ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಂಡ ಸೋಲುಗಳನು ಬದಿಗಿಟ್ಟುಬಿಡು ಬದುಕುವುದು ಇನ್ನೂ ಇದೆ
ಅನುಭವಗಳ ಸತ್ವವ ಅರಿತುಬಿಡು ಅನುಭಾವಿಸುವುದು ಇನ್ನೂ ಇದೆ

ಗಿರಿ ಕಂದರಗಳ ಮೇರೆಗಳ ದಾಟಿದರಷ್ಟೇ ನದಿ ಸಾಗರಗಳ ಮಿಲನ
ಎಡರು ತೊಡರುಗಳ ಕಹಿಯ ಸರಿಸಿಬಿಡು ಎದುರಿಸುವುದು ಇನ್ನೂ ಇದೆ

ಇತಿಹಾಸ ಸೃಜಿಸುವ ಶಾಹಿಗೂ ಗೊತ್ತಿದೆ ಸವೆದ ಪಥಗಳ ಪಾಡೇನೆಂದು
ಹೆಜ್ಜೆಗಳ ಕಹಿ ಗುರುತುಗಳನು ಒರೆಸಿಬಿಡು ಹಸನಾಗುವುದು ಇನ್ನೂ ಇದೆ

ಬಿಸಿಲ ಝಳದಿ ಬೆಂದರಷ್ಟೇ ಅರಿವಾಗುವುದು ಜೀವನದ ಒಳ ತತ್ವಗಳು
ಕಂಬನಿ ಇತ್ತ ತುಮುಲಗಳ ಜಾಡಿಸಿಬಿಡು ಸಾರ್ಥಕ್ಯವಾಗುವುದು ಇನ್ನೂ ಇದೆ

ಭರವಸೆಯ ನಯನಗಳಲಿ ಚೊಕ್ಕವಾದ ಕನಸುಗಳಲಿದೆ ಬಾಳ್ವೆಯ ವಿಜಯ
ನಿರಾಸೆ ಕಲ್ಪಿಸಿದ ಹತಾಶೆಯ ತೊರೆದುಬಿಡು ಪಕ್ವವಾಗುವುದು ಇನ್ನೂ ಇದೆ.


ದಿಟ್ಟ ನಿಲುವುಗಳನು ತೆಗೆದುಕೊಂಡುಬಿಡು ಸಾಧಿಸುವುದು ಇನ್ನೂ ಇದೆ
ಆರ್ಜಿಸಿದುದು ಅಲ್ಪವೆಂದು ತಿಳಿದುಬಿಡು ಶೋಧಿಸುವುದು ಇನ್ನೂ ಇದೆ

ತಮದಲಿ ತಾಳ್ಮೆಗೆಡದಿರು ಕಾಯಬೇಕು ಉದಿಸಲು ಭರವಸೆಯ ಬೆಳಕು
ಶ್ರಮದ ಗೆಲುವು ಶಾಶ್ವತ ಅರ್ಥೈಸಿಬಿಡು ಸಾಕ್ಷಿಯಾಗುವುದು ಇನ್ನೂ ಇದೆ

ಮಾಡಲೇನಿದೆ ಕೆಲಸ ಅನಗತ್ಯ ಗತದ ನೆನಪಿಗೆ ಬಿಡುವಿರದ ಇಂದಿನಲಿ
ಮರೆತು ಮುಂದಡಿಯಿಡಲು ಕಲಿತುಬಿಡು ಮೆರೆಯುವುದು ಇನ್ನೂ ಇದೆ

ಅಭೀಪ್ಸೆಯ ಬೆನ್ನೇರಿ ಅವಿರತ ಯತ್ನಿಸಲು ಕೈಗೂಡದ ಕನಸುಗಳುಂಟೇ
ಮನದ ನೋವಿಗೆ ಬಾಗಿದ ಬೆನ್ನನು ತಟ್ಟಿಬಿಡು ಗೆಲ್ಲುವುದು ಇನ್ನೂ ಇದೆ

ಛಲದಿಂದ ಪಡೆದ ವಿಜಯದ ಹರುಷಕೆ ನಯನಗಳ ಕಾಂತಿ ಹೆಚ್ಚುವುದು
ಹುಚ್ಚು ಆಸೆಗೆ ತುಸು ಬಣ್ಣ ಹಚ್ಚಿಬಿಡು ಸಾಕಾರಗೊಳಿಸುವುದು ಇನ್ನೂ ಇದೆ.

———————–

About The Author

Leave a Reply

You cannot copy content of this page

Scroll to Top