ಕಾಡಜ್ಜಿ ಮಂಜುನಾಥ್‌ ಅವರಕವಿತೆ-ಜ್ಞಾನ…….!!

ಜ್ಞಾನವು
ಜ್ಞಾನ ಇಲ್ಲದವರ
ತುಳಿಯುವ
ಕಾಲುಗಳಾಗಬಾರದು
ತಿದ್ದಿ ತೀಡಿ
ಮಾರ್ಗದರ್ಶನ
ಮಾಡಿ
ಮೂರ್ತಿಯಾಗಿಸುವ
ಕರವಾಗಬೇಕು;

ಜ್ಞಾನವು
ಅಹಂಮಿಕೆಯನ್ನು
ತೋರುವ
ಅಗ್ನಿಯ
ಜ್ವಾಲೆಯಾಗಬಾರದು
ಮೌನದಿ
ಅಜ್ಞಾನದ ಕತ್ತಲನ್ನು
ತೊಲಗಿಸುವ
ದೀಪವಾಗಬೇಕು;

ಜ್ಞಾನವು
ಜಾತಿ ಧರ್ಮಗಳ
ಸೊಂಕಿನಲಿ
ಸುಶಿಕ್ಷಿತರನು
ಬೇರ್ಪಡಿಸುವ
ಕತ್ತಿಯಾಗಬಾರದು
ಸರ್ವರನ್ನು
ಸಮಾನತೆಯಿಂದ
ನೋಡುವ
ಚಂದ್ರನ
ಬೆಳಕಾಗಬೇಕು;

ಜ್ಞಾನವು
ಶಕ್ತಿಹೀನರ
ಮುಂದೆ
ದರ್ಪದಿ ಮೆರೆಯುತ
ಯುಕ್ತಿಯ ಬಾಣವ
ಹೂಡುವ
ಬಿಲ್ಲಾಗಬಾರದು;
ಅಶಕ್ತರಿಗೆ
ಶಕ್ತಿಯ ನೀಡಿ
ಭವಿಷ್ಯದ ಬದುಕಿಗೆ
ಊರುಗೋಲಾಗಬೇಕು

ಜ್ಞಾನವು
ಹುದ್ದೆ, ಅಧಿಕಾರವೆಂಬ
ಮೋಹದ
ಮದವೇರಿದ
ಸಲಗವಾಗಬಾರದು
ಸ್ನೇಹ ಪ್ರೀತಿಯಲಿ
ಮನಸುಗಳ
ಬೆಸೆಯುವ
ಹೃದಯವಾಗಬೇಕು


Leave a Reply

Back To Top