ಧಾರಾವಾಹಿ ಸಂಗಾತಿ-125 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಗೆ ಡಯಾಲಿಸಿಸ್ ಮಾಡಿಸಲು ಮಗಳ ಪ್ರಯತ್ನ ಮರುದಿನ ಬೆಳಿಗ್ಗೆ ಸುಮತಿಯ ಎರಡನೇ ಮಗಳು ತನ್ನ ತಾಯಿಯ ಚಿಕಿತ್ಸೆಯನ್ನು ಮಾಡುತ್ತಿದ್ದ ವೈದ್ಯರ ಬಳಿಗೆ ಹೋದಳು. ಅವಳನ್ನು ನೋಡಿದ ವೈದ್ಯರು…. ಏನಮ್ಮ ನಿನ್ನ ತಾಯಿ ಹೇಗಿದ್ದಾರೆ?…. ಎಂದು ಕೇಳಿದರು. ಹಿಂದಿನ ದಿನ ತಂಗಿಯು ಹೇಳಿದ್ದ ವಿಚಾರವನ್ನು ಮಾತನಾಡಲೆಂದು ಅವಳು ವೈದ್ಯರಲ್ಲಿಗೆ ಬಂದಿದ್ದಳು…. _ಸರ್ ನನ್ನ ತಾಯಿಯ ಆರೋಗ್ಯ ಸುಧಾರಿಸಲು ಬೇರೆ ಯಾವ ಚಿಕಿತ್ಸೆಯೂ ಇಲ್ಲವೇ?”… ಎಂದು ಕೇಳಿದಳು. ಆಗ ವೈದ್ಯರು…. “ಇದೆಯಮ್ಮಾ….. ಆದರೆ ಅದು ಬಹಳ ದುಬಾರಿ…. ನಿನ್ನ ತಾಯಿಯ ಆಂತರಿಕ ಅಂಗಾಂಗಗಳೆಲ್ಲವೂ ತಮ್ಮ ಕಾರ್ಯವನ್ನು ನಿರ್ವಹಿಸಲು ವಿಫಲವಾಗಿವೆ….. ಆದರೆ ಆಗಾಗ ಡಯಾಲಿಸಿಸ್ ಮಾಡಿಸುವ ಮೂಲಕ ನಿನ್ನ ತಾಯಿಯ ಆರೋಗ್ಯವನ್ನು ಸ್ವಲ್ಪ ಹೆಚ್ಚು ಕಾಲ ಸುಧಾರಿಸಿಕೊಳ್ಳುವಂತೆ ಮಾಡಬಹುದು”….. ಎಂದು ವೈದ್ಯರು ಹೇಳಿದ ಈ ವಿಚಾರ ಆ ಹುಡುಗಿಗೆ ಸರಿಯಾಗಿ ತಿಳಿದಿರಲಿಲ್ಲ ಹಾಗಾಗಿ…._ “ಡಯಾಲಿಸಿಸ್ ಎಂದರೇನು, ಸರ್?”… ಎಂದು ಕೇಳಿದಳು….”ನಮ್ಮ ಶರೀರವನ್ನು ನಿರಂತರವಾಗಿ ಶುದ್ಧೀಕರಣಗೊಳಿಸಲು ಮುಖ್ಯವಾಗಿ ಕಿಡ್ನಿಗಳು ಕೆಲಸ ಮಾಡಬೇಕು…. ಅವುಗಳು ಕೆಲಸ ಮಾಡಲು ವಿಫಲವಾದಾಗ ರಕ್ತದಲ್ಲಿನ ವಿಷಕಾರಿ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಕೃತಕವಾಗಿ ಫಿಲ್ಟರ್ ಮಾಡಿ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಡಯಾಲಿಸಿಸ್ ಎಂದು ಕರೆಯುತ್ತಾರೆ…. ಇದನ್ನು ಮಾಡಿಸಿದರೆ ಇನ್ನೂ ಸ್ವಲ್ಪ ಹೆಚ್ಚು ಕಾಲ ನಿನ್ನ ತಾಯಿ ಜೀವಂತವಾಗಿರಬಹುದು…. ಆದರೆ ಇದನ್ನು ಆಗಾಗ ಮಾಡಿಸುತ್ತಿರಬೇಕಾಗುತ್ತದೆ…. ಇದರ ಖರ್ಚು ಅಧಿಕ…. ಎಂದರು”….. “ಹಾಗಾದರೆ ನನ್ನ ತಾಯಿಗೆ ಈ ಚಿಕಿತ್ಸೆಯನ್ನು ಕೊಡಬಹುದಲ್ಲವೇ?”… ಎಂದು ಕೇಳಿದಳು. ಅವಳ ಮಾತಿಗೆ,… “ಹೌದು ಆಕೆಯು ಹೆಚ್ಚಿನ ಕಾಲ ಬದುಕುಳಿಯಬೇಕಾದರೆ ಈ ಚಿಕಿತ್ಸೆಯನ್ನು ನಿಮ್ಮ ತಾಯಿಗೆ ಕೊಡಿಸಲೇಬೇಕು”…. ಎಂದಾಗ….” ಸರ್ ದಯವಿಟ್ಟು ಆದಷ್ಟು ಬೇಗ ನನ್ನ ತಾಯಿಗೆ ಈ ಚಿಕಿತ್ಸೆಯನ್ನು ಕೊಡಿಸಿ”…. ಎಂದು ಆ ಹುಡುಗಿ ಕೇಳಿಕೊಂಡಾಗ, ಅವಳ ಮುಗ್ದತೆಯನ್ನು ಅರಿತ ವೈದ್ಯರು…. “ಮಗು ಈ ಚಿಕಿತ್ಸೆಯನ್ನು ಇಲ್ಲಿ ನಮ್ಮ ಆಸ್ಪತ್ರೆಯಲ್ಲಿ ಕೊಡಲು ಸಾಧ್ಯವಿಲ್ಲ…. ಅದಕ್ಕೆ ಬೇಕಾದ ಉಪಕರಣಗಳು ಇಲ್ಲಿಲ್ಲ…. ಈ ಚಿಕಿತ್ಸೆಯನ್ನು ಕೊಡಲು ವಿಶೇಷ ಯಂತ್ರವು ಬೇಕಾಗಿದೆ…. ಇದು ಬಹಳ ಅಪರೂಪಕ್ಕೆ ಈ ಚಿಕಿತ್ಸೆಗೆಂದೇ ವಿಶೇಷವಾದ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ”…. ಎಂದು ವೈದ್ಯರು ಹೇಳಿದಾಗ…. “ಯಾವ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಕೊಡಬಹುದು?… ಎಂದು ಕೇಳಿದಳು,…. “ಬೆಂಗಳೂರಿನ ಕಿಡ್ನಿ ಫೌಂಡೇಶನ್ ಎನ್ನುವ ಆರೋಗ್ಯ ಸಂಸ್ಥೆಯಲ್ಲಿ ಮಾತ್ರ ಈ ಚಿಕಿತ್ಸೆ ಲಭ್ಯವಿದೆ…. ಸಾಧ್ಯವಾದರೆ ಅಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಮ್ಮ”…. ಎಂದು ವೈದ್ಯರು ಹೇಳಿದರು. ಅದನ್ನು ಕೇಳಿದ ಹುಡುಗಿಯ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿದವು. ಏನು ಮಾಡಬೇಕು ಎನ್ನುವುದು ಹೊಳೆಯಲಿಲ್ಲ. ವೈದ್ಯರಿಗೆ ಧನ್ಯವಾದ ತಿಳಿಸಿ, ಕೊಠಡಿಯಿಂದ ಹೊರ ನಡೆದಳು. ಆಸ್ಪತ್ರೆಯ ಹುಲ್ಲು ಹಾಸಿನ ಮೇಲೆ ಕುಳಿತುಕೊಂಡು ಆಲೋಚನೆ ಮಾಡ ತೊಡಗಿದಳು. ಅಕ್ಕ-ಬಾವನಿಗೆ ಹೇಳಿದರೆ ಹೇಗೆ? ಅವರು ಏನಾದರೂ ಸಹಾಯ ಮಾಡಬಹುದೇ? ಹಾಗೆ ಯೋಚಿಸಿದಾಗ ಅವರಿಂದ ಅದು ಸಾಧ್ಯವಿಲ್ಲ ಎಂದು ಅವಳಿಗೆ ಅನಿಸಿತು. ಏಕೆಂದರೆ ಅವರು ಕೂಡ ಹೆಚ್ಚು ಹಣವಂತರಾಗಿರಲಿಲ್ಲ. ಬಾವ ಟಿಂಬರ್ ಕೆಲಸದಿಂದ ಬರುವ ಆದಾಯದಲ್ಲಿ ಅಕ್ಕ ಮತ್ತು ಮಕ್ಕಳ ಖರ್ಚು ವೆಚ್ಚ ಯೋಗಕ್ಷೇಮಗಳನ್ನು ನೋಡಿಕೊಳ್ಳುತ್ತಿದ್ದಾರೆ. ತಾಯಿಯ ತಮ್ಮಂದಿರು ಹಾಗೂ ನೆಂಟರಿಷ್ಟರನ್ನು ಕೇಳುವಂತೆ ಇಲ್ಲ. ತಾಯಿಯ ಎರಡನೇ ತಮ್ಮ ಅವರ ಕೈಲಿ ಆಗುವಷ್ಟು ಮತ್ತು ಅವರ ಶಕ್ತಿಯನ್ನೂ ಮೀರಿ ಹಲವು ಸಲ ನಮಗೆ ಸಹಾಯ ಮಾಡಿದ್ದಾರೆ. ಇನ್ನು ನೆಂಟರಿಷ್ಟರು ಇದ್ದರೂ ಕೂಡ ಅಮ್ಮನ ಕಷ್ಟಕರ ಜೀವಿತ ಹಾಗೂ ಅಪ್ಪ ತೀರಿ ಹೋದ ನಂತರ ಒಬ್ಬರ ಸುಳಿವೂ ಇಲ್ಲ. ನೆಂಟರಿಷ್ಟರಾದ ಯಾರನ್ನೂ ಆಶ್ರಯಿಸದೇ ಸ್ವಾಭಿಮಾನದಿಂದ ಬದುಕಿದ ತಾಯಿ ನಮಗೂ ಅದನ್ನೇ ಕಲಿಸಿದ್ದಾರೆ. ಇನ್ನು ಉಳಿದಿರುವುದು ನಮಗೆ ಆಶ್ರಯವಿತ್ತು ನಮ್ಮ ಕಷ್ಟಕ್ಕೆ ಸದಾ ಹೆಗಲಾಗಿ ನಿಂತಿರುವವರು ನಮ್ಮ ಎಸ್ಟೇಟಿನ ದಯಾಳುವಾದ ಸಾಹುಕಾರರು ಮತ್ತು ಅವರ ಪತ್ನಿ ‘ಅಮ್ಮ’. ಅವರಲ್ಲಿ ಈ ಬಗ್ಗೆ ತಿಳಿಸಿ ನೋಡೋಣ. ಏಕೆಂದರೆ ಜೀವನ ನಿರ್ವಹಣೆಗೆ ದಾರಿ ಮಾಡಿಕೊಟ್ಟಿದ್ದಲ್ಲದೇ, ಈವರೆಗೂ ಅಮ್ಮನಿಗೆ ಬೇಕಾದ ಇನ್ಸುಲಿನ್ ಚುಚ್ಚುಮದ್ದು ಹಾಗೂ ಕಣ್ಣಿನ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಮತ್ತು ಇನ್ನಿತರೆ ಚಿಕಿತ್ಸೆಗಳಿಗೆ ಅವರು ಸಹಾಯ ಮಾಡಿದ್ದಾರೆ. ಬಹುಶಃ ಈ ವಿಚಾರ ತಿಳಿದರೆ ಖಂಡಿತ ನಮಗೆ ಏನಾದರೂ ಒಂದು ಸಹಾಯ ಮಾಡಿಯೇ ಮಾಡುತ್ತಾರೆ ಎಂಬ ವಿಚಾರ ಮನಸ್ಸಿಗೆ ಬಂದಾಗ, ನನ್ನ ತಾಯಿ ಆಸ್ಪತ್ರೆಯಲ್ಲಿ ದಾಖಲಾಗಿ ಇರುವಾಗಲೇ ನಾನು ಎಸ್ಟೇಟ್ ಗೆ ಹೋಗಿ ಅಲ್ಲಿ ಸಾಹುಕಾರರನ್ನು ಕಂಡು ಅವರಲ್ಲಿ ಈ ಬಗ್ಗೆ ಮಾತನಾಡಿ ವಿನಂತಿಸಿಕೊಳ್ಳುತ್ತೇನೆ. ಅವರು ಖಂಡಿತ ನಮಗೆ ಸಹಾಯ ಮಾಡುತ್ತಾರೆ ಎನ್ನುವ ಭರವಸೆ ಮೂಡಿದ ಕೂಡಲೇ ಕುಳಿತಲ್ಲಿಂದ ಎದ್ದು ನೇರವಾಗಿ ವಾರ್ಡಿಗೆ ಹೋದಳು. ಈ ವಿಷಯವನ್ನು ತಾಯಿಗೆ ತಿಳಿಸಲಿಲ್ಲ. ಏನಾದರೂ ಒಂದು ವ್ಯವಸ್ಥೆ ಆದ ಮೇಲೆ ತಿಳಿಸಿದರಾಯ್ತು. ಈಗಲೇ ಹೇಳಿ ಮನಸ್ಸಿನಲ್ಲಿ ಇಲ್ಲದ ಆಸೆಯನ್ನು ತರಿಸುವುದು ಬೇಡವೆಂದು ತೀರ್ಮಾನಿಸಿದಳು. ತಾಯಿ ಊಟ ಮಾಡಿದ ನಂತರ ಅಲ್ಲಿಂದ ಆಶ್ರಮಕ್ಕೆ ಹೊರಟಳು. ಅವಳ ಕಾಲೇಜಿನ ಕಲಿಕೆ ಆಶ್ರಮದ ಮಕ್ಕಳಿಗೆ ಪಾಠ ಮಾಡುವುದು ಜೊತೆಗೆ ಅಮ್ಮನ ಆರೈಕೆ ಅವಳ ಗೆಳತಿಯ ಸಹಾಯದಿಂದ ನಿರಾತಂಕವಾಗಿ ನಡೆಯುತ್ತಿತ್ತು. ಆಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಸೆಕ್ರೆಟರಿ ಅವರನ್ನು ಭೇಟಿ ಮಾಡಿದಳು. ನಾಳೆ ತಾನು ಕಾಲೇಜಿಗೆ ರಜೆ ಹಾಕಿ ಎಸ್ಟೇಟಿಗೆ ಹೋಗಿ ಸಾಹುಕಾರರನ್ನು ಹಾಗೂ ಅವರ ಪತ್ನಿ ‘ಅಮ್ಮ’ನನ್ನು ಕಂಡು ತನ್ನ ತಾಯಿಯ ಡಯಾಲಿಸಿಸ್ ಗೆ ಸಹಾಯವನ್ನು ಕೋರಿ, ಅಲ್ಲಿರುವ ತನ್ನ ತಂಗಿಯನ್ನು ಕಂಡು ಅವಳಿಗೆ ವಿಷಯ ತಿಳಿಸಿ ಸಂಜೆ ಪುನಹ ಆಶ್ರಮಕ್ಕೆ ಬರುರುವುದಾಗಿ ವಿನಂತಿಸಿಕೊಂಡು ಅವರ ಅನುಮತಿಯನ್ನು ಪಡೆದಳು. ಆತ ಒಬ್ಬ ದಯಾಳು ಮನುಷ್ಯನಾದ ಕಾರಣ ಹಾಗೂ ಸುಮತಿಯ ಮಗಳ ಜವಾಬ್ದಾರಿಯುತ ನಡೆಯನ್ನು ಮೆಚ್ಚುತ್ತಿದ್ದ ಕಾರಣ ಅವಳಿಗೆ ತನ್ನಿಂದಾದ ಎಲ್ಲಾ ಸಹಾಯವನ್ನು ಮಾಡುತ್ತಿದ್ದರು. ತನ್ನ ಗೆಳತಿಗೂ ಈ ವಿಷಯವನ್ನು ತಿಳಿಸಿದಳು. ಅವಳು…. “ನಿಶ್ಚಿಂತೆಯಿಂದ ಹೋಗಿ ಬಾ… ಇಲ್ಲಿನ ಎಲ್ಲಾ ಕೆಲಸವನ್ನು ನಾನು ನೋಡಿಕೊಳ್ಳುತ್ತೇನೆ…. ಮೊದಲು ನಿನ್ನ ತಾಯಿಯ ಆರೋಗ್ಯದ ಕಡೆ ನಿನ್ನ ಗಮನವನ್ನು ಹರಿಸು…. ಆದಷ್ಟು ಬೇಗ ನಿನ್ನ ತಾಯಿ, ಚಿಕಿತ್ಸೆಯನ್ನು ಪಡೆಯುವಂತಾಗಲಿ”… ಎಂದಳು.
ಧಾರಾವಾಹಿ ಸಂಗಾತಿ-124 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಮೊಮ್ಮಕ್ಕಳು ಬಂದ ಖುಶಿ ಆಸ್ಪತ್ರೆಗೆ ಬಂದ ಸುಮತಿಯ ಎರಡನೇ ಮಗಳು ಸಂಜೆ ವಾರ್ಡಿಗೆ ಕಾಫಿ-ಬ್ರೆಡ್ ಬಂದಾಗ ಸರತಿಯಲ್ಲಿ ನಿಂತು ಪಡೆದುಕೊಂಡು ಅಮ್ಮನಿಗೆ ಕೊಟ್ಟಳು. ಕಾಫಿ ಕುಡಿದು ತಾಯಿ ಮಲಗಿದ ನಂತರ ವಾರ್ಡಿನ ಹೊರಗಿನ ವೆರಾಂಡಾದ ಮೆಟ್ಟಿಲಿನ ಮೇಲೆ ಕುಳಿತು ತನ್ನ ಪಠ್ಯ ಪುಸ್ತಕವನ್ನು ತೆರೆದು ಓದಲು ಪ್ರಾರಂಭಿಸಿದಳು. ಓದಿನಲ್ಲಿ ಸಂಪೂರ್ಣ ಮಗ್ನಳಾಗಿದ್ದ ಅವಳ ಕುತ್ತಿಗೆಯನ್ನು ಎರಡು ಪುಟ್ಟ ಕೈಗಳು ಬಿಗಿಯಾಗಿ ಅಪ್ಪಿಕೊಂಡವು. ತಿರುಗಿ ನೋಡಿದಾಗ ತನ್ನ ಹಿಂದೆ ತುಂಟತನದಿಂದ ನಗುತ್ತಾ ನಿಂತಿದ್ದ ಅಕ್ಕನ ಮಗನನ್ನು ಕಂಡಳು. ತಲೆ ಎತ್ತಿ ನೋಡಿದಾಗ ಬಾವ ಹಾಗೂ ಮಗುವನ್ನು ಎತ್ತಿಕೊಂಡು ನಿಂತಿರುವ ಅಕ್ಕನನ್ನು ಕಂಡಳು. ಅವಳಿಗೆ ಬಹಳ ಆನಂದವಾಯಿತು. ಅಕ್ಕನ ಮಗನನ್ನು ಎತ್ತಿಕೊಂಡು…”ಬನ್ನಿ…ಅಮ್ಮ ಈಗತಾನೇ ಮಲಗಿದ್ದಾಳೆ”…ಎಂದು ಹೇಳುತ್ತಾ ಅಕ್ಕ-ಬಾವನನ್ನು ಒಳಗೆ ಕರೆದುಕೊಂಡು ನಡೆದಳು. ಅಕ್ಕನ ಕಂಕುಳಲ್ಲಿ ಇದ್ದ ಪುಟ್ಟ ಮಗು ಚಿಕ್ಕಮ್ಮನ ಕಡೆಗೆ ಎತ್ತಿಕೋ ಎನ್ನುವಂತೆ ಎರಡೂ ಕೈಗಳನ್ನು ಚಾಚಿತು. ಅಕ್ಕನ ಮಗನ ಕೆನ್ನೆಯನ್ನು ಮೃದುವಾಗಿ ಸವರುತ್ತಾ… “ಪುಟ್ಟಾ ನೀನು ಇಲ್ಲಿ ಕುಳಿತು ಅಜ್ಜಿಯನ್ನು ಎಬ್ಬಿಸು….ನಾನು ನಿನ್ನ ತಂಗಿಯನ್ನು ಎತ್ತಿಕೊಳ್ಳುತ್ತೇನೆ”… ಎಂದ ಚಿಕ್ಕಮ್ಮನ ಮಾತಿಗೆ… “ಹೂಂ”….ಎಂದ ಆ ಮಗು ಖುಷಿಯಿಂದ ಅಜ್ಜಿಯ ಪಕ್ಕ ಕುಳಿತು…..”ಅಮ್ಮಾಮ್ಮಾ…ಣೀಚೇ…ಞಾಯೀ.. ವನ್ನಿಟ್ಟುಂಡ್”….( ಅಜ್ಜೀ ಎದ್ದೇಳು ನಾನು ಬಂದಿದ್ದೇನೆ) ಎಂದು ತೊದಲು ನುಡಿಯಲು, ಮೊಮ್ಮಗನ ಧ್ವನಿ ಕೇಳಿ ಎಚ್ಚೆತ್ತ ಸುಮತಿ ಎದ್ದು ಕುಳಿತು ಮೊಮ್ಮಗನನ್ನು ಅಪ್ಪಿಕೊಂಡಳು. ಹಿರಿಯ ಮಗಳು, ಪುಟ್ಟ ಮೊಮ್ಮಗಳು ಮತ್ತು ಅಳಿಯ ಎಲ್ಲರನ್ನೂ ಕಂಡು ಸುಮತಿ ಹರ್ಷಿತವಾದಳು. ಅಳಿಯನನ್ನು ಉದ್ದೇಶಿಸಿ ಅಲ್ಲಿಯೇ ಇದ್ದ ಸ್ಟೂಲ್ ನ ಮೇಲೆ ಕುಳಿತುಕೊಳ್ಳುವಂತೆ ಹೇಳಿದಳು. ಅಳಿಯ ‘ಹ್ಮೂ’ಎಂದು ತಲೆಯಾಡಿಸಿ ಸ್ಟೂಲ್ ಮೇಲೆ ಕುಳಿತುಕೊಂಡ. ಹಿರಿಯಮಗಳು ಅಮ್ಮನ ಪಕ್ಕದಲ್ಲಿಯೇ ಕುಳಿತುಕೊಂಡಳು. ಮೊಮ್ಮಗ ಅಜ್ಜಿಯ ತೊಡೆಯನ್ನು ಏರಿ ಕುಳಿತುಕೊಂಡ….”ಅಜ್ಜಿಗೆ ಹುಷಾರಿಲ್ಲ ಕಂದಾ… ಬೆಡ್ ಮೇಲೆ ಕುಳಿತುಕೋ”…. ಎಂದು ಸುಮತಿಯ ಅಳಿಯ ತನ್ನ ಮಗನಿಗೆ ಹೇಳಿದರೂ ಅವನು ಕೇಳಲಿಲ್ಲ. …”ಉಹೂಂ… ಞಾ…. ಇವೀಡೆಯೇ ಇಚ್ಚಾಂ”… (ನಾನು ಇಲ್ಲಿಯೇ ಕುಳಿತುಕೊಳ್ಳುತ್ತೇನೆ) ಎಂದು ಹೇಳುತ್ತಾ ಅಜ್ಜಿಯ ಮುಖವನ್ನೊಮ್ಮೆ ನೋಡಿದ. ಸುಮತಿ ಪ್ರೀತಿಯಿಂದ ಮೊಮ್ಮಗನ ಕೆನ್ನೆಗೆ ಹೂ ಮುತ್ತೊಂದನ್ನು ಕೊಟ್ಟು….”ಕುಳಿತುಕೊಳ್ಳಲಿ ತೊಂದರೆಯಿಲ್ಲ”…. ಎಂದು ಹೇಳುತ್ತಾ ಮೊಮ್ಮಗನ ತಲೆಯನ್ನು ನೇವರಿಸಿದಳು. ಅಳಿಯ ಒಂದು ಕ್ಷಣ ಏನನ್ನೋ ಯೋಚಿಸುತ್ತಾ …”ಅಮ್ಮಾ ಹೇಗಿದ್ದೀರಿ?…ಎಂದು ಕೇಳಿದಾಗ….”ಪರವಾಗಿಲ್ಲಪ್ಪ”… ಎಂದು ಉತ್ತರಿಸಿದಳು ಸುಮತಿ…. “ಡಾಕ್ಟರ್ ಏನು ಹೇಳಿದರು ಅಮ್ಮಾ”…..ಎಂದು ಹಿರಿಯ ಮಗಳು ಸುಮತಿಯನ್ನು ಕೇಳಲು,…”ಸ್ವಲ್ಪ ದಿನ ಇಲ್ಲಿದ್ದು ಔಷಧೋಪಚಾರ ತೆಗೆದುಕೊಂಡರೆ ಸರಿ ಹೋಗುತ್ತದೆ ಎಂದು ಡಾಕ್ಟರ್ ಹೇಳಿದ್ದಾರೆ”….ಎಂದು ಹೇಳುತ್ತಾ ಸುಮತಿ ಎರಡನೇ ಮಗಳ ಕಡೆಗೆ ನೋಡಿದಳು. ಅಕ್ಕನ ಮಗಳನ್ನು ಎತ್ತಿಕೊಂಡು ಅವಳನ್ನು ಮುದ್ದು ಮಾಡುತ್ತಿದ್ದ ಎರಡನೇ ಮಗಳ ಮುಖ ಅಮ್ಮನ ಮಾತು ಕೇಳಿ ಮ್ಲಾನವಾಯಿತು. ಇದನ್ನು ಗಮನಿಸಿದ ಹಿರಿಯ ಮಗಳು ತಂಗಿಯ ಕಡೆಗೆ ನೋಡುತ್ತಾ….”ಏನು ಹೇಳಿದರು ಡಾಕ್ಟರ್?…ನೀನೇಕೆ ಹೀಗೆ ಇದ್ದಕ್ಕಿದ್ದ ಹಾಗೆ ಮಂಕಾದೆ”…. ಎಂದು ಕೇಳಲು ಆಮೇಲೆ ಹೇಳುತ್ತೇನೆ ಎಂಬಂತೆ ಸನ್ನೆ ಮಾಡಿದಳು. ಸುಮತಿ ಇದ್ಯಾವುದನ್ನೂ ಗಮನಿಸದೇ ಮೊಮ್ಮಗನ ಬಾಲಭಾಷೆಯನ್ನು ಕೇಳುವುದರಲ್ಲೇ ಮಗ್ನಳಾಗಿದ್ದಳು. ತನ್ನ ಅಣ್ಣ ಅಜ್ಜಿಯ ತೊಡೆಯ ಮೇಲೆ ಕುಳಿತು ಮುದ್ದು ಮಾಡಿಸಿಕೊಳ್ಳುತ್ತಿರುವುದನ್ನು ಕಂಡ ಅವನ ಪುಟ್ಟ ತಂಗಿ ತಾನೂ ಅಜ್ಜಿಯ ಬಳಿ ಹೋಗುತ್ತೇನೆ ಎನ್ನುವಂತೆ ಚಿಕ್ಕಮ್ಮನ ತೋಳಿಂದ ಕೆಳಗೆ ಇಳಿಯುವ ಪ್ರಯತ್ನ ಮಾಡುತ್ತಿದ್ದಳು. ಅದನ್ನು ಗಮನಿಸಿದ ಸುಮತಿ…. “ಬಾ ನನ್ನ ಮುದ್ದು ಮೊಮ್ಮಗಳೇ…. ಅಜ್ಜಿಯ ತೊಡೆ ಮೇಲೆ ಕುಳಿತುಕೋ”… ಎಂದು ಹೇಳುತ್ತಾ ಮೊಮ್ಮಗಳನ್ನು ಎತ್ತಿಕೊಂಡು ಮಗುವಿನ ಕೆನ್ನೆಗೆ ಮುತ್ತಿಟ್ಟಳು. ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಾ ಸುಮತಿ ತನ್ನ ಅನಾರೋಗ್ಯದ ಆಯಾಸವನ್ನು ಮರೆತಳು. ಅವರಿಬ್ಬರನ್ನು ಮುದ್ದಾಡುತ್ತಾ ಅವಳಿಗೆ ಸಮಯ ಹೋದದ್ದೇ ತಿಳಿಯಲಿಲ್ಲ. ವಾರ್ಡಿನ ಬಾಗಿಲಿನ ಮುಂದೆ ಆಸ್ಪತ್ರೆಯ ಊಟದ ತಳ್ಳುಗಾಡಿ ಬಂದು ನಿಂತಿತು. ಅಡುಗೆಯವ…..” ಎಲ್ಲರೂ ಬನ್ನಿ ಬೇಗ ಊಟ ತೆಗೆದುಕೊಳ್ಳಿ”…. ಎಂದು ಕೂಗಿದ. ಸುಮತಿಯ ಎರಡನೇ ಮಗಳು ಊಟದ ತಟ್ಟೆ ಹಾಗೂ ಒಂದು ಬಟ್ಟಲನ್ನು ಹಿಡಿದು ಸರತಿಯ ಸಾಲಿನಲ್ಲಿ ನಿಂತಳು. ರಾತ್ರಿಯ ಊಟಕ್ಕೆ ಅನ್ನ ಮತ್ತು ಸಾರು ಇತ್ತು. ಮಧ್ಯಾಹ್ನದ ಊಟಕ್ಕೆ ಅನ್ನ ಸಾರು ಒಂದು ಮೊಟ್ಟೆ ಎರಡು ಬಾಳೆಹಣ್ಣು ಆಸ್ಪತ್ರೆಯಿಂದ ಕೊಡುತ್ತಿದ್ದರು. ಅಡುಗೆಯವರು ಊಟ ಬಡಿಸಿದಾಗ ಅದನ್ನು ತೆಗೆದುಕೊಂಡು ಬಂದು ಅಲ್ಲಿದ್ದ ಸಣ್ಣ ಕಪಾಟಿನ ಮೇಲೆ ಮತ್ತೊಂದು ತಟ್ಟೆಯಿಂದ ಮುಚ್ಚಿಟ್ಟಳು….”ಬನ್ನಿ ಮಕ್ಕಳೇ…. ಅಜ್ಜಿ ಊಟ ಮಾಡಲಿ…. ನಾವು ಈಗ ಮನೆಗೆ ಹೋಗೋಣ…. ನಾಳೆ ಮತ್ತೆ ಅಜ್ಜಿಯನ್ನು ನೋಡಲು ಅಮ್ಮನ ಜೊತೆ ನೀವಿಬ್ಬರೂ ಇಲ್ಲಿಗೆ ಬರಬಹುದು”… ಎಂದು ಹೇಳಿ, ಹೆಂಡತಿಯ ಕಡೆಗೆ ತಿರುಗಿ ಹೋಗೋಣವೇ ಎಂಬಂತೆ ನೋಡಿದ. ಪತಿಯ ನೋಟದ ಅರ್ಥವನ್ನು ಅರಿತ ಸುಮತಿಯ ಹಿರಿಯ ಮಗಳು ‘ಸರಿ’ ಎನ್ನುವ ತಲೆ ಆಡಿಸಿ ಮಗಳನ್ನು ಸುಮತಿಯ ಮಡಿಲಿನಿಂದ ಎತ್ತಿಕೊಂಡಳು. ಆ ಪುಟ್ಟ ಮಗು ತಾನು ಬರುವುದಿಲ್ಲವೆಂದು ಹಠ ಮಾಡಿತು. ಮೊಮ್ಮಗನೂ ಅಜ್ಜಿಯ ಕುತ್ತಿಗೆಯನ್ನು ಬಿಗಿಯಾಗಿ ಅಪ್ಪಿಕೊಂಡು ಞಾಯಿ…ವನ್ನಿಲ್ಲ….ಅಮ್ಮಾಮ್ಮೆಡೆ ಕೂಡೆ ಇಚ್ಚಾಂ….(ನಾನು ಬರುವುದಿಲ್ಲ ಅಜ್ಜಿಯ ಜೊತೆ ಇಲ್ಲೇ ಇರುತ್ತೇನೆ) ಎಂದು ಹೇಳಿದ. ಅವನನ್ನು ಪುಸಲಾಯಿಸಿ ಕರೆದುಕೊಂಡು ಹೋಗಲು ಅಳಿಯ ಹರಸಾಹಸ ಪಡಬೇಕಾಯಿತು…._ನಾಳೆ ಮತ್ತೆ ಬರೋಣ”… ಎಂದು ಹೇಳಿದಾಗ ಒಲ್ಲದ ಮನಸ್ಸಿನಿಂದ ವಾರ್ಡಿನ ಬಾಗಿಲಿನಿಂದ ಆಚೆ ಮರೆಯಾಗುವವರೆಗೂ ಅಜ್ಜಿಯನ್ನೇ ನೋಡುತ್ತಾ ಅಪ್ಪ ಅಮ್ಮನ ಜೊತೆಗೆ ಹೋದ. ಮೊಮ್ಮಕ್ಕಳನ್ನು ಕಳುಹಿಸಲು ಸುಮತಿಗೆ ಮನಸ್ಸಿಲ್ಲದಿದ್ದರೂ ಮತ್ತೆ ಬರುತ್ತಾರೆ ಅಲ್ಲವೇ ಎನ್ನುವ ಕಾರಣದಿಂದ ಕಳುಹಿಸಿಕೊಟ್ಟಳು.….”ಅಮ್ಮ ಈಗ ಊಟ ಮಾಡು…. ನರ್ಸ್ ಬಂದು ಔಷಧಿ ಕೊಡುವ ಸಮಯವಾಯಿತು…. ತಡ ಮಾಡಬೇಡ”… ಎಂದ ಮಗಳ ಮಾತಿಗೆ ತಲೆಯಾಡಿಸಿ, ಊಟದ ತಟ್ಟೆಯನ್ನು ಅವಳ ಕೈಯಿಂದ ಪಡೆದಳು. ತಾಯಿ ಊಟ ಮುಗಿಸಿದ ನಂತರ ಅಲ್ಲಿಯೇ ತಟ್ಟೆಯಲ್ಲಿ ಕೈ ತೊಳೆಯಲು ನೀರನ್ನು ಕೊಟ್ಟಳು. ಆಸ್ಪತ್ರೆಯ ಕೈ ತೊಳೆಯುವ ಜಾಗ ಸ್ವಲ್ಪ ದೂರ ಇದ್ದಿದ್ದರಿಂದ ದಿನವೂ ಹೀಗೆ ತಟ್ಟೆಯಲ್ಲಿ ಕೈ ತೊಳೆಯಲು ಹೇಳುತ್ತಿದ್ದಳು. ನಂತರ ತಾನು ಹೋಗಿ ಶುಚಿಯಾಗಿ ತಟ್ಟೆಯನ್ನು ತೊಳೆದುಕೊಂಡು ಬಂದು ಇಡುತ್ತಿದ್ದಳು. ನರ್ಸ್ ಬಂದು ರಾತ್ರಿಯ ಔಷಧಿಯನ್ನು ಕೊಟ್ಟರು. ಔಷಧಿಯನ್ನು ಕುಡಿದು ಸುಮತಿ ದಿಂಬನ್ನು ಬೆನ್ನಿನ ಹಿಂದೆ ಇಟ್ಟು ಒರಗಿ ಕುಳಿತುಕೊಂಡಳು. ತಾಯಿಯ ಹಾಸಿಗೆ ಪಕ್ಕದಲ್ಲಿಯೇ ಸ್ಟೂಲನ್ನು ಎಳೆದುಕೊಂಡು ಮಗಳು ಕುಳಿತುಕೊಂಡು ತಾಯಿಯ ಹಸ್ತವನ್ನು ತನ್ನ ಎರಡೂ ಕರಗಳಲ್ಲಿ ಹಿಡಿದುಕೊಂಡ ತಾಯಿಯ ಮುಖವನ್ನೇ ಎವೆಯಿಕ್ಕದೇ ದಿಟ್ಟಿಸಿ ನೋಡಿದಳು.
ಧಾರಾವಾಹಿ-23 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಗೆಳತಿಯ ಸಹಾಯ ತಾಯಿ ಊಟ ಮಾಡಿದ ನಂತರ ಅಕ್ಕ ತಂಗಿಯರಿಬ್ಬರೂ ಹೊರಡಲು ಅನುವಾದರು….. “ಅಮ್ಮಾ…. ನಾವಿಬ್ಬರೂ ಹೊರಗೆ ಹೋಟೆಲ್ ನಲ್ಲಿ ಊಟ ಮಾಡುತ್ತೇವೆ….ತಂಗಿ ದೊಡ್ಡಕ್ಕನ ಮನೆಗೆ ಹೋಗುತ್ತಿದ್ದಾಳೆ…. ಅಕ್ಕನಿಗೂ ನೀನು ಆಸ್ಪತ್ರೆಯಲ್ಲಿ ಇರುವ ವಿಷಯ ತಿಳಿಸಬೇಕಿದೆ…. ಅಲ್ಲಿಂದ ಹಾಗೇ ನಾನು ಆಶ್ರಮಕ್ಕೆ ತೆರಳುತ್ತಿದ್ದೇನೆ…. ಸಂಜೆ ನಿನ್ನೊಂದಿಗಿರಲು ಬರುತ್ತೇನೆ…. ನನ್ನ ಗೆಳತಿಯೊಬ್ಬಳು ಅನಾಥಾಶ್ರಮದಲ್ಲಿ ಇರುವುದರಿಂದ ನಿನ್ನ ಜೊತೆ ನನಗಿರಲು ಅವಕಾಶವಾಗಿದೆ… ಆಕೆ ಇತ್ತೀಚೆಗೆ ಬಂದಿದ್ದರು ಕೂಡ ಎಷ್ಟೋ ವರ್ಷಗಳ ಗೆಳತಿಯಂತೆ ನನ್ನ ಸಹಾಯಕ್ಕೆ ಹೆಗಲು ಕೊಡುತ್ತಿದ್ದಾಳೆ… ಆದರೂ ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸಬೇಕಿದೆ…. ಎಂದು ಮಗಳು ತಿಳಿಸಿದಾಗ, ಸರಿ ಎನ್ನುವಂತೆ ತಲೆಯಾಡಿಸಿದಳು ಸುಮತಿ. ಏನೋ ನೆನಪಾದಂತೆ ಅನಿಸಿ….. ಒಂದು ನಿಮಿಷ ಇರು ಮಗೂ… ನನ್ನ ವಿಧವಾ ಪೆನ್ಷನ್ ಬರುವುದಿದೆಯಲ್ಲ…. ಅದನ್ನು ಹೇಗೆ ಪಡೆದುಕೊಳ್ಳುವುದು?… ನಾನು ಇಲ್ಲಿ ಆಸ್ಪತ್ರೆಯಲ್ಲಿದ್ದೇನೆ…. ನನ್ನ ಸಹಿ ಇಲ್ಲದೆ ಆ ರೂ.50 ಸಿಗುವುದಿಲ್ಲ…. ನನ್ನ ಕಷ್ಟವನ್ನು ಅರಿತ ನಮ್ಮೂರಿನ ಪೋಸ್ಟ್ ಮಾಸ್ಟರ್ ನನ್ನಿಂದ ಅರ್ಜಿಯನ್ನು ಹಾಕಿಸಿ, ಈ ವಿಧವಾ ಪೆನ್ಷನ್ ಬರುವಂತೆ ಮಾಡಿದ್ದರು…. ಅವರ ಈ ಸಹಾಯವನ್ನು ನಾನೆಂದಿಗೂ ಮರೆಯುವುದಂತೆ ಇಲ್ಲ…. ಎಂದು ಸುಮತಿ ಅಂದಾಗ, ಮಕ್ಕಳಿಗೆ ತಾಯಿ ಹೇಳಿದ್ದು ಸರಿ ಅನಿಸಿತು. ತಾಯಿ ಈ ವಿಧವಾ ಪೆನ್ಷನ್ ಗಾಗಿ ಕಚೇರಿಗಳಿಗೆ ಓಡಾಡಿದ್ದು ನೆನಪಾಯಿತು…. ಅದಕ್ಕಾಗಿ ನಮ್ಮ ಹೋಬಳಿಯ ಪೋಸ್ಟ್ ಮಾಸ್ಟರ್ ಮಾಡಿದ ಸಹಾಯ ಅಷ್ಟಿಷ್ಟಲ್ಲ. ಅವರ ಪರಿಶ್ರಮದಿಂದ ನಮ್ಮ ತಾಯಿಗೆ ತಿಂಗಳಿಗೆ 50 ರೂಪಾಯಿ ವಿಧವಾ ಪೆನ್ಷನ್ ಬರುತ್ತಿದೆ. ಕೆಲವೊಮ್ಮೆ ಪ್ರತಿ ತಿಂಗಳೂ ಬರದೇ ಎರಡು ಮೂರು ತಿಂಗಳಿನ ಹಣ ಒಟ್ಟಾಗಿ ಬರುತ್ತಿತ್ತು. ಅದನ್ನು ತಾಯಿ ನಮಗಾಗಿ ತಿಂಡಿ ತಿನಿಸುಗಳನ್ನು ಮಾಡಿಕೊಡಲು ಅಥವಾ ಬಟ್ಟೆ-ಬರೆ ಕೊಡಿಸಲು ಖರ್ಚು ಮಾಡುತ್ತಿದ್ದಳು. ಈವರೆಗೂ ನಾವು ಗಮನಿಸಿದಂತೆ ನಮ್ಮ ತಾಯಿ ಅದರಿಂದ ಒಂದು ನಯಾ ಪೈಸೆಯನ್ನು ಕೂಡ ತನಗಾಗಿ ಖರ್ಚು ಮಾಡಿಕೊಂಡಿರಲಿಲ್ಲ. ಈ ಹಣವು ಕೂಡ ತಾಯಿಗೆ ಕೆಲವೊಮ್ಮೆ ಆಪದ್ಬಾಂಧವನಂತೆ ಸಹಾಯ ಮಾಡಿದ್ದೂ ಇದೆ. ಅದೂ ಕೂಡ ನಮಗಾಗಿ, ಎನ್ನುವುದನ್ನು ನೆನೆದಾಗ ಮಕ್ಕಳಿಬ್ಬರ ಕಣ್ಣುಗಳು ಹನಿ ಗೂಡಿದವು. ತಾನು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ ಈಗಲೂ ನಮ್ಮ ತಾಯಿಗೆ ನಮ್ಮದೇ ಚಿಂತೆ ಅಲ್ಲವೇ?…..”ನೋಡೋಣ ಅಮ್ಮಾ…. ನಾನು ದೊಡ್ಡಕ್ಕನ ಮನೆಯಿಂದ ನಮ್ಮ ಮನೆಗೆ ಹಿಂತಿರುಗುವಾಗ ಪೋಸ್ಟ್ ಮಾಸ್ಟರ್ ಮನೆಗೆ ಹೋಗಿ ಈ ಬಗ್ಗೆ ತಿಳಿದುಕೊಳ್ಳುತ್ತೇನೆ”…. ಎಂದು ಮೂರನೇ ಮಗಳು ಹೇಳಿದಳು. ಸರಿ ಎನ್ನುವಂತೆ ತಲೆ ಆಡಿಸಿದಳು ಸುಮತಿ. ಅಕ್ಕತಂಗಿಯರಿಬ್ಬರೂ ಆಸ್ಪತ್ರೆಯಿಂದ ಹೊರ ನಡೆದರು. ತಂಗಿಯ ಜೊತೆಗೆ ಬಸ್ ನಿಲ್ದಾಣದವರೆಗೂ ಬಂದು, ಅವಳನ್ನು ದೊಡ್ಡಕ್ಕನ ಮನೆಯ ಕಡೆಗೆ ಹೋಗುವ ಬಸ್ ಹತ್ತಿಸಿ ತಾನು ಆಶ್ರಮದ ಕಡೆಗೆ ನಡೆದಳು. ದೊಡ್ಡಕ್ಕನ ಮನೆಗೆ ಹೋದ ತಂಗಿಯು ಅಮ್ಮನ ಅನಾರೋಗ್ಯದ ವಿಷಯ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ತಿಳಿಸಿದಳು. ಅಮ್ಮನ ಅನಾರೋಗ್ಯದ ಬಗ್ಗೆ ತಿಳಿದು ಅವಳಿಗೂ ಬಹಳ ಸಂಕಟವಾಯಿತು….. “ಬಾವ ಕೆಲಸಕ್ಕೆ ಹೋಗಿದ್ದಾರೆ…. ಸಂಜೆ ಅವರು ಬಂದ ನಂತರ ನಾನು ಮತ್ತು ಬಾವ ಆಸ್ಪತ್ರೆಗೆ ಹೋಗುತ್ತೇವೆ”…. ಎಂದಳು ದೊಡ್ಡಕ್ಕ. ದೊಡ್ಡಕ್ಕನ ಮಾತಿಗೆ ಹೂಂಗುಟ್ಟಿದಳು. ತನ್ನ ಎರಡನೇ ಅಕ್ಕ ಉಳಿದ ವಿಷಯಗಳನ್ನು ತಾನೇ ದೊಡ್ಡಕ್ಕನಿಗೆ ತಿಳಿಸುತ್ತೇನೆ ಎಂದು ಹೇಳಿದ್ದರಿಂದ ಅವಳು ಹೆಚ್ಚಾಗಿ ಇನ್ನೇನೂ ಹೇಳಲಿಲ್ಲ. ಸ್ವಲ್ಪ ಹೊತ್ತು ಅಕ್ಕನ ಮನೆಯಲ್ಲಿದ್ದು ಮಕ್ಕಳ ಜೊತೆ ಕಾಲ ಕಳೆದು ನಂತರ ಸಕಲೇಶಪುರದ ಬಸ್ ನಿಲ್ದಾಣಕ್ಕೆ ಬಂದು ತನ್ನ ಊರ ಕಡೆಗೆ ಹೋಗುವ ಬಸ್ ಹತ್ತಿ ಒಬ್ಬಳೇ ಊರ ಕಡೆಗೆ ಹೊರಟಳು. ಒಬ್ಬಳೇ ಬಸ್ಸ್ ನಲ್ಲಿ ಕುಳಿತು ಕಿಟಕಿಯ ಆಚೆಗೆ ನೋಡುತ್ತಾ ನಿಟ್ಟಿಸಿರು ಬಿಟ್ಟಳು. ನಮ್ಮ ತಾಯಿ ಇಷ್ಟು ಬೇಗ ನಮ್ಮಿಂದ ದೂರವಾಗುತ್ತಾಳೆಯೇ? ಎನ್ನುವ ವಿಷಯ ಮನಸ್ಸಿಗೆ ಬಂದಾಗ ಅವಳಿಗ ಅರಿವಿಲ್ಲದಂತೆಯೇ ಕಣ್ಣುಗಳಿಂದ ನೀರು ಜಾರಿತು. ಯಾರಿಗೂ ಕಾಣದೆಂದು ಕಿಟಕಿಯ ಆಚೆ ನೋಡುತ್ತಾ ಕುಳಿತಳು. ಮನದ ತುಂಬಾ ನೋವು ಮಡುಗಟ್ಟಿತ್ತು. ಬಸ್ಸು ಯಾವಾಗ ಊರಿಗೆ ತಲುಪಿತು ಎಂಬುದು ತಿಳಿಯಲಿಲ್ಲ. ಬಸ್ಸಿನಿಂದ ಇಳಿದು ಮನೆ ತಲುಪಿದಳು. ಇಂದೇಕೋ ಮನೆ ಎಂದಿಗಿಂತ ಬಿಕೋ ಎನ್ನುವಂತೆ ಇತ್ತು. ತೀವ್ರ ಮೌನ ಆವರಿಸಿದಂತೆ ಅನಿಸಿತು. ಅಮ್ಮ ಬೇಗ ಆರೋಗ್ಯಪೂರ್ಣಳಾಗಿ ಮನೆಗೆ ಹಿಂದಿರುಗುತ್ತಾಳೆ ಎನ್ನುವ ಆಸೆಯನ್ನು ಹೊತ್ತು ಒಬ್ಬಳೇ ಹೇಗೋ ಕಾಲ ಕಳೆಯುತ್ತಿದ್ದಳು. ಆದರೆ ಈಗ ಜೊತೆಗೆ ನೋವನ್ನು ಮರೆಯಲು ಅಕ್ಕನ ಹೆಗಲೂ ಇಲ್ಲ. ಅಮ್ಮನೂ ಇಲ್ಲ. ಹೊರಡುವಾಗ ದೊಡ್ಡಕ್ಕ….” ಇವತ್ತು ಇಲ್ಲೇ ಇರೇ… ಒಬ್ಬಳೇ ಮನೆಗೆ ಹೋಗಬೇಡ…. ಎಂದರೂ ಕೇಳಲಿಲ್ಲ ನಾನು…. ಏನು ಮಾಡುವುದು ಇಲ್ಲಿ ನಾನು ಶಾಲೆಗೆ ಹೋಗದಿದ್ದರೆ ಅಮ್ಮನ ಕೆಲಸ ಕೈ ಬಿಟ್ಟು ಹೋಗುತ್ತದೆ…..ನನಗೂ ಈಗ ಜೊತೆಗೆ ಅಕ್ಕಂದಿರಿಬ್ಬರಲ್ಲಿ ಯಾರಾದರೂ ಬೇಕಿತ್ತು…. ಈ ನೋವನ್ನು ನಾನೊಬ್ಬಳೇ ಸಹಿಸಲಾರೆ… ಏನು ಮಾಡಲಿ?…” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾ ಹಾಸಿಗೆ ಮೇಲೆ ದೊಪ್ಪನೆ ಉರುಳಿದಳು. ಇತ್ತ ಆಶ್ರಮಕ್ಕೆ ಹೋದವಳಿಗೆ ತಂಗಿಯನ್ನು ಒಬ್ಬಳನ್ನೇ ಮನೆಗೆ ಕಳುಹಿಸಿದ್ದರ ಬಗ್ಗೆ ಬಹಳ ಬೇಸರವಿತ್ತು. ಆದರೆ ಏನು ಮಾಡುವುದು? ಅನ್ಯಮಾರ್ಗವಿರಲಿಲ್ಲ. ಆಶ್ರಮಕ್ಕೆ ಬಂದ ಕೂಡಲೇ ಅವಳ ಗೆಳತಿ ಅವಳ ತಾಯಿಯ ಬಗ್ಗೆ ವಿಚಾರಿಸಿಕೊಂಡಳು. ಈಗ ಈ ಗೆಳತಿಯ ಜೊತೆಯೇ ಈ ಹುಡುಗಿಗೆ ಆಧಾರ. ಅವಳ ಹೆಗಲ ಮೇಲೆ ತಲೆ ಇಟ್ಟು ಸ್ವಲ್ಪ ಹೊತ್ತು ಕಣ್ಣು ಮುಚ್ಚಿದಳು. ಅವಳು ಇವಳ ತಲೆಯನ್ನು ನೇವರಿಸುತ್ತಾ ಸಮಾಧಾನಪಡಿಸಿದಳು. ಸ್ವಲ್ಪ ಹೊತ್ತಿನ ನಂತರ ಸುಮತಿಯ ಮಗಳು ಆಶ್ರಮದ ಮಕ್ಕಳ ಓದಿನ ಕಡೆಗೆ ಗಮನಹರಿಸಿದಳು. ಅವಳು ಮಕ್ಕಳಿಗೆ ಪಾಠ ಮಾಡುತ್ತಿದ್ದಾಗ ಗೆಳತಿ ಅಡುಗೆ ಮಾಡುತ್ತಿದ್ದಳು. ಅಷ್ಟೊತ್ತಿಗೆ ಸಂಜೆಯಾಗಿತ್ತು. ಮಾಡಿದ ಅಡುಗೆಯನ್ನು ಗೆಳತಿ ಈ ಹುಡುಗಿಗೆ ಬಡಿಸಿ, ಒಂದು ಪುಟ್ಟ ಡಬ್ಬಿಯಲ್ಲಿ ತಾನು ಮಾಡಿದ ಈರುಳ್ಳಿ ಸೋಗೆಯ ಪಲ್ಯವನ್ನು ತುಂಬಿಕೊಟ್ಟು….. “ಇಲ್ಲಿಯ ಉಳಿದ ಕೆಲಸವನ್ನು ಮಾಡಿ, ಮಕ್ಕಳ ಕಲಿಕೆಗೆ ನಾನು ಸಹಾಯ ಮಾಡುತ್ತೇನೆ…. ನೀನು ಆಸ್ಪತ್ರೆಗೆ ತೆರಳಿ ನಿನ್ನ ತಾಯಿಯ ಯೋಗ ಕ್ಷೇಮವನ್ನು ನೋಡಿಕೋ…. ಎಂದಳು. ತನಗೆ ಈ ಸಮಯದಲ್ಲಿ ಆಸರೆಯಾಗಿ ಬಂದ ತನ್ನದೇ ಪ್ರಾಯದ ಗೆಳತಿಯನ್ನು ಬಿಗಿಯಾಗಿ ಅಪ್ಪಿಕೊಂಡು…. ಯಾವ ಜನ್ಮದಲ್ಲಿ ನೀನು ನನಗೆ ಅಕ್ಕ ಅಥವಾ ತಂಗಿ ಆಗಿದ್ಯೋ ತಿಳಿಯದು… ನಿನ್ನ ಈ ಋಣವನ್ನು ನಾನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಗೆಳತಿ…. ಎಂದು ಹೇಳುತ್ತಾ ತನ್ನ ಕೃತಜ್ಞತೆಯನ್ನು ತಿಳಿಸಿದಳು…. “ಹೇಯ್ ಇದೆಲ್ಲಾ ಏನೂ ದೊಡ್ಡ ಕೆಲಸವಲ್ಲ…. ನನಗೂ ತಾಯಿ ಇದ್ದಾಳೆ… ನಿನ್ನ ನೋವು ನನಗೂ ಅರ್ಥವಾಗುತ್ತೆ…. ನಡಿ ಮೊದಲು ಆಸ್ಪತ್ರೆಗೆ ಹೋಗು…. ಎಂದು ಹೇಳುತ್ತಾ ಬಾಗಿಲವರೆಗೂ ಜೊತೆಗೆ ಬಂದು ಬಿಳ್ಕೊಟ್ಟಳು.
ಧಾರಾವಾಹಿ-122 ಒಬ್ಬ ಅಮ್ಮನಕಥೆ ರುಕ್ಮಿಣಿ ನಾಯರ್ ಅಮ್ಮನ ಅನಾರೋಗ್ಯದ ಬಗ್ಗೆ ದೊಡ್ಡಕ್ಕನಿಗೆ ತಿಳಿಸುವ ಸಮಯ ವಿಷಯ ತಿಳಿದ ನಂತರ ಖಂಡಿತ ತಂಗಿ ಹೀಗೆಲ್ಲಾ ಪ್ರತಿಕ್ರಿಯಿಸಿವಳು ಎಂಬುದು ಮೊದಲೇ ತಿಳಿದಿದ್ದ ಅಕ್ಕನಿಗೆ ದುಃಖ ಉತ್ತರಿಸಿ ಬಂದರೂ, ತಾನು ಕೂಡಾ ಅಳುತ್ತಾ ಕುಳಿತರೆ, ತಂಗಿಯನ್ನು ಸಮಾಧಾನ ಪಡಿಸುವವರು ಯಾರು? ಎಂದು ಯೋಚಿಸುತ್ತಾ, ತಂಗಿಯ ತಲೆಯನ್ನು ನಿಧಾನವಾಗಿ ಸಾಂತ್ವನ ಪಡಿಸುವಂತೆ ನೇವರಿಸಿದಳು. ಅವಳು ಅತ್ತು ಸಮಾಧಾನವಾಗುವರೆಗೂ ಹಾಗೆ ನೇವರಿಸುತ್ತಾ ಏನೂ ಮಾತನಾಡದೇ ಕುಳಿತಿದ್ದಳು. ಅವಳು ಸ್ವಲ್ಪ ಸಮಾಧಾನಗೊಂಡಳು ಎಂದು ಅರಿತ ಮೇಲೆ…. “ನಿನ್ನ ನೋವು, ಸಂಕಟ ಏನೆಂದು ನನಗೆ ಅರ್ಥವಾಗುತ್ತದೆ…. ದಯವಿಟ್ಟು ನಿನ್ನನ್ನು ನೀನು ಸಮಾಧಾನಪಡಿಸಿಕೋ…. ನಾವಿಬ್ಬರೂ ಈಗ ಮಾನಸಿಕವಾಗಿ ಗಟ್ಟಿಯಾಗಬೇಕಿದೆ…. ನಮ್ಮ ಈ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಜೊತೆ ಬೇರೆ ಯಾರೂ ಇಲ್ಲ…. ಅಕ್ಕನಿಗೆ ಅವಳದಾದ ಕುಟುಂಬವಿದೆ…. ಎಲ್ಲಾ ಜವಾಬ್ದಾರಿಯನ್ನು ಅಕ್ಕನಿಗೆ ಹೊರಿಸಲು ಸಾಧ್ಯವಿಲ್ಲ…. ನಮ್ಮಿಬ್ಬರ ಕೈಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಪ್ರಯತ್ನ ಮಾಡೋಣ…. ವೈದ್ಯರು ಹೇಳಿದ್ದರು ಡಯಾಲಿಸಿಸ್ ಚಿಕಿತ್ಸೆ ಕೊಡಿಸಿದರೆ, ಅಮ್ಮ ಇನ್ನೂ ಸ್ವಲ್ಪ ದಿನ ಅಮ್ಮ ಜೀವಂತವಾಗಿರಬಹುದು…. ಅಮ್ಮನ ಎಲ್ಲಾ ನೋವು ಸಂಕಟಗಳು ಸ್ವಲ್ಪ ದಿನದ ಮಟ್ಟಿಗಾದರೂ ಸುಧಾರಿಸಬಹುದು….. ನೋಡೋಣ…ಹೇಗೆ ಎಂಬುದನ್ನು ವೈದ್ಯರಿಂದ ಕೇಳಿ ತಿಳಿದುಕೊಳ್ಳುತ್ತೇನೆ….. ಎಂದಳು. ಅಕ್ಕನ ಮಾತನ್ನು ಕೇಳಿದಾಗ ತಂಗಿಯ ಮುಖವರಳಿತು. ….”ಹಾಗೆಯೇ ಮಾಡುವ ಅಕ್ಕಾ….. ನಮ್ಮಿಂದ ಆಗಿದ್ದನ್ನು ನಾವು ಮಾಡೋಣ…. ನಮಗೆ ಆಶ್ರಯ ಕೊಟ್ಟಿರುವ ಎಸ್ಟೇಟ್ ನವರು ಮೊದಲಿಂದಲೂ ಅಮ್ಮನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ…. ಅವರು ಖಂಡಿತಾ ನಮಗೆ ಸಹಾಯ ಮಾಡುತ್ತಾರೆ… ಹಾಗಾಗಿ ನಾವು ಮಾಡಬೇಕಾಗಿದ್ದು ಏನು ಎಂಬುದನ್ನು ಕೇಳಿ ತಿಳಿದುಕೋ…. ಎಂದಳು. ಸರಿ ಎನ್ನುವಂತೆ ಅಕ್ಕ ತಯಾರಿಸಿದಳು…. “ಈಗ ಡಾಕ್ಟರ್ ರೌಂಡ್ಸ್ ಮುಗಿಸಿರುತ್ತಾರೆ…. ನಡಿ ವಾರ್ಡಿಗೆ ಹೋಗೋಣ…. ಮೊದಲು ನಿನ್ನ ಕಣ್ಣುಗಳನ್ನು ಒರೆಸಿಕೊ…. ನಮಗೆ ತಿಳಿದಿರುವ ವಿಷಯ ಅಮ್ಮನಿಗೆ ಗೊತ್ತಾಗುವುದು ಬೇಡ….. ಅಮ್ಮ ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಾಳೆ… ಆದಷ್ಟೂ ಅಮ್ಮನ ಮುಂದೆ ನಾವು ಖುಷಿಯಿಂದ ಇರುವಂತೆ ನಟಿಸೋಣ…. ಇದಲ್ಲದೇ ನಮಗೆ ಬೇರೆ ದಾರಿ ಇಲ್ಲ….. ಅಮ್ಮನಿಗೆ ಈ ವಿಷಯಗಳು ತಿಳಿದರೆ, ಖಂಡಿತಾ ಪೂರ್ತಿ ಕುಸಿದು ಹೋಗುತ್ತಾಳೆ…. ನಾವೆಲ್ಲರೂ ವಿದ್ಯಾಭ್ಯಾಸ ಮುಗಿಸಿ, ಒಳ್ಳೆಯ ಕೆಲಸಕ್ಕೆ ಸೇರಿ ನಂತರ ನಾವು ಮದುವೆಯಾಗುವುದನ್ನು ನೋಡಬೇಕು…. ಖುಷಿಯಿಂದ ಮೊಮ್ಮಕ್ಕಳನ್ನು ಮುದ್ದಾಡಬೇಕು…. ಅವರೊಂದಿಗೆ ಕಾಲ ಕಳೆಬೇಕು….ಎನ್ನುವ ತನ್ನಾಸೆಯ ಮಾತುಗಳನ್ನು ಆಗಾಗ ಹೇಳುತ್ತಲೇ ಇರುತ್ತಾಳೆ…. ಅಮ್ಮನಿಗೆ ಏನೂ ಆಗಿಲ್ಲ… ಆದಷ್ಟು ಬೇಗ ಗುಣಮುಖರಾಗುತ್ತಾರೆ ಎನ್ನುವ ಆಶಯವನ್ನು ಅಮ್ಮನ ಮನಸ್ಸಿನಲ್ಲಿ ತುಂಬೋಣ…. ಯಾವುದೇ ಕಾರಣಕ್ಕೂ ತನ್ನ ಆರೋಗ್ಯ ಸ್ಥಿತಿ ಈ ರೀತಿ ಇದೆ ಎಂದು ತಿಳಿಯುವುದು ಬೇಡ….. ಎಂದು ಅಕ್ಕ ಹೇಳಿದಾಗ ‘ಸರಿ’ ಎನ್ನುವಂತೆ ತಲೆಯಾಡಿಸುತ್ತಾ ದುಪ್ಪಟ್ಟಾದಿಂದ ಕಣ್ಣುಗಳನ್ನು ಮತ್ತು ಮುಖವನ್ನು ಒರೆಸಿ, ಆದಷ್ಟೂ ತಾನು ನಗುನಗುತ್ತಿರುವಂತೆ ಇರುವ ಪ್ರಯತ್ನ ಮಾಡಿದಳು. ತಂಗಿಯನ್ನು ನೋಡಿ ಮುಗುಳ್ನಕ್ಕು ಅವಳ ಹೆಗಲ ಮೇಲೆ ಕೈ ಹಾಕುತ್ತಾ…._ ಬಾ ನಡಿ ಹೋಗೋಣ”…. ಎಂದಳು ಈಗ ನಾನು ಅತ್ತಿರೋದು ಕಾಣೋದಿಲ್ಲವಲ್ಲವೇ? ಎಂಬಂತೆ ಪ್ರಶ್ನಾರ್ಥಕವಾಗಿ ಅಕ್ಕನನ್ನು ನೋಡಿದಳು ತಂಗಿ. ‘ಇಲ್ಲ’ ಎನ್ನುವಂತೆ ತಲೆ ಆಡಿಸಿದಳು, ಇಬ್ಬರೂ ವಾರ್ಡಿಗೆ ತೆರಳಿದಾಗ, ನರ್ಸ್ ತಾಯಿಗೆ ಚುಚ್ಚುಮದ್ದನ್ನು ಚುಚ್ಚುತ್ತಿರುವುದು ಕಂಡಿತು. ಅಮ್ಮ ನೋವಿನಿಂದ ಮುಖ ಹಿಂಡಿದ್ದು ಕಂಡಾಗ, ಇಬ್ಬರ ಎದೆಯಲ್ಲೂ ಏನೋ ಹರಿತವಾದದ್ದು ಚುಚ್ಚಿದ ಅನುಭವವಾಯಿತು. ಆದರೂ ತೋರಗೊಡದೆ…. “ಅಮ್ಮಾ ….ಡಾಕ್ಟರ್ ಏನು ಹೇಳಿದರು?… ಎಂದು ಇಬ್ಬರೂ ಕೇಳಿದಾಗ…. “ಏನೂ ತೊಂದರೆ ಇಲ್ಲ….ಇನ್ನೂ ಕೆಲವು ದಿನಗಳು ನಾನು ಇಲ್ಲಿಯೇ ಇರಬೇಕೆಂದು ಹೇಳಿದ್ದಾರೆ”… ಎಂದು ಹೇಳುತ್ತಾ ಸುಮತಿ ಇಬ್ಬರೂ ಮಕ್ಕಳ ಮುಖವನ್ನು ನೋಡಿದಳು. ಮಕ್ಕಳಿಬ್ಬರ ಕಣ್ಣುಗಳು ಅತ್ತು ಊದಿಕೊಂಡಿರುವಂತೆ ಅವಳಿಗೆ ಅನಿಸಿತು….. “ಏನಾಯ್ತು ಮಕ್ಕಳೇ?…. ನಿಮ್ಮಿಬ್ಬರ ಕಣ್ಣುಗಳು ಏಕೆ ಊದಿಕೊಂಡಿವೆ?…. ಎಂದು ಕೇಳಿದಾಗ,….”ಇಲ್ಲಮ್ಮಾ…. ಹಾಗೇನೂ ಇಲ್ಲ…. ನಿನಗೆ ಹಾಗೆ ಅನಿಸಿದೆಯಷ್ಟೇ”….. ಎಂದು ತಂಗಿ ಹೇಳಿದಾಗ, …. “ನೀನು ಯಾವಾಗ ಸುಳ್ಳು ಹೇಳುವುದನ್ನು ಕಲಿತುಕೊಂಡೆ?…. ನಿಜ ಹೇಳಿ….ಅದೇನಿದ್ದರೂ ನನಗೆ ತಿಳಿಸಿ” …. ಎಂದಳು ತುಸುಕೋಪದಿಂದ. …”ಏನಿಲ್ಲಮ್ಮಾ…. ಅವಳು ಸುಳ್ಳು ಹೇಳಿಲ್ಲ…. ನಮಗೇನೂ ಆಗಿಲ್ಲ…. ನಿನಗೆ ಹಾಗೆ ಅನಿಸುತ್ತಿದೆ ಅಷ್ಟೇ….. ನಾವು ಹೊರಗೆ ಕುಳಿತಿದ್ದಾಗ ಗಾಳಿಯಲ್ಲಿ ಏನೋ ಕಸ ಬಂದು ತಂಗಿಯ ಕಣ್ಣಿಗೆ ಬಿತ್ತು…. ಅವಳು ಹಣ್ಣುಗಳನ್ನು ಉಜ್ಜಿಕೊಂಡಳು…. ಹಾಗಾಗಿ ಅವಳ ಕಣ್ಣುಗಳು ಹಾಗಿವೆ”…. ಎಂದಳು….. “ಹಾಗಾದರೆ ನಿನ್ನ ಕಣ್ಣು?”…. ತುಸು ಏರು ಧ್ವನಿಯಲ್ಲಿ ಸುಮತಿ ಪ್ರಶ್ನಿಸಿದಾಗ…. “ನಾನು ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲಮ್ಮಾ…. ಪರೀಕ್ಷೆ ಹತ್ತಿರವಾಗುತ್ತಿರುವುದರಿಂದ ರಾತ್ರಿ ಹೆಚ್ಚು ಸಮಯ ಓದುತ್ತಾ ಕುಳಿತಿದ್ದೆ… ಹಾಗಾಗಿ ನನ್ನ ಕಣ್ಣುಗಳು ಊದಿಕೊಂಡಿವೆ…. ಸುಮ್ಮನೆ ಏನೇನೋ ಆಲೋಚಿಸಿ ತಲೆಕೆಡಿಸಿಕೊಳ್ಳಬೇಡ”… ಎಂದಳು ತಂಗಿಯನ್ನು ನೋಡುತ್ತಾ. ತಂಗಿ ‘ಹೌದು’ ಎನ್ನುವಂತೆ ತಲೆ ಆಡಿಸಿದಳು. ಇಬ್ಬರೂ ಮಕ್ಕಳು ಕೊಟ್ಟ ಉತ್ತರ ಯಾಕೋ ಸರಿ ಇಲ್ಲ ಎಂದು ಸುಮತಿಗೆ ಅನಿಸಿತು. ಆದರೆ ಇನ್ನೂ ವಾದ ಮಾಡುವುದು ಬೇಡ ಎಂದು ಸುಮ್ಮನಾದಳು. ತಂಗಿ ಅಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತಾಯಿ ಮತ್ತು ಅಕ್ಕನ ಜೊತೆ ಕಾಲ ಕಳೆದಳು. ಇದರ ನಡುವೆ…. “ಅಕ್ಕಾ ….ದೊಡ್ಡಕ್ಕನಿಗೆ ಅಮ್ಮನ ಅನಾರೋಗ್ಯದ ವಿಷಯ ತಿಳಿಸಿದ್ದೀಯಾ? ಎಂದು ಕೇಳಿದಳು….. “ಇಲ್ಲ ಕಣೇ…. ಹೇಳಬೇಕು…. ಒಂದು ಕೆಲಸ ಮಾಡುತ್ತೀಯಾ? ನಾವು ಇಲ್ಲಿ ಯಾವುದಾದರೂ ಹೋಟೆಲ್ನಲ್ಲಿ ಊಟ ಮಾಡಿಕೊಳ್ಳೋಣ…. ಅಮ್ಮನಿಗೆ ಆಸ್ಪತ್ರೆಯಿಂದ ಊಟ ಸಿಗುತ್ತದೆ…. ಅಮ್ಮನಿಗೆ ಊಟ ಕೊಟ್ಟು, ನಂತರ ಹೊರಗೆ ಹೋಗಿ ನಾವು ಊಟ ಮಾಡೋಣ…. ನಂತರ ನೀನು ಅಕ್ಕನ ಮನೆಗೆ ಹೋಗಿ, ಅಮ್ಮ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ ಎಂಬುದನ್ನು ತಿಳಿಸು… ಎಂದಳು. ತಂಗಿ ಸರಿ ಎನ್ನುವಂತೆ ತಲೆಯಾಡಿಸಿದಳು.
ಧಾರಾವಾಹಿ ಸಂಗಾತಿ-121 ಒಬ್ಬ ಅಮ್ಮನ ಕಥೆ ರುಕ್ಮಿಣಿನಾಯರ್ ಅಮ್ಮನ ಆರೋಗ್ಯದ ಸತ್ಯ ಅರಿತತಂಗಿಯ ಗೋಳಾಟ ಸ್ವಲ್ಪ ಹೊತ್ತು ಇಬ್ಬರೂ ಅಮ್ಮನ ಜೊತೆ ಮಾತನಾಡುತ್ತಾ ಕಾಲ ಕಳೆದರು. ಡಾಕ್ಟರ್ ರೌಂಡ್ಸ್ ಗೆ ಬರುವ ಹೊತ್ತಾಯ್ತು ಎಂದು ವಾರ್ಡಿನ ಆಯಾ ಕೂಗಿ ಹೇಳಿದಾಗ ಅಕ್ಕ-ತಂಗಿ ಇಬ್ಬರೂ ಹೊರಗೆ ನಡೆದರು. ಆಸ್ಪತ್ರೆಯ ಹೊರಾಂಗಣದಲ್ಲಿ ಮೆಟ್ಟಿಲ ಮೇಲೆ ಕುಳಿತು ಪರಸ್ಪರ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅಕ್ಕ ಇಷ್ಟೊಂದು ಮೌನವಾಗಿರುವುದನ್ನು ನೋಡಿ ಅಮ್ಮನ ಆರೋಗ್ಯದಲ್ಲಿ ಏನೋ ದೊಡ್ಡ ಸಮಸ್ಯೆ ಇರಬಹುದು ಎಂದು ತಂಗಿ ಊಹಿಸಿದಳು. ಆದರೂ ಅಕ್ಕ ಹೇಳುವವರೆಗೂ ಕಾಯ್ದಳು. ಸ್ವಲ್ಪ ಹೊತ್ತಿನ ನಂತರ ಅಕ್ಕನೇ ಮೌನ ಮರಿದಳು…. “ನಿನಗೆ ಗೊತ್ತು ತಾನೆ ಅಮ್ಮನಿಗೆ ಡಯಾಬಿಟಿಸ್ ಇರುವುದು…. ಅದಕ್ಕಾಗಿ ಅಮ್ಮ ನಿರಂತರವಾಗಿ ಇನ್ಸುಲಿನ್ ತೆಗೆದುಕೊಳ್ಳುತ್ತಿರುವುದು….. ಹಾಗೂ ಮೂರು ತಿಂಗಳಿಗೊಮ್ಮೆಯಾದರೂ ಆಸ್ಪತ್ರೆಗೆ ತಪಾಸಣೆಗೆ ಬರುವುದು….ಆದರೆ….. ಅದರ ಜೊತೆಗೆ ಅದ್ಯಾವಾಗ ಬಿ.ಪಿ ಬಂದು ಅಮ್ಮನ ಒಡಲನ್ನು ಸೇರಿತು ಎಂಬುದು ಅಮ್ಮನಿಗೂ ನಮಗೂ ತಿಳಿಯಲಿಲ್ಲ”…. ಎಂದು ಅಲ್ಲಿಗೆ ನಿಲ್ಲಿಸಿ, ತಂಗಿಯ ಮುಖವನ್ನು ಒಮ್ಮೆ ದಿಟ್ಟಿಸಿದಳು. ಅಚ್ಚರಿಯಿಂದ ತಂಗಿ ಅಕ್ಕನ ಮುಖವನ್ನು ನೋಡಿದಳು. ಆಗ ಅಕ್ಕ ‘ಹೌದು’ ಎನ್ನುವಂತೆ ತಲೆ ಆಡಿಸಿದಳು…. “ಮಧುಮೇಹ ಮತ್ತು ರಕ್ತದೊತ್ತಡ ಎರಡೂ ಅಣ್ಣತಮ್ಮಂದಿರು ಇದ್ದಂತೆ ಎಂದು ವೈದ್ಯರು ಹೇಳಿದರು….. ಒಂದು ಬಂದ ನಂತರ ನಿಧಾನವಾಗಿ ಮತ್ತೊಂದು ಜೊತೆಗೂಡುತ್ತದೆ ಎಂದು ಕೂಡ ಹೇಳಿದರು…. ಈಗ ನಮ್ಮ ತಾಯಿಗೆ ಇರುವ ಆರೋಗ್ಯ ಸಮಸ್ಯೆ ಗಂಭೀರವಾದದ್ದು….. ಮಧುಮೇಹ ಹಾಗೂ ರಕ್ತದೊತ್ತಡದಿಂದಾಗಿ ನಮ್ಮ ತಾಯಿಯ ಶರೀರದ ಒಳಗಿರುವ ಅಂಗಾಂಗಗಳು, ಎಂದರೆ ಹೃದಯ, ಯಕೃತ್ತು ಮೂತ್ರಪಿಂಡಗಳು ಎಲ್ಲವೂ ಊದಿಕೊಂಡಿವೆ…. ಅವು ಸರಿಯಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿಲ್ಲ… ಹಾಗಾಗಿ ರಕ್ತ ಶುದ್ಧಿ ಆಗುತ್ತಿಲ್ಲ…. ಎಂದು ವೈದ್ಯರು ತಿಳಿಸಿದ್ದಾರೆ…. ಎಂದಳು. ಅಕ್ಕ ಹೇಳಿದ ಸಂಗತಿಯನ್ನು ಕೇಳುತ್ತಾ ತಂಗಿಯ ಮುಖ ಬಾಡಿತು…. ಅಕ್ಕಾ ಇದಕ್ಕೆ ಔಷಧೋಪಚಾರಗಳು ಇಲ್ಲವೇ?….ಎಂದು ತಂಗಿ ಕೇಳಿದಾಗ…. ಇಲ್ಲಾ… ಕಣೇ…. ಎಂದವಳ ಧ್ವನಿ ಭಾರವಾಗಿತ್ತು…… ಯಾಕಕ್ಕಾ?…..ಅದು ಹೇಗೆ? ….ಎಂದು ಕೇಳಿದಾಗ…. ಶರೀರದ ಒಳ ಅಂಗಗಳು ವೈಫಲ್ಯವಾದರೆ ಯಾವ ಔಷಧಿಗಳೂ ಪರಿಣಾಮ ಬೀರುವುದಿಲ್ಲ… ತಾತ್ಕಾಲಿಕ ಉಪಶಮನಗಳು ದೊರೆಯುತ್ತವೆ ಅಷ್ಟೇ…. ಆದರೆ ಪೂರ್ಣವಾಗಿ ಗುಣಮುಖವಾಗುವುದಿಲ್ಲ…. ಹಾಗಾಗಿ ವೈದ್ಯರು ಹೇಳಿದರು,”…. ಎಂದು ತನ್ನ ಮಾತನ್ನು ಮುಂದುವರೆಸದೆ ಅರ್ಧಕ್ಕೇ ನಿಲ್ಲಿಸಿ, ತಂಗಿಯ ಮುಖವನ್ನೇ ತದೇಕ ಚಿತ್ತದಿಂದ ನೋಡಿದಳು. ಮುಂದೆ ಮಾತು ಬಾರದೇ ಗಂಟಲು ಕಟ್ಟಿತು. ಕಣ್ಣುಗಳಲ್ಲಿ ಧುತ್ತನೇ ನೀರು ತುಂಬಿಕೊಂಡವು. ತಂಗಿಗೆ ಹೇಗೆ ಹೇಳಲಿ ಇರುವ ಸತ್ಯವನ್ನು? ಅವಳು ಖಂಡಿತಾ ಸಹಿಸಲಾರಳು. ದೇವರೇ ನನಗೊಂದಿಷ್ಟು ಶಕ್ತಿ ಕೊಡು. ನನ್ನಲ್ಲಿರುವ ಶಕ್ತಿ ಉಡುಗಿ ಹೋಗುತ್ತಿದೆ. ಇಂತಹಾ ಘೋರ ಸತ್ಯವನ್ನು ನಾನವಳಿಗೆ ಹೇಗೆ ಹೇಳಲಿ? ಎಂದು ಚಿಂತಾಕ್ರಾಂತಳಾಗಿ ಒಂದು ಕ್ಷಣ ಕಣ್ಣು ಮುಚ್ಚಿದಳು. ಕಣ್ಣುಗಳಲ್ಲಿ ತುಂಬಿದ್ದ ನೀರು ಕೆನ್ನೆಯ ಮೇಲೆ ಇಳಿಯಿತು. ತಂಗಿಯು ಕುಳಿತಲ್ಲಿಂದ ನಿಧಾನವಾಗಿ ಎದ್ದು ಬಂದು ಅಕ್ಕನ ಕೆನ್ನೆಯ ಮೇಲೆ ಹರಿದ ಕಣ್ಣೀರನ್ನು ಒರಸಿ, ಅಕ್ಕನ ಮುಖವನ್ನು ಬೊಗಸೆಯಲ್ಲಿ ಹಿಡಿದು…”ಅಕ್ಕಾ ….ಏನಾಯ್ತು ಹೇಳು…. ಕಷ್ಟ ಸುಖ, ನೋವು ನಲಿವು, ಏನೇ ಇರಲಿ ನಾವು ಪರಸ್ಪರ ಹೇಳಿಕೊಂಡು ಮನಸ್ಸನ್ನು ಹಗುರಾಗಿಸಿಕೊಂಡಿದ್ದೇವೆ….. ಒಬ್ಬರಿಗೊಬ್ಬರು ಸದಾ ಜೊತೆಯಲ್ಲಿ ಇದ್ದೇವೆ…. ನೀನು ಇರುವ ಸ್ಥಿತಿಯನ್ನು ಕಂಡು ಪರಿಸ್ಥಿತಿಯ ಗಂಭೀರತೆ ನನಗೂ ಅರ್ಥವಾಗುತ್ತಿದೆ…. ನೀನು ಹೀಗೆ ಮಾತನಾಡದೆ ದುಃಖಿಸುತ್ತಿದ್ದರೆ ನನ್ನ ಮನ ಇನ್ನೂ ವ್ಯಾಕುಲಗೊಳ್ಳುತ್ತದೆ…. ಪರಿಸ್ಥಿತಿ ಏನೇ ಇರಲಿ ಅದನ್ನು ನಾವು ಎದುರಿಸಲೇಬೇಕು…. ದಯವಿಟ್ಟು ಏನಾಯ್ತು ಎಂದು ಹೇಳು ಅಕ್ಕಾ”…. ಎಂದು ತಂಗಿ ಹೇಳಿದಾಗ ಅವಳ ದುಃಖವು ಇನ್ನೂ ಹೆಚ್ಚಾಯಿತು. ತಂಗಿಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ತನ್ನ ಪಕ್ಕ ಕುಳಿತುಕೊಳ್ಳುವಂತೆ ಸನ್ನೆ ಮಾಡಿ…. “ನೀನು ಈಗ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬೇಕಾಗಿದೆ…. ವೈದ್ಯರು ಹೇಳಿದಾಗ ನನಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಅನುಭವವಾಯಿತು… ಈಗ ನಿನಗೆ ಇಂತಹ ಸಂಕಟದ ವಿಷಯವನ್ನು ಹೇಗೆ ಹೇಳಲಿ ಎಂಬುದೇ ನನ್ನ ಯೋಚನೆಯಾಗಿದೆ…. ಆದರೂ ಹೇಳದೇ ಬೇರೆ ದಾರಿ ಇಲ್ಲ”…. ಎಂದಾಗ ತಂಗಿ…._ಅದೇನೇ ಇರಲಿ ಹೇಳು” …ಎಂದಳು….. _ವೈದ್ಯರು ಹೇಳಿದರು…. ನಮ್ಮ ತಾಯಿ ಇನ್ನು ಕೇವಲ ಆರು ತಿಂಗಳಷ್ಟೇ…. ನಮ್ಮೊಂದಿಗೆ ಇರುತ್ತಾರೆ”… ಎಂದಳು. ಅಕ್ಕ ಹೇಳಿದ ಮಾತು ತಂಗಿಗೆ ಸರಿಯಾಗಿ ಅರ್ಥವಾಗಲಿಲ್ಲ…. _ಬಿಡಿಸಿ ಹೇಳಕ್ಕ…. ನನಗೆ ಏನೂ ಅರ್ಥವಾಗುತ್ತಿಲ್ಲ….”ಎಂದಳು. ….”ಅಂದರೆ…. ನಮ್ಮ ತಾಯಿ ಜೀವಂತವಾಗಿರುವುದು ಇನ್ನು ಕೇವಲ ಆರು ತಿಂಗಳು ಮಾತ್ರ….. ಈ ಮಾತನ್ನು ಕೇಳಿದ ತಂಗಿ ಗರಬಡಿದಂತೆ ಅಲುಗಾಡದೆ ಹಾಗೆ ಕುಳಿತುಬಿಟ್ಟಳು. ತನ್ನ ಕಿವಿಗಳನ್ನು ತಾನೆ ನಂಬದಾದಳು. ತಾನು ಕೇಳುತ್ತಿರುವುದು ಏನು? ಅಕ್ಕ ಇದೇನು ಹೇಳುತ್ತಿದ್ದಾಳೆ? ಇದು ನಿಜವಲ್ಲ ಎಂದುಕೊಳ್ಳುತ್ತಾ, ಅಕ್ಕನ ಎರಡೂ ಭುಜಗಳನ್ನು ಹಿಡಿದು ಬಲವಾಗಿ ಅಲುಗಾಡಿಸುತ್ತಾ… “ನೀನು ಏನು ಹೇಳುತ್ತಿರುವೆ? ಸುಮ್ಮನೆ ಏನೇನೋ ಹೇಳಬೇಡ….. ಅಮ್ಮನಿಗೆ ಏನೂ ಆಗಿಲ್ಲ…. ಈಗ ನೋಡು ಸ್ವಲ್ಪ ಹೊತ್ತಿಗೆ ಮುಂಚೆ ನಮ್ಮ ಜೊತೆ ಎಷ್ಟು ಚೆನ್ನಾಗಿ ಮಾತನಾಡುತ್ತಿದ್ದಳು…. ಏನೋ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ ಅಷ್ಟೇ…. ವೈದ್ಯರು ಹಾಗೆ ಹೇಳಿರಲಿಕ್ಕಿಲ್ಲ…. ಬಹುಶಃ ನೀನು ಸರಿಯಾಗಿ ಕೇಳಿಸಿಕೊಂಡಿಲ್ಲ ಎಂದು ಅನಿಸುತ್ತದೆ…. ಇಷ್ಟು ಬೇಗ ನಮ್ಮನ್ನಗಲಿ ಅಮ್ಮ ಎಲ್ಲಿಗೂ ಹೋಗುವುದಿಲ್ಲ….. ನಿನ್ನ ವಿದ್ಯಾಭ್ಯಾಸ ಮುಗಿದು ನೀನು ಕೆಲಸಕ್ಕೆ ಸೇರಿಕೊಳ್ಳುವುದನ್ನು …. ನಾವೆಲ್ಲರೂ ಸಂತೋಷದಿಂದ ಕಳೆಯುವ ಕಾಲವನ್ನು ಅಮ್ಮ ನೋಡಬೇಕಿದೆ….. ತಂಗಿ ನವೋದಯ ವಿದ್ಯಾಲಯದಿಂದ ಈ ವರ್ಷ 10ನೇ ತರಗತಿ ಮುಗಿಸಿ, ಅವಳು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಮುಂದುವರೆಸುವುದನ್ನು ಅಮ್ಮ ನೋಡಬೇಕಿದೆ…. ದೇವರು ಅಷ್ಟು ನಿಷ್ಕರುಣಿಯಲ್ಲ…. ವೈದ್ಯರನ್ನು ಭೇಟಿಯಾಗಿ ಮತ್ತೊಮ್ಮೆ ಕೇಳು….. ಅಮ್ಮನ ಆರೋಗ್ಯ ಸುಧಾರಿಸಲು ಏನಾದರೂ ಔಷಧೋಪಚಾರ ಇರಬಹುದೇ?….ಸ್ವಲ್ಪಕಾಲವಾದರೂ ಅಮ್ಮ ನಮ್ಮೊಟ್ಟಿಗೆ ಬದುಕಿರಲು ಅವಕಾಶವಿದೆಯೇ ಎಂದು…. ಅಕ್ಕಾ ದಯವಿಟ್ಟು ವೈದ್ಯರನ್ನು ಮತ್ತೊಮ್ಮೆ ಭೇಟಿ ಮಾಡಿ ಕೇಳು ಎಂದು ಬೆಕ್ಕಿ ಬಿಕ್ಕಿ ಅಳುತ್ತಾ ದಂಬಾಲು ಬಿದ್ದಳು. ರುಕ್ಮಿಣಿ ನಾಯರ್
ಧಾರಾವಾಹಿ ಸಂಗಾತಿ ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಅಕ್ಕ ತಂಗಿಯರ ಪರಸ್ಪರ ಸಾಂತ್ವಾನದ ಕ್ಷಣಗಳು ಸುಮತಿಯ ಅನುಪಸ್ಥಿತಿಯಲ್ಲಿ ಮೂರನೇ ಮಗಳು ತಾಯಿಯ ಬದಲು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಶಾಲೆ ಹೋಗುತ್ತಿದ್ದಳು. ತೋಟದ ಶಾಲೆಯ ಮಕ್ಕಳಿಗೆ ಯಾರಾದರೂ ಹೋಗಿ ಅಕ್ಷರಾಭ್ಯಾಸ ಮಾಡಿಸಲೇ ಬೇಕಾದ ಅನಿವಾರ್ಯತೆ ಇತ್ತು. ಒಂದು ದಿನ ಶಾಲೆಗೆ ರಜೆಯಾದರೂ ಕೂಡಾ ಮರುದಿನ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಿದ್ದರು. ಮಕ್ಕಳು ಶಾಲೆಗೆ ಬರದೇ ಹೋದರೆ ತಿಂಗಳ ಸಂಬಳ ಎಲ್ಲಿ ತಪ್ಪಿ ಹೋಗುವುದೋ ಎನ್ನುವ ಭಯ. ಸಂಬಳದಿಂದ ಬರುವ ಹಣದಲ್ಲಿ ತಿಂಗಳು ಪೂರ್ತಿ ಸುಮತಿಯ ಕುಟುಂಬ ಕಳೆಯಬೇಕಿತ್ತು. ಎರಡನೇ ಮಗಳು ಕೆಲಸ ಮಾಡುತ್ತಿದ್ದರೂ ಅವಳಿಗೆ ಬರುವ ಸಂಬಳವೂ ಕಡಿಮೆ ಇತ್ತು. ಈಗ ಸುಮತಿ ಆಸ್ಪತ್ರೆಯಲ್ಲಿ ಇರುವುದರಿಂದ ಖರ್ಚುಗಳು ಸ್ವಲ್ಪ ಹೆಚ್ಚಿತ್ತು. ಸರಕಾರಿ ಆಸ್ಪತ್ರೆ ಆದ್ದರಿಂದ ಅಲ್ಲಿ ವಾರ್ಡ್ ಗೆ ಹಣ ಕಟ್ಟುವ ಅಗತ್ಯ ಇರಲಿಲ್ಲ. ಮಾತ್ರೆ ಔಷಧಿಗಳು ಅಲ್ಲಿಯೇ ಸಿಗುತ್ತಿದ್ದವು. ಹೊರಗಿನಿಂದ ತರಬೇಕೆಂದಿದ್ದರೆ ಎಷ್ಟೇಟಿನ ಲೆಕ್ಕದಲ್ಲಿ ಮೆಡಿಕಲ್ ಸ್ಟೋರ್ ನಿಂದ ಖರೀದಿಸಬಹುದಿತ್ತು. ಆದರೆ ಇನ್ನುಳಿದ ಖರ್ಚನ್ನು ನಿಭಾಯಿಸುವುದು ಕಷ್ಟವಾಗುತ್ತಿತ್ತು. ಗುರುವಾರ ಶಾಲೆಗೆ ರಜೆ ಇದ್ದ ಕಾರಣ ಮೂರನೇ ಮಗಳು ಸುಮತಿಯನ್ನು ನೋಡಲು ಆಸ್ಪತ್ರೆಗೆ ಬಂದಳು. ಇನ್ನೂ ಹದಿನಾರರ ಹರೆಯದ ಹುಡುಗಿ ತೋಟದ ನಿರ್ಜನವಾದ ದಾರಿಯಲ್ಲಿ ಒಬ್ಬಳೇ ಶಾಲೆಗೆ ಹೋಗಿ ಬರಬೇಕಿತ್ತು. ಸುಮತಿ ಆಸ್ಪತ್ರೆಯಲ್ಲಿ ದಾಖಲಾದ್ದರಿಂದ ಮನೆಯಲ್ಲಿಯೂ ಕೂಡ ಅವಳೊಬ್ಬಳೇ ಇರಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಮತಿಯ ಮಕ್ಕಳು ಧೈರ್ಯವಂತರು. ಅನಿವಾರ್ಯತೆಗಳಲ್ಲಿ ತಮ್ಮನ್ನು ತಾವೇ ಸಂಭಾಳಿಸಿಕೊಳ್ಳಲು ಶಕ್ತರಾಗಿದ್ದರು. ಜೀವನದಲ್ಲಿ ಅವರು ಅನುಭವಿಸಿದ ಕಷ್ಟಗಳು ಆವರಿಗೆ ವಿಧಿ ಒಡ್ಡಿರುವ ಸವಾಲುಗಳನ್ನು ಎದುರಿಸಿ ಬದುಕುವ ಪಾಠ ಕಲಿಸಿತ್ತು. ಆದರೂ ಭಯ, ಆತಂಕ, ಒಂಟಿತನ ಇವೆಲ್ಲವೂ ಕಾಡುತ್ತಿದ್ದರೂ ಆ ಹುಡುಗಿ ಧೈರ್ಯವಾಗಿ ಶಾಲೆಗೆ ಹೋಗಿ ಬಂದು ತಾಯಿಯ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಳು. ಇದೀಗ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ತಾಯಿಯನ್ನು ಕಂಡು ಅವಳ ಮನಸ್ಸು ವಿಹ್ವಲಗೊಂಡಿತು. ಕಾಲೇಜಿನಿಂದ ಆಸ್ಪತ್ರೆಗೆ ಬಂದಾಗ, ತನ್ನ ತಂಗಿ ತಾಯಿಯನ್ನು ನೋಡಲು ಬಂದಿರುವುದು ಅಕ್ಕನಿಗೆ ತಿಳಿದು ಸಂತೋಷದ ಜೊತೆಗೆ ದುಃಖವೂ ಆಯಿತು. ವೈದ್ಯರು ತಾಯಿಯ ಬಗ್ಗೆ ತಿಳಿಸಿರುವ ಸಂಗತಿಯನ್ನು ತಂಗಿಗೆ ಹೇಳಲೇ ಬೇಕಿತ್ತು. ಇವಳಿಗೆ ಅವಳು, ಅವಳಿಗೆ ಇವಳು ಸದಾ ಸಾಂತ್ವನ ನೀಡಿ, ಪರಸ್ಪರರನ್ನು ಕಾಳಜಿವಹಿಸುತ್ತಿದ್ದರು. ಇಬ್ಬರೂ ಅಕ್ಕತಂಗಿಯರಂತಿರದೇ ಆತ್ಮೀಯ ಗೆಳತಿಯರಂತೆ ಅನ್ಯೋನ್ಯವಾಗಿದ್ದರು. ಹಾಗಾಗಿ ಏನೇ ಇದ್ದರೂ ಮುಚ್ಚು ಮರೆ ಇಲ್ಲದೇ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಆದರೂ ಇಂತಹಾ ಖೇದಕರ ಸಂಗತಿಯನ್ನು ತಿಳಿಸಲು ಅಕ್ಕನಿಗೆ ಕಷ್ಟವಾಯಿತು…… ಇನ್ನು ನಮ್ಮ ತಾಯಿ ಬದುಕಿರುವುದು ಕೇವಲ ಆರು ತಿಂಗಳ ಮಾತ್ರ…. ಅಮ್ಮ ತುಂಬಾ ಗಂಭೀರ ಸ್ಥಿತಿಯಲ್ಲಿರುವಳು…. ಒಂದೊಂದು ದಿನ ಕಳೆಯುತ್ತಿದ್ದಂತೆ ಅವಳು ನಮ್ಮಿಂದ ದೂರವಾಗುತ್ತಿದ್ದಾಳೆ… ಎನ್ನುವ ಸತ್ಯವನ್ನು ನಾನು ಹೇಗೆ ತಂಗಿಗೆ ಹೇಳಲಿ? ಎಂಬ ಆಲೋಚನೆಯಲ್ಲಿ ಇದ್ದಳು. ಸುಮತಿಯ ಮೂರನೇ ಮಗಳು ತನ್ನ ತಾಯಿ ಮತ್ತು ಅಕ್ಕನ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಳು. ತಾಯಿಯ ಮುಖದಲ್ಲಿ ಭರವಸೆಯ ಛಾಯೆ ಇದ್ದರೆ, ಅಕ್ಕನ ಮುಖದಲ್ಲಿ ನಿರಾಶೆಯ ಛಾಯೆ ಮನೆ ಮಾಡಿತ್ತು. ಸದಾ ಹಸನ್ಮುಖಿಯಾದ ಅಕ್ಕ ಗಂಭೀರವಾದ ವಿಚಾರವಿಲ್ಲದೆ ಹೀಗೆ ಚಿಂತಾಕ್ರಾಂತಳಾಗಿ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ತಂಗಿಗೆ ತಿಳಿದಿತ್ತು. ಆದರೂ ತಾಯಿಯ ಎದುರು ಏನನ್ನೂ ಕೇಳುವುದು ಸೂಕ್ತವಲ್ಲ ಎಂದುಕೊಂಡು…. “ಅಮ್ಮಾ ….ಈಗ ಹೇಗಿದ್ದೀಯಾ?….ಮೊನ್ನೆ ನೀನು ಮನೆಯಿಂದ ಹೊರಟಾಗ ತುಂಬಾ ದಣಿದಿದ್ದೆ…. ಈಗ ನಿನ್ನ ಆಯಾಸ ಕಡಿಮೆಯಾಯಿತೇ? ಮನೆಯಲ್ಲಿ ನೀನು ಆಗಾಗ ವಾಂತಿ ಮಾಡಿಕೊಳ್ಳುತ್ತಿದ್ದೆ…. ಈಗ ಹೇಗಿದೆ?…. ಊಟ ಸೇರುತಿದೆಯೇ?…. ಎಂದು ತಾಯಿಯನ್ನು ಕೇಳಿದಳು. ಅದಕ್ಕೆ ಸುಮತಿ ಈಗ ಸ್ವಲ್ಪ ಪರವಾಗಿಲ್ಲ ಮಗಳೇ….. ವೈದ್ಯರ ಮೇಲ್ನೋಟದಲ್ಲಿ, ದಾದಿಯರ ಶುಶ್ರೂಷೆಯಲ್ಲಿ ಈಗ ಸ್ವಲ್ಪ ಚೇತರಿಸಿಕೊಂಡಿದ್ದೇನೆ…. ಜೊತೆಗೆ ನಿಮ್ಮಿಬ್ಬರ ಪ್ರೀತಿ ಮತ್ತು ಕಾಳಜಿ ನನಗೆ ಔಷಧವಲ್ಲವೇ? ….. ಅದಿರಲಿ ನೀನು ಹೇಗಿದ್ದೀಯಾ?….. ನಿನ್ನನ್ನು ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ನಾನು ಇಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವ ಅನಿವಾರ್ಯ ಪರಿಸ್ಥಿತಿ ಬಂತು…. ನನಗೆ ತಿಳಿದಿರಲಿಲ್ಲ ಹೀಗೆ ಕೂಡಲೇ ನನ್ನನ್ನು ಆಸ್ಪತ್ರೆಯಲ್ಲಿ ದಾಖಲು ಮಾಡುತ್ತಾರೆ ಎಂಬುದು…. ವೈದ್ಯರು ಪರಿಶೀಲನೆ ನಡೆಸಿ ಮನೆಗೆ ಕಳುಹಿಸುತ್ತಾರೆ ಎಂದು ತಿಳಿದಿದ್ದೆ…. ಇಲ್ಲಿಗೆ ಬಂದ ಕೂಡಲೇ ನನ್ನನ್ನು ವೈದ್ಯರು ಹಲವಾರು ಪರೀಕ್ಷೆಗಳಿಗೆ ಒಳಪಡಿಸಿ, ಇಲ್ಲಿ ದಾಖಲಾಗುವಂತೆ ತಿಳಿಸಿದರು…. ನಿನ್ನ ಅಕ್ಕ ಕೂಡ ಕೂಡಲೇ ನನ್ನನ್ನು ಇಲ್ಲಿಗೆ ದಾಖಲಿಸಿದಳು”….. ಎಂದಾಗ,…. “….ಅಮ್ಮಾ ….ಅಕ್ಕ ಆ ದಿನವೇ ನನಗೆ ಈ ಎಲ್ಲಾ ವಿಷಯವನ್ನು ತಿಳಿಸಿದ್ದಾಳೆ…. ನೀನು ಹೆಚ್ಚು ಯೋಚಿಸಿ ಆಯಾಸ ಪಡಬೇಡ…. ನಾನು ಅಲ್ಲಿ ಚೆನ್ನಾಗಿದ್ದೇನೆ…. ಅಲ್ಲಿ ಸುತ್ತಲೂ ನಮಗೆ ಪರಿಚಿತರಲ್ಲವೇ ಇರುವುದು? ಹಾಗಾಗಿ ಯಾವುದೇ ತೊಂದರೆ ಇಲ್ಲ…. ದಿನವೂ ನಾನು ಶಾಲೆಗೆ ಹೋಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಬರುತ್ತಿದ್ದೇನೆ…. ನೀನು ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳಬೇಡ…. ನಿನ್ನ ಜೊತೆ ಸದಾ ನಾನು ಮತ್ತು ಅಕ್ಕ ಇದ್ದೇವೆ…. ಎಂದಳು. ಮಗಳ ಮಾತನ್ನು ಕೇಳಿದ ಸುಮತಿ ಎದ್ದು ಕುಳಿತು, ಇಬ್ಬರನ್ನೂ ತನ್ನ ಅಕ್ಕಪಕ್ಕದಲ್ಲಿ ಬಂದು ಕುಳಿತುಕೊಳ್ಳುವಂತೆ ಸೂಚಿಸಿದಳು.ತಾಯಿಯ ಅಣತಿಯಂತೆ ಇಬ್ಬರೂ ಅಕ್ಕಪಕ್ಕ ಬಂದು ಕುಳಿತರು. ಸುಮತಿ ಮಕ್ಕಳಿರಿಬ್ಬರನ್ನೂ ತೋಳಿಂದ ಬಳಸಿ …. ಮಕ್ಕಳೇ ಈ ಅಮ್ಮನನ್ನು ಕ್ಷಮಿಸಿ…. ಈ ವಯಸ್ಸಿಗೇ ನಿಮ್ಮನ್ನು ಹಲವಾರು ಕಷ್ಟಗಳಿಗೆ ದೂಡಿದೆ. ನನ್ನಿಂದ ನಿನ್ನ ವಿಧ್ಯಾಭ್ಯಾಸ ಕೂಡಾ ಮೊಟಕುಗೊಂಡಿತು…..ಎನ್ನುತ್ತಾ ಮೂರನೇ ಮಗಳ ಭುಜವನ್ನು ಹಿಡಿದು ತನ್ನಡೆಗೆ ಆನಿಸಿಕೊಂಡು ಸುಮತಿ ಹೇಳಿದಳು….. “ಅಮ್ಮಾ …..ಅದಕ್ಕಾಗಿ ನೀನೇನೂ ಬೇಸರಗೊಳ್ಳಬೇಡ…. ಎಸ್ ಎಸ್ ಎಲ್ ಸಿ ವರೆಗೂ ಓದಿದ್ದೇನೆ…. ಅಕ್ಕ ಈಗ ಪದವಿ ತರಗತಿಯಲ್ಲಿ ಓದುತ್ತಿದ್ದಾಳೆ…. ತಂಗಿ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ನಾವು ವಿದ್ಯೆಯನ್ನು ಕರೆಯಲಿ ಎಂದು ನೀನು ಮಾಡಿದ ತ್ಯಾಗ ಅಷ್ಟಿಷ್ಟಲ್ಲ”…. ಎಂದು ಹೇಳುತ್ತಾ, ನೀನೇಕೆ ಹೀಗೆ ಮಂಕಾಗಿರುವೆ ಎಂಬಂತೆ ಪ್ರಶ್ನಾರ್ಥಕವಾಗಿಅಕ್ಕನನ್ನು ನೋಡಿದಳು. ಅವಳ ಮುಖವು ಮ್ಲಾನವಾಗಿತ್ತು. ಕಣ್ಣುಗಳಲ್ಲಿ ಕಂಡೂ ಕಾಣದಂತೆ ಕಣ್ಣೀರಿನ ಪಸೆಯಿತ್ತು. ರುಕ್ಮಿಣಿ ನಾಯರ್
ಧಾರಾವಾಹಿ ಸಂಗಾತಿ-119 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಯ ಒಳತೋಟಿ ಹೇಗೋ ಸಾವರಿಸಿಕೊಂಡು ಕಾರಿನಲ್ಲಿ ಕುಳಿತಿದ್ದ ಮಹಾನುಭಾವರಿಗೆ ವಂದಿಸಿ ಕ್ಷಮೆ ಯಾಚಿಸಿದಳು. ನಂತರ ಹೇಗೋ ಯಾಂತ್ರಿಕವಾಗಿ ರಸ್ತೆಯನ್ನು ದಾಟಿ ಅಲ್ಲಿಂದ ನೇರವಾಗಿ ಅನಾಥಾಶ್ರಮಕ್ಕೆ ಬಂದಳು. ಅನಾಥಾಶ್ರಮಕ್ಕೆ ಬಂದಾಗ ಮಕ್ಕಳೆಲ್ಲರೂ ಅದಾಗಲೇ ಶಾಲೆಯಿಂದ ಬಂದಿದ್ದರು. ಅವಳ ಜೊತೆಗೆ ಸಹಾಯಕ್ಕಾಗಿ ಹೊಸದಾಗಿ ಬಂದ ಅವಳದೇ ವಯಸ್ಸಿನ ಹುಡುಗಿಯು ಇವಳನ್ನು ಕಂಡೊಡನೆ ಹತ್ತಿರ ಬಂದು…. ಏನಾಯ್ತು?…. ನಿನ್ನ ಮುಖ ಪೂರ್ತಿ ಕಳೆಗುಂದಿದೆ…. ಮಧ್ಯಾಹ್ನದ ಊಟ ಮಾಡಿಲ್ಲವೇ? ಎಂದು ಕೇಳಿದಳು. ಇಲ್ಲವೆಂಬಂತೆ ತಲೆ ಆಡಿಸಿ ತನ್ನ ರೂಮಿನೊಳಗೆ ಹೋದಳು. ಆ ಹುಡುಗಿ ಆಕೆಯನ್ನು ಹಿಂಬಾಲಿಸಿ ಬಂದಳು. ಅವಳ ಹೆಗಲ ಮೇಲೆ ಕೈಯಿಟ್ಟು…. ಏನಾಯ್ತು ಹೇಳು…. ಬಂದಾಗಿನಿಂದ ನಿನ್ನನ್ನು ಗಮನಿಸುತ್ತಿದ್ದೇನೆ….. ಇಷ್ಟೊಂದು ಹತಾಶಳಾಗಿ ನಿನ್ನನ್ನು ಕಂಡಿದ್ದೇ ಇಲ್ಲ…. ಏನಾಯ್ತು…. ಎಂದು ಕೇಳಲು, ಅಲ್ಲಿಯವರೆಗೂ ಅವಳು ತಡೆಹಿಡಿದಿದ್ದ ಮನಸ್ಸಿನ ಭಾರ ಒಮ್ಮೆಲೆ ಹೊರಗೆ ಬರುತ್ತಿರುವಂತೆ ಅವಳಿಗನಿಸಿತು. ಇವಳು ಆ ಹುಡುಗಿಯ ಹೆಗಲ ಮೇಲೆ ತಲೆ ಇಟ್ಟಳು. ಅವಳನ್ನು ಬಿಗಿಯಾಗಿ ಅಪ್ಪಿಕೊಂಡಳು. ಆದರೆ ಕಣ್ಣಿನಿಂದ ಒಂದು ಹನಿ ನೀರೂ ಆಚೆ ಬರಲಿಲ್ಲ. ಅಳಬೇಕೆಂದು ಪ್ರಯತ್ನ ಪಟ್ಟರೂ ಅಳು ಗಂಟಲಲ್ಲಿ ಉಳಿದು ಹೋಯಿತು. ಅವಳ ಆ ಸ್ಥಿತಿಯನ್ನು ಗಮನಿಸಿದಾಗ ಪರಿಸ್ಥಿತಿಯು ಗಂಭೀರವಾಗಿದೆ ಎಂಬುದು ಅವಳ ಜೊತೆಗಿದ್ದ ಹುಡುಗಿಗೆ ಅರ್ಥವಾಯಿತು. ಒಂದು ಲೋಟ ನೀರು ತರುವಂತೆ ಮಕ್ಕಳಿಗೆ ಹೇಳಿ ಆ ಹುಡುಗಿಯು ಇವಳನ್ನು ಅಲ್ಲಿದ್ದ ಬೆಂಚಿನ ಮೇಲೆ ಕುಳ್ಳಿರಿಸಿದಳು. “….ಏನಾಯ್ತು ಹೇಳು”…. ಎಂದಾಗ, ವೈದ್ಯರು ಹೇಳಿದ ಅಷ್ಟೂ ವಿಷಯಗಳನ್ನು ಆ ಹುಡುಗಿಗೆ ತಿಳಿಸಿದಳು. ಆ ಹುಡುಗಿಯು ಕೊಡಗಿನ ನಿವಾಸಿಯಾಗಿದ್ದಳು. ಹಾಸನದಲ್ಲಿ ದಾದಿಯರ ತರಬೇತಿಗೆಂದು ಬಂದವಳಾಗಿದ್ದಳು. ಆ ವರ್ಷದ ಅಡ್ಮಿಶನ್ ಅವಧಿ ಮುಗಿದಿದ್ದ ಕಾರಣ ಸ್ವಲ್ಪ ದಿನ ಅನಾಥಾಶ್ರಮದಲ್ಲಿ ಸಹಾಯಕಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಮುಂದಿನ ವರ್ಷದ ನರ್ಸಿಂಗ್ ತರಬೇತಿಗೆ ಸೇರಲು ತೀರ್ಮಾನಿಸಿದ್ದಳು. ಈ ಹುಡುಗಿಯು ಬಂದಿದ್ದು ಸುಮತಿಯ ಮಗಳಿಗೆ ಬಹಳ ಸಹಾಯಕವಾಗಿತ್ತು. ಅಡುಗೆಯ ಕೆಲಸವನ್ನು ಚೆನ್ನಾಗಿ ಬಲ್ಲವಳಾಗಿದ್ದ ಅವಳು ರುಚಿಕರವಾದ ಅಡುಗೆಯನ್ನು ಮಾಡಿ ಸುಮತಿಯ ಮಗಳಿಗೂ ಅನಾಥಾಶ್ರಮದ ಮಕ್ಕಳಿಗೂ ಉಣ ಬಡಿಸುತ್ತಿದ್ದಳು. ಬಹಳ ಬೇಗ ಇಬ್ಬರೂ ಸ್ನೇಹಿತೆಯರಾಗಿ ಬಿಟ್ಟಿದ್ದರು. ಅಲ್ಲದೆ ಅನಾಥಾಶ್ರಮದ ಮೇಲೆ ಇರುವ ಕಟ್ಟಡದ ವನಿತಾ ಹಾಸ್ಟಲ್ ನಲ್ಲಿ ಬಾಡಿಗೆಗೆ ವಾಸವಾಗಿದ್ದ ಯುವತಿಯರು ಕೂಡಾ ಸುಮತಿಯ ಮಗಳಿಗೆ ಸ್ನೇಹಿತೆಯರಾಗಿದ್ದರು. ಕೆಲವೊಮ್ಮೆ ಅಪರೂಪಕ್ಕೆ ಹಾಸ್ಟೆಲ್ ಗೆ ಹೋಗಿ ಅವರೊಂದಿಗೆ ಸಮಯ ಕಳೆಯುತ್ತಿದ್ದಳು. ಸುಮತಿಯ ಮಗಳು ಮಧುರವಾಗಿ ಹಾಡುಗಳನ್ನು ಹಾಡುತ್ತಿದ್ದ ಕಾರಣ ಆ ಯುವತಿಯರೆಲ್ಲರಿಗೂ ಬಹಳ ಇಷ್ಟವಾಗಿದ್ದಳು. ಅವಳ ತಾಯಿಯ ಆರೋಗ್ಯ ಸರಿ ಇಲ್ಲದಿರುವುದು ಆ ಯುವತಿಯರಿಗೂ ತಿಳಿದಿತ್ತು. ಹಾಗಾಗಿ ಸುಮತಿಯ ಮಗಳನ್ನು ಕಂಡು ಮಾತನಾಡಿಸಿಕೊಂಡು ಹೋಗಲು ಆ ಯುವತಿಯರು ಅನಾಥಾಶ್ರಮದ ಒಳಗೆ ಬಂದರು. ಸುಮತಿಯ ಮಗಳ ಸ್ಥಿತಿಯನ್ನು ಕಂಡು ಹಾಗೂ ಅವಳ ಮಾತುಗಳನ್ನು ಆಲಿಸಿ, ಅವಳ ತಾಯಿಗೆ ಗಂಭೀರವಾದ ಸಮಸ್ಯೆ ಇರುವುದನ್ನು ಮನಗಂಡರು. ಸಾಧ್ಯವಾದಷ್ಟು ಸಾಂತ್ವನ ಹೇಳಿ, ಮೇಲಿನ ಹಾಸ್ಟೆಲ್ ಗೆ ಕರೆದುಕೊಂಡು ಹೋದರು. ಅಲ್ಲಿ ಅವಳಿಗೆ ಹಣ್ಣಿನ ಪಾನಕವನ್ನು ಕೊಟ್ಟರು. ಎಲ್ಲರ ಸಾಂತ್ವನದ ಮಾತುಗಳು ಮತ್ತು ಕಾಳಜಿ ಅವಳಿಗೊಂದಿಷ್ಟು ಸಮಾಧಾನವನ್ನು ಕೊಟ್ಟಿತು. ಅವಳ ಜೊತೆಗಿದ್ದ ಹುಡುಗಿಯಂತೂ ಅವಳ ಬಲಗೈಯಂತೆ ಅವಳಿಗೆ ಸಹಾಯ ಮಾಡುತ್ತಿದ್ದಳು. ಸುಮತಿಗೆ ರಾತ್ರಿ ಊಟಕ್ಕೆ ಬೇಕಾದ ಅಡುಗೆಯನ್ನು ಮಾಡಿ ಸ್ಟೀಲ್ ಡಬ್ಬಿಯಲ್ಲಿ ತುಂಬಿ, ತನ್ನ ಸ್ನೇಹಿತರಿಗೂ ಊಟ ಬಡಿಸಿ ಸ್ವಲ್ಪವಾದರೂ ತಿನ್ನುವಂತೆ ಬಲವಂತ ಮಾಡಿದರು. ಅವಳ ಕಾಳಜಿಯನ್ನು ನೋಡಿ ಊಟ ಸೇರದಿದ್ದರೂ ಒಂದೆರಡು ತುತ್ತು ತಿಂದು, ರಾತ್ರಿ ತಾಯಿಯ ಜೊತೆ ಆಸ್ಪತ್ರೆಯಲ್ಲಿ ಮಲಗಲು ಹೊರಟಳು. ತನಗೆ ಸಹಾಯಕಿ ಹಾಗೂ ಸ್ನೇಹಿತೆ ಅನಾಥಾಶ್ರಮದಲ್ಲಿ ಇರುವುದರಿಂದ ಅವಳಿಗೆ ಮಕ್ಕಳ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ. ಹಾಗೂ ಅನಾಥಾಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುವವರು ಅನುಮತಿಯನ್ನು ನೀಡಿದ್ದರಿಂದ ಸ್ವಲ್ಪ ನಿರಾಳವಾಗಿದ್ದಳು. ಅನಾಥಾಶ್ರಮದಿಂದ ಹೊರಟವಳು ಬೇಗ ಬೇಗನೆ ಆಸ್ಪತ್ರೆಯ ಕಡೆ ಹೆಜ್ಜೆ ಹಾಕಿದಳು. ಅಲ್ಲಿ ಬಂದಾಗ ತನ್ನ ದಾರಿಯನ್ನೇ ಕಾಯುತ್ತಿದ್ದ ಸುಮತಿಯನ್ನು ಕಂಡಳು. ಇನ್ನೂ ಹದಿನಾರರ ಹರೆಯದ ಮೂರನೇ ಮಗಳು ಒಬ್ಬಳೇ ಊರಲ್ಲಿರುವುದರಿಂದ ಸುಮತಿ ಚಿಂತಾಕ್ರಾಂತಳಾಗಿದ್ದಳು. ಮಂಗಳೊಂದಿಗೆ ತನ್ನ ಮನದ ದುಗುಡವನ್ನು ಹೇಳಿಕೊಂಡಳು. ಅಕ್ಕ ಪಕ್ಕದಲ್ಲಿ ಮನೆಗಳಿದ್ದರೂ ಹೆಣ್ಣು ಮಗಳು ಒಬ್ಬಳೇ ಅಲ್ಲಿರುವಳಲ್ಲ ಎನ್ನುವ ಚಿಂತೆ ಸುಮತಿಯ ಮನಸ್ಸನ್ನು ಕೊರೆಯುತ್ತಿತ್ತು. ತಾಯಿಯ ಚಿಂತೆಯನ್ನು ಅರಿತು ಮಗಳು…. ಅಮ್ಮಾ …..ಹಾಗೆಲ್ಲ ಚಿಂತಿಸಬೇಡ…. ಅವಳು ಧೈರ್ಯವಂತಳು….ಅವಳು ಅಲ್ಲಿದ್ದು ಶಾಲೆಗೆ ಹೋದರೆ ತಾನೇ ನಿನ್ನ ತಿಂಗಳಿನ ಸಂಬಳ ನಮಗೆ ಸಿಗುವುದು…. ಆ ಸಂಬಳ ಇರದಿದ್ದರೆ ನಾವು ತುಂಬಾ ಕಷ್ಟ ಪಡಬೇಕಾಗುತ್ತದೆ ಅಲ್ಲವೇ?…. ಎಂದು ಕೇಳಿದಳು. ಮಗಳು ಹೇಳಿದ ಮಾತು ಅಕ್ಷರಶಃ ಸತ್ಯವೆಂದು ಸುಮತಿಗೆ ತಿಳಿದಿದೆ ಆದರೂ ಒಳ ಮನಸ್ಸಿಗೆ ಸಮಾಧಾನವೇ ಇರಲಿಲ್ಲ. ಆಸ್ಪತ್ರೆಯಲ್ಲಿ ಡಾಕ್ಟರ್ ಹಾಗೂ ನರ್ಸ್ ಸುಮತಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ತಾಯಿಗೆ ರಾತ್ರಿ ಊಟವನ್ನು ಕೊಟ್ಟು, ನರ್ಸ್ ಕೊಟ್ಟ ಗುಳಿಗೆಗಳನ್ನು ನುಂಗಿಸಿ, ಮಲಗಲು ಹೇಳಿ ಪ್ರೀತಿಯಿಂದ ತಲೆಯನ್ನು ಸವರಿ…. “ಅಮ್ಮಾ …..ನಾನು ಇಲ್ಲಿಯೇ ವಾರ್ಡಿನ ಹೊರಗೆ ಆಸ್ಪತ್ರೆಯ ಉದ್ಯಾನದ ಕಾರಂಜಿಯ ನಡುವೆ ಇರುವ ವಿದ್ಯುತ್ ದೀಪದ ಬೆಳಕಿನಲ್ಲಿ ನನ್ನ ಪಠ್ಯಪುಸ್ತಕಗಳನ್ನು ಓದುತ್ತಿರುತ್ತೇನೆ…. ಇನ್ನೇನು ವಾರ್ಷಿಕ ಪರೀಕ್ಷೆಯು ಹತ್ತಿರ ಬರುತ್ತಿದೆ…. ಎಂದಳು. ಸುಮತಿ ಮಗಳ ಮುಖವನ್ನು ಒಮ್ಮೆ ನೋಡಿದಳು. ನನ್ನ ಮಕ್ಕಳಿಗೆ ಈ ಚಿಕ್ಕ ವಯಸ್ಸಿಗೆ ಎಷ್ಟೊಂದು ಜವಾಬ್ದಾರಿಗಳು? ನನ್ನಂತಹಾ ನತದೃಷ್ಟಳ ಹೊಟ್ಟೆಯಲ್ಲಿ ಏಕೆ ಇಂತಹಾ ಒಳ್ಳೆಯ ಮಕ್ಕಳನ್ನು ಹುಟ್ಟಿಸಿದೆ ದೇವರೇ. ನನ್ನ ಮಕ್ಕಳು ಜೀವನದ ಪ್ರತಿಯೊಂದು ಹಂತದಲ್ಲೂ ಒಂದಲ್ಲ ಒಂದು ರೀತಿಯ ಕಷ್ಟಕರ ಸವಾಲುಗಳನ್ನು ಎದುರಿಸುತ್ತಾ ಬದುಕುತ್ತಿದ್ದಾರೆ. ಇದಕ್ಕೆಲ್ಲಾ ನಾನೇ ಕಾರಣ ಎಂದು ಸುಮತಿ ವ್ಯಥೆ ಪಟ್ಟಳು.
ಧಾರಾವಾಹಿ ಸಂಗಾತಿ-118 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಮಗಳ ನೋವು ಅರ್ಥಮಾಡಿಕೊಂಡ ತಾಯಿ ಮನಸ್ಸು ಸ್ವಲ್ಪ ಸ್ಥಿಮಿತಕ್ಕೆ ಬಂತು ಎಂದು ಅರಿತ ಹುಡುಗಿ ನಿಧಾನವಾಗಿ ಬೆಂಚಿನ ಮೇಲಿಂದ ಎದ್ದು ತಾಯಿಯನ್ನು ಅಡ್ಮಿಟ್ ಮಾಡಿದ್ದ ವಾರ್ಡಿನ ಕಡೆಗೆ ನಡೆದಳು. ಅವಳು ಒಳಗೆ ಹೋಗಿ ನೋಡಿದಾಗ ಸುಮತಿ ಹಾಸಿಗೆ ಮೇಲೆ ತಲೆ ದಿಂಬಿಗೆ ಒರಗಿ ಕಣ್ಣು ಮುಚ್ಚಿ ಮಲಗಿದ್ದಳು. ತಾಯಿಯ ಬಳಿಗೆ ಬಂದ ಮಗಳು…” ಅಮ್ಮಾ….”ಎಂದು ಮೆಲ್ಲನೆ ಕರೆದಾಗ ಏನನ್ನೋ ಆಲೋಚಿಸುತ್ತಾ ಮಲಗಿದ್ದ ಸುಮತಿ ಕಣ್ಣು ತೆರೆದು ಮಗಳನ್ನು ನೋಡಿದಳು. ಮಗಳ ಮುಖ ಬಾಡಿದ ಹಾಗೆ ಕಂಡಿತು….”ಏನಾಯ್ತು ಮಗಳೇ….. ವೈದ್ಯರು ಏನು ಹೇಳಿದರು?… ಎಂದು ಕಾತುರದಿಂದ ಸುಮತಿ ಕೇಳಿದಾಗ, ತನ್ನ ಮನಸ್ಸಿನ ನೋವು ತಾಯಿಗೆ ತಿಳಿಯದಿರಲಿ ಎಂದು ಸಮಾಧಾನ ಚಿತ್ತ ತಂದುಕೊಂಡು ತಾಯಿಯನ್ನು ನೋಡುತ್ತಾ…. ಏನಿಲ್ಲಮ್ಮ…..ವೈದ್ಯರು ಕೆಲವು ಔಷಧಿಗಳನ್ನು ಬರೆದುಕೊಟ್ಟಿದ್ದಾರೆ…. ಸ್ವಲ್ಪ ದಿನ ಇಲ್ಲಿಯೇ ಆಸ್ಪತ್ರೆಯಲ್ಲಿದ್ದು ನೀನು ವಿಶ್ರಾಂತಿ ತೆಗೆದುಕೊಳ್ಳಬೇಕಂತೆ…. ನಿನಗೆ ಬೇಕಾದ ಚಿಕಿತ್ಸೆ ಹಾಗೂ ಶುಶ್ರೂಷೆಯನ್ನು ಇಲ್ಲಿನ ದಾದಿಯರು ಮಾಡುತ್ತಾರೆ…. ಸ್ವಲ್ಪ ಹುಷಾರಾದ ಬಳಿಕ ನೀನು ಮನೆಗೆ ಹೋಗಬಹುದು ಎಂದು ಹೇಳಿದ್ದಾರೆ”…. ಎಂದಳು. ಮಗಳು ಹೇಳಿದ ಮಾತುಗಳನ್ನು ಸುಮತಿ ನಂಬಿದರೂ ಕೂಡ ಅವಳ ಕಣ್ಣಿನಲ್ಲಿ ಮಡುಗಟ್ಟಿದ ದುಃಖ, ನೋವು ಸುಮತಿಯ ಕಣ್ಣಿಗೆ ಬೀಳದೇ ಇರಲಿಲ್ಲ. ಎಷ್ಟಾದರೂ ತಾಯಿ ಕರುಳು ಅಲ್ಲವೇ? ಸದಾ ಲವಲವಿಕೆಯಿಂದ ಚಿಗರೆಯಂತೆ ಓಡಾಡುತ್ತಿದ್ದ ಹಸನ್ಮುಖಿಯಾದ ಮಗಳ ಮುಖ ಬಾಡಿ ಬಳಲಿರುವುದು ಸುಮತಿಯ ಕಣ್ಣಿಗೆ ಗೋತರಿಸದೇ ಇರಲಿಲ್ಲ. ಮಗಳ ಮುಖವನ್ನೇ ನೋಡುತ್ತಾ ಏನಾಯ್ತು ಮಗಳೇ …. ನಿನ್ನ ಮನಸ್ಸನ್ನು ಕಾಡುತ್ತಿರುವ ಚಿಂತೆ ಏನೆಂದು ನನ್ನಲ್ಲಿ ಹಂಚಿಕೊಳ್ಳಬಾರದೇ? …. ಎಂದು ಸುಮತಿ ಕೇಳಿದಾಗ ಮಗಳು…. “ಹಾಗೇನೂ ಇಲ್ಲಮ್…. ಸ್ವಲ್ಪ ಆಯಾಸ ಆಗಿದೆ ಅಷ್ಟೇ…. ನೀನು ಈಗ ನನ್ನ ಬಗ್ಗೆ ಯೋಚಿಸುವುದನ್ನು ಬಿಟ್ಟು ಚೆನ್ನಾಗಿ ನಿದ್ರೆ ಮಾಡು… ನಿನಗೆ ಈಗ ವಿಶ್ರಾಂತಿಯ ಅಗತ್ಯವಿದೆ….ನಾನು ಹೊರಗೆ ಹೋಗಿ ವೈದ್ಯರು ಬರೆದುಕೊಟ್ಟ ಔಷಧಿಯನ್ನು ಖರೀದಿಸಿ ಬರುತ್ತೇನೆ…. ಎಂದು ಹೇಳುವಾಗ ಅವಳ ಕಣ್ಣು ತುಂಬಿ ಬಂದರೂ ಅದನ್ನು ಮರೆಮಾಚಿ ಬೇಗನೆ ಬಾಗಿಲಿಂದ ಆಚೆ ಹೋದಳು. ಹೊರಗೆ ಬಂದು ಆಸ್ಪತ್ರೆಯ ಮೆಟ್ಟಿಲಿನ ಮೇಲೆ ಕುಳಿತಳು. ಜೋರಾಗಿ ಅಳು ಒತ್ತರಿಸಿ ಬಂದರೂ ಅವಳು ಅಳುವಂತಿರಲಿಲ್ಲ. ಏಕೆಂದರೆ ಸುತ್ತಮುತ್ತಲಿನ ಜನರು ತನ್ನನ್ನು ನೋಡುತ್ತಾರೆ ಎನ್ನುವ ಮುಜುಗರ ಅವಳಗಿತ್ತು. ಒಂದೆರಡು ನಿಮಿಷ ಹಾಗೆಯೇ ಕುಳಿತಿದ್ದವಳು, ಔಷಧಿ ತರಲು ತಡವಾಗಬಾರದೆಂದು ಅಲ್ಲಿಂದ ಎದ್ದು ಆಸ್ಪತ್ರೆಯ ಗೇಟಿನಿಂದ ಆಚೆ ಹೋದಳು. ಆಸ್ಪತ್ರೆಯಿಂದ ಸ್ವಲ್ಪ ದೂರದಲ್ಲಿತ್ತು ಔಷಧೀಯ ಅಂಗಡಿ. ಎಸ್ಟೇಟಿನ ಲೆಕ್ಕದಲ್ಲಿ ಆ ಅಂಗಡಿಯಲ್ಲಿ ಔಷಧಿ ಖರೀದಿಸಬಹುದಾಗಿದ್ದುದರಿಂದ ಅಲ್ಲಿಗೆ ಹೋಗಿ ಔಷಧಿಯನ್ನು ಖರೀದಿಸಿ, ನಂತರ ಅನಾಥಾಶ್ರಮಕ್ಕೆ ಹೋಗಿ ತಾಯಿಗೆ ಮಧ್ಯಾಹ್ನಕ್ಕೆ ಬೇಕಾದ ಅಡುಗೆಯನ್ನು ಮಾಡಿ ಆಸ್ಪತ್ರೆಯ ಕಡೆಗೆ ಹೊರಟಳು. ತಾಯಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅಲ್ಲಿ ಮನೆಯಲ್ಲಿ ತಂಗಿ ಒಬ್ಬಳೇ ಇದ್ದಳು. ಅವಳಿಗೆ ತಾಯಿ ಆಸ್ಪತ್ರೆಗೆ ದಾಖಲಾದ ವಿಷಯವನ್ನು ತಿಳಿಸಬೇಕಿತ್ತು. ಎಸ್ಟೇಟಿನ ಬಂಗಲೆಯಲ್ಲಿ ಟೆಲಿಫೋನ್ ಇದ್ದ ಕಾರಣ ಸುಮತಿಯ ಎರಡನೇ ಮಗಳು ಅಲ್ಲಿಗೆ ಕರೆ ಮಾಡಿ ತಾಯಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ವಿಷಯವನ್ನು ತಂಗಿಗೆ ತಿಳಿಸಿ ಎಂದು ಎಸ್ಟೇಟ್ ಮ್ಯಾನೇಜರ್ ರವರಲ್ಲಿ ವಿನಂತಿಸಿಕೊಂಡಳು. ನಂತರ ಅನಾಥಾಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುವವರಿಗೆ ತನ್ನ ತಾಯಿಯ ಅನಾರೋಗ್ಯದ ವಿಷಯ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯವನ್ನು ತಿಳಿಸಿದಳು. ಆ ಹುಡುಗಿಯ ಮನೆಯ ಪರಿಸ್ಥಿತಿಯನ್ನು ಅರಿತಿದ್ದ ಅವರು…. “ನಿನ್ನ ತಾಯಿಯ ಯೋಗ ಕ್ಷೇಮವನ್ನು ಚೆನ್ನಾಗಿ ನೋಡಿಕೋ…. ಏನೇ ಸಹಾಯವಿದ್ದರೂ ನಮಗೆ ತಿಳಿಸು…. ತಾಯಿಗೆ ಬೇಕಾದ ಊಟ ತಿಂಡಿ ಎಲ್ಲವನ್ನೂ ಆಶ್ರಮದಿಂದಲೇ ಮಾಡಿಕೊಂಡು ಹೋಗಮ್ಮ…. ಅವರು ಆಸ್ಪತ್ರೆಯಲ್ಲಿ ಇರುವವರೆಗೂ ನಮ್ಮ ಕೈಲಿ ಆದ ಸಹಾಯವನ್ನು ನಿನಗೆ ಮಾಡುತ್ತೇವೆ”…. ಎಂದರು. ಅವರ ಮಾತು ಕೇಳಿ ಆ ಹುಡುಗಿಯ ಕಣ್ಣುಗಳು ತುಂಬಿದವು….. “ಧನ್ಯವಾದಗಳು ಸರ್…. ನಿಮ್ಮ ಈ ಉಪಕಾರವನ್ನು ನಾನು ಎಂದಿಗೂ ಮರೆಯಲಾರೆ”….. ಎಂದು ಹೇಳಿ ಅವರಿಗೆ ವಂದಿಸಿ, ಅಲ್ಲಿಂದ ಆಸ್ಪತ್ರೆಗೆ ಹೋದಳು. ತಾಯಿಗೆ ಊಟವನ್ನು ಕೊಟ್ಟಳು. ತಾಯಿ ಊಟ ಮಾಡಿದ ನಂತರ ಊಟದ ಡಬ್ಬಿ ಮತ್ತು ತಟ್ಟೆಯನ್ನು ತೊಳೆದಿಟ್ಟಳು. ವಾರ್ಡಿನ ನರ್ಸ್ ಬಂದು ಅವಳಿಂದ ಔಷಧಿಯನ್ನು ಪಡೆದುಕೊಂಡು ಹೋದರು. ಹಾಗೂ ಆಸ್ಪತ್ರೆಯಲ್ಲಿ ನಾಳೆ ಬೆಳಗ್ಗೆಯಿಂದ ರೋಗಿಗೆ ಉಚಿತ ಆಹಾರವು ದೊರಕುವುದು ಎಂದು ಮಗಳಿಗೆ ತಿಳಿಸಿದರು. ಮಕ್ಕಳು ಶಾಲೆಯಿಂದ ಹಿಂತಿರುಗುವ ಮುನ್ನ ಆ ಹುಡುಗಿಯು ಅನಾಥಾಶ್ರಮವನ್ನು ತಲುಪಬೇಕಿತ್ತು. ತಾಯಿಯನ್ನು ಅಡ್ಮಿಟ್ ಮಾಡಬೇಕಾಗಿದ್ದ ಕಾರಣ ಅಂದು ಅವಳು ಕಾಲೇಜಿಗೂ ಹೋಗಿರಲಿಲ್ಲ. ತಾಯಿಯ ಜೊತೆ ಸ್ವಲ್ಪ ಹೊತ್ತು ಆಸ್ಪತ್ರೆಯಲ್ಲಿದ್ದು ವಾರ್ಡಿನ ಬಳಿ ಕಾಫಿ ಬಂದಾಗ ತಾಯಿಗೆ ಒಂದು ಲೋಟ ಕಾಫಿಯನ್ನು ಕೊಡಿಸಿ , ತಾನು ರಾತ್ರಿ ಇಲ್ಲಿ ಮಲಗಲು ಬರುವುದಾಗಿ ತಿಳಿಸಿ ಹುಡುಗಿಯು ಅನಾಥಾಶ್ರಮದ ಕಡೆಗೆ ನಡೆದಳು. ತಾಯಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಬಂದ ನಂತರ ಇಂದೇಕೋ ತನ್ನ ತಾಯಿಯಿಂದ ಬಹಳ ದೂರ ಬಂದಂತೆ ಅವಳಿಗೆ ಅನಿಸಿತು. ಫಿಸಿಷಿಯನ್ ಹೇಳಿದ ಮಾತುಗಳೇ ಅವಳ ಕಿವಿಯಲ್ಲಿ ಪ್ರತಿಧ್ವನಿಸುತ್ತಿದ್ದವು. ನನ್ನ ತಾಯಿ ವೈದ್ಯರು ಹೇಳಿದಂತೆ ಬಹಳ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಎಂದಿಗೂ ತನಗಾಗುವ ನೋವನ್ನು ನಮ್ಮ ಮುಂದೆ ತೋರಿಸಿಕೊಂಡಿಲ್ಲ ಹೇಳಿಕೊಂಡಿಲ್ಲ ನನ್ನಮ್ಮ. ದೇವರೇ ವೈದ್ಯರ ಮಾತು ಸುಳ್ಳಾಗಲಿ. ಅಮ್ಮನಿಗೆ ಇದ್ಯಾವುದೂ ತಿಳಿಯುವುದೇ ಬೇಡ. ಈ ಸಂಗತಿಯನ್ನು ಅಕ್ಕನಿಗೆ ಹಾಗೂ ತಂಗಿಗೆ ನಾನು ಹೇಳಲೇಬೇಕಾದ ಅನಿವಾರ್ಯತೆ ಇದೆ. ಸಾಧ್ಯವಾದಷ್ಟೂ ನಾವು ಅಮ್ಮನನ್ನು ಖುಷಿಯಾಗಿಟ್ಟುಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಅವಳ ಆರೈಕೆ ಮಾಡಬೇಕು. ಎಷ್ಟು ಸಾಧ್ಯವೋ ಅಷ್ಟು ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಎಂದು ಯೋಚಿಸುತ್ತಾ ರಸ್ತೆಯಲ್ಲಿ ನಡೆಯುತ್ತಿದ್ದವಳಿಗೆ ಇದ್ದಕ್ಕಿದ್ದ ಹಾಗೆ ತನ್ನನ್ನು ಯಾರೋ ಹಿಡಿದೆಳೆದಂತಾಯಿತು….. ಪಕ್ಕಕ್ಕೆ ತಿರುಗಿ ನೋಡಿದರೆ ಯಾರೋ ಅಪರಿಚಿತನೊಬ್ಬ ತನ್ನ ಕೈಹಿಡಿದು ರಸ್ತೆಯ ಬದಿಗೆ ಎಳೆದ. ಹಿಂದೆಯೇ ಕಾರೊಂದು ಬ್ರೇಕ್ ಹಾಕಿ ನಿಂತಿದ್ದು ಕೂಡಾ ಅವಳಿಗೆ ತಿಳಿಯಲಿಲ್ಲ. ಕಾರಿನಲ್ಲಿದ್ದಾತ ಕೋಪದಿಂದ….”ಏ…. ಹುಡುಗೀ….ನಿನಗೆ ಕಣ್ಣು ಕಾಣಿಸುವುದಿಲ್ಲವೇ? ರಸ್ತೆ ಮಧ್ಯೆ ನಡೆಯುತ್ತಿದ್ದೀಯಲ್ಲಾ… ನಿನಗೆ ಜೀವದ ಮೇಲೆ ಆಸೆ ಇಲ್ಲವೇ…. ನೀನು ಸಾಯಲು ನನ್ನ ಕಾರೇ ಬೇಕೆ?…. ಎಂದು ಜೋರಾಗಿ ಹೇಳಿದ.
ಧಾರಾವಾಹಿ ಸಂಗಾತಿ-116 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಗಂಭೀರವಾದ ಸುಮತಿಯ ಆರೋಗ್ಯ ಪರಿಸ್ಥಿತಿ ವೈದ್ಯರು ಮಗಳನ್ನು ಉದ್ದೇಶಿಸಿ….”ಮಗು ನೀನು ಹೋಗಿ ರಕ್ತ ಮತ್ತು ಮೂತ್ರ ಪರೀಕ್ಷೆಯ ವರದಿಯನ್ನು ಪಡೆದುಕೊಂಡು ಬಾ”….. ಎನ್ನಲು ಮಗಳು ಸರಿ ಎನ್ನುವಂತೆ ತಲೆಯಾಡಿಸಿ, ವೈದ್ಯರ ಕೊಠಡಿಯಿಂದ ನೇರವಾಗಿ ಪ್ರಯೋಗಾಲಯಕ್ಕೆ ಹೋಗಿ ತಾಯಿಯ ರಕ್ತ ಮತ್ತು ಮೂತ್ರ ಪರೀಕ್ಷೆಯ ವರದಿಯನ್ನು ಪಡೆದುಕೊಂಡಳು. ಕೊಠಡಿಗೆ ಬಂದಾಗ ವೈದ್ಯರು ಸುಮತಿಯ ರಕ್ತದೊತ್ತಡವನ್ನು ಪರಿಶೀಲಿಸುತ್ತಿದ್ದರು. ಒಮ್ಮೆ ಪರೀಕ್ಷಿಸಿ ಸಂದೇಹ ಬಂದು ಮತ್ತೆ ಮತ್ತೆ ಪರಿಶೀಲಿಸುತ್ತಿದ್ದರು. ಮಗಳು ಕೊಠಡಿಯ ಒಳಗೆ ಬಂದು ವೈದ್ಯರ ಮೇಜಿನ ಮೇಲೆ ವರದಿಯನ್ನು ಇಟ್ಟಳು. ಸುಮತಿಯ ರಕ್ತದೊತ್ತಡವನ್ನು ಪರೀಕ್ಷಿಸುತ್ತಿದ್ದ ವೈದ್ಯರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು….”ಕಳೆದ ಬಾರಿ ನೀವು ಬಂದಾಗ ನಿಮಗೆ ರಕ್ತದ ಒತ್ತಡವು ಇತ್ತೇ ಸುಮತಿ ಅವರೇ?…ಎಂದು ಕೇಳಿದಾಗ, ಮಗಳು ಅಮ್ಮನ ಹಳೆಯ ಚೀಟಿಗಳನ್ನು ವೈದ್ಯರ ಮುಂದೆ ಹಿಡಿದಳು. ಅವುಗಳನ್ನು ತೆಗೆದುಕೊಂಡು ವೈದ್ಯರು ಪರೀಕ್ಷಿಸಿದರು. ಆದರೆ ಆಗ ರಕ್ತದೊತ್ತಡವು ಸರಿಯಾಗಿಯೇ ಇತ್ತು. ಮೇಜಿನ ಮೇಲೆ ಇದ್ದ ವರದಿಯನ್ನು ತೆಗೆದುಕೊಂಡು ಸೂಕ್ಷ್ಮವಾಗಿ ನೋಡಿದರು. ರಕ್ತ ಮತ್ತು ಮೂತ್ರದಲ್ಲಿ ಸಕ್ಕರೆಯ ಅಂಶ ಎಂದಿಗಿಂತ ಅತಿಯಾಗಿ ಕಂಡಿತು. ವೈದ್ಯರು ಮತ್ತೊಮ್ಮೆ ಸುಮತಿಯ ಹಳೆಯ ಚೀಟಿಗಳನ್ನು ಪರಿಶೀಲಿಸಿದರು. ಅವುಗಳಲ್ಲಿ ಕೆಲವು ನಾಲ್ಕು ತಿಂಗಳ ಹಿಂದಿನ ಹಳೆಯ ಚೀಟಿಗಳಾಗಿದ್ದವು. ಹಾಗಾದರೆ ಸುಮತಿ ಇತ್ತೀಚೆಗೆ ಯಾವುದೇ ಪರಿಶೀಲನೆಗೆ ಒಳಪಟ್ಟಿರಲಿಲ್ಲ ಎನ್ನುವುದು ವೈದ್ಯರಿಗೆ ಮನವರಿಕೆಯಾಯಿತು. ವಿಷಾದದ ನೋಟ ಸುಮತಿಯೆಡೆಗೆ ಬೀರಿ…. “ಸುಮತಿ ಅವರೇ ನಾಲ್ಕು ತಿಂಗಳಿನಿಂದ ನೀವು ಆಸ್ಪತ್ರೆಗೆ ಬಂದು ಎಂದಿನಂತೆ ಪರಿಶೀಲನೆಯನ್ನು ಮಾಡಿಸಿಕೊಂಡಿಲ್ಲವೇಕೆ?” ಎಂದು ವೈದ್ಯರು ಕೇಳಲು, ಸುಮತಿ ಮೇಜಿನ ಮೇಲೆ ಇದ್ದ ಚೀಟಿಯನ್ನು ನೋಡುತ್ತಾ….”ಏಕೋ ಬರಲು ಸಾಧ್ಯವಾಗಲಿಲ್ಲ ಸರ್…. ಶಾಲೆಗೆ ಹೋಗಿ ಬರುವುವಾಗ ಬಹಳ ಆಯಾಸವಾಗಿರುತ್ತಿತ್ತು…. ತರಕಾರಿಯನ್ನು ವಾರಕ್ಕೊಮ್ಮೆ ಮಗಳು ಪೇಟೆಯಿಂದ ತಂದುಕೊಡುತ್ತಿದ್ದುದರಿಂದ ನಾನು ಪೇಟೆಯ ಕಡೆಗೆ ಬರಲೇ ಇಲ್ಲ”… ಎಂದಳು. ಅವಳ ಅಸಹಾಯಕ ಪರಿಸ್ಥಿತಿಯನ್ನು ಅರಿತಿದ್ದ ವೈದ್ಯರು ಹೆಚ್ಚಾಗಿ ಏನನ್ನೂ ಹೇಳದೇ…. “ಸುಮತಿಯವರೇ ನೀವು ಕೆಲವು ದಿನಗಳ ಕಾಲ ಇಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ….ನಿಮಗೆ ತುರ್ತು ಚಿಕಿತ್ಸೆಯನ್ನು ನೀಡಬೇಕಾದ ಅಗತ್ಯವಿದೆ”…. ಎಂದು ಹೇಳಿ ಮೇಜಿನ ಮೇಲಿದ್ದ ಬೆಲ್ಲನ್ನು ಒತ್ತಿ ಅಟೆಂಡರ್ ಅನ್ನು ಕರೆದು,….”ಈ ಅಮ್ಮನನ್ನು ಕರೆದುಕೊಂಡು ಹೋಗಿ ವಾರ್ಡಿಗೆ ದಾಖಲು ಮಾಡಪ್ಪ”…. ಎಂದು ಒಂದು ಚೀಟಿಯಲ್ಲಿ ಸುಮತಿಯನ್ನು ದಾಖಲು ಮಾಡುವ ಬಗ್ಗೆ ಬರೆದು ಅಟೆಂಡರ್ ಕೈಲಿ ಕೊಟ್ಟರು. ಮಗಳ ಕಡೆಗೆ ನೋಡುತ್ತಾ… “ಮಗೂ….ಅಮ್ಮನನ್ನು ವಾರ್ಡಿನಲ್ಲಿ ದಾಖಲು ಮಾಡಿ ನನ್ನನ್ನು ಬಂದು ಭೇಟಿ ಮಾಡು…. ಕೆಲವು ಔಷಧಿ ಮಾತ್ರೆಗಳನ್ನು ಬರೆದುಕೊಡುತ್ತೇನೆ…. ಹೊರಗಿನಿಂದ ತರಬೇಕಾಗುತ್ತದೆ”… ಎಂದರು. ಸರಿ ಎನ್ನುವಂತೆ ತಲೆಯಾಡಿಸಿ ಸುಮತಿಯ ಕೈಹಿಡಿದು ಕರೆದುಕೊಂಡು ಅಟೆಂಡರ್ ಹಿಂದೆ ಮಗಳು ನಡೆದಳು. ಇಬ್ಬರನ್ನೂ ವಾರ್ಡಿಗೆ ಕರೆದುಕೊಂಡು ಹೋದ ಅಟೆಂಡರ್ ವಾರ್ಡನಲ್ಲಿ ಕುಳಿತಿದ್ದ ಡ್ಯೂಟಿ ನರ್ಸ್ಗೆ ವೈದ್ಯರ ಚೀಟಿಯನ್ನು ತೋರಿಸಿ….” ಈ ಯಮ್ಮನನ್ನು ಡಾಕ್ಟರ್ ಇಲ್ಲಿ ಅಡ್ಮಿಟ್ ಮಾಡಲು ಹೇಳಿದ್ದಾರೆ”…. ಎಂದನು. ಚೀಟಿಯನ್ನು ಪರಿಶೀಲಿಸಿದ ನರ್ಸ್, ಅಲ್ಲಿನ ಆಯಮ್ಮನನ್ನು ಕರೆದು…. “ನೋಡು ಇವರಿಗೆ ಇಲ್ಲಿಯೇ ಪಕ್ಕದಲ್ಲಿರುವ ಹಾಸಿಗೆಯನ್ನು ತಯಾರು ಮಾಡು”….ಎಂದು ಹೇಳಿ… “ಸುಮತಿಯವರೇ ಇಲ್ಲಿಯೇ ಇರುವ ಸ್ಟೂಲ್ ಮೇಲೆ ಕುಳಿತುಕೊಳ್ಳಿ…. ಆಯಾ ಹಾಸಿಗೆ ತಯಾರು ಮಾಡಿದ ನಂತರ ಅಲ್ಲಿ ಮಲಗಿಕೊಳ್ಳಿ…. ವೈದ್ಯರ ಸಲಹೆಯಂತೆ ನಿಮಗೆ ಇಂಜೆಕ್ಷನ್ ಕೊಡುವುದಿದೆ”…. ಎಂದು ಹೇಳಿದರು. ಆಯಮ್ಮ ಹಾಸಿಗೆ ರೆಡಿ ಮಾಡಿ ಸುಮತಿಗೆ ಅಲ್ಲಿ ಮಲಗಿಕೊಳ್ಳುವಂತೆ ಹೇಳಿದರು. ಮಗಳು ಸುಮತಿಯನ್ನು ಕರೆದುಕೊಂಡು ಹೋಗಿ ಹಾಸಿಗೆಯ ಮೇಲೆ ಕುಳ್ಳಿರಿಸಿದಳು…. “ಅಮ್ಮಾ ನೀನು ಮಲಗಿ ವಿಶ್ರಾಂತಿ ತೆಗೆದುಕೋ…. ನಾನು ಡಾಕ್ಟರನ್ನು ಭೇಟಿ ಮಾಡಿ ಅವರು ಬರೆದುಕೊಡುವ ಔಷಧಿಯನ್ನು ಹೊರಗಿನ ಮೆಡಿಕಲ್ ಶಾಪಿಗೆ ಹೋಗಿ ಖರೀದಿಸಿ ತರುತ್ತೇನೆ”…. ಎಂದು ಹೇಳಿ, ನರ್ಸ್ ಬಳಿ ಹೋಗಿ ತನ್ನನ್ನು ಡಾಕ್ಟರ್ ಭೇಟಿ ಮಾಡುವಂತೆ ತಿಳಿಸಿದ್ದಾರೆ. ಎಂದು ಹೇಳಿ ಅವರ ಸಮ್ಮತಿ ಪಡೆದು ವಾರ್ಡಿನಿಂದ ಹೊರ ನಡೆದಳು. ವಾರ್ಡ್ ನಿಂದ ಆಚೆ ಬರುವಾಗ ಮನಸ್ಸಿನಲ್ಲಿ ಕೃಷ್ಣನನ್ನು ನೆನೆದು…” ಶ್ರೀ ಕೃಷ್ಣಾ ನನ್ನ ತಾಯಿಗೆ ಯಾವುದೇ ತೊಂದರೆ ಆಗದಿರಲಿ…..ನೀನೊಬ್ಬನೇ ನಮಗೆ ದಿಕ್ಕು… ನಮ್ಮನ್ನು ಸದಾ ಕಾಪಾಡುತ್ತಿರುವವನು ನೀನು…. ಆದಷ್ಟು ಬೇಗ ಅಮ್ಮ ಚೇತರಿಸಿಕೊಳ್ಳುವಂತೆ ಮಾಡು”…. ಎಂದು ಬೇಡಿಕೊಂಡಳು. ವೈದ್ಯರ ಕೊಠಡಿಯ ಬಳಿ ಬಂದಾಗ ಇನ್ನೂ ಅನೇಕ ರೋಗಿಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಾಣಿಸಿತು. ಅಲ್ಲಿಯೇ ನಿಂತಿದ್ದ ಅಟೆಂಡರ್ ನನ್ನು… ನಾನು ಈಗ ವೈದ್ಯರನ್ನು ಭೇಟಿ ಮಾಡಬಹುದೇ?…ಎಂದು ಕೇಳಿದಳು. ….”ಒಳಗೆ ವೈದ್ಯರ ಬಳಿ ಕುಳಿತಿರುವ ರೋಗಿ ಹೊರಬಂದ ನಂತರ ನೀನು ಹೋಗಿ ವೈದ್ಯರನ್ನು ಕಾಣಬಹುದು”… ಎಂದನು. ಸ್ವಲ್ಪ ಹೊತ್ತು ಅಲ್ಲಿಯೇ ಬೆಂಚಿನ ಮೇಲೆ ಕುಳಿತಿದ್ದ ಹುಡುಗಿ ಒಳಗಿನಿಂದ ರೋಗಿಯೊಬ್ಬರು ಹೊರಗೆ ಬಂದ ನಂತರ ವೈದ್ಯರ ಕೊಠಡಿಯನ್ನು ಪ್ರವೇಶಿಸಿದಳು. ಸುಮತಿಯ ಮಗಳನ್ನು ಕಂಡ ವೈದ್ಯರು… “ಬಾರಮ್ಮಾ …ಇಲ್ಲಿ ಕುಳಿತುಕೋ…. ಎಂದು ತಮ್ಮ ಮುಂದೆ ಇದ್ದ ಕುರ್ಚಿಯ ಕಡೆಗೆ ಕೈ ಮಾಡಿದರು…. “ನಿನ್ನ ತಾಯಿಯನ್ನು ವಾರ್ಡಿಗೆ ಅಡ್ಮಿಟ್ ಮಾಡಿ ಆಯಿತೇ?…. ಎಂದು ಕೇಳಿದರು. ಹೌದು ಎನ್ನುವಂತೆ ಹುಡುಗಿ ತಲೆಯಾಡಿಸಿದಳು. ಅವಳ ಮುಖವನ್ನು ಸೂಕ್ಷ್ಮವಾಗಿ ಗಮನಿಸುತ್ತಾ….. “ಮಗೂ ನಿಮ್ಮ ಮನೆಯಲ್ಲಿ ದೊಡ್ಡವರು ಯಾರೂ ಇಲ್ಲವೇ?…. ಎಂದಾಗ…. “ನಮ್ಮ ಮನೆಯಲ್ಲಿ ನಮ್ಮ ತಾಯಿ ನಾನು ಮತ್ತು ಒಬ್ಬಳು ತಂಗಿ ಮಾತ್ರ ಈಗ ಇರುವುದು…. ನನ್ನ ಅಕ್ಕನಿಗೆ ಮದುವೆಯಾಗಿ ಅವರ ಗಂಡನ ಮನೆಯಲ್ಲಿ ಇದ್ದಾರೆ…. ಕೊನೆಯ ತಂಗಿ ದೂರದ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ನಾನೂ ಕೂಡ ಇಲ್ಲಿ ಒಂದು ಅನಾಥಾಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ…. ಅಮ್ಮನ ಜೊತೆ ಮನೆಯಲ್ಲಿ ಇರುವುದು ತಂಗಿ ಮಾತ್ರ”…. ಎಂದಳು. ಅವಳು ಹೇಳಿದ ಮಾತನ್ನು ಕೇಳಿದ ವೈದ್ಯರು ಚಿಂತಾಕ್ರಾಂತರಾದರು. ಆದರೂ ವಿಷಯವನ್ನು ಈ ಹುಡುಗಿಗೆ ತಿಳಿಸಲೇಬೇಕಿತ್ತು. ಹಾಗಾಗಿ…. “ನೋಡು ಮಗೂ ….ಕೆಲವು ಮುಖ್ಯವಾದ ವಿಚಾರವನ್ನು ನಿನಗೆ ತಿಳಿಸುವುದಿತ್ತು…. ಹಾಗಾಗಿ ಮನೆಯಲ್ಲಿ ದೊಡ್ಡವರು ಯಾರು ಇಲ್ಲವೇ ಎಂದು ಕೇಳಿದೆ…. ಎಂದರು.
ಧಾರಾವಾಹಿ ಸಂಗಾತಿ-115 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ಆರೋಗ್ಯದಲ್ಲಿ ವ್ಯತ್ಯಾಸ ಲೋಟದ ತುಂಬಾ ನೀರನ್ನು ತುಂಬಿಕೊಂಡು ಬಂದು ಆ ಹುಡುಗಿ ಸುಮತಿಯ ಕೈಕೆ ಕೊಟ್ಟಳು. ಸುಮತಿ ನೀರನ್ನು ಗಟಗಟನೆ ಕುಡಿದಳು ಆದರೆ ಒಮ್ಮೆಲೇ ವಾಕರಿಕೆ ಬಂದಂತಾಗಿ ಮುಖ ಕಿವುಚಿಕೊಂಡಳು. ಒಂದೇ ಸಮನೆ ನೀರನ್ನು ಕುಡಿದಿದ್ದಕ್ಕಾಗಿ ತಾಯಿಗೆ ಹೀಗೆ ಆಗುತ್ತಿರಬೇಕು ಎಂದು ಮಗಳು ತಾಯಿಯ ಬೆನ್ನನ್ನು ಮೆತ್ತಗೆ ಸವರಿದಳು. ಸುಮತಿಯ ಪರಿಸ್ಥಿತಿಯನ್ನು ಕಂಡು ಮಗಳಿಗೆ ಒಳಗೊಳಗೆ ಏನೋ ಚಿಂತೆ. ಅಮ್ಮನಿಗೆ ಆರೋಗ್ಯದಲ್ಲಿ ಏನೋ ವ್ಯತ್ಯಾಸವಾಗಿದೆ ಎಂದು ಮಗಳಿಗೆ ಅನಿಸಿತು. ಸುಮತಿಯನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದಳು. ಮುಖ ಸ್ವಲ್ಪ ಊದಿರುವಂತೆ ಕಾಣಿಸಿತು. ಕಣ್ಣಿನ ಸುತ್ತಲೂ ಸ್ವಲ್ಪ ಬಾತು ಕೊಂಡಂತೆ ಇದೆ. ಕೈಕಾಲು ಸಹ ಸ್ವಲ್ಪ ಊದಿಕೊಂಡಿದೆ. ಆದಷ್ಟು ಬೇಗ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ತೀರ್ಮಾನಿಸಿ.,…. ಅಮ್ಮ ನಾನು ಬೇಗ ಸ್ನಾನ ಮುಗಿಸಿ ಬರುತ್ತೇನೆ…. ಎಂದು ಹೇಳಿ, ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳನ್ನು ಕರೆದು….”ಬೇಗ ತಿಂಡಿ ಮಾಡಿ, ನಾನು ನನ್ನ ತಾಯಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಬೇಕಿದೆ”…. ಎಂದಳು. ಮಕ್ಕಳು ಸರಿ ಎಂದು ತಲೆ ಆಡಿಸಿ ತಿಂಡಿ ಮಾಡಲು ಅಡುಗೆ ಮನೆಗೆ ಹೋದರು. ಅಡುಗೆಯವರು ಊರಿಗೆ ಹೋಗಿದ್ದ ಕಾರಣ ಸದ್ಯಕ್ಕೆ ಮಕ್ಕಳೇ ತಿಂಡಿ ಮಧ್ಯಾಹ್ನಕ್ಕೆ ಅಡುಗೆ ಮಾಡಿಕೊಳ್ಳುತ್ತಿದ್ದರು. ಜೊತೆಗೆ ಸುಮತಿ ಮಗಳು ಸಹಾಯ ಕೂಡ ಸಹಾಯ ಮಾಡುತ್ತಿದ್ದಳು. ಮನಸ್ಸಿನಲ್ಲಿ ಸ್ವಲ್ಪ ಆತಂಕವನ್ನು ತುಂಬಿಕೊಂಡೇ ಮಗಳು ಬೇಗನೆ ಸ್ನಾನ ಮುಗಿಸಿದಳು. ಅನಾಥಾಶ್ರಮದ ಮಕ್ಕಳು ತಾಯಿ ಮಗಳು ಇಬ್ಬರಿಗೂ ಚಪಾತಿ ಟೊಮೇಟೊ ಚಟ್ನಿ ಮಾಡಿ ತಿನ್ನಲು ಕೊಟ್ಟರು. ಸುಮತಿಗೆ ಹೆಚ್ಚು ನಡೆಯಲು ಸಾಧ್ಯವಿಲ್ಲ ಎಂದು ಮಗಳಿಗೆ ಅನಿಸಿತು. ಅನಾಥಾಶ್ರಮದ ಹುಡುಗನೊಬ್ಬನನ್ನು ಕರೆದು ದಾರಿಯಲ್ಲಿ ಹೋಗುವ ಯಾವುದಾದರೂ ಆಟೋರಿಕ್ಷಾವನ್ನು ನಿಲ್ಲಿಸಿ ಅನಾಥಾಶ್ರಮ ಅಂಗಳಕ್ಕೆ ಕರೆದುಕೊಂಡು ಬರುವಂತೆ ಹೇಳಿದಳು. ಸ್ವಲ್ಪ ಹೊತ್ತಿನಲ್ಲೇ ಆಟೋ ಬಂದಿತು. ತಾಯಿಯನ್ನು ಕರೆದುಕೊಂಡು ಮಗಳು ಆಟೋ ಹತ್ತಿದಳು. ದೊಡ್ಡ ಮಕ್ಕಳನ್ನು ಉದ್ದೇಶಿಸಿ…. “ಎಲ್ಲರಿಗೂ ತಿಂಡಿಯನ್ನು ಕೊಟ್ಟು ರೆಡಿಯಾಗಿ, ಬಾಗಿಲಿಗೆ ಬೀಗ ಹಾಕಿಕೊಂಡು ಹತ್ತಿರದಲ್ಲಿರುವ ಡಮ್ ಅಂಡ್ ಢಫ್ ಶಾಲೆಯ ಮೇಲ್ವಿಚಾರಕರ ಕೈಲಿ ಕೀಲಿಯನ್ನು ಕೊಟ್ಟು ಶಾಲೆಗೆ ಹೋಗಿ”…. ಎಂದು ತಿಳಿಸಿದಳು. ಹತ್ತಿರದಲ್ಲಿಯೇ ಸಕಲೇಶಪುರದ ಸರ್ಕಾರಿ ಆಸ್ಪತ್ರೆ ಇದ್ದ ಕಾರಣ ಆಟೋ ಬೇಗನೆ ಆಸ್ಪತ್ರೆಯನ್ನು ತಲುಪಿತು. ಸುಮತಿಯನ್ನು ಆಟೋದಿಂದ ನಿಧಾನವಾಗಿ ಇಳಿಸಿ, ಆಸ್ಪತ್ರೆಯ ವರಾಂಡದ ಬೆಂಚಿನ ಮೇಲೆ ಕುಳ್ಳಿರಿಸಿ, ಕಂಪೌಂಡರ್ ಹತ್ತಿರ ಹೋಗಿ ಚೀಟಿಯನ್ನು ಬರೆಸಿಕೊಂಡು ಬಂದಳು. ನಂತರ ಸುಮತಿಯ ಕೈ ಹಿಡಿದು ನಿಧಾನವಾಗಿ ನಡೆಸಿಕೊಂಡು ಫಿಜಿಷಿಯನ್ ವೈದ್ಯರ ಕೊಠಡಿಯ ಬಳಿಗೆ ಹೋದಳು. ಅಲ್ಲಿಯೇ ಇದ್ದ ಬೆಂಚಿನ ಮೇಲೆ ಸುಮತಿಗೆ ಕುಳಿತುಕೊಳ್ಳಲು ಹೇಳಿ ಸರತಿಯ ಸಾರಿನಲ್ಲಿ ತಾನು ನಿಂತಳು. ಅಟೆಂಡರ್ ಕರೆದಾಗ ತಾಯಿಯನ್ನು ನಿಧಾನವಾಗಿ ಎಬ್ಬಿಸಿ ಒಳಗೆ ಕರೆದುಕೊಂಡು ಹೋದಳು. ಸುಮತಿಯನ್ನು ಕಂಡ ಕೂಡಲೇ ವೈದ್ಯರು…. “ಏನು ಸುಮತಿಯವರೇ ಹೇಗಿದ್ದೀರಾ?… ಎಂದು ಕೇಳಿದರು. ಸುಮತಿ ವೈದ್ಯರ ಮುಖವನ್ನು ನೋಡಿದಳು. ಅವಳಿಗೆ ವೈದ್ಯರ ಮುಖ ಅಸ್ಪಷ್ಟವಾಗಿ ಕಾಣಿಸಿತು. ಕನ್ನಡಕವನ್ನು ತೆಗೆದು ಸೀರೆಯ ಸರಗಿನಿಂದ ಒರಸಿಕೊಂಡು ಪುನಃ ಹಾಕಿಕೊಂಡಳು… “ಸರ್ ಕೆಲವು ದಿನಗಳಿಂದ ನನ್ನ ಆರೋಗ್ಯ ಸರಿ ಇಲ್ಲ…. ತುಂಬಾ ಆಯಾಸವಾಗುತ್ತಿದೆ… ಏನನ್ನೂ ತಿನ್ನಲು ಸಾಧ್ಯವಾಗುತ್ತಿಲ್ಲ…. ಆಹಾರವನ್ನು ತಿಂದರೆ, ನೀರು ಕುಡಿದರೆ ವಾಂತಿ ಬರುವ ಹಾಗೆ ಆಗುತ್ತಿದೆ”…. ಎಂದಳು. ಸುಮತಿಯನ್ನು ಪರಿಶೀಲಿಸಿದ ವೈದ್ಯರು ಮಗಳನ್ನು ನೋಡುತ್ತಾ…. “ನಾನು ಕೆಲವು ರಕ್ತ ಪರೀಕ್ಷೆ ಹಾಗೂ ಎಕ್ಸರೇ ಪರೀಕ್ಷೆಗೆ ಈ ಚೀಟಿಯಲ್ಲಿ ಬರೆದು ಕೊಡುತ್ತೇನೆ…. ಅಮ್ಮನನ್ನು ಕರೆದುಕೊಂಡು ಹೋಗಿ ಈ ಪರೀಕ್ಷೆಗಳನ್ನು ಮಾಡಿಸಿಕೊಂಡು ಅವುಗಳ ವರದಿಯನ್ನು ತಂದು ನನಗೆ ತೋರಿಸಮ್ಮ”….. ಎಂದು ಹೇಳಿದರು. ಮಗಳು…”ಸರಿ ಸರ್”…. ಎಂದು ಹೇಳುತ್ತಾ ಸುಮತಿಯ ಕೈ ಹಿಡಿದುಕೊಂಡು ನಿಧಾನವಾಗಿ ನಡೆಸಿಕೊಂಡು ರಕ್ತ ಪರೀಕ್ಷೆ ಕೇಂದ್ರದ ಬಳಿಗೆ ಕರೆದುಕೊಂಡು ಹೋದಳು. ರಕ್ತ ಪರೀಕ್ಷೆ ಮಾಡಿಸಿದ ನಂತರ ಎಕ್ಸರೇ ಪರೀಕ್ಷೆ ಮಾಡುವಲ್ಲಿಗೆ ಕರೆದುಕೊಂಡು ಹೋದಳು. ಎಕ್ಸರೇ ಪರೀಕ್ಷಿಸುವಾತ ಎಕ್ಸರೇ ಯಂತ್ರದ ಮುಂದೆ ಸುಮತಿಯನ್ನು ನಿಲ್ಲಿಸಿ, ಪರೀಕ್ಷೆ ಮಾಡಲು ಪ್ರಾರಂಭಿಸಿದರು…. “ಅಮ್ಮಾ ನೀವು ಸೀರೆಯ ಸೆರಗಲ್ಲಿ ಏನನ್ನು ಇಟ್ಟುಕೊಂಡಿದ್ದೀರಿ?…. ಅದನ್ನು ಮಗಳ ಕೈಗೆ ಕೊಡಿ”…. ಎಂದರು. ಆತನ ಮಾತನ್ನು ಕೇಳಿ ಸುಮತಿ…” ಸರ್ ನನ್ನ ಕೈಲಿ ಏನೂ ಇಲ್ಲ”… ಎಂದಳು. ಎಕ್ಸರೇ ಪರೀಕ್ಷಿಸುವಾತ ಸಂಶಯ ಬಂದು ಮತ್ತೆ ಪರೀಕ್ಷಿಸಿದನು. ಏಕೆ ಏನೋ ಅಡ್ಡ ಇರುವಂತೆ ಕಾಣಿಸುತ್ತಿದೆಯಲ್ಲಾ ಎಂದುಕೊಳ್ಳುತ್ತಾ ಮತ್ತೆ ಮತ್ತೆ ಪರೀಕ್ಷಿಸಿದನು. ಎಕ್ಸರೇ ಪರೀಕ್ಷೆ ಮುಗಿದ ನಂತರ ಸ್ವಲ್ಪ ಹೊತ್ತು ಅಲ್ಲಿಯೇ ಹೊರಗೆ ಕಾದು ಕುಳಿತುಕೊಳ್ಳಲು ಹೇಳಿದರು. ಎಕ್ಸರೇ ಪರೀಕ್ಷಿಸುವಾತ ಹೇಳಿದ ಮಾತೇ ಮಗಳ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು. ಆತ ಏಕೆ ಹಾಗೆ ಹೇಳಿರಬಹುದು? ಎಂದು ಯೋಚಿಸುತ್ತಾ ತಾಯಿಯ ಕೈ ಮೇಲೆ ಕೈ ಇಟ್ಟು…. ಏನು ಇರೋದಿಲ್ಲ ಅಮ್ಮಾ…. ಎಂದು ಹೇಳಿ, ಆತ ಏಕೆ ಹಾಗೆ ಹೇಳಿರಬಹುದು? ಎಂದು ಆಲೋಚಿಸುತ್ತಾ ಕುಳಿತಳು. ಸ್ವಲ್ಪ ಹೊತ್ತು ಕಾದು ಕುಳಿತ ನಂತರ ಎಕ್ಸರೇ ವರದಿ ಬಂದಿತು. ಆತ ಮಗಳನ್ನು ಒಳಗೆ ಕರೆದು…. “ಆದಷ್ಟು ಬೇಗ ನಿನ್ನ ಅಮ್ಮನ ವರದಿಯನ್ನು ವೈದ್ಯರಿಗೆ ತೋರಿಸು… ಹೆಚ್ಚು ತಡ ಮಾಡಬೇಡ”…. ಎಂದು ಹೇಳಿದರು. ಅವರು ಹೇಳಿದ ಮಾತಿನಿಂದ ಮಗಳಿಗೆ ಆತಂಕವಾಯಿತು. ಎಕ್ಸರೇ ಪರೀಕ್ಷಿಸುವವನ ಮುಖವನ್ನು ನೋಡಿದಳು…. “ನಾನು ಇಲ್ಲಿ ಏನನ್ನು ಹೇಳಲು ಸಾಧ್ಯವಿಲ್ಲ…. ಬೇಗ ತೆಗೆದುಕೊಂಡು ಹೋಗಿ ವೈದ್ಯರಿಗೆ ತೋರಿಸು ಅವರು ಎಲ್ಲವನ್ನೂ ನಿಮಗೆ ತಿಳಿಸುತ್ತಾರೆ”…. ಎಂದರು. ಅವರು ಹೇಳಿದ ಮಾತನ್ನು ಕೇಳಿ ಆತಂಕದಿಂದಲೇ ತಾಯಿಯ ಕೈಯನ್ನು ಹಿಡಿದು ನಿಧಾನವಾಗಿ ಎಬ್ಬಿಸಿ ವೈದ್ಯರ ಕೊಠಡಿಯ ಬಳಿಗೆ ಕರೆದುಕೊಂಡು ಹೋದಳು. ಅಟೆಂಡರ್ ಕೈಲಿ ವರದಿಯನ್ನು ಕೊಟ್ಟಾಗ ಆತ ಆ ವರದಿಯನ್ನು ತೆಗೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದನು. ಅಟೆಂಡರ್ ಹೊರಗೆ ಬಂದು ತಾಯಿ ಮಗಳು ಇಬ್ಬರನ್ನೂ ವೈದ್ಯರು ಕರೆಯುತ್ತಿದ್ದಾರೆ ಎಂದು ತಿಳಿಸಿದನು. ಇಬ್ಬರೂ ವೈದ್ಯರ ಕೊಠಡಿಯ ಒಳಗೆ ಪ್ರವೇಶಸಿದರು. ಒಳಗೆ ಹೋದಾಗ ವೈದ್ಯರು ಎಕ್ಸರೇ ಫಿಲಂ ಅನ್ನು ಕೂಲಂಕುಶವಾಗಿ ಪರೀಕ್ಷಿಸಿ ನೋಡುತ್ತಿದ್ದರು.ತಾಯಿ ಮತ್ತು ಮಗಳು ಒಳಗೆ ಬಂದಾಗ ಕುಳಿತುಕೊಳ್ಳುವಂತೆ ಹೇಳಿ, ಸುಮತಿಯನ್ನು ಉದ್ದೇಶಿಸಿ…. “ಸುಮತಿ…ಯಾವಾಗನಿಂದ ನಿಮಗೆ ಅಸ್ವಸ್ಥತೆ ಅನಿಸುತ್ತಿತ್ತು? ಎಂದು ಕೇಳಿದರು…. “ಬಹಳ ದಿನಗಳಿಂದ ನನ್ನನ್ನು ಸ್ವಲ್ಪ ಅಸ್ವಸ್ಥತೆ ಕಾಡುತ್ತಿದೆ…. ನಿಮ್ಮ ಸೂಚನೆಯಂತೆ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ…. ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದೇನೆ…. ಕೆಲವೊಮ್ಮೆ ಊಟದಲ್ಲಿ ಪಥ್ಯ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ”…. ಎಂದಳು.




