ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

“ಇರಬೇಕು ಇರುವಂತೆ, ತೊರೆದು ಸಾವಿರ ಚಿಂತೆ”
ಸೆಳೆದ ಕವಿವಾಣಿಯಲಿ ಇಹುದು ಘನತೆ
ಕಾಳಸಂತೆಯ ಸುತ್ತ ಬಾಳು ಕಟ್ಟಿದೆ ಹುತ್ತ
ಒಳಗೊಂಡು ಮೂಲದಲಿ ಜೀವಬಿತ್ತ

ತೊರೆದು ಬದುಕುವುದುಂಟೆ ಬೇರು ನೀರಿನ ನಂಟು
ಏರೇರು ಹಾದಿಯಲಿ ಕುಡಿಕುಣಿಕೆ ಗಂಟು
ಕಾರಮರ್ಮರವೆಲ್ಲ ತಲೆಯೊಳಗೆ ಗುಂಯ್ಗುಟ್ಟಿ
ಸುರಿಯುವುದು ಜಗದತ್ತ ಹೆಪ್ಪುಗಟ್ಟಿ

ನಂಬಿಕೆಯ ಸೆಲೆಯೊಳಗೆ ಜಗದ ಬೇರಡಗಿಹುದು
ಇಂಬಿಹುದು ಬಂಡೆಯಲು ಛಾತಿಗೊಂದು
ನಂಬಿಕೆಯ ಬಾನಲ್ಲಿ ಹಕ್ಕಿರೆಕ್ಕೆಯ ಬಲವು
ಇಂಬಿಹುದು ಭೂಮಿಯಲಿ ಮನುಜನೊಲವು

ನಂಬಿಕೆಯು ಇರುವಲ್ಲಿ ಹಂಗಿನಾಸರೆಯಿರದು
ಇಂಬುಗೂಡುವ ಮನವು ತಿಳಿಯಿರುವುದು
ನಂಬಿಕೆಯು ನಡೆವಲ್ಲಿ ನೆಮ್ಮದಿಯ ಹಸೆಯಿಹುದು
ಒಂಬುಗೆಯ ಒಪ್ಪಕ್ಕಿಯೂಟವಿಹುದು


About The Author

Leave a Reply

You cannot copy content of this page