ಲಹರಿ ಸಂಗಾತಿ
“ದೇವರಂಥ ಗೆಳೆಯ
ಸದ್ದಿಲ್ಲದೆ ಎದ್ದು ನಡೆದ.”
ಜಯಶ್ರೀ ಭಂಡಾರಿ

ದೇವರಂಥ ಗೆಳೆಯ ಸದ್ದಿಲ್ಲದೆ ಎದ್ದು ನಡೆದ.
ಎಲ್ಲರಕ್ಕಿಂತ ವಿಭಿನ್ನವಾಗಿರುವದರಿಂದಲೇ ನಾನು ನಿನ್ನನ್ನು ಸದಾ ಸ್ಮರಿಸುವೆ ಗೆಳೆಯಾ.ಕಾವ್ಯವೆಂದರೆ ನನಗೆ ವಿಪರೀತ ಹುಚ್ಚು.”ರವಿ ಕಾಣದ್ದನ್ನ ಕವಿ ಕಂಡ”ಎಂಬಂತೆ ಪ್ರತಿಯೊಂದರಲ್ಲಿ ಕಾವ್ಯವನ್ನು ಅರಸಿ ಅರಸಿ ಬರೆಯುವದರಲ್ಲಿ ಸಂತೋಷ ಕಾಣುವ ನನ್ನೊಳಗೆ ನೀನು ನುಗ್ಗಿದ್ದು ನನಗಿನ್ನು ಆಶ್ಚರ್ಯವೆ ಆಗಿದೆ.”ಕವಿಗೆ ನಿತ್ಯ ಹೆರಿಗೆ” ಎನ್ನುವಂತೆ ದಿನವೂ ಕವನಗಳನ್ನು ಬರೆಯೋದು,ಬರೆದದ್ದನ್ನು ಪತ್ರಿಕೆಗಳಿಗೆ ಕಳಿಸೋದು ನನಗೆ ತುಂಬಾ ಇಷ್ಟದ ಕೆಲಸ.ಅದೊಂದು ದಿನ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕವನದ ಕುರಿತು ಇಷ್ಟಪಟ್ಟು ಕಳಿಸಿದ ಮೆಸ್ಸೇಜ ಇನಬಾಕ್ಸನಲ್ಲಿತ್ತು. ಆ ಕವನ ಬಹಳ ಜನ ಅಭಿಮಾನಿಗಳು ಇಷ್ಟಪಟ್ಟದ್ದಾಗಿತ್ತು. ಆದರೆ ಅವರೆಲ್ಲರ ಸಂದೇಶಗಳಲ್ಲಿ ನೀ ಕಳಿಸಿದ ಸಂದೇಶ ತುಂಬಾ ವಿಶೇಷವಾಗಿತ್ತು.ನೀ ಕಳಿಸಿದ ಕವನದ ಕುರಿತ ವಿಮರ್ಶೆ ಓದಿ ನಾ ನನ್ನ ಕವನವನ್ನೆ ಮತ್ತೆ ಮತ್ತೆ ಓದುವಂತಾಯಿತು. ಮೊಬೈಲ ನಂಬರ ಯಾಕಾದರೂ ಹಾಕಿದೆ ಅಂತ ಅನ್ನಸಿದ್ದು ಸತ್ಯ.ಆದರೂ ಸಂದೇಶಗಳ ಸುರಿಮಳೆ ಕಂಡು ಆನಂದಿಸಿದೆ. ನಿನ್ನ ಮೆಸ್ಸೇಜ ಮಾತ್ರ ಮನದ ಇನ್ ಬಾಕ್ಸನಲ್ಲಿ ನೆಲೆನಿಂತಿತು. ಹೀಗೆ ಮೊಬೈಲ ಸಂದೇಶಗಳ ಮೂಲಕ ಕಾವ್ಯದ ಕುರಿತ ನಿನ್ನ ಅಭಿಮಾನದ ಚರ್ಚೆ ಮುಂದುವರಿಯಿತು. ಹಾಗೆಯೇ ನೀ ನನ್ನಲ್ಲಿ ಸದ್ದಿಲ್ಲದೆ ಮನದಲಿ ಮನೆ ಮಾಡಿದೆ.

ನಿನ್ನ ನಯವಾದ,ಹದವಾದ ಇಂಚರದಂತ ಮಾತು ಕೇಳತಾ ಮೈಮರಿತಿದ್ದೆ.ನೀನು ನಿನ್ನ ಬಗ್ಗೆ ಹೇಳತಾ ಸಾಗಿದೆ ನಾನು ಆಪ್ತವಾಗಿ ಕೇಳತಾ ಹೋದೆ.ಅಪರಿಚಿತರಾದ ನಾವು ಪರಸ್ಪರ ನೋಡದೆ ಗೆಳೆತನ ಮಾಡಿದ್ದು ಕೂಡಾ ವಿಶಿಷ್ಟವೇ. ” ನಾನು ನನ್ನ ನೆರೆಮನೆಯ ಹುಡುಗಿಯನ್ನು ಹೈಸ್ಕೂಲಿನಿಂದಲೇ ಪ್ರೀತಿಸುತಿದ್ದೆ ಇಬ್ಬರೂ ಕ್ಲಾಸಮೇಟ್ಸ.ಆದರೆ ಬೆಳೆದು ದೊಡ್ಡವರಾದಾಗ ಜಾತಿಗೋಡೆ ಅಡ್ಡಬಂದು ಹಿರಿಯರು ನಮ್ಮಮದುವೆಗೆ ಅಡ್ಡಗೋಡೆ ಕಟ್ಟಿದರು. ಪ್ರೀತಿಯ ಸೌಧ ಕುಸಿದು ಬಿತ್ತು.ಕನಸುಗಳು ನುಚ್ಚುನೂರಾದವು.ಅವಳ ನೆನಪಲ್ಲೆ ಬಸವಳಿದ ಬಾಳನ್ನು ನೂಕುತಿದ್ದೆ. ಎಲ್ಲದರಲ್ಲಿ ಆಸಕ್ತಿ ಕಳೆದುಕೊಂಡ ನಾನು ನಿಮ್ಮ ಕವನದಿಂದ ಪ್ರಭಾವಿತನಾದೆ.ಎಂದು ಹೇಳಿದ ಕರಾವಳಿ ಹುಡುಗನ ಮಾತುಗಳಿಗೆ ಪ್ರತಿಯಾಗಿ ಏನು ಹೇಳಹೇಕೋ ಅರ್ಥವಾಗದೆ ಮೌನವಾದೆ.ಬಾಲ್ಯದ ಕನಸಿನ ಗೋಪುರ ಕಳಚಿ ಬಿದ್ದದ್ದನ್ನು ನೆನಸಿ ಅತ್ತದ್ದನ್ನು ಕಂಡು ನನಗೆ ನೋವಿನೊಂದಿಗೆ ಆಶ್ಚರ್ಯವೂ ಆಯಿತು.ಅಳುವುದೇನಿದ್ದರೂ ಹೆಂಗಸರಿಗೆ ಸರಿ ಅಂದುಕೊಂಡಿದ್ದ ನನಗೆ ಈ ಹುಡುಗರೂ ಈ ಪರಿಯಾಗಿ ಅಳ್ತಾರೆ ಅನ್ನೋದು ತಿಳಿದದ್ದು ನಿನ್ನಿಂದ ಗೆಳೆಯನೆ. ಲವ್ ಅನ್ನೋ ಭಾವನಾತ್ಮಕ ಬೆಸುಗೆ ಯಾರನ್ನ ಯಾವಾಗ ಹೇಗೆ ಕುಣಿಸುತ್ತೊ ಬಲ್ಲವರಾರು . ಮತ್ತೆ ಬೇರೆ ಹುಡುಗಿ ಮದುವೆಯಾಗಬೇಕಿತ್ತು ಅಂತ ಕೇಳಿದ್ದಕ್ಕೆ ಬೇರೆ ಮದುವೆಗೆ ಮನಸ್ಸಿಲ್ಲಾ ಹಾಗೆಯೇ ವಯಸ್ಸು ಜಾರ್ತಿದೆ ಅಂತ ಹೇಳಿದ. ನನ್ನ ವಯಸ್ಸಾದ ತಂದೆತಾಯಿಗಳನ್ನು ಮಗನಾಗಿ,ಸೊಸೆಯಾಗಿ ಪ್ರೀತಿಯಿಂದ ಸೇವೆ ಮಾಡ್ತಿನಿ ಅಂದೆ. ವೃದ್ಧ ತಂದೆತಾಯಿಗಳನ್ನ ವೃದ್ಧಾಶ್ರಮಕ್ಕೆ ತಳ್ಳಿ ಕೈತೊಳಕೊಳ್ಳೊ ಇಂದಿನ ಕಾಲದಲ್ಲಿ ಅವರಿಗಾಗಿ ಬದುಕುತ್ತೆನೆ. ಅವರ ಮುಸ್ಸಂಜೆಯಲ್ಲಿ ಊರುಗೋಲಾಗುತ್ತೇನೆ ಎಂದದ್ದು ನನಗೆ ನಿಜಕ್ಕೂ ತುಂಬಾ ಸೋಜಿಗವಾಯಿತು ಅಲ್ಲದೆ ತಾಯಿಗೆ ಆಗಾಗ ತುಂಬಾ ಹುಷಾರಿರಲ್ಲ ಕಾಯಿಲೆಗಳು ಕಾಡ್ತಿವೆ ಅಂತ ಆ ಹುಡುಗಪೇಚಾಡುವದನ್ನು ಕಂಡಾಗ ಪ್ರತಿ ತಾಯಿಗೆ ಇಂಥ ಮಗನಿರಬಾರದೆ ಅಂತ ಅನಿಸಿತು. ಬೇಗ ಮದುವೆ ಮಾಡದಿರೆ ತಂದೆ ತಾಯಿಗಳನ್ನ ದೂಷಿಸುವ ಮಕ್ಕಳಿದ್ದಾರೆ. ತಂದೆ ತಾಯಿಗಳನ್ನು ನಿರ್ಲಕ್ಷಿಸುವ ಹೊಡೆಯುವ ಕೊಲ್ಲುವ ಎಷ್ಟೋ ಕೆಟ್ಟ ಮಕ್ಕಳಿರುವಾಗ ಮುತ್ತಿನಂತ ಇಂಥ ಒಬ್ಬ ಮಗನಿದ್ದರೆ ಹೆತ್ತವರು ಪುಣ್ಯ ಶಾಲಿಗಳು. ಬಾಲ್ಯದಿಂದಲೇ ಇಂತಹ ಉತ್ತಮ ಸಂಸ್ಕಾರ ಮಕ್ಕಳಲ್ಲಿ ಬೆರೆತರೆ ಭವಿಷ್ಯದಲ್ಲಿ ಅವರ ಜೀವನ ಉತ್ತಮವಾಗಿರುತ್ತದೆ ಜೊತೆಗೆ ಕುಟುಂಬವು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಆದರೆ ಇಂದಿನ ಮೊಬೈಲ್ ಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ಕಾಣುವುದುವಿರಳ. ಕಡಲ ಕಿನಾರೆಯ ಮರಳಮೇಲೆ ನಡೆಯುತ್ತ ಅಲೆಗಳಲ್ಲಿ ನನ್ನ ಇರುವನ್ನು ಮರೆತು ಜೀವನವನ್ನು ಮೊಗೆದು ಸವಿಯುತ್ತೆನೆ ಅಲ್ಲಿ ನಿಮ್ಮ ನೆನಪಿನ ರಂಗೋಲಿಹಾಕಿ ವಿರಮಿಸುತ್ತೆನೆ ಎನ್ನುವ ನಿನಗೆ ನಾ ಯಾವ ರೀತಿಯಲ್ಲೂ ಆಸರೆಯಾಗಲು ಸಾಧ್ಯವಿಲ್ಲ ಅಂತ ನಿನಗೂ ಗೊತ್ತು ಕಣೋed. ಸಾಹಿತ್ಯದ ಮುಖಾಂತರ ಪರಿಚಯವಾದ ನಾವು ಸೇರದ ತೀರಗಳು ಅಂತ ಹೇಳಿದಾಗ ” ಸೇರದ ತೀರಗಳ ಮೇಲೆ ಸೇತುವೆ ಕಟ್ಟುವ ವ್ಯರ್ಥ ಪ್ರಯತ್ನ ನನಗಿಲ್ಲ ಪುಟ್ಟಾ”.ನೀವು ಏನಿದ್ದರೂ ನನ್ನ ಪಾಲಿಗೆ ಬೆಳದಿಂಗಳಬಾಲೆಯಾಗಿದ್ದರೆ ಸಾಕು. ಇರೊತನ ನಿಮ್ಮ ನೆನಪಲ್ಲಿ ಬಾಳ್ತಿನಿ.ಯಾವತ್ತಿಗೂ ನಿಮಗೆ ತೊಂದರೆ ಕೊಡೊಲ್ಲ ನನ್ನ ಬರಡು ಜೀವನಕ್ಕೆ ಅಮೃತಧಾರೆಯಾದವರು ನೀವು,ಬದುಕನ್ನು ಮತ್ತೆ ಪ್ರೀತಿಸಲು ಕಲಿಸಿದವರು ನೀವು.ನಿಮ್ಮನ್ನು ನೋಡಬೇಕೆನ್ನುವ ಆಸೆ ಅಮಿತವಾಗಿದ್ದರೂ ” ಬೆಳದಿಂಗಳ ಬಾಲೆ” ಯಾಗಿಯೇ ಸದಾ ನನ್ನ ಹೃದಯದಲ್ಲಿ ನೆಲೆಸಿರ್ತಿರಾ ನಿಮ್ಮ ನಗು ಮಾತ್ರ ಈ ಮನದ ತುಂಬಾ ಹರಡಿಕೊಂಡಿರಲಿ ಎಂದು ಉಲಿದ ಕರಾವಳಿ ಹುಡುಗ ಶಿಷ್ಟತೆಯ ಎಲ್ಲೆಮೀರದ ಗೆಳೆಯ ಮತ್ತೆ ಫೋನಾಯಿಸಲೇ ಇಲ್ಲ.ಪ್ರಯತ್ನ ಪಟ್ಟರೂ ಅವನ ಸುಳಿವು ಸಿಗಲಿಲ್ಲ. ಈ ಮೂಲಕವಾದರೂ ಅವನು ನನಗೆ ಮತ್ತೊಮ್ಮೆ ಸಿಗುವಂತಾಗಲಿ ಎಂಬುದೆ ಈ ಹೃದಯದ ಆಸೆ.
ಜಯಶ್ರೀ ಭಂಡಾರಿ.

ಒಲವು ಒಮ್ಮಿದ ಲೇಖನ ಬದುಕಿಗೆ
ಭರವಸೆ ನೀಡಿದ ಬರಹ ಸುಂದರ
ಅತ್ಯದ್ಭುತವಾದ ನಿಮ್ಮ ಯೋಚನಾ ಲಹರಿಗೆ ಬೆರಗಾದೆ. ಮೇಡಂ
ತುಂಬಾನೆ ಸುಂದರವಾದ ರಚನೆ.
ನಿಜ ಕಲ್ಪನಾ ಲಹರಿ !
ತುಂಬಾ ಒಳ್ಳೆಯ ಬರವಣಿಗೆ ಮೇಡಂ, ಅರ್ಥಗರ್ಭಿತ ಮಾತುಗಳು, ಯುವ ಸಮೂಹದ ಇಂದಿನ ಮನಸ್ಥಿತಿ, ಗೆಳೆತನದ ಮಹತ್ವ ತಿಳಿಸಿರುವ ನಿಮ್ಮ ಬರವಣಿಗೆ ನಿಜಕ್ಕೂ ಅದ್ಭುತ.
ಒಳ್ಳೆಯ ಬರವಣಿಗೆ ಮೇಡಂ
ನಿಮ್ಮ ಬರವಣಿಗೆ ಹೀಗೆ ಮುಂದುವರೆಯಲಿ