ಶ್ರೀಪಾದ ಆಲಗೂಡಕರ-ಗಝಲ್

ದತ್ತ ಸಾಲು:- ಜಡಿ ಮಳೆಯಲಿ ಕೊಡೆ ಹಿಡಿದು ನನಗಾಗಿ ಬಂದವಳು ನೀನಲ್ಲವೇ

ಜಡಿ ಮಳೆಯಲಿ ಕೊಡೆ ಹಿಡಿದು ನನಗಾಗಿ ಬಂದವಳು ನೀನಲ್ಲವೇ
ಮೋಡ ಮುಸುಕಿದ ಆಗಸದಲಿ ಜಿನುಗುವ ಹನಿಯಾಗಿ ನಿಂದವಳು ನೀನಲ್ಲವೇ

ತಂಪಾದ ಗಾಳಿಯಲ್ಲಿ ನವಿಲಾಗಿ ನಡೆಯುತ ಪ್ರೇಮ ಗೀತೆ ಹಾಡಿದೆಯಾ
ಸೊಂಪಾದ ಹಸುರಿನ ಇಳೆಯಲಿ ತನುಮನ ಸೋಕಿ ಮಿಂದವಳು ನೀನಲ್ಲವೇ

ಸೆಳೆಯುವ ನಯನಗಳು ಒಲವಿನ ರಾಗದಿ ಎದೆಯ ಮೀಟಿ ಕುಣಿದಿದೆ
ಬಳೆಗಳ ನಾದದಿಂದ ಹೃನ್ಮನದ ಇಂಗೀತವ ಅರಿತು ಸಂದವಳು ನೀನಲ್ಲವೇ

ಜೊತೆಯಲಿ ಘಿಲ್ಲೆನುವ ಹೆಜ್ಜೆಯಿಡುತ ಕಣ್ಣಿನ ನೋಟದಲಿ ಸೆರೆಹಿಡಿದ ಚೆಲುವೆಯು
ಮಾತಿನಲಿ ಮೆರಗು ನೀಡುತ ಜೇನಂತ ಸವಿನುಡಿಯ ಅಂದವಳು ನೀನಲ್ಲವೇ

ಕನಸುಗಳ ಕಲ್ಪನೆಯು ಛಾಯೆಯಲಿ ಶ್ರೀಪಾದನಿಗೆ ಪ್ರೀತಿಯ ಔತಣಕೆ ಆಹ್ವಾನಿಸಿದೆ
ಮನಸುಗಳ ಮಿಲನದ ಹೃದಯ ಗೂಡಿನಲಿ ನೆಲೆಯಾಗು ಎಂದವಳು ನೀನಲ್ಲವೇ


Leave a Reply

Back To Top