( ಶಂಕರಾನಂದ ಹೆಬ್ಬಾಳ ಅವರ ಗಜಲ್ ನ ಮಿಸ್ರಾ )

ಸುರಿವ ಸೋನೆಯಲಿ ಹನಿಯಾಗಿ ನಿಲ್ಲಬೇಕೆಂದೆ ನೀ ಬರಲಿಲ್ಲ
ಹರಿವ ನದಿಯಲಿ ದೋಣಿಯಾಗಿ ತೇಲಬೇಕೆಂದೆ ನೀ ಬರಲಿಲ್ಲ

ಉಡುವ ಸೀರೆಗೆ ನೂಲಿನ ಚಿತ್ತಾರವಾಗಿ ಜೊತೆಯಾಗುವ ಆಸೆ
ಸುಡುವ ಬಿಸಿಲಿಗೆ ಹೊಂಗೆಯ ತಂಪಾಗಿ ಬರಬೇಕೆಂದೆ ನೀ ಬರಲಿಲ್ಲ

ಕಾಡುವ ಮನದ ನೋವಾ ತಿಳಿಸಲು ನಾ ಕವಿಯಾಗಬೇಕೇ
ಮೂಕ ವೇದನೆಯ ಕಣ್ಣೀರ ಹನಿ ನೋಡಲು ಇರಬೇಕೆಂದೆ ನೀ ಬರಲಿಲ್ಲ

ಜಾರಿ ಬಿದ್ದು ನೆತ್ತರ ಹರಿಸಿ ಸೂರ ಹುಡುಕುತಿರುವೆ ಜಾಣೆ
ಊರ ಜಾತ್ರೆಯ ತೇರಲಿ ಸಖಿಯ ನೋಡಬೇಕೆಂದೆ ನೀ ಬರಲಿಲ್ಲ

ಹಗ್ಗ ಜಗ್ಗಾಟದಂತೆ ಕಂಸನ ಕನಸು ಡೋಲಾಯಮಾನವಾಗಿದೆ
ಮೊಗ್ಗಿನಂತಿರುವ ರತಿಯ ಕೆನ್ನೆಗೆ ರವಿಕಿರಣವಾಗಿ ತಾಗಬೇಕೆಂದೆ ನೀ ಬರಲಿಲ್ಲ

Leave a Reply

Back To Top