ಶಂಕರಾನಂದ ಹೆಬ್ಬಾಳಕವಿತೆಗಳು

ಕಾವ್ಯ ಸಂಗಾತಿ

ಕೇಳದ ನುಡಿಗಳು….!

Horror scary shadow of woman behind  glass in black and white. Blurred of  ghost or dead people in darkness. Stressed girl trapped in the room, concept of Halloween or violence against children.

ಹಿಂಸೆ ಕ್ರೌರ್ಯಗಳ ಸುಳಿಯಲ್ಲಿ
ವಿಲವಿಲ ಒದ್ದಾಡುವ
ಮೀನಾಗಿ ಹೋದೆಯಲ್ಲೆ
ಆದರೂ
ನಿನ್ನ ಧಿಕ್ಕರಿಸುವ ನುಡಿಗಳ
ಕೇಳುವವರಿಲ್ಲ ಇಲ್ಲಿ….

ಬೇಡವೆಂದರೂ ಪಾಪದ ಕೂಪಕ್ಕೆ
ತಳ್ಳಿ ಮೋಜು ನೋಡುವ
ತಾಕಲಾಟಗಳ ಮಧ್ಯ
ಆತ್ಮಸ್ತೈರ್ಯದಿ
ನಿನ್ನ ಧಿಕ್ಕರಿಸುವ ನುಡಿಗಳ
ಕೇಳುವವರಿಲ್ಲ ಇಲ್ಲಿ….

ಅಂಗೊಪಾಂಗಗಳ ಸವರಿ
ಹಿಚುಕಿ ಹಿಂಡಿ ಮುದ್ದೆ ಮಾಡಿ
ಒದ್ದು ಎದ್ದು ಹೋದರೂ
ನಿನ್ನ ಧಿಕ್ಕರಿಸುವ ನುಡಿಗಳ
ಕೇಳುವವರಿಲ್ಲ ಇಲ್ಲಿ….

ಬೇಡನ ಬಾಣಕ್ಕೆ ತುತ್ತಾದ
ಶಶಾಂಕನಂತೆ
ತರಕ್ಷುವಿಗೆ ತೆಕ್ಕೆಯಲ್ಲಿನ
ಹರಿಣಿಯಂತೆ
ಒಳಗೊಳಗೆ ನೋವು ಸಂಕಟ
ಕೊರೆದು ಉರಿದರೂ
ನಿನ್ನ ಧಿಕ್ಕರಿಸುವ ನುಡಿಗಳ
ಕೇಳುವವರಿಲ್ಲ ಇಲ್ಲಿ…..

ನಿರಾಶ್ರಿತೆಯ ಬಾಳಲ್ಲಿ
ನಿರುಮ್ಮಳತೆಯ ಭಾವವಿಲ್ಲ
ವಿಷಾದದ ಛಾಯೆಯ ಕರಿನೆರಳಂತೆ
ಬೆನ್ನು ಇರಿದು ಕೊಲ್ಲುತಿದೆ
ಇಲ್ಲಿ ಕೃಷ್ಣನು ಬರಲಿಲ್ಲ…
ವೀರನು ಬರಲಿಲ್ಲ…
ಉತ್ತರಕುಮಾರನಂತೆ
ಬಡಾಯಿ ಕೊಚ್ಚಿಕೊಳ್ಳುವ
ಜಾಯಮಾನದವರೆ
ಎಂದು ಕೂಗಿದರು
ನಿನ್ನ ಧಿಕ್ಕರಿಸುವ ನುಡಿಗಳ
ಕೇಳುವವರಿಲ್ಲ ಇಲ್ಲಿ….

****

ಗಝಲ್

red and rose hearts at yellow background. hearts texture. hearts background

ಎದೆಸೆಟಿಸಿ ನಿಂತವರೆಲ್ಲ ಮಣ್ಣಾಗುವ
ಕಾಲ ಬಂದೀತು
ಹೃದಯ ಕರಗದವರೆಲ್ಲ ಹಣ್ಣಾಗುವ
ಕಾಲ ಬಂದೀತು

ಮೀಸೆತಿರುವಿ ಮೆರೆದ ಮಹಾರಾಜರು
ಬರಿ ನೆನಪಷ್ಟೆ
ಸೋಸಿ ತಗೆದ ಚರಟದಂತೆ ಒಣಗುವ
ಕಾಲ ಬಂದೀತು

ದ್ವೇಷ ಅಸೂಯೆ ಕ್ರೋಧಾಗ್ನಿಯ
ಚಿತೆಯಲಿ ಉರಿದವು
ಶಾಸನ ಕೆತ್ತಿಸಿಟ್ಟರು ಮಾಸಿಹೋಗುವ
ಕಾಲ ಬಂದೀತು

ಬಸವಳಿದು ದುಡಿದು ದಕ್ಕಿದ್ದು ಬರಿ
ಆರಡಿ ಮೂರಡಿಯಷ್ಟೆ
ಮಸಣದಲಿ ಭೇದವಿಲ್ಲದೆ ಒಂದಾಗುವ
ಕಾಲ ಬಂದೀತು

ಇರುವ ಜೀವನವ ಸಾರ್ಥಕದ
ಪಥದಿ ಸಾಗಿಸುತಿರು
ಅಭಿನವನ ನುಡಿಗಳೆಲ್ಲ ನೆನಪಾಗುವ
ಕಾಲ ಬಂದೀತು


One thought on “ಶಂಕರಾನಂದ ಹೆಬ್ಬಾಳಕವಿತೆಗಳು

Leave a Reply

Back To Top