ಕಾವ್ಯ ಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ
ಹಣತೆಯ ಆತ್ಮವಿಶ್ವಾಸ

ಜಗದಲಿ ಕತ್ತಲ ತೊಡೆಯುವ ಹಣತೆ
ತನ್ನಯ ಪಾಡಿಗೆ ಉರಿಯುವುದು
ಸುತ್ತಲು ಬೆಳಕಿನ ಪ್ರಭೆಯನು ಹರಡಿಸಿ
ಸೂರ್ಯನ ಕಾಯಕ ಮಾಡುವುದು//
ಧರೆಯನು ಬೆಳಗಲು ಸಾಧ್ಯವೆ ತನಗೆ
ಎನ್ನುತ ಮೂಲೆಯ ಸೇರದದು
ತನ್ನಯ ಮೂಲೆಗೆ ಬೆಳಕನು ಪಸರಿಸಿ
ಧನ್ಯತೆಯನ್ನು ಪಡೆಯುವುದು//
ಕಾರ್ಯವ ಮಾಡಲು ಬೇಕಿದೆ ಮನವು
ಶಕ್ತಿಯ ಅಳತೆಯು ಬೇಕಿಲ್ಲ
ಆತ್ಮ ವಿಶ್ವಾಸವು ತುಂಬಿರೆ ಹೃದಯದಿ
ಬೆಳಗ ಬಲ್ಲೆವು ನಾವೆಲ್ಲ//
ಪುಟ್ಟ ಹಣತೆಯ ಕಿರಿದು ಭಾವವು
ಓಡಿತು ಆತ್ಮ ವಿಶ್ವಾಸದಲಿ
ತನ್ನ ಹಾಗೆಯೆ ಬೆಳಗುವ ಹಣತೆಗೆ
ಸ್ಪೂರ್ತಿಯಾಯಿತು ಜಗದಲ್ಲಿ//
ಚಿಕ್ಕ ಪುಟ್ಟ ಕಾಯಕ ಮಾಡುತ
ಬೆಳಗುವ ನಮ್ಮ ಮೂಲೆಯನು
ಬದುಕಿನ ಹಣತೆಯ ನಿಷ್ಠೆಯಿಂದಲಿ
ಉರಿಸುತ ಮಾಡುವ ಸೇವೆಯನು //
ಶುಭಲಕ್ಷ್ಮಿ ಆರ್ ನಾಯಕ

ಹಣತೆ ಪುಟ್ಟದಾದರೂ ದೊಡ್ಡ ಕತ್ತಲೆಗೆ ಅದು ಬೆಳಕು. ಒಂದು ವಿನ್ಯಾಸದ ಭರವಸೆಯ ಜೀವ. ಪುಟ್ಟದೆಂಬ ಕಾಯಕದ ದೊಡ್ಡ ಪರಿಚಯ. ಕವಿತೆಯ ಆಶಯ, ಸೂಕ್ಷ್ಮತೆ ಓದಿಗೆ ಆಪ್ತವಾಗುತ್ತದೆ. ಒಂದು ಚೆಂದದ ಹಣತೆ ಮನದಿ ಮೌನದಿ ಕುಳಿತು ಮಾತನಾಡಿದಂತೆ ಕಾಣಿಸುತ್ತದೆ. ಕವಿತೆ ಓದಿಗೆ ಧನ್ಯತೆ ತಂದುಕೊಡುತ್ತದೆ……….
ನಾಗರಾಜ ಬಿ.ನಾಯ್ಕ.