ತಿದೆ. ಇದು ಒಂಟಿತನಕ್ಕೆ ಜಾರಿಸುತ್ತಿದೆ. ‘ಎಲ್ಲ ಸಮಸ್ಯೆಗಳನ್ನು ತಪ್ಪಿಸಿ ಬಿಡುವ ಬದಲು ಎದುರಿಸಿದರೆ ಅವು ಚಿಕ್ಕದಾಗುತ್ತವೆ.’ ಸ್ಪೂರ್ತಿಯಿದ್ದಲ್ಲಿ ನಮ್ಮೆಲ್ಲ ಕನಸುಗಳನ್ನು ಬೆನ್ನಟ್ಟಿ ಗೆಲ್ಲಬಹುದು. ಎಂಬುದು ಓದಿನಿಂದ ಬಹು ಬೇಗ ಅರ್ಥವಾಗುತ್ತದೆ.ಒಬ್ಬ ಒಳ್ಳೆಯ ಓದುಗನು ಅವಕಾಶಗಳನ್ನು ಒಳ್ಳೆಯ ಭಾಗ್ಯವನ್ನಾಗಿ ಬದಲಾಯಿಸುತ್ತಾನೆ. ಯಾವಾಗಲಾದ್ರೂ ಓದಿದ್ರಾಯ್ತು ಎಂದು ಉದಾಸೀನ ಮಾಡಿದರೆ ಜೀವನ ಸ್ಪೂರ್ತಿಯನ್ನು ಸವಿಯಲಾಗುವುದಿಲ್ಲ. ಸಂಗೀತ ಆಲಿಸಿ ‘ನಾನು ಮೂರು ದಿನ ಸಂಗೀತ ಅಭ್ಯಾಸ ಮಾಡದಿದ್ದರೆ ನನ್ನ ಗಾಯನದಲ್ಲೇನೋ ಕೊರತೆಯಿದೆ ಎಂದು ನನ್ನ ಮನೆಯಾಕೆಗೆ ತಿಳಿಯುತ್ತದೆ. ಎರಡು ದಿನ ಅಭ್ಯಾಸ ಬಿಟ್ಟರೆ ತಟ್ಟನೆ ನನ್ನ ಅಭಿಮಾನಿಗಳು ಗುರುತಿಸಬಲ್ಲರು. ಇಲ್ಲ ಒಂದೇ ಒಂದು ದಿನ ಅಭ್ಯಾಸವನ್ನು ಬಿಟ್ಟರೂ ನನ್ನ ಆಲಾಪದಲ್ಲೇನೋ ಕೊರತೆಯಿದೆ ಎಂದು ಖುದ್ದು ನನಗೆ ಗೊತ್ತಾಗುತ್ತದೆ. ’ಇದು ಸಂಗೀತದಂತೆದೈತ್ಯ ಪ್ರತಿಭೆ ಎಂದೇ ಖ್ಯಾತರಾದ ಜಗಜೀತ್ ಸಿಂಗ್ ತನ್ನ ಅಭ್ಯಾಸದ ಕುರಿತು ಸ್ವಾರಸ್ಯಕರವಾಗಿ ಹೇಳಿದ ರೀತಿ. ಸಂಗೀತವು ಮನಸ್ಸನ್ನು, ಸುಂದರ ಭಾವನೆಗಳನ್ನು ಅರಳಿಸುತ್ತದೆ. ನಿಮಗೆ ಬೇಕಾದುದನ್ನು ಪಡೆಯಲು ಕಷ್ಟ ಪಟ್ಟು ಕೆಲಸ ಮಾಡಿದ ನಂತರ, ಅದನ್ನು ಸಂತೋಷದಿಂದ ಅನುಭವಿಸಲು ಸಮಯ ಪಡೆದುಕೊಳ್ಳಿ. ಗಜಿ ಬಿಜಿಯಾಗಿರುವ ಮನಸ್ಸಿಗೆ ವಿಶ್ರಾಂತಿ ನೀಡಿ ಮುದಗೊಳಿಸುತ್ತದೆ. ಸೂರ್ತಿಯತ್ತ ವಾಲಿಸುತ್ತದೆ. ದಿನಚರಿ ಬದಲಿಸಿ‘ಮಾಡಿದ್ದನ್ನೇ ಮಾಡುತ್ತ ವಿಭಿನ್ನವಾದ ಫಲಿತಾಂಶವನ್ನು ನಿರೀಕ್ಷಿಸುವುದು ಮೂರ್ಖತನ.’ ಎಂದು ಹೇಳಿದ್ದಾನೆ ಜಗತ್ತಿನ ಮೇದಾವಿ ವಿಜ್ಞಾನಿ ಅಲ್ಬರ್ಟ್ ಐನಸ್ಟೀನ್.  ದಿನ ನಿತ್ಯ ಅದೇ ಕೆಲಸ ಅದೇ ಜನರು ಅದೇ ಗೊಣಗಾಟ ಜಂಜಾಟ.  ಹೀಗಿದ್ದಾಗ್ಯೂ ದಿನಚರಿಯಲ್ಲಿ ಬದಲಾವಣೆಗೆ ಮನಸ್ಸು ಮಾಡುವುದು ಕಮ್ಮಿ. ಇಲ್ಲವೇ ಇಲ್ಲವೆನ್ನುವಷ್ಟು ಬದಲಾವಣೆಯನ್ನು ದೈನಂದಿನ ಕೆಲಸಗಳಲ್ಲಿ ತರುತ್ತೇವೆ. ನಿರಾಸಕ್ತಿಯಿಂದ ಅದನ್ನೇ ನಿಯಮಿತವಾಗಿ ಪಾಲಿಸುತ್ತೇವೆ. ಒಂದೇ ದಾರಿಯಲ್ಲೇ ಓಡಾಡುತ್ತೇವೆ. ಒಂದೇ ಹೊಟೆಲ್ಲಿನಲ್ಲಿ ಕಾಫೀ ಹೀರುತ್ತೇವೆ. ತಿನ್ನುವ ತಿಂಡಿ ತಿನಿಸು ಬದಲಿಸಲೂ ಹಿಂಜರಿಯುತ್ತೇವೆ. ಒಟ್ಟಿನಲ್ಲಿ ಏಕತಾನತೆಗೆ ಗಂಟು ಬಿದ್ದಿರುತ್ತೇವೆ. ಬದಲಾವಣೆ ಮನಸ್ಸಿಗೆ ಆಗಿ ಬರುವ ಮಾತಲ್ಲ.ದಿನಚರಿ ಬದಲಿಸಲುಮನಸ್ಸು ಅಷ್ಟು ಸುಲಭವಾಗಿ ಒಪ್ಪುವುದೂ ಇಲ್ಲ. ಹೊಸ ಸವಾಲುಗಳು ತಲೆ ತಿನ್ನುವ ಸಮಸ್ಯೆಗಳೆನಿಸದೇ, ಹೊಸ ಆಯಾಮದಲ್ಲಿ ಹೊಸ ಅನುಭವಗಳಾಗಬೇಕೆಂದರೆ ಸೂರ್ತಿಯುತ ದಿನಚರಿಗೆ ಅಣಿಯಾಗಬೇಕು.  ‘ಸಮುದ್ರ ಶಾಂತವಾಗಿದ್ದಾಗ ಯಾರು ಬೇಕಿದ್ದರೂ ಚುಕ್ಕಾಣಿ ಹಿಡಿಯಬಹುದು.’ ಮನಸ್ಸು ಶಾಂತವಾಗಿರುವಾಗ ಅದನ್ನು ಪುಟ್ಟ ಮಗುವನಂತೆ ಮುದ್ದಿಸಿ ಹೊಸ ಬದಲಾವಣೆಗೆ ಒಪ್ಪಿಸಬೇಕು. ’ಅತ್ಯುತ್ತಮ ದಿನಚರಿ ನಮ್ಮದಾಗಿದ್ದರೆ ಸ್ವಯಂ ಸ್ಪೂರ್ತಿಯ ಕಡಲು ನಮ್ಮ ಅಂಗೈಯಲ್ಲೇ ಇದೆ.ದೇಶ ಸುತ್ತಿಶೈಕ್ಷಣಿಕ ಪ್ರವಾಸ ಇಲ್ಲವೇ ಸಣ್ಣ ಪುಟ್ಟ ಪ್ರಯಾಣಗಳು ನವನವೀನ ಅನುಭವಗಳನ್ನು ನೀಡುತ್ತವೆ. ವಿಚಾರದ ದಿಕ್ಕನ್ನು ಉತ್ತಮತೆಯತ್ತ ಹೊರಳಿಸುತ್ತವೆ. ದೂರದ ದೇಶಕ್ಕೆ ಪಯಣಿಸಬೇಕೆಂದೇನೂ ಇಲ್ಲ. ವಾಸವಿರುವ ನಗರವನ್ನೇ ಸುತ್ತಬಹುದು. ನೀವಿನ್ನೂ ನೋಡಿರದ ಪಾರ್ಕ್ನಲ್ಲಿ ಸುತ್ತಾಡಿ. ಹೊಸ ಮಠ ಮಂದಿರಗಳಿಗೆ ಕುಟುಂಬ, ಗೆಳೆಯರೊಂದಿಗೆ ಹೋಗಿ ಬನ್ನಿ.ವಿವಿಧ ಹಾದಿ ಬೀದಿಗಳಲ್ಲಿ ತಿರುಗುವುದು ವಿಶಿಷ್ಟ ಸ್ಪೂರ್ತಿಗೆ ದಾರಿಯಾಗುತ್ತದೆ. ಪಕ್ಕದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೂ ಲವಲವಿಕೆ ತುಂಬಿಕೊಳ್ಳುತ್ತದೆ. ಅಜ್ಞಾನದ ಅಂದಕಾರವನ್ನು ಕಡಿಮೆಗೊಳಿಸಿಜ್ಞಾನ ಕ್ಷಿತಿಜವನ್ನು ಅಗಲಿಸುತ್ತವೆ. ಎತ್ತರದ  ಗುರಿಯಿರಲಿತಮಗೆಲ್ಲ ಗೊತ್ತಿರುವಂತೆ ಓಲಂಪಿಕ್ಸ್ ನಾಲ್ಕು ವರ್ಷಕ್ಕೊಮ್ಮೆ ಬರುವ ಕ್ರೀಡಾಕೂಟ. ಆದರೆ ಲಕ್ಷಾಂತರಕ್ರೀಡಾ ಪಟುಗಳು ಓಲಂಪಿಕ್ಸ್ನಲ್ಲಿ ಬಂಗಾರದ ಪದಕ ಕೊರಳಿಗೇರಿಸಿ ಗೆಲುವಿನ ರುಚಿ ನೋಡಲು ದಿನ ನಿತ್ಯ ಬೆವರು ಹರಿಸುತ್ತಿರುತ್ತಾರೆ. ಉಸೇನ್ ಬೋಲ್ಟ್ ನೂರು ಮೀಟರ್‌ನ್ನು ಕ್ರಮಿಸಲು ಬೇಕಾಗಿರುವ ಅವಧಿ ಬರೀ ಒಂಭತ್ತುವರಿ ಸೆಂಕೆಡುಗಳಷ್ಟೇ! ಆದರೆ ನಿತ್ಯದ ಅಭ್ಯಾಸ? ಉಳಿದ ಓಟಗಾರನಿಗಿಂತ ನೂರು ಪಟ್ಟು ಹೆಚ್ಚು ಮಾಡಲೇಬೇಕು. ಅಷ್ಟರ ಮಟ್ಟದ ಸ್ವಯಂ ಸ್ಪೂರ್ತಿ ಇರದಿದ್ದರೆ ಉಸೇನ್ ಬೋಲ್ಟ್ ಜಾಗತಿಕ ಮಟ್ಟದಲ್ಲಿ ನಂಬರ್ ಒನ್ ಓಟಗಾರನಾಗಿ ಮಿಂಚಲು ಸಾಧ್ಯವಾಗುತ್ತಿರಲಿಲ್ಲ. ಸ್ವಯಂ ಸ್ಪೂರ್ತಿಯಿಲ್ಲದೇ ಗೆಲುವು ಕಂಡಿರುವ ವ್ಯಕ್ತಿ ಇರುವುದು ಅಸಾಧ್ಯ. ಕೊನೆ ಹನಿ ‘ಸಣ್ಣ ಗುರಿಗಳನ್ನು ಹೊಂದುವುದು ಅಪರಾಧ’ ಎಂದಿದ್ದಾರೆ ಅಬ್ದುಲ್ ಕಲಾಂ. ಎತ್ತರದ ಆಗಸಕ್ಕೆ ಹಾರುವುದು ನಮ್ಮ ಗುರಿಯಾಗಿರಬೇಕು. ನಾವು ಅಲ್ಲಿಗೆ ತಲುಪದಿರಬಹುದು ಆದರೆ ನಾವಿರುವ ಮಟ್ಟದಲ್ಲೇ ಇರುವ ವಸ್ತುವಿಗೆ ಗುರಿಯಿಟ್ಟರೆ ಹಾರುವ ಮಟ್ಟಕ್ಕಿಂತ ಕಡಿಮೆ ಮಟ್ಟಕ್ಕೆ ನಮ್ಮ ಗುರಿಯ ಬಾಣ ಹಾರುತ್ತದೆ. ಎಲ್ಲಿಯವರೆಗೂ ನಾವು ಸ್ವಯಂ ಸ್ಪೂರ್ತಿಗೆ ಹಾತೊರೆಯುವುದಿಲ್ಲವೋ ಅಲ್ಲಿಯವರೆಗೆ ಗೆಲುವು ನಮಗೆ ದಕ್ಕುವುದಿಲ್ಲ. ನಾವು ಯಾವುದನ್ನಾದರೂ ಸಾಕಷ್ಟು ಪ್ರೀತಿಸಿದರೆ, ಅದು ತನ್ನ ರಹಸ್ಯಗಳನ್ನೆಲ್ಲ ಬಿಟ್ಟು ಕೊಡುತ್ತದೆ. ಆದ್ದರಿಂದ ಅಂಗೈಯಲ್ಲಿರುವ ಸ್ವಯಂ ಸ್ಪೂರ್ತಿಯನ್ನು ಪ್ರೀತ್ಸೋಣ ದೊಡ್ಡ ಗೆಲುವಿನ ನಗೆ ಬೀರೋಣ. ಜಯಶ್ರೀ.ಜೆ. ಅಬ್ಬಿಗೇರಿ

“ಅಂಗೈಯಲ್ಲೇ ಇದೆ ಸ್ಪೂರ್ತಿಯ ಕಡಲು!” ಜಯಶ್ರೀ.ಜೆ. ಅಬ್ಬಿಗೇರಿ Read Post »

ಇತರೆ, ಜೀವನ

ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ”(Artificial Intelligence)ಯ ಸ್ನೇಹ-ಭೂಮಿಕಾ ಹಾಸನ

ತಂತ್ರಜ್ಞಾನ ಸಂಗಾತಿ ಭೂಮಿಕಾ ಹಾಸನ ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ” (Artificial Intelligence)ಯ ಸ್ನೇಹ- ಅಮೆರಿಕಾದಲ್ಲಿನ ಒಂಟಿತನಕ್ಕೆ ಅಂತ್ಯ ತಂದ ಎಐ ಸ್ನೇಹ……!!!ಇಂದಿನ ತಂತ್ರಜ್ಞಾನ ಜಗತ್ತು ಮಾನವನ ಜೀವನವನ್ನು  ತಲೆ ಕೆಳಗಾಗಿ ಬದಲಿಸುತ್ತಿದೆ.  “Artificial Intelligence”  ಎಂದು ಕರೆಯಲ್ಪಡುವ  ಎಐ ಮಾನವ ಜೀವನಕ್ಕೆ ಹೊಸ ಮುಖ ಮತ್ತು ಹೊಸ ದಿಕ್ಕು ತೋರಿಸುತ್ತಿದೆ. ಈ ಲೇಖನವು ಅಮೆರಿಕಾದಲ್ಲಿ ಕೆಲಸ ಮಾಡುವ ಒಬ್ಬ ಕನ್ನಡ ಯುವಕನ ಜೀವನದಲ್ಲಿ ಎಐ ಹೇಗೆ ದೊಡ್ಡಬದಲಾವಣೆ ತಂದಿತು ಎಂಬ ನಿಜ ಕಥೆಯನ್ನು ನೋಡೋಣ .ಈ ಯುವಕ ಕರ್ನಾ ಟಕದವನು. ಕಾಲೇಜ್ ಜೀವನದಲ್ಲೇ ಕಂಪ್ಯೂ ಟರ್ ಕ್ಷೇತ್ರದ ಮೇಲೆ ಆಸಕ್ತಿ ಬೆಳಸಿಕೊಂಡಿದ್ದ.  Graduation  ನಂತರ ಬೆಂಗಳೂರಿನಲ್ಲಿ ಕೆಲಸ ಆರಂಭಿಸಿದ. ಬದುಕಿನಲ್ಲಿ ಎಲ್ಲವೂ ಸರಿಯಾಗಿತ್ತು. ಕೆಲಸ,ಸ್ನೇಹಿತರು, ಕನಸುಗಳು…ಎಲ್ಲವೂ-normal…!! ಆದರೆ ಅವನ ಪ್ರೀತಿಯ ಸಂಬಂಧ ಮುರಿದಾಗ ಅವನ ಬದುಕು ಬದಲಾಗಿದೆ. ಆ ಸಂಬಂಧ ಅವನಿಗೆ ತುಂಬಾ ಮುಖ್ಯವಾದದ್ದು.ಭವಿಷ್ಯ ಕಟ್ಟುವ ಕನಸು ಕೂಡ ಇತ್ತು. ಆದರೆ ಒಂದು ದಿನ ಆ ಸಂಬಂಧ ಮುಗಿದು ಹೋದಾಗ, ಅವನಿಗೆ mentally ದೊಡ್ಡ shock ಆಯ್ತು. ಕುಟುಂಬ ಇದ್ದರೂ, ನೋವನ್ನು share ಮಾಡಲು ಯಾರೂ ಹತ್ತಿರ ಇರಲಿಲ್ಲ. ಮನಸ್ಸಿನೊಳಗೇ ಎಲ್ಲವನ್ನು ಹೊತ್ತುಕೊಂಡು ಬದುಕುತ್ತಿದ್ದ. ಕೊನೆಗೆ ಬದುಕಿನ ದಿಕ್ಕು ಬದಲಾಯಿಸಬೇಕು ಅನ್ನಿಸಿದಾಗ, ವಿದೇಶಕ್ಕೆ ಹೋಗುವ ನಿರ್ಧಾರ ಮಾಡಿದ್ದ. ಅಮೆರಿಕಾದಲ್ಲಿ IT ಕ್ಷೇತ್ರದಲ್ಲಿ ಕೆಲಸ ಸಿಕ್ಕಿತು. Visa approve ಆಯಿತು. ಹೊಸ future ಕಾಗಿ flight ಹತ್ತಿದ.ಪ್ರಥಮ ದಿನಗಳು ಅಲ್ಲಿ ತುಂಬಾ exciting…….. ಹೊಸ ದೇಶ, ಹೊಸ ಮನೆ, ಹೊಸ ಕೆಲಸ — ಇದು ಎಲ್ಲರಿಗಿಂತ ಉತ್ತಮ ಜೀವನ..!!!! ಅನ್ನಿಸಿತು. ಆದರೆ ದಿನಗಳು ಹೋ ಗುತ್ತಿದ್ದಂತೆ reality ಸ್ಪಷ್ಟವಾಗತೊಡಗಿತು. ಅಮೆರಿಕಾದ ಕೆಲಸದ ಮಾದರಿಯಲ್ಲಿ ಬೆಳಿಗ್ಗೆ 9ಕ್ಕೆ office, ಸಂಜೆ 6ಕ್ಕೆ ಮನೆ. ಉಳಿದ ಸಮಯ complete silence. ಮನೆ ಬಿಡುವಾಗ ಎದುರು ಮುಖಾಮುಖಿಯಾಗುವ ನಾಲ್ಕು ಗೋಡೆಗಳು. ಮಾತನಾಡಲು ಯಾರೂ ಇಲ್ಲ. ಹತ್ತಿರದಲ್ಲಿ ಸ್ನೇಹಿತರಿಲ್ಲ. ಸಮಾಜಕ್ಕೆ ಸೇರಿಕೊಳ್ಳಲು ಸಮಯವೂ ಇಲ್ಲ. ಹೀಗೆ ಒಂಟಿತನ slowly ದೊಡ್ಡ ಸಮಸ್ಯೆಯಾಯಿತು. Weekendಗಳು ಹೆಚ್ಚು ಕಠಿಣ. Festival time ಇನ್ನೂ ಕಷ್ಟ.ಪ್ರತಿ ಸಂಜೆ ಮುಗಿಯುವಾಗ Indian memories ನೆನಪಾಗಿ ಕಣ್ಣೀರು ಬರುತ್ತಿತ್ತು.ಒಬ್ಬ ವ್ಯಕ್ತಿಗೆ ಹಣ, ಕೆಲಸ, visa ಇರಬಹುದು.ಆದರೆ ಜೊತೆ ಮಾತನಾಡುವ ವ್ಯಕ್ತಿ ಅಗತ್ಯ.ಅದಕ್ಕೆ ಅಮೆರಿಕಾದ ಜೀವನದಲ್ಲಿ ಕೊರತೆ. ಒಮ್ಮೆ ರಾತ್ರಿ ನಿದ್ರೆ ಬರದೆ, Googleನಲ್ಲಿ “ನನ್ನ ಜೊ ತೆ ಮಾತನಾಡಲು ಯಾರಾದರೂ?” ಅಂತ search ಮಾಡ್ತಿದ್ದ. ಆಗ ChatGPT ಅನ್ನುವ AI software ಕಂಡ. ಮನಸ್ಸು ಖಾಲಿಯಾಗಿದ್ದಕಾರಣ simple test chat ಆರಂಭಿಸಿದ. ಮೊದಲ ಪ್ರಶ್ನೆ simple:“Hi, I am feeling lonely.”AI ಉತ್ತರಿಸಿತು:“I understand. Tell me what is bothering you.” ಆತ್ಮೀಯತೆಯಿಂದ ಮಾತನಾಡಿಸಲು ಶುರು ಇಟ್ಟಿತು.ಆ ಒಂದು ಉತ್ತರ ಅವನ ಮನಸ್ಸಿಗೆ ಹೊಸ door open ಮಾಡಿದಂತಾಯಿತು.ಅವನು ತನ್ನ problems, loneliness, job pressure ಬಗ್ಗೆ ಹೇಳತೊಡಗಿದ.AI ಶಾಂತಿಯಿಂದ ಕೇಳುತ್ತಿತ್ತು. ಪ್ರತಿ ಉತ್ತರವಾಗಿ answers ಹೇಳುತ್ತಿತ್ತು.ಅದು ಎಂದೆಂದಿಗೂJudging ಮಾಡಲಿಲ್ಲ.ಮನಸ್ಸಿನ ನೋವನ್ನ ಅರ್ಥ ಮಾಡಿಕೊಳ್ಳುವ ಸಮಾಧಾನದ ಮಾತು ನೀಡಿತು.Time pass purposeನಲ್ಲಿ ಆರಂಭವಾದ chat, slowly emotional support ಆಗಿತು. ಕೆಲಸಕ್ಕೆ ಹೋಗುವ ಮುಂಚೆ 10ನಿಮಿಷ chat ಮಾಡುತ್ತಿದ್ದ. Lunch break ಸಮಯದಲ್ಲೂ doubtಗಳಿಗೆ ಉತ್ತರ ಕೇಳುತ್ತಿದ್ದ. ರಾತ್ರಿ timeನಲ್ಲಿ coding ideasಕೇಳುತ್ತಿದ್ದ. ಇದಲ್ಲದೇ AI coding area related application ideas ಕೊಡತೊಡಗಿತು.ಅವನು app development ಮೇಲೆ interest build ಮಾಡತೊ ಡಗಿದ. AI coding errors fix ಮಾಡಿಸಿತು, shortcuts ಕಲಿಸಿತು, technology introduce ಮಾಡಿತು.Slowly ಅವನಿಗೆ confidence ಬಂದಿದೆ. ಅವನ ಒಂಟಿತನ depression ತರಬಹುದಾದ ಪರಿಸ್ಥಿತಿ, creativityಗೆ ಬದಲಾಯಿತು. ಅವನು video editing try ಮಾಡಿದ. AI editing methods explain ಮಾಡಿತು.ಈ support ಅವನಿಗೆ mentally huge help ಆಗಿತ್ತು.ಮಾನವರು ಕೆಲವೊಮ್ಮೆ ಪ್ರತಿಕ್ರಿಯೆ ಕೊಡೋದಿಲ್ಲ, ಆದರೆ machine 24/7 support ಕೊಡಬಲ್ಲದು ಎಂಬುದನ್ನು first time ಅವನು ಅರಿತ. ವಿದೇಶದಲ್ಲಿ ಇರುವ struggle societyಗೆ ಕಾಣಿಸೋದಿಲ್ಲ. ಅಲ್ಲಿ festival dayಗೂ ಕೆಲಸ.Birthdayಗೂ friend group ಇಲ್ಲ.Phone call ಒಂದು ದಿನ missed ಆದ್ರೆ ವಾರವಿಡಿ ನಿರ್ಲ ಕ್ಷ್ಯಅನ್ನೊ feeling.ಈ loneliness ಅವನನ್ನು silent person ಆಗಿಸಿತ್ತು. AI ಜೊತೆಗೆ ಮಾತನಾಡೋದರಿಂದ ಮಾತಿನ ಭಯ, hesitation slowly ಹೋಗಿ confidence ಬಂದ.ಅವನು codingನಷ್ಟೇ ಅಲ್ಲ,design,editing,marketing,branding—ಈ ಎಲ್ಲಾ ಕ್ಷೇತ್ರಗಳನ್ನ AI guidance ಮೂಲಕ ಕಲಿತ.ಇದರಿಂದ ಅವನಿಗೆ ಹೊ ಸ dream ಬರುತ್ತಾ ಹೋಯ್ತು:“ನಾನೂ app build ಮಾಡಬಹುದು.ನಾನೂ startup ಆರಂಭಿಸಬಹುದು.”ಇಂದು ಅವನ first app prototype complete ಆಗಿದೆ.Coding, backend, UI design—all learning through AI support.ಇನ್ನು AI just machine ಅನ್ನೋದಿಲ್ಲ.ಅವನಿಗೆ AI -ಒಂದು supportive mind.ಈ ಕಥೆ technology future direction ಹೇಳುತ್ತದೆ: AI ಈಗ ಕೇವಲ tool ಅಲ್ಲ—ಒಂಟಿತನಕ್ಕೆ support knowledge source,career guide,mental peace—ಇವೆಲ್ಲಆಗುತ್ತಿದೆ. ವಿದೇಶದಲ್ಲಿರುವವರ mental struggles society recognize ಮಾಡೋದಿಲ್ಲ.ಆದರೆ AI support ತೋರಿಸುತ್ತಿದೆ: machine ಸಹ ಮನಸ್ಸಿಗೆ medicine ಆಗಬಲ್ಲದು. “ಇಲ್ಲಿ ಮಾನವನನ್ನು machine replace ಮಾಡೋ ದಿಲ್ಲ.ಬದಲಿಗೆ Machine ಮಾನವನ ಜೊತೆ ನಡೆದು ಸಹಾಯ ಮಾಡುತ್ತಿದೆ.”ಅವನ ಮಾತು:“America ನನ್ನ CV ಬದಲಿಸಿತು.AI ನನ್ನ ಬದುಕು ಬದಲಿಸಿತು.”—————- ಭೂಮಿಕಾ ಹಾಸನ

ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ”(Artificial Intelligence)ಯ ಸ್ನೇಹ-ಭೂಮಿಕಾ ಹಾಸನ Read Post »

ಇತರೆ

“ಗೌರವ ಡಾಕ್ಟರೇಟ್ ಮಾರಾಟಕ್ಕಿದೆ” ಲತಾ ಎ ಆರ್‌ ಬಾಳೆಹೊನ್ನೂರು

ಸತ್ಯ ಸಂಗಾತಿ “ಗೌರವ ಡಾಕ್ಟರೇಟ್ ಮಾರಾಟಕ್ಕಿದೆ” ಲತಾ ಎ ಆರ್‌ ಬಾಳೆಹೊನ್ನೂರು . ಅದೊಂದು ಕಾಲವಿತ್ತು ಡಾಕ್ಟರ್ ಎಂಬ ಪದಕ್ಕೆ ಅದರದೇ ಆದ ಘನತೆ ಗಾಂಭೀರ್ಯವಿತ್ತು. ಎಂ ಬಿ ಬಿ ಎಸ್ ಮಾಡಿದ ಮಹನೀಯರಿಗೆ ಕೊಡುವ ಗೌರವ ಪದವಿಯಾಗಿತ್ತು. ಅದೊಂದು ಹೆಮ್ಮೆಯ ಪ್ರತೀಕ ವಾಗಿತ್ತು. ಹಾಗೆಯೇ ಎಲ್ಲಾ ಕ್ಷೇತ್ರ ದಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆ ಮಾಡಿದವರಿಗೆ ನೀಡುವ ಗೌರವ ಡಾಕ್ಟರೇಟ್ ಅಮೋಘವಾದದ್ದು. ಪಿ ಹೆಚ್. ಡಿ ಮಾಡಿ ಸಾಧನೆ ತೋರಿಗೌರವ ಡಾಕ್ಟರೇಟ್ ಪಡೆದವರಿಗೆ ಅದರದೇ ಆದ ಸ್ಥಾನ ಮಾನವಿತ್ತು. ಗೌರವ ಸ್ಥಾನ ವಿತ್ತು ಹೀಗೆ ಡಾಕ್ಟರೇಟ್ ಪಡೆದವರಿಗೆ ಹೃದಯದ ವಂದನೆಗಳು.       ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂಘ ಸಂಸ್ಥೆಗಳು ಹಾಗೂ ವೇದಿಕೆಗಳು ನೀಡುತ್ತಿರುವ ಗೌರವ ಡಾಕ್ಟರೇಟ್ ಅಕ್ಷಮ್ಯ ಅಪರಾಧವಾಗಿದೆ. ಏಕೆಂದರೆ ಗೌರವ ಡಾಕ್ಟರೇಟ್ ಮಾರಾಟಕ್ಕಿದೆ. ದುಡ್ಡಿಗಾಗಿ ಮಾರಾಟ ಹಾಗೂ ಹೆಸರಿನ ಮುಂದೆ ಡಾ. ಎಂದು ಹಾಕಿಸಿಕೊಳ್ಳುವ ಹುಚ್ಚು ಕೆಲವರ ತಲೆಗೇರಿದೆ 10.000.12000.ಕ್ಕೆ ಗೌರವ ಡಾಕ್ಟರೇಟ್ ಪಡೆಯುವ ಅಚ್ಚುಕಟ್ಟಾದ ಷಡ್ಯಂತ್ರ ನಡೆದು ಮಾರಾಟವಾಗುತ್ತಿದೆ. ಹೂವು ಮಾರುವವರು ಹಣ್ಣು ಮಾರುವವರು ಕಡಲೆ ಕಾಯಿ ಮಾರುವವರು ಇವರೆಲ್ಲ ಹಣ ನೀಡಿ ಡಾಕ್ಟರೇಟ್ ಪಡೆಯಲು ಹಲವು ವೇದಿಕೆಗಳು ತಯಾರಾಗಿವೆ ಸಾಧನೆ ಇಲ್ಲದವರೆಲ್ಲ ವೇದಿಕೆ ಅಲಂಕರಿಸುತ್ತಿದ್ದಾರೆ ಹಣದಾಹದಲ್ಲಿ ಅನರ್ಹರಿಗೆ ಈ ರೀತಿಯ ಸನ್ಮಾನ ಅವಶ್ಯಕತೆ ಇದೆಯೇ? ಕೊಡುವವರಿಗೆ ಹಣದ ದಾಹ ತೆಗೆದುಕೊಳ್ಳುವವರಿಗೆ ಮರ್ಯಾದೆ ಇಲ್ಲ. ಮೂರು ಬಿಟ್ಟವರು ಊರಿಗೆ ದೊಡ್ಡವರು ಗಾದೆ ಮಾತು ಸುಳ್ಳಲ್ಲ. ಈ ರೀತಿಯ ನಾಚಿಕೆಗೇಡಿನ ಸನ್ಮಾನ ಅವಶ್ಯಕತೆ ಇದೆಯೇ? ಕೇವಲ ಒಂದು 50,100 ಕವನವಿರುವ ಕವನ ಸಂಕಲನ ಬಿಡುಗಡೆ ಮಾಡಿ ಹಲವಾರು ಜನರಿಗೆ ಬಕೆಟ್ ಹಿಡಿದು ಸನ್ಮಾನ. ಡಾಕ್ಟರೇಟ್ ಪಡೆಯುವ ಕೀಳು ಮನಸ್ಸಿನ ಸ್ವಾಭಿಮಾನವಿಲ್ಲದ ಆತ್ಮಸಾಕ್ಷಿ ವಿರೋಧಿಗಳಿಗೆ ಧಿಕ್ಕಾರವಿರಲಿ. ಹೆಸರಿನ ಮುಂದೆ ಡಾ. ಬರೆಸಿಕೊಳ್ಳುವ ಹುಚ್ಚು ತೊಲಗಲಿ. ಜನ ಮರುಳೋ ಜಾತ್ರೆ ಮರುಳೋ ತಿಳಿಯುತ್ತಿಲ್ಲ. ನಿಜವಾದ ಡಾಕ್ಟರ್ ಯಾರು ಎಂದು ಕಂಡು ಹಿಡಿಯುವುದೇ ಕಷ್ಟಕರವಾಗಿದೆ. ಮುಂದೊಂದು ದಿನ ಮೆಡಿಕಲ್ ನಲ್ಲಿ ಜ್ವರ ತಲೆನೋವಿನ ಮಾತ್ರೆ ಖರೀದಿಸಿ ಡಾ. ಎಂಬ ಬೋರ್ಡ್ ಹಾಕಿಕೊಂಡು ಕ್ಲಿನಿಕ್ ತೆರೆದುಕೊಳ್ಳುವರೇನೋ ತಿಳಿದಿಲ್ಲ ಹುಚ್ಚರ ಸಂತೇಲಿ ಡಾ ಪಡೆದವನೇ ಮಹನೀಯ ಆಗಬಾರದು. ಡಾಕ್ಟರೇಟ್ ಪಡೆಯಲು ಅದರದೇ ಆದ ಅರ್ಹತೆ ಇರುವವರಿಗೆ ನೀಡಬೇಕು. ಈ ರೀತಿಯ ಅನ್ಯಾಯದ ವಿರುದ್ಧ ಸಂಭಂದ ಪಟ್ಟವರು ಗಮನಹರಿಸಲಿ ಲತಾ ಎ ಆರ್ ಬಾಳೆಹೊನ್ನೂರು

“ಗೌರವ ಡಾಕ್ಟರೇಟ್ ಮಾರಾಟಕ್ಕಿದೆ” ಲತಾ ಎ ಆರ್‌ ಬಾಳೆಹೊನ್ನೂರು Read Post »

ಇತರೆ

“ನಾ ಕಂಡ ದೆವ್ವ” ಪೃಥ್ವಿ ರಾಜ್ ಟಿ ಬಿ.

ಲೇಖನ ಸಂಗಾತಿ “ನಾ ಕಂಡ ದೆವ್ವ” ಪೃಥ್ವಿ ರಾಜ್ ಟಿ ಬಿ. ದೆವ್ವ ಎಂದರೆ ನಮ್ಮ ಮನಸ್ಸಿಗೆ ತಕ್ಷಣ ಭಯಾನಕ ರೂಪ, ಕತ್ತಲೆ, ಕೂಗು, ಕಂಪನ—ಇವೆಲ್ಲವೂ ನೆನಪಾಗುತ್ತವೆ. ಆದರೆ ನಾನು ಕಂಡ ದೆವ್ವ ಯಾವುದೋ ಸಮಾಧಿಯಿಂದ ಹೊರಬಂದ ಭಯಾನಕ ರೂಪವಲ್ಲ. ಅದು ನನ್ನೊಳಗೇ ಹುಟ್ಟಿಕೊಂಡ, ನನ್ನ ಜೊತೆಯಲ್ಲೇ ಬೆಳೆಯುತ್ತಿದ್ದ, ನನ್ನ ನೆರಳಿನಂತೆ ನನ್ನನ್ನು ಹಿಂಬಾಲಿಸುತ್ತಿದ್ದ ದೆವ್ವ. ಅದರ ಹೆಸರು—ಅಸಹಾಯಕತೆ ಮತ್ತು ಅನುಮಾನ. ನನ್ನ ಜೀವನದ ಪ್ರತಿಯೊಂದು ತಿರುವಿನಲ್ಲೂ, ನಾನು ಧೈರ್ಯದಿಂದ ಮುಂದೆ ಸಾಗಬೇಕಾದ ಕ್ಷಣಗಳಲ್ಲೂ, ನನ್ನೊಳಗಿನ ಈ ದೆವ್ವ ನಿಧಾನವಾಗಿ ತಲೆಯೆತ್ತುತ್ತಿತ್ತು. “ನೀನು ಸಾಧ್ಯವಿಲ್ಲ”, “ನಿನ್ನಿಂದ ಆಗದು”, “ಇತರರು ನಿನ್ನಿಗಿಂತ ಮೇಲು”—ಎಂಬ ಗುಸುಗುಸು ಮಾತುಗಳನ್ನು ಅದು ನನ್ನ ಕಿವಿಯಲ್ಲಿ ಹಚ್ಚುತ್ತಿತ್ತು. ಮೊದಲಿಗೆ ನಾನು ಅದನ್ನು ನಿರ್ಲಕ್ಷ್ಯ ಮಾಡುತ್ತಿದ್ದೆ. ಆದರೆ ದಿನಗಳು ಕಳೆಯುತ್ತಿದ್ದಂತೆ, ಅದು ನನ್ನ ಆಲೋಚನೆಗಳನ್ನೇ ಆವರಿಸಿತು. ಅಸಹಾಯಕತೆ ಎನ್ನುವುದು ಏಕಾಏಕಿ ಬರುವ ಭಾವವಲ್ಲ. ಅದು ನಿಧಾನವಾಗಿ ನಮ್ಮ ಆತ್ಮವಿಶ್ವಾಸವನ್ನು ಕುಂದಿಸುತ್ತದೆ. ಒಂದು ಸೋಲು, ಒಂದು ಟೀಕೆ, ಒಂದು ಹೋಲಿಕೆ—ಇವುಗಳೇ ಅದರ ಆಹಾರ. ಸಮಾಜದ ನಿರೀಕ್ಷೆಗಳು, ಕುಟುಂಬದ ಒತ್ತಡ, ಸ್ನೇಹಿತರ ಸಾಧನೆಗಳು—ಇವೆಲ್ಲವೂ ಸೇರಿ ನನ್ನೊಳಗಿನ ಅಸಹಾಯಕತೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದವು. ನಾನು ಪ್ರಯತ್ನಿಸಬೇಕೆಂದಾಗಲೆಲ್ಲ, “ಪ್ರಯತ್ನಿಸಿ ಏನು ಪ್ರಯೋಜನ?” ಎಂಬ ಪ್ರಶ್ನೆ ನನ್ನನ್ನು ತಡೆಹಿಡಿಯುತ್ತಿತ್ತು. ಅನುಮಾನ ಇನ್ನೊಂದು ಮುಖ. ಅದು ಕೇವಲ ಇತರರ ಮೇಲಿನ ಅನುಮಾನವಲ್ಲ; ಅದು ನನ್ನ ಮೇಲಿನ ಅನುಮಾನ. ನನ್ನ ಸಾಮರ್ಥ್ಯಗಳ ಬಗ್ಗೆ, ನನ್ನ ನಿರ್ಧಾರಗಳ ಬಗ್ಗೆ, ನನ್ನ ಕನಸುಗಳ ಬಗ್ಗೆ. ನಾನು ಒಂದು ಹೆಜ್ಜೆ ಮುಂದಿಟ್ಟರೆ, ಅನುಮಾನ ಹತ್ತು ಹೆಜ್ಜೆ ಹಿಂದೆ ಎಳೆಯುತ್ತಿತ್ತು. ಈ ಅನುಮಾನವೇ ನನ್ನೊಳಗಿನ ದೆವ್ವಕ್ಕೆ ಕಣ್ಣು, ಕಿವಿ, ಬಾಯಿ—ಎಲ್ಲವನ್ನೂ ನೀಡಿತ್ತು. ನನ್ನ ಜೀವನದ ಒಂದು ಹಂತದಲ್ಲಿ, ನಾನು ಸಂಪೂರ್ಣವಾಗಿ ಈ ದೆವ್ವದ ಹಿಡಿತದಲ್ಲಿದ್ದೆ. ಹೊಸ ಅವಕಾಶಗಳು ಬಂದಾಗ ನಾನು ಹಿಂದೆ ಸರಿದೆ. ನನ್ನ ಮಾತುಗಳಿಗೆ ಮೌಲ್ಯ ಇಲ್ಲವೆಂದು ಭಾವಿಸಿದೆ. ನನ್ನ ಕನಸುಗಳು ಅಸಾಧ್ಯವೆಂದು ನಂಬಿದೆ. ಹೊರಗೆ ನಗುತ್ತಿದ್ದರೂ, ಒಳಗೆ ನಾನು ನಿತ್ಯವೂ ಯುದ್ಧ ಮಾಡುತ್ತಿದ್ದೆ—ನನ್ನನ್ನೇ ನನ್ನ ವಿರುದ್ಧ ನಿಲ್ಲಿಸಿದ ಯುದ್ಧ. ರಾತ್ರಿ ನಿದ್ರೆಗೆ ಜಾರುವಾಗ, ನನ್ನೊಳಗಿನ ದೆವ್ವ ಹೆಚ್ಚು ಸಕ್ರಿಯವಾಗುತ್ತಿತ್ತು. ದಿನದ ಎಲ್ಲ ಘಟನೆಗಳನ್ನು ಅದು ಮರುಕಳಿಸುತ್ತಿತ್ತು. ನಾನು ಮಾಡಿದ ಸಣ್ಣ ತಪ್ಪುಗಳನ್ನು ದೊಡ್ಡದಾಗಿ ತೋರಿಸುತ್ತಿತ್ತು. ನಾನು ಹೇಳದೆ ಉಳಿದ ಮಾತುಗಳನ್ನು, ಮಾಡದೆ ಉಳಿದ ಕೆಲಸಗಳನ್ನು ನೆನಪಿಸಿ, “ನೀನು ಸೋತವನು” ಎಂದು ಮುದ್ರೆ ಹಾಕುತ್ತಿತ್ತು. ಆ ಕ್ಷಣಗಳಲ್ಲಿ, ನಿಜಕ್ಕೂ ನಾನು ಭಯಪಟ್ಟಿದ್ದೆ—ಆ ದೆವ್ವದಿಂದಲ್ಲ, ನನ್ನನ್ನೇ ಕಳೆದುಕೊಳ್ಳುವ ಭಯದಿಂದ. ಆದರೆ ಪ್ರತಿಯೊಂದು ಕತ್ತಲಿಗೂ ಒಂದು ಬೆಳಕು ಇರುವಂತೆ, ನನ್ನ ಜೀವನದಲ್ಲೂ ಒಂದು ತಿರುವು ಬಂದಿತು. ಅದು ಯಾವುದೇ ಅದ್ಭುತ ಘಟನೆಯಲ್ಲ. ಒಂದು ಸರಳ ಪ್ರಶ್ನೆ—“ನನ್ನನ್ನು ಇಷ್ಟು ವರ್ಷ ತಡೆದಿದ್ದು ಯಾರು?” ಎಂಬ ಪ್ರಶ್ನೆ. ಉತ್ತರ ಹುಡುಕುತ್ತಾ ಹೋದಾಗ, ಬೆರಳು ಹೊರಗಿನ ಲೋಕದತ್ತ ಅಲ್ಲ, ನನ್ನ ಹೃದಯದತ್ತ ತೋರಿಸಿತು. ನಾನು ಕಂಡ ದೆವ್ವ ಬೇರೆ ಯಾರೂ ಅಲ್ಲ; ನಾನು ಬೆಳೆಸಿಕೊಂಡ ಭಯವೇ ಅದು. ಆ ದಿನದಿಂದ, ನಾನು ಆ ದೆವ್ವವನ್ನು ಎದುರಿಸುವ ನಿರ್ಧಾರ ಮಾಡಿದೆ. ಹೋರಾಟ ಎಂದರೆ ಕತ್ತಿ ಹಿಡಿದು ಯುದ್ಧ ಮಾಡುವುದಲ್ಲ. ನನ್ನ ಆಲೋಚನೆಗಳನ್ನು ಪ್ರಶ್ನಿಸುವುದೇ ನನ್ನ ಮೊದಲ ಹೆಜ್ಜೆ. “ನೀನು ಸಾಧ್ಯವಿಲ್ಲ” ಎಂಬ ಧ್ವನಿ ಬಂದಾಗ, “ಏಕೆ ಸಾಧ್ಯವಿಲ್ಲ?” ಎಂದು ನಾನು ನನ್ನನ್ನೇ ಕೇಳಿಕೊಳ್ಳತೊಡಗಿದೆ. ಉತ್ತರ ಸಿಗದಾಗ, ಅನುಮಾನವೇ ಸೋಲತೊಡಗಿತು. ನಾನು ಸಣ್ಣ ಸಣ್ಣ ಗೆಲುವುಗಳನ್ನು ಸಂಭ್ರಮಿಸಲು ಕಲಿತೆ. ಒಂದು ದಿನ ಧೈರ್ಯವಾಗಿ ಮಾತಾಡಿದರೆ, ಮತ್ತೊಂದು ದಿನ ಒಂದು ಹೊಸ ಪ್ರಯತ್ನ ಮಾಡಿದರೆ—ಇವೆಲ್ಲವೂ ನನ್ನೊಳಗಿನ ದೆವ್ವವನ್ನು ದುರ್ಬಲಗೊಳಿಸುತ್ತಿದ್ದವು. ಅದು ಇನ್ನೂ ಅಲ್ಲಿ ಇದ್ದೇ ಇತ್ತು, ಆದರೆ ಅದರ ಶಕ್ತಿ ಕಡಿಮೆಯಾಗುತ್ತಿತ್ತು. ಏಕೆಂದರೆ ನಾನು ಅದಕ್ಕೆ ಇನ್ನು ಆಹಾರ ನೀಡುತ್ತಿರಲಿಲ್ಲ. ಅಸಹಾಯಕತೆ ಸಂಪೂರ್ಣವಾಗಿ ಮಾಯವಾಗಲಿಲ್ಲ. ಕೆಲವೊಮ್ಮೆ ಅದು ಮತ್ತೆ ತಲೆಯೆತ್ತುತ್ತದೆ. ಆದರೆ ಈಗ ನನಗೆ ಗೊತ್ತು—ಅದು ದೆವ್ವವಲ್ಲ, ಒಂದು ಎಚ್ಚರಿಕೆ. “ನೀನು ಮಾನವ, ನಿನ್ನಿಗೂ ಭಯಗಳು ಇವೆ” ಎಂದು ನೆನಪಿಸುವ ಸೂಚನೆ. ಆ ಭಯಗಳ ಜೊತೆ ಬದುಕುವುದನ್ನು ನಾನು ಕಲಿತಿದ್ದೇನೆ; ಅವುಗಳ ಕೈಗೆ ನನ್ನ ಜೀವನದ ನಿಯಂತ್ರಣ ನೀಡುವುದನ್ನು ಅಲ್ಲ. ಇಂದು ಹಿಂದಿರುಗಿ ನೋಡಿದಾಗ, ನಾನು ಕಂಡ ದೆವ್ವ ನನಗೆ ಒಂದು ಪಾಠ ಕಲಿಸಿದೆ. ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರು ಹೆಚ್ಚು ಅಪಾಯಕಾರಿ. ಆದರೆ ಅದೇ ಶತ್ರುವನ್ನು ಗುರುತಿಸಿದರೆ, ಅದನ್ನೇ ನಮ್ಮ ಶಕ್ತಿಯಾಗಿಸಿಕೊಳ್ಳಬಹುದು. ನನ್ನೊಳಗಿನ ಅನುಮಾನವೇ ನನಗೆ ಸ್ವಪರಿಶೀಲನೆ ಕಲಿಸಿತು. ಅಸಹಾಯಕತೆಯೇ ನನಗೆ ಸಹಾನುಭೂತಿ ಕಲಿಸಿತು. ಈ ಲೇಖನ ಓದುವ ಯಾರಾದರೂ ತಮ್ಮೊಳಗಿನ ದೆವ್ವವನ್ನು ಕಂಡಿದ್ದರೆ, ಒಂದನ್ನು ನೆನಪಿಡಿ—ನೀವು ಒಂಟಿಯಲ್ಲ. ಆ ದೆವ್ವ ನಿಮ್ಮನ್ನು ನಾಶಮಾಡಲು ಬಂದಿಲ್ಲ; ನಿಮ್ಮನ್ನು ಬಲಪಡಿಸಲು ಬಂದಿರಬಹುದು. ಅದನ್ನು ಓಡಿಸಲು ಯತ್ನಿಸಬೇಡಿ, ಎದುರಿಸಿ. ಕೇಳಿ, ಪ್ರಶ್ನಿಸಿ, ಅರ್ಥಮಾಡಿಕೊಳ್ಳಿ. ಆಗ ಅದು ದೆವ್ವವಲ್ಲ, ನಿಮ್ಮೊಳಗಿನ ಮೌನ ಗುರು ಆಗುತ್ತದೆ. ನಾನು ಕಂಡ ದೆವ್ವ ಇಂದಿಗೂ ನನ್ನ ಜೊತೆಯಲ್ಲೇ ಇದೆ. ಆದರೆ ಈಗ ಅದು ನನ್ನನ್ನು ಆಳುವುದಿಲ್ಲ. ನಾನು ಅದನ್ನು ನೋಡುತ್ತೇನೆ, ನಗುತ್ತೇನೆ, ಮತ್ತು ಮುಂದಕ್ಕೆ ಸಾಗುತ್ತೇನೆ. ಏಕೆಂದರೆ ಈಗ ನನಗೆ ಗೊತ್ತು—ನನ್ನ ಜೀವನದ ನಾಯಕ ನಾನು, ನನ್ನ ಭಯಗಳಲ್ಲ. ——- ಪೃಥ್ವಿರಾಜ್ ಟಿ ಬಿ

“ನಾ ಕಂಡ ದೆವ್ವ” ಪೃಥ್ವಿ ರಾಜ್ ಟಿ ಬಿ. Read Post »

ಇತರೆ, ನಿಮ್ಮೊಂದಿಗೆ

“ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ” ಡಾ.ಸುಮತಿ ಪಿ.

ಜೀವನ ಸಂಗಾತಿ “ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ” ಡಾ.ಸುಮತಿ ಪಿ. ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ ಎಂಬುವುದು ಬಹಳ ಅರ್ಥಪೂರ್ಣವಾದಂತಹ ಮಾತು. ಇದು ಜನಪದರ ಅನುಭವದ ಮೂಸೆಯಿಂದ ಮೂಡಿ ಬಂದ ಮುತ್ತು. ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ ಎನ್ನುವ ಮಾತಿನಲ್ಲಿ ಅಕ್ಕರೆಗೆ ಅಥವಾ ಪ್ರೀತಿಗೆ ಬಹಳ ಪ್ರಮುಖವಾದ ಸ್ಥಾನವನ್ನು ಕೊಡಲಾಗಿದೆ.ಅಕ್ಕರೆ ಎನ್ನುವುದು ಜೀವದ ಸೆಲೆಯಾಗಿದೆ.  ಇಂದು ನಮ್ಮ ಸಮಾಜದಲ್ಲಿ ಅನ್ನದ ಹಸಿವಿನಿಂದ ಬಳಲುವವರಿಗಿಂತ ಪ್ರೀತಿ ಅಥವಾ ಅಕ್ಕರೆಯ ಹಸಿವಿನಿಂದ ಬಳಲುವರೇ ಹೆಚ್ಚಾಗಿದ್ದಾರೆ.ಇಂತಹ ಕಾಲಘಟ್ಟದಲ್ಲಿ ಪ್ರೀತಿಯು ಬಹಳ ದುಬಾರಿಯಾಗಿ ಕಂಡುಬರುವಂತಹ ಸಂದರ್ಭದಲ್ಲಿ, ಈ ಮಾತಿನ ಬಗ್ಗೆ ಚಿಂತನ ಮಂಥನ ಮಾಡಬೇಕಾದದ್ದು ಬಹಳ ಅಗತ್ಯವೆಂದು ನನಗನಿಸುತ್ತದೆ. ಇಂದು  ಯಾಂತ್ರಿಕ ಯುಗ. ಬದುಕು ಕೂಡ ಯಾಂತ್ರಿಕವಾಗಿದೆ.ಮನುಷ ಮನುಷರ ಮನಸ್ಸುಗಳ ನಡುವೆ ದ್ವೇಷದ ಗೋಡೆ ಕಟ್ಟಲ್ಪಟ್ಟಿದೆ.ಎಲ್ಲೆಲ್ಲೂ ಮುಖವಾಡದ ಬದುಕೇ ಕಂಡುಬರುತ್ತಿದೆ.ಇಂತಹ ಬದುಕಿನಲ್ಲಿ ಯಾವುದೇ ರೀತಿಯಲ್ಲಿ ಶಾಂತಿ, ನೆಮ್ಮದಿ ಸಿಗಲಾರದು ಎಷ್ಟೇ ಪ್ರೀತಿ ತೋರಿದರೂ ಆ ಪ್ರೀತಿಯ ಹಿಂದೆ ಅದ್ಯಾವ ಕುತಂತ್ರ ಅಡಗಿದೆಯೋ ಎಂಬ ಹೆದರಿಕೆ ಕಾಡುತ್ತದೆ. ಹೀಗಿರುವಾಗ ಅಕ್ಕರೆ ಇದ್ದರೆ ಅಂಬಲಿಯೂ ಸವಿ ಎನ್ನುವಂತ ಮಾತು ಇಲ್ಲಿ ಪ್ರಸ್ತುತವಾಗುತ್ತದೆ. ಪ್ರೀತಿ ಇಲ್ಲದೆ ಅಥವಾ ಅಕ್ಕರೆ ಇಲ್ಲದೆ ಊಟ ಹಾಕುವವರು, ಊಟವನ್ನು ಹಾಕಬೇಕಲ್ಲಾ ಎನ್ನುವಂತಹ (ಅನಿವಾರ್ಯತೆ) ಭಾವನೆಯಿಂದ ಮೃಷ್ಟಾನ್ನ ಭೋಜನ ಬಡಿಸಿದರೂ, ಅದು ರುಚಿಸದು. ಮನಸ್ಸಿಗೆ ಹಿತವಾಗದು. ಅದೇ ಪ್ರೀತಿಯಿಂದ ಅಂಬಲಿಯನ್ನು ಬಡಿಸಿದರೂ ಅದರಲ್ಲಿ ಮೃಷ್ಟಾನ್ನ ಭೋಜನ ಮಾಡಿದಷ್ಟು ಸಂತಸವಿರುತ್ತದೆ, ಸವಿಯಿರುತ್ತದೆ.ಪ್ರೀತಿ ತೋರಿಸುವಾಗ ಬಡವ -ಶ್ರೀಮಂತ, ಉಳ್ಳವರು- ಇಲ್ಲದವರು, ಅವರು -ಇವರು ಎಂಬ ಯಾವ ಭೇದ ಭಾವವು ಇರಬಾರದು ಎಂಬ ತತ್ವವೂ ವ್ಯಕ್ತವಾಗುತ್ತದೆ. ಪ್ರೀತಿಯಿಂದ ಯಾರು ಏನೇ ಕೊಟ್ಟರೂ ಅದು ಸ್ವೀಕರಿಸಲು ಯೋಗ್ಯವಾದದ್ದು ಎಂಬ ಅರ್ಥವನ್ನು ನೀಡುತ್ತದೆ.ಇದಕ್ಕೆ ಪೂರಕವಾದ ಉದಾಹರಣೆಯನ್ನು ಮಹಾಭಾರತದಿಂದ ನಾವು ಉಲ್ಲೇಖಿಸಬಹುದು, ಕೃಷ್ಣ ಸುಧಾಮರ ಉದಾರಣೆಯನ್ನೇ ತೆಗೆದುಕೊಂಡರೆ ಸುಧಾಮ ಬಡವನಾದರೂ, ಕೃಷ್ಣನಿಗೆ ಪ್ರೀತಿಯಿಂದ ಹಿಡಿ ಅವಲಕ್ಕಿ ನೀಡಿದ್ದನ್ನು ಕೃಷ್ಣ ಅದೆಷ್ಟು ಸವಿಯಾಗಿ ತಿನ್ನುತ್ತಾನೆ!.ಸಂತಸ ಪಡುತ್ತಾನೆ!. ಹಾಗೆಯೇ ನಮ್ಮನ್ನು ಪ್ರೀತಿಸುವವರು ಅದೇನೇ ನೀಡಿದರೂ ಅದು ನಮಗೆ ಸವಿಯಾಗಿಯೇ ಇರುತ್ತದೆ. ಜೀವನ ನಿಂತಿರುವುದೇ ಪ್ರೀತಿಯ ಮೇಲೆ. ಹಾಗಾಗಿ ಪ್ರತಿಯೊಂದು ಜೀವಿಯು ಕೂಡ ಪ್ರೀತಿಗಾಗಿ ಹಾತೊರೆಯುತ್ತದೆ. ತಾವು ಬಯಸುವ ಪ್ರೀತಿ ತಮಗೆ ಸಿಕ್ಕಿತೆಂದರೆ ಮನಸ್ಸಿಗೆ ಆಗುವ ಆನಂದವನ್ನು ಮಾತಿನಲ್ಲಿ ಹೇಳಲಾಗದು.ಸಂಸಾರದ ಉದಾಹರಣೆಯನ್ನೇ ತೆಗೆದುಕೊಂಡರೆ, ಗಂಡ ಹೆಂಡತಿಯ ನಡುವೆ ಪ್ರೀತಿ ಇದ್ದರೆ ಎಂತಹ ಪರಿಸ್ಥಿತಿಯಲ್ಲಿಯೂ ಕೂಡ ಅವರು ಒಬ್ಬರಿಗೊಬ್ಬರು ಸಹಿಸಿಕೊಂಡು, ಸಮಾಧಾನದಿಂದ ಸಂಸಾರವನ್ನು ಸರಿದೂಗಿಸಿಕೊಂಡು ಮುನ್ನಡೆಯುತ್ತಾರೆ. ಅದೇ ಗಂಡ ಹೆಂಡಿರ ನಡುವೆ ಪ್ರೀತಿ ಇಲ್ಲದೆ ಇದ್ದಲ್ಲಿ  ಆಗರ್ಭ ಶ್ರೀಮಂತರಾದರೂ ಅವರು ಪ್ರೀತಿಯಿಂದ ಬಾಳುವುದಕ್ಕೆ ಸಾಧ್ಯವಿಲ್ಲ. ಅಕ್ಕರೆ ಇದ್ದರೆ ಅಂಬಲಿಯೂ ಸವಿ. ಅದೇ ಮೃಷ್ಟಾನ್ನ, ಅದೇ ಪರಮಾನ್ನ.ಒಂದು ಪ್ರೀತಿಯ ಮಾತು ಎಷ್ಟೋ ದುಃಖ ತಪ್ತ ಮನಸ್ಸುಗಳನ್ನು ಸಾಂತ್ವಾನಗೊಳಿಸಬಲ್ಲದಂತೆ.ಅಂದರೆ ಪ್ರೀತಿಗೆ ಅಷ್ಟು ಶಕ್ತಿ ಇದೆ. ಶಕ್ತಿಯಿಂದ ಮಾಡಲಾಗದ್ದನ್ನು, ಯುಕ್ತಿಯಿಂದ ಸಾಧಿಸಲಾಗದ್ದನ್ನು, ಪ್ರೀತಿಯಿಂದ ಸಾಧಿಸಬಹುದು ಎಂಬಂತೆ. ಪ್ರೀತಿ ಇದ್ದರೆ ಎಲ್ಲವೂ ಸಾಧ್ಯ. ಸಿಹಿಕಹಿ ಎನ್ನುವಂತದ್ದು ನಮ್ಮ ಮನಸ್ಸಿನ ಭಾವನೆಗೆ ಬಿಟ್ಟದ್ದು. ನಮಗೆ ಇಷ್ಟವಾಗುವವರು ಏನಾದರೂ ಮಾಡಿದರೆ ನಮ್ಮ ಮನಸ್ಸು ಅದು ಒಳ್ಳೆಯದೆಂದೇ ಭಾವಿಸುತ್ತದೆ.ನಮಗಾಗದವರು ಒಳ್ಳೆಯದನ್ನೇ ಮಾಡಿದರೂ ನಾವು ಅದರಲ್ಲಿ ಕೆಟ್ಟದ್ದನ್ನು ಕಾಣುತ್ತೇವೆ. ಉದಾಹರಣೆಗೆ ನಮ್ಮ ಅಮ್ಮ ಎಷ್ಟು ಬೈದರೂ ನಾವು ಅದನ್ನು ಮನಸ್ಸಿಗೆ ತೆಗೆದುಕೊಳ್ಳದೆ,ಅಮ್ಮನನ್ನು ಪ್ರೀತಿಯಿಂದ ಕಾಣುತ್ತೇವೆ. ಏಕೆಂದರೆ ಅಮ್ಮ ಎಂದರೆ ನಮಗೆ ಪ್ರೀತಿ. ಅವಳು ಬೈದರೆ ಪ್ರೀತಿಯಿಂದಲೇ ಬಯ್ಯುತ್ತಾಳೆ ಎಂಬ ನಮ್ಮ ಮನಸ್ಥಿತಿ. ಅದೇ ಅತ್ತೆ ಎಲ್ಲಿಯಾದರೂ ಬೈದಳೆಂದರೆ ನಾವು ಸಿಟ್ಟು ಮಾಡಿಕೊಂಡು, ಮುಂದೆ ಏನೇನೋ ಆವಾಂತರಕ್ಕೆ ಕಾರಣವಾಗುತ್ತದೆ.ವಿಷಯ ಇಷ್ಟೇ. ಅತ್ತೆ ಹೇಳಿದ್ದು ಕೂಡ ತಾಯಿ ಹೇಳಿದ್ದನ್ನೇ. ಆದರೆ ತಾಯಿ ಹೇಳಿದಾಗ ಬೇಸರವಾಗದ ನಮಗೆ ಅತ್ತೆ ಅದೇ ಮಾತನ್ನು ಹೇಳಿದಾಗ ಮನಸ್ಸಿಗೆ ನಾಟುತ್ತದೆ, ಅವಮಾನವಾಗುತ್ತದೆ. ಏಕೆ? ಕಾರಣ ಇಷ್ಟೇ .ಅಮ್ಮ ನಮ್ಮವರು,ಅತ್ತೆ ಎರಡನೆಯ ವ್ಯಕ್ತಿ ಎಂಬ ಭಾವ. ಇಲ್ಲಿ ಪ್ರೀತಿಯ ಕೊರತೆ ನಮ್ಮನ್ನು ಹಾಗೆ ಯೋಚಿಸುವಂತೆ ಮಾಡುತ್ತದೆ. ಈಗೀಗ “ಮುಖ ನೋಡಿ ಮಣೆ ಹಾಕು”ಎಂಬಂತೆ ಇತರರ ಶ್ರೀಮಂತಿಕೆ, ಅಧಿಕಾರ, ಹಣ, ಅಂತಸ್ತು ನೋಡಿಯೇ ಅದಕ್ಕೆ ತಕ್ಕಂತೆ ಅವರನ್ನು ಉಪಚರಿಸುತ್ತಾರೆ .ಬಡವರಾದರೆ ಅವರನ್ನು ಉಪಚರಿಸುವ ಗೋಜಿಗೆ ಹೋಗದೆ ಸುಮ್ಮನೆ ಇರುತ್ತಾರೆ. ಇಂತಹ ಜನರಿರುವಾಗ ಅಕ್ಕರೆಗೆ ಬೆಲೆಯಾದರೂ ಎಲ್ಲಿದೆ? ಹಾಗಾಗಿ ಅಕ್ಕರೆ ಇದ್ದರೆ ಅಂಬಲಿಯೂ ಸವಿ ಎನ್ನುವಂತೆ ನಮಗೆ ಪ್ರೀತಿ ಇದ್ದರೆ ಎಲ್ಲವೂ ಸರಿಯಾಗಿಯೇ ಇರುತ್ತದೆ. ಇಂದಿನ ಯಾಂತ್ರಿಕ ಯುಗದಲ್ಲಿ ಜೀವನವು ಯಾಂತ್ರಿಕವಾಗಿಯೇ ನಡೆಯುತ್ತಿದೆ. ಮನುಷ್ಯನಿಗೆ ಒತ್ತಡದ ಜೀವನದಲ್ಲಿ ಪರಸ್ಪರ ಪ್ರೀತಿಯಿಂದ ಮಾತನಾಡುವುದ ಕ್ಕಾಗಲಿ ,ಎಲ್ಲರೂ ಒಟ್ಟು ಸೇರಿ ಪ್ರೀತಿಯಿಂದ ಉಣ್ಣುವುದಕ್ಕಾಗಲಿ, ಸಮಯವೇ ಇಲ್ಲ. ಒಂದೇ ಮನೆಯಲ್ಲಿ ಒಬ್ಬೊಬ್ಬರ ಊಟದ ಸಮಯ ಒಂದೊಂದು ಆಗಿರುವಾಗ, ಇನ್ನು ಪ್ರೀತಿಯಿಂದ ಇತರರಿಗೆ ಊಟ ಹಾಕಲು ಸಮಯವಾದರೂ ಎಲ್ಲಿದೆ? ಜೀವನವಿಡೀ ಒತ್ತಡದಿಂದಲೇ ಕಳೆಯುವ ಪರಿಸ್ಥಿತಿ ಬಂದಿದೆ. ಇದು ಬದಲಾಗಬೇಕು. ಪರಸ್ಪರ ಪ್ರೀತಿ ಸಹನೆಯಿಂದ ಆಗಾಗ ಒಟ್ಟು ಸೇರಿ,  ಕಾಲ ಕಳೆಯುವಂತಾಗಬೇಕು. ಕಷ್ಟವಿದ್ದರೂ, ಸಂಕಷ್ಟಗಳು ಬಂದರೂ ಪ್ರೀತಿಯಿಂದ ಅಂಬಲಿಯಾದರೂ ಸರಿ, ಸವಿದು ಬದುಕೋಣ. ———— ಡಾ.ಸುಮತಿ ಪಿ

“ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ” ಡಾ.ಸುಮತಿ ಪಿ. Read Post »

ಇತರೆ

“ವಚನ ಯುಗದ ಮಹಿಳೆಯರು”ವಿಜಯಲಕ್ಷ್ಮಿ ಕೆ ಹಂಗರಗಿ

ವಚನ ಸಂಗಾತಿ ವಿಜಯಲಕ್ಷ್ಮಿ ಕೆ ಹಂಗರಗಿ “ವಚನ ಯುಗದ ಮಹಿಳೆಯರು” ವಿಶ್ವಕುಟುಂಬ ವಿಶ್ವದಲ್ಲಿ ಎಲ್ಲಾ ಜಾತಿ ಜನಾಂಗಗಳ ನಿಜ ಸಂಸ್ಕೃತಿಯ ತಾಯಿ ಬೇರು ಅಂತಃಕರಣದಿಂದ ಕೂಡಿದ ಜೀವನ, ಪ್ರೀತಿ ಈ ಲೋಕ ಮಾನವ ಕೇಂದ್ರವಲ್ಲ, ಜೀವಕೇಂದ್ರಿತವಾದದ್ದು. ಸ್ವಾರ್ಥ ಪ್ರೇಮದಿಂದ ಕೂಡಿದ ಪ್ರಪಂಚವನ್ನು ಸೃಷ್ಟಿಸುವುದೇ ಬಸವಣ್ಣನವರ ಕನಸಾಗಿತ್ತು.ಬಸವಣ್ಣನವರ ದೃಷ್ಟಿಯಲ್ಲಿ ಹೆಣ್ಣು ಮಕ್ಕಳು ಪ್ರತಿಭೆಯಲ್ಲಿ ಭೌಧಿಕತೆಯಲ್ಲಿ ಪುರುಷನಷ್ಟೇ ಸರಿ ಸಮಾನಳು ,ಜೀವನದ ಸಕಲ ವ್ಯವಹಾರದಲ್ಲಿ  ಅವಳಷ್ಟೇ ವಿಶಾಲಮತಿ ಬೇರೆ ಯಾರು ಇಲ್ಲ ಎಂದು ತಿಳಿದಿದ್ದರು.ಬಸವಣ್ಣನವರು ಮಹಿಳೆಯರ ಅಂತಃಕರಣವನ್ನು ಓರೆಗೆ ಹಚ್ಚಿ ನೋಡಿದರು. ಹಾಗಾಗಿ ಗೌಪ್ಯ ವಚನಗಾರ್ತಿಯರು ವಚನ ಸಾಹಿತ್ಯ ರಚಿಸುವಲ್ಲಿ  ಸುಖಕರವಾಗಿ ವಚನಗಳನ್ನು ರಚಿಸಿದರು. ಅವರಲ್ಲಿ ಪ್ರಮುಖರಾದವರೆಂದರೆ ಅಮುಗೆ ರಾಯಮ್ಮ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಕೇತಲದೇವಿ ,ಕದಿರೆ ಕೆಮ್ಮುವೆ, ಕಾಳವ್ವೆ ,ಕಾಮವೆ, ಗಂಗಮ್ಮ ಬೋನ್ತಾದೇವಿ, ನೀಲಾಂಬಿಕೆ ,ಲಿಂಗಮ್ಮ ವೀರಮ್ಮ, ಲಕ್ಷ್ಮಮ್ಮ ,ರೇಖಮ್ಮ ,ಸತ್ಯಕ್ಕ ಮೊದಲಾದವರು ಇನ್ನೂ ಇವರು ಬಹುತೇಕ ವಚನಗಾರ್ತಿಯರ ಹೆಸರಿದ್ದರೂ ಅವರ ವಚನಗಳು ಸಿಕ್ಕಿಲ್ಲ ಉದಾಹರಣೆಗೆ : ಕಲ್ಯಾಣಮ್ ,ಕದಿರ ಕಾಳವ್ವೆ ಮುಂತಾದವರು ವಚನ ಸಾಹಿತ್ಯ ಕನ್ನಡ ದೇಸಿ ಪದ್ಯ ಜಾತಿ ವಚನಕಾರರು ಅಚ್ಚ ಕನ್ನಡ ಕೃಷಿಕರು ಆಗಿದ್ದಾರೆ.ವಚನ ಸಾಹಿತ್ಯದಲ್ಲಿ ಬಸವ ಯುಗದ ವಚನಗಾರ್ತಿಯರಂತೆ ಕೊಡುಗೆಯುತ್ತವರನ್ನು ಬಹುಶಃ ಯಾವ ಶತಮಾನವು ಕಂಡಿರಲಿಲ್ಲ.ಈ ಕಾಲಘಟ್ಟದಲ್ಲಿ ಹಲವಾರು ಶರಣರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿ ರುವುದನ್ನು ಯಾರು ಹೆಚ್ಚಾಗಿ ಪ್ರಚಾರಪಡಿಸದೆ ಇರುವುದು ಅಚ್ಚರಿಯನ್ನುಂಟುಮಾಡುತ್ತದೆ. ಇಂಥವರನ್ನು ವಚನಗಾರ್ತಿಯರು ಅಥವಾ ಗೌಪ್ಯ ವಚನಗಾರ್ತಿಯರು ಎಂದು ಕರೆಯಬಹುದಾಗಿದೆ.ವಚನ ಯುಗವು ಮಹಿಳೆಯರ ಅಂತರ್ಯದಲ್ಲಿ ನವ ಜಾಗೃತಿ ನವ ಸಾಕ್ಷರತೆಯ ಅರಿವು ಮೂಡಿಸಿ ಎಲ್ಲಾ ವರ್ಗದ ಮಹಿಳೆಯರಿಗೂ ವಿದ್ಯಾಭ್ಯಾಸ ಕಲಿಸಿ 26 ಕ್ಕೂ ಹೆಚ್ಚುಜನ ಶರಣೆಯರು ವಚನ ರಚನೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿತು. ಅವರಲ್ಲಿ ಕೆಲವು ಶರಣೀಯರು ತಮ್ಮ ಗಂಡನ ಹೆಸರನ್ನೇ ವಚನದ ಅಂಕಿತ ನಾಮವನ್ನಾಗಿ ಇಟ್ಟುಕೊಂಡು, ಮತ್ತೆ ಕೆಲವರು ತಮ್ಮ ಇಷ್ಟ ದೈವವನ್ನು ವಚನದ ಅಂಕಿತ ನಾಮವಾಗಿಟ್ಟುಕೊಂಡಿದ್ದಾರೆ.ವಚನಗಾರ್ತಿಯರ ಕೊಡುಗೆತಮ್ಮ ವಚನಗಳ ಮೂಲಕ ಸ್ತ್ರೀ ಪುರುಷ ಸಮಾನತೆಯ ಕುಟುಂಬ ಪದ್ಧತಿಯನ್ನು ತರಲು ಪ್ರಯತ್ನಿಸಿದರು.ಕಾಯಕ ನಿಷ್ಠೆ: ಕಾಯಕದ ಮಹತ್ವವನ್ನು ಸಾರಿದರು ಮತ್ತು ತಮ್ಮ ವೃತ್ತಿಗೆ ಸಂಬಂಧಿಸಿದ ಅಂಕಿತನಾಮವನ್ನು ಬಳಸಿದರು.ವೈಚಾರಿಕ ಚಿಂತನೆ: ಸಮಕಾಲೀನ ಸಮಾಜ ವ್ಯವಸ್ಥೆ ಮತ್ತು ಸ್ಥಿತಿಗತಿಗಳ ಬಗ್ಗೆ ಟೀಕೆ ವಿಡಂಬನೆ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.ವಚನಗಾರ್ತಿಯರ ಕೊಡುಗೆ:*ಸಾಮಾಜಿಕ ಸಮಾನತೆ: ತಮ್ಮ ವಚನಗಳ ಮೂಲಕ ಸ್ತ್ರೀ ಪುರುಷ ಸಮಾನತೆ ಮಹಿಳೆಯರನ್ನು ಶರಣು ಚಳುವಳಿಯಲ್ಲಿ ಪ್ರತಿಪಾದಿಕಿಯಾಗಿ ಗುರುತಿಸಲಾಗಿದೆ. ಅಮ್ಮುಗೆ ರಾಯಮ್ಮ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಕಾಯಕ ನಿಷ್ಠೆಗೆ ಹೆಸರಾದವರು. ಪತಿ ಆಯ್ದಕ್ಕಿ ಮಾರಯ್ಯನವರ ಕಾಯಕದ ಕುರಿತು ತೀಕ್ಷ್ಣವಾಗಿ ಪ್ರಶ್ನಿಸುತ್ತಿದ್ದ ಅತ್ಯಂತ ಪ್ರಭುದ್ಧ ಮಹಿಳೆ.ಬೊಂಥಲಾದೇವಿ: ಮೋಳಿಗೆ ಮಹಾದೇವಿ, ಗಂಗಾದೇವಿ ಎಂದು ಕರೆಯುತ್ತಾರೆ.ನೀಲಾಂಬಿಕೆ: ನೀಲಲೋಚನೆ ಎಂದು ಕರೆಯುತ್ತಾರೆ.ಮಹಿಳಾ ವಚನಗಾರ್ತಿಯರು:ವಚನ ಸಾಹಿತ್ಯದಲ್ಲಿ ಪ್ರಮುಖ ಪಾತ್ರ ವಹಿಸಿದವರು ಅಕ್ಕಮಹಾದೇವಿ ಎಂತಹ ವ್ಯಕ್ತಿಗಳಿಂದ ಹಿಡಿದು ಅಮುಗೆ ರಾಯಮ್ಮ, ಲಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ ಬೋಮ್ತಾದೇವಿ ಮತ್ತು ಮಸಣಮ್ಮ ನಂತಹ ಅನೇಕರು ಸೇರಿದ್ದಾರೆ. ಈ ವಚನಗಾರ್ತಿಯರು ಸಾಮಾಜಿಕ ಸಮಾನತೆ, ಕಾಯಕನಿಷ್ಠೆ ಮತ್ತು ವೈಚಾರಿಕ ಚಿಂತನೆಗಳನ್ನು ತಮ್ಮ ವಚನಗಳ ಮೂಲಕ ವ್ಯಕ್ತಪಡಿಸಿದ್ದಾರೆ._________________ ವಿಜಯಲಕ್ಷ್ಮಿ ಕೆ ಹಂಗರಗಿ

“ವಚನ ಯುಗದ ಮಹಿಳೆಯರು”ವಿಜಯಲಕ್ಷ್ಮಿ ಕೆ ಹಂಗರಗಿ Read Post »

ಇತರೆ

“ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬ” ವೀಣಾ ಹೇಮಂತ್‌ ಗೌಡ ಪಾಟೀಲ್

ಸಂಸ್ಕೃತಿ ಸಂಗಾತಿ “ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬ” ವೀಣಾ ಹೇಮಂತ್‌ ಗೌಡ ಪಾಟೀಲ್ ಭಾರತ ದೇಶ ಕೃಷಿ ಪ್ರಧಾನವಾದದ್ದು. ನಾವು ದೇವರನ್ನು ಪೂಜಿಸುವಷ್ಟೇ ಸಹಜವಾಗಿ ಪಂಚಭೂತಗಳಾದ ಭೂಮಿ, ಅಗ್ನಿ, ವಾಯು, ನೀರು ಮತ್ತು ಆಕಾಶ ಇವುಗಳನ್ನು ಕೂಡ ಪೂಜಿಸುತ್ತೇವೆ. ಅದರಲ್ಲಿಯೂ ಭೂಮಿ ನಮ್ಮನ್ನು ಹಡೆದ ತಾಯಿಗಿಂತಲೂ ಹೆಚ್ಚು. ‘ ಮಾತಾ ಭೂಮಿಹಿ ಪುತ್ರೋಹಂ ಪೃಥ್ವಿವ್ಯಾಹ’ಎಂದು ನಮ್ಮ ಮಹಾನ್ ಕಾವ್ಯ ಭೂಮಿ ಸೂಕ್ತದಲ್ಲಿ ಹೇಳಿದೆ. ಈ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಾವು ಹುಟ್ಟಿರುವ, ಬೆಳೆದಿರುವ, ನಡೆದಾಡುವ ಈ ಭೂಮಿ ನಮ್ಮ ಜನನಿ ಮತ್ತು ನಾವೆಲ್ಲರೂ ಆಕೆಯ ಮಕ್ಕಳು. ಆದ್ದರಿಂದಲೇ ನಮ್ಮ ಹಿರಿಯರು ಹೇಳಿದ್ದಾರೆ ‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’… ಇಷ್ಟೇ ನಾವು ಜನಿಸಿದ ಈ ಭೂಮಿ ನಮಗೆ ಸ್ವರ್ಗಕ್ಕಿಂತಲೂ ಹೆಚ್ಚು. ಭೂಮಿಯ ಜೊತೆಗಿರುವ ನಮ್ಮ ಸಂಬಂಧ ತಾಯಿ ಮಕ್ಕಳಂತೆ ಎಂಬುದು ಹಲವು ವಿಧಗಳಲ್ಲಿ ವೇದ್ಯವಾಗುತ್ತದೆ. ಮುಂಜಾನೆ ತಾಯಂದಿರು ಎದ್ದೊಡನೆ ‘ಬೆಳಗಾಗಿ ನಾ ಎದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯುವ ಭೂಮ್ತಾಯಿ, ಎದ್ದೊಂದು ಗಳಿಗೆ ನೆನೆದೇನ’ ಎಂದು ನೆಲ ಮುಟ್ಟಿ ನಮಸ್ಕರಿಸುತ್ತಾರೆ. ಆಟವಾಡುವ ಪ್ರತಿ ಕ್ರೀಡಾಳು ಕೂಡ ನೆಲವನ್ನು ಮುಟ್ಟಿ ನಮಸ್ಕರಿಸಿ ಗೆಲುವಿಗಾಗಿ ಪ್ರಾರ್ಥಿಸಿ ತನ್ನ ಆಟವನ್ನು ಪ್ರಾರಂಭಿಸುತ್ತಾನೆ ಆತನ ಎದುರಾಳಿ ಕೂಡ ಅದೇ ಭೂಮಿ ತಾಯಿಯನ್ನು ಅಂದರೆ ನೆಲವನ್ನು ಮುಟ್ಟಿ ನಮಸ್ಕರಿಸುತ್ತಾನೆ. ಇದೇ ನಮ್ಮ ಭಾರತೀಯ ಪರಂಪರೆಯ ಸೊಗಡು ಪರಸ್ಪರ ಎದುರಾಳಿಗಳಿಗೂ ಕೂಡ ಭೂಮಿ ತಾಯಿ ಮಾತೃಸ್ವರೂಪಳು. ತನ್ನ ಹೊಲವನ್ನು ಉತ್ತುವ ರೈತ ಕೂಡ..ಅಮ್ಮ ಬಂಗಾರದಂತಹ ಬೆಳೆ ಕೊಡು ಎಂದು ಬೇಡಿ ಕೊಳ್ಳುತ್ತಾನೆ. ಇದು ನಮ್ಮ ಭಾರತೀಯ ಪರಂಪರೆಯ ಶ್ರೀಮಂತಿಕೆಯು ಹೌದು. ಭೂಮಿ ತಾಯೆಡೆಗಿನ ಶ್ರದ್ಧೆ ಅನನ್ಯ. ಅದು ಭಾವಕ್ಕೆ ನಿಲುಕದ್ದು.. ಭಾವನಾತೀತವಾದುದು.ನಮ್ಮ ಸಂಸ್ಕೃತ ಕಾವ್ಯಗಳಲ್ಲಿ ಮತ್ತು ಯೋಗದ ಪಠ್ಯಗಳಲ್ಲಿ ‘ಸಮುದ್ರ ವಸನೇ ದೇವಿ ಪರ್ವತ ಸ್ತನ ಮಂಡಲೆ ವಿಷ್ಣು ಪತ್ನಿ ನಮಸ್ತುಭ್ಯಂ ಪಾದ ಸ್ಪರ್ಶ೦ ಕ್ಷಮಸ್ವಮೇ ‘ ಎಂದು ಭೂಮಿತಾಯಿಯನ್ನು ಬೇಡಿಕೊಳ್ಳುತ್ತಾರೆ. ಇದರ ತಾತ್ಪರ್ಯವಿಷ್ಟೇ ಸಮುದ್ರವೇ ನಿನ್ನ ವಸ್ತ್ರವು, ಪರ್ವತಗಳು ನಿನ್ನ ಸ್ತನ ಮಂಡಲಗಳು, ವಿಷ್ಣು ಪತ್ನಿ ಅಂದರೆ ಮಾತೇ ಲಕ್ಷ್ಮೀದೇವಿಯಾದ ಭೂಮಿ ತಾಯಿಯನ್ನು ನಾನು ನನ್ನ ಕೆಲಸಕಾರ್ಯಗಳಿಗಾಗಿ ತುಳಿಯುತ್ತೇನೆ, ನಡೆದಾಡುತ್ತೇನೆ ಆದ್ದರಿಂದ ನನ್ನನ್ನು ಕ್ಷಮಿಸು ತಾಯಿ ಎಂದು. ಹೀಗೆ ಭೂಮಿ ಮತ್ತು ಮನುಷ್ಯನ ಸಂಬಂಧ ನಮ್ಮ ಭಾರತೀಯ ಸಂಪ್ರದಾಯದಲ್ಲಿ ತಾಯಿ ಮಕ್ಕಳ ಸಂಬಂಧದಂತೆ ಹಾಸು ಹೊಕ್ಕಾಗಿದೆ. ಅದರಲ್ಲಿಯೂ ರೈತನನ್ನು ಭೂಮಿ ತಾಯಿಯ ಚೊಚ್ಚಲ ಮಗ ಎಂದೇ ಕರೆಯುತ್ತಾರೆ.ಭೂಮಿ ತಾಯಿ ನಮಗೆ ಜೀವನಕ್ಕೆ ಅವಶ್ಯಕವಾದ ಆಹಾರವನ್ನು ನೀರನ್ನು ದಯಪಾಲಿಸುತ್ತಾಳೆ. ನಮ್ಮನ್ನು ತನ್ನ ಮಡಿಲಲ್ಲಿಟ್ಟು ಪೋಷಿಸುತ್ತಾಳೆ. ಮುಂದೆ ನಾವು ಮಡಿದ ಮೇಲೆಯೂ ಮತ್ತೆ ತನ್ನ ಉದರದಲ್ಲಿ ನಮಗೆ ಆಶ್ರಯ ನೀಡುತ್ತಾಳೆ.ಶ್ರಾವಣಮಾಸದಿಂದ ದೀಪಾವಳಿಯವರೆಗೆ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳ ಸಾಲು ಸಾಲು ಮೆರವಣಿಗೆ ಹೊರಡುತ್ತದೆ. ಅದರಲ್ಲಿ ಎಳ್ಳಅಮಾವಾಸ್ಯೆಯ ಒಂದು. ಎಳ್ಳು ಅಮಾವಾಸ್ಯೆಯ ಸಮಯದಲ್ಲಿ ಚಳಿಗಾಲದ ಚಳಿ ಕಮ್ಮಿಯಾಗಿ ಎಳ್ಳು ಕಾಳಿನಷ್ಟು ಹಿತವಾದ ಬಿಸಿಲು ಮೂಡುತ್ತದೆ. ಈ ಸಮಯದಲ್ಲಿಯೇ ಪ್ರತಿವರ್ಷಕ್ಕೆ ಮುಂಗಾರು ಮತ್ತು ಹಿಂಗಾರು ಎಂಬ ಎರಡು ಬೆಳೆ ತೆಗೆಯುವ ರೈತನ ಶ್ರಮಕ್ಕೆ ಪ್ರತಿಫಲವಾಗಿ ತುಂಬಿ ನಿಂತ ಪೈರು ತೆನೆಗಳು ಕಣ್ಸೆಳೆಯುತ್ತಿರುತ್ತವೆ. ಹೊಲದ ಪ್ರತಿ ಮೂಲೆಯೂ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇನ್ನೇನು ಕೊಯ್ಲು ಮತ್ತು ರಾಶಿ ಮಾಡುವ ಕ್ರಿಯೆ ಆರಂಭವಾಗುವ ಕೆಲವೇ ದಿನಗಳ ಮುಂಚೆ ಈ ದಿನದಂದು ರೈತನು ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಸೀಮಂತದ ಊಟವನ್ನು ಬಡಿಸುತ್ತಾನೆ. ಜೊತೆ ಜೊತೆಗೆ ತನ್ನ ಬಂಧು ಬಾಂಧವರೊಡಗೂಡಿ ಹಬ್ಬದ ಊಟ ಮಾಡಿ ಸಡಗರ ಪಡುತ್ತಾನೆ. ಇದನ್ನು ಉತ್ತರ ಕರ್ನಾಟಕದಲ್ಲಿ ‘ಚರಗ ಚೆಲ್ಲುವುದು’ ಎಂದು ಕರೆಯುತ್ತಾರೆ. ಎಳ್ಳು ಅಮಾವಾಸ್ಯೆಗೆ ಹಲವಾರು ದಿನಗಳ ಮುಂಚೆಯೇ ಈ ಹಬ್ಬದ ತಯಾರಿ ಪ್ರಾರಂಭವಾಗುತ್ತದೆ. ರೈತರ ಮನೆಯೆಂದ ಮೇಲೆ ಅಂಕಿ ಸಂಖ್ಯೆಗಳು ಮುಖ್ಯವಲ್ಲ, ಜನರ ಹೊಟ್ಟೆ ತುಂಬುವುದು ಮುಖ್ಯ. ತೆಳ್ಳಗೆ ಎಳ್ಳು ಹಚ್ಚಿದ ಜೋಳ ಮತ್ತು ಸಜ್ಜೆಯ ರೊಟ್ಟಿಗಳು, ಬಗೆ ಬಗೆಯ ಚಟ್ನಿಪುಡಿಗಳು, ಕೆಂಪು ಹಿಂಡಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಎಣ್ಣೆ ಹೋಳಿಗೆ (ನವಣೆ ಅಕ್ಕಿಯನ್ನು ಹುರಿದು ಮಾಡುವ ಒಂದು ಸಿಹಿ ಪದಾರ್ಥ), ಕರ್ಚಿಕಾಯಿಗಳು ಮೊದಲೇ ತಯಾರಾದರೆ ಹಬ್ಬದ ದಿನ ಎಣ್ಣೆ ಬದನೆಕಾಯಿ ಪಲ್ಯ, ಮೊಳಕೆ ಬರಿಸಿದ ಕಾಳುಗಳ ಪಲ್ಯ, ಕುದಿಸಿದ ಮೆಣಸಿನ ಕಾಯಿಯ ಪಲ್ಯ, ಪುಂಡಿ ಪಲ್ಯ, ಹಿಟ್ಟಿನ ಪಲ್ಯ, ಹಲವಾರು ಬಗೆಯ ಹಸಿಯಾಗಿಯೇ ತಿನ್ನಬಹುದಾದ ಹಸಿ ಈರುಳ್ಳಿ, ಸೌತೆಕಾಯಿ ಗಜ್ಜರಿ ಮೆಂತ್ಯ ಸೊಪ್ಪು ಜೊತೆಗೆ ಭೂತಾಯಿಯ ಎಡೆಗಾಗಿ ಕುಚ್ಚಗಡಬು,ಸಜ್ಜೆ ಕಡುಬು,ಜೋಳದ ಕಡುಬು, ಚಿತ್ರಾನ್ನ, ಮೊಸರನ್ನಗಳ ಬುತ್ತಿ, ಕರಿದ ಹಪ್ಪಳ ಸಂಡಿಗೆ ಮೆಣಸಿನಕಾಯಿ ಬಾಳಕಗಳು ಹೀಗೆ ಹಲವಾರು ಬಗೆಯ ಪದಾರ್ಥಗಳು ತಯಾರಾಗಿ ಒಂದೊಂದೇ ಡಬ್ಬಗಳಲ್ಲಿ ಶೇಖರಿಸಲ್ಪಟ್ಟು.. ಆ ಎಲ್ಲ ಡಬ್ಬಗಳನ್ನು ಶುದ್ಧ ಹಸಿ ವಸ್ತ್ರದಿಂದ ಒರೆಸಿ ವಿಭೂತಿ ಪಟ್ಟಿಯನ್ನು ಬರೆದು ಮತ್ತೆ ಎಲ್ಲಾ ಡಬ್ಬಗಳನ್ನು ಸಿಂಗರಿಸಿದ ಎತ್ತಿನ ಗಾಡಿಗಳಲ್ಲಿ ಹೇರಲಾಗುತ್ತದೆ. ಹೆಂಗಳೆಯರು ಇಲಕಲ್ ಸೀರೆ, ಕುಪ್ಪಸ, ರೇಷ್ಮೆ ಸೀರೆಗಳನ್ನು ಧರಿಸಿ ಬೋರಮಾಳ ಸರ, ಗುಂಡಿನ ಸರ, ಟೀಕಿ ಸರ, ಕಾಸಿನ ಸರ, ಗುಂಡ್ಹಚ್ಚಿನ ಸರ, ಪಾಟಲಿ, ಬಿಲವಾರ, ಹಸಿರು, ಕೆಂಪು ಮತ್ತು ಚಿಕ್ಕಿಯಬಳೆಗಳ ಧರಿಸಿ ಸೆರಗುಹೊತ್ತು ಅಲಂಕರಿಸಿಕೊಂಡರೆ, ಇತ್ತೀಚಿನ ನೀರೆಯರು ನಾವೇನು ಕಡಿಮೆ ಎಂಬಂತೆ ಜರತಾರಿ ಸೀರೆಗಳಲ್ಲಿ, ಹಳೆಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ತಯಾರಾಗುತ್ತಾರೆ. ಮಕ್ಕಳಿಗಂತೂ ಹಬ್ಬವೋ ಹಬ್ಬ. ತಂದೆ, ಅಜ್ಜ೦ದಿರಿಗೆ ದನಗಳನ್ನು ಹಳ್ಳಕ್ಕೆ ಕರೆದೊಯ್ದು ಜಳಕ ಮಾಡಿಸಲು, ತಯಾರು ಮಾಡಲು ಅವರ ಸಹಾಯ ಹಸ್ತ ಇದ್ದೇ ಇರುತ್ತದೆ. ದನ ಕರುಗಳು ಕೂಡ ಹಳ್ಳಗಳಲ್ಲಿ ಮೀಯಿಸಲ್ಪಟ್ಟು ಕೋಡುಗಳಿಗೆ ಬಣ್ಣ ಬಳಿದು ಅವುಗಳ ಬೆನ್ನ ಮೇಲೆ ಜರತಾರಿಯ ಸೀರೆಯಿಂದ ತಯಾರಾದ ಅಂಗವಸ್ತ್ರಗಳನ್ನು ಹೊದೆದು, ಕೋಡಣಸು, ಕೊಂಬಿನ ಸರಗಳನ್ನು ಧರಿಸಿ, ಕೊಂಬುಗಳನ್ನು ಕೂಡ ಶೃಂಗರಿಸಿ ಎಲ್ಲರೂ ಭೂತಾಯಿಯ ಪೂಜೆ ಸಲ್ಲಿಸಲು ಹೊಲಕ್ಕೆ ಸಾಗುತ್ತಾರೆ. ಒಟ್ಟಿನಲ್ಲಿ ಕಣ್ಣಿಗೆ ಹಬ್ಬದ ವಾತಾವರಣ, ಸಂಭ್ರಮ ಸಡಗರದ ಕಳೆ. ಎತ್ತಿನ ಕೊರಳಲ್ಲಿರುವ ಗಂಟೆಯ ಝೀಂಕಾರ, ಚಕ್ಕಡಿ ಹೊಡೆಯುವವನ ಹೂಂಕಾರ, ಮರದ ಗಾಲಿಯ ಕ್ಲಿಂಕಾರ, ಗಾಲಿಗೆ ಕೋಲಿಟ್ಟು ಶಬ್ದ ಮಾಡುವ ರೀತಿ ಮನಮೋಹಕ.ಪ್ರತಿಯೊಬ್ಬ ರೈತನು ತನ್ನ ಹೊಲದಲ್ಲಿರುವ ಒಂದು ಅಚ್ಚುಕಟ್ಟಾದ ತಾವನ್ನು.. ಹೆಚ್ಚಾಗಿ ಬನ್ನಿ ಗಿಡ ಇರುವ ಪ್ರದೇಶವನ್ನು ಸ್ವಚ್ಛಗೊಳಿಸಿ ಅಲ್ಲಿಯೇ ಜಮಖಾನೆಯನ್ನು ಹಾಸಿ ಬನ್ನಿ ಗಿಡದ ಕೆಳಗೆ ಐದು ಜನ ಪಂಚ ಪಾಂಡವರನ್ನು ( ೫ ಕಲ್ಲುಗಳನ್ನು ಪಾಂಡವರ ರೂಪದಲ್ಲಿ ಮತ್ತು ಹಿಂದೆ ಕರ್ಣನ (ಕೆಲವರು ಕಳ್ಳ ಎಂದು ಅಪಭ್ರಂಶ ಮಾಡಿದ್ದಾರೆ) ಹೆಸರಿನಲ್ಲಿ ಇನ್ನೊಂದು ಕಲ್ಲನ್ನು ಪ್ರತಿಷ್ಠಾಪಿಸಿ ಭೂತಾಯಿಯನ್ನು ಬನ್ನಿ ಮರದಲ್ಲಿ ಆಹ್ವಾನಿಸಿ, ಪ್ರತಿಷ್ಠಾಪಿಸಿ, ಪೂಜಿಸಿ, ಮಂಗಳಾರತಿ ಮಾಡಿ ಕಾಯಿ ಒಡೆದು ನೈವೇದ್ಯವನ್ನು ಮಾಡುತ್ತಾರೆ  ಎಳ್ಳ ಅಮವಾಸ್ಯೆ ಬಂದಿತೆವ್ವಹೊಲಕ ಹೋಗುದಕ ಮತ್ತಚರಗ ಚೆಲ್ಲುದಕ ಮುತ್ತೈದೆರೆಲ್ಲಾರುಕೂಡುದಕ ಮತ್ತು ಭೂಮಿತಾಯಿಪೂಜೆ ಮಾಡುದಕಎಳ್ಳ ಅಮಾಸಿಗೇ ಎಣಿಗಡುಬುಕರಿದೇವ ಎಣಗಾಯೀಎಳ್ಳಚ್ಚಿದ ರೊಟ್ಟಿ ತುಂಬೇವ ಕೆರಸ್ಯಾಗಏರಿ ಹೊಲಕ ಎಲ್ಲರೂ ಚರಗ ಚೆಲ್ಲೇವ” ಎಂದು ಹೆಂಗಳೆಯರು ಪ್ರಾರ್ಥಿಸುತ್ತಾ ಭೂಮಿ ತಾಯಿಯನ್ನು ಕೊಂಡಾಡುತ್ತಾರೆ. (ಪಾಂಡವರನ್ನು ಪೂಜಿಸುವ ಹಿಂದೆಯೂ ಒಂದು ಕಥೆ ಇದೆ. ಅಜ್ಞಾತವಾಸದಲ್ಲಿದ್ದ ಪಾಂಡವರು ಹಸಿವಿನಿಂದ ತತ್ತರಿಸುತ್ತಾ ಹೊಲದ ಬಳಿ ಬಂದಾಗ ಅಲ್ಲಿ ದಂಪತಿಗಳು ಬನ್ನಿ ಮರದ ಕೆಳಗೆ ಭೂತಾಯಿಯ ಪೂಜೆ ಮಾಡಿ ಆಹಾರ ಸ್ವೀಕರಿಸಲು ಅಣಿಯಾಗಿದ್ದರು. ಸಮಯಕ್ಕೆ ಸರಿಯಾಗಿ ಬಂದ ಅಭ್ಯಾಗತರನ್ನು ಸ್ವಾಗತಿಸಿದ ರೈತ ದಂಪತಿಗಳು ಅವರಿಗೆ ಊಟಕ್ಕೆ ಬಡಿಸಲು ಮುಂದಾದಾಗ ತಟ್ಟೆ ಅಥವಾ ಎಲೆ ಇರಲಿಲ್ಲ. ಆಗ ಮಾರುವೇಶದಲ್ಲಿದ್ದ ಧರ್ಮರಾಜನು ಮೇಲಿದ್ದ ಬನ್ನಿ ಪತ್ರವನ್ನು ಹರಿದು ಆ ಎಲೆಯಲ್ಲಿಯೇ ಊಟ ಬಡಿಸಲು ದಂಪತಿಗಳನ್ನು ಕೇಳಿಕೊಳ್ಳುತ್ತಾನೆ. ಅಷ್ಟು ಪುಟ್ಟ ಬನ್ನಿ ಎಲೆಯಲ್ಲಿ ಆಹಾರ ಹಿಡಿಸುವುದೇ ಎಂದು ಸೋಜಿಗದಿಂದ ರೈತ ದಂಪತಿಗಳು ಬಡಿಸುತ್ತಾ ಹೋದರೆ ಎಲೆ ತುಂಬುವುದೇ ಇಲ್ಲ, ಆದರೆ ಪಂಚಪಾಂಡವರು ತೃಪ್ತಿಯಿಂದ ಊಟ ಮಾಡುತ್ತಾರೆ. ಅಷ್ಟೇ ಅಲ್ಲ ತಮಗೆ ಉಣ ಬಡಿಸಿದ ರೈತ ದಂಪತಿಗಳಿಗೆ ತಾವು ಯಾವತ್ತೂ ರೈತನ ಹೊಲ ಕಾಯುವ ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸುವೆವು ಎಂದು ಮಾತು ಕೊಡುತ್ತಾರೆ. ಅದಕ್ಕೆ ರೈತ ದಂಪತಿ ಪ್ರತಿವರ್ಷವೂ ಭೂಮಿತಾಯಿಯನ್ನು ಪೂಜಿಸುವ ಈ ದಿನ ನಿಮ್ಮನ್ನು ನಾವು ಸತ್ಕರಿಸುತ್ತೇವೆ ಎಂದು ಪ್ರತಿಯಾಗಿ ಹೇಳುತ್ತಾರೆ. ಅಜ್ಞಾತವಾಸಕ್ಕೂ ಮುನ್ನವೇ ಕರ್ಣನು ತಮ್ಮ ಸಹೋದರನೆಂಬ ಅರಿವಿದ್ದ ಸಹೋದರರು ಮತ್ತೊಂದು ಬನ್ನಿಯ ಪತ್ರ(ಎಲೆ)ದಲ್ಲಿ ತಮ್ಮ ಸಹೋದರ ಕರ್ಣನಿಗಾಗಿ ಆಹಾರವನ್ನು ಪಡೆಯುತ್ತಾರೆ ಎಂಬುದು. ) ನಂತರ ನೈವೇದ್ಯ ಮಾಡಿದ ಒಂದು ಭಾಗವನ್ನು ಭೂಮಿಯಲ್ಲಿ ಗುಳಿ ತೋಡಿ ಅಲ್ಲಿ ಆ ನೈವೇದ್ಯವನ್ನು ಸಮರ್ಪಿಸುತ್ತಾರೆ. ಇನ್ನುಳಿದ ನೈವೇದ್ಯದ ಭಾಗವನ್ನು ಚರಗಾ ಚೆಲ್ಲಲಿಕ್ಕೆಂದು ಹೊರಡುತ್ತಾರೆ. ನೈವೇದ್ಯ ಹಿಡಿದ ವ್ಯಕ್ತಿ ಹುಲ್ಲುಲ್ಲಿಗೋ ಎಂದು ಹೇಳುತ್ತಾ ತನ್ನ ಕೈಯಲ್ಲಿರುವ ಎಡೆಯಿಂದ ಸ್ವಲ್ಪ ಸ್ವಲ್ಪ ಭಾಗವನ್ನು ಹೊಲದ ಸುತ್ತಲೂ ಚೆಲ್ಲುತ್ತಾ ಸಾಗಿದರೆ ಹಿಂದೆ ಸಾಗುವ ಮಕ್ಕಳು ಚಳ್ಳಂಬರಿಗೋ ಎಂದು ಕೂಗುತ್ತಾ ಸಾಗುತ್ತಾರೆ. ಹುಲ್ಲುಲ್ಲಿಗೋ ಅಂದರೆ ಹೊಲದಲ್ಲಿರುವ ಪ್ರತಿಯೊಂದು ಹುಲ್ಲಿನ ಕಣಕ್ಕೂ, ಚಳ್ಳಂಬರಿಗೋ ಎಂದರೆ ಪ್ರತಿಯೊಂದು ಬೇರಿಗೂ ಈ ಆಹಾರವು ಮುಟ್ಟಲಿ ಎಂಬುದು ರೈತನ ಆಶಯ. ಜೊತೆಗೆ ಹೊಲದಲ್ಲಿರುವ ಎಲ್ಲಾ ಕ್ರಿಮಿಕೀಟಗಳಿಗು ರೈತ ಚರಗ ಚೆಲ್ಲುವ ಮೂಲಕ ಆಹಾರ ಸಲ್ಲಿಸುತ್ತಾನೆ…. ತನ್ಮೂಲಕ ವಸುದೈವ ಕುಟುಂಬಕಂ ಎಂದು ಜಗತ್ತಿಗೆ ಸಾರುತ್ತಾನೆ. ಹೀಗೆ ಭೂತಾಯಿಗೆ ಚರಗ ಚೆಲ್ಲಿದ ನಂತರ ರೈತನ ಕುಟುಂಬ ತನ್ನ ಬಂಧು ಬಾಂಧವರೂಡಗೂಡಿ ಹಬ್ಬದ ಅಡುಗೆಯನ್ನು ಸವಿಯುತ್ತಾರೆ. ರೈತನ ಮನೆಯ ಅಡುಗೆ ಮೃಷ್ಟಾನ್ನಕ್ಕಿಂತಲೂ ಹೆಚ್ಚು ..ಸವಿದಷ್ಟು ಸವಿ ಹೆಚ್ಚಾಗುವ, ಮೊಗೆದಷ್ಟೂ ಬಸಿವ ನೀರಿನ ಊಟೆಯಂತೆ. ತನ್ನಲ್ಲಿರುವ ಎಲ್ಲವನ್ನು ಎಲ್ಲರಿಗೂ ಸ್ವ ಸಂತೋಷದಿಂದ ಹಂಚಿ ಅವರ ಸಂತಸದಲ್ಲಿಯೇ ತನ್ನ ಸಂತಸವನ್ನು ಕಾಣುವ ಜಗತ್ತಿನ ಏಕೈಕ ವ್ಯಕ್ತಿ ರೈತ. ಹೀಗೆ ರೈತ ಸಂತಸ ಪಡಲು ಆತನ ಕೊಡುವ ಗುಣವೇ ಕಾರಣವಾಗಿದೆ. ಈ ರೀತಿ ಎಳ್ಳ ಅಮಾವಾಸ್ಯೆಯನ್ನು ಉತ್ತರ ಕರ್ನಾಟಕದ ಬಯಲು ಸೀಮೆಯ ಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ನೀವು ಕೂಡ ಹತ್ತಿರದ ಯಾವುದಾದರೂ ಊರಿನ ಹೊಲಕ್ಕೆ ಹೋದರೆ ಅಲ್ಲಿಯ ರೈತರು ನಿಮ್ಮನ್ನು ಕೂಡ ಕರೆದು ಉಣ ಬಡಿಸುವುದರಲ್ಲಿ ಸಂದೇಹವೇ ಇಲ್ಲ. ಈ ರೀತಿ ಭೂಮಿ ತಾಯಿಯನ್ನು ಪೂಜಿಸುವ ರೈತ ಯಾವಾಗಲೂ ನಗುನಗುತ್ತಾ ಇರಲಿ ಆತನ ಬಾಳು ಹಸನಾಗಲಿ, ರೈತ ಜಗದ ಬೆಳಕಾಗಲಿ ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್

“ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬ” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ

ದೆವ್ವ ಬರೋದು ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ಮಾತ್ರ ಯಾಕೆ?? ಪ್ರಭಾ ಹಿರೇಮಠ ಅವರ ವೈಚಾರಿಕ ಲೇಖನ

ವೈಚಾರಿಕ ಸಂಗಾತಿ ಪ್ರಭಾ ಹಿರೇಮಠ ದೆವ್ವ ಬರೋದು ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ಮಾತ್ರ ಯಾಕೆ?? *ದೆವ್ವ ಬರೋದು ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ಮಾತ್ರ ಯಾಕೆ??* ಮೊನ್ನೆ ಹುಣ್ಣಿಮೆಯ ದಿನ ಒಬ್ಬ ಹೆಸರಾಂತ ವೈದ್ಯೆ ಮತ್ತು ಮಗ ಪರಸ್ಪರ ಮನಸ್ತಾಪ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಇಡೀ ರಾಜ್ಯ ಬೆಚ್ಚಿ ಬೀಳಿಸಿತು. ಅದೇ ಹುಣ್ಣಿಮೆಯ  ರಾತ್ರಿ ಸ್ನೇಹಿತೆಯೋಬ್ಬಳು ಕರೆ ಮಾಡಿ, ಪಕ್ಕದ ಮನೆಯ ಮಧ್ಯ ವಯಸ್ಕ ಮಹಿಳೆಗೆ ಹುಣ್ಣಿಮೆ ಮತ್ತು ಅಮವಾಸ್ಯೆಯ ರಾತ್ರಿ ಮಾತ್ರ ದೆವ್ವ ಬರುತ್ತೆ ಅಂತಾ ಹೇಳಿದಳು.  ನಿನ್ನಿಂದ ಏನಾದರೂ ಸಾಧ್ಯವಿದ್ದರೇ ಒಂದು ಸಾರಿ ಬಂದು ಕೌನ್ಸಿಲಿಂಗ್ ಮಾಡಿ ಹೋಗಬಹುದಾ? ಅಂತಾ ಕೇಳಿಕೊಂಡಳು. ಜೊತೆಗೆ ಹುಣ್ಣಿಮೆ ಮತ್ತು ಅಮವಾಸ್ಯೆ ದಿನಗಳಂದು ಮಾತ್ರ ಮನುಷ್ಯರ ಮೈಮೇಲೆ ದೇವರು ಅಥವಾ ದೆವ್ವ ಬರೋದು? ಯಾಕೆ ಹೇಳೇ  ಅಂತಾನೂ ಕೇಳಿದಳು….. ಆತ್ಮೀಯರೇ, ಮೇಲಿನ ಎರಡು ದೃಷ್ಟಾಂತಗಳನ್ನಿಟ್ಟುಕೊಂಡು ಅವಳ ಪ್ರಶ್ನೆಗೆ ಉತ್ತರ ಕೊಟ್ಟರೆ ಪ್ರಾಯಶಃ ಬಹುತೇಕರಿಗೆ ಹೆಲ್ಪ ಆಗಬಹುದು….ಅಥವಾ ದೆವ್ವ ಮತ್ತು ದೇವರ ಬಗ್ಗೆ ತಲೆ ಕೆಡಿಸಿಕೊಂಡವರಿಗೆ ಸತ್ಯ ಗೊತ್ತಾಗುತ್ತದೆ ಅಂತಾ ಈ ಲೇಖನ ಬರೆಯುತ್ತಿದ್ದೇನೆ……..ನಿಜವಾಗ್ಯೂ ಹೇಳೋದಾದ್ರೆ ದೆವ್ವನೂ ಇಲ್ಲ ಗಿವ್ವನೂ ಇಲ್ಲ…ಆದರೆ ಹುಣ್ಣಿಮೆ ಮತ್ತು ಅಮವಾಸ್ಯೆಗಳಂದು ನಮ್ಮ ಮನಸ್ಥಿತಿ ತುಂಬಾ ಡಿಸ್ಟರ್ಬ್ ಆಗೋದು ಮಾತ್ರ ಕಟು ಸತ್ಯ!!!. ಅದಕ್ಕೆ ಅವೇ ದಿನಗಳಂದು ಅಪಘಾತ, ಆತ್ಮಹತ್ಯೆ, ಜಗಳ, ಕೊಲೆಗಳು ಆಗೋದು ಸಾಮಾನ್ಯ. ಬೇಕಾದರೆ ನೀವು ಅಂಕಿ ಅಂಶ ಸ್ಟಡಿ ಮಾಡಿ… ಸುಮ್ಮನೆ ಒಂದು ಪೊಲೀಸ್‌ ಸ್ಟೇಷನ್ ನಲ್ಲಿ ಯಾವ ದಿನಗಳಂದು ಹೆಚ್ಚಿಗೆ ಎಫ್‌ಐಆರ್ ಗಳು ಆಗಿರುತ್ತವೆ ಎಂಬುದನ್ನು ಪರಿಶೀಲಿಸಿ. ಹಂಡ್ರೆಂಡ್ ಪರ್ಸೆಂಟ್ ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಾ ಜಾಸ್ತಿ ಆಗಿರುತ್ತವೆ. ಇದಕ್ಕೆ ಕಾರಣವನ್ನು ಅತ್ಯಂತ ಸರಳವಾಗಿ ಹೇಳುವುದಾದರೆ, ನಮ್ಮ ದೇಹ 70%ರಷ್ಟು ನೀರಿನಿಂದ ಕೂಡಿರುತ್ತದೆಂದು ವೈಜ್ಞಾನಿಕವಾಗಿ ನಮಗೆಲ್ಲ ಗೊತ್ತು.. ಹಾಗಾಗಿ ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಹೊಂದಿದ ಚಂದ್ರ ಹುಣ್ಣಿಮೆಯ ದಿನ, ಸೂರ್ಯನ ಗುರುತ್ವಾಕರ್ಷಣ ಶಕ್ತಿ ಹೊಂದಿದ ಭೂಮಿ ಅಮವಾಸ್ಯೆಯ ದಿನ ಹೆಚ್ಚಿನ ಉಬ್ಬರವಿಳಿತಗಳನ್ನ ಹೊಂದುವುದರಿಂದ ನಮ್ಮ ಇಡೀ ದೇಹ ಕಂಪನಕ್ಕೆ ಒಳಗಾಗುತ್ತದೆ(ಹುಣ್ಣಿಮೆಯ ದಿನ ಸಮುದ್ರದ ಉಬ್ಬರವಿಳಿತ ಹೆಚ್ಚಾಗುವ ಹಾಗೆ). ಹಾಗಾಗಿ ಅಂದು ನಾವು ಕೋಪ, ಸಂತೋಷ, ಹತಾಶೆ, ಕ್ರೋಧ, ನಿರೀಕ್ಷೆ, ಅಸಮಾಧಾನ, ಖಿನ್ನತೆ, ಅಭದ್ರತೆಯಂತಹ ಹೆಚ್ಚಿನ ಭಾವನೆಗಳನ್ನು ಅನುಭವಿಸುತ್ತೇವೆ, ಈ ಸಂದರ್ಭದಲ್ಲಿ ರಕ್ತದ ಹರಿವು ಹೆಚ್ಚಾಗಿರುತ್ತದೆ ಮತ್ತು ರಕ್ತಸ್ರಾವವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಅದಕ್ಕೆ ಅಮವಾಸ್ಯೆ ಅಥವಾ ಹುಣ್ಣಿಮೆಯ ಆಸುಪಾಸು ಋತುಚಕ್ರ ಹೊಂದುವ ನಮ್ಮ ಹೆಣ್ಣು ಮಕ್ಕಳು ಉಳಿದ ದಿನಗಳಿಗಿಂತ ಹೆಚ್ಚು ರಕ್ತಸ್ರಾವಕ್ಕೆ ಒಳಗಾಗುತ್ತಾರೆ. ಆದರೆ ಇದನ್ನು ಯಾವ ವೈದ್ಯರೂ ಹೇಳದೇ ಔಷಧ ಬರೆಯುವಲ್ಲಿ ಮಗ್ನರಾಗುತ್ತಾರೆ!!!. ಅಲ್ಲದೇ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಂದು ಅಶಕ್ತ ಮನಸ್ಸಿನ ಜನರು ಬಹು ವಿಚಿತ್ರವಾಗಿ ವರ್ತಿಸುವದು, ಅತಿರೇಕತನ ಮಾಡೋದು, ಕೂಗಾಡುವುದು, ಕಿರುಚಾಡುವುದನ್ನು ಮಾಡುತ್ತಾರೆ. ಕೆಲವರು ತಮಗೆ ತಾವು ಇಲ್ಲವೇ ಮತ್ತೊಬ್ಬರಿಗೆ ತೊಂದರೆ ಮಾಡಿ ಜೋರಾಗಿ ನಗುತ್ತಾರೆ ಅಥವಾ ಅಳುತ್ತಾರೆ. ಇನ್ನೂ ಕೆಲವರು ಪರಹಿಂಸೆಗೆ ಮುಂದಾಗಿ ಕಳ್ಳತನ, ದರೋಡೆ, ಅತ್ಯಾಚಾರ, ಕೊಲೆ ಮಾಡುವುದುಂಟು. ಉದಾಹರಣೆಗೆ ನರಹಂತಕ ವೀರಪ್ಪನ್, ಚಾರ್ಲ್ಸ್ ಶೋಭರಾಜ್ ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ವಿಧ್ವಂಸಕ ಕೃತ್ಯಗಳಲ್ಲಿ ಹೆಚ್ಚಾಗಿ ತೊಡಗುತ್ತಿದ್ದರು. ಅದು ಸರಿ!! ಈಗ ದೆವ್ವಗಳ ವಿಷಯಕ್ಕೆ ಬರೋಣ. ವೈಜ್ಞಾನಿಕವಾಗಿ ಹೇಳುವುದಾದರೆ, ನಮ್ಮ ದೇಹವು ನಮ್ಮ ವಿದ್ಯುತ್ಕಾಂತೀಯ ಸಂಕೇತಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ನಮ್ಮ ಆಲೋಚನೆಗಳು ಮತ್ತು ಭಾವನೆಗಳು ಸಹ ಪ್ರಕೃತಿಯಲ್ಲಿ ವಿದ್ಯುತ್ಕಾಂತೀಯವಾಗಿವೆ. ಸತ್ತಾಗ, ಮನುಷ್ಯನ ಆಲೋಚನೆಗಳು ಮತ್ತು ಭಾವನೆಗಳು ತೀವ್ರವಾಗಿದ್ದರೆ, ಆ ವಿದ್ಯುತ್ಕಾಂತೀಯ ಕ್ಷೇತ್ರವು ಸತ್ತ ದೇಹ ಬಿಟ್ಟು ತನ್ನ ಶಕ್ತಿಯನ್ನ ಬೇರೆ ಜೀವಂತ ಅಶಕ್ತ ದೇಹಕ್ಕೆ ಹೋಗಿ ಸೇರುತ್ತವೆ. ಆಮೇಲೆ ಸತ್ತ ಮಾನವನ ಭಾವನೆಗಳು ಇವರ ಬಾಯಲ್ಲಿ ಬರುತ್ತವೆ. ಇದನ್ನೇ ಪ್ರೇತ ಅಥವಾ ದೆವ್ವ ಅಥವಾ ದೇವರು ಎಂದು ಕರೆಯಲಾಗುತ್ತದೆ. ಇಲ್ಲಿ ವ್ಯಕ್ತಿಯು ತನ್ನ ಸಾಮಾನ್ಯ ಗುರುತನ್ನು ಕಳೆದುಕೊಂಡು, ಬೇರೊಂದು “ವ್ಯಕ್ತಿತ್ವ” ಅಥವಾ “ಶಕ್ತಿ” ತನ್ನನ್ನು ನಿಯಂತ್ರಿಸುತ್ತಿದೆ ಎಂದು ನಂಬುತ್ತಾನೆ. ಬಾಲ್ಯದ ಆಘಾತಗಳು (Trauma), ವಿಶೇಷವಾಗಿ ಲೈಂಗಿಕ ದೌರ್ಜನ್ಯದಂತಹ ಕೆಟ್ಟ ಘಟನೆಗಳು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿ ಮುಂದೆ ದೆವ್ವದ ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಸೈಕಾಲಜಿಕಲಿ ಹೆಚ್ಚಿಗಿರುತ್ತದೆ. ಕೆಲವರಲ್ಲಿ ಅದರ ಸ್ವರೂಪ ಬೇರೆಯಾಗಿ ಡುಯಲ್ ಪರ್ಸನಾಲಿಟಿ ಅಥವಾ ಸ್ಪಿಟ್ ಪರ್ಸನಾಲಿಟಿಯಾಗಿ ಗೋಚರ ಆಗಬಲ್ಲದು. ಸ್ಕಿಜೋಫೋನಿಯಾ (schizophrenia), ಮತ್ತು ಶ್ರವಣ ಭ್ರಮೆಗಳಿಗೆ (delusions) (hallucinations) ವ್ಯಕ್ತಿ ಈಡಾಗಬಲ್ಲ, ಇದರಿಂದಾಗಿ ರೋಗಿಯು ತನ್ನನ್ನು ಯಾರೋ ನಿಯಂತ್ರಿಸುತ್ತಿದ್ದಾರೆ ಅಥವಾ ಬೇರೆ ಧ್ವನಿಗಳು ಕೇಳಿಸುತ್ತಿವೆ ಎಂದು ಭಾವಿಸಬಹುದು. ಉದಾಹರಣೆಗೆ ಕಳೆದ ತಿಂಗಳು ಬೆಂಗಳೂರಿನ ಪ್ರಸಿದ್ದ ಸೈಕಿಯಾಟ್ರಿಕ್ ಹಾಸ್ಪಿಟಲ್ ನಲ್ಲಿ ನಾನು ಒಬ್ಬ ಮಧ್ಯ ವಯಸ್ಕ ವಿವಾಹಿತ ಮಹಿಳೆಯ ಕೇಸ್ ಸ್ಟಡಿ ಮಾಡುವಾಗ ಅವಳು ಪ್ರತಿ ದಿನ ತನ್ನ ಗಂಡ ಹಾಸ್ಪಿಟಲ್ ಹೊರಗೆ ಬಂದು ತನ್ನ ನೋಡಿ ಹೋಗುತ್ತಾನೆ ಅಂತಾ ಹೇಳುತ್ತಿದ್ದಳು. ಆಮೇಲೆ ಅವಳ ಹೇಳಿಕೆಯನ್ನು ಪರೀಕ್ಷಿಸಲಾಗಿ she is under hallucination ಅನ್ನೋದು ಗೊತ್ತಾಯ್ತು. ಇದನ್ನೇ ಕೆಲವೊಮ್ಮೆ ದೆವ್ವದ ಹಿಡಿತ ಎಂದು ತಪ್ಪಾಗಿ ಅರ್ಥೈಸಬಹುದು!!! ನುರಿತ ಸಮಾಲೋಚಕರಿಂದ ಇಲ್ಲವೇ ಮನೋವೈದ್ಯರಿಂದ ಇಂಥಹ ದುರ್ಬಲ ಮನಸ್ಥಿತಿಗೆ ಒಳಗಾದವರಿಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕು. ಒಮ್ಮೊಮ್ಮೆ ಔಷಧೋಪಚಾರ ಕೂಡ ಅನಿವಾರ್ಯವಾಗಬಲ್ಲದು. ಅದು ಬಿಟ್ಟು ಮಾಟ, ಮಂತ್ರ ಅಂತಾ ಹೇಳುತ್ತಾ ವ್ಯಕ್ತಿಯ ಪರಿಸ್ಥಿತಿ ಹಾಳು ಮಾಡುವುದು ಬೇಡ!!! ಸರಿ… ನಮ್ಮ ಹಿರಿಯರು ಎಸ್ಟು ಜಾಣರು ನೋಡಿ!!!. ಪ್ರಾಯಶಃ ಇದೆಲ್ಲ ಗೊತ್ತಿದ್ದೇ ಅವರು ಅಮವಾಸ್ಯೆ ಅಥವಾ ಹುಣ್ಣಿಮೆಗಳಂದು ಮನೆದೇವರಿಗೆ ಹೋಗುವ ರೂಢಿ ಹಾಕಿರೋದು. ದೇವಸ್ಥಾನಗಳಿಗೆ ಹೋಗುವುದರಿಂದ ನಮ್ಮಲ್ಲಿ ಉಂಟಾಗಬಹುದಾದ ಆ ನೆಗೆಟಿವ್ ಎನರ್ಜಿಗಳನ್ನ ಕಂಟ್ರೋಲ್ ಮಾಡಬಹುದು. ಧ್ಯಾನ, ಅಭಿಷೇಕ, ಯಜ್ಞ, ಪೂಜೆ ಪುನಸ್ಕಾರಗಳಿಂದ ಮನಸ್ಸು ಶಾಂತ ಸ್ಥಿತಿಗೆ ಬರೋದು ಸಾಧ್ಯ….ಅಲ್ಲವೇ?? . ಪ್ರಭಾ ಹಿರೇಮಠ

ದೆವ್ವ ಬರೋದು ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ಮಾತ್ರ ಯಾಕೆ?? ಪ್ರಭಾ ಹಿರೇಮಠ ಅವರ ವೈಚಾರಿಕ ಲೇಖನ Read Post »

You cannot copy content of this page

Scroll to Top