ಮಹೋನ್ನತ ವ್ಯಕ್ತಿತ್ವದ ಬಸವಣ್ಣ. ಜಯಲಕ್ಷ್ಮಿ ಕೆ

 ಸುಮಾರು 800 ವರ್ಷಗಳ ಹಿಂದೆಯೇ ಸರ್ವ ಶೋಷಣೆಗಳಿಂದ ಮುಕ್ತವಾದ, ಸ್ವಾತಂತ್ರ್ಯ, ಸಮಾನತೆ, ಸೌಹಾರ್ದಗಳ ಅಡಿಗಲ್ಲಿನ ಮೇಲೆ ನಮ್ಮ ಸಮಾಜ ನಿರ್ಮಾಣವಾಗಬೇಕು ಎಂಬ ಕನಸನ್ನು ಕಂಡ, ಆ ಕನಸಿನ ಸಾಕಾರಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿ ಭಕ್ತಿ ಭಂಡಾರಿ ಬಸವಣ್ಣ. ಅವರ ಕನಸಿನ ಸಮಾಜ ” ಮಾನವ ಧರ್ಮ ” ದ ತಳಹದಿಯಲ್ಲಿ ರೂಪುಗೊಂಡದ್ದು. ಅಜ್ಞಾನ, ಮೌಢ್ಯ, ಶೋಷಣೆಗಳಿಂದ ಬಳಲುತ್ತ ಉದ್ದಾರ ಪಥ ಕಾಣದೆ ಕತ್ತಲಲ್ಲಿ ತೊಳಲುತ್ತಿದ್ದ ಜನ ಸಾಮಾನ್ಯರಿಗೆ ದಾರಿ ದೀಪವಾದವರು ಬಸವಣ್ಣ. ಪ್ರಾಣಿ ಬಲಿ ಧರ್ಮಾಚರಣೆಯ ಅವಿಭಾಜ್ಯ ಅಂಗ ಎಂದೇ ಭಾವಿಸಿದ್ದ ಜನರನ್ನು ಉದ್ದೇಶಿಸಿ ಅಹಿಂಸೆ -ದಯೆಗಳ ಪ್ರಾಮುಖ್ಯತೆಯನ್ನು ತಿಳಿಸಿ ಕೊಡುತ್ತಾ “ದಯವಿಲ್ಲದ ಧರ್ಮವದೇವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲಿ! ದಯವೇ ಧರ್ಮದ ಮೂಲವಯ್ಯಾ… “ಎಂದು ಸಾರಿ ಹೇಳಿದ ಬಸವಣ್ಣ ಜಾತಿ -ಕುಲಗಳ ಬಗ್ಗೆ ಕ್ರಾಂತಿಕಾರಿ ಉಕ್ತಿಗಳನ್ನು ಸಾರಿದವರು.” ಕುಲವೇನೋ.. ಆವಂದಿರ ಕುಲವೇನೋ..! ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲ ಸಂಗನ ಶರಣರೆಲ್ಲ ಕುಲಜರು ಎನ್ನುತ್ತಾ ಸಮಾಜದಲ್ಲಿ ಕುಲದ ಹೆಸರಿನಲ್ಲಿ ಶೋಷಣೆಗೆ ಒಳಗಾದವರಿಗೆ ಹೊಸ ಬೆಳಕು ತೋರಿದ ಬಸವಣ್ಣ ಆಚಾರ -ವಿಚಾರಗಳಿಂದ ವ್ಯಕಿಯ ಯೋಗ್ಯತೆ ನಿರ್ಧರಿತವಾಗುವುದೇ ಹೊರತು ಕುಲದಿಂದಲ್ಲ ಎನ್ನುವುದನ್ನು ಸಾಧಿಸಿ ತೋರಿದರು. ನಮ್ಮ ಭವಿಷ್ಯದ ಶಿಲ್ಪಿಗಳು ನಾವೇ ಎನ್ನುವಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳುವ ಶಕ್ತಿ ನಮ್ಮೊಳಗೇ ಇದೆ, ಬಾಳ ಹಾದಿಯಲ್ಲಿ ಯಾವುದೇ ಎಡರು ತೊಡರುಗಳು ಎದುರಾದರೂ ಎದುರಿಸಲು ನಾವು ಶಕ್ತರು ಎಂದು ಹೇಳುತ್ತಾ, ” ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೀಗಲೇ ಬರಲಿ ” ಎಂಬ ವಚನದಿಂದ ಜನಮನದಲ್ಲಿ ಧೈರ್ಯ ಸ್ಥೈರ್ಯ ತುಂಬಿದರು. ಬಸವಣ್ಣನ ಇಂತಹ ವಚನಗಳಿಂದ ಪ್ರೇರಿತರಾಗಿ ಕಲ್ಯಾಣಕ್ಕೆ ಸಾಗಿ ಬಂದ ದಿಟ್ಟ ಹೆಜ್ಜೆಗಳು ಏನಿತೋ…

ಆಧ್ಯಾತ್ಮಿಕವಾಗಿ, ಸಾಹಿತ್ಯಕವಾಗಿ ಮತ್ತು ಸಾಮಾಜಿಕವಾಗಿ ಸ್ತ್ರೀ ಪುರುಷನಿಗೆ ಹೆಗಲೆಣೆ ಎನ್ನುವುದನ್ನು ಸಾಕ್ಶೀಕರಿಸಿ ತೋರಿದ ಸಮಾನತೆಯ ಹರಿಕಾರ ಬಸವಣ್ಣ. ವಚನಕಾರ್ತಿ ಅಕ್ಕಮಹಾದೇವಿಯನ್ನಿಲ್ಲಿ ಸ್ಮರಿಸಬಹುದು. ” ಉಳ್ಳವರು ಶಿವಾಲಯವ ಮಾಡುವರು.. ನಾನೇನ ಮಾಡಲಿ? ಬಡವನಯ್ಯಾ.. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯಾ… “ಎನ್ನುವ ಅವರ ವಚನದಲ್ಲಿ ದೇಗುಲ ಕಲಶ ಗೋಪುರಗಳನ್ನು ನಿರ್ಮಿಸಿ ಆಡಂಬರ ಮೆರೆಯಲಾಗದ ಬಡವನ ಭಕ್ತಿಗೂ ಸಿರಿವಂತನ ಭಕ್ತಿಗೂ ವ್ಯತ್ಯಾಸವಿಲ್ಲ ಎಂಬ ಅರ್ಥ ಒಂದೆಡೆ ವ್ಯಕ್ತವಾದರೆ ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎನ್ನುವ ಸತ್ಯ ಸಂದೇಶ ಇನ್ನೊಂದೆಡೆ ವ್ಯಕ್ತವಾಗಿದೆ. ದೈಹಿಕ ಶ್ರಮದಿಂದ ಕಾಯಕ ತತ್ವವನ್ನು ಪಾಲಿಸುವ ವ್ಯಕ್ತಿ ಸಮಾಜದಲ್ಲಿ ಪರರಿಗೆ ಅಧೀನರಾಗಿ ಬದುಕಬೇಕಾದ ಅಗತ್ಯವಿಲ್ಲ. ಕಾಯಕವೇ ಕೈಲಾಸ ಎನ್ನುವ ಬಸವಣ್ಣ ಕೆಲಸದಲ್ಲಿ ಮೇಲು -ಕೀಳಿಲ್ಲ, ಸಮಾಜದ ದಾರಿದ್ರ್ಯ ನಿವಾರಣೆಗೆ ಕಾಯಕವೊಂದೇ ರಾಮಬಾಣ ಎಂದು ಸಾರಿದರು. ಆದ್ದರಿಂದಲೇ ಅಂಬಿಗ, ಅಗಸ, ಕಮ್ಮಾರ, ಚಮ್ಮಾರ, ದನಗಾಹಿ, ನೇಕಾರ ಎಲ್ಲ ವೃತ್ತಿಯ ಜನರು ಬಸವಣ್ಣನ ಗಾರುಡಿಯಲ್ಲಿ ಬೆಳೆದರು -ಬೆಳಗಿದರು. ಅವರ ಅನುಭವ ಮಂಟಪದಲ್ಲಿ ಎಲ್ಲರಿಗೂ ಸಮಾನ ವೇದಿಕೆ ದೊರೆಯಿತು. ಕಾಯಕ ಸಂಸ್ಕೃತಿಯ ಈ ಹರಿಕಾರ ಕುಲ, ಜಾತಿ -ಮತ ಧರ್ಮಗಳನ್ನು ಮೀರಿದ ಆದರ್ಶಗಳ ನೆಲೆಯಲ್ಲಿ ಸಮಾಜ ನಿರ್ಮಿಸಬೇಕೆಂದು ನುಡಿದ, ನುಡಿದಂತೆ ನಡೆದ ಮಹಾನ್ ವ್ಯಕ್ತಿ. ಎಲ್ಲ ಶರಣ-ಶರಣೆಯರ ಚಿಂತನ-ಮಂಥನಗಳಿಗೆ ಅನುವು ಮಾಡಿಕೊಟ್ಟ ಸ್ಥಳವೇ ಅನುಭವ ಮಂಟಪ. ಎಲ್ಲ ಭೇದಗಳನ್ನು ಮೀರಿ ನಿಂತ ಮೊದಲ ಪಾರ್ಲಿಮೆಂಟು!

ವರ್ಗರಹಿತ, ಜಾತಿ ರಹಿತ ಸಮಾಜದ ನಿರ್ಮಾಣಕ್ಕಾಗಿ ಅವಿರತವಾಗಿ ಹೋರಾಡಿದ ಬಸವಣ್ಣ ಅಂದು ತನ್ನ ನಡೆ ನುಡಿಗಳಿಂದಲೇ ಸುಮಾರು ಒಂದೂವರೆ ಲಕ್ಷ ಜನರನ್ನು ತನ್ನ ತತ್ವಗಳತ್ತ ಸೆಳೆದಿದ್ದರು! ಸಾಮಾಜಿಕ ಪಿಡುಗುಗಳಿಂದ ಆವರಿಸಿಕೊಂಡು ಜಡ್ಡುಗಟ್ಟಿದ್ದ ಸಮಾಜಕ್ಕೆ ವೈಚಾರಿಕತೆಯ ಸ್ಪರ್ಶ ನೀಡಿದ ಮಹಾ ಮಾನವತಾವಾದಿ ಭಕ್ತಿ ಭಂಡಾರಿ ಬಸವಣ್ಣ. ಸುಧಾರಣೆಯಾಗಬೇಕು ಎನ್ನುವ ಸಮಾಜಕ್ಕೆ ಇವರ ವಚನಗಳಿಗಿಂತ ಉತ್ತಮವಾದ ನೀತಿ ಸಂಹಿತೆ ಬೇರೆ ಇಲ್ಲ.” ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ… ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ.. ಇದೇ ನಮ್ಮ ಕೂಡಲ ಸಂಗನನೊಲಿಸುವ ಪರಿ ” ಪರಿಶುದ್ಧನಾಗಿ ಬದುಕಬೇಕು ಎನ್ನುವ ಪ್ರತಿಯೊಬ್ಬ ಮನುಜನಿಗೆ ಸರ್ವ ಕಾಲಕ್ಕೂ ಅನ್ವಯವಾಗುವ ವಚನವಿದು. ಆಧ್ಯಾತ್ಮಿಕ ವಲಯದಲ್ಲಿ ಭಕ್ತಿ ಭಂಡಾರಿಯಾಗಿದ್ದ ಬಸವಣ್ಣ ಬಿಜ್ಜಳನ ಆಸ್ಥಾನದ ಭಂಡಾರಿಯೂ ಆಗಿದ್ದು ಭ್ರಷ್ಟಾಚಾರದ ತೀವ್ರ ವಿರೋಧಿಯಾಗಿದ್ದರು. ಮಹಿಳೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟ ಈ ಉದಾತ್ತ ಚಿಂತಕ ಸ್ತ್ರೀ ಪುರುಷ ಸಮಾನತೆಯ ಹರಿಕಾರ.

ದೇವಲೋಕ ಮರ್ತ್ಯಲೋಕಗಳಿಗೆ ಸ್ಪಷ್ಟ ಅರ್ಥವನ್ನು ನೀಡಿದ ಬಸವಣ್ಣ ದೇವಲೋಕ ಎನ್ನುವಂಥದ್ದು ಎಲ್ಲೋ ಇರುವುದಲ್ಲ. ಸತ್ತ ಮೇಲೆ ಸಿಗುವಂಥ ನೆಲೆಯಲ್ಲ. ಇಹದಲ್ಲಿ ಹೇಗೆ ಹೇಗೋ ಬದುಕಿ ಪರದಲ್ಲಿ ಗಳಿಸುವಂಥದ್ದಲ್ಲ. ಇಹವನ್ನೇ ಪರವನ್ನಾಗಿಸುವುದು ಎಂಬ ಅಂಶವನ್ನು ” ದೇವಲೋಕ ಮರ್ತ್ಯಲೋಕವೆಂಬುದು ಭೇರಿಲ್ಲ ಕಾಣಿಭೋ… ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ  .. ಆಚಾರವೇ ಸ್ವರ್ಗ ,ಅನಾಚಾರವೇ ನರಕ… ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ, ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ ” ಎನ್ನುವ ವಚನಗಳಲ್ಲಿ ಮನ ಮುಟ್ಟುವಂತೆ ಹೇಳಿದ್ದಾರೆ. ತನ್ನನ್ನು ತಾನೇ ವಿಮರ್ಶೆಗೆ ಒಳಪಡಿಸಿಕೊಳ್ಳುತ್ತಾ “ಎನ್ನ ಚಿತ್ತ ಅತ್ತಿಯ ಹಣ್ಣು ನೋಡಯ್ಯಾ… ಎಂದ ಕಾವ್ಯ ಪ್ರತಿಮೆಯ ಸಾಲುಗಳಾಗಲೀ, ” ಕಪ್ಪೆ ಸರ್ಪದ ನೆಲಳಲ್ಲಿಪ್ಪಂತೆ ” ಎನ್ನುವ ಬಹು ವಿಧ ಅರ್ಥದ ಉಕ್ತಿಯಾಗಲೀ, ” ಹರಕೆಗೆ ತಂದ ಕುರಿ ತೋರಣಕ್ಕೆ ಕಟ್ಟಿದ ತಳಿರ ಮೇಯಿತ್ತು ” ಎನ್ನುವ ಬದುಕಿನ ಅನಿಶ್ಚಿತತೆಯ ನುಡಿಯಾಗಲೀ, ” ಹಾವಿನ ಬಾಯಿಯಲ್ಲಿರುವ ಕಪ್ಪೆ ಹಸಿದು ಹಾರುವ ನೊಣಕ್ಕೆ ಆಸೆ ಮಾಡುವಂತೆ”  ಎನ್ನುವ ಕ್ಷಣಿಕ ಜೀವನದ ಸಾರವರುಹುವ ನುಡಿಯಾಗಲೀ ಒಂದು ಕಾಲ ಮಾನಕ್ಕೆ ಅನ್ವಯಿಸುವ ನೀತಿ ಸಂಹಿತೆಯಾಗಿರದೆ ಮಾನವ ಜಗತ್ತಿಗೆ ಸರ್ವ ಕಾಲಕ್ಕೂ ಅನ್ವಯವಾಗುವ ಸತ್ಯ.
” ತಿದ್ದಿಕೊಳ್ಳುವುದೂ ಕಲಿಕೆಯೇ ” ಎನ್ನುವ ಮಾತಿನಂತೆ ಇತರರನ್ನು   ತಿದ್ದಲು ಹೊರಡುವ ಮುನ್ನ ತನ್ನನ್ನು ತಾನು ತಿದ್ದಿಕೊಳ್ಳಬೇಕು ಎನ್ನುವ ತಿಳುವಳಿಕೆಯನ್ನು ನೀಡುವ ” ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ನ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚ ನಮ್ಮ ಕೂಡಲಸಂಗಮದೇವ  ” ಎನ್ನುವ ವಚನ ತನ್ನ ಓರೆಕೋರೆಗಳನ್ನು ತಿದ್ದಿ ನಡೆಯಬೇಕು ಎನ್ನುವ ಪ್ರತಿಯೊಬ್ಬ ಮನುಜನಿಗೆ ಧ್ಯೇಯ ವಾಕ್ಯವೇ ಸರಿ.
“ಮಹಾವ್ಯಕ್ತಿಗಳು ಅಪರೂಪ. ಮಹಾ ಕವಿಗಳು ಅದಕ್ಕಿಂತ ಅಪರೂಪ. ಮಹಾ ಕವಿ ಮಹಾ ವ್ಯಕ್ತಿಯಾಗಿ ಇರುವುದು ಅತ್ಯಂತ ಅಪರೂಪ “ಎನ್ನುವ ಮಾತಿನಂತೆ ಮಾನವ ಜೀವನದ ವಿವಿಧ ಆಯಾಮಗಳನ್ನೇ ತನ್ನ ಎಲ್ಲ ವಚನಗಳ ವಸ್ತುವನ್ನಾಗಿಸಿಕೊಂಡ ಮಹಾಕವಿ ಬಸವಣ್ಣ ಮಹಾವ್ಯಕ್ತಿಯೂ ಆಗಿ ಬಾಳಿದರು.. ತಮ್ಮ ಸರಳ ಸಜ್ಜನಿಕೆಯ ನಡೆ ನುಡಿಯಿಂದ ಅಜರಾಮರರಾಗಿ ಉಳಿದರು. ಅವರ ವಚನಗಳು ಬೆನ್ನು ತಟ್ಟಿಸಿಕೊಳ್ಳಲು ಬರೆದ ಸಾಲುಗಳಲ್ಲ, ಹೃದಯವನ್ನು ತಟ್ಟುವ ವೇದ ವಾಕ್ಯಗಳು. ಬಸವಣ್ಣ ಎಂದರೆ ಒಂದು ಮೇರು ಸದೃಶ ವ್ಯಕ್ತಿತ್ವ. ಸಾಧನೆಯ ಪ್ರತಿರೂಪ.  ಜಾತಿ ಮತಗಳೆಂಬ ಸಂಕುಚಿತ ಮನೋಭಾವನೆಯನ್ನು ಕೊಚ್ಚಿ ಕಳೆಯಬೇಕೆಂದು ಪಣ ತೊಟ್ಟ ಈ ಮಾನವತಾವಾದಿಯನ್ನು ಯಾವುದೋ ಒಂದು ವರ್ಗದವರು ಎಂದು ಭಾವಿಸದೆ ಸಮಾಜದ ಒಟ್ಟು ಆಸ್ತಿ ಎಂದು ಪರಿಭಾವಿಸುತ್ತಾ ಅವರ ತತ್ವಾದರ್ಶಗಳನ್ನು ಪಾಲಿಸುವಲ್ಲಿ ಮನುಜ ಜೀವನದ ಸಾರ್ಥಕತೆಯಿದೆ. ಅವರ ನೀತಿ ಬೋಧನೆಗಳು ಜನಜೀವನದಲ್ಲಿ ಹಾಸುಹೊಕ್ಕಾದರೆ ಶಾಂತಿಯುತ ಸಮಾಜ ನಿರ್ಮಾಣವಾದಂತೆ…


2 thoughts on “ಮಹೋನ್ನತ ವ್ಯಕ್ತಿತ್ವದ ಬಸವಣ್ಣ. ಜಯಲಕ್ಷ್ಮಿ ಕೆ

  1. ಚೆನ್ನಾಗಿದೆ ಲೇಖನ. ಬಸವಣ್ಣ ನಿಜದಲ್ಲಿ ಸಾರ್ವಕಾಲಿಕ ವಿಶ್ವಗುರು.

Leave a Reply

Back To Top