ಎಂ. ಆರ್. ಅನಸೂಯ ಎರಡು ಕವಿತೆ

ಕಾವ್ಯ ಸಂಗಾತಿ

ಎಂ. ಆರ್. ಅನಸೂಯ ಎರಡು ಕವಿತೆ

ಉಚಿತವಾಗಿ ಕೊಟ್ಟಿಲ್ಲ ಬದುಕು
ಕನಸು ನನಸಾದ ದಿನಗಳನ್ನು
ವಸೂಲಿ ಮಾಡಿ
ಲೆಕ್ಕಕ್ಕೆ ಸಿಗದ ಕಂಬನಿಗಳನ್ನು
ನೋವಿನ ನಿಟ್ಟುಸಿರುಗಳನ್ನು
ಉಪೇಕ್ಷೆಯ ತಾತ್ಸಾರವನ್ನು
ನೀಡಿದೆ
ಭರಪೂರ ಆತ್ಮವಿಶ್ವಾಸದ ರಸೀತಿಯನ್ನು

****

ಧರ್ಮರಾಯ
ಧರ್ಮ ಸೂಕ್ಷ್ಮವ ಅರೆದು ಕುಡಿದವ
ಅಜೀರ್ಣವಾಗಿ ಗಬ್ಬುನಾತ ಬೀರಿದರೂ
ಬಿಡಲಾಗದ ಕರ್ಮಠ ಧರ್ಮಭೀರು
ಚಟಕ್ಕೆ ಜೂಜಾಡಿ ಸೋತು
ಪಣಕ್ಕಿಟ್ಟರೂ ಹೆಂಡತಿಯ
ಪಡೆದ ಬಿರುದು ಮಾತ್ರ ಧರ್ಮನಿಷ್ಟ
ಕೈ ಹಿಡಿದ ದ್ರೌಪದಿಯ
ಕಂಗಳಲಿ ಅಸಹ್ಯವಾಗಿ ಅತಿ ನಿಕೃಷ್ಟ


Leave a Reply

Back To Top