ಎ.ಎನ್.ರಮೇಶ್.ಗುಬ್ಬಿಯವರ ಪಂಚ ಪಂಚುಗಳು…

1. ಪರಿಪಾಟಲು.!

ಇಂದಿನ ಹುಡುಗಿಯರಿಗೇಕೋ
ಬೇಡವೇ ಬೇಡಂತೆ ಮದುವೆ.!
ಬ್ರಹ್ಮಚಾರಿ ಬದುಕಿನ ಗೊಡವೆ
ಸಾಕಾಗಿ ಹುಡುಗರು ಹೂಡಿಹರು
ಆ ದೇವರ ಮೇಲೆಯೇ ದಾವೆ.!

******

2. ಸ್ವಯಂಕೃತ.!

ಬೇಡ ಬೇಡವೆಂದು ಅಂದು
ಹೊಸಕಿದರು ಹೆಣ್ಣು ಭ್ರೂಣ
ಬೇಕು ಬೇಕೆಂದರೂ ಇಂದು
ಸಿಗುತಿಲ್ಲ ಮನೆ ಗಂಡುಗಳಿಗೆ
ಒಂದೇ ಒಂದು ಹೆಣ್ಣು ಕಾಣ.!

*******

3. ವಧುವಿನ ಷರತ್ತುಗಳು

ಇರಬೇಕು ವರಮಾನದ ಭಾರಿ ಪ್ಯಾಕೇಜು
ಇರಬಾರದು ಅಪ್ಪ-ಅಮ್ಮನೆಂಬ ಲಗೇಜು
ಸ್ವಂತ ಮನೆಯಿರಬೇಕು ಸಿಟಿ ಆಜುಬಾಜು
ಮಾಡಿಸಬೇಕು ವಾರಾಂತ್ಯಕೆ ಮಸ್ತಿಮೋಜು
ಇಷ್ಟಿದ್ದರೆ ಮಾಡಿಕೊಳ್ಳುವೆ ನಿನ್ನ ಮ್ಯಾರೇಜು.!

*****

4. ಬರಗಾಲ

ಈಗೀಗ ವಧು-ವರ ವಿನಿಮಯಯ ಕೇಂದ್ರ
ಆಗಿಹುದು ಬಿಕರಿಯಾಗದ ವರಗಳದ್ದೇ ಚತ್ರ
ನಿತ್ಯವೂ ನಡೆದರೂ ಅದೆಷ್ಟೆಷ್ಟೇ ಸ್ವಯಂವರ
ವಧುಗಳು ಹಿಡಿಯುತಲೇ ಇಲ್ಲ ವರಗಳ ಕರ
ಹೆಣ್ಣುಗಳಿಲ್ಲದೆ ಎಲ್ಲೆಡೆ ಕಂಕಣಭಾಗ್ಯದ ಬರ.!

******

5. ಕಾರಣ.!

ಮಾಡರ್ನ್ ವಧುಗಳ ಷರತ್ತುಗಳು ವಿಪರೀತ
ಮದುವೆಯಿಲ್ಲದೆ ಗಂಡುಗಳೆಲ್ಲ ಕೊತ ಕೊತ
ಹೆಣ್ಣುಗಳ ಸಂಖ್ಯೆಯೇ ಆಗಿಹುದು ಖೋತಾ
ಏರುಪೇರಾಗಿದೆ ಗಂಡು ಹೆಣ್ಣಿನ ಅನುಪಾತ
ಇದು ಹಿಂದಿನ ಗರ್ಭಾಪಾತದ ಮರ್ಮಾಘಾತ.!

********

ಲಾಸ್ಟ್ ಪಂಚ್..

ಹುಡುಗರಿಗೆ ಮದುವೆಗೆ ಓದದ ಹುಡುಗಿಯರು ಬೇಡ
ಆದರೆ.. ಓದಿದ ಹುಡುಗಿಯರಿಗೆ ಮದುವೆಯೇ ಬೇಡ..!

———————

Leave a Reply

Back To Top