ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು

ಮುಂಗಾರಿನ ಮಳೆಯು
ಬರೀ ಆರ್ಭಟವಂತೆ,
ಕಾದ ಹಂಚಿನ ಮೇಲೆ
ನೀರು ಸಿಡಿಸಿದಂತೆ.
ತ್ವೈದ ಬಿಸಿ ಮಣ್ಣಿನ
ಹಿತವಾದ ವಾಸನೆ,
ತಂಗಾಳಿ ಹೇಳುತಿದೆ
“ಎಲ್ಲೋ ಮಳೆಯಾಗಿದೆ”.
ಹಾತೊರೆದ ನೆಲಕೆ
ತೊರೆ ಬಿಚ್ಚಿದ ಮೋಡ,
ಪನ್ನೀರ ಸಿಂಪರಣೆ
ಘಮಿಸುವ ಧರಣಿ.
ಬಿಸಿಯಾಗಿದೆ ಇಳೆ
ಬಯಸುತಿದೆ ಮಳೆ,
ಸುರಿದ ಮಳೆ ಹನಿ
ಅರಳಿದ ಅವನಿ.
ಅವನಿಯ ತೃಷೆಯ
ತಣಿಸಿ ಮಳೆರಾಯ,
ಬೀಜದ ಬಿತ್ತನೆಗೆ
ಕೇಳಿದ ಒಪ್ಪಿಗೆಯ.
ಬಾಯಾರಿದ ಧರೆಯ
ದಾಹವ ತಣಿಸಲು.
ಅರಳಿತು ಧರಣಿ
ಬೀಜ ಸ್ವೀಕರಿಸಲು.
ವ್ಯಾಸ ಜೋಶಿ
