
ಅಂಕಣ ಸಂಗಾತಿ
ಚಿಂತನೆಯ ಚಿಟ್ಟೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಸಾಮಾಜಿಕ ಜವಬ್ದಾರಿಯಿಲ್ಲದ
ಮನುಷ್ಯನ ಸ್ವಾರ್ಥದ ಬೀಡು

ಅವರು ರಾಜ್ಯದ ಅತ್ಯಂತ ಪ್ರಮುಖ ಹುದ್ದೆಯಲ್ಲಿದ್ದು ಆದರೆ ಸಾಮಾಜಿಕ ಜವಾಬ್ದಾರಿ ಇಲ್ಲದ ವ್ಯಕ್ತಿಯಾಗಿ ಬೇಕಾಬಿಟ್ಟಿ ಹೇಳಿಕೆಗಳನ್ನು ಕೊಡುತ್ತಾ ತಮಗಿಂತಲೂ ಸಣ್ಣ ಸಣ್ಣ ಸಮಾಜವನ್ನು ಲೆಕ್ಕಕ್ಕಿಲ್ಲದಂತೆ ಭಾವಿಸಿಕೊಂಡಿದ್ದಾರೆ.
ಇಲ್ಲಿ ಇನ್ನೊಬ್ಬರಿದ್ದಾರೆ, ಅವರು ಮತ್ತೆ ಮತ್ತೆ ಶ್ರೀಮಂತರನ್ನು ಶ್ರೀಮಂತರು ಮಾಡಲು ಏನೇನು ಬೇಕು ಅವುಗಳನ್ನೆಲ್ಲವನ್ನು ಮಾಡುತ್ತಿದ್ದಾರೆ…
ಈ ಮೇಲಿನ ಎರಡು ಸನ್ನಿವೇಶಗಳು, ಸಮಾಜ ಹಾಗೂ ಸಾಮಾಜಿಕ ವ್ಯವಸ್ಥೆಯೊಳಗೆ ಉಳ್ಳವರು ಇಲ್ಲದವರ ನಡುವೆ ಇನ್ನಷ್ಟು ಕಂದಕ ಸೃಷ್ಟಿಯಾಗಲು ಕಾರಣವಾಗುತ್ತದೆ. ಒಂದು ಸಮಾಜ ಎಂದರೆ 12ನೇ ಶತಮಾನದ ಜಗಜ್ಯೋತಿ ಅಣ್ಣ ಬಸವಣ್ಣನ ಸಮ ಸಮಾಜದ ಪರಿಕಲ್ಪನೆ ಇಲ್ಲದ ಅನೇಕ ನಮ್ಮ ನಾಯಕರು ಉಂಡವರನ್ನೇ ಮತ್ತಷ್ಟು ಊಟ ಮಾಡಿಸಲು ನೋಡುತ್ತಿದ್ದಾರೆ. ಶರಣ ಸಂಸ್ಕೃತಿಯ ನಿಜತತ್ವ ‘ಕಾಯಕ – ದಾಸೋಹ’ ಇವೆರಡೂ ಪ್ರತಿಯೊಬ್ಬರಲ್ಲಿಯೂ ಇರಬೇಕಾದ ಮಹತ್ವದ ಸಂಗತಿ. ಕಾಯಕ ದಾಸೋಹಕ್ಕೂ ಈ ಮೇಲಿನ ಸಾಮಾಜಿಕ ವ್ಯವಸ್ಥೆಯೊಡನೆ ತುಂಬಾ ನಂಟಿದೆ.
ಹಿಂದಿನಿಂದಲೂ ಶ್ರಮವಹಿಸಿ ದುಡಿಯುವ ಕಾಯಕ ವರ್ಗಗಳು ಇವತ್ತು ಅನೇಕ ಸಮಸ್ಯೆಗಳನ್ನು ಎದುರಿಸುತ್ತವೆ. ಜಾಗತೀಕರಣ ಮತ್ತು ತಾಂತ್ರಿಕ ಯಾಂತ್ರೀಕರಣದ ಕಾರಣದಿಂದಾಗಿ ನೆಲ ಮೂಲದ ವೃತ್ತಿಗಳಿಗೆ ತುಂಬಾ ಪೆಟ್ಟು ಬಿದ್ದಿದೆ. ಈ ವೃತ್ತಿಗಳು ಅಳಿವಿನ ಅಂಚಿನಲ್ಲಿವೆ. ಕುಂಬಾರ ಮಡಿಕೆ ಮಾಡಿದರು ಕೊಳ್ಳುವವರು ಇಲ್ಲ. ಕಮ್ಮಾರ ನೇಗಿಲು ಸಿದ್ಧತೆ ಮಾಡಿದರು ತೆಗೆದುಕೊಳ್ಳುವವರಿಲ್ಲ. ಚಮ್ಮಾರ ಮಾಡುವ ಚಪ್ಪಲಿಯನ್ನು ಯಾರು ತಾನೆ ತೆಗೆದುಕೊಳ್ಳುತ್ತಾರೆ..? ನೇಕಾರನ ಬಟ್ಟೆಯು ಯಂತ್ರಗಳ ಬಾಯಿಗೆ ಬಲಿಯಾಗಿದೆ, ಮಡಿವಾಳ ಮಾಡುವ ಕಾಯಕ ಇಂದು ವಾಷಿಂಗ್ ಮಷೀನ್ ಎಂಬ ಯಂತ್ರ ನುಂಗಿಕೊಂಡು ಕುಳಿತಿದೆ. ಇನ್ನು ಸಮಾಜ ಸೇವೆ ಮಾಡುವ ಪೌರಕಾರ್ಮಿಕರ ಪರಿಸ್ಥಿತಿ ಹೇಳುತಿರದಾಗಿದೆ. ಪತ್ತಾರಿಕೆ, ಬಡತನ, ಕ್ಷೌರಿಕ ಕಾಯಕ.. ಇಷ್ಟೆಲ್ಲಾ ಕಾಯಕ ಜೀವಿಗಳು ಸಮಾಜಕ್ಕಾಗಿ ತಮ್ಮನ್ನು ತಾವು ತೆರೆದುಕೊಂಡು ಕಾಯಕದಲ್ಲಿ ಬದುಕನ್ನು ಕಂಡುಕೊಳ್ಳುವ ಅವರ ಮುಂದಿನ ಪೀಳಿಗೆಯು ತುಂಬಾ ಸಂಕಷ್ಟದಲ್ಲಿ ಸಿಲುಕುವಂತೆ ವ್ಯವಸ್ಥೆ ಮಾಡಿದೆ. ಪರಿಪೂರ್ಣ ವಿದ್ಯೆಯಿಲ್ಲದ ಅದೆಷ್ಟು ನಮ್ಮ ಯುವಕರು ಕುಲಕಸುಬು ಮಾಡಲಾಗದೆ, ಇತ್ತ ನೌಕರಿ ಸಿಗದೆ, ಕೌಶಲ್ಯಾಧಾರಿತ ವೃತ್ತಿಗಳಿದ್ದರೂ ಕೂಡ ಅವು ಹಾವು ಏಣಿ ಆಟದಂತಿರುವ ವ್ಯಾಪಾರದ ಮಾರುಕಟ್ಟೆಯಲ್ಲಿ ಅನೇಕ ಸಂಕಷ್ಟವನ್ನು ಎದುರಿಸುತ್ತಿವೆ.
ದೊಡ್ಡ ದೊಡ್ಡ ಯಂತ್ರಗಳು, ಆನ್ಲೈನ್ ಮಾರುಕಟ್ಟೆ, ಆನ್ಲೈನ್ ಬ್ಯಾಂಕಿಂಗ್, ಡೋರ್ ಡೆಲಿವರಿ…. ಎಷ್ಟೊಂದು ಸೌಲಭ್ಯಗಳು ಇಂದು..! ಇಂತಹ ಸಮಯದಲ್ಲಿ ಕಾಯಕ ಸಮಾಜಗಳು ಜೀವಿಸುವುದಾದರೂ ಹೇಗೆ..? ಅವರು ಹೊಸತನಕ್ಕೆ ತೆರೆದುಕೊಳ್ಳದೆ ಹೋದರೆ ಪರಿಣಾಮ ತುಂಬಾ ಗಂಭೀರವಾದೀತು..!
ಇಂತಹ ಸಂದರ್ಭದಲ್ಲಿ ಅವರಿಗೆ ಹಿರಿಯಣ್ಣನಂತಹ ಅನೇಕ ಸಮಾಜಗಳು ಪ್ರೀತಿಯಿಂದ ಮಾತನಾಡಿಸುವ, ಧೈರ್ಯದಿಂದ ಬೆನ್ನು ಚಪ್ಪರಿಸುವ, ” ನಾವಿದ್ದೇವೆ ಎಂದು ಕೈ ಹಿಡಿದು ಮೇಲೆತ್ತುವ..” ಸಮ ಸಮಾಕಕ್ಕಾಗಿ ಏನು ಬೇಕೋ ಅದೆಲ್ಲವನ್ನು ಪ್ರೀತಿಯಿಂದ ಧಾರೆಯೆರೆಯುವ ದೊಡ್ಡತನ ಎಲ್ಲಿದೆ…? ದೊಡ್ಡ ದೊಡ್ಡ ಸಮಾಜದಲ್ಲಿಯೂ ಕೂಡ ಕಡು ಬಡವರಿದ್ದಾರೆ. ನಿಜ ಅವರನ್ನು ಮೇಲೆತ್ತಬೇಕಾದ ಜವಾಬ್ದಾರಿ ನಾಗರಿಕ ಸಮಾಜಗಳ ಮೇಲಿದೆ.
ಹಾಗಂತ ಸೌಲತ್ತುಗಳನ್ನು ಪಡೆದುಕೊಂಡವರೇ ಮತ್ತೆ ಮತ್ತೆ ಸೌಲತ್ತುಗಳನ್ನು ಪಡೆಯುತ್ತ ಹೋದರೆ..? ಅತ್ಯಂತ ಸಣ್ಣ ಸಣ್ಣ ವೃತ್ತಿಯಾದರಿತ ಸಮಾಜಗಳ ಪಾಡೇನು..?
ಒಂದು ಸಲ ಯೋಚಿಸಬಾರದೆ. ವೈಜ್ಞಾನಿಕವಾಗಿ ಇವತ್ತು ಕುಲಕಸಬಿನಲ್ಲಿ ನಯನಜೂಕು ತರಬೇಕಾಗಿದೆ. ಹೊಸ ಹೊಸ ಸಂಶೋಧನೆಯ ನಾವಿನ್ಯತೆ ಪಡೆದುಕೊಳ್ಳಬೇಕಾಗಿದೆ. ಅಂತಹ ಕೌಶಲ್ಯಾಧಾರಿತ ತರಬೇತಿಗಳನ್ನು ಆ ಯುವಕರಿಗೆ ಕೊಡುವುದು. ಉದ್ಯೋಗಕ್ಕೆ ಬೇಕಾದ ಬಂಡವಾಳವನ್ನು ಒದಗಿಸುವುದು. ದೊಡ್ಡ ಸಮಾಜಗಳಂತೆ ಅವರನ್ನು ಮುಖ್ಯವಾಹಿನಿಗೆ ತರುವ ಸರ್ಕಾರಗಳ ನ್ಯಾಯೋಚಿತ ನಿರ್ಧಾರಗಳನ್ನು ಪ್ರೀತಿಯಿಂದ ಸ್ವಾಗತಿಸುವ, ದೊಡ್ಡ ಮನಸ್ಸು ನಮ್ಮಲ್ಲಿ ಬರುವದಾದರು ಯಾವಾಗ..?
ಒಂದು ಕುಟುಂಬದಲ್ಲಿ ಬಲಿಷ್ಠಗೊಂಡ ಹಿರಿಯಣ್ಣ ಮತ್ತೆ ಮತ್ತೆ ಅವನೇ ಬಲಿಷ್ಠಗೊಂಡರೆ ಹೇಗೆ..? ಅದೇ ಕುಟುಂಬದಲ್ಲಿರುವ ಕೃಷಕವಾಗಿರುವ ವ್ಯಕ್ತಿಯನ್ನು ಬಲಿಷ್ಠ ಗೊಳಿಸಬಾರದೆ..? ಇಂತಹ ಸಾಮಾನ್ಯ ಜ್ಞಾನ ಬರಬೇಕಾಗಿರುವ ತುರ್ತು ಅಗತ್ಯ.
ಕಾಯಕ ಸಮಾಜಗಳನ್ನು ಪ್ರೀತಿಯಿಂದ ಅಪ್ಪಿ ಒಪ್ಪಿಕೊಂಡಿದ್ದ ಬಸವಣ್ಣ. ಇವತ್ತು ಕಾಯಕ ಸಮಾಜಗಳು ಅನಾಥವಾಗಿವೆ ಎನ್ನಬಹುದು. ಕೇವಲ ಅಂಕಿ ಸಂಖ್ಯೆಗೆ ಅವರನ್ನು ಬಳಸಿಕೊಳ್ಳದೆ, ಅವರನ್ನು ಮುಖ್ಯವಾಹಿನಿಗೆ ತರಲು ನಮ್ಮ ಪಾತ್ರವೇನು..? ಅವರಿಗೆ ನಾವು ಯಾವ ರೀತಿಯಲ್ಲಿ ಸಹಾಯ ಮಾಡಬಹುದು..? ನಮ್ಮೊಂದಿಗೆ ಅವರನ್ನು ಯಾವ ರೀತಿಯಲ್ಲಿ ಕರೆದುಕೊಂಡು ಹೋಗಬೇಕು..? ನಾವು ಅವರಿಗಾಗಿ ಯಾವ ರೀತಿ ಪರಿಶ್ರಮ ಪಡಬೇಕು..? ಎಂಬ ಪ್ರಶ್ನೆಗಳನ್ನು ಹಾಕಿಕೊಂಡಾಗ ಮಾತ್ರ ಸಾರ್ಥಕವೆನಿಸುತ್ತದೆ. ಮುಖ್ಯವಾಗಿ ಶಿಕ್ಷಣ, ನೈತಿಕ ಬೆಂಬಲವನ್ನು ವ್ಯಕ್ತಪಡಿಸಿ, “ನಿಮ್ಮೊಂದಿಗೆ ನಾವಿದ್ದೇವೆ” ಎನ್ನುವ ಭರವಸೆ ಮೂಡಿಸಬೇಕಾಗಿದೆ. ಇಲ್ಲದೆ ಹೋದರೆ ಸಂಘಟಿತ ಸಮಾಜದಲ್ಲಿದ್ದರೂ “ನಾವು ಅನಾಥರು” ಎನ್ನುವ ಅನಾಥಭಾವ ಅವರಲ್ಲಿ ಮೂಡುತ್ತದೆ.
ಡಾ. ಬಿ. ಆರ್. ಅಂಬೇಡ್ಕರ್ ಅವರ ಆಶಯ,
“ಈ ಸಮಾಜದಲ್ಲಿ ಯಾರು ಅಸಹಾಯಕರೋ, ಸೌಲಭ್ಯಗಳಿಂದ ವಂಚಿತರೋ, ಯಾರು ಶೋಷಣೆಗೆ ಮತ್ತು ತುಳಿತಕ್ಕೆ ಒಳಗಾದವರೋ ಅವರನ್ನು ಮೇಲೆತ್ತದೆ ಹೋದರೆ ಈ ಸಮಾಜ ಎಂದಿಗೂ ಅಭಿವೃದ್ದಿಯಾಗಲು ಸಾಧ್ಯವಿಲ್ಲ. ಆರ್ಥಿಕವಾಗಿ, ಸಮಾಜಿಕವಾಗಿ, ಶೈಕ್ಷಣಿಕವಾಗಿ ಸರ್ವರ ಅಭಿವೃದ್ದಿಯಾದಗಲೇ ಈ ದೇಶ ಅಭಿವೃದ್ಧಿಯಾದಂತೆ..” ಎನ್ನುತ್ತಾರೆ ಅವರು.
ಇಂತಹ ಸಮಸಮಾಜ ನಿರ್ಮಾಣ ಮಾಡುವಲ್ಲಿ ಸಮಾಜದಲ್ಲಿರುವ ನಾವು ಬಹು ಎಚ್ಚರಿಕೆಯಿಂದ ನಮ್ಮ ನಡವಳಿಕೆಗಳನ್ನು ರೂಢಿಸಿಕೊಳ್ಳಬೇಕು. ಇಲ್ಲದೆ ಹೋದರೆ ಮುಂದಿನ ಪೀಳಿಗೆ ನಮ್ಮನ್ನು ಎಂದಿಗೂ ಕ್ಷಮಿಸಲಾರದು. ನಮ್ಮ ಸಂವಿಧಾನ ನೀಡುತ್ತಿರುವ ಮೀಸಲಾತಿ ಸಾಮಾಜಿಕವಾಗಿ ಶೋಷಣೆಗೆ ಒಳಗಾದ ಅಲ್ಲದೆ ತಲ ತಲಾಂತರದಿಂದ ನೋವುಗಳನ್ನು ತಮ್ಮ ಒಡಲಲ್ಲಿಟ್ಟುಕೊಂಡು ಇಂದಿನ ಆಧುನಿಕ ಸಮಾಜದಲ್ಲಿಯೂ ಕೂಡ ಎಲ್ಲರ ನಡುವೆ ಇದ್ದರೂ ಇಲ್ಲದಂತೆ ಬದುಕುವ ಅಮಾಯಕ ಸಮುದಾಯಗಳನ್ನು ಮಾತ್ರ ದೃಷ್ಟಿಕರಿಸಿದೆ. ಆದರೆ ಪ್ರಗತಿಪರ ಹೊಂದಿದ ಸಮುದಾಯಗಳು ಮೇಲೆತ್ತಬೇಕಾದ ಅನಿವಾರ್ಯತೆಯಿದೆ. ನಾನು ಊಟ ಮಾಡುವುದರ ಜೊತೆಗೆ ಹಸಿವಿನಿಂದ ಬಳಲುವವರಿಗೆ ತುತ್ತು ಅನ್ನ ಕೊಡದೆ ಹೋಗುವ ಈ ದುಷ್ಟ ವ್ಯವಸ್ಥೆಗೆ ಯಾರೂ ಬಲಿಯಾಗಬಾರದು. ಆದರ್ಶ ಸಮ ಸಮಾಜ ನಿರ್ಮಾಣವಾಗಬೇಕೆಂದರೆ “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎನ್ನುವ ತತ್ವ ಜಾರಿಗೆ ಬರಬೇಕು. ಅಂದಾಗ ಮಾತ್ರ ಪ್ರಜಾಸತ್ತಾತ್ಮಕ ಜಾತ್ಯಾತೀತ ಸಮಾಜವಾದಿ ಆಡಳಿತದ ಭಾರತದಲ್ಲಿ ಅಣ್ಣ ಬಸವಣ್ಣನ ಸಮ ಸಮಾಜದ ಕನಸಿನ ಕಡೆಗೆ ಒಂದು ದಿಟ್ಟ ಹೆಜ್ಜೆಯಿಟ್ಟಂತಾಗುತ್ತದೆ. ಅಣ್ಣ ಬಸವಣ್ಣನ ಆಶಯಗಳನ್ನು ಈಡೇರಿಸಬೇಕು. ಆದರೆ ನಾವು ಎಷ್ಟೇ ಬಸವಣ್ಣನನ್ನು ಆರಾಧಿಸಿದರೂ.. ವ್ಯರ್ಥವಾಗುತ್ತದೆ.
“ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ…”ಎಂದು ತಾಯ್ತನವ ಮೆರೆಯಬೇಕಾಗಿದೆ. ಜನಪ್ರತಿನಿಧಿಗಳಾದವರು, ಅಧಿಕಾರಿ ವರ್ಗದವರು, ಉನ್ನತ ಸ್ಥಾನದಲ್ಲಿರುವವರು ಸಮಾಜದಲ್ಲಿ ಸಾರ್ವಜನಿಕವಾಗಿ ಮಾತನಾಡಬೇಕಾದಾಗ ಸಾಮಾಜಿಕ ಜವಾಬ್ದಾರಿಯಿಂದ ಮಾತನಾಡಬೇಕು. ಇಲ್ಲದೆ ಹೋದರೆ ಮನುಷ್ಯ ಸ್ವಾರ್ಥದ ಬೀಡಾಗುತ್ತಾನೆ. ಮತ್ತೆ ಮತ್ತೆ ನನ್ನದು ನನಗೆ ನನಗೆ ಇರಲಿ ಎನ್ನುವ ಸಂಕುಚಿತ ಭಾವ ಮೊಳಕೆಯೊಡೆಯುತ್ತದೆ. ಮೊಳಕೆಯೊಡೆದು ಹೆಮ್ಮರವಾಗುತ್ತದೆ. ಹೆಮ್ಮರವಾಗುವ ಮುನ್ನ ಪ್ರೀತಿ, ತ್ಯಾಗ, ಕರುಣೆ ಮನುಷ್ಯತ್ವವನ್ನು ಮೆರೆದು, ಹಂಚಿ ತಿನ್ನುವ ದಾಸೋಹ ಪರಂಪರೆ ಈ ನಾಡಿನಲ್ಲಿ ಕಾಯಕ ತತ್ವದೊಂದಿಗೆ ಸದಾ ಬೆಳಗಲೆಂದು ಬಯಸೋಣ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
