ಕಾವ್ಯಯಾನ
ಬಿಕರಿ ಡಾ.ಗೋವಿಂದ ಹೆಗಡೆ ಇಲ್ಲಿ ಪ್ರೀತಿ ಸಿಗುತ್ತದೆ’ ಬೋರ್ಡು ಹಾಕಿ ಕುಳಿತಿದ್ದೇನೆ ಯಾರೊಬ್ಬರೂ ಸುಳಿಯುತ್ತಿಲ್ಲ.. ಅದೇನು, ಕೋವಿಯಂಗಡಿ ಮುಂದೆ ಅಷ್ಟೊಂದು ಸರತಿಯ ಸಾಲು!
ಮಗಳು ಲಕ್ಷ್ಮಿಕಾಂತ್ ಮಿರಜಕರ ಮಗಳು ಹುಟ್ಟಿದ್ದಾಳೆ ತಂದಿದ್ದಾಳೆ ಜೊತೆಯಲ್ಲಿಯೇ ಹೆಡೆಮುರುಗಿ ಕಟ್ಟಿ ವಸಂತನನ್ನು ಮನೆಯಲ್ಲೀಗ ನಿತ್ಯ ದೀಪಾವಳಿ ಮನ ತುಂಬಾ ಬೆಳದಿಂಗಳ ಓಕುಳಿ ಮಗಳು ಮುಗುಳ್ನಗುತ್ತಿದ್ದಾಳೆ ಮಾಯವಾಗುತ್ತಿವೆ ಜಗದ ಜಂಜಡಗಳು ಒಂದೇ ಗುಕ್ಕಿಗೆ ಕರಗಿ ಅವಳ ನಿಷ್ಕಲ್ಮಶ ನಗುವಿನ ಮೋಡಿಗೆ ಬಂದು ಬೀಳುತ್ತಿವೆ ಗಗನದ ನಕ್ಷತ್ರಗಳೆಲ್ಲಾ ಅವಳ ಸುಕೋಮಲ ಮೃದು ಪಾದದ ಅಡಿಯಲ್ಲಿ ಮಗಳು ಅಂಬೆಗಾಲಿಡುತ್ತಿದ್ದಾಳೆ ಅವಳ ಎಳೆದೇಹದ ಸ್ಪರ್ಷ ಸಂಚಾರವಾಗುತ್ತಲೇ ಅರ್ಥ ಕಳೆದುಕೊಳ್ಳುತ್ತಿವೆ ದೊಡ್ಡವರ ಸಿನಿಕತನದ ಮಾತುಗಳು ಮಗಳು ಮಾತನಾಡುತ್ತಿದ್ದಾಳೆ ಕಪಟವರಿಯದ ಮಗಳ ತೊದಲುಮಾತುಗಳಿಗಿಂತ ಶ್ರೇಷ್ಟವೇನಲ್ಲ ರಾಮಾಯಣ ,ಕುರಾನ್,ಬೈಬಲ್ ಭಗವದ್ಗೀತೆಯ ಸಾರ ನಿಜ,ಮಗಳು ಇಲ್ಲದೇ ಹೋದರೆ ಬದುಕು ನಿಸ್ಸಾರ! ಮಗಳು ನಡೆಯುತ್ತಿದ್ದಾಳೆ ಒಂದೊಂದೇ ತಪ್ಪುಹೆಜ್ಜೆಗಳ ಸರಿಪಡಿಸಿಕೊಳ್ಳುತ ನಡೆಯುತ್ತಿದೆ ಸರಿದಾರಿಯಲ್ಲಿ ಹಳಿ ತಪ್ಪಿದ್ದ ಜೀವನಯಾನ ಮಗಳೆಂಬ ತಾಯಿಯ ಆಗಮನದಿಂದ ಜೀವಂತಿಕೆಯ ಸಾನಿಧ್ಯದಿಂದ ಮಗಳು ಓಡುತ್ತಿದ್ದಾಳೆ ಸಮಯವೂ ಈಗ ಅವಳ ಹಿಂದೆ ಹಿಂದೆ ಓಡುವ ಬಾಲಂಗೋಚಿ ಸರಿದದ್ದೇ ಗೊತ್ತಾಗುವುದಿಲ್ಲ ಮಗಳೆಂಬ ಚೈತನ್ಯದ ಸನ್ನಿಧಿಯಲ್ಲಿ ಬದುಕೀಗ ರಸನಿಮಿಷಗಳ ಆಗರ ಮನೋಲ್ಲಾಸದ ಸಾಗರ. ********************* ಪರಿಚಯ: ಲಕ್ಷ್ಮಿಕಾಂತ ಮಿರಜಕರ ..ಊರು ಹಾವೇರಿ ಜಿಲ್ಲೆ ಶಿಗ್ಗಾಂವ.ಸದ್ಯ ಮೊಳಕಾಲ್ಮುರು ತಾಲೂಕಿನ ದೇವಸಮುದ್ರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪ್ರಭಾರಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಣೆ.ಕವನ ಕತೆ ಓದು ಮತ್ತು ಬರೆಯುವುದರಲ್ಲಿ ಆಸಕ್ತಿ..ಶಾಲೆಯ ಮಕ್ಕಳ ಬರಹಗಳನ್ನು ಸಂಪಾದಿಸಿ “ಚಿಲುಮೆ” ಎನ್ನುವ ಪುಸ್ತಕವನ್ನು ಪ್ರಕಟಿದ್ದೇನೆ.ಕವಿತೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ..
ಇರಬಹುದೆ? ಪ್ರಮೀಳಾ ಎಸ್.ಪಿ. ನಿತ್ಯ ನಿರಂತರ ನೆರಳು ನೀಡುವ ಎಲೆ ಯುದುರದ ಮರವಾದರೂ ಇರಲಹುದೇ! ಮುಂಗಾರೂ ಮೂರೇ ದಿನ ಮಲ್ಲಿಗೆಯ ಪರಿಮಳವೂ ಸಪ್ತದಿನಗಳೇ! ಚಂದಿರನು ಬೆಳದಿಂಗಳ ತಿಂಗಳಿಡೀ ಹೊಳಪಾಗಿ ಹರವಲಹುದೇ! ತುಂಬೆಯ ರಸ ಸವಿದ ದುಂಬಿಯೊಂದು ಮತ್ತದರತ್ತ ಇರಲುಬಹುದೇ! ಅದರದರ ಕಾಲಕ್ಕೆ ಭಾವ ಬಕುತಿಯ ತಾಳಕ್ಕೆ ಸಿಕ್ಕಷ್ಟು ದಕ್ಕಿಸುವುದು ನೇಮವಲ್ಲವೇ! ಇಷ್ಟಾದರೂ ಹುಡುಕುತ್ತಲೇ ಇರುವೆ ನಿತ್ಯವೂ ಹಸಿರಾದ ಪ್ರೀತಿಯನು ನಾನು ಮೂರ್ಖಳಾದೆನೆ ಗೆಳೆಯ!
ಖಾಲಿ ದೀಪ ಮತ್ತು ಕತ್ತಲು ಬಿದಲೋಟಿ ರಂಗನಾಥ್ ಕಟ್ಟಿದ ಮಣ್ಣಗೋಡೆಯು ತಪ ತಪನೆ ಬೀಳುತ್ತಿದೆ ನಿದ್ದೆಯಿಲ್ಲದ ರಾತ್ರಿಗಳ ಕನಸು ಆ ಮನೆ ಪ್ರತಿ ಇಟ್ಟಿಗೆಯ ಮೇಲೂ ನಿನ್ನ ಶ್ರಮದ ಬೆವರ ವಾಸನೆ ನೀನು ಮಲಗೆದ್ದ ಜಾಗದ ನಿಟ್ಟುಸಿರು ಕಣ್ಣೀರಾಕುತ್ತಿದೆ ನೀನೆ ನೆಟ್ಟ ನಂಬಿಕೆಯ ಗಿಡದ ಬುಡಕ್ಕೆ ಪಾದರಸ ಸುರಿದ ಅವಳು ಇವತ್ತು ಬೀದಿ ನಾಯಿಯ ಬಾಲ ಅವಮಾನದ ಗಾಯ ನಂಜಾಗಿ ನಸಿರಾಡಿ ಬದುಕುವ ಭರವಸೆಯು ಕುಂದಿ ನೆಲದ ಮೇಲಿಟ್ಟ ಅಷ್ಟೂ ಹೆಜ್ಜೆಗಳು ಕೆಂಡಗಳಾಗಿ ಧಗ ಧಗಿಸಿ ಉರಿದು ಜೀವವನ್ನೇ ಸುಟ್ಟ ನರಳುವಿಕೆಯ ಧ್ವನಿಯಲ್ಲಿ ಮಕ್ಕಳ ಮೇಲಿನ ಪ್ರೀತಿ ಹಸಿ ಹಸಿಯಾಗಿತ್ತು ಮಣ್ಣು ತಿನ್ನುತ್ತಿರುವ ನಿನ್ನದೆ ದೇಹದ ಮೂಳೆಯನ್ನು ಒರಸಿ ನೋಡಿದೆ ಎಷ್ಟೊಂದು ಕನಸುಗಳು ಜೀವಂತವಾಗಿದ್ದವು ರೆಕ್ಕೆ ಪುಕ್ಕ ಎತ್ತಿಕೊಂಡು ಮುಚ್ಚಿದ ರೆಪ್ಪೆಗಳಡಿಯಲ್ಲಿ ಸವೆಯದ ಹಾದಿ ತೆರೆದೇ ಇತ್ತು ಮಾತಾಡಿಸಿದೆ ತಮ್ಮನೆಂಬ ಹೆಸರು ಎದೆಯೊಳಗೆ ಬಿರಿದು ಮೌನದ ಗುಂಡಿಯಲಿ ಮಾತುಗಳು ಸತ್ತಿರುತ್ತವೆಂಬ ಸಣ್ಣ ಅರಿವೂ ಇಲ್ಲದೆ. ಅಲ್ಲಿಂದ ಎದ್ದು ಮಾರು ದೂರ ನಡೆದೆ ಬಂದ ದಾರಿಗೆ ಸುಂಕವಿಲ್ಲದೆ. ತಡೆಯದ ಮನಸು ಮತ್ತೆ ತಿರುಗಿ ನೋಡಿತು ಮಣ್ಣ ಹೊದಿಕೆಯ ‘ಮಾಡಿ‘ನೊಳಗೆ ಎಷ್ಟೊಂದು ಶಾಂತತೆಯಲಿ ಮಲಗಿದೆ ಹಾರಿ ಹೋದ ಪ್ರಾಣ ಪಕ್ಷಿಯ ದೇಹ ತಲೆದೆಸೆಯ ಗೂಡ ದೀಪದೊಳಗಿನ ಬತ್ತಿ ಎಣ್ಣೆ ಇರುವವರೆಗೆ ಮಾತ್ರ ಉರಿಯುತ್ತದೆ. ನಂತರ ಉಳಿಯುವುದು ಕೇವಲ ಖಾಲಿ ದೀಪ ಮತ್ತು ಕತ್ತಲು. ***********************************
ಗುಳಿಗೆ ಮಾರುವ ಹುಡುಗ ಅರುಣ್ ಕೊಪ್ಪ ಇವನು ಬ್ಯಾಗ್ ಹೊತ್ತು ಬೆವರು ಬಿತ್ತಿ ಜಿಪ್ಪು ಸರಿಸುತ್ತಾ ಸ್ಯಾಂಪಲ್ ಹಂಚುವ ಡಾಕ್ಟರ್ ಛೆಂಬರ್ ಲಿ ದಿನವೂ ಜ್ಞಾನಾರ್ಜನೆಯಂತೆ! ಸರತಿ ಸಾಲಿನಲ್ಲಿ ಮಾತು ಬರದವ ಹೊಡೆಯಲು ಹೋಗುತ್ತಲೇ… ಕಾಲು ಕಿತ್ತು ಬೇರೆ ವೈದ್ಯರ ಭೇಟಿಗೆ ಗೀಳಿಡುತ್ತಾನೆ ಇವ ಗುಳಿಗೆ ಮಾರುವ ಹುಡುಗನಂತೆ ಒಳ ಸೇರಿಸಿದ ಅಂಗಿ, ಕಪ್ಪು ಸೊಂಟದ ಪಟ್ಟಿ ಶೂ ಕೂಡ ಹೊಳೆವ ಹಾಗೇ ರೋಗಿಗಳು ಮತ್ತಷ್ಟು ಹಿಡಿ ಶಾಪ ಹಾಕುವ ಉತ್ತೇಜನ ನೀಡುವ ಹಾಗೇ ಅವನ ಡ್ರೆಸ್ ಕೋಡ್ ! ತನಗೂ ಇತರರಿಗೂ ಬದುಕು ಸಾಕುವ ಪಾಲಕ ಸೇವಕ, ಎಂತೆಲ್ಲ ಹಲುಬುತ್ತಾರೆ… ಅಲೆದಾಟದ ಬದುಕಲಿ ಕಾರದ ಕಲ್ಲು ಗೊತ್ತಾಗದೆ ಸವೆದ ಹಾಗೇ, ಇವ ಗುಳಿಗೆ ಮಾರುವ ಹುಡುಗನಂತೆ ಸೈಕಲ್ ತುಳಿಯುತ್ತಾನೆ ಹೆಲ್ಮೆಟ್ ಇಲ್ಲದೆ ಬೈಕ್ ಗುರ್ ಗುಡಿಸಿ ನಡೆಯುತ್ತಾ, ತಟ ತಟನೆ ಮೈ ಧಗಿಸಿ ಶ್ರಮಿಕರ ವರ್ಗದಲಿ ಇವನೂ ಒಬ್ಬ ವೈದ್ಯರ ಸಮಯಕ್ಕೆ ಇವನು ಸರಿಯಾಗಿ ಒಡೆದು ಮೂಡುತ್ತಾನೆ ತಪಸ್ಸಲಿ ದೇವರು ಕಂಡ ಹಾಗೇ ಹಪಾಹಪಿಯ ಭಾವ ಮಂದಹಾಸ ದಿನ ಕಳೆಗಟ್ಟಿದೆ ಅವಗೆ ವ್ಯಾಪಾರ ಜೋರಂತೆ ಇವ ಗುಳಿಗೆ ಮಾರುವ ಹುಡುಗನಂತೆ ಮನಸ್ಸು ಕಂಡಾಗ ಕರೆಯುವ ಕೆಲ ವಿಶೇಷ ತಜ್ಞರು ಬೆಟ್ಟಿಯಾದಾಗಲೆಲ್ಲ ತಿರುಪತಿ ವೆಂಕಟ್ರಮಣ ದರ್ಶನವಾದಂತೆ ನನಗೆ ಎನ್ನುತ್ತಾನೆ. ಒಂದಷ್ಟು ಬಿಡುವಿಲ್ಲದ ಬಿಡುವಿನಲ್ಲಿ ಮಡದಿ ಮಕ್ಕಳು ಬಂದುಗಳಿಗೆ ಇಳಿ ಪ್ರಾಯದಲ್ಲೂ ನಗುವ ಊರಲ್ಲಿ ಸಿಗುವ ತನ್ನ ಹೆತ್ತಮ್ಮನಿಗಾಗಿ ತಂದೆಗಾಗಿ ಇವನು ಗುಳಿಗೆ ಮಾರುವ ಹುಡುಗನಂತೆ ತಿಂಗಳು ಕೊನೆಯಲ್ಲಿ ಹಾಹಾಕಾರದ ಗುಬ್ಬಿಯಂತೆ ಕಡ್ಡಿ ಸೇರಿಸಿ ಗೂಡ ಹೆಣೆದಂತೆ ಸುರಿಗೂ ಇಲ್ಲದ ಆಯುಷ್ಯ ಇನ್ನು ಮನೆ ಎಲ್ಲಿ? ನೀರ ಮೇಲಿನ ಗುಳ್ಳೆಯ ಹಾಗೇ ಸ್ವಾವಲಂಭಿಯ ಒಂದು ರೂಪವಂತೆ ಇವನು ಗುಳಿಗೆ ಮಾರುವ ಹುಡುಗನಂತೆ ಉದ್ಯೋಗ ಅರಸಿ ಬಂದನಂತೆ ಕಾಂಕ್ರೀಟ್ ಕಾಡಿಗೆ, ನಿರುದ್ಯೋಗ ಮೆಟ್ಟಲು ಬದುಕ ಕಟ್ಟಲು ಮೆಟ್ಟಿಲು ಏರುತ್ತಾ ಒಂದೊಂದೇ ಆಫೀಸರ್ ಆಗುತ್ತಾನೆ, ಚಾಲಕನಾಗುತ್ತಾನೆ ಶಿಕ್ಷಕನಾಗುತ್ತಾನೆ, ವಿದ್ಯಾರ್ಥಿಯಾಗುತ್ತಾನೆ ಕೊನೆಗೆ ಹಮಾಲಿಯೂ, ಚೌಕಟ್ಟಿನ ಭಯದಲ್ಲಿ ಬದುಕ ಗೆಲ್ಲುತ್ತಾ ಇವ ಗುಳಿಗೆ ಮಾರುವ ಹುಡುಗನಂತೆ ********************************** (ಔಷಧಿ ಕಂಪನಿ ಪ್ರತಿನಿಧಿಗಳಿಗೆ (ಮೆಡಿಕಲ್ ರೇಪ್ರೆಸೆಂಟಿಟಿವ್ ) ಕವಿತೆ ಅರ್ಪಣೆ )
ಜೀವಾತ್ಮ ಕೊಟ್ರೇಶ್ ಅರಸೀಕೆರೆ ಯಾವುದೋ ಹಕ್ಕಿ ಹಾಕಿರುವ ಈ ಹಿಕ್ಕೆ ಈಗ ಸಸಿಯಾಗಿದೆ! ಉದರಾಂಬರದ ಕಾರಣ ನುಂಗಿ,ನೀರು ಕುಡಿದುದೆಲ್ಲಾ ಏನೆಲ್ಲಾ ಸಕಾರಣಗಳಿಗೆ ಕಾರಣ!! ಜಗಕ್ಕೆ ಬಿದ್ದ ಕಿರಣ,ಮೇಲಿಂದ ಬಿದ್ದ ನೀರ ಬಿಂದು,ಸುಯ್ಯನೇ ಬೀಸುವ ಗಾಳಿ…… ಯಾವ ಯಾವುದಕ್ಕೆ ಸಂಬಂಧ!! ಅಲ್ಲೊಂದು ಜೋಡಿ ಹಕ್ಕಿ, ಇಲ್ಲೊಂದು ಮಿಲನ, ನಳ ನಳಿಸುತ್ತಿರುವ ಹೂ… ಒಂಟಿಯಾಗಿ ಯಾವುದೋ ಶಿಖರ ತೇಲಿ ಹೋಗುತ್ತಿರುವ ಮೋಡಗಳು ಯಾವ ದಂಡಯಾತ್ರೆಗೆ……. ಜೀವ ಇರಲೇಬೇಕಿಲ್ಲ ಚಲನೆಗೆ ಸೃಷ್ಟಿಯ ಸಾರ ಯಾರು ಹೀರಿದ್ದಾರೆ? ಯಾರೋ ಮೇಲೋ ಯಾರ ವಿಜಯ? ಅವನು ಅವಳ ಮೇಲೆ,ಅವಳು ಇವನ… ಬೆತ್ತಲ ದೇಹದ ತರತರ ತಡುಕುವಿಕೆಯಲ್ಲಿ ಕಾಲ… ಹಿಂದಿಲ್ಲ…ಮುಂದಿಲ್ಲ ಬರೀ ಸದ್ದು..ಸಾವು ಜನನ ಜನೇಂದ್ರಿಯ! ದೇಶ,ರಾಜ್ಯ,ರಾಜ ಗಡಿಯಂತೆ…ಉಗಿ ಮುಖಕ್ಕೆ! ಯಾವ ಸಾಮ್ರಾಜ್ಯ ಈ ಗ್ಯಾಲಾಕ್ಸಿಯಲ್ಲಿ ಯಾವ ಪಥ,ಚಲನೆ,ಗಾಳಿ,ಅಣು ಅಣುವೂ ಯಾರೂ ತೋರದ ಮಹಾನ್ ಕಪ್ಪು ಕುಳಿ ಒಂದಷ್ಟು ಉಸಿರು,ಜೀವ… ಸಾಕಷ್ಟೇ.. ಅಹಂಕಾರದ ಬುಗ್ಗೆಗೆ? ಅದಕ್ಕೆ ಇದಿಯೋ ಮರುಳೇ ಮರಳು ಮರಳು..ಮರಳುಗಾಡು ಮರುಳೇ…ಮರುಳ ಜೀವ! ಯಾವ ಹಕ್ಕಿಯ ಹಾಡು ಯಾವ ಹಕ್ಕಿಯ ಹಿಕ್ಕೆ ನಾವೆಲ್ಲಾ….. !! ಆದರೂ ರುಜು ಬೇಕು ಅವಳ ಒಳಗೆ! ನನ್ನದೇ ಜೀವ ಅನ್ನುವ ಚಪಲಕ್ಕೋ….ಅಹಂಕಾರಕ್ಕೋ..!! ಮತ್ತದೇ ಹಕ್ಕಿ,ಹಿಕ್ಕೆ. ನೀರ ಬಿಂದು…ಸರಸರನೇ ಸರಸ…ಜೀವ ಜೀವಾತ್ಮ! ************************************ ಪರಿಚಯ: ಕವಿ,ಸಾಹಿತ್ಯಾಸಕ್ತರು ಅರಸೀಕೆರೆ,ಹಾಸನ ಜಿಲ್ಲೆ
ಮಲ್ಲಿಗೆ-ಸಂಪಿಗೆ ಅನು ಮಹಾಲಿಂಗ ಅಂಗಳದಿ ಹರಡಿತ್ತು ಹಸಿರಿನ ಮಲ್ಲಿಗೆ ಚಪ್ಪರ ಮಳೆಹೊಯ್ದು ತಂಪಾಗೆ ಸೊಂಪಾದ ಹಂದರ ಬಳ್ಳಿಯ ತುಂಬೆಲ್ಲ ಮಲ್ಲಿಗೆ ಹೂ ರಾಶಿ ಸಂಜೆಗೆ ಕೊಯ್ದರೆ ಮನೆತುಂಬ ಘಮ ಸೂಸಿ ಮನದೊಡೆಯ ತಂದಿರುವನು ಘಂಗುಡುವ ಮಲ್ಲಿಗೆ ನಾರಿಯ ಮುಡಿಯೇರಿ ನಗುತಿರಲು ಮೆಲ್ಲಗೆ ಹಿತ್ತಲ ಮರದಲ್ಲಿ ಬಿರಿದಾಳು ಸಂಪಿಗೆ ಘಮನವಾ ಸೂಸ್ಯಾಳು ಸುತ್ತೆಲ್ಲಾ ಸುಮ್ಮಗೆ ಬಾಲೆಯ ಮನ ಸೆಳೆಯೊ ಗಗನದ ಸಂಪಿಗೆ ಮುಡಿಸೇರಿಸಲು ಪರದಾಟ ಪಕ್ಕದ ಮನೆ ಕೆಂಪನಿಗೆ ಮಲ್ಲಿಗೆ ಸಂಪಿಗೆ ಪ್ರತ್ಯೇಕ ರಾಣಿಯರುಅವರವರ ಕಕ್ಷೆಯಲಿ ಅವರವರೆ ಬೀಗುವರು. ******************************
ಪ್ರಶ್ನೋತ್ತರ ರತ್ನನಂದಿನಿ (ಲತಾ ಆಚಾರ್ಯ) ಪ್ರೀತಿ ಅಂದರೇನು ಕೇಳಿದಳು ಅವಳು ಉತ್ತರಿಸದೆ ನಾನು ಸೊಸೆಯ ಕಡೆಗೊಮ್ಮೆ ಕೈಯ ತೋರಿಸುತ ಮುಗುಳ್ನಗೆಯ ಬೀರಿದೆ ಅರ್ಥವಾಗಿರಬೇಕು ಈಗ ಆಕೆಗೆ ಅಮ್ಮ ಮಗುವಿಗೆ ತುತ್ತು ಉಣ್ಣಿಸುತ್ತಿದ್ದಳು. ಸ್ನೇಹವೆಂದರೇನು ಮತ್ತೊಂದು ಪ್ರಶ್ನೆ ಈಗಲೂ ನಾನು ಮೌನ ದಿಟ್ಟಿಸಿದಳು ನನ್ನ ಗೆಳೆಯನೋರ್ವನು ಬಂದು ಹೇಗಿರುವೆ ಎಂದನು ಮತ್ತದೇ ಅಸೌಖ್ಯ ತೋರಿದರೆ ಹೆದರದಿರು ನಾನಿರುವೆ ಜೊತೆಯಲ್ಲಿ ಎಂದಾಗ ಆಕೆ ಮೌನವಾಗಿದ್ದಳು. ಬೆಸುಗೆ ಎಂದರೇನು ಕೇಳಿದಳು ಈ ಬಾರಿ ಏನು ಹೇಳಲಿ ನಾನು ಮಾತು ಬಾರದು ನನಗೆ ಅವಳ ಗಲ್ಲವನು ಹಿಡಿದೆತ್ತಿ ಚುಂಬಿಸುತ ಬಾಹು ಬಂಧನದಲ್ಲಿ ಆಲಿಂಗಿಸಿದೆ ಏನು ಅರ್ಥವಾಯಿತೋ ಅವಳು ತುಸು ನಕ್ಕಳು. ಕರುಣೆ ಎಂದರೇನು ಮಗದೊಂದು ಪ್ರಶ್ನೆ ಉತ್ತರಿಸಲಾರೆ ಎಂದವಳು ತಿಳಿದಿದ್ದಳು ಕಾಲು ಮುರಿದಿಹ ನಾಯಿಮರಿಯೊಂದನ್ನು ಮಗರಾಯ ಎತ್ತಿ ತರುತ್ತಿರುವುದನ್ನು ಕಿಟಿಕಿಯಿಂದಲೆ ತೋರಿಸಿದೆ ಓಹೋ ಎಂದು ತಲೆಯಾಡಿಸಿದಳು. ಇನ್ನೇನೋ ಪ್ರಶ್ನೆ ಕೇಳುವವಳಿದ್ದಳು ಹೊಟ್ಟೆಯೊಳಗೇನೋ ನೋವು ಯಾರೋ ತಿವಿದಂತೆ ನರಳಿದೆನು ಹೊರಳಾಡಿ ಮುಖವ ಕಿವುಚಿದೆನು ಅಮ್ಮ ಮಗನಲ್ಲಿ ಪಿಸುಗುಟ್ಟಿದಳು ಆಗ ಗೆಳೆಯನಿಗೂ ಕರೆ ಹೋಗಿ ಆತ ಬಂದಿದ್ದನು. ಅವಳೇಕೋ ಈಗ ಮೌನ ತಾಳಿದ್ದಳು ದವಾಖಾನೆಯಲಿ ಮಲಗಿದ್ದ ನನ್ನನ್ನು ದಿಟ್ಟಿಸುತ ಕೇಳಿದಳು ಮುತ್ತೈದೆ ಭಾಗ್ಯವನು ಕೊಡುವಿರೇನು ಪ್ರಶ್ನೆಗುತ್ತರಿಸದೆಯೇ ಮೊದಲ ಬಾರಿಗೆ ನಾನು ಸೋತು ಹೋಗಿರುವಾಗ ಯಮರಾಯ ಸನಿಹದಲೆ ನಿಂತಿದ್ದನು *******************************
You cannot copy content of this page