ಸತೀಶ್ ಬಿಳಿಯೂರು ಅವರ ಕವಿತೆ-ವಾಸ್ತವ ಸತ್ಯ

ನೆಲೆಯನ್ನು ಕಂಡುಕೊಳ್ಳಲು ಇಂದು
ನೆಲವನ್ನು ಅಗೆದು ಕಲ್ಲು ಹಾಸಿ
ಮನೆಯ ಕಟ್ಟಿದರೆ ಮೆಚ್ಚದವರು
ನೆಮ್ಮದಿಯ ಕೊರೆಯಲೆಂದು ತಲೆಗೆ
ವಾಸ್ತು ದೋಷವೆಂಬ ಹುಳ ಬಿಟ್ಟರು

ಗ್ರಹಚಾರವೆ ಇರದ ಮನೆಗೆ
ಮನೆ ಮಂದಿಗೆ ಗ್ರಹ ದೋಷವೆಂದರು
ಸಂತಸದ ಬಾಗಿಲ ತೆರೆಯುವಷ್ಟರಲಿ
ಅನುಮಾನದ ಕಿಂಡಿ ಕೊರೆದರು
ಎಲ್ಲವನ್ನು ಲಾಭಕ್ಕಾಗಿ ಬಳಸಿದರು

ಜಾಗ ಸರಿಯಿಲ್ಲ ಮಕ್ಕಳ ಭಾಗ್ಯವಿಲ್ಲ
ಪ್ರೇತದ ಬಾಧೆ ದೈವದ ನೆಲವೆಂದು
ಹಣಕ್ಕಾಗಿ ಸುಳ್ಳಿನ ಕಂತೆ ಹೆಣೆದರು
ಮನೆ, ಮನಸಿನ ಮೂಲೆ ಒಡೆದರು
ಜೀವನ ಬೀದಿಪಾಲು ಮಾಡಿದರು

ಬೇರೆಯವರ ಮಾತು ನಂಬಬೇಕು ಮನುಜ
ಮೋಸ ಹೋಗಿ ಮೂರ್ಖರಾಗುವವರೆಗಲ್ಲ
ಯಾರು ಇಲ್ಲಿ ನಮ್ಮ ಏಳಿಗೆ ಬಯಸಲ್ಲ
ತನ್ನ ಒಳಿತು ಮಾತ್ರ ಬಯಸುವ ಕಾಲವಿದು
ಎಚ್ಚರನಾಗು ಯಾರೂ ಇಲ್ಲಿ ನಮ್ಮವರಲ್ಲ


Leave a Reply

Back To Top