ಪ್ರಸ್ತುತ

ಮಾತಾಡುವ ಮರಗಳು

Tree,fields,clouds,sky

ಮೋಹನ್ ಗೌಡ ಹೆಗ್ರೆ

ಬೆಳವಣಿಗೆ ಮತ್ತು ಬದಲಾವಣೆ ಪ್ರಕೃತಿ ನಿಯಮಗಳಲ್ಲೊಂದು. ಈ ಬೆಳವಣಿಗೆ ಮತ್ತು ಬದಲಾವಣೆಯನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ ಕಂಡುಕೊಳ್ಳಬಹುದಾಗಿದೆ. ಈ ಪ್ರಕ್ರಿಯೆ ಕೇವಲ ಮನುಷ್ಯನಿಗೆ ಮಾತ್ರ ಸಂಬಂಧಿಸಿದ್ದಲ್ಲ. ಮನುಷ್ಯನೊಡಗೂಡಿ ಬದುಕುವ ಚರಾಚರ ಜೀವರಾಶಿಗಳು ಬೆಳವಣಿಗೆ ಮತ್ತು ಬದಲಾವಣೆಯ ಪ್ರಕ್ರಿಯೆಯಲ್ಲಿ ಒಳಗೊಳ್ಳಲೇಬೇಕು. ಪಿಳಿಪಿಳಿ ಕಣ್ಣುಬಿಟ್ಟು ತಾಯಿಯ ತೊಡೆ ಮೇಲೆ ಮಲಗಿದ ಮಗು ಬೆಳವಣಿಗೆಯಾಗಿ, ಮಗುವಿನ ತೊದಲು ಮಾತಿಗೆ ಕೈತಟ್ಟಿ ಕುಣಿದ ಮುದಿ ಜೀವಗಳು ಮಗು ಬೆಳವಣಿಗೆಯಾದ ನಂತರದಲ್ಲಿ ಅಂತಹದೇ ಮಗ್ದ ಪ್ರೇಮದ ನುಡಿಗಳ ಕೇಳಿರಬಹುದು ಅಥವಾ ಕೇಳಲಾಗದ ಮಾತು ವರ್ತನೆಗಳ ನಡುವೆ ಅನಿವಾರ್ಯವಾಗುವಷ್ಟು ಹೊಂದಾಣಿಕೆಯನ್ನು ಅನುಸರಿಸಿಕೊಳ್ಳಲೂಬಹುದು. ಹಕ್ಕಿಯ ಕೊಕ್ಕಿನಲಿ ಹೆಕ್ಕಿ ತಂದ ಹಣ್ಣೊಂದು ಜಾರಿಬಿದ್ದೊ, ಅದು ತಿಂದುಬಿಟ್ಟದ್ದೋ, ಹಿಕ್ಕೆಯಿಂದಲೋ ಇಲ್ಲವೇ ಬೇಕೆಂದೇ ತಂದು ಹಿತ್ತಲಿನಲ್ಲಿ ನೆಟ್ಟ ಗಿಡಗಳು ಬೆಳೆಯುತ್ತಾ ಮನುಷ್ಯನೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾ ಮನುಷ್ಯ ಸಂಬಂಧದಂತೆ ಭಾಸವಾಗಬಹುದಾದ ಸಂದರ್ಭಗಳು ನನ್ನ ಪಾಲಿನ ಅವಿನಾಭಾವಿ ಅನುಭವವಾಗಿ ನನ್ನ ಆವರಿಸಿಕೊಂಡ ಕ್ಷಣವೇ ರೋಮಾಂಚನಕಾರಿಯಾದಂತದ್ದು.

ಅಂದು ಮನೆ ಹಿತ್ತಲಿನಲ್ಲಿ ಚಿನ್ನಿದಾಂಡು ( ಹಾಣೆ – ಗೆಂಡೆ ) ಪ್ಲಾಸ್ಟಿಕ್ ಬಾಲ್, ಕ್ರಿಕೆಟ್, ಒಡ್ಲಮುಂಡೆ, ಗೇರುಬೀಜದ ಆಟ, ಗೋಲಿ, ಕಣ್ಣಮುಚ್ಚಾಲೆ, ಶಾಲೆ ಆಟ, ಅಡುಗೆಮನೆ ಆಟ ಮುಂತಾದವುಗಳೆಲ್ಲ ಸಲೀಸಾಗಿ ಆಡುವಷ್ಟು ಅವಕಾಶಗಳಿದ್ದವು. ಸಾವಕಾಶವಾಗಿ ಆ ಅವಕಾಶದ ಸ್ಥಳಗಳಲ್ಲಿ ಅಕ್ಕ ನೆಟ್ಟ ತೆಂಗು, ಅಡಿಕೆ ಸಸಿಗಳು ಬೆಳೆದು ಈಗ ಎತ್ತರವಾಗಿ ಆಡಿದ ಬಾಲ್ಯದ ಆಟಗಳಿಗೆ ಏಣಿಹಾಕಿದಂತೆ ಖುಷಿಗೊಳಿಸುತಿವೆ. ಮುಂದೆ ಆ ಜಾಗ ಖಾಲಿಯೇ ಇದ್ದರೂ ಅಲ್ಲಿ ಟಿ.ವಿ, ಮೊಬೈಲ್‌ ಗಳ ದಾಸರಾದ ಮಕ್ಕಳು ಆ ಜಾಗವ ಕಿಂಚಿತ್ತೂ ತುಂಬಲಾರರೆಂಬ ಮುನ್ಸೂಚನೆಯಲ್ಲೋ ಅಥವಾ ಶ್ರಮೀಕ ಬದುಕಿನ ಅಲ್ಪ ಗಳಿಕೆಗೋ, ಆತ್ಮಸಂತೃಪ್ತಿಗೋ ಅಕ್ಕ ಹಿತ್ತಲ ತುಂಬಾ ಅಡಿಕೆ, ಬಾಳೆ, ತೆಂಗಿನ ಸಸಿಗಳ ನೆಟ್ಟಿದ್ದಿರಬೇಕು. ಇವುಗಳ ಹೊರತಾಗಿ ನನ್ನ ವಂಶದವರ ಕಂಡ ಆ ಹಿತ್ತಲಲ್ಲಿ ಅಂದು ಇದ್ದ ಮೂರು ಮರಗಳೊಂದಿಗೆ ಮಾತಾಡುವ ಅವಕಾಶ ನನ್ನದೀಗ…

ಬುಡದಿಂದ ಮರವನ್ನು ಏರುವುದು ವಾಡಿಕೆ. ಆದರೆ ತನ್ನ ಕೊಂಬೆಯನ್ನು ತಲೆಕೆಳಗೆ ಇಳಿಬಿಟ್ಟ ಹಿತ್ತಲಿನ ಗೇರು ಮರವನ್ನು ಏರಿ ಅದರಲ್ಲಿರುವ ಉದ್ದುದ್ದದ ಗೇರು ಹಣ್ಣು ಕೊಯ್ದು ಅದನ್ನು ಸರಿಯಾಗಿ ಕತ್ತರಿಸಿ ಉಪ್ಪು ಹಾಕಿ ತಿನ್ನುವ ಮಜವೇ ಬೇರೆ. ದಿನಕ್ಕೆ ಏನಿಲ್ಲವೆಂದರೂ ಮೂರು ನಾಲ್ಕು ಬಾರಿಯಾದರೂ ಏರುವುದು ದಿನಚರಿಯಂತೆ. ಕೆಳಗಡೆ ನಿಂತಾಗ ಕಾಣುವ ಹಣ್ಣುಗಳು ಮರವೇರಿದ ನಂತರ ಅಡಗಿಕೊಂಡಂತೆ ಅನಿಸುತ್ತಿತ್ತು.
ಕೂಲಿಗೆ ಹೋದ ನನ್ನವ್ವ ಮನೆಗೆ ಬಂದಾಗ ನನ್ನನ್ನು ಕರೆಯಬೇಕೆಂದರೆ ಮೊದಲು ಮರದಲ್ಲಿ ನಾನು ಇರುವೆನೇ ಎಂಬುದನ್ನು ಖಾತ್ರಿಪಡಿಸಿಕೊಂಡೇ, ನಮ್ಮೂರ ಬಯಲ ಕಡೆ ಮುಖಮಾಡಿ ಕರೆಯುತ್ತಿದ್ದರೆ, ನಮ್ಮೂರ ಹಳ್ಳದಲ್ಲಿ ಸಟ್ಲೆಯೋ, ಕಂಯ್ ಜಬ್ಬೋ, ಏಡಿಯೋ ಹಿಡಿಯುತ್ತಿರುವ ನಾವುಗಳು ಒಂದೇ ಕೂಗಿಗೆ ಉದ್ದುದ್ದದ ದಾಪು ಹಾಕಿ ಮನೆ ಸೇರುತ್ತಿದ್ದದ್ದು ಮಜದ ಸಂಗತಿ. ಈ ಮರ ಅಕ್ಷಯಪಾತ್ರೆಯಂತೆ ಎಂದರೆ ತಪ್ಪಾಗದೇನೋ, ಏಕೆಂದರೆ ದಿನಕ್ಕೆ ಮೂರ್ನಾಲ್ಕು ಸಲ ಮರವೇರಿ ಹಣ್ಣು ಕೊಯ್ಯುವುದು, ಕಲ್ಲಿನಿಂದ ಹೊಡೆದು ಹಣ್ಣು ಬೀಳಿಸುವುದು, ಕೊಕ್ಕೆಯಿಂದ ಕೊಯ್ದರೂ ಮತ್ತೆ ಗೇರುಬೀಜಕ್ಕಾಗಿ ಬೆಳ್ಳಂಬೆಳಗ್ಗೆ ಮರದ ಹತ್ತಿರ ಹುಡುಕಾಟ ನಡೆಯುವುದು ಕೂಡಾ ಸ್ಪರ್ದೆಯಂತೆ ನಡೆಯುತಲೇ ಇತ್ತು‌. ಕನ್ನಡ ( ಪ್ರಾಥಮಿಕ) ಶಾಲೆ ಮತ್ತು ಹೈಸ್ಕೂಲ್ ಗಳಲ್ಲಿ ಒಂದಕ್ಕೆ ಮತ್ತು ಊಟಕ್ಕೆ ಬಿಟ್ಟಾಗ ಶಾಲೆಯ ಹತ್ತಿರವಿರುವ ಇಬ್ಬರ ಬೇಣದಲ್ಲಿ ಗೇರು ಬೀಜವನ್ನು ಕಳ್ಳತನ ಮಾಡಿ ಶಾಲೆ ಗಂಟೆ ಬಾರಿಸಿದರೆ ಅರೆಬರೆ ಸುಲಿದ ಬೀವವನ್ನೂ ಚಡ್ಡಿಕಿಸೆಗೆ ಹಾಕಿಕೊಂಡು ಗೇರುಬೀಜದ ಸೋನೆಯಿಂದ ಸದಾ ತೊಡೆಮೇಲೆ ಸುಟ್ಟಗಾಯಗಳು ಇರುತ್ತಿದ್ದದ್ದೂ ನೆನಪು ಮಾತ್ರ. ಈ ಗೇರು ಮರದ ನಂಟು ನನ್ನೊಬ್ಬನದಲ್ಲ. ಓಣಿಯ, ಶಾಲೆಯ ಎಲ್ಲಾ ವಾನರ ಸೇನೆಯ ಸ್ನೇಹಿತರ ಖುಷಿಯೂ ಕೂಡಾ. ಇಂದಿಗೂ ಎಂದಿಗೂ ದಾರಿ ಮದ್ಯ ಆದರೂ ಗೇರು ಗಿಡಗಳು ಹಣ್ಣು ತುಂಬಿಕೊಂಡರೆ ಹಾಗೇ ನೆನಪುಗಳ ಹಸಿಗೊಳಿಸಿ ನಗಿಸಿ ಕಳಿಸುತ್ತವೆ.

ರಸ್ತೆಯಂಚಿನ ಪಾಗರದ ಮಧ್ಯದಿಂದ ಹುಟ್ಟಿ ಬೆಳೆದು ನಿಂತ ಹಿರಿಯ ಹಲಸಿನ ಮರಕ್ಕೆ ಮೈತುಂಬಾ ಅಂಬಲಿಯ ಹಣ್ಣುಗಳು. ಸುಮಾರು ೨ ಮೀಟರ್ ಗಿಂತ ಹೆಚ್ಚಿನ ಘೇರಿ ಇರುವ ಈ ಮರವನ್ನು ಏರಲು ಕಷ್ಟ. ಕಷ್ಟಪಟ್ಟು ಏರಿದರೂ ಸುಲಭವಾಗಿ ಹಣ್ಣುಗಳನ್ನು ಕೊಯ್ಯಲಾಗದು. ಜೊತೆಗೆ ವಿದ್ಯೂತ್ ತಂತಿಗಳ ಭಯ. ಈ ಕಾರಣಕ್ಕಾಗಿಯೇ ಹಲಸಿನ ಮರವನ್ನು ಯಾರೂ ಗುತ್ತಿಗೆಯನ್ನೇ ಪಡೆಯುತ್ತಿರಲಿಲ್ಲ. ಹಲಸಿನ ಮರದಲ್ಲಿ ಹಣ್ಣು ಆಯಿತೆಂದರೆ ಓಣಿ ತುಂಬಾ ಪರಿಮಳ. ಅಷ್ಟೇ ಅಲ್ಲ ಮರದಲ್ಲೇ ಹಣ್ಣಾಗಿ ಬೀಳುತ್ತಿದ್ದುದರಿಂದ ಓಣಿಯ ಬಹುತೇಕರ ದನಕರುಗಳು ರಾತ್ರಿ ಅಲ್ಲಿಯೇ ಠಿಕಾಣಿ ಹೂಡುತ್ತಿದ್ದವು. ಮನೆಯಲ್ಲಿ ನಾವಿರುವಾಗ ಹಣ್ಣು ಬಿದ್ದರೆ ಗೋಣಿಚೀಲವನ್ನು ತೆಗೆದುಕೊಂಡು ಹೋಗಿ, ಕೆಮ್ಮಣ್ಣಿನ ರಸ್ತೆಯಲ್ಲಿ ಹಾಸಿ, ಬಿರಿದು ಬಿದ್ದ ಹಣ್ಣನ್ನ ತುಂಬಿ ಅಕ್ಕ ನಾನು ಅವ್ವೆ ಅಂಗಳದಲ್ಲಿ ಕುಳಿತು ಹಲಸಿನ ಹಣ್ಣು ತಿನ್ನುವಾಗ ಓಣಿಯಲ್ಲಿ ಯಾರಿಗಾದರೂ ತಿರುಗಾಡಿದರೂ ಅವರನ್ನೂ ಕರೆದು ಎಲ್ಲಾ ಸೇರಿ ಹಣ್ಣು ತಿಂದು ಸಣ್ಣ ಪಾರ್ಟಿಯೇ ಆದಂತಾಗುತ್ತಿತ್ತು. ಅಷ್ಟೇ ಅಲ್ಲ ಹಣ್ಣು ತಿಂದು ಅದರ ಬೀಜವನ್ನು ಚೆನ್ನಾಗಿ ತೊಳೆದು ಒಣಗಿಸಿ, ಶಾಲಾ ವಾರ್ಷಿಕೋತ್ಸವಕ್ಕೆ, ಪಕ್ಕದೂರಿನ ನಾಟಕ, ಯಕ್ಷಗಾನಕ್ಕೂ ಮತ್ತು ಊರ ಒಂದೆರಡು ಮನೆಗಳಲ್ಲಿ ಮಾತ್ರ ಟಿವಿ ಇರುವ ಆ ದಿನಗಳಲ್ಲಿ ಊರಲ್ಲಿ ಕೇಲವು ಧಾರ್ಮಿಕ ಕಾರ್ಯ ಹಬ್ಬದ ದಿನಗಳಲ್ಲಿ ಯಕ್ಷಗಾನ ಗಳಂತೆ ಟಿವಿ ತೋರಿಸುವುದು ಕೂಡ ನಡೆಯುತ್ತಿತ್ತು. ಚಂದದ ಸಿನಿಮಾದ ಕ್ಯಾಸೆಟ್ಟುಗಳನ್ನು ಹಾಕುತ್ತಿದ್ದರು ಅದನ್ನು ನೋಡಲು ಹೋಗುವಾಗ ಬಿಸಿ ಕೆಂಡ ಬೂದಿಯಲಿ ಸುಟ್ಟ ಹಲಸಿನ ಬ್ಯಾಳೆ ( ಬೀಜ ) ಯನ್ನೇ ಸ್ನ್ಯಾಕ್ಸ್ ಗಳಂತೆ ತಿನ್ನುವ ರುಚಿಯೇ ಬೇರೆ. ಮಳೆಗಾಲದಲ್ಲಂತೂ ಇದರ ರುಚಿಯೇ ಇಮ್ಮಡಿ. ಇಂದು ಆ ಮರವಿಲ್ಲ ಆದರೆ ಹಲಸಿನ ಮರದ ಬುಡದ ಚಕ್ಕೆಯನ್ನು ಪೂಜಾಕಾರ್ಯಕ್ಕೆ ಯಾರಾದರೂ ಒಡೆದು ಒಯ್ಯಲು ಬರುತ್ತಿದ್ದು ಅವರು ಮರದ ಹಣ್ಣಿನ ಗುಣಗಾನ ಮಾಡಿದ ನಂತರ ಅದರೊಂದಿಗಿನ ಅವಿನಾಭಾವತೆ ಕಣ್ತೆರೆದುಕೊಳ್ಳುತ್ತದೆ.

ಈ ಎರಡು ಮರಗಳ ಆಚೆ ನಿಂತ ಹಿತ್ತಲಿನ ಶೀರ್ಷಿಕೆಯಂತಿರುವ ಮರ ಮುರುಗಲ ಮರ. ಕೇಲವು ಕಡೆ ಕೋಕಂ ಮರ ಎನ್ನುವ ಇದರ ಸಸ್ಯ ವೈಜ್ಞಾನಿಕ ಹೆಸರು ಗಾರ್ಸಿನಿಯಾ ಇಂಡಿಕಾ. ಅತ್ಯಂತ ಪ್ರೀತಿ ಮತ್ತು ವಿಶ್ವಾಶದಾಯಕವಾಗಿದೆ. ಹಿತ್ತಲಿನ ಎಲ್ಲಾ ಮರಗಳಿಗಿಂತ ಅತಿ ಎತ್ತರಕ್ಕೆ ತಲೆಯೆತ್ತಿ ನಿಂತ ಈ ಮರದ ವಿಶೇಷವೆಂದರೆ ಎಲ್ಲಾ ಮುರುಗಲ ಮರದಂತೆ ಇದು ಕಡಿಮೆ ಎತ್ತರ ಇದ್ದು, ಕೊಂಬೆಗಳನ್ನು ಅಗಲವಾಗಿ ಹರಡಿಕೊಳ್ಳದೇ ತೀರಾ ಎತ್ತರಕ್ಕೆ ಏರಿ ನಿಂತಿತ್ತು. ಮುರುಗಲು ಹಣ್ಣು ಕಾಯಿಗಳನ್ನು ಸೂಕ್ತ ಸಮಯದಲ್ಲಿ ಕೊಕ್ಕೆಯಿಂದ ಬಡಿದು ಅದರ ಕಾಯಿ ಹಣ್ಣುಗಳಿಂದ ಹುಳಿಸೊಪ್ಪು ( ಹುಳಿ ) ತಯಾರಿಸಿ ಅದನ್ನು ಮೀನು ಸಾರಿಗೆ ಬಳಸುವುದು ವಾಡಿಕೆ. ಆದರೆ ಆಯುಷ್ಯದಲ್ಲಿಯೇ ತನ್ನ ಮೈಗೆ ಕೊಕ್ಕೆಯನ್ನು ತಾಗಿಸಿಕೊಳ್ಳದ ಈ ಮರ ನನಗಂತೂ ಹೆಚ್ಚು ವಿಶೇಷವೇ ಸರಿ. ಆಟ ಆಡಿದ ನಂತರ ಎತ್ತರದಲ್ಲಿ ಹಣ್ಣು ಬಿಟ್ಟಿರುವ ಮರಕ್ಕೆ ನಾವೆಲ್ಲ ಕಲ್ಲು ಹೊಡೆದು ಹಣ್ಣು ಬಿಳಿಸಿ ಅದರ ಪಾನಕ ಮಾಡಿ ಕುಡಿಯುತ್ತಿದ್ದದ್ದು ಇವತ್ತಿನ ಯಾವ ನಿರುಪಯುಕ್ತ ಕೋಲ್ಡ್ ಡ್ರಿಂಕ್ಸ್ ಗೂ ಸಾಟಿಯಾಗಲಾರದು. ಇನ್ನೊಂದು ವಿಶೇಷವೇನೆಂದರೆ ಶಾಲಾ ಸಹಪಠ್ಯ ಚಟುವಟಿಕೆ,ಪ್ರತಿಭಾಕಾರಂಜಿ ಕಾರ್ಯಕ್ರಮಗಳಿಗೆ ಹೋಗುವ ಮುನ್ನಾದಿನಗಳಲ್ಲಿ ಆ ಸಮಯದಲ್ಲಿ ಮುರುಗಲ ಹಣ್ಣು ಬಿಡುವ ಸೀಜನ್ ಆಗಿದ್ದರೆ ಪ್ರತಿ ಸ್ಪರ್ಧೆಯ ಹೆಸರು ಹೇಳಿ ಮೂರು ಕಲ್ಲುಗಳನ್ನು ಆಯ್ದು ಯಾವ ಕಲ್ಲಿಗೆ ಹಣ್ಣು ಬೀಳುತ್ತದೆಯೋ ಆ ಕಲ್ಲಿನ ಸ್ಥಾನ ಅಂದರೆ ಮೊದಲನೇ ಕಲ್ಲಿಗೆ ಹಣ್ಣು ಬಿದ್ದರೆ ಪ್ರಥಮ, ಎರಡನೇ ಕಲ್ಲಿಗಾದರೆ ದ್ವಿತಿಯ, ಮೂರನೆಯದಕ್ಕೆ ಆದರೆ ತೃತೀಯ, ಹಾಗೇ ಈ ಮೂರು ಕಲ್ಲಿಗೂ ಹಣ್ಣು ಬೀಳದಿದ್ದರೂ ನಿರಾಶೆಯಾಗುತಿರಲಿಲ್ಲ ಯಾಕೆಂದರೆ ಈ ಆಟ ಮೂರು ಕಲ್ಲುಗಳಿಂದ ಹಣ್ಣು ಕಾಯಿ ಬೀಳೋವರೆಗೂ ಪುನರಾವರ್ತನೆ ಆಗುತ್ತಲೇ ಇತ್ತು‌. ಇದು ಬಹುಪಾಲು ಸತ್ಯವೇ ಆಗುತ್ತಿತ್ತು. ಎಸೆಸೆಲ್ಸಿ ಫಲಿತಾಂಶದ ದಿನ ಶಾಲೆಗೆ ಪ್ರಥಮ ಸ್ಥಾನ ಪಡೆದು ಆ ಮರದ ಫಲಿತಾಂಶದ ಕುರಿತಾದ ಭವಿಷ್ಯ ಸತ್ಯವಾದಾಗ ಮರವನ್ನು ಅಪ್ಪಿ ಮುತ್ತಿಟ್ಟು ಅದರ ಬುಡದಲ್ಲಿ ಮೈಸೂರುಪಾಕು ಇಟ್ಟು “ನಿನಗೆ ಮೊದಲು ಕೊಟ್ಟಿದ್ದು ಹಾ ” ಅಂತ ಹೇಳಿ ಬಂದದ್ದು ನೆನಪಾಗುವಾಗ ಈಗ ಕೆನ್ನೆಗಳು ಅರಳುತ್ತವೆ.

ಆದರೆ ನಿಷ್ಕಪಟ ಈ ಜ್ಯೋತಿಷಿ ಮರ ವಯಸ್ಸಾಗಿ ನಿಂತಾಗ ಜೋರಾದ ಮಳೆಗೆ ಗಾಳಿಗೆ ತನ್ನ ಎತ್ತರಕ್ಕೆ ತೂರಾಡುವುದು ಭಯಾನಕವಾಗುತ್ತಿತ್ತು. ಮರ ಬಿದ್ದರೆ ವಿದ್ಯುತ್ ತಂತಿ , ಕಂಬಗಳಿಗೆ , ಪಕ್ಕದ ಮನೆಯ ಕೊಟ್ಟಿಗೆಗೆ, ಹಾನಿಯಾಗುವ ಸಂಭವವು ಹೆಚ್ಚಾಗಿರುವ ಕಾರಣಕ್ಕೆ ಅದನ್ನು ಕಡಿಯುವಂತೆ ಹೆಚ್ವಿನ ಒತ್ತಡಗಳು ಬಹುದಿನದಿಂದ ಇದ್ದರೂ ಆ ಮರದೊಂದಿಗಿನ ಆಪ್ತತೆಯಿಂದ ಅದನ್ನು ಮುಂದೂಡುತ್ತಲೇ ಬರಲಾಗುತ್ತಿತ್ತು. ನನ್ನೆಲ್ಲಾ ಶಾಲಾ-ಕಾಲೇಜಿನ ಸ್ಪರ್ಧೆ, ಫಲಿತಾಂಶಗಳು, ಸ್ನೇಹ ಆತ್ಮೀಯತೆಗಳು ಕುರಿತಾದ ನಂಬಿಕೆಗಳು, ನೋವು-ನಲಿವುಗಳು, ಕೊನೆಗೆ ನೌಕರಿಯಂತಹ ವಿಷಯಗಳಲ್ಲಿ ಕೂಡಾ ಸತ್ಯ ಭವಿಷ್ಯವನ್ನೇ ನುಡಿದ ಈ ಮರ ನನ್ನೆದುರೇ ಕೊಡಲಿ ಪೆಟ್ಟು ತಿನ್ನುವುದನ್ನು ನೆನಪಿಸಿಕೊಂಡು ರಾತ್ರಿ ಅಪ್ಪಿ ಮುತ್ತಿಟ್ಟು ಮಾತಾಡಿ ಕ್ಷಮೆ ಕೇಳಿ ಬಂದೆ. ಬೆಳ್ಳಂಬೆಳಿಗ್ಗೆ ಮರ ಕಡಿಯುವವರು ಬಂದರು. ಯಾವುದೋ ಭಾವುಕತೆ. ಆಂತರ್ಯದಲ್ಲಿ ಈಜಲಾಗದೆ ಮುಳುಗುತ್ತಿರುವಂತೆ ಹಾದು ಹೋದಂತಾಯಿತು. ಕೇಲವೇ ತಾಸುಗಳಲ್ಲಿ ಹಲವಾರು ದಶಕಗಳನ್ನು ಕಂಡ ನನ್ನ ಪ್ರೀತಿಯ ಮುರುಗಲ ಮರ ನೆಲಕ್ಕುರುಳಿತು. ಇರುವಾಗ ಯಾರ ಶಾಪಕ್ಕೂ ಗುರಿಯಾಗದೇ, ನಾನು ನಿನ್ನೆದುರೇ ಈಗಲೂ ಯಾರಿಗೂ ತೊಂದರೆ ಕೊಡಲಾರೆನೆಂದು ಹೇಳುವಂತೆ ತನ್ನ ಬುಡದ ಕೆಳಗಿರುವ ಚಿಕ್ಕ ತೆಂಗಿನ ಸಸಿಗಳಿಗೂ ನೋವು ಕೊಡದೆ ನೆಲಕ್ಕುರುಳಿದ ಮರವನ್ನು ಕಿಟಕಿಯಲ್ಲಿ ಕಣ್ಣೀರಿಡುತ್ತಾ ನೋಡುತ್ತಿದ್ದ ನನಗೆ ಅದೇ ಅಚ್ಚಳಿಯದ ಮೊದಲ ಕಳೆದುಕೊಂಡ ನೋವಾಗಿ ಉಳಿಯಿತು. ಕತ್ತರಿಸಿದ ಮರದಿಂದ ಉದುರಿದ ಕಾಯಿ ಹಣ್ಣುಗಳನ್ನು ಆಯ್ದು ಅಕ್ಕಪಕ್ಕದ ಮನೆಯವರಿಗೆ ಪಾನಕ ಮಾಡಲು ನೀಡಿ ನಾವು ಪಾನಕ ಮಾಡಿ ಕುಡಿದೆವು. ವಿಷಾದದ ಅಲೆಯೊಂದು ಹಾಗೆ ಸುಳಿದಾಡುತ್ತಲೇ ಸಂಜೆಯವರೆಗೆ ಅದರ ಸ್ವಚ್ಛತೆ ಕಾರ್ಯ ಮುಂದುವರಿಯಿತು. ಆದರೂ ಇಂದಿಗೂ ತುಂಬಾ ನೋವಾದಾಗ ಅದು ನಿಂತ ಜಾಗದಲ್ಲೇ ನಿಂತು ಇಂದಿಗೂ ಕಣ್ಣೀರಿಡುವ ರೂಢಿ ಇದೆ. ಅಕ್ಕನ ಮದುವೆ ಮಾಡಿ ಕೊಟ್ಟು ಗಂಡನ ಮನೆತನಕ ಕಳಿಸಿಕೊಟ್ಟು ಬಂದ ನಂತರ ಒಮ್ಮೇಲೆ ಉಕ್ಕಿ ಬಂದ ಕಣ್ಣೀರಿಗೆ ಅವ್ಯಕ್ತವಾಗಿ ಆಪ್ತವಾಗಿ ಮರ ತಲೆನೇವರಿಸಿದಂತ ಅನಾಮಿಕ ಅನುಭವ ಆದದ್ದೂ ಇದೆ.

ನಾವು ಎಷ್ಟೇ ಎತ್ತರಕ್ಕೆ ಇರುತ್ತೇವೆ ಎಂಬುದು ಮುಖ್ಯವಲ್ಲ ಎತ್ತರ ಏರಿದಾಗಲೂ ನಮ್ಮೊಡನೆ ನಾವು ನಮ್ಮವರೊಡನೆ ಹೇಗಿರಬೇಕು ಎಂದು ಪ್ರತ್ಯಕ್ಷ ಪರೋಕ್ಷವಾಗಿ ಪಾಠ ಬೋಧಿಸಿದ ಈ ಮರಗಳು ನೆನಪಿನ ಬದುಕಿನ ಸಂಚಾರದಲ್ಲಿ ಸಹಪಾಠಿಗಳಂತೆ ನಡೆದ ದಾರಿಯೇ ಒಳ್ಳೆಯದು ಅಂತ ಅಂದುಕೊಳ್ಳುವುದೊಂದೇ ಅಂತಿಮ ನಿರ್ಧಾರ.

10 thoughts on “ಪ್ರಸ್ತುತ

  1. ತುಂಬಾ ಚೆನ್ನಾಗಿದೆ ಹಳೇಯ ನೆನಪುಗಳು ಮರುಕಳಿಸಿದವು

Leave a Reply

Back To Top