ʼತೆರೆದು ಬಿಡಿʼ ರೇಷ್ಮಾ ಕಂದಕೂರ ಅವರ ಕವಿತೆ

ಎದೆಯ ಕದವ ತೆರೆ
ಮುದುಡಿದ ಮನಕೆ
ಸದೆ ಬಡಿಯುವ ಹುನ್ನಾರಕೆ

ಬಿರುಕುಗಳ ಜಾಲ ಪತ್ತೆ ಹಚ್ಚಿ
ಮರುಗುವ ಮನಕೆ
ಸೆರಗಿನಲಿ ಸಂತೈಸಲು.

ಸೋನೆ ಮಳೆ ಸುರಿಸಿ
ನೊಂದು ಬೆಂದು ಹೋದ ಕಡೆ
ಸೌಹಾರ್ದತೆ ಕಲಿಸಲು.

ಮುಚ್ಚಿದ ಕಣ್ಣುಗಳು
ಚುಚ್ಚಿದ ಅನುಭವಕೆ
ಬಿಚ್ಚಿ ಹೇಳಿ ಬಿಡಲು.

ನುಚ್ಚು ನೂರಾದ ಬಯಕೆ ತೀರಿಸಲು
ಹೆಚ್ಚೆಂದು ಬೀಗುವುದ ಬಿಡಿಸಿ
ಒಂದಾಗಿ ಬೆರೆತು ಬಾಳಲು.

ಮಂದ ಬೆಳಕು ಬರಲಿ
ಕವಿದ ಕತ್ತಲೆ ಸರಿಸಿ
ಸ್ವಚ್ಚಂದ ಹಕ್ಕಿಯಾಗಿ ಹಾರಲು.

ಭಿನ್ನ ಬಗೆಯ ಮರೆತು
ಹಗೆಯ ಮತ್ತಿಗೆ ಮುತ್ತಿಗೆ ಹಾಕಿ
ಒಳ ಧಗೆಯ ತಣಿಸಲು.


Leave a Reply

Back To Top