ಹಂಸಪ್ರಿಯ ಅವರ ಕವಿತೆ-ಬೀಜ

                                                                                                                                                               ದಿವ್ಯ ಶಕ್ತಿ ಎನ್ನ ಒಳಗಡಗಿದೆ 
ಸುಭದ್ರ ರಕ್ಷಾ ಕವಚದೊಳಗೆ!
ಹೆಬ್ಬಯಕೆ,
ಶಕ್ತಿ ಪ್ರಕಟಗೊಳಿಸುವ, ಹೆಬ್ಬಯಕೆ..
ಸಸಿಯಾಗಿ,ಗಿಡವಾಗಿ,ಮರವಾಗಿ
ಹೆಮ್ಮರವಾಗಿ, ನೆರಳಾಗಬೇಕು.
ಮೊಗ್ಗುಗಳಾಗಿ ಹೂವಾಗಿ,ಕಾಯಾಗಿ,ಹಣ್ಣುಗಳಾಗಿ
ಫಲನೀಡಬೇಕು..
ಮತ್ತೆನ್ನ ಮೂಲ ಸ್ಥಾನ ಸೇರಬೇಕು..
ಇದೆನ್ನ
ಸ್ವಾರ್ಥವೋ? ನಿಸ್ವಾರ್ಥವೋ?

ಎನ್ನ ಈ ಶಕ್ತಿ ಪ್ರಕಟಗೊಳಿಸಲು
ಬೇಕು, ಪ್ರಕೃತಿಯಾಸರೆ..
ಭೂ ಮಾತೆ ಉದರದೊಳೊಕ್ಕು
ಕವಚ ಕಳಚಿ ,
ಜೀವ ರಸಧಾರೆ ಹೀರಿ
ಭೂಗರ್ಭದಿಂ ಒಡಮೂಡಬೇಕು..
ಸಸಿಯಾಗಿ ನಳ ನಳಿಸಬೇಕು! ಮಗುವಿನಂದದಿ.

ನಾನ್ ಬೆಳೆಯಲು
ಮಳೆಯಾಸರೆ,
ರವಿಯಾಸರೆ ಮತ್ತೆ
ನರನಾಸರೆ.
ಮನುಜ ನೀ ಎನಗಾಸರೆ,ನಾನ್ ನಿನಗಾಸರೆ.
ನೆರಳಾಗುವೆ,
ಫಲ ನೀಡುವೆ,
ಭೂ ಮಾತೆ ಕೊರಳ ಹಾರವಾಗುವೆ…

ಮೋಡಗಳ ಕರೆಸಿ ಧರೆಗೆ
ಮಳೆ ತರಿಸುವೆ.
ವಾಯುವ ಹಿಡಿದಿಡುವೆ,
ಎನ್ನ ಒಳಗೆ ಅಗ್ನಿಯ ಬಚ್ಚಿಡುವೆ.
ಹಕ್ಕಿಗಳ ಗೂಡಿಗೆ ಹೆಗಲಾಗಿ
ಸಂಗೀತ ನಿನಾದ ಹೊರಡಿಸುವೆ.

ನಿಸ್ವಾರ್ಥ, ತ್ಯಾಗ ಜೀವನವೇ ಎನ್ನ ಕರ್ಮ.
ಕ್ಷಮಾ, ಅಹಿಂಸೆಯೇ ಪರಮೋ ಧರ್ಮ .
ಮನುಜ,
ನೀ ನನ್ನ ಕತ್ತರಿಸಿದರೂ ಮತ್ತೆ ಚಿಗುರುವೆ,
ಬೇಡಿಕೊಳ್ಳುವೆ,
ನೀ ನನ್ನ ಬೇರುಗಳನ್ನಭಕ್ಕೆತ್ತೆದಿರು.
ನಭಕ್ಕೆತ್ತದಿರು..
ನಭಕ್ಕೆತ್ತದಿರು…


                                           

Leave a Reply

Back To Top