ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಸಗ್ಗ ಬಂದಿತು ಇಳೆಗೆ” ಡಾ. ಪಿ. ಜಿ. ಕೆಂಪಣ್ಣವರ

ಕಾವ್ಯ ಸಂಗಾತಿ ಡಾ. ಪಿ. ಜಿ. ಕೆಂಪಣ್ಣವರ “ಸಗ್ಗ ಬಂದಿತು ಇಳೆಗೆ” ಎರಳೆಗಂಗಳ ಚೆಲುವೆನಗುವ ಮೋಹಕ ತಾರೆನಿನ್ನ ನೋಡುತ ನಾನು   ಮರುಳನಾದೆ!ಬರಿ ಚಣದ ಬದುಕಿನಲಿಒಲವ ಬಿತ್ತಿದ ನೀನುಬಾಳ ದಾರಿಗೆ ನಿತ್ಯ ದೀಪವಾದೆ ಬಿರಿದ ಮಲ್ಲಿಗೆ ದಂಡೆಮುಡಿದು ನೀ ಬರುತಿರಲುಪಿಕವು ಕೂಗಿತು ಅರಸಿ ಬಂದಳೆಂದು!ಬದುಕ ಬಂಡಿಗೆ ಎರಡುಗಾಲಿ ನಾವಿರುತಿರಲುಹದುಳ ತುಂಬುವುದಿಲ್ಲಿ ಬಳಿಗೆ ಬಂದು! ಬಾಳ ಪಯಣದ ತುಂಬಹಸಿರು ತುಂಬಿತು ನಲ್ಲೆನಿನ್ನ ಒಲುಮೆಯ ತೊರೆಯು ಹರಿಯುತಿರಲು!ಬಂದ ಜಂಜಡವೆಲ್ಲಕರಗಿ ಹೋಯಿತು ಸಖಿಯೇಸಗ್ಗ ಬಂದಿತು ಇಳೆಗೆ ನೀನು ನಗಲು! ಡಾ. ಪಿ. ಜಿ. ಕೆಂಪಣ್ಣವರ

“ಸಗ್ಗ ಬಂದಿತು ಇಳೆಗೆ” ಡಾ. ಪಿ. ಜಿ. ಕೆಂಪಣ್ಣವರ Read Post »

ಕಥಾಗುಚ್ಛ

“ಕ್ಷಮೆ” ಸುಮತಿ ಪಿ ಅವರ ಸಣ್ಣ ಕಥೆ

ಕಥಾ ಸಂಗಾತಿ ಸುಮತಿ ಪಿ “ಕ್ಷಮೆ” ಅಂದು ಕೋಮಲ ಅದೆಷ್ಟು ಬೇಡಿಕೊಂಡರೂ ನಾನು ಅವಳಿಗೆ ತವರಿಗೆ ಹೋಗುವುದಕ್ಕೆ ಒಪ್ಪಿಗೆ ನೀಡದೇ ತಪ್ಪು ಮಾಡಿದೆನಲ್ಲ!!!. ಪಾಪ! ಕೋಮಲ ತವರಿಗೆ ಹೋಗಬೇಕೆಂಬ ಹಿರಿದಾಸೆಯನ್ನು ಇಟ್ಟುಕೊಂಡಿದ್ದಳು. ಅಂದು ಮಾವಯ್ಯನವರ ಬಾಯಿಯಿಂದ ತಪ್ಪಿ ಬಂದ ಒಂದೇ ಒಂದು ಮಾತಿನಿಂದಾಗಿ ಸಿಟ್ಟುಗೊಂಡಂತಹ ನಾನು ನಿನಗೆ ತವರು ಮನೆ ಬೇಕಾ ? ಗಂಡನ ಮನೆ ಬೇಕಾ?..ಎರಡರಲ್ಲಿ ಒಂದನ್ನು ನೀನೇ ಆರಿಸಿಕೊ…ಎಂದು ಗಟ್ಟಿಯಾಗಿ ಹೇಳಿದಾಗ, ಹೆಣ್ಣಿಗೆ ಮದುವೆಯಾದ ಮೇಲೆ ಗಂಡನ ಮನೆಯೇ ಸರ್ವಸ್ವವೆಂದರಿತ ಕೋಮಲ, ಕಣ್ಣೀರು ಹಾಕುತ್ತಾ ಹಿಂತಿರುಗಿ ನೋಡದೆ ನನ್ನ ಹಿಂದೆ ಬಂದಿದ್ದಾಗಲೂ,ನಾನು ಅವಳ ಮನಸ್ಸನ್ನು ಅರಿಯದೆ ಹೋದೆನಲ್ಲ!!!. ಪಾಪ ಅವಳ ತಂದೆ ಇಹಲೋಕ ತ್ಯಜಿಸಿದಾಗಲೂ ನನ್ನ ಅನುಮತಿ ಸಿಗಲಾರದೆಂದು ತವರಿಗೆ ಹೋಗದೆ, ಗಂಡನೇ ಸರ್ವಸ್ವವೆಂದು ಗಂಡನಿಗಾಗಿ, ತನ್ನಿಬ್ಬರು ಮಕ್ಕಳಿಗಾಗಿ ನೋವನ್ನೆಲ್ಲ ನುಂಗಿ, ತನ್ನ ಮಕ್ಕಳು ಗಂಡನಿಗಾಗಿ ಜೀವನವಿಡೀ ದುಡಿದು,ಪ್ರಾಣವನ್ನೇ ತ್ಯಜಿಸಿದಳಲ್ಲ! ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಅಂದು ಅವಳು “ಒಂದು ಬಾರಿ ನಮ್ಮಪ್ಪನನ್ನು ಕ್ಷಮಿಸಿ ಬಿಡಿರಿ”ಎಂದು ಗೋಗರೆದು ಕೇಳಿದಾಗಲೂ ನಾನು, ಅದೆಂಥ ಕಠೋರ ಮನಸ್ಸಿನವನಾಗಿದ್ದೆ. ಅಂದು ಅವಳನ್ನು ಸಮಾಧಾನಿಸಿ, ನನ್ನ ಸಿಟ್ಟು ಕಡಿಮೆ ಮಾಡಿ, ಅವಳೊಂದಿಗೆ ತವರಿಗೆ ಹೋಗಬೇಕಿತ್ತು.ಆದರೆ ನನ್ನ ಅಹಂ ನನಗೆ ಹೆಚ್ಚಾಗಿತ್ತು. ಕ್ಷಮೆ ಎನ್ನುವ ಶಬ್ದ ಕೇಳಿದಾಗಲೇ ನನಗೆ ಸಿಟ್ಟು ನೆತ್ತಿಗೇರುತ್ತಿತ್ತು. ಆದರೆ ನನ್ನ ಕೋಮಲ ಎಲ್ಲವನ್ನು ಸಹಿಸಿ, “ಈ ಗಂಡಸರೇ ಹೀಗೆ” ಎಂದು ಗೊಣಗುತ್ತಿದ್ದರೂ, ನನ್ನೊಂದಿಗೆ ಹೊಂದಿಕೊಂಡು ಹೋಗುತ್ತಿದ್ದಳು. ಆ ನೆನಪು ಇಂದಿಗೂ ನನ್ನನ್ನು  ಸೂಜಿಯ ಮೊನೆಯಂತೆ ಚುಚ್ಚುತ್ತನೋಯಿಸುತ್ತಿದೆ. ರಾಮರಾಯರು ಆ ಹಳ್ಳಿಯಲ್ಲಿ ಗುತ್ತಿನ ಮನೆಯ ಗುರಿಕಾರರಾಗಿದ್ದರು. ಅವರ ಹಿರಿಯ ಮಗಳೇ ಕೋಮಲ.ಕೋಮಲಳನ್ನು ಮೆಚ್ಚಿ ಮದುವೆಯಾಗಿದ್ದ ಕೀರ್ತನ ರಾಮರಾಯರ ಹಿರಿಯಳಿಯನಾಗಿದ್ದ. ರಾಮರಾಯರಿಗೆ ಮತ್ತಿಬ್ಬರು ಹೆಣ್ಣು ಮಕ್ಕಳಿದ್ದರು. ರಾಮರಾಯರ ಹೆಂಡತಿ ಮೊದಲೇ ಮರಣ ಹೊಂದಿದ್ದರಿಂದ, ಹಿರಿಯ ಮಗಳಾದ ಕೋಮಲ ತನ ಇಬ್ಬರು ತಂಗಿಯರಿಗೆ ಅಮ್ಮನ ಸ್ಥಾನದಲ್ಲಿ ಇದ್ದುಕೊಂಡು, ಒಳ್ಳೆಯ ಸಂಸ್ಕಾರವನ್ನು ನೀಡಿದ್ದಳು. ಗುತ್ತಿನ ಮನೆಯವರಾದ್ದರಿಂದ ಊರಿನ ನಾಲ್ಕು ಜನರಿಗೆ ನೀತಿ ಮಾತನ್ನು ಹೇಳುವ ಮನೆತನದಲ್ಲಿ ಯಾವುದೇ ಕೆಟ್ಟ ನಡವಳಿಕೆಗಳು ನಡೆಯದಂತೆ ಬಹಳ ಎಚ್ಚರಿಕೆಯಿಂದ ರಾಮರಾಯರು ನನ್ನ ಮೂವರು ಹೆಣ್ಣು ಮಕ್ಕಳನ್ನು ಸಾಕಿ ಸಲಹಿದ್ದರು. ಮದುವೆಯಾದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕೋಮಲ ಆಗಾಗ ತವರಿಗೆ ಹೋಗಿ ತನ್ನಿಬ್ಬರು ತಂಗಿಯಂದಿರಿಗೆ ಎಚ್ಚರಿಕೆಯ ಮಾತನ್ನು ಹೇಳುತ್ತಾ, ಸಲಹೆ ಸೂಚನೆಗಳನ್ನು ನೀಡುತ್ತಾ, ತಾಯಿಯ ಸ್ಥಾನದ ತನ್ನ ಕರ್ತವ್ಯವನ್ನು ನೆರವೇರಿಸುತ್ತಾ, ತವರು ಮನೆ ಹಾಗೂ ಗಂಡನ ಮನೆ ಎರಡೂ ಮನೆಯಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಳು. ಮೂರು ನಾಲ್ಕು ವರ್ಷಗಳಲ್ಲಿ ಕೋಮಲಳ ತಂಗಿಯಂದಿರಿಗೆ ಮದುವೆಯಾಯಿತು. ಇಬ್ಬರ ಗಂಡಂದಿರು ಒಳ್ಳೆಯ ಸ್ಥಿತಿವಂತರಾಗಿದ್ದರು. ಹಾಗೆ ನೋಡಿದರೆ ಕೋಮಲಳ ಗಂಡ ಕೀರ್ತನ್ ನಿಗೆ ಗುಮಾಸ್ತ ಕೆಲಸವನ್ನು ಬಿಟ್ಟರೆ,  ಆಸ್ತಿ ಪಾಸ್ತಿ ಏನೂ ಇರಲಿಲ್ಲ.ಅಂದಿನಿಂದ ಕೀರ್ತನ ನ ಮನೆಯಲ್ಲಿ ಇರುಸು ಮುರುಸು ಪ್ರಾರಂಭವಾಯಿತು . ಇದಕ್ಕೆ ಮುಖ್ಯ ಕಾರಣ ಕೀರ್ತನನ ಮನಸಲ್ಲಿದ್ದ ಕೀಳರಿಮೆ. ಮಾವ ಕರೆದಾಗಲಿಲ್ಲ ಕೋಮಲಳೊಂದಿಗೆ ಹೋಗುತ್ತಿದ್ದ ಕೀರ್ತನ ಇದೀಗ ಹೋಗುವುದನ್ನು ಕಡಿಮೆ ಮಾಡತೊಡಗಿದ. ಕೋಮಲ ಒತ್ತಾಯಿಸಿದರೂ, ನೀನು ಹೋಗಿ ಬಾ ನನಗೆ ಕೆಲಸ ಇದೆ ಎಂದು ಅವಳೊಬ್ಬಳನ್ನೇ ಕಳುಹಿಸುತ್ತಿದ್ದ. ಮಕ್ಕಳು “ಅಪ್ಪಾ ನೀನೂ ಬಾ” ಎಂದು ಹಠ ಮಾಡಿ ಕರೆದರೆ ಏನು ಮಾಡಲಾಗದೆ ಮಕ್ಕಳೊಂದಿಗೆ ಹೋಗಿ ಅವರನ್ನು ಅಲ್ಲಿ ಬಿಟ್ಟು, ತಾನು ರಾತ್ರಿ ಉಳಿದುಕೊಳ್ಳದೆ ಹಿಂದಿರುಗಿ ಬರುತ್ತಿದ್ದ. ಅದೊಂದು ದಿನ ಕೋಮಲಳ ಮನೆಯಲ್ಲಿ ಪೂಜೆ ನಡೆಯುವುದಿತ್ತು. ಕೋಮಲ ಈ ಬಾರಿ ಗಂಡ ಕೀರ್ತನನಿಗೆ ನೀವು ಬರಲೇಬೇಕೆಂದು ಹಠ ಹಿಡಿದಳು.“ನೀನು ಮಕ್ಕಳು ಹೋಗಿ ಬನ್ನಿ “ಎಂದಾಗ ಕೇಳಿಸದೆ ಒತ್ತಾಯಪೂರ್ವಕವಾಗಿ ಗಂಡನನ್ನು ಕರೆದುಕೊಂಡು ಮಕ್ಕಳ ಜೊತೆಗೆ ಹೊರಟಳು. ಆ ದಿನ  ತನ್ನ ಮಾವ ಉಳಿದಿಬ್ಬರು ಅಳಿಯಂದಿರಿಗೆ ಕೊಟ್ಟಷ್ಟು ಗೌರವ ಹಿರಿಯ ಅಳಿಯನಾದ ನನಗೆ ಕೊಡುತ್ತಿಲ್ಲ ಎಂದು ಕೋಪಗೊಂಡು ಕೀರ್ತನ್  ಜಗಳ ಮಾಡಿಕೊಂಡು, ಊಟವನ್ನೂ ಮಾಡದೆ ಹೊರಡಲನುವಾದಾಗ, ಕೋಮಲ ನಮ್ಮ ತಂದೆಯವರಿಗೆ ಪ್ರಾಯವಾಗಿದೆ ಏನೋ ತಪ್ಪಿ ಬಾಯಿಂದ ಮಾತು ಬಂದಿರಬಹುದು ಕಣ್ರಿ. ಅದನ್ನೇ ಏಕೆ ದೊಡ್ಡದು ಮಾಡುತ್ತೀರಾ. ಅಪ್ಪನ ಪರವಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ ಹೋಗಬೇಡಿ, ಊಟ ಮಾಡಿ ಒಟ್ಟಿಗೆ ಹೋಗೋಣವಂತೆ ಎಂದಾಗ, ಇಲ್ಲ ಕಣೇ ನನಗೆ ಅನುಭವಿಸಿದ್ದೆ ಬೇಕಾದಷ್ಟು ಆಯಿತು ಈ ಮನೆಯ ಊಟ ಯಾರಿಗೆ ಬೇಕಾಗಿದೆ? “ನಿನಗೆ ತವರು ಮನೆ ಹೆಚ್ಚೊ ಗಂಡನ ಮನೆ ಹೆಚ್ಚೊ ನಿನ್ನ ನಿರ್ಧಾರಕ್ಕೆ ಬಿಟ್ಟಿದ್ದು” ಎಂದು ಹೊರಡಲನುವಾದಾಗ,ಕೋಮಲ ನೋವಿನಿಂದಲೇ ಗಂಡ ಕೀರ್ತನನ ಹಿಂದೆಯೇ ಬಂದುಬಿಟ್ಟಿದ್ದಳು. ಅಂದಿನಿಂದ ಮಕ್ಕಳಾಗಲಿ, ಅವಳಾಗಲಿ ಆ ಮನೆಗೆ ಕಾಲಿಡಲಿಲ್ಲ. ಎರಡೂ ಮನೆಗಳ ಸಂಪರ್ಕ ಕಡಿದಂತೆ ಆಯಿತು. ಮುಂದೊಂದು ದಿನ ಕೋಮಲಳ ತಂದೆ ತೀರಿ ಹೋದ ಸುದ್ದಿಯನ್ನು ಕೋಮಲ ಊರಿನವರಿಂದ ತಿಳಿದು, “ನಾನೊಂದು ಸಲ ತಂದೆಯ ಮುಖವನ್ನು ನೋಡಬೇಕು” ಎಂದು ಗಂಡನನ್ನು ಅಂಗಲಾಚಿದರೂ ಕೀರ್ತನ್ ಒಪ್ಪಿಗೆಯನ್ನು ನೀಡಿರಲಿಲ್ಲ. ಅತ್ತು ಅತ್ತು ಕೋಮಲ ಸುಮ್ಮನಾಗಿದ್ದಳು. ಹೌದು ಕ್ಷಮೆ ಎನ್ನುವ ಪದಕ್ಕೆ ಬಹಳ ಹಿರಿದಾದ ಅರ್ಥವಿದೆ. ಎರಡು ಮನಸ್ಸುಗಳನ್ನು ಬೆಸೆಯುವ ಎರಡು ಕುಟುಂಬಗಳನ್ನು ಹೊಸೆಯುವ, ಸಮಾಜವನ್ನು ಒಂದುಗೂಡಿಸುವ ಶಕ್ತಿ ಇದೆ. ಅಂದು ನಾನು ಕೋಮಲ ಸಾರಿ ಸಾರಿ ಬೇಡಿದಾಗ ನನ್ನ ಅಹಂ ಬಿಟ್ಟು ನಾನು ಕ್ಷಮಿಸುತ್ತಿದ್ದರೆ ಎರಡು  ಕುಟುಂಬಗಳ ನಡುವೆ ಗೋಡೆ ನಿರ್ಮಾಣವಾಗುತ್ತಿರಲಿಲ್ಲ. ಅವಳು ಆ ಸಂದರ್ಭದಲ್ಲಿ ಎಷ್ಟು ನೊಂದಿದ್ದಳೊ !! ಸಾಯುವಾಗಲೂ ಅದೇ ನೋವಿನಲ್ಲಿ ಆಕೆ ಇಹಲೋಕ ತ್ಯಜಿಸಿದ್ದಳು. ನಾನು ಮಾಡಿದ ತಪ್ಪಿಗೆ ನನಗೀಗ ಶಿಕ್ಷೆಯಾಗುತ್ತಿದೆ. ನನ್ನ ಮಕ್ಕಳಿಗೆ ತವರಿಗೆ ಹೋಗಬೇಕು, ತಾಯಿ ಇಲ್ಲದಿದ್ದರೂ ತಂದೆಯನ್ನು ಕಾಣಬೇಕು ಎಂಬ ತುಡಿತವೂ ಇಲ್ಲದೆ ಗಂಡ ಮಕ್ಕಳು ಎಂದು ಹಾಯಾಗಿದ್ದಾರೆ. ಇದು ದೇವರು ನನಗೆ ಕೊಟ್ಟ ಶಿಕ್ಷೆ ಅಲ್ಲದೆ ಮತ್ತಿನ್ನೇನು? ಅಂದು ನಾನು ಮಾವಯ್ಯ ಹೇಳಿದ ಮಾತನ್ನು ಮರೆತು ಕ್ಷಮಿಸಿ ಬಿಡುತ್ತಿದ್ದರೆ, ಇಷ್ಟೆಲ್ಲ ನೋವು ಅನುಭವಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಕಾಲ ಮಿಂಚಿ ಹೋಗಿದೆ, ಇನ್ನು ಕ್ಷಮಿಸಬೇಕೆಂದರೆ ನನ್ನವಳಿಲ್ಲ. ಮನಸ್ಸಿನ ತೊಳಲಾಟವನ್ನು ಮಕ್ಕಳಲ್ಲಿ ಹೇಳಬೇಕೆಂದರೆ ಮಕ್ಕಳೂ ಬರುತ್ತಿಲ್ಲ. ನಾನು ನೀಡದ ಕ್ಷಮೆಗೆ ಪಶ್ಚಾತ್ತಾಪವೇ ಪ್ರಾಯಶ್ಚಿತ್ತ. ನಾನು ತಪ್ಪಿ ಬಿದ್ದರೂ ಹಿಂಸೆ ಅನುಭವಿಸಿದರೂ ಪರವಾಗಿಲ್ಲ. ನನ್ನ ಮಕ್ಕಳಿಗೆ ಕ್ಷಮಾ ಗುಣದ ಬಗ್ಗೆ ಹೇಳಬೇಕು. ಕ್ಷಮೆ ಎನ್ನುವುದು ಮನುಷ್ಯನ  ಬದುಕಿನಲ್ಲಿ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ.ದೇವರೇ ಆ ಅವಕಾಶವನ್ನಾದರೂ ಒದಗಿಸಿ ಕೊಡುವೆಯಾ? ನನ್ನ ಮನಸ್ಸಿಗೆ ನೆಮ್ಮದಿಯನ್ನು ಕರುಣಿಸುವೆಯಾ……. ಡಾ.ಸುಮತಿ ಪಿ

“ಕ್ಷಮೆ” ಸುಮತಿ ಪಿ ಅವರ ಸಣ್ಣ ಕಥೆ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಕನ್ನಡ ಸಾಹಿತ್ಯ ದಿಗ್ಗಜೆ ಶಾಂತಾದೇವಿ ಮಾಳವಾಡ

ಸಾವಿಲ್ಲದಶರಣರು ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಕನ್ನಡ ಸಾಹಿತ್ಯ ದಿಗ್ಗಜೆ ಶಾಂತಾದೇವಿ ಮಾಳವಾಡ ಮಹಿಳಾ ಸಾಹಿತ್ಯದ ಚರಿತ್ರೆ ಎಂದರೆ ಮಹಿಳೆಯರು ತಮ್ಮ ಅನುಭವಗಳು, ಸಮಾಜದ ಸ್ಥಿತಿ, ರಾಜಕೀಯ ಅಭಿಪ್ರಾಯಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ ಪಯಣವಾಗಿದ್ದು, ಇದು ಪ್ರಾಚೀನ ಕಾಲದಿಂದಲೂ ಇದ್ದು, ಅಮೇರಿಕಾದ ಕ್ರಾಂತಿಯಂತಹ ಸಂದರ್ಭಗಳಲ್ಲಿ ತೀವ್ರಗೊಂಡಿತು; ಇವರು ಮನೆ, ಸಮಾಜ ಮತ್ತು ಪ್ರಕೃತಿಯೊಂದಿಗಿನ ಸಂಬಂಧಗಳನ್ನು ಕಾದಂಬರಿ, ಕವಿತೆಗಳ ಮೂಲಕ ನಿರೂಪಿಸಿ, ಮಹಿಳೆಯರ ಸ್ಥಾನಮಾನದ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ, ಇದು ಮುಖ್ಯವಾಗಿ ಸ್ತ್ರೀವಾದಿ ಚಿಂತನೆಗಳನ್ನು ಜಗತ್ತಿಗೆ ಪರಿಚಯಿಸಿದೆ.ಮಹಿಳಾಪರ ಚಿಂತನೆ ಆಲೋಚನೆಗಳು ಕಥೆ ಕಾದಂಬರಿ ಕಾವ್ಯ ಸಾಹಿತ್ಯ ರಚನೆಯಲ್ಲಿ ಮುಕ್ತವಾಗಿ ಬರೆಯಲು ಆರಂಭಿಸಿದರು ಕನ್ನಡತಿಯರು. 12 ನೆಯ ಶತಮಾನದ ಶ್ರೇಷ್ಠ ವಚನಕಾರ್ತಿಯರು ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜ ಕಟ್ಟಿದರು.ನವ್ಯ ನವೋದಯ ಪ್ರಗತಿಶೀಲ ಬಂಡಾಯ ದಲಿತ ಸಾಹಿತ್ಯ ಹೀಗೆ ಎಲ್ಲಾ ಘಟ್ಟಗಳಲ್ಲಿವಚನ ಸಾಹಿತ್ಯ ಮತ್ತು ಶರಣೆಯರ ಸಾಹಿತಿಕ ಸಾಂಸ್ಕೃತಿಕ ಸಾಮಾಜಿಕ ಕಾರ್ಯಗಳನ್ನು ಮರೆಯಲಾಗದು. ಕನ್ನಡ ಸಾಹಿತ್ಯದಲ್ಲಿಜಯದೇವಿ ತಾಯಿ ಲಿಗಾಡೆ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತು ಸಮಗ್ರ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮವಾಗಿ ದುಡಿದವರು ಶಾಂತಾದೇವಿ ಮಾಳವಾಡ ಅವರು. ಶಾಂತಾದೇವಿ ಮಾಳವಾಡ ಇವರು 1922 ಡಿಸೆಂಬರ್ 10 ರಂದು ಬೆಳಗಾವಿ ಯಲ್ಲಿ ಜನಿಸಿದರು. ತಾಯಿ ಜಯವಂತಿದೇವಿ; ತಂದೆ ಕರ್ಜಗಿ ಮುರಿಗೆಪ್ಪ ಶೆಟ್ಟರು. ತವರು ಮನೆ ಹೆಸರು ಕರ್ಜಗಿ ದಾನಮ್ಮ. ಎರಡು ವರ್ಷದವಳಿದ್ದಾಗ ತಂದೆಯನ್ನು ಹಾಗು ಹತ್ತು ವರ್ಷದವಳಿದ್ದಾಗ ತಾಯಿಯನ್ನು ಕಳೆದುಕೊಂಡ ದಾನಮ್ಮ ಅಜ್ಜಿಯ ಮಡಿಲಲ್ಲಿ ಬೆಳೆದಳು. ವನಿತಾ ವಿದ್ಯಾಲಯದಲ್ಲಿ ಹೈಸ್ಕೂಲ ಎರಡನೆಯ ತರಗತಿಯವರೆಗೆ ಅಂದರೆ ಒಂಬತ್ತನೆಯ ತರಗತಿ ಕಲಿತು, ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು. ಮದುವೆಶಾಂತಾದೇವಿ ಮಾಳವಾಡ ಅವರು ತಮ್ಮ 15 ನೆಯ ವಯಸ್ಸಿನಲ್ಲಿ1937 ನೆಯ ಇಸವಿಯಲ್ಲಿ ಪ್ರೊ. ಸ.ಸ. ಮಾಳವಾಡರ ಜೊತೆ ಮದುವೆ ಆಯಿತು. ಮುಂದೆ ತಮ್ಮ ಪತಿಯ ಒತ್ತಾಸೆಯಿಂದಾಗಿ ಶಾಂತಾದೇವಿಯವರು ಮನೆಯಲ್ಲಿಯೆ ಇಂಗ್ಲೀಷ್,ಹಿಂದಿ, ಪ್ರಾಚೀನ ಕನ್ನಡ ಸಾಹಿತ್ಯ ಹಾಗು ವಚನ ಸಾಹಿತ್ಯದ ಅಧ್ಯಯನ ಮಾಡಿದರು. 1940 ರಲ್ಲಿ ಕನ್ನಡ ಜಾಣ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಪತಿಯ ಪ್ರೋತ್ಸಾಹದಿಂದ 1938ರಲ್ಲಿ ಅಕ್ಕನ ಬಳಗ ವೆಂಬ ಮಹಿಳಾ ಸಂಘಟನೆಯನ್ನು ಹುಟ್ಟು ಹಾಕಿದರು.ಶಾಂತಾದೇವಿ ತಾಯಿಯ ಮಮತೆ ತಂದೆಯ ಪ್ರೀತಿ ಕಾಣದ ಮುಗ್ಧ ಬಾಲಕಿಸುಮಾರು ಹತ್ತು ಸಲ ಅವರಿಗೆ ಗರ್ಭಪಾತವಾಯಿತು.ಮಕ್ಕಳಿಲ್ಲದ ಕೊರಗು ಬಿಟ್ಟು ಸಂಪೂರ್ಣ ಸಾಹಿತ್ಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದರು.ಅರಿವು (ಜ್ಞಾನ, ಅರಿವು), ಆಚಾರ (ಅಭ್ಯಾಸ) ಅನುಭವ (ಆಧ್ಯಾತ್ಮಿಕ ಅನುಭವ), ಕಾಯಕ (ದೈಹಿಕ ದುಡಿಮೆಯಿಂದ ಗಳಿಸುವುದು), ಸತ್ಯ ಮತ್ತು ಪರಿಶುದ್ಧತೆಯನ್ನು ಕಾಪಾಡುವುದು, ದಾಸೋಹ (ಯಾವುದೇ ಅಹಂ’ ಇಲ್ಲದೆ ದುಡಿದವರಿಗೆ ನೀಡುವುದು ಶರಣ ಸಂಸ್ಕೃತಿಯ ತತ್ವಗಳು.ಬಾಲ್ಯದಿಂದಲೂ ಇಂತಹ ಅಪೂರ್ವ ಶರಣ ಸಂಸ್ಕೃತಿ ಮೈಗೂಡಿಸಿಕೊಂಡ ಶಾಂತಾದೇವಿ ಮುಂದೊಂದು ದಿನ ನಾಡಿನ ಅಗ್ರ ಲೇಖಕಿ ಸಾಹಿತಿ ಲೇಖಕಿಯಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸಾರ್ವಜನಿಕ ಸಾಮಾಜಿಕ ಸೇವೆ ಅಕ್ಕನ ಬಳಗ ಸ್ಥಾಪನೆ ( 1940)ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು (1965)ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿಯ ಸದಸ್ಯರು (1974-1978)ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯರು (1979)ಧಾರವಾಡ ಆಕಾಶವಾಣಿ ಆಡಿಶನ್ ಕಮಿತಿ ಸದಸ್ಯರು(1961-1962)ಗಾಂಧಿ ಶಾಂತಿ ಪ್ರತಿಷ್ಠಾನದ ಮಹಿಳಾವಿಭಾಗದ ಕಾರ್ಯಾಧ್ಯಕ್ಷರು(1967-1970)ಕರ್ನಾಟಕ ವಿದ್ಯಾವರ್ಧಕ ಸಂಘ,ಧಾರವಾಡ ದ ಉಪಾಧ್ಯಕ್ಷರು (1974-1978)ಉತ್ತರ ಕರ್ನಾಟಕ ಲೇಖಕಿಯರ ಸಂಘ (ಹುಬ್ಬಳ್ಳಿ-ಧಾರವಾಡ) ದ ಆಜೀವ ಗೌರವಾಧ್ಯಕ್ಷರು ಸಾಹಿತ್ಯ ಕೃತಿಗಳು ಕಥಾಸಂಕಲನ ಮೊಗ್ಗೆಯ ಮಾಲೆಕುಂಕುಮ ಬಲ ಗದ್ಯ ಸಾಹಿತ್ಯ ಹಚ್ಚೇವು ಕನ್ನಡದ ದೀಪ.ಕನ್ನಡದ ತಾಯಿ.ಮಹಿಳೆಯರ ಅಲಂಕಾರಸೊಬಗಿನ ಮನೆಮಹಿಳೆಯರ ಆತ್ಮಶ್ರೀ.ರಸಾಪಾಕಸಾರ್ವಜನಿಕ ರಂಗದಲ್ಲಿ ಮಹಿಳೆ.ದಾಂಪತ್ಯಯೋಗವಧುವಿಗೆ ಉಡುಗೊರೆ.ಜನನೀ ಜನ್ಮ ಭೂಮಿಶ್ಚ.ಮಹಿಳಾ ಚೇತನ.ಸಮುಚ್ಚಯ. ಕಾದಂಬರಿಬಸವ ಪ್ರಕಾಶ.ದಾನದಾಸೋಹಿ ದಾನಮ್ಮ.ವೀರ ಶೂರರಾಣಿ ಕೆಳದಿ ಚೆನ್ನಮ್ಮ ಮಕ್ಕಳ ಸಾಹಿತ್ಯಬೆಳವಡಿ ಮಲ್ಲಮ್ಮ.ಕೆಳದಿ ಚೆನ್ನಮ್ಮ.ನಾಗಲಾಂಬಿಕೆ.ನೀಲಾಂಬಿಕೆಕುಟುಂಬ.ಬಸವಯುಗದ ಶಿವಶರಣೆಯರುಭಾರತದ ಮಾನಸಪುತ್ರಿಯರುಗಂಗಾಂಬಿಕೆಶಿವಯೋಗಿಣಿಎಣ್ಣೆ ಹೊಳೆಯ ನಂದಾದೀಪಪುರಾತನ ಶರಣರುದಾನದಾಸೋಹಿ ದಾನಮ್ಮ. ಪ್ರಶಸ್ತಿ ಗೌರವಗಳು ಜ.ಚ.ನಿ. ಪೀಠಾರೋಹಣ ಬೆಳ್ಳಿಹಬ್ಬ ‘ ಸಾಹಿತ್ಯಸುಮ ‘ ಬಂಗಾರದ ಪದಕಸಾಹಿತ್ಯ ಅಕಾಡೆಮಿ ಪ್ರಶಸ್ತಿ (1973)ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1983)ಸಾವಿತ್ರಮ್ಮ ದೇ.ಜ.ಗೌ. ಪ್ರಶಸ್ತಿ (1991)ಷಷ್ಟ್ಯಬ್ದಿ ಸಮಾರಂಭ (‘ ಪ್ರಶಾಂತ’ ಆಭಿನಂದನ ಗ್ರಂಥ ಸಮರ್ಪಣೆ:1982) 1999 ರಲ್ಲಿ ಬಾಗಲಕೋಟೆಯಲ್ಲಿ ನಡೆದ 68 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೇಷ್ಠ ಸಾಹಿತಿ ಶಾಂತಾದೇವಿ ಮಾಳವಾಡ ಅವರು 7 ಆಗಸ್ಟ್ 2005 ರಲ್ಲಿ ಬಯಲಲ್ಲಿ ಬಯಲಾದರು.ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸ್ನೇಹ ಪ್ರೀತಿ ಮತ್ತು ಆತ್ಮ ಸ್ಥೈರ್ಯದ ಸಂಕೇತವಾದ ಕನ್ನಡ ಸಾಹಿತ್ಯದ ದಿಗ್ಗಜೆ ಶಾಂತಾದೇವಿ ಮಾಳವಾಡ ಅವರು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಕೊಟ್ಟ ಕೊಡುಗೆ ಅಪಾರವಾಗಿದೆ. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಕನ್ನಡ ಸಾಹಿತ್ಯ ದಿಗ್ಗಜೆ ಶಾಂತಾದೇವಿ ಮಾಳವಾಡ Read Post »

ಕಾವ್ಯಯಾನ

“ಮಾನವರಾಗಿ” ಹಮೀದ್ ಹಸನ್ ಮಾಡೂರು

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಮಾನವರಾಗಿ” ದೇವನು ಭೂಮಿಯಸೃಷ್ಟಿಸಿ ಜಗತ್ತು ಎಂದಾಗಿಪ್ರಕೃತಿಯಿಂದ ಆಲಂಕರಿಸಿದ,ನಾವು ಜಗತ್ತಾಗಿಸಿ ದೇಶಗಳಾಗಿವಿಂಗಡಿಸಿ ಕೊಂಡು ಬಿಟ್ಟೆವು,! ಮನುಷ್ಯನನ್ನು ಸೃಷ್ಟಿಸಿಭೂಮಿಗೆ ಕಳುಹಿಸಿ ಕೊಟ್ಟನುಆ ಪರಮಾತ್ಮನ ನೆನೆಸಿ ಕೊಳ್ಳದೆನಾವು ಹಿಂದು ಮುಸ್ಲಿಂ ಕ್ರೈಸ್ತರಾಗಿವಿಂಗಡಿಸಿ ಕೊಂಡು ಬಿಟ್ಟೆವು.! ಹಮೀದ್ ಹಸನ್ ಮಾಡೂರು. ʼ

“ಮಾನವರಾಗಿ” ಹಮೀದ್ ಹಸನ್ ಮಾಡೂರು Read Post »

ಇತರೆ

“ಲಾಲ ಬಹದ್ದೂರ ಶಾಸ್ತ್ರಿ ಒಂದು ನೆನಪು”ವಿಜಯಲಕ್ಷ್ಮಿ ಹಂಗರಗಿ

ನೆನಪುಗಳ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಲಾಲ ಬಹದ್ದೂರ ಶಾಸ್ತ್ರಿ ಒಂದು ನೆನಪು” ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಕ್ಟೋಬರ್ 12 1904 ರಲ್ಲಿ ಜನಿಸಿದರು. ಇವರು ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವತಂತ್ರಕ್ಕಾಗಿ ಅವಿರತವಾಗಿ ಹೋರಾಡಿದರು.ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ ಮತ್ತು ಪ್ರಮಾಣಿಕತೆ ಅವರ ಜೀವನದುದ್ದಕ್ಕೂ ಎದ್ದು ಕಾಣಿಸುತ್ತದೆ. ರೈಲ್ವೆ ಸಚಿವರಾಗಿದ್ದಾಗ ಸಂಭವಿಸಿದ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದು, ಪ್ರಧಾನಿಯಾದ ನಂತರ ಕಡಿಮೆ ವೇತನಕ್ಕೆ ತೃಪ್ತಿ ಪಟ್ಟಿ ಕೊಂಡು ಕಠಿಣ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಿದ್ದು ಇವರ ಸರಳತೆಗೆ ಉದಾಹರಣೆಗಳು ಜಾತಿ ಪದ್ಧತಿಯನ್ನು ವಿರೋಧಿಸಿ ತಮ್ಮ ಹೆಸರಿನಲ್ಲಿದ್ದ ಜಾತಿ ಸೂಚಕವ ಪದವನ್ನು ತೆರೆದಿದ್ದು ಅವರ ಸರಳ ಮನೋಭಾವವನ್ನು ತೋರಿಸುತ್ತದೆ.ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆಯ ಉದಾಹರಣೆಗಳು . *ನೈತಿಕ ಹೊಣೆಗಾರಿಕೆ:* ರೈಲ್ವೆ ಸಚಿವರಾಗಿದ್ದಾಗ ಕಲ್ಲೇಕುಚಿ ರೈಲು ದುರಂತ ಸಂಭವಿಸಿ ಅನೇಕ ಜನರು ಸಾವನ್ನಪ್ಪಿದಾಗ ಅದಕ್ಕೆ ನೈತಿಕಹೊಣೆ ಬರಲು ಅವರ ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.  *ಆರ್ಥಿಕ ಸರಳತೆ* ಪ್ರಧಾನಿಯಾಗಿದ್ದರೂ ಅವರು ಕೇವಲ 400 ತಿಂಗಳಿಗೆ ವೇತನ ಪಡೆಯುತ್ತಿದ್ದರು ತಮ್ಮ ಕುಟುಂಬದ ನಿರ್ವಹನಿಗೆ ಇದು ಸಾಕು ಎಂದು ಅವರು ಹೇಳಿದ್ದರು. ಅವರ ದೊಡ್ಡ ಮನೆ ನಿರ್ಮಾಣ ಮಾಡದೆ ತಮ್ಮ ಹಳೆಯ ವಾಸಸ್ಥಾನದಲ್ಲಿ ಮುಂದುವರೆದರು. ಜಾತಿ ಪದ್ಧತಿ ವಿರೋಧ ಅವರ ಹೆಸರಿನ ಜೊತೆಗಿದ್ದ ಜಾತಿ ಸೂಚಕ ಪದವನ್ನು ಅವರು ತೊರೆದರು. ಇದರ ಬದಲಾಗಿ ಕಾಶಿ ವಿದ್ಯಾರ್ಥಿದಲ್ಲಿ ಪದವಿ ಪಡೆದ ನಂತರ ಸಿಕ್ಕ ಶಾಸ್ತ್ರ ಎಂಬ ಬಿರುದನ್ನು ಅವರು ಬಳಸಲು ಪ್ರಾರಂಭಿಸಿದರು. ಜನರೊಂದಿಗೆ ನಿಕಟ ಸಂಬಂಧ ಆಹಾರ ಕೊರತೆಯ ಸಂದರ್ಭದಲ್ಲಿ ಅವರು ಜನರಿಗೆ ವಾರಕ್ಕೆ ಒಂದು ದಿನ ಉಪವಾಸ ಮಾಡಲು ಕರೆ ನೀಡಿದರು. ಇದು ಅವರ ಸರಳ ಜೀವನ ಶೈಲಿ ಮತ್ತು ಬದ್ಧತೆಯನ್ನು ತೋರಿಸುತ್ತದೆ. “ಜೈ ಜವಾನ್ ಜೈ ಕಿಸಾನ್ ಘೋಷಣೆ “1965ರ ಭಾರತ್ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ನೀಡಿದರು. ಇದು ದೇಶದ ಸೈನಿಕರು ಮತ್ತು ರೈತರ ಶ್ರಮವನ್ನು ಮತ್ತು ದೇಶದ ಏಕತೆಯನ್ನು ಸಾರಿತು.ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಕ್ಟೋಬರ್ 2 194 ರಂದು ಉತ್ತರ ಪ್ರದೇಶದ ಮುಗಲ್ ಸೈರಾಂನಲ್ಲಿ ಜನಿಸಿದರು ಅವರು ಭಾರತೀಯ ಹೋರಾಟದಲ್ಲಿ ಗಾಂಧೀಜಿಯವರ ಆದರ್ಶಗಳಿಂದ ಪ್ರಭಾವಿತರಾಗಲು 1921 ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ತಮ್ಮ ಅಧ್ಯಯನವನ್ನು ಸ್ಥಗಿತಗೊಳಿಸಿದರು. 1926ರಲ್ಲಿ ಕಾಶಿ ವಿದ್ಯಾಪೀಠದಿಂದ ಪದವಿ ಪಡೆದ ನಂತರ ಅವರಿಗೆ ಶಾಸ್ತ್ರಿ ಎಂಬ ಬಿರುದು ನೀಡಲಾಯಿತು. ಸ್ವತಂತ್ರ ಹೋರಾಟಗಾರರಾಗಿ ಅನೇಕ ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದರು. ಸ್ವತಂತ್ರ ನಂತರ ಅವರು ವಿವಿಧ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿದರು. ಮತ್ತು ಅರಿಯಲೂರ್ ರೈಲ್ವೆ ಅಪಘಾತ ಜವಾಬ್ದಾರಿಯನ್ನು ತೆಗೆದುಕೊಂಡು ರೈಲ್ವೆ ಸಚಿವರಾಗಿ ರಾಜೀನಾಮೆ ನೀಡಿದರು 1964 ರಲ್ಲಿ ಭಾರತದ ಎರಡನೇ ಪ್ರಧಾನಮಂತ್ರಿಯಾದರು. *ಜೀವನದ ಪ್ರಮುಖ* *ಘಟ್ಟಗಳು* ಆರಂಭಿಕ ಜೀವನ ಅಕ್ಟೋಬರ್ 2 194 ರಂದು ಉತ್ತರ ಪ್ರದೇಶದ ಮುಘಲ್ ರಾಯನಲ್ಲಿ ಜನಿಸಿದರು. ಅವರ ತಂದೆ ಶಾರದಾ ಪ್ರಸಾದ್ ಶ್ರೀವಾಸ್ತವ್ ಮತ್ತು ತಾಯಿ ರಾಮ ಧೂಲಾರಿ ದೇವಿ ಆರು ತಿಂಗಳು ಮಗುವಾಗಿದ್ದಾಗ ತಂದೆ ನಿಧನರಾದರು. ಸ್ವತಂತ್ರ ಚಳುವಳಿ 1921 ರಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡರು ಅವರು 1926 ರಲ್ಲಿ ಕಾಶಿ ವಿದ್ಯಾಪೀಠದಿಂದ ಶಾಸ್ತ್ರಿ ಪದವಿಯನ್ನು ಪಡೆದರು. ಸ್ವತಂತ್ರ ಹೋರಾಟದಲ್ಲಿ ಹಲವಾರು ಬಾರಿ ಜೈಲು ಶಿಕ್ಷೆ ಅನುಭವಿಸಿದರು. 1930ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಎರಡುವರೆ ವರ್ಷ ಜೈಲು ಸೇರಿದರು. ರಾಜಕೀಯ ವೃತ್ತಿ 1937ರಲ್ಲಿ ಉತ್ತರ ಪ್ರದೇಶದ ಸಂಸದೀಯ ಮಂಡಳಿಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸ್ವತಂತ್ರದ ನಂತರ ಅವರು ಉತ್ತರ ಪ್ರದೇಶದ ಪೊಲೀಸ್ ಸಚಿವರಾಗಿ ನೇಮಕಗೊಂಡರು. ಮತ್ತು ಗಲಭೆ ಕೋರರನ್ನು ಚದುರಿಸಲು ಲಾಠಿಗಳ ಬದಲಿಗೆ ನೀರಿನ ಫಿರಂಗಿಗಳನ್ನು ಬಳಸಲು ಸೂಚಿಸಿದರು. 1956 ರಲ್ಲಿ ಅರಿಯಲೂರ್ ರೈಲು ಗಾತ್ರದ ಜವಾಬ್ದಾರಿಯನ್ನು ಹೊತ್ತು ರೈಲ್ವೆ ಸಚಿವರಾಗಿ ರಾಜೀನಾಮೆ ನೀಡಿದರು. ಪ್ರಧಾನ ಮಂತ್ರಿ 1964ರಲ್ಲಿ ಭಾರತದ ಎರಡನೇ ಪ್ರಧಾನಮಂತ್ರಿಯಾಗಲು ಅವರು ತಮ್ಮ ಸರಳತೆ ನೈತಿಕತೆ ಮತ್ತು ಆಂತರಿಕ ಶಕ್ತಿಗಾಗಿ ಹೆಸರುವಾಸಿಯಾಗಿದ್ದರು. “ಜೈ ಜವಾನ್ ಜೈ ಕಿಸಾನ್” ಎಂಬ ಅವರ ಘೋಷಣೆ ಕೃಷಿಕರನ್ನು ಮತ್ತು ಸೈನಿಕರನ್ನು ಬೆಂಬಲಿಸುತ್ತದೆ. ನಿಧನ 1966 ರಲ್ಲಿ ತಾಸ್ಕೆಂಟ್ ನಲ್ಲಿ ನಿಧನರಾದರು ಅವರ ಅಕಾಲಿಕ ಮರಣ ದೇಶಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿತು. ವಿಜಯಲಕ್ಷ್ಮಿ ಹಂಗರಗಿ

“ಲಾಲ ಬಹದ್ದೂರ ಶಾಸ್ತ್ರಿ ಒಂದು ನೆನಪು”ವಿಜಯಲಕ್ಷ್ಮಿ ಹಂಗರಗಿ Read Post »

ಕಾವ್ಯಯಾನ

ಶಂಕರ್ ಪಡಂಗ ಕಿಲ್ಪಾಡಿ-“ಕವಿತೆ ಹುಟ್ಟಿದ್ದು ಹೇಗೆ?”

ಕಾವ್ಯ ಸಂಗಾತಿ ಶಂಕರ್ ಪಡಂಗ ಕಿಲ್ಪಾಡಿ- “ಕವಿತೆ ಹುಟ್ಟಿದ್ದು ಹೇಗೆ?” ನನ್ನೊಳಗಿನ ಕವಿತೆಯನ್ನುಬಡಿದೆಬ್ಬಿಸಿದವರುತಿದ್ದಿ ತೀಡಿದವರು ಯಾರು..?ಅಕ್ಷರದ ,ಹಿಡಿತ, ತುಡಿತ, ಮಿಡಿತಗಳಅರಿವಿಲ್ಲದಿದ್ದರೂ,ಪಡುವಣದ ಶರಧಿಯಜೊತೆಲಲ್ಲೆಗರೆಯುವಚಂದಿರನ ನೋಡಿ  ನನ್ನೊಳಗಿನ ಕವಿತೆಯ ಹುಟ್ಟು ,ಜೀವನದ ಅರ್ದ ಸತ್ಯದ ಬವಣೆಯ ನೆನೆದು,ಪೊಳ್ಳು ಭರವಸೆಯ ನೋಡಿಹುಟ್ಟಿತ್ತು ಕವಿತೆ.ನೀರುಣಿಸದೆ ಬೆಳೆದಹೆಮ್ಮರಗಳ ಕತ್ತರಿಸಿದರೂ,ಹಠ ಬಿಡದ ತ್ರಿವಿಕ್ರಮನಂತೆಮತ್ತೆ ಮತ್ತೆ ಚಿಗುರಿ,ಹಕ್ಕಿಗಳಿಗಾಸರೆಯನೀಡುವುದ ನೋಡಿ ,ಹುಟ್ಟಿತ್ತು ಕವಿತೆ.ಅಂತಸತ್ವವ ಮರೆತಂತೆಜೀವಿಸುವವರ ನೋಡಿ,ಬದುಕೆಲ್ಲ ಸವೆಸಿದರೂತೃಪ್ತಿ ಇಲ್ಲದ ಜನರ ನೋಡಿ,ಹುಟ್ಟಿತ್ತು ಕವಿತೆ.ಬದುಕು ಬಂಧುರವಾಗಲುನಿನ್ನನ್ನು ಅಪ್ಪಿಕೊಂಡೆ,ಒಪ್ಪಿಕೊಂಡೆ ಈಗನೀ ನನ್ನ ಜೀವಾಳವಾದೆ. ಶಂಕರ್ ಪಡಂಗ ಕಿಲ್ಪಾಡಿ

ಶಂಕರ್ ಪಡಂಗ ಕಿಲ್ಪಾಡಿ-“ಕವಿತೆ ಹುಟ್ಟಿದ್ದು ಹೇಗೆ?” Read Post »

ಇತರೆ, ಜೀವನ

“ನೆಂಟಸ್ತನದ ಸಂಬಂಧಗಳ ನಡೆ” ವಿಶೇಷ ಲೇಖನ ಸುಮನಾ ರಮಾನಂದ

ಸಂಬಂಧಗಳ ಸಂಗಾತಿ ಸುಮನಾ ರಮಾನಂದ “ನೆಂಟಸ್ತನದ ಸಂಬಂಧಗಳ ನಡೆ” ಇದ್ಯಾವ ಸಂಬಂಧಗಳ ಉಳಿಸುವಿಕೆ ಬಗ್ಗೆ ನಾ ಹೇಳಲು ಹೊರಟಿದ್ದೀನಿ ಇಂದಿನ ಅಂಕಣದಲಿ ಅಂತ ಆಶ್ಚರ್ಯಪಡದಿರಿ.ನಮ್ಮನು ಹೊಗಳಿದಂತೆ ಮಾಡಿ ನಮಗೇ ಗೊತ್ತಾಗದಂತೆ ತೆಗಳುವ,ತೆಗಳಿದರೂ ಅದನೇ ಸರಿಯೆಂದು ಸಮರ್ಥಿಸಿಕೊಳ್ಳುವ ಅದೇ ನಮ್ಮ ಹತ್ತಿರದ ನೆಂಟರ ಬಗ್ಗೆ ಕಣ್ರಿ… ಈಗಿನ ನಮ್ಮ ಕಾಲಮಾನದಲಿ ನಮ್ಮೆಲ್ಲರ ನೆಂಟರ ಜೊತೆಗಿನ ಸಂಬಂಧ ನಿಧಾನವಾಗಿ ಕಳೆಗುಂದುತಾ ಇರೋದು ನಿಮ್ಮೆಲ್ಲರ ಗಮನಕೂ ಬಂದಿರಬಹುದು.ಇದರ ಕಾರಣ  ಏನಿರಬಹುದು ಅಂತ ಒಮ್ಮೆ ವಿಚಾರ ಮಾಡಿದರೆ ತಿಳಿಯುತ್ತದೆ.ಮೊದಲನೆಯ ಕಾರಣ ಪ್ರತಿಯೊಬ್ಬರಿಗೂ ನೆಂಟರ ಜೊತೆ ಕಳೆಯಲು ಸಮಯ ಹೊಂದಾಣಿಕೆಯಾಗದಿರುವುದು.ಯಾರಾದ್ರೂ ನೆಂಟರು ಮನೆಗೆ ಬರ್ತಾರೆಂದರೆ ನಾವು ಮೊದಲು ಯೋಚಿಸುವುದೇ ಅವರಿಗೆ ನಾವು ಸಾಕಷ್ಟು ಸಮಯ ಕೊಡಲಾಗುವುದೇ ಆತಿಥ್ಯ ಮಾಡಲು ಹಾಗೂ ಅವರ ವಸತಿಗೆಲ್ಲ ಸರಿಯಾಗಿ ವ್ಯವಸ್ಥೆ ಮಾಡಲಾದೀತೇ ಎಂದು.ಎಲ್ಲರೂ ಹೀಗಿರುತ್ತಾರೆಂದು ಹೇಳಲಾಗದು.ನೆಂಟರೆಂದರೆ ಇಷ್ಟಪಡುವ ಮಂದಿಯೂ ಸಹ ಹೆಚ್ಚಾಗಿ ಇರುತ್ತಾರೆ. ಇನ್ನೊಂದು ಕಾರಣವೆಂದರೆ ಕೆಲವರಿಗೆ ನಂಟರು ಬರುತ್ತಾರೆಂದರೆ ಇರಿಸುಮುರಿಸು ಉಂಟಾಗುವುದು ಏಕಂದರೆ ಕೆಲವು ನೆಂಟರಿಗೆ ಅಲ್ಲಿಂದಿಲ್ಲಿಗೆ ಚಾಡಿಮಾತು ಹೇಳಿ ಜಗಳ ತಂದು ಹಾಕುವ ಸ್ವಭಾವಿರುತ್ತದೆ,ಆ ಸ್ವಭಾವದವರನ್ನು ದೂರವಿರಿಸುವ ಅಭ್ಯಾಸ ಆತಿಥ್ಯ ನೀಡುವವರಿಗೆ ಇರುತ್ತದೆ ಹಾಗಾಗಿ ಅಂತಹ ನೆಂಟರು ತಮ್ಮ ಮನೆಗೆ ಬರದಂತೆ ಕಾರಣ ಹುಡುಕುತ್ತಾರೆ.ಒಂದುವೇಳೆ ಬಂದರೂ ಮರ್ಯಾದೆಯಿಂದಲೇ ಚೆನ್ನಾಗಿ ಆತಿಥ್ಯ ಮಾಡಿ ಕಳಿಸುತ್ತಾರೆ.  ಇನ್ನು ಹಲವರಿಗೆ ತಮ್ಮ ಆಫೀಸ್ ಹಾಗೂ ಮನೆಯ ಕೆಲಸಗಳ ಮಧ್ಯೆಯೂ ಅವರೆಲ್ಲರ  ಇಷ್ಟಾನುಸಾರವಾಗಿ ನೆಂಟರ ಬೇಕು ಬೇಡಗಳನು ಪೂರೈಸಲಾದೀತೇ ಅನ್ನುವ ಆತಂಕ ಮನಸಲಿ‌ ಕಾಡುತ್ತದೆ.ಪಾಪ ಚೆನ್ನಾಗಿ ಆತಿಥ್ಯ ಮಾಡಿ ಕಳಿಸಿದರೂ ಸಹ ಅದೇ ನೆಂಟರು ಹೊರಗೆ ಬಂದಾಗ ತಮ್ಮ ಬಗ್ಗೆ ಹಾಗೂ ತಮ್ಮ ಆತಿಥ್ಯದ ಬಗ್ಗೆಯೇ ಕೊಂಕು ಅಥವಾ ವ್ಯಂಗ್ಯದ ಮಾರಾಡುತ್ತಾರೆನ್ನುವ ಆತಂಕದಲಿ ದಿನ ದೂಡುತ್ತಾರೆ…ಹಾಗಾಗಿ ನೆಂಟರ ಬರುವಿಕೆ ಇಂದಿನ ದಿನಗಳಲಿ ಬಲು ಅಪರೂಪವಾಗಿದೆ ಅಂತಲೇ ಹೇಳಬಹುದು.ಅವರವರ ದೃಷ್ಟಿಕೋನದಲ್ಲಿ ನೋಡಿದಾಗ  ಇದರಲಿ ಯಾರದೂ ತಪ್ಪಿಲ್ಲವೆಂತಲೂ ಅನಿಸುವುದು.ಆದರೂ ಮನೆಗೆ ನೆಂಟರ ಆಗಮನ ಚೈತನ್ಯದಾಯಕವೂ ಹೌದು ಜೊತೆಗೆ ಹಲವು ವಿಚಾರಗಳ ವಿನಿಮಯವಾಗುವಿಕೆ ಮನಸಿನ ಏಕಾತಾನತೆಗೆ ಒಳ್ಳೆಯ ಮದ್ದು ಆಗುವುದಂತೂ ಸತ್ಯ. ನೆಂಟಸ್ತನವನು ಉಳಿಸುವ ನಡೆಯನು ವಿವರಿಸುತಾ ಹೀಗೂ ಯೋಚಿಸಬಹುದು..ನೆಂಟರು ಒಂದು ಮದುವೆಯ ಸಮಾರಂಭದಲ್ಲೊ ಅಥವಾ ಒಂದು ಹೋಮ- ಹವನದ ಕಾರ್ಯಕ್ರಮದಲ್ಲೋ  ಸೇರಿದಾಗ ಎಲ್ಲರಿಗೂ ತಮ್ಮ ಕುಟುಂಬದ ಈ ಐಕ್ಯತೆಯನು ಕಂಡು ಸಂತಸವಾಗುತ್ತದೆ.ಕುಟುಂಬದ ಹೊಸ ಸದಸ್ಯರನು ಹಳೆಯ ತಲೆಮಾರಿನವರು ತಮ್ಮ‌ ಕಾಲವಿನ್ನು ಮುಗಿಯಿತಪ್ಪಾ ಎನ್ನುತಾ ತುಂಬು ಮನಸಿಂದ ಅವರೆಲ್ಲರ ಪರಿಚಯ ಮಾಡಿಕೊಡುವುದನು ಕಂಡು ಒಮ್ಮೆಗೇ ಮನಸು ಭಾವುಕವಾಗುತ್ತದೆ. ಮುಂದೊಂದಿನದ  ಸಮಾರಂಭದಲಿ ಈ ಹಿರಿಯ ತಲೆಮಾರಿನವರು ಕಣ್ಮರೆಯಾಗದಿದ್ರೆ ಸಾಕು ಅಂತಲೂ ಮನಸು ಹಾರೈಸುತ್ತದೆ. ಜೊತೆಗೆ ನೆಂಟಸ್ತನ ಕುಂಠಿತವಾಗುವಿಕೆಯ ಮತ್ತೊಂದು ಮುಖ್ಯ ಕಾರಣವೆಂದರೆ..ಮೊಬೈಲ್ ಚಟ ಹಾಗೂ ಸಾಮಾಜಿಕ ತಾಣವೆನ್ನಬಹುದು. ಇತ್ತೀಚೆಗಿನ ಮೊಬೈಲಿನ YouTube Shorts ವೀಕ್ಷಣೆಯ ಮಟ್ಟ ಯಾವ ಯಾವ ರೀತಿಯಲಿ ಏರಿದೆಯೆಂದರೆ ಇಂದಿನ ಯುವಜನತೆ,ಹದಿಹರೆಯದ ಮಕ್ಕಳು,ಮಧ್ಯೆ ವಯಸ್ಸಿನ ಹೆಂಗಸರು, ಅರ್ಧ ಶತಕದ ಅಂಚಲಿರುವ ಗಂಡಸರೆನ್ನುವಭೇಧಭಾವವಿಲ್ಲದೆ ಈ ಚಟ ಆವರಿಸಿಕೊಂಡು ಬಿಟ್ಟಿದೆ. ಇದಕ್ಕೆ ದಾಸರಾಗಿರೊದರಿಂದ  ಮನೆಗೆ ಯಾರು ಬಂದರೂ ಅಥವಾ ಯಾವ ಫಂಕ್ಷನ್ ಗೆ ಹೋಗಬೇಕೆಂದರೂ ಇದಕೆ ಅಡ್ಡಿಯಾದೀತೆಂಬ ನೆಪವೊಡ್ಡಿ ಹೋಗದೇ ಇದ್ದುಬಿಡುತ್ತಾರೆ.ಇಂತಹ ಚಟದಿಂದ ಹೊರ ಬಂದರೆ ಮಾತ್ರ ಸಂಬಂಧಗಳ ಉಳಿಯುವಿಕೆ ಸಾಧ್ಯವಾಗುತ್ತದೆ.ಇಲ್ಲದಿದ್ರೆ ತಾವಾಯ್ತು ತಮ್ಮ ಪಾಡಾಯ್ತು ಅನ್ನುವ ಸ್ಥಿತಿಗೆ ಈ Gen Z ಹೋಗುವುದರಲಿ ಹೆಚ್ಚು ಕಾಲ ಉಳಿದಿಲ್ಲ ಅನ್ನಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಸಮಾಜದಲಿ ಒಳ್ಳೆಯ ಮನಸ್ಸಿರುವ ಎಲ್ಲರ ಜೊತೆಗೆ ಅದರಲೂ ತಮ್ಮ ಕುಟುಂಬದ ತೀರ ಹತ್ತಿರದ ನೆಂಟರಿಷ್ಟರ ಜೊತೆಯಲಿ ಬೆರೆತಾಗ ಮಾತ್ರ ಸಾಮರಸ್ಯದಿಂದ ಬಾಳು ಸಾಗುತಾ ನಮ್ಮೆಲ್ಲರ ಬಾಳ್ವೆ ಸುಂದರವೆನಿಸುತ್ತದೆ.ಇಲ್ಲವಾದರೆ ಏಕಾತಾನತೆಯ ಏಕಾಂತ ಕಾಡಿ,ಬೇರೆ ಯಾರ ಬಗ್ಗೆಯೂ ಯೋಚಿಸದಂತಹ ಸ್ವಾರ್ಥದತ್ತ ಮನಸು ಸಾಗುತ್ತದೆ. ನಮ್ಮ ಬದುಕು ಇವೆರಡು ದೃಷ್ಟಿಕೋನದಲಿ ನೋಡಿದಾಗ ಅದು  ಹೇಗಿರಬೇಕು ಅನ್ನುವ ಆಯ್ಕೆ ನಮ್ಮದೇ! ಸುಮನಾ ರಮಾನಂದ, ಕೊಯ್ಮತ್ತೂರು 

“ನೆಂಟಸ್ತನದ ಸಂಬಂಧಗಳ ನಡೆ” ವಿಶೇಷ ಲೇಖನ ಸುಮನಾ ರಮಾನಂದ Read Post »

ನಿಮ್ಮೊಂದಿಗೆ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ ಕವಿತೆ, “ಚಳಿ-ಚಳಿ”

ಕಾವ್ಯ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಚಳಿ-ಚಳಿ”   ಎಲ್ಲವನು ಕಳೆದುಕೊಂಡೆತನುವು ಮನವುಒಲವು ಬಲವುಈ ಚಳಿಯರಾತ್ರಿಗೆ! ಏಕಾಂತದ ನಡುಕಎದೆಯೊಳಗೆವಿರಹದ ಉರಿಅರಿವು ಜರಿದುಮರೆವು ಮಸೆದು ಹೊರಗೆ-ರಂಧ್ರ ಕೊರೆವ ಚಳಿಒಳಗೆ-ದಹಿಸುವ ನಿನ್ನನೆನಪ ಸುಳಿ ನೀನಿರದ ವೇಳೆಜೀವ ಬಾದಿತನಿದಿರೆ ಬಾರದೆನೆಮ್ಮದಿ ಗದ್ಗದಿತ ಮೆಲ್ಲುವ ವೇದನಕನ್ನಡಿ ನಗುತಕಾಯಿಲೆಗೆ ಕೆಡವಿದಮೇಧಾವಿ ಶಕುನ ಗಡಿಯಾರದ ಮುಳ್ಳುಗಳಶಬ್ಧವು-ಕಿವಿಯೊಳಗೆಸಲಾಕೆ ಬಾರಿಸಿದ ಹಾಗೆಮಿಣುಕು ದೀಪಅಣಕಿಸಿದ ಹಾಗೆ ನೀನಿರದಈ ಚಳಿಯ ರಾತ್ರಿಹಿಂಡುತಿವೆಕರಳು ನರಳಗಳನುಹಿಮದ ಗರ್ಭದೊಳಗೆಮಲಗಿಸಿ ——– ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ ಕವಿತೆ, “ಚಳಿ-ಚಳಿ” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ “ಅಕ್ಕ ,ನೀನು ಮಹಾದೇವಿ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಅಕ್ಕ ,ನೀನು ಮಹಾದೇವಿ” 12ರ ಶತಮಾನದಲ್ಲಿ ಉದಯಿಸಿಹೆಣ್ಣು ಕುಲಕ್ಕೆ ಮಾದರಿಯಾಗಿಹತ್ತು ಹಲವು ಕಷ್ಟಗಳನ್ನು ಸರಿಸಿದಿಟ್ಟ ಹೆಜ್ಜೆ ಇಟ್ಟು ಮುನ್ನಡೆದಿ ಅಕ್ಕ// ಯಾರ ಮಾತಿಗೂ ಕಿವಿಗೊಡದೆಯಾರ ಹಂಗಿಗೂ ಒಳಗಾಗದೆಯಾರ ಆಸರೆಯನ್ನು ಬಯಸದೆಚನ್ನಮಲ್ಲಿಕಾರ್ಜುನನ್ನು ಅರಸಿದೆ ಅಕ್ಕ// ಅರಮನೆ ಅರಸನನ್ನು ಬದಿಗಿರಿಸಿಲೌಕಿಕಸುಖ ಸಂಪತ್ತನ್ನು ಧಿಕ್ಕರಿಸಿಜಗದ ಜಂಜಾಟವ ಹಿಂಗಳಿಸಿಅರಸುತ್ತ ನಡೆದೆ ಅಕ್ಕ// ಅಲ್ಲಮನ ಅಧ್ಯಕ್ಷತೆಯಲ್ಲಿಬಸವಣ್ಣನ ಅನುಭವತೆಯಲ್ಲಿನೀ ಅರಸಿ ಶರಣರ ಸಂಗಡದಲ್ಲಿಕಲ್ಯಾಣದ ಕಾಶಿಗೆ ತೆರಳಿದೆ ಅಕ್ಕ// ಆಶೆ ಆಕಾಂಕ್ಷೆಯನ್ನು ಬದಿಗಿಟ್ಟುಸುಖ ಸುಪ್ಪತ್ತಿಗೆಯನ್ನು ಸರಿಸಿಟ್ಟುಚೆನ್ನಮಲ್ಲಿಕಾರ್ಜುನನ್ನು ಅರಸುತ್ತಾಕದಳಿವನ ಕಾಲಿಟ್ಟು ಲಿಂಗೈಕ್ಯಾದೆ ಅಕ್ಕ// ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ “ಅಕ್ಕ ,ನೀನು ಮಹಾದೇವಿ” Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ನಿನ್ನೊಡನಾಟದ ಕಡಲ ಹಾಯ್ ದೋಣಿಯಲಿ ವಿಹರಿಸುವಾಸೆಸರಸ ಸಲ್ಲಾಪ ಸಖ್ಯ ಸವಿಯ ತೋಳ ಸೆರೆಯಲಿ ಮೈಮರೆವಾಸೆ ಬಾಹುಬಂಧನದಿ ಬಂಧಿಯಾಗಿ ಬಯಕೆ ತೊಟ್ಟಿಲಲಿ ತೂಗುವಾಸೆಓಡೋ ಮೋಡ ಮೆದ್ದೆ ಮೇಲಿಹ ಸ್ವರ್ಗ ಪಥದಲಿ ಪಯಣದಾಸೆ ಚುಕ್ಕಿತಾರೆ ಚಂದ್ರನೂರಿಗೆ ಇಂದ್ರನ ಬೆಳ್ಳಿ ರಥದಲಿ ಹೋಗುವಾಸೆಹೃದಯದ ಅರಮನೆಯ ಪುಟ್ಟ ಗರ್ಭ ಗುಡಿಯಲಿ ನಿದ್ರಿಸುವಾಸೆ ಪಚ್ಚೆ ಮಲ್ಲಿಯ ಹಚ್ಚಹಸುರಿನ ನಿನ್ನೆದೆ ಬನದಲಿ ಹೂವಾಗುವಾಸೆಶುಭ್ರ ಹೊಳಪಿನ ಹಂಸವಾಗಿ ಕಣ್ಣ ಕೊಳದಲಿ ಈಜಾಡುವಾಸೆ ಮೇಘಮಂದಾರದ ನಾದತರಂಗ  ವೀಣೆಯಲಿ ಹಾಡಾಗುವಾಸೆಭೃಂಗದೊಲವಿನ ಮಕರಂದದ ಸಿಹಿ ಜೇನಿನಲಿ ಜಿನುಗುವಾಸೆ ಹೊನ್ನಾಸೆ ಚಿತ್ತಾರದ ಬಣ್ಣ ಬಣ್ಣದೊಕುಳಿ ಬೆಡಗಲಿ ಮಿನುಗುವಾಸೆಪ್ರಣಯ ಪಕ್ಷಿಗಳಂತೆ ಬಾನಂಗಳದ ಬಯಲಲಿ ಹಾರಾಡುವಾಸೆ ಅನುಳ ಜನುಮದ ಗೆಳೆಯನೇ ತನುವ ತುಡಿತದಲಿ ಬಚ್ಚಿಡುವಾಸೆಮಂಪರಿನ ಪ್ರೇಮಾಮೃತದ ಹೊನ್ನ ಗಿಂಡಿಯಲಿ ನಶೆಯಾಗುವಾಸೆ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

You cannot copy content of this page

Scroll to Top