
ಅಂಕಣ ಸಂಗಾತಿ
ಮಧು ವಸ್ತ್ರದ
ಮುಂಬಯಿ ಎಕ್ಸ್ ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ
ಮುಂಬಯಿ ಮಹಾನಗರದಲ್ಲಿ
ರಕ್ಷಾ ಬಂಧನ ಹಬ್ಬ ಮತ್ತು
ನಾರಳಿ ಪೌರ್ಣಿಮ ಹಬ್ಬ..

ಭಾಗ..೧
ರಕ್ಷಾ ಬಂಧನ


ಮುಂಬಯಿ ಮಹಾನಗರದಲ್ಲಿ ನಿಜಕ್ಕೂ ನಂಬಲಾಗದಷ್ಟು ವಿವಿಧ ಹಬ್ಬ ಹರಿದಿನಗಳಿವೆ..ಅನೇಕ ಭಾಷೆ, ವೇಷ, ಧರ್ಮ, ಸಂಸ್ಕೃತಿಗಳು ಒಗ್ಗೂಡಿರುವ ಈ ಮಾಯಾನಗರದಲ್ಲಿ, ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಈ ಎಲ್ಲ ಗಡಿಗಳನ್ನು ಮೀರಿದ ಉತ್ಸಾಹದ ಆಚರಣೆಗಳು ಕಾಣಸಿಗುತ್ತವೆ.
ನಮ್ಮ ಪುರಾತನ ಹಿಂದೂ ಸಂಪ್ರದಾಯಗಳೊಡನೆ ಹೊಸ ಕಲ್ಪನೆಗಳನ್ನು ಬೆರೆಸಿ, ಉತ್ಸಾಹ, ಶ್ರದ್ಧೆ, ಭಕ್ತಿಗಳಿಂದ, ವಿಶಾಲ ಹೃದಯದಿಂದ ಹಬ್ಬಗಳನ್ನು ಆಚರಿಸಿ ಸಂತಸ, ಸಂಭ್ರಮ ಹೊಂದುವ ಮುಂಬಯಿಕರರ ವಿಶೇಷ ಮನೋಭಾವನೆ ನಿಜಕ್ಕೂ ಪ್ರಶಂಸನೀಯ..
ರಕ್ಷಾ ಬಂಧನ ಹಬ್ಬಕ್ಕೆ ರಾಖಿಪೂರ್ಣಿಮ ಎಂದೂ ಕರೆಯುತ್ತಾರೆ..ಸಹೋದರ- ಸಹೋದರಿಯರ ನಡುವಿನ ಪ್ರೀತಿ ಮತ್ತು ರಕ್ಷಣೆಯ ಬಂಧವನ್ನು ಸಂಕೇತಿಸುವ ಈ ಹಬ್ಬವನ್ನು ಶ್ರಾವಣ ಮಾಸದ ಪೂರ್ಣಿಮೆಯಂದು ಆಚರಿಸಲಾಗುತ್ತದೆ.. ಈ ದಿನ, ಸಹೋದರಿಯರು ಸಹೋದರರ ಕೈಗೆ ರಾಖಿ ಕಟ್ಟಿ, ಅವರ ಸುಖ,ಸಮೃದ್ಧಿ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಸಹೋದರರು ತಮ್ಮ ಸಹೋದರಿಯರನ್ನು ರಕ್ಷಿಸುವ ಭರವಸೆ ನೀಡುತ್ತಾರೆ.ಪ್ರೀತಿಯಿಂದ ಪರಸ್ಪರರಿಗೆ ಉಡುಗೊರೆಗಳನ್ನು ನೀಡಿ ಸಂಭ್ರಮಿಸುತ್ತಾರೆ..
ಪುರಾಣದಲ್ಲಿ, ಇಂದ್ರನ ಪತ್ನಿ ಸಚಿಯು ರಕ್ಷಾ ಸೂತ್ರ ಕಟ್ಟಿದ ಕಥೆಯಿಂದ ಈ ಸಂಪ್ರದಾಯ ಆರಂಭವಾಯಿತೆಂದು ನಂಬಲಾಗುತ್ತದೆ..ಇತಿಹಾಸದಲ್ಲಿ, ರಾಣಿ ಕರ್ಣಾವತಿಯು ಹುಮಾಯೂನ್ಗೆ ರಾಖಿ ಕಳುಹಿಸಿ ರಕ್ಷಣೆ ಕೋರಿದ ಘಟನೆಯು ಈ ಹಬ್ಬವು ವಿಶ್ವಾಸದ ಸಂಕೇತವೆಂಬುದನ್ನು ತೋರಿಸುತ್ತದೆ.
ಸಹೋದರಿಯರು ಥಾಲಿಯಲ್ಲಿ ರಾಖಿ, ದೀಪ, ಕುಂಕುಮ, ಮತ್ತು ಸಿಹಿಯನ್ನು ಇಟ್ಟು ಸಹೋದರರಿಗೆ ತಿಲಕವಿಟ್ಟು ರಾಖಿ ಕಟ್ಟುತ್ತಾರೆ. ಸಹೋದರರು ಉಡುಗೊರೆ ನೀಡಿ, ರಕ್ಷಣೆಯ ಶಪಥ ತೆಗೆದುಕೊಳ್ಳುತ್ತಾರೆ. ಇಂದು, ಈ ಸಂಪ್ರದಾಯವು ಸ್ನೇಹಿತರು ಮತ್ತು ಸಮಾಜದ ಇತರರೊಂದಿಗೂ ಆಚರಿಸಲ್ಪಡುತ್ತದೆ. ಆನ್ಲೈನ್ ರಾಖಿ, ವಿಡಿಯೋ ಕರೆ ಆಚರಣೆ, ಮತ್ತು ವೈವಿಧ್ಯಮಯ ರಾಖಿ ವಿನ್ಯಾಸಗಳು ಈ ಹಬ್ಬಕ್ಕೆ ಆಧುನಿಕ ಸ್ಪರ್ಶ ನೀಡಿವೆ. ಇದು ಜಾತಿ, ಧರ್ಮವನ್ನು ಮೀರಿ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ.
ರಕ್ಷಾ ಬಂಧನ ಕೇವಲ ಒಂದು ಹಬ್ಬವಲ್ಲ, ರಾಖಿ ಎಂಬುದು ಬರಿಯ ರೇಷಿಮೆ ದಾರವಲ್ಲ.ಅದು ವ್ಯಕ್ತಿಗಳ ನಡುವಿನ ಪ್ರೀತಿ, ವಿಶ್ವಾಸ, ನಂಬಿಕೆ, ಕೃತಜ್ಞತೆ, ಅಭಯ, ಭರವಸೆ, ರಕ್ಷಣೆ ಈ ಎಲ್ಲ ಭಾವಗಳ ವಿನಿಮಯ ಎನ್ನಬಹುದು. ಈ ರೀತಿಯ ವಿಚಾರಧಾರೆಯನ್ನು ಹೊಂದಿದ ಅನೇಕ ಸಂಸ್ಥೆಗಳ ಮಹಿಳೆಯರು, ಶಾಲಾ ಬಾಲಕಿಯರು ಮುಂಬಯಿ ಪೋಲಿಸ್ ಅಧಿಕಾರಿಗಳಿಗೆ, ಮುಂಬಯಿ ಸುರಕ್ಷಾದಳದ ಸಿಬ್ಬಂದಿಗಳಿಗೆ, ಅಗ್ನಿಶಾಮಕ ದಳದ ಹಲವಾರು ಸಿಬ್ಬಂದಿ ವರ್ಗದವರಿಗೆ ರಾಖಿಯನ್ನು ಕಟ್ಟಿ, ಆರತಿ ಬೆಳಗಿ, ಶುಭ ಹಾರೈಸಿ, ಅವರಿಂದ ವಾತ್ಸಲ್ಯದ ಚಿಕ್ಕ ಪುಟ್ಟ ಉಡುಗೊರೆಗಳನ್ನು ತಾರೆ. ಮೇಲಿನ ಎಲ್ಲಾ ಸಿಬ್ಬಂದಿ ವರ್ಗಗಳು ಮಹಾನಗರದ ಮಹಿಳೆಯರ ರಕ್ಷಣೆಗಾಗಿ ಸಲ್ಲಿಸುವ ಸೇವೆಯನ್ನು ಗುರುತಿಸಿ, ಶ್ಲಾಘಿಸಿ, ಅವರಿಗೆ ಆದರ ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಲು ಇದಕ್ಕಿಂತ ಉತ್ತಮ ಪರಿ ಬೇರೇನಿದೆ ಹೇಳಿ..
ರಕ್ಷಾ ಬಂಧನದಂದು ದೂರದ ಊರಿನಲ್ಲಿರುವ ಸೋದರರೂ ಕೂಡ ತಮ್ಮ ಪ್ರೀತಿಯ ಸಹೋದರಿಯರಿಂದ ರಾಖಿ ಕಟ್ಟಿಸಿಕೊಳ್ಳಲು ಹಂಬಲಿಸುತ್ತಾರೆ..ಅಂದು ತಪ್ಪದೇ ತಮ್ಮ ಸೋದರಿಯ ಮನೆಗೆ ಆಗಮಿಸುತ್ತಾರೆ. ಅಥವಾ ಸೋದರಿಯನ್ನು ತಮ್ಮ ಮನೆಗೆ ಕರೆಸುತ್ತಾರೆ. ಆದರೆ, ಗಡಿ ನಿಯಂತ್ರಣ ರೇಖೆಯಲ್ಲಿ (LOC) ರಾಷ್ಟ್ರದ ಕಾವಲು ಕಾಯುತ್ತಿರುವ ನಮ್ಮ ವೀರ ಸೈನಿಕರಿಗೆ ಈ ರೀತಿಯ ಹಬ್ಬಗಳನ್ನು ಆಚರಿಸಲಾಗುವುದಿಲ್ಲ, ತಮ್ಮ ಕುಟುಂಬದವರನ್ನು ಭೇಟಿ ಮಾಡಲೂ ಆಗುವುದಿಲ್ಲ..ಭಾವನೆಗಳನ್ನು ಬದಿಗೊತ್ತಿ ದೇಶ ಸೇವೆಗಾಗಿಯೇ ಪಣ ತೊಟ್ಟ ಈ ವೀರ ಸೈನಿಕರಿಗೆ ನಮ್ಮ ನಾರಿಶಕ್ತಿ ಬಳಗದಿಂದ ನಾವೆಲ್ಲರೂ ಶುಭಹಾರೈಕೆಯ ಪತ್ರದೊಂದಿಗೆ ೧೦೧ ರಾಖಿಗಳನ್ನು ಪಾರ್ಸೆಲ್ ಕಳಿಸುತ್ತೇವೆ..ಅಸ್ಮಿತಾ ಸಂಸ್ಥೆಯ ವಿಶೇಷ ಚೇತನ ಮಕ್ಕಳು ತಯಾರಿಸಿದ ರಾಖಿಗಳನ್ನೇ ಇದಕ್ಕಾಗಿ ಬಳಸುತ್ತೇವೆ..
ಈ ರೀತಿ ಸಂಪ್ರದಾಯ ಮತ್ತು ಆಧುನಿಕತೆಯ ಸಂಯೋಜನೆಯಿಂದ ಕೂಡಿದ ರಕ್ಷಾಬಂಧನ ಹಬ್ಬದ ಆಚರಣೆಯು ಮುಂಬಯಿ
ಮಹಾನಗರದಲ್ಲಿ ಅರ್ಥಪೂರ್ಣವಾದ ಹೊಸ ರೂಪವನ್ನು ಪಡೆದಿದೆ, ಹಾಗೆಯೇ ಮಹಿಳೆಯರ ಸುರಕ್ಷತೆ, ಮತ್ತು ಸಂರಕ್ಷಣೆಗಳು ಸಮಾಜದಲ್ಲಿ ಪ್ರಾಧಾನ್ಯತೆಯನ್ನು ಹೊಂದಿವೆ..
*****
ಭಾಗ..೨
ನಾರಳಿ ಪೂರ್ಣಿಮ


ಮಹಾರಾಷ್ಟ್ರದಲ್ಲಿ ಶ್ರಾವಣ ಮಾಸದ ಪೂರ್ಣಿಮೆಯಂದು ಇಲ್ಲಿಯ ಸಮುದ್ರತೀರ ಪ್ರದೇಶದಲ್ಲಿ ವಾಸಿಸುವ ಕೋಳಿ (ಮೀನುಗಾರ)ಜನಾಂಗದವರಿಂದ
“ನಾರಳಿ ಪೂರ್ಣಿಮ”ಹಬ್ಬವು ವಿಭಿನ್ನ ರೀತಿಯಲ್ಲಿ ಅತ್ಯಂತ ಸಂತಸ ಸಂಭ್ರಮಗಳಿಂದ ಆಚರಿಸಲ್ಪಡುತ್ತದೆ..
ಮುಂಬಯಿ ಮಹಾನಗರದ ಮೂಲ ನಿವಾಸಿಗಳಾದ ಕೋಳಿ ಸಮುದಾಯದ ಜನರು ತಮ್ಮ ನಿತ್ಯ ಜೀವನೋಪಾಯಕ್ಕಾಗಿ
ಮಹಾಸಾಗರವನ್ನೇ ಅವಲಂಬಿಸಿದ್ದಾರೆ.
ತಮಗೆ ಸುಖ, ಸಮೃದ್ಧಿ, ಸಂಪತ್ತನ್ನು ದಯಪಾಲಿಸುವ ಸಮುದ್ರ ದೇವತೆಯನ್ನು ಅತ್ಯಂತ ಭಕ್ತಿಯಿಂದ ಪೂಜಿಸಿ ಆರಾಧಿಸುತ್ತಾರೆ.
ಮಳೆಗಾಲದ ಆರಂಭದಲ್ಲಿ ಸುರಿವ ಭಾರೀ ಮಳೆಯಿಂದಾಗಿ ಜೂನ್ ಜುಲೈ ತಿಂಗಳ ಅವಧಿಯಲ್ಲಿ ಸಮುದ್ರ ತುಂಬಾ ಪ್ರಕ್ಷುಬ್ಧವಾಗಿರುತ್ತದೆ. ಈ ಸಮಯದಲ್ಲಿ ದೋಣಿ, ಹಡಗುಗಳ ಸಂಚಾರ, ಮೀನುಗಾರಿಕೆ, ಮುಂತಾದ ಸಮುದ್ರಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ಬಂದ್ ಮಾಡಿಟ್ಟು, ತಮ್ಮ ದೋಣಿ, ಹಡಗು, ಮೀನಿನ ಬಲೆ ಮುಂತಾದುವುಗಳನ್ನು ರಿಪೇರಿ ಮಾಡುವ ಅಥವಾ ಹೊಸದನ್ನು ಕೊಳ್ಳುವ ಕೆಲಸಗಳನ್ನು ಮಾಡಲಾಗುತ್ತದೆ..ಶ್ರಾವಣ ಮಾಸದ ಪೂರ್ಣಿಮೆಯಂದು ಹಿಂದೂ ಸಂಸ್ಕೃತಿಯ ಪ್ರಕಾರ ಪವಿತ್ರ ಮತ್ತು ಮಂಗಳಕರವೆಂದು ಹೆಸರಾದ ತೆಂಗಿನಕಾಯನ್ನು ಸಮುದ್ರ ರಾಜನಿಗೆ ಅರ್ಪಿಸುವುದರ ಮೂಲಕ ಕೋಳಿ ಬಾಂಧವರೆಲ್ಲ ಒಂದೆಡೆ ಸೇರಿ ಒಗ್ಗಟ್ಟಿನಿಂದ ಸಾಮೂಹಿಕ ಸಂಗೀತ, ನೃತ್ಯಗಳೊಂದಿಗೆ ನಾರಳಿ ಪೂರ್ಣಿಮ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ತಮ್ಮ ದೋಣಿ, ಹಡಗುಗಳನ್ನು ಬಣ್ಣಗಳಿಂದ, ಹೂವಿನ ಹಾರಗಳಿಂದ ಅಲಂಕರಿಸಿ, ಹಿರಿ ಕಿರಿಯರೆಲ್ಲ ಒಂದಾಗಿ, ಸಾಂಪ್ರದಾಯಿಕ ಸಂಗೀತ, ನೃತ್ಯಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ.. ನಾರಳ ಭಾತ್, ನಾರಳ ವಡಿ, ನಾರಳಾಚಿ ಕರಂಜಿ ಹೀಗೆ ಪ್ರತಿಯೊಂದು ಮನೆಯಲ್ಲೂ ತೆಂಗಿನಕಾಯಿಯನ್ನು ಬಳಸಿ ವಿಶೇಷ ಸಿಹಿ ತಿನಿಸುಗಳನ್ನು ತಯಾರಿಸಿ ಸಮುದ್ರದೇವತೆಗೆ ಅರ್ಪಿಸುತ್ತಾರೆ..
ಹಬ್ಬದ ಅಂಗವಾಗಿ ಹಲವಾರು ರೀತಿಯಲ್ಲಿ ತೆಂಗಿನಕಾಯಿ ಒಡೆಯುವ ಸ್ಪರ್ಧೆಗಳನ್ನು ಏರ್ಪಡಿಸಿ ಭಾರಿ ಮೊತ್ತದ ಬಹುಮಾನಗಳನ್ನು ನೀಡುತ್ತಾರೆ..ಈ ಹಬ್ಬದ ಆಚರಣೆಯ ನಂತರ ಗಾಳಿ, ನೀರು, ಸಮುದ್ರದ ಅಲೆಗಳು, ಎಲ್ಲವೂ ತಮ್ಮ ಕಸುಬಾದ ಮೀನುಗಾರಿಕೆಗೆ ಒಲವು ತೋರಿ ಸಮೃದ್ಧಿಯನ್ನು ನೀಡುತ್ತವೆ ಎಂಬುದು ಇವರ ನಂಬಿಕೆ..
ಇತ್ತೀಚಿನ ವರ್ಷಗಳಲ್ಲಿ ಕೋಳಿ ಜನರು “ಸೀ ಫುಡ್ ಫೆಸ್ಟಿವಲ್” ಹೆಸರಿನಲ್ಲಿ ದೊಡ್ಡ ದೊಡ್ಡ ಉತ್ಸವಗಳನ್ನು ಆಯೋಜಿಸುತ್ತಾರೆ. ಇವರ ಸಾಂಪ್ರದಾಯಿಕ ಉಡುಗೆ ತೊಡುಗೆ, ಸಮುದ್ರಾಹಾರ ಅತ್ಯಂತ ಪ್ರಸಿದ್ಧವಾಗಿದ್ದು ನಗರದ ಇನ್ನಿತರ ಜನಾಂಗದ ಸಮುದ್ರಾಹಾರ ಪ್ರೇಮಿಗಳಿಗೆ ಇದೊಂದು ಪ್ರಮುಖ ಆಕರ್ಷಣೆಯಾಗಿದೆ..
ನಮ್ಮ ಸೊಸೈಟಿಯಲ್ಲಿನ ಬಂಗಾಲಿ ಮತ್ತು ಮರಾಠಿಗರಿಗಾಗಿ, ಪ್ರತಿ ಭಾನುವಾರ ಬೆಳಗ್ಗೆ ಮೀನು ತಂದು ಮಾರುವ “ಮತ್ಸ್ಯಗಂಧ” ಹೆಸರಿನ ಈ ಆಧುನಿಕ ನಾರಿ ಕಿರಿಯ ವಯಸ್ಸಿನಲ್ಲೇ ವಿಧವೆಯಾದರೂ, ಎದೆಗುಂದದೆ ಕಷ್ಟಗಳನೆದುರಿಸಿ, ಶ್ರದ್ಧೆ, ಶ್ರಮಗಳಿಂದ ವ್ಯಾಪಾರ ವಹಿವಾಟನ್ನು ಸರಿದೂಗಿಸುತ್ತ ಪ್ರಗತಿಪಥದಲ್ಲಿ ಸುಲಲಿತವಾಗಿ ಸಾಗುತ್ತಿದ್ದಾಳೆ. ಮನೆಯಲ್ಲಿ ತನ್ನ ಮಕ್ಕಳು, ವಯಸ್ಸಾದ ಅತ್ತೆ, ಮಾವ, ಇಬ್ಬರು ಮೈದುನರನ್ನು ಸಾಕಿ ಸಲಹುವ ಜವಾಬ್ದಾರಿ ಹೊತ್ತಿರುವ ಈ ನಾರಿ ಮೀನಿನ ವ್ಯಾಪಾರದಲ್ಲಿ ಅತ್ಯಂತ ಪ್ರಗತಿ ಸಾಧಿಸಿ ತನ್ನಿಬ್ಬರೂ ಹೆಣ್ಣು ಮಕ್ಕಳನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾ ದೇಶಕ್ಕೆ ಕಳಿಸಿದ್ದಾಳೆ. ಹಿರಿಯರ ಶುಶ್ರೂಷೆ, ಮೈದುನರ ಮದುವೆ ಹೊಣೆಯ ಜೊತೆಗೆ ಮನೆಯಲ್ಲಿ ನಾಲ್ಕು ಜರ್ಮನ್ ಶೆಫರ್ಡ್ ನಾಯಿಗಳನ್ನು, ಎರಡು ಬೆಕ್ಕುಗಳನ್ನೂ ಸಾಕಿದ್ದಾಳೆ..
ಇನ್ನೂರಕ್ಕೂ ಹೆಚ್ಚು ಸಮುದ್ರಾಹಾರ ಪ್ರೇಮಿಗಳ ವಾಟ್ಸ್ಯಾಪ್ ಬಳಗ ಹೊಂದಿರುವ ಈಕೆ ಬಳಗದೆಲ್ಲರ ಬೇಡಿಕೆಗೆ ತಕ್ಕಂತೆ ವಿವಿಧ ಭಕ್ಷ್ಯಗಳನ್ನು, ಮೀನಿನ ವಿಧ ವಿಧವಾದ ಪ್ರಕಾರಗಳನ್ನು ತಂದು ಕೊಡುತ್ತಾಳೆ..
ತನ್ನ ಉತ್ತಮ ಗುಣಮಟ್ಟದ ಕೆಲಸದಿಂದ ಬೊರಿವಲಿ,ಕಾಂದಿವಲಿ, ಪ್ರದೇಶದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದಾಳೆ..ಪ್ರತಿ ವಾರ ಬೆಳಗ್ಗೆ ೮ ಗಂಟೆಗೆ ಸರಿಯಾಗಿ ಕೆಂಪು ಬಣ್ಣದ ಮಿರಿಮಿರಿ ಮಿಂಚುವ ಕಾರಿನಲ್ಲಿ ಸ್ವತಃ ಡ್ರೈವ್ ಮಾಡಿಕೊಂಡು ಬರುತ್ತಾಳೆ. ಸ್ಲೀವ್ ಲೆಸ್ ಟೀ ಶರ್ಟ್, ಜೀನ್ಸ್ ಸ್ಕರ್ಟ್, ಹೈಹೀಲ್ ಷೂಸ್, ಕಪ್ಪು ಗಾಗಲ್ಸ್ ಧರಿಸಿ, ಹೊಂಬಣ್ಣದ ಹೂನಗೆ ಬೀರುತ್ತ, ಮಿಂಚುತ್ತ, ಕಾರಿನಿಂದಿಳಿವ ಈ ಚೆಲುವೆಯನ್ನು ನೋಡಿದರೆ ಹಿಂದಿ ಸಿನಿಮಾಗಳ ನಾಯಕಿ ನಟಿಯನ್ನು ನೋಡಿದಂತೆ ಭಾಸವಾಗುತ್ತದೆ. ಇಂಗ್ಲಿಷ್, ಹಿಂದಿ, ಮರಾಠಿ ಎಲ್ಲ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಈ ನಾರಿ ತನ್ನ ಸ್ವಬಲದಿಂದ ಆರ್ಥಿಕ ಸುಸ್ಥಿತಿಗೆ ಏರಿದ್ದರೂ ಸಹ, ವಂಶಪಾರಂಪರ್ಯವಾಗಿ ಬಂದ ಮೀನುವ್ಯಾಪಾರವನ್ನು
ಬಿಡದಂತೆ ನಡೆಸುತ್ತಿದ್ದಾಳೆ..
ಹೊರ ರಾಜ್ಯಗಳಿಂದ ವಲಸೆ ಬಂದು ಇಲ್ಲಿಯ ಮೀನು ವ್ಯಾಪಾರದಲ್ಲಿ ಮೂಗು ತೂರಿಸಿ, ತಮ್ಮ ಅಧಿಕಾರ ನಡೆಸಲೆತ್ನಿಸುವ(ಯುಪಿವಾಲಾ ಭಯ್ಯಾ)ಜನರೊಂದಿಗೆ ಸ್ಪರ್ಧಿಸುತ್ತ ವ್ಯಾಪಾರದಲ್ಲಿ ಯಶಸ್ಸು ಪಡೆಯುವುದು ಅಷ್ಟು ಸುಲಭದ ಮಾತೇನಲ್ಲ
.ದುರ್ದೈವವೆಂದು ಅಳುತ್ತ ಕೂರದೆ, ಆತ್ಮವಿಶ್ವಾಸದಿಂದ ಬಾಳುತ್ತಿರುವ ಈ ಮತ್ಸ್ಯ ಗಂಧೆ ಇಲ್ಲಿಯ ಎಲ್ಲ ಹೆಣ್ಣುಮಕ್ಕಳಿಗೆ ಸ್ಪೂರ್ತಿ, ಪ್ರೇರಣೆಗಳನ್ನು ನೀಡುವಂತಿದ್ದಾಳೆ ಎಂದರೆ ತಪ್ಪಾಗಲಾರದು..
ಒಂದೇ ದಿನದಂದು ಆಚರಿಸುವ ಎರಡು ವಿಭಿನ್ನ ಶೈಲಿಯ ಆಚರಣೆಗಳು ಮುಂಬಯಿ ಮಹಾನಗರದ ವಿವಿಧತೆಯಲ್ಲಿನ ಏಕತೆಯನ್ನು ಎತ್ತಿ ತೋರಿಸುತ್ತವೆ..
ಮಧು ವಸ್ತ್ರದ
ಮುಂಬಯಿ..
