
ಅಂಕಣ ಸಂಗಾತಿ
ಮಧು ವಸ್ತ್ರದ
ಮುಂಬಯಿ ಎಕ್ಸ್ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಹಾನಗರ..
ಮಾಯಾನಗರಿಯ
ಹೊಳೆವ ಮೊಗದ
ಹಿಂದಿನ ಮಸುಕು ಸತ್ಯ..

ಮಾಯಾನಗರಿಯ ಹೊಳೆವ ಮೊಗದ ಹಿಂದಿನ ಮಸುಕು ಸತ್ಯ..
ದೇಶದ ಪ್ರಮುಖ ಆರ್ಥಿಕ ರಾಜಧಾನಿ, ಕನಸುಗಳ ನಗರ, ಅನೇಕರ ಬದುಕನ್ನು ರೂಪಿಸುವ ಭೂಮಿಯಾದ ಈ ಮುಂಬಯಿ ಮಹಾನಗರಿಯ ಝಗಮಗಿಸುವ ಬೆಳಕಿನ ಹಿಂಭಾಗದಲ್ಲಿ, ಅದರ ಚಿಕ್ಕ ಪುಟ್ಟ ಗಲ್ಲಿಗಳಲ್ಲಿ, ಡಾಂಬರಿನ ದೊಡ್ಡ ಬೀದಿಗಳಲ್ಲಿ, ಹೆದ್ದಾರಿಗಳ ಸಿಗ್ನಲ್ಗಳ ಬಳಿಯಲ್ಲಿ, ಆಕಾಶ ಮುಟ್ಟುವ ಕಟ್ಟಡಗಳ ನೆರಳಲ್ಲಿ ಮತ್ತೊಂದು ಜಗತ್ತು ಜೀವಂತವಾಗಿದೆ. ನಮ್ಮ ದೃಷ್ಟಿಗೆ ಅಸ್ಪಷ್ಟವಾಗಿ ಕಾಣುವ ಈ ಲೋಕ, ಬಡತನ, ಕೊಳಕುತನ, ಮುಗ್ಧತೆ, ಅಜ್ಞಾನ, ಮೋಸ ವಂಚನೆಗಳಿಂದ ತುಂಬಿದೆ..
ಇಲ್ಲಿ ಬಡವರು, ನಿರಾಶ್ರಿತರು, ಭಿಕ್ಷುಕರು, ಹಾಗೂ ಸಂಘಟಿತ ವಂಚನೆಗಳ ಜಾಲಗಳು ಸಮಾನಾಂತರವಾಗಿ ಬೆಳೆದಿವೆ. ನಿಜವಾಗಿ ನಿರ್ಗತಿಕರಾಗಿ ಸಂಕಷ್ಟದಲ್ಲಿರುವವರೂ ಇದ್ದಾರೆ, ಆದರೆ ಅದೇ ಬಡತನದ ಹೆಸರಿನಲ್ಲಿ ಮೋಸ ಮಾಡುತ್ತ, ಭಿಕ್ಷೆ ಬೇಡುವುದನ್ನೇ ಧಂಧೆಯನ್ನಾಗಿ ಮಾಡಿ ಕೊಂಡಿರುವ ಧೂರ್ತರೂ ತುಂಬಿದ್ದಾರೆ. ಮಾನವೀಯತೆ ತೋರುವ ಜನರ ಕರುಣೆ, ಸಹಾನುಭೂತಿಯನ್ನೇ ಹಣವನ್ನಾಗಿ ಪರಿವರ್ತಿಸುವ ವೃತ್ತಿಪರ ವಂಚಕರು ಹಲವೆಡೆ ಅಡಗಿ ಕುಳಿತಿದ್ದಾರೆ..ಈ ಎಲ್ಲದರ ನಡುವೆ ಕೆಲವೊಮ್ಮೆ ಯಾವುದು ನಿಜ? ಯಾವುದು ಸುಳ್ಳು? ಎನ್ನುವುದು ಅರ್ಥವಾಗದಂತಾಗುತ್ತದೆ..
ಒಂದೆಡೆ ನಿಜಕ್ಕೂ ನಿರಾಶ್ರಿತರು, ದುಃಖಿತರು, ಹೊಟ್ಟೆಪಾಡಿಗಾಗಿ ದಿನ ನಿತ್ಯ ಹೋರಾಡುತ್ತ ಹಸಿವಿನಿಂದ ಕುಸಿಯುವ ಜನ ತುಂಬಿದ್ದರೆ ಮತ್ತೊಂದೆಡೆ ಜನರ ಕರುಣೆ, ಸಹಕಾರ ಸಹಾನುಭೂತಿಗಳನ್ನೇ ಮಾರಾಟ ಮಾಡುವ ವಂಚಕರು ಮೋಸದ ಜಾಲ ಹರಡಿ ಕುಳಿತಿದ್ದಾರೆ..ಬಹುಶಃ ಎಲ್ಲ ದೊಡ್ಡ ನಗರಗಳಲ್ಲಿಯೂ ಇದೇ ಕಥೆ ಇರಬಹುದೇನೋ..
ಇಂದಿನ ಸಂಚಿಕೆಯಲ್ಲಿ ಮುಂಬಯಿಯ ಹೊಳೆವ ಮೊಗದ ಹಿಂದಿನ ಮಸುಕು ಸತ್ಯವನ್ನು ಸ್ವಲ್ಪಮಟ್ಟಿಗೆ ತೆರೆದಿಡಲು ಪ್ರಯತ್ನಿಸಿದ್ದೇನೆ..ಸಮೃದ್ಧ ನಗರವೆಂದೇ ಪ್ರಸಿದ್ಧವಾದ ಮುಂಬಯಿ ಅಪಾರ ಸಂಪತ್ತು, ವೈಭವ, ತಂತ್ರಜ್ಞಾನ, ಉದ್ಯೋಗ, ಕಲೆ, ಸಂಸ್ಕೃತಿ ಸಂಭ್ರಮಗಳ ತವರೂರೆಂಬುದು ನಿಜವಾದರೂ ಇಲ್ಲಿ ಕಂಡೂ ಕಾಣದ, ಕೆಲವೊಮ್ಮೆ ಸಾಕಷ್ಟು ಗಂಭೀರವಾದ ಹತ್ತು ಹಲವು ಸಮಸ್ಯೆಗಳೂ ಇವೆ ಎಂಬುದು ಸುಳ್ಳಲ್ಲ..ಒಟ್ಟಾರೆ ಮುಂಬಯಿ ಮಾಯಾನಗರಿಯ ಸಂಪೂರ್ಣ ಚಿತ್ರಣವನ್ನು ಸಮತೋಲನದೊಂದಿಗೆ ತೋರಿಸುವ ಉದ್ದೇಶದಿಂದ ಇಂದು ಸ್ವಲ್ಪ ಭಿನ್ನವಾದ ವಿಷಯವನ್ನು ಆರಿಸಿಕೊಂಡಿದ್ದೇನೆ..

ಭಾರತದ ಅತ್ಯಂತ ಶ್ರೀಮಂತ ಭಿಕ್ಷುಕ ಇವನು..
ಮುಂಬಯಿ ಮಹಾನಗರದ ಬೀದಿಗಳಲ್ಲಿ ಮಾತ್ರವಲ್ಲ,
ಭಾರತದ ಅನೇಕ ನಗರಗಳಲ್ಲಿಯೂ ಸಹ ಭಿಕ್ಷಾಟನೆ ಒಂದು ದೊಡ್ಡ ಉದ್ಯಮದಂತೆ ಬೆಳೆಯುತ್ತಿದೆ..
ಕೇವಲ ಉಡುವ ಬಟ್ಟೆ, ತಿನ್ನುಣ್ಣುವ ಪದಾರ್ಥಗಳು ಮಾತ್ರವಲ್ಲ, ಜನರ ದಯೆಯನ್ನು ಮಾನವೀಯತೆಯನ್ನು ದುರುಪಯೋಗ ಪಡಿಸಿಕೊಂಡು ಮೋಸಮಾಡುವ ವಿವಿಧ ಯೋಜಿತ ತಂತ್ರಗಳು ಪ್ರಚಲಿತವಾಗಿವೆ.. ಅನೇಕ ಭಿಕ್ಷುಕರು ಕಾಲು ಅಥವಾ ಕೈಗಳನ್ನು ಮಡಿಚಿ ಕಟ್ಟಿಕೊಂಡು ಅಂಗವಿಕಲರಂತೆ ನಟಿಸುತ್ತಾರೆ, ಇನ್ನು ಕೆಲವರು ಕುರುಡರು ಅಥವಾ ಮೂಕರಂತೆ ವರ್ತಿಸುತ್ತಾರೆ, ಕೆಲವರು ಜನರ ಮನಸ್ಸಿಗೆ ಕರುಣೆ ಮೂಡಿಸಲು ತಾವು ಗಾಯಗೊಂಡವರಂತೆ ನಕಲಿ ಬಣ್ಣ ಬಳಿದು ರಕ್ತಸ್ರಾವದಂತೆ ತೋರಿಸುವ ತಂತ್ರವನ್ನು ಬಳಸುತ್ತಾರೆ. ಆದರೆ ವಾಸ್ತವದಲ್ಲಿ ಅವರಿಗೆ ಏನೂ ಆಗಿರುವುದಿಲ್ಲ ಸಂಪೂರ್ಣವಾಗಿ ಆರೋಗ್ಯವಾಗಿರುತ್ತಾರೆ. ಸೋಮಾರಿತನ, ದುಶ್ಚಟಗಳು, ಮತ್ತು ಸುಲಭವಾಗಿ ಹಣ ಗಳಿಸುವ ದುರಾಸೆಯಿಂದ ಭಿಕ್ಷಾಟನೆಯ ಧಂದೆಗೆ ಇಳಿಯುತ್ತಾರೆ..ಹತ್ತು ಹಲವಾರು ನಾಟಕಗಳನ್ನಾಡಿ ಮನ ಕರಗುವಂತೆ ಮಾತಾಡಿ ಹಣ ಕೀಳಲು ಪ್ರಯತ್ನಿಸುತ್ತಾರೆ..ನೀವು ಹಣ ನೀಡದೇ ಇದ್ದರೆ ಅಶ್ಲೀಲ ಪದ ಬಳಸಿ ಬೈದು ಮುಂದೆ ಹೋಗುತ್ತಾರೆ..

ಪುಟ್ಟ ಕೂಸಿಗೆ ನಿದ್ರೆ ಔಷಧಿ ಕುಡಿಸಿ.,ಸತ್ತ ಮಗುವಿನ ಅಂತ್ಯ ಸಂಸ್ಕಾರಕ್ಕೆಂದು ಹಣ ಕೀಳುವ ಮೋಸಗಾರ ಭಿಕ್ಷುಕರೂ ಇದ್ದಾರೆ..
ಮಡಿಲಿನಲ್ಲಿ ಪುಟ್ಟ ಕಂದನನ್ನು ಹೊತ್ತ ಮಹಿಳೆ, “ಈ ಮಗುವಿಗೆ ಔಷಧಿಗೆ ಹಣ ಬೇಕು, ಇಲ್ಲದಿದ್ದರೆ ಅದು ಸಾಯುತ್ತದೆ” ಎಂದು ರೋದಿಸಿ, ಕರುಣೆಯಿಂದ ಜನರಿತ್ತ ಹಣವನ್ನು ದುರುಪಯೋಗ ಮಾಡುತ್ತಾಳೆ.. ದೇವಾಲಯ, ದರ್ಗಾ, ಚರ್ಚ್ ಮುಂಭಾಗದಲ್ಲಿ ಭಿಕ್ಷೆ ಬೇಡುವುದು ಅತಿ ಸಾಮಾನ್ಯವಾಗಿದೆ. “ಗಣಪತಿ, ಅಯ್ಯಪ್ಪ, ಅಲ್ಲಾಹ, ಯೇಸು ನಿಮಗೆ ಆಶೀರ್ವಾದ ಕೊಡಲಿ!” ಎಂದು ಧರ್ಮದ ಹೆಸರಿನಲ್ಲಿ ಹಣ ಬೇಡುವುದು ಕೂಡ ಜನಸಾಮಾನ್ಯರ ಸಹಾನುಭೂತಿ ಪಡೆದುಕೊಳ್ಳುವ ಮತ್ತೊಂದು ಮಾರ್ಗ.
ಮಹಿಳೆಯರು ಗರ್ಭಿಣಿಯಂತೆ ನಟಿಸಿ ಹಣ ಬೇಡುತ್ತ ಜನರ ಸಹಾನುಭೂತಿ ಪಡೆಯುತ್ತಾರೆ. ಕೆಲವೆಡೆ ಇಂತಹ ಮಹಿಳೆಯರು ನಕಲಿ ಗೊಂಬೆಗೆ ಬಟ್ಟೆ ಸುತ್ತಿ ಹಣಕ್ಕಾಗಿ ಗೋಗರೆಯುತ್ತಾರೆ. ಮಕ್ಕಳ ಕೈ ಕಾಲುಗಳಿಗೆ ಬ್ಯಾಂಡೇಜ್ ಸುತ್ತಿ ಆಸ್ಪತ್ರೆ, ಶುಶ್ರೂಷೆ ನೆಪ ಹೇಳಿ ಹಣ ಕೀಳುತ್ತಾರೆ..ಇನ್ನೂ ಕೆಲವು ಮಹಿಳೆಯರು ಪುಟ್ಟ ೮-೧೦ ತಿಂಗಳ ಶಿಶುಗಳಿಗೆ ನಶೆ ಏರುವ ಔಷಧಿ ಕುಡಿಸಿ, ಮಲಗಿ ನಿದ್ರಿಸುವ ಮಗುವನ್ನು ಸತ್ತ ಹೆಣವೆಂದು ತೋರಿಸಿ ಅಳುತ್ತಾ ಅಂತ್ಯಸಂಸ್ಕಾರಕ್ಕಾಗಿ ಹಣ ಬೇಡುತ್ತಾರೆ. ಇದನ್ನು ನೋಡಿದ ಜನರು ಕರುಣೆ ತೋರಿ ಹಣ ಕೊಡುತ್ತಾರೆ. ತಾಯಂದಿರು ತಾವು ದೂರದಲ್ಲೆಲ್ಲೋ ಕುಳಿತು ತಮ್ಮ ಸಣ್ಣ ಸಣ್ಣ ಮಕ್ಕಳನ್ನು ಸಿಗ್ನಲ್ ಪಕ್ಕ ನಿಲ್ಲುವ ಗಾಡಿಗಳ ಮಾಲೀಕರಿಂದ ಹಣ ಬೇಡಲು ಕಳಿಸುತ್ತಾರೆ..ಹೆದ್ದಾರಿಯಲ್ಲಿ ವೇಗದಿಂದ ಓಡುವ ಬಸ್,ಕಾರುಗಳ ಭಯವೂ ಇಲ್ಲದೆ ಆ ಮಕ್ಕಳು ರಸ್ತೆಯಲ್ಲಿ ಹಣ ಬೇಡುತ್ತಾ ಓಡಾಡುತ್ತವೆ..ಆ ಪುಟ್ಟ ಮಕ್ಕಳನ್ನು ಕಂಡು ಕರುಳು ಚುರ್ ಅನ್ನದಿರಲು ಸಾಧ್ಯವೇ ಇಲ್ಲ..
ಬೆಳಗ್ಗೆ ಉತ್ತಮ ಬಟ್ಟೆ ಧರಿಸಿ ಹೊರ ಬಿದ್ದು ಹೋಟೆಲ್ ನಲ್ಲಿ ಊಟ ಸವಿಯುವ ಆಸಾಮಿಗಳು, ಮುಂದಿನ ಕ್ಷಣದಲ್ಲಿ ಹರಕು ಬಟ್ಟೆ ಹಾಕಿಕೊಂಡು ಭಿಕ್ಷುಕರ ವೇಷ ಧರಿಸಿ ಬೀದಿಗೆ ಇಳಿಯುತ್ತಾರೆ.ಮುಂಬಯಿಯ ಭಿಕ್ಷುಕರ ಪೈಕಿ ಕೆಲವರು ಕೋಟಿ ರೂಪಾಯಿ ಸಂಪತ್ತಿನ ಮಾಲಿಕರು ಇದ್ದಾರೆ..
ಮುಂಬಯಿನ ಭಾರತ್ ಜೈನ್ ಎಂಬ ವ್ಯಕ್ತಿ ಐದು ಜನ ಕುಟುಂಬಸ್ಥರ ಜೊತೆ ₹7.5 ಕೋಟಿಗೂ ಹೆಚ್ಚು ಸಂಪತ್ತನ್ನು ಹೊಂದಿದ್ದು “ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾನೆ. ಅವನು ದೈನಂದಿನ ಭಿಕ್ಷೆಯಲ್ಲಿ ₹60,000-₹75,000 ಗಳಿಸುತ್ತಾನೆಂದು ಸುದ್ದಿ ಇದೆ..
ಇಂತಹ ತಂತ್ರಗಳಿಂದ ಮೋಸ ಹೋಗದಂತೆ ನಾವು ಎಚ್ಚರಿಕೆ ವಹಿಸಬೇಕು. ನೇರ ಹಣ ನೀಡುವ ಬದಲಿಗೆ ಆಹಾರ ಅಥವಾ ಅವರಿಗೆ ಉಪಯುಕ್ತ ಆಗುವಂಥ ಸಾಮಾನು ನೀಡಬಹುದು..ಹಲವು ಸಂಘ ಸಂಸ್ಥೆಗಳಿಗೆ ಇಂತಹ ಭಿಕ್ಷುಕರ ಬಗ್ಗೆ ಮಾಹಿತಿ ನೀಡಿ ಪುನರ್ವಸತಿ ಕೇಂದ್ರಗಳಿಗೆ ಅವರನ್ನು ಸಾಗಿಸುವ ಪ್ರಯತ್ನ ಮಾಡಬಹುದು..ಈ ಭಿಕ್ಷಾಟನೆಯ ಜಾಲಕ್ಕೂ ಇನ್ನೊಂದು ಮುಖವಿದೆ..ಮುಂಬಯಿಯ ಭಿಕ್ಷಾಟನೆಯ ಹಿಂದೆ ದೊಡ್ಡ ಮಾಫಿಯಾ ಗ್ಯಾಂಗ್ಗಳ ಹಿಡಿತವಿರುವುದಾಗಿ ಅನೇಕ ವರದಿಗಳು ಸೂಚಿಸುತ್ತವೆ. ಇದನ್ನು “ಆರ್ಗನೈಸ್ಡ್ ಬೆಗ್ಗಿಂಗ್ ಸಿಂಡಿಕೇಟ್ (ಮಾಫಿಯಾ)”Organized Begging Syndicate(Mafia) ಎಂದೂ ಕರೆಯಲಾಗುತ್ತದೆ. ಈ ಮಾಫಿಯಾಗಳು, ತಿನ್ನಲೂ ಗತಿ ಇಲ್ಲದ ಬಡತನದಲ್ಲಿರುವ ಜನರನ್ನು, ಅನಾಥ ಮಕ್ಕಳನ್ನು, ಅಂಗವಿಕಲರನ್ನು ಬಳಸಿಕೊಂಡು ಭಿಕ್ಷೆ ಬೇಡಿ ಹಣ ಗಳಿಸುವ ವ್ಯವಸ್ಥೆಯನ್ನು ನಿಭಾಯಿಸುತ್ತವೆ.

ಈ ಗ್ಯಾಂಗ್ ನ ಜನರು ಮುಖ್ಯವಾಗಿ ರೈಲು ನಿಲ್ದಾಣಗಳು, ದೇವಸ್ಥಾನಗಳು, ಬಸ್ ನಿಲ್ದಾಣಗಳು, ಪಾದಚಾರಿ ಮಾರ್ಗಗಳು, ಪ್ರಮುಖ ಪ್ರವಾಸಿ ತಾಣಗಳು,ಶಾಲೆಗಳು, ಆಸ್ಪತ್ರೆಗಳು ಮುಂತಾದ ಕಡೆಗಳಿಂದ ಮಕ್ಜಳನ್ನು, ಅಥವಾ ಹೆಂಗಸರನ್ನು ಅಪಹರಿಸುತ್ತಾರೆ..ಹೆಚ್ಚಿನ ಸಂದರ್ಭದಲ್ಲಿ ಮಹಿಳೆಯರು ಮತ್ತು ಚಿಕ್ಕ ಮಕ್ಕಳೇ ಇವರ ಜಾಲದಲ್ಲಿ ಸಿಕ್ಕಿಬೀಳುತ್ತಾರೆ. ಹೀಗೆ ಅಪಹರಣಗೊಂಡ ಮಕ್ಕಳನ್ನು, ಹೆಂಗಸರನ್ನು ಈ ಗ್ಯಾಂಗ್ಗಳು ತಾವು ಹೇಳಿದ ರೀತಿಯಲ್ಲಿ ಭಿಕ್ಷೆ ಬೇಡಲು ಬಲವಂತ ಮಾಡುತ್ತವೆ. ಕೆಲವೆಡೆ ನಿಜವಾಗಿ ಅಂಧರು ಅಥವಾ ಅಂಗವಿಕಲರು ಇದ್ದರೂ ಸಹ ಅವರಿಗೆ ಭಿಕ್ಷೆಯಿಂದ ಬಂದ ಹಣದ ಸ್ವಲ್ಪ ಪಾಲನ್ನು ಮಾತ್ರ ನೀಡಲಾಗುತ್ತದೆ.. ಉಳಿದ ಹಣ ಗ್ಯಾಂಗ್ನ ಮುಖ್ಯಸ್ಥನ ಕೈಗೆ ಹೋಗುತ್ತದೆ. ಕೋಲ್ಕತ್ತಾ, ದೆಹಲಿ, ಮುಂಬಯಿ, ಚೆನ್ನೈ, ಸೇರಿದಂತೆ ಅನೇಕ ಮಹಾನಗರಗಳಲ್ಲಿ ಈ ಮಾಫಿಯಾ ಗ್ಯಾಂಗ್ ಗಳು ಭಿಕ್ಷುಕರನ್ನು ದಾಸ್ಯ ಜೀವನಕ್ಕೆ ತಳ್ಳುತ್ತವೆ..ಇದನ್ನು ನಿಯಂತ್ರಿಸಲು ಹಲವಾರು ಸರ್ಕಾರಿ ಕ್ರಮಗಳಿದ್ದರೂ, ಈ ಗ್ಯಾಂಗ್ಗಳು ಹೊಸ ತಂತ್ರಗಳನ್ನು ಪ್ರಯೋಗಿಸಿ ತಮ್ಮ ಶೋಷಣೆಯನ್ನು ಮುಂದುವರಿಸುತ್ತವೆ. ಕೆಲವು ಬಾರಿ ಈ ಭಿಕ್ಷುಕ ಮಕ್ಕಳು ಮಾಫಿಯಾಗಳ ಕೈಯಿಂದ ಆಕಾಸ್ಮಾತ್ ತಪ್ಪಿಸಿಕೊಂಡು ಹೊರ ಬಿದ್ದಾಗ ಮಾತ್ರ ಈ ಕಠೋರ ವಾಸ್ತವಗಳು ಬಹಿರಂಗವಾಗುತ್ತವೆ..
ಇಂತಹ ಗ್ಯಾಂಗ್ಗಳ ಜನ ಮಕ್ಕಳಿಗೆ ನಶೆ ಗುಳಿಗೆಗಳನ್ನು ಕೊಡುತ್ತಾರೆ. ಅವರನ್ನು ಹೊಡೆದು ಬಡಿದು ಭಯ ಬೀಳಿಸಿ ತಮಗೆ ಬೇಕಾದಂತೆ ಸುಳ್ಳು, ಕಳ್ಳತನಗಳನ್ನು ಕಲಿಸುತ್ತಾ..ಕೆಲವೊಮ್ಮೆ ಮಕ್ಕಳ ಕೈ-ಕಾಲುಗಳನ್ನು ಮುರಿದು ಅವರನ್ನು ನಿಜವಾಗಿಯೂ ಅಂಗವಿಕಲರನ್ನಾಗಿ ಮಾಡಿ ಭಿಕ್ಷೆ ಬೇಡುವ ಕೆಲಸಕ್ಕೆ ಹಚ್ಚುತ್ತಾರೆ.
ಮಹಾನಗರಗಳಲ್ಲಿ ಭಿಕ್ಷೆ ಬೇಡುವ ಸ್ಥಳಗಳ ಮೇಲೆ ನಿರ್ದಿಷ್ಟ ಗುಂಪುಗಳ ಹಕ್ಕು ಇರುತ್ತದೆ. ಒಂದು ತಾಣವನ್ನು ಹಿಡಿದಿರುವ ಭಿಕ್ಷುಕರ ತಂಡ ಅದನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ, ಪ್ರತಿದಿನ ಆ ತಾಣದಿಂದ ಸಾವಿರಾರು ರೂಪಾಯಿಗಳನ್ನು ಗಳಿಕೆ ಮಾಡುವ ಅವರು, ಹೊಸ ಭಿಕಾರಿ ಬಂದರೆ ಅವನನ್ನು ಅಲ್ಲಿಂದ ಓಡಿಸಿ ಬಿಡುತ್ತಾರೆ.
ಇಂತಹ ಜಾಲಗಳು ಬಹಳ ಗುಪ್ತವಾಗಿ ಕಾರ್ಯವನ್ನು ನಿರ್ವಹಿಸುತ್ತವೆ, ಇದರಲ್ಲಿ ಹಲವಾರು ಗೋಮುಖ ವ್ಯಾಘ್ರರೂ ಭಾಗಿಯಾಗಿರುವುದರಿಂದ ಅವರನ್ನು ಪತ್ತೆ ಹಚ್ಚುವುದು ಕಷ್ಟ. ಆದರೂ ಈ ಮಾಫಿಯಾಗಳನ್ನು ನಿಯಂತ್ರಿಸಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಮತ್ತು ಇದರಲ್ಲಿ ಯಶಸ್ಸನ್ನೂ ಪಡೆದಿದೆ..
ಮುಂಬಯಿಯ ಭಿಕ್ಷುಕ ಪುನರ್ವಸತಿ ಕೇಂದ್ರಗಳು (ಬೆಗ್ಗರ್ ಹೋಮ್ಸ್) ನಗರದಲ್ಲಿನ ನಿರಾಶ್ರಿತರು ಮತ್ತು ಭಿಕ್ಷುಕರ ಪುನರ್ವಸತಿಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡುತ್ತಿವೆ…
ಈ ಕೇಂದ್ರಗಳು ಅವರಿಗೆ ಆಶ್ರಯ, ಆಹಾರ, ವೈದ್ಯಕೀಯ ಸೇವೆಗಳು ಮತ್ತು ಪುನರ್ವಸತಿ ಕಾರ್ಯಕ್ರಮಗಳನ್ನು ಒದಗಿಸುತ್ತವೆ. ನಗರದ ವಿವಿಧ ಭಾಗಗಳಲ್ಲಿ ಇಂತಹ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮುಂಬಯಿ ಮಹಾನಗರ ಪಾಲಿಕೆಯ (BMC) ಆಡಳಿತ ಮತ್ತು ಅನೇಕ ಸ್ವಯಂಸೇವಾ ಸಂಸ್ಥೆಗಳ ಸಹಕಾರದಿಂದ ನಿರ್ವಹಿಸಲ್ಪಡುತ್ತವೆ. ಈ ಕೇಂದ್ರಗಳ ಉದ್ದೇಶ ಭಿಕ್ಷುಕರಿಗೆ ಮಾನವೀಯ ಸಹಾಯ ನೀಡುವುದು ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ಮರಳಿಸಲು ಸಹಾಯ ಮಾಡುವುದು. ಸರಕಾರದ ಈ ಕಾರ್ಯದಿಂದ ಮುಂಬಯಿ ಮಹಾನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಬದಲಾವಣೆ ಕಂಡು ಬರುತ್ತಿದೆ..ಇದಕ್ಕೆ ತಕ್ಕಂತೆ ಜನರೂ ಸಹ ನೇರ ಹಣ ನೀಡುವುದನ್ನು ತಪ್ಪಿಸಿ, ಪುನಶ್ಚೇತನ ಕೇಂದ್ರಗಳಿಗೆ ಅಥವಾ ಸರಕಾರ ಹಮ್ಮಿಕೊಂಡಿರುವ ಪುನರ್ವಸತಿ ಯೋಜನೆಗಳಿಗೆ ಸಹಾಯ ಮಾಡುವುದರಿಂದ ಸಮಾಜದಲ್ಲಿ ಈ ಭಿಕ್ಷಾಟನೆಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದು..ಈ ನಿಟ್ಟಿನಲ್ಲಿ
ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಾಗಿ ಕಾರ್ಯನಿರ್ವಹಿಸಿ, ಈ ಮಾಫಿಯಾ ಜಾಲಗಳನ್ನು ನಿರ್ಮೂಲಗೊಳಿಸಲು ಪ್ರಯತ್ನಿಸಬೇಕು. ಇದು ಸಮಾಜದಲ್ಲಿ ಭಿಕ್ಷುಕರ ಸ್ಥಿತಿಯನ್ನು ಸುಧಾರಿಸಲು ಮತ್ತು ಮಾಫಿಯಾ ಗ್ಯಾಂಗ್ಗಳ ಹಿಡಿತವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ…
( ಚಿತ್ರಕೃಪೆ; ಲೇಖಕಿ ಮತ್ತು ಗೂಗಲ್)
̲———————–
ಮಧು ವಸ್ತ್ರದ ಮುಂಬಯಿ.
