ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಾಡು ಕೋಗಿಲೆ ವಸಂತದಾಗಮನವ
ಋತುರಾಜನ ಸಂಭ್ರಮ
ಯಾಕೋ ದನಿ ನಡುಗುತಿದೆ
ರೆಕ್ಕೆಗಳು ಭಾರವಾಗಿವೆ
ಇಂಪಿಲ್ಲದ ನಿನ್ನ ದನಿ
ಸೊಂಪಿಲ್ಲದ ನಿನ್ನ ಸಡಗರ
ಕಳೆಗೆಟ್ಟಿದೆ ವಸಂತ
ಮಾವು ಪಲ್ಲವಿಸಲಿಲ್ಲ
ಬೇಹೂವಿನ ಘಮವಿಲ್ಲ
ಮಲ್ಲಿಗೆಯ ಕಂಪಿಲ್ಲ
ಮುತ್ತುಗದ ಕೆಂಪಿಲ್ಲ
ಚೈತ್ರದ ಮಸಣ ಮೆರವಣಿಗೆ

ಭೂತಾಯಿಯ ಒಡಲ ಹುಡಿಗೆಡಿಸಿ
ನಂಜಾಗಿ ನೆಟ್ಟ ಬೀಜ ಮೊಳಕೆಯೊಡೆಯದೆ
ಕಮರಿದ ಬೆಳೆಗೆ ಬಾರದ ಮಳೆಗೆ
ಕಂಗೆಟ್ಟ ರೈತನ ಸಾವಿಗೆ
ದನಿಗಟ್ಟಿದೆಯಾ
ಅಂಕುರಿಸುವ ಮೊದಲೆ
ಒಡಲ ಬಗೆದು ಹೆಂಗೂಸಿನ ಜೀವ ತೆಗೆದ
ನಿಷ್ಕರುಣಿಗಳ ಭೀಭತ್ಸತೆಗೆ
ಬೇಸತ್ತೆಯಾ
ಅಂತರಂಗದ ಸುಪ್ತ ಆಸೆಗಳೆಲ್ಲ
ಬೊಬ್ಬಿಟ್ಟು ಮುತ್ತು ಕೊಡಲು ಹೋದವರ
ಕತ್ತು ಹಿಚುಕಿ ಬಯಲು ಬೆತ್ತಲೆ ಮಾಡಿ
ಬೆಂಕಿ ಇಟ್ಟ ಕೈಗಳ ದೌರ್ಜನ್ಯಕ್ಕೆ
ಮರುಗಿದೆಯಾ
ನೋಡಿದಲ್ಲೆಲ್ಲ ಕೊಲೆ ಸುಲಿಗೆ
ಅನ್ಯಾಯ ಅಸಮಾನತೆ
ಅತ್ಯಾಚಾರ ಭ್ರಷ್ಟಾಚಾರ
ಮೋಸದಾಟಗಳ ಮೆರವಣಿಗೆ
ವೈಭವದ ಮಸಣ ಪಲ್ಲಕ್ಕಿಯ
ನೋಡಿ ಪಕ್ಕನೆ ನಕ್ಕು ಹಾಡು
ನಿಲ್ಲಿಸಿದೆಯಾ
ಹಾಡು ಕೋಗಿಲೆ ಬೇಸರ ಬೇಡ
ಶರಣ ಸಂತ ಮಹಾತ್ಮರು
ನಿನ್ನ ದನಿಗೆ ದನಿಗೂಡಿಸುವರು
ರೆಕ್ಕೆ ಬಲಿತ ನಿನ್ನ ಮರಿಗಳು
ಆಸೆ ಹೊತ್ತು ಅನಂತಾಕಾಶದಲಿ ಹಾರುವವು
ಮಾವ ಚಿಗುರುತ್ತದೆ ಬೇವು ಘಮಿಸುತ್ತದೆ
ಮುತ್ತುಗ ಕೆಂಪಿಟ್ಟು ನಲಿಯುತ್ತದೆ
ನೀ ಹಾಡಿದಾಗಲೇ ವಸಂತರಾಜನ
ಮದುವೆ ಮೆರವಣಿಗೆ
ನಿನ್ನ ಹಾಡೇ ಯುಗಾದಿಗೊಂದು
ಸ್ವಾಗತ ಗೀತೆ


About The Author

Leave a Reply

You cannot copy content of this page

Scroll to Top