ವಚನ ಮೌಲ್ಯ,ಶರಣ ಗುಪ್ತ ಮಂಚಣ್ಣ-ಸುಜಾತಾ ಪಾಟೀಲ ಸಂಖ

ಕೆನೆಯ ತೆಗೆದು ಹಾಲನೆರೆವವಳ ವಿನಯ
ತಲೆಯನೊಡೆದು ಲಾಲನೆಯ ಮಾಡುವಳಂತೆ

ವಂದಿಸಿ ನಿಂದಿಸುವನ ಭಕ್ತಿ ಕೈನೆರವಿಂಗೆ ಹೋಗಿ
ತಮ್ಮವರಳಿದ ಅಂದವ ನೆನೆದು ಅಳುವರಂತೆ,
ನಾರಾಯಣಪ್ರೀಯ ರಾಮನಾಥಾ.

ಶರಣ ಗುಪ್ತ ಮಂಚಣ್ಣ
****——***

ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಅನುಭಾವ ಸಾಹಿತ್ಯ , ಸಮಾಜದ ವಾಸ್ತವತೆಗೆ ಹಿಡಿದ ಕನ್ನಡಿ ಎನ್ನುವ ಮಾತು ಅಕ್ಷರಶಃ ಸತ್ಯ.
ಶರಣರು ತಮ್ಮ ವ್ರತ್ತಿ ಜೀವನದಲ್ಲಿ ದಿನನಿತ್ಯ ನಡೆಯುವ ನಿತ್ಯ ಸತ್ಯಗಳನ್ನು
ಒತ್ತಿ ಹೇಳುವ ಮಹತ್ಕಾರ್ಯ ಮಾಡಿದ್ದಾರೆ.

ಶರಣ ಗುಪ್ತ ಮಂಚಣ್ಣನವರು ಹೇಳುತ್ತಾರೆ, ಎಂತಹ ವಾಸ್ತವ ವ್ಯವಸ್ಥೆಯನ್ನು ತೆರೆದಿಟ್ಟಿದ್ದಾರೆ ಅಂದರೆ ಅಧ್ಭುತ……..!

ಕೆನೆಯ ತೆಗೆದು ಹಾಲನೆರೆವವಳ ವಿನಯ
ತಲೆಯನೊಡೆದು ಲಾಲನೆಯ ಮಾಡುವಳಂತೆ

ಹಾಲಿನ ಸತ್ವ,ಪೊಷಕ ಅಂಶಗಳು ಇರುವುದೇ ಹಾಲಿನ ಕೆನೆಯಲ್ಲಿ,
ಆದ್ದರಿಂದಲೇ ಹಾಲು ಚೆನ್ನಾಗಿ ಕಾಯಿಸಿ ಅದರ ಮೇಲೆ ಬಂದಿರುವ ಕೆನ್ನೆಯನ್ನು ತೆಗೆದು ಹೆಪ್ಪು ಹಚ್ಚಿ ಮಜ್ಜಿಗೆ ಮಾಡಿ ಅದರಿಂದ ಬೆಣ್ಣೆ ತುಪ್ಪ ಪಡೆಯಲಾಗುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ ಹಾಲಿನ ಸತ್ವ ಕೆನೆ,
ಆ ಕೆನೆಯನ್ನೇ ತೆಗೆದು ಹಾಲನೆರೆವವಳ ಅಂದರೆ , ಹಾಲಿನಲ್ಲಿರುವ ಸತ್ವವನ್ನೆಲ್ಲಾ ತೆಗೆದು ಸತ್ವಹೀನ ಹಾಲನ್ನು ಉಣಬಡಿಸುವವರು, ಇದರರ್ಥ ಯಾವುದೇ ರೀತಿಯ ಪ್ರೀತಿ, ಪ್ರೇಮ, ವಿಶ್ವಾಸವಿಲ್ಲದ ನಡವಳಿಕೆಯ ನಡತೆ ಎನ್ನಬಹುದು ,ಇಂತವರ ಭಕ್ತಿ,ವಿನಯ, ಪ್ರೇಮ ಹೇಗಾಗುತ್ತದೆ ಅಂದರೆ, ತಾನೇ
ತಲೆಯನ್ನೇ ಒಡೆದು ನಂತರ   ಇನ್ನೊಬ್ಬರ  ಕಡೆಯಿಂದ ಶಭಾಸಕಿ ಪಡೆಯಲು ತೋರಿಕೆಗೆ ಲಾಲನೆ ಮಾಡುವವರ ಕೆಲಸವಾಗುತ್ತದೆ .
ವಿನಃ ಅದು ಭಕ್ತಿಯಾಗಲು ಸಾಧ್ಯವಿಲ್ಲ, ಪವಿತ್ರ ಪ್ರೇಮ, ನಿಯತ್ತಿನ ವಿನಯ ಆಗಲಾರದು, ಕೇವಲ ಬಾಹ್ಯ ಢಾಂಬಿಕ ನಡುವಳಿಕೆಯಾಗುತ್ತದೆ.
ಅದೇ ರೀತಿ, ಮುಂದು ವರೆದು ಶರಣ ಗುಪ್ತ ಮಂಚಣ್ಣನವರು ಹೇಳುತ್ತಾರೆ.

ವಂದಿಸಿ ನಿಂದಿಸುವನ ಭಕ್ತಿ ಕೈನೆರವಿಂಗೆ ಹೋಗಿ
ತಮ್ಮವರಳಿದ ಅಂದವ ನೆನೆದು ಅಳುವರಂತೆ,
ನಾರಾಯಣಪ್ರೀಯ ರಾಮನಾಥಾ

ಕೆಲವರು ಮುಂದೆ ವಂದಿಸುವಂತೆ, ಗೌರವ ಕೊಡುವಂತೆ ನಟಿಸಿ, ಹಿಂದೆ ಛಾಡಿ ಹೇಳುವ,ನಿಂದನೆ ಮಾಡುವ, ಇನ್ನೊಬ್ಬರ ಬಗ್ಗೆ  ಅವರಿಲ್ಲದಾಗ ಟೀಕೆ ಟಿಪ್ಪಣಿ  ಮಾಡಿದರೆ, ಅದು ಇನ್ನೊಬ್ಬರ ಮೇಲೆ ದ್ರೋಹ ಮಾಡಿದಂತಾಗುತ್ತದೆ. ಇವರ  ಪಾಡು ಹೇಗಾಗುತ್ತದೆ ಎಂದರೆ, ಏನೋ ಸಹಾಯ ಮಾಡುತ್ತೇವೆಂದು ಹೋಗಿ ತಮ್ಮವರನ್ನೇ ಕಳೆದುಕೊಂಡದ್ದನ್ನು ನೆನೆಸಿ ಅಳುವಂತಾಗುತ್ತದೆ.

ಹೀಗೆ,ಮೋಸದ ಭಕ್ತಿ ಮಾಡಿ, ತೋರಿಕೆಗೆ ಸಾಚಾ ಎನ್ನಿಸಿಕೊಳ್ಳಲು ನಟಿಸುವ ಜನರು ತುಂಬಾ ಅಪಾಯಕಾರಿ ಮತ್ತು ಅನರ್ಥಕಾರಿ ಎನ್ನುವ ಸ್ಪಷ್ಟತೆಯನ್ನು ಹೇಳುವ ಮಹತ್ವದ ಉದ್ದೇಶ ಶರಣರದ್ದು.

ಈ ಸಾಮಾಜಿಕ ವಾಸ್ತವವನ್ನು , ವಾಸ್ತವಿಕ ನೆಲೆಯಲ್ಲಿ ಶರಣ ಗುಪ್ತ ಮಂಚಣ್ಣನವರು ತಮ್ಮ ಈ ವಚನದಲ್ಲಿ ನೇರವಾಗಿ ಎತ್ತಿ ತೋರಿಸಿದ್ದಾರೆ.


Leave a Reply

Back To Top