ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಮಾಜಾನ್‌ ಮಸ್ಕಿ ಗಜಲ್

ಕಾವ್ಯ ಸಂಗಾತಿ ಮಾಜಾನ್‌ ಮಸ್ಕಿ ಗಜಲ್ ಹೊಕ್ಕಳ ಬಳ್ಳಿ ಹೃದಯದ ಬಡಿತ ನೀನಲ್ಲವೆಜಗಮರೆಸುವ ಕಂದ ನಗುವ ಹಿತ ನೀನಲ್ಲವೆ ಪ್ರಪಂಚದಲಿ ಒಂಟಿಯಲ್ಲ ಜೊತೆ ನೀನಿರಲುಪ್ರೀತಿ ವಾತ್ಸಲ್ಯ ಬಾಂಧವ್ಯದ ತುಡಿತ ನೀನಲ್ಲವೆ ಮರುಭೂಮಿಯಲಿ ಒಯಸಿಸ್ ಸಿಕ್ಕಂತಾದೆಅಕ್ಕರೆ ಆಸರೆ  ಕಾರಂಜಿಯ ಪುಟಿತ ನೀನಲ್ಲವೆ ಪಾಲನೆಯಲಿ ಕಳೆದ ದಿನಗಳು ತಿಳಿಯಲಿಲ್ಲಇಳಿ ವಯಸ್ಸಿನ ಉತ್ಸಾಹದ ಮಿಡಿತ ನೀನಲ್ಲವೆ ತುಂಬಿದ ನವಮಾಸದಲ್ಲಿ ಬಂದ ಜೀವ ನೀನುಮಾಜಾ ಜನುಮಜನುಮದ ಸೆಳೆತ ನೀನಲ್ಲವೆ ಮಾಜಾನ್ ಮಸ್ಕಿ

ಮಾಜಾನ್‌ ಮಸ್ಕಿ ಗಜಲ್ Read Post »

ಕಾವ್ಯಯಾನ

ಅನಸೂಯ ಜಹಗೀರದಾರ ಕವಿತೆ “ಹಲವು ಬಲಿದಾನಗಳು”

ಕಾವ್ಯ ಸಂಗಾತಿ ಅನಸೂಯ ಜಹಗೀರದಾರ “ಹಲವು ಬಲಿದಾನಗಳು” ಸುಧಾರಣೆಯಾಗುತ್ತವೆ..ಹೀಗೆಅಂದುಕೊಳ್ಳುತ್ತೇವೆ. ಕೆಲವು ಆಹುತಿಯಿಂದಕೆಲವು ಬಲಿದಾನದಿಂದಹಾಗೆಯೇ ನನ್ನ ವಾತಾವರಣವೂ.. ಅರೆ..! ಏನಾಗಿಹೋಯ್ತು..ಅಂತ ಚಿಂತಿಸಬಾರದು..ಬಲಿದಾನಕ್ಕೆ ಬೆದರಬಾರದು..ಆಹುತಿಗೆ ಅಂಜಬಾರದು.. ಇಲ್ಲದಿರೆ..;ಭಗತಸಿಂಗ್ ಶಹೀದನಾಗುತ್ತಿರಲಿಲ್ಲ..ಲಕ್ಷೀಬಾಯಿ ಸಂತಾನ ಕಳೆದುಕೊಳ್ಳುತ್ತಿರಲಿಲ್ಲ..! ನಿಜ..!ದೇವರೂ ಸಹ ವರ ದಯಪಾಲಿಸಲುತಪಸ್ಸು ಬೇಡುತ್ತಾನೆಹವಿಸ್ಸಿನ ನಂತರವೇ ಕಣ್ಣು ತೆರೆಯುತ್ತಾನೆ..! ಇದಕ್ಕಲ್ಲವೆ..,ಪಾನಾ ಹೈತೋ ಕುಛ ಖೋನಾ ಹೈ..!ಹಸನಾ ಹೈ ತೋ ಕುಛ ರೋನಾ ಹೈ.. ಇಷ್ಟೇ….,ನಾವು ಬಂದದ್ದು ಏಕೆಂದುಇರುವುದು ಏಕೆಂದುತಿಳಿದರೆ ಸಾಕು… ಒಂದು,ಆಂದೋಲನಒಂದು ಕ್ರಾಂತಿ ಆಗಬೇಕಾದರೆಹಲವು ಬಲಿದಾನವೂ ಬೇಕು..!ಹಲವು ಗಂದಗಿ ತೊಲಗಲುಗಂಧ ಹೊತ್ತ ಮರುತ ಬೇಕುಹಾಗಾದರೆ ಮಾತ್ರಸುಧಾರಣೆಯ ಸುಗಂಧ ಹರಡೀತು..!! ಅನಸೂಯ ಜಹಗೀರದಾರ

ಅನಸೂಯ ಜಹಗೀರದಾರ ಕವಿತೆ “ಹಲವು ಬಲಿದಾನಗಳು” Read Post »

ನಿಮ್ಮೊಂದಿಗೆ

“ಮಾದರಿ ನಾಯಕತ್ವ” ವೀಣಾ ಹೇಮಂತ್‌ ಗೌಡ ಪಾಟೀಲ್

ಸ್ಫೂರ್ತಿ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಮಾದರಿ ನಾಯಕತ್ವ” ಚಿಕ್ಕಂದಿನಲ್ಲಿ ಮೇಲಧಿಕಾರಿ ಮತ್ತು ನಾಯಕ ಇವೆರಡರ ನಡುವಿನ ವ್ಯತ್ಯಾಸವನ್ನು ಓದಿದ್ದೆ. ಅದರಲ್ಲಿನ ಕೆಲ ವಾಕ್ಯಗಳು ನನಗೆ ತುಂಬಾ ಇಷ್ಟವಾಗಿ ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದೆ ಕೂಡ.  ಬಾಸ್ ಅಥವಾ ಮೇಲಧಿಕಾರಿ ಆದವನು ತನ್ನ ಸಹೋದ್ಯೋಗಿಗಳೊಂದಿಗೆ ಯಾವುದಾದರೂ ವಿಷಯವನ್ನು ಇಲ್ಲವೇ ಕೆಲಸವನ್ನು ಹೇಳಬೇಕಾದರೆ ನಾನು ಎಂದು ಆರಂಭಿಸುತ್ತಾನೆ…. ಆದರೆ ನಿಜವಾದ ಲೀಡರ್ ಅಥವಾ ನಾಯಕನಾದವನು ನಾವು ಎಂದು ಹೇಳುತ್ತಾನೆ ಎಂಬ ಮಾತುಗಳು ಮನಸ್ಸಿಗೆ ಬಹಳ ಹಿಡಿಸಿದ್ದವು. ಇದಕ್ಕೆ ಪೂರಕವಾಗಿ ನಮ್ಮ ಮಾಜಿ ರಾಷ್ಟ್ರಪತಿ ಆಗಿರುವ ಕ್ಷಿಪಣಿ ತಜ್ಞ ಎಂದೇ ಹೆಸರಾದ  ಡಾಕ್ಟರ್ ಎಪಿಜೆ ಅಬ್ದುಲ್ ಕಲಾಮ್ ಅವರು ಹೇಳಿದ ಒಂದು ವಿಷಯವನ್ನು ನಾನು ಇಲ್ಲಿ ಪ್ರಸ್ತಾಪ ಮಾಡಲೇಬೇಕು. ವಿಕ್ರಮ್ ಸಾರಾಭಾಯಿ ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂ ಮತ್ತು ಅವರ ಸಹೋದ್ಯೋಗಿಗಳ ಅವಿರತ ಪ್ರಯತ್ನದ ಫಲವಾಗಿಪಿಎಸ್ಎಲ್ ವಿ ಉಪಗ್ರಹ  ಉಡಾವಣೆಯಾಯಿತು…. ಆದರೆ ಉಡ್ಡಯನಗೊಂಡ ಕೆಲವೇ ಕ್ಷಣಗಳಲ್ಲಿ ಉಪಗ್ರಹವು ಪತನವಾಯಿತು. ಇದು ದೇಶದ ಜನರ ಬೇಸರಕ್ಕೂ ರಾಜಕೀಯ ವಿರೋಧ ಪಕ್ಷಗಳ ಕೆಂಗಣ್ಣಿಗೂ ಗುರಿಯಾಯಿತು. ಕೋಟ್ಯಾಂತರ ಜನರು ಹೊಟ್ಟೆ ಹಸಿವಿನಿಂದ ಒದ್ದಾಡುತ್ತಿರುವ ಭಾರತದಂತಹ ದೇಶದಲ್ಲಿ ನೂರಾರು ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿ ಉಪಗ್ರಹವನ್ನು ಉಡಾಯಿಸುವ ಅವಶ್ಯಕತೆ ಇದೆಯೇ ಎಂಬ ಕುರಿತು ಈಗಾಗಲೇ ಸಾಕಷ್ಟು ಪರ-ವಿರೋಧ ಚರ್ಚೆಗಳಾಗಿದ್ದವು. ಅಂತಹ ಸಮಯದಲ್ಲಿ ಉಪಗ್ರಹವು ಪತನಗೊಂಡದ್ದು ಇಸ್ರೋದ ಎಲ್ಲ ವಿಜ್ಞಾನಿಗಳಿಗೆ ಬೇಸರವನ್ನುಂಟು ಮಾಡಿದ್ದರೂ ಮುಂದಿನ ಅರ್ಧ ಗಂಟೆಯಲ್ಲಿ ಜರುಗುವ ಪತ್ರಿಕಾಗೋಷ್ಠಿಗೆ ಹಾಜರಾಗಬೇಕಾದದ್ದು ಅವಶ್ಯ ವಾಗಿತ್ತು. ಎಲ್ಲಾ ವಿಜ್ಞಾನಿಗಳು ಪತ್ರಿಕಾಗೋಷ್ಠಿಗೆ ಹೋಗಲು ಹಿಂಜರಿಯುತ್ತಿರುವಾಗ  ಸಂಸ್ಥೆಯ ನಿರ್ದೇಶಕರಾದ ವಿಕ್ರಂ ಸಾರಾಭಾಯಿ ಅವರು ತಾವೇ ಖುದ್ದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ತಮ್ಮ ಕಾರ್ಯ ವೈಖರಿಯ ಕುರಿತು ಮಾಧ್ಯಮದವರಿಗೆ ಮನದಟ್ಟು ಮಾಡಿಕೊಟ್ಟರು ಮಾತ್ರವಲ್ಲದೇ ಉಪಗ್ರಹ ಪತನದ ಹಿಂದಿನ ಎಲ್ಲಾ ಸೋಲನ್ನು ತಮ್ಮ ಮೇಲೆ ಹಾಕಿಕೊಂಡರು. ಈ ವಿಷಯ ಎಲ್ಲ ಯುವ ಬಾಹ್ಯಾಕಾಶ ವಿಜ್ಞಾನಿಗಳ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತ್ತು. ಮುಂದಿನ ಕೆಲವೇ ತಿಂಗಳುಗಳಲ್ಲಿ ಮತ್ತೊಂದು ಉಪಗ್ರಹವನ್ನು ಉಡಾಯಿಸಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದರು ಕೂಡ ಈ ಹಿಂದಿನ ಸೋಲು ಎಲ್ಲರಲ್ಲೂ ತುಸು ಆತಂಕವನ್ನು ಸೃಷ್ಟಿ ಮಾಡಿತ್ತು. ಉಪಗ್ರಹ ಯಶಸ್ವಿಯಾಗಿ ಉದಾವಣೆಯಾಗಿ ಎಲ್ಲರ ಚಪ್ಪಾಳೆಯ ಝೇಂಕಾರ ವೀಕ್ಷಣಾ ಕೋಣೆಯನ್ನು ತುಂಬಿತ್ತು. ಈ ಯಶಸ್ಸಿನ ಕುರಿತು ಬರೆಯಲು ಪತ್ರಕರ್ತರು ಕಾಯುತ್ತಿದ್ದರು…. ಆಗ ತಮ್ಮ ಸಹೋದ್ಯೋಗಿಗಳನ್ನು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲು ಕಳುಹಿಸಿಕೊಟ್ಟ ವಿಕ್ರಂ ಸಾರಾಭಾಯಿ ತಾವು ಹಿಂದೆ ಉಳಿದರು.ಸೋಲಿನ ಎಲ್ಲ ಭಾರವನ್ನು, ಜವಾಬ್ದಾರಿಯನ್ನು ತನ್ನ ಮೇಲೆ ಹೇರಿಕೊಳ್ಳುವ ಮತ್ತು ಗೆಲುವನ್ನು ಸಂಭ್ರಮಿಸಲು ಸಹೋದ್ಯೋಗಿಗಳಿಗೆ ಅವಕಾಶ ಮಾಡಿಕೊಟ್ಟ ವಿಕ್ರಂ ಸಾರಾಭಾಯಿಯವರ ಅಂದಿನ ನಡೆ ನಿಜವಾದ ನಾಯಕತ್ವ ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದು ಕಲಾಂ ಅವರ ಈ ಅನುಭವದಿಂದ ನಾವು ತಿಳಿದುಕೊಳ್ಳಬಹುದು. ಇದೀಗ ನಾವು ಸಣ್ಣಪುಟ್ಟ ಹಳ್ಳಿಗಳಿಂದ ಹಿಡಿದು ದಿಲ್ಲಿಯವರೆಗಿನ ಎಲ್ಲ ಭಾಗಗಳಲ್ಲಿ ಸ್ವಯಂ ಘೋಷಿತ ನಾಯಕರನ್ನು, ದೇವಮಾನವರನ್ನು ಕಾಣುತ್ತೇವೆ. ಮತ್ತು ಅವರ ಅಭಿಮಾನಿ ಸಂಘಗಳನ್ನು ಕೂಡ. ನಿಜವಾದ ನಾಯಕತ್ವ ಎಂದರೇನು ಎಂಬುದರ ಪರಿಕಲ್ಪನೆಯೇ ಇಲ್ಲದ ಸಾಕಷ್ಟು ಜನ ತಮ್ಮನ್ನು ತಾವು ನಾಯಕರೆಂದು ಹೇಳಿಕೊಳ್ಳುತ್ತಿರುವುದು ಸ್ವಯಂ ಘೋಷಿತ ನಾಯಕರ ಅಜ್ಞಾನವೋ  ಅಥವಾ ಹಾಗೆ ಹೇಳಿಕೊಳ್ಳುತ್ತಿರುವವರನ್ನು ಅತಿಯಾಗಿ ಪುರಸ್ಕರಿಸುವ ಜನರ ತಪ್ಪೋ ಎಂಬುದು ಗೊತ್ತಾಗುತ್ತಿಲ್ಲ. ಹಾಗಾದರೆ ನಾಯಕ ಎಂದರೇನು? ನಾಯಕತ್ವದ ಲಕ್ಷಣಗಳು ಯಾವುವು ಎಂಬ ಸಂದೇಹ ನಮ್ಮಲ್ಲಿ ಕಾಡಬಹುದು ಅದಕ್ಕೆ ಉತ್ತರವನ್ನು ಹುಡುಕುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ. ಒಳ್ಳೆಯ ನಾಯಕ ಎಂದರೆ ಎಲ್ಲ ವಿಷಯಗಳ ಕುರಿತು ಅರಿವನ್ನು ಹೊಂದಿರುವುದು ಮತ್ತು ಎಲ್ಲ ವಿಷಯಗಳಲ್ಲಿಯೂ ಪರಿಪೂರ್ಣತೆಯನ್ನು ಹೊಂದಿರುವ ವ್ಯಕ್ತಿ  ಎಂದಲ್ಲ. ನಾಯಕತ್ವ ಎನ್ನುವುದು ನೀವು ಜನರೊಂದಿಗೆ ಯಾವ ರೀತಿ  ವರ್ತಿಸುತ್ತೀರಿ, ಯಾವ ರೀತಿ ಸಹಾಯ ಮಾಡುತ್ತೀರಿ ಮತ್ತು ನೀವು ಮಾಡುವ ಸಹಾಯ ಅವರ ಬದುಕಿನಲ್ಲಿ ಬೀರಬಹುದಾದ ಪರಿಣಾಮಗಳ ಕುರಿತು ಯೋಚಿಸುವುದು ನಾಯಕತ್ವ ಎಂದೆನಿಸಿಕೊಳ್ಳುತ್ತದೆ.  ಕೆಳಗಿನ ಏಳು ಸರಳ ವಿಧಾನಗಳು ಉತ್ತಮ ನಾಯಕತ್ವಕ್ಕೆ ಮಾದರಿ *ನಾಯಕನಾದವನು ದಯಾಳುವಾಗಿರಬೇಕು…. ಒಳ್ಳೆಯ ನಾಯಕನಾದ ವ್ಯಕ್ತಿ ಇತರರೊಂದಿಗೆ ಗೌರವ ಮತ್ತು ಕಾಳಜಿಯಿಂದ ವರ್ತಿಸುತ್ತಾನೆ. ದಯಾ ಗುಣವು ನಂಬಿಕೆಯನ್ನು ವೃದ್ಧಿಸುತ್ತದೆ. ವಿಶ್ವಾಸವನ್ನು ಹೊಂದಲು ಕಾರಣವಾಗುತ್ತದೆ. ಆದ್ದರಿಂದ ಒಳ್ಳೆಯ ನಾಯಕನಾದವನು ಅವರು ತನ್ನ ವಿರೋಧಿಯೇ ಇರಲಿ, ತನ್ನನ್ನು ಹೀಯಾಳಿಸುವ ವ್ಯಕ್ತಿಯೇ ಇರಲಿ ಅವರೊಂದಿಗೆ ಪ್ರೀತಿಪೂರ್ವಕವಾಗಿ ನಡೆದುಕೊಳ್ಳಬೇಕು. * ನಾಯಕ ಮಿತ ಭಾಷಿಯಾಗಿರಬೇಕು…. ಒಳ್ಳೆಯ ನಾಯಕತ್ವ ಗುಣ ಹೊಂದಿರುವವನು ತನ್ನ ಎದುರಿಗಿರುವವರ ಮಾತನ್ನು ಗಮನವಿಟ್ಟು ಆಲಿಸುತ್ತಾನೆ. ತಾನು ಮಿತಭಾಷಿಯಾಗಿದ್ದು ತನ್ನ ಸಂಪೂರ್ಣ ಲಕ್ಷವನ್ನು ಇತರರ ಮಾತುಗಳನ್ನು ಕೇಳುವುದರಲ್ಲಿ ವಿನಿಯೋಗಿಸುವ ವ್ಯಕ್ತಿ ಒಳ್ಳೆಯ ನಾಯಕತ್ವಕ್ಕೆ ಉದಾಹರಣೆ. ಜನರಿಗೆ ನಿಜವಾಗಿಯೂ ಏನು ಬೇಕಾಗಿರುತ್ತದೆ ಎಂಬುದನ್ನು ಅರಿಯುವ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ವ್ಯಕ್ತಿ ನಿಜವಾದ ನಾಯಕ. * ನಾಯಕ ಎಲ್ಲರಿಗೂ ಸಿಗುವಂತಿರಬೇಕು….. ಮಹಡಿಯ ಮೇಲೆ ನಿಂತು ಕೈ ಬೀಸುವ, ವೇದಿಕೆಗಳಲ್ಲಿ ನಮಸ್ಕರಿಸುವ ವ್ಯಕ್ತಿಗಳಿಗಿಂತ ಜನಸಾಮಾನ್ಯರ ನಡುವೆ ಬೆರೆಯುವ ಜನರ ಕಷ್ಟ ಸುಖಗಳಿಗೆ ಪ್ರತಿ ಸ್ಪಂದಿಸುವ, ಜನರ ನೋವಿಗೆ ಕಿವಿಯಾಗುವ, ಅವರ ತೊಂದರೆಗೆ ದನಿಯಾಗುವ ವ್ಯಕ್ತಿ ನಿಜವಾದ ನಾಯಕ. ಜನರು ತಮ್ಮ ನಾಯಕನ ಬಳಿ ಬಂದು ತಮ್ಮ ತೊಂದರೆಗಳನ್ನು ಮತ್ತು ಯೋಜನೆಗಳನ್ನು ಸರಳವಾಗಿ ಹಂಚಿಕೊಳ್ಳುವಂತಹ ವಾತಾವರಣವನ್ನು ಕಲ್ಪಿಸಿ ಕೊಡುವ ವ್ಯಕ್ತಿ ನಿಜವಾದ ನಾಯಕ ಎನಿಸಿಕೊಳ್ಳುತ್ತಾನೆ. *ತನ್ನ ಸಹೋದ್ಯೋಗಿಗಳಿಗೆ, ಹಿಂಬಾಲಕರಿಗೆ ವಿಶ್ರಾಂತಿಗೆ ಅವಕಾಶ ನೀಡುವ ವ್ಯಕ್ತಿ ನಿಜವಾದ ನಾಯಕ. *ನಿಜವಾದ ನಾಯಕ ತನ್ನ ಜೊತೆ ಕೆಲಸ ಮಾಡುವವರಿಗೆ ತಪ್ಪು ಮಾಡಿದಾಗ ಅವಹೇಳನ ಮಾಡುವುದಿಲ್ಲ… ಆತನಿಗೆ ಗೊತ್ತು ತಪ್ಪುಗಳು ಕಲಿಕೆಗೆ ಮತ್ತು ಬೆಳವಣಿಗೆಗೆ ಸಹಾಯಕ ಎಂದು. ನಾಯಕನಾದವನು ತಪ್ಪನ್ನು ತಿದ್ದಿಕೊಂಡು ಮುನ್ನಡೆಯಲು ಪ್ರೋತ್ಸಾಹಿಸುತ್ತಾನೆ. *ನಿಜವಾದ ನಾಯಕತ್ವ ಗುಣವಿರುವ ವ್ಯಕ್ತಿ ಜನರ ಸಾಮರ್ಥ್ಯ ಗಳನ್ನು ಅರಿಯುವ ಶಕ್ತಿಯನ್ನು ಹೊಂದಿರುತ್ತಾನೆ. *ಉತ್ತಮ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಾನೆ. ಅವರ ಅನುಭವಕ್ಕೆ ಬೆಲೆ ನೀಡುತ್ತಾನೆ. ನಾಯಕತ್ವ ಗುಣವನ್ನು ಹೊಂದಿರುವುದು ದೈವದತ್ತ ಕಲೆ. ಕಲಿಕೆ ಮತ್ತು ಪ್ರಯತ್ನದ ಮೂಲಕ ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತಿ ಮಗುವೂ ಉತ್ತಮ ನಾಯಕರಾಗಿ ಬೆಳೆಯಲಿ ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್

“ಮಾದರಿ ನಾಯಕತ್ವ” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಕಾವ್ಯಯಾನ

“ಸಗ್ಗ ಬಂದಿತು ಇಳೆಗೆ” ಡಾ. ಪಿ. ಜಿ. ಕೆಂಪಣ್ಣವರ

ಕಾವ್ಯ ಸಂಗಾತಿ ಡಾ. ಪಿ. ಜಿ. ಕೆಂಪಣ್ಣವರ “ಸಗ್ಗ ಬಂದಿತು ಇಳೆಗೆ” ಎರಳೆಗಂಗಳ ಚೆಲುವೆನಗುವ ಮೋಹಕ ತಾರೆನಿನ್ನ ನೋಡುತ ನಾನು   ಮರುಳನಾದೆ!ಬರಿ ಚಣದ ಬದುಕಿನಲಿಒಲವ ಬಿತ್ತಿದ ನೀನುಬಾಳ ದಾರಿಗೆ ನಿತ್ಯ ದೀಪವಾದೆ ಬಿರಿದ ಮಲ್ಲಿಗೆ ದಂಡೆಮುಡಿದು ನೀ ಬರುತಿರಲುಪಿಕವು ಕೂಗಿತು ಅರಸಿ ಬಂದಳೆಂದು!ಬದುಕ ಬಂಡಿಗೆ ಎರಡುಗಾಲಿ ನಾವಿರುತಿರಲುಹದುಳ ತುಂಬುವುದಿಲ್ಲಿ ಬಳಿಗೆ ಬಂದು! ಬಾಳ ಪಯಣದ ತುಂಬಹಸಿರು ತುಂಬಿತು ನಲ್ಲೆನಿನ್ನ ಒಲುಮೆಯ ತೊರೆಯು ಹರಿಯುತಿರಲು!ಬಂದ ಜಂಜಡವೆಲ್ಲಕರಗಿ ಹೋಯಿತು ಸಖಿಯೇಸಗ್ಗ ಬಂದಿತು ಇಳೆಗೆ ನೀನು ನಗಲು! ಡಾ. ಪಿ. ಜಿ. ಕೆಂಪಣ್ಣವರ

“ಸಗ್ಗ ಬಂದಿತು ಇಳೆಗೆ” ಡಾ. ಪಿ. ಜಿ. ಕೆಂಪಣ್ಣವರ Read Post »

ಕಥಾಗುಚ್ಛ

“ಕ್ಷಮೆ” ಸುಮತಿ ಪಿ ಅವರ ಸಣ್ಣ ಕಥೆ

ಕಥಾ ಸಂಗಾತಿ ಸುಮತಿ ಪಿ “ಕ್ಷಮೆ” ಅಂದು ಕೋಮಲ ಅದೆಷ್ಟು ಬೇಡಿಕೊಂಡರೂ ನಾನು ಅವಳಿಗೆ ತವರಿಗೆ ಹೋಗುವುದಕ್ಕೆ ಒಪ್ಪಿಗೆ ನೀಡದೇ ತಪ್ಪು ಮಾಡಿದೆನಲ್ಲ!!!. ಪಾಪ! ಕೋಮಲ ತವರಿಗೆ ಹೋಗಬೇಕೆಂಬ ಹಿರಿದಾಸೆಯನ್ನು ಇಟ್ಟುಕೊಂಡಿದ್ದಳು. ಅಂದು ಮಾವಯ್ಯನವರ ಬಾಯಿಯಿಂದ ತಪ್ಪಿ ಬಂದ ಒಂದೇ ಒಂದು ಮಾತಿನಿಂದಾಗಿ ಸಿಟ್ಟುಗೊಂಡಂತಹ ನಾನು ನಿನಗೆ ತವರು ಮನೆ ಬೇಕಾ ? ಗಂಡನ ಮನೆ ಬೇಕಾ?..ಎರಡರಲ್ಲಿ ಒಂದನ್ನು ನೀನೇ ಆರಿಸಿಕೊ…ಎಂದು ಗಟ್ಟಿಯಾಗಿ ಹೇಳಿದಾಗ, ಹೆಣ್ಣಿಗೆ ಮದುವೆಯಾದ ಮೇಲೆ ಗಂಡನ ಮನೆಯೇ ಸರ್ವಸ್ವವೆಂದರಿತ ಕೋಮಲ, ಕಣ್ಣೀರು ಹಾಕುತ್ತಾ ಹಿಂತಿರುಗಿ ನೋಡದೆ ನನ್ನ ಹಿಂದೆ ಬಂದಿದ್ದಾಗಲೂ,ನಾನು ಅವಳ ಮನಸ್ಸನ್ನು ಅರಿಯದೆ ಹೋದೆನಲ್ಲ!!!. ಪಾಪ ಅವಳ ತಂದೆ ಇಹಲೋಕ ತ್ಯಜಿಸಿದಾಗಲೂ ನನ್ನ ಅನುಮತಿ ಸಿಗಲಾರದೆಂದು ತವರಿಗೆ ಹೋಗದೆ, ಗಂಡನೇ ಸರ್ವಸ್ವವೆಂದು ಗಂಡನಿಗಾಗಿ, ತನ್ನಿಬ್ಬರು ಮಕ್ಕಳಿಗಾಗಿ ನೋವನ್ನೆಲ್ಲ ನುಂಗಿ, ತನ್ನ ಮಕ್ಕಳು ಗಂಡನಿಗಾಗಿ ಜೀವನವಿಡೀ ದುಡಿದು,ಪ್ರಾಣವನ್ನೇ ತ್ಯಜಿಸಿದಳಲ್ಲ! ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಅಂದು ಅವಳು “ಒಂದು ಬಾರಿ ನಮ್ಮಪ್ಪನನ್ನು ಕ್ಷಮಿಸಿ ಬಿಡಿರಿ”ಎಂದು ಗೋಗರೆದು ಕೇಳಿದಾಗಲೂ ನಾನು, ಅದೆಂಥ ಕಠೋರ ಮನಸ್ಸಿನವನಾಗಿದ್ದೆ. ಅಂದು ಅವಳನ್ನು ಸಮಾಧಾನಿಸಿ, ನನ್ನ ಸಿಟ್ಟು ಕಡಿಮೆ ಮಾಡಿ, ಅವಳೊಂದಿಗೆ ತವರಿಗೆ ಹೋಗಬೇಕಿತ್ತು.ಆದರೆ ನನ್ನ ಅಹಂ ನನಗೆ ಹೆಚ್ಚಾಗಿತ್ತು. ಕ್ಷಮೆ ಎನ್ನುವ ಶಬ್ದ ಕೇಳಿದಾಗಲೇ ನನಗೆ ಸಿಟ್ಟು ನೆತ್ತಿಗೇರುತ್ತಿತ್ತು. ಆದರೆ ನನ್ನ ಕೋಮಲ ಎಲ್ಲವನ್ನು ಸಹಿಸಿ, “ಈ ಗಂಡಸರೇ ಹೀಗೆ” ಎಂದು ಗೊಣಗುತ್ತಿದ್ದರೂ, ನನ್ನೊಂದಿಗೆ ಹೊಂದಿಕೊಂಡು ಹೋಗುತ್ತಿದ್ದಳು. ಆ ನೆನಪು ಇಂದಿಗೂ ನನ್ನನ್ನು  ಸೂಜಿಯ ಮೊನೆಯಂತೆ ಚುಚ್ಚುತ್ತನೋಯಿಸುತ್ತಿದೆ. ರಾಮರಾಯರು ಆ ಹಳ್ಳಿಯಲ್ಲಿ ಗುತ್ತಿನ ಮನೆಯ ಗುರಿಕಾರರಾಗಿದ್ದರು. ಅವರ ಹಿರಿಯ ಮಗಳೇ ಕೋಮಲ.ಕೋಮಲಳನ್ನು ಮೆಚ್ಚಿ ಮದುವೆಯಾಗಿದ್ದ ಕೀರ್ತನ ರಾಮರಾಯರ ಹಿರಿಯಳಿಯನಾಗಿದ್ದ. ರಾಮರಾಯರಿಗೆ ಮತ್ತಿಬ್ಬರು ಹೆಣ್ಣು ಮಕ್ಕಳಿದ್ದರು. ರಾಮರಾಯರ ಹೆಂಡತಿ ಮೊದಲೇ ಮರಣ ಹೊಂದಿದ್ದರಿಂದ, ಹಿರಿಯ ಮಗಳಾದ ಕೋಮಲ ತನ ಇಬ್ಬರು ತಂಗಿಯರಿಗೆ ಅಮ್ಮನ ಸ್ಥಾನದಲ್ಲಿ ಇದ್ದುಕೊಂಡು, ಒಳ್ಳೆಯ ಸಂಸ್ಕಾರವನ್ನು ನೀಡಿದ್ದಳು. ಗುತ್ತಿನ ಮನೆಯವರಾದ್ದರಿಂದ ಊರಿನ ನಾಲ್ಕು ಜನರಿಗೆ ನೀತಿ ಮಾತನ್ನು ಹೇಳುವ ಮನೆತನದಲ್ಲಿ ಯಾವುದೇ ಕೆಟ್ಟ ನಡವಳಿಕೆಗಳು ನಡೆಯದಂತೆ ಬಹಳ ಎಚ್ಚರಿಕೆಯಿಂದ ರಾಮರಾಯರು ನನ್ನ ಮೂವರು ಹೆಣ್ಣು ಮಕ್ಕಳನ್ನು ಸಾಕಿ ಸಲಹಿದ್ದರು. ಮದುವೆಯಾದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕೋಮಲ ಆಗಾಗ ತವರಿಗೆ ಹೋಗಿ ತನ್ನಿಬ್ಬರು ತಂಗಿಯಂದಿರಿಗೆ ಎಚ್ಚರಿಕೆಯ ಮಾತನ್ನು ಹೇಳುತ್ತಾ, ಸಲಹೆ ಸೂಚನೆಗಳನ್ನು ನೀಡುತ್ತಾ, ತಾಯಿಯ ಸ್ಥಾನದ ತನ್ನ ಕರ್ತವ್ಯವನ್ನು ನೆರವೇರಿಸುತ್ತಾ, ತವರು ಮನೆ ಹಾಗೂ ಗಂಡನ ಮನೆ ಎರಡೂ ಮನೆಯಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಳು. ಮೂರು ನಾಲ್ಕು ವರ್ಷಗಳಲ್ಲಿ ಕೋಮಲಳ ತಂಗಿಯಂದಿರಿಗೆ ಮದುವೆಯಾಯಿತು. ಇಬ್ಬರ ಗಂಡಂದಿರು ಒಳ್ಳೆಯ ಸ್ಥಿತಿವಂತರಾಗಿದ್ದರು. ಹಾಗೆ ನೋಡಿದರೆ ಕೋಮಲಳ ಗಂಡ ಕೀರ್ತನ್ ನಿಗೆ ಗುಮಾಸ್ತ ಕೆಲಸವನ್ನು ಬಿಟ್ಟರೆ,  ಆಸ್ತಿ ಪಾಸ್ತಿ ಏನೂ ಇರಲಿಲ್ಲ.ಅಂದಿನಿಂದ ಕೀರ್ತನ ನ ಮನೆಯಲ್ಲಿ ಇರುಸು ಮುರುಸು ಪ್ರಾರಂಭವಾಯಿತು . ಇದಕ್ಕೆ ಮುಖ್ಯ ಕಾರಣ ಕೀರ್ತನನ ಮನಸಲ್ಲಿದ್ದ ಕೀಳರಿಮೆ. ಮಾವ ಕರೆದಾಗಲಿಲ್ಲ ಕೋಮಲಳೊಂದಿಗೆ ಹೋಗುತ್ತಿದ್ದ ಕೀರ್ತನ ಇದೀಗ ಹೋಗುವುದನ್ನು ಕಡಿಮೆ ಮಾಡತೊಡಗಿದ. ಕೋಮಲ ಒತ್ತಾಯಿಸಿದರೂ, ನೀನು ಹೋಗಿ ಬಾ ನನಗೆ ಕೆಲಸ ಇದೆ ಎಂದು ಅವಳೊಬ್ಬಳನ್ನೇ ಕಳುಹಿಸುತ್ತಿದ್ದ. ಮಕ್ಕಳು “ಅಪ್ಪಾ ನೀನೂ ಬಾ” ಎಂದು ಹಠ ಮಾಡಿ ಕರೆದರೆ ಏನು ಮಾಡಲಾಗದೆ ಮಕ್ಕಳೊಂದಿಗೆ ಹೋಗಿ ಅವರನ್ನು ಅಲ್ಲಿ ಬಿಟ್ಟು, ತಾನು ರಾತ್ರಿ ಉಳಿದುಕೊಳ್ಳದೆ ಹಿಂದಿರುಗಿ ಬರುತ್ತಿದ್ದ. ಅದೊಂದು ದಿನ ಕೋಮಲಳ ಮನೆಯಲ್ಲಿ ಪೂಜೆ ನಡೆಯುವುದಿತ್ತು. ಕೋಮಲ ಈ ಬಾರಿ ಗಂಡ ಕೀರ್ತನನಿಗೆ ನೀವು ಬರಲೇಬೇಕೆಂದು ಹಠ ಹಿಡಿದಳು.“ನೀನು ಮಕ್ಕಳು ಹೋಗಿ ಬನ್ನಿ “ಎಂದಾಗ ಕೇಳಿಸದೆ ಒತ್ತಾಯಪೂರ್ವಕವಾಗಿ ಗಂಡನನ್ನು ಕರೆದುಕೊಂಡು ಮಕ್ಕಳ ಜೊತೆಗೆ ಹೊರಟಳು. ಆ ದಿನ  ತನ್ನ ಮಾವ ಉಳಿದಿಬ್ಬರು ಅಳಿಯಂದಿರಿಗೆ ಕೊಟ್ಟಷ್ಟು ಗೌರವ ಹಿರಿಯ ಅಳಿಯನಾದ ನನಗೆ ಕೊಡುತ್ತಿಲ್ಲ ಎಂದು ಕೋಪಗೊಂಡು ಕೀರ್ತನ್  ಜಗಳ ಮಾಡಿಕೊಂಡು, ಊಟವನ್ನೂ ಮಾಡದೆ ಹೊರಡಲನುವಾದಾಗ, ಕೋಮಲ ನಮ್ಮ ತಂದೆಯವರಿಗೆ ಪ್ರಾಯವಾಗಿದೆ ಏನೋ ತಪ್ಪಿ ಬಾಯಿಂದ ಮಾತು ಬಂದಿರಬಹುದು ಕಣ್ರಿ. ಅದನ್ನೇ ಏಕೆ ದೊಡ್ಡದು ಮಾಡುತ್ತೀರಾ. ಅಪ್ಪನ ಪರವಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ ಹೋಗಬೇಡಿ, ಊಟ ಮಾಡಿ ಒಟ್ಟಿಗೆ ಹೋಗೋಣವಂತೆ ಎಂದಾಗ, ಇಲ್ಲ ಕಣೇ ನನಗೆ ಅನುಭವಿಸಿದ್ದೆ ಬೇಕಾದಷ್ಟು ಆಯಿತು ಈ ಮನೆಯ ಊಟ ಯಾರಿಗೆ ಬೇಕಾಗಿದೆ? “ನಿನಗೆ ತವರು ಮನೆ ಹೆಚ್ಚೊ ಗಂಡನ ಮನೆ ಹೆಚ್ಚೊ ನಿನ್ನ ನಿರ್ಧಾರಕ್ಕೆ ಬಿಟ್ಟಿದ್ದು” ಎಂದು ಹೊರಡಲನುವಾದಾಗ,ಕೋಮಲ ನೋವಿನಿಂದಲೇ ಗಂಡ ಕೀರ್ತನನ ಹಿಂದೆಯೇ ಬಂದುಬಿಟ್ಟಿದ್ದಳು. ಅಂದಿನಿಂದ ಮಕ್ಕಳಾಗಲಿ, ಅವಳಾಗಲಿ ಆ ಮನೆಗೆ ಕಾಲಿಡಲಿಲ್ಲ. ಎರಡೂ ಮನೆಗಳ ಸಂಪರ್ಕ ಕಡಿದಂತೆ ಆಯಿತು. ಮುಂದೊಂದು ದಿನ ಕೋಮಲಳ ತಂದೆ ತೀರಿ ಹೋದ ಸುದ್ದಿಯನ್ನು ಕೋಮಲ ಊರಿನವರಿಂದ ತಿಳಿದು, “ನಾನೊಂದು ಸಲ ತಂದೆಯ ಮುಖವನ್ನು ನೋಡಬೇಕು” ಎಂದು ಗಂಡನನ್ನು ಅಂಗಲಾಚಿದರೂ ಕೀರ್ತನ್ ಒಪ್ಪಿಗೆಯನ್ನು ನೀಡಿರಲಿಲ್ಲ. ಅತ್ತು ಅತ್ತು ಕೋಮಲ ಸುಮ್ಮನಾಗಿದ್ದಳು. ಹೌದು ಕ್ಷಮೆ ಎನ್ನುವ ಪದಕ್ಕೆ ಬಹಳ ಹಿರಿದಾದ ಅರ್ಥವಿದೆ. ಎರಡು ಮನಸ್ಸುಗಳನ್ನು ಬೆಸೆಯುವ ಎರಡು ಕುಟುಂಬಗಳನ್ನು ಹೊಸೆಯುವ, ಸಮಾಜವನ್ನು ಒಂದುಗೂಡಿಸುವ ಶಕ್ತಿ ಇದೆ. ಅಂದು ನಾನು ಕೋಮಲ ಸಾರಿ ಸಾರಿ ಬೇಡಿದಾಗ ನನ್ನ ಅಹಂ ಬಿಟ್ಟು ನಾನು ಕ್ಷಮಿಸುತ್ತಿದ್ದರೆ ಎರಡು  ಕುಟುಂಬಗಳ ನಡುವೆ ಗೋಡೆ ನಿರ್ಮಾಣವಾಗುತ್ತಿರಲಿಲ್ಲ. ಅವಳು ಆ ಸಂದರ್ಭದಲ್ಲಿ ಎಷ್ಟು ನೊಂದಿದ್ದಳೊ !! ಸಾಯುವಾಗಲೂ ಅದೇ ನೋವಿನಲ್ಲಿ ಆಕೆ ಇಹಲೋಕ ತ್ಯಜಿಸಿದ್ದಳು. ನಾನು ಮಾಡಿದ ತಪ್ಪಿಗೆ ನನಗೀಗ ಶಿಕ್ಷೆಯಾಗುತ್ತಿದೆ. ನನ್ನ ಮಕ್ಕಳಿಗೆ ತವರಿಗೆ ಹೋಗಬೇಕು, ತಾಯಿ ಇಲ್ಲದಿದ್ದರೂ ತಂದೆಯನ್ನು ಕಾಣಬೇಕು ಎಂಬ ತುಡಿತವೂ ಇಲ್ಲದೆ ಗಂಡ ಮಕ್ಕಳು ಎಂದು ಹಾಯಾಗಿದ್ದಾರೆ. ಇದು ದೇವರು ನನಗೆ ಕೊಟ್ಟ ಶಿಕ್ಷೆ ಅಲ್ಲದೆ ಮತ್ತಿನ್ನೇನು? ಅಂದು ನಾನು ಮಾವಯ್ಯ ಹೇಳಿದ ಮಾತನ್ನು ಮರೆತು ಕ್ಷಮಿಸಿ ಬಿಡುತ್ತಿದ್ದರೆ, ಇಷ್ಟೆಲ್ಲ ನೋವು ಅನುಭವಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಕಾಲ ಮಿಂಚಿ ಹೋಗಿದೆ, ಇನ್ನು ಕ್ಷಮಿಸಬೇಕೆಂದರೆ ನನ್ನವಳಿಲ್ಲ. ಮನಸ್ಸಿನ ತೊಳಲಾಟವನ್ನು ಮಕ್ಕಳಲ್ಲಿ ಹೇಳಬೇಕೆಂದರೆ ಮಕ್ಕಳೂ ಬರುತ್ತಿಲ್ಲ. ನಾನು ನೀಡದ ಕ್ಷಮೆಗೆ ಪಶ್ಚಾತ್ತಾಪವೇ ಪ್ರಾಯಶ್ಚಿತ್ತ. ನಾನು ತಪ್ಪಿ ಬಿದ್ದರೂ ಹಿಂಸೆ ಅನುಭವಿಸಿದರೂ ಪರವಾಗಿಲ್ಲ. ನನ್ನ ಮಕ್ಕಳಿಗೆ ಕ್ಷಮಾ ಗುಣದ ಬಗ್ಗೆ ಹೇಳಬೇಕು. ಕ್ಷಮೆ ಎನ್ನುವುದು ಮನುಷ್ಯನ  ಬದುಕಿನಲ್ಲಿ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ.ದೇವರೇ ಆ ಅವಕಾಶವನ್ನಾದರೂ ಒದಗಿಸಿ ಕೊಡುವೆಯಾ? ನನ್ನ ಮನಸ್ಸಿಗೆ ನೆಮ್ಮದಿಯನ್ನು ಕರುಣಿಸುವೆಯಾ……. ಡಾ.ಸುಮತಿ ಪಿ

“ಕ್ಷಮೆ” ಸುಮತಿ ಪಿ ಅವರ ಸಣ್ಣ ಕಥೆ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಕನ್ನಡ ಸಾಹಿತ್ಯ ದಿಗ್ಗಜೆ ಶಾಂತಾದೇವಿ ಮಾಳವಾಡ

ಸಾವಿಲ್ಲದಶರಣರು ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಕನ್ನಡ ಸಾಹಿತ್ಯ ದಿಗ್ಗಜೆ ಶಾಂತಾದೇವಿ ಮಾಳವಾಡ ಮಹಿಳಾ ಸಾಹಿತ್ಯದ ಚರಿತ್ರೆ ಎಂದರೆ ಮಹಿಳೆಯರು ತಮ್ಮ ಅನುಭವಗಳು, ಸಮಾಜದ ಸ್ಥಿತಿ, ರಾಜಕೀಯ ಅಭಿಪ್ರಾಯಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ ಪಯಣವಾಗಿದ್ದು, ಇದು ಪ್ರಾಚೀನ ಕಾಲದಿಂದಲೂ ಇದ್ದು, ಅಮೇರಿಕಾದ ಕ್ರಾಂತಿಯಂತಹ ಸಂದರ್ಭಗಳಲ್ಲಿ ತೀವ್ರಗೊಂಡಿತು; ಇವರು ಮನೆ, ಸಮಾಜ ಮತ್ತು ಪ್ರಕೃತಿಯೊಂದಿಗಿನ ಸಂಬಂಧಗಳನ್ನು ಕಾದಂಬರಿ, ಕವಿತೆಗಳ ಮೂಲಕ ನಿರೂಪಿಸಿ, ಮಹಿಳೆಯರ ಸ್ಥಾನಮಾನದ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ, ಇದು ಮುಖ್ಯವಾಗಿ ಸ್ತ್ರೀವಾದಿ ಚಿಂತನೆಗಳನ್ನು ಜಗತ್ತಿಗೆ ಪರಿಚಯಿಸಿದೆ.ಮಹಿಳಾಪರ ಚಿಂತನೆ ಆಲೋಚನೆಗಳು ಕಥೆ ಕಾದಂಬರಿ ಕಾವ್ಯ ಸಾಹಿತ್ಯ ರಚನೆಯಲ್ಲಿ ಮುಕ್ತವಾಗಿ ಬರೆಯಲು ಆರಂಭಿಸಿದರು ಕನ್ನಡತಿಯರು. 12 ನೆಯ ಶತಮಾನದ ಶ್ರೇಷ್ಠ ವಚನಕಾರ್ತಿಯರು ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜ ಕಟ್ಟಿದರು.ನವ್ಯ ನವೋದಯ ಪ್ರಗತಿಶೀಲ ಬಂಡಾಯ ದಲಿತ ಸಾಹಿತ್ಯ ಹೀಗೆ ಎಲ್ಲಾ ಘಟ್ಟಗಳಲ್ಲಿವಚನ ಸಾಹಿತ್ಯ ಮತ್ತು ಶರಣೆಯರ ಸಾಹಿತಿಕ ಸಾಂಸ್ಕೃತಿಕ ಸಾಮಾಜಿಕ ಕಾರ್ಯಗಳನ್ನು ಮರೆಯಲಾಗದು. ಕನ್ನಡ ಸಾಹಿತ್ಯದಲ್ಲಿಜಯದೇವಿ ತಾಯಿ ಲಿಗಾಡೆ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತು ಸಮಗ್ರ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮವಾಗಿ ದುಡಿದವರು ಶಾಂತಾದೇವಿ ಮಾಳವಾಡ ಅವರು. ಶಾಂತಾದೇವಿ ಮಾಳವಾಡ ಇವರು 1922 ಡಿಸೆಂಬರ್ 10 ರಂದು ಬೆಳಗಾವಿ ಯಲ್ಲಿ ಜನಿಸಿದರು. ತಾಯಿ ಜಯವಂತಿದೇವಿ; ತಂದೆ ಕರ್ಜಗಿ ಮುರಿಗೆಪ್ಪ ಶೆಟ್ಟರು. ತವರು ಮನೆ ಹೆಸರು ಕರ್ಜಗಿ ದಾನಮ್ಮ. ಎರಡು ವರ್ಷದವಳಿದ್ದಾಗ ತಂದೆಯನ್ನು ಹಾಗು ಹತ್ತು ವರ್ಷದವಳಿದ್ದಾಗ ತಾಯಿಯನ್ನು ಕಳೆದುಕೊಂಡ ದಾನಮ್ಮ ಅಜ್ಜಿಯ ಮಡಿಲಲ್ಲಿ ಬೆಳೆದಳು. ವನಿತಾ ವಿದ್ಯಾಲಯದಲ್ಲಿ ಹೈಸ್ಕೂಲ ಎರಡನೆಯ ತರಗತಿಯವರೆಗೆ ಅಂದರೆ ಒಂಬತ್ತನೆಯ ತರಗತಿ ಕಲಿತು, ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು. ಮದುವೆಶಾಂತಾದೇವಿ ಮಾಳವಾಡ ಅವರು ತಮ್ಮ 15 ನೆಯ ವಯಸ್ಸಿನಲ್ಲಿ1937 ನೆಯ ಇಸವಿಯಲ್ಲಿ ಪ್ರೊ. ಸ.ಸ. ಮಾಳವಾಡರ ಜೊತೆ ಮದುವೆ ಆಯಿತು. ಮುಂದೆ ತಮ್ಮ ಪತಿಯ ಒತ್ತಾಸೆಯಿಂದಾಗಿ ಶಾಂತಾದೇವಿಯವರು ಮನೆಯಲ್ಲಿಯೆ ಇಂಗ್ಲೀಷ್,ಹಿಂದಿ, ಪ್ರಾಚೀನ ಕನ್ನಡ ಸಾಹಿತ್ಯ ಹಾಗು ವಚನ ಸಾಹಿತ್ಯದ ಅಧ್ಯಯನ ಮಾಡಿದರು. 1940 ರಲ್ಲಿ ಕನ್ನಡ ಜಾಣ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಪತಿಯ ಪ್ರೋತ್ಸಾಹದಿಂದ 1938ರಲ್ಲಿ ಅಕ್ಕನ ಬಳಗ ವೆಂಬ ಮಹಿಳಾ ಸಂಘಟನೆಯನ್ನು ಹುಟ್ಟು ಹಾಕಿದರು.ಶಾಂತಾದೇವಿ ತಾಯಿಯ ಮಮತೆ ತಂದೆಯ ಪ್ರೀತಿ ಕಾಣದ ಮುಗ್ಧ ಬಾಲಕಿಸುಮಾರು ಹತ್ತು ಸಲ ಅವರಿಗೆ ಗರ್ಭಪಾತವಾಯಿತು.ಮಕ್ಕಳಿಲ್ಲದ ಕೊರಗು ಬಿಟ್ಟು ಸಂಪೂರ್ಣ ಸಾಹಿತ್ಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದರು.ಅರಿವು (ಜ್ಞಾನ, ಅರಿವು), ಆಚಾರ (ಅಭ್ಯಾಸ) ಅನುಭವ (ಆಧ್ಯಾತ್ಮಿಕ ಅನುಭವ), ಕಾಯಕ (ದೈಹಿಕ ದುಡಿಮೆಯಿಂದ ಗಳಿಸುವುದು), ಸತ್ಯ ಮತ್ತು ಪರಿಶುದ್ಧತೆಯನ್ನು ಕಾಪಾಡುವುದು, ದಾಸೋಹ (ಯಾವುದೇ ಅಹಂ’ ಇಲ್ಲದೆ ದುಡಿದವರಿಗೆ ನೀಡುವುದು ಶರಣ ಸಂಸ್ಕೃತಿಯ ತತ್ವಗಳು.ಬಾಲ್ಯದಿಂದಲೂ ಇಂತಹ ಅಪೂರ್ವ ಶರಣ ಸಂಸ್ಕೃತಿ ಮೈಗೂಡಿಸಿಕೊಂಡ ಶಾಂತಾದೇವಿ ಮುಂದೊಂದು ದಿನ ನಾಡಿನ ಅಗ್ರ ಲೇಖಕಿ ಸಾಹಿತಿ ಲೇಖಕಿಯಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸಾರ್ವಜನಿಕ ಸಾಮಾಜಿಕ ಸೇವೆ ಅಕ್ಕನ ಬಳಗ ಸ್ಥಾಪನೆ ( 1940)ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು (1965)ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿಯ ಸದಸ್ಯರು (1974-1978)ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯರು (1979)ಧಾರವಾಡ ಆಕಾಶವಾಣಿ ಆಡಿಶನ್ ಕಮಿತಿ ಸದಸ್ಯರು(1961-1962)ಗಾಂಧಿ ಶಾಂತಿ ಪ್ರತಿಷ್ಠಾನದ ಮಹಿಳಾವಿಭಾಗದ ಕಾರ್ಯಾಧ್ಯಕ್ಷರು(1967-1970)ಕರ್ನಾಟಕ ವಿದ್ಯಾವರ್ಧಕ ಸಂಘ,ಧಾರವಾಡ ದ ಉಪಾಧ್ಯಕ್ಷರು (1974-1978)ಉತ್ತರ ಕರ್ನಾಟಕ ಲೇಖಕಿಯರ ಸಂಘ (ಹುಬ್ಬಳ್ಳಿ-ಧಾರವಾಡ) ದ ಆಜೀವ ಗೌರವಾಧ್ಯಕ್ಷರು ಸಾಹಿತ್ಯ ಕೃತಿಗಳು ಕಥಾಸಂಕಲನ ಮೊಗ್ಗೆಯ ಮಾಲೆಕುಂಕುಮ ಬಲ ಗದ್ಯ ಸಾಹಿತ್ಯ ಹಚ್ಚೇವು ಕನ್ನಡದ ದೀಪ.ಕನ್ನಡದ ತಾಯಿ.ಮಹಿಳೆಯರ ಅಲಂಕಾರಸೊಬಗಿನ ಮನೆಮಹಿಳೆಯರ ಆತ್ಮಶ್ರೀ.ರಸಾಪಾಕಸಾರ್ವಜನಿಕ ರಂಗದಲ್ಲಿ ಮಹಿಳೆ.ದಾಂಪತ್ಯಯೋಗವಧುವಿಗೆ ಉಡುಗೊರೆ.ಜನನೀ ಜನ್ಮ ಭೂಮಿಶ್ಚ.ಮಹಿಳಾ ಚೇತನ.ಸಮುಚ್ಚಯ. ಕಾದಂಬರಿಬಸವ ಪ್ರಕಾಶ.ದಾನದಾಸೋಹಿ ದಾನಮ್ಮ.ವೀರ ಶೂರರಾಣಿ ಕೆಳದಿ ಚೆನ್ನಮ್ಮ ಮಕ್ಕಳ ಸಾಹಿತ್ಯಬೆಳವಡಿ ಮಲ್ಲಮ್ಮ.ಕೆಳದಿ ಚೆನ್ನಮ್ಮ.ನಾಗಲಾಂಬಿಕೆ.ನೀಲಾಂಬಿಕೆಕುಟುಂಬ.ಬಸವಯುಗದ ಶಿವಶರಣೆಯರುಭಾರತದ ಮಾನಸಪುತ್ರಿಯರುಗಂಗಾಂಬಿಕೆಶಿವಯೋಗಿಣಿಎಣ್ಣೆ ಹೊಳೆಯ ನಂದಾದೀಪಪುರಾತನ ಶರಣರುದಾನದಾಸೋಹಿ ದಾನಮ್ಮ. ಪ್ರಶಸ್ತಿ ಗೌರವಗಳು ಜ.ಚ.ನಿ. ಪೀಠಾರೋಹಣ ಬೆಳ್ಳಿಹಬ್ಬ ‘ ಸಾಹಿತ್ಯಸುಮ ‘ ಬಂಗಾರದ ಪದಕಸಾಹಿತ್ಯ ಅಕಾಡೆಮಿ ಪ್ರಶಸ್ತಿ (1973)ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1983)ಸಾವಿತ್ರಮ್ಮ ದೇ.ಜ.ಗೌ. ಪ್ರಶಸ್ತಿ (1991)ಷಷ್ಟ್ಯಬ್ದಿ ಸಮಾರಂಭ (‘ ಪ್ರಶಾಂತ’ ಆಭಿನಂದನ ಗ್ರಂಥ ಸಮರ್ಪಣೆ:1982) 1999 ರಲ್ಲಿ ಬಾಗಲಕೋಟೆಯಲ್ಲಿ ನಡೆದ 68 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೇಷ್ಠ ಸಾಹಿತಿ ಶಾಂತಾದೇವಿ ಮಾಳವಾಡ ಅವರು 7 ಆಗಸ್ಟ್ 2005 ರಲ್ಲಿ ಬಯಲಲ್ಲಿ ಬಯಲಾದರು.ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸ್ನೇಹ ಪ್ರೀತಿ ಮತ್ತು ಆತ್ಮ ಸ್ಥೈರ್ಯದ ಸಂಕೇತವಾದ ಕನ್ನಡ ಸಾಹಿತ್ಯದ ದಿಗ್ಗಜೆ ಶಾಂತಾದೇವಿ ಮಾಳವಾಡ ಅವರು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಕೊಟ್ಟ ಕೊಡುಗೆ ಅಪಾರವಾಗಿದೆ. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಕನ್ನಡ ಸಾಹಿತ್ಯ ದಿಗ್ಗಜೆ ಶಾಂತಾದೇವಿ ಮಾಳವಾಡ Read Post »

You cannot copy content of this page

Scroll to Top