ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಉತ್ತರ ಹೇಳು ಸಖ

ಶಂಕರಾನಂದ ಹೆಬ್ಬಾಳ

ನಿಬಿಡಾರಣ್ಯದಲಿ
ಒಬ್ಬಂಟಿ ನಾನು
ಬೋಳು ಮರದಂತೆ,
ನಿಶ್ಚಲ ಭಾವ
ವಿಷಣ್ಣತೆಯಲಿ
ಗೊಣಗುತಿರುವೆ…

ಜಾರಿದ ಸಮಯಕ್ಕೂ
ಗೊತ್ತಾಗಲಿಲ್ಲವೆ..?
ಉಳಿದ ನೆನಪುಗಳು
ತೊಗಲು ಬೊಂಬೆಯಂತೆ
ಥೈತಕ ಕುಣಿಯುತ್ತಿವೆ….

ಬೇಗೆಯಲಿ ದಿಗ್ಗನೆದ್ದು
ಬಂದಂತೆ ಭಾಸವಷ್ಟೆ
ನಿಂತ ಜಾಗ ಕುಸಿದಂತೆ
ಕೊಂಚ ಅಳುಕು
ಎದ್ದು ಕುಳಿತೆ
ಬುದ್ದನಂತೆ
ಶಾಂತಿಯಿಲ್ಲದೆ…

ಈಗ ಹೊರಟಿದ್ದೇನೆ
ಧ್ರುವಕೆ ವಿಮುಖನಾಗಿ
“ದಾರಿಯಾವುದಯ್ಯಾ
ವೈಕುಂಠಕೆ ಎಂದು”
ದಾಸ ಮಾರ್ಗವನು
ಹಿಡಿದು,
ಸತ್ಯವನರಸಿ
ಮೋಕ್ಷಾಪೇಕ್ಷಿಯಾಗಿ
ಅಲೆವ ಯೋಗಿನಂತೆ
ನಡೆದಿದ್ದೇನೆ ದಿನ
ದಿನಗಳ ಸವೆಸಿ
ಸವೆದ ಚಪ್ಪಲಿಯಾಗಿದ್ದೇನೆ….

ದುಗುಡವಾವರಿಸಿ
ದುಃಖದೊಳು ತೇಲಿ
ಪರಿಹಾರವಿಲ್ಲದ
ಫಲಾನುಭವಿ ನಾನು
ಉತ್ತರವೆಲ್ಲಿದ ಸಖ
ನನ್ನ ಮನದ ಪ್ರಶ್ನೆಗೆ….?


About The Author

Leave a Reply

You cannot copy content of this page

Scroll to Top