ಡಾ ಸುರೇಶ ನೆಗಳಗುಳಿ ಅವರ ಕವಿತೆ-ಸುಜ್ಞಾನಿಯ ಬವಣೆ

ಮನಬಂದಂತೆ ತಿರುಗುತ್ತಾ ಇದ್ದ ಕಾಲ
ನಿರ್ವಾಣ ಸಹ ಒಮ್ಮೊಮ್ಮೆ
ಆಟ ಕೂಟ ಓಡಾಟ ಲಿಂಗ ಭೇದವಿಲ್ಲದೆ
ಬಾಲ್ಯದ ಸ್ವರ್ಗ ಮರಳಿ ಬಾರದ ನೆನಪು

ಹುಟ್ಟು ಬಾರದು ಹೇಳಿ ಮತ ಧರ್ಮ ಕೇಳಿ
ಬಿಡುವ ಜುಟ್ಟು ಕೌಮಾರ್ಯ ಮುಗಿದಾಗ
ಅಧ್ಯಯನ ಶೀಲತೆಗೆ ಯಜ್ಞೋಪವೀತ
ಉಪ ಪಶ್ಚಾತ್ ನೀಯತೇ ಎಂಬ ಹಾಗೆ ನಯನ

ಸಂಧ್ಯಾ ವಂದನೆ ಜಪ ತಪ ಪರಿಪಾಠವೇ ಸರಿ
ನೀರು ಸುತ್ತುಕಟ್ಟಿಯೇ ಅಶನ ಪ್ರಾ ಶನ
ಸಂಪ್ರದಾಯ ಸುಮ್ಮನೆ ಬರುವುದೇ
ಒಬ್ಬೊಬ್ಬರಿಗೊಂದೊಂದು ತರಹ ಎಂಬ ಜಿಜ್ಞಾಸೆ

ಬಿಡಲಾಗದು ಅವ್ಯಕ್ತ ಭಯವಿರುವಾಗ
ತೊಡಲಾಗದು ಅನರ್ಥ ತಡೆಯಿರುವಾಗ
ತ್ರಿಶಂಕುವಾಗಿ ಬಸವಳಿದಾಗ ಫಲಿತಕ್ಕೆ ಪೆಟ್ಟು
ಎಲ್ಲಾ ಕಿತ್ತೊಗೆದು ಓಡಲೂ ಇರದು ತಾಕತ್ತು

ಹಕ್ಕು ಬಾಧ್ಯತೆ ಅಂದರೇನು ಎಲ್ಲಿ ಅರಿಯಾದಾಗ
ಠಕ್ಕು ಗೆದ್ದರೆ ಒದ್ದೆಯಾಗದೇ ಎದೆ ಮನಸು
ತಾಮಸಾನಂದ ಮರೀಚಿಕೆಯ ಪ್ರತಿ ರೂಪವಾಗಿ
ಕಾಡುವಾಗ ತೀರುವುದೇ ನೀರಡಿಕೆ


Leave a Reply

Back To Top