ಕಿರುದೀಪ ನಾನು

ಕಾವ್ಯಸಂಗಾತಿ

ಕಿರುದೀಪ ನಾನು

ಅಮುಭಾವಜೀವಿ

ಕಾವೇರಿಯ ಮಡಿಲ ಕೂಸು
ಮೈಸೂರ ಮಲ್ಲಿಗೆ ಮನಸು
ಕನ್ನಡಾಂಬೆಯ ಪ್ರಿಯ ಸುತನು
ತನು ಮನ ತುಂಬಿದ ಕನ್ನಡಿಗ ನಾನು

ಅಕ್ಕರೆ ಭಾಷೆಯ ಸಕ್ಕರೆ ಮಾತಿಗೆ
ಅಕ್ಷರ ರೂಪದಿ ಆರಾಧಿಸುವೆ
ಭಾವದ ತೇರಲಿ ಭಾಷೆಯ ಕೂರಿಸಿ
ಸಾಹಿತ್ಯದೂರಲಿ ನಿತ್ಯ ಮೆರೆಸುವೆ

ಮಲೆನಾಡಿನ ಗಿರಿಪರ್ವತಗಳ ಹಸಿರು
ಬಯಲುಸೀಮೆಯಲ್ಲಿ ಸುರಿವ ಬೆವರು
ಕರಾವಳಿಯ ಅಲೆಗಳಲಿವ ಹೆಸರು
ಕರುನಾಡಿನ ಕಂದನಿಗೆ ಹೆಮ್ಮೆಯ ತವರು

ಕವಿ ಪುಂಗವರ ನಲ್ಮೆಯ ನಾಡು
ಕಲಾವಿದರ ದೈವಿಕ ನಾಡು
ಶಿಲ್ಪಕಲೆಗಳ ಸ್ವಂತದ ಗೂಡು
ನನ್ನೀ ಕನ್ನಡಮ್ಮನ ನೆಲೆವೀಡು

ಅರಿಶಿಣ ಕುಂಕುಮ ಚಂದನ ಶೋಭಿತೆ
ಸಹ್ಯಾದ್ರಿಯ ನಿತ್ಯಹರಿದ್ವರ್ಣ ಭೂಷಿತೆ
ಕುರಿತೋದದ ಕಾವ್ಯ ಪರಿಣಿತರ ಮಾತೆ
ಕನ್ನಡಮ್ಮನೇ ನನ್ನ ಜನ್ಮದಾತೆ

ಸರ್ವಧರ್ಮದ ಶಾಂತಿಯ ತೋಟ
ಸಾರಿದೆ ಸಮಾನತೆಯ ಹೊಸಪಾಠ
ಸಾಧುಶರಣರ ಅನುಭವ ಮಂಟಪ
ಅವಳೆದುರು ನಾನಾಗುವೆ ಕಿರುದೀಪ


Leave a Reply

Back To Top