ಹಾಡುಗಳೇ ಮೇಲುಗೈ :ರಂಜಿಸಿದ ಶ್ರೀದೇವಿ ಮಹಾತ್ಮೆ ಪೌರಾಣಿಕ ನಾಟಕ-ಗೊರೂರು ಅನಂತರಾಜು

ಹಾಸನದಲ್ಲಿ ನಡೆಯುತ್ತಿರುವ ಪೌರಾಣಿಕ ನಾಟಕೋತ್ಸವ ಅಂಗವಾಗಿ  ಹಾಸನದ ಶ್ರೀ ಚಾಮುಂಡೇಶ್ವರಿ ಜಾನಪದ ಮತ್ತು ರಂಗಭೂಮಿ ಕಲಾಸಂಘ ಇವರು ಎ.ಸಿ.ರಾಜು ನಿರ್ದೇಶನದಲ್ಲಿ  ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ ಶ್ರೀದೇವಿ ಮಹಾತ್ಮೆ ನಾಟಕ  ಪ್ರೇಕ್ಷಕರ ಮನ ಸೆಳೆಯಿತು.  
ಇಂದಿನ ವೈಜ್ಞಾನಿಕ ಯುಗದಲ್ಲೂ ಭೂಮಿಯ ಉಗಮದ ಬಗ್ಗೆ ನಾನಾ ವಿಶ್ಲೇಷಣೆ ತರ್ಕ ನಡೆಯುತ್ತಿರುವಂತೆಯೇ ಪೌರಾಣಿಕ ಪರಿಕಲ್ಪನೆಯಲ್ಲಿ ರಮ್ಯ ಕಥೆಗಳೂ ಸೃಷ್ಟಿಗೊಂಡಿವೆ. ರಾಮಾಯಣ, ಮಹಾಭಾರತ, ಭಾಗವತ, ದೇವಿಪುರಾಣ ಇವೇ ಮೊದಲಾಗಿ ರಮ್ಯ ಕಥೆಗಳ ಪರಿಕಲ್ಪನೆ ಇಂದಿಗೂ ಜನಸಾಮಾನ್ಯರ ಮನದಲ್ಲಿ ಉಳಿದು ಬರುವಲ್ಲಿ ಪೌರಾಣಿಕ ನಾಟಕಗಳ ಪಾತ್ರವೂ ಗಮನಾರ್ಹ. ಮಾನವ ನಿರ್ಮಿತ ರಮ್ಯ ಕತೆಗಳೆಲ್ಲಾ ದೇವ ದಾನವ ಗುಣಗಳ ಮನುಷ್ಯ ನಡಾವಳಿಯ ಒಳಹೊರಗಿನ ಎರಡು ಮುಖಗಳೇ ಹೌದಷ್ಟೇ.! ಅದ್ಭುತ ಪ್ಯಾಂಟಸಿ ಪಾತ್ರಗಳು ಮಕ್ಕಳಿಗೆ ಪ್ರಿಯವಷ್ಟೇ. ನಾವು ಬಾಲ್ಯದಲ್ಲಿ ಚಂದಮಾಮದಲ್ಲಿ ಚಿತ್ರಿಸುತ್ತಿದ್ದ ಇಂತಹ ದೈತ್ಯ ಪಾತ್ರಗಳನ್ನೇ ನೋಡಿ ಓದಲು ಆಸಕ್ತರಾಗುತ್ತಿದ್ದೆವು. ಇರಲಿ ಶ್ರೀದೇವಿ ಮಹಾತ್ಮೆ ನಾಟಕದಲ್ಲಿ ಮಹಿಷಾಸುರ, ರಕ್ತಬೀಜಾಸುರ, ರಂಬೇಶ. ಶಿಂಬಾಸುರ, ನಿಶುಂಬಾಸುರ, ಚಂಡಾಸುರ, ಮುಂಡಾಸುರ, ಕರಂಬಾಸುರ, ಮಧು, ಕೈಟಪ, ದೂಮ ರಾಕ್ಷಸ.. ಹೀಗೆ ರಕ್ಕಸರದೇ ಆರ್ಭಟ. ಇವರ ಶಕ್ತಿ ಪ್ರದರ್ಶನದ ಮುಂದೆ  ಅಮರಾವತಿಯ ಅಧಿಪತಿ ಇಂದ್ರನೇ  ಸೋತು ಓಡಿ ಹೋಗುತ್ತಾನೆ. ಸೃಷ್ಟಿ, ಸ್ಥಿತಿ, ಲಯಕರ್ತರು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಎದುರಿಸಲಾಗದ ಅಸಹಾಯಕತೆ ! ತಪೋಬಲದಿಂದ ವರವ ಪಡೆದು ಮೆರೆವ  ಅಸುರರ ಸಂಹಾರಕ್ಕೆ ದೇವಿಯ ಅವತಾರ, ದುಷ್ಟ ಸಂಹಾರ ಶಿಷ್ಟ ಪರಿಪಾಲನೆ ಎಂಬ ನಾರದನ ಸೂತ್ರ ತಂತ್ರಗಳ ನಡುವೆ ನಾಟಕ ಸಾಗುತ್ತದೆ. ಇಲ್ಲಿ ಮಾತಿಗಿಂತ ಹಾಡುಗಳೇ ಮೇಲುಗೈ ಸಾಧಿಸಿ ದೃಶ್ಯ ಗೌಣವಾಗುತ್ತದೆ. ರಕ್ಕಸನ ತಪಸ್ಸಿಗೆ ತಥಾಸ್ತು ಎಂದು ಸಾವಿಲ್ಲದ ವರವ ಕೊಡುವ ಬ್ರಹ್ಮ ಅದು ತಿರುಗುಬಾಣವಾದಾಗ ನಲುಗುತ್ತಾನೆ. ಇಂದ್ರ ಮೊಸಳೆಯಾಗಿ  ಬಂದು ಕರಂಭಾಸುರನನ್ನು ಸಾಯಿಸುವುದು, ರಂಬೇಶನನ್ನು ಮೋಸದಿಂದ ಬೆನ್ನಿಂದೆ ಬಂದು  ಇರಿದು ಕೊಲ್ಲುವುದು, ರಕ್ಕಸರ ರಕ್ಷಣೆಗೆ ನಿಂತ ಶುಕ್ಲಾಚಾರ್ಯರ ತಪೋಬಲದ ಶಕ್ತಿಧಾರೆಯ ಸಮಪ೯ಣೆ, ನಾರದನ ಜಾಣ ನಡೆ, ದೇವಿಯ ಸೌಂದರ್ಯ‍್ಯಕ್ಕೆ ಮರುಳಾಗಿ ಒಡೆದಾಡಿ ಸತ್ತ ಶಂಬ ನಿಶುಂಬಾ ಸಹೋದರರು, ಮಹಿಷಾಸುರನ ಮರ್ಧನ, ರಕ್ತಾ ಬಿಜಾಸುರನ ಮೈಯಿಂದ ಬೀಳುವ ರಕ್ತವು ನೆಲದ ಮೇಲೆ ಬೀಳದಂತೆ ನಾಲಿಗೆ ಚಾಚಿ ಹೀರಿ ಸಾಯಿಸಲು ಜನ್ಮಿಸಿದ ಕಾಳಿಯ ಭೀಭತ್ಸ ದೃಶ್ಯಾವಳಿಯೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ. ಮಹಿಷನ ಆಸ್ಥಾನದಲ್ಲಿ ರಕ್ಕಸರ ಸುರಪಾನ, ರಂಗೇರಿಸಿದ ನರ್ತಕಿಯರ ನರ್ತನ ರಸಿಕ ಪ್ರೇಕ್ಷಕರಿಗೆ ಕಿಕ್ಕೇರಿಸುತ್ತದೆ. ನಾರದನಾಗಿ  ಹೆಚ್.ಜಿ.ಗಂಗಾಧರ್ ಹಾಡುತ್ತಾ ಆಕಾಶದಿಂದ ಭೂಮಿಗೆ ಇಳಿಯುತ್ತಾರೆ. ಎಲ್ಲಾ ಮಧುರ ಹಾಡುಗಳು ಇವರಿಗೆ ಮೀಸಲಾಗಿವೆ. ರಂಬೇಶನ ಪಾತ್ರದಲ್ಲಿ ಕೆ.ವಿ.ಯೋಗೇಶ್ ಕೋರವಂಗಲ ಮತ್ತು ನಾಗರಾಣಿಯ ಪ್ರೇಮ ಗೀತೆಗಳು ಸೋಮರಾಜ್ ನಂಜನಗೂಡು ಅವರ ಕೀಬೋರ್ಡ್ ವಾದನದಲ್ಲಿ ಸೊಗಸಾಗಿ ಅಷ್ಟೇ ಏಕೆ ಇಡೀ ನಾಟಕದ ಹಾಡುಗಳು ಮೋಡಿ ಮಾಡುತ್ತವೆ. ನಿಜ ಸಂಗೀತದ ಆರ್ಭಟದಲ್ಲಿ ನಟ ನಟಿಯರ ಹಾಡುಗಾರಿಕೆ ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕೇಳಿಸದಿದ್ದರೂ ಸಂಗೀತವನ್ನೇ ಅರೆದು ಕುಡಿದು ಖುಷಿ ಪಡುತ್ತಾರೆ. ನಾಗರಾಣಿ ಪಾತ್ರದಾರಣಿ ರಶ್ಮಿಕರ ‘ ಓ ಪ್ರೇಮದ ಪೂಜಾರಿ.. ಹಾಡು ಸೇರಿದಂತೆ ಮಹಿಷಿ ಪಾತ್ರ ನಿರ್ವಹಿಸುವ ಭಾರತಿ, ಹೆಸರಿಗೆ ತಕ್ಕಂತೆ ಇದ್ದ ಗುಡಾಣಿ ಪಾತ್ರದಾರಿಣಿ ಲಕ್ಷ್ಮಿ ಶ್ರೀಧರ್ ಹಾಡಿದ ಹಳೆಯ ಸಿನಿಮಾ ಹಾಡುಗಳು ಅಥವಾ ಅನುಕರಿಸಿದ ಗೀತೆಗಳು ಹೌದಲ್ಲ..! ಹಳೆಯ ಸಿನಿಮಾ ಗೀತೆಗಳು ಅಂದಿಗೂ ಇಂದಿಗೂ  ಅಮರ ಮಧುರ ಎನಿಸುವುದು ಸುಳ್ಳಲ್ಲ. ಮಹಿಷಾಸುರ ಪಾತ್ರ ನಿರ್ವಹಿಸಿದ ಹೆಚ್.ಎಂ.ಪ್ರಭಾಕರ್  ಅಭಿನಯದಲ್ಲಿ ಮೆಚ್ಚುಗೆಗೆ ಪಾತ್ರರು. ದ್ಯತ್ಯ ಪಾತ್ರ ನಿರ್ವಹಿಸುವ ಕಲಾವಿದ ತನ್ನ ಪ್ರತಿ ಮಾತು ಹಾವ ಬಾವಗಳಿಗೆ ಹೇಗೆ ಮೂಮೆಂಟ್ಸ್ ಇಡಬಹುದು ಎಂದು ಅಭಿನಯಿಸಿ ತೋರ್ಪಡಿಸುತ್ತಾರೆ.

ಇವರ ಹಾಡು ಅಭಿನಯ ಸ್ಫಷ್ಟ ಸಮರ್ಪಕ.  ದೇವೇಂದ್ರನ ಪಾತ್ರದಾರಿ ಅನಿಲ್ ಕೋರವಂಗಲ ನಿಜಕ್ಕೂ ಮೇಕಪ್‌ನಲ್ಲಿ ಚೆನ್ನಾಗಿ ಕಾಣಿಸುತ್ತಾರೆ. ಅಷ್ಟೇ ಅವರ ಮಾತು ಹಾಡು ಚೆನ್ನಾಗಿ ಕೇಳಿಬರುತ್ತದೆ. ರಕ್ತ ಬಿಜಾಸುರ ಪಾತ್ರದಲ್ಲಿ ಆಲೂರು ರಾಜೇಗೌಡರಲ್ಲಿ ಹಾಡು ಅಭಿನಯ ಇದ್ದರೂ ರಂಗದ ಮೇಲೆ ಗೊಂದಲಕ್ಕೆ ಒಳಗಾಗುತ್ತಾರೆ. ದೇವಿಗೆರೆಯಿಂದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ರಂಗದ ಮುಂಭಾಗ ಪ್ರತಿ಼ಷ್ಠಾಪಿಸಿ ಅಲ್ಲಿಂದ ಕರ್ಪೂರದಾರತಿ ತಂದು ರಂಗದ ಮೇಲಿನ ದೇವಿ ಪಾತ್ರಕ್ಕೆ ಬೆಳಗುವಲ್ಲಿ ಈ ಗೊಂದಲಗಳು ಗೋಚರಿಸುತ್ತವೆ. ಇನ್ನೂ ಮೈದುಂಬಿ ದೇವಿ ಪಾತ್ರದಾರಿಯಿಂದ ಎಲ್ಲಿ ಅನಾಹುತ ಘಟಿಸಿಬಿಡುವುದೋ ಎಂದು ಭಯದಿಂದ ತಡೆ ಹಿಡಿಯುವುದು ಬ್ರಹ್ಮ ವಿಷ್ಣು ಪಾತ್ರಗಳಿಂದ ನಡೆಯುವುದು ಓಕೆ.  ಆದರೆ ಕಾಳಿ ಪಾತ್ರವನ್ನು ಹಿಡಿಯಲು ವೇಷಭೂಷಣ ಇಲ್ಲದ ಮಹನೀಯರು ರಂಗದ ಮೇಲೆ ಬರುವುದು ಏಕೆ? ಇರಲಿ  ಎಲ್ಲಾ ಕಲಾವಿದರಿಗೂ ಉತ್ತಮ ಮೇಕಪ್, ವಸ್ತಾೃಲಂಕಾರ, ಲೈಟಿಂಗ್, ರಂಗಸಜ್ಜಿಕೆಗಳನ್ನು ಒದಗಿಸುವ ಅರಸೀಕೆರೆಯ ಬಂದೂರು ಸೀನ್ಸ್  ಮಾಲೀಕರಿಗೆ ನಾವು ಹ್ಯಾಟ್ಸ್ ಪ್ ಹೇಳಲೇಬೇಕು. ನಾಟಕದಲ್ಲಿ ಎಲ್ಲಾ ಕಲಾವಿದರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಾರಾದರೂ ಕೆಲವು ಪಾತ್ರಗಳನ್ನು ಮರೆಯುವಂತಿಲ್ಲ. ೨ನೇ ದೇವಿಯಾಗಿ ಭಜಿ೯ ಹಿಡಿದು ರಕ್ಕಸರೊಂದಿಗೆ ಯುದ್ಧ ಮಾಡುವ ಗೋವಿಂದೇಗೌಡರು, ಹಾಡಿನಲ್ಲಿ ಗಮನ ಸೆಳೆಯುವ ಬ್ರಹ್ಮ ಪಾತ್ರದಾರಿ ಪುಟ್ಟಸ್ವಾಮಿ, ದ್ವಂದ್ವರ್ಥ ಮಾತುಗಳಲ್ಲಿ ಕಚಗುಳಿ ಇಡುವ ರಂಬೇಶನ ಮಿತ್ರ ವ್ಯಾಘೃಸಿಂಹನಾಗಿ ಪುನಿತಾಚಾರ್ ಮಾತಿನಲ್ಲಿ, ಸೂತ್ರದಾರಿ ಪಾತ್ರದಾರಿ ರಮೇಶ್ ಹಾಡಿನಲ್ಲಿ ಉಳಿದುಕೊಳ್ಳುತ್ತಾರೆ. ಶುಕ್ಲಾಚಾರಿ ಪಾತ್ರದಲ್ಲಿ ಹೇಮೇಶ್ ಗೌರಿಕೊಪ್ಪಲು ಸ್ಪಷ್ಟ ಮಾತುಗಳಲ್ಲಿ ನೀಟಾಗಿ ಅಭಿನಯಿಸಿದರು. ಇನ್ನೂ ಅಸುರರಾಗಿ ಆರ್ಭಟಿಸುವ ಚಂದ್ರು ಸಿಗರನಹಳ್ಳಿ, ಸ್ವಾಮಿ ಗವೇನಹಳ್ಳಿ, ಟಿ.ಆರ್.ಪ್ರಕಾಶ್ ತಟ್ಟೇಕೆರೆ, ಯೋಗೇಶಾಚಾರ್, ಕೃಷ್ಣೇಗೌಡ, ಪರಮೇಶ್, ಮಂಜುನಾಥ್ ಮದ್ದೂರು, ಬಸವರಾಜು, ಪ್ರವೀಣ ಮತ್ತು ಅರವಿಂದ್ ಕೋರವಂಗಲ ಇವರುಗಳಿಗೆ ಹಾರ‍್ಮೋನಿಯಂ ಮಾಸ್ಟರ್ ಎ.ಸಿ.ರಾಜು ಹಾಡು ಕಲಿಸಿ ಆರ್ಭಟಿಸಿ ನುಗ್ಗುವ ಗೂಳಿಗಳ ರಭಸಕ್ಕೆ ಮದ್ಯೆ ಗೊದಮ ಕೊಟ್ಟಿದ್ದಾರೆ. ಉಳಿದಂತೆ ೧ನೇ ದೇವಿ ವೇದಾವತಿ, ಈಶ್ವರ:ದೇವರಾಜು ಕೋರವಂಗಲ, ವಿಷ್ಣು ಆನಂದ್ ಆಲೂರು, ದೇವೇಂದ್ರನ  ಮಂತ್ರಿ ತಿಮ್ಮಪ್ಪ, ವರುಣ:ರಂಗಸ್ವಾಮಿ, ಯಮ:ಹರೀಶ್ ಕಾಮಸಮುದ್ರ, ಋದಗ್ರ:ಮಂಜುನಾಥ್ ಉದ್ದೂರು ಪೋಷಕ ಪಾತ್ರ ಮತ್ತು ಪಾತ್ರದಾರಿಗಳು. ಕೆಲವು ಸ್ಟೂಡೆಂಟ್ಸ್ ಪಿ.ಧನ್ಯ ಪಾಳ್ಯ (ಬಾಲಬ್ರಹ್ಮ), ಖುಷಿ (ಬಾಲ ಈಶ್ವರ), ನಯನ (ಬಾಲವಿಷ್ಣು), ನಾಗಕನ್ಯೆ ಸಖಿಯರು ಖುಷಿ ಮತ್ತು ಮೇಘನಾ ಕೋರವಂಗಲ, ಬಾಲಕರೀಶ್ ಜಯವರ್ಧನ್ ಉದ್ದೂರು ಮತ್ತು ಬಾಲಮಹಿಷ ಪಿ.ತೇಜಸ್ ಪಾಳ್ಯ ನಟಿಸಿ ಸದ್ಯ ರಂಗದಲ್ಲಿ ಪಾಸಾಗಿದ್ದಾರೆ.

——————————————————–

Leave a Reply

Back To Top