ಗಾಂಧಿ ವಿಶೇಷ

ಗಾಂಧಿ‌ ನೆನಪಲ್ಲಾ‌…

ನೀಲ ಆಗಸದ ಮನಸು
ಬೇರುಬಿಟ್ಟ ಹೂ ಹಣ್ಣು ಕನಸು
ಪ್ರೀತಿ ಪ್ರೇಮ ಕರುಣೆಯೇ
ಮೈವೆತ್ತಿ ಬಂದಂತೆ ಸೊಗಸು.

ತಾನು ತನ್ನದೆಂಬ ಹಂಗು ಹರಿದು
ಎಲ್ಲರನ್ನೂ ತನ್ನ ಪ್ರೇಮತೆಕ್ಕೆಯಲಿ ಸೆಳೆದು
ಸ್ವತಂತ್ರ ಸ್ವದೇಶದ ಮುನ್ನುಡಿ ಬರೆದು
ಊರಿಕೊಂಡು ಊರುಗೋಲು
ಬಾರಿಸದೆಯೇ ಬಗ್ಗಿಸಿದ
ಮೌನದಲಿ ಅಸಹಕಾರದಲಿ
ಹಿಡಿ ಕಡಲೆಕಾಯಿ ಜಗಿದು.

ಕೂಡಿಟ್ಟು ಕೊಟ್ಟೆ ಸ್ವಾತಂತ್ರ್ಯ
ಸಹನೆ,ಅಹಿಂಸೆಯ ಪಥದಲಿ
ಬೀದೀಲಿ ಚೆಲ್ಲಿ ರಕ್ತಧೋಕುಳಿ
ಕೊಂದು ಸತ್ಯ ಮತ್ತು ಮಹಾತ್ಮನ
ನಡೆಸಿದ್ದೇವೆ‌ ಪ್ರಜಾಪ್ರಭುತ್ವ.

ಗಾಂಧಿ‌,ನೋಟಿನಲಿ ಕನ್ನಡಕದಲಿ
ಟೋಪಿ ಚೇರಿನಲಿ ಪಟದಲ್ಲೂ ಕೂಡಿಸಿ ಹಾರಹಾಕಿದ್ದೇವೆ.
ಸತ್ಯ ಅಹಿಂಸೆಯ ಕತ್ತು ಹಿಚುಕಿ
ಶಾಂತಿ ನೆಮ್ಮದಿ ಹಣಕ್ಕೆ ಮಾರಿ
ಯಂತ್ರ ತಂತ್ರ ಕುತಂತ್ರದಿ
ಅಭಿವೃದ್ಧಿ ಕಂಡೂ ಕಂಡೂ
ಉದ್ದಾರವಾಗಿಬಿಟ್ಟಿದ್ದೇವೆ.!?

ಗಾಂಧಿ‌ ನೆನಪಲ್ಲಾ‌….
ಸತ್ಯಶೋಧನೆಗೆ ಒಡ್ಡಿದ ಪಥ.
ವ್ಯಕ್ತಿಯಲ್ಲಾ..ಮಾನವ ಪ್ರೇಮದ ಒಲವು.
ನಡೆ ನುಡಿಯ ತಿಳಿವು
ಉಳಿಸಿ ಉಳಿವ ಏಕೈಕ ಅರಿವು.

*********************

ಸುಜಾತ ಲಕ್ಷ್ಮೀಪುರ.

2 thoughts on “

  1. ಗಾಂಧೀಜಿ ಬರೇ ನೆನಪಲ್ಲ, ನೆಪವೂ ಆಗದಿರಲಿ, ಆ ಜವಾಬ್ದಾರಿ ನಮ್ಮ ಮೇಲಿದೆ… ಅಭಿನಂದನೆ

Leave a Reply

Back To Top