
ಧಾರಾವಾಹಿ 80
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್

ಸುತಿ ಹಾಗೂ ಮಗಳು ಇಬ್ಬರೂ ರುಚಿಕರವಾದ ಬೆಳಗಿನ ಉಪಹಾರವನ್ನು ಸೇವಿಸಿದರು. ಸಾಹುಕಾರರ ಮನೆಯಲ್ಲಿ ತಮಗೆ ಕೊಡುತ್ತಿರುವ ಗೌರವ ಹಾಗೂ ಆದರಾತಿಥ್ಯವನ್ನು ನೋಡಿ ಅವಳ ಮನಸ್ಸು ತುಂಬಿತು. ಖುಷಿಯಿಂದ ಚಿತ್ರವನ್ನು ಬಿಡಿಸಲು ಪ್ರಾರಂಭ ಮಾಡಿದಳು. ತನಗೆ ಬೇಕಾದ ಎಲ್ಲಾ ಸೌಕರ್ಯವೂ ಅಲ್ಲಿ ಮೊದಲೇ ಇದ್ದುದರಿಂದ ಬೇರೆ ಯಾವ ವಸ್ತುಗಳ ಅಗತ್ಯವೂ ಸುಮತಿಗೆ ಇರಲಿಲ್ಲ. ಅಮ್ಮ ಚಿತ್ರ ಬಿಡಿಸುವುದನ್ನು ನೋಡುತ್ತಾ ಮಗಳು ಪಕ್ಕದಲ್ಲಿಯೇ ಕುಳಿತಿದ್ದಳು. ಮಧ್ಯಾಹ್ನದ ಊಟಕ್ಕೂ ಮುಂಚೆ ಬಂಗಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಅಡುಗೆ ಭಟ್ಟರು ಬಂದು
ಒಂದು ದೊಡ್ಡ ಲೋಟದಲ್ಲಿ ತಂಪಾದ ಮಜ್ಜಿಗೆಯನ್ನು ತಂದು ಕೊಟ್ಟರು. ಮಜ್ಜಿಗೆಯೆಂದರೆ ಸುಮತಿಗೆ ಬಹಳ ಪ್ರಿಯ. ಡಯಾಬಿಟಿಸ್ ಇರುವ ಕಾರಣ ವೈದ್ಯರು ಮಜ್ಜಿಗೆಯನ್ನು ಕುಡಿಯಲು ಹೇಳಿದ್ದರು. ತನಗೆ ಸಿಗುವ ಸಂಬಳದಲ್ಲಿ ತಿಂಗಳಿಗೆ ಬೇಕಾದ ದಿನಸಿಯನ್ನು ಖರೀದಿ ಮಾಡಿ, ಉಳಿದ ಅಲ್ಪ ಸ್ವಲ್ಪ ಹಣದಲ್ಲಿ ದಿನವೂ 1/4 ಲೀಟರ್ ಹಾಲನ್ನು ಖರೀದಿಸುತ್ತಿದ್ದಳು. ಕಾಫಿಗೆ ಹಾಕಿ ಕುಡಿದರೆ ಸಾಲದಾಗುವುದು ಎಂದು ಹಾಲನ್ನು ಬೆರೆಸದ ಬರೀ ಕಾಫಿಯನ್ನು ಬೆಳಗ್ಗೆ ಕುಡಿದು ಸ್ವಲ್ಪ ಹಾಲನ್ನು ನೀರು ಹಾಕಿ ಕಾಯಿಸಿ ಮಗಳಿಗೆ ಕುಡಿಯಲು ಕೊಟ್ಟು, ಉಳಿದಿದ್ದ ಸ್ವಲ್ಪ ಹಾಲಿಗೆ ಹೆಪ್ಪು ಹಾಕಿ ಮಜ್ಜಿಗೆ ಮಾಡಿಕೊಂಡು ಮಧ್ಯಾಹ್ನದ ವೇಳೆಯಲ್ಲಿ ಕುಡಿಯಲೆಂದು ಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದಳು. ಇಲ್ಲಿ ಎಸ್ಟೇಟ್ ಬಂಗಲೆಯಲ್ಲಿ ದೊಡ್ಡ ಲೋಟದಲ್ಲಿ ರುಚಿಕರವಾದ ಮಜ್ಜಿಗೆಯನ್ನು ಕುಡಿದಾಗ ಹೊಟ್ಟೆ ತಣ್ಣಗಾದಂತೆ ಅನಿಸಿತು. ಮನೆಗೆ ಹಿಂತಿರುಗುವಾಗ ಸ್ವಲ್ಪ ಮಜ್ಜಿಗೆಯನ್ನು ಕೊಡುವಿರಾ ಎಂದು ಕೇಳಿದಾಗ ಭಟ್ಟರು…”ಆಗಲಿ ಟೀಚರಮ್ಮ ಹೋಗುವಾಗ ಬಂದು ತೆಗೆದುಕೊಂಡು ಹೋಗಿ”….ಎಂದರು.
ಸುಮತಿ ಚಿತ್ರ ಬಿಡಿಸುವ ಕೆಲಸದಲ್ಲಿ ನಿರತಳಾದಳು. ಅಮ್ಮ ಚಿತ್ರ ಬಿಡಿಸುವುದನ್ನು ಕುತೂಹಲದಿಂದ ಕಣ್ಣರಳಿಸಿ ನೋಡುತ್ತಾ ಮಗಳು ತನ್ನ ಮನದಲ್ಲಿ ಮೂಡಿ ಬರುತ್ತಿದ್ದ ಪ್ರಶ್ನೆಗಳನ್ನು ಕೇಳುತ್ತಿದ್ದಳು. ಮಗಳ ತಲೆಯನ್ನು ನೇವರಿಸಿ, ಮಗಳಿಗೆ ಅರ್ಥ ಆಗುವ ಹಾಗೆ ಸಮರ್ಪಕ ಉತ್ತರವನ್ನು ಸುಮತಿ ನೀಡುತ್ತಿದ್ದಳು. ಮಧ್ಯಾಹ್ನದ ಊಟದ ನಂತರ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಪುನಃ ತನ್ನ ಕೆಲಸವನ್ನು ಪ್ರಾರಂಭಿಸಿದಳು. ನಡುವೆ ಅಲ್ಲಿನ ಕೆಲಸದಾಳುಗಳು ಬಂದು ಟೀಚರ್ ಬಿಡಿಸುತ್ತಿದ್ದ ಚಿತ್ರವನ್ನು ಕುತೂಹಲದಿಂದ ಇಣುಕಿ ನೋಡುತ್ತಾ…”ಎಷ್ಟು ಚೆಂದ ಬಿಡಿಸುತ್ತಾರೆ ಅಲ್ಲವೇ?… ಎಂದು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುವುದು ಸುಮತಿಗೆ ಕೇಳಿಸಿತು. ಸುಮತಿಯ ಮುಖದಲ್ಲಿ ಸಣ್ಣ ಮುಗುಳ್ನಗೆ ಮೂಡಿತು. ಸಂಜೆಯಾಯ್ತು ಇನ್ನು ಮನೆಗೆ ಹೊರಡುವ ಸಮಯ ಹತ್ತಿರವಾಗುತ್ತಾ ಬಂತು. ಸುಮತಿಗೆ ಡಯಾಬಿಟಿಸ್ ಇದೆಯೆಂದು ಅರಿತಿದ್ದ ಚಿಕ್ಕ ಯಜಮಾನರು(ಡಾಕ್ಟರ್)…. ಸುಮತಿ ನೀವು ಸ್ವಲ್ಪ ಹೊತ್ತು ಇಲ್ಲಿ ನಮ್ಮ ಮನೆಯ ಅಂಗಳದಲ್ಲಿ ಅಡ್ಡಾಡಿಕೊಂಡು ಬನ್ನಿ…ನಿಮ್ಮ ಆಯಾಸವೂ ಸ್ವಲ್ಪ ಪರಿಹಾರವಾಗುತ್ತದೆ. ಮನಸ್ಸೂ ಉಲ್ಲಸಿತವಾಗುತ್ತದೆ… ಚಿತ್ರದ ಇನ್ನುಳಿದ ಭಾಗಗಳನ್ನು ನಾಳೆ ಬಿಡಿಸಬಹುದು”…. ಎಂದರು. ಡಾಕ್ಟರ್ ಹೇಳಿದ ಮಾತುಗಳನ್ನು ಕೇಳಿ ತಲೆಬಾಗಿ ಅವರಿಗೆ ನಮಸ್ಕರಿಸಿ ತಾನು ಬಿಡಿಸಿದ್ದ ಚಿತ್ರವನ್ನು ಮತ್ತೊಂದು ಡ್ರಾಯಿಂಗ್ ಶೀಟ್ ನಿಂದ ಮುಚ್ಚಿಟ್ಟು, ಪೆನ್ಸಿಲ್,ರಬ್ಬರ್,ಬಣ್ಣ ಹಾಗೂ ಕುಂಚ, ಸ್ಕೇಲ್ ಎಲ್ಲವನ್ನೂ ಒಂದೆಡೆ ಒಪ್ಪವಾಗಿ ಜೋಡಿಸಿ ಮಗಳನ್ನು ಜೊತೆಗೆ ಕರೆದುಕೊಂಡು ಅಂಗಳದ ಕಡೆಗೆ ನಡೆದಳು. ಸಂಜೆಯಾಗುತ್ತಾ ಬಂದಿದ್ದರಿಂದ ಕೆಲಸದ ಆಳುಗಳು ಅವರವರ ಮನೆಗಳ ಕಡೆಗೆ ತೆರಳುತ್ತಿದ್ದರು.
ಸುಮತಿಯನ್ನು ಕಂಡ ಕೆಲಸಗಾರರು ಇವರು ಯಾರೆಂದು ಒಬ್ಬರಿಗೊಬ್ಬರು ಕೇಳಿಕೊಳ್ಳುತ್ತಿದ್ದರು. ಆಗ ಈ ಎಸ್ಟೇಟ್ ಗೆ ಸೇರಿದಂತೆ ಇನ್ನೊಂದು ಚಿಕ್ಕ ಎಸ್ಟೇಟ್ ಇದೆಯಲ್ಲವೇ ಅಲ್ಲಿ ಇವರು ಕೂಲಿ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸುವ ಟೀಚರ್ ಎಂದಾಗ ಎಲ್ಲರೂ ವಿನಮ್ರವಾಗಿ ಟೀಚರ್ ಗೆ ವಂದಿಸಿದರು. ಸುಮತಿಯೂ ಮುಗುಳ್ನಗೆಯೊಂದಿಗೆ ಅವರಿಗೆಲ್ಲಾ ವಂದನೆ ಸಲ್ಲಿಸಿದಳು. ಬಂಗಲೆಯ ಅಂಗಳದಲ್ಲಿ ಹೂವಿನ ಗಿಡಗಳಲ್ಲಿ ಹೂವುಗಳು ಸುವಾಸನೆ ಬೀರುತ್ತಿದ್ದವು. ಮಲ್ಲಿಗೆಯ ಚಪ್ಪರದಲ್ಲಿ ಆಗತಾನೇ ಅರಳುತ್ತಿದ್ದ ಗುಂಡುಮಲ್ಲಿಗೆ ಹಾಗೂ ಸೂಜಿಮಲ್ಲಿಗೆ ಘಮ ಘಮ ಪರಿಮಳವನ್ನು ಸೂಸುತ್ತಿದ್ದವು. ಹೂವಿನ ಸುವಾಸನೆಗೆ ದುಂಬಿಗಳ ಹಿಂಡು ಝೇಂಕರಿಸುತ್ತಾ ಹಾರಾಡುತ್ತಿದ್ದವು. ಸುಂದರವಾದ ಬಣ್ಣ ಬಣ್ಣದ ಗುಲಾಬಿ ಹೂವುಗಳು ನೋಡಲು ತುಂಬಾ ಸುಂದರವಾಗಿದ್ದವು. ಹಣ್ಣುಗಳ ತೋಟದ ಬಳಿಯ ಬೇಲಿಯ ಬದಿಯಲ್ಲಿ ಇದ್ದ ರಾತ್ರಿರಾಣಿ ಗಿಡದಲ್ಲಿ ಮೊಗ್ಗುಗಳು ಬಿರಿಯಲು ಆಗತಾನೇ ಪ್ರಾರಂಭಿಸಿದವು. ಮಗಳು ಅತ್ತ ಕಡೆಗೆ ಓಡಿ ಹೋದಾಗ…”ಬೇಡ ಮಗು…ಗಿಡಗಳ ಬುಡದಲ್ಲಿ ಹಾವುಗಳು ಇರುತ್ತವೆ ಎಚ್ಚರ…ಇಲ್ಲಿ ಬಾ”….ಎಂದು ಹೇಳುತ್ತಾ ಮಗಳ ಕೈ ಹಿಡಿದು ತಡೆದಳು. ಗೂಡು ಸೇರಲೆಂದು ಹಿಂಡು ಹಿಂಡಾಗಿ ಹಾರುತ್ತಿದ್ದ ಗಿಳಿಗಳು ಸಮೀಪದಲ್ಲಿಯೇ ಹಾರಿ ಹೋದಾಗ ಮಗಳು ಕೈತಟ್ಟಿ ಕುಣಿದಳು. ಹಣ್ಣುಗಳ ಗಿಡಗಳಲ್ಲಿ ಪಕ್ಷಿಗಳು ಚಿಲಿಪಿಲಿ ಸದ್ದು ಮಾಡುತ್ತಾ ತಮ್ಮ ಗೂಡುಗಳಲ್ಲಿ ಹೋಗಿ ಕುಳಿತುಕೊಂಡವು. ಅಲ್ಲಿಯೇ ಒಂದು ಮರದಲ್ಲಿ ಗೀಜಗ ಗೂಡು ಕಟ್ಟಿತ್ತು. ತಾಯಿ ಹಕ್ಕಿ ಗೂಡಿನ ಬಳಿಗೆ ಬಂದೊಡನೆಯೇ ಮರಿಗಳು ತಾಯಿ ತಂದ ಆಹಾರಕ್ಕಾಗಿ ಕಿಚಕಿಚ ಸದ್ದು ಮಾಡುತ್ತಾ ಬಾಯಿತೆರೆದು ಕಾದು ಕುಳಿತವು ಹಕ್ಕಿಯು ಮೆಲ್ಲನೆ ಗೂಡಿನ ಒಳಗೆ ಹೋಯಿತು.
ಆ ಗೂಡನ್ನು ನೋಡುತ್ತಾ ಚಕಿತಳಾಗಿ ಒಂದು ಕ್ಷಣ ಅಲ್ಲಿಯೇ ನಿಂತಳು. ಹಕ್ಕಿಯು ಗೂಡು ಕಟ್ಟಿದ ಪರಿಯನ್ನು ಗಮನಿಸುತ್ತಾ ಸೃಷ್ಟಿಯಲ್ಲಿ ಏನೇನು ಅದ್ಭುತಗಳು ಅಡಗಿವೆ. ಇವುಗಳಿಗೆ ಇಷ್ಟು ಚೆಂದದ ಗೂಡನ್ನು ಕಟ್ಟಲು ಕಲಿಸಿದವರು ಯಾರು? ಎಂದುಕೊಳ್ಳುತ್ತಾ ಅಲ್ಲಿಂದ ಮುಂದೆ ನಡೆದಳು. ಸ್ವಲ್ಪ ದೂರದಲ್ಲಿಯೇ ಕಾಫಿ ಹಣ್ಣನ್ನು ಪಲ್ಪರ್ ಮಾಡಿ ಒಣಗಿಸುವ ಸ್ಥಳವಿತ್ತು. ಬಂಗಲೆಯ ಅಂಗಳದಿಂದ ಕಣಕ್ಕೆ ಇಳಿತಲೆಂದು ಮೆಟ್ಟಿಲುಗಳನ್ನು ಮಾಡಿದ್ದರು. ಮೆಟ್ಟಿಲುಗಳ ಪಕ್ಕದಲ್ಲಿ ಗಿಡದ ತುಂಬಾ ಸೂಜಿಯಂತಹ ದಳಗಳು ಇರುವ ದಂಡೆಯಂತಹ ಹೂವನ್ನು ಕಂಡಳು. ಮೆಲ್ಲಗೆ ಅದನ್ನು ಸ್ಪರ್ಶಿಸಿದಳು. ಹೂವಿನ ಪರಾಗ ಕೈಗೆ ಅಂಟಿತು. ಅದನ್ನು ಕೊಡವುತ್ತಾ ಮೆಟ್ಟಿಲು ಇಳಿದು ಕಣವನ್ನು ತಲುಪಿದಳು. ಅಲ್ಲಿ ಸ್ವಲ್ಪ ಹೊತ್ತು ಅಡ್ಡಾಡಿದಳು. ನಂತರ ಕಣದ ಕಡೆಯಿಂದಲೇ ಬಂಗಲೆಯ ಕಡೆಗೆ ಹೋಗುವ ಮತ್ತೊಂದು ದಾರಿಯ ಕಡೆಗೆ ನಡೆದಳು. ಅಲ್ಲಿ ಟ್ರ್ಯಾಕ್ಟರ್, ಜೀಪ್ ಮತ್ತು ಕಾರು, ಲಾರಿಯನ್ನು ನಿಲ್ಲಿಸುವ ಶೆಡ್ ಇತ್ತು. ಅಲ್ಲಿ ಡ್ರೈವರ್ ಗಳು ನಿಂತು ಏನೋ ಮಾತನಾಡಿಕೊಳ್ಳುತ್ತಿದ್ದರು.
ಸುಮತಿಯನ್ನು ಕಂಡೊಡನೆ ಗೌರವ ಪೂರ್ವಕವಾಗಿ ಕೈಮುಗಿದು…”ನಮಸ್ಕಾರ ಟೀಚರಮ್ಮಾ “….ಎಂದರು. ಅವರುಗಳಿಗೂ ಮರುವಂದಿಸಿ ಬಂಗಲೆಯ ಕಡೆಗೆ ನಡೆದಳು. ಅಲ್ಲಿ ಹೋದಾಗ ಭಟ್ಟರು ಹಬೆಯಾಡುವ ಬಿಸಿ ಬಿಸಿ ಕಾಫಿ ತಂದು ಸುಮತಿಗೆ ಕೊಟ್ಟರು….”ಆಗಲೇ ಬಂದಿದ್ದೆ ಟೀಚರಮ್ಮಾ….ನೀವು ಕಾಣಲಿಲ್ಲ”… ಎಂದಾಗೆ…”ಇಲ್ಲಿಯೇ ಸ್ವಲ್ಪ ನಡೆದಾಡಲು ಹೋಗಿದ್ದೆ”…. ಎಂದಳು ಸುಮತಿ. ಫಿಲ್ಟರ್ ಕಾಫಿಯ ಪರಿಮಳ ಆಹ್ಲಾದವನ್ನು ಉಂಟು ಮಾಡಿತು. ಮಗಳಿಗೆ ಕೆನೆಭರಿತ ನೊರೆ ಹಾಲನ್ನು ಕುಡಿಯಲು ಕೊಟ್ಟರು. ಪರಿಮಳವನ್ನು ಆಘ್ರಾಣಿಸುತ್ತಾ ಕಾಫಿಯನ್ನು ಕುಡಿದಳು ಸುಮತಿ.

ಚೆಂದದ ಪ್ರಕಟಣೆ. ಹೃತ್ಪೂರ್ವಕ ಧನ್ಯವಾದಗಳು ಸರ್