ಪ್ರಬಂಧ ಸಂಗಾತಿ
ಶೈಲಜಾ ಪ್ರಸಾದ್
“ಮೆಲುಕು”


ನನ್ನ ಪತಿಯು ಕೂಡು ಕುಟುಂಬದಲ್ಲಿ ಬೆಳೆದವರು. ನಾನು ಮದುವೆಯಾಗಿ ಅತ್ತೆ ಮನೆಗೆ ಹೋದಾಗ,ನನಗೆ ತಿಳಿದಿದ್ದು ಅವರು ಕೇವಲ ೨/೩ ವರ್ಷದ ಹಿಂದೆಯಷ್ಟೇ ಬೇರೆ ಮನೆಗೆ ಬಾಡಿಗೆಗೆ ಬಂದಿದ್ದು ಎಂದು.
ನನ್ನ ಅತ್ತೆಯವರೇ ಮನೆಗೆ ಹಿರಿಯ ಸೊಸೆ, ಹಾಗಾಗಿ ಜವಾಬ್ದಾರಿ ತುಸು ಜಾಸ್ತಿಯೇ ಅವರ ಮೇಲಿತ್ತು.ನಮ್ಮ ಮಾವನವರಿಗೆ ತಮ್ಮಂದಿರು ನಾಲ್ಕು ಮಂದಿ ಮತ್ತು ಒಬ್ಬ ಅಕ್ಕ,ಇಬ್ಬರು ತಂಗಿಯರು ಇದ್ದರು. ನಮ್ಮ ಮದುವೆಯ ವೇಳೆಗೆ ಮಾವನವರ ತಂದೆ ತೀರಿ ಹೋಗಿದ್ದರು. ಅವರ ತಾಯಿ ( ನನ್ನವರ ಅಜ್ಜಿ) ಅನಾರೋಗ್ಯದಿಂದ ಬಳಲುತ್ತಿದ್ದರು.ಇನ್ನೊಂದು ವಿಶೇಷವೆಂದರೆ ಆ ಸಮಯದಲ್ಲಿ ನನ್ನ ಅತ್ತೆಯವರ ತಾಯಿಯವರೂ ಸಹ ನಮ್ಮ ಮದುವೆಯ ಸಮಯದಲ್ಲಿ ಹಾಜರಿದ್ದು , ಇಬ್ಬರು ಬೀಗಿತ್ತಿಯರೂ ಜೊತೆ ಜೊತೆಯಲ್ಲಿ ಕುಳಿತು ಮದುವೆಯ ಕಾರ್ಯ ಕಲಾಪಗಳೆಲ್ಲವನ್ನೂ ವೀಕ್ಷಿಸಿದ್ದು.
ನಮ್ಮ ಮದುವೆಯಾಗಿ ೪೪ ವರ್ಷಗಳಾಗಿದ್ದು, ಈಗಲೂ ನನ್ನವರು ಆಗಾಗ್ಗೆ ( ನಮ್ಮ ಮದುವೆ ವಾರ್ಷಿಕೋತ್ಸವದ ದಿನ/ಮೊಮ್ಮಕ್ಕಳು ಮನೆಗೆ ಬಂದಾಗ ನಮ್ಮ ಮದುವೆ ಫೋಟೋಗಳನ್ನು ತೋರಿಸುತ್ತಾರೆ)ಆ ಸಿಹಿ ನೆನಪುಗಳ ಪೋಟೋಗಳನ್ನು ನೋಡುತ್ತಿರುತ್ತಾರೆ. ಮನೆಗೆ ಹಬ್ಬ ಹರಿದಿನಗಳಲ್ಲಿ ಅವರ ಅಣ್ಣ,ತಮ್ಮಂದಿರು ಬಂದಾಗ ಅಂದಿನ ಬಾಲ್ಯದ ದಿನಗಳ ಸವಿ ಸವಿ ನೆನಪುಗಳನ್ನು ಪರಸ್ಪರ ಹಂಚಿಕೊಳ್ಳುವುದು ಸರ್ವೇ ಸಾಮಾನ್ಯ ಸಂಗತಿ.
ಸುಮಾರು ೩೦-೩೫ ಜನರಿದ್ದ ಆ ದೊಡ್ಡ ಕುಟುಂಬವನ್ನು ಈಗಿನ ಪೀಳಿಗೆಯ ಮಕ್ಕಳು ಊಹಿಸಿಕೂಳ್ಳಲೂ ಸಹಾ ಕಷ್ಟ!! ಗಂಡ,ಹೆಂಡತಿ ಮಗುವೊಂದಿರುವ ಕುಟುಂಬ(ವಿಭಕ್ತ ಕುಟುಂಬ) ಪ್ರಚಲಿತವಾಗಿರುವ ಕಾಲವಿದು.
ಐದು ಜನ ಅಣ್ಣ,ತಮ್ಮಂದಿರು ಅವರವರ ಹೆಂಡತಿ, ಮಕ್ಕಳೊಡನೆ ಇದ್ದರೆ ,ಆ ಜೀವನ ಹೇಗಿರುತ್ತದೆ ಎಂದು ಒಮ್ಮೆ ಕಲ್ಪಿಸಿಕೊಳ್ಳಿ!ಪ್ರತಿಯೊಂದು ದಂಪತಿಗೆ ಕನಿಷ್ಟ ೩/೪ ಮಕ್ಕಳು ಇರುವುದು ಅಂದಿನ ದಿನಗಳಲ್ಲಿ ಸಾಮಾನ್ಯವಾದ ಸಂಗತಿಯಾಗಿತ್ತು.
ಹಾಗೆ ನೋಡಿದರೆ ನಮ್ಮ ಅತ್ತೆಗೆ ಇಬ್ಬರೇ ಗಂಡು ಮಕ್ಕಳು ! ಅತ್ತೆಯವರಿಗೆ ಸುಮಾರು ೮-೧೦ ವರುಷಗಳು ಮಕ್ಕಳಾಗದೇ ನಂತರ ನನ್ನ ಪತಿ ಜನಿಸಿದ್ದು , ನಮ್ಮ ಅತ್ತೆ ಇದ್ದಾಗ ಹೇಳುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ. ನಂತರ ಎರಡೇ ವರುಷಕ್ಕೆ ನನ್ನ ಮೈದುನ ಹುಟ್ಟಿದ್ದು ಎಂದು ಹೇಳಿ ಅತ್ತೆ ನಗುತ್ತಿದ್ದರು.
ನನ್ನ ಅತ್ತೆಯ ಓರಗಿತ್ತಿಯರು ನಾಲ್ಕು ಜನ,ಅವರಿಗೆ ತಲಾ ೨/೩ ಮಕ್ಕಳೆಂದರೂ ೨೫ ಜನರು ಜೊತೆಗೆ ಮಾವನವರ ತಂದೆ ಮತ್ತು ತಾಯಿ ಎಲ್ಲಾ ಸೇರಿ ೩೦ ಮಂದಿಯಾಗುತ್ತಿದ್ದರು.೫-೬ ಜನರು ಹೆಚ್ಚಿಗೆ ಏಕೆ ಹೇಳಿದೆನೆಂದರೆ ಬಂದು ಹೋಗುವ ನೆಂಟರಿಷ್ಟರು ಆಗಿನ ಕಾಲದಲ್ಲಿ ನಿತ್ಯವೂ ಇರುತ್ತಿದ್ದರು.(ಇಪ್ಪತ್ತನೆ ಶತಮಾನದ ೫೦-೭೦ ದಶಕಗಳಲ್ಲಿ ಬಹಳ ಸಾಮಾನ್ಯ ಸಂಗತಿಯಾಗಿತ್ತು.ಈ ಪದ್ದತಿ ಇನ್ನೂ ಕೆಲವು ದಶಕಗಳ ಕಾಲ ಮುಂದುವರಿದಿತ್ತೆಂದು ನೆನಪಿದೆ.)
ನಾವು ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರೂ, ನಮ್ಮ ಮನೆ ಬೆಂಗಳೂರಿನಲ್ಲಿ ಇದ್ದಾಗ ನಮ್ಮ ತಾಯ್ತಂದೆಯರ ಸಂಬಂಧಿಕರು ,ನೆಂಟರು ಮದುವೆ,ಮುಂಜಿಗಳಿಗೆ ಬಂದಾಗ ನಮ್ಮ ಮನೆಯಲ್ಲಿಯೇ ತಂಗುತ್ತಿದ್ದ ನೆನಪು ಈಗಲೂ ನನಗಿದೆ.ಆಗಿನ ಕಾಲದಲ್ಲಿ ಜನರು ಇದ್ದಿದ್ದೇ ಹಾಗೆ. ಕಾಯಿಲೆ-ಕಸಾಲೆಗಳಾದರೆ ತಮ್ಮ ಊರುಗಳಿಂದ ಬೆಂಗಳೂರು/ಹತ್ತಿರದ ಪಟ್ಟಣಗಳಿಗೆ ವೈದ್ಯರ ತಪಾಸಣೆಗೆ ಬರುತ್ತಿದ್ದರು. ಒಬ್ಬರ ಕಷ್ಟ,ಸುಖಕ್ಕೆ ಇನ್ನೊಬ್ಬರು ಸ್ಪಂದಿಸಿ, ನೆರವಾಗುತ್ತಿದ್ದರು.ನಮ್ಮ ಬಾಡಿಗೆ ಮನೆ ಚಿಕ್ಕದಾಗಿದ್ದರೂ ,ಎಲ್ಲರ ಮನಸ್ಸು ದೊಡ್ಡದಾಗಿತ್ತು.ನಮ್ಮ ಅಜ್ಜಿಯು ನಮ್ಮೊಂದಿಗೆ ಇದ್ದುದರಿಂದ ,ಅವರನ್ನು ನೋಡಲು ನೆಂಟರಿಷ್ಟರು ಆಗಾಗ್ಗೆ ಬರುತ್ತಿದ್ದುದು ಸಾಮಾನ್ಯ ಹಾಗೂ ಸಹಜವಾಗಿತ್ತು.
ಇನ್ನು ನನ್ನ ಪತಿಯ ಕೂಡುಕುಟುಂಬದ ಬಗ್ಗೆ , ಅವರ ಜೀವನಶೈಲಿಯ ಬಗ್ಗೆ ಹೇಳುತ್ತ ಹೋದರೆ ಅದೇ ಒಂದು ದೊಡ್ಡ ಪ್ರಹಸನವಾದೀತು! ಇರಲಿ …ತುಸು ಚಿಕ್ಕದಾಗಿ ಹೇಳುತ್ತೇನೆ.
ಆ ಕೂಡುಕುಟುಂಬದಲ್ಲಿ ಎಷ್ಟೋ ರಸವತ್ತಾದ,ವಿನೋದಮಯವಾದ ಘಟನೆಗಳು ನಡೆದಿದ್ದವು. ಅವುಗಳಲ್ಲಿ ನಗೆಯುಕ್ಕಿಸುವಂತಹ ಕೆಲವು ಸನ್ನಿವೇಶಗಳು ಹೀಗಿವೆ.
ಅವರೆಕಾಯಿಯ ಸೀಸನ್ನಿನ ರಸಮಯವಾದ ಚಿತ್ರಣವನ್ನು ನಿಮ್ಮ ಮುಂದಿಡುವೆ.
ಆಗೆಲ್ಲಾ ಅವರೆಕಾಯಿಯ ಕಾಲದಲ್ಲಿ ಎಲ್ಲರಿಗೂ ಸಡಗರ, ಸಂಭ್ರಮವೋ ಸಂಭ್ರಮವು.ಹಬ್ಬದ ವಾತಾವರಣವೆಂದರೂ ತಪ್ಪಿಲ್ಲ.
ಹಬ್ಬಗಳೆಲ್ಲಾ ಮುಗಿದ ನಂತರ ‘ಅವರೆಕಾಯಿ ಹಬ್ಬ” ಎಂದು ನಮ್ಮತ್ತೆ ನಗುತ್ತಿದ್ದುದು ನೆನಪಿಗೆ ಬರುತ್ತದೆ.
ಆ ಸೀಸನ್ನಿನಲ್ಲಿ ಹೆಚ್ಚು ಕಡಿಮೆ ದಿನವೂ ಅವರೆಕಾಯಿಯನ್ನು ಬಳಸುತ್ತಿದ್ದರು. ಒಂದು ದಿನ ಅವರೆಕಾಳಿನ ಉಪ್ಪಿಟ್ಟು, ಇನ್ನೊಂದು ದಿನ ದೋಸೆ ಮತ್ತು ಹಿತಕವರೆ , ಈರುಳ್ಳಿ ರೊಟ್ಟಿ…ಇನ್ನೊಂದು ದಿನ ಅವರೆಕಾಳಿನ ಚಿತ್ರಾನ್ನ……ಹೀಗೆ ಪಟ್ಟಿ ಬೆಳೆಯುತ್ತ ಇರುತ್ತಿತ್ತು.
ಇಲ್ಲಿ ಹಿತಕವರೆಯ ಬಗ್ಗೆ ಹೇಳದಿದ್ದರೆ ಈ ಪ್ರಸಂಗವೇ ಅಪೂರ್ಣವಾಗುತ್ತದೆ.
ಹಿತಕವರೆಯನ್ನು ಮಾಡಬೇಕೆಂದರೆ ೨/೩ ದಿನಗಳ ಮುಂಚೆಯೇ ಪ್ಲಾನ್ ಮಾಡಬೇಕಿತ್ತು.ಹಿಂದಿನ ದಿನವೇ ಅವರೆಕಾಯಿಯನ್ನು ತಂದು ಕಾಳನ್ನು ಬಿಡಿಸಿಟ್ಟು ಕೊಳ್ಳಬೇಕಿತ್ತು. ನಂತರ ಅದನ್ನು ನೀರಿನಲ್ಲಿ ಅರ್ಧದಿನ ನೆನೆಸಿಡಬೇಕಾಗುತ್ತಿತ್ತು.ನಂತರ ಆ ಕಾಳುಗಳನ್ನು ಹಿಸುಕಿ, ಅದರ ಹೊಟ್ಟನ್ನು ತೆಗೆಯಬೇಕು. ಈ ಎಲ್ಲಾ ದೀರ್ಘ ಕಲಾಪದ ಬಳಿಕ ಇದಕ್ಕೆ ಮಸಾಲೆ ರುಬ್ಬುವ ಕಾರ್ಯಕ್ರಮ ಶುರುವಾಗಬೇಕಿತ್ತು.
ಆ ಪ್ರೋಗ್ರಾಂ ಇನ್ನೂ ರಸವತ್ತಾಗಿ ಇರುತ್ತಿತ್ತು. ಮನೆಯ ಎಲ್ಲಾ ಸದಸ್ಯರು ಈ ಕೆಲಸಕ್ಕೆ ಕೈಗೂಡಿಸಬೇಕಾಗುತ್ತಿತ್ತು.ಹಿಂದಿನ ದಿನವೇ ಮನೆಯವರೆಲ್ಲಾ ಕಾಯಿಯನ್ನು ಬಿಡಿಸಿಟ್ಟು ಮಲಗುತ್ತಿದ್ದರು. ಮರುದಿನ ಮಕ್ಕಳ ಸಹಿತವಾಗಿ ಎಲ್ಲರೂ ಬೆಳಗ್ಗೆ ಬೇಗ ಎದ್ದು ನೆನೆಸಿದ ಕಾಳನ್ನು ಹಿಸುಕಲು ಕುಳಿತುಕೊಳ್ಳುತ್ತಿದ್ದರು. ಮಕ್ಕಳು ಪೈಪೋಟಿಗೆ ಬಿದ್ದವರಂತೆ ಎರಡೂ ಕೈಗಳಲ್ಲಿ ಕಾಳನ್ನು ಹಿಸುಕಿ ಸಿಪ್ಪೆಯನ್ನು ಬೇರ್ಪಡಿಸುತ್ತಿದ್ದರು.
ಈಗ ಮಸಾಲೆ ರುಬ್ಬುವ ಕಾರ್ಯಕ್ರಮ ಶುರುವಾಗುತ್ತಿತ್ತು. ಮನೆಯ ಹೆಂಗಸರಿಗೆ ಕೈ ತುಂಬಾ ಕೆಲಸವೋ ಕೆಲಸ…..
ಒಬ್ಬರು ಈರುಳ್ಳಿಯನ್ನು ಒಲೆಯ ಮೇಲಿಟ್ಟು ಸುಟ್ಟರೆ, ಇನ್ನೊಬ್ಬರು ತೆಂಗಿನಕಾಯಿಯನ್ನು ತುರಿಯುತ್ತಿದ್ದರು. ಇನ್ನಿಬ್ಬರು ಮಸಾಲೆ ರುಬ್ಬಲು ಕುಳಿತುಕೊಳ್ಳುತ್ತಿದ್ದರು. ಬಳಿಕ ಬೇಯಲು ಇಟ್ಟಿದ್ದ ಕಾಳಿಗೆ ಮಸಾಲೆಯನ್ನು ಸೇರಿಸುತ್ತಿದ್ದರು.ಹೀಗೆ ಸುದೀರ್ಘದ ತಯಾರಿಯ ನಂತರ ಹಿತಕವರೆ ಕೊನೆಗೆ ಅಂತೂ ಸಿದ್ದವಾಗುತ್ತಿತ್ತು.
ಈಗ ಇನ್ನೊಂದು ಪರ್ವ ಶುರುವಾಗುತ್ತಿತ್ತು.
ಶೈಲಜಾ ಪ್ರಸಾದ್



