ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಳಿಯುವ ಕಾಯಕೆ ಕಾಯಕದಲಿ ಕೈಲಾಸ ಕಂಡರಷ್ಟೆ ಸಾರ್ಥಕತೆ
ಉತ್ತು ಬಿತ್ತಿದ ಬೀಜವು ಫಸಲಿನಿಂದ ತೆನೆ ಬಾಗಿದರಷ್ಟೆ ಸಾರ್ಥಕತೆ

ವಾದ ವಿವಾದಗಳ ಬಾಳಿನಲಿ ಆಶಾವಾದವೆ ದಾರಿದೀಪ ಬದುಕಲು
ವಾತ್ಸಲ್ಯದ ಬೇರು ಎದೆಯ ತುಂಬಾ ಹರಡಿ ಹಬ್ಬಿದರಷ್ಟೆ ಸಾರ್ಥಕತೆ

ಮನದ ಮರ್ಜಿಗೆ ಮುಳುವಾಗದಿರಲಿ ಒಲವು ಚೆಲುವಿನ ಮೋಹವು
ಹೃದಯ ಮಂದಿರದಲಿ ಜ್ಞಾನದ ಪ್ರಣತಿಯ ಹಚ್ಚಿದರಷ್ಟೆ ಸಾರ್ಥಕತೆ

ಚಿತ್ತದೊಳಗಿನ ಚೇತನದ ಚೀತ್ಕಾರಕೆ ಹೇತುವಾಗದೆ ಕೇತನವಾಗು
ಅರಿವಿನ ಸೊಡರು ಅಜ್ಞಾನದ ಅಂಧಕಾರ ನೀಗಿದರಷ್ಟೆ ಸಾರ್ಥಕತೆ

ಅತೃಪ್ತ ಭಾವಕೆ ಸವೆದ ಪಥಗಳ ಸಂತೃಪ್ತಿಯೆ ಸಾಂತ್ವನದ ಮಡಿಲು
ಕಳೆದ ನಿನ್ನೆಯ ಕುಹಕಕೆ ತೆರದ ಕರ್ಣಗಳ ಮುಚ್ಚಿದರಷ್ಟೆ ಸಾರ್ಥಕತೆ

ಸೆಟೆದು ನಿಂತಿ‌ಹ ಆತ್ಮಸ್ಥೈರ್ಯವೆ ಸ್ನಿಗ್ಧ ಮನದ ಸುಪ್ತ ಸೌಂದರ್ಯ
ಹತಾಶೆಯ ಗೆದ್ದಲು ಸುಕನಸಿನ ಹುತ್ತವನು ಕಟ್ಟಿದರಷ್ಟೆ ಸಾರ್ಥಕತೆ

ಶ್ವೇತ ವರ್ಣದ ಶುಭ್ರತೆಗೆ ಸಿಡಿದ ಕೆಸರಿನ ಕಿಡಿಯಾಗದಿರಲಿ ಪ್ರೀತಿ
ಅರ್ಚನಾ ನೀನು ರಾಜ ಗಾಂಭೀರ್ಯದಲಿ ನಡೆದರಷ್ಟೆ ಸಾರ್ಥಕತೆ

————–

About The Author

Leave a Reply

You cannot copy content of this page

Scroll to Top