“ಕಂಥೆ ತೊಟ್ಟವ ಗುರುವಲ್ಲ, ಕಾವಿ ಹೊತ್ತವ ಜಂಗಮವಲ್ಲ,
 ಶೀಲ ಕಟ್ಟಿದವ  ಶಿವಭಕ್ತನಲ್ಲ,

ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ.
 ಹೌದೆಂಬವನ ಬಾಯ ಮೇಲೆ ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು ಮಾಸಿ ಕಡಿಮೆಯಿಲ್ಲದೆ ತೂಗಿ
ತೂಗಿ ಟೊಕಟೊಕನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.”

ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯ

*********

ಶತಶತಮಾನಗಳಿಂದ ಸಮಾಜದಲ್ಲಿ ಬೇರೂರಿರುವ ಅನಿಷ್ಟ ಮೌಡ್ಶ ಪರಂಪರೆ ನಂಬಿಕೆ ,ಅಂದಾಚಾರ, ಕಂದಾಚಾರ ಅಜ್ಞಾನದ ಆಚರಣೆಗಳನ್ನು ಕಿತ್ತೆಸೆಯುವ ಅಭೂತಪೂರ್ವ ಕಾರ್ಯ ನಡೆದದ್ದು 12ನೇ ಶತಮಾನದಲ್ಲಿ

ಜನಮಾನಸದಲ್ಲಿ ವಾಸ್ತವದ ಅಂಶಗಳನ್ನು ವೈಜ್ಞಾನಿಕ ವೈಚಾರಿಕ ವಿಷಯಗಳನ್ನು ಮನದಟ್ಟು ಮಾಡುವಲ್ಲಿ ಶರಣರ ಪಾತ್ರ  ಅಮೋಘವಾದದ್ದು.
ಕೇವಲ ಕೆಲವೇ ಜನರ ಹತೋಟಿಯಲ್ಲಿದ್ದ ಸಮಾಜವನ್ನು ಬೇರ್ಪಡಿಸಿ ವೈಚಾರಿಕ ವೈಜ್ಞಾನಿಕ ಅರಿವಿನ ಬೆಳಕು ಮೂಡಿಸುವುದು ಅಂದು ಸಾಮಾನ್ಯವಾದ ಮಾತಾಗಿರಲಿಲ್ಲ.
ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶರಣರು ಮಾಡಿದ ಅಚ್ಚರಿಯ ಪರಿವರ್ತನೆ ಇಂದು ಜಗತ್ತು ಮೆಚ್ಚಿ, ಅಚ್ಚರಿ ಪಟ್ಟು ವಚನ ಸಾಹಿತ್ಯಕ್ಕೆ ಮೋರೆ ಹೋಗುತ್ತಿದೆ.ಈ ವಿಚಾರಕ್ಕೆ ಸಾದ್ರಸ್ಯ ಸಾಕ್ಷಿಯಾಗಿ ಶರಣ ಅಂಬಿಗರ ಚೌಡಯ್ಯನವರು ನಿಂತಿದ್ದಾರೆ ನೋಡೋಣ ಬನ್ನಿ

ಕಂತೆ ತೊಟ್ಟವ ಗುರುವಲ್ಲ,
 ಕಾವಿ ಹೊತ್ತವ ಜಂಗಮವಲ್ಲ,
 ಶೀಲ ಕಟ್ಟಿದವ ಶಿವಭಕ್ತನಲ್ಲ

ಅಂದಿನ ಸಮಾಜದಲ್ಲಿ ಬೇರೂರಿರುವ ಸಾಂಸ್ಕೀಕರಣ ವ್ಯವಸ್ಥೆಯನ್ನು ದಿಕ್ಕರಿಸಿ, ಸಮಾಜವನ್ನು ಸೈಧ್ಯಾಂತಿಕ ನೆಲೆಗಟ್ಟಿನ ಮೇಲೆ ಭದ್ರಗೊಳಿಸುವದಕ್ಕಾಗಿ
ಧರ್ಮ ಸಹಿತೆ ಮತ್ತು ನೀತಿ ಸಂಹಿತೆಗೆ ಪ್ರಾಧಾನ್ಯತೆ ಕೊಟ್ಟು ಯಾವ ಮುಲಾಜಿಲ್ಲದೆ ಸತ್ಯದ ಪ್ರತಿಪಾದನೆಯನ್ನು ಹರಿತವಾದ ಆಚಾರ ವಿಚಾರಗಳಲ್ಲಿ ಅಕ್ಷೇಪ ಮಾಡಿದ ಶರಣ ಅಂಬಿಗರ ಚೌಡಯ್ಯನವರು


ಕಂತೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮವಲ್ಲ
ಶೀಲ ಕಟ್ಟಿದವ ಶಿವ ಭಕ್ತನಲ್ಲ


ಎಂದು ಕಟು ವಿಡಂಬನೆ ಮಾಡುವ ಮಾತಿನಲ್ಲಿ ಕೇವಲ ಢಾಂಬಿಕ ಲಾಂಛನಗಳನ್ನು ಧರಿಸಿದ ಮಾತ್ರಕ್ಕೆ ಗುರು, ಲಿಂಗ, ಜಂಗಮ ಆಗಲು ಸಾಧ್ಯವಿಲ್ಲ ಬಾಹ್ಯ ಲಾಂಛನಗಳು ಬಹಿರಂಗ ಢಾಂಬಿಕತನದ ಆಚರಣೆಗಳು ಎಂದಿಗೂ ಸತ್ಯದ ಬೆಳಕು ನೀಡಲಾರವು.
ಅರಿವೇ ಗುರು ಆಚಾರವೇ ಲಿಂಗ ಅನಭಾವವೇ ಜಂಗಮ
ಈ ತತ್ವ  ಪರಿಪಾಲಕರಾದ ಶರಣರು, ಪೊಳ್ಳು ಲಾಂಛನಗಳನ್ನು ಬಹಿರಂಗ ಢಾಂಬಿಕತನದವರ ನಾಟಕದ ಸೋಗಿನ ಭಂಡಕರ ಜಾಲನ್ನು ನಿರ್ದಾಕ್ಷಿಣವಾಗಿ ನೇರವಾಗಿ ಅಲ್ಲಗಳಿದಿದ್ದಾರೆ ಶರಣ ದಿಟ್ಟ ಗಣಾಚಾರಿ ಅಂಬಿಗರ ಚೌಡಯ್ಯನವರು.

ಆಚರಣೆ ಇಲ್ಲದ ಲಾಂಛನಧಾರಿಗಳನ್ನು, ಕೆಲಸಕ್ಕೆ ಬಾರದ ಪೊಳ್ಳು ಪುಂಡಾಟಿಕೆಯ ವೇಶಾದಾರಿಗಳನ್ನು ನಿರ್ಭೀತಿಯಿಂದ ಕಟುವಾಗಿ ಟೀಕಿಸಿ ತಮ್ಮ ವಚನಗಳ ಮೂಲಕ ವೈಚಾರಿಕ ನಿಲುವುಗಳನ್ನು ಶರಣತ್ವದ ಮಹತಿಯನ್ನು ಪ್ರಕಟಪಡಿಸಿದ ಮಹಾಮಾನವತವಾದಿಗಳು ಶರಣರು.

ನೀರು ತೀರ್ಥವಲ್ಲ ಕೂಳು ಪ್ರಸಾದವಲ್ಲ
ಹೌದೆಂಬವನ ಬಾಯ ಮೇಲೆ ಅರ್ಧ ಮನದ ಪಾದರಕ್ಷೆಯ
 ತೆಗೆದುಕೊಂಡು ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟಕ ಟಕನೇ ಹೊಡೆಯಂದಾತ ನಮ್ಮ ಅಂಬಿಗರ ಚೌಡಯ್ಯ

ಶರಣ ಅಂಬಿಗರ ಚೌಡಯ್ಯನವರು ಅಂದಿನ ಅಜ್ಞಾನವನ್ನು ,ಮೌಡ್ಯ ವ್ಯವಸ್ಥೆಯಲ್ಲಿ ರಾರಾಜಿಸುತ್ತಿರುವ ಜಾತಿಭೇದ,ವರ್ಗಭೇದ
ವರ್ಣಭೇದ, ಲಿಂಗಭೇದ ತಾರತಮ್ಯ ನೀತಿಯ ವಿರುದ್ಧ ಹೋರಾಡಿ, ಪ್ರಾಯೋಗಿಕ, ವೈಚಾರಿಕ ವಾಸ್ತವ ವ್ಯವಸ್ಥೆಯನ್ನು ತರುವುದರಮೂಲಕ  ಲಾಂಛನಗಳಿಗೆ ಜೊತುಬಿದ್ದ ಸಮಾಜ ವ್ಯವಸ್ಥೆಯನ್ನು ಎಚ್ಚರಿಸಿ ನೀರು ತೀರ್ಥವಲ್ಲ ,
ಕೂಳು ಪ್ರಸಾದವಲ್ಲ,


ಎಂದು ಹೇಳುವಲ್ಲಿ ತೀರ್ಥ,ಪ್ರಸಾದ ವಸ್ತುಗಳಲ್ಲ  ಅವು ಚೈತನ್ಯ ಶಕ್ತಿ, ಪ್ರಫುಲ್ ಭಾವ ಎಂಬುದನ್ನು ಸಾಬೀತು ಪಡಿಸುವ ಗಟ್ಟಿ ನಿರ್ಧಾರಕ್ಕೆ  ಅಡ್ಡ ಬರುವ ಅಜ್ಞಾನಿಗಳನ್ನು ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕ ಟೊಕನೆ ಹೊಡೆ ಎನ್ನುವ ಶರಣ ಅಂಬಿಗರ ಚೌಡಯ್ಯನವರ ವಚನದ ಛಾಟಿ ಏಟು, ವ್ಯಂಗ್ಯ ವಿಡಂಬನೆ, ನೋಡಿದಾಗ ಶರಣರಿಗೆ ಸಮಾಜದ ಕಲ್ಯಾಣ ಕಳಕಳಿ, ಸಮಾಜ ಪರಿವರ್ತನೆಯ ಹಪಹಫಿ ಎಷ್ಟಿತ್ತು ಎಂಬುದು ತಿಳಿಯುತ್ತದೆ.ಆದ್ದರಿಂದಲೇ ನೀರು ತೀರ್ಥ, ಕೂಳು ಪ್ರಸಾದ ಎನ್ನುವ ಅಜ್ಞಾನಿಗಳನ್ನು, ಇದನ್ನು ಬೆಂಬಲಿಸಿ ಬೆನ್ನು ಚಪ್ಪರಿಸಿಕೊಳ್ಳುವ ಮೂಢರನ್ನು ಅತ್ಯಂತ ಕಟು ಶಬ್ದಗಳಲ್ಲಿ  ಸಾತ್ವಿಕ ಸಿಟ್ಟನ್ನು ತೊರಿದ್ದಾರೆ
ಶರಣ ಅಂಬಿಗರ ಚೌಡಯ್ಯನವರು.
 12ನೇ ಶತಮಾನದಲ್ಲಿ ಅಂಬಿಗರ ಚೌಡಯ್ಯನವರು ಬಿಚ್ಚಿಟ್ಟ ಸತ್ಯ ತತ್ವ ಇಂದಿಗೂ ತಿಳಿಯುವಲ್ಲಿ  ನಾವು ಎಡುವುತ್ತಿದ್ದೇವೆ ಇದು ಖೇದಕರ ಸಂಗತಿಯಾಗಿದೆ.
ಆದ್ದರಿಂದಲೇ ಶರಣರಿಗೆ ಶರಣರೇ ಸಾಟಿ ಆಗಿದ್ದಾರೆ.
ಶರಣರ ವಚನಗಳು ನಮ್ಮ ಬದುಕಿನಲ್ಲಿ ದಾರಿ ದೀಪಗಳಾಗಲಿ ಎಂದು ಆಶಿಸುತ್ತೇನೆ.


Leave a Reply

Back To Top