ಕಂಚುಗಾರಹಳ್ಳಿ ಸತೀಶ(ಕಂಸ)ಅವರಗಜಲ್‌ ಸಂಕಲನ “ನನ್ನವಳು ನಕ್ಕಾಗ” ಕೃತಿಯ ಅವಲೋಕನ ಪ್ರಭಾವತಿ ದೇಸಾಯಿ ಅವರಿಂದ

ಕೃತಿಯ ಶೀಷಿ೯ಕೆ…ನನ್ನವಳು ನಕ್ಕಾಗ(ಗಜಲ್ ಸಂಕಲನ)
ಲೇಖಕರು….ಕಂಚುಗಾರಹಳ್ಳಿ ಸತೀಶ(ಕಂಸ) ಮೊ.೯೯೭೯೩೨೧೨೬*
ಪ್ರಕಾಶನ…ಸತೀಶ ಕೆ.ಎಸ್ ನರಗುಂದ ಮೊ.೯೯೭೨೯೩೨೧೨೬
ಪ್ರಕಟಿತ ವರ್ಷ….೨೦೨೪ ಬೆಲೆ ..೧೧೦₹

ಮನುಷ್ಯ ಸಂಘ ಜೀವಿ ಸದಾ ತಾನು ಪ್ರೀತಿಸುವವರು ತನ್ನನ್ನು ಪ್ರೀತಿಸುವವರು ಜೊತೆಯಲ್ಲಿ ಸದಾ ಇರಲೆಂದು ಆ ಪ್ರೀತಿಯ ಕಡಲಲ್ಲಿ ಈಜುತ ಆನಂದದಿಂದ ಬಾಳಬೇಕು , ಪ್ರೀತಿಯ ಜೀವಿಯ ಕಣ್ಣ ಮಿಂಚಿನ ಹೊಳಪಿನಲ್ಲಿ ನಲಿದಾಡ ಬಯಸುತ್ತಾನೆ. ಯಾವಾಗಲೂ ಚಿರಯೌವನ ಇರಲಿ ಎಂದು ಹಂಬಲಿಸುತ್ತಾನೆ ,ಮುಪ್ಪು ಸಾವು ತನ್ನ ಹತ್ತಿರ ಸುಳಿಯದಿರಲೆಂದು ಬಯಸುತ್ತಾನೆ. ರೋಗ ರುಜನೆ ಹತ್ತಿರ ಬರದಿರಲೆಂದು ಆಸಿಸುತ್ತಾ ಯೌವನದ ಸುಖ ಭೋಗವನು ಮೋಜು ಮಸ್ತಿಯನ್ನು ಮಾಡುತ್ತಾ ಜೀವನದ ನಿಜ ಸುಖದ ಅರ್ಥವನ್ನು ಅರಿಯದೆ ಕ್ಷಣಿಕ ಸುಖಕ್ಕೆ ಬಲಿಯಾಗುತ್ತಾನೆ .ಇಂದು ಮನುಷ್ಯ ಅತೃಪ್ತಿಯಲಿ ಬದುಕುತ್ತಿದ್ದಾನೆ. ಆತ್ಮ ತೃಪ್ತಿಗಾಗಿ ಜೀವನದ ಅನುಭವ ದಿಂದ ಅನುಭಾವದ ಕಡೆಗೆ ಕರೆದುಕೊಂಡು ಹೋಗುವ ಸಾಹಿತ್ಯ ಓದವ ಮತ್ತು ಬರಹದಲ್ಲಿ ಮನ ತೊಡಗಿಸಿ ಕೊಂಡರೆ ಆತ್ಮಾನಂದ ಸಿಗುತ್ತದೆ . ಮನುಜ ಮನಕ್ಕೆ ನೆಮ್ಮದಿ ಕೊಡುವ ಶರಣರ ವಚನಗಳು ,ದಾಸರ ಕೀರ್ತನೆ , ತತ್ವಪದ ಹಾಗೂ ಸೂಫಿ ಸಂತರ ಗಜಲ್ ಸಾಹಿತ್ಯದಲ್ಲಿ ತನ್ನನ್ನು ತೊಡೆಸಿಕೊಂಡರೆ ಅಂಥಹ ಮನುಷ್ಯನಿಗೆ ಸಹಜವಾಗಿ ಜೀವನದ ನಿಜವಾದ ಸುಖ ಸಿಗುತ್ತದೆ.

ಗಜಲ್ ಸಾಹಿತ್ಯ ಮರಳುಗಾಡಿನ ಅರಬ್ಬಿ ದೇಶದಲ್ಲಿ ಹುಟ್ಟಿ ಇರಾನ್ ದೇಶದ ಫಾಸಿ೯ ಭಾಷೆಯಲ್ಲಿ ಕಾವ್ಯವಾಗಿ ಸಮೃದ್ಧವಾಗಿ ಬೆಳೆದು ಹಾಡುಗಬ್ಬವಾಗಿ ಜನರ ಬಾಯಿಯಲ್ಲಿ ಹರದಾಡಿತು. ಇದು ಭಾರತಕ್ಕೆ ವಲಸೆ ಬಂದ ಕಾವ್ಯ ಪ್ರಕಾರವಾಗಿದೆ . ಗಜಲ್ ಫಾಸಿ೯ ಭಾಷೆಯಿಂದ ಉರ್ದು ಭಾಷೆಗೆ ಬಂದಿದ್ದು ನಿಜ ಆದರೆ ಅದು ಫಾರ್ಸಿ ಭಾಷೆ ಅನುಕರಣೆಯಾಗದೆ ತನ್ನದೇ ಆದ ವೈಶಿಷ್ಟ ವ್ಯಕ್ತಿತ್ವಗಳನ್ನು ಬೆಳೆಸಿಕೊಂಡು ಭಾರತದಲ್ಲಿ ಗಜಲ್ ಸಾಹಿತ್ಯವು ಇಲ್ಲಿಯ ಸಂಸ್ಕೃತಿಯ ಉಜ್ವಲತೆಯ ಪ್ರತೀಕವಾಗಿ ಈ ದೇಶದ ಲೋಕ ಗೀತೆಯಾಗಿ ಋತು ,ಜಲ ,ವಾಯು ,ಹಸಿರು ನೆಲ ಹಬ್ಬ ,ಹುಣ್ಣಿಮೆ ಬೆಳದಿಂಗಳು ಹೀಗೆ ಅನೇಕ ವಿಷಯಗಳನ್ನು ತನ್ನೊಳಗೆ ಅಡಗಿಸಿಕೊಂಡು ಇದು ಭಾರತೀಯ ಕಾವ್ಯವಾಗಿದೆ . ಉರ್ದು ಭಾಷೆಯ ಮೃದುವಾದ ನಾಜೂಕಾದ ಸೊಗಸಾದ ಸುಂದರವಾದ ತೀಕ್ಷಣವಾದ ತೀವ್ರತೆಯನ್ನು ತೋರಿಸುವ ಒಂದು ಸುಂದರವಾದ ಕಾವ್ಯ ಪ್ರಕಾರವಾಗಿ ಬೆಳೆಯಿತು .ಉರ್ದು ಭಾಷೆಯ ಮಾಧುರ್ಯದಿಂದ ಹೃದಯ ಕಾವ್ಯಯಾಗಿ ರಾಜರ ಆಸ್ಥಾನದಲ್ಲಿ ರಾಣಿಯಾಗಿ ಮೆರೆಯಿತು .ಪ್ರೀತಿ ,ಪ್ರೇಮ ,ವಿರಹ ಗಳಂತ‌ ಹೃದಯದ ಬಡಿತವೇ ವಸ್ತುವಾಗಿ ನೊಂದವರಿಗೆ ಸಾಂತ್ವನ ಹೇಳುವ ಕಾವ್ಯವಾಯಿತು .

ಇಂದು ಭಾರತದ ಎಲ್ಲಾ ಭಾಷೆಗಳಲ್ಲಿ ಗಜಲ್ ರಚನೆಯು ಬೆಳೆಯುತ್ತಿದೆ . ಕನ್ನಡದ ಗಜಲ್ ಹುಟ್ಟಿಗೆ ಕಾರಣರಾದ ಶಾಂತರಸರು ಪ್ರಯತ್ನಿಸಿ ಕನ್ನಡ ಗಜಲ್ ಗಳನ್ನು ರಚಿಸಲು ಕನ್ನಡ ಭಾಷೆಯ ಛಂದಸ್ಸನ್ನು ಕಂಡುಹಿಡಿದರು. ಶಾಂತರಸರು ಕನ್ನಡ ಗಜಲ್ ದ ಪಿತಾಮಹ ಎಂದು ಹೇಳಬಹುದು . ಕನ್ನಡದಲ್ಲಿಯು ಗಜಲ್ ಕಾವ್ಯ ಓದುಗರ ಹೃದಯ ತಟ್ಟುವಂತಹ ಜನಪ್ರಿಯ ಕಾವ್ಯವಾಗಿ ಬೆಳೆಯುತ್ತಿದೆ .ಕನ್ನಡ ಯುವ ಕವಿಗಳಿಗೆ ಈ ಮೋಹಕ ಕಾವ್ಯ ಮೋಡಿ ಮಾಡಿದೆ. ಎಲ್ಲರಿಗೂ ಗಜಲ್ ರಚಿಸುವ ಉತ್ಸಾಹ ಉಕ್ಕುತ್ತಿರುವುದು ನಾವು ಇಂದು ಕಾಣುತ್ತೇವೆ ,ಇಂದಿನ ತಾಂತ್ರಿಕ ಯುಗದಲ್ಲಿ ಫೇಸ್ ಬುಕ್ ,ವಾಟ್ಸಪ್ ಗಳಲ್ಲಿ ಗಜಲ್ ಗಳು ಹರಿದಾಡುತ್ತಿರುವುದು ಸಂತೋಷದ ಸಂಗತಿ ,ಆದರೆ ಬಹಳಷ್ಟು ಗಜಲ್ ಗಳಲ್ಲಿ ಕಾವ್ಯದ ಸೂಕ್ಷ್ಮತೆ ತೀವ್ರತೆ ,ಕಟ್ಟುವ ಕಲೆ ಹಾಗೂ ವಿಷಯ ವಿಸ್ತಾರದ ಹರವು ಭಾಷಾ ಮಾಧುರ್ಯತೆ ಕಡಿಮೆ ಇರುವುದು ಕಂಡುಬರುತ್ತಿದೆ ಗಜಲ್ ಕಾರರು ಇವುಗಳ ಬಗ್ಗೆ ಗಮನಿಸುವುದು ಅವಶ್ಯಕವಿದೆ ಎಂದು ಓದುಗರಿಗೆ ಅನಿಸುತ್ತದೆ.

ಎಲ್ಲರಿಗೂ ಗಜಲ್ ರಾಣಿ ಒಲಿಯುವುದಿಲ್ಲ ಯಾರು ಅವಳನ್ನು ಆರಾಧಿಸುತ್ತಾರೆ ಹಗಲಿರುಳು ಧ್ಯಾನಿಸುತ್ತಾರೆ ಅವರಿಗೆ ಮಾತ್ರ ಒಲಿಯುತ್ತಾಳೆ . ಗಜಲ್ ಎಂಬುವುದು ಹೃದಯದ ಕಾವ್ಯವಾಗಿದ್ದು ಒಂದು ಹೃದಯದ ನೋವು ನಲಿವುಗಳನ್ನು ಇನ್ನೊಂದು ಹೃದಯಕ್ಕೆ ಮುಟ್ಟಿಸುವ ಪಿಸುಮಾತಿನ ಹೃದಯದ ಕಾವ್ಯವಾಗಿದೆ. ಲೌಕಿಕ ಪ್ರೀತಿಯಿಂದ ಅಲೌಕಿಕ ಪ್ರೀತಿಯ ಕಡೆಗೆ ಕರೆದುಕೊಂಡು ಹೋಗುವ ಅನುಭಾವದ ಸೂಫಿ ಸಾಹಿತ್ಯ ವಾಗಿದೆ ಮನಸಿಗೆ ನೆಮ್ಮದಿ ಕೊಡುತ್ತದೆ.

ಕಂಸ ಎಂಬ ಕಾವ್ಯನಾಮದಿಂದ ಸಾಹಿತ್ಯವನ್ನು ರಚಿಸುವ ಕಂಚುಗಾರಹಳ್ಳಿ, ಸತೀಶ ಅವರು ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿ ಈಗಾಗಲೇ ಕವಿತೆ, ಕಥೆ ,ಕಾದಂಬರಿ ,ಬಿಡಿ ಲೇಖನಗಳು, ಆಧುನಿಕ ವಚನಗಳು ,ಶಿಶು ಗೀತೆಗಳು, ಪ್ರಕಟಿಸಿ ಕನ್ನಡ ಸಾಹಿತ್ಯಲೋಕಕ್ಕೆ ಚಿರಪರಿಚಿತರಾಗಿದ್ದಾರೆ . ಸ್ಯಾನಿಟರಿ ಪ್ಯಾಡ್ (ಕಾದಂಬರಿ) , ಬಂಗಾರದ ಹನಿಗಳು (ಕವನ ಸಂಕಲನ ) ಮುಂದೇನಾಯಿತು (ಕಥಾ ಸಂಕಲನ) ಚಿಂಟು ಪಿಂಟು ಮತ್ತು ಮಿಂಚುವಿನ ಸಂಚಲನ (ಮಕ್ಕಳ ಕಾದಂಬರಿ) ಹಾಗೂ ನನ್ನವಳು ನಕ್ಕಾಗ ಗಜಲ್ ಸಂಕಲನ ಹೀಗೆ ವಿವಿಧ ಸಾಹಿತ್ಯದ ಪ್ರಕಾರ ದಲ್ಲಿ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ . ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ ಯುವ ಉತ್ಸಾಹಿ ಲೇಖಕರಾಗಿದ್ದಾರೆ .

ಕಂಸ ವರ ನನ್ನವಳು ನಕ್ಕಾಗ ಪ್ರಥಮ ಗಜಲ್ ಸಂಕಲನ ಪ್ರಕಟಿಸಿ ಗಜಲ್ ಪ್ರೇಮಿಗಳ ಕೈಗೆ ಪ್ರೀತಿಯಿಂದ ನಗುನಗುತ ಇಟ್ಟಿದ್ದಾರೆ. ನನ್ನವಳು ನಕ್ಕಾಗ ಇದು ಇವರ ಮೊದಲ ಗಜಲ್ ಸಂಕಲನವಾಗಿದ್ದು ಗಜಲ್ ರಚನೆಗೆ ಬೇಕಾಗುವ ಎಲ್ಲಾ ನಿಯಮಗಳನ್ನು ಓದಿ ಅರಿತು ತಮ್ಮ ಗಜಲ್ ಗಳಲ್ಲಿ ಮತ್ಲಾ , ಕಾಫಿಯಾ, ರದೀಫ್, ಮಕ್ತಾ, ರವಿ ,ರವೀಶ ,ಕೈದ್ ಮತ್ತು ತಖಲ್ಲೂಸ್ ಗಳನ್ನು ಅರಿತು ಅವುಗಳ ಉಪಯೋಗ ಸರಿಯಾಗಿ ಗಜಲ್ ಗಳಲ್ಲಿ ಮಾಡಿದ್ದಾರೆ .ಕಂಸ ಅವರ ನನ್ನವಳು ನಕ್ಕಾಗ ಗಜಲ್ ಸಂಕಲನದಲ್ಲಿ 74 ಗಜಲ್ ಗಳಿವೆ. ಗಜಲ್ ದಲ್ಲಿ ತಖಲೂಸ್ ನಾಮ (ಕಾವ್ಯನಾಮ) “ಕಂಸ” ಎಂದು ಬಳಸಿದ್ದಾರೆ .ಈ ಸಂಕಲನಕ್ಕೆ ಶ್ರೇಷ್ಠ ಗಜಲ್ ಕಾರರಾದ ಆನಂದ ಭೋವಿ ಅವರು ಅರ್ಥಪೂರ್ಣವಾದ ಮೌಲಿಕ ಮುನ್ನಡಿಯನ್ನು ಬರೆದು ಸಂಕಲನದ ಮೌಲ್ಯ ಹೆಚ್ಚಿಸಿದ್ದಾರೆ . ಇನ್ನೊಬ್ಬ ಶ್ರೇಷ್ಠ ಗಜಲ್ ಕಾರರಾದ ಹಾಗೂ ಕರ್ನಾಟಕದ ಸಾಹಿತ್ಯ ಅಕಾಡೆಮಿ ಸದಸ್ಯರು ಆದ ಡಾ. ಸಿದ್ದರಾಮ ಹೊನ್ಕಲ್ ಅವರು ಚಂದದ ತುಲನಾತ್ಮಕ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ.

ಹಾದಿ ಬೀದಿಯಲ್ಲಿ ಅರಿವಿಲ್ಲದೆ ಅಲೆದಾಡಿದೆ ನನ್ನವಳು ನಕ್ಕಾಗ
ಹಣವಿಲ್ಲದೆ ಅಂಗಡಿಯ ಮಾಲೀಕನ ಹುಡುಕಾಡಿದೆ ನನ್ನವಳು ನಕ್ಕಾಗ

ಕಂಸ ಅವರು ತಮ್ಮ ಮೊದಲ ಗಜಲ್ ಸಂಕಲನದ ಶೀರ್ಷಿಕೆಯಾದ ನನ್ನವಳು ನಕ್ಕಾಗ ಎಂಬುದನ್ನು ಈ ಗಜಲ್ ದ ರದೀಪ್ ಮಾಡಿ ಗಜಲ್ ರಚನೆ ಮಾಡಿದ್ದಾರೆ . ಮನದನ್ನೆ ಬಾಳ ಸಂಗಾತಿ ಒಲವಿನ ನಲ್ಲೆ ನಕ್ಕಾಗ ಮನದಲ್ಲಿ ಹೇಳುವ ಭಾವನೆಗಳನ್ನು ಗಜಲ್ ದಲ್ಲಿ ಸುಂದರವಾಗಿ ವ್ಯಕ್ತಪಡಿಸುತ್ತಾರೆ. ಆತ್ಮಸಂಗಾತಿಯು ಸಂತಸದಿಂದ ನಕ್ಕಾಗ ಯೌವನದ ಮನ ಹುಚ್ಚಾಗಿ ಅಲೆದಾಡುವುದು ಹಿಗ್ಗಿನಲಿ ಹೂವಾಗಿ ಅರಳಿ ಪರಿಮಳ ಸೂಸುವುದು ಸಹಜವಾದ ಕ್ರಿಯೆ, ಅದನ್ನು ಗಜಲ್ ಕಾರರು ಸೊಗಸಾಗಿ ತಮ್ಮ ಗಜಲ್ ದಲ್ಲಿ ಸೆರೆಹಿಡಿದಿದ್ದಾರೆ.

ಸುಂದರಿಯ ತಲೆಯಲ್ಲಿ ಮುಂಗುರುಳಾಗುವ ಆಸೆ
ರೂಪಿಸಿಯ ಕಣ್ಣಿಗೆ ಹಚ್ಚುವ ಕಾಡಿಗೆಯಾಗುವ ಆಸೆ

ಹರೆಯದ ಹುಚ್ಚು ಖೋಡಿ ಮನಸ್ಸು ನೂರು ಆಸೆಗಳನ್ನು ಹೊತ್ತುಕೊಂಡು ಕನಸು ಕಾಣುತ್ತದೆ. ಸುಂದರಿಯ ಮುಂಗುರುಳಾಗುವ ಬಯಕೆ ,ಅವಳ ಕಣ್ಣಿಗೆ ಹಚ್ಚುವ ಕಪ್ಪು ಕಾಡಿಗೆಯಾಗಿ ಹೊಳೆಯುವ ಬಯಕೆ ,ಮಾನಿನಿಯ ತುಟಿಗೆ ಹಚ್ಚುವ ಕೆಂಪು ಬಣ್ಣ ಆಗುವ ಆಸೆ, ಹೀಗೆ ಸಖಿಯ ಉಸಿರಲ್ಲಿ ದೇಹದಲ್ಲಿ ಬೆರೆತು ಒಂದಾಗಿ ನಲಿಯುವ ಆಸೆಗಳನ್ನು ಗಜಲ್ ಕಾರರು ರಸಿಕತೆಯಿಂದ ವಿವಿಧ ರೂಪಗಳೊಂದಿಗೆ ಮನದ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಸುಂದರ ವದನೆ ಕನಸಿನ ರಾಣಿ ನನ್ನಾಕೆಯ ನಾನು ಹುಡುಕತಲಿರುವೆ
ದುಂಬಿಗಳಂತೆ ಮುಂಗುರುಳಿರುವ ನಲ್ಲೆಯ ನಾನು ಹುಡುಕುತಲಿರುವೆ

ಯೌವನದಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನ ಬಾಳ ಸಂಗಾತಿ ಸುಂದರವಾಗಿರಬೇಕೆಂದು ಅವಳು/ ಅವನು ಹೇಗಿರಬೇಕೆಂದು ಕನಸು ಕಾಣುವುದು ಸಹಜವಾದದ್ದು. ಗಜಲ್ ಕಾರರು ಅಂತ ಕನಸು ಕಂಡಿದ್ದನ್ನು ಗಜಲ್ ದಲ್ಲಿ ವ್ಯಕ್ತಪಡಿಸಿದ್ದಾರೆ .‌ತಮ್ಮ ಕನಸಿನ ರಾಣಿ ತಾವು ಚಿತ್ರಿಸಿಕೊಂಡ ಸುಂದರ ವದನೆಯನ್ನು ಹುಡುಕುತ್ತಿದ್ದಾರೆ .ಜೋತಾಡುವ ಮುಂಗುರುಳಿನ ಚೆಲುವೆ , ಕಾಮನ ಬಿಲ್ಲಿನಂತೆ ಬಾಗಿದ ಹುಬ್ಬಿನ ಬೆಡಗಿ, ಗುಳಿಕೆನ್ನೆಯ ಚಂದ್ರಮುಖಿ , ನಕ್ಕಾಗ ನಕ್ಷತ್ರದಂತೆ ಹೊಳೆಯುವ ಕಣ್ಣಿನ ಚೆಲುವೆ, ತೊಂಡೆ ಹಣ್ಣಿನಂತೆ ಕೆಂಪು ಅಧರದ‌‌ ಒಡತಿ ,ಬಳ್ಳಿಯಂತೆ ಬಳಕುವ ನಾಟ್ಯ ಮಯೂರಿಯನ್ನು ಹುಡುಕುತ್ತಾ ಅಲೆಯುತ್ತಿದ್ದಾರೆ ನಮ್ಮ ರಸಿಕ ಗಜಲ್ ಕಾರರು.ಸುಂದರವಾದ ರೂಪಕಗಳಿಂದ ಗಜಲ್ ರಚಿಸಿದ್ದಾರೆ.

ಸಾಗರದ ಬಂಗಾರದ ಹನಿಯಂತೆ ಮುದ್ದಿನ ಮಗಳು
ವಜ್ರದ ಗಣಿಯಲಿ ಪುಟ್ಟ ಹರಳಂತೆ ಮುದ್ದಿನ ಮಗಳು

ರಸಿಕ ಗಜಲ್ ಕಾರರು ಕಂಸ ಅವರು ತಮ್ಮ ನಲ್ಲೆಯನ್ನು ವರ್ಣಿಸುತ್ತಾ ಅವಳನ್ನು ಹುಡುಕುವುದಲ್ಲದೆ ತಮ್ಮ ಮುದ್ದಿನ ಮಗಳ ವರ್ಣನೆಯನ್ನು ಸೊಗಸಾಗಿ ಮಾಡಿದ್ದಾರೆ. ಸಾವಗರದಲ್ಲಿ ಹೊಳೆಯುವ ಬಂಗಾರದ ಹನಿಯಂತ ಅವಳು ನನ್ನ ಮುದ್ದು ಮಗಳು , ವಜ್ರದ ಹರಳಿನಂತೆ ಹೊಳೆಯುವ ಕಣ್ಣಿನ ಕಣ್ಮಣಿ ನನ್ನ ಮುದ್ದಿನ ಮಗಳು, ಹೊಳೆವ ದಂತ ಪಂಕ್ತಿಯವಳು , ಕನಸಿನಲ್ಲಿ ಬಂದು ನನಸಾಗುವವಳು ಎಂದು ಅನೇಕ ರೂಪಕಗಳೊಂದಿಗೆ ಮುದ್ದಿನ ಮಗಳನ್ನು ವರ್ಣಿಸಿದ್ದಾರೆ ಈ ಗಜದಲ್ಲಿ.

ಬೇಸಿಗೆಯ ಬಿಸಿಲ ಬೇಗೆ ತಣಿಸುವ ಕೊಡೆಯಾಗುವೆಯಾ
ಚಿಟಪಟ ಮಳೆ ಹನಿಯ ಅಡಗಿಸುವ ಕೊಡೆಯಾಗುವೆಯಾ

ಗಜಲ್ ಕಾರು ಒಲಿದು ಬಂದ ಬಾಳ ಸಂಗಾತಿಯಾದ ನಲ್ಲೆಗೆ ನನ್ನ ಬಾಳಿನಲ್ಲಿ ಬರುವ ಸುಖ ದುಃಖ, ಕಷ್ಟ ನೋವು ,ಬಿರುಗಾಳಿಗೆ ಆಸರೆಯಾಗಿ ನನ್ನ ಜೊತೆ ಇರುತ್ತೀಯ ಎಂದು ಕೇಳುವ ಭಾವನೆಯ ಗಜಲ್ ಇದಾಗಿದೆ .ಬಿಸಿಲು ಮಳೆ ಚಳಿ ತಗಲದಂತೆ ನೀನು ನನಗೆ ಕೊಡೆಯಾಗಿ ರಕ್ಷಿಸುವೆಯ ಎಂದು ಬಾಳ ಸಂಗಾತಿಯಿಂದ ಭರವಸೆಯನ್ನು ಪಡೆಯುವ ಗಜಲ್ ಇದಾಗಿದೆ. ಸುಂದರವಾದ ರೂಪಕಗಳನ್ನು ಬಳಸಿ ಭರವಸೆಯನ್ನು ಗಜಲ್ ದಲ್ಲಿ ತೋರಿಸಿದ್ದಾರೆ.

ಮೇಲು ಕೀಳೆಂದು ಸದಾ ಹುಡುಕುವುದು ಜಾತಿ
ಆಚಾರ ವಿಚಾರಗಳೆಂದು ನೋಡುವುದು ನೀತಿ

ಇದು ಒಂದು ಸಾಮಾಜಿಕ ಕಳಕಳಿಯ ಗಜಲ್ ಆಗಿದೆ ನಮ್ಮ ದೇಶದಲ್ಲಿ ಜಾತಿ ಪದ್ಧತಿ ಯುಗ ಯುಗಳಿಂದ ಸಾಗಿ ಬಂದಿದೆ ಜಾತಿಯಿಂದಲೇ ಮನುಷ್ಯನ ಮೇಲು ಕೀಳು ಎಂದು ಅಳೆಯುತ್ತಾರೆ. ಪ್ರತಿಯೊಂದು ಜಾತಿಯಲ್ಲಿ ಆಚಾರ ವಿಚಾರಗಳು ಬೇರೆ ಆಗಿರುತ್ತವೆ ಎಂದು ಹೇಳುತ್ತಾರೆ ಗಜಲ್ ಕಾರರು. ಸಮಾಜದಲ್ಲಿ ಸಮಾನತೆ ಅಳಿಸಿ ಹೋಗಿ ಎಲ್ಲಡೆಯಲ್ಲಿಯೂ ಭೇದ ಭಾವ ಉಂಟಾಗಿದೆ ಸಮಾಜದಲ್ಲಿ ಮೋಸ ವಂಚನೆ ಹೆಚ್ಚಾಗಿದೆ ಎಂದು ಗಜಲ್ಕಾರರು ಹೇಳುತ್ತಾರೆ.

ಶೈಶವದಲ್ಲಿ ಜೊತೆ ಗೂಡಿ ಆಡಿದರೂ ಪ್ರೀತಿ ಅರಿಯಲಿಲ್ಲ ನಾವು
ಎದುರು ಬದಿರು ಮನೆಯಲ್ಲಿದ್ದರೂ ಸ್ನೇಹ ಬಯಸಲಿಲ್ಲ ನಾವು

ಇದು ಒಂದು ಬಾಲ್ಯವನ್ನು ನೆನೆಪಿಸುವ ಸುಧೀರ್ಘವಾದ 12 ದ್ವಿಪದಿಗಳು ಇರುವ ಗಜಲ್ ಆಗಿದೆ, ಹೆಣ್ಣು ಗಂಡು ಎಂಬ ಭೇದವಿಲ್ಲದೆ ಒಟ್ಟಿಗೆ ಆಡುವ ಮಕ್ಕಳ ಮನದಲ್ಲಿ ಪ್ರೀತಿ ಪ್ರೇಮ ಭಾವ ಇರುವದಿಲ್ಲ . ಯೌವನದಲ್ಲಿ ವಯಸ್ಸಿಗೆ ತಕ್ಕಂತೆ ಸಹಜವಾದ ಪ್ರೀತಿ ಪ್ರೇಮ ಭಾವ ಹುಟ್ಟಿಕೊಂಡು ಕನಸು ಕಾಣುತ್ತಾ ಬಾಳುತ್ತಾರೆ ಹರೆಯದ ಜೀವಿಗಳು ,ಮುಂದೆ ಕೆಲವರು ಬಾಲ್ಯದ ಗೆಳೆಯರು ಪ್ರೀತಿಯ ಸುಳಿಯಲ್ಲಿ ಸಿಲುಕಿ ಕೊನೆಗೆ ಮದುವೆಯಾಗಿ ನೆಮ್ಮದಿ ಜೀವನವನ್ನು ಸಾಗಿಸಿದರೆ ಇನ್ನು ಕೆಲವರು ಬಾಲ್ಯದ ದಿನಗಳನ್ನುಮರೆತು ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾರೆ.

ಕಂಸ ಅವರ ಮೊದಲ ಗಜಲ್ ಸಂಕಲನ ನನ್ನವಳು ನಕ್ಕಾಗ ಸಂಕಲನದ ಗಜಲ್ ಗಳು ಓದಿಸಿಕೊಂಡು ಹೋಗುತ್ತವೆ. ಕೆಲವು ಗಜಲ್ ಗಳು ಚಿಂತನೆಗೆ ಹಚ್ಚುತ್ತವೆ.‌ ಈ ಸಂಕಲನ ಹೆಚ್ಚಿನ ಗಜಲ್ ಗಳು ಯೌವನದ ಮನದಲ್ಲಿ ಮೂಡುವ ಕನಸುಗಳು . ಗಜಲ್ ಸ್ಥಾಯಿಗುಣವಾದ ಪ್ರೀತಿ, ಪ್ರೇಮ ,ವಿರಹದ ,ಗಜಲ್ ಗಳೇ ಇವೆ .ಛೋಟಿ ಬೆಹರ್ ,ಮಧ್ಯಮ ಬೆಹರ್, ಬಡೀ ಬೆಹರ್, ಗಜಲ್ ಗಳಿದ್ದು 5, 6 ,7 12 ,ದ್ವಿಪದಿ ಗಳಲ್ಲಿ ಗಜಲ್ ಗಳಿವೆ, ಜುಲ್ ಕಾಫಿಯ ಗಜಲ್ , ತರಹೀಗಳು ಗಜಲ್ ಗಳು ಸಹ ಇವೆ . ಇವರು ಸರ್ವಜ್ಞನ ವಚನವನ್ನು ಗಜಲ್ ಗೆ ಪರಿವರ್ತಿಸಿದ್ದಾರೆ .ಆದರೆ ನನ್ನ ದೃಷ್ಟಿಯಲ್ಲಿ ಈ ಪದ್ಧತಿಯ ಗಜಲ್ ಸಾಹಿತ್ಯಕ್ಕೆ ಒಗ್ಗುವುದಿಲ್ಲ ವೆಂದು ಅನಿಸುತ್ತದೆ ಇದು ನನ್ನ ವೈಯಕ್ತಿಕ ವಿಚಾರ ,ಉಳಿದಂತೆ ಗಜಲ್ ಗಳಿಗೆ ಇನ್ನೂ ತೀವ್ರತೆ ಭಾವ ಬರಬೇಕಾಗಿತ್ತು ಎಂದು ಓದುಗರಿಗೆ ಅನಿಸುತ್ತದೆ . ಇದು ಇವರ ಮೊದಲ ಗಜಲ್ ಸಂಕಲನವಾಗಿದ್ದು ಈ ರೀತಿ ಆಗುವುದು ಸಹಜ ಮುಂದಿನ ಗಜಲ್ ಸಂಕಲನದಲ್ಲಿ ಭಾವ ತೀವ್ರತೆಯನ್ನು ಗೇಯತೆ ಲಯದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಾರೆಂಬ ಭರವಸೆಯೊಂದಿಗೆ ನನ್ನ ಬರಹಕ್ಕೆ ವಿರಾಮ ಕೊಡುವೆ.‌


Leave a Reply

Back To Top