ಕಾವ್ಯ ಸಂಗಾತಿ
ಡಾ ತಾರಾ ಬಿ ಎನ್ ಧಾರವಾಡ ಅ
“ಚೂರಾದ ಮನ ಗಾಜು”


ಹೆಣ್ಣು ಮೃದು ಮನದ ಪಯಣದಲಿ
ಮುಗ್ಧ ಮನದ ಹೂ ತೋಟದಲ್ಲಿ
ನಂಬಿಕೆಯ ಹೂಗಳು ಅರಳಿದಾಗ,
ಸಿಹಿ ಮಾತಿನ ಮಳೆ ಸುರಿಸಿ
ಮನ ಕದಡುವ ಕಟುಕರು
ನೆರಳಾಗಿ ನಿಲ್ಲಬೇಕಾದವರು
ಕಟುವಾಗಿ ವರ್ತನೆ ತೋರುವರು
ನಂಬಿಕೆಗೆ ಅರ್ಹತೆ ಇಲ್ಲದವರು
ಮೋಸದ ಮುಖವಾಡದವರು
ಕಣ್ಣಿನಲ್ಲಿ ಕನಸು ಕಟ್ಟಿಸಿ
ನಾಳೆಯ ಚಿತ್ರ ಬರೆದವರು,
ಅದೇ ಕೈಯಿಂದ ಕನಸು ಕಿತ್ತು
ಮೌನದ ಗಾಯ ಬಿತ್ತಿದವರು.
ಹೃದಯವೆಂಬ ನಾಜೂಕಿನ ಗಾಜಿಗೆ
ಸುಳ್ಳಿನ ಕಲ್ಲು ತೂರಿದವರು
ಚೂರುಚೂರಾದ ಪ್ರತಿಬಿಂಬದಲ್ಲಿ
ನಗುವೂ ಕಳೆದುಹೋಗಲು ಕಾರಣವಾದವರು
ಆದರೂ ಹೆಣ್ಣು ಮಣ್ಣಲ್ಲ
ಮಳೆ ಬಂದರೂ ಕರಗದ ಶಿಲೆ.
ಗಾಯಗಳನ್ನೇ ಗರಿಗರಿಯಾಗಿ ಮಾಡಿ
ಹೊಸ ಬದುಕಿಗೆ ಹೆಜ್ಜೆ ಇಡುವವಳು
ಆಕೆಯ ಭಾವನೆಗಳ ಜೊತೆ ಆಟವಾಡುವವರಿಗೆ
ಒಂದು ದಿನ ಅರಿವಾಗುತ್ತದೆ
ಹೆಣ್ಣು ಮನವೆಂಬ ಸಮುದ್ರದ
ಆಳವನ್ನು ಅಳೆಯಲು
ಸಾಧ್ಯವಾಗದು ಎಂದು.
ಹೆಣ್ಣು ಹೃದಯವನ್ನು
ನೋಯಿಸಿದ ಮನ ,ಕೈಗಳು
ಒಮ್ಮೆ ಖಾಲಿಯಾಗುವ ಅರಿವಾಗುವುದೇ!
ಆದರೆ ಆಕೆಯ ಆತ್ಮಸಮ್ಮಾನ
ಎಂದೆಂದಿಗೂ ಎತ್ತರದಲ್ಲೇ ಇರುವುದು
ಡಾ ತಾರಾ ಬಿ ಎನ್ ಧಾರವಾಡ



