ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದಾನವತೆಯ ಧಾರ್ಷ್ಟ್ಯ ದರ್ಪಕೆಲ್ಲಿದೆ
ಮಮತೆ ಮಾನವೀಯತೆ ಪರಿವು?
ಕಟುಕರ ಭೀಕರ ಭೀಭತ್ಸತೆಗೆಲ್ಲಿದೆ
ಮಮಕಾರ ಮನುಶ್ಯತ್ವದ ಸ್ವರವು.?

ಮದಾಂಧರ ಆಟಾಟೋಪಗಳಿಗೆಲ್ಲಿದೆ
ಕಾನೂನು ಕಟ್ಟಳೆಗಳ ಭಯವು?
ದುರಹಂಕಾರ ದುರಾಚಾರಗಳಿಗೆಲ್ಲಿದೆ
ಆಸ್ಥೆ ಅಂತಃಕರಣಗಳ ಹರವು?

ಮದಿರೆ ಮಾದಕಗಳ ವಿಕೃತಿಗೆಲ್ಲಿದೆ
ಸಾವು ನೋವುಗಳ ಸುಳಿವು?
ನಶಾ ಪರವಶರ ಹೀನ ಕುಕೃತಿಗೆಲ್ಲಿದೆ
ವಿವೇಕ ವಿವೇಚನೆಗಳ ತಿಳಿವು?

ಸಿರಿತನ ಅಧಿಕಾರಗಳ ಸೊಕ್ಕಿಗೆಲ್ಲಿದೆ
ಅಬಲರ ಕಂಬನಿಯ ಅರಿವು?
ಮೃಗತ್ವ ಪೈಶಾಚಿಕತೆಗಳ ದಿಕ್ಕಿಗೆಲ್ಲಿದೆ
ನರಳಿಕೆ ಆಕ್ರಂದಗಳ ಪರಿವು.?

ಸಂಸ್ಕೃತಿ ಸಂಸ್ಕಾರ ಸತ್ತ ಮೇಲೆಲ್ಲಿದೆ
ಸತ್ಯ ನ್ಯಾಯಧರ್ಮದ ಉಳಿವು.?
ಪಾಶಾಣ ತುಂಬಿದ ಎದೆಗಳಲೆಲ್ಲಿದೆ
ನೀತಿ ಪ್ರೀತಿ ನೇಮದ ಸ್ಫುರಿವು?

ಆದರ್ಶವಾಗುವವರೇ ಅಂಧರಾಗುತ
ಸಮಾಜದ ಸಾಕ್ಷಿಪ್ರಜ್ಞೆ ಸತ್ತ ಮೇಲೆ
ನಿದರ್ಶನವಾಗುವವರೆ ನೀಚರಾಗುತ
ನೆಲದ ಅಸ್ಮಿತೆ ನೆಲ ಕಚ್ಚಿದ ಮೇಲೆ

ತತ್ವ ಸತ್ವ ಸಿದ್ಧಾಂತಗಳೆಲ್ಲ ಬೂದಿಯಾಗಿ
ಮನೆ-ಮನಗಳಿಗೆಲ್ಲ ಮಸಣದ ಕಳೆ.!
ನಾಗರೀಕತೆಯ ನರಸತ್ತು ನಿರ್ನಾಮವಾಗಿ
ಬದುಕುಗಳು ಬೆತ್ತಲಾದಾವು ನಾಳೆ.!

About The Author

Leave a Reply

You cannot copy content of this page

Scroll to Top