
ಧಾರಾವಾಹಿ78
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಸುಮತಿಯ ಕಲೆ ಮೆಚ್ಚಿಕೊಂಡ
ಸಣ್ಣ ಯಜಮಾನರು

ಬೆಳಗ್ಗೆ ಅಡುಗೆ ಮನೆಯಲ್ಲಿ ಯಾವುದೋ ಕೆಲಸದಲ್ಲಿ ತೊಡಗಿದ್ದ ಸುಮತಿ ಯಾರೋ ಬಾಗಿಲು ಬಡಿದ ಸದ್ದನ್ನು ಕೇಳಿ ಸೀರೆಯ ಸೆರಗಿನಲ್ಲಿ ಕೈಯನ್ನು ಒರೆಸಿಕೊಂಡು ಬಾಗಿಲು ತೆರೆದಳು. ಎದುರಿಗೆ ಮಾಲಿ ನಿಂತಿದ್ದನು. ಇಷ್ಟು ಬೆಳಗ್ಗೆ ಮಾಲಿಯೇಕೆ ಇಲ್ಲಿ? ಎಂದು ಯೋಚಿಸುತ್ತಿರುವಾಗಲೇ….” ಟೀಚರಮ್ಮಾ….ಸಣ್ಣ ಸಾಹುಕಾರರು ಹೇಳಿದರು…..ಈಗಲೇ ಬಂದು ಅವರನ್ನು ಭೇಟಿ ಮಾಡಬೇಕಂತೆ….ಎಂದಾಗ ಸುಮತಿ ಮನದಲ್ಲಿಯೇ…ಅಯ್ಯೋ ದೇವರೇ ನನ್ನಿಂದ ಏನಾದರೂ ಪ್ರಮಾದವಾಗಿದೆಯೇ!? ಎಂದು ಹೆದರುತ್ತಲೇ….ಇರಿ….ಈಗಲೇ ಬಂದೆ” ಎಂದು ಹೇಳುತ್ತಾ
ಅಡುಗೆ ಮನೆಗೆ ಹೋಗಿ ಒಲೆಯಲ್ಲಿ ಉರಿಯುತ್ತಿದ್ದ ಸೌದೆಯನ್ನು ಹೊರಗೆ ಎಳೆದು ಬರೀ ಕೆಂಡವನ್ನು ಮಾತ್ರ ಬಿಟ್ಟು ಕುದಿಯುತ್ತಿದ್ದ ಸಾರಿನ ಪಾತ್ರೆಯ ಮುಚ್ಚಳವನ್ನು ಸ್ವಲ್ಪವೇ ತೆರೆದಿಟ್ಟು ಮಗಳನ್ನು ಕರೆದು ಬಾಗಿಲ ಚೀಲಕವನ್ನು ಭದ್ರಪಡಿಸಿಕೊಳ್ಳುವಂತೆ ಹೇಳಿ ಮಾಲಿಯ ಜೊತೆಗೆ ಬಂಗಲೆಯ ಕಡೆಗೆ ನಡೆದಳು. ಬಂಗಲೆಯ ಜಗುಲಿಯಲ್ಲಿ ಸಣ್ಣ ಸಾಹುಕಾರರು ಬರುವುದನ್ನೇ ಕಾಯುತ್ತಾ ನಿಂತಳು. ಹೊರಗೆ ಹೊರಡಲು ತಯಾರಾಗಿ ಸಣ್ಣ ಸಾಹುಕಾರರು ಬಾಗಿಲು ತೆರೆದು ಹೊರಗೆ ಬಂದಾಗ ಅಲ್ಲಿ ತನ್ನನ್ನು ಕಂಡು ಕೈ ಮುಗಿದು ನಿಂತಿದ್ದ ಸುಮತಿಯನ್ನು ಕಂಡು ಮುಗುಳ್ನಕ್ಕು…”ಏನು ಸುಮತಿ…ಹೇಗಿದ್ದೀರಿ?…ಎಂದು ಕೇಳಿದಾಗ….ಚೆನ್ನಾಗಿದ್ದೇನೆ ಸರ್….ನೀವು ಬರಲು ಹೇಳಿದ್ದಿರಂತೆ….ಹಾಗಾಗಿ ನಿಮ್ಮನ್ನು ನೋಡಲು ಬಂದೆ”… ಎಂದಳು. ಸುಮತಿಯ ಮಾತನ್ನು ಕೇಳಿ ಮತ್ತೊಮ್ಮೆ ಮುಗುಳ್ನಕ್ಕ ಸಣ್ಣ ಸಾಹುಕಾರರು…”ಕಾರ್ ಶೆಡ್ ಬಳಿಗೆ ಬನ್ನಿ…ಹೇಳುತ್ತೇನೆ”… ಎಂದು ಮುನ್ನಡೆದರು. ಕಾರ್ ಶೆಡ್ ಎಂದಾಗ ಅಲ್ಲಿ ತಾನು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತೇನೆ. ಅಲ್ಲಿ ಏನೋ ಆಗಿದೆ. ನನ್ನಿಂದ ಯಾವ ತಪ್ಪು ನಡೆದಿದೆಯೋ! ಎಂಬ ಅಳುಕು ಒಳಗೊಳಗೇ ಇದ್ದರೂ ಅವರ ಮುಗುಳ್ನಗು ಕಂಡು ಹಾಗೇನೂ ಇರಲಿಕ್ಕಿಲ್ಲ ಎಂದು ತನ್ನನ್ನು ತಾನೇ ಸಮಾಧನಪಡಿಸಿಕೊಂಡು ಸಾಹುಕಾರರ ಹಿಂದೆ ನಡೆದಳು.
ಕಾರ್ ಶೆಡ್ ಒಳಗೆ ಪ್ರವೇಶಿಸಿದ ಕೂಡಲೇ ಕಪ್ಪು ಹಲಗೆಯ ಮೇಲಿನ ಚಿತ್ರದ ಕಡೆಗೆ ಬೆಟ್ಟು ಮಾಡಿ…”ಈ ಚಿತ್ರವನ್ನು ಬಿಡಿಸಿದ್ದು ನೀವೇನಾ?…ಎಂದು ಕೇಳಿದರು….ಹೌದು ಸರ್ ನಾನೇ ಎಂದು ಹೇಳಿದ ಸುಮತಿಗೆ ಮಕ್ಕಳ ಕೋರಿಕೆಯ ಮೇರೆಗೆ ಆ ಚಿತ್ರವನ್ನು ತಾನು ಅಳಿಸದೇ ಬಿಟ್ಟಿದ್ದು ನೆನಪಾಯ್ತು. ಆ ವಿಷಯವನ್ನು ಸಣ್ಣ ಸಾಹುಕಾರರಿಗೆ ತಿಳಿಸಿದಳು….” ಬಹಳ ಸುಂದರವಾಗಿ ಬಿಡಿಸಿದ್ದೀರಾ ಸುಮತಿ…. ತುಂಬಾ ಚೆನ್ನಾಗಿದೆ ಅದನ್ನು ತಿಳಿಸಲು ನಿಮ್ಮನ್ನು ಕರೆಸಿದೆ… ನನ್ನದೊಂದು ಕೋರಿಕೆ…ನಿಮಗೆ ಅಭ್ಯಂತರವಿಲ್ಲದಿದ್ದರೆ, ನಮ್ಮ ರೋಟರಿ ಸಂಸ್ಥೆಯ ಚಿತ್ರ ಪ್ರದರ್ಶನಕ್ಕಾಗಿ ಒಂದು ಚಿತ್ರವನ್ನು ಬಿಡಿಸಿ ಕೊಡುವಿರಾ? ನಿಮಗೆ ಬೇಕಾದ ಎಲ್ಲಾ ಸೌಕರ್ಯವನ್ನು ನಮ್ಮ ಮನೆಯಲ್ಲಿ ಮಾಡಿಕೊಡುತ್ತೇವೆ….ಇಲ್ಲಿನ ಈ ಮನೆಯಲ್ಲಿ ಅಲ್ಲ…ನನ್ನ ಅಪ್ಪ ಅಮ್ಮ ವಾಸವಿರುವ ದೊಡ್ಡಎಸ್ಟೇಟ್ ಮನೆಯಲ್ಲಿ”…ಎಂದು ಹೇಳಿದರು. ಅವರ ಮಾತನ್ನು ಕೇಳಿದ ಸುಮತಿಗೆ ಅಚ್ಚರಿ ಸಂತೋಷ ಒಮ್ಮೆಗೇ ಆಯ್ತು. ವಿನಯಪೂರ್ವಕವಾಗಿ ಕೈಮುಗಿದು….”ತಾವು ಯಾವಾಗ ನಾನು ಅಲ್ಲಿಗೆ ಬರಬೇಕು ಎಂದು ಹೇಳಿದರೆ ಕೂಡಲೇ ಬಂದು ಬಿಡಿಸಿಕೊಡುವೆ”…ಎಂದು ಹೇಳಿದಳು ಸುಮತಿ.
….”ನಾಳೆಯಿಂದಲೇ ಬನ್ನಿ… ಚಿತ್ರ ಬಿಡಿಸುವ ಕೆಲಸ ಮುಗಿಯುವವರೆಗೂ ಶಾಲೆಗೆ ರಜೆ ಕೊಟ್ಟುಬಿಡಿ…ಬೆಳಗ್ಗೆ ನಾನು ಹೋಗುವಾಗ ನನ್ನ ಜೊತೆಗೇ ಬನ್ನಿ… ಹಾಗೆಯೇ ಸಂಜೆ ನಾನು ಇಲ್ಲಿಗೆ ಬರುವಾಗ ಜೊತೆಗೆ ನೀವೂ ಬನ್ನಿ”…ಎಂದರು. ಸುಮತಿಗೆ ಬಹಳ ಸಂತೋಷವಾಯಿತು.
ಸಣ್ಣ ಸಾಹುಕಾರರು ಹೋದ ಬಳಿಕ ಖುಷಿಯಿಂದ ಮನೆಗೆ ಬಂದಳು. ಬಂದವಳೇ ಮಗಳನ್ನು ಅಪ್ಪಿಕೊಂಡು ಎಲ್ಲಾ ವಿಷಯವನ್ನು ಹೇಳಿದಳು. ಅಮ್ಮನ ಸಂತೋಷವನ್ನು ಕಂಡು ವಿಷಯ ಏನೆಂದು ಅಷ್ಟಾಗಿ ಅರ್ಥವಾಗದಿದ್ದರೂ ಅವಳಿಗೂ ಖುಷಿಯಾಯ್ತು.
ಅಂದು ಬಹಳ ಖುಷಿಯಿಂದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದಳು. ಶಾಲೆಗೆ ಬರುತ್ತಿದ್ದ ಮಕ್ಕಳಿಗೆ ಚಿತ್ರ ಬಿಡಿಸುವ ಕೆಲಸ ಮುಗಿಯುವವರೆಗೂ ಶಾಲೆಗೆ ಬರಬೇಡಿ ಎಂದು ಹೇಳಿದಳು. ಶಾಲೆಗೆ ರಜೆ ಎಂದು ತಿಳಿದ ಮಕ್ಕಳಿಗೆ ಖುಷಿಯೋ ಖುಷಿ. ಏಕೆಂದರೆ ತೋಟದಲ್ಲಿ ಸುತ್ತಾಡಿ ಆಟ ಆಡಿಕೊಂಡು ಕಾಲ ಕಳೆಯುವುದು ಅವರಿಗೆ ಪ್ರಿಯವಾಗಿತ್ತು. ಮಾರನೇ ದಿನ ಮನೆಯ ಕೆಲಸವನ್ನೆಲ್ಲಾ ಬೇಗ ಮುಗಿಸಿ, ಜೊತೆಗೆ ಮಗಳನ್ನು ಕರೆದುಕೊಂಡು ಕಾರ್ ಶೆಡ್ ಬಳಿ ಹೋಗಿ ನಿಂತಳು. ಸಣ್ಣ ಸಾಹುಕಾರರು ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ಸ್ವತಃ ಅವರೇ ಡ್ರೈವ್ ಮಾಡಿಕೊಂಡು ಹೋಗುವುದು ಅವರಿಗೆ ಅಭ್ಯಾಸ. ಕಾರು ಡ್ರೈವ್ ಮಾಡುತ್ತಲೇ ಶಾಲೆಯ ಆಗು ಹೋಗುಗಳ ಬಗ್ಗೆ ಕೇಳಿ ತಿಳಿದುಕೊಂಡರು. ಎಸ್ಟೇಟ್ ಬಂಗಲೆ ತಲುಪಿದಾಗ ಅಲ್ಲಿನ ಬಂಗಲೆಯ ಒಂದು ಕೋಣೆಯಲ್ಲಿಯೇ ಚಿತ್ರವನ್ನು ಬಿಡಿಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದರು. ಆ ದೊಡ್ಡ ಭವ್ಯವಾದ ಬಂಗಲೆಯ ಬಳಿಗೆ ಬಂದಾಗ ಸುಮತಿಗೆ ತಾವು ಖರೀದಿ ಮಾಡಲು ಹೋಗಿದ್ದ ತೋಟ ಹಾಗೂ ಬಂಗಲೆಯ ನೆನಪು ಮರುಕಳಿಸಿತು. ಬಂಗಲೆಯ ಅಂಗಳದಲ್ಲಿ ನಿಂತಳು. ಪ್ರತೀ ತಿಂಗಳೂ ಸಂಬಳ ಪಡೆಯಲು ಅಲ್ಲಿನ ಆಫೀಸ್ ಗೆ ಬಂದಾಗ ಹೆಚ್ಚು ಹೊತ್ತು ಅಲ್ಲಿ ನಿಲ್ಲುತ್ತಿರಲಿಲ್ಲ ಅವಳು. ಇಂದು ಬಂಗಲೆಯ ಸುತ್ತಲಿನ ಸೊಬಗನ್ನು ಹೊಸದಾಗಿ ಕಂಡಂತೆ ವೀಕ್ಷಿಸಿದಳು. ಬಂಗಲೆಯ ಮುಂದೆ ಪ್ಯಾಶನ್ ಫ್ರೂಟ್ ಬಳ್ಳಿಯಿಂದ ಆವೃತ್ತಗೊಂಡ ಕಮಾನಿನಂತಹ ದೊಡ್ಡ ಚಪ್ಪರವಿತ್ತು. ಅದರ ತುಂಬಾ ಬಲ್ಬ್ ಗಳಂತೆ ನೇತಾಡುತ್ತಿದ್ದ ಹಳದಿ ಹಾಗೂ ನೇರಳೆ ಬಣ್ಣದ ಹಣ್ಣುಗಳು ತುಂಬಿದ್ದವು. ಕಳಿತ ಕೆಲವು ಹಣ್ಣುಗಳು ನೆಲಕ್ಕೆ ಬೀಳುತ್ತಿದ್ದವು. ಅವನ್ನು ಬಂಗಲೆಯ ಕೆಲಸಗಾರರು ಆರಿಸಿ ಇಡುತ್ತಿದ್ದದ್ದು ಕಂಡಿತು. ಚಪ್ಪರದ ಮುಂದೆ ನೈದಿಲೆ ಹೂವುಗಳಿಂದ ತುಂಬಿದ ಕೊಳವಿತ್ತು.
ಕೊಳದ ತುಂಬಾ ನಯನ ಮನೋಹರವಾದ ಹಲವು ಬಣ್ಣಗಳಿಂದ ಕೂಡಿದ ನೈದಿಲೆ ಹೂವುಗಳು ಅರಳಿದ್ದವು. ಕೊಳದ ಸುತ್ತಾ ಅನೇಕ ಬಗೆಯ ಪುಟ್ಟ ಪುಟ್ಟ ಬಟನ್ ಗುಲಾಬಿ ಗಿಡಗಳು ಹೂವುಗಳಿಂದ ಕಂಗೊಳಿಸುತ್ತಿದ್ದವು. ಬಂಗಲೆಯ ಸುತ್ತಲೂ ಅನೇಕ ಬಗೆಯ ಸುಂದರ ಹೂವುಗಳ ಗಿಡಗಳು ಇದ್ದವು. ಬಂಗಲೆಯ ಪಕ್ಕದಲ್ಲಿಯೇ ಹಲವಾರು ಬಗೆಯ ರುಚಿಕರವಾದ ಹಣ್ಣಿನ ತೋಟವು ಇತ್ತು. ಹಣ್ಣಿನ ಮರಗಳಲ್ಲಿ ಕುಳಿತು ಸಿಹಿಯಾದ ಹಣ್ಣುಗಳನ್ನು ತಿನ್ನುತ್ತಿದ್ದ ಹಕ್ಕಿಗಳ ಚಿಲಿಪಿಲಿ ಕಲರವ ಕೇಳಿಸುತ್ತಿತ್ತು. ಸುತ್ತಲೂ ಮನಸ್ಸಿಗೆ ಮುದ ನೀಡುವ ವಾತಾವರಣ. ಸುಮತಿಗೆ ತನ್ನ ಊರಿನ ಮನೆ ಹಾಗೂ ತೋಟ ನೆನಪಾಯ್ತು. ಅಪ್ಪ ಅಮ್ಮ ಅಕ್ಕ ತಮ್ಮಂದಿರ ನೆನಪಾಗಿ ಕಣ್ಣುಗಳು ಹನಿಗೂಡಿದವು.
ಅಷ್ಟು ಹೊತ್ತಿಗೆ ಬಂಗಲೆಯ ಕೆಲಸದ ಹೆಣ್ಣಾಳೊಬ್ಬರು ಬಂದು ಟೀಚರಮ್ಮಾ ಎಂದು ಕೂಗಿದರು. ಅವರ ಕರೆಗೆ ಎಚ್ಚೆತ್ತ ಸುಮತಿ ತನ್ನ ಭಾವನಾಲೋಕದಿಂದ ಆಚೆ ಬಂದಳು. ಸುಮತಿಯನ್ನು ಆ ಹೆಣ್ಣಾಳು ಹಳೆಯ ಬಂಗಲೆಗೆ ಸೇರಿದಂತೆ ಕಟ್ಟಿದ್ದ ಹೊಸ ಬಂಗಲೆಯೊಳಗೆ ಕರೆದುಕೊಂಡು ಹೋದರು.
ಅಲ್ಲಿನ ಒಂದು ಕೋಣೆಯಲ್ಲಿ ಸಣ್ಣ ಸಾಹುಕಾರರು ನಿಂತಿದ್ದರು. ಚಿತ್ರ ಬಿಡಿಸಲು ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಅಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಗಿತ್ತು. ಒಂದು ಚಿತ್ರದ ಮಾದರಿಯನ್ನು ಕೈಯಲ್ಲಿ ಹಿಡಿದು ಹೀಗೇ ಚಿತ್ರವನ್ನು ಬಿಡಿಸಿ ಕೊಡಲು ಸಾಧ್ಯವೇ ಎಂದು ಕೇಳಿದಾಗ ಸುಮತಿ ಕೈ ಮುಗಿದು ಸರಿ ಎಂಬಂತೆ ತಲೆಯಾಡಿಸಿದಳು….”ನಿಮಗೆ ಚಿತ್ರ ಬಿಡಿಸಲು ಅಗತ್ಯವಾದ ಇನ್ನಿತರ ಏನೇ ಸಾಮಾಗ್ರಿಗಳು ಬೇಕಿದ್ದರೂ ಹೇಳಿ…ತರಿಸಿ ಕೊಡುತ್ತೇನೆ….ಏನಾದರೂ ಸಹಾಯ ಬೇಕಿದ್ದರೆ ಇಲ್ಲಿನ ಆಳುಗಳನ್ನು ಕೇಳಿದರೆ ಮಾಡುತ್ತಾರೆ ಎಂದು ಹೇಳಿ ಬೆಳಗಿನ ತಿಂಡಿ ತಿನ್ನಲೆಂದು ಒಳಗೆ ಹೋದರು.
