ಶರಣ ಸಂಗಾತಿ
ಟಿ.ಪಿ.ಉಮೇಶ್
ಮಾನವ ಕುಲದ ಬೆಳಕು ಬಸವೇಶ್ವರ!


ಬಸವೇಶ್ವರ ಮಾನವ ಕುಲಕ್ಕೆ ಭರವಸೆಯ ಬೆಳಕು!
ಜಡ್ಡುಗಟ್ಟಿ ತಲ್ಲಣಿಸುವ ವಿಶ್ವಕ್ಕೆ ಚೈತನ್ಯದ ಹೊಳಪು!
ಜಾತಿಯ ತರತಮದಲ್ಲಿ ಸಿಲುಕಿ ನರಳುತ್ತಿದ್ದ ಲೋಕ;
ಅಸಮಾನತೆ ಚಕ್ರದಡಿ ಉರುಳುತ್ತಿದ್ದ ಜನರ ಶೋಕ;
ದೇವರ ಎದುರಲ್ಲಿಯೆ ಮೇಲುಕೀಳಿನ ಆಟಾಟೋಪ;
ಮನುಜರ ನಡುವೆ ಏಕತೆ ತಾರದ ಅಸ್ಪೃಶ್ಯತೆ ಕೂಪ;
ಅಂದಿಗು ಇಂದಿಗು ಬದಲಾಗದ ಸಮಾಜದ ನೋಟ;
ಸ್ವತಂತ್ರ ಸಮಾನತೆ ಅರಿವಿದ್ದರು ಕುಗ್ಗದ ಜಾತಿ ಓಟ;
ಸಹಸ್ರಮಾನ ಸಂದರು ಮರಳಿ ಬಸವೇಶ್ವರರ ಧ್ಯಾನ!
ಮನು ಕಟ್ಟಳೆ ಅಳಿಸಿ ಉಳಿಸಲೆಂದು ಮಾನವ ಮಾನ!
ಭಕ್ತ ದೇವರ ನಡುವಿರುವ ಅಂತರ ಅಳಿಸಿದ್ದ ಪ್ರಭುವೆ!
ಭಕ್ತನ ಕಾಯ ಕಾಯಕವನ್ನೇ ದೈವವಾಗಿಸಿದ್ದ ವಿಭುವೆ!
ಸಮತೆಯ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಶರಣ;
ಎಲ್ಲ ಮತ ವರ್ಗಗಳಿಂದ ಕಲ್ಯಾಣದಿ ಆದರ್ಶತೆ ಜನನ;
ಅರಿವು ಆಚಾರಗಳಿಗೆ ಸ್ವರ್ಗ ತಂದಿತ್ತ ಮಹಾನುಭಾವ;
ಮರ್ತ್ಯಕ್ಕೆ ಕೈಲಾಸದ ಕಳೆ ಕೊಟ್ಟ ಆಧ್ಯಾತ್ಮ ಅನುಭಾವ;
ಪುರೋಹಿತಶಾಹಿ ದೂರೀಕರಿಸಿದ ವೈಚಾರಿಕತೆ ಧ್ವನಿ!
ಶ್ರಮಿಕ ದಮನಿತರ ಏಳ್ಗೆಗಾಗಿ ವಚನಗಳನ್ನಿಟ್ಟ ಕಣ್ಮಣಿ!
ಲೋಕದ ಜ್ಞಾನಿಗಳಿಗೆಲ್ಲ ಅನುಭವ ಮಂಟಪದ ಆಸರೆ;
ಚರ್ಚೆ ಸಂವಾದ ಪ್ರಜಾಸತ್ತಾತ್ಮಕ ನಡೆಗಳಿಗೆಲ್ಲ ಪ್ರೇರಣೆ!
ಹನ್ನೆರಡನೆ ಶತಮಾನ ಲೋಕದಿ ಕಲ್ಯಾಣದ ಅವತರಣ!
ಅಲ್ಪಕಾಲದಲ್ಲೆ ಸಮತೆ ಸಹಿಸದ ದುರುಳರಿಂದ ಹರಣ!
ಸಹಸ್ರಮಾನದಿಂದಲು ನಿಲ್ಲದ ಜಾತಿ ಮತ ಸಂಘರ್ಷ;
ಇನ್ನಾದರು ಆಗಲಿ ಬಸವಾದಿಗಳ ನಡತೆಗಳ ಉತ್ಕರ್ಷ;
ಗಾಳಿ ನೀರು ಬೆಂಕಿ ರಕ್ತದಂತೆ ಒಂದೇ ಮಾನವರೆಲ್ಲರು!
ಮನುಷ್ಯತ್ವದ ಜೀವಿಗಳಿಗೆ ಬೆಳಕ ದಾರಿ ಬಸವೇಶ್ವರರು!
ಟಿ.ಪಿ.ಉಮೇಶ್
