ಸಾಹಿತ್ಯ ಸಂಗಾತಿ
ಪಿ ಎನ್ ಮೂಡಿತ್ತಾಯ
ʼಅಮೃತದ ಹನಿಗಳಾದರೆ
ಹಂಚಲು ಕಿವಿಸಟ್ಟುಗ ಸಾಕುʼ


ಒಂದು ನಸುಕಿನಲ್ಲಿ ಬಾಗಿಲು ತೆರೆಯುತ್ತಿದ್ದಂತೆಯೇ ರಾಶಿ ರಾಶಿ ಮಳೆಹಾತೆಗಳು ಒದ್ದಾಡುತ್ತಿದ್ದುದನ್ನು ಕಂಡೆ. ಸಣ್ಣ ಗಾಳಿಗೆ ಮಿಸುಕಾಡುವ ರೆಕ್ಕೆಗಳ ಹಿಂಡಿಗೆ ಜೀವ ಇದೆಯೋ ಎಂಬಂತಿತ್ತು. ಹತ್ತಿರ ಹೋಗಿ ಪರೀಕ್ಷಿಸಿದಾಗ ಕೆಲವಕ್ಕೆ ರೆಕ್ಕೆಗಳೇ ಇಲ್ಲ. ಹಲವಕ್ಕೆ ಒಂದೇ ರೆಕ್ಕೆ. ಅಡಿಯಲ್ಲಂತೂ ಊನತೆ ಇಲ್ಲದವುಗಳೇ ಇಲ್ಲ.
ಇಂತಹ ಹತಾಶ ಜೀವಿಗಳ ಮೇಲೆ ಒಂದು ಚುಟುಕ ಬರೆದರೆ ಹೇಗೆಂದು ಚಿಂತಿಸಿದೆ, ಬರೆದೂ ಬಿಟ್ಟೆ !
ಹಾರಾಡಿ ಮದದಿಂದ ಮೆರೆದರೆ ಜೀವಿಗಳಿಗೆ
ಮೂರೇ ದಿನದಲ್ಲಿ ಹರಿದಾಡುವ ಬದುಕು
ನೆಗೆಯಲಾರೆ ನಾಲ್ಕೇ ಗೇಣೆತ್ತರಕ್ಕೆ ನಾನೂ ಅಷ್ಟೆ
ಕೆಳಗೆ ಬಿದ್ದಾಗಿನ ಅಪಾಯವನ್ನು ಮರೆತೇ !
ಇದಕ್ಕೆ ಒಂದು ಶೀರ್ಷಿಕೆ ಕೊಡದಿದ್ದರೆ ಸರಿಯಾಗದಲ್ಲವೆ? ಕೊಟ್ಟೂ ಬಿಟ್ಟೆ. ತಗೊಳ್ಳಿ- “ಹಾತೆ”. ಮಳೆಹಾತೆಯ ಮೇಲೆ ಅದಕ್ಕಿಂತ ಉದ್ದದ ತಲೆಬರಹ ಕೊಟ್ಟರೆ ನಕ್ಕಾರು. ಸಾಲದ್ದಕ್ಕೆ ಈ ಸಾಲುಗಳ ಚಮತ್ಕಾರ ಗಮನಿಸಬೇಕು. ಚುಟುಕದ ಮೊದಲ ಅಕ್ಷರ ಹಾ. ಕೊನೆಯ ಅಕ್ಷರ ತೆ. ಆದರೆ ಅರ್ಥ ಹೊಂದಾಣಿಕೆ ತೃಪ್ತಿ ತಂದಿಲ್ಲವಪ್ಪ!
ಹಿಂದೆಲ್ಲ ಚುಟುಕದಿಂದ ಮಹಾಕಾವ್ಯಕ್ಕೆ ಪ್ರಯಾಣಿಸುತ್ತಿದ್ದರಾದರೆ ಇವತ್ತು ಮಹಾಕಾವ್ಯದಿಂದ ಚುಟುಕಕ್ಕೆ ಇಳಿಯುವ ಪಿಕ್ನಿಕ್ಕಿನ ಒಳಗುಟ್ಟೇನೆಂದು ನೀವೂ ಯೋಚಿಸುತ್ತಿದ್ದಿರಬಹುದು. ಒಂದು ಭೋಜನ ಬೇಕೆಂದು ಪಂಚನಕ್ಷತ್ರ ಹೊಟೆಲಲ್ಲಿ ಕೂತರೆ ಕೆಲವೇ ಕ್ಷಣ ಕಳೆದು ದಪ್ಪದ ಪುಸ್ತಕ ಇಡುತ್ತಾರಲ್ಲ. ಅದನ್ನಿಡೀ ಓದಿ ಒಂದು ತಪ್ಪಿದರೆ ಎರಡನ್ನಾಯ್ದು ಆರ್ಡರಿಸಿದರೆ ಪೊಲೀಸಿನಂಥ ಮಾಣಿ ಮತ್ತೆ ಕೆಲ ನಿಮಿಷ ಕಳೆದು ಬಂದು ಇವತ್ತು ಅದಿಲ್ಲ ಅಂದುಬಿಟ್ಟರೆ ಹೇಗಾದೀತು? ಮಹಾಕವಿಗಳು ಚುಟುಕವನ್ನು ಕೊಡದೇ ಇದ್ದರೆ “ಪಾಪ ಇವನಿಗೆ ಅದನ್ನು ಬರೆಯಲೇ ಗೊತ್ತಿಲ್ಲ ಅಂದಂತಾಗದೆ?
ಚುಟುಕ ಬರೆಯುವವರು ಖಂಡಿತ ಸಣ್ಣ ಸಾಹಿತಿಗಳೇನಲ್ಲ. ಈಗ ಅವರು ತಮ್ಮನ್ನು ಸಣ್ಣದಾಗಿಸಿಕೊಂಡಿರಬಹುದು. ಅದು ಆಯಾ ಸಂದರ್ಭ ನೋಡಿ. ನಾವು ಹಲವು ಚುಟುಕವಿ ಗೋಷ್ಠಿಗಳಿಗೆ ಹೋಗುತ್ತೇವೆ. ನೂರಾರು ಕವಿಗಳು ಎರಡೇ ಘಂಟೆಗಳಲ್ಲಿ ತಮ್ಮ ಚುಟುಕವಾಚನ ಮುಗಿಸಿದಾಗ, ರೇಲ್ವೆ ಸ್ಟೇಶನಿನಲ್ಲಿ ಕಾಯುತ್ತಿದ್ದ ಪ್ರಯಾಣಿಕನ ಮುಂದೆ ಉದ್ದದ ಗೂಡ್ಸ್ ಗಾಡಿ ಹಾದು ಹೋಗಿ ಮುಗಿಯುತ್ತದಲ್ಲ. ಅದೇ ಅನುಭವವಾಗಿ ಚಾಲಕ ಅದರ ಹಿಂದೆ ಇದ್ದನೆ ಮುಂದಿದ್ದನೆ ಎಂದು ಕೂಡ ಗಮನಿಸುವುದಕ್ಕಾಗದಲ್ಲವೆ?
ಕೆಲವು ವರ್ಷಗಳ ಹಿಂದೆ ಬದಿಯಡ್ಕದಲ್ಲಿ ನೂರೆಂಟು ಕವಿಗೋಷ್ಠಿ ಎರಡು ದಿನಗಳ ಕಾಲ ನಡೆದಿತ್ತು. ಅದೊಂದು ಹಳೆಕಾಲದ ಟೆಸ್ಟ್ ಮ್ಯಾಚಿನಂತಿತ್ತು. ನಾನು ಅಲ್ಲಿಗೆ ಕಾಲಿಟ್ಟಾಗ ಸುಡು ಮಧ್ಯಾಹ್ನ. ಅದನ್ನು ಆಯೋಜಿಸಿದ ಹಿರಿಯ ಕವಿ ಈಚೆ ಬರುತ್ತ ದಾರಿಯಲ್ಲಿ ಸಿಕ್ಕಿದರು.” ಮೈಕ್ ವ್ಯವಸ್ಥೆ ಉಂಟು. ಓದಿ ಮಹನೀಯರೆ ” ಎನ್ನುತ್ತ ಕೈ ಕುಲುಕಿ ನಕ್ಕರು. ಗುಡ್ಡ ಏರಿ ವೇದಿಕೆ ಹತ್ತಿದಾಗ ಕೆಳಗೆ ನರಪಿಳ್ಳೆ ಒಂದೂ ಇರಲಿಲ್ಲ. ಸಾಲದ್ದಕ್ಕೆ ಮೈಕ್ ಅಪರೇಟರೂ ಕಾಣೆ. ನಾನು ಕವಿತೆ ಓದಿ ಹೇಳಿದೆ. ಆದರೆ ಮಾಡಿದ ತಪ್ಪೆಂದರೆ ಮೂರು ಕವಿತೆ ಓದಿ ಹೇಳಿದ್ದು. ಆಗಲೂ ಊಟಕ್ಕೆ ಹೋಗಿದ್ದ ಯಾರೂ ಹಿಂದೆ ಬರಲಿಲ್ಲ! ನಿಧಾನವಾಗಿ ಬಂದ ಒಬ್ಬರು ಹೇಳಿದರು. ” ಓದಿದಿರ ಊಟ ಮಾಡ ಹೋಗಿ. ಮತ್ತೆ ಇಲ್ಲೆ ಇರಿ. ಕವಿಗಳೆಲ್ಲ ಓದಿ ಇನ್ನೊಬ್ಬರದಕ್ಕೆ ಕಾಯುವುದಿಲ್ಲ. ಹಾಗಾಗಿ ಹೋಗಿಬಿಟ್ಟಿದ್ದಾರೆ” ಎಂದು ಹೇಳಿ ಕಿರುನಗೆ ಬೀರಿದರು. ಅವರಿಗೆ ನನ್ನ ಮೇಲೆ ನಂಬಿಕೆ ಇತ್ತೋ ಇರಲಿಲ್ಲವೋ ಗೊತ್ತಿಲ್ಲ. ನಾನಂತೂ ದಾಕ್ಷಿಣ್ಯಕ್ಕೆ ಎರಡು ಘಂಟೆ ಕೂತೆ. ಎಚ್ಚರಾದಾಗ ಸಂಜೆ ಆಗಿತ್ತು.
ಇತ್ತೀಚೆಗೆ ನಾನು ಹಾಜರಿದ್ದ ಬೃಹತ್ ಚುಟುಕವಿಗೋಷ್ಠಿಯ ಸಭೆ ತುಂಬಿ ತುಳುಕುತ್ತಿತ್ತು. ಅದನ್ನು ವ್ಯವಸ್ಥೆಗೊಳಿಸಿದವರು ಕಾಸರಗೋಡಿನ ಮಹಾಸಾಹಸಿ ಗೆಳೆಯರ ತಂಡ. ಸಂಸ್ಥೆಯೂ ದೊಡ್ಡದೇ. ವೇದಿಕೆ ಮೇಲೆ ನಾನೂ ಕೂತಿದ್ದೆ. ಆದರೆ ಚುಟುಕ ತರಲು ಮರೆತಿದ್ದೆ.
ಏನಾಯಿತೆನ್ನುವ ಮೊದಲು ಸಾಮಾನ್ಯವಾಗಿ ಚುಟುಕಗಳ ವಸ್ತು ವೈವಿಧ್ಯ ಹೇಗಿರುತ್ತದೆಂದು ಹೇಳಿಬಿಡುತ್ತೇನೆ.
ಚುಟುಕದಲ್ಲಿ ಗೇಯತೆಯ ಕೊರತೆ ಇರುತ್ತದೆ. ವಾಕ್ಯವೊಂದನ್ನು ಅಂದವಾಗಿ ಮುರಿದಿಟ್ಟಂತೆ, ಸುಲಭ ಗ್ರಾಹ್ಯವಾಗುವಂತೆ, ಅಂತ್ಯ ಪ್ರಾಸ, ಅಕ್ಷರ ಪ್ರಾಸ ಇರುವಂತೆ ಎಲ್ಲಕ್ಕಿಂತ ಹೆಚ್ಚಾಗಿ ನೆನಪಿನಲ್ಲಿ ಉಳಿಯದಂತೆ ಅದರ ರಚನೆ ಇರುತ್ತದೆ. ಅದಕ್ಕಿಂತ ಗಾದೆ, ಹೇಳಿಕೆ, ಸೂಕ್ತಿಗಳೇ ಹೆಚ್ಚು ಪ್ರಿಯವಾಗುತ್ತವೆ. ಆದರೆ ವಿಚಿತ್ರ ಎಂದರೆ ಓದಿ ಹೇಳಿದವರಲ್ಲಿ ಇರುವ ಧನ್ಯತಾಭಾವ. ಒಳಗೆ ತುಂಬ ಅಡಗಿಸಿಟ್ಟದ್ದೇನೆಂಬಂಥ ಹೆಮ್ಮೆ.
ಕೆಲವರಿಗೇ ಚುಟುಕ ರಚಿಸುವ ಸಾಮರ್ಥ್ಯ ಇದೆಯೆಂದರೆ ಹಲವು ಮಂದಿ ಒಪ್ಪುವುದೇ ಇಲ್ಲ. ನನಗೇ ಪ್ರಶ್ನೆ ಹಾಕಿಕೊಂಡರೆ ಥಟ್ಟನೆ ನೆನಪಿಗೆ ಬರುವ ಕೆಲವರ ರಚನೆಗಳಿವೆ. ಅವುಗಳು ಪೂರ್ತಿ ಹೀಗೇ ಇದ್ದುವು ಎನ್ನಲಾರೆ. ಉದಾಹರಣೆಗೆ ಬಿ ಆರ್ ಲಕ್ಷ್ಮಣ ರಾವ್ ಬರೆದ ಈ ಸಾಲುಗಳು-
ಹಾಡೇ ಹಾಡೇ ನಿನ್ನಯ ಪಾಡೇ
ಏನು ನಿನ್ನ ವಸ್ತು
ಸೆಕ್ಸೀ ಸೆಕ್ಸೀ ಓಲೇ ಓಲೇ
ಹಮ್ಮ ಮಸ್ತು ಮಸ್ತು
ಇದರಲ್ಲಿ ನೋಡಿ ಪದಗಳೊಂದಿಗೆ ಅರ್ಥವೂ ಕುಣಿಯುತ್ತದೆ. ಆಧುನಿಕ ಕವಿತಾವತಾರಗಳ ವಿಡಂಬನೆಯ ಜೊತೆ ಜೊತೆಗೇ ನಾಗರಿಕ ಶೋಕೀ ಜೀವನದರ್ಶನವೂ ಆಗುತ್ತದೆ. ಅದಕ್ಕೇ ಹೇಳುವುದು- ಹನಿ ಕವಿತೆಗಳು ತಿಳಿ ಹಾಸ್ಯ ಮತ್ತು ಚಮತ್ಕಾರಿಕ ಪದವಿನ್ಯಾಸದಿಂದ ಕೂಡಿ ತಾತ್ವಿಕ ಒಳನೋಟ ಹೊಂದಿದ್ದರೆ ಒಳಿತು ಎಂದು. ಒಂದು ಭಾವಗೀತೆಯಲ್ಲೇ ಅದರ ಲಕ್ಷಣಗಳ ಹೊಂದಾಣಿಕೆ ಮತ್ತು ಕೊನೆಗೊಂದು ಉಳಿಯುವ ಮಾತು ಪೋಣಿಸಿಡಲಾಗದವರು ಚುಟುಕ ಬರೆದು ಗೆಲ್ಲಲುಂಟೆ?
ನಾವು ಗಮನಿಸಿದಲ್ಲಿ ಹೆಚ್ಚಾಗಿ ಚುಟುಕಗಳಲ್ಲಿ ವಿಡಂಬನೆ, ಸಲಹೆ, ಅನುಭವದ ವರದಿ, ಮಾಹಿತಿ, ವಾರ್ತೆ, ಸತ್ಯದರ್ಶನ, ಹೆಮ್ಮಕ್ಕಳ ಕುರಿತ ಬೆರಗು, ಹುಡುಗರ ಕೀಟಲೆಯ ನೋಟ, ಅಮ್ಮನ ಕುರಿತ ಗೌರವ ಭಾವ, ಅಡುಗೆ, ಆಟ, ಭೇಟಿ ಮುಂತಾದ್ದರೆ ನೆನಪುಗಳು, ಭಾಷಾಪ್ರೇಮ, ದುರ್ನಡತೆಗಳ ಟೀಕೆ, ಸತ್ಯದರ್ಶನದಿಂದುಂಟಾದ ಪಾಪ ಪ್ರಜ್ಞೆ ಮುಂತಾದ ಭಾವಗಳಿರುತ್ತವೆ.
ವಿವರ ಕೇವಲ ವರದಿಯಂತಿದ್ದು ಅದಕ್ಕೆ ಅಕ್ಷರ ಪ್ರಾಸದ ಹೊರ ರೂಪ ಇದ್ದಲ್ಲಿ ಅನಿಸುವುದೇ ಬೇರೆ. ಗೊತ್ತಿಲ್ಲದೇ ಪುಟ್ಟ ತೊಂದೆ ಕಪ್ಪೆಯನ್ನು ಎತ್ತಿದಾಗ ಅದು ಪಿಚಕ್ಕಂತ ನಾಲ್ಕು ಹನಿ ಮೂತ್ರ ಚೆಲ್ಲಿ ಹಾರಿಬಿಟ್ಟಾಗ ಆಗುವ ಪುಳಕ ಒಮ್ಮೆಗೇ ಸಿಕ್ಕೀತು.
ಉದಾಹರಣೆಗೆ – ಅಟ್ಟಕೆ ಏಣಿ/ಹತ್ತಿದ ಮಾಣಿ/ ತಲೆಯಲಿ ಗೋಣಿ…(ರಾಧಾಕೃಷ್ಣ) ಅಮ್ಮ ಅಮ್ಮ ಬಾರಮ್ಮ/ ಕಥೆಯೊಂದನ್ನು ಹೇಳಮ್ಮ/ ತುತ್ತನು ನನಗೆ ನೀಡಮ್ಮ/ ಮುತ್ತನು ಕೊಡುವೆ ನಿನಗಮ್ಮ( ಕೃಪೇಶ್) ಪೆನ್ನು ಬೇಕು ಬರೆಯಲು/ ಕಣ್ಷು ಬೇಕು ಕಾಣಲು/ ಹೆಣ್ಣು ಬೇಕು ಮದುವೆಯಾಗಲು (ಶಿವಾನಂದ ಸಿದ್ಧಕಟ್ಟೆ- ಇನ್ನೂ ಬ್ರಹ್ಮಚಾರಿಯಿರಬೇಕು) ಇಂತಹ ಚುಟುಕಗಳ ಕೊನೆಯ ಸಾಲು ನೆನಪಾಗದು. ಅಥವಾ ಇವುಗಳ ಶಿರೋನಾಮೆಯನ್ನು ಓದಿದರೆ ಎಲ್ಲವೂ ಊಹೆಗೆ ನಿಲುಕೀತೇನೊ.
ಒಬ್ಬರು ಸಣ್ಣ ರಚನೆಯೊಂದನ್ನು ಅರ್ಪಿಸಿದ್ದು ಹೀಗೆ: ” ಹಿಂದೆ ಕಾಲೇಜಲ್ಲಿ ಕಷ್ಟಪಟ್ಟು ಓದಿದರೆ ದೊರಕುತ್ತಿತ್ತು ಬಿ ಎ. ಇಂದು ಸುಲಭದಲ್ಲಿ ದೊರಕುವುದು ಎಂಡಿ ಎಂ ಎ” ಓದಿಹೇಳಿಬಿಟ್ಟಲ್ಲಿಗೆ ಕವಿತೆಯೊಳಗಿನ ಸರ್ವಸ್ವ ಸಹೃದಯಿಗೆ ದಾಟಿತೆನ್ನಲಾಗದು. ಅರ್ಥಭಾವಗಳನ್ನು ಹಿಂಡಿ ತೆಗೆಯುವುದಕ್ಕೆ ಸ್ವಲ್ಪ ಕಾಲಾವಕಾಶ ಬೇಕಲ್ಲವೆ. ಗೋಷ್ಠಿಗಳಲ್ಲಿ ನಾವು ಒಂದುಕ್ಷಣ ವಿಶ್ರಮಿಸಿ ಚಿಂತಿಸ ಹೊರಟಾಗ ಇನ್ನೊಬ್ಬರು ಓದುತ್ತಿರುತ್ತಾರೆ! ನೂರಾರರಲ್ಲಿ ಕೆಲವೇ ಕೆಲವು ಸಾಲುಗಳಷ್ಟೇ ಅರ್ಧಂಬರ್ಧ ಸ್ಮೃತಿಗೆ ಅಂಟಬಹುದಷ್ಟೆ.” ಸಾಹಿತಿ ಉಳಿಯುವುದಿಲ್ಲ/ ಸಾಹಿತ್ಯ ಅಳಿಯುವುದಿಲ್ಲ” ಎಂದು ಇಷ್ಟೆ. ಇಂತಹ ತಾತ್ವಿಕ ಮತ್ತು ನೈತಿಕ ಮಾತುಗಳು ಪರಿಣಾಮ ಬೀರುತ್ತವೆಯೆ? ಉದಾಹರಣೆಗೆ ಒಬ್ಬರ ಈ ರಚನೆ ” ಹಸಿವು ಮಾತನಾಡುತಿದೆ ತಣಿಸುವವರಿಲ್ಲ. ಧರ್ಮ ಮಾತಾಡುತಿದೆ ಹಸಿದವನಿಗೆ ಬೇಕಾಗಿಲ್ಲ”( ಸಿಹಾನ)
ಇತ್ತೀಚಿನ ಕಾವ್ಯ ಬಂಧಗಳು
ಈಚೆಗೆ ಕವನ ಸ್ಪರ್ಧೆಗಳು ಎಲ್ಲೆಡೆ ರಾರಾಜಿಸುತ್ತಿವೆ. ಹಿಂದಿನ ಕಾಲದ ಮಹಾಕಾವ್ಯ, ಖಂಡಕಾವ್ಯ, ಕಥನ ಕವನ, ಭಾವಗೀತೆ, ಜನಪದ ಹಾಡು ಮುಂತಾದ್ದು ಈಗೆಲ್ಲಿ! ಇಂತಿಷ್ಟೇ ದೊಡ್ಡದು ಎಂಬ ಕಟ್ಟುಪಾಡು ನನ್ನಂಥವರಿಗೆ ಸಹ್ಯವಾಗುವುದಕ್ಕೆ ಸಾಧ್ಯವೆ? ಹತ್ತು ಗೆರೆ ಮೀರ ಬಾರದು, ನಾಲ್ಕು ಗೆರೆಯೊಳಗೆ ಮುಗಿದಿರಬೇಕು ಮುಂತಾದ ಶರ್ತಗಳು ಕಾರ್ಖಾನೆಯ ಸ್ಪೇರ್ ಪಾರ್ಟುಗಳಂತೆ ಲಕ್ಷಗಟ್ಟಳೆ ನಿರ್ಮಾಣ ಮಾಡಿಸುತ್ತವೆ! ಪ್ರತಿಭಾವಂತರ ಸಮಯವೆಲ್ಲ ಈ ಬಗೆಯ ವ್ಯವಸ್ಥೆಯಲ್ಲಿ ಸಿಕ್ಕು ಹಾಕಿಕೊಳ್ಳುವುದು ಅಷ್ಟಾಗಿ ಅನಿವಾರ್ಯ ಎನಿಸುವುದೆ?
ಕವಿಗೋಷ್ಠಿಗಳಿಗೂ ಈ ಬಗೆಯ ಶಿಸ್ತು ಸಂಯಮದ ರಾಹು ಬಡಿದಂತಿದೆ. ದೊಡ್ಡ ಸಮಾರಂಭಗಳಲ್ಲಿ ಬಾಲಂಗೋಚಿ ಕೂಟದ ರೂಪದಲ್ಲಿ ಹತ್ತಾರು ಸ್ವರಚಿತ ಕವನಗಳು ಪ್ರಸ್ತುತಗೊಳ್ಳುತ್ತವೆ!
ನಿನ್ನೆ ಪೆರ್ಲದ ವ್ಯಾಪಾರೀ ಭವನದಲ್ಲಿ ಒಂದು ಕಾರ್ಯಕ್ರಮ ನಡೆಯಿತು. ಕವಿತಾ ಕೌತುಕ ಶಿರೋನಾಮೆಯಲ್ಲಿ ಅದು ಕವಿ_ ಕಾವ್ಯ ಸಂವಾದವೆಂಬ ಮೂರನೇ ಕೂಟ. ಕವಿಗಳಿಗೇ ವೇದಿಕೆ. ಹೆಚ್ಚಿನ ಸಂಖ್ಯೆಯಲ್ಲಿ ಕಿರಿಯರೇ ತುಂಬಿದ ವೇದಿಕೆ. ಅವರು ತಮಗೆ ಇಷ್ಟವಾದಷ್ಟು ಓದಬಹುದು. ರಚನೆಯ ಹಿನ್ನೆಲೆ, ವಸ್ತು ಮತ್ತು ಬರೆದ ಕಾಲದ ಮಾಹಿತಿ ಮುಂತಾಗಿ ಮಾತನಾಡಬಹುದು. ಆಗ ನೆರೆದವರ ಪೈಕಿ ಹಿರಿಯರು ಪ್ರಶ್ನೆಗಳನ್ನೂ ಕೇಳಬಹುದು. ಉದ್ದೇಶವೆಂದರೆ, ಕವಿ ಮೂರು ನಿಮಿಷದಲ್ಲಿ ಏನನ್ನೋ ಒಪ್ಪಿಸಿ ಓಡಿಹೋಗುವುದಲ್ಲ!
ಸಾಹಿತ್ಯ ಮಿಂಚಿ ಮಾಯವಾಗುವ ಟಾರ್ಚು ಬೆಳಕಲ್ಲ. ಬರೆಯುವ ವ್ಯಕ್ತಿಗೆ ಒಂದು ವ್ಯಕ್ತಿತ್ವ ಇರುತ್ತದೆ. ತಟ್ಟಬಲ್ಲ , ಹಂಚಲೇಬೇಕಾದ ನೆನಪುಗಳಿರುತ್ತವೆ, ಆ ಕುರಿತು ಹೇಳಿಕೊಳ್ಳಬೇಕೆಂಬ ಹಂಬಲ ಇರುತ್ತದೆ. ಇದಕ್ಕೆಲ್ಲ ಅವಕಾಶ ಮಾಡಿಕೊಟ್ಟರೆ ಒಂದು ಕವಿತೆಗೆ ಸೀಮಿತವಾಗದೆ ವ್ಯಕ್ತಿಯ ಅಂತರಂಗ ಅನಾವರಣಗೊಳ್ಳುತ್ತದೆ.
ನಿನ್ನೆ ಹಾಗಾಯಿತು. ಸಮಕಾಲೀನ ಸಂಗತಿಗಳು ಮುನ್ನೆಲೆಗೆ ಬಂದುವು. ಇತರರು ಮಾತನಾಡಿಸಿದರು. ಸಂವಾದಗಳು ತುಂಬಿ ತುಳುಕಿದಂತೆಲ್ಲ ಒಬ್ಬ ಕವಿ ಎಂದರೆ ಕೇವಲ ಅಂತರ್ಮುಖಿ ಅಲ್ಲ, ಬರೀ ಕವಿ ಮಾತ್ರ ಅಲ್ಲ, ಸಾಹಿತ್ಯ ವ್ಯಸನಕ್ಕಷ್ಟೇ ಸೀಮಿತ ಪ್ರಾಣಿ ಅಲ್ಲ ಎಂದು ಮುಂತಾಗಿ ಪರಸ್ಪರ ತಿಳಿದುಕೊಂಡಂತಾಯಿತು!
ಪಿ ಎನ್ ಮೂಡಿತ್ತಾಯ